ಶ್ರೀಯರಸ ಗಾಂಗೇಯನುತ ಕೌಂ
ತೇಯವಂದಿತಚಲರಣ ಕಮಲದ
ಳಾಯತಾಂಬಕರೂಪ ಚಿನ್ಮಯ ದೇವಕೀತನಯ
ರಾಯ ರಘುಕುಲವರ್ಯ ಭೂಸುರ
ಪ್ರೀಯ ಸುರಪುರನಿಲಯ ಚೆನ್ನಿಗ
ರಾಯ ಚತುರೋಪಾಯ ರಕ್ಷಿಸು ನಮ್ಮನನವರತ॥೧॥
ದೇವದೇವ ಜಗದ್ಭರಿತ ವಸು
ದೇವಸುತ ಜಗದೇಕನಾಥ ರ
ಮಾವಿನೋದಿತ ಸಜ್ಜನಾನತ ನಿಖಿಲಗುಣಭರಿತ
ಭಾವಜಾರಿಪ್ರಿಯ ನಿರಾಮಯ
ರಾವಣಾಂತಕ ರಘುಕುಲಾನ್ವಯ
ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ॥೨॥
ಅನುಪಮಿತಚಾರಿತ್ರ ಕರುಣಾ
ವನಧಿ ಭಕ್ತಕುಟುಂಬಿ ಯೋಗೀ
ಜನಹೃದಯಪರಿಪೂರ್ಣ ನಿತ್ಯಾನಂದ ನಿಗಮನುತ
ವನಜನಾಭ ಮುಕುಂದ ಮುರಮ
ರ್ದನ ಜನಾರ್ದನ ತ್ರೈಜಗತ್ಪಾ
ವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ॥೩॥
ಕಮಲಸಂಭವನಿನುತ ವಾಸವ
ನಮಿತ ಮಂಗಳ ಚರಿತ ದುರಿತ
ಕ್ಷಮಿತ ರಾಘವ ವಿಶ್ವಪೂಜಿತ ವಿಶ್ವ ವಿಶ್ವಮಯ
ಅಮಿತವಿಕ್ರಮ ಭೀಮ ಸೀತಾ
ರಮಣ ವಾಸುಕಿಶಯನ ಖಗವತಿ
ಗಮನ ಕಂಜಜನಯ್ಯ ರಕ್ಷಿಸು ನಮ್ಮನನವರತ ॥೪॥
ಕ್ಷೀರವಾರಿಧಿಶಯನ ಶಾಂತಾ
ಕಾರಾ ವಿವಿಧವಿಚಾರ ಗೋಪೀ
ಜಾರ ನವನೀತಚೋರ ಚಕ್ರಾಧಾರ ಭವದೂರ
ಮಾರಪಿತ ಗುಣಹಾರ ಸರಸಾ
ಕಾರ ರಿಪುಸಂಹಾರ ತುಂಬುರ
ನಾರದಪ್ರಿಯ ವರದ ರಕ್ಷಿಸು ನಮ್ಮನನವರತ ॥೫॥
ತಾಮರಸದಳನಯನ ಭಾರ್ಗವ
ರಾಮ ಹಲಧರರಾಮ ದಶರಥ
ರಾಮ ಮೇಘಶ್ಯಾಮ ಸದ್ಗುಣಧಾಮ ನಿಸ್ಸೀಮ
ಸಾಮಗಾನಪ್ರೇಮ ಕಾಂಚನ
ಧಾಮಧರ ಸುತ್ರಾಮವಿರಚಿತ
ನಾಮ ರವಿಕುಲಸೋಮ ರಕ್ಷಿಸು ನಮ್ಮನನವರತ ॥೬॥
ವೇದಗೋಚರ ವೇಣುನಾದವಿ
ನೋದ ಮಂದರಶೈಲಧರ ಮಧು
ಸೂದನಾಚ್ಯುತ ಕಂಸದಾನವರಿಪು ಮಹಾಮಹಿಮ
ಯಾದವೇಂದ್ರ ಯಶೋದನಂದನ
ನಾದಬಿಂದುಕಳಾತಿಶಯ ಪ್ರ
ಹ್ಲಾದರಕ್ಷಕ ವರದ ರಕ್ಷಿಸು ನಮ್ಮನನವರತ ॥೭॥
ಅಕ್ಷಯಾಶ್ರಿತ ಸುಜನಜನ ಸಂ
ರಕ್ಷಣ ಶ್ರೀವತ್ಸ ಕೌಸ್ತುಭ
ಮೊಕ್ಷದಾಯಕ ಕುಟಿಲದಾನವಶಿಕ್ಷ ಕುಮುದಾಕ್ಷ
ಪಕ್ಷಿವಾಹನ ದೇವಸಂಕುಲ
ಪಕ್ಷಜಗದಧ್ಯಕ್ಷವರನಿಟಿ
ಲಾಕ್ಷ ಸಖ ಸರ್ವೇಶ ರಕ್ಷಿಸು ನಮ್ಮನನವರತ ॥೮॥
ಚಿತ್ರಕೂಟನಿವಾಸ ವಿಶ್ವಾ
ಮಿತ್ರ ಕ್ರತುಸಂರಕ್ಷಕ ರವಿ ಶಶಿ
ನೇತ್ರ ಭವ್ಯಚರಿತ್ರ ಸದ್ಗುಣಗಾತ್ರ ಸತ್ಪಾತ್ರ
ಧಾತ್ರಿಜಾಂತಕ ಕಪಟನಾಟಕ
ಸೂತ್ರ ಪರಮಪವಿತ್ರ ಫಲ್ಗುಣ
ಮಿತ್ರ ವಾಕ್ಯವಿಚಿತ್ರ ರಕ್ಷಿಸು ನಮ್ಮನನವರತ ॥೯॥
ಮಂಗಳಾತ್ಮಕ ದುರಿತತಿಮಿರ ಪ
ತಂಗ ಗರುಡತುರಂಗ ರಿಪುಮದ
ಭಂಗ ಕೀರ್ತಿತರಂಗ ಪುರಹರಸಂಗ ನೀಲಾಂಗ
ಅಂಗದಪ್ರಿಯನಂಗಪಿತ ಕಾ
ಳಿಂಗಮರ್ದನ ಅಮಿತ ಕರುಣಾ
ಪಾಂಗ ಶೀನರಸಿಂಗ ರಕ್ಷಿಸು ನಮ್ಮನನವರತ ॥೧೦॥
ದಾಶರಥಿ ವೈಕುಂಠನಗರಿ ನಿ
ವಾಸ ತ್ರೈಜಗದೀಶ ಪಾಪ ವಿ
ನಾಶ ಪರಮವಿಲಾಸ ಹರಿಸರ್ವೇಶ ದೇವೇಶ
ವಾಸುದೇವ ದಿನೇಶ ಶತಸಂ
ಕಾಶ ಯದುಕುಲವಂಶತಿಲಕ ಪ
ರಾಶರಾನತ ದೇವ ರಕ್ಷಿಸು ನಮ್ಮನನವರತ ॥೧೧॥
ಕುಂದಕುಟ್ಮಲರದನ ಪರಮಾ
ನಂದ ಹರಿ ಗೋವಿಂದ ಸನಕ ಸ
ನಂದ ವಂದಿತ ಸಿಂಧುಬಂಧನ ಮಂದರಾದ್ರಿಧರ
ಇಂದಿರಾಪತ ವಿಜಯಸಖ ಅರ
ವಿಂದನಾಭ ಪುರಂದರಾರ್ಚಿತ
ನಂದಕುಲ ಮುಕುಂದ ರಕ್ಷಿಸು ನಮ್ಮನನವರತ ॥೧೨॥
ಬಾಣಬಾಹುಚ್ಛೇದ ರಾವಣ
ಪ್ರಾಣನಾಶನ ಪುಣ್ಯನಾಮ ಪು
ರಾಣಪುರುಷೋತ್ತಮ ನಿಪುಣ ಅಣುರೇಣು ಪರಿಪೂರ್ಣ
ಕ್ಷೋಣಿಪತ ಸುಲಲಿತ ಸುದರ್ಶನ
ಪಾಣಿ ಪಾಂಡವರಾಜಕಾರ್ಯ ಧು
ರೀಣ ಜಗನಿರ್ಮಾಣ ರಕ್ಷಿಸು ನಮ್ಮನನವರತ ॥೧೩॥
ನೀಲವರ್ಣ ವಿಶಾಲ ಶುಭಗುಣ
ಶೀಲ ಮುನಿಕುಲಪಾಲ ಲಕ್ಷ್ಮೀ
ಲೋಲ ರಿಪು ಶಿಶುಪಾಲ ಮಸ್ತಕಶೂಲ ವನಮಾಲ
ಮೂಲಕಾರಣ ವಮಲ ಯಾದವ
ಜಾಲಹಿತ ಗೋಪಾಲ ಅಗಣಿತ
ಲೀಲ ಕೋಮಲಕಾಯ ರಕ್ಷಿಸು ನಮ್ಮನನವರತ ॥೧೪॥
ನಾಗನಗರಿ ಧರಿತ್ರಿ ಕೋಶ ವಿ
ಭಾಗ ತಂತ್ರ ನಿಯೋಗಗಮನ
ರಾಗ ಪಾಂಡವರಾಜಜಿತ ಸಂಗ್ರಾಮ ನಿಸ್ಸೀಮ
ಯೋಗಗಮ್ಯ ಭವಾಬ್ಧಿ ವಿಷಧರ
ನಾಗ ಗಾರುಡಮಂತ್ರವಿದ ಭವ
ರೋಗವೈದ್ಯ ವಿಚಿತ್ರ ರಕ್ಷಿಸು ನಮ್ಮನನವರತ ॥೧೫॥
ಶ್ರೀಮದುತ್ಸಹ ದೇವನುತ ಶ್ರೀ
ರಾಮ ನಿನ್ನಯ ಚರಣಸೇವಕ
ಪ್ರೇಮದಿಂ ಸಾಷ್ಟಾಂಗವೆರಗಿಯೆ ಮಾಳ್ಪೆ ಬಿನ್ನಪವ
ಈ ಮಹಿಯೊಳೀವರಿಗೆ ನಾವು ಸು
ಕ್ಷೇಮಿಗಳು ನಿನ್ನಯ ಪದಾಬ್ಜ
ಕ್ಷೇಮವಾರ್ತೆಯನರುಹಿ ರಕ್ಷಿಸು ನಮ್ಮನನವರತ ॥೧೬॥
ಈಗಲೀ ಮರ್ಯಾದೆಯಲಿ ಶರ
ಣಾಗತರ ಸೇವೆಯೊಳು ಹೊಂಪುಳಿ
ಯಾಗಿ ಬಾಳುವರೇನು ಧನ್ಯರೊ ಹರ ಮಹಾದೇವ
ಭೋಗಭಾಗ್ಯವ ಬಯಸಿ ಮುಕ್ತಿಯ
ನೀಗಿ ನಿಮ್ಮನು ಭಜಿಸಲರಿಯದ
ಯೋಗಿಗಳ ಮಾತೇನು ರಕ್ಷಿಸು ನಮ್ಮನನವರತ ॥೧೭॥
ಭಕ್ತಿಸಾರದ ಚರಿತೆಯನು ಹರಿ
ಭಕ್ತರಾಲಿಸುವಂತೆ ರಚಿಸುವೆ
ಯುಕ್ತಿಯಲಿ ಬರೆದೋದಿದವರಿಷ್ಟಾರ್ಥ ಸಿದ್ಧಪುದು
ಮುಕ್ತಿಗಿದು ನೆಲೆದೋರುವುದು ಹರಿ
ಭಕ್ತರಿದ ಲಾಲಿಪುದು ನಿಜಮತಿ
ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ ॥೧೮॥
ನಳಿನಲೋಚನ ನಿಮ್ಮ ಮೂರ್ತಿಯ
ಕಳೆಬೆಳಗುತಿದೆ ಲಹರಿಯಲಿ ಭೂ
ತಳದೊಳಚ್ಚರಿಯಾದ ನಾಮಾಮೃತ ಸಮುದ್ರದಲಿ
ಬಳಸುವರು ಸತ್ಕವಿಗಳಿವರ
ಗ್ಗಳಿಕೆ ಎನಗಿನಿತಿಲ್ಲ ಸನ್ಮತಿ
ಗಳಿಗೆ ಮಂಗಳವಿತ್ತು ರಕ್ಷಿಸು ನಮ್ಮನನವರತ ॥೧೯॥
ಗಿಳಿಯ ಮರಿಯನು ತಂದು ಪಂಜರ
ದೊಳಗೆ ಪೋಷಿಸಿ ಕಲಿಸಿ ಮೃದುನುಡಿ
ಗಳನು ಲಾಲಿಸಿ ಕೇಳ್ವ ಪರಿಣತರಂತೆ ನೀನೆನಗೆ
ತಿಳುಹು ಮತಿಯನು ಎನ್ನ ಜಿಹ್ವೆಗೆ
ಮೊಳಗುವಂದದಿ ನಿನ್ನ ನಾಮಾ
ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ ॥೨೦॥
ಪೊಗಲಳೆವೇ ನಿನ್ನ ನಾಮದ
ಸುಗುಣ ಸಚ್ಚಾರಿತ್ರ ಕಥನವ
ನಗಣಿತೋಪಮ ಅಮಿತ ವಿಕ್ರಮಗಮ್ಯ ನೀನೆಂದು
ನಿಗಮತತಿ ಕೈವಾರಿಸುತ ಪದ
ಯುಗವ ಕಾಣದೆ ಬಳಲುತಿದೆ ವಾ
ಸುಕಿಶಯನ ಸರ್ವೇಶ ರಕ್ಷಿಸು ನಮ್ಮನನವರತ ॥೨೧॥
ವೇದಶಾಸ್ತ್ರ ಪುರಾಣ ಪುಣ್ಯದ
ಹಾದಿಯನು ನಾನರಿಯೆ ತರ್ಕದ
ವಾದದಲಿ ಗುರುಹಿರಿಯರರಿಯದ ಮೂಢಮತಿಯೆನಗೆ
ಆದಿಮೂರುತಿ ನೀನು ನೆರೆ ಕರು
ಣೋದಯನು ಹೃದಯಾಂಗಣದಿ ಜ್ಞಾ
ನೋದಯವನೆನಗಿತ್ತು ರಕ್ಷಿಸು ನಮ್ಮನನವರತ॥೨೨॥
ಹಸಿವರಿತು ತಾಯ್ ತನ್ನ ಶಿಶುವಿಗೆ
ಒಸೆದು ಮೊಲೆ ಕೊಡುವಂತೆ ನೀ ಪೋ
ಷಿಸದೆ ಬೇರಿನ್ನಾರು ಪೋಷಕರಾಗಿ ಸಲಹುವರು
ಬಸಿರೊಳಗೆ ಬ್ರಹ್ಮಾಂಡಕೋಟಿಯ
ಪಸರಿಸಿದ ಪರಮಾತ್ಮ ನೀನೆಂ
ದುಸಿರುತಿದೆ ವೇದಗಳು ರಕ್ಷಿಸು ನಮ್ಮನನವರತ॥೨೩॥
ಇಬ್ಬರಣುಗರು ನಿನಗೆಯವರೊಳ
ಗೊಬ್ಬ ಮಗನೀರೇಳು ಲೋಕದ
ಹೆಬ್ಬೆಳಸು ಬೆಳೆವಂತೆ ಕಾರಣಕರ್ತನಾದವನು
ಒಬ್ಬ ಮಗನದ ಬರೆವ ಕರಣಿಕ
ರಿಬ್ಬರೆ ಲೋಕಪ್ರಸಿದ್ಧರು
ಹಬ್ಬಿಸಿದೆ ಪ್ರಾಣಿಗಳ ರಕ್ಷಿಸು ನಮ್ಮನನವರತ॥೨೪॥
ಸಿರಿಯು ಕುಲಸತಿ ಸುತನು ಕಮಲಜ
ಹಿರಿಯ ಸೊಸೆ ಶಾರದೆ ಸಹೋದರಿ
ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು
ನಿರುತ ಮಾಯೆಯು ದಾಸಿ ನಿಜ ಮಂ
ದಿರವಜಾಂಡವು ಜಂಗಮಸ್ಥಾ
ವರಕುಟುಂಬಿಗ ನೀನು ರಕ್ಷಿಸು ನಮ್ಮನನವರತ॥೨೫॥
ಸಾಗರನ ಮಗಳರಿಯದಂತೆ ಸ
ರಾಗದಲಿ ಸಂಚರಿಸುತಿಹವು
ದ್ಯೋಗವೇನು ನಮಿತ್ತ ಕಾರಣವಿಲ್ಲ ಲೋಕದಲಿ
ಭಾಗವತರಾದವರ ಸಲಹುವ
ನಾಗಿ ಸಂಚರಿಸುವುದು ಈ ಭವ
ಸಾಗರದಿ ಮುಳುಗಿಸದೆ ರಕ್ಷಿಸು ನಮ್ಮನನವರತ ॥೨೬॥
ಹಸ್ತಿವಾಹನನಾದಿಯಾದ ಸ
ಮಸ್ತ ದೇವನಿಕಾಯದೊಳಗೆ ಪ್ರ
ಶಾಸ್ತನಾವನು ನಿನ್ನ ವೋಲ್ ಶರಣಾಗತರ ಪೊರದೆ
ಹಸ್ತ ಕಲಿತ ಸುದರ್ಶನದೊಳರಿ
ಮಸ್ತಕವನಿಳುಹುವ ಪರಾಪರ
ವಸ್ತುವಲ್ಲವೆ ನೀನು ರಕ್ಷಿಸು ನಮ್ಮನನವರತ ॥೨೭॥
ಹಗೆಯರಿಗೆ ವರನೀವರಿಬ್ಬರು
ತೆಗೆಯಲರಿಯರು ಕೊಟ್ಟ ವರಗಳ
ತೆಗೆದುಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ
ಸುಗುಣರಿನ್ನಾರುಂಟು ಕದನವ
ಬಗೆದು ನಿನ್ನೊಳು ಜಯಿಸುವವರೀ
ಜಗದೊಳುಂಟೇ ದೇವ ರಕ್ಷಿಸು ನಮ್ಮನನವರತ ॥೨೮॥
ಸುಮನರಸ ವೈರದಲಿ ಕೆಲಬರು
ಕುಮತಿಗಳು ತಪದಿಂದ ಭರ್ಗನ
ಕಮಲಜನ ಪದಯುಗವ ಮೆಚ್ಚಿಸಿ ವರವ ಪಡೆದಿಹರು
ಸಮರಮುಖದೊಳಗುಪಮೆಯಲಿ ವಿ
ಕ್ರಮದಿ ವೈರವ ಮಾಡಿದವರಿಗೆ
ಅಮರಪದವಿಯನಿತ್ತೆ ರಕ್ಷಿಸು ನಮ್ಮನನವರತ ॥೨೯॥
ಬಲಿಯ ಬಂಧಿಸಿ ಮೊರೆಯಿಡುವ ಸತಿ
ಗೊಲಿದು ಅಕ್ಷಯವಿತ್ತು ಕರುಣದಿ
ಮೊಲೆಯನುಣಿಸಿದ ಬಾಲಿಕೆಯ ಪಿಡಿದಸುವನಪಹರಿಸಿ
ಶಿಲೆಯ ಸತಿಯಳ ಮಾಡಿ ತ್ರಿಪುರದ
ಲಲನೆಯರ ವ್ರತಗೆಡಿಸಿ ಕೂಡಿದ
ಕೆಲಸವುತ್ತಮವಾಯ್ತು ರಕ್ಷಿಸು ನಮ್ಮನನವರತ॥೩೦॥
ಕರಿಯ ಕಾಯ್ದಾ ಜಲದಿ ಮಕರವ
ತರಿದು ಹಿರಣ್ಯಾಕ್ಷಕನ ಸೀಳ್ದಾ
ತರಳನನು ತಲೆಗಾಯ್ದು ಶಕಟಾಸುರನ ಹತಮಾಡಿ
ದುರುಳ ಕಂಸನ ಕೊಂದು ಮಗಧನ
ಮುರಿದು ವತ್ಸನ ಹಮ್ಮಳಿಸಿ ಖರ
ಹರಣವನು ಹಿಂಗಿಸಿದೆ ರಕ್ಷಿಸು ನಮ್ಮನನವರತ॥೩೧॥
ಶಿಶುತನದ ಸಾಮರ್ಥ್ಯದಲಿ ಕೆಲ
ರಸುರರನು ಸಂಹರಿಸಿ ಚಕ್ರವ
ಬಿಸುಟು ಯೌವನಕಾಲದಲಿಯಾ ಪಾಂಡುಸುತರಿಂದ
ವಸುಮತಿಯ ಭಾರವನಿಳುಹಿ ಸಾ
ಹಸದಿ ಮೆರೆದವನಾಗಿ ನೀ ಮೆ
ಚ್ಚಿಸಿದೆ ತ್ರಿಜಗವನೆಲ್ಲ ರಕ್ಷಿಸು ನಮ್ಮನನವರತ॥೩೨॥
ಎಲ್ಲರಲಿ ನೀನಾಗಿ ಸುಮನಸ
ರಲ್ಲಿಯತಿಹಿತನಾಗಿ ಯಾದವ
ರಲ್ಲಿ ಬಾಂಧವನಾಗಿ ದಾನವರಲ್ಲಿ ಹಗೆಯಾಗಿ
ಕೊಲ್ಲಿಸಿದೆ ಭೀಮಾರ್ಜುನರ ಕೈ
ಯಲ್ಲಿ ಕೌರವಕುಲವನೆಲ್ಲವ
ಬಲ್ಲಿದನು ನೀನಹುದು ರಕ್ಷಿಸು ನಮ್ಮನನವರತ॥೩೩॥
ಏನುಮಾಡಿದಡೇನು ಕರ್ಮವ
ನೀನೊಲಿಯದಿನ್ನಿಲ್ಲವಿದಕನು
ಮಾನವುಂಟೆ ಭ್ರಮರಕೀಟನ್ಯಾಯದಂದದಲಿ
ನೀನೊಲಿಯೆ ತೃಣ ಪರ್ವತವು ಪುಸಿ
ಯೇನು ನೀ ಪತಿಕರಿಸೆ ಬಳಿಕಿ
ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ॥೪೦॥
ಎಷ್ಟುಮಾಡಲು ಮುನ್ನ ತಾ ಪಡೆ
ದಷ್ಟುಯೆಂಬುದ ಲೋಕದೊಳು ಮತಿ
ಗೆಟ್ಟ ಮಾನವರಾಡುತಿಹರಾ ಮಾತದಂತಿರಲಿ
ಪಟ್ಟವಾರಿಂದಾಯ್ತು ಧ್ರುವನಿಗೆ
ಕೊಟ್ಟ ವರ ತಪ್ಪಿತೆ ಕುಚೇಲನಿ
ಗಿಷ್ಟ ಬಾಂಧವ ನೀನು ರಕ್ಷಿಸು ನಮ್ಮನನವರತ॥೪೧॥
ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು
ಏನ ಬಲ್ಲೆನು ನಾನು ನೆರೆ ಸು
ಜ್ಞಾನಮೂರುತಿ ನೀನು ನಿನ್ನ ಸ
ಮಾನರುಂಟೆ ದೇವ ರಕ್ಷಿಸು ನಮ್ಮನನವರತ॥೪೯॥
ಧಾರಿಣಿಗೆ ವರ ಚಕ್ರವರ್ತಿಗ
ಳಾರು ಮಂದಿ ನೃಪಾಲಕರು ಹದಿ
ನಾರು ಮಂದಿಯು ಧರಣಿಯನು ಮುನ್ನಾಳ್ದ ನೃಪರೆನಿತೋ
ವೀರರನು ಮೆಚ್ಚಿದಳೆ ಧರಣೀ
ನಾರಿ ಬಹು ಮೋಹದೊಳು ನಿನ್ನನು
ಸೇರಿಯೋಲೈಸುವಳು ರಕ್ಷಿಸು ನಮ್ಮನನವರತ॥೫೨॥
ಗತಿವಿಹೀನರಿಗಾರು ನೀನೇ ನನ್ನ ವಿರುದ್ಧ
ಗತಿ ಕಣಾ ಪತಿಕರಿಸಿಕೊಡು ಸ
ದ್ಗತಿಯ ನೀನೆಲೆ ದೇವ ನಿನಗಪರಾಧಿ ನಾನಲ್ಲ
ಶ್ರುತಿವಚನವಾಡುವುದು ಶರಣಾ
ಗತನ ಸೇವಕನೆಂದು ನಿನ್ನನು
ಮತವಿಡಿದು ನಂಬಿದೆನು ರಕ್ಷಿಸು ನಮ್ಮನನವರತ॥೫೪॥
ಈಗಲೋ ಈ ದೇಹವಿನ್ನ್ಯಾ
ವಾಗಲೋ ನಿಜವಿಲ್ಲವೆಂಬುದ
ನೀಗ ತಿಳಿಯದೆ ಮಡದಿ ಮನೆ ಮನೆವಾರ್ತೆಯೆಂದೆಂಬ
ರಾಗಲೋಭದಿ ಮುಳುಗಿ ಮುಂದಣ
ತಾಗುಬಾಗುಗಳರಿಯೆ ನಿನ್ನ ಸ
ಮಾಗಮವ ಬಯಸುವೆನು ರಕ್ಷಿಸು ನಮ್ಮನನವರತ॥೫೫॥
ಮಾಂಸ ರಕ್ತದ ಮಡುವಿನಲಿ ನವ
ಮಾಸ ಜನನಿಯ ಜಠರದೊಳಗಿರು
ವಾ ಸಮಯದಲ್ಲಿ ವೃತ್ತಿಯನು ಕಲ್ಪಿಸಿದ ಪ್ರಭುವಾರು
ನೀ ಸಲಹಿದವನಲ್ವೇ ಕರು
ಣಣಾಸಮುದ್ರನು ನೀನಿರಲು ಕಮ
ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ॥೫೬॥
ಎತ್ತಿದೆನು ನಾನಾ ಶರೀರವ
ಹೊತ್ತು ಹೊತ್ತಲಸಿದೆನು ಸಲೆ ಬೇ
ಸತ್ತು ನಿನ್ನಯ ಪದವ ಕಾಣದೆ ತೊಳಲಿ ಬಳಲಿದೆನು
ಸತ್ತು ಹುಟ್ಟುವ ಹುಟ್ಟಿ ಹಿಂಗುವ
ಸುತ್ತ ತೊಡಕನು ಮಾಣಿಸಲೆ ಪುರು
ಷೋತ್ತಮನೆ ಮನವೊಲಿದು ರಕ್ಸಷಿಸು ನಮ್ಮನನವರತ॥೬೦॥
ಗಣನೆಯಿಲ್ಲದ ಜನನಿಯರು ಮೊಲೆ
ಯುಣಿಸಲಾ ಪಯಬಿಂದುಗಳನದ
ನೆಣಿಸಲಳವೇ ಸಪ್ತಸಾಗರಕಧಿಕವೆನಿಸಿಹುದು
ಬಣಗು ಕಮಲಜನದಕೆ ತಾನೇ
ಮಣೆಯಗಾರನು ಈತ ಮಾಡಿದ
ಕುಣಿಕೆಗಳ ನೀಬಿಡಿಸಿ ರಕ್ಷಿಸು ನಮ್ಮನನವರತ॥೬೨॥
ಎಂಟು ಗೇಣಿನ ದೇಹ ರೋಮಗ
ಳೆಂಟು ಕೋಟಿಯ ಕೀಲ್ಗಳರುವ
ತ್ತೆಂಟು ಮಾಂಸಗಳಿಂದ ಮಾಡಿದ ಮನೆಯ ಮನವೊಲಿದು
ನೆಂಟ ನೀನಿರ್ದಗಲಿದಡೆ ಒಣ
ಹೆಂಟೆಯಲಿ ಮುಚ್ಚುವರು ದೇಹದ
ಲುಂಟೆ ಫಲ ಪುರುಷಾರ್ಥ ರಕ್ಷಿ,ಸು ನಮ್ಮನನವರತ॥೬೬॥
ಕೋಪವೆಂಬುದು ತನುವಿನಲಿ ನೆರೆ
ಪಾಪ ಪಾತಕದಿಂದ ನರಕದ
ಕೂಪದಲಿ ಮುಳುಗುವುದು ತಪ್ಪದು ಶಾಸ್ತ್ರಸಿದ್ಧವಲೆ
ರಾಪು ಮಾಡದೆ ಬಿಡನು ಯಮನು ನಿ
ರಾಪರಾಧಿಯು ನೋಡಿ ಕೀರ್ತಿಕ
ಲಾಪವನು ನೀ ಕಾಯ್ದು ರಕ್ಷಿಸು ನಮ್ಮನನವರತ॥೬೮॥
ನೀರ ಮೇಲಣ ಗುಳ್ಳೆಯಂದದಿ
ತೋರಿಯಡಗುವ ದೇಹವೀ ಸಂ
ಸಾರ ಬಹಳಾರ್ಣವದೊಳಗೆ ಮುಳುಗಿದೆನು ಪತಿಕರಿಸಿ
ತೋರಿಸಚಲಾನಂದಪದವಿಯ
ಸೇರಿಸಕಟಾ ನಿನ್ನವೋಲ್ ನಮ
ಗಾರು ಬಾಂಧವರುಂಟು ರಕ್ಷಿಸು ನಮ್ಮನನವರತ॥೭೫॥
ತೊಗಲು ಬೊಂಬೆಗಳಂತೆ ನಾಲಕು
ಬಗೆಯ ನಿರ್ಮಾಣದಲಿ ಇದರೊಳು
ನೆಗಳದೀ ಚೌಷಷ್ಟಿ ಲಕ್ಷಣ ಜಾತಿ ಧರ್ಮದಲಿ
ಬಗೆಬಗೆಯ ನಾಮಾಂಕಿತದ ಜೀ
ವಿಗಳದೆಲ್ಲವು ನಿನ್ನ ನಾಮದಿ
ಜಗದಿ ತೋರುತ್ತಿಹುದು ರಕ್ಷಿಸು ನಮ್ಮನನವರತ॥೮೪॥
ಹೂಡಿದೆಲುಮರಮಟ್ಟು ಮಾಂಸದ
ಗೋಡೆ ಚರ್ಮದ ಹೊದಿಕೆ ನರವಿನ
ಕೂಡೆ ಹಿಂಡಿಗೆ ಬಿಗಿದ ಮನೆಯೊಳಗಾತ್ಮ ನೀನಿರಲು
ಬೀಡು ತೊಲಗಿದ ಬಳಿಕಲಾ ಸುಡು
ಗಾಡಿನಲಿ ಬೆಂದುರಿವ ಕೊಂಪೆಯ
ನೋಡಿ ನಂಬಿರಬಹುದೆ ರಕ್ಷಿಸು ನಮ್ಮನನವರತ॥೮೫॥
ಬೀಗಮುದ್ರೆಗಳಿಲ್ಲದೂರಿಗೆ
ಬಾಗಿಲುಗಳೊಂಬತ್ತು ಹಗಲಿರು
ಳಾಗಿ ಮುಚ್ಚದೆ ತೆರೆದಿಹುದು ಜೀವಾತ್ಮ ತಾನಿರುತ
ನೀಗಿಯೆಲ್ಲವ ಬಿಸುಟು ಬೇಗದಿ
ಹೋಗುತಿಹ ಸಮಯದಲಿ ಇವರವ
ರಾಗಬಲ್ಲರೆ ನೀನೆ ರಕ್ಷಿಸು ನಮ್ಮನನವರತ॥೮೬॥
ಎಂಜಲೆಂಜಲು ಎಂಬರಾ ನುಡಿ
ಎಂಜಲಲ್ಲವೆ ವಾರಿ ಜಲಚರ
ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ
ಎಂಜಲೆಲ್ಲಿಯದೆಲ್ಲಿಯುಂ ಪರ
ರೆಂಜಲಲ್ಲದೆ ಬೇರೆ ಭಾವಿಸ
ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ॥೧೦೧॥
ಕೇಳುವುದು ಹರಿಕಥೆಯ ಕೇಳಲು
ಹೇಳುವುದು ಹರಿಭಕ್ತಿ ಮನದಲಿ
ತಾಳುವುದು ಹಿರಿದಾಗಿ ನಿನ್ನಯ ಚರಣಸೇವೆಯಲಿ
ಊಳಿಗವ ಮಾಡುವುದು ವಿಷಯವ
ಹೂಳುವುದು ನಿಜ ಮುಕ್ತಕಾಂತೆಯ
ನಾಳುವುದು ಕೃಪೆಮಾಡಿ ರಕ್ಷಿಸು ನಮ್ಮನನವರತ॥೧೦೨॥
ನೂರು ಕನ್ಯಾದಾನವನು ಭಾ
ಗೀರಥೀಸ್ನಾನವನು ಮಿಗೆ ಕೈ
ಯಾರೆ ಗೋವ್ಗಳ ಪ್ರೇಮದಿಂದಲಿ ಭೂಸುರರಿಗೊಲಿದು
ಊರುಗಳ ನೂರಗ್ರಹಾರವ
ಧಾರೆಯೆರೆದಿತ್ತಂತೆ ಫಲ ಕೈ
ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ದವಗೆ॥೧೦೬॥