ನಳಚರಿತ್ರೆ:ಆರನೆಯ ಸಂಧಿ

ವಿಕಿಸೋರ್ಸ್ದಿಂದ

<ನಳಚರಿತ್ರೆ

ನಳಚರಿತ್ರೆ:ಆರನೆಯ ಸಂಧಿ (ಸಂಗ್ರಹ)[ಸಂಪಾದಿಸಿ]

ಆರನೆಯ ಸಂಧಿ
ಸೂಚನೆ|ಇಂದುವದನೆಯನಗಲಿ ತಾ ಮನ
ನೊಂದು ಕಾರ್ಕೋಟಕನ ದೆಸೆಯಲಿ
ಬಂದು ಹೊಕ್ಕನು ನಿಷಧಪತಿ ಋತುಪರ್ಣನಗರಿಯನು||

ಕೇಳು ಕುಂತೀತನಯ ನಿಷಧನೃ
ಪಾಲನಿತ್ತಲು ಮರೆದು ಮಲಗಿದ
ಬಾಲಕಿಯ ಬಿಟ್ಟಡವಿಯಲಿ ಹೊರವಂಟನಾ ವನವ
ಕಾಲವಾವನ ಕೀಳು ಮಾಡದು
ಶೂಲಪಾಣಿಯೆ ಬಲ್ಲ ನಳ ಭೂ
ಪಾಲಕನ ವಿಧಿಯೇನನೆಂಬೆನು ಬಂದನಡವಿಯಲಿ ||೧||
`
ವನಿತೆ ಮಲಗಿಹಳೋ ಅಧೈರ್ಯದಿ
ನೆನೆವಳೋ ದೈವವನು ನಿದ್ರೆಯ
ಕನಸ ಕಂಡೇಳುವಳೊ ಕಾಣದೆ ಹಲವ ಹಂಬಲಿಸಿ
ಕನಲಿ ವಿಧಿಯನು ಬೈವಳೋ ಕಂ
ಬನಿಯ ಸುರಿವಳೊ ಶೋಕದಲಿ ನಿಜ
ತನುವ ಬಿಡುವಳೊ ಕಾಂತೆಯೆಂತಿಹಳೆನುತ ನಡೆತಂದ ||೨||
`
ಸುತರ ಪರರೆಡೆಗಿತ್ತು ನಂಬಿದ
ಸತಿಯ ತಂದಡವಿಯಲಿ ಮಲಗಿಸಿ
ಮತಿವಿಕಳನಾದೆನು ಪುರಾಕೃತಕರ್ಮಫಲವೈಸೆ
ಕ್ಷಿತಿಯೊಳಾರುಂಟೆನ್ನವೊಲ್ ನಿಜ
ಸತಿಗೆ ತಪ್ಪಿದ ಬಾಹಿರನುಯೆಂ
ದತಿಶಯದ ಶೋಕದಲಿ ನಡೆದನು ಶಿವಶಿವಾಯೆನುತ ||೩||

ಲೋಕದೊಳಗಗ್ಗಳೆಯ ಮಹಿಪರ
ನೇಕರವರೊಳಗಾರನೊಲ್ಲದೆ
ನೂಕಿ ತನ್ನನೆ ಒಲಿದು ಕೈಕೊಂಡಳು ಸರೋಜಮುಖಿ
ಆಕೆಯಗಲಿದ ಪಾತಕನು ತಾ
ನೇಕೆ ಧರೆಯೊಳು ಶಿವಶಿವಾಯೆಂ
ದಾ ಕಮಲಲೋಚನೆಗೆ ಮರುಗಿದನರಸ ಕೇಳೆಂದ ||೪||

ಈ ಪರಿಯೊಳತಿಶೋಕದಿಂದ ಪ್ರ
ಳಾಪಿಸುವ ನಳನೃಪತಿ ಹೆಚ್ಚಿದ
ತಾಪದಲಿ ಕಡುನೊಂದು ಬಳಲುತ ತನ್ನ ಮನದೊಳಗೆ
ಶ್ರೀಪತಿಯ ನೆಲೆಗೊಳಿಸಿ ಹೃದಯದ
ತಾಪದೊಳು ಬರುತಿರಲು ಮುಂದೆ ಸ
ಮೀಪದಲಿ ಹುತವಹನ ಮಹಿಮೆಯ ಕಂಡನವನೀಶ ||೫||

ಏನನೆಂಬೆನು ನೃಪತಿ ಕಿಚ್ಚಿನ
ಹಾನಿಯನು ಬನದೊಳಗೆ ಚಲಿಸುತ
ಭಾನುಮಂಡಲವಡರೆ ಮುಸುಕಿದ ಹೊಗೆಯ ಹೊರಳಿಯಲಿ
ಕಾನನವನೆಡೆಗೊಂಡ ದಳ್ಳುರಿ
ಗಾನಲಾಪುದೆ ತರುನಿಕರ ವೈ
ಮಾನಿಕರು ನಡನಡುಗೆ ಬೆಂದುದು ಸಕಲ ವನಭೂಮಿ ||೬||

ಬಿದಿರ ಮೆಳೆ ಧಗಧಗಿಸೆ ಘನ ಹೆ
ಬ್ಬಿದಿರು ಛಟಛಟಿರೆನಲು ಉರಿಯೊಳು
ಕದಳಿಗಳು ಸಿಮಿಸಿಮಿಸೆ ತರುಗಳನುರುಹಿ ಮೆಳೆಗಳಲಿ
ಗದಗದಿಸೆ ಗುಹೆಗಳಲಿ ಮೃಗತತಿ
ಬೆದರಿ ಹಾಯ್ದುವು ಪಕ್ಷಿಸಂಕುಲ
ಉದುರಿದುವು ಗರಿಸಹಿತ ಬೆಂದಾವನದ ಮಧ್ಯದಲಿ ||೭||

ತೆಗೆದು ಹಾಯ್ದುವು ಸಿಂಹ ಶಾರ್ದೂ
ಲಗಳು ಕರಿಗಳ ಹಿಂಡು ನಾನಾ
ಮೃಗಗಳಗಣಿತ ಬೆಂದು ಬಿದ್ದವು ನಿಮಿಷಮಾತ್ರದಲಿ
ಚಿಗಿದು ಹಾಯ್ದುವು ಗಂಡಭೇರುಂ
ಡಗಳು ಮೊದಲಾದಖಿಳಮೃಗಪ
ಕ್ಷಿಗಳು ಕೆಡೆದುವು ಕಿಚ್ಚಿನೊಳಗವನೀಶ ಕೇಳೆಂದ ||೮||

ಪ್ರಳಯಕಾಲದಿ ಸುಡುವ ವಡಬಾ
ನಳನೊಯೆನಲಾ ವನವ ಸುಡುತಲಿ
ಸುಳಿಸುಳಿಯುತಾಹಾರಗೊಳುತಿರಲಲ್ಲಿ ದನಿಯಾಯ್ತು
ಸಿಲುಕಿದೆನು ಪಾವಕನೊಳೆನ್ನನು
ಒಲಿದು ಹಾ ನೃಪಕುಲಶಿರೋಮಣಿ
ಕಳೆದು ಬಿಡಿಸೈ ಸುಕೃತ ನಿನಗಹುದೆಂದುದಾ ನಿನದ ||೯||

ಆಗಲಾ ದನಿಗೇಳಿ ನೃಪತಿ ಸ
ರಾಗದಿಂದವೆ ಬಂದು ಹೊಕ್ಕನು
ಕೂಗಿದವರಾರೆನುತ ಬರುತಿರೆ ಕಂಡನುರಗಪತಿ
ಪೋಗುತಿದೆಯೆನ್ನಸುವು ಸಲಹು ಷ
ಡಾಗಮಜ್ಞ ನೃಪಾಲಯೆನಲ
ಭೋಗಿಯನು ಕಂಡರಸ ನೀನಾರೆಂದು ಬೆಸಗೊಂಡ ||೧೦||

ಉರಗಪತಿ ಕಾರ್ಕೋಟಕನು ತಾ
ನರಸ ಕೇಳೀ ಬನದೊಳಿರುತಿರೆ
ಪರರಮಋಷಿ ಬಂದೆನ್ನ ತಾಗಿದನಂದು ಭೀತಿಯಲಿ
ಕರೆದು ಕೊಟ್ಟನು ಶಾಪವನು ಸಂ
ಚರಿಸದಂತಿರೆಯೆನಗೆಯಿದು ಪರಿ
ಹರವದೆಂದಿಗೆ ಮುನಿಪ ಕರುಣಿಪುದೆಂದೊಡಿಂತೆಂದ ||೧೧||

ಇರಲಿರಲು ಕಾಲಾಂತರಕೆ ಭೂ
ವರನು ನಳನೃಪನಿಲ್ಲಿಗೈದುವ
ಧರಣಿಪನ ಕರಕಮಲ ಸೋಂಕಲು ಶಾಪವಿದು ಬಳಿಕ
ಪರಿಹರಿಪುದೆನೆ ಮುನಿಯ ವಚನದಿ
ಬರವ ಹಾರುತ್ತಿರಲು ಬಂದೈ
ಕರುಣದಿಂದಗ್ನಿಯನು ಪರಿಹರಿಸೆಂದನುರಗಪತಿ ||೧೨||

ಕರುಣದಲಿ ನೃಪ ಭೀತಿಗೊಳ್ಳದೆ
ಯುರಗಪತಿಯನು ತೆಗೆಯುತನಲನ
ಉರಿಯ ತಪ್ಪಿಸಿ ಕೊಳದ ತೀರಕೆ ತಂದುಪಚರಿಸೆ
ಕರವಿಡಿದು ವಿಷವೇರೆ ನೃಪತಿಯ
ಪರಮತೇಜದ ದೇಹ ಕೆಟ್ಟಿತು ವಿಕೃತರೂಪಾಗಿ ||೧೩||

ದೊಡ್ಡ ಹೊಟ್ಟೆಯ ಗೂನುಬೆನ್ನಿನ
ಅಡ್ಡ ಮೋರೆಯ ಗಂಟುಮೂಗಿನ
ದೊಡ್ಡ ಕೈಕಾಲುಗಳ ಉದುರಿದ ರೋಮಮೀಸೆಗಳ
ಜಡ್ಡು ದೇಹದ ಗುಜ್ಜುಗೊರಲಿನ
ಗಿಡ್ಡ ರೂಪಿನ ಹರುಕು ಗಡ್ಡದ
ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ ||೧೪||

ಮಾರನಾಕಾರದ ನೃಪಾಲಕ
ಕ್ರೂರರೂಪಾದನು ಪುರಾಕೃತ
ಮೀರಲಾರಳವೆಂದು ನುಡಿದನು ತನ್ನ ಮನದೊಳಗೆ
ತೋರಮಾಣಿಕವೆಂದು ಪಿಡಿದರೆ
ಭೂರಿ ಕೆಂಡವಿದಾಯ್ತು ಶಿವಶಿವ
ಕ್ರೂರಜಂತುಗಳೊಡನೆ ಸಖತನ ಫಲಿಸಿತೆನಗೆಂದ ||೧೫||

ಮುನ್ನಮಾಡಿದ ಕರ್ಮಫಲವಿದು
ಬೆನ್ನ ಬಿಡದಿರಲುರಗಪತಿ ಕೇ
ಳಿನ್ನು ನೋಯಲದೇತಕೆ ತಾನೇ ಪಾಪಿಯಾದೆನಲ
ಪನ್ನಗಾರಿಧ್ವಜನ ಕೃಪೆ ತನ
ಗಿನ್ನು ತಪ್ಪಿದ ಬಳಿಕ ಲೋಕದೊ
ಳಿನ್ನು ಸೈರಿಸಲಾರ ವಶವೆಂದೆನುತ ಮರುಗಿದನು ||೧೬||

ಏಕೆ ನೃಪತಿ ವೃಥಾ ಮನೋವ್ಯಥೆ
ಕಾಕಬಳಸಲುಬೇಡ ನೀನವಿ
ವೇಕಿಯೇ ಸಾಕಿನ್ನು ನಿನಗುಪಕಾರವಂಜದಿರು
ಲೋಕ ನಿನ್ನನು ಕಾಣದಂತಿರ
ಬೇಕೆನುತ ಲೇರಿಸಿದೆ ಗರಳವ
ನೇಕವುಪಕಾರಂಗಳಹವದರಿಂದ ನಿನಗೆಂದ ||೧೭||

ಗರಳವಿದು ಸರ್ವಾಂಗದಲಿ ಸಂ
ಚರಿಸುತಿಹ ಪರಿಯಂತ ರಿಪುಗಳ
ಶರಜಲಾಗ್ನಿಭುಜಂಗರೋಗಾದಿಗಳ ಭಯವಿಲ್ಲ
ನಿರುತವಿದು ವಜ್ರಾಂಗಿ ಬೇಡಿ
ನ್ನರಸ ಚಿಂತಿಸಬೇಡ ಕಾರ್ಯದ
ಹೊರಗೆ ತಾನಿದು ಬೇರೆ ಭಯ ಬೇಡಿನ್ನು ನಿನಗೆಂದ ||೧೮||

ಜನಪ ಕೇಳೈ ಧರೆಗೆ ಋತುಪ
ರ್ಣನು ಮಹಾರಾಜೇಂದ್ರ ಗುಣನಿಧಿ
ಯಿನಕುಲಾಂಬುಧಿ ಚಂದ್ರನಾತನ ಪುರವಯೋಧ್ಯೆಯದು
ನಿನಗೆ ಬಹುದಕಷಹೃದಯವು ಆ
ತನಲಿ ನೀನವಗಶ್ವಹೃದಯವ
ನನುಗೊಳಿಸು ಸಾಕಿನ್ನು ಚಿಂತಿಸಬೇಡ ಹೋಗೆಂದ ||೧೯||

ಪೊಡವಿಪನನೋಲೈಸು ವಾಘೆಯ
ಪಿಡಿದು ಬಾಹುಕನೆಂಬ ನಾಮದಿ
ನಡೆಸು ರಥವನು ಹೀನವೃತ್ತಿಯದಲ್ಲ ನಿನಗಿನ್ನು
ಬಿಡದೆ ಮುನ್ನಿನ ರೂಪು ಬೇಕಾ
ದಡೆ ನೆನೆವುದಾ ಪಕ್ಷಿಗಳ ಹ
ಚ್ಚಡವನೀವುವು ಧರಿಸಲಡಗುವುದೀ ಕುರೂಪಿತನ ||೨೦||

ನಿನ್ನ ಹವಣೇ ಪೂರ್ವದಲಿ ಭಿ
ಕ್ಷಾನ್ನವನು ಬೇಡಿದನು ಪಶುಪತಿ
ಪನ್ನಗಾರಿಧ್ವಜನು ಕಾಯ್ದನು ಪಶುಗಳಡವಿಯಲಿ
ಉನ್ನತೈಶ್ವರ್ಯಪ್ರದನು ಶತ
ಮನ್ಯು ಬನದಲಿ ನವೆಯನೇ ಸಾ
ಕಿನ್ನು ಮನನೋಯದಿರು ಚಿತ್ತೈಸೆಂದನುರಗಪತಿ ||೨೧||

ಪರಮ ಸತ್ಯವ್ರತದೊಳಾ ಪು
ಷ್ಕರನ ಗೆಲಿದುನ್ನತದ ರಾಜ್ಯದ
ಸಿರಿ ಮಿಗಲು ಸಾಮ್ರಾಜ್ಯವಾಳುವೆ ನಿನ್ನ ಸತಿಸಹಿತ
ವರವನಿತ್ತೆನು ನಿನಗೆಯೆಂದುಪ
ಚರಿಸಿ ಕಾರ್ಕೋಟಕನು ನಳನೃಪ
ಗರುಹುತಾಕ್ಷಣ ಮಾಯವಾದನು ರಾಯ ಕೇಳೆಂದ ||೨೨||

ಬಲಿದ ಚಿಂತೆಯ ಮನದ ದುಗುಡದ
ನಳನೃಪತಿ ಕಾನನದಿ ಬರುತಿರೆ
ಮಲೆತು ತೊಲಗಿದ ದುಷ್ಟಮೃಗಗಳಕಂಡು ನಸುನಗುತ
ಹಲವು ಗಿರಿಗುಹೆ ಗಹ್ವರಂಗಳ
ಕಳೆದು ಮುಂದಣ ಜನಪದಂಗಳ
ಬಳಿವಿಡಿದು ನಡೆತಂದನಲಸದೆ ಹಲವು ಯೋಜನವ ||೨೩||

ಹೊಳೆವ ಮಿಸುನಿಯ ರತ್ನನಿಚಯದ
ನೆಲೆನೆಲೆಯ ಸೌಧಾಗ್ರದಲಿ ಪ್ರ
ಜ್ವಲಿಪ ಹೇಮದ ಕಲಶಗಳ ರವಿಚಂದ್ರಶಾಲೆಗಳ
ಲಲನೆಯರ ನಾನಾ ವಿನೋದದ
ಹಲವು ಗೋಪುರಶಿಖರದಗಣಿತ
ನೆಲೆಯ ವ್ಣಿಸಲರಿದಯೋಧ್ಯಾಪುರವು ರಂಜಿಸಿತು ||೨೬||

ಅರಸುಗಳು ಭೂಸುರರು ಮಿಗೆ ವೈ
ಶ್ಯರು ಚತುರ್ಥರು ನಾಗರೀಕದ
ಪುರಜನರು ಸಂದಣಿಸಿತಗಣಿತ ರಾಜವೀಧದಿಯಲಿ
ಕರಿ ತುರಗ ರಥ ಪಾಯದಳ ಗೋ
ಚರಿಸಿತಂಗಡಿ ನವವಿಧಾನದಿ
ಮೆರೆವಯೋಧ್ಯಾಪುರವ ಕಂಡನು ತೂಗಿದನು ಶಿರವ ||೨೭||

ಬಂದು ಹೊಕ್ಕನು ಪುರವ ಮೆರೆವತಿ
ಚಂದವನು ನೆರೆನೋಡಿ ಮನದೊಳ
ಗಂದು ಕೊಂಡಾಡಿದನು ಋತುಪರ್ಣನ ಮಹಾ ಸಿರಿಯ
ತಂದುದೇ ವಿಧಿ ತನ್ನನಿಲ್ಲಿಗೆ
ಮಂದಭಾಗ್ಯನು ತಾನೆನುತ ಮನ
ನೊಂದು ನೆನೆದನು ವರಪುರಾಧಿಪ ಚೆನ್ನಕೇಶವನ||೨೮||

ನೋಡಿ[ಸಂಪಾದಿಸಿ]

ನಳಚರಿತ್ರೆ- ಸಂಧಿಗಳು>:

ನೋಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ