ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)

ವಿಕಿಸೋರ್ಸ್ದಿಂದ
<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೧.ಆದಿಪರ್ವ::ಸಂಧಿ-೨)[ಸಂಪಾದಿಸಿ]

ಆದಿಪರ್ವ - ಎರಡನೆಯ ಸಂಧಿ:[ಸಂಪಾದಿಸಿ]

[೧]

ಸೂಚನೆ:[ಸಂಪಾದಿಸಿ]

ರಾಯ ಜನಮೇಜಯಗೆ ವೈಶಂ
ಪಾಯನನು ಹೇಳಿದನು ಮುನಿ ದ್ವೈ
ಪಾಯನಭಿವರ್ಣಿಸಿದ ಭಾರತ ವರ ಕಥಾಮೃತವ ||
ಪದ್ಯ-ಸೂಚನೆ:ಪದವಿಭಾಗ-ಅರ್ಥ: ರಾಯ ಜನಮೇಜಯಗೆ ವೈಶಂಪಾಯನನು ಹೇಳಿದನು ಮುನಿ ದ್ವೈಪಾಯನ ಅಭಿವರ್ಣಿಸಿದ= ವೇದವ್ಯಾಸರು ವಿವರವಾಗಿ ಹೇಳಿದ, ಭಾರತ ವರ= ಶ್ರೇಷ್ಠವಾದ ಕಥಾಮೃತವ.
ಪದ್ಯ-ಸೂಚನೆ:ಅರ್ಥ:ಜನಮೇಜಯ ರಾಜನಿಗೆ ವೈಶಂಪಾಯನ ಮನಿಯು ವೇದವ್ಯಾಸರು ವಿವರವಾಗಿ ಹೇಳಿದ, ಶ್ರೇಷ್ಠವಾದ ಅಮೃತದಂತಿರುವ ಭಾರತ ಕಥೆಯನ್ನು ಹೇಳಿದನು.

ನೈಮಿಷಾರಣ್ಯಕ್ಕೆ ಸೂತ ಪುರಾಣಿಕರ ಆಗಮನ[ಸಂಪಾದಿಸಿ]

ಸೂತನೈತಂದನು ಜಗದ್ವಿ
ಖ್ಯಾತ ಶೌನಕಮುಖ್ಯ ಮುನಿ ಸಂ
ಘಾತ ಪಾವನ ನೈಮಿಶಾರಣ್ಯಕ ವರಾಶ್ರಮಕೆ ||
ಆತನನು ಕಂಡುದು ತಪಸ್ವಿ
ವ್ರಾತ ಕುಶಲಕ್ಷೇಮ ಮಧುರ
ಪ್ರೀತಿ ವಚನಾಮೃತದಿ ಸಂಭಾವನೆಯ ಮಾಡಿದರು || ೧ ||
ಪದ್ಯ-೧:ಪದವಿಭಾಗ-ಅರ್ಥ:ಸೂತನು ಐತಂದನು = ಸೂತ ಪುರಾಣಿಕನು ಬಂದನು, ಜಗದ್ವಿಖ್ಯಾತ= ಜಗತ್ ವಿಖ್ಯಾತ ಶೌನಕಮುಖ್ಯ ಮುನಿ ಸಂಘಾತ= ಸಮೂಹ,= ಪಾವನ, ಜಗದ್ವಿಖ್ಯಾತ= ಬಹಳ ಪ್ರಸಿದ್ಧರಾದ, ಶೌನಕಮುಖ್ಯರಾಗಿ ಅನೇಕ ಮುನಿಗಳಿರುವ ಪಾವನವಾದ ನೈಮಿಶಾರಣ್ಯಕದ ವರ+ ಆಶ್ರಮಕೆ= ಶ್ರೇಷ್ಠ ಆಶ್ರಮಕ್ಕೆ, ಆತನನು ಕಂಡುದು ತಪಸ್ವಿ+ ವ್ರಾತ= ತಪಸ್ವಿಗಳ ಗುಂಪು, ಕುಶಲ, ಕ್ಷೇಮ ಮಧುರ ಪ್ರೀತಿ ವಚನಾಮೃತದಿ= ಮಧರವಾದ ಅಮೃತದಂತಿರುವ ವಚನದಿಂದ ಸಂಭಾವನೆಯ ಮಾಡಿದರು= ಸ್ವಾಗತ, ಮಾಡಿದರು.
ಪದ್ಯ-೧:ಅರ್ಥ: ಜಗದ್ವಿಖ್ಯಾತರಾದ ಶೌನಕಮುಖ್ಯರಾಗಿ ಅನೇಕ ಮುನಿಗಳಿರುವ ಪಾವನವಾದ ನೈಮಿಶಾರಣ್ಯಕದ ಶ್ರೇಷ್ಠ ಆಶ್ರಮಕ್ಕೆ ಸೂತ ಪುರಾಣಿಕನು ಬಂದನು. ತಪಸ್ವಿಗಳ ಗುಂಪು ಆತನನ್ನು ನೋಡಿದರು. ಆಗ ಕುಶಲ, ಕ್ಷೇಮವಿಚಾರಿಸಿದರು. ಮಧರವಾದ ಅಮೃತದಂತಿರುವ ವಚನದಿಂದ ಸ್ವಾಗತ ಮಾಡಿದರು. (ಆಗ ಶೌನಕ ಮುನಿಗಳು ಸತ್ರಯಾಗವನ್ನು ಮಾಡುತ್ತಿದ್ದರು.)
ಪರಮಪೌರಾಣಿಕ ಶಿರೋಮಣಿ
ಬರವಿದೆತ್ತಣದಾಯ್ತು ಕೌತುಕ
ವರಕಥಾ ಪೀಯೂಷಸಾರ ವಿಶೇಷವೇನುಂಟು ||
ಚರಿತ ಚತುರಾಶ್ರಮ ತಪೋ ನಿ
ಷ್ಠರಿಗೆ ವಿಶ್ರಮವೈ ಭವಾದೃಶ
ದರುಶನವು ನಮಗೆಂದು ನುಡಿದರು ರೋಮಹರ್ಷಣಿಯ || ೨ ||
ಪದ್ಯ-೧:ಪದವಿಭಾಗ-ಅರ್ಥ:ಪರಮಪೌರಾಣಿಕ ಶಿರೋಮಣಿ = ಶ್ರೇಷ್ಠರಾದ ಪೌರಾಣಿಕ ಶಿರೋಮಣಿಯೇ (ಪುರಾಣಗಳನ್ನು ನೆನಪಿನಿಂದ ಹೇಳುವವರು.) ಬರವು+ ಇದು+ ಎತ್ತಣದು+ ಆಯ್ತು= ಈಗ ಬರುವುದು ಯಾವಕಡೆಯಿಂದ ಆಯ್ತು? ಕೌತುಕ ವರಕಥಾ= ಕುತೂಹಲಕರವಾದ ಉತ್ತಮ ಕಥೆಯು, ಪೀಯೂಷಸಾರ= ಅಮ್ರತಸಾರವಾದ, ವಿಶೇಷವು+ ಏನುಂಟು= ಏನಾದರೂ ಇದೆಯೇ?/ ಏನಿದೆ? ಚರಿತ=ಉತ್ತಮ ಚತುರಾಶ್ರಮ ತಪೋ ನಿಷ್ಠರಿಗೆ= ನಾಲ್ಕು ಆಶ್ರಮಗಳಲ್ಲೂ ಉತ್ತಮ ತಪೋನಿಷ್ಠರಾದವರಿಗೆ, ವಿಶ್ರಮವೈ= ವಶ್ರಮವನ್ನು -ಶಾಂತಿಯನ್ನು, ಭವಾದೃಶ = ಭವ+ ಆದೃಶ = ನಿನ್ನಂಥವರ, ದರುಶನವು ನಮಗೆ+ಎಂದು ನುಡಿದರು= ಎಂದು ಹೇಳಿದರು, ರೋಮಹರ್ಷಣಿಯ= ರೋಮಹರ್ಷಣಿ ಮುನಿಯನ್ನು ಕುರಿತು.
ಪದ್ಯ-೧:ಅರ್ಥ:ಶ್ರೇಷ್ಠರಾದ ಪೌರಾಣಿಕ ಶಿರೋಮಣಿಯೇ ಈಗ ಯಾವಕಡೆಯಿಂದ ಬಂದಿರಿ? ಕುತೂಹಲಕರವಾದ ಅಮೃತ ಸಮಾನವಾದ ಉತ್ತಮ ಕಥೆಯು,ಏನಾದರೂ ಇದೆಯೇ? ನಾಲ್ಕು ಆಶ್ರಮಗಳಲ್ಲೂ ಉತ್ತಮ ತಪೋನಿಷ್ಠರಾದವರಿಗೆ ನಿಮ್ಮಂಥವರ ದರ್ಶನವು ಶಾಂತಿಯನ್ನು, ನೀಡುವುದು ಎಂದು ಸೂತಪುರಾಣಿಕರಾದ ರೋಮಹರ್ಷಣಿ ಮುನಿಯನ್ನು ಕುರಿತು ಶೌನಕಾಶ್ರಮದ ಮನಿಗಳು ಹೇಳಿದರು.
ವಂದಿಸಿದೆನೈ ವರ ತಪೋಧನ
ವೃಂದ ಚಿತ್ತೈಸುವುದು ತಾನೇ
ನೆಂದು ನುಡಿವೆನು ಕೌತುಕಾಮೃತಸರದ ಕಡುಗಡಲ ||
ಹಿಂದೆ ಕೇಳಿದುದಲ್ಲ ಹೇಳ್ವುದು
ಮುಂದೆ ಹುಸಿ ವರ ನಿಗಮ ಶತವಿದ
ರೊಂದೊರೆಗೆ ಬರಲರಿಯದೆಂದನು ಸೂತ ಕೈಮುಗಿದು || ೩ ||
ಪದ್ಯ-೧:ಪದವಿಭಾಗ-ಅರ್ಥ:ವಂದಿಸಿದೆನೈ= (ನಿಮಗೆಲ್ಲರಿಗೂ) ನಮಸ್ಕರಿಸುತ್ತಿದ್ದೇನೆ, ವರ ತಪೋಧನವೃಂದ (ತಪಸ್ಸನ್ನೇ ಧನವಾಗಿ ಉಳ್ಳವರ ಸಮೂಹ) ಚಿತ್ತೈಸುವುದು= ಶ್ರೇಷ್ಠರಾದ ತಪೋಧನರೇ ದಯವಿಟ್ಟುಕೇಳಿ, ತಾನು ಏನೆಂದು ನುಡಿವೆನು= ನಾನು ಏನೆಂದು ಹೇಳಲಿ? ೯ಹಿರಿಮೆ ಅಷ್ಟುದೊಡ್ಡದು) ಕೌತುಕ ಅಮೃತಸರದ ಕಡುಗಡಲ= ಕುತೂಹಲಕರವಾದ ಅಮೃತರಸದ ಗಹನವಾದ ಸಮುದ್ರದ, ಹಿಂದೆ ಕೇಳಿದುದಲ್ಲ= ಹಿಂದೆ ಯಾರೂ ಕೇಳಿದ ಕಥೆ ಅಲ್ಲ, ಹೇಳ್ವುದು ಮುಂದೆ= ಈಗ ಹೇಳುವುದರ ಮುಂದೆ, ಹುಸಿ= ಸರಿಸಮ ನಿಲ್ಲದು ವರ ನಿಗಮ ಶತವು,= ಶ್ರೇಷ್ಠ ನೂರು ವೇದಗಳೂ, ಇದರೊಂದು ಒರೆಗೆ ಬರಲರಿಯದು= ಇದರ ಸಮನಾಗಿ ಬರಲಾರದು, ಎಂದನು ಸೂತ ಕೈಮುಗಿದು= ಸೂತ ಪುರಾಣಿಕರು ಕೈಮುಗಿದು ಹೇಳಿದರು.
ಪದ್ಯ-೧:ಅರ್ಥ:(ನಿಮಗೆಲ್ಲರಿಗೂ) ನಮಸ್ಕರಿಸುತ್ತಿದ್ದೇನೆ, ಶ್ರೇಷ್ಠರಾದ ತಪೋಧನರೇ ದಯವಿಟ್ಟು ಕೇಳಿ, ಈ ಕುತೂಹಲಕರವಾದ ಅಮೃತರಸದ ಗಹನವಾದ ಸಮುದ್ರದ ವಿಷಯವನ್ನು ನಾನು ಏನೆಂದು ಹೇಳಲಿ? ಅದರ ಹಿರಿಮೆ ಅಷ್ಟು ದೊಡ್ಡದು. ಹಿಂದೆ ಯಾರೂ ಕೇಳಿದ ಕಥೆ ಅಲ್ಲ, ಈಗ ಹೇಳುವುದರ ಮುಂದೆ, ಶ್ರೇಷ್ಠ ನೂರು ವೇದಗಳೂ, ಇದರ ಸಮನಾಗಿ ಬರಲಾರದು, ಎಂದು ಸೂತ ಪುರಾಣಿಕರು ಕೈಮುಗಿದು ಹೇಳಿದರು.
ಕೇಳಿದನು ಜನಮೇಜಯ ಕ್ಷಿತಿ
ಪಾಲಕನು ವರ ಸರ್ಪಯಜ್ಞ
ಸ್ಥೂಲ ಪಾಪವಿಘಾತಿಗೋಸುಗವೀ ಮಹಾಕಥೆಯ ||
ಕೇಳಿದೆನು ತಾನಲ್ಲಿ ಮುನಿಜನ
ಮೌಳಿ ಮಂಡಿತ ಚರಣಕಮಲ ವಿ
ಶಾಲ ವೇದವ್ಯಾಸಕೃತ ಭಾರತಕಥಾಮೃತವ || ೪ ||
ಪದ್ಯ-೧:ಪದವಿಭಾಗ-ಅರ್ಥ:ಕೇಳಿದನು ಜನಮೇಜಯ ಕ್ಷಿತಿಪಾಲಕನು ವರ ಸರ್ಪಯಜ್ಞಸ್ಥೂಲ ಪಾಪ ವಿಘಾತಿಗೋಸುಗ+ (ವು)+ಈ ಮಹಾಕಥೆಯ; ಕೇಳಿದೆನು ತಾನು+ ಅಲ್ಲಿ ಮುನಿಜನಮೌಳಿ ಮಂಡಿತ ಚರಣಕಮಲ ವಿಶಾಲ ವೇದವ್ಯಾಸಕೃತ ಭಾರತಕಥಾಮೃತವ.
ಪದ್ಯ-೧:ಅರ್ಥ: ಶ್ರೇಷ್ಠಷಾದ ಸರ್ಪಯಜ್ಞದ ದೊಡ್ಡ ಪಾಪವನ್ನು ಕಳೆದುಕೊಳ್ಳಲು ಜನಮೇಜಯ ರಾಜನು ಈ ಮಹಾಕಥೆಯನ್ನು ಕೇಳಿದನು. ಮುನಿಜನರು ಯಾರ ಪಾದಕಮಲಕ್ಕೆ ತಲೆಬಾಗಿ ನಮಸ್ಕರಿಸುವರೋ ಆ ವಿಶಾಲ ಜ್ಞಾನದ ವೇದವ್ಯಾಸರು ರಚಿಸಿದ ಭಾರತಕಥಾಮೃತವನ್ನು ತಾನು 'ಅಲ್ಲಿ ಕೇಳಿದೆನು' ಎಂದು ಸೂತರು ಹೇಳಿದರು.

ಶೌನಕರು ಮತ್ತು ಇತರ ಮುನಿಗಳ ಸಂತಸ[ಸಂಪಾದಿಸಿ]

ಹಾ ಮಹಾದೇವಾಯಿದೆಂತೈ
ರೋಮಹರ್ಷಣಿ ನಾವು ಮಾಡಿದ
ಸೋಮಪಾನಾದಿಗಳ ಪುಣ್ಯಸ್ತೋಮ ತರುಗಳಿಗೆ ||
ಈ ಮಹಾಭಾರತ ಕಥಾಮೃತ
ರಾಮಣೀಯಕ ಫಲವಲಾ ನಿ
ಸ್ಸೀಮ ಪುಣ್ಯರು ಧನ್ಯರಾವೆಂದುದು ಮುನಿಸ್ತೋಮ || ೫ ||
ಪದ್ಯ-೧:ಪದವಿಭಾಗ-ಅರ್ಥ:ಹಾ ಮಹಾದೇವಾ+ ಇದು + ಎಂತೈ, ರೋಮಹರ್ಷಣಿ ನಾವು ಮಾಡಿದ ಸೋಮಪಾನಾದಿಗಳ ಪುಣ್ಯಸ್ತೋಮ ತರುಗಳಿಗೆ ಈ ಮಹಾಭಾರತ ಕಥಾಮೃತ ರಾಮಣೀಯಕ ಫಲವಲಾ ನಿಸ್ಸೀಮ ಪುಣ್ಯರು ಧನ್ಯರಾವು+ ಎಂದುದು ಮುನಿಸ್ತೋಮ.
ಪದ್ಯ-೧:ಅರ್ಥ:ಅಹಾ! ಮಹಾದೇವಾ! ಇದು ಎಂತಹ ಪುಣ್ಯ! ರೋಮಹರ್ಷಣಿ ಮುನಿಗಳೇ, ನಾವು ಇದುವರೆಗೆ ಯಜ್ಞದಲ್ಲಿ ಮಾಡಿದ ಸೋಮರಸ ಪಾನ ಮತ್ತು ಇತರ ಕರ್ಮಗಳ ಪುಣ್ಯದ ರಾಶಿಯೆಂಬ ವೃಕ್ಷಗಳಿಗೆ ಈ ಕಥೆಯು ಫಲದಂತಿದೆ ಎಂದರು.
ಹೇಳು ಸಾಕೆಲೆ ಸೂತ ದುರಿತ
ವ್ಯಾಳ ವಿಷಜಾಂಗುಳಿಕವನು ನೀ
ಕೇಳಿದಂದದೊಳಂದು ಜನಮೇಜಯನ ಯಾಗದಲಿ ||
ಮೌಳಿಗಳಲಾನುವೆವು ನಿನ್ನಯ
ಹೇಳಿಕೆಯನೆನೆ ನಿಖಿಳ ಮುನಿಗಳ
ನೋಲಗಿಸುವೆನು ನಿಮ್ಮನುಜ್ಞೆಯಲೆಂದು ಕೈಮುಗಿದ || ೬ ||
ಪದ್ಯ-೧:ಪದವಿಭಾಗ-ಅರ್ಥ: ಹೇಳು ಸಾಕು+ ಎಲೆ ಸೂತ ದುರಿತ+ ವ್ಯಾಳ= ಪಾಪಗಳ ಸರ್ಪದ, ವಿಷಜ+ ಆಂಗುಳಿಕವನು=ವಿಷದ ಪರಿಣಾಮಕ್ಕೆ (ಗುಳಿಕ = ಓಷಧಿ ಮಾತ್ರೆ, ಆಂಗುಳಿಕ- ವಿಶೇಷ ಮಾತ್ರೆ?) ಔಷಧಿಯಂತಿರುವ ಕಥೆಯನ್ನು, ನೀ+ ಕೇಳಿದಂದದೊಳು+ ಅಂದು= ಅಂದು ನೀನೀವು ಕೇಳಿದಂತೆಯೇ ಹೇಳಿರಿ- ಜನಮೇಜಯನ ಯಾಗದಲಿ; ಮೌಳಿಗಳಲಿ+ ಆನುವೆವು= ತಲೆಯಲ್ಲಿ ಧರಿಸುವೆವು, ನಿನ್ನಯ ಹೇಳಿಕೆಯನು+ ಎನೆ= ಎನ್ನಲು; ನಿಖಿಳ ಮುನಿಗಳನು= ಮುನಿಗಳಾದ ನಿಮ್ಮೆಲ್ಲರ ಆಸೆಯಂತೆ, ಓಲಗಿಸುವೆನು= (ಜಿ.ವೆಂ:೧ ಬಡಿಸು (ಉಣಬಡಿಸು),ಆಲಿಸುವಂತೆಮಾಡುವೆನು, ಒರೆಯುವೆನು, ನಿಮ್ಮ+ ಅನುಜ್ಞೆಯಲಿ ಎಂದು ಕೈಮುಗಿದ= ನಿಮ್ಮ ಆಜ್ಞೆಯಂತೆ ಎಂದು ಕೈಮುಗಿದರು ಸೂತರು.
ಪದ್ಯ-೧:ಅರ್ಥ: ಎಲೆ ಸೂತರೇ ಸಾಕು ಹೇಳಿರಿ, ಪಾಪಗಳೆಂಬ ಸರ್ಪದ ವಿಷಕ್ಕೆ ಔಷಧಿಯಂತಿರುವ ಮಹಾಭಾರತದ ಕಥೆಯನ್ನು, ಜನಮೇಜಯನ ಯಾಗದಲ್ಲಿ ಅಂದು ನೀವು ಕೇಳಿದಂತೆಯೇ ಹೇಳಿರಿ; ಆ ಕಥೆಯನ್ನು ನಮ್ಮ ತಲೆಯಲ್ಲಿ ಅದನ್ನು ಧರಿಸುವೆವು, ಎನ್ನಲು; ಮುನಿಗಳಾದ ನಿಮ್ಮೆಲ್ಲರ ಆಸೆ ಮತ್ತು ಅನುಜ್ಞೆಯಂತೆ ಅದನ್ನು ನೀವು ಆಲಿಸುವಂತೆ ಹೇಳುವನು ಎಂದು ಸೂತರು ಕೈಮುಗಿದರು.
ಸರ್ಪಯಜ್ಞದಲಾದ ದುರಿತದ
ದರ್ಪವನು ಕೆಡೆಬೀಳಲೊದೆಯಲು
ತರ್ಪಣಾದಿ ಕ್ರಿಯೆಗಳಲಿ ಸಾಮರ್ಥ್ಯವಿಲ್ಲೆಂದು ||
ದರ್ಪಕಾಹಿತ ಮೂರ್ತಿ ಮುನಿಮುಖ
ದರ್ಪಣನು ಶಿಷ್ಯನನು ಕರೆದು ಸ
ಮರ್ಪಿಸಿದನರಸಂಗೆ ವೇದವ್ಯಾಸಮುನಿರಾಯ || ೭ ||
ಪದ್ಯ-೧:ಪದವಿಭಾಗ-ಅರ್ಥ:ಸರ್ಪಯಜ್ಞದಲಿ+ ಆದ ದುರಿತದ ದರ್ಪವನು= ಸರ್ಪಯಜ್ಞದಲ್ಲಿ ಆದ ಪಾಪಕರ್ಮದ ಅತಿಶಯವನ್ನು, ಕೆಡೆಬೀಳಲು ಒದೆಯಲು= ನಾಶಮಾಡುವಂತೆ ಹೊಡೆದೋಡಿಸಲು, ತರ್ಪಣ+ ಆದಿ ಕ್ರಿಯೆಗಳಲಿ ಸಾಮರ್ಥ್ಯವಿಲ್ಲ+ ಎಂದು= ತರ್ಪಣವೇ ಮೊದಲಾದ ಶಾಂತಿಕರ್ಮಗಳಲ್ಲಿ ಸಾಮರ್ಥ್ಯವಿಲ್ಲ ಎಂದು, ದರ್ಪಕ+ ಅಹಿತ ಮೂರ್ತಿ = ಮನ್ಮಥನಿಗೆ ಶತ್ರುವಂತಿರುವ, ಮುನಿಮುಖ ದರ್ಪಣನು= ಮುನಿಗಳಿಗೆ ಕನ್ನಡಿಯಂತಿರುವ ವೇದವ್ಯಾಸ ಮುನಿಯು, ಶಿಷ್ಯನನು ಕರೆದು ಸಮರ್ಪಿಸಿದನು= ಹೇಳಿದನು, ಅರಸಂಗೆ ವೇದವ್ಯಾಸ ಮುನಿರಾಯ= ಅರಸ ಜನಮೇಜಯನಿಗೆ ವೇದವ್ಯಾಸ ಮುನಿಯು.
  • ದಾಸ ಸಾಹಿತ್ಯ ನಿಘಂಟು:-ದರ್ಪಕ - ಮನ್ಮಥ, ಕಾಮ
ಪದ್ಯ-೧:ಅರ್ಥ: ಸರ್ಪಯಜ್ಞದಲ್ಲಿ ಆದ ಪಾಪಕರ್ಮದ ಅತಿಶಯವನ್ನು,ನಾಶಮಾಡುವಂತೆ ಹೊಡೆದೋಡಿಸಲು, ತರ್ಪಣವೇ ಮೊದಲಾದ ಶಾಂತಿಕರ್ಮಗಳಲ್ಲಿ ಸಾಮರ್ಥ್ಯವಿಲ್ಲ ಎಂದು, ಮನ್ಮಥನಿಗೆ ಶತ್ರುವಂತಿರುವ, ಮುನಿಗಳಿಗೆ ಕನ್ನಡಿಯಂತಿರುವ ವೇದವ್ಯಾಸ ಮುನಿಯು, ಶಿಷ್ಯನನು ಕರೆದು, ಅರಸ ಜನಮೇಜಯನಿಗೆ ವೇದವ್ಯಾಸ ಮುನಿಯು ಹೇಳಿದನು.
ರಾಯ ಕೇಳೈ ನಿಮ್ಮ ಪಾಂಡವ
ರಾಯಚರಿತವನೆಂದು ವೈಶಂ
ಪಾಯನಿಗೆ ಬೆಸಸಿದನು ಕೊಟ್ಟನು ಬಳಿಕ ಪುಸ್ತಕವ ||
ರಾಯನತಿ ಭಕ್ತಿಯಲಿ ವೈಶಂ
ಪಾಯನಿಗೆ ವಂದಿಸಿ ನಿಜಾಭಿ
ಪ್ರಾಯವನು ಕೇಳಿದನು ಚಿತ್ತೈಸುವುದು ಮುನಿನಿಕರ || ೮ ||
ಪದ್ಯ-೧:ಪದವಿಭಾಗ-ಅರ್ಥ:ರಾಯ ಕೇಳೈ ನಿಮ್ಮ ಪಾಂಡವರಾಯ+ ಚರಿತವನೆಂದು ವೈಶಂಪಾಯನಿಗೆ ಬೆಸಸಿದನು ಕೊಟ್ಟನು ಬಳಿಕ ಪುಸ್ತಕವ ರಾಯನು + ಅತಿ ಭಕ್ತಿಯಲಿ ವೈಶಂಪಾಯನಿಗೆ ವಂದಿಸಿ ನಿಜ+ ಅಭಿಪ್ರಾಯವನು ಕೇಳಿದನು ಚಿತ್ತೈಸುವುದು= ಕೇಳುವುದು, ಮುನಿನಿಕರ.
ಪದ್ಯ-೧:ಅರ್ಥ:ರಾಜನೇ ನಿಮ್ಮ ಪಾಂಡವರಾಜನ ಚರಿತ್ರೆಯನ್ನು ಕೇಳು ಎಣದು ವ್ಯಾಸರು ಹೇಳಿ, ತಮ್ಮ ಶಿಷ್ಯ ವೈಶಂಪಾಯಮುನಿಗೆ ಅದನ್ನು ಹೇಳಲು ತಿಳಿಸಿದನು. ಬಳಿಕ ಪುಸ್ತಕವನ್ನು ಅವನಿಗೆ ಕೊಟ್ಟನು. ಜನಮೇಜಯ ರಾಜನು ಅತಿ ಭಕ್ತಿಯಿಂದ ವೈಶಂಪಾಯನಿಗೆ ವಂದಿಸಿ ಸತ್ ವಚಾರವನ್ನು ಅವನಿಂದ ಕೇಳಿದನು. ಚಿತ್ತೈಸುವುದು ಮುನಿಗಳೇ ಆ ಸದ್ವಿಚಾರವನ್ನು ಕೇಳಿರಿ, ಎಂದರು ಸೂತ ಪುರಾಣಿಕರು.

ವೈಶಂಪಾಯನಿಂದ ಗ್ರಂಥ, ದೇವ, ಮುನಿ ಸ್ಥುತಿ[ಸಂಪಾದಿಸಿ]

ವಿತತ ಪುಸ್ತಕವನು ಸುಗಂಧಾ
ಕ್ಷತೆಯೊಳರ್ಚಿಸಿ ಸೋಮ ಸೂರ್ಯ
ಕ್ಷಿತಿ ಜಲಾನಲ ವಾಯು ಗಗನಾದಿಗಳಿಗಭಿನಮಿಸಿ ||
ಶತಮಖಾದಿ ಸಮಸ್ತ ದೇವ
ಪ್ರತತಿಗೆರಗಿ ಸರೋಜಭವ ಪಶು
ಪತಿಗಳಿಗೆ ಕೈಮುಗಿದು ವಿಮಲ ಜ್ಞಾನಮುದ್ರೆಯಲಿ || ೯ ||
ಪದ್ಯ-೧:ಪದವಿಭಾಗ-ಅರ್ಥ:ವಿತತ ಪುಸ್ತಕವನು ಸುಗಂಧ ಅಕ್ಷತೆಯೊಳು+ ಅರ್ಚಿಸಿ= ಪೂಜಿಸಿ, ಸೋಮ=ಚಂದ್ರ, ಸೂರ್ಯ ಕ್ಷಿತಿ= ಭೂಮಿ ಜಲ+ ಅನಲ= ಅಗ್ನಿ ವಾಯು ಗಗನ+ ಆದಿಗಳಿಗೆ+ (ಮೊದಲಾದವುಗಳಿಗೆ) ಅಭಿನಮಿಸಿ (ನಮಸ್ಕರಿಸಿ)+ ಶತಮಖ (ಇಂದ್ರ+ ಆದಿ ಸಮಸ್ತ ದೇವಪ್ರತತಿಗೆ+ ಎರಗಿ= ಸರೋಜಭವ= ಬ್ರಹ್ಮ, ಪಶುಪತಿಗಳಿಗೆ= ಶಿವ, ಕೈಮುಗಿದು ವಿಮಲ ಜ್ಞಾನಮುದ್ರೆಯಲಿ-.
  • ವಿತತ (ಗು):1. ಹರಡಿಕೊಂಡಿರುವ. 2. ಉತ್ತಮವಾದ.
ಪದ್ಯ-೧:ಅರ್ಥ:ವೈಶಂಪಾಯನ ಮುನಿಯು, ಶ್ರೇಷ್ಠವಾದ ಪುಸ್ತಕವನ್ನು ಸುಗಂಧ ಅಕ್ಷತೆಗಳಿಂದ ಪೂಜಿಸಿ, ನಂತರ ಚಂದ್ರ ಸೂರ್ಯರಿಗೂ, ಪಂಚಭೂತಗಳಾದ

ಭೂಮಿ, ಜಲ, ಅಗ್ನಿ, ವಾಯು, ಗಗನ ಮೊದಲಾದವುಗಳಿಗೆ ಅಭಿನಮಿಸಿದನು. ಇಂದ್ರನೇ ಮೊದಲಾದ ದೇವತೆಗಳಿಗೆ ವಂದಿಸಿ, ಬ್ರಹ್ಮ ಮತ್ತು ಶಿವರಿಗೆ ಕೈಮುಗಿದು ಪೂಜ್ಯವಾದ ಜ್ಞಾನಮುದ್ರೆಯನ್ನು ಹೊಂದಿ- ಕಥೆಯನ್ನು ಆರಂಭಿಸಿದನು.

ಮನದೊಳಾದ್ಯಂಪುರುಷಮೀಶಾ
ನನನು ಪುರುಹೂತನ ಪುರಸ್ಕೃತ
ನನಘನೇಕಾಕ್ಷರ ಪರಬ್ರಹ್ಮನ ಸನಾತನನ ||
ದನುಜರಿಪು ಸುವ್ಯಕ್ತನವ್ಯ
ಕ್ತನನು ಸದಸದ್ರೂಪನವ್ಯಯ
ನೆನಿಪ ವಿಷ್ಣುವ ನೆನೆದು ಮುನಿ ವಿಸ್ತರಿಸಿದನು ಕಥೆಯ || ೧೦ ||
ಪದ್ಯ-೧:ಪದವಿಭಾಗ-ಅರ್ಥ: ಮನದೊಳು+ ಆದ್ಯಂಪುರುಷಂ+ ಈಶಾನನನು ಪುರುಹೂತನ ಪುರಸ್ಕೃತನ+ (ಗೌರವಿಸಿದ,, ನಮಸ್ಕರಿಸಿದ, ಹೊಗಳಿದ,) ಅನಘನು+ ಏಕಾಕ್ಷರ ಪಾಪರಹಿತನೂ, ಏಕ ಅಕ್ಷರವಾದ ಓಂಕಾರಸ್ವರೂಪನ, ಪರಬ್ರಹ್ಮನ, ಸನಾತನನ, ದನುಜರಿಪು ಸುವ್ಯಕ್ತನು+ ಅವ್ಯಕ್ತನನು, ಸಾಕಾರನ, ನಿರಾಕಾರನು, ಸದಸದ್ ರೂಪನ ಅವ್ಯಯನು ಎನಿಪ ವಿಷ್ಣುವ ನೆನೆದು ಮುನಿ ವಿಸ್ತರಿಸಿದನು ಕಥೆಯ.
ಪದ್ಯ-೧:ಅರ್ಥ: ಮುನಿಯು ಬಳಿಕ ತನ್ನ ಮನಸ್ಸಿನಲ್ಲಿ ಆದಿಪುರುಷನೂ ಈಶಾನನನೂ ಇಂದ್ರನೂ ನಮಸ್ಕರಿಸಿದ, ಪಾಪರಹಿತನೂ, ಏಕ ಅಕ್ಷರವಾದ ಓಂಕಾರಸ್ವರೂಪನೂ, ಪರಬ್ರಹ್ಮನೂ, ಸನಾತನನೂ, ರಾಕ್ಷಸರ ಶತ್ರುವೂ, ಸಾಕಾರನೂ, ನಿರಾಕಾರನೂ, ಸತ್- ಅಸದ್ ರೂಪನೂ, ಅವ್ಯಯನೂ ಆದ ವಿಷ್ಣುವನ್ನು ನೆನೆದು ವೈಶಂಪಾಯನ ಮುನಿಯು ಕಥೆಯನ್ನು ವಿಸ್ತಾರವಾಗಿ ಹೇಳಿದನು.
ವೇದ ನಾಲ್ಕದರಂಗವಾರ
ಷ್ಟಾದಶಾದಿ ಪುರಾಣ ಸ್ಮೃತಿಗಳೊ
ಳಾದಪೂರ್ವೋತ್ತರದ ಮೀಮಾಂಸದ ಪರಿಕ್ರಮದ |\
ವಾದ ವಿಲಸನ್ನ್ಯಾಯವನು ಶ
ಬ್ದೋದಧಿಯನಳವಡಿಸಿ ರಚಿಸಿದ
ಬಾದರಾಯಣನಂಘ್ರಿಯನು ಭಜಿಸಿದನು ಮನದೊಳಗೆ || ೧೧ ||
ಪದ್ಯ-೧:ಪದವಿಭಾಗ-ಅರ್ಥ:ವೇದ ನಾಲ್ಕು ಅದರ+ ಅಂಗವು ಆರು+ ಅಷ್ಟಾದಶಾದಿ ಪುರಾಣ, ಅಷ್ಟಾದಶ + ಆದಿ ಪುರಾಣ= ವೇದಾಂಗಗಳು ಆರು, ಹದಿನೆಂಟು ಪುರಾಣಗಳು, ಸ್ಮೃತಿಗಳೊಳು+ ಆದ ಪೂರ್ವ+ ಉತ್ತರದ ಮೀಮಾಂಸದ ಪರಿಕ್ರಮದವು+ ಆದ ವಿಲಸನ್+ ನ್ಯಾಯವನು ಶಬ್ದ+ ಉದಧಿಯನು(ಸಾಗರವನ್ನು) ಅಳವಡಿಸಿ ರಚಿಸಿದ ಬಾದರಾಯಣನ+ ಅಂಘ್ರಿಯನು=ಪಾದವನ್ನು ಭಜಿಸಿದನು ಮನದೊಳಗೆ.
ಪದ್ಯ-೧:ಅರ್ಥ:ನಾಲ್ಕು ವೇದ, ಅದರ ಆರು ಅಂಗಗಳು, ಹದಿನೆಂಟು ಪುರಾಣ, ಸ್ಮೃತಿಗಳಲ್ಲಿ ಇರುವ ಪೂರ್ವ ಮತ್ತು ಉತ್ತರ ಮೀಮಾಂಸಗಳ- ಪರಿಕ್ರಮದವಾದ- ಮುಂದುವರಿದ ಅರಳಿದ ನ್ನ್ಯಾಯಶಾಸ್ತ್ರದ ಶಬ್ದಗಳ ಸಾಗರವನ್ನು ಅಳವಡಿಸಿ ಮಹಾಭಾರತವನ್ನು ರಚಿಸಿದ ಬಾದರಾಯಣನ ಪಾದಗಳನ್ನು ವೈಶಂಪಾಯನ ಮುನಿಯು ಮನದಲ್ಲಿ ಭಜಿಸಿದನು.

ಕಥಾರಂಭ[ಸಂಪಾದಿಸಿ]

ಅರಸ ಕೇಳೈ ನಾರದಾದ್ಯರು
ಸರಸಿರುಹ ಸಂಭವನ ಸಭೆಯೊಳು
ವರಮಹಾಭಾರತವ ಕೊಂಡಾಡಿದರು ಭಕ್ತಿಯಲಿ ||
ವರ ಮಹತ್ವದಿ ಭಾರವತ್ವದಿ
ವರಮಹಾಭಾರತವಿದೊಂದೇ
ದುರಿತದುರ್ಗ ವಿಭೇದಕರವೀರೇಳು ಲೋಕದಲಿ || ೧೨ ||
ಪದ್ಯ-೧೨:ಪದವಿಭಾಗ-ಅರ್ಥ:ಅರಸ ಕೇಳೈ ನಾರದ+ ಆದ್ಯರು=ಮೊದಲಾದವರು, ಸರಸಿರುಹ ಸಂಭವನ= ಸರಸಿರುಹ=ಕಮಲದ, ಸಂಭವನ=ಹುಟ್ಟಿದವನ- ಬ್ರಹ್ಮನ ಸಭೆಯೊಳು ವರಮಹಾಭಾರತವ ಕೊಂಡಾಡಿದರು ಭಕ್ತಿಯಲಿ ವರ ಮಹತ್ವದಿ ಭಾರವತ್ವದಿ= ತೂಕದಲ್ಲಿ- ಮಹತ್ವದಲ್ಲಿವರಮಹಾಭಾರತವು+ ಇದೊಂದೇ ದುರಿತದುರ್ಗ= ಪಾಪದಬೆಟ್ಟವನ್ನು, ಪಾಪದ ಕೋಟೆಯನ್ನು ವಿಭೇದಕರವು= ನಾಶಮದಬಲ್ಲದು, ಈರೇಳು= ಎರಡು+ಏಳು=ಹದಿನಾಲ್ಕು ಲೋಕದಲಿ.
ಪದ್ಯ-೧೨:ಅರ್ಥ:ಜನಮೇಜಯ ಅರಸನೇ ಕೇಳು, ನಾರದ ಮೊದಲಾದವರು, ಬ್ರಹ್ಮನ ಸಭೆಯೊಲ್ಲಿ ಶ್ರೇಷ್ಠ ಮಹಾಭಾರತವನ್ನು ಭಕ್ತಿಯಿಂದ ಕೊಂಡಾಡಿದರು. ಶ್ರೇಷ್ಠತೆಯ ಮಹತ್ವದಲ್ಲಿ ಇತರ ಗ್ರಂಥಗಳಿಗೆ ಹೋಲಿಸಿದಾಗ ಮಹತ್ವದತೂಕದಲ್ಲಿ- ವರಮಹಾಭಾರತವು ಒಂದೇ ಹದಿನಾಲ್ಕು ಲೋಕಗಳಲ್ಲಿ ಪಾಪದಬೆಟ್ಟವನ್ನು ನಾಶಮದಬಲ್ಲದು ಎಂದು ಹೊಗಳಿದರು.
ಹೇಳಿದನು ಪೌಲೋಮ ಚರಿತೋ
ದ್ಧಾಲಕಾಖ್ಯರ ಚರಿತವನು ಮುನಿ
ಹೇಳಿದನು ಫಣಿನಿಕರ ಗರುಡಾಸ್ತಿಕರ ಸಂಭವವ ||
ಮೇಲೆ ಬಳಿಕ ಪರೀಕ್ಷಿದವನೀ
ಪಾಲ ಶಾಪದ ಮರಣವನು ನೆರೆ
ಹೇಳಿದನು ಮುನಿಗಳಿಗೆ ಸರ್ಪಾಧ್ವರದ ಸಂಗತಿಯ || ೧೩ ||
ಪದ್ಯ-೧೩:ಪದವಿಭಾಗ-ಅರ್ಥ:ಹೇಳಿದನು ಪೌಲೋಮ ಚರಿತೆ+ ಉದ್ಧಾಲಕ+ ಆಖ್ಯರ ಚರಿತವನು ಮುನಿ ಹೇಳಿದನು, ಫಣಿನಿಕರ= ನಾಗರ, ಗರುಡ+ ಆಸ್ತಿಕರ ಸಂಭವವ= ಹುಟ್ಟಿನ, ಮೇಲೆ ಬಳಿಕ = ಆ ನಂತರ ಪರೀಕ್ಷಿತ+ ಅವನೀಪಾಲ= ರಾಜನಿಗೆ ಶಾಪದ ಮರಣವನು, ನೆರೆ ಹೇಳಿದನು ಮುನಿಗಳಿಗೆ ಸರ್ಪ+ ಅಧ್ವರದ= ಯಾಗದ ಸಂಗತಿಯ
ಪದ್ಯ-೧೩:ಅರ್ಥ:ವೈಶಂಪಾಯನ ಮುನಿಯು, ಜನಮೇಜಯ ರಾಜನಿಗೆ ಹೇಳಿದನು ಪೌಲೋಮ ಮತ್ತು ಉದ್ಧಾಲಕ ಮೊದಲಾದವರ ಚರಿತ್ರೆಯನ್ನೂ ಹೇಳಿದನು. ನಾಗರ, ಗರುಡ ಮತ್ತು ಆಸ್ತಿಕರ ಹುಟ್ಟಿನ ಕಥೆಯನ್ನು ಹೇಳಿದನು. ಆ ನಂತರ ಪರೀಕ್ಷಿತ ರಾಜನಿಗೆ ಶಾಪ ಬಂದು ಮರಣವಾದ ಕಥೆಯನ್ನು ಹೇಳಿ ಮತ್ತ ಅದೇ ತಾನೆ ನೆಡೆದ ಜನಮೇಜಯನು ಮಾಡಿದ ಸರ್ಪಯಾಗದ ಸಂಗತಿಯನ್ನು ಮುನಿಗಳಿಗೆ ಹೇಳಿದನು.
ಕೇಳಿದನು ಜನಮೇಜಯಕ್ಷಿತಿ
ಪಾಲ ವೈಶಂಪಾಯನನು ತಾ
ಕೀಳು ದುರಿತಂಗಳಿಗೆ ಪ್ರಾಯಶ್ಚಿತ್ತ ರೂಪದಲಿ ||
ಕೇಳಿರೈ ಮುನಿನಿಕರವೀ ಕಲಿ
ಕಾಲದಲಿ ಫಲಿಸುವುದು ಲಕ್ಷ್ಮೀ
ಲೋಲ ನಾಮಸ್ತುತಿಮಹಾಭಾರತ ಕಥಾಶ್ರವಣ || ೧೪ ||
ಪದ್ಯ-೧೪:ಪದವಿಭಾಗ-ಅರ್ಥ:ಕೇಳಿದನು ಜನಮೇಜಯಕ್ಷಿತಿಪಾಲ= ರಾಜನು, ವೈಶಂಪಾಯನನು ತಾ ಕೀಳು ದುರಿತಂಗಳಿಗೆ = ಕಟ್ಟ ಪಾಪಗಳಿಗೆ, ಪ್ರಾಯಶ್ಚಿತ್ತ ರೂಪದಲಿ ಕೇಳಿರೈ ಮುನಿನಿಕರವು(ಮುನಿ ಸಮೂಹ)+ ಈ ಕಲಿಕಾಲದಲಿ ಫಲಿಸುವುದು ಲಕ್ಷ್ಮೀಲೋಲ ನಾಮಸ್ತುತಿ ಮಹಾಭಾರತ ಕಥಾಶ್ರವಣ
ಪದ್ಯ-೧೪:ಅರ್ಥ:ವೈಶಂಪಾಯನನು ಹೇಳಿದ ಜನಮೇಜಯರಾಜನು ಸರ್ಪಯಾಗದ ಕಟ್ಟ ಪಾಪಗಳಿಗೆ ಪ್ರಾಯಶ್ಚಿತ್ತ ರೂಪದಲ್ಲಿ ಮಹಾಭಾರತ ಕಥೆಯನ್ನು ಕೇಳಿದನು. ಕೇಳಿರಿ ಮುನಿಗಳೇ ಈ ಕಲಿಕಾಲದಲ್ಲಿ, ಲಕ್ಷ್ಮೀಲೋಲ ವಿಷ್ಣುವಿನ ನಾಮಸ್ತುತಿ ಮಹಾಭಾರತ ಕಥಾಶ್ರವಣದಿಂದ ಪಾಪ ಪರಿಹಾರ ಫಲಿಸುವುದು, ಎಂದರು ಸೂತರು.
ರಾಯ ಚಿತ್ತೈಸೆಂದು ವೈಶಂ
ಪಾಯಮುನಿ ಹೇಳಿದನು ಕಮಲದ
ಳಾಯತಾಕ್ಷನ ಬಾಲಕೇಳಿ ವಿಧೂತ ಕಿಲ್ಬಿಷವ ||
ಕಾಯ ಕಲ್ಮಷಹರವಖಿಳ ನಿ
ಶ್ರೇಯಸದ ಸದ್ರೂಪುವಿನ ಸಂ
ದಾಯಕವ ನಿರ್ಮಲ ಮಹಾಭಾರತ ಕಥಾಮೃತವ || ೧೫ ||
ಪದ್ಯ-೧:ಪದವಿಭಾಗ-ಅರ್ಥ:ರಾಯ ಚಿತ್ತೈಸು+ ಎಂದು ವೈಶಂಪಾಯಮುನಿ ಹೇಳಿದನು ಕಮಲದಳಾಯತಾಕ್ಷನ= ಕೃಷ್ನನ, ಬಾಲಕೇಳಿ= ಬಾಲಲಿಲೆಯಕಥೆಯನ್ನು ವಿಧೂತ ಕಿಲ್ಬಿಷವಕಾಯ= ಅಮಂಗಳವಾದ ಕಾಣದಪಾಪಗಳನ್ನು, ಕಲ್ಮಷಹರವು(ನರಕನ್ನು ಹೊಗಲಾಡಿಸಿವುದು)+ ಅಖಿಳ= ಎಲ್ಲಾ ನಿಶ್ರೇಯಸದ= ಅತಿಶ್ರೇಷ್ಠವಾದ ಸದ್ರೂಪುವಿನ= ಸತ್ ರೂಪುವಿನ= ಆತ್ಮಸ್ವರೂಪದ ಸಂದಾಯಕವ= ಪಡೆಯುವ, ನಿರ್ಮಲ= ಪರಿಶುದ್ಧ ಮಹಾಭಾರತ ಕಥಾಮೃತವ.
  • ದಾಸ ಸಾಹಿತ್ಯ ನಿಘಂಟು:ವಿಧೂತಾಶುಭವ್ರಾತ - ಅಮಂಗಳಗಳ ಸಮೂಹ.
  • ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು:ಕಲ್ಮಷ ಹೆಸರುಪದ(ಸಂ) ೧ ಕೊಳೆ, ಮಾಲಿನ್ಯ ೨ ಪಾಪ ೩ ಕುಂದು
  • ಕ.ಸಾ.ಪ.ನಿಘಮಟು:ನಿಶ್ರೇಯಸ (ನಾ)1. ಅತಿಶ್ರೇಷ್ಠವಾದುದು. 2. ಶ್ರೇಷ್ಠಪದವಿ.
ಪದ್ಯ-೧:ಅರ್ಥ:ರಾಜನೇ ಕೇಳು, ಎಂದು ವೈಶಂಪಾಯಮುನಿಯು ಕೃಷ್ನನ ಬಾಲಲಿಲೆಯಕಥೆಯನ್ನು ಅಮಂಗಳವಾದ ಕಾಣದಪಾಪಗಳನ್ನು, ನರಕನ್ನು ಹೊಗಲಾಡಿಸಿವ, ಎಲ್ಲದಕ್ಕಿಂತ ಅತಿಶ್ರೇಷ್ಠವಾದ ಆತ್ಮಸ್ವರೂಪವನ್ನು ಪಡೆಯುವ ಪರಿಶುದ್ಧ ಮಹಾಭಾರತ ಕಥಾಮೃತವನ್ನು ಹೇಳಿದನು.

ಸೃಷ್ಠಿ ಕ್ರಮ[ಸಂಪಾದಿಸಿ]

ಆದಿ ಸೃಷ್ಟಿಯೊಳುದಿಸಿದರು ದ
ಕ್ಷಾದಿ ವಿಮಲ ನವಪ್ರಜೇಶ್ವರ
ರಾದರಂಬುಜಭವನ ಲೀಲಾಮಾತ್ರ ಸೂತ್ರದಲಿ ||
ಆದನವರೊಳಗತ್ರಿಮುನಿ ಬಳಿ
ಕಾದನಾ ಮುನಿಪತಿಗೆ ಜಗದಾ
ಹ್ಲಾದಕರ ಹಿಮಕಿರಣನಾತನಲಾಯ್ತು ಶಶಿವಂಶ || ೧೬ ||

ಪದ್ಯ-೧:ಪದವಿಭಾಗ-ಅರ್ಥ:ಆದಿ ಸೃಷ್ಟಿಯೊಳು+ ಉದಿಸಿದರು=ಮೊದಲ ಸೃಷ್ಟಿಯಲ್ಲಿ ಹುಟ್ಟಿದರು, ದಕ್ಷ+ ಆದಿ= ದಕ್ಷನೇ ಮೊದಲಾಗಿ, ವಿಮಲ+ಶ್ರೇಷ್ಠ, ನವ+ ಪ್ರಜೇಶ್ವರರು= ನವ ಪ್ರಜೇಶ್ವರರು (ಬ್ರಹ್ಮರು) ಆದರು= ಹುಟ್ಟಿದರು, ಅಂಬುಜಭವನ=ಕಮಲದಲ್ಲಿ ಹುಟ್ಟಿದ- ಚತುರ್ಮುಖ ಬ್ರಹ್ಮನ ಲೀಲಾಮಾತ್ರ ಸೂತ್ರದಲಿ= ಲೀಲಾಮಾತ್ರ ಕ್ರಮದಿಂದ(ಹುಟ್ಟಿದರು). ಆದನು ಅವರೊಳಗೆ ಅತ್ರಿಮುನಿ= ಅವರಲ್ಲಿ ಹುಟ್ಟಿದವನು ಅತ್ರಿಮುನಿಯು. ಬಳಿಕ+ ಆದನು+ ಆ ಮುನಿಪತಿಗೆ ನಂತರ ಆ ಮುನಿಗೆ ಹುಟ್ಟಿದನು, ಜಗದಾಹ್ಲಾದಕರ= ಜಗತ್ತಿಗೆ ಆನಂದ ಕೊಡುವ, ಹಿಮಕಿರಣನು+ ಆತನಲಿ+ ಆಯ್ತು ಶಶಿವಂಶ= ಚಂದ್ರನು, ಅವನಿಂದ ಚಂದ್ರವಂಶವಾಯಿತು.
ಪದ್ಯ-೧:ಅರ್ಥ:ಆದಿ ಸೃಷ್ಟಿಯಲ್ಲಿ ದಕ್ಷನೇಮೊದಲಾದ ಶ್ರೇಷ್ಠ ಒಂಭತ್ತು ಬ್ರಹ್ಮರು (ಪ್ರಜೇಶ್ವರರು) ಚತುರ್ಮುಖ ಬ್ರಹ್ಮನ ಲೀಲಾಮಾತ್ರ ಕ್ರಮದಿಂದ ಹುಟ್ಟಿದರು. ನಂತರ ಅವರಲ್ಲಿ ಅತ್ರಿಮುನಿಗೆ ಜಗತ್ತಿಗೆ ಆನಂದ ಕೊಡುವ ಚಂದ್ರನು ಹುಟ್ಟಿದನು. ಅವನಿಂದ ಚಂದ್ರವಂಶವಾಯಿತು.

ಸೋಮನಿಂ ಬುಧನಾ ಬುಧಂಗೆಯು
ಭೂಮಿಯಲ್ಲಿ ಪುರೂರವನು ಬಳಿ
ಕಾ ಮಹೀಪತಿಗೂರ್ವಶಿಯೊಳಾಯುಃ ಕುಮಾರಕನು ||
ಆ ಮಹೀಶಗೆ ನಹುಷ ನಹುಷಂ
ಗಾ ಮಹಾತ್ಮ ಯಯಾತಿ ಬಳಿಕೀ
ಸೋಮಕುಲವೆರಡಾಯ್ತು ಯದು ಪೂರುಗಳ ದೆಸೆಯಿಂದ || ೧೭ ||

ಪದ್ಯ-೧:ಪದವಿಭಾಗ-ಅರ್ಥ:ಹಿಮಕಿರಣನು+ ಆತನಲಿ+ಆಯ್ತು ಶಶಿವಂಶ, ಸೋಮನಿಂ=ಚಂದ್ರನಿಂದ, ಬುಧನು+ ಆ ಬುಧಂಗೆಯು ಭೂಮಿಯಲ್ಲಿ ಪುರೂರವನು, ಬಳಿಕ+ಆ ಮಹೀಪತಿಗೆ+ ಊರ್ವಶಿಯೊಳು ಆಯುಃ ಕುಮಾರಕನು, ಆ ಮಹೀಶಗೆ ನಹುಷ, ನಹುಷಂಗೆ+ ಆ ಮಹಾತ್ಮ ಯಯಾತಿ, ಬಳಿಕ+ ಈ ಸೋಮಕುಲವು+ ಎರಡು+ ಆಯ್ತು ಯದು ಪೂರುಗಳ ದೆಸೆಯಿಂದ.
ಪದ್ಯ-೧:ಅರ್ಥ: ಚಂದ್ರನಿಂದ ಶಶಿವಂಶ ಆಯಿತು: ಸೋಮನಿಂದ ಬುಧನೂ, ಅವನಿಂದ ಭೂಮಿಯಲ್ಲಿ ಪುರೂರವನೂ, ಬಳಿಕ ಆ ರಾಜನಿಗೆ ಊರ್ವಶಿಯಿಂದ ಆಯು ಕುಮಾರಕನೂ,
ಅವನಿಗೆ ನಹುಷನುಹುಟ್ಟಿದನು; ನಹುಷನಿಗೆ ಮಹಾತ್ಮ ಯಯಾತಿಯೂ ಬಳಿಕ ಈ ಸೋಮಕುಲವು ಎರಡು ಕವಲಾಯ್ತು. ಅದು ಯದುವಂಶ ಪೂರುವಿನ ವಂಶ ಅದೇ ಮುಂದೆ ಕುರುವಂಶವಾಯಿತು.

ಯದುಪರಂಪರೆಯಿಂದ ಯಾದವ
ರುದಿಸಿದರು ಪೂರುವಿನ ದೆಸೆಯಿಂ
ದಿದುವೆ ಕೌರವ ವಂಶವಾಯ್ತು ಯಯಾತಿ ಪೌತ್ರರಲಿ ||
ವಿದಿತ ಪೂರ್ವೋತ್ತರದ ಯದು ವಂ
ಶದ ಕಥಾವಿಸ್ತಾರವನು ಹೇ
ಳಿದನು ದುಷ್ಯಂತನಲಿ ಶಾಕುಂತಲೆಯ ಕಥೆ ಸಹಿತ || ೧೮ ||

ಪದ್ಯ-೧:ಪದವಿಭಾಗ-ಅರ್ಥ:ಯದು+ ಪರಂಪರೆಯಿಂದ ಯಾದವರು ಉದಿಸಿದರು ಪೂರುವಿನ ದೆಸೆಯಿಂದ+ ಇದುವೆ ಕೌರವ ವಂಶವಾಯ್ತು; ಯಯಾತಿ ಪೌತ್ರರಲಿ ವಿದಿತ= ಪ್ರಸಿದ್ಧವಾದ ಪೂರ್ವೋತ್ತರದ=ಪೂರ್ವ ಹಿಂದಿನ+ ಉತ್ತರ ಮುಂದಿನ; ಹಿಂದಿನ ಮತ್ತು ಮುಂದಿನ ಯದು ವಂಶದ ಕಥಾ-ವಿಸ್ತಾರವನು ಹೇಳಿದನು, ದುಷ್ಯಂತನಲಿ ಶಾಕುಂತಲೆಯ ಕಥೆ ಸಹಿತ
ಪದ್ಯ-೧:ಅರ್ಥ:ಯದುವಿನ ಪರಂಪರೆಯಿಂದ ಯಾದವರು ಹುಟ್ಟಿದರು. ಪೂರುವಿನ ದೆಸೆಯಿಂದ ಮಂದೆ ಇದೇ ಕೌರವ ವಂಶವಾಯ್ತು. ಯಯಾತಿಯ ಮೊಮ್ಮಕ್ಕಳಲ್ಲಿ ಪ್ರಸಿದ್ಧವಾದ ಪೂರ್ವೋತ್ತರದ ಯದು ವಂಶದ ಹಿಂದಿನ ಮತ್ತು ಮುಂದಿನ ಯದು ವಂಶದ ಕಥಾ-ವಿಸ್ತಾರವನ್ನು, ಅದರಲ್ಲಿ ದುಷ್ಯಂತ ಮತ್ತು ಶಾಕುಂತಲೆಯ ಕಥೆ ಸಹಿತ ಹೇಳಿದನು.

ಕುರುವಂಶದ ಬೆಳವಣಿಗೆ[ಸಂಪಾದಿಸಿ]

ಭರತನಾ ದುಷ್ಯಂತನಿಂದವ
ತರಿಸಿದನು ತತ್ಪೂರ್ವ ನೃಪರಿಂ
ಹಿರಿದು ಸಂದನು ಬಳಿಕ ಭಾರತವಂಶವಾಯ್ತಲ್ಲಿ ||
ಭರತಸೂನು ಸುಹೋತ್ರನಾತನ
ವರಕುಮಾರಕ ಹಸ್ತಿ ಹಸ್ತಿನ
ಪುರಿಗೆ ಹೆಸರಾಯ್ತಾತನಿಂದವೆ ನೃಪತಿ ಕೇಳೆಂದ || ೧೯ ||
ಪದ್ಯ-೧:ಪದವಿಭಾಗ-ಅರ್ಥ: ಭರತನು+ ಆ ದುಷ್ಯಂತನಿಂದ+ ಅವತರಿಸಿದನು(ಹುಟ್ಟಿದನು) ತತ್+ ಪೂರ್ವ(ಹಿಂದಿನ) ನೃಪರಿಂ ಹಿರಿದು ಸಂದನು= ರಾಜರಿಗಿಂತ ಕೀರ್ತಿವಂತನಾದನು. ಬಳಿಕ ಭಾರತವಂಶವಾಯ್ತು ಅಲ್ಲಿ ಭರತ ಸೂನು(ಮಗ) ಸುಹೋತ್ರನು ಆತನ ವರಕುಮಾರಕ(ಮಗ) ಹಸ್ತಿ, ಹಸ್ತಿನಪುರಿಗೆ ಹೆಸರಾಯ್ತು+ ಆತನಿಂದವೆ ನೃಪತಿ ಕೇಳೆಂದ.
ಪದ್ಯ-೧:ಅರ್ಥ:ದುಶ್ಯಂತನ ಮಗ ಭರತನು; ಆ ದುಷ್ಯಂತನಿಂದ ಹುಟ್ಟಿದ ಅವನು ಹಿಂದಿನ ರಾಜರಿಗಿಂತ ಕೀರ್ತಿವಂತನಾದನು. ಬಳಿಕ ಅದು ಭಾರತವಂಶವೆಂದು ಹೆಸರಾಯಿತು. ಭರತನ ಮಗ ಸುಹೋತ್ರನು; ಆತನ ಮಗ ಹಸ್ತಿ, ಹಸ್ತಿನಾಪುರಿಗೆ ಅವನಿಂದಲೇ ಆ ಹೆಸರಾಯ್ತು, ನೃಪತಿಯೇ ಕೇಳು ಎಂದ, ಮುನಿ.
ವರಕುಮಾರರ ಪಂಕ್ತಿಯಲಿ ಸಂ
ವರಣನಾತಗೆ ಸೂರ್ಯಪುತ್ರಿಗೆ
ಕುರು ಮಹೀಪತಿ ಜನಿಸಿದನು ಬಳಿಕಾಯ್ತು ಕುರುವಂಶ ||
ವರ ಪರಂಪರೆಯೋಳ್ ಪ್ರತೀಪನು
ಧರಣಿಪತಿಯಾತನಲಿ ಶಂತನು
ಧರೆಗಧೀಶ್ವರನಾಗಿ ಬೆಳಗಿದನರಸ ಕೇಳೆಂದ || ೨೦ ||
ಪದ್ಯ-೧:ಪದವಿಭಾಗ-ಅರ್ಥ:ವರಕುಮಾರರ ಪಂಕ್ತಿಯಲಿ= ವಂಶಪರಂಪರೆಯಲ್ಲಿ ಸಂವರಣನು+ ಆತಗೆ ಸೂರ್ಯಪುತ್ರಿಗೆ=ಸೂರ್ಯಪುತ್ರಿ ತಪತಿಯನ್ನು ವಿವಾಹವಾಗಿ ಅವಳಿಂದ, ಕುರು ಮಹೀಪತಿ ಜನಿಸಿದನು. ಬಳಿಕ+ ಆಯ್ತು ಕುರುವಂಶ; ವರ ಪರಂಪರೆಯೋಳ್ ಪ್ರತೀಪನು ಧರಣಿಪತಿಯು+ ಆತನಲಿ ಶಂತನು ಧರೆಗೆ+ ಅಧೀಶ್ವರನಾಗಿ ಬೆಳಗಿದನು+ ಅರಸ ಕೇಳು+ ಎಂದ
ಪದ್ಯ-೧:ಅರ್ಥ:ಆ ಚಂದ್ರವಂಶ ಪರಂಪರೆಯಲ್ಲಿ ಸಂವರಣನು ಸೂರ್ಯಪುತ್ರಿ ತಪತಿಯನ್ನು ವಿವಾಹವಾಗಿ ಅವಳಿಂದ, ಕುರು ಮಹೀಪತಿ ಜನಿಸಿದನು. ಬಳಿಕ ಕುರುವಂಶ ಎಂದು ಹೆಸರಾಯಿತು; ಉತ್ತಮ ಪರಂಪರೆಯಲ್ಲಿ ಪ್ರತೀಪನು ಧರಣಿಪತಿಯಾದನು. ಆತನ ಮಗ ಶಂತನು ಭೂಮಿಗೆ ಅಧಿಪತಿಯಾಗಿ ಬೆಳಗಿದನು. ಅರಸನೇ ಕೇಳು, ಎಂದನು ಮುನಿ.
ಸರಸಿಜಾಸನ ಕೊಟ್ಟ ಶಾಪದಿ
ಯರಸಿಯಾದಳು ಗಂಗೆ ಬಳಿಕಿ
ಬ್ಬರಿಗೆ ಮಕ್ಕಳು ವಸುಗಳೆಂಟು ವಸಿಷ್ಠ ಶಾಪದಲಿ
ನಿರಪರಾಧಿಗಳೇಳು ಜನನಾಂ
ತರಕೆ ಮರಣವ ಕಂಡರುಳಿದಂ
ಗಿರವು ಭೂಲೋಕದಲಿ ಬಲಿದುದು ಭೀಷ್ಮನಾಮದಲಿ ೨೧
ಪದ್ಯ-೧:ಪದವಿಭಾಗ-ಅರ್ಥ: ಸರಸಿಜಾಸನ= ಸರಸಿಜ=ಕಮಲ+ ಆಸನ, ಕಮಲವನ್ನು ಆಸನವಾಗಿ ಉಳ್ಳ ಬ್ರಹ್ಮನು ಕೊಟ್ಟ ಶಾಪದಿ+ ಅರಸಿಯಾದಳು(ಶಂತನುವಿಗೆ ಪತ್ನಿಯಾದಳು) ಗಂಗೆ, ಬಳಿಕ+ ಇಬ್ಬರಿಗೆ ಮಕ್ಕಳು ವಸುಗಳು ಎಂಟು ವಸಿಷ್ಠ ಶಾಪದಲಿ= ವಸಿಷ್ಠ ಶಾಪದಿಂದ ಎಂಟು ವಸುಗಳಲ್ಲಿ ನಿರಪರಾಧಿಗಳು+ ಏಳು ಜನನ+ ಅಂತರಕೆ= ಹುಟ್ಟಿದ ಕೂಡಲೆ ಮರಣವ ಕಂಡರು, ಉಳಿದಂಗೆ+ ಇರವು ಭೂಲೋಕದಲಿ= ಉಳಿದ ಒಬ್ಬನು ಭೂಲೋಕದಲ್ಲಿ ಬದುಕಿ ಉಳಿದನು. ಬಲಿದುದು= ಗಟ್ಟಿಯಾಗಿ ಎಂಬ ಭೀಷ್ಮನಾಮದಲಿ= ಭೀಷ್ಮ ಎಂಬ ಹೆಸರು ಅವನಿಗೆ ಉಳಿಯಿತು.
ಪದ್ಯ-೧:ಅರ್ಥ:ಕಮಲವನ್ನು ಆಸನವಾಗಿ ಉಳ್ಳ ಬ್ರಹ್ಮನು ಕೊಟ್ಟ ಶಾಪದಿಂದ ಗಂಗೆಯು ಶಂತನುವಿಗೆ ಪತ್ನಿಯಾದಳು. ಬಳಿಕ ಆ ಇಬ್ಬರಿಗೆ ಎಂಟು ವಸುಗಳು ವಸಿಷ್ಠ ಶಾಪದಿಂದ ಮಕ್ಕಳಾಗಿ ಜನಿಸಿದರು. ಎಂಟು ವಸುಗಳಲ್ಲಿ ನಿರಪರಾಧಿಗಳಾದ ಏಳು ವಸುಗಳು ಹುಟ್ಟಿದ ಕೂಡಲೆ ಗಂಗೆಯು ನದಿಗೆ ಹಾಕಿದ್ದರಿಂದ ಮರಣಹೊಂದಿದರು, ಉಳಿದ ಒಬ್ಬ ವಸುವು ಭೂಲೋಕದಲ್ಲಿ ಬದುಕಿ ಉಳಿದನು. ಸತ್ಯವ್ರತನೆಂಬ ಅವನಿಗೆ ಭೀಷ್ಮ ಎಂಬ ಹೆಸರು ಗಟ್ಟಿಯಾಗಿ ಉಳಿಯಿತು.
ಶಾಪ ಹಿಂಗಿತು ಸುರನದಿಗೆ ಬಳಿ
ಕಾ ಪರಾಕ್ರಮಿ ಭೀಷ್ಮ ಶಂತನು
ಭೂಪತಿಗೆ ಮಗನಾಗಿ ಬೆಳಗಿದನಖಿಳ ದಿಕ್ತಟವ
ಭೂಪ ಕೇಳೈ ಉಪರಿಚರ ವಸು
ರೂಪಗರ್ಭವು ಮೀನ ಬಸುರಲಿ
ವ್ಯಾಪಿಸಿತು ಜನಿಸಿದುದು ಮಿಥುನವು ಮತ್ಸ್ಯ ಜಠರದಲಿ ೨೨
ಪದ್ಯ-೧:ಪದವಿಭಾಗ-ಅರ್ಥ:ಶಾಪ ಹಿಂಗಿತು ಸುರನದಿಗೆ= ಗಂಗೆಗೆ ಶಾಪವು ಉಪಶಮನವಾಯಿತು, ಬಳಿಕ ಆ ಪರಾಕ್ರಮಿ ಭೀಷ್ಮ ಶಂತನು ಭೂಪತಿಗೆ ಮಗನಾಗಿ ಬೆಳಗಿದನು+ ಅಖಿಳ ದಿಕ್ತಟವ (ಎಲ್ಲ ದಿಕ್ಕುಗಳಲ್ಲಿ)= ಬಳಿಕ ಆ ಪರಾಕ್ರಮಿಯಾದ ಭೀಷ್ಮನು, ಶಂತನು ರಾಜನಿಗೆ ಮಗನಾಗಿ ಎಲ್ಲ ದಿಕ್ಕುಗಳಲ್ಲಿ ಕೀರ್ತಿಪಡೆದನು. ಭೂಪ ಕೇಳೈ = ರಾಜನೇ ಕೇಳು ಈ ಕಡೆ, ಉಪರಿಚರ ವಸುರೂಪಗರ್ಭವು= ಉಪರಿಚರ ವಸುವಿನ ರೂಪದ ಗರ್ಭವು (ನದಿಗೆ ಬಿದ್ದ ಅವನ ವೀರ್ಯದಿಂದ) ಮೀನ ಬಸುರಲಿ ವ್ಯಾಪಿಸಿತು= ಮೀನಿನ ಗರ್ಭದಲ್ಲಿ ಬೆಳೆದು, ಜನಿಸಿದುದು ಮಿಥುನವು= ಅವಲಿಮಕ್ಕಲು ಜನಿಸಿದರು. ಮತ್ಸ್ಯ ಜಠರದಲಿ= ಮೀನಿನಗರ್ಬದಿಂದ.
ಪದ್ಯ-೧:ಅರ್ಥ: ಗಂಗೆಗೆ ಬ್ರಹ್ಮನ ಶಾಪವು ಉಪಶಮನವಾಯಿತು. ಅವಳು ಗಂಗಾನದಿಯಲ್ಲಿ ಲೀನವಾದಳು. ಬಳಿಕ ಆ ಪರಾಕ್ರಮಿಯಾದ ಭೀಷ್ಮನು, ಶಂತನು ರಾಜನಿಗೆ ಮಗನಾಗಿ ಎಲ್ಲ ದಿಕ್ಕುಗಳಲ್ಲಿ ಕೀರ್ತಿಪಡೆದನು. ರಾಜನೇ ಕೇಳು, ಈ ಕಡೆ, ಉಪರಿಚರ ಉಪರಿಚರ ವಸುವಿನ ರೂಪದ ಗರ್ಭವು ನದಿಗೆ ಬಿದ್ದ ಅವನ ವೀರ್ಯದಿಂದ ಮೀನಿನ ಗರ್ಭದಲ್ಲಿ ಬೆಳೆದು, ಮೀನಿನ ಗರ್ಭದಿಂದ ಅವಳಿ ಮಕ್ಕಳು ಜನಿಸಿದರು.

ವೇದವ್ಯಾಸರ ಜನನ[ಸಂಪಾದಿಸಿ]

ಬಳಿಕ ಮತ್ಸ್ಯದ ಬಸಿರಲುದಿಸಿದ
ನಳಿನಲೋಚನೆ ಮತ್ಸ್ಯಗಂಧಿನಿ
ಬೆಳೆವುತಿರ್ದಳು ಸಂಗವಾಯ್ತು ಪರಾಶರವ್ರತಿಯ ||
ಬಳಿಕ ಯೋಜನಗಂಧಿಯಲ್ಲಿಂ
ದಿಳಿದನಭ್ರಶ್ಯಾಮನುರು ಪಿಂ
ಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ || ೨೩ ||
ಪದ್ಯ-೧:ಪದವಿಭಾಗ-ಅರ್ಥ:ಬಳಿಕ ಮತ್ಸ್ಯದ(ಮೀನಿನ) ಬಸಿರಲಿ+ ಉದಿಸಿದ ನಳಿನಲೋಚನೆ (ಹುಟ್ಟಿ ಸುಂದರ ಕಮಲದ ಎಸಳಿನಂತಿರುವ ಕಣ್ಣುಳ್ಳ ಹೆಣ್ಣುಮಗು) ಮತ್ಸ್ಯಗಂಧಿನಿ ಬೆಳೆವುತಿರ್ದಳು= ಬೆಳೆಯುತ್ತಿದ್ದಳು, (ಅವಳಿಗೆ) ಸಂಗವಾಯ್ತು (ಪರಾಶರಮುನಿಯ ದೇಹಸಂಗವಾಯಿತು) ಪರಾಶರವ್ರತಿಯ, ಬಳಿಕ ಯೋಜನಗಂಧಿಯು+ (ಆನಂತರ ಮುನಿಯ ವರದಿಂದ ಅವಳ ದೇಹದ ಮೀನಿನ ವಾಸನೆ ಹೋಗಿ ಅವಳು ಸುವಾಸನೆಯ ಯೋಜನಗಂಧಿಯಾದಳು.) ಅಲ್ಲಿಂದ+ ಇಳಿದನು+ ಅಭ್ರಶ್ಯಾಮನು+ = ಅವಳ ಗರ್ಭದಿಂದ ಹುಟ್ಟಿದನು ಉರು= ಶ್ರೇಷ್ಠನಾದ ಪಿಂಗಳ (ಕಂದು ಬಣ್ಣದ) ಜಟಾಪರಿಬದ್ಧ ವೇದವ್ಯಾಸ ಮುನಿರಾಯ.
  • ದ್ವೀಪದಲ್ಲಿ ಹುಟ್ಟಿದ್ದರಿಂದ ದ್ವೈಪಾಯನ; ಕಂದು ಬಣ್ಣದವನಾದುದರಿಂದ ಕೃಷ್ಣ; ವೇದವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದರಿಂದ ವೇದವ್ಯಾಸ. ಬಾದರಾಯಣ ಸೂತ್ರ= ಬ್ರಹ್ಮಸೂತ್ರ; ಪ್ರಾಚೀನ ಸೂತ್ರವನ್ನು ರಚಿಸಿದ್ದರಿಂದ ಬಾದರಾಯಣ
ಪದ್ಯ-೧:ಅರ್ಥ:ಬಳಿಕ ಮೀನಿನ ಬಸಿರಲಿ ಸುಂದರ ಕಮಲದ ಎಸಳಿನಂತಿರುವ ವಿಶಾಲ ಕಣ್ಣುಳ್ಳ ಹೆಣ್ಣುಮಗು ಮತ್ಸ್ಯಗಂಧಿನಿ ಹುಟ್ಟಿದಳು. (ಇನ್ನಂದು ಮಗು ಗಂಡು- ಅವಳ ಅಣ್ನ) ಅವಳು ದಿನೇ ದಿನೇ ಬೆಳೆಯುತ್ತಿದ್ದಳು, ಪ್ರಾಯದ ಅವಳಿಗೆ ಪರಾಶರ ಮುನಿಯ ದೇಹಸಂಗವಾಯಿತು. ಬಳಿಕ ಆನಂತರ ಆ ಮುನಿಯ ವರದಿಂದ ಅವಳ ದೇಹದ ಮೀನಿನ ವಾಸನೆ ಹೋಗಿ ಅವಳು ಸುವಾಸನೆಯ ಯೋಜನಗಂಧಿಯಾದಳು. ಅವಳ ಗರ್ಭದಿಂದ ಶ್ರೇಷ್ಠನಾದ ಕಂದು ಬಣ್ಣದ ಜಟಾಧಾರಿಯಾದ ವೇದವ್ಯಾಸ ಮುನಿರಾಯ ಹುಟ್ಟಿದನು .
ನೆನೆ ವಿಪತ್ತಿನೊಳೆಂದು ತಾಯನು
ತನುಜ ಬೀಳ್ಕೊಂಡನು ಪರಾಶರ
ಮುನಿ ಪುನಃ ಕನ್ಯತ್ವವನು ಕರುಣಿಸಿದನಾ ಸತಿಗೆ ||
ವಿನುತ ಯಮುನಾ ತೀರದಲಿ ಮಾ
ನಿನಿಯ ಕಂಡನು ಬೇಂಟೆಯಾಡುತ
ಜನಪ ಶಂತನು ಮರುಳುಗೊಂಡನು ಮದನನೆಸುಗೆಯಲಿ || ೨೪ ||
ಪದ್ಯ-೧:ಪದವಿಭಾಗ-ಅರ್ಥ:ನೆನೆ ವಿಪತ್ತಿನೊಳು (ಕಷ್ಟದಲ್ಲಿ)+ ಎಂದು ತಾಯನು ತನುಜ(ಮಗ) ಬೀಳ್ಕೊಂಡನು, ಪರಾಶರಮುನಿ ಪುನಃ ಕನ್ಯತ್ವವನು ಕರುಣಿಸಿದನು+ ಆ ಸತಿಗೆ, ವಿನುತ= ಪವಿತ್ರವಾದ ಯಮುನಾ ತೀರದಲಿ ಮಾನಿನಿಯ ಕಂಡನು ಬೇಂಟೆಯಾಡುತ ಜನಪ ಶಂತನು ಮರುಳುಗೊಂಡನು ಮದನನ+ ಎಸುಗೆಯಲಿ=ಬಾಣದಲಿ
ಪದ್ಯ-೧:ಅರ್ಥ:ಕಷ್ಟದಲ್ಲಿ ತನ್ನನ್ನು ನೆನೆಪಿಸಿಕೊಂಡಲ್ಲಿ ಬರುವೆನು ಎಂದು ತಾಯಿಯನ್ನು ಮಗ ವೇದವ್ಯಾಸನು ಬೀಳ್ಕೊಂಡು ತಂದೆಯೊಡನೆ ಹೋದನು. ಪರಾಶರಮುನಿಯು ಬೆಸ್ತಕನ್ಯೆ ಯೋಜನಗಂಧಿಗೆ ಪುನಃ ಕನ್ಯತ್ವವನ್ನು ಕೊಟ್ಟನು. (ಸಂಭೋಗ ಮತ್ತು ಹೆರಿಗೆಯ ನಂತರ ಹೆಣ್ಣಿನ ಕನ್ಯತ್ವ ವು ಹೋಗುತ್ತದೆ). ಪವಿತ್ರವಾದ ಯಮುನಾ ತೀರದಲ್ಲಿ ಆ ಯೊಜನಗಂಧಿಯನ್ನು ಕಂಡನು ಬೇಂಟೆಯಾಡುತ್ತಾ ಬಂದ ರಾಜ ಶಂತನು ಕಂಡು ಅವಳಿಗೆ ಮನ್ಮಥನ ಬಾಣದ ಪೆಟ್ಟಿನಿಂದ (ಕಾಮ ವಶನಾಗಿ) ಮರುಳುಗೊಂಡು ಮನಸೋತನು.
ಪರಿಮಳದ ಬಳಿವಿಡಿದು ಬಂದೀ
ತರುಣಿಯನು ಕಂಡಾರು ನೀನೆಂ
ದರಸ ಬೆಸಗೊಳುತೆಸುವ ಕಾಮನ ಶರಕೆ ಮೈಯೊಡ್ಡಿ ||
ಅರಮನೆಗೆ ನಡೆಯೆನಲು ತಂದೆಯ
ಪರಮ ವಚನವಲಂಘ್ಯವೆನೆ ಕಾ
ತರಿಸಿ ಭಗ್ನ ಮನೋರಥನು ಮರಳಿದನು ಮಂದಿರಕೆ || ೨೫ ||
ಪದ್ಯ-೧:ಪದವಿಭಾಗ-ಅರ್ಥ:ಪರಿಮಳದ ಬಳಿವಿಡಿದು= ಅನುಸರಿಸಿ, ಬಂದು+ ಈ ತರುಣಿಯನು ಕಂಡ+ ಆರು= ಯಾರು ನೀನು+ ಎಂದು+ ಅರಸ ಬೆಸಗೊಳುತ+ = ಕೇಳುತ್ತಾ, ಎಸುವ= ಹೊಡೆದ ಕಾಮನ ಶರಕೆ ಮೈಯೊಡ್ಡಿ (ಮನ್ಮಥನ ಬಾಣದ ಪೆಟ್ಟಿನಿಂದ ಮನಸೋತು), ಅರಮನೆಗೆ ನಡೆ+ ಯೆ, ಎನಲು, ತಂದೆಯ ಪರಮ ವಚನವು ಅಲಂಘ್ಯವು(ಮಾತು ಮೀರಲಾರದ್ದು)+ ಎನೆ= ಎನ್ನಲು, ಕಾತರಿಸಿ= ಸಂಕಟಪಟ್ಟು, ಭಗ್ನ=ಮರಿದು ಮನೋರಥನು= ಮನದಾಸೆ ಈಡೇರದೆ, ಮರಳಿದನು ಮಂದಿರಕೆ= ಅರಮನೆಗೆ ಹಿಂತಿರುಗಿ ಬಂದನು.
ಪದ್ಯ-೧:ಅರ್ಥ:ಬೆಸ್ತ ಕನ್ಯೆ ಯೋಜನಗಂಧಿಯ ಪರಿಮಳವನ್ನು ಅನುಸರಿಸಿ ಬಂದು ತರುಣಿಯನ್ನು ಕಂಡು,ಯಾರು ನೀನು ಎಂದು, ರಾಜನು ಕೇಳುತ್ತಾ, ಮನ್ಮಥನ ಬಾಣದ ಪೆಟ್ಟಿನಿಂದ ಮನಸೋತು, ಕಾಮವಶನಾಗಿ, ಮದುವೆಯಾಗುವೆನು ಅರಮನೆಗೆ ಬಾ ಎಂದನು. ಅವಳು ತಂದೆಯ ಮಾತನ್ನು ಮೀರಲಾರೆ; ಅವರ ಒಪ್ಪಿಗೆ ಪಡೆಯಿರಿ ಎಂದಳು.ಹಾಗೆ ಹೇಳಲು, ರಾಜನು ಸಂಕಟಪಟ್ಟು, ಮನದಾಸೆ ಈಡೇರದೆ, ಅರಮನೆಗೆ ಹಿಂತಿರುಗಿ ಬಂದನು.
ವಿರಹದಾವುಗೆ ಕಿಚ್ಚು ಭೂಮೀ
ಶ್ವರನ ಮುಸುಕಿತು ಬಲಿದವಸ್ಥೆಯ
ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ ||
ಮರಣವೀತಂಗೆಂಬ ಜನದು
ಬ್ಬರದ ಗುಜುಗುಜುವರಿದು ಯಮುನಾ
ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ || ೨೬ ||
ಪದ್ಯ-೧:ಪದವಿಭಾಗ-ಅರ್ಥ:ವಿರಹದ=ಪ್ರೀತಿಸಿದ ಹೆಣ್ಣಿನ ಅಗಲಿಕೆಯ, ಆವುಗೆ= ಕುಲುಮೆ,ಒಲೆಯ, ಕಿಚ್ಚು= ಬೆಂಕಿ, ಭೂಮೀಶ್ವರನ ಮುಸುಕಿತು= ರಾಜನನ್ನು ಆವರಿಸಿತು, ಬಲಿದ+ ಅವಸ್ಥೆಯನು+ ಅರಸ ಬಣ್ಣಿಸಲು+ ಅರಿಯೆನು+ ಏಳು+ ಎಂಟು+ ಒಂಬತರ ಬಳಿಯ=ಹತ್ತಿರ ಮರಣವು+ ಈತಂಗೆ+ ಎಂಬ ಜನದ+ ಉಬ್ಬರದ ಗುಜುಗುಜುವ+ ಅರಿದು ಯಮುನಾ ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ= ಅವಸರದಲ್ಲಿ.
ಪದ್ಯ-೧:ಅರ್ಥ:ಪ್ರೀತಿಸಿದ ಹೆಣ್ಣಿನ ಅಗಲಿಕೆಯ, ಒಲೆಯ ಬೆಂಕಿ, ರಾಜನನ್ನು ಆವರಿಸಿತು, ರಾಜನ ತೀವ್ರವಾದ ಸ್ಥಿತಿಯನ್ನು, ಅರಸ ಜನಮೇಜಯನೇ, ನಾನು ವರ್ಣಿಸಲು ಅರಿಯೆನು ಎಂದನು ವೈಶಂಪಾಯನ; ಜನರು ಬಹಳವಾಗಿ ಗುಜುಗುಜು ಎಂದು ಗುಟ್ಟಿನಲ್ಲಿ ಇವನಿಗೆ- ರಾಜನಿಗೆ ಏಳು, ಎಂಟು ಅಥವಾ ಒಂಭತ್ತು ದಿನಗಳ ಹತ್ತಿರದಲ್ಲಿ ಮರಣವು ಬರುವುದು ಎಂದು ಮಾತನಾಡಿಕೊಳ್ಳತ್ತಿರುವುದನ್ನು ತಿಳಿದು ಭೀಷ್ಮನು ಅವಸರದಲ್ಲಿ ಪೂಜ್ಯಯಮುನಾ ನದಿಯ ತೀರಕ್ಕೆ ಬಂದನು.

ಭೀಷ್ಮ ಪ್ರತಿಜ್ಞೆ[ಸಂಪಾದಿಸಿ]

ಕರೆಸಿದನು ಧೀವರನನಯ್ಯಂ
ಗರಸಿಯಾಗಲಿ ನಿನ್ನ ಮಗಳೆನ
ಲರಸಿಯಾದರೆ ಮಗಳ ಮಕ್ಕಳು ರಾಜ್ಯವಾಳುವರೆ ||
ಅರಿದು ಸಲಿಸುವಡಿದನು ನೀ ಬರಿ
ಯರಸುತನ ನಮಗೇಕೆನಲು ಧೀ
ವರನ ಮಾತಿಂಗೀತನೆಂದನು ರಾಯ ಕೇಳೆಂದ || ೨೭ ||
ಪದ್ಯ-೧:ಪದವಿಭಾಗ-ಅರ್ಥ:ಕರೆಸಿದನು ಧೀವರನನು+ ಅಯ್ಯಂಗೆ+ ಅರಸಿಯಾಗಲಿ ನಿನ್ನ ಮಗಳು ಎನಲು= ಯೋಜನಗಂಧಿಯ ಸಾಕುತಂದೆ ಧೀವರನೆಂಬ ಬೆಸ್ತರ ರಾಜನನ್ನು ಭೀಷ್ಮನು ಕರೆಸಿದನು, ನಿನ್ನ ಮಗಳನ್ನು ತನ್ನ ತಂದೆ ಶಂತನುವಿಗೆ ಕೊಡು, ಅವಳು ಈ ದೇಶದ ಅರಸಿಯಾಗುವಳು ಎಂದನು; ಅರಸಿಯಾದರೆ ಮಗಳ ಮಕ್ಕಳು ರಾಜ್ಯವಾಳುವರೆ= ಅವಳು ರಾಣಿಯಾದರೆ ಹಿರಿಯನು ನೀನು ಇರುವಾಗ ಅವಳ ಮಕ್ಕಳಿಗೆ ರಾಜ್ಯ ಸಿಗುವುದೇ, ಎಂದನು ಧೀವರ. ಅರಿದು ಸಲಿಸುವಡೆ+ ಇದನು, = ಇದನ್ನು ನೀನು ತಿಳಿದೂ ಕೊಟ್ಟರೆ, ನೀ ಬರಿಯ+ ಅರಸುತನ ನಮಗೇಕೆ+ ಎನಲು= ಬರಿಯ ರಾಣಿಪದವಿ ನಮಗೆ ಏಕೆ? ಬೇಡ ಎಂದನು ಬೆಸ್ತರ ಒಡೆಯ. ಧೀವರನ ಮಾತಿಂಗೆ ಈತನು ಎಂದನು= ಧೀವರನ ಮಾತಿಗೆ ಭೀಷ್ಮನು ಎಂದುದನ್ನು, ರಾಯ ಕೇಳೆಂದ= ರಾಜನೇ ಕೇಳು ಎಂದನು ಮುನಿ.
ಪದ್ಯ-೧:ಅರ್ಥ:ಯೋಜನಗಂಧಿಯ ಸಾಕುತಂದೆ ಧೀವರನೆಂಬ ಬೆಸ್ತರ ರಾಜನನ್ನು ಭೀಷ್ಮನು ಕರೆಸಿದನು, ನಿನ್ನ ಮಗಳನ್ನು ತನ್ನ ತಂದೆ ಶಂತನುವಿಗೆ ಕೊಡು, ಅವಳು ಈ ದೇಶದ ಅರಸಿಯಾಗುವಳು ಎಂದನು; ಅವಳು ರಾಣಿಯಾದರೆ ಹಿರಿಯನು ನೀನು ಇರುವಾಗ ಅವಳ ಮಕ್ಕಳಿಗೆ ರಾಜ್ಯ ಸಿಗುವುದೇ, ಎಂದನು ಧೀವರ. ಇದನ್ನು ನೀನು ತಿಳಿದೂ ಕೊಟ್ಟರೆ, ಬರಿಯ ರಾಣಿಪದವಿ ನಮಗೆ ಏಕೆ? ಬೇಡ ಎಂದನು ಬೆಸ್ತರ ಒಡೆಯ. ಧೀವರನ ಮಾತಿಗೆ ಭೀಷ್ಮನು ಎಂದುದನ್ನು, ರಾಜನೇ ಕೇಳು ಎಂದನು ಮುನಿ.
ಆದರಿಲ್ಲಿಂ ಮೇಲೆ ನಾರಿಯ
ರಾದವರು ಭಾಗೀರಥಿಗೆ ಸರಿ
ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ ||
ಈ ದಿವಿಜರೀ ಹರಿ ಹರ ಬ್ರ
ಹ್ಮಾದಿ ದೇವರು ಸಾಕ್ಷಿ ಹೋಗೆಂ
ದಾ ದಯಾಂಬುಧಿ ನಗುತ ನಿನ್ನಯ ಮಗಳ ಕರೆಸೆಂದ || ೨೮ ||
ಪದ್ಯ-೧:ಪದವಿಭಾಗ-ಅರ್ಥ:ಆದರೆ+ ಇಲ್ಲಿಂ ಮೇಲೆ ನಾರಿಯರಾದವರು ಭಾಗೀರಥಿಗೆ ಸರಿ= ಇನ್ನು ಮಂದೆ ಎಲ್ಲಾ ಹೆಂಗಸರೂ ನನ್ನ ತಾಯಿಗೆ ಸಮಾನರು, ಮೇದಿನಿಯ=ಭೂಮಿಯನ್ನು ಸಲಿಸುವೆನು= ಕೊಡುವೆನು, ನಾನು ರಾಜ್ಯವನ್ನೂ ನಿನ್ನಯ ಮಗಳ ಮಕ್ಕಳಿಗೆ= ನಿನ್ನ ಮಗಳ ಮಕ್ಕಳಿಗೆ ಕೊಡುವೆನು. ಈ ದಿವಿಜರು+ ಈ ಹರಿ ಹರ ಬ್ರಹ್ಮಾದಿ ದೇವರು ಸಾಕ್ಷಿ, ಹೋಗು ಎಂದು+ ಆ ದಯಾಂಬುಧಿ ನಗುತ ನಿನ್ನಯ ಮಗಳ ಕರೆಸು+ ಎಂದ= ಆ ದಯಾಸಾಗರನಾದ ಭೀಷ್ಮನು ತಂದೆಯ ಪ್ರಾಣ ಉಳಿಸಲು ಬ್ರಾಹ್ಮಣರು ಹರಿ ಹರ ಬ್ರಹ್ಮಾದಿ ದೇವರ ಸಾಕ್ಷಿಯಾಗಿ ಪ್ರತಿಜ್ಞೆ ಮಾಡಿದನು. ನಂತರ ಹೋಗು ನಿನ್ನ ಮಗಳನ್ನು ಕರೆಸು ವಿವಾಹಕ್ಕೆ ಸಿದ್ಧವಾಗಲಿ ಎಂದನು.
ಪದ್ಯ-೧:ಅರ್ಥ:ಭೀಷ್ಮನು, ಇನ್ನು ಮಂದೆ ಎಲ್ಲಾ ಹೆಂಗಸರೂ ನನ್ನ ತಾಯಿಗೆ ಸಮಾನರು, ನಾನು ರಾಜ್ಯವನ್ನೂ ನಿನ್ನ ಮಗಳ ಮಕ್ಕಳಿಗೆ ಕೊಡುವೆನು. ಆ ದಯಾಸಾಗರನಾದ ಭೀಷ್ಮನು ತಂದೆಯ ಪ್ರಾಣ ಉಳಿಸಲು ಬ್ರಾಹ್ಮಣರು ಹರಿ ಹರ ಬ್ರಹ್ಮಾದಿ ದೇವರ ಸಾಕ್ಷಿಯಾಗಿ ಪ್ರತಿಜ್ಞೆ ಮಾಡಿದನು. ನಂತರ ಹೋಗು ನಿನ್ನ ಮಗಳನ್ನು ಕರೆಸು ವಿವಾಹಕ್ಕೆ ಸಿದ್ಧವಾಗಲಿ ಎಂದನು.

ಶಂತನು ಮತ್ತು ಸತ್ಯವತಿ ವಿವಾಹ; ಅವರ ಮಗ ವಿಚಿತ್ರವೀರ್ಯನಿಗೆ ಪಟ್ಟ[ಸಂಪಾದಿಸಿ]

ತರಿಸಿದನು ದಂಡಿಗೆಯ ದಂಡಿಯ
ಚರರ ನೆಲನುಗ್ಗಡಣೆಯಲಿ ಸರ
ಸಿರುಹಮುಖಿಯನು ತಂದು ಮದುವೆಯ ಮಾಡಿದನು ಪಿತಗೆ ||
ಉರವಣಿಸಿ ಮಗ ನುಡಿದ ಭಾಷೆಯ
ನರಸ ಕೇಳಿದು ಬಳಿಕ ಭೀಷ್ಮಗೆ
ವರವನಿತ್ತನು ಮರಣವದು ನಿನ್ನಿಚ್ಛೆ ಹೋಗೆಂದ || ೨೯ ||
ಪದ್ಯ-೧:ಪದವಿಭಾಗ-ಅರ್ಥ:ತರಿಸಿದನು ದಂಡಿಗೆಯ= ಪಲ್ಲಕ್ಕಿಯನ್ನು, ದಂಡಿಯಚರರ= ಅದನ್ನು ಹೊರುವವರನ್ನ, ನೆಲನ+ ಉಗ್ಗಡಣೆಯಲಿ= ಚಾರರು ನದೆಯುವ ಸದ್ದಿನೊಂದಿಗೆ ಸರಸಿರುಹಮುಖಿಯನು= ಯೋಜನಗಂಧಿಯನ್ನು (ನಂತರ ಇವಳಿಗೆ ಸತ್ಯವತಿಯೆಂದು ನಾಮಕರಣವಾಗುವುದು) ತಂದು ಮದುವೆಯ ಮಾಡಿದನು ಪಿತಗೆ= ಕರೆದುಕೊಂಡುಬಂದು ತಂದೆಗೆ ವಿವಾಹ ಮಾಡಿದನು. ಉರವಣಿಸಿ ಮಗ ನುಡಿದ ಭಾಷೆಯನು+ ಅರಸ ಕೇಳಿದು ಬಳಿಕ= ಮಗನು ವೀರತನದಿಂದ ಮಾಡಿದ ಪ್ರತಿಜ್ಞೆಯನ್ನು ಶಂತನು ಕೇಳಿ ತಿಳಿದುಕೊಂಡು, ಭೀಷ್ಮಗೆವರವನಿತ್ತನು ಮರಣವದು ನಿನ್ನಿಚ್ಛೆ= ಭೀಷ್ಮನಿಗೆ, 'ನಿನ್ನ ಮರಣವು ನಿನ್ನ ಅಪೇಕ್ಷೆ ಇದ್ದಾಗ ಮಾತ್ರಾ ಆಗಲಿ,' ಎಂದು ವರವನ್ನು ಕೊಟ್ಟನು. ಹೋಗೆಂದ= ಶಂತನು ಮಗನಿಗೆ ಹೋಗು ಸುಖವಾಗಿರು ಎಂದನು.
ಪದ್ಯ-೧:ಅರ್ಥ:ಭೀಷ್ಮನು ಪಲ್ಲಕ್ಕಿಯನ್ನು, ಅದನ್ನು ಹೊರುವವರನ್ನು ಕರೆಸಿದನು, ಚಾರರು ನದೆಯುವ ಸದ್ದಿನೊಂದಿಗೆ ಯೋಜನಗಂಧಿಯನ್ನು (ನಂತರ ಇವಳಿಗೆ ಸತ್ಯವತಿಯೆಂದು ನಾಮಕರಣವಾಗುವುದು) ಕರೆದುಕೊಂಡು ಬಂದು ತಂದೆಗೆ ವಿವಾಹ ಮಾಡಿದನು. ಮಗನು ವೀರತನದಿಂದ ಮಾಡಿದ ಪ್ರತಿಜ್ಞೆಯನ್ನು ಶಂತನು ಕೇಳಿ ತಿಳಿದುಕೊಂಡು, ಭೀಷ್ಮನಿಗೆ,'ನಿನ್ನ ಮರಣವು ನಿನ್ನ ಅಪೇಕ್ಷೆ ಇದ್ದಾಗ ಮಾತ್ರಾ ಆಗಲಿ,' ಎಂದು ವರವನ್ನು ಕೊಟ್ಟನು. ಶಂತನು ಮಗನಿಗೆ ಹೋಗು ಸುಖವಾಗಿರು ಎಂದನು.
ಬಳಿಕ ಯೋಜನಗಂಧಿಯಲಿ ಮ
ಕ್ಕಳುಗಳವತರಿಸಿದರು ದೀಪ್ತ
ಜ್ವಲನತೇಜನರು ಕಲ್ಪಭೂಜರು ಹಿಮಕರಾನ್ವಯಕೆ ||
ಲಲಿತ ಮಂಗಳ ಜಾತಕರ್ಮಾ
ವಳಿಯ ಚಿತ್ರಾಂಗದನನಾ ನೃಪ
ತಿಲಕ ನೆಗಳೆ ವಿಚಿತ್ರವೀರ್ಯನ ನಾಮಕರಣದಲಿ || ೩೦ ||
ಪದ್ಯ-೧:ಪದವಿಭಾಗ-ಅರ್ಥ:ಬಳಿಕ ಯೋಜನಗಂಧಿಯಲಿ ಮಕ್ಕಳುಗಳು+ ಅವತರಿಸಿದರು=ಹುಟ್ಟಿದರು, ದೀಪ್ತಜ್ವಲನತೇಜನರು= ಅಗ್ನಿಯಂತೆ ತೇಜಸ್ಸುಳ್ಳವರು, ಕಲ್ಪಭೂಜರು= ಕಲ್ಪವೃಕ್ಷದಂತಿರುವವರು, ಹಿಮಕರಾನ್ವಯಕೆ= ಚಂದ್ರವಂಶಕ್ಕೆ, ಲಲಿತ ಮಂಗಳ ಜಾತಕರ್ಮ ಆವಳಿಯ= ಅವರಿಗೆ ಚಂದದಲ್ಲಿ ಜಾತಕರ್ಮ,ನಾಮಕರಣ ಮೊದಲಾದ ಸಂಸ್ಕಾರಗಳನ್ನು ಮಾಡಿದರು. ಚಿತ್ರಾಂಗದನನು ಆ ನೃಪತಿಲಕ ನೆಗಳೆ= ಕೀರ್ತಿಶಾಲಿಗಳಾಗುವಂತೆ, ವಿಚಿತ್ರವೀರ್ಯನ ನಾಮಕರಣದಲಿ.
ಪದ್ಯ-೧:ಅರ್ಥ:ಬಳಿಕ ಯೋಜನಗಂಧಿಯಲ್ಲಿ ಎರಡು ಮಕ್ಕಳು ಹುಟ್ಟಿದರು. ಅವರು ಚಂದ್ರವಂಶಕ್ಕೆ ಅಗ್ನಿಯಂತೆ ತೇಜಸ್ಸುಳ್ಳವರು, ಕಲ್ಪವೃಕ್ಷದಂತಿರುವವರು. ಅವರಿಗೆ ಚಂದದಲ್ಲಿ ಜಾತಕರ್ಮ,ನಾಮಕರಣ ಮೊದಲಾದ ಸಂಸ್ಕಾರಗಳನ್ನು ಮಾಡಿದರು. ಅವರಿಗೆ ರಾಜಶ್ರೇಷ್ಠನು ಕೀರ್ತಿಶಾಲಿಗಳಾಗುವಂತೆ ಚಿತ್ರಾಂಗದ, ವಿಚಿತ್ರವೀರ್ಯ ಎಂದು ನಾಮಕರಣ ಮಾಡಿದನು.
ಇರಲಿರಲು ಶಂತನು ಮಹೀಪತಿ
ಸುರರೊಳಗೆ ಸೇರಿದನು ಬಳಿಕೀ
ಧರಣಿಯೊಡೆತನವಾಯ್ತು ಚಿತ್ರಾಂಗದ ಕುಮಾರಂಗೆ ||
ಅರಸ ಕೇಳೈ ಕೆಲವು ಕಾಲಾಂ
ತರದಲಾತನು ಕಾದಿ ಗಂಧ
ರ್ವರಲಿ ಮಡಿದನು ಪಟ್ಟವಾಯ್ತು ವಿಚಿತ್ರವೀರ್ಯಂಗೆ || ೩೧ ||
ಪದ್ಯ-೧:ಪದವಿಭಾಗ-ಅರ್ಥ:ಇರಲು ಇರಲು= ಕೆಲವುಕಾಲಾನಂತರ ಶಂತನು ಮಹೀಪತಿ ಸುರರೊಳಗೆ=ದೇವತೆಗಳ ಜೊತೆಗೆ, ಸೇರಿದನು= ಶಂತನು ರಾಜನು ಸ್ವರ್ಗಸ್ಥನಾದನು. ಬಳಿಕ+ ಈ ಧರಣಿಯೊಡೆತನವಾಯ್ತು= ರಾಜಪಟ್ಟವು ಅಯಿತು, ಚಿತ್ರಾಂಗದ ಕುಮಾರಂಗೆ, ಅರಸ ಕೇಳೈ ಕೆಲವು ಕಾಲಾಂತರದಲಿ= ವರ್ಷಗಳ ನಂತರ, ಆತನು ಕಾದಿ= ಯುದ್ಧಮಾಡಿ, ಗಂಧರ್ವರಲಿ ಮಡಿದನು= ಗಂಧರ್ವರೊಡನೆ. ಮರಣಹೊಂದಿದನು. ಪಟ್ಟವಾಯ್ತು ವಿಚಿತ್ರವೀರ್ಯಂಗೆ= ನಂತರ ವಿಚಿತ್ರವೀರ್ಯನಿಗೆ ರಾಜನಾಗಿ ಪಟ್ಟಕಟ್ಟಿದರು.
ಪದ್ಯ-೧:ಅರ್ಥ: ಕೆಲವುಕಾಲಾನಂತರ ಶಂತನುರಾಜನು ಸ್ವರ್ಗಸ್ಥನಾದನು. ಚಿತ್ರಾಂಗದ ಕುಮಾರನಿಗೆ ರಾಜಪಟ್ಟವನ್ನು ಕಟ್ಟಿದರು. ಜನಮೇಜಯ ಅರಸನೇ ಕೇಳು, ಕೆಲವು ವರ್ಷಗಳ ನಂತರ, ಆತನು ಗಂಧರ್ವರೊಡನೆ ಯುದ್ಧಮಾಡಿ ಮರಣಹೊಂದಿದನು. ನಂತರ ವಿಚಿತ್ರವೀರ್ಯನಿಗೆ ರಾಜನಾಗಿ ಪಟ್ಟಕಟ್ಟಿದರು.
ರಾಯ ಕೇಳೈ ಸಕಲ ರಾಜ್ಯ
ಶ್ರೀಯನಾತಂಗಿತ್ತು ಭೀಷ್ಮನು
ತಾಯ ಚಿತ್ತವ ಪಡೆದು ಮೆಚ್ಚಿಸಿದನು ಜಗತ್ರಯವ ||
ರಾಯ ಕುವರನ ಮದುವೆಗಬ್ಜದ
ಳಾಯತಾಕ್ಷಿಯರನು ವಿಚಾರಿಸಿ
ಹಾಯಿದನು ದಳದುಳದೊಳೊಂದು ವಿವಾಹ ಮಂಟಪಕೆ || ೩೨ ||
ಪದ್ಯ-೧:ಪದವಿಭಾಗ-ಅರ್ಥ:ರಾಯ ಕೇಳೈ= ಜನಮೇಜಯ ಅರಸನೇ ಕೇಳು, ಸಕಲ ರಾಜ್ಯಶ್ರೀಯನು ಆತಂಗೆ ಇತ್ತು= ರಾಜ್ಯವನ್ನೂ ಅತನಿಗೆ ಭೀಷ್ಮನು ಕೊಟ್ಟು, ತಾಯ ಚಿತ್ತವ= ಮನಸ್ಸನ್ನು, ಪಡೆದು ಮೆಚ್ಚಿಸಿದನು ಜಗತ್ರಯವ= ತಾಯಿಯ ಮನಸ್ಸನ್ನೂ ಮೂರುಜಗತ್ತನ್ನೂ ಮೆಚ್ಚಿಸಿದನು. ರಾಯ ಕುವರನ ಮದುವೆಗೆ ಅಬ್ಜದಳಾಯತಾಕ್ಷಿಯರನು= ಕನ್ಯೆಯರನ್ನು, ವಿಚಾರಿಸಿ= ಹುಡುಕಿ, ರಾಜಕುಮಾರ ವಿಚಿತ್ರವೀರ್ಯನಿಗೆ ಮದುವೆ ಮಾಡಲು ಕನ್ಯೆಯರನ್ನು ವಿಚಾರಿಸಿ ಹುಡುಕಿ, ಕೊನೆಗೆ, ಹಾಯಿದನು= ವೇಗವಾಗಿ ಹೋದನು, ದಳದುಳದೊಳು= ಧಾಳಿ ಮಾಡುವ ಸೈನ್ಯ,- ದಳ= ಸೈನ್ಯ ಸಮೇತ. ಉತ್ಸಾಹದಿಂದ. ಒಂದು ವಿವಾಹ ಮಂಟಪಕೆ.
  • ದಳದುಳ: ಲೂಟಿ ಮಾಡುವ ಸೈನ್ಯ,- ದಳ. 4. ಉತ್ಸಾಹ.(ಕನ್ನಡ ಸಾಹಿತ್ಯ ಪರಿಷತ್ ನಿಘಂಟು)
ಪದ್ಯ-೧:ಅರ್ಥ: ಜನಮೇಜಯ ಅರಸನೇ ಕೇಳು, ಸಕಲ ರಾಜ್ಯವನ್ನೂ ಅತನಿಗೆ ಭೀಷ್ಮನು ಕೊಟ್ಟು, ತಾಯಿಯ ಮನಸ್ಸನ್ನೂ ಮೂರುಜಗತ್ತನ್ನೂ ಮೆಚ್ಚಿಸಿದನು. ರಾಜಕುಮಾರ ವಿಚಿತ್ರವೀರ್ಯನಿಗೆ ಮದುವೆ ಮಾಡಲು ಕನ್ಯೆಯರನ್ನು ವಿಚಾರಿಸಿ ಹುಡುಕಿ, ಕೊನೆಗೆ, ಸೈನ್ಯ ಸಮೇತ ಒಂದು ವಿವಾಹ ಮಂಟಪಕ್ಕೆ ವೇಗವಾಗಿ ಹೋದನು,
ಅಲ್ಲಿ ನೆರೆದಾ ಕ್ಷತ್ರವರ್ಗವ
ಚೆಲ್ಲಬಡಿದು ವಿವಾಹ ಶಾಲೆಯ
ಚೆಲ್ಲೆಗಂಗಳ ಕಮಲಮುಖಿಯರ ಮೂವರನು ಪಿಡಿದು ||
ಘಲ್ಲಣೆಯ ಖಂಡೆಯದ ಚೌಪಟ
ಮಲ್ಲ ಭೀಷ್ಮನು ಪುರಕೆ ತಂದವ
ರೆಲ್ಲರನು ತಮ್ಮಂಗೆ ಮದುವೆಯ ಮಾಡಲನುವಾದ || ೩೩ ||
ಪದ್ಯ-೧:ಪದವಿಭಾಗ-ಅರ್ಥ:ಅಲ್ಲಿ ನೆರೆದ= ಸೇರಿದ ಆ ಕ್ಷತ್ರವರ್ಗವ ಚೆಲ್ಲಬಡಿದು= ಕ್ಷತ್ರಿಯರನ್ನು ಸೋಲಿಸಿ, ವಿವಾಹ ಶಾಲೆಯ ಚೆಲ್ಲೆಗಂಗಳ= ಚಂಚಲಕಣ್ಣಿನ ಕಮಲಮುಖಿಯರ= ಸುಂದರಿಯರನ್ನು ಮೂವರನು ಪಿಡಿದು= ಹಿಡಿದು, ಘಲ್ಲಣೆಯ=ಆರ್ಭಟದ ಖಂಡೆಯದ= ಖಡ್ಗಹಿಡಿದ ಚೌಪಟಮಲ್ಲ= ವೀರನಾದ ಭೀಷ್ಮನು ಪುರಕೆ= ಹಸ್ತಿನಾವತಿ ನಗರಕ್ಕೆ ತಂದು+ ಅವರೆಲ್ಲರನು ತಮ್ಮಂಗೆ ಮದುವೆಯ ಮಾಡಲು+ ಅನುವಾದ= ಸಿದ್ಧನಾದನು.
ಪದ್ಯ-೧:ಅರ್ಥ:ಆ ವಿವಾಹ ಮಂಟಪದಲ್ಲಿ ಸೇರಿದ ಆ ಕ್ಷತ್ರಿಯರನ್ನು ಸೋಲಿಸಿ, ವಿವಾಹ ಶಾಲೆಯಲ್ಲಿದ್ದ ಚಂಚಲಕಣ್ಣಿನ ಮೂವರು ಸುಂದರಿಯರನ್ನು ಹಿಡಿದು, ಆರ್ಭಟದ ಖಡ್ಗಹಿಡಿದ ವೀರನಾದ ಭೀಷ್ಮನು ಹಸ್ತಿನಾವತಿ ನಗರಕ್ಕೆ ಅವರೆಲ್ಲರನ್ನೂ ತಮ್ಮನಿಗೆ ಮದುವೆಯ ಮಾಡಲು ಸಿದ್ಧನಾದನು.
ಆ ಕಮಲಲೋಚನೆಯರೊಳು ಮೊದ
ಲಾಕೆ ಭೀಷ್ಮನ ಗಂಡನೆಂದೇ
ನೂಕಿ ಭಾಷೆಯ ಮಾಡಿ ನಿಂದಳು ಛಲದ ಬಿಗುಹಿನಲಿ ||
ಆಕೆ ಮಾಣಲಿ ಮಿಕ್ಕವರು ಬರ
ಲೀ ಕುಮಾರಂಗೆಂದು ವೈದಿಕ
ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ || ೩೪ ||
ಪದ್ಯ-೧:ಪದವಿಭಾಗ-ಅರ್ಥ:ಆ ಕಮಲಲೋಚನೆಯರೊಳು ಮೊದಲಾಕೆ= ಆ ಸುಂದರಯರಲ್ಲಿ ಹಿರಿಯವಳು, ಭೀಷ್ಮನ ಗಂಡನೆಂದೇ ನೂಕಿ ಭಾಷೆಯ ಮಾಡಿ ನಿಂದಳು= ಭೀಷ್ಮನು ಗೆದ್ದುದರಿಂದ ಅವನೇ ಗಂಡನಾಗಬೇಕೆಂದು ಛಲದ= ಛಲದಿಂದ ಬಿಗುಹಿನಲಿ= ಹಟಹಿಡಿದಳು. ಆಕೆ ಮಾಣಲಿ= ಅವಳು ಮದುವೆಗೆ ವಿರೋಧಿಸಲಿ, ಮಿಕ್ಕವರು ಬರಲಿ+ ಈ ಕುಮಾರಂಗೆಂದು ವೈದಿಕ ಲೌಕಿಕ ಉತ್ಸವದಿಂದ= ವಿಜೃಂಭಣೆಯಿಂದ ಮದುವೆಯ ಮಾಡಿದನು ಭೀಷ್ಮ
ಪದ್ಯ-೧:ಅರ್ಥ:ಆ ಸುಂದರಯರಲ್ಲಿ ಹಿರಿಯವಳು, ಭೀಷ್ಮನು ಗೆದ್ದುದರಿಂದ ಅವನೇ ಗಂಡನಾಗಬೇಕೆಂದು ಹಟಹಿಡಿದಳು. ಅವಳು ಮದುವೆಗೆ ವಿರೋಧಿಸಲಿ, ಉಳಿದ ಇಬ್ಬರು ಈ ಕುಮಾರನಿಗೆ ವವಾಹವಾಗಲಿ ಎಂದು, ವೈದಿಕ ಮತ್ತು ಲೌಕಿಕವಾಗಿ ವಿಜೃಂಭಣೆಯಿಂದ ಭೀಷ್ಮನ ವಿಚಿತ್ರವೀರ್ಯನಿಗೆ ಮದುವೆಯನ್ನು ಮಾಡಿದನು

ಅಂಬೆಯ ಪ್ರತಿಜ್ಞೆ[ಸಂಪಾದಿಸಿ]

ಅರಸ ಚಿತ್ತೈಸಂಬೆಯೆಂಬಳು
ದುರುಳೆ ಭೀಷ್ಮನ ಕೂಟವಲ್ಲದೆ
ಮರಣದೆಡೆಯಲಿ ಬೆರಸಿದಲ್ಲದೆ ಪಂಥವಿಲ್ಲೆಂದು ||
ಪರಶುರಾಮನ ಭಜಿಸಿ ಹಸ್ತಿನ
ಪುರಕೆ ತಂದಳು ಹೇಳಿಸಿದಳೀ
ಸುರನದೀನಂದನನು ಮಾಡಿದ ಪರಿಯ ಕೇಳೆಂದ || ೩೫ ||
ಪದ್ಯ-೧:ಪದವಿಭಾಗ-ಅರ್ಥ:ಜನಮೇಜಯ ಅರಸ ಚಿತ್ತೈಸು(ಕೇಳು)+ ಅಂಬೆಯೆಂಬಳು ದುರುಳೆ, 'ಭೀಷ್ಮನ ಕೂಟವಲ್ಲದೆ ಮರಣದೆಡೆಯಲಿ ಬೆರಸಿದ ಅಲ್ಲದೆ ಪಂಥವಿಲ್ಲ'= ಭೀಷ್ಮನೊಡನೆ ಮದುವೆಯಾಗದಿದ್ದರೆ ಮರಣವನ್ನು ಹೊಂದುವೆ ಇದು ತನ್ನ ಶಪಥ' -'ಇಲ್ಲದಿದ್ದರೆ ಶಪಥಕ್ಕೆ ತಪ್ಪಿದಂತೆ,' ಎಂದು ಪರಶುರಾಮನ ಭಜಿಸಿ= ಪ್ರಾರ್ಥಿಸಿ, ಹಸ್ತಿನಪುರಕೆ ತಂದಳು= ಹಸ್ತಿನಾಪುರಕ್ಕೆ ಕರೆದುಕೊಂಡುಬಂದಳು, ಹೇಳಿಸಿದಳು= ಅವನಿಂದ ತನ್ನನ್ನು ವಿವಾಹವಾಗುಲು ಭೀಷ್ಮನಿಗೆ ಪರಷುರಾಮನಿಂದ ಹೇಳಿಸಿದಳು. ಈ ಸುರನದೀ-ನಂದನನು= ಭೀಷ್ಮನು ಮಾಡಿದ ಪರಿಯ= ಮಾಡಿದ ರೀತಿಯನ್ನು, ಕೇಳೆಂದ
ಪದ್ಯ-೧:ಅರ್ಥ:ಜನಮೇಜಯ ಅರಸ ಕೇಳು, ಅಂಬೆಯೆಂಬಳು ದುಷ್ಟೆ, ಭೀಷ್ಮನೊಡನೆ ಮದುವೆಯಾಗದಿದ್ದರೆ ಮರಣವನ್ನು ಹೊಂದುವೆ, ಇದು ತನ್ನ ಶಪಥ' -'ಇಲ್ಲದಿದ್ದರೆ ಶಪಥಕ್ಕೆ ತಪ್ಪಿದಂತೆ,' ಎಂದು ಭೀಷ್ಮನ ಗುರುವಾದ ಪರಶುರಾಮನನ್ನು ಪ್ರಾರ್ಥಿಸಿ, ಹಸ್ತಿನಾಪುರಕ್ಕೆ ಕರೆದುಕೊಂಡುಬಂದಳು, ಅವನಿಂದ ತನ್ನನ್ನು ವಿವಾಹವಾಗುಲು ಭೀಷ್ಮನಿಗೆ ಪರಷುರಾಮನಿಂದ ಹೇಳಿಸಿದಳು. ಈ ಭೀಷ್ಮನು ಮಾಡಿದ ರೀತಿಯನ್ನು, ಕೇಳು ಎಂದರು ವೈಶಂಪಅಯನರು.
ಸತಿಯನೊಲ್ಲೆನು ಬ್ರಹ್ಮಚರ್ಯ
ಸ್ಥಿತಿಗೆ ತಪ್ಪುವನಲ್ಲ ನೀವನು
ಚಿತವ ನೆನೆದರೆ ನಡೆಯಿ ಕೊಟ್ಟೆನು ಕಾಳಗವ ನಿಮಗೆ ||
ವ್ರತದನಿಧಿ ಕುರುಭೂಮಿಯಲಿ ಶರ
ತತಿಯಲಿಪ್ಪತ್ತೊಂದು ದಿನ ಭೃಗು
ಸುತನೊಡೆನೆ ಕಾದಿದನು ವಿರಥನ ಮಾಡಿದನು ಭೀಷ್ಮ || ೩೬ ||
ಪದ್ಯ-೧:ಪದವಿಭಾಗ-ಅರ್ಥ:ಸತಿಯನು+ ಒಲ್ಲೆನು = ಅಂಬೆಯನ್ನು ಪತ್ನಿಯಾಗಿ/ ಸತಿಯಾಗಿ ಸ್ವೀಕರಿಸಲಾರೆನು. ಬ್ರಹ್ಮಚರ್ಯ ಸ್ಥಿತಿಗೆ= ವೃತಕ್ಕೆ, ತಪ್ಪುವನಲ್ಲ; ನೀವು+ ಅನುಚಿತವ ನೆನೆದರೆ= ನೀವು ಅದರ್ಮವಾದುದನ್ನು ಹೇಳಿದರೆ, ನಡೆಯಿ= ಅದನ್ನು ನಡೆಸುವುದಿಲ್ಲ, ಪಾಲಿಸಲು ಸಾದ್ಯವಿಲ್ಲ, ಕೊಟ್ಟೆನು ಕಾಳಗವ= ನಿಮ್ಮ ಅಪೇಕ್ಷೆಯಂತೆ ಯುದ್ಧಕ್ಕೆ ಸಿದ್ಧನಾಗಿದ್ದೇನೆ ಎಂದನು ಭೀಷ್ಮ ನಿಮಗೆ; ವ್ರತದ ನಿಧಿ ಕುರುಭೂಮಿಯಲಿ= ನಿಮಗೆ, ನಿಮ್ಮೊಡನೆ ಕುರುಕ್ಷೇತ್ರದಲ್ಲಿ ಯುದ್ಧವನ್ನು ಮಾಡವೆನು ಎಂದು ವ್ರತವನ್ನೇ ಸಂಪತ್ತಾಗಿ ಉಳ್ಳ ಭೀಷ್ಮ ಹೇಳಿದ. ಶರತತಿಯಲಿ+ ಇಪ್ಪತ್ತೊಂದು ದಿನ ಭೃಗುಸುತನೊಡೆನೆ= ಪರಷುರಾಮನೊಡನೆ ಕಾದಿದನು= ಬಿಲ್ಲು ಯುದ್ಧದಲ್ಲಿ ಇಪ್ಪತ್ತೊಂದು ದಿನ ಯುದ್ಧಮಾಡಿದನು. ವಿರಥನ ಮಾಡಿದನು ಭೀಷ್ಮ= ಪರಷುರಾಮರ ರಥವನ್ನು ನಾಶಮಾಡಿ ಅವರು ವಿರಥರಾಗಿ ಸೋಲುವಮತೆ ಮಾಡಿದನು.
ಪದ್ಯ-೧:ಅರ್ಥ:ಅಂಬೆಯನ್ನು ಪತ್ನಿಯಾಗಿ ಸ್ವೀಕರಿಸಲಾರೆನು. ಬ್ರಹ್ಮಚರ್ಯ ವೃತಕ್ಕೆ, ತಪ್ಪುವವನಲ್ಲ; ನೀವು ಅದರ್ಮವಾದುದನ್ನು ಹೇಳಿದರೆ, ಅದನ್ನು ಪಾಲಿಸಲು ಸಾದ್ಯವಿಲ್ಲ, ನಿಮ್ಮ ಅಪೇಕ್ಷೆಯಂತೆ ಯುದ್ಧಕ್ಕೆ ಸಿದ್ಧನಾಗಿದ್ದೇನೆ ಎಂದನು ಭೀಷ್ಮ. ನಿಮ್ಮೊಡನೆ ಕುರುಕ್ಷೇತ್ರದಲ್ಲಿ ಯುದ್ಧವನ್ನು ಮಾಡವೆನು ಎಂದು ವ್ರತವನ್ನೇ ಸಂಪತ್ತಾಗಿ ಉಳ್ಳ ಭೀಷ್ಮ ಹೇಳಿದ. ಪರಷುರಾಮರೊಡನೆ ಬಿಲ್ಲು ಯುದ್ಧದಲ್ಲಿ ಇಪ್ಪತ್ತೊಂದು ದಿನ ಯುದ್ಧಮಾಡಿದನು. ಪರಷುರಾಮರ ರಥವನ್ನು ನಾಶಮಾಡಿ ಅವರು ವಿರಥರಾಗಿ ಸೋಲುವಂತೆ ಮಾಡಿದನು.
ನುಡಿಯ ಭಂಗಿಸಲೆಂದು ಗುರುವವ
ಗಡಿಸಿ ಹೊಕ್ಕರೆ ಸರಳಮೊನೆಯಲಿ
ಕೊಡಹಿ ಬಿಸುಟನು ಬಿಟ್ಟುದಿಲ್ಲ ಮಹಾವ್ರತಸ್ಥಿತಿಯ ||
ನುಡಿಯ ಮೀರದ ನಮ್ಮ ಶಿಷ್ಯನ
ನೊಡಬಡಿಸಿಕೊಳ್ಳೆಂದು ನಾರಿಗೆ
ನುಡಿದು ತನ್ನಾಶ್ರಮಕೆ ಸರಿದನು ಪರಶುರಾಮಮುನಿ || ೩೭ ||
ಪದ್ಯ-೧:ಪದವಿಭಾಗ-ಅರ್ಥ:ನುಡಿಯ ಭಂಗಿಸಲೆಂದು= ತನ್ನ ಪ್ರತಿಜ್ಞೆಯನ್ನು ಬಿಡುವಂತೆ ಮಾಡಲು ಗುರುವೇ ಹೇಳಿದರೂ, ಗುರುವ+ ಅವಗಡಿಸಿ= ಗುರುವನ್ನೇ ಎದುರಿಸಿ, ಹೊಕ್ಕರೆ= ಯುದ್ಧಕ್ಕ ಬಂದು; ಸರಳಮೊನೆಯಲಿ ಕೊಡಹಿ ಬಿಸುಟನು= ಯುದ್ಧಕ್ಕ ಬಂದರೆ ಬಿಲ್ಲು ಯುದ್ಧದಲ್ಲಿ ಸೋಲಿಸಿಬಿಟ್ಟನು; ಬಿಟ್ಟುದಿಲ್ಲ ಮಹಾವ್ರತಸ್ಥಿತಿಯ= ಆದರೆ ಅವನು ತನ್ನ ಬ್ರಹ್ಮಚರ್ಯದ ಮಹಾವ್ರತಸ್ಥಿತಿಯನ್ನು ಬಿಡಲಿಲ್ಲ. ನುಡಿಯ ಮೀರದ ನಮ್ಮ ಶಿಷ್ಯನನು= ಪ್ರತಿಜ್ಞೆಗೆ ತಪ್ಪದ ತನ್ನ ಶಿಷ್ಯ ಭೀಷ್ಮನನ್ನು, ಒಡಬಡಿಸಿಕೊಳ್ಳೆಂದು= ನೀನೇ ಮದುವೆಗೆ ಒಪ್ಪಿಸಿಕೊ ಎಂದು; ನಾರಿಗೆ ನುಡಿದು= ಅಂಬೆಗೆ ಹೇಳಿ, ತನ್ನ+ ಆಶ್ರಮಕೆ ಸರಿದನು ಪರಶುರಾಮಮುನಿ = ಪರಶುರಾಮಮುನಿ ತನ್ನ ಆಶ್ರಮಕ್ಕೆ ಹೋದರು.
ಪದ್ಯ-೧:ಅರ್ಥ: ತನ್ನ ಪ್ರತಿಜ್ಞೆಯನ್ನು ಬಿಡುವಂತೆ ಮಾಡಲು ಗುರುವೇ ಹೇಳಿದರೂ, ಗುರುವನ್ನೇ ಎದುರಿಸಿ, ಯುದ್ಧಕ್ಕೆ ಬಂದು ಬಿಲ್ಲು ಯುದ್ಧದಲ್ಲಿ ಸೋಲಿಸಿಬಿಟ್ಟನು; ಆದರೆ ಅವನು ತನ್ನ ಬ್ರಹ್ಮಚರ್ಯದ ಮಹಾವ್ರತಸ್ಥಿತಿಯನ್ನು ಬಿಡಲಿಲ್ಲ. ಪ್ರತಿಜ್ಞೆಗೆ ತಪ್ಪದ ತನ್ನ ಶಿಷ್ಯ ಭೀಷ್ಮನನ್ನು, ನೀನೇ ಮದುವೆಗೆ ಒಪ್ಪಿಸಿಕೊ ಎಂದು ಅಂಬೆಗೆ ಹೇಳ, ಪರಶುರಾಮಮುನಿ ತನ್ನ ಆಶ್ರಮಕ್ಕೆ ಹೋದರು.
ಅಂಬೆ ಭೀಷ್ಮನ ಬೈದು ಕಂಬನಿ
ದುಂಬಿ ಹೋದಳು ತಪಕೆ ಬಳಿಕೀ
ಯಂಬಿಕೆಯನಂಬಾಲೆಯನು ರಮಿಸಿದನು ನೃಪಸೂನು
ಬೆಂಬಲಕೆ ಕಲಿಭೀಷ್ಮನಿರೆ ಚತು
ರಂಬುಧಿಯ ಮಧ್ಯದ ನೃಪಾಲ ಕ
ದಂಬವೀತಂಗಿದಿರೆ ಸಲಹಿದನಖಿಳ ಭೂತಳವ ೩೮
ಪದ್ಯ-೧:ಪದವಿಭಾಗ-ಅರ್ಥ:ಅಂಬೆ ಭೀಷ್ಮನ ಬೈದು= ಅಂಬೆಯು ಭೀಷ್ಮನನ್ನು ತನ್ನಜೀವನವನ್ನು ಹಾಳುಮಾಡಿದೆ ಎಂದು ನಿಂದಿಸಿ; ಕಂಬನಿದುಂಬಿ= ಕಣ್ಣಲ್ಲಿ ನೀರು ತುಂಬಿಕೊಂಡು, ಹೋದಳು ತಪಕೆ= ತಪಸ್ಸಿಗೆ ಹೋದಳು. ಬಳಿಕ+ ಈ ಅಂಬಿಕೆಯನು ಅಂಬಾಲೆಯನು ರಮಿಸಿದನು ನೃಪಸೂನು= ರಾಜಕುಮಾರ ವಿಚಿತ್ರವೀರ್ಯನು ಅಂಬಿಕೆಯನು ಅಂಬಾಲೆಯರನ್ನು ಪ್ರೀತಿಯಿಂದ ನೋಡಿಕೊಂಡನು; ಬೆಂಬಲಕೆ ಕಲಿಭೀಷ್ಮನು ಇರೆ = ಬೆಂಬಲಕ್ಕೆ ಶೂರನಾದ ಭೀಷ್ಮನು ಇರುವಾಗ, ಚತುರ ಅಂಬುಧಿಯ ಮಧ್ಯದ ನೃಪಾಲ ಕದಂಬವು (ಕದಂಬವೆಂಬ ಮರ)= ನಾಲ್ಕು ಸಮುದ್ರವು ಸುತ್ತುವರಿದ ಭೂಮಿಯ ರಾಜರೆಂಬ ಮರಗಳು, ಈತಂಗೆ ಇದಿರೆ= ಇವನಿಗೆ ಎದುರು ನಿಲ್ಲಬಲ್ಲರೇ? ಎಲ್ಲರೂ ಶರಣಾಗತರಾದರು. ರಾಜನು ಸಲಹಿದನು ಅಖಿಳ ಭೂತಳವ= ಭೂಮಂಡಲವೆಲ್ಲವನ್ನೂ ವಶಪಡಿಸಿಕೊಂಡು ರಾಜ್ಯವಾಳಿದನು
ಪದ್ಯ-೧:ಅರ್ಥ: ಅಂಬೆಯು ಭೀಷ್ಮನನ್ನು ತನ್ನಜೀವನವನ್ನು ಹಾಳುಮಾಡಿದೆ ಎಂದು ನಿಂದಿಸಿ, ಕಣ್ಣಲ್ಲಿ ನೀರು ತುಂಬಿಕೊಂಡು, ತಪಸ್ಸಿಗೆ ಹೋದಳು. ಬಳಿಕ ರಾಜಕುಮಾರ ವಿಚಿತ್ರವೀರ್ಯನು ಅಂಬಿಕೆಯನ್ನೂ ಅಂಬಾಲೆಯರನ್ನೂ ಪ್ರೀತಿಯಿಂದ ನೋಡಿಕೊಂಡನು. ಬೆಂಬಲಕ್ಕೆ ಶೂರನಾದ ಭೀಷ್ಮನು ಇರುವಾಗ, ನಾಲ್ಕು ಸಮುದ್ರವು ಸುತ್ತುವರಿದ ಭೂಮಿಯ ರಾಜರೆಂಬ ಮರಗಳು ಇವನಿಗೆ ಎದುರು ನಿಲ್ಲಬಲ್ಲರೇ? ಎಲ್ಲರೂ ಶರಣಾಗತರಾದರು. ವಿಚಿತ್ರವೀರ್ಯ ರಾಜನು ಭೂಮಂಡಲವೆಲ್ಲವನ್ನೂ ವಶಪಡಿಸಿಕೊಂಡು ರಾಜ್ಯವಾಳಿದನು.[೨] [೩] [೪] [೫]
♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

  1. *ಕುಮಾರವ್ಯಾಸ ಭಾರತ
  2. * ಕುಮಾರವ್ಯಾಸಭಾರತ-ಸಟೀಕಾ
  3. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೧)
  4. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)
  5. * ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೩)
  6. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)
  7. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)
  8. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)
  9. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭)
  10. *ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೮)
  11. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೯)
  12. *ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೧೦)

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಕುಮಾರವ್ಯಾಸಭಾರತ-ಸಟೀಕಾದ ಮೊದಲ ಪುಟದಲ್ಲಿ ತೋರಿಸಿದಂತೆ
  2. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  3. ಕನ್ನಡದ ಪದಗಳಿಗೆ ಅರ್ಥ - ಸಾಹಿತ್ಯ ಪರಿಷತ್ ನಿಘಂಟು,
  4. ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು
  5. ದಾಸ ಸಾಹಿತ್ಯ ನಿಘಂಟು