ಆದಿಪರ್ವ: ೧೫. ಹದಿನೈದನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಆದಿಪರ್ವ – ಹದಿನೈದನೆಯ ಸಂಧಿ[ಸಂಪಾದಿಸಿ]

ಸೂ. ರಾಯಸಭೆ ನಗಲೈದಿ ಯಂತ್ರದ
ದಾಯವನು ನೆರೆಗೆಲಿದು ನಿರ್ಜರ
ರಾಯನಂದನ ಕಾದಿ ಗೆಲಿದನು ಸಕಲ ರಿಪು ನೃಪರ

~~ಓಂ~~

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಚಾಲಿಯ ಮನೋರಥ
ಶಾಲೆಯಲಿ ಸಾರಿದರಲೈ ಸಭೆಯಲಿ ಮಹೀಸುರರ
ಏಳಿ ಭುಜಬಲವುಳ್ಳವರು ವಿ
ಪ್ರಾಳಿಯಲಿ ಬಿಲುವಿಡಿದು ಯಂತ್ರದ
ಕೋಲುಗಳ ಕೇವಣಿಪುದೆಂದರು ಹೊಯ್ದು ಡಂಗುರವ ೧

ಬೆರಸುವರು ಪಾರ್ಥಿವರು ಪಾರ್ಥಿವ
ವರರೊಡನೆ ತದಲಾಭ ಪಕ್ಷಾಂ
ತರಕೆ ಪಾರ್ಥಿವ ಸುತೆಯನೀವುದು ವಿಪ್ರಜಾತಿಯಲಿ
ಪುರುಷರನುಲೋಮದಲಿ ಕನ್ಯಾ
ವರಣವಹುದು ವಿಲೋಮದಲಿ ವಿ
ಸ್ತರಿಸಲೇಕಿದ ನೀವು ಬಲ್ಲಿರಿ ಶಾಸ್ತ್ರನಿರ್ಣಯವ ೨

ಎಂದು ಸಾರಿದ ದನಿಯನಾ ದ್ವಿಜ
ವೃಂದವಾಲಿಸಿ ನಮಗಿದೇಕರ
ವಿಂದವದನೆಯ ತೊಡಕು ತೆಗೆ ನಾವಾರು ಧನುವಾರು
ಬಂದ ದಕ್ಷಿಣೆ ಮೃಷ್ಟಭೋಜನ
ದಿಂದ ತುಷ್ಟರು ನಾವು ನಮಗಿದ
ರಿಂದ ಬಹದುಷ್ಕೀರ್ತಿ ಬರಲೆಂದುದು ಬುಧವ್ರಾತ ೩

ವಚನ ಶೂರರು ನಾವು ಪಾರ್ಥಿವ
ನಿಚಯವೇ ಭುಜ ಶೂರರನಿಬರ
ನಚಲ ಧನು ಭಂಗಿಸಿತು ನಮಗೀ ವಿದ್ಯೆ ವೈದಿಕವೆ
ಉಚಿತವಲ್ಲಿದು ನಮ್ಮ ಸಾಹಸ
ರಚನೆಯನು ನೋಡುವರೆ ಪಂಡಿತ
ನಿಚಯವಿದಿರಲಿ ನಿಲಲಿ ತೋರುವೆವಲ್ಲಿ ವಿಸ್ಮಯವ ೪

ಸಾಂಗ ವೇದ ಪದಕ್ರಮದ ಸ
ರ್ವಾಂಗ ವಿಷಯದಲಖಿಳ ಪೌರಾ
ಣಂಗಳಲಿ ಮೀಮಾಂಸೆಯೊಳ್ ಸ್ಮೃತಿ ತರ್ಕ ಶಾಸ್ತ್ರದಲಿ
ಭಂಗಿಸುವೆವೀ ದ್ರೌಪದಿಯನಾ
ವಂಗದಲಿ ವಾತ್ಸ್ಯಾಯನಾದಿಯು
ಪಾಂಗ ವಿದ್ಯೆದಲೆಮ್ಮ ನೋಡೆಂದುದು ಬುಧಸ್ತೋಮ ೫

ಭರತದಲಿ ವೈದ್ಯದಲಿ ಕಾವ್ಯ ಸು
ವಿರಚಿತಾಲಂಕಾರದಲಿ ಗಜ
ತುರಗ ಲಕ್ಷಣದಲಿ ಸಮಾಹಿತ ಮಂತ್ರತಂತ್ರದಲಿ
ಸರಸ ಕವಿತಾರಚನೆಯಲಿ ವಿ
ಸ್ತರದುಪನ್ಯಾಸದಲಿ ಭೂಪತಿ
ಕರೆಸಿ ನೋಡಲಿ ನಮ್ಮ ನೆಂದರು ದ್ವಿಜರು ತಮತಮಗೆ ೬

ಅಲ್ಲದಿರ್ದರೆ ಶೋಧಿಸಿದ ತನಿ
ಬೆಲ್ಲವಿಕ್ಕಿದ ಹೂರಿಗೆಯ ಮೆದೆ
ಯಲ್ಲಿ ಪರಡಿಯ ಶಾವಿಗೆಯ ಪರಿಪರಿಯ ಪಾಯಸದ
ಪುಲ್ಲಿಗೆಯ ತತ್ಸವಿಯ ಮಂಡಿಗೆ
ಯಲ್ಲಿ ನವ ಘೃತ ಸೂಪದಂತಕ
ದಲ್ಲಿ ನೋಡಲಿ ನಮ್ಮನೆಂದುದು ಧೂರ್ತ ವಟುನಿಕರ ೭

ರಸದ ಹೊರಲೇಪದಲಿ ಹುದುಗಿದ
ಮಿಸುನಿಯಮತಿರೆ ಜೀವಭಾವ
ಪ್ರಸರದೊಳಗವಲಂಬಿಸಿದ ಪರಮಾತ್ಮನಂದದಲಿ
ಎಸೆವ ವಿಪ್ರಾಕಾರದಲಿ ರಂ
ಜಿಸುವ ಭೂಪತಿ ತತ್ಸಭಾಸ
ದ್ವಿಸರ ಮಧ್ಯದೊಳಿರ್ದು ಕೇಳಿದನೀ ಮಹಾಧ್ವನಿಯ ೮

ನೋಡಿದನು ತಮ್ಮನನು ಸನ್ನೆಯ
ಮಾಡಿದಡೆ ಕೈಕೊಂಡನವನಿಪ
ಗೂಡಿ ಕುಂತಿಗೆ ಭೀಮಸೇನಂಗೆರಗಿ ಮನದೊಳಗೆ
ಕೂಡೆ ಕುಳ್ಳಿರ್ದಖಿಳ ವಿಪ್ರರ
ನೋಡಿ ಮೆಲ್ಲನೆ ಧೋತ್ರ ದರ್ಭೆಯ
ಗೂಡ ಸಂವರಿಸುತ್ತ ಸಭೆಯಿಂದೆದ್ದ ನಾಪಾರ್ಥ ೯

ಏನು ಸಿದ್ಧಿಯುಪಾಧ್ಯರೆದ್ದಿರಿ
ದೇನು ಧನುವಿಂಗಲ್ಲಲೇ ತಾ
ನೇನು ಮನದಂಘವಣೆ ಬಯಸಿದಿರೇ ನಿತಂಬಿನಿಯ
ವೈನತೇಯನ ವಿಗಡಿಸಿದ ವಿಷ
ವೇನು ಸದರವೊ ಹಾವಡಿಗರಿಗಿ
ದೇನು ನಿಮ್ಮುತ್ಸಾಹವೆಂದುದು ಧೂರ್ತ ವಟುನಿಕರ ೧೦

ಮದುವೆ ಬೇಕೇ ಶ್ರೋತ್ರಿಯ ಸ್ತೋ
ಮದಲಿ ಕನ್ಯಾರ್ಥಿಗಳು ನಾವೆಂ
ಬುದು ನಿಜಾನ್ವಯ ವಿದ್ಯೆಯಲಿ ಕೊಡುವುದು ಪರೀಕ್ಷೆಗಳ
ಮದುವೆಯಹುದಿದು ಸೌಖ್ಯಪುಣ್ಯ
ಪ್ರದವು ಭೂದೇವರಿಗೆ ನೀ ನೆನೆ
ದುದು ಭಗೀರಥಯತ್ನವೆಂದುದು ಭೂಸುರವ್ರಾತ ೧೧

ನೀವು ಸೈರಿಸಿ ನಿಮ್ಮ ಕಾರು
ಣ್ಯಾವಲೋಕನವುಂಟಲೇ ಸ
ದ್ಭಾವದಲಿ ನೀವ್ ರಚಿಸಿದಾಶೀರ್ವಾದ ಶಕ್ತಿಯಲಿ
ನಾವು ವಿಜಯರು ಚಾಪಯಂತ್ರವಿ
ದಾವ ಘನವೆಂದರ್ಜುನನ ಸಂ
ಭಾವನೋಕ್ತಿಗೆ ನಿಲ್ಲದವರೊದರಿದರು ತಮತಮಗೆ ೧೨

ಕ್ರಮಿತರವಧರಿಸಿದಿರೆ ಶುದ್ಧ
ಭ್ರಮಿತ ಮೂಲನ ಹಿರಿಯ ವಿಷ್ಣು
ಕ್ರಮಿತರೇ ದೀಕ್ಷಿತರೆ ಧನುವಿಗೆ ಯತ್ನ ಮಾಡಿದಿರೆ
ಕ್ರಮವೆ ತಾನಿದು ಕ್ಷತ್ರಿಯರನಾ
ಕ್ರಮಿಸುವುದು ಸದ್ಧರ್ಮವೇ ಉ
ದ್ಭ್ರಮಿತನಿವ ನೆರೆ ಹಳಿವ ತಹನೀ ಶ್ರೋತ್ರಿಯರ ಸಭೆಗೆ ೧೩

ಕೆಲರು ಹೊಗದಿರೆಂದು ಜರೆದರು
ಕೆಲರು ತಾನೇ ಬಲ್ಲನೆಂದರು
ಕೆಲರು ನುಡಿದರು ವಿಪ್ರಸಭೆಗಪಹಾಸ್ಯವಹುದೆಂದು
ಕೆಲರು ತಪ್ಪೇನೆಂದು ಕಳೆದರು
ಕೆಲರು ಭದ್ರಾಕಾರನೀತಂ ೧೪

ಗಳುಕುವುದು ಧನು ಭಾಗ್ಯಮುಖನೆಂದುದು ಬುಧಸ್ತೋಮ
ತೊಟ್ಟ ಹೊಸ ಯಜ್ಞೋಪವೀತದ
ಮಟ್ಟಿ ನೊಸಲಲಿ ಕುಶೆಯ ಕರಡಿಗೆ
ಕಟ್ಟಿಯಿರುಕಿದ ಕಕ್ಷೆ ಬೆರಳಲಿ ಮುರಿದ ದರ್ಭೆಗಳ
ಉಟ್ಟ ಬಾಸರ ಬಳಲುಗಚ್ಚೆಯ
ನಟ್ಟಹಾಸದ ಜನದ ನಗೆಗಳ
ನಟ್ಟವಿಗನೋಸರಿಸಿ ಸಭೆಯಲಿ ಮೆಲ್ಲನೈತಂದ ೧೫

ತಿರುಗಿ ಕಂಡರು ಸಕಲ ಪೃಥ್ವೀ
ಶ್ವರರು ಗಹಗಹಿಸಿದರಿದೇನರೆ
ಮರುಳೊ ಜಡನೋ ವಿಪ್ರವೇಷಚ್ಛನ್ನ ಸುರಪತಿಯೊ
ಮರುಳುಗಳು ತಾವಕಟ ಮದನನ
ಸರಳ ಮರುಮೊನೆಗಾವನಂತಃ
ಕರಣ ನೆರೆ ಕಳವಳಿಸದೆಂದರು ನೆರೆದ ಸಭೆಯೊಳಗೆ ೧೬

ಧನು ತನಗೆ ನೆಗಹಲ್ಕೆ ಕೃಷ್ಣಾ
ಜಿನವೊ ಸಾಲಗ್ರಾಮದೇವರೊ (ಹೊರೆಯೊ
ವಿನುತ ತುಳಸಿಯೊ ಕುಶವೊ ದರ್ಭೆಯೊ ಸಮಿಧೆಗಳ
ನೆನೆದ ತಿಲವೋ ಮೇಣಿದೌಪಾ
ಸನದ ಕೊಳವಿಯೊ ಬಣಗು ವಿಪ್ರನ
ನೆನಹ ನೋಡಿರೆ ಘನವಲಾ ದ್ರೌಪದಿಯ ಸೌಭಾಗ್ಯ ೧೭

ಅಂಗವಿದು ಗಜ ತುರಗ ಶಸ್ತ್ರಾ
ಸ್ತ್ರಂಗಳರಿತವು ನಮಗೆ ವಿಪ್ರಂ
ಗಂಗ ವೇದಪುರಾಣ ತರ್ಕಸ್ಮೃತಿ ಸುವಿದ್ಯೆಗಳು
ಅಂಗವಂಗಿಗಸಾಧ್ಯವಾದುದ
ನಂಗಿಗೊಡಬಡುವುದೆ ದ್ವಿಜಾತಿಗೆ
ಸಂಗತಾನುಷ್ಠಾನಪರವೆಂದುದು ನೃಪಸ್ತೋಮ ೧೮

ಲಹರಿ ಮಸಗಿದುದತ್ತ ಕಾಂತಾ
ಬಹಳ ಪಾರಾವಾರ ಹುಬ್ಬಿನ
ವಿಹೃತಿಗಳ ತೆರೆಮಾಲೆಗಳ ಬೆಳುನಗೆಯ ಬುದಬುದದ
ಗಹಗಹಿಕೆ ಮಿಗೆ ಅಟ್ಟಹಾಸದ
ರಹಣಿಗಳ ರಭಸದ ವಿಡಂಬದ
ವಿಹರಣದಚಲ ದೃಷ್ಟಿಗಳ ಮರಿಮೀನ ಹೊಳಹುಗಳ ೧೯

ಇತ್ತ ನೋಡೌ ತಾಯೆ ಹಾರುವ
ರತ್ತ ಗಡ್ಡ ದುಪಾಧ್ಯರನು ತಾ
ವೆತ್ತುವರು ಗಡ ಧನುವನೆಸುವರು ಗಡ ತಿಮಿಂಗಿಲನ
ಹೊತ್ತುಗಳೆವರೆ ಲೇಸು ಬಳಿಕಿ
ನ್ನುತ್ತಮರಲಾ ವಿಪ್ರರೆನೆ ತಲೆ
ಗುತ್ತಿ ನಾಚಿದಳುಂಗುಟದೊಳೌಕುತ ಮಹೀತಳವ ೨೦

ಎಲವೊ ಮಟ್ಟಿಯ ಮದನ ದರ್ಭೆಯ
ತಿಲದ ಮನ್ಮಥ ವಿಮಲ ಧೋತ್ರದ
ತಳಿರುಗಾಸೆಯ ಕಾಮ ಕೃಷ್ಣಾಜಿನದ ಕಂದರ್ಪ
ನಳಿನಮುಖಿಯನು ವರಿಸು ಬಾ ನಿನ
ಗಳವಡುವನೆಲೆಯಕ್ಕ ಕೇಳೌ
ತಲೆವಿಡಿವೆವಾವ್ನೋಡುಯೆಂದರು ನಗುತ ಚಪಲೆಯರು ೨೧

ಅದೆ ಹಲಾಯುಧ ನೋಡು ವಿಪ್ರೌ
ಘದಲಿ ಪಾರ್ಥನ ಬರವು ಮೇಘದ
ಹೊದರುಗಳ ಹರಿದಶ್ವನಂತಿರೆ ವಿಪ್ರವೇಷದಲಿ
ವಿದಿತವೇ ವಸುದೇವನಾಟಂ
ದುದಕೆ ತಪ್ಪದಲೈ ಸಭಾ ಮ
ಧ್ಯದಲಿ ಬರುತಿರ್ಪಾತನರ್ಜುನನೆಂದನಸುರಾರಿ ೨೨

ಜನಪನೋ ಭೀಮಾದಿಗಳೊ ತ
ಜ್ಜನನಿಯೋ ತಾವೆಲ್ಲ ಭೂಸುರ
ಜನದ ಸಾಮೀಪ್ಯದಲಿ ಸಭೆಯೊಳಗಿರ್ದರೆನೆ ಕೇಳ್ದು
ನಿನಗಿದೆಂತವರರಿತವರಗಿನ
ಮನೆಗೆ ತಪ್ಪಿದರೆಂತು ಶಿವ ನೀ
ನೆನಿತು ಮಾಯಾಸಿದ್ಧನೆಂದನು ನಗುತ ಬಲರಾಮ ೨೩

ಅವನಿಪತಿ ಕೇಳಿತ್ತಲೀ ಪಾ
ರ್ಥಿವರ ಪರಿಹಾಸವನು ಕಾಂತಾ
ನಿವಹದಲಿ ನಿಬ್ಬರದ ನುಡಿಗಳನಾ ಮಹೀಸುರಠ
ವಿವಿಧ ಕಟುಮಧುರೋಕ್ತಿ ವಿನ್ಯಾ
ಸವನು ಕೇಳುತ ಮುಗುಳು ನಗೆಯಲಿ
ನವ ಮದ ದ್ವಿಪ ಗತಿಯ ಗರುವಾಯಿಯಲಿ ನಡೆತಂದ ೨೪

ಇವನ ಗತಿ ಮುಖಚೇಷ್ಟೆ ಭಾವೋ
ತ್ಸವ ವಿಲಾಸವುಪೇಕ್ಷೆ ಭರವಂ
ಘವಣೆ ಗರುವಿಕೆ ಗಮಕ ಭಾವವಭೀತಿ ಭುಲ್ಲವಣೆ
ಇವನ ವಿಮಲಕ್ಷತ್ರ ವಿಕ್ರಮ
ವಿವನ ಕೊಂಡಯತನವಿವೇ ಸಾ
ಕಿವನು ಘಾಟದ ವೀರನೆಂದರು ವೀರರರ್ಜುನನ ೨೫

ಬರುತ ಭೀಷ್ಮ ದ್ರೋಣ ಕೃಪರಿಂ
ಗೆರಗಿದನು ಮನದೊಳಗೆ ಯಾದವ
ರರಸ ಹಂತಿಯ ಹರಿಯನಭಿವಂದಿಸಿದನಕ್ಷಿಯಲಿ
ಸುರಪತಿಗೆ ಗುಹ ಗಣಪ ದಿಕ್ಪಾ
ಲರಿಗೆ ರುದ್ರಾದಿತ್ಯ ವಸು ಮು
ಖ್ಯರಿಗೆ ಮಣಿದನು ಬಂದನಗ್ಗದ ಚಾಪವಿದ್ದೆಡೆಗೆ ೨೬

ಮೊದಲಲಂಬುಜಭವನನಾ ಮ
ಧ್ಯದಲಿ ಮಧುಸೂದನನನಾ ಬಿಲು
ದುದಿಯಲಾಹ್ವಾನಿಸಿದನಗ್ಗದ ನೀಲಲೋಹಿತನ
ಇದು ಮಹಾಭೂಮಿಪರ ಬಿಂಕವ
ನೊದೆದ ಧನುವೇ ಪೂತುರೆನುತೆ
ತ್ತಿದನು ಬಾಗೊತ್ತಿದನು ಕೊರಳಿಗೆ ತೊಡಿಸಿದನು ತಿರುವ ೨೭

ಹೊಯ್ದ ತಿರುವನು ಸೆಳೆದು ಕಿವಿವರೆ
ಗೊಯ್ದನಿದು ಹದವಿಲ್ಲಲಾ ಬಿಲು
ಹೊಯ್ದುದಕಟಾ ಬರಿದೆ ಹೆದರಿತು ಮಾಗಧಾದಿಗಳು
ಕೈದೆಗೆದರಿದರೊಳಗೆ ಹೆಸರೆನ
ಗೈದಬೇಕೆಂದೈಸಲೇಯೆನು
ತೈದು ಬಾಣವ ಕೊಂಡು ಯಂತ್ರದ ಹೊಳಹನೀಕ್ಷಿಸಿದ ೨೮

ತೂಗಿ ಕಿವಿವರೆಗುಗಿದು ಯಂತ್ರವ
ತಾಗಿಸಿದನಂಬಿನಲಿ ಪಾರ್ಥನ
ಲಾಗು ವೇಗವನಾರು ಬಲ್ಲರು ಯಂತ್ರಭೇದದಲಿ
ಜಾಗು ಧಣು ಧಣು ಪೂತು ಕಾರ್ಮುಕ
ಯೋಗಸಿದ್ಧನೆ ಮಝರೆ ಕೋದಂ
ಡಾಗಮ ತ್ರಿಪುರಾರಿಯೆಂದುದು ವಂದಿಸಂದೋಹ ೨೯

ಆಯೆನುತ ಬೊಬ್ಬಿರಿದು ವಿಪ್ರ ನಿ
ಕಾಯ ಕುಣಿದುದು ಕಮಲಮುಖಿ ನಿ
ರ್ದಾಯದಲಿ ಸೇರಿದಳು ಹಾರುವಗೆನುತ ಹರುಷದಲಿ
ಆ ಯುವತಿಜನ ಜಲಧಿ ಮಸಗಿತು
ಬಾಯ ಮೌನದ ಬೆರಳ ಮೂಗಿನ
ರಾಯರಿದ್ದರು ಬಿಗಿದ ಬೆರಗಿನ ಹೊತ್ತ ದುಗುಡದಲಿ ೩೦

ಮೊಳಗಿದವು ನಿಸ್ಸಾಳ ತತಿ ಹೆ
ಕ್ಕಳದ ಪೆರ್ಚಿನೊಳಲ್ಲಿ ದಿವಿಜಾ
ವಳಿಯ ದುಂದುಭಿ ರವದಲುಬ್ಬಿದ ಸಾಧುವಾದಗಳ
ಕಳಕಳದ ಕೊಲ್ಲಣಿಗೆಯಲಿ ಪೂ
ವಳೆಯ ಪೂರದ ಹರಹಿನಲಿ ಜನ
ಮುಳುಗಿತದ್ಭುತ ರಭಸವಳ್ಳಿರಿದುದು ಜಗತ್ರಯವ ೩೧

ಕಿತ್ತ ಸುರಗಿಯ ವೀರ ಭಟರರು
ವತ್ತು ಸಾವಿರವೈದಿ ಪಾರ್ಥನ
ಸುತ್ತು ಮುತ್ತಿದರಂಗ ರಕ್ಷಣೆಗರಸನಾಜ್ಞಾಯಲಿ
ಇತ್ತ ಮಹಿಳಾಜನದ ಮೌಳಿಯ
ಮುತ್ತು ಕುಸುಮಾಯುಧನ ಥಟ್ಟಿನ
ಮತ್ತ ಗಜವೈತಂದಳಲ್ಲಿಗೆ ದ್ರೌಪದಾದೇವಿ ೩೨

ತೊಲತೊಲಗು ಮನ್ಮಥನ ಹೊಗರಿ
ಟ್ಟಲಗು ಬರುತಿದೆ ಸಾರು ಸಾರೆಂ
ದುಲಿದು ಕಂಚುಕಿ ನಿಕರ ಹೊಯ್ದುದು ಮುಂದೆ ಸಂದಣಿಯ
ನಳಿನಮುಖಿ ದಂಡಿಗೆಯೊಳೈತಂ
ದಿಳಿದಳೀತನ ಹೊರೆಯೊಳಾಗಳೆ
ಕಳಕಳದಲೊಳತೋಟಿ ಮಸಗಿತು ಹರುಷ ಲಜ್ಜೆಯಲಿ ೩೩

ಲಲಿತ ಮಧುರಾಪಾಂಗದಲಿ ಮು
ಕ್ಕುಳಿಸಿ ತಣಿಯವು ಕಂಗಳುಬ್ಬಿದ
ಪುಳಕಜಲದಲಿ ಮುಳುಗಿ ಮೂಡಿತು ಮೈ ನಿತಂಬಿನಿಯ
ತಳಿತಲಜ್ಜಾಭರಕೆ ಕುಸಿದ
ವ್ವಳಿಸಿತಂತಃಕರಣವಾಂಗಿಕ
ಲುಳಿತಸಾತ್ವಿಕ ಭಾವವವಗಡಿಸಿತ್ತು ಮಾನಿನಿಯ ೩೪

ಧರಣಿಪತಿ ಕೇಳ್ ಬಹಳ ಲಜ್ಜಾ
ಭರದ ಭಯದಲಿ ಬೆಮರಿಡುತ ಕುಚ
ಭರದಿ ಮೇಲುದು ಜಾರೆ ಜೋಡಿಸಿ ನಿಮಿರಿ ನಡನಡುಗಿ
ತರುಣಿ ನಿಜತನು ಪರಿಮಳದಲುರೆ
ಹೊರೆದ ಹೂವಿನ ದಂಡೆಯನು ನಿಜ
ವರನ ಕೊರಳಲಿ ಹಾಯ್ಕಿದಳು ಜಯವೆನೆ ಸುರಸ್ತೋಮ ೩೫

ಕೊರಳ ಹವಿನ ದಂಡೆಯಲಿ ನಿಜ
ಕರದ ಭಾರಿಯ ಧನುವಿನಲಿ ತನು
ಪರಿಮಳದ ನಿಟ್ಟೆಸಳುಗಂಗಳ ಕೆಲದ ಯುವತಿಯಲಿ
ವರನ ಪರಿ ಹೊಸತಾಯ್ತು ಹೊತ್ತನು
ಹರನಹಗೆ ಹಾರುವಿಕೆಯನು ನ
ಮ್ಮರಸಿ ನೆರೆ ಹಾರುವತಿಯೆಂದರು ನಗುತ ಚಪಲೆಯರು ೩೬

ಜನಪ ಕೇಳೈ ಯುವತಿಯೊಡನ
ರ್ಜುನನ ತಂದರು ರಾಜಮಂದಿರ
ಕನಿಮಿಷಾವಳಿ ಹರಿದುದಭ್ರದೊಳಮರಪತಿ ಸಹಿತ
ಮನದಸೂಯದ ಮುಖದ ದುಗುಡದ
ವಿನತ ಮಕುಟದ ಕೈಯ ಗಲ್ಲದ
ಕನಲಿಕೆಯ ಕೊನರುಗಳ ಕೌರವರಾಯ ಖತಿಗೊಂಡ ೩೭

ಏನು ಹದ ಪಾಂಚಾಲ ಮಾಡಿದ
ಮಾನಭಂಗವ ಕಂಡಿರೇ ಕಾ
ನೀನ ಶಕುನೊ ಜಯದ್ರಥಾಶ್ವತ್ಥಾಮ ಮೊದಲಾದ
ಮಾನನಿಧಿಗಳು ಕಂಡಿರೇ ಮದ
ದಾನೆಗಳು ನೀವ್ಕಂಡಿರೇ ಹದ
ನೇನೆನುತ ಕುರುರಾಯ ಮೂದಲಿಸಿದನು ತನ್ನವರ ೩೮

ಹಳೆಯ ಹುಲು ಧನುವಿದನು ಹಾರುವ
ಸೆಳೆದ ಗಡ ಕೌಳಿಕದ ಯಂತ್ರವ
ಗೆಲಿದ ಗಡ ಗರುವಾಯಿಗೆಡಿಸಿದ ಗಡ ಮಹೀಶ್ವರರ
ನಳಿನಮುಖಿ ಹಾಯ್ಕಿದಳು ಗಡ ತಿರು
ಕುಳಿಯ ಕೊರಳಲಿ ದಂಡೆಯನು ನೀ ೩೯

ವೊಲಿದು ಮದುವೆಯ ಮಾಡಿಯೆಂದನು ಬೈದು ಭೂಮಿಪರ
ಭಂಡರೋ ನೀವ್ ನೆರೆದ ಧರಣೀ
ಮಂಡಲೇಶ್ವರರಕಟ ನಿಮ್ಮಯ
ಹೆಂಡಿರನು ಬಳುವಳಿಯ ಕೊಡಿ ಹಾರುವನ ಹೆಂಡತಿಗೆ
ಗಂಡುಗಲಿಗಳ ನಿಮ್ಮನನಿಬರ
ಕಂಡುಪೇಕ್ಷಿಸಿ ಯಾಚಕನ ಕೈ
ಕೊಂಡಳಿದಕೇನುಂಟು ಮನದಲಿ ವಾಸಿ ನಿಮಗೆಂದ ೪೦

ವಾಸಿಗಳನರಸುವಡೆ ದ್ರುಪದನ
ಮೀಸಲಡಗನು ಹದ್ದು ಕಾಗೆಗೆ
ಸೂಸಿ ವಿಪ್ರನ ಬಡಿದು ಬಿಡುವುದು ಮತ್ತೆ ತಿರಿದುಣಲಿ
ಆ ಸರೋಜಾನನೆಯ ನಮ್ಮ ವಿ
ಲಾಸಿನಿಯ ವೀಧಿಯಲಿ ಕೂಡುವ
ದೈಸಲೇಯೆನುತೊಡನೊಡನೆ ಗರ್ಜಿಸಿತು ನೃಪನಿಕರ ೪೧

ಏಳಿ ಹತ್ತಲಿ ಲಗ್ಗೆ ಪದಹತ
ಧೂಳಿಯಲಿ ಹಿರಿಯಗಳಿನಗಲವ
ಹೂಳಿ ಕಳೆಯಲಿ ಹರಿದು ಹತ್ತಲಿ ತೆನೆಯ ಸರಿಸದಲಿ
ಕೋಲು ಗುಂಡಿನ ಹತಿಗೆ ಹುರಿಯೊಡೆ
ದಾಳ ಹೊಯ್ ಹೊಯ್ಯೆನುತ ಸಕಲ ನೃ
ಪಾಳಿ ಗರ್ಜಿಸಿ ಮುತ್ತಿದುದು ಪಾಂಚಾಲ ಪಟ್ಟಣವ ೪೨

ಕೂಡೆ ಗಜಬಜವಾಯ್ತು ಹರಿದುದು
ನಾಡಿಗಾವಳಿ ವಿಪ್ರಸಭೆ ತೆಗೆ
ದೋಡಿತೀ ಪಾಂಡವರು ಬಂದು ಕುಲಾಲಭವನದಲಿ
ನೋಡುತಿರ್ದರು ಲಗ್ಗೆಯಬ್ಬರ
ವಿಡಿರಿದುದು ದಿಗಂತವನು ಕೈ
ಮಾಡಿ ಕೋಟೆಯನಿಳಿದು ಬೆರಸಿದರಾಳುವೇರಿಯಲಿ ೪೩

ಹಲ್ಲಣಿಸಿದರು ಹೊಗುವ ಚೂಣಿಯ
ಚೆಲ್ಲ ಬಡಿದರು ಸರಿಸಕಡರುವ
ಬಿಲ್ಲ ಬಿರುದರ ಮೆಟ್ಟಿ ತಿವಿದರು ಸಾಲ ಸಬಳಿಗರು
ಝಲ್ಲರಿಯ ಝಾಡಿಗಳ ವಾದ್ಯದ
ಘಲ್ಲಣೆಯ ದಳ ನೆರೆದುದಲ್ಲಿಯ
ದಲ್ಲಿ ಮುತ್ತಿಗೆ ತೆಗೆಸಿದರು ಪಾಂಚಾಲ ನಾಯಕರು ೪೪

ಚೂಣಿ ಮುರಿದೈತರಲು ಬಹಳ
ಕ್ಷೋಣಿಯಲಿ ಕುರುಪತಿಯ ಥಟ್ಟಿನ
ಹೂಣಿಗರು ಹುರಿಗೊಂಡು ಕವಿದರು ಕರ್ಣ ಮೊದಲಾಗಿ
ಸಾಣೆಯಲಗಿನ ಸರಿಗೆ ಪರಬಲ
ವಾಣೆಯಿಟ್ಟವೊಲಡಿ ಮಿಡುಕದ
ಕ್ಷೀಣ ಬಲವೋಸರಿಸಿ ತೆಗೆದುದು ದ್ರುಪದಪರಿವಾರ ೪೫

ಮೊದಲ ಲಗ್ಗೆಯ ಧೂಳಿಯೇ ದ್ರೌ
ಪದಿಯ ಬೈತಲೆಗಮಲ ಸಿಂಧೂ
ರದ ಸುವಿಸ್ತರವಾಗದಿರ್ದಡೆ ರಾಯನಾಣೆನುತ
ಮದಮುಖರು ಮುಂಕೊಂಡು ದುರ್ಗವ
ಬೆದರಿಸಿತು ಬೇರೇನು ದ್ರುಪದನ
ಸದನ ಸೀಮೆಯ ಬೆರಸಿ ಹೊಯ್ದರು ರಾಜಬೀದಿಯಲಿ ೪೬

ಏಳು ಮನ್ನೆಯ ಗಂಡನಾಗು ನೃ
ಪಾಲ ಮದುವೆಯ ಮನೆಗೆ ರಾಯರ
ಧಾಳಿ ಬಿದ್ದಿನವಾಯ್ತು ನಡೆ ಸಂತೈಸು ಬೀಯಗರ
ಏಳೆನಲು ಕಳಕಳವನರ್ಜುನ
ಕೇಳಿದನು ಹೊದೆಯಂಬುಗಳ ತರ
ಹೇಳೆನುತ ಕವಿದೆಚ್ಚು ಮುರಿದನು ಭಟರ ಮುಂಗುಡಿಯ ೪೭

ಅದು ಬಳಿಕ ಕಲ್ಪಾಂತ ಮೇಘದ
ಮೊದಲ ಮಳೆಯೆನೆ ಕವಿದುದಂಬಿನ
ಹೊದರು ಹುದುಗಿತು ರಾಯದಳರೌಕುಳದ ರಕ್ತದಲಿ
ಕೆದರಿದರು ಕರ್ಣಾದಿಗಳು ನೆರೆ
ಬೆದರಿದರು ಮತ್ತೊಂದು ದೆಸೆಯಲಿ
ಸದೆದು ಹೊಕ್ಕನು ಭೀಮ ಭಾರಿಯ ಮರನ ಕೊಂಬಿನಲಿ ೪೮

ತರುಬಿದನು ಮಾದ್ರೇಶ ಪವನಜ
ನುರುಬೆಯನು ಫಲುಗುಣನ ಬಾಣವ
ಮುರಿಯೆನುತ ರಾಧೇಯನಿರಿದನು ಸಿಂಹ ನಾದದಲಿ
ಕರುಬರೋ ಘನ ಯಮತ್ರಭೇದಿಯ
ನರಿದು ಕಾಡುವ ಕುರುಡರೋ ನೀ
ವಿರಿತಕಂಘೈಸಿದಿರೆನುತ ಕೈಕೊಂಡನಾ ಭೀಮ ೪೯

ತುರಗ ರಥ ಸಾರಥಿಗಳನು ಹೊ
ಯ್ದೊರಸಿದನು ಪವಮಾನಸುತನು
ಬ್ಬರದ ಭಯದಲಿ ಶಲ್ಯ ಹಿಮ್ಮೆಟ್ಟಿದನು ಹಿನ್ನೆಲೆಗೆ
ನರನ ಶರಹತಿಗಳುಕಿ ಮೋರೆಯ
ಮುರುಹಿದನು ಕಲಿ ಕರ್ಣನವದಿರು
ಸರಿಯೆ ವಿಪ್ರರು ನಮ್ಮ ವಿಗ್ರಹಕೆಂದು ಖಾತಿಯಲಿ ೫೦

ಅರಸ ನಡೆ ದ್ರುಪದನ ಕಪಾಲದ
ಲಿರಲಿ ಮಾನಚ್ಯುತಿ ಮಹೀಸುರ
ವರರೊಡನೆ ಖತಿಯೇಕೆ ತೆಗೆವುದು ಹಸ್ತಿನಾಪುರಕೆ
ನೆರಹುವುದು ನೃಪವರ್ಗವನು ಬಂ
ದೊರಸುವುದು ದ್ರುಪದನ ಲಲಾಟದ
ಬರಹವನು ಕೇಳೆಂದು ನುಡಿದನು ಕರ್ಣ ಕುರುಪತಿಗೆ ೫೧

ಅಹುದು ಕರ್ಣನ ಮಾತು ತೆಗೆಯಲಿ
ಬಹಳ ಬಲವೀ ಹೊತ್ತಿನಲಿ ರಣ
ವಿಹಿತವಲ್ಲೌಕಿದಡೆ ತಪ್ಪದು ವಿಪ್ರವಧೆ ತಮಗೆ
ಮಹಿಮೆ ಮೀಸಲು ಹೋಗದೀ ಸರ
ಲಹಿತ ದರ್ಪವ ಮುಂದೆ ನೋಡಲು
ಬಹುದೆನುತ ತಿರುಗಿದನು ಕುರುಪತಿ ಹಸ್ತಿನಾಪುರಿಗೆ ೫೨

♦♦♦♦♦♦♦♦♦

ನೋಡಿ[ಸಂಪಾದಿಸಿ]

ಆದಿಪರ್ವ ಸಂಧಿಗಳು>: ೧೦
> ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦

ಪರ್ವಗಳು[ಸಂಪಾದಿಸಿ]

ಕುಮಾರವ್ಯಾಸ ಭಾರತ ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ