ಪಂಪಭಾರತ ಚತುರ್ದಶಾಶ್ವಾಸಂ

ವಿಕಿಸೋರ್ಸ್ದಿಂದ
  • (XXIII.VII.XIIX)-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))

ಪಂಪಭಾರತ -ಪದವಿಭಾಗ ಮತ್ತು ಅರ್ಥ::ಪಂಪಭಾರತ ಚತುರ್ದಶಾಶ್ವಾಸಂ[ಸಂಪಾದಿಸಿ]

ಧರ್ಮರಾಯನು ದೃತರಾಷ್ಟ್ರ ಗಾಂಧಾರಿಯರನ್ನು ಸಮಾಧಾನ ಪಡಿಸಿದುದು- ಹರಿಗ/ ಅರ್ಜುನನಿಗೆ ಪಟ್ಟಾಭಿಷೇಕ; ಕವಿಯ ಮಾತು ಉಪಸಂಹಾರ

ಯುದ್ಧದನಂತರದ ಕುರುಕ್ಷೇತ್ರ ರಣರಂಗ; ದೃತರಾಷ್ಟ್ರ ಗಾಂಧಾರಿಯರಿಗೆ ಧರ್ಮಜನ ಸ್ವಾಂತನ[ಸಂಪಾದಿಸಿ]

ಕಂ|| ಶ್ರೀ ರಾಮಾಲಿಂಗಿತ ವಿಪು
ಳೋರಸ್ಕಂ ಭಾಸ್ಕರಪ್ರತಾಪಂ ನಿಜ ದೋ|
ರ್ಮೇರು ಮಥಿತಾರಿ ಬಳ ಕೂ
ಪಾರಂ ಸಂಹಾರಿತಾರಿ ಶೌರ್ಯಂ ಹರಿಗಂ|| ೧ ||
ಪದ್ಯ-೧:ಪದವಿಭಾಗ-ಅರ್ಥ:ಶ್ರೀ ರಾಮಾ ಆಲಿಂಗಿತ ವಿಪುಳ ಉರಸ್ಕಂ (ಸಂಪತ್ ಲ್ಲಕ್ಷ್ಮಿಯಿಂದ ಆಲಿಂಗಿಸಲ್ಪಟ್ಟ ವಿಸ್ತಾರವಾದ ಎದೆಯುಳ್ಳವನೂ) ಭಾಸ್ಕರಪ್ರತಾಪಂ (ಸೂರ್ಯನ ಪ್ರತಾಪವುಳ್ಳವನೂ) ನಿಜದ ಊರ್ ಮೇರು ಮಥಿತ (ತನ್ನ ಭುಜವೆಂಬ ಮೇರುಪರ್ವತದಿಂದ ಕಡೆದ) ಅರಿ ಬಳ ಕೂಪಾರಂ (ಕಡೆದ ಶತ್ರುಸೇನಾ ಸಮುದ್ರವುಳ್ಳವನೂ) ಸಂಹಾರಿತ ಅರಿ ಶೌರ್ಯಂ ಹರಿಗಂ (ಶತ್ರುಗಳನ್ನು ಕೊಂದ ಶೌರ್ಯವುಳ್ಳವನೂ ಆದ ಅರಿಕೇಸರಿಯು (ಅರ್ಜುನನು))
ಪದ್ಯ-೧:ಅರ್ಥ: ಸಂಪತ್ ಲ್ಲಕ್ಷ್ಮಿಯಿಂದ ಆಲಿಂಗಿಸಲ್ಪಟ್ಟ ವಿಸ್ತಾರವಾದ ಎದೆಯುಳ್ಳವನೂ ಸೂರ್ಯನಪ್ರತಾಪವುಳ್ಳವನೂ, ತನ್ನ ಭುಜವೆಂಬ ಮೇರುಪರ್ವತದಿಂದ ಕಡೆದ ಶತ್ರುಸೇನಾಸಮುದ್ರವುಳ್ಳವನೂ ತನ್ನ ಭುಜವೆಂಬ ಮೇರುಪರ್ವತದಿಂದ ಕಡೆದ ಶತ್ರುಸೇನಾ ಸಮುದ್ರವುಳ್ಳವನೂ ಶತ್ರುಗಳನ್ನು ಕೊಂದ ಶೌರ್ಯವುಳ್ಳವನೂ ಆದ ಅರಿಕೇಸರಿಯು (ಅರ್ಜುನನು)
ತನ್ನಿಱಿದು ಗೆಲ್ದ ಕೊಳುಗುಳ
ವನ್ನೋಡಲ್ ಚಕ್ರಪಾಣಿಯುಂ ತನ್ನ ಸಹೋ|
ತ್ಪನ್ನರುಮೊಡವರೆ ಬಂದು ವಿ
ಪನ್ನೋಗ್ರಾರಾತಿವರ್ಗನಾಹವಧರೆಯಂ| ೨ ||
ಪದ್ಯ-೨:ಪದವಿಭಾಗ-ಅರ್ಥ:ತನ್ನ ಇಱಿದು ಗೆಲ್ದ ಕೊಳುಗುಳವಂ ನೋಡಲ್ (ತಾನು ಯುದ್ಧಮಾಡಿ ಗೆದ್ದ ಯುದ್ಧಭೂಮಿಯನ್ನು ನೋಡಲು) ಚಕ್ರಪಾಣಿಯುಂ ತನ್ನ ಸಹೋತ್ಪನ್ನರುಂ ಒಡವರೆ ಬಂದು (ಕೃಷ್ಣನೂ ತನ್ನ ಸಹೋದರರೂ ಜೊತೆಯಲ್ಲಿ ಬರಲು) ವಿಪನ್ನ ಉಗ್ರ ಆರಾತಿವರ್ಗನು ಆಹವಧರೆಯಂ (ನಾಶಮಾಡಲ್ಪಟ್ಟ ಭಯಂಕರವಾದ ಶತ್ರುಗಳನ್ನುಳ್ಳ ಧರ್ಮರಾಯನೂ ಯುದ್ಧಭೂಮಿಯನ್ನು ಬಂದು -ಸೇರಿದನು.)
ಪದ್ಯ-೨:ಅರ್ಥ: ತಾನು ಯುದ್ಧಮಾಡಿ ಗೆದ್ದ ಯುದ್ಧಭೂಮಿಯನ್ನು ನೋಡಲು ಕೃಷ್ಣನೂ ತನ್ನ ಸಹೋದರರೂ ಜೊತೆಯಲ್ಲಿ ಬರಲು ನಾಶಮಾಡಲ್ಪಟ್ಟ ಭಯಂಕರವಾದ ಶತ್ರುಗಳನ್ನುಳ್ಳ ಧರ್ಮರಾಯನೂ ಯುದ್ಧಭೂಮಿಯನ್ನು ಬಂದು ಸೇರಿದನು.
ವ|| ಎಯ್ದಿ ತನ್ನಿಂದಮಂತಕಾನನಮನೆಯ್ದಿದ ಮಹಾ ಪ್ರಚಂಡಮಂಡಳಿಕಮಕುಟ ಬದ್ದಸಾಮಂತಮಹಾಸಾಮಂತಸಂಹತಿಯುಮನೆಣಿಕೆಗೞಿದ ಕರಿತುರಗವರೂಥ ಪದಾತಿಗಳುಮಂ ನೋಡಿ ಮುರಾರಿಯ ಮೊಗಮಂ ನೋಡೆಯಧೋಕ್ಷಜನಜಾತಶತ್ರುವನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಯ್ದಿ ತನ್ನಿಂದಂ ಅಂತಕಾನನಮನು ಎಯ್ದಿದ (ತನ್ನಿಂದ ಯಮನ ಬಾಯನ್ನು ಸೇರಿದ,) ಮಹಾ ಪ್ರಚಂಡಮಂಡಳಿಕಮಕುಟ ಬದ್ದಸಾಮಂತ ಮಹಾಸಾಮಂತ ಸಂಹತಿಯುಮನು (ಮಹಾಶೂರರಾದ ಮಂಡಳಿಕ, ಮಕುಟಬದ್ಧ ಸಾಮಂತಮಹಾಸಾಮಂತ ಸಮೂಹವನ್ನು) ಎಣಿಕೆಗೞಿದ (ಎಣಿಕೆಯನ್ನು ಮೀರಿದ) ಕರಿ ತುರಗ ವರೂಥ ಪದಾತಿಗಳುಮಂ ನೋಡಿ (ಅಸಂಖ್ಯಾತವಾದ ಆನೆ, ಕುದುರೆ, ತೇರು, ಕಾಲಾಳು ಸೈನ್ಯವನ್ನು ನೋಡಿ) ಮುರಾರಿಯ ಮೊಗಮಂ ನೋಡೆಯು ಅಧೋಕ್ಷಜನು ಅಜಾತಶತ್ರುವನು ಇಂತೆಂದಂ (ಕೃಷ್ಣನ ಮುಖವನ್ನು ನೋಡಲು ಕೃಷ್ಣನು ಧರ್ಮರಾಯನನ್ನು ಕುರಿತು ಹೀಗೆಂದನು.)-
ವಚನ:ಅರ್ಥ:ತನ್ನಿಂದ ಯಮನ ಬಾಯನ್ನು ಸೇರಿದ ಮಹಾಶೂರರಾದ ಮಂಡಳಿಕ, ಮಕುಟಬದ್ಧ ಸಾಮಂತಮಹಾಸಾಮಂತ ಸಮೂಹವನ್ನು ಎಣಿಕೆಯನ್ನು ಮೀರಿದ ಅಸಂಖ್ಯಾತವಾದ ಆನೆ, ಕುದುರೆ, ತೇರು, ಕಾಲಾಳು ಸೈನ್ಯವನ್ನು ನೋಡಿ ಕೃಷ್ಣನ ಮುಖವನ್ನು ನೋಡಲು ಕೃಷ್ಣನು ಧರ್ಮರಾಯನನ್ನು ಕುರಿತು ಹೀಗೆಂದನು.
ಉ|| ಶಾತ ಶರಾಗ್ನಿ ಭಗ್ನ ಭಟ ಕೋಟಿ ವಿಭೀಷಣಮುಗ್ರವೈರಿಸಂ
ಘಾತಕರೀಂದ್ರರುಂದ್ರಕಟಕೂಟಪರಿಚ್ಯುತಭೃಂಗಮಾಳಿಕಾ|
ಪೀತಮದಾಂಬುಕಂ ಪ್ರಕೃತಿರಕ್ತಜಳಾಸವಮತ್ತಯೋಗಿನೀ
ವ್ರಾತಪರೀತಭೂತಸದನಂ ಕದನಂ ಕದನತ್ರಿಣೇತ್ರನಾ|| ೩ ||
ಪದ್ಯ-೩:ಪದವಿಭಾಗ-ಅರ್ಥ:ಶಾತ ಶರಾಗ್ನಿ ಭಗ್ನ (ಹರಿತವಾದ ಬಾಣಗಳ ಬೆಂಕಿಯಿಂದ ಹಾಳಾದ) ಭಟ ಕೋಟಿ ವಿಭೀಷಣಂ ( ಅನೇಕ ಯೋಧರಿಂದ ಭಯಂಕರವಾದುದೂ) ಉಗ್ರವೈರಿಸಂಘಾತ ಕರೀಂದ್ರ ರುಂದ್ರ ಕಟಕೂಟ (ಶತ್ರುಗಳು ಸಮೂಹಗಳಿಂದಲೂ ಆನೆಗಳು ವಿಸ್ತಾರವಾದ ಕಪೋಲದ ಕಡೆಯಿಂದ) ಪರಿಚ್ಯುತ (ಸುರಿಯತ್ತಿರುವ) ಭೃಂಗಮಾಳಿಕಾ ಪೀತಂ ಮದಾಂಬುಕಂ( ದುಂಬಿಗಳ ಮಾಲೆಗಳಿಂದ ಕುಡಿಯುತ್ತಿರುವ ಮದೋದಕವನ್ನುಳ್ಳದ್ದೂ,) ಪ್ರಕೃತಿ ರಕ್ತಜಳ ಆಸವ ಮತ್ತಯೋಗಿನೀ ವ್ರಾತಪರೀತ ->ಭೂತಸದನಂ (ಸಹಜವಾಗಿ ರಕ್ತಜಲವೆಂಬ ಮದ್ಯದಿಂದ ಸೊಕ್ಕಿರುವ ಯೋಗಿನೀ ಜನಗಳ ಗುಂಪಿನಿಂದಲೂ) ಕದನಂ ಕದನ ತ್ರಿಣೇತ್ರನಾ(ಅರ್ಜುನನ ಯುದ್ಧರಂಗವು ಭೂತಸದನಂ- ಪಿಶಾಚಿಗಳ ಆವಾಸಸ್ಥಾನವಾಗಿದೆ. )
ಪದ್ಯ-೩:ಅರ್ಥ: ಹರಿತವಾದ ಬಾಣಗಳ ಬೆಂಕಿಯಿಂದ ಹಾಳಾದ ಅನೇಕ ಯೋಧರಿಂದ ಭಯಂಕರವಾದುದೂ ಭಯಂಕರವಾದ ಶತ್ರುಗಳು ಸಮೂಹಗಳಿಂದಲೂ ಆನೆಗಳು ವಿಸ್ತಾರವಾದ ಕಪೋಲದ ಕಡೆಯಿಂದ ಸುರಿಯತ್ತಿರುವ, ದುಂಬಿಗಳ ಮಾಲೆಗಳಿಂದ ಕುಡಿಯುತ್ತಿರುವ ಮದೋದಕವನ್ನುಳ್ಳದ್ದೂ, ಸಹಜವಾಗಿ ರಕ್ತಜಲವೆಂಬ ಮದ್ಯದಿಂದ ಸೊಕ್ಕಿರುವ ಯೋಗಿನೀ ಜನಗಳ ಗುಂಪಿನಿಂದಲೂ ಸುತ್ತುವರಿಯಲ್ಪಟ್ಟು ಅರ್ಜುನನ ಯುದ್ಧರಂಗವು ಪಿಶಾಚಿಗಳ ಆವಾಸಸ್ಥಾನವಾಗಿದೆ.
ಚ|| ಸ್ಫುರಿತ ವರೂಥ ಚಕ್ರ ಹತಿಯಿಂ ಧರಣೀತಳಮತ್ತಮಿತ್ತಮ
ೞ್ದರಿಯೆ ವಿಯತ್ತಳಂ ಬಗೆದು ನೋೞ್ಪೊಡೆ ನಾಡೆ ಪತತ್ಪತತ್ರಿ ಜ|
ರ್ಝರಿತಮೆ ದಿಕ್ತಟಂ ರಿಪು ನರಾಪ ರಕ್ತ ಧುನೀ ಪ್ರವಾಹ ಪಿಂ
ಜರಿತಮೆ ಬೀರಮಂ ಪೊಗೞ್ವನೇವೊಗೞ್ವಂ ಕದನತ್ರಿಣೇತ್ರನಾ|| ೪ ||
ಪದ್ಯ-೪:ಪದವಿಭಾಗ-ಅರ್ಥ:ಸ್ಫುರಿತ ವರೂಥ ಚಕ್ರ ಹತಿಯಿಂ (ಪ್ರಕಾಶಮಾನವಾದ ತೇರಿನ ಗಾಲಿಗಳ ಹೊಡೆತದಿಂದ) ಧರಣೀತಳಂ ಅತ್ತಮಿತ್ತಂ ಅೞ್ದರಿಯೆ (ಭೂಪ್ರದೇಶವು ಅಲ್ಲಲ್ಲಿ ಹಳ್ಳತಗ್ಗುಗಳಿಂದ ಕೂಡಿದೆ.) ವಿಯತ್ತಳಂ ಬಗೆದು ನೋೞ್ಪೊಡೆ ನಾಡೆ ಪತತ್ಪತತ್ರಿ ಜರ್ಝರಿತಮೆ (ಆಕಾಶಪ್ರದೇಶವು ಬೀಳುತ್ತಿರುವ ಬಾಣಗಳ ಚೂರುಗಳಿಂದ ಜರ್ಝರಿತವಾಗಿ ಹೋಗಿದೆ.) ದಿಕ್ತಟಂ ರಿಪು ನರಾಪ ರಕ್ತ ಧುನೀ ಪ್ರವಾಹ ಪಿಂಜರಿತಮೆ( ದಿಗ್ಭಾಗಗಳು ಶತ್ರುರಾಜರ ರಕ್ತದ ನದಿಯ ಪ್ರವಾಹದಿಂದ ಕೆಂಪು ಹಳದಿ ಮಿಶ್ರವಾದ ಬಣ್ಣದಿಂದ ಕೂಡಿದೆ.) ಬೀರಮಂ ಪೊಗೞ್ವಂ ಏವೊಗೞ್ವಂ ಕದನತ್ರಿಣೇತ್ರನಾ (ಅರ್ಜುನನ ಬೀರಮಂ- ಪ್ರತಾಪವನ್ನು ಹೇಗೆ ವರ್ಣಿಸುವುದು ಸಾಧ್ಯ!)
ಪದ್ಯ-೪:ಅರ್ಥ: ಪ್ರಕಾಶಮಾನವಾದ ತೇರಿನ ಗಾಲಿಗಳ ಹೊಡೆತದಿಂದ ಭೂಪ್ರದೇಶವು ಅಲ್ಲಲ್ಲಿ ಹಳ್ಳತಗ್ಗುಗಳಿಂದ ಕೂಡಿದೆ. ಆಕಾಶಪ್ರದೇಶವು ಬೀಳುತ್ತಿರುವ ಬಾಣಗಳ ಚೂರುಗಳಿಂದ ಜರ್ಝರಿತವಾಗಿ ಹೋಗಿದೆ. ದಿಗ್ಭಾಗಗಳು ಶತ್ರುರಾಜರ ರಕ್ತದ ನದಿಯ ಪ್ರವಾಹದಿಂದ ಕೆಂಪು ಹಳದಿ ಮಿಶ್ರವಾದ ಬಣ್ಣದಿಂದ ಕೂಡಿದೆ. ಅರ್ಜುನನ ಪ್ರತಾಪವನ್ನು ಹೇಗೆ ವರ್ಣಿಸುವುದು ಸಾಧ್ಯ!
ವ|| ಎಂಬನ್ನೆಗಂ ಧೃತರಾಷ್ಟ್ರನುಂ ಗಾಂಧಾರಿಯುಮೊಂದಾಗಿ ಬರೆ ದುರ್ಯೋಧನನ ಪೆಂಡಿರಪ್ಪ ಭಾನುಮತಿಯುಂ ಚಂದ್ರಮತಿಯುಂ ಮೊದಲಾಗೆ ಸಮಸ್ತಾಂತಪುರಮುಂ ದುಶ್ಯಾಸನ ಲಕ್ಕಣ ಭೂರಿಶ್ರವಸ್ಸೋಮದತ್ತ ಭಗದತ್ತ ಬಾಹ್ಲೀಕ ಶಲ್ಯ ಶಕುನಿ ಸೈಂಧವ ಕರ್ಣ ಪ್ರಮುಖರಪ್ಪ ನಾಯಕರ ಪೆಂಡಿರುಂ ತಮ್ಮ ಗಂಡರಂ ಕೊಳುಗುಳದೊಳಱಸಿ ಕಾಣದೆ ಬಾಯೞಿದು ಪಳಯಿಸುತ್ತುಂ ಯೂಧಪತಿ ಕೆಡೆಯೆ ದೆಸೆದಪ್ಪಿದ ವನಕರಿಕರೇಣುಗಳುಮನಡರ್ಪಿಲ್ಲದೆ ಕಲ್ಪವೃಕ್ಷಮುಡಿದು ಕೆಡೆಯೆ ಬಂಬಲ ಬಾಡಿದ ವನಲತೆಗಳುಮಂ ಪೋಲ್ತು-
ವಚನ:ಪದವಿಭಾಗ-ಅರ್ಥ:ಎಂಬನ್ನೆಗಂ ಧೃತರಾಷ್ಟ್ರನುಂ ಗಾಂಧಾರಿಯುಂ ಒಂದಾಗಿ ಬರೆ (ಎನ್ನುವಷ್ಟರಲ್ಲಿ ಧೃತರಾಷ್ಟ್ರನೂ ಗಾಂಧಾರಿಯೂ ಒಟ್ಟುಗೂಡಿ ಬರಲು,) ದುರ್ಯೋಧನನ ಪೆಂಡಿರಪ್ಪ ಭಾನುಮತಿಯುಂ ಚಂದ್ರಮತಿಯುಂ ಮೊದಲಾಗೆ ಸಮಸ್ತ ಅಂತಃಪುರಮುಂ (ದುರ್ಯೋಧನನ ಹೆಂಡತಿಯರಾದ ಭಾನುಮತಿಯೂ ಚಂದ್ರಮತಿಯೂ ಸಮಸ್ತ ರಾಣಿವಾಸವೂ ) ದುಶ್ಯಾಸನ ಲಕ್ಕಣ ಭೂರಿಶ್ರವ ಸೋಮದತ್ತ ಭಗದತ್ತ ಬಾಹ್ಲೀಕ ಶಲ್ಯ ಶಕುನಿ ಸೈಂಧವ ಕರ್ಣ ಪ್ರಮುಖರಪ್ಪ ನಾಯಕರ ಪೆಂಡಿರುಂ (ಲಕ್ಷಣ ಭೂರಿಶ್ರವ ಸೋಮದತ್ತ ಭಗದತ್ತ ಬಾಹ್ಲಿಕ ಶಲ್ಯಶಕುನಿ ಸೈಂಧವ ಕರ್ಣನೇ ಮೊದಲಾದ ಪ್ರಮುಖನಾಯಕರ ಹೆಂಡತಿಯರೂ) ತಮ್ಮ ಗಂಡರಂ ಕೊಳುಗುಳದೊಳು ಅಱಸಿ ಕಾಣದೆ ಬಾಯೞಿದು ಪಳಯಿಸುತ್ತುಂ (ತಮ್ಮ ಗಂಡಂದಿರನ್ನು ಯುದ್ಧಭೂಮಿಯಲ್ಲಿ ಹುಡುಕಿ ಕಾಣದೆ ಗಟ್ಟಿಯಾಗಿ ಅಳುತ್ತಾ ) ಯೂಧಪತಿ (ಹಿಂಡಿನ ಸಲಗನು) ಕೆಡೆಯೆ ದೆಸೆದಪ್ಪಿದ ವನಕರಿ ಕರೇಣುಗಳು (ಆನೆಮರಿ) ಮನ ಅಡರ್ಪಿಲ್ಲದೆ (ದಿಕ್ಕುಕಾಣದ ಕಾಡಿನ ಹೆಣ್ಣಾನೆಗಳನ್ನೂ ಕಲ್ಪವೃಕ್ಷವು ಮುರಿದು ಬೀಳಲು ಅವಲಂಬನವಿಲ್ಲದೆ) ಕಲ್ಪವೃಕ್ಷಮುಡಿದು ಕೆಡೆಯೆ ಬಂಬಲ ಬಾಡಿದ ವನಲತೆಗಳುಮಂ ಪೋಲ್ತು (ಕಲ್ಪವೃಕ್ಷವು ಮುರಿದು ಬೀಳಲು ಅವಲಂಬನವಿಲ್ಲದೆ ಸುಟ್ಟು ಬಾಡಿದ ಕಾಡುಬಳ್ಳಿಗಳನ್ನೂ ಹೋಲುತ್ತಿದ್ದವು) -
ವಚನ:ಅರ್ಥ:ಎನ್ನುವಷ್ಟರಲ್ಲಿ ಧೃತರಾಷ್ಟ್ರನೂ ಗಾಂಧಾರಿಯೂ ಒಟ್ಟುಗೂಡಿ ಬರಲು, ದುರ್ಯೋಧನನ ಹೆಂಡತಿಯರಾದ ಭಾನುಮತಿಯೂ ಚಂದ್ರಮತಿಯೂ ಸಮಸ್ತ ರಾಣಿವಾಸವೂ ಲಕ್ಷಣ ಭೂರಿಶ್ರವ ಸೋಮದತ್ತ ಭಗದತ್ತ ಬಾಹ್ಲಿಕ ಶಲ್ಯಶಕುನಿ ಸೈಂಧವ ಕರ್ಣನೇ ಮೊದಲಾದ ಪ್ರಮುಖನಾಯಕರ ಹೆಂಡತಿಯರೂ ತಮ್ಮ ಗಂಡಂದಿರನ್ನು ಯುದ್ಧಭೂಮಿಯಲ್ಲಿ ಹುಡುಕಿ ಕಾಣದೆ ಗಟ್ಟಿಯಾಗಿ ಅಳುತ್ತಾ ಹಿಂಡಿನ ಸಲಗನು ಸಾಯಲು ದಿಕ್ಕುಕಾಣದ ಕಾಡಿನ ಹೆಣ್ಣಾನೆಗಳನ್ನೂ ಕಲ್ಪವೃಕ್ಷವು ಮುರಿದು ಬೀಳಲು ಅವಲಂಬನವಿಲ್ಲದೆ ಸುಟ್ಟು ಬಾಡಿದ ಕಾಡುಬಳ್ಳಿಗಳನ್ನೂ ಹೋಲುತ್ತಿದ್ದವು
ಚಂ|| ಇಱಿವ ಪಿಣಿಲ್ ತೆರಳ್ದೊರೆವ ಕಣ್ಣನಿ ಮಾಣದೆ ಮೋದೆ ಶೋಕದ
ಚ್ಚಿಱಿದವೊಲಿರ್ದ ಬಾಸುೞಿನೊಳೞ್ದು ಕನಲ್ದು ಬೞಲ್ದು ಜೋಲ್ದ ಮೆಯ್|
ಮಱುಗುವ ಬೇಗದೊಳ್ಮೊಗಮಣಂ ದೆಸೆಗಾಣದ ನೋಟಮಾರುಮಂ
ಮಱುಗಿಸೆ ಬಂದುದಂದು ಕರುಣಂ ಬರೆ ವೈರಿನೃಪಾಂಗನಾಜನಂ|| ೫ ||
ಪದ್ಯ-೫:ಪದವಿಭಾಗ-ಅರ್ಥ:ಇಱಿವ ಪಿಣಿಲ್ (ಸಡಿಲವಾಗಿರುವ ಜಡೆ), ತೆರಳ್ದು ಒರೆವ ಕಣ್ಣನಿ (ಪ್ರವಾಹವಾಗಿ ಸುರಿಯುವ ಕಣ್ಣೀರು,) ಮಾಣದೆ ಮೋದೆ ಶೋಕದೆ ಅಚ್ಚಿಱಿದವೊಲ್ ಇರ್ದ(ಬಿಡದೆ ಹೊಡೆದುಕೊಳ್ಳುತ್ತಿರಲು ದುಃಖದ ಅಚ್ಚಿಟ್ಟಹಾಗೆ ಇದ್ದ) ಬಾಸುೞಿನೊಳ್ ಅೞ್ದು ಕನಲ್ದು ಬೞಲ್ದು ಜೋಲ್ದ ಮೆಯ್ (ಬಾಸುಂಡೆಗಳಲ್ಲಿ ತಗ್ಗಾಗಿ ಕೆರಳಿ ಆಯಾಸಗೊಂಡು ಜೋಲುತ್ತಿರುವ ಮೈ) ಮಱುಗುವ ಬೇಗದೊಳ್ ಮಗಮ್ ಅಣಂ ದೆಸೆಗಾಣದ ನೋಟಂ ಆರುಮಂ ಮಱುಗಿಸೆ (ವ್ಯಥೆಪಡುವ ಹೊತ್ತಿನಲ್ಲಿ ದಿಕ್ಕುಕಾಣದೆ, ನೋಟ ಇವು ಯಾರನ್ನಾದರೂ ದುಖಿಸುವಂತೆ ಮಾಡುವಂತಿರಲು) ಬಂದುದಂದು ಕರುಣಂ ಬರೆ ವೈರಿನೃಪಾಂಗನಾಜನಂ
ಪದ್ಯ-೫:ಅರ್ಥ: ಪತಿಯನ್ನು ಕಳೆದುಕೊಂಡ ರಾಣಿಯರು; ಸಡಿಲವಾಗಿರುವ ಜಡೆ, ಪ್ರವಾಹವಾಗಿ ಸುರಿಯುವ ಕಣ್ಣೀರು, ಬಿಡದೆ ಹೊಡೆದುಕೊಳ್ಳುತ್ತಿರಲು ದುಃಖದ ಅಚ್ಚಿಟ್ಟಹಾಗೆ ಇದ್ದ ಬಾಸುಂಡೆಗಳಲ್ಲಿ ತಗ್ಗಾಗಿ ಕೆರಳಿ ಆಯಾಸಗೊಂಡು ಜೋಲುತ್ತಿರುವ ಮೈ, ವ್ಯಥೆಪಡುವ ಹೊತ್ತಿನಲ್ಲಿ ದಿಕ್ಕುಕಾಣದೆನೋಟ ಇವು ಯಾರನ್ನಾದರೂ ದುಖಿಸುವಂತೆ ಮಾಡುವಂತಿರಲು ಶತ್ರುರಾಜರ ರಾಣಿಯರು ಕರುಣೆಯೇ ಮೂರ್ತಿಮತ್ತಾಗಿ ಬಂದಂತೆ ಅಲ್ಲಿಗೆ ಬಂದರು.
ವ|| ಆಗಳ್ ಧರ್ಮಪುತ್ರಂ ಧೃತರಾಷ್ಟ್ರಂಗಂ ಗಾಂಧಾರಿಗಮೆಱಗಿ ಪೊಡೆವಟ್ಟು-
ವಚನ:ಪದವಿಭಾಗ-ಅರ್ಥ:ಆಗಳ್ ಧರ್ಮಪುತ್ರಂ ಧೃತರಾಷ್ಟ್ರಂಗಂ ಗಾಂಧಾರಿಗಂ ಎಱಗಿ ಪೊಡೆವಟ್ಟು (ಬಗ್ಗಿ ನಮಸ್ಕಾರಮಾಡಿ )-
ವಚನ:ಅರ್ಥ:ವ|| ಆಗ ಧರ್ಮರಾಜನು ಧೃತರಾಷ್ಟ್ರನಿಗೂ ಗಾಂಧಾರಿಗೂ ಬಗ್ಗಿ ನಮಸ್ಕಾರಮಾಡಿ
ಕಂ|| ಏಗೆಯ್ದುಮೆನ್ನ ಧರೆಯೊ
ರ್ವಾಗಮುಮಂ ನೀಮೆ ಬೆಸಸೆಯುಂ ಕುಡದಿನಿತಂ|
ಮೇಗಿಲ್ಲದೆ ನೆಗೆೞ್ದಳಿದಂ
ನಾಗಧ್ವಜನಯ್ಯ ನೀಮದರ್ಕೞಲದಿರಿಂ|| ೬ ||
ಪದ್ಯ-೬:ಪದವಿಭಾಗ-ಅರ್ಥ:ಏಗೆಯ್ದುಂ ಎನ್ನ ಧರೆಯ ಒರ್ವಾಗಮುಮಂ ನೀಮೆ ಬೆಸಸೆಯುಂ (ಏನು ಮಾಡಿದರೂ ನನ್ನ ರಾಜ್ಯದ ಒಂದು ಭಾಗವನ್ನು ನೀವೆ ಹೇಳಿದರೂ ) ಕುಡದೆ ಇನಿತಂ ಮೇಗಿಲ್ಲದೆ (ಕೊಡದೆ ಸ್ವಲ್ಪವೂ ಉತ್ತಮವಲ್ಲದ ರೀತಿಯಲ್ಲಿ) ನೆಗೆೞ್ದು ಅಳಿದಂ ನಾಗಧ್ವಜನು (ಇಷ್ಟನ್ನೂ ಮಾಡಿ ಸರ್ಪಧ್ವಜನಾದ ದುರ್ಯೋಧನನು ಸತ್ತನು) ಅಯ್ಯ ನೀಂ ಅದರ್ಕೆ ಅೞಲದಿರಿಂ (ನೀವು ಅದಕ್ಕಾಗಿ ದುಖಪಡಬೇಡಿ.)
ಪದ್ಯ-೬:ಅರ್ಥ: ಏನು ಮಾಡಿದರೂ ನನ್ನ ರಾಜ್ಯದ ಒಂದು ಭಾಗವನ್ನು ನೀವೆ ಹೇಳಿದರೂ ಕೊಡದೆ ಸ್ವಲ್ಪವೂ ಉತ್ತಮವಲ್ಲದ ರೀತಿಯಲ್ಲಿ ಇಷ್ಟನ್ನೂ ಮಾಡಿ ಸರ್ಪಧ್ವಜನಾದ ದುರ್ಯೋಧನನು ಸತ್ತನು. ನೀವು ಅದಕ್ಕಾಗಿ ದುಖಪಡಬೇಡಿ.
ಆತನೊಡವೋಯ್ತು ಪಗೆ ನಿಮ
ಗಾತನಿನಗ್ಗಳದ ಮಗನೆನಾಂ ನಖ ಮಾಂಸ|
ಪ್ರೀತಿಯೊಳೆ ನೆಗೞ್ವೆನಿಂ ಪಡೆ
ಮಾತೇಂ ಪಂಬಲಿಸದೆನ್ನ ಪೇೞ್ದುದುಗೆಯ್ಯಿಂ|| ೭ ||
ಪದ್ಯ-೭:ಪದವಿಭಾಗ-ಅರ್ಥ:ಆತನೊಡ ವೋಯ್ತು ಪಗೆ (ಹಗೆ- ದ್ವೇಷವು ಆತನೊಡನೆಯೇ ಹೋಯಿತು.) ನಿಮಗೆ ಆತನಿಂ ಅಗ್ಗಳದ ಮಗನೆನೆ (ನಾನು ಆತನಿಗಿಂತ ಉತ್ತಮನಾದ ಮಗನಾಗಿದ್ದೇನೆ.) ಆಂ ನಖಮಾಂಸ ಪ್ರೀತಿಯೊಳೆ ನೆಗೞ್ವೆನಿಂ (ಉಗುರುಕಣ್ಣಿನಮಾಂಸದಂತೆ ಬಹು ಅನ್ಯೋನ್ಯವಾದ ಪ್ರೀತಿಯಿಂದಲೇ ನಡೆದುಕೊಳ್ಳುತ್ತೇನೆ.) ಪಡೆಮಾತೇಂ ಪಂಬಲಿಸದೆ ಎನ್ನ ಪೇೞ್ದುದು ಗೆಯ್ಯಿಂ (ಬೇರೆ ಮಾತೇನು? ಹಂಬಲಿಸದೆ ನಾನು ಹೇಳಿದುದನ್ನು ಮಾಡಿ.)
ಪದ್ಯ-೭:ಅರ್ಥ: ದ್ವೇಷವು ಆತನೊಡನೆಯೇ ಹೋಯಿತು. ನಾನು ಆತನಿಗಿಂತ ಉತ್ತಮನಾದ ಮಗನಾಗಿದ್ದೇನೆ. ಉಗುರುಕಣ್ಣಿನಮಾಂಸದಂತೆ ಬಹು ಅನ್ಯೋನ್ಯವಾದ ಪ್ರೀತಿಯಿಂದಲೇ ನಡೆದುಕೊಳ್ಳುತ್ತೇನೆ. ಬೇರೆ ಮಾತೇನು? ಹಂಬಲಿಸದೆ ನಾನು ಹೇಳಿದುದನ್ನು ಮಾಡಿ.
ವ|| ಎಂಬುದುಂ ಧೃತರಾಷ್ಟ್ರನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂಬುದುಂ ಧೃತರಾಷ್ಟ್ರನು ಇಂತು ಎಂದಂ -
ವಚನ:ಅರ್ಥ:ಎನ್ನುಲು ಧೃತರಾಷ್ಟ್ರನ್ನು ಹೀಗೆಂದನು.
ಕಂ|| ತನಯಶತಮಾದುದಲ್ತೆನ
ಗನಿವಾರಿತ ದುಖಶತಮೆ ತಾನಾದುದವಂ|
ನೆನೆಯೆಂ ಸಂಸ್ಕಾರಿಸಲೀ
ವನಿತೆಯರ್ಗವರವರ ಪುರುಷರಂ ಕುಡವೇೞ್ಕುಂ|| ೮ ||
ಪದ್ಯ-೮:ಪದವಿಭಾಗ-ಅರ್ಥ:ತನಯಶತಮಾದುದು ಅಲ್ತು ಎನಗೆ ಅನಿವಾರಿತ ದುಖಶತಮೆ ತಾನಾದುದು (ನನಗೆ ನೂರು ಮಕ್ಕಳಾಗಲಿಲ್ಲ, ತಡೆಯಲಾಗದ ನೂರು ದುಃಖಗಳೇ ತಾನಾದುವು.) ಅವಂ ನೆನೆಯೆಂ (ಅವುಗಳನ್ನು ನೆನೆಯುವುದಿಲ್ಲ;) ಸಂಸ್ಕಾರಿಸಲು ಈ ವನಿತೆಯರ್ಗೆ ಅವರವರ ಪುರುಷರಂ ಕುಡವೇೞ್ಕುಂ ( ಈ ಸ್ತ್ರೀಯರು ಅವರವರ ಪತಿದೇಹಗಳನ್ನು ಶವಸಂಸ್ಕಾರ ಮಾಡಲು ಅವರಿಗೆ ಕೊಡಬೇಕು. )
ಪದ್ಯ-೮:ಅರ್ಥ: ನನಗೆ ನೂರು ಮಕ್ಕಳಾಗಲಿಲ್ಲ, ತಡೆಯಲಾಗದ ನೂರು ದುಃಖಗಳೇ ತಾನಾದುವು. ಅವುಗಳನ್ನು ನೆನೆಯುವುದಿಲ್ಲ; ಈ ಸ್ತ್ರೀಯರು ಅವರವರ ಪತಿದೇಹಗಳನ್ನು ಶವಸಂಸ್ಕಾರ ಮಾಡಲು ಅವರಿಗೆ ಕೊಡಬೇಕು. ಎಂದನು ಧೃತರಾಷ್ಟ್ರ.
ವ|| ಎಂಬುದುಮದಾವುದು ದೋಷಮವರ್ಗೆಲ್ಲಂ ಸಂಸ್ಕಾರವಿಯಂ ನಾನೆ ಪಕ್ಕದೊಳಿರ್ದು ಮಾಡುಸುವೆನೆಂಬನ್ನೆಗಂ ಕೊಂತಿ ಬಂದು ಕರ್ಣನ ಕಳೇವರಮಂ ತೞ್ಕೈಸಿ ಕೊಂಡು ಪಾಂಡವರಯ್ವರುಮನಲ್ಲಿಗೆ ಬರಿಸಿ-
ವಚನ:ಪದವಿಭಾಗ-ಅರ್ಥ: ಎಂಬುದುಂ ಅದಾವುದು ದೋಷಂ (ಹಾಗೆಂದಾಗ, ದೋಷವೇನಿದೆ?) ಅವರ್ಗೆಲ್ಲಂ ಸಂಸ್ಕಾರ ವಿಧಿಯಂ ನಾನೆ ಪಕ್ಕದೊಳಿರ್ದು ಮಾಡುಸುವೆನು ಎಂಬ ಅನ್ನೆಗಂ (ಅವರುಗಳ ಸಂಸ್ಕಾರವಿಧಿಯನ್ನೆಲ್ಲ ನಾನೇ ಪಕ್ಕದಲ್ಲಿದ್ದು ಮಾಡಿಸುತ್ತೇನೆ ಎನ್ನುವಷ್ಟರಲ್ಲಿ) ಕೊಂತಿ ಬಂದು ಕರ್ಣನ ಕಳೇವರಮಂ ತೞ್ಕೈಸಿ ಕೊಂಡು (ಕುಂತೀದೇವಿಯು ಬಂದು ಕರ್ಣನ ಹೆಣವನ್ನು ತಬ್ಬಿಕೊಂಡು) ಪಾಂಡವರು ಅಯ್ವರುಮನು ಅಲ್ಲಿಗೆ ಬರಿಸಿ-
ವಚನ:ಅರ್ಥ: ಹಾಗೆಂದಾಗ, ದೋಷವೇನಿದೆ? ಅವರುಗಳ ಸಂಸ್ಕಾರವಿಧಿಯನ್ನೆಲ್ಲ ನಾನೇ ಪಕ್ಕದಲ್ಲಿದ್ದು ಮಾಡಿಸುತ್ತೇನೆ ಎನ್ನುವಷ್ಟರಲ್ಲಿ ಕುಂತೀದೇವಿಯು ಬಂದು ಕರ್ಣನ ಹೆಣವನ್ನು ತಬ್ಬಿಕೊಂಡು ಪಾಂಡವರು ಐದು ಜನವನ್ನೂ ಅಲ್ಲಿಗೆ ಬರಮಾಡಿ -.
ಕಂ|| ನಿಮ್ಮಣ್ಣನೆನ್ನ ಪಿರಿಯ ಮ
ಗಮ್ಮಾತೇಂ ಕರ್ಣನಾಂ ಮಹಾಪಾತಕಿಯೆಂ|
ನಿಮ್ಮಯ ಮೋಹದಿನೀತಂ
ಗಾಮ್ಮಾಡಿದೆನಿನಿತನೆಂದು ಶೋಕಂಗೆಯ್ದಳ್|| ೯
ಪದ್ಯ-೯:ಪದವಿಭಾಗ-ಅರ್ಥ:ನಿಮ್ಮಣ್ಣನು ಎನ್ನ ಪಿರಿಯ ಮಗಂ ಮಾತು ಏಂ? ಕರ್ಣನು- ('ಕರ್ಣನು ನಿಮ್ಮಣ್ಣ, ನನ್ನ ಹಿರಿಯ ಮಗ,ಏನು ಹೇಳಲಿ?) ಆಂ ಮಹಾಪಾತಕಿಯೆಂ (ನಾನು ಮಹಾಪಾತಕಿ,) ನಿಮ್ಮಯ ಮೋಹದಿಂ ಈತಂಗೆ ಆಂ ಮಾಡಿದೆನು ಇನಿತನೆಂದು ಶೋಕಂ ಗೆಯ್ದಳ್ (ನಿಮ್ಮ ಮೇಲಿನ (ಮೋಹದಿಂದ) ಈತನಿಗೆ ಇಷ್ಟನ್ನೂ ನಾನೇ ಮಾಡಿದೆನು ಎಂದು ದುಖಿಸಿದಳು )
ಪದ್ಯ-೯:ಅರ್ಥ:ಕರ್ಣನು ನಿಮ್ಮಣ್ಣ, ನನ್ನ ಹಿರಿಯ ಮಗ, ಏನು ಹೇಳಲಿ? ನಾನು ಮಹಾಪಾತಕಿ, ನಿಮ್ಮ ಮೇಲಿನ (ಮೋಹದಿಂದ) ಈತನಿಗೆ ಇಷ್ಟನ್ನೂ ನಾನೇ ಮಾಡಿದೆನು ಎಂದು ದುಖಿಸಿದಳು
ವ|| ಆಗಳಯ್ವರುಮಾ ಮಾತಂ ಕೇಳ್ದು ಭೋಂಕನೆರ್ದೆದೆರೆಯೆ ಸಹೋದರ ಶೋಕದೊಳ್ ಮನ್ಯುಮಿಕ್ಕು ಸೈರಿಸಲಾಱದೆ-
ವಚನ:ಪದವಿಭಾಗ-ಅರ್ಥ:ಆಗಳ್ ಅಯ್ವರುಂ ಆ ಮಾತಂ ಕೇಳ್ದು (ಆಗ ಅಯ್ದು ಸಹೋದರರು ಆ ಮಾತನ್ನು ಕೇಳಿ) ಭೋಂಕನೆ ಎರ್ದೆದೆರೆಯೆ ಸಹೋದರ ಶೋಕದೊಳ್ ಮನ್ಯುಮಿಕ್ಕು ಸೈರಿಸಲಾಱದೆ-
ವಚನ:ಅರ್ಥ: ಆಗ ಅಯ್ದು ಸಹೋದರರು ಆ ಮಾತನ್ನು ಕೇಳಿ ಕೂಡಲೆ ಎದೆಬಿರಿಯುವಂತೆ ವಿಶೇಷವಾದ ದುಃಖದಿಂದ ಮನತುಂಬಿ ಸಹಿಸಲಾರದೆ-

ಕರ್ಣನ ಸಾವಿಗೆ ಧರ್ಮರಾಯನ ದುಃಖ - ಮರಣಿಸಿದವರೆಲ್ಲರ ಅಂತ್ಯ ಸಂಸ್ಕಾರ[ಸಂಪಾದಿಸಿ]

ಚಂ|| ಅೞಿಪಿದರಾರುಮಿಲ್ಲೆಮಗೆ ನೀನೆಮಗಣ್ಣನೆಯೆಂದು ಮುನ್ನಮಾ
ಮಱಿದೊಡೆ ಪಟ್ಟಮಂ ನೆಲನುಮಂ ನಿನಗಿತ್ತು ಕುರುಪ್ರಧಾನನೊಳ್|
ಕಱುಪನೆ ನಿಚ್ಚಟಂ ಬಿಸುಟು ನಿನ್ನಯ ಪೇೞ್ದ್ದುದುಗೆಯ್ದು ಪಾೞಿಯಂ
ಮೆರೆಯೆವೆ ಬಾಯ ತಂಬುಲದೊಳಂ ಮಡುಗೂೞೊಳಮಂಗವಲ್ಲಭಾ|| ೧೦ ||
ಪದ್ಯ-೧೦:ಪದವಿಭಾಗ-ಅರ್ಥ:ಅೞಿಪಿದರು ಆರುಂ ಇಲ್ಲ ಎಮಗೆ (ನೀನು ನಮಗೆ ಅಣ್ಣನೆಂದು ತಿಳಿಸಿದವರು ಯಾರೂ ಇಲ್ಲ.) ನೀನು ಎಮಗೆ ಅಣ್ಣನೆಯೆಂದು ಮುನ್ನಮೆ ಅಱಿದೊಡೆ (ನೀನು ನಮಗೆ ಅಣ್ಣನೆಂದು ಮೊದಲು ತಿಳಿದಿದ್ದರೆ ) ಪಟ್ಟಮಂ ನೆಲನುಮಂ ನಿನಗೆ ಇತ್ತು (ಪಟ್ಟವನ್ನೂ ರಾಜ್ಯವನ್ನೂ ನಿನಗೆ ಕೊಟ್ಟು) ಕುರುಪ್ರಧಾನನೊಳ್ ಕಱುಪನೆ ನಿಚ್ಚಟಂ ಬಿಸುಟು (ಕೌರವಮುಖ್ಯಸ್ಥನಾದ ದುರ್ಯೋಧನನಲ್ಲಿ ಕೋಪವನ್ನು ಶಾಶ್ವತವಾಗಿ ಬಿಟ್ಟು,) ನಿನ್ನಯ ಪೇೞ್ದ್ದುದು ಗೆಯ್ದು (ನೀನು ಹೇಳಿದುದನ್ನು ಮಾಡಿಕೊಂಡು,) ಪಾೞಿಯಂ ಮೆರೆಯೆವೆ ( ಧರ್ಮವನ್ನು ಪಾಲಿಸುತ್ತಿರುತ್ತಿದ್ದೆವಲ್ಲವೆ?) ಬಾಯ ತಂಬುಲದೊಳಂ ಮಡುಗೂೞೊಳಂ ಅಂಗವಲ್ಲಭಾ (ಅಂಗರಾಜನೇ ನಿನ್ನ ಬಾಯಿದಂಬುಲದಲ್ಲಿಯೂ ಬಿಟ್ಟ ಅನ್ನದಲ್ಲಿಯೂ ಧರ್ಮವನ್ನು ಪಾಲಿಸುತ್ತಿರುತ್ತಿದ್ದೆವಲ್ಲವೆ?)
ಪದ್ಯ-೧೦:ಅರ್ಥ: ೧೦. “ನೀನು ನಮಗೆ ಅಣ್ಣನೆಂದು ತಿಳಿಸಿದವರು ಯಾರೂ ಇಲ್ಲ. ನೀನು ನಮಗೆ ಅಣ್ಣನೆಂದು ಮೊದಲು ತಿಳಿದಿದ್ದರೆ ಪಟ್ಟವನ್ನೂ ರಾಜ್ಯವನ್ನೂ ನಿನಗೆ ಕೊಟ್ಟು ಕೌರವಮುಖ್ಯಸ್ಥನಾದ ದುರ್ಯೋಧನನಲ್ಲಿ ಕೋಪವನ್ನು ಶಾಶ್ವತವಾಗಿ ಬಿಟ್ಟು, ನೀನು ಹೇಳಿದುದನ್ನು ಮಾಡಿಕೊಂಡು ಅಂಗರಾಜನೇ ನಿನ್ನ ಬಾಯಿದಂಬುಲದಲ್ಲಿಯೂ ಬಿಟ್ಟ ಅನ್ನದಲ್ಲಿಯೂ ಧರ್ಮವನ್ನು ಪಾಲಿಸುತ್ತಿರುತ್ತಿದ್ದೆವಲ್ಲವೆ?
ವ|| ಎಂದು ಶೋಕಾಕ್ರಾಂತರಾದರಂ ನಾರಾಯಣಂ ಸಂತೈಸಿ ಕೊಂದರ್ ಕೊಲೆ ಸಾವರೆಂಬುದು ಜಗದ್ವ್ಯಾಪಾರಮೀಶ್ವರನಿಚ್ಛೆಯಿಂದ ನೆಗೞ್ಗುಮೆಂದು ದುಃಖೋಪಶಮನಂ ಮಾಡಿದೊಡೆ ಸಮಾಹಿತಚಿತ್ತರಾಗಿ ಕೊಳುಗುಳನಂ ವಿಧಿವಿಧಾನದಿಂ ಬಳಸಿ ದುರ್ಯೋಧನಂ ಮೊದಲಾಗೆ ಕುರುಕ್ಷೇತ್ರದೊಳ್ ಸತ್ತರಸುಮಕ್ಕಳೆಲ್ಲರುಮನೊಂದಾಗಿ ತಂದು ಬೆಟ್ಟಾಗೊಟ್ಟಿ ಕರ್ಣನ ಕಳೇವರಮನನಿಬರಿಂ ಮಿಗೆ ಮಹಾಬ್ರಾಹ್ಮಣರಿಂದಂ ಮಂತ್ರವಿಧಿಯಿಂದಿರಿಸಿ ಹರಿಚಂದನ ಕರ್ಪೂರ ಕಾಳಾಗರುಕಾಷ್ಠಂಗಳಿಂದಂ ಯಥೋಕ್ತ ವಿಧಿಯಿಂ ಸಂಸ್ಕಾರಿಸಿ ಕರ್ಣಂಗೆ ಕರ್ಣಸ್ಥಳಿಯೆಂಬ ತೀರ್ಥಮಂ ಮಾಡಿ ಜಳದಾನಾದಿ ಕ್ರಿಯೆಗಳಂ ನಿರ್ವರ್ತಿಸೆ ತದನಂತರದೊಳ್ ಧೃತರಾಷ್ಟ್ರನುಂ ಗಾಂಧಾರಿಯುಂ ಪುತ್ರವಿಯೋಗದುಃಖದಿಂ ಮುನಿವನಮನಾಶ್ರಯಿಸಿದರ್ ಕೊಂತಿಯುಂ ಕರ್ಣನ ಶೋಕದೊಳ್ ಧರ್ಮಪುತ್ರನಂ ಬೀೞ್ಕೊಂಡವರೊಡನೆ ತಪಶ್ಚರಣಪರಾಯಣೆಯಾದಳಿತ್ತ ಧರ್ಮನಂದನಂ ದೇವಕೀನಂದನನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಶೋಕಾಕ್ರಾಂತರು ಆದರಂ ನಾರಾಯಣಂ ಸಂತೈಸಿ (ಎಂದು ದುಖದಿಂದ ಕೂಡಿದ್ದವರನ್ನು ಕೃಷ್ಣನು ಸಮಾಧಾನಪಡಿಸಿ) ಕೊಂದರ್ ಕೊಲೆ ಸಾವರೆಂಬುದು ಜಗದ್ವ್ಯಾಪಾರಂ ಈಶ್ವರನ ಇಚ್ಛೆಯಿಂದ ನೆಗೞ್ಗುಂ ಎಂದು ದುಃಖೋಪಶಮನಂ ಮಾಡಿದೊಡೆ (ಕೊಂದವರು ಕೊಲೆಗೆ ಈಡಾಗಿ ಸಾಯುತ್ತಾರೆ ಎಂಬುದು ಲೋಕೋಕ್ತಿ. ಈಶ್ವರನ ಇಚ್ಛೆಯಿಂದಲೇ ನಡೆಯುತ್ತದೆ ಎಂದು ದು:ಖವನ್ನು ಹೋಗಲಾಡಿಸಿದನು.) ಸಮಾಹಿತಚಿತ್ತರಾಗಿ ಕೊಳುಗುಳನಂ ವಿಧಿವಿಧಾನದಿಂ ಬಳಸಿ (ಶಾಂತ ಮನಸ್ಸಿನವರಾಗಿ ಯುದ್ಧರಂಗವನ್ನು ಶಾಸ್ತ್ರರೀತಿಯಲ್ಲಿ ಸುತ್ತಿನೋಡಿ) ದುರ್ಯೋಧನಂ ಮೊದಲಾಗೆ ಕುರುಕ್ಷೇತ್ರದೊಳ್ ಸತ್ತ ಅರಸುಮಕ್ಕಳೆಲ್ಲರುಮಂ ಒಂದಾಗಿ ತಂದು ಬೆಟ್ಟಾಗೊಟ್ಟಿ (ದುರ್ಯೋಧನನೇ ಮೊದಲಾಗಿ ಕುರುಕ್ಷೇತ್ರದಲ್ಲಿ ಸತ್ತ ಎಲ್ಲ ರಾಜಕುಮಾರರನ್ನೂ ತಂದು ಒಟ್ಟಿಗೆ ಬೆಟ್ಟದಂತೆ ರಾಶಿಮಾಡಿ,) ಕರ್ಣನ ಕಳೇವರಮನು ಅನಿಬರಿಂ ಮಿಗೆ ಮಹಾಬ್ರಾಹ್ಮಣರಿಂದಂ ಮಂತ್ರವಿಧಿಯಿಂದ ಇರಿಸಿ (ಕರ್ಣನ ಶರೀರವನ್ನು ಅಷ್ಟು ಜನವನ್ನೂ ಮೀರುವ ರೀತಿಯಲ್ಲಿ ಬ್ರಾಹ್ಮಣರಿಂದ ವಿಧಿಪೂರ್ವಕವಾಗಿ ಇರಿಸಿ) ಹರಿಚಂದನ ಕರ್ಪೂರ ಕಾಳಾಗರು ಕಾಷ್ಠಂಗಳಿಂದಂ ಯಥೋಕ್ತ ವಿಧಿಯಿಂ ಸಂಸ್ಕಾರಿಸಿ (ಶ್ರೀಗಂಧ, ಕರ್ಪೂರ, ಕರಿಯ ಅಗರು ಸೌದೆಯಿಂದ ಶಾಸ್ತ್ರದಲ್ಲಿ ಹೇಳಿರುವಂತೆ ಸಂಸ್ಕಾರಮಾಡಿದರು.) ಕರ್ಣಂಗೆ ಕರ್ಣಸ್ಥಳಿಯೆಂಬ ತೀರ್ಥಮಂ ಮಾಡಿ ಜಳದಾನಾದಿ ಕ್ರಿಯೆಗಳಂ ನಿರ್ವರ್ತಿಸೆ (ಕರ್ಣನ ಜ್ಞಾಪಕಾರ್ಥವಾಗಿ ಕರ್ಣಸ್ಥಳಿಯೆಂಬ ಕ್ಷೇತ್ರವನ್ನು ನಿರ್ಮಿಸಿದರು, ತರ್ಪಣವೇ ಮೊದಲಾದ ಕ್ರಿಯೆಗಳನ್ನು ಮಾಡಿ ಮುಗಿಸಿದರು.) ತದನಂತರದೊಳ್ ಧೃತರಾಷ್ಟ್ರನುಂ ಗಾಂಧಾರಿಯುಂ ಪುತ್ರವಿಯೋಗ ದುಃಖದಿಂ ಮುನಿವನಮನು ಆಶ್ರಯಿಸಿದರ್ (ಧೃತರಾಷ್ಟ್ರನೂ ಗಾಂಧಾರಿಯೂ ಮಕ್ಕಳನ್ನು ಅಗಲಿದ ದುಖದಿಂದ ಋಷಿಗಳ ತಪೋವನವನ್ನು ಆಶ್ರಯಿಸಿದರು.) ಕೊಂತಿಯುಂ ಕರ್ಣನ ಶೋಕದೊಳ್ ಧರ್ಮಪುತ್ರನಂ ಬೀೞ್ಕೊಂಡು ಅವರೊಡನೆ ತಪಶ್ಚರಣ ಪರಾಯಣೆಯಾದಳು (ಕುಂತೀದೇವಿಯೂ ಕರ್ಣನ ದುಖದಿಂದ ಧರ್ಮರಾಯನ ಅಪ್ಪಣೆಯನ್ನು ಪಡೆದು ಹೊರಟು ತಪಸ್ಸಿನಲ್ಲಿ ನಿರತಳಾದಳು.) ಇತ್ತ ಧರ್ಮನಂದನಂ ದೇವಕೀನಂದನನಂ ಇಂತೆಂದಂ (ಈ ಕಡೆ ಧರ್ಮರಾಯನು ಕೃಷ್ಣನಿಗೆ ಹೀಗೆಂದನು- )-
ವಚನ:ಅರ್ಥ:ಎಂದು ದುಖದಿಂದ ಕೂಡಿದ್ದವರನ್ನು ಕೃಷ್ಣನು ಸಮಾಧಾನಪಡಿಸಿ ಕೊಂದವರು ಕೊಲೆಗೆ ಈಡಾಗಿ ಸಾಯುತ್ತಾರೆ ಎಂಬುದು ಲೋಕೋಕ್ತಿ. ಈಶ್ವರನ ಇಚ್ಛೆಯಿಂದಲೇ ನಡೆಯುತ್ತದೆ ಎಂದು ದು:ಖವನ್ನು ಹೋಗಲಾಡಿಸಿದನು. ಶಾಂತ ಮನಸ್ಸಿನವರಾಗಿ ಯುದ್ಧರಂಗವನ್ನು ಶಾಸ್ತ್ರರೀತಿಯಲ್ಲಿ ಸುತ್ತಿನೋಡಿ ದುರ್ಯೋಧನನೇ ಮೊದಲಾಗಿ ಕುರುಕ್ಷೇತ್ರದಲ್ಲಿ ಸತ್ತ ಎಲ್ಲ ರಾಜಕುಮಾರರನ್ನೂ ತಂದು ಒಟ್ಟಿಗೆ ಬೆಟ್ಟದಂತೆ ರಾಶಿಮಾಡಿದರು; ರಾಶಿಮಾಡಿ- ಕರ್ಣನ ಶರೀರವನ್ನು ಅಷ್ಟು ಜನವನ್ನೂ ಮೀರುವ ರೀತಿಯಲ್ಲಿ ಬ್ರಾಹ್ಮಣರಿಂದ ವಿಧಿಪೂರ್ವಕವಾಗಿ ಇರಿಸಿ, ಶ್ರೀಗಂಧ, ಕರ್ಪೂರ, ಕರಿಯ ಅಗರು ಸೌದೆಯಿಂದ ಶಾಸ್ತ್ರದಲ್ಲಿ ಹೇಳಿರುವಂತೆ ಸಂಸ್ಕಾರಮಾಡಿದರು. ಕರ್ಣನ ಜ್ಞಾಪಕಾರ್ಥವಾಗಿ ಕರ್ಣಸ್ಥಳಿಯೆಂಬ ಕ್ಷೇತ್ರವನ್ನು ನಿರ್ಮಿಸಿದರು. ತರ್ಪಣವೇ ಮೊದಲಾದ ಕ್ರಿಯೆಗಳನ್ನು ಮಾಡಿ ಮುಗಿಸಿದರು. ಧೃತರಾಷ್ಟ್ರನೂ ಗಾಂಧಾರಿಯೂ ಮಕ್ಕಳನ್ನು ಅಗಲಿದ ದುಖದಿಂದ ಋಷಿಗಳ ತಪೋವನವನ್ನು ಆಶ್ರಯಿಸಿದರು. ಕುಂತೀದೇವಿಯೂ ಕರ್ಣನ ದುಖದಿಂದ ಧರ್ಮರಾಯನ ಅಪ್ಪಣೆಯನ್ನು ಪಡೆದು ಹೊರಟು ತಪಸ್ಸಿನಲ್ಲಿ ನಿರತಳಾದಳು. ಈ ಕಡೆ ಧರ್ಮರಾಯನು ಕೃಷ್ಣನಿಗೆ ಹೀಗೆಂದನು-
ಮ|| ಇನಿತೊಂದುಗ್ರರಣಪ್ರಘಟ್ಟಕದೊಳೀ ಭಾರಾವತಾರಂ ಧರಾಂ
ಗನೆಗೀಯಿರ್ವರಿನಾದುದಾಯ್ತೆನಗೆ ನಿರ್ದಾಯಾದ್ಯಮೀ ಸಾ|
ಲ್ಗೆನಗಿಂ ರಾಜ್ಯಮೆ ಬಾೞ್ತೆಯಲ್ತು ಹರಿಗಂಗುತ್ಸಾಹದಿಂ ಪಟ್ಟ ಬಂ
ಧನಮಂ ಮಾಡುವಮಿಂದೆ ಹಸ್ತಿನಪುರಪ್ರಸ್ಥಾನಮಂ ಮಾಡುವಂ|| ೧೧ ||
ಪದ್ಯ-೧೧:ಪದವಿಭಾಗ-ಅರ್ಥ:ಇನಿತೊಂದು ಉಗ್ರರಣಪ್ರಘಟ್ಟಕದೊಳು ಈ ಭಾರಾವತಾರಂ (ಇಷ್ಟು ಭಯಂಕರವಾದ ಈ ಯುದ್ಧಸಮಾರಂಭದಲ್ಲಿ ಈ) ಧರಾಂನೆಗೆ ಈ ಇರ್ವರಿಂ ಆದುದು ಆಯ್ತು ಎನಗೆ ನಿರ್ದಾಯಾದ್ಯಂ (ನನಗೆ ದಾಯಾದಿಗಳಿಲ್ಲದಿರುವುದೂ ಆಯಿತು.) ಸಾಲ್ಗೆ ಎನಗಿಂ ರಾಜ್ಯಮೆ ಬಾೞ್ತೆ ಯಲ್ತು (ನನಗೆ ಇನ್ನು ರಾಜ್ಯದಿಂದ ಪ್ರಯೋಜನವಿಲ್ಲ.) ಹರಿಗಂಗೆ ಉತ್ಸಾಹದಿಂ ಪಟ್ಟ ಬಂಧನಮಂ ಮಾಡುವಂ (ಹರಿಗನಾದ ಅರ್ಜುನನಿಗೆ ಇಂದೇ ಪಟ್ಟಾಭಿಷೇಕವನ್ನು ಮಾಡೋಣ,) ಇಂದೆ ಹಸ್ತಿನಪುರಪ್ರಸ್ಥಾನಮಂ ಮಾಡುವಂ (ಈ ದಿನವೇ ಹಸ್ತಿನಾಪುರಕ್ಕೆ ಪ್ರಯಾಣ ಮಾಡೋಣ. )
ಪದ್ಯ-೧೧:ಅರ್ಥ: ಇಷ್ಟು ಭಯಂಕರವಾದ ಈ ಯುದ್ಧಸಮಾರಂಭದಲ್ಲಿ ಈ ಭೀಮಾರ್ಜುನರಿಬ್ಬರಿಂದ ಭೂದೇವಿಗೆ ಈ ಭಾರದ ಇಳಿಯುವಿಕೆ ಆಯಿತು. ನನಗೆ ದಾಯಾದಿಗಳಿಲ್ಲದಿರುವುದೂ ಆಯಿತು. ಈ ವೈಭವವೇ ನನಗೆ ಸಾಕು. ನನಗೆ ಇನ್ನು ರಾಜ್ಯದಿಂದ ಪ್ರಯೋಜನವಿಲ್ಲ. ಹರಿಗನಾದ ಅರ್ಜುನನಿಗೆ ಇಂದೇ ಪಟ್ಟಾಭಿಷೇಕವನ್ನು ಮಾಡೋಣ, ಈ ದಿನವೇ ಹಸ್ತಿನಾಪುರಕ್ಕೆ ಪ್ರಯಾಣ ಮಾಡೋಣ.
ವ|| ಎಂಬುದುಮಶೇಷ ಧರಾಭಾರಮಂ ಶೇಷಂ ತಾಳ್ದುವಂತೆ ವಿಕ್ರಮಾರ್ಜುನಂಗಲ್ಲದೆ ಪೆಱಂಗೆ ತಾಳ್ದಲರಿದಿದರ್ಕಾನುಮೊಡಂಬಡುವೆನೆಂದು ಮುಕುಂದನನೇಕ ಮುಕುಂದಬೃಂದಂಗಳ್ ಮೊೞಗೆ ಶುಭಮೂಹೂರ್ತದೊಳರಿಕೇಸರಿಯಂ ಮುಂದಿಟ್ಟು ಹಸ್ತಿನಪುರೋಪವನಮನೆಯ್ದೆ ವಂದಾಗಳ್-
ವಚನ:ಪದವಿಭಾಗ-ಅರ್ಥ:ಎಂಬುದುಂ ಶೇಷ ಧರಾಭಾರಮಂ ಶೇಷಂ ತಾಳ್ದುವಂತೆ (ಎನ್ನಲು “ಸಮಸ್ತಭೂಭಾರವನ್ನೂ ಆದಿಶೇಷನು ಧರಿಸುವ ಹಾಗೆ) ವಿಕ್ರಮಾರ್ಜುನಂಗೆ ಅಲ್ಲದೆ ಪೆಱಂಗೆ ತಾಳ್ದಲರಿದು ಇದರ್ಕೆ ಆನುಂ ಒಡಂಬಡುವೆನು ಎಂದು( ವಿಕ್ರಮಾರ್ಜುನನಲ್ಲದೆ ಬೇರೆಯವರಿಗೆ ಧರಿಸಲಸಾಧ್ಯ; ಇದಕ್ಕೆ ನಾನೂ ಒಪ್ಪುತ್ತೇನೆ” ಎಂದು.) ಮುಕುಂದನು ಅನೇಕ ಮುಕುಂದ ಬೃಂದಂಗಳ್ ಮೊೞಗೆ (ಎಂದು ಕೃಷ್ಣನು ಅನೇಕ ಮಂಗಳವಾದ್ಯಗಳ ಸಮೂಹವು ಭೋರ್ಗರೆಯುತ್ತಿರಲು) ಶುಭಮೂಹೂರ್ತದೊಳ್ ಅರಿಕೇಸರಿಯಂ ಮುಂದಿಟ್ಟು ಹಸ್ತಿನಪುರ ಉಪವನಮನು ಎಯ್ದೆ ವಂದಾಗಳ್ (ಶುಭಮುಹೂರ್ತದಲ್ಲಿ ಅರಿಕೇಸರಿಯನ್ನು ಮುಂದಿಟ್ಟು ಹಸ್ತಿನಾಪಟ್ಟಣದ ಸಮೀಪದಲ್ಲಿರುವ ತೋಟವನ್ನು ಸಮೀಪಿಸಿದನು.)-

ಅರ್ಜುನನಿಗೆ ಪಟ್ಟಾಭಿಷೇಕ[ಸಂಪಾದಿಸಿ]

ವಚನ:ಅರ್ಥ: ಧರ್ಮರಾಜನು ಅರ್ಜುನನಿಗೆ ಪಟ್ಟಕಟ್ಟೋಣ- ಎನ್ನಲು “ಸಮಸ್ತಭೂಭಾರವನ್ನೂ ಆದಿಶೇಷನು ಧರಿಸುವ ಹಾಗೆ ವಿಕ್ರಮಾರ್ಜುನನಲ್ಲದೆ ಬೇರೆಯವರಿಗೆ ಧರಿಸಲಸಾಧ್ಯ; ಇದಕ್ಕೆ ನಾನೂ ಒಪ್ಪುತ್ತೇನೆ”. ಎಂದು ಕೃಷ್ಣನು ಅನೇಕ ಮಂಗಳವಾದ್ಯಗಳ ಸಮೂಹವು ಭೋರ್ಗರೆಯುತ್ತಿರಲು ಶುಭಮುಹೂರ್ತದಲ್ಲಿ ಅರಿಕೇಸರಿಯನ್ನು ಮುಂದಿಟ್ಟು ಹಸ್ತಿನಾಪಟ್ಟಣದ ಸಮೀಪದಲ್ಲಿರುವ ತೋಟವನ್ನು ಸಮೀಪಿಸಿದನು.
ಚಂ|| ಮೃದುಮಧುರಸ್ವನಂ ನೆಗೞೆ ಬಂದೆಳಮಾವಿನೊಳಿರ್ದು ಕೂಡೆ ಪಾ
ಡಿದುದು ಮದಾಳಿಮಾಲೆ ಪುಗಲೆನ್ನದೆ ಪುಗಲೆನ್ನದೆ ದಲ್ ಪುಗಿಮೆಂದು ಮೆಲ್ಪುಗುಂ|
ದದ ದನಿಯಿಂ ತಳಿರ್ತಸುಗೆಯೊಳ್ ನೆಲಸಿರ್ದ ಪಿಕಾಳಿ ಮೆಲ್ಲನೂ
ಳ್ದುದು ಮನಮಾ ತೀಡಿದುದು ತೆಂಕಣ ತಂಬೆಲರಪ್ಪಿಕೊಳ್ವವೋಲ್|| ೧೨ ||
ಪದ್ಯ-೧೨:ಪದವಿಭಾಗ-ಅರ್ಥ:ಮೃದುಮಧುರ ಸ್ವನಂ ನೆಗೞೆ ( ಮೃದುಮಧುರವಾದ ಧ್ವನಿಯು ಉಂಟಾಗಲು) ಬಂದ ಎಳಮಾವಿನೊಳಿರ್ದು ( ಹೂಬಿಟ್ಟ ಎಳಮಾವಿನ ಮರದಲ್ಲಿದ್ದುಕೊಂಡು) ಕೂಡೆ ಪಾಡಿದುದು ಮದಾಳಿಮಾಲೆ (ಮದಿಸಿದ ದುಂಬಿಯ ಸಮೂಹವು ಕೂಡಲೆ ಹಾಡಿತು.) ಪುಗಲ್ ಎನ್ನದೆ ಪುಗಲ್ ಎನ್ನದೆ ದಲ್ ಪುಗಿಮೆಂದು ಮೆಲ್ಪುಗುಂದದ ದನಿಯಿಂ (ಪ್ರವೇಶಮಾಡಬೇಡ ಎನ್ನದೆ ಪ್ರವೇಶಮಾಡಿ ಎಂದು ಮೆಲ್ಲನೆ/ಮೃದು ದನಿ ಕುಂದದ ಧ್ವನಿಯಿಂದ) ತಳಿರ್ತ ಅಸುಗೆಯೊಳ್ ನೆಲಸಿರ್ದ ಪಿಕಾಳಿ (ಚಿಗುರಿದ ಅಶೋಕಮರದಲ್ಲಿ ನೆಲಸಿದ್ದ ಕೋಗಿಲೆಗಳ ಗುಂಪು) ಮೆಲ್ಲನೆ ಊಳ್ದುದು (ನಿಧಾನವಾಗಿ ಕೂಗಿತು.) ಮನಮಾ ತೀಡಿದುದು ತೆಂಕಣ ತಂಬೆಲರ್ ಅಪ್ಪಿಕೊಳ್ವವೋಲ್ (ಮನಸ್ಸಿಗೆ ತೃಪ್ತಿಯಾಗುವಂತೆ ಆಲಿಂಗನ ಮಾಡಿಕೊಳ್ಳುವ ಹಾಗೆ ದಕ್ಷಿಣದಿಕ್ಕಿನ ತಂಗಾಳಿಯು ಬೀಸಿತು)
ಪದ್ಯ-೧೨:ಅರ್ಥ: ಮೃದುಮಧುರವಾದ ಧ್ವನಿಯು ಉಂಟಾಗಲು, ಹೂವುಬಿಟ್ಟ ಎಳಮಾವಿನ ಮರದಲ್ಲಿದ್ದುಕೊಂಡು ಮದಿಸಿದ ದುಂಬಿಯ ಸಮೂಹವು ಕೂಡಲೆ ಹಾಡಿತು. ಪ್ರವೇಶಮಾಡಬೇಡ ಎನ್ನದೆ ಪ್ರವೇಶಮಾಡಿ ಎಂದು ಮೆಲ್ಲನೆ/ಮೃದು ದನಿ ಕುಂದದ ಧ್ವನಿಯಿಂದ ಚಿಗುರಿದ ಅಶೋಕಮರದಲ್ಲಿ ನೆಲಸಿದ್ದ ಕೋಗಿಲೆಗಳ ಗುಂಪು ನಿಧಾನವಾಗಿ ಕೂಗಿತು. ಮನಸ್ಸಿಗೆ ತೃಪ್ತಿಯಾಗುವಂತೆ ಆಲಿಂಗನ ಮಾಡಿಕೊಳ್ಳುವ ಹಾಗೆ ದಕ್ಷಿಣದಿಕ್ಕಿನ ತಂಗಾಳಿಯು ಬೀಸಿತು
ಚಂ|| ಪಸರಿಸಿ ಬಂದ ಮಾಮರನೆ ಬೆಳ್ಗೊಡೆ ರಾಗದ ಪುಂಜದನ್ನವ
ಪ್ಪಸುಗೆಯ ನೀಳ್ದ ಕೆಂದಳಿರೆ ಪಾಳಿಮಹಾಧ್ವಜಮೆತ್ತಮಿಂಪನಾ|
ಳ್ದೆಸೆವಳಿಗೀತಿ ತಾನೆ ಜಯಗೀತಿಗಳಾಗಿರೆ ವಿಕ್ರಮಾರ್ಜುನಂ
ಗೊಸೆದಿದಿರ್ವರ್ಪವೋಲ್ ಬನವದೊಪ್ಪಿದುದಿಂತು ಬಸಂತರಾಜನಾ|| ೧೩ ||
ಪದ್ಯ-೧೩:ಪದವಿಭಾಗ-ಅರ್ಥ:ಪಸರಿಸಿ ಬಂದ ಮಾಮರನೆ ಬೆಳ್ಗೊಡೆ (ಚಿಗುರಿ ಹೂವಾದ ಮಾವಿನಮರವೇ ಶ್ವೇತಚ್ಛತ್ರ;) ರಾಗದ ಪುಂಜದನ್ನವಪ್ಪ ಅಸುಗೆಯ ನೀಳ್ದ ಕೆಂದಳಿರೆ ಪಾಳಿ (ಕೆಂಪುಬಣ್ಣದ ರಾಶಿಯಂತಿರುವ ಅಶೋಕವೃಕ್ಷದ ಕೆಂಪುಚಿಗುರೇ ಪಾಳಿಧ್ವಜಗಳು.) ಮಹಾಧ್ವಜಂ ಎತ್ತಂ ಇಂಪನಾಳ್ದು ಎಸೆವ ಅಳಿಗೀತಿ ತಾನೆ ಜಯಗೀತಿಗಳಾಗಿರೆ (ಎಲ್ಲ ಕಡೆಯಲ್ಲಿಯೂ ಸೌಂದರ್ಯದಿಂದ ಕೂಡಿ ಪ್ರಕಾಶಿಸುವ ದುಂಬಿಯ ಹಾಡೇ ಜಯಗೀತೆಗಳಾಗಿರಲು) ವಿಕ್ರಮಾರ್ಜುನಂಗೆ ಒಸೆದು ಇದಿರ್ವರ್ಪವೋಲ್ (ವಿಕ್ರಮಾರ್ಜುನನನ್ನು ಪ್ರೀತಿಯಿಂದ ಸ್ವಾಗತಿಸುವ ಹಾಗೆ) ಬನವದೊಪ್ಪಿದುದು ಇಂತು ಬಸಂತರಾಜನಾ (ವಸಂತರಾಜನ ವನವು ಶೋಭಾಯಮಾನವಾಗಿತ್ತು. )
ಪದ್ಯ-೧೩:ಅರ್ಥ: ಚಿಗುರಿ ಹೂವಾದ ಮಾವಿನಮರವೇ ಶ್ವೇತಚ್ಛತ್ರ; ಕೆಂಪುಬಣ್ಣದ ರಾಶಿಯಂತಿರುವ ಅಶೋಕವೃಕ್ಷದ ಕೆಂಪುಚಿಗುರೇ ಪಾಳಿಧ್ವಜಗಳು. ಎಲ್ಲ ಕಡೆಯಲ್ಲಿಯೂ ಸೌಂದರ್ಯದಿಂದ ಕೂಡಿ ಪ್ರಕಾಶಿಸುವ ದುಂಬಿಯ ಹಾಡೇ ಜಯಗೀತೆಗಳಾಗಿರಲು, ವಿಕ್ರಮಾರ್ಜುನನನ್ನು ಪ್ರೀತಿಯಿಂದ ಸ್ವಾಗತಿಸುವ ಹಾಗೆ ವಸಂತರಾಜನ ವನವು ಶೋಭಾಯಮಾನವಾಗಿತ್ತು.
ವ|| ಆಗಳ್ ನಗರಪ್ರವೇಶಂಗೆಯ್ಯಲೆಂದು ಕಿಱದಾನುಂ ಬೇಗಮಾ ಪುರೋಪವನದೊಳ್ ವಿಶ್ರಮಿಸಿ ಪಂಚರತ್ನಮಯ ಮಂಡನಾಯೋಗ ಮಂಡಿತವಿಜಯಗಜಾರೂಢನಾದ ವಿಜಯನಂ ಮುಂದಿಟ್ಟು ಮಹಾವಿಭೂತಿಯಿಂದಯ್ವರುಂ ನಿಜಾನ್ವಯ ರಾಜದ್ರಾಜಧಾನಿಯಂ ಪುಗೆ-
ವಚನ:ಪದವಿಭಾಗ-ಅರ್ಥ:ಆಗಳ್ ನಗರಪ್ರವೇಶಂ ಗೆಯ್ಯಲೆಂದು ಕಿಱದಾನುಂ ಬೇಗಮ್ (ಆಗ ನಗರಪ್ರವೇಶಮಾಡಬೇಕೆಂದು ಸ್ವಲ್ಪ ಕಾಲ,) ಆ ಪುರ ಉಪವನದೊಳ್ ವಿಶ್ರಮಿಸಿ (ಆ ಪಟ್ಟಣದ ಸಮೀಪದ ತೋಟದಲ್ಲಿದ್ದು ವಿಶ್ರಾಂತಿ ಹೊಂದಿ) ಪಂಚರತ್ನಮಯ ಮಂಡನಾಯೋಗ ಮಂಡಿತ ವಿಜಯಗಜಾರೂಢನಾದ ವಿಜಯನಂ ಮುಂದಿಟ್ಟು (ಪಂಚರತ್ನದಿಂದ ಕೂಡಿದ ಆಭರಣಗಳ ಸಮೂಹದಿಂದ ಅಲಂಕರಿಸಲ್ಪಟ್ಟ ವಿಜಯಗಜವನ್ನು ಹತ್ತಿರುವ ಅರ್ಜುನನನ್ನು ಮುಂದುಮಾಡಿಕೊಂಡು) ಮಹಾವಿಭೂತಿಯಿಂದ ಅಯ್ವರುಂ ನಿಜಾನ್ವಯ ರಾಜದ್ರಾಜಧಾನಿಯಂ ಪುಗೆ (ಮಹಾವೈಭವದಿಂದ ಅಯ್ದು ಜನವೂ ತಮ್ಮ ವಂಶಪಾರಂಪರ್ಯವಾಗಿ ಬಂದು ಪ್ರಕಾಶಿಸುತ್ತಿರುವ ರಾಜಧಾನಿಯನ್ನು ಪ್ರವೇಶಿಸಿದರು. ಹೊಗಲು-)-
ವಚನ:ಅರ್ಥ:ಆಗ ನಗರಪ್ರವೇಶಮಾಡಬೇಕೆಂದು ಸ್ವಲ್ಪ ಕಾಲ ಆ ಪಟ್ಟಣದ ಸಮೀಪದ ತೋಟದಲ್ಲಿದ್ದು ವಿಶ್ರಾಂತಿ ಹೊಂದಿ ಪಂಚರತ್ನದಿಂದ ಕೂಡಿದ ಆಭರಣಗಳ ಸಮೂಹದಿಂದ ಅಲಂಕರಿಸಲ್ಪಟ್ಟ ವಿಜಯಗಜವನ್ನು ಹತ್ತಿರುವ ಅರ್ಜುನನನ್ನು ಮುಂದುಮಾಡಿಕೊಂಡು ಮಹಾವೈಭವದಿಂದ ಅಯ್ದು ಜನವೂ ತಮ್ಮ ವಂಶಪಾರಂಪರ್ಯವಾಗಿ ಬಂದು ಪ್ರಕಾಶಿಸುತ್ತಿರುವ ರಾಜಧಾನಿಯನ್ನು ಪ್ರವೇಶಿಸಿದರು.
ಮ|| ನವಕಾಳಾಗರುಧೂಪಧೂಮತತಿಸೌಗಂಧಂಗಳಿಂ ಸಯ್ತು ನೀ
ಳ್ದು ವಿಯಚ್ಚಕ್ರದೊಳಲ್ಲಿ ಮಂದಮರುತವ್ಯಾಘಾತದಿಂದೆಯ್ದೆ ತೋ|
ರ್ಪವೊಲಾಗಿರ್ದುದು ಕಣ್ಗೆ ವಂದುದು ಪುರಸ್ತ್ರೀ ಪಾಂಡುಪುತ್ರಂಗಮು
ತ್ಸವದಿಂ ಮುನ್ನರಿದಿರ್ದ ತನ್ನ ಪಿಣಿಲಂ ಕೂರ್ತಂದು ಬಿಟ್ಟಂತೆವೋಲ್|| ೧೪ ||
ಪದ್ಯ-೧೪:ಪದವಿಭಾಗ-ಅರ್ಥ:ನವ ಕಾಳಾಗರು ಧೂಪಧೂಮತತಿ ಸೌಗಂಧಂಗಳಿಂ (ಹೊಸದಾದ ಕರಿಯ ಅಗರುಧೂಪದ ಹೊಗೆಯ ಸಮೂಹವು ಸುವಾಸನೆಗಳಿಂದ ಕೂಡಿ,) ಸಯ್ತು ನೀಳ್ದು ವಿಯಚ್ಚಕ್ರದೊಳ್ (ನೇರವಾಗಿ ಆಕಾಶದಲ್ಲಿ) ಅಲ್ಲಿ ಮಂದಮರುತ ವ್ಯಾಘಾತದಿಂದ ಎಯ್ದೆ (ಅಲ್ಲಿ ನಿಧಾನವಾಗಿ ಬೀಸುವ ಗಾಳಿಯಿಂದ ಹೊಡೆಯಲ್ಪಟ್ಟು ಚೆನ್ನಾಗಿ ) ತೋರ್ಪವೊಲ್ ಆಗಿರ್ದುದು (ಆಕರ್ಷಕವಾಗುವ ಹಾಗೆ ಆಯಿತು.) ಕಣ್ಗೆ ವಂದುದು ಪುರಸ್ತ್ರೀ (ಪಟ್ಟಣವೆಂಬ ವನಿತೆ ಚೆನ್ನಾಗಿ ಆಕರ್ಷಕವಾಗುವ ಹಾಗೆ ಆಯಿತು.) ಪಾಂಡುಪುತ್ರಂಗಂ ಉತ್ಸವದಿಂ ಮುನ್ನ ಅರಿದಿರ್ದ(ಪಾಂಡುಪುತ್ರನಾದ ಅರ್ಜುನನಿಗಾಗಿ ಸಂತೋಷದಿಂದ ಮೊದಲು ಕತ್ತರಿಸಿದ್ದ) ತನ್ನ ಪಿಣಿಲಂ (ತನ್ನ ಜಡೆಯನ್ನು) ಕೂರ್ತಂದು ಬಿಟ್ಟಂತೆವೋಲ್ (ಈಗ ಪ್ರೀತಿಯಿಂದ ಇಳಿಯಬಿಟ್ಟ ಹಾಗೆ ಕಣ್ಣಿಗೆ ಮನೋಹರವಾಗಿ ಕಂಡಿತು.)
ಪದ್ಯ-೧೫:ಅರ್ಥ: ಹೊಸದಾದ ಕರಿಯ ಅಗರುಧೂಪದ ಹೊಗೆಯ ಸಮೂಹವು ಸುವಾಸನೆಗಳಿಂದ ಕೂಡಿ ನೇರವಾಗಿ ಆಕಾಶದಲ್ಲಿ ಉದ್ದವಾಗಿ ಹರಡಿ ಅಲ್ಲಿ ನಿಧಾನವಾಗಿ ಬೀಸುವ ಗಾಳಿಯಿಂದ ಹೊಡೆಯಲ್ಪಟ್ಟು ಚೆನ್ನಾಗಿ ಆಕರ್ಷಕವಾಗುವ ಹಾಗೆ ಆಯಿತು. ಪಟ್ಟಣವೆಂಬ ವನಿತೆ ಪಾಂಡುಪುತ್ರನಾದ ಅರ್ಜುನನಿಗಾಗಿ ಸಂತೋಷದಿಂದ ಮೊದಲು ಕತ್ತರಿಸಿದ್ದ ತನ್ನ ಜಡೆಯನ್ನು ಈಗ ಪ್ರೀತಿಯಿಂದ ಇಳಿಯಬಿಟ್ಟ ಹಾಗೆ ಕಣ್ಣಿಗೆ ಮನೋಹರವಾಗಿ ಕಂಡಿತು.
ಮಲ್ಲಿಕಮಾಲೆ|| ಓಳಿದೋರಣಮಾಯ್ತು ಹಾರದ ಪಚ್ಛೆಸಾರದ ಮಾಲೆ ಸೌ
ಧಾಳಿಯೊಳ್ಗುಡಿಯಾಯ್ತು ಚೀನದ ಸುಯ್ಯತಾಣದ ಪಟ್ಟೆ ಹ|
ರ್ಮ್ಯಾಳಿದಪ್ಪದೆ ರಯ್ಯಮಾಯ್ತೆಸೆವಾಟ ಪಾಟದ ಗೀತಿ ಕ
ಣ್ಗೋಳಿವಟ್ಟುದದೊಂದು ಚೆಲ್ವು ದಲಾಯ್ತು ತತ್ಪುರಮಧ್ಯದೊಳ್|| ೧೫ ||
ಪದ್ಯ-೧೫:ಪದವಿಭಾಗ-ಅರ್ಥ:ಓಳಿ (ದೋ) ತೋರಣಮಾಯ್ತು ಹಾರದ ಪಚ್ಛೆಸಾರದ ಮಾಲೆ (ಆ ಪಟ್ಟಣದ ಮಧ್ಯದಲ್ಲಿ ಹಾರವಾಗಿ ಮಾಡಿರುವ ಹಸಿರುವಾಣಿಯ ಸಾರವತ್ತಾದ ತೋರಣಗಳು ಸಾಲಾಗಿ ರಂಜಿಸಿದುವು. ) ಸೌಧಾಳಿಯೊಳ್ ಗುಡಿಯಾಯ್ತು ಚೀನದ ಸುಯ್ಯತಾಣದ ಪಟ್ಟೆ (ಉಪ್ಪರಿಗೆಗಳ ಸಾಲಿನಲ್ಲಿ ರೇಷ್ಮೆಯ ಕಸೂತಿ ಕೆಲಸಮಾಡಿದ ನವುರಾದ ಬಟ್ಟೆಗಳು ಒಳ್ಳೆಯ ಬಾವುಟಗಳಾದವು; ) ಹರ್ಮ್ಯಾಳಿ (ದ) ತಪ್ಪದೆ ರಯ್ಯಮಾಯ್ತು ಎಸೆವಾಟ ಪಾಟದ ಗೀತಿ (ಎಲ್ಲ ಸೌಧದ ಉಪ್ಪರಿಗೆಗಳಲ್ಲಿಯ ಶೋಬಿಸುವ ಆಟ ಪಾಟ- ಸಂಗೀತಗಳು ರಮ್ಯವಾಯಿತು) ಕಣ್ಗೋಳಿವಟ್ಟುದು ಅದೊಂದು ಚೆಲ್ವು ದಲ್ ಆಯ್ತು ತತ್ಪುರ ಮಧ್ಯದೊಳ್ (ಆ ನಗರದ ನಡುವೆ ಅದೊಂದು ಸೊಗಸು ಕಣ್ಣಿಗೆ ಸೌಂದರ್ಯ ರಾಶಿಯಾಗಿ ಕಂಡಿತು.)
ಪದ್ಯ-೧೫:ಅರ್ಥ: ಆ ಪಟ್ಟಣದ ಮಧ್ಯದಲ್ಲಿ ಹಾರವಾಗಿ ಮಾಡಿರುವ ಹಸಿರುವಾಣಿಯ ಸಾರವತ್ತಾದ ತೋರಣಗಳು ಸಾಲಾಗಿ ರಂಜಿಸಿದುವು. ಉಪ್ಪರಿಗೆಗಳ ಸಾಲಿನಲ್ಲಿ ರೇಷ್ಮೆಯ ಕಸೂತಿ ಕೆಲಸಮಾಡಿದ ನವುರಾದ ಬಟ್ಟೆಗಳು ಒಳ್ಳೆಯ ಬಾವುಟಗಳಾದವು; ಎಲ್ಲ ಸೌಧದ ಉಪ್ಪರಿಗೆಗಳಲ್ಲಿಯ ಆಟ ಸಂಗೀತಗಳು ರಮ್ಯವಾಯಿತು. ನೃತ್ಯ ಸಂಗೀತ ಹಾಡುಗಳು ಮನೋಹರವಾದುವು. ಆ ನಗರದ ನಡುವೆ ಅದೊಂದು ಸೊಗಸು ಕಣ್ಣಿಗೆ ಸೌಂದರ್ಯ ರಾಶಿಯಾಗಿ ಕಂಡಿತು.
ಮಾಲಿನಿ|| ಪ್ರವರತರ ಪುರಂನೂಪುರಾರಾವಮೆತ್ತಂ
ಕಿವಿಗೆ ವರೆ ವಿಳಾಸಂ ಕಣ್ಗೆ ಶೇಷಾಕ್ಷತೌಘ|
ದ್ರವಮೆ ತಮಗಮಿತ್ತತ್ತಿಂಬನೆಂಬನ್ನೆಗಂ ಪಾಂ
ಡವರೆ ಪುಗೆ ಪೊೞಲ್ಗಂದೊಟ್ಟ ಬೆಟ್ಟಾಯ್ತು ರಾಗಂ|| ೧೬ ||
ಪದ್ಯ-೧೬:ಪದವಿಭಾಗ-ಅರ್ಥ:ಪ್ರವರತರ ಪುರಂ ನೂಪುರಾರಾವಂ ಎತ್ತಂ ಕಿವಿಗೆ ವರೆ (ಅತಿಶ್ರೇಷ್ಠರಾದ ಅಂತಪುರಸ್ತ್ರೀಯರ ಕಾಲಂದಿಗೆಯ ಧ್ವನಿಯು ಎಲ್ಲ ಕಡೆಯಲ್ಲಿಯೂ ಕೇಳಿಸುತ್ತಿರಲು) ವಿಳಾಸಂ(ಸೊಗಸು) ಕಣ್ಗೆ ಶೇಷಾಕ್ಷತೌಘ ದ್ರವಮೆ (ಆಶೀರ್ವಾದದ ಅಕ್ಷತೆಗಳ ಸಮೂಹವು) ತಮಗಂ ಇತ್ತ ಅತ್ತ ಇಂಬಂ (ಸಣತೋಷ) ಎಂಬ ಅನ್ನೆಗಂ (ಕಣ್ಣುಗಳಿಗೆ ವೈಭವವು ತೋರಿ ಬರಲು, ಆಶೀರ್ವಾದದ ಅಕ್ಷತೆಗಳ ಸಮೂಹವು ತಮಗೂ ಸಂತೋಷವನ್ನೂ ಕೊಟ್ಟಿತು ಎನ್ನುತ್ತಿರಲು ) ಪಾಂಡವರೆ ಪುಗೆ ಪೊೞಲ್ಗೆ (ಪುರ, ನಗರ)ಅಂದು ಒಟ್ಟ ಬೆಟ್ಟಾಯ್ತು ರಾಗಂ (ಪಾಂಡವರೇ ಪುರಪ್ರವೇಶಮಾಡಲು ಅಂದು ಸಂತೋಷವು ಬೆಟ್ಟದಷ್ಟಾಯಿತು,-ಅತ್ಯತಿಶಯವಾಯಿತು.)
ಪದ್ಯ-೧೬:ಅರ್ಥ: ಅತಿಶ್ರೇಷ್ಠರಾದ ಅಂತಪುರಸ್ತ್ರೀಯರ ಕಾಲಂದಿಗೆಯ ಧ್ವನಿಯು ಎಲ್ಲ ಕಡೆಯಲ್ಲಿಯೂ ಕೇಳಿಸುತ್ತಿರಲು ಕಣ್ಣುಗಳಿಗೆ ವೈಭವವು ತೋರಿ ಬರಲು, ಆಶೀರ್ವಾದದ ಅಕ್ಷತೆಗಳ ಸಮೂಹವು ತಮಗೂ ಸಂತೋಷವನ್ನೂ ಕೊಟ್ಟಿತು ಎನ್ನುತ್ತಿರಲು ಪಾಂಡವರೇ ಪುರಪ್ರವೇಶಮಾಡಲು ಅಂದು ಸಂತೋಷವು ಬೆಟ್ಟದಷ್ಟಾಯಿತು,-ಅತ್ಯತಿಶಯವಾಯಿತು.
ವ|| ಅಂತು ಪುರುಜನಜನಿತಾಶೀರ್ವಾದಸಹಸ್ರಂಗಳೊಡನೆ ಸೂಸುವ ಶೇಷಾಕ್ಷತಂಗಳ ನಾನುತ್ತುಂ ಬಂದು ತತ್ಪುರಾಂಗನೆಯ ಮುಖಸರಸಿಜಮಲರ್ದಂತೆಸೆದೊಪ್ಪುವ ರಾಜಮಂದಿರಮಂ ಪೊಕ್ಕು ಧರ್ಮನಂದನಂ ದೇವಕೀನಂದನನೊಳ್ ಪರಮಾನಂದಂ ಬೆರಸು ಸಾಮಂತ ಚೂಡಾಮಣಿಯ ಪಟ್ಟಬಂಧನ ಮಹೋತ್ಸವಮಂ ಸಮಕೊಳಿಸಿ ವಿಕ್ರಮಾರ್ಜುನನನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ಪುರುಜನ ಜನಿತಾಶೀರ್ವಾದ ಸಹಸ್ರಂಗಳೊಡನೆ (ಹಾಗೆ ಪಟ್ಟಣದ ಜನಗಳಿಂದ ಉದ್ಭವವಾದ ಆಶೀರ್ವಾದ ಸಹಸ್ರಗಳೊಡನೆ,) ಸೂಸುವ ಶೇಷಾಕ್ಷತಂಗಳನು ಆನುತ್ತುಂ ಬಂದು (ಅವರು ಚೆಲ್ಲುವ ಮಂತ್ರಾಕ್ಷತೆಗಳನ್ನೂ ತಲೆಯಲ್ಲಿ ಧರಿಸುತ್ತ ಬಂದು), ತತ್ಪುರಾಂಗನೆಯ- ತತ್ ಪುರ ಅಂಗನೆಯ ಮುಖಸರಸಿಜಂ ಅಲರ್ದಂತೆ ಎಸೆದು ಒಪ್ಪುವ ರಾಜಮಂದಿರಮಂ ಪೊಕ್ಕು (ಆ ಪುರಸ್ತ್ರೀಯ ಮುಖಕಮಲವು ಅರಳಿದಂತೆ ಪ್ರಕಾಶಿಸುತ್ತಿರುವ ಅರಮನೆಯನ್ನು ಹೊಕ್ಕು-, ಪ್ರವೇಶೀಸಿದರು.) ಧರ್ಮನಂದನಂ ದೇವಕೀನಂದನನೊಳ್ ಪರಮಾನಂದಂ ಬೆರಸು (ಧರ್ಮರಾಜನು ಕೃಷ್ಣನೊಡನೆ ವಿಶೇಷ ಸಂತೋಷದಿಂದ ಕೂಡಿ) ಸಾಮಂತ ಚೂಡಾಮಣಿಯ ಪಟ್ಟಬಂಧನ ಮಹೋತ್ಸವಮಂ ಸಮಕೊಳಿಸಿ (ಸಾಮಂತಚೂಡಾಮಣಿಯಾದ ಅರ್ಜುನನ ಪಟ್ಟಾಭಿಷೇಕಮಹೋತ್ಸವವನ್ನೇರ್ಪಡಿಸಿ ) ವಿಕ್ರಮಾರ್ಜುನನನು ಇಂತೆಂದಂ (ಅರ್ಜುನನನ್ನು ಕುರಿತು ಹೀಗೆಂದನು)-
ವಚನ:ಅರ್ಥ:ಹಾಗೆ ಪಟ್ಟಣದ ಜನಗಳಿಂದ ಉದ್ಭವವಾದ ಆಶೀರ್ವಾದ ಸಹಸ್ರಗಳೊಡನೆ, ಅವರು ಚೆಲ್ಲುವ ಮಂತ್ರಾಕ್ಷತೆಗಳನ್ನೂ ತಲೆಯಲ್ಲಿ ಧರಿಸುತ್ತ ಬಂದು ಆ ಪುರಸ್ತ್ರೀಯ ಮುಖಕಮಲವು ಅರಳಿದಂತೆ ಪ್ರಕಾಶಿಸುತ್ತಿರುವ ಅರಮನೆಯನ್ನು ಪ್ರವೇಶೀಸಿದರು. ಧರ್ಮರಾಜನು ಕೃಷ್ಣನೊಡನೆ ವಿಶೇಷ ಸಂತೋಷದಿಂದ ಕೂಡಿ ಸಾಮಂತಚೂಡಾಮಣಿಯಾದ ಅರ್ಜುನನ ಪಟ್ಟಾಭಿಷೇಕಮಹೋತ್ಸವವನ್ನೇರ್ಪಡಿಸಿ ಅರ್ಜುನನನ್ನು ಕುರಿತು ಹೀಗೆಂದನು-
ಉ|| ಪ್ರಾಯದ ಪೆಂಪೆ ಪೆಂಪೆಮಗೆ ಮೀಱಿದರಂ ತವೆ ಕೊಂದ ಪೆಂಪು ಕ
ಟ್ಟಾಯದ ಪೆಂಪು ಶಕ್ರನೊಡನೇಱಿದ ಪೆಂಪಿವು ಪೆಂಪುವೆತ್ತು ನಿ|
ಟ್ಟಾಯುಗಳಾಗಿ ನಿನ್ನೊಳಮರ್ದಿರ್ದುವು ನೀಂ ತಲೆವೀಸದುರ್ವರಾ
ಶ್ರೀಯನಿದಾಗದೆನ್ನದೊಳಕೊಳ್ ಪರಮೋತ್ಸವದಿಂ ಗುಣಾರ್ಣವಾ|| ೧೭ ||
ಪದ್ಯ-೧೭:ಪದವಿಭಾಗ-ಅರ್ಥ:ಪ್ರಾಯದ ಪೆಂಪೆ ಪೆಂಪು (ಸಹಜವಾಗಿ ಪ್ರಾಯದ ಹಿರಿಮೆಯೇ ಹಿರಿಮೆ ಮತ್ತು ಸೊಗಸು) ಎಮಗೆ ಮೀಱಿದರಂ ತವೆ ಕೊಂದ ಪೆಂಪು (ನಮಗೆ ನಮ್ಮನ್ನು ಅತಿಕ್ರಮಿಸಿದವರನ್ನು ನಾಶವಾಗುವಂತೆ ಕೊಂದ ಹಿರಿಮೆ) ಕಟ್ಟಾಯದ ಪೆಂಪು (ಅತ್ಯಧಿಕವಾದ ಪರಾಕ್ರಮದ ಹಿರಿಮೆ;) ಶಕ್ರನೊಡನೆ ಏಱಿದ ಪೆಂಪು (ನಿನ್ನದು ಇಂದ್ರನೊಡನೆ ಅವನ ಅರ್ಧಾಸನವನ್ನು ಹತ್ತಿದ ವೈಭವ) ಇವು ಪೆಂಪುವೆತ್ತು ನಿಟ್ಟಾಯುಗಳಾಗಿ ನಿನ್ನೊಳು ಅಮರ್ದು ಇರ್ದುವು ( ಇವು ಆಧಿಕ್ಯವನ್ನು ಹೊಂದಿ ದೀರ್ಘಾಯುವಾಗಿ ನಿನ್ನಲ್ಲಿ ಸೇರಿಕೊಂಡು ಇದ್ದವು.) ನೀಂ ತಲೆವೀಸದೆ (ನೀನು ತಲೆಬೀಸದೆ (ಅಸಮ್ಮತಿಯನ್ನುಪ್ರದರ್ಶಿಸದೆ)) ಉರ್ವರಾಶ್ರೀಯಂ ಇದಾಗದು ಎನ್ನದೆ (ಇದು ನನ್ನಿಂದಾಗುವುದಿಲ್ಲ ಎನ್ನದೆ ಈ ರಾಜ್ಯಸಂಪತ್ತನ್ನು) ಒಳಕೊಳ್ ಪರಮ ಉತ್ಸವದಿಂ ಗುಣಾರ್ಣವಾ ( ಅತ್ಯಂತ ಸಂತೋಷದಿಂದ ನೀನು ಅಂಗೀಕರಾಮಾಡು.)
ಪದ್ಯ-೧೭:ಅರ್ಥ: ಗುಣಾರ್ಣವಾ, ಜಗತ್ತಿನಲ್ಲಿ ಸಹಜವಾಗಿ ಪ್ರಾಯದ ಹಿರಿಮೆಯೇ ಹಿರಿಮೆ; ಆದರೆ ನಮಗೆ ನಮ್ಮನ್ನು ಅತಿಕ್ರಮಿಸಿದವರನ್ನು ನಾಶವಾಗುವಂತೆ ಕೊಂದ ಹಿರಿಮೆ; ಅತ್ಯಧಿಕವಾದ ಪರಾಕ್ರಮದ ಹಿರಿಮೆ; ನಿನ್ನದು ಇಂದ್ರನೊಡನೆ ಅವನ ಅರ್ಧಾಸನವನ್ನು ಹತ್ತಿದ ವೈಭವ. ಇವು ಆಧಿಕ್ಯವನ್ನು ಹೊಂದಿ ದೀರ್ಘಾಯುವಾಗಿ ನಿನ್ನಲ್ಲಿ ಸೇರಿಕೊಂಡು ಇದ್ದವು. ಅರ್ಜುನ, ನೀನು ತಲೆಬೀಸದೆ (ಅಸಮ್ಮತಿಯನ್ನುಪ್ರದರ್ಶಿಸದೆ) ಇದು ನನ್ನಿಂದಾಗುವುದಿಲ್ಲ ಎನ್ನದೆ ಈ ರಾಜ್ಯಸಂಪತ್ತನ್ನು ಅತ್ಯಂತ ಸಂತೋಷದಿಂದ ನೀನು ಅಂಗೀಕರಾಮಾಡು.
ವ|| ಎಂದು ಧರ್ಮಪುತ್ರನುಂ ದೇವಕೀಪುತ್ರನುಂ ಮರುತ್ಪುತ್ರನುಮಮರೇಂದ್ರ ಪುತ್ರನನೆಂತಾನುಮೊಡಂಬಡಿಸಿ ನಾಳೆ ಪಟ್ಟಬದ್ಧೋತ್ಸವಮೆಂದು ಮುನ್ನಿನ ದಿವಸಂ ಮಯನಿಂ ಪಂಚರತ್ನಮಯಮಾದ ಸಭಾಮಂಟಪಮಂ ತರಿಸಿ ವಸಿಷ್ಠ ಕಶ್ಯಪ ವ್ಯಾಸ ವಿಶ್ವಾಮಿತ್ರ ಭರದ್ವಾಜಾದಿ ಮುನಿಪತಿಗಳಂ ಬರಿಸಿ ಮಾತಳಿಯ ಕೆಯ್ಯೊಳ್ ದೇವೇಂದ್ರನಟ್ಟಿದ ಕಲ್ಪವೃಕ್ಷದ ತಳಿರ್ಗಳನೈರಾವತದ ಹರವೃಷಭದ ಕೋಡ ಮಣ್ಣುಮನಾಕಾಶಗಂಗೆಯ ನೀರುಮಂ ಮಂದಾರಪಾರಿಜಾತದ ಪೂಮಾಲೆಗಳುಮಂ ವರುಣದೇವನಟ್ಟಿದ ಕ್ಷಾರಕ್ಷೀರೇಕ್ಷುದಮಧುಘೃತಸ್ವಾದೂದಕಂಗಳೆಂಬೇೞುಂ ಸಮುದ್ರಂಗಳ ಚತುರ್ದಶ ಮಹಾನದಿಗಳ ನೀರುಮಂ ತೞತೞ ತೊಳಗುವ ಕಳಧೌತ ಕಳಶಂಗಳೊಳ್ ತೆಕ್ಕನೆ ತೀವಿ ತಂದ ವಾರವನಿತಾಜನಕ್ಕಂ ಸಾಮಂತಚಕ್ರಕ್ಕಮುಡಲಿಕ್ಕಿ ಧವಳಚ್ಛತ್ರ ಚಾಮರಸಿಂಹಾಸನ ಪಟ್ಟವರ್ಧನಕುಲಧನಾದಿ ರಾಜ್ಯಚಿಹ್ನಂಗಳಂ ವಿವಿಧ ವಿಧಾನದಿಂದಮವಾಸಿಸಿ ಗಂಗಾಜಳಪವಿತ್ರೀಕೃತಗಾತ್ರನುಂ ಕೌಶೇಯ ಪರಿಧಾನನುಮಾಗಿರ್ದ ಮಾನನಿಧಾನನಂ ತಂದು ಪೊಡೆವಡಿಸಿ ಮಂಗಳಪಟಹಂಗಳುಂ ಮಂಗಳಗೀತಿಗಳುಮೆಸೆಯೆ ಕಳಕಳಾವರ್ತಮಾಗೆ ಜಾಗರಮಿರ್ದು ಮಱುದಿವಸಂ ಪ್ರಶಸ್ತ ಮೌಹೂರ್ತಿಕ ನಿರೂಪಿತ ಶುಭ ಲಗ್ನೋದಯ ದಿಂದಷ್ಟೋತ್ತರಶತ ಪೂರ್ಣಕುಂಭಂಗಳಂ ಚತುರ್ವೇದ ಪಾರಗರಪ್ಪ ಧರಾಮರರೆತ್ತಿಕೊಂಡು ಮಂತ್ರಪೂತ ಜಲಂಗಳಿಂ ಮೀಯಿಸಿ-
ವಚನ:ಪದವಿಭಾಗ-ಅರ್ಥ:ಎಂದು ಧರ್ಮಪುತ್ರನುಂ ದೇವಕೀಪುತ್ರನುಂ ಮರುತ್ಪುತ್ರನುಂ ಅಮರೇಂದ್ರ ಪುತ್ರನನು ಎಂತಾನುಂ ಒಡಂಬಡಿಸಿ (ಎಂದು ಧರ್ಮರಾಯನೂ ಕೃಷ್ಣನೂ ಭೀಮನೂ ಅರ್ಜುನನ್ನು ಹೇಗೂ ಒಪ್ಪಿಸಿದರು) ನಾಳೆ ಪಟ್ಟಬದ್ಧೋತ್ಸವಮೆಂದು ಮುನ್ನಿನ ದಿವಸಂ ಮಯನಿಂ ಪಂಚರತ್ನಮಯಮಾದ ಸಭಾಮಂಟಪಮಂ ತರಿಸಿ (ನಾಳೆಯೇ ಪಟ್ಟವನ್ನು ಕಟ್ಟುವ ದಿವಸವೆಂದು ದಾನವಲೋಕದ ಶಿಲ್ಪಿಯಾದ ಮಯನೆಂಬುವನಿಂದ ಪಂಚರತ್ನಮಯವಾದ ಸಭಾಮಂಟಪವನ್ನು ತರಿಸಿದರು.) ವಸಿಷ್ಠ ಕಶ್ಯಪ ವ್ಯಾಸ ವಿಶ್ವಾಮಿತ್ರ ಭರದ್ವಾಜಾದಿ ಮುನಿಪತಿಗಳಂ ಬರಿಸಿ ಮಾತಳಿಯ ಕೆಯ್ಯೊಳ್ ದೇವೇಂದ್ರನು ಅಟ್ಟಿದ ಕಲ್ಪವೃಕ್ಷದ ತಳಿರ್ಗಳನು ಐರಾವತದ ಹರವೃಷಭದ ಕೋಡ ಮಣ್ಣುಮನು (ಮಾತಲಿಯ ಕಯ್ಯಲ್ಲಿ ದೇವೇಂದ್ರನು ಕಲ್ಪವೃಕ್ಷದ ಚಿಗುರುಗಳನ್ನೂ ಐರಾವತವೆಂಬಾನೆಯೂ ಈಶ್ವರನ ನಂದಿಯೂ ಕೊಂಬಿನಿಂದ ಎಬ್ಬಿಸಿದ ಮಣ್ಣನ್ನೂ) ಆಕಾಶಗಂಗೆಯ ನೀರುಮಂ ಮಂದಾರ ಪಾರಿಜಾತದ ಪೂಮಾಲೆಗಳುಮಂ (ಆಕಾಶಗಂಗೆಯ ನೀರನ್ನು ನಮೇರು ಮಂದಾರ ಪಾರಿಜಾತಗಳೆಂಬ ದೇವಲೋಕದ ಮರಗಳ ಹೂವುಗಳಿಂದ ಕೂಡಿದ ನೀರುಗಳನ್ನೂ ಕಳುಹಿಸಿಕೊಟ್ಟನು.) ವರುಣದೇವನು ಅಟ್ಟಿದ ಕ್ಷಾರ ಕ್ಷೀರ ಇಕ್ಷುದ ಮಧು ಘೃತ ಸ್ವಾದ ಉದಕಂಗಳೆಂಬ ಏೞುಂ ಸಮುದ್ರಂಗಳ ಚತುರ್ದಶ ಮಹಾನದಿಗಳ ನೀರುಮಂ (ವರುಣದೇವನು ಉಪ್ಪು, ಹಾಲು, ಕಬ್ಬಿನ ರಸ, ಮೊಸರು, ಜೇನು, ತುಪ್ಪ, ಸಿಹಿನೀರುಗಳ ಏಳು ಸಮುದ್ರಗಳ ಮತ್ತು ಹದಿನಾಲ್ಕು ಮಹಾನದಿಗಳ ಪುಣ್ಯತೀರ್ಥವನ್ನು ಕಳುಹಿಸಿಕಟ್ಟನು.) ತೞತೞ ತೊಳಗುವ ಕಳಧೌತ ಕಳಶಂಗಳೊಳ್ ತೆಕ್ಕನೆ ತೀವಿ ತಂದ ವಾರ ವನಿತಾ ಜನಕ್ಕಂ ಸಾಮಂತ ಚಕ್ರಕ್ಕಂ ಉಡಲು ಇಕ್ಕಿ (ಥಳಥಳನೆ ಹೊಳೆಯುವ ಸ್ವಚ್ಛವಾದ ಬಿಳಿಯ ಕೊಡಗಳಲ್ಲಿ ತುಂಬಿ ತಂದಿರುವ ವೇಶ್ಯಾಸ್ತ್ರೀಯರಿಗೂ ಸಾಮಂತರಾಜಸಮೂಹಕ್ಕೂ ಉಡುಗೊರೆಯನ್ನು ಕೊಟ್ಟನು. ) ಧವಳಚ್ಛತ್ರ ಚಾಮರ ಸಿಂಹಾಸನ ಪಟ್ಟವರ್ಧನ ಕುಲ ಧನಾದಿ ರಾಜ್ಯಚಿಹ್ನಂಗಳಂ ವಿವಿಧ ವಿಧಾನದಿಂದಂ ಆವಾಸಿಸಿ (ಶ್ವೇತಚ್ಛತ್ರ (ಬಿಳಿಯ ಕೊಡೆ) ಚಾಮರ, ಸಿಂಹಾಸನ, ಪಟ್ಟದಾನೆ, ಕುಲಧನವೇ ಮೊದಲಾದ ರಾಜ್ಯಚಿಹ್ನೆಗಳನ್ನು ಬೇರೆ ಬೇರೆ ರೀತಿಯಿಂದ ಪ್ರತಿಷ್ಠೆ ಮಾಡಿಸಿದನು.) ಗಂಗಾಜಳ ಪವಿತ್ರೀಕೃತಗಾತ್ರನುಂ ಕೌಶೇಯ ಪರಿಧಾನನುಂ ಆಗಿರ್ದ ಮಾನನಿಧಾನನಂ ತಂದು ಪೊಡೆವಡಿಸಿ (ಗಂಗಾಜಲದಿಂದ ಪವಿತ್ರವನ್ನಾಗಿ ಮಾಡಲ್ಪಟ್ಟ ಶರೀರವುಳ್ಳವನೂ ರೇಷ್ಮೆಯ ವಸ್ತ್ರದ ಹೊದಿಕೆಯುಳ್ಳವನೂ ಆದ ಅರ್ಜುನನನ್ನು ನಮಸ್ಕಾರಮಾಡಿಸಿ )ಮಂಗಳ ಪಟಹಂಗಳುಂ ಮಂಗಳಗೀತಿಗಳುಂ ಎಸೆಯೆ ಕಳಕಳಾವರ್ತಮಾಗೆ (ಮಂಗಳವಾದ್ಯಗಳೂ ಮಂಗಳಗೀತೆಗಳೂ ಪ್ರಕಾಶಿಸುತ್ತಿರಲು ಕಳಕಳಧ್ವನಿಯಿಂದ ಆವರಿಸಲ್ಪಟ್ಟು) ಜಾಗರಮಿರ್ದು (ಜಾಗರಣೆಯಿರಿಸಿದನು.) ಮಱುದಿವಸಂ ಪ್ರಶಸ್ತ ಮೌಹೂರ್ತಿಕ ನಿರೂಪಿತ ಶುಭ ಲಗ್ನೋದಯದಿಂದ (ಮಾರನೆಯ ದಿವಸ ಪ್ರಶಸ್ತವಾದ ಜೋಯಿಸರಿಂದ ನಿಷ್ಕರ್ಷಿಸಲ್ಪಟ್ಟ ಶುಭಮುಹೂರ್ತದಲ್ಲಿ) ಅಷ್ಟೋತ್ತರಶತ ಪೂರ್ಣಕುಂಭಂಗಳಂ ಚತುರ್ವೇದ ಪಾರಗರಪ್ಪ ಧರಾಮರರು ಎತ್ತಿಕೊಂಡು ಮಂತ್ರಪೂತ ಜಲಂಗಳಿಂ ಮೀಯಿಸಿ (ನೂರೆಂಟು ಪೂರ್ಣಕುಂಭಗಳನ್ನು ನಾಲ್ಕು ವೇದಗಳಲ್ಲಿಯೂ ಪಂಡಿತರಾದ ಬ್ರಾಹ್ಮಣರು ಎತ್ತಿಕೊಂಡು ಮಂತ್ರಪೂತವಾದ ನೀರಿನಿಂದ ಸ್ನಾನಮಾಡಿಸಿದರು.)-
ವಚನ:ಅರ್ಥ:ವ|| ಎಂದು ಧರ್ಮರಾಯನೂ ಕೃಷ್ಣನೂ ಭೀಮನೂ ಅರ್ಜುನನ್ನು ಹೇಗೂ ಒಪ್ಪಿಸಿದರು. ನಾಳೆಯೇ ಪಟ್ಟವನ್ನು ಕಟ್ಟುವ ದಿವಸವೆಂದು ದಾನವಲೋಕದ ಶಿಲ್ಪಿಯಾದ ಮಯನೆಂಬುವನಿಂದ ಪಂಚರತ್ನಮಯವಾದ ಸಭಾಮಂಟಪವನ್ನು ತರಿಸಿದರು. ವಸಿಷ್ಠ, ಕಶ್ಯಪ, ವ್ಯಾಸ, ವಿಶ್ವಾಮಿತ್ರ, ಭಾರದ್ವಾಜರೇ ಮೊದಲಾದ ಋಷಿಶ್ರೇಷ್ಠರನ್ನು ಬರಮಾಡಿದರು. ಮಾತಲಿಯ ಕಯ್ಯಲ್ಲಿ ದೇವೇಂದ್ರನು ಕಲ್ಪವೃಕ್ಷದ ಚಿಗುರುಗಳನ್ನೂ ಐರಾವತವೆಂಬಾನೆಯೂ ಈಶ್ವರನ ನಂದಿಯೂ ಕೊಂಬಿನಿಂದ ಎಬ್ಬಿಸಿದ ಮಣ್ಣನ್ನೂ ಆಕಾಶಗಂಗೆಯ ನೀರನ್ನು ನಮೇರು ಮಂದಾರ ಪಾರಿಜಾತಗಳೆಂಬ ದೇವಲೋಕದ ಮರಗಳ ಹೂವುಗಳಿಂದ ಕೂಡಿದ ನೀರುಗಳನ್ನೂ ಕಳುಹಿಸಿಕೊಟ್ಟನು. ವರುಣದೇವನು ಉಪ್ಪು, ಹಾಲು, ಕಬ್ಬಿನ ರಸ, ಮೊಸರು, ಜೇನು, ತುಪ್ಪ, ಸಿಹಿನೀರುಗಳ ಏಳು ಸಮುದ್ರಗಳ ಮತ್ತು ಹದಿನಾಲ್ಕು ಮಹಾನದಿಗಳ ಪುಣ್ಯತೀರ್ಥವನ್ನು ಕಳುಹಿಸಿಕಟ್ಟನು. ಅವನ್ನು ಥಳಥಳನೆ ಹೊಳೆಯುವ ಸ್ವಚ್ಛವಾದ ಬಿಳಿಯ ಕೊಡಗಳಲ್ಲಿ ತುಂಬಿ ತಂದಿರುವ ವೇಶ್ಯಾಸ್ತ್ರೀಯರಿಗೂ ಸಾಮಂತರಾಜಸಮೂಹಕ್ಕೂ ಉಡುಗೊರೆಯನ್ನು ಕೊಟ್ಟನು. ಶ್ವೇತಚ್ಛತ್ರ (ಬಿಳಿಯ ಕೊಡೆ) ಚಾಮರ, ಸಿಂಹಾಸನ, ಪಟ್ಟದಾನೆ, ಕುಲಧನವೇ ಮೊದಲಾದ ರಾಜ್ಯಚಿಹ್ನೆಗಳನ್ನು ಬೇರೆ ಬೇರೆ ರೀತಿಯಿಂದ ಪ್ರತಿಷ್ಠೆ ಮಾಡಿಸಿದನು. ಗಂಗಾಜಲದಿಂದ ಪವಿತ್ರವನ್ನಾಗಿ ಮಾಡಲ್ಪಟ್ಟ ಶರೀರವುಳ್ಳವನೂ ರೇಷ್ಮೆಯ ವಸ್ತ್ರದ ಹೊದಿಕೆಯುಳ್ಳವನೂ ಆದ ಅರ್ಜುನನನ್ನು ನಮಸ್ಕಾರಮಾಡಿಸಿ ಮಂಗಳವಾದ್ಯಗಳೂ ಮಂಗಳಗೀತೆಗಳೂ ಪ್ರಕಾಶಿಸುತ್ತಿರಲು ಕಳಕಳಧ್ವನಿಯಿಂದ ಆವರಿಸಲ್ಪಟ್ಟು ಜಾಗರಣೆಯಿರಿಸಿದನು. ಮಾರನೆಯ ದಿವಸ ಪ್ರಶಸ್ತವಾದ ಜೋಯಿಸರಿಂದ ನಿಷ್ಕರ್ಷಿಸಲ್ಪಟ್ಟ ಶುಭಮುಹೂರ್ತದಲ್ಲಿ ನೂರೆಂಟು ಪೂರ್ಣಕುಂಭಗಳನ್ನು ನಾಲ್ಕು ವೇದಗಳಲ್ಲಿಯೂ ಪಂಡಿತರಾದ ಬ್ರಾಹ್ಮಣರು ಎತ್ತಿಕೊಂಡು ಮಂತ್ರಪೂತವಾದ ನೀರಿನಿಂದ ಸ್ನಾನಮಾಡಿಸಿದರು.
ಚಂ|| ಸ್ರ|| ವನಧಿಪ್ರಧ್ವಾನದಿಂ ಮಂಗಳಪಹರವಂ ಪೆರ್ಚೆ ಮಾಂಗಲ್ಯಗೇಯ
ಧ್ವನಿಯಿಂದಾಶಾಂತರಂ ಘೂರ್ಣಿಸಿ ಸೊಗಯಿಸೆ ಕೆಯ್ಗೆಯ್ದು ಸಾಮಂತ ಸೀಮಂ|
ತಿನಿಯರ್ ಮುಂದಾಡೆ ಭೋರೆಂದೆಸೆಯೆ ಜಯಜಯಧ್ವಾನಮೋರಂತೆ ವಾರಾಂ
ಗನೆಯರ್ ವಂದಾಡೆ ಸಂದೀ ವಿಭವದೊಳರಿಗಂಗಾಯ್ತು ರಾಜ್ಯಾಭಿಷೇಕಂ|| ೧೮
ಪದ್ಯ-೧೮:ಪದವಿಭಾಗ-ಅರ್ಥ:ವನಧಿಪ್ರಧ್ವಾನದಿಂ ಮಂಗಳಪಹ ರವಂ ಪೆರ್ಚೆ (ಸಮುದ್ರಘೋಷದಂತೆ ಮಂಗಳವಾದ್ಯ ಧ್ವನಿಯು ಹೆಚ್ಚಲು,) ಮಾಂಗಲ್ಯಗೇಯ ಧ್ವನಿಯಿಂದ ಆಶಾಂತರಂ ಘೂರ್ಣಿಸಿ ಸೊಗಯಿಸೆ (ಮಂಗಳಗೀತೆಗಳ ಧ್ವನಿಯಿಂದ ದಿಕ್ಕುಗಳ ಒಳಭಾಗವೆಲ್ಲ ಶಬ್ದಮಾಡಿ ಸೊಗಯಿಸಲು,) ಕೆಯ್ಗೆಯ್ದು ಸಾಮಂತ ಸೀಮಂತಿನಿಯರ್ ಮುಂದೆ ಆಡೆ (ಅಲಂಕರಾರ ಮಾಡಿಕೊಂಡಿರುವ ಸಾಮಂತರಾಜರ ಸ್ತ್ರೀಯರು ಮುಂಭಾಗದಲ್ಲಿ ನೃತ್ಯವಾಡಲು,) ಭೋರೆಂದು ಎಸೆಯೆ ಜಯಜಯಧ್ವಾನಂ ಓರಂತೆ, (ಜಯಜಯಧ್ವನಿಯು ಒಂದೇ ಸಮನಾಗಿ ಭೋರೆಂದು ಧ್ವನಿಮಾಡುತ್ತಿರಲು) ವಾರಾಂಗನೆಯರ್ ವಂದು ಆಡೆ (ವೇಶ್ಯಾಸ್ತ್ರೀಯರು ಬಂದು ನೃತ್ಯವಾಡಲು,) ಸಂದ ಈ ವಿಭವದೊಳು ಅರಿಗಂಗೆ ಆಯ್ತು ರಾಜ್ಯಾಭಿಷೇಕಂ (ಹೀಗೆ ನೆಡೆದ ಈ ವೈಭವದಲ್ಲಿ ಅರಿಗನಿಗೆ (ಅರ್ಜುನನಿಗೆ) ರಾಜ್ಯಾಭಿಷೇಕವಾಯಿತು.)
ಪದ್ಯ-೧೮:ಅರ್ಥ: ಸಮುದ್ರಘೋಷದಂತೆ ಮಂಗಳವಾದ್ಯ ಧ್ವನಿಯು ಹೆಚ್ಚಲು, ಮಂಗಳಗೀತೆಗಳ ಧ್ವನಿಯಿಂದ ದಿಕ್ಕುಗಳ ಒಳಭಾಗವೆಲ್ಲ ಶಬ್ದಮಾಡಿ ಸೊಗಯಿಸಲು, ಅಲಂಕರಾರ ಮಾಡಿಕೊಂಡಿರುವ ಸಾಮಂತರಾಜರ ಸ್ತ್ರೀಯರು ಮುಂಭಾಗದಲ್ಲಿ ನೃತ್ಯವಾಡಲು, ಜಯಜಯಧ್ವನಿಯು ಒಂದೇ ಸಮನಾಗಿ ಭೋರೆಂದು ಧ್ವನಿಮಾಡುತ್ತಿರಲು ವೇಶ್ಯಾಸ್ತ್ರೀಯರು ಬಂದು ನೃತ್ಯವಾಡಲು, ಹೀಗೆ ನೆಡೆದ ಈ ವೈಭವದಲ್ಲಿ ಅರಿಗನಿಗೆ (ಅರ್ಜುನನಿಗೆ) ರಾಜ್ಯಾಭಿಷೇಕವಾಯಿತು.
ವ|| ಆಗಳ್ ರಾಜ್ಯಾಭಿಷೇಕದ ನಂತರದೊಳ್ ಧರ್ಮನಂದನಂ ವಾಯುನಂದನಂ ದೇವಕೀನಂದನನಶ್ವಿನೀನಂದನರಯ್ವರುಮನೇಕ ಮಂಗಳಾಭರಣಾಳಂಕೃತಶರೀರರರಿಕೇಸರಿಯಂ ಕೇಸರಿವಿಷ್ಟರದೊಳ್ ಕುಳ್ಳಿರಿಸಿ ಪಂಚರತ್ನಶಿಖಾವಿರಾಜಮಾನಮಪ್ಪ ಪಟ್ಟಮನೆತ್ತಿ ಯಾದವ ವಂಶಸಂಭೂತೆಯುಮನೇಕಲಕ್ಷಣೋಪೇತೆಯುಮಪ್ಪ ಸುಭದ್ರೆಗೆ ಮಹಾದೇವಿವಟ್ಟಮಂ ಕಟ್ಟಿದಾಗಳ್-
ವಚನ:ಪದವಿಭಾಗ-ಅರ್ಥ:ಆಗಳ್ ರಾಜ್ಯಾಭಿಷೇಕದ ನಂತರದೊಳ್ ಧರ್ಮನಂದನಂ ವಾಯುನಂದನಂ ದೇವಕೀನಂದನಂ ಅಶ್ವಿನೀನಂದನರ್ ಅಯ್ವರುಮ್ (ರಾಜ್ಯಾಭಿಷೇಕವಾದ ಮೇಲೆ ಧರ್ಮರಾಯನೂ ಭೀಮ ಕೃಷ್ಣ ನಕುಲಸಹದೇವರೇ ಮೊದಲಾದ ಅಯ್ದುಜನರೂ) ಅನೇಕ ಮಂಗಳಾಭರಣ ಅಳಂಕೃತಶರೀರ ಅರಿಕೇಸರಿಯಂ ಕೇಸರಿವಿಷ್ಟರದೊಳ್ ಕುಳ್ಳಿರಿಸಿ (ಅನೇಕ ಒಡವೆಗಳಿಂದ ಅಲಂಕಾರಮಾಡಲ್ಪಟ್ಟ ಶರೀರರಾಗಿ ಅರಿಕೇಸರಿಯನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ) ಪಂಚರತ್ನಶಿಖಾ ವಿರಾಜಮಾನಮಪ್ಪ ಪಟ್ಟಮನು ಎತ್ತಿ (ಅಯ್ದು ರತ್ನಗಳಿಂದ ಖಚಿತವಾದ ತಲೆಯ ಪಟ್ಟ (ಶಿರಪೇಷ್)ದಿಂದ ಪ್ರಕಾಶಮಾನವಾದ ಪಟ್ಟವಸ್ತ್ರವನ್ನು ಕಟ್ಟಿ) ಯಾದವ ವಂಶಸಂಭೂತೆಯುಂ ಅನೇಕ ಲಕ್ಷಣೋಪೇತೆಯುಮಪ್ಪ ಸುಭದ್ರೆಗೆ ಮಹಾದೇವಿವಟ್ಟಮಂ ಕಟ್ಟಿದಾಗಳ್ (ಯಾವದವಂಶದಲ್ಲಿ ಹುಟ್ಟಿದವಳೂ ಅನೇಕ ಲಕ್ಷಣಗಳಿಂದ ಕೂಡಿದವಳೂ ಆದ ಸುಭದ್ರೆಗೆ ಮಹಾರಾಣಿಯ ಪಟ್ಟವನ್ನು ಕಟ್ಟಿದರು.)
ವಚನ:ಅರ್ಥ:ರಾಜ್ಯಾಭಿಷೇಕವಾದ ಮೇಲೆ ಧರ್ಮರಾಯನೂ ಭೀಮ ಕೃಷ್ಣ ನಕುಲಸಹದೇವರೇ ಮೊದಲಾದ ಅಯ್ದುಜನರೂ ಅನೇಕ ಒಡವೆಗಳಿಂದ ಅಲಂಕಾರಮಾಡಲ್ಪಟ್ಟ ಶರೀರರಾಗಿ ಅರಿಕೇಸರಿಯನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ, ಅಯ್ದು ರತ್ನಗಳಿಂದ ಖಚಿತವಾದ ತಲೆಯ ಪಟ್ಟ (ಶಿರಪೇಷ್)ದಿಂದ ಪ್ರಕಾಶಮಾನವಾದ ಪಟ್ಟವಸ್ತ್ರವನ್ನು ಕಟ್ಟಿ, ಯಾವದವಂಶದಲ್ಲಿ ಹುಟ್ಟಿದವಳೂ ಅನೇಕ ಲಕ್ಷಣಗಳಿಂದ ಕೂಡಿದವಳೂ ಆದ ಸುಭದ್ರೆಗೆ ಮಹಾರಾಣಿಯ ಪಟ್ಟವನ್ನು ಕಟ್ಟಿದರು.
  • ಟಿಪ್ಪಣಿ::- ಇಲ್ಲಿ ದ್ರೌಪದಿಯ ಸುದ್ದಿ ಇಲ್ಲ. ಅರ್ಜುನನ ಆಪ್ತ ಶ್ರೀಕೃಷ್ಣನ ಸೋದರಿಗೆ ಪಟ್ಟಮಹಿಷಿ ಸ್ಥಾನ..
ಚಂ|| ನೆಗಱ್ದ್ದುದು ದೇವದುಂದುಭಿರವಂ ಸುರನಂದನದಿಂ ಪೊದೞ್ದ ಬ
ಲ್ಮುಗುಳ್ಗಳ ತಂದಲಂದು ಕವಿತಂದುದದಂ ತನಿಸೋಂಕು ಸೋಂಕಿ ಮೆ|
ಲ್ಲಗೆ ಮಲಯಾನಿಳಂ ಸುಱಿದೊಡಂದು ಜಗಂ ಪೊಸತಾದುದೆಂದೊಡೇ
ವೊಗೞ್ವ್ವುದೊ ಪಟ್ಟಬಂಧನಮಹೋತ್ಸವಮಂ ಜಗದೇಖಮಲ್ಲನಾ|| ೧೯ ||
ಪದ್ಯ-೧೯:ಪದವಿಭಾಗ-ಅರ್ಥ:ನೆಗಱ್ದ್ದುದು ದೇವದುಂದುಭಿರವಂ (ದೇವ ದುಂದುಭಿಯ ಅದ್ದು ಆಯಿತು.) ಸುರ ನಂದನದಿಂ ಪೊದೞ್ದ ಬಲ್ಮು ಗುಳ್ಗಳ ತಂದಲ್ ಅಂದು ಕವಿತಂದುದು (ದೇವತೆಗಳ ತೋಟದಿಂದ ವ್ಯಾಪಿಸಿದ ದೊಡ್ಡ ಹೂಗಳ ತುಂತುರುಮಳೆ ಅಂದು ಮುಚ್ಚುವಂತೆ ಸುರಿಯಿತು.(ಪುಷ್ಪವೃಷ್ಟಿಯಾಯಿತು)) ಅದಂ ತನಿಸೋಂಕು ಸೋಂಕಿ ಮೆಲ್ಲಗೆ ಮಲಯಾನಿಳಂ ಸುಱಿದೊಡೆ (ಅದರ ಇಂಪಾದ ಸ್ಪರ್ಶದಿಂದ ನಿಧಾನವಾಗಿ ಮಲಯಮಾರುತವು ಸುಳಿದಾಡಿದರೆ,ಸುಳಿದಾಡಿದಾಗ,) ಅಂದು ಜಗಂ ಪೊಸತು ಆದುದು ಎಂದೊಡೆ (ಆ ದಿನ ಲೋಕವೇ ಹೊಸತಾಯಿತು ಎಂದರೆ ) ಎವೊಗೞ್ವ್ವುದೊ ಪಟ್ಟಬಂಧನ ಮಹೋತ್ಸವಮಂ ಜಗದೇಖಮಲ್ಲನಾ (ಜಗದೇಕಮಲ್ಲನಾದ ಅರ್ಜುನನ ಪಟ್ಟಬಂಧ ಮಹೋತ್ಸವವನ್ನು ಏನೆಂದು ಹೊಗಳುವುದೊ!)
ಪದ್ಯ-೧೯:ಅರ್ಥ: ದೇವ ದುಂದುಭಿಯ ಅದ್ದು ಆಯಿತು. ದೇವತೆಗಳ ತೋಟದಿಂದ ವ್ಯಾಪಿಸಿದ ದೊಡ್ಡ ಹೂಗಳ ತುಂತುರುಮಳೆ ಅಂದು ಮುಚ್ಚುವಂತೆ ಸುರಿಯಿತು.(ಪುಷ್ಪವೃಷ್ಟಿಯಾಯಿತು) ಅದರ ಇಂಪಾದ ಸ್ಪರ್ಶದಿಂದ ನಿಧಾನವಾಗಿ ಮಲಯಮಾರುತವು ಸುಳಿದಾಡಿದರೆ, ಆ ದಿನ ಲೋಕವೇ ಹೊಸತಾಯಿತು ಎಂದರೆ ಜಗದೇಕಮಲ್ಲನಾದ ಅರ್ಜುನನ ಪಟ್ಟಬಂಧ ಮಹೋತ್ಸವವನ್ನು ಏನೆಂದು ಹೊಗಳುವುದೊ!
ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇೞಿಯೊಳೊಂದಿ ಸಾಂದಿನೊಳ್
ಕತ್ತುರಿಯೊಂದು ಕೋಳ್ಗೆಸರೊಳೋಕುಳಿ ಚಂದನಗಂಧವಾರಿಯೊಳ್|
ಸುತ್ತಲುಮೞ್ಕಱಂ ಪಡೆವ ಗೇಯದ ಪೆಂಪಿನಲಂಪನಾರ್ಗಮಾ
ರ್ತಿತ್ತುದು ಪಟ್ಟಬಂಧನಮಹೋತ್ಸವಮಾ ಪಡೆಮೆಚ್ಚೆ ಗಂಡನಾ|| ೨೦ ||
ಪದ್ಯ-೨೦:ಪದವಿಭಾಗ-ಅರ್ಥ:ಮುತ್ತಿನ ಪಚ್ಚೆ ಮಾಣಿಕದ ವಜ್ರದ ಕೇೞಿಯೊಳ ಒಂದಿ (ಮುತ್ತು ಪಚ್ಚೆ ರತ್ನ ಮತ್ತು ವಜ್ರಗಳ ಸಾಲುಗಳಲ್ಲಿ ಸೇರಿ) ಸಾಂದಿನೊಳ್ (ಸಾದಿ-ಗಂಧ) ಕತ್ತುರಿಯ ಒಂದು ಕೋಳ್ಗೆಸರೊಳ್ ಓಕುಳಿ (ಶ್ರೀಗಂಧ ಕಸ್ತೂರಿ ಮೊದಲಾದುವುಗಳ ಒಳ್ಳೆಯ ಕೆಸರಿನಲ್ಲಿಯೂ ಓಕುಳಿಯಾಡುವ) ಚಂದನಗಂಧ ವಾರಿಯೊಳ್ (ಶ್ರೀಗಂಧದ ಪರಿಮಳಯುಕ್ತವಾದ ನೀರಿನಲ್ಲಿಯೂ) ಸುತ್ತಲುಂ ಅೞ್ಕಱಂ ಪಡೆವ (ಎಲ್ಲೆಡೆಯಲ್ಲಿಯೂ ಪ್ರೀತಿಯನ್ನುಂಟುಮಾಡುವ) ಗೇಯದ ಪೆಂಪಿನ ಅಲಂಪನು (ಸಂಗೀತದ ವೈಭವದಿಂದ ಕೂಡಿದ ಸಂತೋಷವನ್ನು->) ಆರ್ಗಮ್ ಆರ್ತು ಇತ್ತುದು ( ಎಂತಹವರಿಗೂ/ ಯಾರಿಗೇ ಆಯಿತು ಸರಿಯಾಗಿ ಕೊಟ್ಟಿತು.) ಪಟ್ಟಬಂಧನ ಮಹೋತ್ಸವಮ್ ಆ ಪಡೆಮೆಚ್ಚೆ ಗಂಡನಾ (ಪಡೆಮೆಚ್ಚೆ ಗಂಡನಾದ ಅರ್ಜುನನ ಪಟ್ಟಬಂಧನ ಮಹೋತ್ಸವವು - ಎಂತಹವರಿಗೂ ಸಾಕಷ್ಟು ಸಂತೋಷವನ್ನು ಕೊಟ್ಟಿತು.)
ಪದ್ಯ-೨೦:ಅರ್ಥ: ೨೦. ಮುತ್ತು ಪಚ್ಚೆ ರತ್ನ ಮತ್ತು ವಜ್ರಗಳ ಸಾಲುಗಳಲ್ಲಿ ಸೇರಿ, ಶ್ರೀಗಂಧ ಕಸ್ತೂರಿ ಮೊದಲಾದುವುಗಳ ಒಳ್ಳೆಯ ಕೆಸರಿನಲ್ಲಿಯೂ ಶ್ರೀಗಂಧದ ಪರಿಮಳಯುಕ್ತವಾದ ನೀರಿನಲ್ಲಿಯೂ ಓಕುಳಿಯಾಡಿಸುತ್ತ ಎಲ್ಲೆಡೆಯಲ್ಲಿಯೂ ಪ್ರೀತಿಯನ್ನುಂಟುಮಾಡುವ ಸಂಗೀತದ ವೈಭವದಿಂದ ಕೂಡಿದ ಅರ್ಜುನನ ಪಟ್ಟಬಂಧನ ಮಹೋತ್ಸವವು ಎಂತಹವರಿಗೂ ಸಾಕಷ್ಟು ಸಂತೋಷವನ್ನು ಕೊಟ್ಟಿತು.
ವ|| ಮತ್ತಮೈರಾವಣಾನ್ವಯನುಂ ಸುರಭಿನಿಶ್ವಾಸನುಂ ಸೂಕ್ಷ್ಮಬಿಂದುರುಚಿರನುಂ ಕಾಳಿಂಗ ವನಸಂಭೂತನುಮನೇಕಲಕ್ಷಣೋಪೇತನುಮಪ್ಪ ತ್ರಿಭುವನಾಭರಣಮೆಂಬಾನೆಗಮುಭಯಕುಲ ಶುದ್ಧನುಂ ಗುಣಶುದ್ಧನುಂ ಗುಣಸಮುದ್ರನುಮಪ್ಪ ಮಹಾಮಂತ್ರಿಯಭವನುಮುಚ್ಚೈಶ್ಯ್ರವಾನ್ವಯ ಸಂಭವನುಂ ಪ್ರಶಸ್ತ ಲಕ್ಷಣ ಲಕ್ಷಿತನುಮಪ್ಪ ತ್ರಿಭುವನಿತಿಲಕಮೆಂಬ ಕುದುರೆಗಂ ಪಟ್ಟಂಗಟ್ಟಿ ಪುರುಷೋತ್ತಮನ ತಂಗೆಯುಂ ತಾನುಂ ತುಳಾಪುರುಷಮನಿರ್ದು ಲೋಕಕ್ಕೆಲ್ಲಂ ಬಿಯಮಂ ಮೆರೆದು-
ವಚನ:ಪದವಿಭಾಗ-ಅರ್ಥ:ಮತ್ತಮ್ ಐರಾವಣ ಅನ್ವಯನುಂ ಸುರಭಿ ನಿಶ್ವಾಸನುಂ ಸೂಕ್ಷ್ಮ ಬಿಂದು ರುಚಿರನುಂ (ಐರಾವತದ ವಂಶದಲ್ಲಿ ಹುಟ್ಟಿದುದೂ ಸುಗಂಧಯುಕ್ತವಾದ ಉಸಿರುಳ್ಳುದೂ ಸೂಕ್ಷ್ಮವಾದುದೂ ಸಣ್ಣ ಸಣ್ಣ ಬಿಳಿಯ ಮಚ್ಚೆಗಳಿಂದ ರಮ್ಯವಾದುದೂ) ಕಾಳಿಂಗ ವನಸಂಭೂತನುಂ ಅನೇಕ ಲಕ್ಷಣೋಪೇತನುಂ ಅಪ್ಪ ( ಕಳಿಂಗದೇಶದ ಅರಣ್ಯದಲ್ಲಿ ಹುಟ್ಟಿದುದೂ ಅನೇಕ ಲಕ್ಷಣಗಳಿಂದ ಕೂಡಿದುದೂ ಆಗಿರುವ,) ತ್ರಿಭುವನಾಭರಣಮೆಂಬ ಆನೆಗಂ (ತ್ರಿಭುವನಾಭರಣವೆಂಬ ಆನೆಗೂ) ಉಭಯಕುಲ ಶುದ್ಧನುಂ ಗುಣಶುದ್ಧನುಂ ಗುಣಸಮುದ್ರನುಂ ಅಪ್ಪ (ಉಭಯಕುಲಶುದ್ಧನೂ ಗುಣಸಮುದ್ರನೂ ಆಗಿರುವ ) ಮಹಾಮಂತ್ರಿಯ ಭವನುಂ ಉಚ್ಚೈಶ್ಯ್ರವಾನ್ವಯ ಸಂಭವನುಂ (ಮಹಾಮಂತ್ರಿಯ ಮನೆಯಲ್ಲಿಯೇ ಬೆಳೆದ ಉಚ್ಚೆ ಶ್ರವದ ವಂಶದಲ್ಲಿಯೇ ಜನಿಸಿರುವ) ಪ್ರಶಸ್ತ ಲಕ್ಷಣ ಲಕ್ಷಿತನುಮ್ ಅಪ್ಪ (ಪ್ರಶಸ್ತವಾದ ಲಕ್ಷಣಗಳಿಂದ ಗುರುತುಮಾಡಲ್ಪಟ್ಟ) ತ್ರಿಭುವನಿತಿಲಕಮೆಂಬ ಕುದುರೆಗಂ ಪಟ್ಟಂಗಟ್ಟಿ (ತ್ರಿಭುವನತಿಲಕವೆಂಬ ಕುದುರೆಗೂ ಪಟ್ಟವನ್ನು ಕಟ್ಟಿದರು.) ಪುರುಷೋತ್ತಮನ ತಂಗೆಯುಂ ತಾನುಂ ತುಳಾಪುರುಷಮನು ಇರ್ದು ( ಕೃಷ್ಣನ ತಂಗಿಯಾದ ಸುಭದ್ರೆಯೂ ಅರ್ಜುನನೂ ತುಲಾಪುರಷಭಾರವಿದ್ದು (ತನ್ನ ತೂಕದಷ್ಟು ಚಿನ್ನವನ್ನು ತೂಕಮಾಡಿ ದಾನಮಾಡುವುದು)) ಲೋಕಕ್ಕೆಲ್ಲಂ ಬಿಯಮಂ ಮೆರೆದು (ಲೋಕಕ್ಕೆಲ್ಲ ತಮ್ಮ ದಾನದ ವೈಭವವನ್ನು ಮೆರೆದರು.)-
ವಚನ:ಅರ್ಥ:ಮತ್ತು ಐರಾವತದ ವಂಶದಲ್ಲಿ ಹುಟ್ಟಿದುದೂ ಸುಗಂಧಯುಕ್ತವಾದ ಉಸಿರುಳ್ಳುದೂ ಸೂಕ್ಷ್ಮವಾದುದೂ ಸಣ್ಣ ಸಣ್ಣ ಬಿಳಿಯ ಮಚ್ಚೆಗಳಿಂದ ರಮ್ಯವಾದುದೂ ಕಳಿಂಗದೇಶದ ಅರಣ್ಯದಲ್ಲಿ ಹುಟ್ಟಿದುದೂ ಅನೇಕ ಲಕ್ಷಣಗಳಿಂದ ಕೂಡಿದುದೂ ಆಗಿರುವ ತ್ರಿಭುವನಾಭರಣವೆಂಬ ಆನೆಗೂ ಉಭಯಕುಲಶುದ್ಧನೂ ಗುಣಸಮುದ್ರನೂ ಆಗಿರುವ ಮಹಾಮಂತ್ರಿಯ ಮನೆಯಲ್ಲಿಯೇ ಬೆಳೆದ (?) ಉಚ್ಚೆ ಶ್ರವದ ವಂಶದಲ್ಲಿಯೇ ಜನಿಸಿರುವ ಪ್ರಶಸ್ತವಾದ ಲಕ್ಷಣಗಳಿಂದ ಗುರುತುಮಾಡಲ್ಪಟ್ಟ ತ್ರಿಭುವನತಿಲಕವೆಂಬ ಕುದುರೆಗೂ ಪಟ್ಟವನ್ನು ಕಟ್ಟಿದರು. ಕೃಷ್ಣನ ತಂಗಿಯಾದ ಸುಭದ್ರೆಯೂ ಅರ್ಜುನನೂ ತುಲಾಪುರಷಭಾರವಿದ್ದು (ತನ್ನ ತೂಕದಷ್ಟು ಚಿನ್ನವನ್ನು ತೂಕಮಾಡಿ ದಾನಮಾಡುವುದು) ಲೋಕಕ್ಕೆಲ್ಲ ತಮ್ಮ ದಾನದ ವೈಭವವನ್ನು ಮೆರೆದರು.
ಚಂ|| ತೊರೆದುದು ಕಾಮಧೇನು ತುಱುಗಲ್ಗೊನೆವಣ್ತುದು ಕಲ್ಪವೃಕ್ಷಮೀ
ಶ್ವರನ ವರಫ್ರಸಾದಮಿದಿರ್ಗೊಂಡುದು ಸುತ್ತಿಱಿದೊಂದು ಮುತ್ತಿನಾ|
ಗರಮೆ ತೆರಳ್ದುದೆಯ್ದೆ ರಸ ಸಿದ್ಧಿಯುಮಾಯ್ತೆನೆ ತನ್ನನಾಸೆವ
ಟ್ಟೆರೆದವರ್ಗಿತ್ತು ಪೊಮ್ಮಯದೆ ಮಾಡಿದನೀ ನೆಲನಂ ಗುಣಾರ್ಣವಂ|| ೨೧ ||
ಪದ್ಯ-೨೧:ಪದವಿಭಾಗ-ಅರ್ಥ:ತೊರೆದುದು ಕಾಮಧೇನು (ಕಾಮಧೇನುವೆಂಬ ದೇವಲೋಕದ ಹಸುವು ಸೊರೆತು ಹಾಲನ್ನು ಸುರಿಸಿತು.) ತುಱುಗಲ್ ಗೊನೆವಣ್ತುದು ಕಲ್ಪವೃಕ್ಷಂ (ಕಲ್ಪವೃಕ್ಷವು ಕಿಕ್ಕಿರಿದು- ಗೊನೆ ಹಣ್ತುದು- ತುಂಬಿದ ಹಣ್ಣುಗಳಿಂದ ಕೂಡಿದ ಗೊನೆಯನ್ನುಳ್ಳುದಾಯಿತು) ಈಶ್ವರನ ವರಫ್ರಸಾದಂ ಇದಿರ್ಗೊಂಡುದು (ಈಶ್ವರನ ವರಪ್ರಸಾದವು ಎದಿರುಗೊಂಡಿತು.) ಸುತ್ತಿಱಿದ ಒಂದು ಮುತ್ತಿನ ಆಗರಮೆ ತೆರಳ್ದುದು (ಸುತ್ತಲೂ ಒಂದು ಮುತ್ತಿನ ಮನೆಯೇ ಆವರಿಸಿಕೊಂಡು ಚಲಿಸಿತು.) ಎಯ್ದೆ ರಸ ಸಿದ್ಧಿಯುಂ ಆಯ್ತೆನೆ ತನ್ನನು ಆಸೆವಟ್ಟ ಎರೆದವರ್ಗೆ ಇತ್ತು (ಚೆನ್ನಾಗಿ/ ಸಂಪೂರ್ಣವಾಗಿ ರಸಸಿದ್ಧಿ ಆಯಿತು ಎನ್ನುವ ಹಾಗೆ ತನ್ನಲ್ಲಿ ಆಸೆಯಿಂದ ಬಂದು ಬೇಡಿದವರಿಗೆ ಅವರ ತೃಪ್ತ್ಯನುಸಾರವಾಗಿ ದಾನಮಾಡಿ) ಪೊಮ್ಮಯದೆ (ಹೊನ್ನು ಮಯವನ್ನಾಗಿ) ಮಾಡಿದನು ಈ ನೆಲನಂ ಗುಣಾರ್ಣವಂ (ಅರ್ಜುನನು ಲೋಕವನ್ನೆಲ್ಲ ಸುವರ್ಣಮಯವನ್ನಾಗಿ ಮಾಡಿದನು.)
ಪದ್ಯ-೨೧:ಅರ್ಥ: ಕಾಮಧೇನುವೆಂಬ ದೇವಲೋಕದ ಹಸುವು ಹಾಲನ್ನು ಸುರಿಸಿತು. ಕಲ್ಪವೃಕ್ಷವು ಕಿಕ್ಕಿರಿದು ತುಂಬಿದ ಹಣ್ಣುಗಳಿಂದ ಕೂಡಿದ ಗೊನೆಯನ್ನುಳ್ಳುದಾಯಿತು. ಈಶ್ವರನ ವರಪ್ರಸಾದವು ಎದಿರುಗೊಂಡಿತು. ಸುತ್ತಲೂ ಒಂದು ಮುತ್ತಿನ ಮನೆಯೇ ಆವರಿಸಿಕೊಂಡು ಚಲಿಸಿತು. ಚೆನ್ನಾಗಿ/ ಸಂಪೂರ್ಣವಾಗಿ ರಸಸಿದ್ಧಿ ಆಯಿತು ಎನ್ನುವ ಹಾಗೆ ತನ್ನಲ್ಲಿ ಆಸೆಯಿಂದ ಬಂದು ಬೇಡಿದವರಿಗೆ ಅವರ ತೃಪ್ತ್ಯನುಸಾರವಾಗಿ ದಾನಮಾಡಿ ಅರ್ಜುನನು ಲೋಕವನ್ನೆಲ್ಲ ಸುವರ್ಣಮಯವನ್ನಾಗಿ ಮಾಡಿದನು.
ವ|| ಅಂತು ಚಾಗಂಗೆಯ್ದು ಸಿಂಹಾಸನಮಸ್ತಕಸ್ಥಿತನುಂ ವಿರಾಜಮಾನ ಧವಳಚ್ಛತ್ರಚಾಮರ ಸಹಸ್ರಸಂಛಾದಿತನುಮಾಗಿ ವಿಕ್ರಾಂತುಂಗ ನೊಡ್ಡೋಲಗಂಗೊಟ್ಟಿರೆ-
ವಚನ:ಪದವಿಭಾಗ-ಅರ್ಥ:ಅಂತು ಚಾಗಂ ಗೆಯ್ದು ಸಿಂಹಾಸನ ಮಸ್ತಕಸ್ಥಿತನುಂ (ಹಾಗೆ ದಾನಮಾಡಿ ಸಿಂಹಾಸನದ ಮೇಲುಭಾಗದಲ್ಲಿ ಕುಳಿತವನೂ) ವಿರಾಜಮಾನ ಧವಳಚ್ಛತ್ರಚಾಮರ ಸಹಸ್ರ ಸಂಛಾದಿತನುಮಾಗಿ ( ಹೊಳೆಯುತ್ತಿರುವ ಸಾವಿರಾರು ಬೆಳುಗೊಡೆ ಮತ್ತು ಚಾಮರಗಳಿಂದ ಮುಸುಕಲ್ಪಟ್ಟವನೂ ವಿಶೇಷ ಪರಾಕ್ರಮಿಯೂ ಆದ ) ವಿಕ್ರಾಂತುಂಗ ನೊಡ್ಡೋಲಗಂಗೊಟ್ಟಿರೆ (ಅರ್ಜುನನು ಸಭಾಮಧ್ಯದಲ್ಲಿ ಓಲಗಗೊಟ್ಟಿರಲು-)-
ವಚನ:ಅರ್ಥ:ಹಾಗೆ ದಾನಮಾಡಿ ಸಿಂಹಾಸನದ ಮೇಲುಭಾಗದಲ್ಲಿ ಕುಳಿತವನೂ ಹೊಳೆಯುತ್ತಿರುವ ಸಾವಿರಾರು ಬೆಳುಗೊಡೆ ಮತ್ತು ಚಾಮರಗಳಿಂದ ಮುಸುಕಲ್ಪಟ್ಟವನೂ ವಿಶೇಷ ಪರಾಕ್ರಮಿಯೂ ಆದ ಅರ್ಜುನನು ಸಭಾಮಧ್ಯದಲ್ಲಿ ಓಲಗಗೊಟ್ಟಿರಲು-
ಕಂ|| ಎಡೆಗೊಂಡಿರಿಮುತ್ಸಂಚಂ
ನುಡಿಯದಿರಿಂ ನೃಪತಿ ನುಡಿಯಿಂ ನೀಮಿ|
ರ್ಪೆಡೆಯೊಳಿರಿಂ ನೀವಱಿವಿರ್
ಮಿಡುಕಿದೊಡೆನೆ ಚಿತ್ರವೇತ್ರದಂಡಧರರ್ಕಳ್|| ೨೨ ||
ಪದ್ಯ-೨೨:ಪದವಿಭಾಗ-ಅರ್ಥ:ಎಡೆಗೊಂಡಿರಿಂ (ನಿಮ್ಮ ನಿಮ್ಮ ಸ್ಥಳದಲ್ಲಿರಿ;) ಉತ್ಸಂಚಂ ನುಡಿಯದಿರಿಂ (ಗಟ್ಟಿಯಾಗಿ ಮಾತನಾಡಬೇಡಿ;) ನೃಪತಿ ನುಡಿಯಿಂ ನೀಂ ಇರ್ಪೆಡೆಯೊಳಿರಿಂ (ರಾಜನು ಮಾತನಾಡಿದ ಮೇಲೆ ನೀವು ಮಾತನಾಡಿ; ನೀವು ಇರುವ ಸ್ಥಳದಲ್ಲಿಯೇ ಇರಿ;) ನೀವ್ ಅಱಿವಿರ್ ಮಿಡುಕಿದೊಡೆನೆ ಚಿತ್ರವೇತ್ರ ದಂಡಧರರ್ಕಳ್ (ಅಲುಗಾಡಿದರೆ ತಕ್ಷಣವೇ ಬಗೆಬಗೆಯಾದ ಬೆತ್ತವನ್ನು ಹಿಡಿದಿರುವ ಕಟ್ಟಿಗೆಕಾರರ ಅನುಭವವು ನಿಮಗಾಗುತ್ತದೆ)
ಪದ್ಯ-೨೨:ಅರ್ಥ: ನಿಮ್ಮ ನಿಮ್ಮ ಸ್ಥಳದಲ್ಲಿರಿ; ಗಟ್ಟಿಯಾಗಿ ಮಾತನಾಡಬೇಡಿ; ರಾಜನು ಮಾತನಾಡಿದ ಮೇಲೆ ನೀವು ಮಾತನಾಡಿ; ನೀವು ಇರುವ ಸ್ಥಳದಲ್ಲಿಯೇ ಇರಿ; ಅಲುಗಾಡಿದರೆ ತಕ್ಷಣವೇ ಬಗೆಬಗೆಯಾದ ಬೆತ್ತವನ್ನು ಹಿಡಿದಿರುವ ಕಟ್ಟಿಗೆಕಾರರ ಅನುಭವವು ನಿಮಗಾಗುತ್ತದೆ. (ಅವರ ದಂಡದ ಏಟುಗಳ ರುಚಿ ನಿಮಗೆ ಅನುಭವವಾಗುತ್ತದೆ ಎಂದಭಿಪ್ರಾಯ).
ಕಂ||ಓಳಿಕೊಳೆ ಪೊಳೆವ ಕಣ್ಗಳ್
ನೀಲಿಮವನಜಂಗಳೋಳಿ ಕೊಳ್ಳದುವುಂ ತಾ|
ಮೋಳಿಕೊಳಲಂತೆ ಗಣಿಕೆಯ
ರೋಳಿಯೊಳೆ ಮಡಲ್ತ ಲತೆಗಳಿರ್ಪಂತಿರ್ದರ್|| ೨೩ ||
ಪದ್ಯ-೨೩:ಪದವಿಭಾಗ-ಅರ್ಥ:ಓಳಿಕೊಳೆ ಪೊಳೆವ ಕಣ್ಗಳ್ (ವೇಶ್ಯಾಸ್ತ್ರೀಯರ ಹೊಳೆಯುವ ಕಣ್ಣುಗಳ ಸಾಲು) ನೀಲಿಮ ವನಜಂಗಳ ಓಳಿಕೊಳ್ಳದುವುಂ ತಾಂ ಓಳಿಕೊಳಲಂತೆ (ಕನ್ನೆದಿಲೆಯ ಗುಂಪಿನಲ್ಲಿ ತಾವು ಸೇರದವುಗಳೂ ಸಾಲಿಗೆ ಸೇರುವಂತೆ) ಗಣಿಕೆಯರ ಓಳಿಯೊಳೆ (ವೇಶ್ಯಾಸ್ತ್ರೀಯರ ಸಾಲುಗಳಲ್ಲೇ) ಮಡಲ್ತ ಲತೆಗಳು ಇಂರ್ಪಂತೆ ಇರ್ದರ್ (ಹಬ್ಬಿದ ಬಳ್ಳಿಯಂತಿದ್ದರು - ವೇಶ್ಯಾಸ್ತ್ರೀಯರು ಹಬ್ಬಿದ ಬಳ್ಳಿಗಳಂತೆ ಇದ್ದರು.) (ಮಡಲ್ತ -ಹಬ್ಬಿದ, ಸಾಲಿನಲ್ಲಿ ಇರುವ)
ಪದ್ಯ-೨೩:ಅರ್ಥ: ವೇಶ್ಯಾಸ್ತ್ರೀಯರ ಹೊಳೆಯುವ ಕಣ್ಣುಗಳ ಸಾಲು, ಕನ್ನೆದಿಲೆಯ ಗುಂಪಿನಲ್ಲಿ ತಾವು ಸೇರದವುಗಳೂ ಸಾಲಿಗೆ ಸೇರುವಂತೆ ವೇಶ್ಯಾಸ್ತ್ರೀಯರ ಸಾಲುಗಳಲ್ಲಿ ವೇಶ್ಯಾಸ್ತ್ರೀಯರು ಹಬ್ಬಿದ ಬಳ್ಳಿಗಳಂತೆ ಇದ್ದರು..
ಕಂ|| ಸಾರ್ಚಿದ ಲೋಹಾಸನದೊಳ
ಮರ್ಚಿದ ಬೊಂದರಿಗೆ ಪೞಿಯ ಬಿತ್ತರಿಗೆ ಕರಂ|
ಪೆರ್ಚುವ ಮಹಿಮೆಯನೆಯ್ದೆ ನಿ
ಮಿರ್ಚೆ ಮಹಾ ಮಕುಟ ಬದ್ಧರೋಳಿಯೊಳಿರ್ದರ್ ||೨೪ ||
ಪದ್ಯ-೨೪:ಪದವಿಭಾಗ-ಅರ್ಥ:ಸಾರ್ಚಿದ ಲೋಹಾಸನದೊಳು ಅಮರ್ಚಿದ ಬೊಂದರಿಗೆ(ಹತ್ತಿರ ಇಟ್ಟಿರುವ ಲೋಹಾಸನಗಳಲ್ಲಿ ಸೇರಿರುವ ಮೆತ್ತೆಗಳು) ಪೞಿಯ ಬಿತ್ತರಿಗೆ ಕರಂ ಪೆರ್ಚುವ ಮಹಿಮೆಯನು ಎಯ್ದೆ ನಿಮಿರ್ಚೆ (ಸಣ್ಣ ಹತ್ತಿಯ ಪೀಠಗಳೂ ವಿಶೇಷ ವೈಭವವನ್ನು ಅತಿಶಯವಾಗಿ ಉಂಟು ಮಾಡಲು) ಮಹಾ ಮಕುಟ ಬದ್ಧರೋಳಿಯೊಳು ಇರ್ದರ್ (ಮಹಾರಾಜರುಗಳು ಸಾಲಾಗಿ ಇದ್ದರು. )
ಪದ್ಯ-೨೪:ಅರ್ಥ: ೨೪. ಹತ್ತಿರ ಇಟ್ಟಿರುವ ಲೋಹಾಸನಗಳಲ್ಲಿ ಸೇರಿರುವ ಮೆತ್ತೆಗಳು (ಪೞಯ?) ಸಣ್ಣ ಹತ್ತಿಯ ಪೀಠಗಳೂ ವಿಶೇಷ ವೈಭವವನ್ನು ಅತಿಶಯವಾಗಿ ಉಂಟು ಮಾಡಲು ಮಹಾರಾಜರುಗಳು ಸಾಲಾಗಿ ಇದ್ದರು.
ಮಗ ಮಗ ಮಗಿಸುವ ಮೃಗಮದ
ದಗರುವ ಕಪ್ಪುರದ ಕಂಪುಮಂ ಸೂಡಿದ ಬಾ|
ಸಿಗದ ಪೊಸಗಂಪನಿಂಬಾ
ಗೊಗೆದಿರೆ ಮಾಡಿದುದು ಚಾಮರರುಹಗಂಧವಹಂ|| ೨೫ ||
ಪದ್ಯ-೨೫:ಪದವಿಭಾಗ-ಅರ್ಥ:ಮಗ ಮಗ ಮಗಿಸುವ ಮೃಗಮದದ (ಸುಗಂಧವನ್ನು ಬೀರುತ್ತಿರುವ ಕಸ್ತೂರಿಯ,) ಅಗರುವ ಕಪ್ಪುರದ ಕಂಪುಮಂ (ಅಗರು ಮತ್ತು ಪಚ್ಚಕರ್ಪೂರದ ಸುವಾಸನೆಯನ್ನೂ) ಸೂಡಿದ ಬಾಸಿಗದ ಪೊಸ ಗಂಪನು ಇಂಬಾಗಿ ಒಗೆದಿರೆ-> (ಅಲ್ಲಿ ನೆರೆದವರು ಮುಡಿದು ಕೊಂಡಿರುವ ಬಾಸಿಗದ ಹೊಸ ಸುವಾಸನೆಯನ್ನು) ಮಾಡಿದುದು ಚಾಮರರುಹ ಗಂಧವಹಂ (ಚಾಮರ ಬೀಸುವುದರಿಂದ ಎದ್ದ ಗಾಳಿಯು ಅದು ಸಂತೋಷದಾಯಕವಗಿರುವಂತೆ ಮಾಡಿತು. )
ಪದ್ಯ-೨೫:ಅರ್ಥ: ಸುಗಂಧವನ್ನು ಬೀರುತ್ತಿರುವ ಕಸ್ತೂರಿಯ, ಅಗರು ಮತ್ತು ಪಚ್ಚಕರ್ಪೂರದ ಸುವಾಸನೆಯನ್ನೂ, ಅಲ್ಲಿ ನೆರೆದವರು ಮುಡಿದು ಕೊಂಡಿರುವ ಬಾಸಿಗದ ಹೊಸ ಸುವಾಸನೆಯನ್ನು ಚಾಮರ ಬೀಸುವುದರಿಂದ ಎದ್ದ ಗಾಳಿಯು ಅದು ಸಂತೋಷದಾಯಕವಗಿರುವಂತೆ ಮಾಡಿತು.
ಪಸರಿಸಿದ ತಾರಹಾರದ
ಪೊಸವೆಳ್ದಿಂಗಳುಮನಮರ್ದ ಪೆರ್ದುಡುಗೆಗಳೊಳ್|
ಮಿಸುಗುವ ಪೊಸ ಮಾಣಿಕದೆಳ
ವಿಸಿಲುಮನೊಡಗಾಣಲಾದುದರಿಗನ ಸಭೆಯೊಳ್|| ೨೬ ||
ಪದ್ಯ-೨೬:ಪದವಿಭಾಗ-ಅರ್ಥ:ಪಸರಿಸಿದ ತಾರಹಾರದ ಪೊಸ ವೆಳ್ದಿಂಗಳುಮನು (ಪ್ರಸರಿಸಿರುವ ಮುತ್ತಿನ ಹಾರಗಳ ಹೊಸಬೆಳ್ದಿಂಗಳುಗಳನ್ನು) ಅಮರ್ದ ಪೆರ್ದು ಉಡುಗೆಗಳೊಳ್ ಮಿಸುಗುವ (ಧರಿಸಿರುವ ಬೆಲೆಯುಳ್ಳ ಆಭರಣ ಉಡುಗೆಗಳಲ್ಲಿ ) ಪೊಸ ಮಾಣಿಕದ ಎಳವಿಸಿಲುಮನು (ಹೊಸ ಮಾಣಿಕ್ಯಗಳ ಪ್ರಕಾಶಿಸುವ ಎಳೆಯ ಬಿಸಿಲನ್ನೂ,)ಒಡಗಾಣಲು ಆದುದು ಅರಿಗನ ಸಭೆಯೊಳ್ (ಅರಿಕೇಸರಿಯ ಆಸ್ಥಾನದಲ್ಲಿ ಒಟ್ಟಿಗೆ ಕಾಣಲು ಸಾಧ್ಯವಾಯಿತು. )
ಪದ್ಯ-೨೬:ಅರ್ಥ: ಪ್ರಸರಿಸಿರುವ ಮುತ್ತಿನ ಹಾರಗಳ ಹೊಸಬೆಳ್ದಿಂಗಳುಗಳನ್ನೂ, ಧರಿಸಿರುವ ಬೆಲೆಯುಳ್ಳ ಆಭರಣಗಳಲ್ಲಿ ಪ್ರಕಾಶಿಸುವ ಹೊಸ ಮಾಣಿಕ್ಯಗಳ ಉಡುಗೆಗಳಲ್ಲಿ ಎಳೆಯ ಬಿಸಿಲನ್ನೂ, ಅರಿಕೇಸರಿಯ ಆಸ್ಥಾನದಲ್ಲಿ ಒಟ್ಟಿಗೆ ಕಾಣಲು ಸಾಧ್ಯವಾಯಿತು. (ಅರಿಕೇಸರಿಯ ಆಸ್ಥಾನದಲ್ಲಿ ಬೆಳುದಿಂಗಳನ್ನೂ ಎಳೆ ಬಿಸಲನ್ನೂ ಒಟ್ಟಿಗೆ ಕಾಣಲು ಸಾಧ್ಯವಾಯಿತು. ಎಂದು ಭಾವ)
ವ|| ಅಂತು ದೇವೇಂದ್ರನಾಸ್ಥಾನಮನೆ ಪೋಲ್ತು ಸೊಗಯಿಸುವ ಸಂಸಾರಸಾರೋದಯ ನಾಸ್ಥಾನದೊಳೊರ್ವ ವೈತಾಳಿಕಂ ನಿಂದಿರ್ದು ಮೃದುಮಧುರಗಂಭೀರಧ್ವನಿಯಿನಿಂತೆಂದಂ-
ವಚನ:ಪದವಿಭಾಗ-ಅರ್ಥ:ಅಂತು ದೇವೇಂದ್ರನ ಆಸ್ಥಾನಮನೆ ಪೋಲ್ತು ಸೊಗಯಿಸುವ (ಹಾಗೆ ದೇವೇಂದ್ರನ ಸಭೆಯನ್ನೇ ಹೋಲುತ್ತ ಸೊಗಸಿನಿಂದ ಕೂಡಿದಸುವ) ಸಂಸಾರ ಸಾರೋದಯನ ಆಸ್ಥಾನದೊಳು ( ಸಂಸಾರಸಾರೋದಯನಾದ ಅರ್ಜುನನ ಆಸ್ಥಾನದಲ್ಲಿದ್ದ) ಒರ್ವ ವೈತಾಳಿಕಂ ನಿಂದಿರ್ದು ಮೃದು ಮಧುರ ಗಂಭೀರಧ್ವನಿಯಿಂ ಇಂತೆಂದಂ ( ವೈತಾಳಿಕನು ಎದ್ದು ನಿಂತು ಮೃದು ಮಧುರ ಗಂಭೀರ ಧ್ವನಿಯಿಂದ ಹೀಗೆಂದನು-)-
ವಚನ:ಅರ್ಥ:ಹಾಗೆ ದೇವೇಂದ್ರನ ಸಭೆಯನ್ನೇ ಹೋಲುತ್ತ ಸೊಗಸಿನಿಂದ ಕೂಡಿದಸುವ ಸಂಸಾರಸಾರೋದಯನಾದ ಅರ್ಜುನನ ಆಸ್ಥಾನದಲ್ಲಿದ್ದ ವಿವಿಧ ತಾಳಗಲಲ್ಲಿ ಹಅಡುವ ವೈತಾಳಿಕನು ಎದ್ದು ನಿಂತು ಮೃದು ಮಧುರ ಗಂಭೀರ ಧ್ವನಿಯಿಂದ ಹೀಗೆಂದನು/ ಹಾಡಿದನು-
ಸ್ರ|| ಆಸೇತೋ ರಾಮ ಚಾಪಾಟನಿ ತಟಯುಗ ಟಂಕಾಂಕಿತಾಖಂಡ ಖಂಡಾ
ದಾ ಪೀಯೂಷಾಬ್ಧಿ ದುಗ್ಧಪ್ಲವ ಧವಳ ಕನತ್ಕಂದರಾನ್ಮಂದರಾದ್ರೇ|
ಆಚಂದ್ರಾರ್ಕ ಪ್ರತೀತೋಭಯ ಗಿರಿಶಿಖರಾತ್ ಸ್ವೋದಯಸ್ಯೇ ಕ ಹೇತೋ
ಶೈಲೇಳಾಕಲ್ಪಕಾಳಂ ಕ್ಷಿತಿವಲಯಮಿದಂ ಪಾತು ವಿಕ್ರಾಂತತುಂಗಃ|| ೨೭ ||
ಪದ್ಯ-೨೭:ಪದವಿಭಾಗ-ಅರ್ಥ:ಆಸೇತೋ, ರಾಮ ಚಾಪ ಅಟನಿ ತಟಯುಗ (ಶ್ರೀರಾಮನ ಬಿಲ್ಲಿನ ಕೊಪ್ಪಿನ ಎರಡು ಕಡೆಗಳೆಂಬ) ಟಂಕ ಅಂಕಿತ (ಉಳಿಯಿಂದ ಗುರುತು ಮಾಡಲ್ಪಟ್ಟ) ಅಖಂಡ ಖಂಡಾತ್ ಆ ಪೀಯೂಷಾಬ್ಧಿ + ಆಸೇತೋ, (ಸಮಗ್ರವಾದ ಭರತಖಂಡದಲ್ಲಿ ರಾಮಸೇತುವಿನವರೆಗೂ) ದುಗ್ಧಪ್ಲವ ಧವಳ ಕನತ್ (ಹಾಲಿನ ಪ್ರವಾಹದಂತೆ ಬೆಳ್ಳಗೆ ಪ್ರಕಾಶಿಸುತ್ತಿರುವ) ಕಂದರಾನ್ ಮಂದರಾದ್ರೇ ಆಚಂದ್ರಾರ್ಕ ಪ್ರತೀತ ( ಕ್ಷೀರಸಾಗರದಂತೆ ಮಂದರಪರ್ವತ ಕಣಿವೆಯವರೆಗೂ) ಉಭಯ ಗಿರಿಶಿಖರಾತ್ (ಪೂರ್ವ ಪಶ್ಚಿಮ ಪರ್ವತಗಳ ಪರ್ವತಭೂಮಿಗಳಿರುವ ಶಿಖರಗಳವರೆಗೂ ) ಸ್ವೋದಯಸ್ಯ ಏಕ ಹೇತೋ (ತನ್ನ ಅಭಿವೃದ್ಧಿಗೆ ಒಂದೇ ಕಾರಣವಾಗಿರುವ) ಶೈಲೇಳಾ ಕಲ್ಪಕಾಳಂ (ಪರ್ವತಭೂಮಿಗಳಿರುವ ಶಿಖರಗಳು ಇರುವ ಕಾಲದವರೆಗೂ) ಕ್ಷಿತಿವಲಯಂ ಇದಂ ಪಾತು ವಿಕ್ರಾಂತತುಂಗಃ (ವಿಕ್ರಾಂತತುಂಗನಾದ ಅರ್ಜುನನು ಈ ಭೂಮಂಡಲವನ್ನು ರಕ್ಷಿಸಲಿ.)
ಪದ್ಯ-೨೭:ಅರ್ಥ: ಶ್ರೀರಾಮನ ಬಿಲ್ಲಿನ ಕೊಪ್ಪಿನ ಎರಡು ಕಡೆಗಳೆಂಬ ಉಳಿಯಿಂದ ಗುರುತು ಮಾಡಲ್ಪಟ್ಟ ಸಮಗ್ರವಾದ ಭರತಖಂಡದಲ್ಲಿ ರಾಮಸೇತುವಿನವರೆಗೂ ಹಾಲಿನ ಪ್ರವಾಹದಂತೆ ಬೆಳ್ಳಗೆ ಪ್ರಕಾಶಿಸುತ್ತಿರುವ, ಕ್ಷೀರಸಾಗರದಂತೆ ಮಂದರಪರ್ವತ ಕಣಿವೆಯವರೆಗೂ ತನ್ನ ಅಭಿವೃದ್ಧಿಗೆ ಒಂದೇ ಕಾರಣವಾಗಿರುವ ಚಂದ್ರ ಸೂರ್ಯರ ಪರ್ಯಂತ ಪ್ರಸಿದ್ಧರಾಗಿರುವ ಪೂರ್ವ ಪಶ್ಚಿಮ ಪರ್ವತಗಳ ಪರ್ವತಭೂಮಿಗಳಿರುವ ಶಿಖರಗಳು ಇರುವ ಕಾಲದವರೆಗೂ ವಿಕ್ರಾಂತತುಂಗನಾದ ಅರ್ಜುನನು ಈ ಭೂಮಂಡಲವನ್ನು ರಕ್ಷಿಸಲಿ.
ಶಾ|| ಶೌರ್ಯಂ ಯಸ್ಯ ಗುಣಾರ್ಣವ ಕ್ಷಿತಿಪತೇಸ್ಸವ್ಯಾಪಸವ್ಯಕ್ರಮಾತ್
ಗರ್ವಾಕೃಷ್ಟವಿಕರ್ಣಟಂಕನಿಕರೋತ್ಕೀರ್ಣಪ್ರಭಾವಾಕ್ಷರೈಃ|
ಮತ್ತಾರಿದ್ವಿಪಮಸ್ತಕಸ್ಥಿತಶಿಲಾಷಟ್ಟಂ ಸದಾಖ್ಯಾಯತೇ
ತಸ್ಯಾಯಂ ಪುನರುಕ್ತ ಏವ ಸಮರ ಶ್ಲಾಘ್ಯಪ್ರಶಸ್ತಿಕ್ರಮಃ|| ೨೮ ||
ಪದ್ಯ-೨೮:ಪದವಿಭಾಗ-ಅರ್ಥ:ಶೌರ್ಯಂ ಯಸ್ಯ ಗುಣಾರ್ಣವ ಕ್ಷಿತಿಪತೇ (ಯಾವ ಗುಣಾರ್ಣವನೆಂಬ ಬಿರುದುಳ್ಳ ಅರಿಕೇಸರಿರಾಜನ (ಅರ್ಜುನನ)) ಸ್ಸ ಸವ್ಯ ಅಪಸವ್ಯಕ್ರಮಾತ್ (ಪರಾಕ್ರಮವು ಬಲ ಮತ್ತು ಎಡಗೈಗಳಿಂದ ಪ್ರಯೋಗಮಾಡುವ ಕ್ರಮವಾದ) ಗರ್ವಾಕೃಷ್ಟ ವಿಕರ್ಣಟಂಕ ನಿಕರೋತ್ಕೀರ್ಣ (ಕ್ರಮವಾದ ಗರ್ವದಿಂದ ಕೂಡಿ ಕಿವಿಯವರೆಗೂ ಸೆಳೆಯುವ ಬಾಣಗಳೆಂಬ) ಪ್ರಭಾವಾಕ್ಷರೈಃ (ಶಕ್ತಿಯುತವಾದ ಉಳಿಗಳ ಸಮೂಹದಿಂದ/ ಅಕ್ಷರಗಳಿಂದ) ಮತ್ತ ಅರಿದ್ವಿಪ (ಶತ್ರುರಾಜರ ಮದ್ದಾನೆಗಳ) ಮಸ್ತಕಸ್ಥಿತ ಶಿಲಾಷಟ್ಟಂ ( ಕುಂಭಸ್ಥಳದಲ್ಲಿ ಶಕ್ತಿಯುತವಾದ ಉಳಿಗಳ ಸಮೂಹದಿಂದ/ ಅಕ್ಷರಗಳಿಂದ ಕೊರೆಯಲ್ಪಟ್ಟಿರುವ ಶಾಸನಷ್ಮಲಕಗಳು) ಸದಾ ಆಖ್ಯಾಯತೇ (ಸದಾ ಹೇಳುತ್ತಿರುವ) ತಸ್ಯ (ಅವನ)ಅಯಂ (ಈ) ಪುನರುಕ್ತ ಏವ-> ಸಮರ ಶ್ಲಾಘ್ಯ ಪ್ರಶಸ್ತಿ ಕ್ರಮಃ (ಅರಿಕೇಸೆರಿಯ ಯುದ್ಧ ಪ್ರಶಸ್ತಿಯ ಕ್ರಮವು- ಪುನರುಕ್ತ ಏವ- ಪುನರುಕ್ತವಾದದ್ದೇ- /ಪುನರುಕ್ತವಾಗುತ್ತಿರಲಿ.)
ಪದ್ಯ-೨೮:ಅರ್ಥ: ಯಾವ ಗುಣಾರ್ಣವನೆಂಬ ಬಿರುದುಳ್ಳ ಅರಿಕೇಸರಿರಾಜನ (ಅರ್ಜುನನ) ಪರಾಕ್ರಮವು ಬಲ ಮತ್ತು ಎಡಗೈಗಳಿಂದ ಪ್ರಯೋಗಮಾಡುವ ಕ್ರಮವಾದ ಗರ್ವದಿಂದ ಕೂಡಿ ಕಿವಿಯವರೆಗೂ ಸೆಳೆಯುವ ಬಾಣಗಳೆಂಬ ಶತ್ರುರಾಜರ ಮದ್ದಾನೆಗಳ ಕುಂಭಸ್ಥಳದಲ್ಲಿ ಶಕ್ತಿಯುತವಾದ ಉಳಿಗಳ ಸಮೂಹದಿಂದ/ ಅಕ್ಷರಗಳಿಂದ ಕೊರೆಯಲ್ಪಟ್ಟಿರುವ ಶಾಸನಷ್ಮಲಕಗಳು ಸದಾ ಹೇಳುತ್ತಿರುವ ಈ ಅರಿಕೇಸೆರಿಯ ಯುದ್ಧ ಪ್ರಶಸ್ತಿಯ ಕ್ರಮವು, ಪುನರುಕ್ತವಾಗುತ್ತಿರಲಿ.
ಏತತ್ಕಂಪಿತ ಪರ್ವತಾಸ್ಸು ಚಕಿತಾ ಏತುಂ ಸಮುದ್ರಂ ಪುನಃ
ಸಪ್ತದ್ವೀಪ ಜಿಗೀಷಯಾ ವಿಜಯಿನಾ ಕೇನಾಪಿ ಪುರಿಜೀಕೃತಂ|
ಯಜ್ಜಾತಂ ಶರ ಶಂಕು ಶಲ್ಯ ಶತಕೈಸ್ಸಂತಾಪ್ಯ ಶತ್ರುದ್ವಿಪಾನ್
ನಿಶ್ವಾಸೋಪರತಾನ್ ಗುಣಾರ್ಣವಮಹೀಪಾಲೇನ ಯುದ್ಧಾವನೌ|| ೨೯ ||
ಪದ್ಯ-೨೯:ಪದವಿಭಾಗ-ಅರ್ಥ:ಏತತ್ಕಂಪಿತ ಪರ್ವತಾಸ್ಸು ಚಕಿತಾ ಏತುಂ ಸಮುದ್ರಂ ಪುನಃಸಪ್ತದ್ವೀಪ ಜಿಗೀಷಯಾ ವಿಜಯಿನಾ ಕೇನಾಪಿ ಪುರಿಜೀಕೃತಂ ಯಜ್ಜಾತಂ ಶರ ಶಂಕು ಶಲ್ಯ ಶತಕೈಸ್ಸಂತಾಪ್ಯ ಶತ್ರುದ್ವಿಪಾನ್ನಿಶ್ವಾಸೋಪರತಾನ್ ಗುಣಾರ್ಣವಮಹೀಪಾಲೇನ ಯುದ್ಧಾವನೌ
ಪದ್ಯ-೨೯:ಅರ್ಥ: ಗುಣಾರ್ಣವ ಮಹೀಪಾಲನ ಯುದ್ಧಭೂಮಿಯಲ್ಲಿ ಅವನ ಹರಿತವಾದ ನೂರಾರು ಬಾಣಗಳಿಂದ ಹತವಾದ ಶತ್ರುರಾಜರ ಆನೆಗಳು ಸಪ್ತ ದ್ವೀಪಗಳನ್ನೂ ಗೆಲ್ಲಬೇಕೆಂಬ ಆಶೆಯುಳ್ಳ ಇಂದ್ರನಿಗೆ ಹೆದರಿ ನಡುಗುತ್ತ ಸಮುದ್ರಪ್ರವೇಶಮಾಡುತ್ತಿರುವ ಕುಲಪರ್ವತಗಳ ರಾಜಿಯ ಹಾಗಿವೆ.
ಪೃಥ್ವಿ|| ಪರಸ್ಪರ ವಿರುದ್ಧಯೋರ್ವಿನಯ ಯೌವನಾರಂಭಯೋಃ
ಪ್ರಭೂತ ಸಹಜೇರ್ಷ್ಯಯೋರಪಿ ಸರಸ್ವತೀ ಶ್ರೀಸ್ತಿಯೋಃ||
ತಥಾಚ ಪರಿಹಾರಿಣೋರಪಿ ಮಹಾ ಕ್ಷಮಾ ಶೌರ್ಯಯೋಃ
ಚಿರಂ ಪ್ರಥಮ ಸಂಗಮೋ ಹರಿಗ ಭೂಪತೌ ದೃಶ್ಯತೇ|| ೩೦ ||
ಪದ್ಯ-೩೦:ಪದವಿಭಾಗ-ಅರ್ಥ: ಪರಸ್ಪರ ವಿರುದ್ಧಯೋರ್ (ಪರಸ್ಪರ ವಿರೋಧವಾಗಿರುವ) ವಿನಯ ಯೌವನ ಆರಂಭಯೋಃ (ವಿನಯ ಮತ್ತು ಯವ್ವನದ ಆರಂಭಗಳು,) ಪ್ರಭೂತ (ಹುಟ್ಟಿಉವ )ಸಹಜ ಈರ್ಷ್ಯಯೋರ್ ಅಪಿ (ಸಹಜವಾಗಿಯೇ ಹುಟ್ಟಿರುವ ಅಸೂಯೆಯಿಂದ ಕೂಡಿದ) ಸರಸ್ವತೀ ಶ್ರೀಸ್ತಿಯೋಃ (ಸರಸ್ವತಿ ಮತ್ತು ಲಕ್ಷ್ಮಿಗಳನ್ನೂ) ತಥಾಚ ಪರಿಹಾರಿಣೋರಪಿ (ಹಾಗೆಯೇ ಪರಸ್ಪರ ಪರಿಹಾರವಳ್ಳವುಗಳಾದ) ಮಹಾ ಕ್ಷಮಾ ಶೌರ್ಯಯೋಃ (ದಯೆ ಮತ್ತು ಶೌರ್ಯಗಳ) ಚಿರಂ/ ಚಿರಾತ್ (ಬಹುಕಾಲವಾದ ಮೇಲೆ) ಪ್ರಥಮ ಸಂಗಮೋ (ಮೋದಲನೆಯ ಸಲ ಸಂಗನವಾಗಿರುವುದನ್ನು) ಹರಿಗ ಭೂಪತೌ ದೃಶ್ಯತೇ (ಮೋದಲನೆಯ ಸಲ ಅರಿಕೇಸರಿ ರಾಜನಲ್ಲಿ ಸಂಗನವಾಗಿರುವುದನ್ನು/ ಒಟ್ಟಿಗೆ ಇರುವುದನ್ನು ನೋಡಬಹುದಾಗಿದೆ.)
ಪದ್ಯ-೩೦:ಅರ್ಥ: ಪರಸ್ಪರ ವಿರೋಧವಾಗಿರುವ ವಿನಯ ಮತ್ತು ಯವ್ವನದ ಆರಂಭಗಳು, ಸಹಜವಾಗಿಯೇ ಹುಟ್ಟಿರುವ ಅಸೂಯೆಯಿಂದ ಕೂಡಿದ ಸರಸ್ವತಿ ಮತ್ತು ಲಕ್ಷ್ಮಿಗಳನ್ನೂ ಹಾಗೆಯೇ ಪರಸ್ಪರ ಪರಿಹಾರವಳ್ಳವುಗಳಾದ ದಯೆ ಮತ್ತು ಶೌರ್ಯಗಳ ಬಹುಕಾಲವಾದ ಮೇಲೆ ಮೊತ್ತ ಮೋದಲನೆಯ ಸಲ ಅರಿಕೇಸರಿ ರಾಜನಲ್ಲಿ ಸಂಗನವಾಗಿರುವುದನ್ನು/ ಒಟ್ಟಿಗೆ ಇರುವುದನ್ನು ನೋಡಬಹುದಾಗಿದೆ.
ವ|| ಅಂತಾತಂ ಪೊಗೞ್ದು ಮಾಣ್ದ ನಂತರದೊಳೆತ್ತಿಕೊಂಡ ಶ್ರುತಿಯಂ ಪಲ್ಲಟಿಸದೆಯುಂ ಮತ್ತಂ ಪರಿಚ್ಛೇದಂಗಳನಱಿದುಮೊಟ್ಟಜೆಯ ರಾಜಿಯಿಂ ಕಣ್ಗಳಿಂಚರದೊಳಂ ಪೊಂಪುೞಿವೋಗೆ ಮಂಗಳಪಾಠಕರಿರ್ವರೊಂದೆ ಕೊರಲೊಳಿಂತೆಂದು ಮಂಗಳವೃತ್ತಂಗಳನೋದಿದರ್-
ವಚನ:ಪದವಿಭಾಗ-ಅರ್ಥ:ಅಂತು ಆತಂ ಪೊಗೞ್ದು ಮಾಣ್ದ ನಂತರದೊಳ್ (ಹಾಗೆ ಅವನು ಹೊಗಳಿ ನಿಲ್ಲಿಸಿಯಾದ ಮೇಲೆ ) ಎತ್ತಿಕೊಂಡ ಶ್ರುತಿಯಂ ಪಲ್ಲಟಿಸದೆಯುಂ (ಶಾಸ್ತ್ರವನ್ನು (ವೇದಾಕ್ಷರಗಳನ್ನು)ಪಲ್ಲಟ ಮಾಡದೆ / ವ್ಯತ್ಸಾಸಮಾಡದೆಯೂ) ಮತ್ತಂ ಪರಿಚ್ಛೇದಂಗಳು ಅಱಿದುಂ ಒಟ್ಟಜೆಯ ರಾಜಿಯಿಂ (ನಿಲ್ಲಿಸಬೇಕಾದ ಸ್ಥಳಗಳನ್ನೂ ತಿಳಿದೂ ಸಂಪೂರ್ಣಾರ್ಥ ದ್ಯೋತಕವಾಗುವ ಹಾಗೂ) ಕಣ್ಗಳಿಂಚರದೊಳಂ (ಕಂಡಂತೆ ಇನಿದಾದ ಸ್ವರಗಳಿಂದ) ಪೊಂಪುೞಿ ವೋಗೆ (ರೋಮಾಂಚವಾಗುವ ಹಾಗೂ) ಮಂಗಳಪಾಠಕರು ಇರ್ವರುಂ ಒಂದೆ ಕೊರಲೊಳು (ಇಬ್ಬರು ಮಂಗಳಪಾಠಕರು ಒಕ್ಕೊರಲಿನಿಂದ) ಇಂತೆಂದು ಮಂಗಳವೃತ್ತಂಗಳನು ಓದಿದರ್ (ಮಂಗಳ ಸ್ತೋತ್ರವನ್ನು ಪಠಿಸಿದರು.)-
ವಚನ:ಅರ್ಥ:ಹಾಗೆ ಅವನು ಹೊಗಳಿ ನಿಲ್ಲಿಸಿಯಾದ ಮೇಲೆ, ಶಾಸ್ತ್ರವನ್ನು (ವೇದಾಕ್ಷರಗಳನ್ನು) ವ್ಯತ್ಸಾಸಮಾಡದೆಯೂ (ಸುಸ್ವರವಾಗಿ) ನಿಲ್ಲಿಸಬೇಕಾದ ಸ್ಥಳಗಳನ್ನೂ ತಿಳಿದೂ ಸಂಪೂರ್ಣಾರ್ಥ ದ್ಯೋತಕವಾಗುವ ಹಾಗೂ ಕಂಡಂತೆ ಇನಿದಾದ ಸ್ವರಗಳಿಂದ ಕೂಡಿ ರೋಮಾಂಚವಾಗುವ ಹಾಗೂ ಇಬ್ಬರು ಮಂಗಳಪಾಠಕರು ಒಕ್ಕೊರಲಿನಿಂದ ಮಂಗಳ ಸ್ತೋತ್ರವನ್ನು ಪಠಿಸಿದರು.

ಅರಿಕೇಸರಿ ಯಾ ಅರ್ಜುನನಿಗೆ ಶುಬ ಹಾರೈಕೆಯ ಆಶೀರ್ವಚನ: ಮಂಗಳಸ್ತೋತ್ರ[ಸಂಪಾದಿಸಿ]

ಶಾ|| ರಂಗತ್ತುಂಗತರಂಗಭಂಗುರಲಸದ್ಗಂಗಾಜಳಂ ನರ್ಮದಾ
ಸಂಗ ಸ್ವಚ್ಛವನಂ ಪ್ರಸಿದ್ಧ ವರದಾ ಪುಣ್ಯಾಂಬು ಗೋದಾವರೀ|
ಸಂಗತ್ಯೋರ್ಜಿತವಾರಿಸಾರ ಯುಮುನಾ ನೀಳೋರ್ಮಿ ನೀರಂ ಭುಜೋ
ತ್ತುಂಗಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೩೧ /31||
ಪದ್ಯ-೩೧:ಪದವಿಭಾಗ-ಅರ್ಥ:ರಂಗತ್ ತುಂಗ ತರಂಗ ಭಂಗುರ ಲಸತ್ ಗಂಗಾಜಳಂ (ನರ್ತನ ಮಾಡುತ್ತಿರುವ ಎತ್ತರ ಅಲೆಗಳಿಂದ ವಿರ್ಭಾವಾಗುತ್ತಿರುವ (ಘರ್ಷಣೆಯನ್ನು ಹೊಂದುತ್ತಿರುವ) ಪ್ರಕಾಶಮಾನವಾದ ಗಂಗಾಜಲವೂ) ನರ್ಮದಾ ಆಸಂಗ ಸ್ವಚ್ಛವನಂ (ಸ್ವಚ್ಛವಾಗಿರುವ ನರ್ಮದಾನದಿಯ ನೀರೂ) ಪ್ರಸಿದ್ಧ ವರದಾ ಪುಣ್ಯಾಂಬು (ಪ್ರಸಿದ್ಧವೂ ಪವಿತ್ರವೂ ಆದ ವರದಾನದಿಯ ನೀರೂ) ಗೋದಾವರೀ ಸಂಗತ್ ಊರ್ಜಿತ ವಾರಿಸಾರ (ಶ್ರೇಷ್ಠವಾದ ಗೋದಾವರಿಯ ಊರ್ಜಿತ/ಸೇರಿ ಹೆಚ್ಚುತ್ತಿವ ನೀರೂ) ಯುಮುನಾ ನೀಳೋರ್ಮಿ ನೀರಂ (ಸಾರವತ್ತಾದ ಯಮುನಾನದಿಯ ನೀಲಿಯ ಬಣ್ಣದ ಅಲೆಗಳಿಂದ ಕೂಡಿದ ನೀರೂ), ಭುಜೋತ್ತುಂಗಂಗೆ ಈಗೆ ಅರಿಗಂಗೆ ಮಂಗಳ ಮಹಾಶ್ರೀಯಂ ಜಯಶ್ರೀಯುಮಂ (ಇವೆಲ್ಲವೂ ಎತ್ತರವಾದ ಭುಜಗಳುಳ್ಳ ಅರಿಗನಿಗೆ (ಅರ್ಜುನನಿಗೆ) ಮಂಗಳಕರವಾದ ಸಂಪತ್ತನ್ನೂ ಜಯಲಕ್ಷ್ಮಿಯನ್ನೂ ಈಗೆ- ಕೊಡಲಿ)
ಪದ್ಯ-೩೧:ಅರ್ಥ: ನರ್ತನ ಮಾಡುತ್ತಿರುವ ಎತ್ತರ ಅಲೆಗಳಿಂದ ವಿರ್ಭಾವಾಗುತ್ತಿರುವ (ಘರ್ಷಣೆಯನ್ನು ಹೊಂದುತ್ತಿರುವ) ಪ್ರಕಾಶಮಾನವಾದ ಗಂಗಾಜಲವೂ, ಸ್ವಚ್ಛವಾಗಿರುವ ನರ್ಮದಾನದಿಯ ನೀರೂ ಪ್ರಸಿದ್ಧವೂ ಪವಿತ್ರವೂ ಆದ ವರದಾನದಿಯ ನೀರೂ, ಶ್ರೇಷ್ಠವಾದ ಗೋದಾವರಿಯ ಊರ್ಜಿತ/ಸೇರಿ ಹೆಚ್ಚುತ್ತಿವ ನೀರೂ, ಸಾರವತ್ತಾದ ಯಮುನಾನದಿಯ ನೀಲಿಯ ಬಣ್ಣದ ಅಲೆಗಳಿಂದ ಕೂಡಿದ ನೀರೂ, ಇವೆಲ್ಲವೂ ಎತ್ತರವಾದ ಭುಜಗಳುಳ್ಳ ಅರಿಗನಿಗೆ (ಅರ್ಜುನನಿಗೆ) ಮಂಗಳಕರವಾದ ಸಂಪತ್ತನ್ನೂ ಜಯಲಕ್ಷ್ಮಿಯನ್ನೂ ಕೊಡಲಿ.
ಮ|| ಶ್ರುತದೇವೀವಚನಾಮೃತಂ ಶ್ರುತಕಥಾಳಾಪಂ ಶ್ರುತಸ್ಕಂದ ಸಂ
ತತಿ ಶಶ್ವಚ್ಚ್ರುತಪಾರಗ ಶ್ರುತಿ ಮಹೋರ್ಮ್ಯುಲ್ಲಾಸಿವಾರಾಶಿವಾ|
ರಿತಧಾತ್ರೀತಳಗೀತಿ ನಿರ್ಮಳಯಶಂಗಾರೂಢಸರ್ವಜ್ಞ ಭೂ
ಪತಿಗೊಲ್ದಾಗಳುಮೀಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೩೨ ||
ಪದ್ಯ-೩೨:ಪದವಿಭಾಗ-ಅರ್ಥ:ಶ್ರು(ಶೃ)ತದೇವೀ ವಚನಾಮೃತಂ ಶ್ರುತಕಥಾಳಾಪಂ (ಸರಸ್ವತಿ ವಚನಗಳೆಂಬ ಅಮೃತವೂ, ಕೇಳಿದ ಪುರಾಣಸಿದ್ಧವೂ ಆದ ಕಥಾ ಸಮೂಹಗಳೂ) ಶ್ರುತಸ್ಕಂದ ಸಂತತಿ (ಜಿನಾಗಮಗಳೂ) ಶಶ್ವಚ್ಚ್ರುತಪಾರಗ ಶ್ರುತಿ (ಶಶ್ವತ್ ಶ್ರುತಿ ಪಾರಗ ಶ್ರುತಿ- ಶಾಸ್ವತವಾದ ವೇದಗಳಲ್ಲಿ ಪಂಡಿತರಾದವರ ಜ್ಞಾನ), ಮಹೋರ್ಮ್ಯುಲ್ಲಾಸಿ (ಮಹಾ ಊರ್ಮಿ ಉಲ್ಲಾಸಿ- ಮಹಾ ಅಲೆಗಳಿಂದ ಉಲ್ಲಾಸವನ್ನುಳ್ಳ) ವಾರಾಶಿ ವಾರಿತ ಧಾತ್ರೀ (ಸಮುದ್ರದಿಂದ ತಡೆಯಲ್ಪಟ್ಟ ಭೂತಳದ) ಧಾತ್ರೀ ತಳಗೀತಿ (ಭೂತಳದ ಸ್ತೋತ್ರಗಳು,) ನಿರ್ಮಳ ಯಶಂಗೆ ಆರೂಢಸರ್ವಜ್ಞ (ನಿರ್ಮಲ ಕೀರ್ತಿಯುಳ್ಳ ಆರೂಢಸರ್ವಜ್ಞನೆಂಬ ಬಿರುದುಳ್ಳ) ಭೂಪತಿಗೆ ಒಲ್ದ ಆಗಳುಂ ೯೦ಯಾವಾಗಲೂ, ಸರ್ವದಾ) ಈಗೆ (ಕೊಡಲಿ) ಮಂಗಳ ಮಹಾಶ್ರೀಯಂ ಜಯಶ್ರೀಯುಮಂ (ಅರಿಕೇಸರಿ ರಾಜನಿಗೆ / ಅರ್ಜುನನಿಗೆ ಪ್ರೀತಿಯಿಂದ ಮಂಗಳಮಹಾಶ್ರೀಯನ್ನೂ ಜಯಶ್ರೀಯನ್ನೂ ಸರ್ವದಾ ಕೊಡಲಿ.)
ಪದ್ಯ-೩೨:ಅರ್ಥ: ಸರಸ್ವತಿ ವಚನಗಳೆಂಬ ಅಮೃತವೂ, ಕೇಳಿದ ಪುರಾಣಸಿದ್ಧವೂ ಆದ ಕಥಾ ಸಮೂಹಗಳೂ, ಜಿನಾಗಮಗಳೂ, ವೇದ ಸಮೂಹಗಳೂ ಶಾಸ್ವತವಾದ ವೇದಗಳಲ್ಲಿ ಪಂಡಿತರಾದವರ ಜ್ಞಾನಗಳೆಂಬ ದೊಡ್ಡ ಅಲೆಗಳಿಂದ ಸಮುದ್ರದಿಂದ ಪರಿವೃತರಾದ ಭೂಮಿಯ ಸಮುದ್ರಗೀತೆಗಳೂ ಇವೆಲ್ಲವೂ ನಿರ್ಮಲ ಕೀರ್ತಿಯುಳ್ಳ ಆರೂಢಸರ್ವಜ್ಞನೆಂಬ ಬಿರುದುಳ್ಳ ಅರಿಕೇಸರಿ ರಾಜನಿಗೆ (ಅರ್ಜುನನಿಗೆ) ಪ್ರೀತಿಯಿಂದ ಮಂಗಳಮಹಾಶ್ರೀಯನ್ನೂ ಜಯಶ್ರೀಯನ್ನೂ ಸರ್ವದಾ ಕೊಡಲಿ-
ಶಾ|| ಕೈಳಾಸಂ ನಿಷಧಾಧಿಪಾಂಗ ನಿಕಟಕ್ಷೋಣೀಧರಂ ನೀಳ ಕು
ತ್ಕೀಳಂ ಕಂದಮಹೀಧರಂ ಶಿಖರನಾಮೋದ್ಯನ್ನಗಂ ಪ್ರಸ್ಫುರ|
ತ್ಪ್ರಾಳೇಯಾಚಲಮೀತನೆಮ್ಮವೊಲಿಳಾಭೃನ್ನಾಥನೆಂದಿಂತಿಳಾ
ಪಾಳಂಗೀಗರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೩೩ ||
ಪದ್ಯ-೩೩:ಪದವಿಭಾಗ-ಅರ್ಥ:ಕೈಳಾಸಂ ನಿಷಧಾಧಿಪಾಂಗ ನಿಕಟಕ್ಷೋಣೀಧರಂ (ಕೈಲಾಸ ಪರ್ವತ, ನಿಷಧಪರ್ವತ ಮತ್ತು ಅಂಗದೇಶಕ್ಕೆ ಸಮೀಪವಾದ ಪರ್ವತ,) ನೀಳ ಕುತ್ಕೀಳಂ (ನೀಲಗಿರಿಯೆಂಬ ಪರ್ವತ,) ಕಂದಮಹೀಧರಂ ಶಿಖರನಾಮ ಉದ್ಯನ್ನಗಂ (ಕಂದವೆಂಬ ಪರ್ವತ, ಶಿಖರವೆಂಬ ಎತ್ತರ ಪರ್ವತ) ಪ್ರಸ್ಫುರತ್ಪ್ರಾಳೇಯಾಚಲಂ (ಎತ್ತರವೂ ಪ್ರಕಾಶವೂ ಆದ ಹಿಮವತ್ಪರ್ವತ) ಈತಂ ಎಮ್ಮವೊಲ್ ಇಳಾಭೃನ್ನಾಥಂ ಎಂದು (ಇವೆಲ್ಲ ಅರಿಕೇಸರಿಯೂ ನಮ್ಮ ಹಾಗೆಯೇ ರಾಜಾರಾಜ, ಚಕ್ರವರ್ತಿ -ಇಳೆಯನ್ನು ಧರಿಸಿರುವವನು- ಎಂದು) ಎಂದು ಇಂತು ಇಳಾ ಪಾಳಂಗೆ ಈಗೆ ಅರಿಗಂಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ (ಎಂದು ಭೂಪಾಲನಾದ ಅರಿಕೇಸರಿಗೆ /ಅರ್ಜುನನಿಗೆ- ಮಂಗಳ ಮಹಾಶ್ರೀಯನ್ನೂ ಜಯಶ್ರೀಯನ್ನೂ ಅನುಗ್ರಹಿಸಲಿ. )
ಪದ್ಯ-೩೩:ಅರ್ಥ: ಕೈಲಾಸ ಪರ್ವತ, ನಿಷಧಪರ್ವತ ಮತ್ತು ಅಂಗದೇಶಕ್ಕೆ ಸಮೀಪವಾದ ಪರ್ವತ, ನೀಲಗಿರಿಯೆಂಬ ಪರ್ವತ, ಕಂದವೆಂಬ ಪರ್ವತ, ಶಿಖರವೆಂಬ ಪರ್ವತ ಎತ್ತರವೂ ಪ್ರಕಾಶವೂ ಆದ ಹಿಮವತ್ಪರ್ವತ ಇವೆಲ್ಲ ಅರಿಕೇಸರಿಯೂ ನಮ್ಮ ಹಾಗೆಯೇ ರಾಜಾರಾಜ, ಚಕ್ರವರ್ತಿ (ಇಳೆಯನ್ನು ಧರಿಸಿರುವವನು) ಎಂದು ಭೂಪಾಲನಾದ ಅರಿಕೇಸರಿಗೆ (ಅರ್ಜುನನಿಗೆ) ಮಂಗಳ ಮಹಾಶ್ರೀಯನ್ನೂ ಜಯಶ್ರೀಯನ್ನೂ ಅನುಗ್ರಹಿಸಲಿ.
ಮ|| ಜಳಧಿ ದ್ವೀಪ ರಸತಳಾಂಬರ ಕುಲಾದ್ರೀಂದ್ರಂಗಳೋರಂತೆ ತ
ನ್ನೊಳಮುದ್ಯತ್ಕಟಕಂಗಳಾವಹ ಮಹಾದ್ರವ್ಯಂಗಳೋರಂತೆ ಮಂ|
ಗಳಕಾರ್ಯಂಗಳನಿತ್ತು ಮತ್ತೆ ಮಣಿಭೂಷಾತುಂಗರತ್ನಾಂಶು ಪಾ
ಟಳಿತಂಗೀಗರಿಗಂಗೆ ಮಂಗಳ ಮಹಾಶ್ರೀಯಂ ಜಯಶ್ರೀಯುಮಂ|| ೩೪ ||
ಪದ್ಯ-೩೪:ಪದವಿಭಾಗ-ಅರ್ಥ:ಜಳಧಿ ದ್ವೀಪ ರಸತಳಾಂಬರ ಕುಲಾದ್ರೀಂದ್ರಂಗಳು ಓರಂತೆ (ಸಮುದ್ರ, ದ್ವೀಪ, ಪಾತಾಳ, ಆಕಾಶ ಮತ್ತು ಕುಲಪರ್ವತಗಳು ಕ್ರಮವಾಗಿ) ತನ್ನೊಳಂ ಉದ್ಯತ್ಕಟಕಂಗಳ್ ಆವಹ ಮಹಾದ್ರವ್ಯಂಗಳಂ (ತನ್ನಲ್ಲಿರುವ ಅತಿಶಯವಾದ ಸೈನ್ಯಗಳೂ, ಆಹವ- ಯುದ್ಧದಮಹಾ ವಸ್ತುಗಳನ್ನೂ) ಓರಂತೆ (ಕ್ರಮವಾಗಿ) ಮಂಗಳಕಾರ್ಯಂಗಳನು ಇತ್ತು ಮತ್ತೆ ಮಣಿಭೂಷಾತುಂಗರತ್ನಾಂಶು ಪಾಟಳಿತಂಗೆ (ಒಂದೇ ಸಮನಾದ ಮಂಗಳಕಾರ್ಯಗಳನ್ನು ಪಾಟಳಕಾಂತಿಯಿಂದ ) ಈಗೆ (ಕೊಡಲಿ) ಅರಿಗಂಗೆ ಮಂಗಳ ಮಹಾಶ್ರೀಯಂ ಜಯಶ್ರೀಯುಮಂ (ಪ್ರಕಾಶಮಾನವಾದ ಅರಿಗಂಗೆ ಮಂಗಳಕಾರ್ಯಗಳನ್ನೂ ಜಯಶ್ರೀಯನ್ನೂ ದಯಪಾಲಿಸಲಿ)
ಪದ್ಯ-೩೪:ಅರ್ಥ: ಸಮುದ್ರ, ದ್ವೀಪ, ಪಾತಾಳ, ಆಕಾಶ ಮತ್ತು ಕುಲಪರ್ವತಗಳು ತಮ್ಮಲ್ಲಿರುವ ಅಮೂಲ್ಯವಾದ ವಸ್ತುಗಳನ್ನೂ, ತನ್ನಲ್ಲಿರುವ ಅತಿಶಯವಾದ ಸೈನ್ಯಗಳೂ, ಆಹವ- ಯುದ್ಧದಮಹಾ ವಸ್ತುಗಳನ್ನೂ, ಒಂದೇ ಸಮನಾದ ಮಂಗಳಕಾರ್ಯಗಳನ್ನು ಪಾಟಳಕಾಂತಿಯಿಂದ ಪ್ರಕಾಶಮಾನವಾದ ಅರಿಗಂಗೆ ಮಂಗಳಕಾರ್ಯಗಳನ್ನೂ ಜಯಶ್ರೀಯನ್ನೂ ದಯಪಾಲಿಸಲಿ.
ನಯನಾನಂದ ಮೃಗಾಂಕಬಿಂಬಮುದಯಂಗೆಯ್ವರ್ಕಬಿಂಬಂ ಮನ
ಪ್ರಿಯಲಕ್ಷ್ಮೀ ವದನೇಂದು ಬಿಂಬಮಖಿಲ ಕ್ಷ್ಮಾದ್ವೀಪವಾರ್ಧಿಪ್ರಮೋ|
ದ ಯಶೋಬಿಂಬಮುದಗ್ರದಿಕ್ಕರಿಕರಾಕರಾಕಾರೋಲ್ಲಸದ್ಬಾಹುಗೀ
ಪ್ರಿಯಗಳ್ಳಂಗೊಸೆದೀಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ|| ೩೫ ||
ಪದ್ಯ-೩೫:ಪದವಿಭಾಗ-ಅರ್ಥ:ನಯನಾನಂದ ಮೃಗಾಂಕಬಿಂಬಂ (ಕಣ್ಣುಗಳಿಗೆ ಆನಂದವನ್ನು ಉಂಟುಮಾಡುವ ಚಂದ್ರಬಿಂಬವೂ) ಉದಯಂ ಗೆಯ್ವ ಅರ್ಕಬಿಂಬಂ (ಮೂಡುತ್ತಿರುವ ಬಾಲಸೂರ್ಯನ ಬಿಂಬವೂ) ಮನಪ್ರಿಯಲಕ್ಷ್ಮೀ ವದನೇಂದು ಬಿಂಬಂ (ಮನಸ್ಸಿಗೆ ಪ್ರಿಯಳಾದ ಲಕ್ಷ್ಮೀದೇವಿಯ ಮುಖಚಂದ್ರಬಿಂಬವೂ) ಅಖಿಲ ಕ್ಷ್ಮಾ (ಭೂಮಿ)ದ್ವೀಪ ವಾರ್ಧಿ ಪ್ರಮೋದ ಯಶೋಬಿಂಬಂ (ಸಮಸ್ತವಾದ ಭೂಮಿ, ದ್ವೀಪ, ಮತ್ತು ಸಮುದ್ರಗಳಿಗೆ ಸಂತೋಷವನ್ನುಂಟುಮಾಡುವ ಯಶೋಬಿಂಬವೂ -ಕ್ರೀರ್ತಿಸಮೂಹವೂ,) ಉದಗ್ರ ದಿಕ್ಕರಿ ಕರ ಆಕರ ಆಕಾರೋಲ್ಲಸತ್ ಬಾಹುಗೆ (ದೀರ್ಘವಾದ ದಿಗ್ಗಜಗಳ ಸೊಂಡಿಲುಗಳ ಆಕಾರವನ್ನುಳ್ಳ ಪ್ರಕಾಶಮಾನವಾದ ಬಾಹುಗಳನ್ನುಳ್ಳ) ಈ ಪ್ರಿಯಗಳ್ಳಂಗೆ ಒಸೆದು ಈಗೆ ಮಂಗಳಮಹಾಶ್ರೀಯಂ ಜಯಶ್ರೀಯುಮಂ (ಪ್ರಿಯಗಳ್ಳನೆಂಬ ಬಿರುದಾಂಕಿತನಾದ ಅರಿಕೇಸರಿಗೆ (ಅರ್ಜುನನಿಗೆ) ಸಂತೋಷಿಸಿ ಮಂಗಳಮಹಾಶ್ರೀಯನ್ನೂ ಜಯಶ್ರೀಯನ್ನೂ ಈಗೆ- ಕೊಡಲಿ )
ಪದ್ಯ-೩೫:ಅರ್ಥ: ಕಣ್ಣುಗಳಿಗೆ ಆನಂದವನ್ನು ಉಂಟುಮಾಡುವ ಚಂದ್ರಬಿಂಬವೂ, ಮೂಡುತ್ತಿರುವ ಬಾಲಸೂರ್ಯನ ಬಿಂಬವೂ, ಮನಸ್ಸಿಗೆ ಪ್ರಿಯಳಾದ ಲಕ್ಷ್ಮೀದೇವಿಯ ಮುಖಚಂದ್ರಬಿಂಬವೂ, ಸಮಸ್ತವಾದ ಭೂಮಿ, ದ್ವೀಪ, ಮತ್ತು ಸಮುದ್ರಗಳಿಗೆ ಸಂತೋಷವನ್ನುಂಟುಮಾಡುವ ಯಶೋಬಿಂಬವೂ (ಕ್ರೀರ್ತಿಸಮೂಹವೂ) ದೀರ್ಘವಾದ ದಿಗ್ಗಜಗಳ ಸೊಂಡಿಲುಗಳ ಆಕಾರವನ್ನುಳ್ಳ ಪ್ರಕಾಶಮಾನವಾದ ಬಾಹುಗಳನ್ನುಳ್ಳ ಪ್ರಿಯಗಳ್ಳನೆಂಬ ಬಿರುದಾಂಕಿತನಾದ ಅರಿಕೇಸರಿಗೆ (ಅರ್ಜುನನಿಗೆ) ಸಂತೋಷಿಸಿ ಮಂಗಳಮಹಾಶ್ರೀಯನ್ನೂ ಜಯಶ್ರೀಯನ್ನೂ ಕೊಡಲಿ
ವ|| ಎಂದು ಪೊಗೞ್ದು ಮಾಣ್ದ ನಂತರದೊಳ್ ವ್ಯಾಸ ಕಶ್ಯಪ ವಿಶ್ವಾಮಿತ್ರ ಭರದ್ವಾಜಾದಿ ಮಹಾಮುನಿಪ್ರತತಿಗಳ್ ಬಂದು ನಿಜಕಮಂಡಲುಜಲಂಗಳೊಳ್ ಬೆರಸಿದ ಧವಳಾಕ್ಷತಂಗಳಂ ತಳಿದು-
ವಚನ:ಪದವಿಭಾಗ-ಅರ್ಥ:ಎಂದು ಪೊಗೞ್ದು ಮಾಣ್ದ ನಂತರದೊಳ್ (ಎಂದು ಹೊಗಳಿ ನಿಲ್ಲಿಸಿಯಾದ ಮೇಲೆ ) ವ್ಯಾಸ ಕಶ್ಯಪ ವಿಶ್ವಾಮಿತ್ರ ಭರದ್ವಾಜಾದಿ ಮಹಾಮುನಿ ಪ್ರತತಿಗಳ್ ಬಂದು ನಿಜಕ ಮಂಡಲುಜಲಂಗಳೊಳ್ (ತಮ್ಮ ಕಮಂಡಲುಗಳಲ್ಲಿ) ಬೆರಸಿದ ಧವಳಾಕ್ಷತಂಗಳಂ ತಳಿದು (ನೀರಿನಿಂದ ಬೆರಸಿದ ಬಿಳಿಯ ಅಕ್ಷತೆಗಳನ್ನು ಚೆಲ್ಲಿ- ಆಶೀವಾದಪೂರ್ವಕ ತಲೆಯ ಮೇಲೆ ಎರಚಿ)- ಹರಸಿದರು)-
ವಚನ:ಅರ್ಥ: ಎಂದು ಹೊಗಳಿ ನಿಲ್ಲಿಸಿಯಾದ ಮೇಲೆ, ವ್ಯಾಸ ಕಶ್ಯಪ ವಿಶ್ವಾಮಿತ್ರ ಭಾರದ್ವಾಜರೇ ಮೊದಲಾದ ಮಹಾಮುನಿಗಳ ಸಮೂಹಗಳು ಬಂದು ತಮ್ಮ ಕಮಂಡಲುಗಳಲ್ಲಿ ನೀರಿನಿಂದ ಬೆರಸಿದ ಬಿಳಿಯ ಅಕ್ಷತೆಗಳನ್ನು ಚೆಲ್ಲಿ (ಆಶೀವಾದಪೂರ್ವಕ ತಲೆಯ ಮೇಲೆ ಎರಚಿ) ಹರಸಿದರು.
ವ|| ಅರಿ ಭೂಪಾಳ ದವಾನಳಂ ಹರಿಗ ನಿನ್ನುಗ್ರಾಸಿ ಧಾರಾಂಬು ಶ್ರೀ
ಕರದಿಂ ಮೞ್ಗುಗೆ ದಾನವರ್ಷ ಸಲಿಲಂ ಕೊಳ್ಗರ್ಥಿ ಸಸ್ಯಕ್ಕೆ ಕಿ|
ನ್ನರಿಯರ್ ಪಾಡುಗೆ ನಿನ್ನದೊಂದು ಪಲವುಂ ಬಣ್ಣಂಗಳಂ ಮೇರು ಮಂ
ದರ ಕೈಳಾಸ ಮಹೇಂದ್ರ ನೀಳ ನಿಷಧಾದ್ರೀಂದ್ರೋಪಕಂಠಂಗಳೊಳ್|| ೩೬ ||
ಪದ್ಯ-೩೬:ಪದವಿಭಾಗ-ಅರ್ಥ:ಅರಿ ಭೂಪಾಳ ದವಾನಳಂ (ಶತ್ರುರಾಜರೆಂಬ ಕಾಡುಕಿಚ್ಚು) ಹರಿಗ ನಿನ್ನ ಉಗ್ರ ಅಸಿ ಧಾರಾ(ನಿನ್ನ ಭಯಂಕರವಾದ ಕತ್ತಿಯ ಅಲಗೆಂಬ) ಅಂಬು ಶ್ರೀಕರದಿಂ (ನೀರಿನ ಹನಿಗಳಿಂದ ) ಮೞ್ಗುಗೆ (ಅಳಿದುಹೋಗಲಿ. ) ದಾನವರ್ಷ ಸಲಿಲಂ ಕೊಳ್ಗರ್ಥಿ ಸಸ್ಯಕ್ಕೆ (ಯಾಚಕರೆಂಬ ವೃಕ್ಷಕ್ಕೆ ನಿನ್ನ ದಾನವೆಂಬ ಮಳೆಯು ಸುರಿಯಲಿ.) ಕಿನ್ನರಿಯರ್ ಪಾಡುಗೆ ನಿನ್ನದೊಂದು ಪಲವುಂ ಬಣ್ಣಂಗಳಂ (ನಿನ್ನ ಸ್ತುತಿರೂಪವಾದ ಅನೇಕ ಹಾಡುಗಳನ್ನು ಕಿನ್ನರಿಯರು) ಮೇರು ಮಂದರ ಕೈಳಾಸ ಮಹೇಂದ್ರ ನೀಳ ನಿಷಧ - ಅದ್ರೀಂದ್ರ ಉಪಕಂಠಂಗಳೊಳ್ (ಸಮೀಪ ಪ್ರದೇಶಗಳಲ್ಲಿ)- (ಮೇರು, ಮಂದರ, ಕೈಲಾಸ, ಮಹೇಂದ್ರ, ನಿಷಧ ಪರ್ವತಗಳ ಸಮೀಪ ಪ್ರದೇಶಗಳಲ್ಲಿ (ತಪ್ಪಲಿನಲ್ಲಿ) ಹಾಡಲಿ.)
ಪದ್ಯ-೩೬:ಅರ್ಥ:ಎಲೈ ಅರ್ಜುನನೇ ಶತ್ರುರಾಜರೆಂಬ ಕಾಡುಕಿಚ್ಚು ನಿನ್ನ ಭಯಂಕರವಾದ ಕತ್ತಿಯ ಅಲಗೆಂಬ ನೀರಿನ ಹನಿಗಳಿಂದ (ಅಸಿಧಾರೆಯ ಹನಿಗಳಿಂದ) ಅಳಿದುಹೋಗಲಿ. ಯಾಚಕರೆಂಬ ವೃಕ್ಷಕ್ಕೆ ನಿನ್ನ ದಾನವೆಂಬ ಮಳೆಯು ಸುರಿಯಲಿ. ನಿನ್ನ ಸ್ತುತಿರೂಪವಾದ ಅನೇಕ ಹಾಡುಗಳನ್ನು ಕಿನ್ನರಿಯರು ಮೇರು, ಮಂದರ, ಕೈಲಾಸ, ಮಹೇಂದ್ರ, ನಿಷಧ ಪರ್ವತಗಳ ಸಮೀಪ ಪ್ರದೇಶಗಳಲ್ಲಿ (ತಪ್ಪಲಿನಲ್ಲಿ) ಹಾಡಲಿ.
ವ|| ಎಂದು ಪರಸಿ ತಮ್ಮ ನಿವಾಸಂಗಳ್ಗೆ ಪೋದರಾಗಳ್ ಧರ್ಮನಂದನನೆನಗೆ ನಿನ್ನ ರಾಜ್ಯಾಭಿವೃದ್ಧಿಯಂ ನೋಡುತಿರ್ಪುದುಂ ಮುಮುಕ್ಷು ವೃತ್ತಿಯೊಳಿರ್ಪುದುಮಲ್ಲದೆ ಪೆಱತೇನುಂ ಬಾೞ್ತೆಯಲ್ಲೆಂದು ಭೀಮ ನಕುಳ ಸಹದೇವರ್ಕಳ್ಗೆ ದುರ್ಯೋಧನನ ತಮ್ಮನಪ್ಪ ಯುಯುತ್ಸುಗಮವರ್ ಬೇಡಿದ ನಾಡುಗಳನೆ ಕುಡಿಸಿ ಸಂತಸಂಬಡಿಸೆ ಪುರುಷೋತ್ತಮನಂ ವಿಬುಧವನಜವನಕಳಹಂಸನುಮಿಂತೆಂದಂ-
ವಚನ:ಪದವಿಭಾಗ-ಅರ್ಥ:ಎಂದು ಪರಸಿ ತಮ್ಮ ನಿವಾಸಂಗಳ್ಗೆ ಪೋದರಾಗಳ್ (ಅರ್ಜುನನಿಗೆ ವಿಜಯ ಶ್ರೀ ದೊರೆಯಲಿ ಎಂಬುದಾಗಿ ಆಶೀರ್ವಾದಮಾಡಿ ತಮ್ಮ ಮನೆಗಳಿಗೆ ಹೋದರು.) ಧರ್ಮನಂದನನು ಎನಗೆ ನಿನ್ನ ರಾಜ್ಯಾಭಿವೃದ್ಧಿಯಂ ನೋಡುತಿರ್ಪುದುಂ (ಆಗ ಧರ್ಮರಾಯನು ಅರ್ಜುನ! ನಿನ್ನ ರಾಜ್ಯಾಭಿವೃದ್ಧಿಯನ್ನು ನೋಡುತ್ತಿರುವುದೂ) ಮುಮುಕ್ಷು ವೃತ್ತಿಯೊಳು ಇರ್ಪುದುಮಲ್ಲದೆ ಪೆಱತೇನುಂ ಬಾೞ್ತೆಯಲ್ಲೆಂದು (ಮೋಕ್ಷೇಚ್ಛುಗಳಾದ ತಪಸ್ವಿಗಳ ವೃತ್ತಿಯಲ್ಲಿರುವುದೂ ಅಲ್ಲೆದ ನನಗೆ ಬೇರೆ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿ ) ಭೀಮ ನಕುಳ ಸಹದೇವರ್ಕಳ್ಗೆ ದುರ್ಯೋಧನನ ತಮ್ಮನಪ್ಪ ಯುಯುತ್ಸುಗಮವರ್ (ಹಾಗೆಯೇ ಭೀಮ ನಕುಲ ಸಹದೇವರುಗಳಿಗೂ ದುರ್ಯೋಧನನ ತಮ್ಮನಾದ ಯುಯುತ್ಸುವಿಗೂ) ಬೇಡಿದ ನಾಡುಗಳನೆ ಕುಡಿಸಿ ಸಂತಸಂಬಡಿಸೆ (ಅವರು ಕೇಳಿದ ನಾಡುಗಳನ್ನು/ ರಾಜ್ಯಗಳನ್ನು ಕೊಡಿಸಿ ಸಂತೋಷಪಡಿಸಿದನು.) ಪುರುಷೋತ್ತಮನಂ ವಿಬುಧವನಜವನಕಳಹಂಸನುಂ ಇಂತೆಂದಂ (ಅರ್ಜುನನು ಕೃಷ್ಣನನ್ನು ಕುರಿತು ಹೀಗೆಂದನು,)-
ವಚನ:ಅರ್ಥ:ಅರಿಗನಿಗೆ/ ಅರ್ಜುನನಿಗೆ ವಿಜಯ ಶ್ರೀ ದೊರೆಯಲಿ ಎಂಬುದಾಗಿ ಆಶೀರ್ವಾದಮಾಡಿ ತಮ್ಮ ಮನೆಗಳಿಗೆ ಹೋದರು. ಆಗ ಧರ್ಮರಾಯನು ಅರ್ಜುನ! ನಿನ್ನ ರಾಜ್ಯಾಭಿವೃದ್ಧಿಯನ್ನು ನೋಡುತ್ತಿರುವುದೂ, ಮೋಕ್ಷೇಚ್ಛುಗಳಾದ ತಪಸ್ವಿಗಳ ವೃತ್ತಿಯಲ್ಲಿರುವುದೂ ಅಲ್ಲೆದ ನನಗೆ ಬೇರೆ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿ ಹಾಗೆಯೇ ಭೀಮ ನಕುಲ ಸಹದೇವರುಗಳಿಗೂ ದುರ್ಯೋಧನನ ತಮ್ಮನಾದ ಯುಯುತ್ಸುವಿಗೂ ಅವರು ಕೇಳಿದ ನಾಡುಗಳನ್ನು/ ರಾಜ್ಯಗಳನ್ನು ಕೊಡಿಸಿ ಸಂತೋಷಪಡಿಸಿದನು. ಅರ್ಜುನನು ಕೃಷ್ಣನನ್ನು ಕುರಿತು ಹೀಗೆಂದನು,
ಕಂ|| ನಿನ್ನ ದಯೆಯಿಂದಮರಿ ನೃಪ
ರನ್ನೆ ಕೊಂದೆಮಗೆ ಸಕಳ ರಾಜ್ಯಶ್ರೀಯುಂ|
ನಿನ್ನ ಬಲದಿಂದೆ ಸಾರ್ದುದು
ನಿನ್ನುಪಕಾರಮನದೇತರೊಳ್ ನೀಗುವೆನೋ|| ೩೭ ||
ಪದ್ಯ-೩೭:ಪದವಿಭಾಗ-ಅರ್ಥ:ನಿನ್ನ ದಯೆಯಿಂದಂ ಅರಿ ನೃಪರನ್ನೆ ಕೊಂದ ಎಮಗೆ (ನನ್ನ ಕೃಪೆಯಿಂದ ಶತ್ರುರಾಜರನ್ನು ಸಂಪೂರ್ಣವಾಗಿ ಕೊಂದ ನಮಗೆ) ಸಕಳ ರಾಜ್ಯಶ್ರೀಯುಂ ನಿನ್ನ ಬಲದಿಂದೆ ಸಾರ್ದುದು (ಸಕಲ ರಾಜ್ಯಸಂಪತ್ತೂ ನಿನ್ನ ಬೆಂಬಲದಲೇ ಕೈಸೇರಿತು.) ನಿನ್ನ ಉಪಕಾರಮನು ಅದೇತರೊಳ್ ನೀಗುವೆನೋ ( ನಿನ್ನ ಸಹಾಯವನ್ನು ಯಾವ ರೀತಿಯಲ್ಲಿ ತೀರಿಸಬೇಕೊ!.)
ಪದ್ಯ-೩೭:ಅರ್ಥ: ನಿನ್ನ ಕೃಪೆಯಿಂದ ಶತ್ರುರಾಜರನ್ನು ಸಂಪೂರ್ಣವಾಗಿ ಕೊಂದ ನಮಗೆ ಸಕಲ ರಾಜ್ಯಸಂಪತ್ತೂ ನಿನ್ನ ಬೆಂಬಲದಲೇ ಕೈಸೇರಿತು. ನಿನ್ನ ಸಹಾಯವನ್ನು ಯಾವ ರೀತಿಯಲ್ಲಿ ತೀರಿಸಬೇಕೊ! ಎಂದು ಅರ್ಜುನನು ಕೃಷ್ನನ ಸಹಾಯವನ್ನು ಸ್ಮರಿಸಿ ಹೇಳಿದನು.
ವ|| ಎಂದು ಮುಕುಂದನನು ಅನುನಯ ವಚನ ರಚನಾ ಪರಂಪರೆಗಳಿಂದ ಸಂತಸಂ ಬಡೆ ನುಡಿದು ಸಾತ್ಯಕಿವೆರಸು ಅನರ್ಘ್ಯವಸ್ತುವಾಹನ ಸಹಿತಂ ದ್ವಾರಾವತಿಗೆ ಕಳಿಪಿ
ವಚನ:ಪದವಿಭಾಗ-ಅರ್ಥ:ಎಂದು ಮುಕುಂದನನು ಅನುನಯ ವಚನ ರಚನಾ ಪರಂಪರೆಗಳಿಂದ ಸಂತಸಂ ಬಡೆ ನುಡಿದು (ಎಂದು ಕೃಷ್ಣನನ್ನು ಪ್ರೀತಿಯುಕ್ತವಾದ ಮಾತುಗಳ ಸಮೂಹದಿಂದ ಸಂತೋಷಪಡುವ ಹಾಗೆ ಮಾತನಾಡಿ) ಸಾತ್ಯಕಿವೆರಸು ಅನರ್ಘ್ಯವಸ್ತುವಾಹನ ಸಹಿತಂ ದ್ವಾರಾವತಿಗೆ ಕಳಿಪಿ (ಸಾತ್ಯಕಿಯೊಡನೆ ಬೆಲೆಯೇ ಇಲ್ಲದ ಅನೇಕ ವಸ್ತುವಾಹನಗಳ ಸಹಿತವಾಗಿ ದ್ವಾರಾವತಿಗೆ ಕಳುಹಿಸಿದನು).
ವ|| ಎಂದು ಕೃಷ್ಣನನ್ನು ಪ್ರೀತಿಯುಕ್ತವಾದ ಮಾತುಗಳ ಸಮೂಹದಿಂದ ಸಂತೋಷಪಡುವ ಹಾಗೆ ಮಾತನಾಡಿ ಸಾತ್ಯಕಿಯೊಡನೆ ಬೆಲೆಯೇ ಇಲ್ಲದ ಅನೇಕ ವಸ್ತುವಾಹನಗಳ ಸಹಿತವಾಗಿ ದ್ವಾರಾವತಿಗೆ ಕಳುಹಿಸಿದನು.

ಅರಿಕೇಸರಿ ರಾಜನ ಬಿರುದುಗಳ ವಿವರಣೆ[ಸಂಪಾದಿಸಿ]

ವ||ಸಕಳಭುವನತಳ ಭಾರಮನವಯವದಿಂ ತಾಳ್ದಿರ್ದುದಾತ್ತವೃತ್ತಿಯೊಳುದಾತ್ತನಾರಾಯಣನುಂ ಭುವನ ಭವನೋದರದೊಳ್ ಪಸರಿಸಿದ ತೇಜದೊಳ್ ಪ್ರಚಂಡ ಮಾರ್ತಂಡನುಂ ಆವೆಡೆಯೊಳಮಸ ಮಾನಮೆನಿಸಿದ ಮಹಾಮಹಿಮೆಯೊಳು ಉದಾರಮಹೇಶ್ವರನುಂ
ವಚನ:ಪದವಿಭಾಗ-ಅರ್ಥ:ಳಭುವನತಳ ಭಾರಮನವಯವದಿಂ ತಾಳ್ದಿರ್ದು ಉದಾತ್ತವೃತ್ತಿಯೊಳು ಉದಾತ್ತನಾರಾಯಣನುಂ ಭುವನ ಭವನೋದರದೊಳ್ ಪಸರಿಸಿದ ತೇಜದೊಳ್ ಪ್ರಚಂಡ ಮಾರ್ತಂಡನುಂ ಆವೆಡೆಯೊಳಮಸ ಮಾನಮೆನಿಸಿದ ಮಹಾಮಹಿಮೆಯೊಳು ಉದಾರಮಹೇಶ್ವರನುಂ
ವ||ನಳ ನಹುಷ ಮಾಂಧಾತರಂ ಮಸುಳೆವಂದ ನೆಗೞ್ತೆಯೊಳೆ ಮನುಜಮಾಂಧಾತನುಂ ತ್ರಿಣೇತ್ರನುಮನಸುಂಗೊಳಿಸಿದ ಸಾಹಸದೊಳ್ ಕದನತ್ರಿಣೇತ್ರನುಂ
ವಚನ:ಪದವಿಭಾಗ-ಅರ್ಥ:ನಳನಹುಷಮಾಂಧಾತರನ್ನು ಕಾಂತಿಹೀನಮಾಡಿದ ಪ್ರಸಿದ್ಧಿಯಿಂದ ಮನುಜಮಾಂಧಾತನೂ ಮುಕ್ಕಣ್ಣನನ್ನೂ ಆಶ್ಚರ್ಯಪಡಿಸಿದ ಸಾಹಸದಿಂದ ಕದನತ್ರಿಣೇತ್ರನೂ
ವ||ಅಚಳಿತ ಪ್ರತಿಜ್ಞೆಯೊಳ್ ಪ್ರತಿಜ್ಞಾ ಗಾಂಗೇಯನುಂ ರಾಮನುಮನೇೞಸಿದ ಸಹಾಸದೊಳಕಳಂಕರಾಮನುಂ
ವಚನ:ಪದವಿಭಾಗ-ಅರ್ಥ:ಚಲಿಸದೇ ಇದ್ದ ಪ್ರತಿಜ್ಞೆಯಿಂದ ಪ್ರತಿಜ್ಞಾಗಾಂಗೇಯನೂ ರಾಮನನ್ನೂ ಹಿಯ್ಯಾಳಿಸಿದ ಸಾಹಸದಿಂದ ಅಕಳಂಕ ರಾಮನೂ
ವಚನ:ಪದವಿಭಾಗ-ಅರ್ಥ:ಸಮಸ್ತವಾದ ಭೂಮಂಡಲದ ಭಾರವನ್ನೂ ಸುಲಭವಾಗಿ ಧರಿಸಿ ಉದಾತ್ತ ವೃತ್ತಿಯಲ್ಲಿದ್ದು ಉದಾತ್ತನಾರಾಯಣನೂ ಭುವನೋದರದಲ್ಲಿ (ಪ್ರಪಂಚವೆಂಬ ಮನೆಯ ಒಳಭಾಗದಲ್ಲಿ) ಪ್ರಸರಿಸಿದ ತೇಜಸ್ಸಿನಿಂದ ಪ್ರಚಂಡಮಾರ್ತಂಡನೂ (ಅತ್ಯಂತ ಕಾಂತಿಯುಕ್ತವಾದ ಸೂರ್ಯ) ಯಾವ ಕಡಯಲ್ಲಿಯೂ ಸಮಾನವೇ ಇಲ್ಲದವನು ಎಂಬ ಮಹಿಮೆಯಿಂದ ಉದಾರಮಹೇಶ್ವರನೂ
ವ||ಬೇಡಿದರ ಬೇಡಿದುದಂ ಮಾರ್ಕೊಳ್ಳದೀವುದಱಂ ಪ್ರತ್ಯಕ್ಷಜೀಮೂತವಾಹನೆನುಂ ಚತುರ್ದನ ಭುವನಂಗಳೊಳ್ ತನಗೆ ಮಾರ್ಮಲೆವರಿಲ್ಲಪ್ಪುದಱಂ ಜಗದೇಕಮಲ್ಲನುಂ ಉರ್ಕಿ ಬಂದು ಮೇಲ್ವಾಯ್ದ ಮಾರ್ವಲಂಗಳಂ ತನ್ನ ಬಾಳ ಬಾಯೊಳೞiಡಿದುದೞಂ ಪರಸೈನ್ಯಭೈರವನುಂ
ವಚನ:-ಅರ್ಥ:ಬೇಡಿದವರಿಗೆ ಅವರು ಬೇಡಿದುದನ್ನು ಪ್ರತಿಮಾತನಾಡದೆ ಕೊಡುವುದರಿಂದ ಪ್ರತ್ಯಕ್ಷ ಜೀಮೂತವಾಹನನೂ, ಹದಿನಾಲ್ಕು ಲೋಕಗಳಲ್ಲಿಯೂ ತನಗೆ ಪ್ರತಿಭಟಿಸುವವರಿಲ್ಲದುದರಿಂದ ಜಗದೇಕಮಲ್ಲನೂ, ಕೊಬ್ಬಿ ಬಂದು ಮೇಲೆ ಬೀಳುವ ಪ್ರತಿಸೈನ್ಯವನ್ನು ತನ್ನ ಕತ್ತಿಯ ಮೊನೆಯಿಂದ/ನಾಶಪಡಿಸಿದುದರಿಂದ ಪರಸೈನ್ಯ ಭೈರವನೂ
ವ||ಅರಾತಿ ಗಜಘಟೆಗಳೆನಿತು ಬಂದೊಡ್ಡೆಯುಂ ತನ್ನೊಂದಮಂದಧ್ವನಿಗೊಡ್ಡೊಡೆ ದೋಡುವುದಱಂ ವೈರಿಗಜಘಟಾವಿಘಟನನುಂ

ಶತ್ರುಪಕ್ಷಗಳ ಆನೆಯ ಸಮೂಹವು ಎಷ್ಟು ಬಂದು ಚಾಚಿದರೂ ತನ್ನ ಒಂದು ಗರ್ಜನೆಗೆ ಗುಂಪು ಚೆದುರಿ ಓಡುವುದರಿಂದ ವೈರಿಗಜಘಟಾವಿಘಟನನೂ

ವ||ತನಗಿದಿರನದಿರದೊಡ್ಡಿದ ವಿದ್ವಿಷ್ಟ ಬಲಂ ನೋಡೆ ನೋಡೆ ಕರಗುವುದಱಂ ವಿದ್ವಿಷ್ಟ ವಿದ್ರಾವಣನುಂ
ವಚನ:-ಅರ್ಥ:ತನಗೆ ಇದಿರಾಗಿ ಹೆದರದೆ ಬಂದು ಒಡ್ಡಿದ ಶತ್ರುಸೈನ್ಯವು ನೋಡುನೋಡುತ್ತಿರುವಾಗಲೇ ಕರುಗುವುದರಿಂದ ವಿದ್ವಿಷ್ಟ ವಿದ್ರಾವಣನೂ
ವ||ಅರಾತಿ ವನ ಗಹನಮನಳುರ್ದು ಕೊಳ್ವುದಱಂದಮರಾತಿ ಕಾಳಾನಳನುಂ ಪಗೆವರೆಂಬ ಕುರಂಗಂಗಳನೊಂದೊಂದಳೊಂದಲೀ ಯದೆೞ್ಬಟ್ಟುವುದಱಂ ರಿಪುಕುರಂಗಕಂಠೀರವನುಂ
ವಚನ:-ಅರ್ಥ:ಶತ್ರುಗಳೆಂಬ ಕಾಡಿನ ಒಳಭಾಗವನ್ನು ವ್ಯಾಪಿಸಿ ಸುಡುವುದರಿಂದ ಅರಾತಿ ಕಾಳಾನಳನೂ ಹಗೆಗಳೆಂಬ ಜಿಂಕೆಗಳನ್ನು ಒಂದೂ ಬಿಡದಂತೆ ಬೆನ್ನಟ್ಟಿ ಕೊಲ್ಲುವುದರಿಂದ ಅವಕಾಶವಿಲ್ಲದೆ ಓಡಿಸುವುದರಿಂದ ರಿಪು ಕುರಂಗಕಂಠೀರವನೂ
ವ||ವಿಕ್ರಾಂತದೊಳ್ ತನ್ನಿರ್ದಲ್ಲಿ ತಾನೆ ಪಿರಿಯನಪ್ಪುದಱಂ ವಿಕ್ರಾಂತ ತುಂಗನುಂ ಆವೆಡೆಯೊಳಂ ವಿಕ್ರಮಂ ಕ್ರಮಮೆನಿಸಿದುದಱಂ ಪರಾಕ್ರಮಧವಳನುಂ
ವಚನ:-ಅರ್ಥ:ಪರಾಕ್ರಮದಲ್ಲಿ ತಾನಿದ್ದ ಜಾಗದಲ್ಲಿಯೇ ಹಿರಿಯನಾದುದರಿಂದ ವಿಕ್ರಾಂತತುಂಗನೂ, ಎಲ್ಲ ಕಡೆಯಲ್ಲಿಯೂ ಪರಾಕ್ರಮವೇ ತನಗೆ ಯೋಗ್ಯವಾದುದೆಂದು ಅಂಗೀಕರಿಸುವುದರಿಂದ ಪರಾಕ್ರಮಧವಳನೂ
ವ||ಎಂತಪ್ಪ ಸಂಗ್ರಾಮದೊಳಂ ಪೋಗದೆ ನಟ್ಟು ನಿಲ್ವುದಱಂ ಸಮರೈಕಮೇರುವುಂ
ವಚನ:ಪದವಿಭಾಗ-ಅರ್ಥ:ಎಂತಹ ಯುದ್ಧದಲ್ಲಿಯೂ ಬಿಟ್ಟುಹೋಗದೆ ಸ್ಥಿರವಾಗಿ ನಿಲ್ಲುವುದರಿಂದ ಸಮರೈಕಮೇರುವೂ
ವ|\ಗೊಜ್ಜಿಗನೆಂಬ ಸಕಳ ಚಕ್ರವರ್ತಿ ಮುಳಿಯೆ ತನಗೆ ಶರಣಾಗತನಾದ ವಿಜಯಾದಿತ್ಯನಂ ಕಾದ ಬಲ್ಲಾಳ್ತನದೊಳ್ ಶರಣಾಗತ ಜಳನಿಯುಂ ವಿನಯಮೇ ತನಗೆ ಭೂಷಣಮಾಗೆ ಮಾಡುವುದಱಂ ವಿನಯ ಭೂಷಣನುಂ
ವಚನ:ಪದವಿಭಾಗ-ಅರ್ಥ: ಗೊಜ್ಜಿಗನೆಂಬ ಸಕಳಚಕ್ರವರ್ತಿಯ ಕೋಪಕ್ಕೆ ಪಾತ್ರನಾದ ವಿಜಯಾದಿತ್ಯನನ್ನು ರಕ್ಷಿಸಿದ ಪರಾಕ್ರಮದಿಂದ (ರಕ್ಷಿಸಿದುದರಿಂದ) ಶರಣಾಗತಜಳನಿಯ. ವಿನಯವನ್ನೇ ತನಗೆ ಒಡವೆಯನ್ನಾಗಿ ಮಾಡಿಕೊಂಡಿರುವುದರಿಂದ ವಿನಯಭೂಷಣನೂ
ವ|\ಲೋಕಕ್ಕೆಲ್ಲಮಸಾಧಾರಣಮಪ್ಪ ದಾನಗುಣದೊಳ್ ಲೋಕೈಕಕಲ್ಪದ್ರುಮನುಂ
ವಚನ:ಪದವಿಭಾಗ-ಅರ್ಥ:ಲೋಕಕ್ಕೆಲ್ಲ ಅಸಾಧಾರಣ ರೀತಿಯದಾಗಿರುವ ದಾನಗುಣದಿಂದ ಲೋಕೈಕ ಕಲ್ಪದ್ರುಮನೂ
ವ||ಎನಿತಾನುಂ ಗಜಗಮನಂಗಳಂ ತಾನೆ ಸಮೆದನಪ್ಪುದಱಂ ಗಜಗಮನರಾಜಪುತ್ರನುಂ
ವಚನ:ಪದವಿಭಾಗ-ಅರ್ಥ:ಎಷ್ಟೋ ಗಜಶಾಸ್ತ್ರಗಳನ್ನು ತಾನೆ ರಚಿಸಿರುವುದರಿಂದ ಗಜಾಗಮ ರಾಜಪುತ್ರನೂ
ವ||ಎಂತಪ್ಪ ಗರ್ವವ್ಯಾಳಿಯುಮನತಿವರ್ತಿಗಳುಮನಾರೂಢದೊಳ್ ತನಗಳವಡುವುದಱಂದಾರೂಢ ಸರ್ವಜ್ಞನುಂ
ವಚನ:ಪದವಿಭಾಗ-ಅರ್ಥ:ಎಂತಹ ಮದ್ದಾನೆಯನ್ನೂ ವಶಕ್ಕೆ ಬರದೇ ಇರುವ ತುಂಟಾನೆಗಳನ್ನೂ ಹತ್ತುವುದರಲ್ಲಿ ಸಮರ್ಥನಾಗಿರುವುದರಿಂದ ಆರೂಢಸರ್ವಜ್ಞನೂ
ವ||ಪರಮಾತ್ಮನಂತೆ ಲೋಕಾಲೋಕದ ವಸ್ತುಗಳುಮಂ ಕರತಳಾಮಳಕಮಾಗಱವುದರಿಂ ನೃಪ ಪರಮಾತ್ಮನುಂ
ವಚನ:ಪದವಿಭಾಗ-ಅರ್ಥ:ಪರಮಾತ್ಮನ ಹಾಗೆ ಲೋಕಾಲೋಕ ವಸ್ತುಗಳನ್ನು ಕಯ್ಯಲ್ಲಿರುವ ನೆಲ್ಲಿಯಕಾಯಿನಂತೆ ತಿಳಿದಿರುವುದರಿಂದ ನೃಪಪರಮಾತ್ಮನೂ
ವ||ಎಂತಪ್ಪ ಪಂಡಿತರ ಗೋಷ್ಠಿಯೊಳಂ ತಾನೆ ಸೊಗಯಿಸುವುದಱಂ ವಿಬುಧ ವನಜವನಕಳಹಂಸನುಂ
ವಚನ:ಪದವಿಭಾಗ-ಅರ್ಥ:ಎಂತಹ ವಿದ್ವಾಂಸರ ಸಮೂಹದಲ್ಲಿಯೂ ತಾನೇ ಪ್ರಕಾಶಮಾನವಾಗಿರುವುದರಿಂದ ವಿಬುಧವನಜವನಕಳಹಂಸನೂ
ವ||ಕೆಯ್ಗೆಯ್ಯದೆ ಸೊಗಯಿಸುವನಪ್ಪುದಱಂ ಸಹಜಮನೋಜನುಂ ಎಂತಪ್ಪ ಬರ್ದೆಯರುಮಂ ಬಗೆಗೆ ವರಿಸುವ ತಕ್ಕಿನೊಳ್ ಸುರತಮಕರಧ್ವಜನುಂ
ವಚನ:ಪದವಿಭಾಗ-ಅರ್ಥ:ಅಲಂಕಾರಮಾಡಿಕೊಳ್ಳದೆಯೇ ಸುಂದರನಾಗಿರುವುದರಿಂದ ಸಹಜಮನೋಜನೂ ಎಂತಹ ಪ್ರೌಢಸ್ತ್ರೀಯರನ್ನೂ ತನ್ನಲ್ಲಿ ಪ್ರೀತಿಮಾಡುವ ಹಾಗೆ ಮಾಡುವ ಯೋಗ್ಯತೆಯಿಂದ ಸುರತಮಕರದ್ವಜನೂ
ವ||ಕೂರ್ಪ ಕೂರದರ ಕೂರದರ ಪಡೆಗಳೆರಡುಂ ತನ್ನನೆ ಮೆಚ್ಚುವುದಱಂ ಪಡೆಮೆಚ್ಚೆಗಂಡನುಂ
ವಚನ:ಪದವಿಭಾಗ-ಅರ್ಥ:ಪ್ರೀತಿಸುವ ಮತ್ತು ಪ್ರೀತಿಸದಿರುವ ಎರಡುಸೈನ್ಯಗಳೂ ತನ್ನನ್ನು ಮೆಚ್ಚುವುದರಿಂದ ಪಡೆಮೆಚ್ಚೆಗಂಡನೂ
ವ||ಎಂತಪ್ಪ ಮಾರ್ವಲಂಗಳುಮಂ ನೋಡುತ್ತೆ ಗೆಲ್ವುದಱಂ ನೋಡುತ್ತೆ ಗೆಲ್ವನುಂ ಮಹಾ ಭಾರಾವತಾರದೊಳತಿರಥ ಮಹಾರಥ ಸಮರರ್ಥಾರ್ಧರಥರ್ಕಳಂ ಪಡಲ್ವಡಿಸುವುದಱಿಂ ಸಾಹಸಾರ್ಜುನನುಮ್
ವಚನ:ಪದವಿಭಾಗ-ಅರ್ಥ:ಎಂತಹ ಪ್ರತಿಸೈನ್ಯವನ್ನೂ ನೋಡುವುದರಿಂದಲೇ ಗೆಲ್ಲುವುದರಿಂದ ನೋಡುತ್ತೆ ಗೆಲ್ವನೂ ಮಹಾಭಾರತ ಯುದ್ಧದಲ್ಲಿ ಅತಿರಥ ಸಮರಥ ಅರ್ಥರಥರುಗಳನ್ನೂ ಕೆಳಗೆ ಬೀಳುವ ಹಾಗೆ ಮಾಡುವುದರಿಂದ ಸಾಹಸಾರ್ಜುನನೂ
ವ||ಅಮರೇಂದ್ರನೊಳರ್ಧಾಸನಮೇಱದ ಮಹಾ ಮಹಿಮೆಯೊಳ್ ಮಹಿಮ್ಹಾರ್ಣವನುಮರಿಕರಿಗಳಂ ಪಡಲ್ವಡಿಸುವ ಬೀರದೊಳರಿ ಕೇಸರಿಯುಂ ಆಗಿ,
ವಚನ:ಪದವಿಭಾಗ-ಅರ್ಥ:ದೇವೇಂದ್ರನೊಡನೆ ಅರ್ಧಾಸನವನ್ನು ಹತ್ತಿದ ಮಹಾಮಹಿಮೆಯಿಂದ ಮಹಿಮಾರ್ಣವನೂ, ಶತ್ರುಗಳು ಆನೆಗಳನ್ನು ಕೆಳಗುರುಳಿಸುವುದರಿಂದ ಅರಿಕೇಸರಿಯೂ ಆಗಿ

ಅರಿಕೇಸರಿಯ ಅಭಿರುಚಿ[ಸಂಪಾದಿಸಿ]

ಚಂ|| ಪಸದನಮಾವುದಾವ ಋತುವಿಂಗಮರ್ದೊಪ್ಪುಗುಮಾವ ಪೊೞ್ತದಾ
ವೆಕಸದೊಳೊಂದುಗುಂ ವಿನಯಮಾವೆಡೆಗಾವುದು ಚಿಲ್ವುವೆತ್ತು ರಂ|
ಜಿಸುಗುಮದರ್ಕದಂ ಸಮಱಿ ನಿಚ್ಚಲುಮಾ ಬಿಯಮಾ ವಿನೋದಮಾ
ಪಸದನಮಾ ವಿಳಾಸದೊಳೊಡಂಬಡೆ ಭೋಗಿಸಿದಂ ಗುಣಾರ್ಣವಂ|| ೩೮ ||
ಪದ್ಯ-೩೮:ಪದವಿಭಾಗ-ಅರ್ಥ:ಪಸದನಮಾವುದು ಆವ ಋತುವಿಂಗೆ ಅಮರ್ದೊಪ್ಪುಗುಂ (ಯಾವ ಋತುವಿಗೆ ಯಾವ ಅಲಂಕಾರವು ಒಪ್ಪುವುದು,) ಆವ ಪೊೞ್ತು ಅದಾವ ಎಕಸದೊಳ್ ಒಂದುಗುಂ (ಯಾವ ಹೊತ್ತು ಯಾವ ಕಾರ್ಯಕ್ಕೆ ಒಪ್ಪುತ್ತದೆ, ಹೊಂದುತ್ತದೆ) ವಿನಯಂ ಆವೆಡೆಗೆ ಆವುದು ಚಿಲ್ವುವೆತ್ತು ರಂಜಿಸುಗುಂ (ಯಾವ ಸ್ಥಳಕ್ಕೆ ಯಾವ ವಿನಯ (ನೀತಿ) ಸೊಗಸಾಗಿದೆ) ಅದರ್ಕೆ ಅದಂ ಸಮಱಿ ನಿಚ್ಚಲುಂ (ಅದಕ್ಕೆ ಅದನ್ನು ಸರಿಯಾಗಿ ಸೇರಿಸಿ (ಹೊಂದಿಸಿಕೊಂಡು) ಪ್ರತಿದಿನವೂ) ಆ ಬಿಯಮ್ ಆ ವಿನೋದಮ್ ಆಪಸದನಮ್ ಆ ವಿಳಾಸದೊಳು ಒಡಂಬಡೆ ಭೋಗಿಸಿದಂ ಗುಣಾರ್ಣವಂ (ಆ ವೆಚ್ಚ, ಆ ಸಂತೋಷ, ಆ ಅಲಂಕಾರ, ಆ ವಿಲಾಸಗಳಲ್ಲಿ ಸೇರಿ ಮನೋಹರವಾಗುವ ರೀತಿಯಲ್ಲಿ (ಅರಿಕೇಸರಿಯು) ಗುಣಾರ್ಣವನು ಸುಖವಾಗಿದ್ದನು.)
ಪದ್ಯ-೩೫:ಅರ್ಥ: ಯಾವ ಋತುವಿಗೆ ಯಾವ ಅಲಂಕಾರವು ಒಪ್ಪುವುದು; ಯಾವ ಹೊತ್ತು ಯಾವ ಕಾರ್ಯಕ್ಕೆ ಒಪ್ಪುತ್ತದೆ; ಯಾವ ಸ್ಥಳಕ್ಕೆ ಯಾವ ವಿನಯ (ನೀತಿ) ಸೊಗಸಾಗಿದೆ ಅದಕ್ಕೆ ಅದನ್ನು ಸರಿಯಾಗಿ ಸೇರಿಸಿ (ಹೊಂದಿಸಿಕೊಂಡು) ಪ್ರತಿದಿನವೂ ಆ ವೆಚ್ಚ, ಆ ಸಂತೋಷ, ಆ ಅಲಂಕಾರ, ಆ ವಿಲಾಸಗಳಲ್ಲಿ ಸೇರಿ ಮನೋಹರವಾಗುವ ರೀತಿಯಲ್ಲಿ (ಅರಿಕೇಸರಿಯು) ಗುಣಾರ್ಣವನು ಸುಖವಾಗಿದ್ದನು.
ಪಸರಿಸಿ ನೀಳ್ದ ತನ್ನ ಜಸದೊಳ್ ಪೆಱನೊರ್ವನ ಕೀರ್ತಿ ತಳ್ತು ರಂ
ಜಿಸೆ ನೆಗೞ್ದಾತನೇಂ ನೆಗೞ್ದನೆಂಬ ಚಲಂ ಮಿಗೆ ತನ್ನ ಪೆಂಪು ತ|
ನ್ನೆಸಕಮೆ ತನ್ನ ವಿಕ್ರಮಮೆ ತನ್ನ ನೆಗೞ್ತೆಯೆ ತನ್ನ ಮಾತೆ ತಾ
ನೆಸೆವ ಜಗತ್ರಯಕ್ಕೆನಿಸಿ ಪಾಲಿಸಿದಂ ನೆಲನಂ ಗುಣಾರ್ಣವಂ|| ೩೯ ||
ಪದ್ಯ-೩೯:ಪದವಿಭಾಗ-ಅರ್ಥ:ಪಸರಿಸಿ ನೀಳ್ದ ತನ್ನ ಜಸದೊಳ್ (ಪ್ರಸರಿಸಿ ಬೆಳೆದ ತನ್ನ ಯಶಸ್ಸಿನೊಡನೆ) ಪೆಱನ್ ಒರ್ವನ ಕೀರ್ತಿ ತಳ್ತು ರಂಜಿಸೆ (ಇನ್ನೊಬ್ಬನ ಕೀರ್ತಿ ಸಮಾನವಾಗಿ ಸೇರಿ ಪ್ರಕಾಶಿಸಿದರೆ) ನೆಗೞ್ದಾತನೇಂ ನೆಗೞ್ದನೆಂಬ ಚಲಂ ಮಿಗೆ (ಅವನು ಪ್ರಸಿದ್ಧನೆ ಎಂಬ ಛಲವು ಹೆಚ್ಚಾಗಿರಲು ) ತನ್ನ ಪೆಂಪು ತನ್ನ ಎಸಕಮೆ ತನ್ನ ವಿಕ್ರಮಮೆ ತನ್ನ ನೆಗೞ್ತೆಯೆ ತನ್ನ ಮಾತೆ (ತನ್ನ ವೈಭವ, ತನ್ನ ಪರಾಕ್ರಮ, ತನ್ನ ಪ್ರಸಿದ್ಧಿ, ತನ್ನ ಮಾತು) ತಾನು ಎಸೆವ ಜಗತ್ರಯಕ್ಕೆ ಎನಿಸಿ ಪಾಲಿಸಿದಂ ನೆಲನಂ ಗುಣಾರ್ಣವಂ (ತನ್ನ ಮಾತು ಇವುಗಳೇ ಪ್ರಸಿದ್ಧವಾಗಿರುವ ಮೂರು ಲೋಕಗಳಿಗೂ ತಾನೇ ಎನಿಸಿ ಗುಣಾರ್ಣವನು ರಾಜ್ಯವನ್ನು ಪಾಲಿಸಿದನು. )
ಪದ್ಯ-೩೯:ಅರ್ಥ:ಪ್ರಸರಿಸಿ ಬೆಳೆದ ತನ್ನ ಯಶಸ್ಸಿನೊಡನೆ ಇನ್ನೊಬ್ಬನ ಕೀರ್ತಿ ಸಮಾನವಾಗಿ ಸೇರಿ ಪ್ರಕಾಶಿಸಿದರೆ, ಅವನು ಪ್ರಸಿದ್ಧನೆ ಎಂಬ ಛಲವು ಹೆಚ್ಚಾಗಿರಲು ತನ್ನ ವೈಭವ, ತನ್ನ ಪರಾಕ್ರಮ, ತನ್ನ ಪ್ರಸಿದ್ಧಿ, ತನ್ನ ಮಾತು ಇವುಗಳೇ ಪ್ರಸಿದ್ಧವಾಗಿರುವ ಮೂರು ಲೋಕಗಳಿಗೂ ತಾನೇ ಎನಿಸಿ ಗುಣಾರ್ಣವನು ರಾಜ್ಯವನ್ನು ಪಾಲಿಸಿದನು.

ವೆಂಗಿಪಳು- ವಸಂತ ಕೊಟ್ಟೂರು- ನಿಡಗುಂದಿ- ಪ್ರದೇಶದಲ್ಲಿದ್ದ ಪಂಪಕವಿಯ ವಂಶವಿಚಾರ[ಸಂಪಾದಿಸಿ]

ಕಂ|| ಆ ಮಳಯಾಚಳ ಹಿಮಗಿರಿ
ಸೀಮಾವನಿತಳಕೆ ಬೆಂಗಿಮಂಡಳದೊಳ್ ಚಿ|
ಲ್ವಾವಗಮೆ ತನಗದೊಂದೂರ್
ನಾಮದೊಳಂ ವೆಂಗಿಪೞು ಕರಂ ಸೊಗಯಿಸುಗುಂ|| ೪೦ ||
ಪದ್ಯ-೪೦:ಪದವಿಭಾಗ-ಅರ್ಥ:ಆ ಮಳಯಾಚಳ ಹಿಮಗಿರಿಸೀಮಾ ಅವನಿತಳಕೆ (ಆ ಮಲಯಪರ್ವತದಿಂದ ಹಿಡಿದು ಹಿಮವತ್ಪರ್ವತವನ್ನು ಮೇರೆಯಾಗಿ ಉಳ್ಳ ಭೂಭಾಗಕ್ಕೆ) ಬೆಂಗಿಮಂಡಳದೊಳ್ ಚಿಲ್ವು ಆವಗಮೆ- ಯಾವಾಗಲೂ, (ಇರುವ ವೆಂಗಿದೇಶವೇ ಯಾವಾಗಲೂ ಸುಂದರವಾಗಿರುವುದು.), ತನಗೆ ಅದೊಂದು ಊರ್ ನಾಮದೊಳಂ (ತನಗೆ ಅದರಲ್ಲಿ ವೆಂಗಿಪಳು ಎಂಬುದು ಒಂದು ಊರು,) ವೆಂಗಿಪೞು ಕರಂ ಸೊಗಯಿಸುಗುಂ (ಆ ವೆಂಗಿಪಳು ವಿಶೇಷವಾಗಿ ಶೋಭಿಸುವುದು..)
ಪದ್ಯ-೪೦:ಅರ್ಥ: ಆ ಮಲಯಪರ್ವತದಿಂದ ಹಿಡಿದು ಹಿಮವತ್ಪರ್ವತವನ್ನು ಮೇರೆಯಾಗಿ ಉಳ್ಳ ಭೂಭಾಗಕ್ಕೆ ಇರುವ ವೆಂಗಿದೇಶವೇ ಯಾವಾಗಲೂ ಸುಂದರವಾಗಿರುವುದು. ತನಗೆ ಅದರಲ್ಲಿ ವೆಂಗಿಪಳು ಎಂಬುದು ಒಂದು ಊರು, ಆ ವೆಂಗಿಪಳು ಎಂಬ ಪದವೇ ವಿಶೇಷವಾಗಿ ಶೋಭಿಸುವುದು.
ಅದುವೆ ವಸಂತಂ ಕೊಟ್ಟೂ
ರೊದವಿದ ನಿಡುಗುಂದಿ ಮಿಕ್ಕ ವಿಕ್ರಮ ಪುರವೆಂ|
ಬುದುಮಗ್ರಹಾರ ಸಂಪ
ತ್ಪದವಿಗಳೊಳಮಗ್ರಗಣ್ಯನೂರ್ಜಿತಪುಣ್ಯಂ|| ೪೧ ||
ಪದ್ಯ-೪೧:ಪದವಿಭಾಗ-ಅರ್ಥ:ಅದುವೆ ವಸಂತಂ ಕೊಟ್ಟೂರು ಒದವಿದ ನಿಡುಗುಂದಿ (ಆ ವೆಂಗಿಪಳುವಿನಲ್ಲಿ ವಸಂತ ಕೊಟ್ಟೂರು, ಅಲ್ಲಿಯೇ ನಿಡುಗುಂದಿ ) ಮಿಕ್ಕ ವಿಕ್ರಮಪುರವೆಂಬುದುಂ ಅಗ್ರಹಾರ (ಅತ್ಯತಿಶಯವಾದ ವಿಕ್ರಮಪುರ ಎಂಬುವ ಅಗ್ರಹಾರಗಳು) ಸಂಪತ್ಪದವಿಗಳೊಳ್ ಅಗ್ರಗಣ್ಯಂ ಊರ್ಜಿತಪುಣ್ಯಂ (ಅಲ್ಲಿಯ ಸಂಪತ್ಪದವಿಗಳಲ್ಲಿ ಅಗ್ರಗಣ್ಯನಾದವನೂ ಅಭಿವೃದ್ಧಿಯಾಗುತ್ತಿರುವ ಪುಣ್ಯವುಳ್ಳವನೂ ಆದ )
ಪದ್ಯ-೪೧:ಅರ್ಥ: ಆ ವೆಂಗಿಪಳುವಿನಲ್ಲಿ ವಸಂತ ಕೊಟ್ಟೂರು, ಅಲ್ಲಿಯೇ ನಿಡುಗುಂದಿ, ಅತ್ಯತಿಶಯವಾದ ವಿಕ್ರಮಪುರ ಎಂಬುವ ಅಗ್ರಹಾರಗಳು ಶೋಭಾಯಮಾನವಾಗಿವೆ. ಅಲ್ಲಿಯ ಸಂಪತ್ಪದವಿಗಳಲ್ಲಿ ಅಗ್ರಗಣ್ಯನಾದವನೂ ಅಭಿವೃದ್ಧಿಯಾಗುತ್ತಿರುವ ಪುಣ್ಯವುಳ್ಳವನೂ ಆದ
ನಯಶಾಲಿ ವತ್ಸ ಗೋತ್ರ
ಶ್ರಯಣೀಯನನೇಕ ಸಕಳ ಶಾಸ್ತ್ರಾರ್ಥ ವಿನಿ|
ಶ್ಚಯ ಮತಿ ಕೃತಿ ಮಾಧವ ಸೋ
ಮಯಾಜಿ ಸಲೆ ನೆಗೞ್ದನಾಸಮುದ್ರಂಬರೆಗಂ|| ೪೨ ||
ಪದ್ಯ-೪೨:ಪದವಿಭಾಗ-ಅರ್ಥ:ನಯಶಾಲಿ ವತ್ಸ ಗೋತ್ರಶ್ರಯಣೀಯನ್ (ವಿನಯಶಾಲಿಯೂ ವತ್ಸಗೋತ್ರವನ್ನು ಆಶ್ರಯಿಸಿದವನೂ )ಅನೇಕ ಸಕಳ ಶಾಸ್ತ್ರಾರ್ಥ ವಿನಿಶ್ಚಯ ಮತಿಕೃತಿ (ಸಕಲ ಶಾಸ್ತ್ರಾರ್ಥಗಳಲ್ಲಿ ಸ್ಥಿರವಾದ ಪಾಂಡಿತ್ಯವುಳ್ಳವನೂ ಆದ) ಮಾಧವ ಸೋಮಯಾಜಿ ಸಲೆ ನೆಗೞ್ದನು ಆ ಸಮುದ್ರಂಬರೆಗಂ(ಮಾಧವ ಸೋಮಯಾಜಿಯೆಂಬುವನು ಸಮುದ್ರ ಕಡೆಯವರೆಗೂ ಬಹುಪ್ರಸಿದ್ಧನಾಗಿದ್ದನು.)
ಪದ್ಯ-೪೨:ಅರ್ಥ: ವಿನಯಶಾಲಿಯೂ ವತ್ಸಗೋತ್ರವನ್ನು ಆಶ್ರಯಿಸಿದವನೂ ಸಕಲ ಶಾಸ್ತ್ರಾರ್ಥಗಳಲ್ಲಿ ಸ್ಥಿರವಾದ ಪಾಂಡಿತ್ಯವುಳ್ಳವನೂ ಆದ ಮಾಧವ ಸೋಮಯಾಜಿಯೆಂಬುವನು ಸಮುದ್ರ ಕಡೆಯವರೆಗೂ ಬಹುಪ್ರಸಿದ್ಧನಾಗಿದ್ದನು.
ಉ|| ಶಕ್ರ ಶಶಾಂಕ ಸೂರ್ಯ ಪವಮಾನರುಮಾತನ ಹೋಮ ಮಂತ್ರ ಚ
ಕ್ರ ಕ್ರಮಕಕ್ಕಣಂ ಮಿಡುಕಲಾಗಡೆ ಶಾಪಮನೀಗುಮೆಂದೆ ದಿ|
ಕ್ಚಕ್ರಮುಮಂಜಿ ಬೆರ್ಚಿ ಬೆಸಕೆಯ್ವುದದಲ್ಲದಗುರ್ವು ಪರ್ವೆ ಸ
ರ್ವಕ್ರತುಯಾಜಿಯಾದನಳವಿಂತುಟು ಮಾಧವಸೋಮಯಾಜಿಯಾ|| ೪೩ ||
ಪದ್ಯ-೪೩:ಪದವಿಭಾಗ-ಅರ್ಥ:ಶಕ್ರ ಶಶಾಂಕ ಸೂರ್ಯ ಪವಮಾನರುಂ (ಇಂದ್ರ ಚಂದ್ರ ಸೂರ್ಯ ವಾಯುದೇವತೆಗಳೂ) ಆತನ ಹೋಮ ಮಂತ್ರ ಚಕ್ರ ಕ್ರಮಕಕ್ಕಣಂ (ಆತನ ಹೋಮ ಮಂತ್ರ ಚಕ್ರಕ್ರಮಕ್ಕೆ) ಮಿಡುಕಲು ಆಗಡೆ (ಸ್ವಲ್ಪವೂ ಅಡ್ಡಿ ಮಾಡುತ್ತಿರಲಿಲ್ಲ.) ಶಾಪಮಂ ಈಗುಂ ಎಂದೆ ( ಮಾಡಿದರೆ ಶಾಪವನ್ನು ಕೊಡುತ್ತಾನೆಂದೇ) ದಿಕ್ ಚಕ್ರಮು ಅಂಜಿ ಬೆರ್ಚಿ ಬೆಸಕೆಯ್ವುದು (ದಿಙ್ಮಂಡಲಗಳೂ ಹೆದರಿ ಸೇವೆ ಮಾಡುತ್ತವೆ.) ಅದಲ್ಲದೆ ಅಗುರ್ವು ಪರ್ವೆ ಸರ್ವಕ್ರತುಯಾಜಿಯಾದಂ (ಅದಲ್ಲದೆ ಅವನು ಭಯಭಕ್ತಿ ಹುಟ್ಟುವಂತೆ ಸರ್ವಕ್ರತುಯೆಂಬಯಜ್ಞವನ್ನು ಮಾಡಿದ ಸರ್ವಕ್ರತುಯಾಜಿಯಾದನು.) ಅಳವು ಇಂತುಟು ಮಾಧವಸೋಮಯಾಜಿಯಾ (ಮಾಧವ ಸೋಮಯಾಜಿಯ ಶಕ್ತಿಯು ಹೀಗಿದೆ.)
ಪದ್ಯ-೪೩:ಅರ್ಥ: ಇಂದ್ರ ಚಂದ್ರ ಸೂರ್ಯ ವಾಯುದೇವತೆಗಳೂ ಆತನ ಹೋಮ ಮಂತ್ರ ಚಕ್ರಕ್ರಮಕ್ಕೆ ಸ್ವಲ್ಪವೂ ಅಡ್ಡಿ ಮಾಡುತ್ತಿರಲಿಲ್ಲ. ಮಾಡಿದರೆ ಶಾಪವನ್ನು ಕೊಡುತ್ತಾನೆಂದೇ ದಿಙ್ಮಂಡಲಗಳೂ ಹೆದರಿ ಸೇವೆ ಮಾಡುತ್ತವೆ. ಅದಲ್ಲದೆ ಅವನು ಭಯಭಕ್ತಿ ಹುಟ್ಟುವಂತೆ ಸರ್ವಕ್ರತುಯೆಂಬಯಜ್ಞವನ್ನು ಮಾಡಿದ ಸರ್ವಕ್ರತುಯಾಜಿಯಾದನು. ಮಾಧವ ಸೋಮಯಾಜಿಯ ಶಕ್ತಿಯು ಹೀಗಿದೆ.
ಕಂ|| ವರ ದಿಗ್ವನಿತೆಗೆ ಮಾಟದ
ಕುರುಳಾ ತ್ರೈಭುವನಕಾಂತೆಗಂ ದಲ್ ಕಂಠಾ|
ಭರಣಮೆನೆ ಪರೆದ ತನ್ನ
ಧ್ವರ ಧೂಮದೆ ಕರಿದು ಮಾಡಿದಂ ನಿಜಯಶಮಂ|| ೪೪ ||
ಪದ್ಯ-೪೪:ಪದವಿಭಾಗ-ಅರ್ಥ:ವರ ದಿಗ್ವನಿತೆಗೆ ಮಾಟದಕುರುಳ್ (ಶ್ರೇಷ್ಠವಾದ ದಿಕ್ಕೆಂಬ ಸ್ತ್ರೀಗೆ ಕೃತಕ ಕೂದಲುಗಳು) ತ್ರೈಭುವನಕಾಂತೆಗಂ ದಲ್ ಕಂಠಾಭರಣಂ ಎನೆ ( ಮೂರು ಲೋಕಗಳ ಸ್ತ್ರೀಗೂ ಕತ್ತಿನ ಆಭರಣವು ಎನ್ನುವ ಹಾಗೆ) ಪರೆದ ತನ್ನ ಅಧ್ವರ ಧೂಮದೆ ಕರಿದು ಮಾಡಿದಂ ನಿಜಯಶಮಂ (ವ್ಯಾಪಿಸಿರುವ ತನ್ನ ಯಜ್ಞದೂಮದಿಂದ (ಹೊಗೆಯಿಂದ) ತನ್ನ ಯಶಸ್ಸನ್ನು ಎಲ್ಲರೂ ನಮಸ್ಕರಿಸುವಂತೆ ಮಾಡಿಕೊಂಡನು.)
ಪದ್ಯ-೪೪:ಅರ್ಥ: ಶ್ರೇಷ್ಠವಾದ ದಿಕ್ಕೆಂಬ ಸ್ತ್ರೀಗೆ ಕೃತಕ ಕೂದಲುಗಳು, ಮೂರು ಲೋಕಗಳ ಸ್ತ್ರೀಗೂ ಕತ್ತಿನ ಆಭರಣವು ಎನ್ನುವ ಹಾಗೆ, ವ್ಯಾಪಿಸಿರುವ ತನ್ನ ಯಜ್ಞದೂಮದಿಂದ (ಹೊಗೆಯಿಂದ) ತನ್ನ ಯಶಸ್ಸನ್ನು ಎಲ್ಲರೂ ನಮಸ್ಕರಿಸುವಂತೆ ಮಾಡಿಕೊಂಡನು. (ಕರಿ = = ಅಡ್ಡಲಾಗಿ ಬೀಳು, ನಮಸ್ಕರಿಸು, ಅಡ್ಡಬೀಳು, ಎಸಕಪದ ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು)
ತತ್ತನಯನಖಿಳ ಕರಿ ತುರ
ಗೋತ್ತಮ ಮಣಿ ಕನಕ ಸಾರ ವಸ್ತುವನೆರೆದ|
ರ್ಗಿತ್ತು ಸಲೆ ನೆಗೞ್ದನತಿ ಪುರು
ಷೋತ್ತಮನಭಿಮಾನಚಂದ್ರನೆನಿಪಂ ಪೆಸರಿಂ|| ೪೫ ||
ಪದ್ಯ-೪೫:ಪದವಿಭಾಗ-ಅರ್ಥ:ತತ್ ತನಯನು (ಅವನ ಮಗ) ಅಖಿಳ ಕರಿ ತುರಗೋತ್ತಮ ಮಣಿ ಕನಕ ಸಾರ ವಸ್ತುವನು (ಸಮಸ್ತ ಆನೆ ಕುದುರೆ ಉತ್ತಮ ರತ್ನ ಚಿನ್ನ ಮೊದಲಾದ ಉತ್ತಮ ವಸ್ತುಗಳನ್ನು ) ಎರೆದರ್ಗೆ ಇತ್ತು (ಬೇಡಿದವರಿಗೆ ದಾನಮಾಡಿ)ಸಲೆ ನೆಗೞ್ದನು (ವಿಶೇಷ ಪ್ರಸಿದ್ಧನಾದನು.) ಅತಿ ಪುರುಷೋತ್ತಮನು ಅಭಿಮಾನಚಂದ್ರನೆನಿಪಂ ಪೆಸರಿಂ (ಪುರುಷರಲ್ಲಿ ಅತಿಶ್ರೇಷ್ಠನಾದ ಅಭಿಮಾನಚಂದ್ರನೆಂಬ ಹೆಸರುಳ್ಳವನು ವಿಶೇಷ ಪ್ರಸಿದ್ಧನಾದನು.)
ಪದ್ಯ-೪೫:ಅರ್ಥ: ಪುರುಷರಲ್ಲಿ ಅತಿಶ್ರೇಷ್ಠನಾದ ಅವನ ಮಗನಾದ ಅಭಿಮಾನಚಂದ್ರನೆಂಬ ಹೆಸರುಳ್ಳವನು ಬೇಡಿದವರಿಗೆ ತನ್ನ ಸಮಸ್ತ ಆನೆ ಕುದುರೆ ಉತ್ತಮ ರತ್ನ ಚಿನ್ನ ಮೊದಲಾದ ಉತ್ತಮ ವಸ್ತುಗಳನ್ನು ದಾನಮಾಡಿ ವಿಶೇಷ ಪ್ರಸಿದ್ಧನಾದನು.
ಕಂ|| ಆತಂಗೆ ಭುವನ ಭವನ
ಖ್ಯಾತಂಗೆ ಸಮಸ್ತ ವೇದ ವೇದಾಂಗ ಸಮು|
ದ್ಯೋತಿತ ಮತಿಯುತನುಚಿತ ಪು
ರಾತನ ಚರಿತಂ ತನೂಭವಂ ಕೊಮರಯ್ಯಂ|| ೪೬ ||
ಪದ್ಯ-೪೬:ಪದವಿಭಾಗ-ಅರ್ಥ: ಆತಂಗೆ ಭುವನ ಭವನಖ್ಯಾತಂಗೆ (ಭೂಮಂಡಲದಲ್ಲಿ ಪ್ರಸಿದ್ಧನಾದ ಆತನಿಗೆ) ಸಮಸ್ತ ವೇದ ವೇದಾಂಗ ಸಮುದ್ಯೋತಿತ (ಸಕಲ ವೇದಶಾಸ್ತ್ರಗಳಿಂದ ಪ್ರಕಾಶಿಸಲ್ಪಟ್ಟ ಬುದ್ಧಿಯುಳ್ಳವನೂ) ಮತಿಯುತನು ಉಚಿತ ಪುರಾತನ ಚರಿತಂ ತನೂಭವಂ ಕೊಮರಯ್ಯಂ (ಉಚಿತವಾದ ಪ್ರಾಚೀನ ಆಚರಸಂಪನ್ನನಾದವನೂ ಆದ ಮಗನು ಕೊಮರಯ್ಯನೆಂಬುವನು.)
ಪದ್ಯ-೪೬:ಅರ್ಥ: ಭೂಮಂಡಲದಲ್ಲಿ ಪ್ರಸಿದ್ಧನಾದ ಆತನಿಗೆ ಸಕಲ ವೇದಶಾಸ್ತ್ರಗಳಿಂದ ಪ್ರಕಾಶಿಸಲ್ಪಟ್ಟ ಬುದ್ಧಿಯುಳ್ಳವನೂ ಉಚಿತವಾದ ಪ್ರಾಚೀನ ಆಚರಸಂಪನ್ನನಾದವನೂ ಆದ ಮಗನು ಕೊಮರಯ್ಯನೆಂಬುವನು.
ಆ ಕೊಮರಯ್ಯಂಗವನಿತ
ಳಾಕಾಶ ವ್ಯಾಪ್ತ ನಿಜ ಗುಣ ಮಣಿ ರ|
ತ್ನಾಕರನಜ್ಞಾನತಮೋ
ನೀಕರನಭಿರಾಮ ದೇವರಾಯಂ ತನಯಂ|| ೪೭ ||
ಪದ್ಯ-೪೭:ಪದವಿಭಾಗ-ಅರ್ಥ:ಆ ಕೊಮರಯ್ಯಂಗೆ ಅವನಿತಳಾಕಾಶ ವ್ಯಾಪ್ತ ನಿಜ ಗುಣ ಮಣಿ (ಆ ಕೊಮರಯ್ಯನಿಗೆ ಭೂಮ್ಯಾಕಾಶಗಳಲ್ಲಿ ಹರಡಿರುವ ತನ್ನ ಗುಣವೆಂಬ ಮಣಿಗಳಿಗೆ) ರತ್ನಾಕರಂ ಅಜ್ಞಾನ ತಮೋ ನಿಕರಂ (ಸಮುದ್ರದಂತಿರುವವನೂ ಅಜ್ಞಾನವೆಂಬ ಕತ್ತಲನ್ನು ಪರಿಹರಿಸುವವನೂ ಆದ ) ಅಭಿರಾಮ ದೇವರಾಯಂ ತನಯಂ (ಅಭಿರಾಮದೇವರಾಯ ಎಂಬುವನು ಮಗನು.)
ಪದ್ಯ-೪೭:ಅರ್ಥ: ಆ ಕೊಮರಯ್ಯನಿಗೆ ಭೂಮಿ ಆಕಾಶಗಳಲ್ಲಿ ಹರಡಿರುವ ತನ್ನ ಗುಣವೆಂಬ ಮಣಿಗಳಿಗೆ ಸಮುದ್ರದಂತಿರುವವನೂ ಅಜ್ಞಾನವೆಂಬ ಕತ್ತಲನ್ನು ಪರಿಹರಿಸುವವನೂ ಆದ ಅಭಿರಾಮದೇವರಾಯ ಎಂಬುವನು ಮಗನು.
ಉ|| ಜಾತಿಯೊಳೆಲ್ಲಮುತ್ತಮದ ಜಾತಿಯ ವಿಪ್ರಕುಲಂಗೆ ನಂಬಲೇ
ಮಾತೊ ಜಿನೇಂದ್ರ ಧರ್ಮಮೆ ವಲಂ ದೊರೆ ಧರ್ಮದೊಳೆಂದು ನಂಬಿ ತ|
ಜ್ಜಾತಿಯನುತ್ತರೋತ್ತರಮೆ ಮಾಡಿ ನೆಗೆೞ್ಚಿದನಿಂತಿರಾತ್ಮ ವಿ
ಖ್ಯಾತಿಯನಾತನಾತನ ಮಗಂ ನೆಗೞ್ದಂ ಕವಿತಾಗುಣಾರ್ಣವಂ|| ೪೮ ||
ಪದ್ಯ-೪೮:ಪದವಿಭಾಗ-ಅರ್ಥ:ಜಾತಿಯೊಳು ಎಲ್ಲಂ ಉತ್ತಮದ ಜಾತಿಯ ವಿಪ್ರಕುಲಂಗೆ (ಜಾತಿಗಳಲ್ಲೆಲ್ಲ ಉತ್ತಮ ಜಾತಿಯ ಬ್ರಾಹ್ಮಣಕುಲದವನಿಗೆ), ನಂಬಲ್ ಏ ಮಾತೊ (ನಂಬಲು ಏನು ಮಾತೋ, ಅಸಾಧ್ಯ-) ಜಿನೇಂದ್ರ ಧರ್ಮಮೆ ವಲಂ ದೊರೆ ಧರ್ಮದೊಳೆಂದು ನಂಬಿ (ಧರ್ಮದಲ್ಲೆಲ್ಲ ಜೈನಧರ್ಮವೇ ಅಲ್ಲವೆ! ಉತ್ತಮವಾದುದೆಂದು ನಂಬಿ,) ತಜ್ಜಾತಿಯಂ ಉತ್ತರೋತ್ತರಮೆ ಮಾಡಿ (ಆ ಜಾತಿಯನ್ನು ಅತಿಶಯವಾದುದಾಗಿ ಮಾಡಿ) ನೆಗೆೞ್ಚಿದನ್ (ಪ್ರಸಿದ್ಧಪಡಿಸಿದನು.) ಇಂತಿರೆ ಆತ್ಮ ವಿಖ್ಯಾತಿಯನು ಆತನು (ತನ್ನ ಖ್ಯಾತಿಯನ್ನು ಈ ರೀತಿಯಲ್ಲಿ ಹೆಚ್ಚಿಸಿಕೊಂಡನು/ ಪ್ರಸಿದ್ಧಪಡಿಸಿದನು.) ಆತನ ಮಗಂ ನೆಗೞ್ದಂ ಕವಿತಾಗುಣಾರ್ಣವಂ (ಅವನ ಮಗನೇ ಪ್ರಸಿದ್ಧನಾದ ಕವಿತಾಗುಣಾರ್ಣವ ಎಂಬ ಬಿರುದಿನ ಪಂಪ.)
ಪದ್ಯ-೪೮:ಅರ್ಥ: ಜಾತಿಗಳಲ್ಲೆಲ್ಲ ಉತ್ತಮ ಜಾತಿಯ ಬ್ರಾಹ್ಮಣಕುಲದವನಿಗೆ ನಂಬಲು ಏನು ಮಾತೋ, ನಂಬಲು ಅಸಾಧ್ಯವೆಂಬಂತೆ, ಧರ್ಮದಲ್ಲೆಲ್ಲ ಜೈನಧರ್ಮವೇ ಉತ್ತಮವಾದುದೆಂದು ನಂಬಿ, ಆ ಜಾತಿಯನ್ನು ಅತಿಶಯವಾದುದಾಗಿ ಮಾಡಿ, ತನ್ನ ಖ್ಯಾತಿಯನ್ನು ಈ ರೀತಿಯಲ್ಲಿ ಹೆಚ್ಚಿಸಿಕೊಂಡನು/ ಪ್ರಸಿದ್ಧಪಡಿಸಿದನು.. ಅವನ ಮಗನೇ ಪ್ರಸಿದ್ಧನಾದ ಕವಿತಾಗುಣಾರ್ಣವ ಎಂಬ ಬಿರುದಿನ ಪಂಪ.
ಕಂ|| ಪಂಪಂ ಧಾತ್ರೀವಳಯ ನಿ
ಳಿಂಪಂ ಚತುರಂಗ ಬಳ ಭಯಂಕರಣಂ ನಿ|
ಷ್ಕಂಪಂ ಲಲಿತಾಲಂಕರ
ಣಂ ಪಂಚಶರೈಕರೂಪನಪಗತಪಾಪಂ|| ೪೯ ||
ಪದ್ಯ-೪೯:ಪದವಿಭಾಗ-ಅರ್ಥ:ಪಂಪಂ ಧಾತ್ರೀವಳಯ ನಿಳಿಂಪಂ (ಪಂಪನು ಭೂಮಂಡಲದ ಶ್ರೇಷ್ಠ- ದೇವತೆ.) ಚತುರಂಗ ಬಳ ಭಯಂಕರಣಂ (ಚತುರಂಗಸೈನ್ಯಗಳಿಗೆ ಭಯವನ್ನುಂಟುಮಾಡುವವನು.) ನಿಷ್ಕಂಪಂ ಲಲಿತ ಅಲಂಕರಣಂ (ಧೈರ್ಯಶಾಲಿ (ನಡುಗದವನು) ಸುಂದರವಾದ ಅಲಂಕಾರವುಳ್ಳವನು.) ಪಂಚಶರ ಏಕರೂಪನು ಅಪಗತಪಾಪಂ (ಮನ್ಮಥನ ಹಾಗೆಯೇ ಇರುವ ರೂಪವುಳ್ಳವನು, ಪಾಪರಹಿತನಾದವನು.)

ಚಂ|| ಕವಿತೆ ನೆಗೞ್ತೆಯಂ ನಿಱಿಸೆ ಜೋಳದ ಪಾಱಿ ನಿಜಾನಾಥನಾ

ಪದ್ಯ-೪೯:ಅರ್ಥ: ಪಂಪನು ಭೂಮಂಡಲದ ಶ್ರೇಷ್ಠದೇವತೆ. ಚತುರಂಗಸೈನ್ಯಗಳಿಗೆ ಭಯವನ್ನುಂಟುಮಾಡುವವನು. ಧೈರ್ಯಶಾಲಿ (ನಡುಗದವನು) ಸುಂದರವಾದ ಅಲಂಕಾರವುಳ್ಳವನು. ಮನ್ಮಥನ ಹಾಗೆಯೇ ಇರುವ ರೂಪವುಳ್ಳವನು, ಪಾಪರಹಿತನಾದವನು.
ಚಂ|| ಕವಿತೆ ನೆಗೞ್ತೆಯಂ ನಿಱಸೆ ಜೋಳದ ಪಾೞಿ ನಿಜಾಧಿನಾಥನಾ
ಹವದೊಳರಾತಿನಾಯಕರ ಪಟ್ಟನೆ ಪಾಱಿಸೆ ಸಂದ ಪೆಂಪು ಭೂ|
ಭುವನದೊಳಾಗಳುಂ ಬೆಳಗೆ ಮಿಕ್ಕಭಿಮಾನದ ಮಾತು ಕೀರ್ತಿಯಂ
ವಿವರಿಸೆ ಸಂದನೇಂ ಕಲಿಯೊ ಸತ್ಕವಿಯೋ ಕವಿತಾಗುಣಾಣವಂ|| ೫೦ ||
ಪದ್ಯ-೫೦:ಪದವಿಭಾಗ-ಅರ್ಥ:ಕವಿತೆ ನೆಗೞ್ತೆಯಂ ನಿಱಸೆ ಜೋಳದ ಪಾೞಿ (ತನ್ನ ಕವಿತ್ವವು ಖ್ಯಾತಿಯನ್ನು ಸ್ಥಾಪಿಸಿತು. ಅನ್ನದಾತನ ಉಪ್ಪಿನ ಋಣವು ತೀರುವಿಕೆ.) ನಿಜಾಧಿ ನಾಥನ ಆಹವದೊಳು ಅರಾತಿನಾಯಕರ ಪಟ್ಟನೆ ಪಾಱಿಸೆ (ತನ್ನ ರಾಜನ ಯುದ್ಧದಲ್ಲಿ ಶತ್ರುನಾಯಕರ ವೀರಪಟ್ಟಗಳನ್ನು ಹಾರಿಸುವಂತಹ,) ಸಂದ ಪೆಂಪು ಭೂಭುವನದೊಳು ಆಗಳುಂ ಬೆಳಗೆ (ಉಂಟಾದ ಹಿರಿಮೆ ಭೂಲೋಕದಲ್ಲಿಯಾವಾಗಲೂ ಪ್ರಕಾಶಿಸಲು,) ಮಿಕ್ಕ ಅಭಿಮಾನದ ಮಾತು ಕೀರ್ತಿಯಂ ವಿವರಿಸೆ (ಉಳಿದ ಅಭಿಮಾನದ ಮಾತುಗಳು ತನ್ನ ಯಶಸ್ಸನ್ನು ವಿವರಿಸಲು,-- ಕವಿತಾಗುಣಾರ್ಣವನು ಬಹು ಪ್ರಸಿದ್ಧನಾದನು.) ಸಂದನೇಂ ಕಲಿಯೊ ಸತ್ಕವಿಯೋ ಕವಿತಾಗುಣಾಣವಂ ( ಪಂಪಕವಿಯು ಏನು ಶೂರನೋ ಎಂತಹ ಸತ್ಕವಿಯೋ?)
ಪದ್ಯ-೫೦:ಅರ್ಥ: ತನ್ನ ಕವಿತ್ವವು ಖ್ಯಾತಿಯನ್ನು ಸ್ಥಾಪಿಸಿತು. ಅನ್ನದಾತನ ಉಪ್ಪಿನ ಋಣವು ತೀರುವಿಕೆ. ತನ್ನ ರಾಜನ ಯುದ್ಧದಲ್ಲಿ ಶತ್ರುನಾಯಕರ ವೀರಪಟ್ಟಗಳನ್ನು ಹಾರಿಸುವಂತಹ ಉಂಟಾದ ಹಿರಿಮೆಯನ್ನೂ ತನ್ನ ಯಶಸನ್ನೂ ಪ್ರಕಾಶಿಸಲು- ಉಳಿದ ಅಭಿಮಾನದ ಮಾತುಗಳು ತನ್ನ ಯಶಸ್ಸನ್ನು ವಿವರಿಸಲು,-- ಕವಿತಾಗುಣಾರ್ಣವನು ಬಹು ಪ್ರಸಿದ್ಧನಾದನು. ಪಂಪಕವಿಯು ಏನು ಶೂರನೋ ಎಂತಹ ಸತ್ಕವಿಯೋ?

ಕಾವ್ಯ ವಿಚಾರ[ಸಂಪಾದಿಸಿ]

ಕಂ|| ಆತಂಗರಿಕೇಸರಿ ಸಂ
ಪ್ರೀತಿಯೆ ಬೞಿಯಟ್ಟಿ ಪಿರಿದನಿತ್ತು ನಿಜಾಭಿ|
ಖ್ಯಾತಿಯನಿಳೆಯೊಳ್ ನಿಱಿಸ
ಲ್ಕೀ ತೆಱದಿತಿಹಾಸ ಕಥೆಯನೊಪ್ಪಿಸೆ ಕುಱಿತಂ|| ೫೧ ||
ಪದ್ಯ-೫೧:ಪದವಿಭಾಗ-ಅರ್ಥ:ಆತಂಗೆ ಅರಿಕೇಸರಿ ಸಂಪ್ರೀತಿಯೆ ಬೞಿಯಟ್ಟಿ (ಆತನಿಗೆ (ಆ ಪಂಪನಿಗೆ) ಅರಿಕೇಸರಿರಾಜನು ಅತ್ಯಂತ ಪ್ರೀತಿಯಿಂದ ಹೇಳಿಕಳುಹಿಸಿ) ಪಿರಿದನು ಇತ್ತು (ವಿಶೇಷವಾಗಿ ದಾನಮಾಡಿ) ನಿಜಾಭಿಖ್ಯಾತಿಯನು ಇಳೆಯೊಳ್ ನಿಱಿಸಲ್ಕೆ (ತನ್ನ ಕೀರ್ತಿಯನ್ನು ಭೂಮಿಯಲ್ಲಿ ಸ್ಥಾಪಿಸಲು) ಈ ತೆಱದ ಇತಿಹಾಸ ಕಥೆಯನು ಒಪ್ಪಿಸೆ ಕುಱಿತಂ (ಈ ರೀತಿಯಾದ ಇತಿಹಾಸ ಕಥೆಯನ್ನು ರಚಿಸಿ ಒಪ್ಪಿಸಲು ಕೋರಿದನು/ ಆಜ್ಞಾಪಿಸಿದನು.)
ಪದ್ಯ-೫೧:ಅರ್ಥ: ಆತನಿಗೆ (ಆ ಪಂಪನಿಗೆ) ಅರಿಕೇಸರಿರಾಜನು ಅತ್ಯಂತ ಪ್ರೀತಿಯಿಂದ ಹೇಳಿಕಳುಹಿಸಿ ವಿಶೇಷವಾಗಿ ದಾನಮಾಡಿ, ತನ್ನ ಕೀರ್ತಿಯನ್ನು ಭೂಮಿಯಲ್ಲಿ ಸ್ಥಾಪಿಸಲು ಈ ರೀತಿಯಾದ ಇತಿಹಾಸ ಕಥೆಯನ್ನು ರಚಿಸಿ ಒಪ್ಪಿಸಲು ಕೋರಿದನು.
ಶ್ರೌತಮಿದು ತನಗೆ ಗಂಗಾ
ಸ್ರೋತದವೊಲಳುಂಬಮಾಗಿ ಗೆಡೆಗೊಳ್ಳದೆ ವಿ|
ಖ್ಯಾತ ಕವಿ ವೃಷಭ ವಂಶೋ
ದ್ಭೂತಮೆನಲ್ ಬರಿಸದೊಳಗೆ ಸಮೆವಿನೆಗಮಿದಂ|| ೫೨ ||
ಪದ್ಯ-೫೨:ಪದವಿಭಾಗ-ಅರ್ಥ:ಶ್ರೌತಮಿದು ತನಗೆ (ಕೇಳಬೇಕಾದ ವೇದಸದೃಶವಾದ ಈ ಕೃತಿಯು ತನಗೆ) ಗಂಗಾಸ್ರೋತದವೊಲ್ ಅಳುಂಬಮಾಗಿ (ಗಂಗಾಪ್ರವಾಹದಂತೆ ಅತ್ಯತಿಶಯವಾಗಿ) ಗೆಡೆಗೊಳ್ಳದೆ (ಪರರ ಸಹಾಯವನ್ನಪೇಕ್ಷಿಸದೆ) ವಿಖ್ಯಾತ ಕವಿ ವೃಷಭ ವಂಶೋದ್ಭೂತಂ ಎನಲ್ (ಪ್ರಸಿದ್ಧರಾದ ಕವಿಶ್ರೇಷ್ಠರ ಪರಂಪರೆಯಲ್ಲಿಯೇ ಹುಟ್ಟಿತು ಎನ್ನುವ ಹಾಗೆ) ಬರಿಸದೊಳಗೆ ಸಮೆವಿನೆಗಂ ಇದಂ (ಇದು ಒಂದು ವರ್ಷದಲ್ಲಿ ರಚಿತವಾಯಿತು. )
ಪದ್ಯ-೫೨:ಅರ್ಥ: ಕೇಳಬೇಕಾದ ವೇದಸದೃಶವಾದ ಈ ಕೃತಿಯು ತನಗೆ ಗಂಗಾಪ್ರವಾಹದಂತೆ ಅತ್ಯತಿಶಯವಾಗಿ ಪರರ ಸಹಾಯವನ್ನಪೇಕ್ಷಿಸದೆ ಪ್ರಸಿದ್ಧರಾದ ಕವಿಶ್ರೇಷ್ಠರ ಪರಂಪರೆಯಲ್ಲಿಯೇ ಹುಟ್ಟಿತು ಎನ್ನುವ ಹಾಗೆ ಇದು ಒಂದು ವರ್ಷದಲ್ಲಿ ರಚಿತವಾಯಿತು.
ವ|| ಅದೆಂತೆನೆ ಆದಿವಂಶಾವತಾರಸಂಭವಂ ರಂಗಪ್ರವೇಶಂ ಜತುಗೃಹದಾಹಂ ಹಿಡಿಂಬ ವಧೆಬಕಾಸುರವಧೆ ದ್ರೌಪದೀಸ್ವಯಂವರಂ ವೈವಾಹಂ ಯುಧಿಷ್ಠಿರಪಟ್ಟಬಂಧನಂ ಇಂದ್ರಪ್ರಸ್ಥ ಪ್ರವೇಶಂ ಅರ್ಜುನದಿಗ್ವಿಜಯಂ ದ್ವಾರಾವತೀಪ್ರವೇಶಂ ಸುಭದ್ರಾಹರಣಂ ಸುಭದ್ರಾ ವಿವಾಹಂ ಖಾಂಡವವನ ದಹನಂ ಮಯ ದರ್ಶನಂ ನಾರದಾಗಮನಂ ಜರಾಸಂಧ ವಧೆ ರಾಜಸೂಯಂ ಶಿಶುಪಾಲವಧೆ ದ್ಯೂತವ್ಯತಿಕರಂ ವನ ಪ್ರವೇಶಂ ಕಿಮ್ಮೀರ ವಧೆ ಕಾಮ್ಯಕವನದರ್ಶನಂ ದ್ವೆತವನ ಪ್ರವೇಶಂ ಸೈಂಧವಬಂಧನಂ ಚಿತ್ರಾಂಗದಯುದ್ಧಂ ಕಿರಾತದೂತಾಗಮನಂ ದ್ರೌಪದೀವಾಕ್ಯಂ ಪಾರಾಶರ ವೀಕ್ಷಣಂ ಇಂದ್ರಕೀಲಾಭಿಗಮನಂ ಈಶ್ವರಾರ್ಜುನ ಯುದ್ಧಂ ದಿವ್ಯಾಸ್ತ್ರಲಾಭಂ ಇಂದ್ರಲೋಕಾಲೋಕನಂ ನಿವಾತಕವಚಾಸುರವಧೆ ಕಾಳಕೇಯ ಪೌಳೋಮವಧೆ ಸೌಗಂಕಕಮಲಾಹರಣಂ ಜಟಾಸುರವಧೆ ಮಾಯಾಮತ್ತಹಸ್ತಿ ವ್ಯಾಜಂ ವಿರಾಟಪುರ ಪ್ರವೇಶಂ ಕೀಚಕವಧೆ ದಕ್ಷಿಣೋತ್ತರ ಗೋಗ್ರಹಣಂ ಅಭಿಮನ್ಯು ವಿವಾಹಂ ಮಂತ್ರಾಳೋಚನಂ ದೂತಕಾರ್ಯಂ ಕುರುಕ್ಷೇತ್ರಪ್ರಯಾಣಂ ಭೀಷ್ಮ ಕರ್ಣ ವಿವಾದಂ ಯುದ್ಧೋದ್ಯೋಗಂ ಶ್ವೇತವಧೆ ಭೀಷ್ಮಶರ ಶಯನಂ ದ್ರೋಣಾಭಿಷೇಕಂ ಅಭಿಮನ್ಯು ವಧೆ ಸೈಂಧವ ವಧೆ ಘಟೋತ್ಕಚ ವಧೆ ದ್ರೋಣಚಾಪ ಮೋಕ್ಷಂ ದ್ರೋಣ ವಧೆ ಅಶ್ವತ್ಥಾಮ ಕರ್ಣ ವಿವಾದಂ ಕರ್ಣಾಭಿಷೇಕಂ ಸಂಸಪ್ತಕ ವಧೆ ದುಶ್ಯಾಸನ ವಧೆ ವೇಣೀಸಂಹನನಂ ಕರ್ಣಾರ್ಜುನ ಯುದ್ಧಂ ಕರ್ಣ ಸೂರ್ಯಲೋಕಪ್ರಾಪ್ತಿ ಶಲ್ಯಾಭಿಷೇಕಂ ಶಲ್ಯನಿಪಾತನಂ ಭೀಮ ದುಯೋಧನ ಗದಾಯುದ್ಧಂ ದುಯೋಧನ ವಧೆ ಪಂಚಪಾಂಡವಹರಣಂ ಸ್ತ್ರೀಪರ್ವಂ ಅರ್ಜುನಾಭಿಷೇಕಂ ಪೆಱವುಮುಪಾಖ್ಯಾನ ಕಥೆಗಳೊಳಮೊಂದುಂ ಕುಂದಲೀಯದೆಪೇೞ್ಗೆಂ-
ವಚನ:ಅರ್ಥ: ಅದು ಹೇಗೆಂದರೆ ಆದಿವಂಶಾವತಾರಸಂಭವ, ರಂಗಪ್ರವೇಶ, ಅರಗಿನಮನೆಯ ದಾಹ, ಹಿಡಿಂಬವಧೆ, ಬಕಾಸುರವಧೆ, ದ್ರೌಪದೀಸ್ವಯಂವರ, ವಿವಾಹ, ಧರ್ಮರಾಯಪಟ್ಟಾಭಿಪೇಕ, ಇಂದ್ರಪ್ರಸ್ಥಪ್ರವೇಶ, ಅರ್ಜುನ ದಿಗ್ವಿಜಯ, ದ್ವಾರಾವತೀ ಪ್ರವೇಶ, ಸುಭದ್ರಾಹರಣ, ಸುಭದ್ರಾವಿವಾಹ, ಖಾಂಡವವನ ದಹನ, ಮಯದರ್ಶನ, ನಾರದಾಗಮನ, ಜರಾಸಂಧವಧೆ, ರಾಜಸೂಯ, ಶಿಶುಪಾಲವಧೆ, ದ್ಯೂತವ್ರ್ಯತಿಕರ, ವನಪ್ರವೇಶ, ಕೀಚಕವಧೆ, ಕಾಮ್ಯಕವನದರ್ಶನ, ದ್ವೆ ತವನಪ್ರವೇಶ, ಸೈಂಧವಬಂಧನ, ಚಿತ್ರಾಂಗದಯುದ್ಧ, ಕಿರಾತದೂತಾಗಮನ, ದ್ರೌಪದೀವಾಕ್ಯ, ವ್ಯಾಸರ ದರ್ಶನ, ಇಂದ್ರಕೀಲಾಭಿಗಮನ, ಈಶ್ವರಾರ್ಜುನಯುದ್ಧ, ದಿವ್ಯಾಸ್ತ್ರಲಾಭ, ಇಂದ್ರಾಲೋಕಾಲೋಕನ, ನಿವಾತಕವಚಾಸುರವಧೆ, ಕಾಳಕೇಯಪೌಳೋಮವಧೆ, ಸೌಗಂಕಕಮಲಾಹರಣ, ಜಟಾಸುರವಧೆ, ಮತ್ತಗಜದ ವೃತ್ತಾಂತ, ವಿರಾಟಪುರಪ್ರವೇಶ, ಕೀಚಕವಧೆ, ದಕ್ಷಿಣೋತ್ತರ ಗೋಗ್ರಹಣ, ಅಭಿಮನ್ಯುವಿವಾಹ, ಮಂತ್ರಾಲೋಚನೆ, ದೂತಕಾರ್ಯ, ಕುರುಕ್ಷೇತ್ರ ಪ್ರಯಾಣ, ಭೀಷ್ಮಕರ್ಣವಿವಾದ, ಯುದ್ಧೋದ್ಯೋಗ, ಶ್ವೇತವಧೆ, ಭೀಷ್ಮಶರಶಯನ, ದ್ರೋಣಾಭಿಷೇಕ, ಅಭಿಮನ್ಯುವಧೆ, ಸೈಂಧವವಧೆ, ಘಟೋತ್ಕಚವಧೆ, ದ್ರೋಣಚಾಪಮೋಕ್ಷ, ದ್ರೋಣವಧೆ, ಅಶ್ವತ್ಥಾಮಕರ್ಣ ವಿವಾದ, ಕರ್ಣಾಭಿಷೇಕ, ಸಂಸಪ್ತಕವಧೆ, ದುಶ್ಯಾಸನವಧೆ, ಮುಡಿಯನ್ನು ಕಟ್ಟುವುದು, ಕರ್ಣಾರ್ಜುನರ ಯುದ್ಧ, ಕರ್ಣನ ಸೂರ್ಯಲೋಕಪ್ರಾಪ್ತಿ, ಶಲ್ಯಾಭಿಷೇಕ, ಶಲ್ಯನಿಪಾತನ, ಭೀಮದುರ್ಯೋಧನ ಗದಾಯುದ್ಧ, ದುಯೋಧನವಧೆ, ಪಂಚಪಾಂಡವಹರಣ, ಸ್ತ್ರೀಪರ್ವ, ಅರ್ಜುನಾಭಿಷೇಕ ಮೊದಲಾದ ಇತರ ಅನೇಕ ಉಪಾಖ್ಯಾನ ಕತೆಗಳಲ್ಲಿ ಒಂದೂ ತಪ್ಪದೆ ಹೇಳಿದೆನು.

ಅರಿಕೇಸರಿಯ ಉದಾರತೆ ಮತ್ತು ಕವಿಯ ಬಗ್ಗೆ ಗೌರವ[ಸಂಪಾದಿಸಿ]

ಚಂ|| ಎಸೆಯೆ ಸಮಸ್ತ ಭಾರತಮನಾವ ನರೇಂದ್ರರುಮಾರ್ತು ಕೂರ್ತು ಪೇ
ೞಿಸರೆ ಕವೀಂದ್ರರುಂ ನೆರೆಯೆ ಪೇೞರೆ ಪೇೞಿಪೊಡೆಯ್ದೆ ನೀನೆ ಪೇ|
ಱಿಸುವೆಯುದಾತ್ತ ಕೀರ್ತಿ ನಿಲೆ ಪೇೞ್ವೊಡೆ ಪಂಪನೆ ಪೇೞ್ಗುಮಿಂತು ಪೇ
ೞಿಸಿದ ನರೇಂದ್ರರುಂ ನೆರೆಯೆ ಪೇೞ್ದ ಕವೀಂದ್ರರುಮಾರ್ ಧರಿತ್ರಿಯೊಳ್|| ೫೩ ||
ಪದ್ಯ-೫೩:ಪದವಿಭಾಗ-ಅರ್ಥ:ಎಸೆಯೆ ಸಮಸ್ತ ಭಾರತಮನು ಆವ ನರೇಂದ್ರರುಂ ಆರ್ತು ಕೂರ್ತು ಪೇೞಿಸರೆ (ಇದುವರೆಗೆ ಯಾವ ರಾಜರೂ ಸಮರ್ಥರಾಗಿ ಪ್ರೀತಿಯಿಂದ ಪ್ರಸಿದ್ಧವಾದ ಸಮಗ್ರಭಾರತವನ್ನು ಹೇಳಿಸರೆ? ಹೇಳಿಸಿಲ್ಲ.) ಕವೀಂದ್ರರುಂ ನೆರೆಯೆ ಪೇೞರೆ (ಕವಿಶ್ರೇಷ್ಠರೂ ಪೂರ್ಣವಾಗಿ ಹೇಳಿಲ್ಲ.) ಪೇೞಿಪೊಡೆ ಎಯ್ದೆ ನೀನೆ ಪೇಱಿಸುವೆ (ಹೇಳಿಸುವುದಾದರೆ ನೀನೆ ಚೆನ್ನಾಗಿ ಹೇಳಿಸುತ್ತೀಯೆ;) (ಯು) ಉದಾತ್ತ ಕೀರ್ತಿ ನಿಲೆ (ಉನ್ನತವಾದ ಕೀರ್ತಿ ನಿಲ್ಲುವ ಹಾಗೆ) ಪೇೞ್ವೊಡೆ ಪಂಪನೆ ಪೇೞ್ಗುಂ (ಹೇಳುವ ಪಕ್ಷದಲ್ಲಿ ಪಂಪನೆ ಹೇಳುತ್ತಾನೆ.) ಇಂತು ಪೇೞಿಸಿದ ನರೇಂದ್ರರುಂ ನೆರೆಯೆ ಪೇೞ್ದ ಕವೀಂದ್ರರುಮಾರ್ ಧರಿತ್ರಿಯೊಳ್ (ಹೀಗೆ ಹೇಳಿಸಿದ ರಾಜರೂ ಪೂರ್ಣವಾಗಿ ಹೇಳಿದ ಕವಿಶ್ರೇಷ್ಠರೂ ಲೋಕದಲ್ಲಿ ಯಾರಿದ್ದಾರೆ?)
ಪದ್ಯ-೫೩:ಅರ್ಥ: ಇದುವರೆಗೆ ಯಾವ ರಾಜರೂ ಸಮರ್ಥರಾಗಿ ಪ್ರೀತಿಯಿಂದ ಪ್ರಸಿದ್ಧವಾದ ಸಮಗ್ರಭಾರತವನ್ನು ಹೇಳಿಸಿಲ್ಲ. ಕವಿಶ್ರೇಷ್ಠರೂ ಪೂರ್ಣವಾಗಿ ಹೇಳಿಲ್ಲ. ಹೇಳಿಸುವುದಾದರೆ ನೀನೆ ಚೆನ್ನಾಗಿ ಹೇಳಿಸುತ್ತೀಯೆ; ಉನ್ನತವಾದ ಕೀರ್ತಿ ನಿಲ್ಲುವ ಹಾಗೆ ಹೇಳುವ ಪಕ್ಷದಲ್ಲಿ ಪಂಪನೆ ಹೇಳುತ್ತಾನೆ. ಹೀಗೆ ಹೇಳಿಸಿದ ರಾಜರೂ ಪೂರ್ಣವಾಗಿ ಹೇಳಿದ ಕವಿಶ್ರೇಷ್ಠರೂ ಲೋಕದಲ್ಲಿ ಯಾರಿದ್ದಾರೆ?
ಎನೆ ಸಕಲಾವನೀತಳ ಜನಂ ಪಿರಿದುಂ ದಯೆಗೆಯ್ದು ಸಾರ್ಚಿ ಮೆ
ಲ್ಲನೆ ಪಿರಿದಪ್ಪ ಗೌರವದ ಮೈಮೆಯ ಮನ್ನಣೆಯೋಳಿಗಳ್ ಕರಂ|
ಮನಮನಲರ್ಚೆ ಕೀರ್ತಿ ಜಗದೊಳ್ ನಿಲೆ ಪೇೞಿಸಿದಂ ಜಗಕ್ಕೆ ನ
ಚ್ಚಿನ ಕವಿತಾ ಗುಣಾರ್ಣವನಿನೀ ಕೃತಿ ಬಂಧನಮಂ ಗುಣಾರ್ಣವಂ|| ೫೪ ||
ಪದ್ಯ-೫೪:ಪದವಿಭಾಗ-ಅರ್ಥ:ಎನೆ ಸಕಲ ಅವನೀತಳ ಜನಂ (ಎಂದು ಸಮಸ್ತ ಭೂಮಂಡಲದ ಜನವೂ ) ಪಿರಿದುಂ ದಯೆಗೆಯ್ದು ಸಾರ್ಚಿ ಮೆಲ್ಲನೆ ಪಿರಿದಪ್ಪ ಗೌರವದ ಮೈಮೆಯ (ಹೇಳಲು ಗುಣಾರ್ಣವನಾದ ಅರಿಕೇಸರಿಯು ವಿಶೇಷವಾದ ಕೃಪೆಮಾಡಿ ಹಿರಿದಾದ ಮಹಿಮೆಯ) ಮನ್ನಣೆಯೋಳಿಗಳ್ (ಸತ್ಕಾರಗಳ ಸಾಲು ಸಾಲುಗಳನ್ನು) ಕರಂ ಮನಮನು ಅಲರ್ಚೆ (ವಿಶೇಷವಾಗಿ ಮನಸ್ಸನ್ನು ಅರಳಿಸಲು (ತೃಪ್ತಿಪಡಿಸಲು)) ಕೀರ್ತಿ ಜಗದೊಳ್ ನಿಲೆ ಪೇೞಿಸಿದಂ (ಅವನ ಕೀರ್ತಿ ನಿಲ್ಲುವಂತೆ ಲೋಕದಲ್ಲಿ- ಹೇಳಿಸಿದನು.) ಜಗಕ್ಕೆ ನಚ್ಚಿನ ಕವಿತಾ ಗುಣಾರ್ಣವನಿಂ ಈ ಕೃತಿ ಬಂಧನಮಂ ಗುಣಾರ್ಣವಂ (ಲೋಕದಲ್ಲಿ ಪ್ರಸಿದ್ಧನಾದ ಕವಿತಾಗುಣಾರ್ಣವನಾದ ಪಂಪನಿಂದ ಈ ಕಾವ್ಯಪ್ರಬಂಧವನ್ನು ಗುಣಾರ್ಣವನು ಹೇಳಿಸಿದನು.)
ಪದ್ಯ-೫೪:ಅರ್ಥ: ಎಂದು ಸಮಸ್ತ ಭೂಮಂಡಲದ ಜನವೂ ಹೇಳಲು ಗುಣಾರ್ಣವನಾದ ಅರಿಕೇಸರಿಯು ವಿಶೇಷವಾದ ಕೃಪೆಮಾಡಿ ಹಿರಿದಾದ ಮಹಿಮೆಯ ಸತ್ಕಾರಗಳ ಸಾಲು ಸಾಲುಗಳನ್ನು ಸದ್ದಿಲ್ಲದೆ ಮಾಡಿ ವಿಶೇಷವಾಗಿ ಮನಸ್ಸನ್ನು ಅರಳಿಸಲು (ತೃಪ್ತಿಪಡಿಸಲು) ಅವನ ಕೀರ್ತಿ ನಿಲ್ಲುವಂತೆ ಲೋಕದಲ್ಲಿ ಪ್ರಸಿದ್ಧನಾದ ಕವಿತಾಗುಣಾರ್ಣವನಾದ ಪಂಪನಿಂದ ಈ ಕಾವ್ಯಪ್ರಬಂಧವನ್ನು ಗುಣಾರ್ಣವನು ಹೇಳಿಸಿದನು.
ಪಿರಿಯಕ್ಕರ|| ತುಡುಗೆ ನಿಚ್ಚಲುಂ ಪಂಚರತ್ನಂಗಳುಂ ಪೊಱಮಡೆ ತನ್ನುಡುವುಪ್ಪಟಂಗಳ್
ಮಡಿಯೊಳಾಗೆಯುಮೞ್ಕಱಿಂ ಕಂಡಾಗಳ್ ಪಿರಿಯ ಬಿತ್ತರಿಗೆಯಂ ಕೆಲದೊಳಿಕ್ಕಿ|
ಕೊಡುವ ಬಾಡಕ್ಕಂ ಜೀವಧನಂಗಳ್ಗಂ ಬಿಡುವೆಣ್ಗಂ ಲೆಕ್ಕಮಿಲ್ಲೆನಿಸಿ ರಾಗಂ
ಗಿಡದೆ ಕೊಂಡಾಡಿದಂ ಬಲ್ಲಹನಱಿಯೆ ಗುಣಾರ್ಣವಂ ಕವಿತಾಗುಣಾರ್ಣವನಂ|| ೫೫ ||
ಪದ್ಯ-೫೫:ಪದವಿಭಾಗ-ಅರ್ಥ:ತುಡುಗೆ (ಆಭರಣಗಳನ್ನೂ) ನಿಚ್ಚಲುಂ ಪಂಚರತ್ನಂಗಳುಂ (ಪ್ರತಿನಿತ್ಯವೂ ಆಭರಣಗಳನ್ನೂ ಪಂಚರತ್ನಗಳನ್ನೂ) ಪೊಱಮಡೆ ತನ್ನ ಉಡುವು ಉಪ್ಪಟಂಗಳ್ಮ ಮಡಿಯೊಳಾಗೆಯುಂ (ಹೊರಗೆ ಹೊರಡಬೇಕಾದರೆ ತಾನು ಸ್ವಂತವಾಗಿ ಧರಿಸುವ ಶ್ರೇಷ್ಠವಾದ ವಸ್ತ್ರಗಳನ್ನೂ ಒಳ್ಳೆಯ ಮಡಿಯಾಗಿರುವ ಸ್ಥಿತಿಯಲ್ಲಿ) ಅೞ್ಕಱಿಂ (ಪ್ರೀತಿಯಿಂದ ಕೊಡುವನು. ) ಕಂಡಾಗಳ್ ಪಿರಿಯ ಬಿತ್ತರಿಗೆಯಂ ಕೆಲದೊಳು ಇಕ್ಕಿ (ಉನ್ನತವಾದ ಆಸನಗಳನ್ನೂ ತನ್ನ ಪಕ್ಕದಲ್ಲಿಯೇ ಹಾಕಿಸಿ ಕುಳ್ಳಿರಿಸಿಕೊಂಡು ಗೌರವಿಸುವನು.) ಕೊಡುವ ಬಾಡಕ್ಕಂ ಜೀವಧನಂಗಳ್ಗಂ ಬಿಡುವೆಣ್ಗಂ ಲೆಕ್ಕಮಿಲ್ಲೆನಿಸಿ (ಅವನು ದಾನಮಾಡುವ ಹಳ್ಳಿಗಳಿಗೂ ಗೋವುಗಳೇ ಮೊದಲಾದ ಪ್ರಾಣಿಗಳಿಗೂ ದಾಸಿಯರಿಗೂ ಲೆಕ್ಕವೇ ಇಲ್ಲ ಎನ್ನುವಂತೆ,) ರಾಗಂಗಿಡದೆ ಕೊಂಡಾಡಿದಂ (ಪ್ರೀತಿಯು ಕಡಿಮೆಯಾಗದಂತೆ ಹೊಗಳಿದನು) ಬಲ್ಲಹನು ಅಱಿಯೆ ಗುಣಾರ್ಣವಂ ಕವಿತಾಗುಣಾರ್ಣವನಂ (ರಾಷ್ಟ್ರಕೂಟರ ರಾಜನಾದ ವಲ್ಲಭದೇವನಾದ ಮೂರನೆಯ ಕೃಷ್ಣನು ತಿಳಿಯುವಂತೆ ಕವಿತಾಗುಣಾರ್ಣವನಾದ ಪಂಪಕವಿಯನ್ನು ಸತ್ಕರಿಸಿದನು.)
ಪದ್ಯ-೫೫:ಅರ್ಥ: ಪ್ರತಿನಿತ್ಯವೂ ಆಭರಣಗಳನ್ನೂ ಪಂಚರತ್ನಗಳನ್ನೂ ಹೊರಗೆ ಹೊರಡಬೇಕಾದರೆ ತಾನು ಸ್ವಂತವಾಗಿ ಧರಿಸುವ ಶ್ರೇಷ್ಠವಾದ ವಸ್ತ್ರಗಳನ್ನೂ ಒಳ್ಳೆಯ ಮಡಿಯಾಗಿರುವ ಸ್ಥಿತಿಯಲ್ಲಿ ಪ್ರೀತಿಯಿಂದ ಕೊಡುವನು. ಉನ್ನತವಾದ ಆಸನಗಳನ್ನೂ ತನ್ನ ಪಕ್ಕದಲ್ಲಿಯೇ ಹಾಸಿ ಕುಳ್ಳಿರಿಸಿಕೊಂಡು ಗೌರವಿಸುವನು. ಅವನು ದಾನಮಾಡುವ ಹಳ್ಳಿಗಳಿಗೂ ಗೋವುಗಳೇ ಮೊದಲಾದ ಪ್ರಾಣಿಗಳಿಗೂ ದಾಸಿಯರಿಗೂ ಲೆಕ್ಕವೇ ಇಲ್ಲ. ಪ್ರೀತಿಯು ಕಡಿಮೆಯಾಗದಂತೆ ಹೊಗಳಿದನು. ರಾಷ್ಟ್ರಕೂಟರ ರಾಜನಾದ ವಲ್ಲಭದೇವನಾದ ಮೂರನೆಯ ಕೃಷ್ಣನು ತಿಳಿಯುವಂತೆ ಕವಿತಾಗುಣಾರ್ಣವನಾದ ಪಂಪಕವಿಯನ್ನು ಸತ್ಕರಿಸಿದನು.
ಬೀರದಳವಿಯ ನನ್ನಿಯ ಚಾಗದ ಶಾಸನಂ ಚಂದ್ರರ್ಕತಾರಂಬರಂ
ಮೇರು ನಿಲ್ವಿನಂ ನಿಲವೇೞ್ಕುಂ ಕಾವ್ಯಕ್ಕೆ ತಾನಿತ್ತಂ ಶಾಸನದಗ್ರಹಾರಂ|
ಸಾರಮೆಂಬಿನಂ ಪೆಸರಿಟ್ಟು ತಾನೀಯೆ ಹರಿಗನ ಧರ್ಮ ಭಂಡಾರದಂತೆ
ಸಾರಮಾದುದು ಬಿಟ್ಟಗ್ರಹಾರಮಾ ಬಚ್ಚೆಸಾಸಿರದೊಳು ಧರ್ಮವುರಂ ಮನೋಹರಂ|| ೫೬ ||
ಪದ್ಯ-೫೬:ಪದವಿಭಾಗ-ಅರ್ಥ:ಬೀರದ ಅಳವಿಯ ನನ್ನಿಯ ಚಾಗದ (ತನ್ನ ಶೌರ್ಯದ ಪರಾಕ್ರಮದ ಶಕ್ತಿಯ ಸತ್ಯದ ದಾನದ (ಪ್ರತೀಕಾರವಾಗಿರುವ)) ಶಾಸನಂ ಚಂದ್ರ ಅರ್ಕ ತಾರೆ ಅಂಬರಂ ಮೇರು ನಿಲ್ವಿನಂ (ಶಾಸನವು ಚಂದ್ರ ಸೂರ್ಯ ನಕ್ಷತ್ರಗಳಿರುವವರೆಗೆ ಮೇರುಪರ್ವತ ನಿಲ್ಲುವಂತೆ) ನಿಲವೇೞ್ಕುಂ ಕಾವ್ಯಕ್ಕೆ ತಾನಿತ್ತಂ ಶಾಸನದಗ್ರಹಾರಂ (ಮೇರುಪರ್ವತ ನಿಲ್ಲುವಂತೆ ಕಾವ್ಯಕ್ಕೆ ಬಹುಮಾನವಾಗಿ (ಸಂಭಾವನೆಯಾಗಿ) ತಾನು ಕೊಟ್ಟ ಶಾಸನದಗ್ರಹಾರವು) ಸಾರಮೆಂಬಿನಂ ಪೆಸರಿಟ್ಟು ತಾನೀಯೆ (ಸಾರವತ್ತಾಗಿ ನಿಲ್ಲಬೇಕು ಎನ್ನುವಂತೆ ಹೆಸರು ಹೇಳಿ ದಾನವಾಗಿ ಕೊಟ್ಟ.) ಹರಿಗನ ಧರ್ಮ ಭಂಡಾರದಂತೆ ಸಾರಮಾದುದು ಬಿಟ್ಟ ಅಗ್ರಹಾರಂ ಆ ಬಚ್ಚೆಸಾಸಿರದೊಳು ಧರ್ಮವುರಂ ಮನೋಹರಂ ()
ಪದ್ಯ-೫೬:ಅರ್ಥ: ತನ್ನ ಶೌರ್ಯದ ಪರಾಕ್ರಮದ ಶಕ್ತಿಯ ಸತ್ಯದ ದಾನದ (ಪ್ರತೀಕಾರವಾಗಿರುವ) ಶಾಸನವು ಚಂದ್ರ ಸೂರ್ಯ ನಕ್ಷತ್ರಗಳು ಇರುವವರೆಗೆ, ಮೇರುಪರ್ವತ ನಿಲ್ಲುವಂತೆ ಕಾವ್ಯಕ್ಕೆ ಬಹುಮಾನವಾಗಿ (ಸಂಭಾವನೆಯಾಗಿ) ತಾನು ಕೊಟ್ಟ ಶಾಸನದಗ್ರಹಾರವು ಸಾರವತ್ತಾಗಿ ನಿಲ್ಲಬೇಕು ಎನ್ನುವಂತೆ ಹೆಸರು ಹೇಳಿ ದಾನವಾಗಿ ಕೊಟ್ಟ. ಆ ಅಗ್ರಹಾರವು ಆ ಬಚ್ಚೆಸಾವಿರ ಎಂಬ ನಾಡಿನಲ್ಲಿಯೂ ಆ ಧರ್ಮಪುರವು ಅರಿಕೇಸರಿಯ ಧರ್ಮಭಂಡಾರದಂತೆ (ಧರ್ಮವನ್ನು ಕೂಡಿಟ್ಟಿರುವ ಉಗ್ರಾಣದಂತೆ) ಸಾರವುಳ್ಳದ್ದಾಯಿತು.
ಚಂ|| ದೆಸೆ ಮಖಧೂಮದಿಂ ದ್ವಿಜರ ಹೋಮದಿನೊಳ್ಗೆರೆ ಹಂಸ ಕೋಕ ಸಾ
ರಸ ಕಳ ನಾದದಿಂದೊಳಗೆ ವೇದನಿನಾದದಿನೆತ್ತಮೆಯ್ದೆ ಶೋ|
ಭಿಸೆ ಸುರಮಥ್ಯಮಾನ ವನಧಿ ಕ್ಷುಭಿತಾರ್ಣ ಘೋಷದಂತೆ ಘೂ
ರ್ಣಿಸುತಿರಲೀ ಗುಣಾರ್ಣವನ ಧರ್ಮದ ಧರ್ಮವುರಂ ಮನೋಹರಂ|| ೫೭ ||
ಪದ್ಯ-೫೭:ಪದವಿಭಾಗ-ಅರ್ಥ:ದೆಸೆ ಮಖಧೂಮದಿಂ ದ್ವಿಜರ ಹೋಮದಿಂ (ದಿಕ್ಕುಗಳು ಯಜ್ಞಯಾಗಗಳ ಹೊರೆಯಿಂದಲೂ) ಒಳ್ಗೆರೆ ಹಂಸ ಕೋಕ ಸಾರಸ ಕಳ ನಾದದಿಂದ, (ಒಳ್ಳೆಯ ಕೆರೆಗಳು ಹಂಸ ಚಕ್ರವಾಕ ಸಾರಸಪಕ್ಷಿಗಳ ಮಧುರವಾದ ಧ್ವನಿಯಿಂದಲೂ) ಒಳಗೆ ವೇದನಿನಾದದಿಂ ಎತ್ತಂ ಎಯ್ದೆ ಶೋಭಿಸೆ (ಊರಿನ ಒಳಭಾಗವು ವೇದಘೋಷದಿಂದ ಎಲ್ಲೆಡೆ ಚೆನ್ನಾಗಿ ಶೋಭಿಸಿರಲು) ಸುರಮಥ್ಯ ಮಾನ ವನಧಿ ಕ್ಷುಭಿತಾರ್ಣ ಘೋಷದಂತೆ (ದೇವತೆಗಳಿಂದ ಕಡೆಯಲ್ಪಟ್ಟ ಸಮುದ್ರದ ಘೋಷದಂತೆ) ಘೂರ್ಣಿಸುತಿರಲು ಈ ಗುಣಾರ್ಣವನ ಧರ್ಮದ ಧರ್ಮವುರಂ ಮನೋಹರಂ (ಅಬ್ಬರಿಸುತ್ತಿರಲು,ಅರಿಕೇಸರಿಯು ಧರ್ಮವಾಗಿ ಕೊಟ್ಟ ಧರ್ಮಪುರವು ಶಬ್ದಮಾಡುತ್ತ ಯಾವಾಗಲೂ ಬಹು ರಮಣೀಯವಾಗಿತ್ತು.)
ಪದ್ಯ-೫೭:ಅರ್ಥ: ದಿಕ್ಕುಗಳು ಯಜ್ಞಯಾಗಗಳ ಹೊರೆಯಿಂದಲೂ ಬ್ರಾಹ್ಮಣರು ಮಾಡುವ ಹೋಮದಿಂದಲೂ ಒಳ್ಳೆಯ ಕೆರೆಗಳು ಹಂಸ ಚಕ್ರವಾಕ ಸಾರಸಪಕ್ಷಿಗಳ ಮಧುರವಾದ ಧ್ವನಿಯಿಂದಲೂ, ಊರಿನ ಒಳಭಾಗವು ವೇದಘೋಷದಿಂದ ಎಲ್ಲೆಡೆ ಚೆನ್ನಾಗಿ ಶೋಭಿಸಿರಲು, ದೇವತೆಗಳಿಂದ ಕಡೆಯಲ್ಪಟ್ಟ ಸಮುದ್ರದ ಘೋಷದಂತೆ ಅಬ್ಬರಿಸುತ್ತಿರಲು,ಅರಿಕೇಸರಿಯು ಧರ್ಮವಾಗಿ ಕೊಟ್ಟ ಧರ್ಮಪುರವು ಶಬ್ದಮಾಡುತ್ತ ಯಾವಾಗಲೂ ಬಹು ರಮಣೀಯವಾಗಿತ್ತು.

ಪಂಪನು ತನ್ನ ಕಾವ್ಯದ ಹಿರಿಮೆಯನ್ನು ಹೇಳುವುದು[ಸಂಪಾದಿಸಿ]

ಕಂ|| ರಾಜದ್ರಾಜಕಮೆನಿಸಿದ
ಸಾಜದ ಪುಲಿಗೆಯ ತಿರುಳ ಕನ್ನಡದೊಳ್ ನಿ
ರ್ವ್ಯಾಜದೆಸಕದೊಳೆ ಪುದಿದೊಂ
ದೋಜೆಯ ಬಲದಿನಿಯ ಕವಿತೆ ಪಂಪನ ಕವಿತೇ|| ೫೮ ||
ಪದ್ಯ-೫೮:ಪದವಿಭಾಗ-ಅರ್ಥ:ರಾಜತ್ ರಾಜಕಮೆನಿಸಿದ ಸಾಜದ ಪುಲಿಗೆಯ (ಪ್ರಕಾಶಮಾನವಾದ ರಾಜನುಳ್ಳದ್ದು ಎಂದೆನಿಸಿದ ಪುಲಿಗೆರೆಯ) ತಿರುಳ ಕನ್ನಡದೊಳ್ ನಿರ್ವ್ಯಾಜದ ಎಸಕದೊಳೆ ಪುದಿದ ಒಂದು ಓಜೆಯ (ಸಹಜವಾದ ತಿರುಳುಕನ್ನಡದಲ್ಲಿ ಋಜುವಾದ ಕಾವ್ಯಮಾರ್ಗದಲ್ಲಿ ) ಬಲದಿನಿಯ ಕವಿತೆ ಪಂಪನ ಕವಿತೇ (ಶಕ್ತಿಯುಕ್ತವಾಗಿಯೂ ಇಂಪಾಗಿಯೂ ಇರುವಂತೆ ರಚಿತವಾಗಿದೆ.)
ಪದ್ಯ-೫೮:ಅರ್ಥ: ಪಂಪನ ಕವಿತ್ವವು ಪ್ರಕಾಶಮಾನವಾದ ರಾಜನುಳ್ಳದ್ದು ಎಂದೆನಿಸಿದ ಪುಲಿಗೆರೆಯ ಸಹಜವಾದ ತಿರುಳುಕನ್ನಡದಲ್ಲಿ ಋಜುವಾದ ಕಾವ್ಯಮಾರ್ಗದಲ್ಲಿ ಶಕ್ತಿಯುಕ್ತವಾಗಿಯೂ ಇಂಪಾಗಿಯೂ ಇರುವಂತೆ ರಚಿತವಾಗಿದೆ.
ಚಂ|| ಪುದಿದ ಜಸಂ ಪೊದೞ್ದ ಚಳಮೊಂದಿದಳಂಕೃತಿ ಕೈತ ದೇಸಿಯೆಂ
ಬುದನೆನೆ ವಸ್ತು ವಿದ್ಯೆಯೆನೆ ಕಬ್ಬಮೆ ಮುನ್ನಮವಂತಿವಲ್ಲದ|
ಲ್ಲದೆ ಪೆಱವಿಲ್ಲ ಕಬ್ಬಮೆನೆ ಮುನ್ನಿನ ಕಬ್ಬಮನೆಲ್ಲಮಿಕ್ಕಿ ಮೆ
ಟ್ಟಿದುವು ಸಮಸ್ತಭಾರತಮುಮಾದಿಪುರಾಣಮಹಾಪ್ರಬಂಧಮುಂ|| ೫೯ ||
ಪದ್ಯ-೫೯:ಪದವಿಭಾಗ-ಅರ್ಥ:ಪುದಿದ ಜಸಂ ಪೊದೞ್ದ ಚಳಂ ಒಂದಿದ ಅಳಂಕೃತಿ (ಕೂಡಿಕೊಂಡಿರುವ ಯಶಸ್ಸು ವ್ಯಾಪ್ತವಾದ ಓಜಸ್ಸು ಅಥವಾ ಕಾಂತಿ, ಸೇರಿಕೊಂಡಿರುವ ಅಲಂಕಾರ,) ಕೈತ ದೇಸಿಯೆಂಬುದನ್ ಎನೆ (ರಚನೆಯು ದೇಸಿ ರಚನೆಯೆಂಬುದನ್ನೇ ಹೇಳಲು) ವಸ್ತು ವಿದ್ಯೆಯೆನೆ ಕಬ್ಬಮೆ (ಶಿಲ್ಪವಿದ್ಯೆ ಎನ್ನಲು ಕಾವ್ಯವೇ?/ ಇರುವ ವಿಚಾರಗಳನ್ನೇ ಉಳ್ಳ ಕಾವ್ಯಗಳು ಕಾವ್ಯವೇ? - ) ಮುನ್ನಮವಂತಿವಲ್ಲದ- ಮುನ್ನಂ ಅದು ಅಂತು ಇವು ಅಲ್ಲದು ಅಲ್ಲದೆ ಪೆಱವಿಲ್ಲ (ಹಿಂದೆ ಅದು ಹೀಗೆ, ಇದು ಅಲ್ಲ ಎಂಬುದಲ್ಲದೆ ಬೇರೆ ಇಲ್ಲ; ಹಿಂದೆ ಅದು ಕಾವ್ಯ, ಹಿಂದೆ ಇದು ಕಾವ್ಯ ಅಲ್ಲದ್ದು ಎಂಬ ನಿರ್ಣಯವೇನಿತ್ತೋ ಅದು ಅಲ್ಲದೆ ಬೇರೆ ಇಲ್ಲ.) ಕಬ್ಬಮ್ ಎನೆ ಮುನ್ನಿನ ಕಬ್ಬಮನೆಲ್ಲ ಮಿಕ್ಕಿ ಮೆಟ್ಟಿದುವು (ಅವುಗಳ ಹಾಗಿರದೆ ಮೇಲೆ ಹೇಳಿದ ಗುಣಗಳಲ್ಲದೆ ಬೇರೆಯಲ್ಲ ಎಂದೆನಿಸಿಕೊಂಡೂ ಪ್ರಾಚೀನ ಕಾವ್ಯಗಳನ್ನೆಲ್ಲ ಮೀರಿಸಿ ಮೇಲೆ ನಿಂತವು.) ಸಮಸ್ತಭಾರತಮುಂ ಆದಿಪುರಾಣ ಮಹಾಪ್ರಬಂಧಮುಂ (ಈ ಸಮಗ್ರ ಭಾರತವೂ ಆದಿಪುರಾಣವೆಂ ಮಹಾ ಕಾವ್ಯವೂ)
ಪದ್ಯ-೫೯:ಅರ್ಥ: ಕೂಡಿಕೊಂಡಿರುವ ಯಶಸ್ಸು ವ್ಯಾಪ್ತವಾದ ಓಜಸ್ಸು ಅಥವಾ ಕಾಂತಿ, ಸೇರಿಕೊಂಡಿರುವ ಅಲಂಕಾರ, ರಚನೆಯು ದೇಸಿ ರಚನೆಯೆಂಬುದನ್ನೇ ಶಿಲ್ಪವಿದ್ಯೆ ಎನ್ನಲು ಕಾವ್ಯವೇ?/ ಇರುವ ವಿಚಾರಗಳನ್ನೇ ಉಳ್ಳ ಕಾವ್ಯಗಳು ಕಾವ್ಯವೇ? ಹಿಂದೆ ಅದು ಕಾವ್ಯ, ಇದು ಕಾವ್ಯ ಅಲ್ಲದ್ದು ಎಂಬ ನಿರ್ಣಯವೇನಿತ್ತೋ ಅದು ಅಲ್ಲದೆ ಬೇರೆ ಇಲ್ಲ. ಈ ಸಮಗ್ರ ಭಾರತವೂ ಆದಿಪುರಾಣವೆಂ ಮಹಾ ಕಾವ್ಯವೂ ಅವುಗಳ ಹಾಗಿರದೆ ಮೇಲೆ ಹೇಳಿದ ಗುಣಗಳಲ್ಲದೆ ಬೇರೆಯಲ್ಲ ಎಂದೆನಿಸಿಕೊಂಡೂ ಪ್ರಾಚೀನಕಾವ್ಯಗಳನ್ನೆಲ್ಲ ಮೀರಿಸಿ ಮೇಲೆ ನಿಂತವು.
ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಸಮಸ್ತ ಭೂ
ತಳಕೆ ಸಮಸ್ತ ಭಾರತಮುಮಾದಿಪುರಾಣಮುಮೆಂದು ಮೆಯ್ಯಸುಂ|
ಗೊಳುತಿರೆ ಪೂಣ್ದು ಪೂಣ್ದ ತೆಱದೊಂದಱುದಿಂಗಳೊಳೊಂದು ಮೂಱು ತಿಂ
ಗಳೊಳೆ ಸಮಾಪ್ತಿಯಾದುದೆನೆ ಬಣ್ಣಿಸಿದಂ ಕವಿತಾಗುಣಾರ್ಣವಂ|| ೬೦ ||
ಪದ್ಯ-೬೦:ಪದವಿಭಾಗ-ಅರ್ಥ:ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಸಮಸ್ತ ಭೂತಳಕೆ (ಈ ಕಾವ್ಯವಾದ ವಿಕ್ರಮಾರ್ಜುನವಿಜಯ ಅಥವಾ ಭಾರತದಲ್ಲಿ ಸಮಸ್ತಭೂಮಂಡಲಕ್ಕೆ ಲೋಕವ್ಯವಹಾರವನ್ನೂ ಅಲ್ಲಿ ಆ ಆದಿಪುರಾಣದಲ್ಲಿ ಜಿನಾಗಮವನ್ನೂ ಪ್ರಕಾಶಪಡಿಸುತ್ತೇನೆ.) ಸಮಸ್ತ ಭಾರತಮುಂ ಆದಿಪುರಾಣಮುಂ ಎಂದು ಮೆಯ್ಯ್ (ಪಾತ್ರಗಳು) ಅಸುಂಗೊಳುತಿರೆ (ಸಜೀವವಾಗಿರುವಂತೆ) ಪೂಣ್ದು ಪೂಣ್ದ ತೆಱದೆ ಒಂದು ಅಱುದಿಂಗಳೊಳು ಒಂದು (ಪ್ರತಿಜ್ಞೆಮಾಡಿ ಆ ಪ್ರತಿಜ್ಞೆ ಮಾಡಿದ ರೀತಿಯಲ್ಲಿಯೇ ಒಂದು -ಭಾರತವು ಆರು ತಿಂಗಳಲ್ಲಿಯೂ ) ಮೂಱು ತಿಂಗಳೊಳೆ (ಮತ್ತೊಂದು -ಆದಿಪುರಾಣವು ಮೂರುತಿಂಗಳಲ್ಲಿಯೂ) ಸಮಾಪ್ತಿಯಾದುದು ಎನೆ (ಪೂರ್ಣವಾಯಿತು ಎನ್ನುವ ಹಾಗೆ) ಬಣ್ಣಿಸಿದಂ ಕವಿತಾಗುಣಾರ್ಣವಂ ( ಕವಿತಾಗುಣಾರ್ಣವನಾದ ಪಂಪನು ವರ್ಣಿಸಿದನು.)
ಪದ್ಯ-೬೦:ಅರ್ಥ: ಈ ಕಾವ್ಯವಾದ ವಿಕ್ರಮಾರ್ಜುನವಿಜಯ ಅಥವಾ ಭಾರತದಲ್ಲಿ ಸಮಸ್ತಭೂಮಂಡಲಕ್ಕೆ ಲೋಕವ್ಯವಹಾರವನ್ನೂ ಅಲ್ಲಿ ಆ ಆದಿಪುರಾಣದಲ್ಲಿ ಜಿನಾಗಮವನ್ನೂ ಪ್ರಕಾಶಪಡಿಸುತ್ತೇನೆ. ಸಮಸ್ತಭಾರತವೂ ಆದಿಪುರಾಣವೂ ಎಂಬುದಾಗ ಇರುವ ಕಾವ್ಯದಲ್ಲಿ ಪಾತ್ರಗಳು ಸಜೀವವಾಗಿರುವಂತೆ ಪ್ರತಿಜ್ಞೆಮಾಡಿ ಆ ಪ್ರತಿಜ್ಞೆ ಮಾಡಿದ ರೀತಿಯಲ್ಲಿಯೇ ಒಂದು (ಭಾರತವು) ಆರು ತಿಂಗಳಲ್ಲಿಯೂ ಮತ್ತೊಂದು (ಆದಿಪುರಾಣವು) ಮೂರುತಿಂಗಳಲ್ಲಿಯೂ ಪೂರ್ಣವಾಯಿತು ಎನ್ನುವ ಹಾಗೆ ಕವಿತಾಗುಣಾರ್ಣವನಾದ ಪಂಪನು ವರ್ಣಿಸಿದನು.
  • ಟಿಪ್ಪಣಿ::ನಿಜವಾಗಿ ಅದ್ಭುತ ಸಾಮರ್ಥ್ಯ!
ಕ್ಷಿತಿಗೆ ಸಮಸ್ತ ಭಾರತಮುಮಾದಿಪುರಾಣಮುಮೀಗಳೊಂದಳಂ
ಕೃತಿಯವೊಲಿರ್ದುವೇಕಱಿಯ ಪೋದವರಾದವರೊಳ್ ಸರಸ್ವತೀ|
ಮತಿ ಕವಿತಾಗುಣಕ್ಕೆ ಪದೆದೆಯ್ದೆವರಲ್ಕೆ ಕವಿಂದ್ರರಾರ್ ಸರ
ಸ್ವತಿಗೆ ವಿಳಾಸಮಂ ಪೊಸತು ಮಾಡುವ ಪಂಪನ ವಾಗ್ವಿಲಾಸಮಂ|| ೬೧ ||
ಪದ್ಯ-೬೧:ಪದವಿಭಾಗ-ಅರ್ಥ:ಕ್ಷಿತಿಗೆ ಸಮಸ್ತ ಭಾರತಮುಂ ಆದಿಪುರಾಣಮುಂ (ಸಮಸ್ತ ಭಾರತವೂ ಆದಿಪುರಾಣವೂ ಲೋಕಕ್ಕೆ) ಈಗಳ್ ಒಂದು ಅಳಂಕೃತಿಯವೊಲ್ ಇರ್ದುವು ( ಈಗ ಒಂದು ಅಲಂಕಾರದಂತೆ ಇವೆ.) ಏಕೆ ಅಱಿಯ (ಏಕೆ ಎಂದು ಅರಿಯ- ತಿಳಿಯಪ್ಪ,) ಪೋದವರು ಆದವರೊಳ್ ಸರಸ್ವತೀ ಮತಿ ಕವಿತಾಗುಣಕ್ಕೆ (ಹಿಂದೆ ಆಗಿಹೋದವರಲ್ಲಿಯೂ ಈಗ ಆಗಿರುವವರಲ್ಲಿಯೂ ಸರಸ್ವತೀಮತಿಯುಳ್ಳವನು ಬುದ್ಧಿಯುಳ್ಳವನು ಪಂಪನು.) ಪದೆದು ಎಯ್ದೆವರಲ್ಕೆ (ಅವನ ಮಾತಿನ- ಚೆಲುವನ್ನು ಸಮೀಪಿಸಲು) ಕವಿಂದ್ರರಾರ್ ಸರಸ್ವತಿಗೆ ವಿಳಾಸಮಂ (ಸರಸ್ವತಿಗೆ ವಿಲಾಸವನ್ನು/ ಸೊಗಸನ್ನು) ಪೊಸತು ಮಾಡುವ ಪಂಪನ ವಾಗ್ವಿಲಾಸಮಂ (ಹೊಸ ರೀತಿಯಲ್ಲಿ ಮಾಡುವ ಅವನ ಮಾತಿನ ವೈಭವವನ್ನು ಮೀರಿಸುವ ಕವೀಮದ್ರರು ಯಾರಿದ್ದಾರೆ? ಯಾರೂ ಇಲ್ಲ.)
ಪದ್ಯ-೬೧:ಅರ್ಥ:ಸಮಸ್ತ ಭಾರತವೂ ಆದಿಪುರಾಣವೂ ಲೋಕಕ್ಕೆ ಈಗ ಒಂದು ಅಲಂಕಾರದಂತೆ ಇವೆ. ಏಕೆ ಎಂದು ತಿಳಿಯಲು, ಹಿಂದೆ ಆಗಿಹೋದವರಲ್ಲಿಯೂ ಈಗ ಆಗಿರುವವರಲ್ಲಿಯೂ ಸರಸ್ವತೀ ಮತಿಯಾಗಿ ಸರಸ್ವತೀಮತಿಯುಳ್ಳವನು ಬುದ್ಧಿಯುಳ್ಳವನು ಪಂಪನು. ಅವನ ಮಾತಿನ ಚೆಲುವನ್ನು ಸಮೀಪಿಸಲು ಸರಸ್ವತಿಗೆ ಸೊಬಗನ್ನು ಹೊಸ ರೀತಿಯಲ್ಲಿ ಮಾಡುವ ಅವನ ಮಾತಿನ ವೈಭವವನ್ನು ಮೀರಿಸುವ ಕವೀಮದ್ರರು ಯಾರಿದ್ದಾರೆ? ಯಾರೂ ಇಲ್ಲ.

ಕವಿತಾಗುಣಾರ್ಣವ ಪಂಪನು ಯೋಗ್ಯತೆಯಿಂದ ''ಆಚಾರ್ಯ''ನಾದನು[ಸಂಪಾದಿಸಿ]

ಉ||ಕ್ಷಿತಿಗೆ ಸಮಸ್ತ ಭಾರತಮುಮಾದಿಪುರಾಣಮುವಿಗಳೊಂದಳಂ
ವ್ಯಾಸಮುನಿ ಪ್ರಣೂತ ಕೃತಿಯಂ ಸಲೆ ಪೇೞ್ದು ಸತ್ಯವಿ
ವ್ಯಾಸ ಸಮಾಗಮಾನ್ವಿತಮನಾದಿಪುರಾಣಮನೆಯ್ದೆ ಪೇೞ್ದು ವಾ|
ಕ್ಶ್ರೀ ಸುಭಗಂ ಪುರಾಣಕವಿಯುಂ ಧರೆಗಾಗಿರೆಯುಣ್ಮಿ ಪೊಣ್ಮುವೀ
ದೇಸಿಗಳುಂತೆ ನಾಡೊವಜನಾದನೊ ಪೇೞ್ ಕವಿತಾಗುಣಾರ್ಣವಂ|| ೬೨ ||
ಪದ್ಯ-೬೨:ಪದವಿಭಾಗ-ಅರ್ಥ:ವ್ಯಾಸಮುನಿ ಪ್ರಣೂತ ಕೃತಿಯಂ ಸಲೆ ಪೇೞ್ದು (ವ್ಯಾಸಮಹರ್ಷಿಗಳ, ಪ್ರಸಿದ್ಧ ಕೃತಿಯಾದ ಭಾರತವನ್ನು ಚೆನ್ನಾಗಿ ಹೇಳಿ) ಸತ್ಯವಿ ವ್ಯಾಸ ಸಮಾಗಮ ಆನ್ವಿತಮನು ಆದಿಪುರಾಣಮಂ ಎಯ್ದೆ ಪೇೞ್ದು (ಪ್ರಸಿದ್ಧರಾದ ಸತ್ಕವಿಗಳ ವ್ಯಾಖ್ಯಾನ ಮತ್ತು ಸಹವಾಸಗಳಿಂದ ಕೂಡಿರುವ ಆದಿಪುರಾಣವನ್ನು ಚೆನ್ನಾಗಿ ಹೇಳಿ,) ವಾಕ್ಶ್ರೀ ಸುಭಗಂ (ವಾಕ್ಸಂಪತ್ತಿನ ಸೌಂದರ್ಯವುಳ್ಳವನೂ) ಪುರಾಣಕವಿಯುಂ (ಪುರಾಣರಚನೆ ಮಾಡಿದ ಕವಿಯು) ಧರೆಗಾಗಿರೆ ಉ(ಯು)ಣ್ಮಿ ಪೊಣ್ಮುವ ಈ ದೇಸಿಗಳು (ಅವನಿಂದ ಹೊರಹೊಮ್ಮುವ ಈ ದೇಸಿ ಕಾವ್ಯ ಚಲುವುಗಳು ತೋರಿರಲು) ಉಂತೆ (ಸುಮ್ಮನೆ) ನಾಡ ಓವಜನು ಆದನೊ ಪೇೞ್ ಕವಿತಾಗುಣಾರ್ಣವಂ (ಕವಿತಾಗುಣಾರ್ಣವನು ಸುಮ್ಮನೆ ನಾಡಿನ ಆಚಾರ್ಯನು ಆದನೋ ಹೇಳು! ಯೋಗ್ಯತೆಯಿಂದ ಅದನು.)
ಪದ್ಯ-೬೨:ಅರ್ಥ: ವ್ಯಾಸಮಹರ್ಷಿಗಳ, ಪ್ರಸಿದ್ಧ ಕೃತಿಯಾದ ಭಾರತವನ್ನು ಚೆನ್ನಾಗಿ ಹೇಳಿ ಪ್ರಸಿದ್ಧರಾದ ಸತ್ಕವಿಗಳ ವ್ಯಾಖ್ಯಾನ ಮತ್ತು ಸಹವಾಸಗಳಿಂದ ಕೂಡಿರುವ ಆದಿಪುರಾಣವನ್ನು ಚೆನ್ನಾಗಿ ಹೇಳಿ, ಪಂಪನು ವಾಕ್ಸಂಪತ್ತಿನ ಸೌಂದರ್ಯವುಳ್ಳವನೂ, ಪುರಾಣರಚನೆ ಮಾಡಿದ ಕವಿಯು ಲೋಕದಲ್ಲಿ ಹುಟ್ಟಿ, ಅವನಿಂದ ಹೊರಹೊಮ್ಮುವ ಈ ದೇಸಿ ಕಾವ್ಯದ ಚೆಲುವುಗಳು - ಅವನ ಕಾವ್ಯದಲ್ಲಿ ಹೊಮ್ಮಿರಲು- ಕವಿತಾಗುಣಾರ್ಣವನು ಸುಮ್ಮನೆ ನಾಡಿನ ಆಚಾರ್ಯನು ಆದನೋ ಹೇಳು! ಯೋಗ್ಯತೆಯಿಂದ ಅದನು. (ಎಂದು ಭಾವ)

ಮಂಗಳ ಪದ್ಯಗಳು - ಎಲ್ಲರಿಗೂ ಇಷ್ಟಾರ್ಥ ನೆರವೇರುವ ಹಾರೈಕೆ[ಸಂಪಾದಿಸಿ]

ಚಂ|| ಪುದಿದಿರೆ ರಾಗಮುರ್ಕೆ ಪೊಸವೇಟದಲಂಪುಗಳೆಲ್ಲಮೋದಿದ
ರ್ಗಿದಱನುಯಾಯಿಗಳ್ಗೆಸೆವುದಾರ ಗುಣಂ ಸಕಳಾವನೀಶ್ವರ|
ರ್ಗದಟನಳುರ್ಕೆ ಭೃತ್ಯನಿವಹಕ್ಕೆ ಚದುರ್ ಗಣಿಕಾಜನಕ್ಕೆ ಕುಂ
ದದೆ ನೆಲಸಿರ್ಕೆ ಮಹಿತಳಕ್ಕೆ ಮದೀಯ ಕೃತಿಪ್ರಬಂಧದಿಂ|| ೬೩ ||
ಪದ್ಯ-೬೩:ಪದವಿಭಾಗ-ಅರ್ಥ:ಪುದಿದು ಇರೆ (- ತುಂಬಿರಲಿ.) ರಾಗಂ ಉರ್ಕೆ (ಸಂತೋಷವು ಉಕ್ಕಲಿ) ಪೊಸವೇಟದ ಅಲಂಪುಗಳು ಎಲ್ಲಂ (ಹೊಸ ಪ್ರಣಯದ ಆನಂದಗಳೆಲ್ಲವೂ,) ಓದಿದರ್ಗೆ (ಓದಿದವರಿಗೆ) ಇದಱ ಅನುಯಾಯಿಗಳ್ಗೆ (ಇದರ ಅನುಯಾಯಿಗಳಿಗೆ - ಇದರ ನೀತಿಯನ್ನು ಅನುಸರಿಸುವವರಿಗೆ) ಎಸೆವ ಉದಾರ ಗುಣಂ (- ಶೋಭಿಸುವ ಉದಾರ ಗುಣವೂ,) ಸಕಳ ಅವನೀಶ್ವರರ್ಗೆ (ಸಮಸ್ತರಾಜರಿಗೆ ಶೋಭಿಸುವ ಉದಾರ ಗುಣವೂ, - ಉಂಟಾಗಲಿ) ಅದಟನು ಅಳುರ್ಕೆ ಭೃತ್ಯನಿವಹಕ್ಕೆ (ಸೇವಕವರ್ಗಕ್ಕೆ/ ಭಟರಿಗೆ ಪರಾಕ್ರಮವೂ,) ಚದುರ್ ಗಣಿಕಾಜನಕ್ಕೆ (ಗಣಿಕೆಯರಿಗೆ ಹಚ್ಚಿನ ಕೌಶಲವೂ,) ಕುಂದದೆ ನೆಲಸಿರ್ಕೆ ಮಹಿತಳಕ್ಕೆ ಮದೀಯ ಕೃತಿಪ್ರಬಂಧದಿಂ (ಭೂಮಂಡಲಕ್ಕೆ ನನ್ನ ಕಾವ್ಯ ರಚನೆಯಿಂದ ಇವೆಲ್ಲವೂ ಕಡಿಮೆಯಾಗದಂತೆ ನಲಸಿರಲಿ)
ಪದ್ಯ-೬೩:ಅರ್ಥ: ಈ ನನ್ನ ಕೃತಿಬಂಧವನ್ನು ಓದಿದರಿಗೆ ಸಂತೋಷವು ತುಂಬಿರಲಿ. ಹೊಸ ಪ್ರಣಯದ ಆನಂದಗಳೆಲ್ಲವೂ ಉಕ್ಕಲಿ, ಇದರಂತೆ ನಡೆದುಕೊಂಡ ಸಮಸ್ತ ರಾಜರಿಗೆ ಶೋಭಿಸುವ ಉದಾರ ಗುಣವೂ, ಸೇವಕವರ್ಗಕ್ಕೆ/ಭಟರಿಗೆ ಪರಾಕ್ರಮವೂ, ಗಣಿಕೆಯರಿಗೆ ಹಚ್ಚಿನ ಕೌಶಲವೂ ಉಂಟಾಗಲಿ. ಭೂಮಂಡಲಕ್ಕೆ ನನ್ನ ಕಾವ್ಯ ರಚನೆಯಿಂದ ಇವೆಲ್ಲವೂ ಕಡಿಮೆಯಾಗದಂತೆ ನಲಸಿರಲಿ)

ಮಹಾಭಾರತ ಲೋಕಪೂಜ್ಯವಾಗಲು ಇವರುಗಳು ಕಾರಣ[ಸಂಪಾದಿಸಿ]

ಮ||ಸ್ರ|| ಚಲದೊಳ್‌ದುರ್ಯೋಧನಂ ನನ್ನಿಯೊಳಿನತನಯಂ ಗಂಡಿನೊಳ್ ಭೀಮಸೇನಂ
ಬಲದೊಳ್ ಮದ್ರೇಶನತ್ಯುನ್ನತಿಯೊಳಮರಸಿಂಧೂದ್ಭವಂ ಚಾಪವಿದ್ಯಾ|
ಬಲದೊಳ್ ಕುಂಭೋದ್ಭವಂ ಸಾಹಸದ ಮಹಿಮೆಯೊಳ್ ಫಲ್ಗುಣಂ ಧರ್ಮದೊಳ್ ನಿ
ರ್ಮಲ ಚಿತ್ತಂ ಧರ್ಮಪುತ್ರಂ ಮಿಗಿಲಿವರ್ಗಳಿನೀ ಭಾರತಂ ಲೋಕಪೂಜ್ಯಂ|| ೬೪ ||
ಪದ್ಯ-೬೪:ಪದವಿಭಾಗ-ಅರ್ಥ:ಚಲದೊಳ್‌ ದುರ್ಯೋಧನಂ ನನ್ನಿಯೊಳ್ ಇನತನಯಂ ಗಂಡಿನೊಳ್ ಭೀಮಸೇನಂ, (ಛಲದಲ್ಲಿ ದುಯೋಧನನೂ ಸತ್ಯದಲ್ಲಿ ಕರ್ಣನೂ ಪೌರುಷದಲ್ಲಿ ಭೀಮಸೇನನೂ) ಬಲದೊಳ್ ಮದ್ರೇಶನು ಅತ್ಯುನ್ನತಿಯೊಳ್ ಅಮರಸಿಂಧೂದ್ಭವಂ ಚಾಪವಿದ್ಯಾಬಲದೊಳ್ ಕುಂಭೋದ್ಭವಂ (ಬಲದಲ್ಲಿ ಶಲ್ಯನೂ ಗುಣದ ಉನ್ನತಿಯಲ್ಲಿ ಭೀಷ್ಮನೂ ಬಿಲ್ಲು ವಿದ್ಯೆಯ ಕೌಶಲದಲ್ಲಿ ದ್ರೋಣಾಚಾರ್ಯನೂ) ಸಾಹಸದ ಮಹಿಮೆಯೊಳ್ ಫಲ್ಗುಣಂ (ಸಾಹಸದ ಮಹಿಮೆಯಲ್ಲಿ ಅರ್ಜುನನೂ,) ಧರ್ಮದೊಳ್ ನಿರ್ಮಲ ಚಿತ್ತಂ ಧರ್ಮಪುತ್ರಂ (ಧರ್ಮದಲ್ಲಿ ಪರಿಶುದ್ಧಮನಸ್ಸುಳ್ಳ ಧರ್ಮರಾಯನೂ) ಮಿಗಿಲಿವರ್ಗಳಿಂ ಈ ಭಾರತಂ ಲೋಕಪೂಜ್ಯಂ (ಇವರಿಂದ ಮಹಾಭಾರತವು ಲೋಕಪೂಜ್ಯವಾಗಿದೆ.)
ಪದ್ಯ-೬೪:ಅರ್ಥ: ಛಲದಲ್ಲಿ ದುಯೋಧನನೂ, ಸತ್ಯದಲ್ಲಿ ಕರ್ಣನೂ ಪೌರುಷದಲ್ಲಿ ಭೀಮಸೇನನೂ, ಬಲದಲ್ಲಿ ಶಲ್ಯನೂ, ಗುಣದ ಉನ್ನತಿಯಲ್ಲಿ ಭೀಷ್ಮನೂ, ಬಿಲ್ಲು ವಿದ್ಯೆಯ ಕೌಶಲದಲ್ಲಿ ದ್ರೋಣಾಚಾರ್ಯನೂ, ಸಾಹಸದ ಮಹಿಮೆಯಲ್ಲಿ ಅರ್ಜುನನೂ, ಧರ್ಮದಲ್ಲಿ ಪರಿಶುದ್ಧ ಮನಸ್ಸುಳ್ಳ ಧರ್ಮರಾಯನೂ ಶ್ರೇಷ್ಠರಾದವರು. ಇವರಿಂದ ಮಹಾಭಾರತವು ಲೋಕಪೂಜ್ಯವಾಗಿದೆ.

ಮಂಗಳ ಪದ್ಯ : ಈ ಕಾವ್ಯವನ್ನು ಓದಿದ,ಬರೆದ, ಕೇಳಿದ ಎಲ್ಲರಿಗೆ ಕವಿಯ ಶುಭ ಹಾರೈಕೆ[ಸಂಪಾದಿಸಿ]

ಮ|| ಕರಮೞ್ಕರ್ತು ಸಮಸ್ತ ಭಾರತ ಕಥಾ ಸಂಬಂಧಮಂ ಬಾಜಿಸಲ್
ಬರೆಯಲ್ ಕೇಳಲೊಡರ್ಚುವಂಗಮಿದಱೊಳ್ ತನ್ನಿಷ್ಟವಪ್ಪನ್ನಮು|
ತ್ತರಮಕ್ಕುಂ ಧೃತಿ ತುಷ್ಟಿ ಪುಷ್ಚಿ ವಿಭವಂ ಸೌಭಾಗ್ಯಮಿಷ್ಟಾಂಗನಾ
ಸುರತಂ ಕಾಂತಿಯಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ|| ೬೫ ||
ಪದ್ಯ-೬೫:ಪದವಿಭಾಗ-ಅರ್ಥ:ಕರಂ ಅೞ್ಕರ್ತು (ಬಹಳವಾಗಿ ಪ್ರೀತಿಸಿ) ಸಮಸ್ತ ಭಾರತ ಕಥಾ ಸಂಬಂಧಮಂ ಬಾಜಿಸಲ್ ಬರೆಯಲ್ ಕೇಳಲ್ ಒಡರ್ಚುವಂಗಂ (ವಾಚಿಸಲು (ಓದಲು), ಬರೆಯಲು, ಕೇಳಲು ಪ್ರಾರಂಭಮಾಡುವವನಿಗೆ) ಇದಱೊಳ್ ತನ್ನ ಇಷ್ಟವಪ್ಪನ್ನಂ ಉತ್ತರಂ --> ಅಕ್ಕುಂ (ಇದರಿಂದ ತನ್ನ ಇಷ್ಟಾರ್ಥವು ಅಭಿವೃದ್ಧಿಯೂ -> ಆಗುತ್ತದೆ.) ಧೃತಿ ತುಷ್ಟಿ ಪುಷ್ಚಿ ವಿಭವಂ ಸೌಭಾಗ್ಯಂ ಇಷ್ಟಾಂಗನಾಸುರತಂ (ಧೈರ್ಯ, ತೃಪ್ತಿ, ಬಲ, ವೈಭವ, ಸೌಭಾಗ್ಯ, ತನ್ನ ಇಷ್ಟಳಾದ ಸ್ತ್ರೀಯ ಸಂಭೋಗ,) ಕಾಂತಿಯ ಅಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ <-ಅಕ್ಕುಂ ( ಶಾಂತಿ, ಏಳಿಗೆ, ವಿಭುತ್ವ/ ದೊರೆತನ , ಭದ್ರ- ರಕ್ಷಣೆ, ಶುಭ, ಮಂಗಳ ಇವೆಲ್ಲವೂ ಆಗುತ್ತವೆ.)
ಪದ್ಯ-೬೫:ಅರ್ಥ: ಸಮಸ್ತ ಭಾರತಕಥಾ ಪ್ರಬಂಧವನ್ನು ಬಹಳವಾಗಿ ಪ್ರೀತಿಸಿ ವಾಚಿಸಲು (ಓದಲು), ಬರೆಯಲು, ಕೇಳಲು ಪ್ರಾರಂಭಮಾಡುವವನಿಗೆ ತನ್ನ ಇಷ್ಟಾರ್ಥವು ಅಭಿವೃದ್ಧಿಯಾಗುತ್ತದೆ. ಧೈರ್ಯ, ತೃಪ್ತಿ, ಬಲ, ವೈಭವ, ಸೌಭಾಗ್ಯ, ತನ್ನ ಇಷ್ಟಳಾದ ಸ್ತ್ರೀಯ ಸಂಭೋಗ, ಶಾಂತಿ, ಏಳಿಗೆ, ವಿಭುತ್ವ/ ದೊರೆತನ , ಭದ್ರ- ರಕ್ಷಣೆ, ಶುಭ, ಮಂಗಳ - ಇವೆಲ್ಲವೂ ಆಗುತ್ತವೆ.
|| ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವವಿರಚಿತಮಪ್ಪ ವಿಕ್ರಮಾರ್ಜುನವಿಜಯದೊಳ್ ಚತುರ್ದಶಾಶ್ವಾಸಂ||
||ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಹದಿನಾಲ್ಕನೆಯ ಆಶ್ವಾಸವು||
♦♣♣♣♣♣♣♣♣♣♣♣♣♣♣♣♣♣♣♣♦

ಪಂಪಭಾರತ[ಸಂಪಾದಿಸಿ]

ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ