ಆದಿಪರ್ವ: ೧೯. ಹತ್ತೊಂಬತ್ತನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಆದಿಪರ್ವ – ಹತ್ತೊಂಬತ್ತನೆಯ ಸಂಧಿ[ಸಂಪಾದಿಸಿ]

ಸೂ. ಆ ಸುರಾರಿ ವಿರೋಧಿ ಪುರದಲಿ
ವಾಸವಾತ್ಮಜ ಮದುವೆಯಾಗಿ ವಿ
ಲಾಸದಲಿ ಹೊಕ್ಕನು ಸುಭದ್ರಾ ಸಹಿತ ನಿಜಪುರವ ||

ಕೇಳು ಜನಮೇಜಯ ಧರಿತ್ರೀ
ಪಾಲ ನಾರದಮುನಿ ನರೇಂದ್ರನ
ಬೀಳುಕೊಂಡನು ಚಪಲಗತಿಯಲಿ ಚಿಗಿದನಂಬರಕೆ
ಮೇಲೆ ಬಳಿಕೊಂದವಗಡವನೇ
ವೇಳುವೆನು ಪಾರ್ಥಂಗೆ ಬಂದುದ
ಕಾಲಗತಿಯೈಸಲೆ ವಿದೇಶ ಭ್ರಮಣವಾಯ್ತೆಂದ ೧

ನರನ ವಳಿತದೊಳೊಂದು ಸಮಯದೊ
ಳಿರುಳು ತಸ್ಕರ ಬಾಧೆಯಲಿ ಭೂ
ಸುರರು ಬಾಯ್ಬಿಡುತೈದೆಯಿಂದ್ರಪ್ರಸ್ಥ ಪುರವರವ
ಮೊರೆಯಬಾಯ್ಗಳ ಹುಲ್ಲು ಕೈಗಳ
ಹರಿದ ಮೈಗಳ ಸೆಕೆಯ ಸುಯ್ಗಳ
ತರದ ಬೈಗಳ ಕಳಕಳವ ಕೇಳಿದನು ಕಲಿ ಪಾರ್ಥ ೨

ಕರೆಸಿ ವಿಪ್ರರ ಬಾಧೇಗಳನಾ
ದರಿಸಿ ಕೇಳಿದು ಸಂತವಿಸಿ ಪರಿ
ಹರಿಸಿ ಕೊಡುವೆನು ದುಷ್ಟ ಪಾಟಚ್ಚರಪರಿಪ್ಲವವ
ಮರಳಿ ನೀವೆಂದವರ ಬೀಳ್ಕೊಂ
ಡರಿ ನಿವಾರಣ ಬಂದನಗ್ಗದ
ಶರಧನುವ ಕೊಳಲೆಂದು ರಾಯನ ಸೆಜ್ಜೆಯರಮನೆಗೆ ೩

ಸಮಯವೇನೆನೆ ಜೀಯ ರಾಯನು
ರಮಣಿಯೊಡನೇಕಾಂತವೆನಲ
ಸ್ತಮಿತ ಹರುಷನು ನಿಂದು ನೆನೆದನು ತನ್ನ ಮನದೊಳಗೆ
ಅಮರಮುನಿ ಮತವೊಂದು ಮಂಚದ
ರಮಣಿ ರಮಣರ ದರುಶನವಿದ
ಕ್ರಮವೆನಿಪುದೀ ವಚನ ಸಂಘಟಿಸಿತ್ತು ತನಗೆಂದ ೪

ಈಗಲೀ ವಿಪ್ರರಲಿ ಖಳರಭಿ
ಯೋಗವಾರ್ತಾಶ್ರವಣ ಬಹು ದುರಿ
ತಾಗಮವು ತನಗಾವುದೋ ಕರ್ತವ್ಯವೆಂದೆನುತ
ಈಗಲೀ ಸಂದಿಗ್ಧ ಸಮಯ
ತ್ಯಾಗ ಧರ್ಮ ವಿರೊಧ ಕೃತ್ಯವಿ
ಭಾಗವಾವುದೊ ಶಾಸ್ತ್ರದೃಷ್ಟಿಯೊಳೆಂದು ಚಿಂತಿಸಿದ ೫

ಎರಡು ಪಾತಕವಿವೆ ಬಲಾಬಲ
ವೆರಡರೊಳು ಸಾಮಾನ್ಯ ಪಕ್ಷಾಂ
ತರ ವಿಶೇಷವದಾವುದದರೊಳಗೆಂದು ಚಿತ್ತದಲಿ
ಒರೆದೊರೆದು ನೋಡಿದನು ತೂಕವ
ಬರೆಸಿ ಕಾಹಿನ ಕಂದುಕುಂದನು
ಪರಿಕಿಸುತ ನಿಶ್ಬೈಸಿ ತಿಳಿದನು ತನ್ನ ಮನದೊಳಗೆ ೬

ಅರಸನರಸಿಯರೊಂದು ಮಂಚದೊ
ಳಿರಲು ಕಂಡರೆ ಭೂಪ್ರದಕ್ಷಿಣ
ವರುಷವೊಂದರೊಳಿದಕೆ ಪ್ರಾಯಶ್ಚಿತ್ತ ವಿಧಿಯುಂಟು
ಧರಣಿಯಮರರುಪಪ್ಲವವ ಪರಿ
ಹರಿಸದಿರಲಾ ಪಾತಕಕೆ ಸಂ
ಹರಣವುಂಟೇ ಶಾಸ್ತ್ರ ದೃಷ್ಟಿಯೊಳೆಂದು ಚಿಂತಿಸಿದ ೭

ಎನುತ ನರನೊಳಹೊಕ್ಕು ತನ್ನಯ
ಧನು ಶರಂಗಳ ಕೊಂಡು ನುಡಿದನು
ಮುನಿವಚನ ಸಂಘಟಿತ ನೃಪದಂಪತಿ ವಿಲೋಕನದ
ಘನ ದುರಿತ ನಿಷ್ಕೃತಿಗೆ ವರುಷದೊ
ಳೆನಗೆ ದೇಶಭ್ರಮಣವಾಯ್ತೆಲೆ
ಜನಪ ಚಿಂತಿಸಬೇಡೆನುತ ಹೊರವಂಟನಾ ಪಾರ್ಥ ೮

ಇರಿದು ಕಳ್ಳರವಳ್ಳಿಗಳ ಕುರಿ
ದರಿದು ಭೂಸುರರೂರುಗಳ ಸೆರೆ
ತುರುಗಳನು ತಂದಿತ್ತನರ್ಜುನನಾ ಮಹೀಸುರರ
ತುರುಗಿದಾಶೀರ್ವಾದ ಮಳೆಗಳು
ಕರೆಯೆ ಹೆಚ್ಚಿದ ವೀರಕೀರ್ತಿಯ
ತೊರೆಗಳೊಳು ತೇಕಾಡುತಿರ್ದುದು ಸಕಲ ಜನನಿಕರ ೯

ಧಾರುಣೀಪತಿ ಕೇಳಿ ಗಂಗಾ
ತೀರಕೈದಿದನರ್ಜುನನು ಭಾ
ಗೀರಥೀ ಸ್ನಾನಾವಗಾಹ ವಿಶುದ್ಧ ವಿಗ್ರಹನ
ದೂರದಲಿ ಕಂಡುರಗ ರಾಜಕು
ಮಾರಿ ವರಿಸಿದಳೊಲವಿನಲಿ ಜಂ
ಭಾರಿತನಯನನಿಳುಹಿದಳು ಪಾತಾಳಮಂದಿರಕೆ ೧೦

ವಿಭವದಲಿ ವಾಸುಕಿಯ ತಂಗಿಯ
ನುಭಯ ವಂಶ ವಿಶುದ್ಧೆಯನು ಹರಿ
ನಿಭನು ಪಾಣಿಗ್ರಹಣವನು ಮಾಡಿದನು ವೊಲವಿನಲಿ
ಅಭಿಮತ ಕ್ರೀಡಾವಿನೋದದ
ರಭಸದಲಿ ದಿನ ಸವೆಯೆ ಗರ್ಭ
ಪ್ರಭವವಾಯ್ತು ಕುಮಾರ ಜನಿಸಿದನುರಗ ನಾರಿಯಲಿ ೧೧

ಸುತನಿರಾವಾನೆನಿಸಿ ತೊಳಗಿದ
ನತಿ ಬಹಳ ಬಲನಾತನನು ನಿಜ
ಸತಿಯನಲ್ಲಿಯೆ ನಿಲಿಸಿ ಕಳುಹಿಸಿಕೊಂಡನುಚಿತದಲಿ
ಕ್ಷಿತಿಗೆ ಬಂದನು ಜಾಹ್ನವೀ ಸಂ
ಗತ ಸಮುದ್ರದ ತೀರದಲಿ ಸೇ
ವಿತ ಸಕಲ ತೀರ್ಥೌಘನೈದಿದನಿಂದ್ರ ದಿಙ್ಮುಖವ ೧೨

ಅರಸ ಕೇಳುತ್ತರದ ಪೂರ್ವದ
ಪರಮ ತೀರ್ಥವ್ರಾತವನು ವಿ
ಸ್ತರಿಸಿ ಸಾಗರ ತೀರದಲಿ ದಕ್ಷಿಣ ದಿಶಾವರಕೆ
ತಿರುಗಿದನು ತತ್ಪಂಚ ಗೋದಾ
ವರಿಯ ತೀರಕೆ ತುಂಗಭದ್ರಾ
ವರ ನದಿಯನುತ್ತರಿಸಿ ಕಾಂಚೀನಗರಕೈತಂದ ೧೩

ಆ ನಗರದಧಿದೈವ ನಿಕರಕೆ
ತಾ ನಮಿಸಿ ತತ್ಸಕಲ ತೀರ್ಥ
ಸ್ನಾನ ಕರ್ಮವ ರಚಿಸಿ ಬಂದನು ಜಲಧಿ ತೀರದಲಿ
ವಾನರರ ಭುಜಬಲಸಮಾಖ್ಯಾ
ನೂನ ಶಾಸನವನು ಸುರಾರಿ ವಿ
ತಾನ ರವಿ ರಾಹುವನು ಕಂಡನು ಸೇತುಬಂಧನವ ೧೪

ಧನುಷ್ಕೋಟಿಯಲಿ ಮಿಂದೀ
ಶ್ವರಪದಾಂಬುಜಕೆರಗಿ ತತ್ಪರಿ
ಸರದ ಪಂಚತಟಾಕದಲಿ ಘನಮಕರರೂಪದಲಿ
ಸುರವಧುಗಳಿರಲವರ ಶಾಪವ
ಪರಿಹರಿಸಿ ತತ್ತೀರ್ಥಸೇವಾ
ಪರಮ ಪಾವನ ಕರಣನಾದನು ಭೂಪ ಕೇಳೆಂದ ೧೫

ಈತನನು ಕಂಡರಿದು ಪಾಂಡ್ಯ ಮ
ಹೀತಳಾಧಿಪ ನಿಜ ಕುಮಾರಿಯ
ನೀತಗಿತ್ತನು ಬಭ್ರುವಾಹನನಾದನಾಕೆಯಲಿ
ಈತ ಕಳುಹಿಸಿಕೊಂಡು ದೈತ್ಯಾ
ರಾತಿಗೆರಗಿಯನಂತಶಯನ
ಖ್ಯಾತಿಗೆರಗಿಯನಂತಶಯನ
ಖ್ಯಾತಿ ವಿಭವವನೀಕ್ಷಿಸುತ ಹರುಷದಲಿ ನಡೆತಂದ ೧೬

ನದಿ ನದವನುತ್ತರಿಸಿ ಹರಿಹರ
ಪದಯುಗಳಕಭಿನಮಿಸಿ ತದ್ದೇ
ಶದ ಸುತೀರ್ಥಕ್ಷೇತ್ರವೆನಿತುಳ್ಳನಿತನಾದರಿಸಿ
ಮುದದ ಮುರವಿನ ಹಂಸೆಗಳ ತನಿ
ಮದದ ಚಾತಕವಕ್ಕಿಗಳ ಮೇ
ಘದ ಸಘಾಡದ ಮೇಳವವ ನೋಡುತ್ತ ನಡೆತಂದ ೧೭

ಒಡ್ಡು ಮೆರೆದುದು ಮೇಘಘಟೆ ಬಿಸಿ
ಲೊಡ್ಡು ಮುರಿದುದು ಚಂದ್ರಸೂರ್ಯರ
ನಡ್ಡವಿಸಿ ಹಿಡಿಯಾಳ ಹಿಡಿದವು ಮುಗಿಲ ಚೂಣಿಗಳು
ಖಡ್ಡಿ ತಡೆವುದೆ ಕಡಲನುಡುಗಣ
ದೊಡ್ಡ ಕಾಣೆನು ಮುಗಿಲ ಬೆನಕಗೆ
ಲಡ್ಡುಗೆಗಳಾದವು ಸಮಸ್ತಗ್ರಹ ಸುತಾರೆಗಳು ೧೮

ಆಳ ಕರೆ ಕಟಕವನು ಸೂರ್ಯನ
ಮೇಲೆ ಬರ ಹೇಳೆಂಬ ಮೇಘ ನೃ
ಪಾಲಕನ ಡಂಗುರವೊ ಮೊಳಗುವ ಸಿಡಿಲಿನಬ್ಬರವೊ
ಆಲಿಕಲ್ಗಳೊ ಮುಗಿಲ ಮುಂಗುಡಿ
ಯಾಳ ಯೊಯ್ಲಲಿ ಬೀಳ್ವ ತಾರಾ
ಮಾಲೆಗಳೊ ಜೀಮೂತ ಲತೆ ಲಂಬಿಸಿದುದಂಬರವ ೧೯

ಮಿಂಚಿದವು ದೆಸೆಗಳಲಿ ಗಮನಕೆ
ಮುಂಚಿದವು ಹಂಸೆಗಳು ನಭದಲಿ
ಹೊಂಚಿದುದು ಜೀವನಕೆ ಜೀವನ ವಿರಹಿ ನಿಕುರುಂಬ
ಪಂಚಪತಿಯರೊ ಮೇಣಿವರು ಪತಿ
ವಂಚಕಿಯರೋ ಗ್ರೀಷ್ಮಕಾಲದ
ಪಂಚತೆಯೊಳಾಲಿಂಗಿಸಿತು ದಿಗ್ವಧುಗಳಂಬುದವ ೨೦

ಜನಪ ಕೇಳೈ ಕಾರ್ಮುಗಿಲ ಮುಂ
ಬನಿಗಳೊಳು ವಹಿಲದಲಿ ಕೇರಳ
ಜನಪದದ ತೌಳವದ ಕೊಂಕಣ ವಿಷಮವೀಧಿಯಲಿ
ಜಿನುಗಿನಲಿ ಬಹು ಮಳೆಗಳಲಿ ನೆನೆ
ನೆನೆದು ಸಾಗರ ತೀರದಲಿ ಬಂ
ದನು ಕಿರೀಟಿ ವಿಚಾರಿಸುತ ಮುರಹರನ ಪಟ್ಟಣವ ೨೧

ಪುರವ ಹೊರವಂಟೆಂಟು ತಿಂಗಳು
ಪರಿಹರಿಸಿತೀ ಕೃಷ್ಣರಾಯನ
ಪುರದೊಳಗೆ ನೂಕುವೆನು ವರ್ಷಾಕಾಲ ವಿಭ್ರಮವ
ವರುಷವೊಂದು ಸಮಾಪ್ತಿ ಬಳಿಕಿನೊ
ಳರಸನಂಘ್ರಿ ವಿಲೋಕನಾ ವಿ
ಸ್ತರಣವಹುದೆಂದಾತ ನಿಶ್ಬೈಸಿದನು ಮನದೊಳಗೆ ೨೨

ಅರಸ ಕೇಳ್ ಸಂನ್ಯಾಸಿ ವೇಷದ
ಪರಿಕರವನಳವಡಿಸಿ ಶೌರಿಯ
ಪುರದ ಹೊರ ಬಾಹೆಯಲಿ ಹೆಚ್ಚಿದ ಬನದ ಮಧ್ಯದಲಿ
ಇರುಳು ಕಗ್ಗತ್ತಲೆಯೊಳೌಕುವ
ಸರಿವಳೆಗೆ ಸಲೆ ಸೇಡುಗೊಳುತು
ಬ್ಬರಿಸಿ ಕೃಷ್ಣನ ನೆನೆವುತಿದ್ದನು ಮರನ ಹೊಳ್ಳಿನಲಿ ೨೩

ದೇವನೆತ್ತಲು ಸತ್ಯಭಾಮಾ
ದೇವಿಯರ ಮೇಳದಲಿಯಿರುತಿ
ರ್ದೀ ವಿಲಾಸವ ನೆನೆದು ನಕ್ಕನು ಶಕ್ರನಂದನನ
ಆವಳೋ ನೆನಹಿನಲಿ ಸುಳಿದಳು
ಭಾವದಲಿ ಸುಮ್ಮಾನವೇನೆನೆ
ದೇವಿ ಬೇರೊಂದಿಲ್ಲ ಮನ ನಿನ್ನಾಣೆ ಕೇಳೆಂದ ೨೪

ನರನ ನೀ ಕೇಳ್ದರಿಯಲಾ ಸೋ
ದರದ ಮೈದುನನೆನಗೆ ಕುಂತಿಯ
ವರ ಕುಮಾರಕನಾತನೀ ದ್ವಾರಾವತಿಯ ಹೊರಗೆ
ಮರದ ಹೊಳ್ಳೊಳು ಹೊಕ್ಕು ಸಿಕ್ಕಿದ
ನರಿಯವೊಲೈದಾನೆ ನಾನುಪ
ಚರಿಸಿ ಬಹೆನೆಂದೆನುತ ಮಂಚವನಿಳಿದನಸುರಾರಿ ೨೫

ಅರಸಿ ಕೇಳೀ ಬಂದ ಪಾರ್ಥನ
ಕರೆದುಪಾಯಾಂತರದೊಳೀವೆನು
ಸರಸಿಜಾನನೆಯನು ಸುಭದ್ರೆಯನಿಂದು ತಪ್ಪಿದರೆ
ಕರೆಸಿ ದುರ್ಯೋಧನಗೆ ಕೊಡಿಸುವ
ಭರವು ಬಲಭದ್ರನದು ಪಾರ್ಥನ
ಬರವು ಲೇಸಾಯ್ತೆನುತ ಹೊರವಂಟನು ನಿಜಾಲಯವ ೨೬

ಬಂದನಲ್ಲಿಗೆ ಫಲುಗುಣನ ಕಂ
ಡೆಂದನೀ ಶೈಲದ ಸಮೀಪದೊ
ಳಿಂದು ನಿಲು ಬಲಭದ್ರನೈತಹನುಚಿತ ವಚನದಲಿ
ಮಂದಿರಕೆ ಬರ ಹೇಳಿದರೆ ಬಾ
ಮುಂದೆ ನಿನ್ನಿಷ್ಟಾರ್ಥ ಸಿದ್ಧಿಪು
ದೆಂದು ಪಾರ್ಥನ ಸಂತವಿಸಿ ಮರಳಿದನು ಮುರವೈರಿ ೨೭

ಪರಮಹಂಸನ ಸುಳಿವು ಸಾಕ್ಷಾ
ತ್ಸರಸಿಜಾಕ್ಷನ ಲೀಲೆ ಗಡ ನ
ಮ್ಮ ರಸನಭ್ಯುದಯ ಪ್ರಪಂಚವಿದೆಂದು ನಗರದಲಿ
ಹರಹಿದನು ಹರಿ ವಾರ್ತೆಯನು ತಾ
ನರಿಯದಂತಿರೆ ಬಳಿಕ ನೀಲಾಂ
ಬರನು ಬಹಳೋತ್ಸವದೊಳೈದಿದನಾತನಿದ್ದೆಡೆಗೆ ೨೮

ವಂದಿಸಿದನಾ ಮುನಿಪತಿಯನಭಿ
ವಂದಿತಾಶೀರ್ವಾದ ಸಂಗತಿ
ಯಿಂದ ವಿವರಿಸಿದನು ಚತುರ್ದಶವಿದ್ಯೆಗಳ ಗತಿಯ
ನಿಂದು ಮೂಗಿನ ಬೆರಳಿನಲಿ ಸಾ
ನಂದ ಮಿಗೆ ಬೆರಗಾಗಿ ನಮ್ಮಯ
ಮಂದಿರಕೆ ನೀವ್ ಬಿಜಯ ಮಾಡುವುದೆನುತ ಕೈಮುಗಿದ ೨೯

ನಾವು ಭಿಕ್ಷುಕರೆಮಗೆ ರಾಜ ಗೃ
ಹಾವಲಂಬನವೇಕೆ ಶೈಲ ವ
ನಾವಳಿಗಳಲಿ ವರ ನದೀತೀರದಲಿ ವಾಸಿಪೆವು
ಭಾವಿತ ಪ್ರಾರಬ್ಧಕರ್ಮ ಫ
ಲಾವಳಿಯನುಪಭೋಗಿಸುತ ದೇ
ಹಾವಸಾನವನೀಕ್ಷಿಸುತ್ತಿಹೆವೆಂದನಾ ಪಾರ್ಥ ೩೦

ಅಹುದು ನೀವೇಕಾಂತ ಭವನದೊ
ಳಿಹುದು ಚಾತುರ್ಮಾಸವಿದು ಸಂ
ನಿಹಿತವಾಯ್ತದ ನೂಕಿ ಬಿಜಯಂಗೈವುದಿಚ್ಛೆಯಲಿ
ವಿಹಿತ ಚರಿತರು ನೀವಲಾ ನಿ
ರ್ವಹಿಸುವೆನು ಶುಶ್ರೂಷೆಯನು ಕಿಂ
ಗಹನ ಮಾಡದಿರೆಂದು ತಂದನು ಯತಿಯನರಮನೆಗೆ ೩೧

ಇವರನರಮನೆಯೊಳಗೆ ಕನ್ಯಾ
ಭವನ ಮಧ್ಯದೊಳಿರಿಸಿ ಬಳಿಕಿನೊ
ಳಿವರ ಶುಶ್ರೂಷೆಗೆ ಸುಭದ್ರಾದೇವಿಯನು ಕರೆಸಿ
ಇವರ ಪೂರ್ವ ಮಹಾತ್ಮಕರು ನೀ
ನಿವರ ದೇವಾರ್ಚನೆ ಸಮಾಧಿ
ಪ್ರವರದಲಿ ಬೆಸಸಿದನು ಮಾಡುವುದೆಂದು ನೇಮಿಸಿದ ೩೨

ಹೊರಗೆ ಕೃಷ್ಣನ ಕರೆದಿವೆಲ್ಲವ
ನರುಹಿದಡೆ ಮರುಳಾಡಿದನು ಮೈ
ಮರೆದು ತಂಗಿಯನೊಯ್ದು ಬಿಸುಟಿರೆ ಬಣಗು ತಿರುಕನಲಿ
ಅರಸು ಮಗಳನು ತೊತ್ತುಗೆಲಸಕೆ
ಪರುಠವಿಸಿದಿರೆ ಶಿವಶಿವಾ ನಾ
ವರಿಯೆವಲ್ಲಿಯ ಲೇಸು ಹೊಲ್ಲೆಹವೆಮ್ಮದಲ್ಲೆಂದ ೩೩

ಮರುಳೆ ನೀ ಹೋಗಾರನೇನೆಂ
ದರಿಯೆ ಹತಿ ಸರ್ವಜ್ಞನೀತನು
ತಿರುಕನೇ ಸಾಕ್ಷಾತು ಲಕ್ಷ್ಮೀಕಾಂತ ಸನ್ನಿಭನು
ಬರಲಿ ಮಾಣಲಿ ಹಾನಿ ವೃದ್ಧಿಯ
ಹರಿಬವೆನ್ನನು ಯತಿ ಮಹಾತ್ಮರ
ನರಿಯದವರೇ ನಾವೆನುತ ಗಜರಿದನು ಬಲರಾಮ ೩೪

ಆದರೊಳ್ಳಿತು ತಂಗಿ ಬೆಸಗೈ
ದಾದರಿಸಲೀ ಯತಿಪತಿಯ ನಿಮ
ಗೀ ದುರಾಗ್ರಹವೇಕೆ ಕಾಂಬಿರಿ ಫಲವನಗ್ರದಲಿ
ಹೋದೆವಿದೆ ಮೌನದೊಳೆನುತ್ತ ಬು
ಜೋದರನು ಹಿಂಗಿದನು ಹರಿಯ ವಿ
ನೋದ ರಚನೆಯನೇನನೆಂಬೆನು ಭೂಪ ಕೇಳೆಂದ ೩೫

ಬಾಲಕಿಗೆ ಸಂನ್ಯಾಸಿ ದೇವರ
ಮೇಲೆ ಮನವಾಯ್ತವರಿಗೀಕೆಯ
ಮೇಲೆ ನೆಲಸಿತು ಚಿತ್ತ ಕಾಣೆನು ಜಪ ಸಮಾಧಿಗಳ
ಮೇಳವಿಸಿತನ್ಯೋನ್ಯ ರಾಗ ಛ
ಡಾಳಿಸಿದುದಭಿಲಾಷೆ ಕಾಮನ
ಬೇಳುವೆಗೆ ಬೆಂಡಾದುದಿಬ್ಬರ ಧೈರ್ಯವಡಿಗಡಿಗೆ ೩೬

ಮಿಡುಕುವುದು ಬಾಯ್ ಚಿತ್ತವವಳಲಿ
ತೊಡಕಿಹುದು ಜಪಮಾಲೆ ಬೆರಳಲಿ
ನಡೆವುತಿಹುದಕ್ಷಿಗಳು ಮುಕ್ಕುಳಿಸಿಹವು ಮಾನಿನಿಯ
ಮೃಡನ ಪೂಜೆಗೆ ಕೈ ಸುಭದ್ರೆಯ
ಹಿಡಿಹಿನಲಿ ಮನ ವರ ಸಮಾಧಿಯ
ತೊಡಹು ಹೊರಗೊಳಗಿಂದುಮುಖಿ ನರನಾಥ ಕೇಳೆಂದ ೩೭

ಜಾರಿದುದು ಮಳೆಗಾಲವತಿ ಬೆಳು
ಪೇರಿದವು ಮುಗಿಲುಗಳು ಕತ್ತಲೆ
ಸೂರೆವೋದುದು ಹಗಲಿರುಳು ರವಿಶಸಿಗಳುಪಟಳಕೆ
ತಾರಿದವು ನದಿ ನಗದಳಭ್ರಕೆ
ಹಾರಿದವು ಕಳಹಂಸೆಗಳು ತಲೆ
ದೋರಿದವು ತಾವರೆಗಳೆನೆ ಬಂದುದು ಶರತ್ಸಮಯ ೩೮

ಸುದತಿಯನು ಶುಭದಿವಸ ಸುಮುಹೂ
ರ್ತದೊಳಿರುಳು ವೈವಾಹವನು ಮಾ
ಡಿದರು ಹರಿ ವಸುದೇವ ದೇವಕಿಯುಗ್ರಸೇನ ನೃಪ
ಮದುವೆಯಾಯಿತು ಬಲನರಿಯದಂ
ದದಲಿ ವೂಡಿದ ರಥವನೇರಿಸಿ
ಮದವಳಿಗೆ ಸಹಿತರ್ಜುನನ ಕಳುಹಿದನು ಮುರವೈರಿ ೩೯

ಪುರವ ಹೊರವಂಟವರು ಬರಲ
ಬ್ಬರಣೆಯಾಯ್ತರಮನೆಯೊಳಗೆ ಸಂ
ಕರುಷಣಂಗರುಹಿದರು ಸಂನ್ಯಾಸಿಯ ಸಮಾಧಿಗಳ
ಅರಸು ಮಗಳನು ಕೊಂಡು ಹಾಯ್ದನೆ
ತಿರುಕ ಮುನಿ ಮಝಭಾಪು ಸುಭಟರ
ಕರೆ ಮುರಾರಿಯ ಮಾತು ತಾಗಿತೆನುತ್ತ ಗರ್ಜಿಸಿದ ೪೦

ಹೇಳವೇ ನಾವ್ ಮುನ್ನ ನೀವ್ ನೀ
ಲಾಳಕಿಯ ಕೆಡಿಸಿದಿರಲಾ ನೀ
ವಾಳ ನೆರಹಿದಡಿನ್ನು ಮಾಡುವುದೇನು ಕಡು ಮುಳಿದು
ಚಾಳಿಸಿದುದಪಕೀರ್ತಿಯಕಟ ವಿ
ಕಾಳಿಸಿತು ಯದುವಂಶವೆನೆ ಕರ
ವಾಳ ಜಡಿದೈದಿದನು ಹಲಧರನರ್ಜುನನ ರಥವ ೪೧

ಮುಸುಕಿದನು ನಾರಾಚದಲಿ ನಿ
ಪ್ಪಸರದಲಿ ಹಲಧರನ ಸೇನೆಯ
ಕುಸುರಿದರಿದನು ಕೊಂದನಗಣಿತ ಬಲವನಾ ಪಾರ್ಥ
ಎಸೆವನೇ ಸಂನ್ಯಾಸಿ ಮಾಡಿದ
ಹುಸಿಯುಪನ್ಯಾಸಕ್ಕೆ ಕೊಯ್ವೆನು
ರಸನೆಯನು ದೇವಕಿಯ ಮೇಲಾಣೆನುತ ಗರ್ಜಿಸಿದ ೪೨

ಬಳಿಕ ಹರಿದನು ಕೃಷ್ಣ ನೀತನ
ಕೆಲಕೆ ಕರೆದನು ಬಹಳ ರೋಷವ
ನಿಲಿಸಿರೇ ಸಾಕಿನ್ನು ವಸುದೇವಂಗೆ ದೇವಕಿಗೆ
ಮುಳಿವುದೀತನ ದೋಷವಲ್ಲಿದ
ತಿಳಿದೆವಾವರ್ಜುನನು ಗಡ ನಾ
ವಳುಕಲಿನ್ನೇಕೆನುತ ಬೊಧಿಸಿದನು ಹಲಾಯುಧನ ೪೩

ಅಕಟ ದುರ್ಯೋಧನಗೆ ತಪ್ಪಿಸಿ
ಸಕಲ ಯಾದವರಿಲ್ಲಿಗೈದರೆ
ವಿಕಳಮತಿ ನಾನೈಸಲೇ ಕೃಷ್ಣನ ಕುಮಂತ್ರವಿದು
ಅಕುಟಿಲಾಂತಃಕರಣತನ ಬಾ
ಧಕವಲೇ ಗರುವರಿಗೆನುತ ಸ
ಭ್ರುಕುಟಿ ರೌದ್ರಾನನನು ಮುರಿದನು ಪುರಕೆ ಬಲರಾಮ ೪೪

ಹರಿಸಹಿತ ಬಲರಾಮನತ್ತಲು
ತಿರುಗಿದನು ಪವಮಾನ ಜವದಲಿ
ಪುರಕೆ ಬಂದನು ಪಾರ್ಥ ಪಯಣದ ಮೇಲೆ ಪಯಣದಲಿ
ಪುರದ ಬಹಿರೋದ್ಯಾನದಲಿ ಸಂ
ವರಿಸಿ ರಥವನು ನಿಲಿಸಿ ನೆಳಲಲಿ
ಪರಿಗತ ಶ್ರಮನಾಗಿ ನಗುತ ಸುಭದ್ರೆಗಿಂತೆಂದ ೪೫

ಅರಮನೆಗೆ ನಡೆ ದ್ರುಪದ ನಂದನೆ
ಕರೆಸಿದರೆ ನೀ ಹೋಗು ನಿರುತವ
ನರುಹದಿರು ತುರುಗಾಹಿಗಳ ಮಗಳೆಂದು ನುಡಿ ಸಾಕು
ಅರಸಿ ಮಿಗೆ ಮನ್ನಿಸುವಳಲ್ಲಿರು
ಕರೆಸಿಕೊಂಬೆನು ಬಳಿಕಲೆಂದೀ
ಸರಸಿಜಾಕ್ಷಿಯ ಕಳುಹಿದನು ನಿಜ ರಾಜಮಂದಿರಕೆ ೪೬

ಬಂದಳಬಲೆ ಸಮಸ್ತಪುರಜನ
ವಿಂದುವದನೆಯ ನೋಡುತಿದ್ದುದು
ಮಂದಿ ಕವಿದುದು ಮನುಜೆಯೇ ಸುರಲೋಕ ವಧುವೆನುತ
ಮಂದಿರಕೆ ಬರೆ ಬಾಗಿಲವದಿರು
ನಿಂದರಲ್ಲಿಯದಲ್ಲಿ ಬಳಿಕರ (೪೭

ವಿಂದಮುಖಿಯರು ಕಂಡು ದ್ರೌಪದಿಗರುಹಿದರು ಹದನ
ಕರೆಸಿ ಕಾಣಿಸಿಕೊಂಡು ಪಾಂಡವ
ರರಸಿ ಬೆಸಗೊಳಲೀಕೆ ಪಾರ್ಥನ
ಪರುಠವದ ಮಾತುಗಳನೆಂದಳು ನಗೆಯ ಮೊಳೆ ಮಿನುಗೆ
ಸುರ ಭುಜಂಗಮ ವಧುವೊ ನೀ ಮೇ
ಣರಸು ಮಗಳೋ ತಂಗಿ ನೀ ಗೊ
ಲ್ಲರ ಮಗಳೆ ಪುಸಿಯೆನುತ ತಲೆದೂಗಿದಳು ಪಾಂಚಾಲಿ ೪೮

ಮಸಗಿದವು ನಿಸ್ಸಾಳ ತತಿ ಗ
ರ್ಜಿಸಿದವರ್ಜುನ ಬಂದನಿದೆಯೆಂ
ದೊಸಗೆವಾತಿನೊಳೂರ ಸುಳಿದರು ದೂತರಲ್ಲಲ್ಲಿ
ಶಶಿಮುಖಿಯರುಪ್ಪಾರತಿಯ ಮಿಗಿ
ಲೆಸೆವ ರತುನಾವಳಿಯ ಕಾಂತಾ
ವಿಸರ ನೂಕಿತು ಪಾರ್ಥ ಹೊಕ್ಕನು ರಾಜಮಂದಿರವ ೪೯

ಅರಸ ಭೀಮರಿಗೆರಗಿ ನಕುಲಾ
ದ್ಯರನು ಕಾಣಿಸಿಕೊಂಡು ದೇಶಾಂ
ತರದ ತೀರ್ಥೋನ್ನತಿಯನಾ ವೃತ್ತಾಂತ ಸಂಗತಿಯ
ಮುರಹರನ ಸೌಹೃದವನಾತನ
ಕರುಣ ಕನ್ಯಾಲಾಭವನು ವಿ
ಸ್ತರಿಸಿ ಹರುಷಾಂಬುಧಿಯೊಳದ್ದಿದನಗ್ರಜಾನುಜರ ೫೦

ಅರಸ ಕೇಳೈ ದ್ರೌಪದಿಯ ಮನ
ಬರಿಸಿ ಬೇರರಮನೆಯೊಳೀಕೆಯ
ನಿರಿಸಿದನು ಹರುಷದಲಿ ಕಳೆದರು ಕಾಲ ವಿಭ್ರಮವ
ಇರಲಿರಲು ಪಾರ್ಥಗೆ ಸುಭದ್ರೆಗೆ
ವರ ಕುಮಾರಕನುದಿಸಿದನು ವಿ
ಸ್ತರಣವಾಯ್ತಭಿಮನ್ಯುವಿನ ಜನನೋತ್ಸವಾಭ್ಯುದಯ ೫೧

ನೋಡಿ[ಸಂಪಾದಿಸಿ]

ಆದಿಪರ್ವ ಸಂಧಿಗಳು>: ೧೦
> ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦

ಪರ್ವಗಳು[ಸಂಪಾದಿಸಿ]

ಕುಮಾರವ್ಯಾಸ ಭಾರತ ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ