ಪಂಪಭಾರತ ಪಂಚಮಾಶ್ವಾಸಂ

ವಿಕಿಸೋರ್ಸ್ದಿಂದ

ಪಂಪಭಾರತ -ಪದವಿಭಾಗ ಮತ್ತು ಅರ್ಥ::ಪಂಚಮಾಶ್ವಾಸಂ[ಸಂಪಾದಿಸಿ]

  • (XXV.II.IIX-ಪದ್ಯದ ಮೊದಲ ಅಕ್ಷರ ವೃತ್ತದ ಹೆಸರು ಸೂಚಿಸುವುದು; ಇದು ಚಂಪೂ ಕಾವ್ಯವಾಗಿದ್ದು ಗದ್ಯವೂ ಇದೆ. (ಗಮನಿಸಿ:ಱ = ರ; ೞ=ಳ))
ಅರ್ಜುನನಿಂದ ಸುಭದ್ರಾಪಹರಣ - ವಿವಾಹ
ಕಂ|| ಶ್ರೀ ವೀರಶ್ರೀ ಕೀರ್ತಿ
ಶ್ರೀ ವಾಕ್‌ಶ್ರೀಯೆಂಬ ಪೆಂಡಿರಗಲದೆ ತನ್ನೊಳ್|
ಭಾವಿಸಿದ ಪೆಂಡಿರೆನಿಸಿದ
ಸೌವಾಗ್ಯದ ಹರಿಗನೆಮ್ಮನೇನೊಲ್ದಪನೋ|| ೧||
ಪದ್ಯ-೧:ಪದವಿಭಾಗ-ಅರ್ಥ:ಶ್ರೀ ವೀರಶ್ರೀ ಕೀರ್ತಿ ಶ್ರೀ ವಾಕ್‌-ಶ್ರೀಯೆಂಬ ಪೆಂಡಿರ್(ಸ್ತ್ರೀಯರು) ಅಗಲದೆ, ತನ್ನೊಳ್ ಭಾವಿಸಿದ (ಧ್ಯಾನಿಸಲ್ಪಟ್ಟ) ಪೆಂಡಿರ್ (ಸ್ತ್ರೀಯರು) ಎನಿಸಿದ ಸೌವಾಗ್ಯದ (ಸೌಭಾಗ್ಯವನ್ನುಳ್ಳ) ಹರಿಗನು ಎಮ್ಮನು ಒಲ್ದಪನೋ (ನನ್ನನ್ನು (ಸುಭದ್ರೆಯನ್ನು) ಪ್ರೀತಿಸುತ್ತಾನೆಯೋ ಇಲ್ಲವೋ? )
ಪದ್ಯ-೧:ಅರ್ಥ: ಸುಭದ್ರೆಯು ಚಿಂತಿತಳಾಗಿದ್ದಾಳೆ, ಏನೆಂದರೆ: ಲಕ್ಷ್ಮಿ, ಜಯಲಕ್ಷ್ಮಿ, ಕೀರ್ತಿಲಕ್ಷ್ಮಿ, ವಾಕ್‌ಲಕ್ಷ್ಮಿ ಎಂಬ ಸ್ತ್ರೀಯರು ತನ್ನನ್ನು ಯಾವಾಗಲೂ ಧ್ಯಾನಿಸುತ್ತಿರುವ ಸ್ತ್ರೀಯರು ಎಂಬ ಸೌಭಾಗ್ಯವನ್ನುಳ್ಳ ಅರ್ಜುನನು ನನ್ನನ್ನು ಪ್ರೀತಿಸುತ್ತಾನೆಯೋ ಇಲ್ಲವೋ?

ಸುಭದ್ರೆಯ ವಿರಹ ವೇದನೆ[ಸಂಪಾದಿಸಿ]

ಕಂ||ಎಂಬ ಬಗೆಯೊಳ್ ಸುಭದ್ರೆ ಪ
ಲುಂಬಿ ಮನಂಬಸದೆ ತನುವನಾಱಿಸಲಲರಿಂ|
ತುಂಬಿಗಳಿಂ ತಣ್ಣೆಲರಿಂ
ತುಂಬಿದ ತಿಳಿಗೊಳದಿನೆಸೆವ ಬನಮಂ ಪೊಕ್ಕಳ್|| ೨||
ಪದ್ಯ-೨:ಪದವಿಭಾಗ-ಅರ್ಥ:ಎಂಬ ಬಗೆಯೊಳ್ ಸುಭದ್ರೆ ಪಲುಂಬಿ (ಮನಸ್ಸಿನಲ್ಲಿ ಸುಭದ್ರೆ ಹಲುಬಿ/ ಚಿಂತಿಸಿ) ಮನಂಬಸದೆ ತನುವನು ಆಱಿಸಲ್ (ಒಂದೇ ಮನಸ್ಸಿನಿಂದ ದೇಹದ ವಿರಹಸಂತಾಪವನ್ನು ತಣಿಸಲು) ಅಲರಿಂ ತುಂಬಿಗಳಿಂ ತಣ್ಣೆಲರಿಂ (ತಂಗಾಳಿಯಿಂದ) ತುಂಬಿದ ತಿಳಿಗೊಳದಿಂ ಎಸೆವ ಬನಮಂ (ಉದ್ಯಾನವನವನ್ನು) ಪೊಕ್ಕಳ್
ಪದ್ಯ-೨:ಅರ್ಥ: . ಎಂಬ ಮನಸ್ಸಿನಿಂದ ಕೂಡಿದ ಸುಭದ್ರೆಯು ಹಲುಬಿ ಮನಸ್ಸನ್ನು ಒಂದೇ ಮನಸ್ಸಿನಿಂದ ದೇಹದ ವಿರಹಸಂತಾಪವನ್ನು ಆರಿಸಿಕೊಳ್ಳಲು, ಹೂವಿನಿಂದಲೂ ದುಂಬಿಗಳಿಂದಲೂ ತಂಗಾಳಿಯಿಂದಲೂ ತುಂಬಿದ ತಿಳಿನೀರಿನ ಕೊಳಗಳಿಂದಲೂ ಸೊಗಯಿಸುವ ಉದ್ಯಾನವನವನ್ನು ಪ್ರವೇಶಿಸಿದಳು.
ಕಂ||ತಳತಳಿಸಿ ಪೊಳೆವ ಮಾವಿನ
ತಳಿರ್ಗಳಶೋಕೆಗಳ ಮಿಸುಪ ಲತೆಗಳ ನೆಲೆ ಬ|
ಳ್ವಳ ಬಳೆದ ಬೇಟದುರುಳಿಯ
ಬಳಗಮಿದೆಂದೆಳೆಯಳೆಳಸಿ ತಳವೆಳಗಾದಳ್|| ೩ ||
ಪದ್ಯ-೩:ಪದವಿಭಾಗ-ಅರ್ಥ:|ತಳತಳಿಸಿ ಪೊಳೆವ ಮಾವಿನ ತಳಿರ್ಗಳ್ (ಚಿಗುರೆಲೆ) ಅಶೋಕೆಗಳ ಮಿಸುಪ(ಹೊಳೆವ- ಶೋಭಿಸುವ) ಲತೆಗಳ ನೆಲೆ (ಬಳ್ಳಿಗಳ ತಾಣ) ಬಳ್ವಳ ಬಳೆದ (ಸೊಂಪಾಗಿ ಬೆಳೆದ) ಬೇಟದ ಉರುಳಿಯ ಬಳಗಂ ಇದೆಂದು (ಪ್ರೇಮದ ಉಂಡೆಗಳ ರಾಶಿ ಇವು ಎಂದು) ಎಳೆಯಳು (ಕೋಮಲೆ ಸುಭದ್ರೆ) ಎಳಸಿ (ಭಾವಿಸಿ) ತಳವೆಳಗಾದಳ್ (ತಳಮಳಗೊಂಡಳು)
ಪದ್ಯ-೩:ಅರ್ಥ: ತಳತಳ ಎಂದು ಹೊಳೆಯುವ ಮಾವಿನ ಚಿಗುರುಗಳ, ಅಶೋಕ ವೃಕ್ಷಗಳ, ಶೋಭಿಸುವ ಬಳ್ಳಿಗಳ ತಾಣ, ಇವು ಸೊಂಪಾಗಿ ಬೆಳೆದ ಸೊಂಪಾಗಿ ಬೆಳೆದ ಪ್ರೇಮದುಂಡೆಗಳ ಸಮೂಹವೆಂದು

ಬಾಲೆಯಾದ ಸುಭದ್ರೆಯು ತಳಮಳಗೊಂಡಳು

ಕಂ||ಕೊಳದ ತಡಿವಿಡಿದು ಬೆಳೆದೆಳ
ದಳಿರ್ಗಳಶೋಕೆಗಳ ಲತೆಯ ಮನೆಗಳೊಳೆ ತೆಱಂ|
ಬೊಳೆವಲರ ಬಸದೆ ಸುೞಿವಳಿ
ಗಳ ಬಳಗದ ದನಿಗೆ ಕಿನಿಸಿ ಕಿಂಕಿಱಿವೋದಳ್|| ೪ ||
ಪದ್ಯ-೪:ಪದವಿಭಾಗ-ಅರ್ಥ:ಕೊಳದ ತಡಿವಿಡಿದು (ದಡವನ್ನೇ ಅನುಸರಿಸಿ) ಬೆಳೆದ ಎಳದಳಿರ್ಗಳ (ಎಳೆಯ ಚಿಗುರನ್ನುಳ್ಳ) ಅಶೋಕೆಗಳ ಲತೆಯ ಮನೆಗಳೊಳೆ (ಲತೆಗಳ ಮಂಟಪಗಳಲ್ಲಿಯೇ) ತೆಱಂಬೊಳೆವ ಅಲರ (ತರಂ-ತರತರವಾಗಿ ಹೊಳೆವ ಹೂವುಗಳ) ಬಸದೆ (ಬಳಿಯೆ) ಸುೞಿವ ಅಳಿಗಳ (ಮುತ್ತುವ ದುಂಬಿಗಳ) ಬಳಗದ ದನಿಗೆ ಕಿನಿಸಿ ಕಿಂಕಿಱಿವೋದಳ್ (ಕೆರಳಿ ಕರಿಕಿರಿಗೊಂಡಳು)
ಪದ್ಯ-೪:ಅರ್ಥ:ವಿರಹದಿಂದ ಸಂತಾಪಗೊಂಡ ಸುಭದ್ರೆಯು, ಸರೋವರದ ದಡವನ್ನೇ ಅನುಸರಿಸಿ ಬೆಳೆದ ಎಳೆಯ ಚಿಗುರನ್ನುಳ್ಳ ಅಶೋಕ ಮರಗಳ ಲತೆಗಳ ಮಂಟಪಗಳಲ್ಲಿಯೇ ತರಂ-ತರತರವಾಗಿ ಹೊಳೆವ ಹೂವುಗಳ ಬಳಿಯೆ ಮುತ್ತಿ ಸುತ್ತಾಡುವ ದುಂಬಿಗಳ ಧ್ವನಿಗೆ ಕೆರಳಿ ಕರಿಕಿರಿಗೊಂಡಳು.
ಕಂ||ಸುರಯಿಯ ಬಿರಿಮುಗುಳ್ಗಳ ಪೊರೆ
ವೊರೆಯೊಳ್ ಪೊರೆವೊರಕನಲ್ಲದಲ್ಲುಗುವ ರಜಂ|
ಬೊರೆದು ಪರಕಲಿಸಿದಳಿಕುಳ
ಪರಿಕರಮುಮನತನುಶಿಖಿಯ ಕಿಡಿಗಳೆ ಗೆತ್ತಳ್|| ೫||
ಪದ್ಯ-೫:ಪದವಿಭಾಗ-ಅರ್ಥ:ಸುರಯಿಯ ಬಿರಿಮುಗುಳ್ಗಳ (ಸುರಗಿಯ ಹೂವಿನ ಅರಳಿದ ಮೊಗ್ಗುಗಳ) ಪೊರೆವೊರೆಯೊಳ್ (ಹೂವಿನ ಪದರಪದರದಲ್ಲಿ) ಪೊರೆವೊರಕನಲ್ಲದೆ (ಹೊರೆ/ ಭಾರಹೊರುವಿಕೆ ಇಲ್ಲದೆ ) ಅಲ್ಲುಗುವ (ಅಲ್ಲಿ ಉಗುವ-ಉದುರುವ)ರಜಂ ಬೊರೆದು (ಪರಾಗದಿಂದ ಲೇಪಿಸಲ್ಪಟ್ಟು) ಪರಕಲಿಸಿದ (ಚೆದುರಿದ) ಅಳಿಕುಳ ಪರಿಕರಮುಂ ( ದುಂಬಿಗಳ ಸಮೂಹದ ಪರಿವಾರವನ್ನು) ಅತನುಶಿಖಿಯ(ಮನತನು-ಮನಸ್ಸಿನ ದೇಹದ ಮನ್ಮಥನ, ಶಿಖಿ- ಬೆಂಕಿಯ,) ಕಿಡಿಗಳೆ ಗೆತ್ತಳ್.(ಕಾಮಾಗ್ನಿಯ ಕಿಡಿಗಳೆಂದೇ (ಸುಭದ್ರೆಯು) ಭಾವಿಸಿದಳು.)
ಪದ್ಯ-೫:ಅರ್ಥ:ಸುರಗಿಯ ಹೂವಿನ ಅರಳಿದ ಮೊಗ್ಗುಗಳ ಒತ್ತಾದ ಪದರಗಳಲ್ಲಿ ಲಘುವಾಗಿ ಹೊರಳಾಡಿ ಅಲ್ಲಿ ಉದುರುವ ಪರಾಗದಿಂದ ಲೇಪಿಸಲ್ಪಟ್ಟು ಹಾರಾಡುತ್ತಿರುವ ದುಂಬಿಗಳ ಸಮೂಹದ ಪರಿವಾರವನ್ನು ಕೂಡ ಕಾಮಾಗ್ನಿಯ ಕಿಡಿಗಳೆಂದೇ (ಸುಭದ್ರೆಯು) ಭಾವಿಸಿದಳು.
ವ|| ಅಂತು ನನೆಯ ಕೊನೆಯ ತಳಿರ ನಿಱದಳಿರ ಮುಗುಳ ಬಿರಿಮುಗುಳ ಮಿಡಿಯ ಕಿಱುಮಿಡಿಯ ಬಲ್ಮಿಡಿಗಳೊಳೆಱಗಿ ತುಱುಗಿದ ಬನಮಂ ಪೊಕ್ಕಲ್ಲಿಯುಂ ಮೆಯ್ಯನಾಱಸಲಾಱದೆ ಪೂತ ಚೂತಲತೆಗಳೊಳ್ ತಳ್ಪೊಯ್ದ ಪೊಸ ಮುತ್ತಿನ ಬಾಸಣಿಗೆಯೊಳ್ ಬಾಸಣಿಸಿದ ಬಿರಿ ಮುಗುಳ್ಗಳೊಳ್ ತುಱುಗಿದದಿರ್ಮುತ್ತೆಯ ಸುತ್ತಿನೊಳೆಸೆದುಪಾಶ್ರಯಂಬಡೆದ ಸಾಂದ್ರ ಚಂದ್ರಕಾಂತದ ಶಿಲೆಯನೊಳಗುಮಾಡಿ-
ವಚನ:ಪದವಿಭಾಗ-ಅರ್ಥ: ಅಂತು ನನೆಯ ಕೊನೆಯ ತಳಿರ(ಹಾಗೆ ಹೂವಿನ, ಕೊನೆ ಎಳೆರೆಂಬೆಗಳ) ನಿಱಿದಳಿರ ಮುಗುಳ (ನಿರಿಯಾಗಿರುವ ಚಿಗುರುಗಳ ಮೊಗ್ಗಿನ) ಬಿರಿಮುಗುಳ ಮಿಡಿಯ ಕಿಱುಮಿಡಿಯ (ಬಿರಿದ ಮೊಗ್ಗಿನ, ಮಿಡಿಯ ಹೀಚುಮಿಡಿಯ) ಬಲ್ಮಿಡಿಗಳೊಳು ಎಱಗಿ ತುಱುಗಿದ ಬನಮಂ ಪೊಕ್ಕು(ದೊಡ್ಡ ಮಿಡಿಗಳಿಮದ ಬಾರದಿಂದ ಬಾಗಿ ಕಿಕ್ಕಿರಿದ ವನವನ್ನು ಪ್ರವೇಶಿಸಿ) ಅಲ್ಲಿಯುಂ ಮೆಯ್ಯನು ಆಱಸಲಾಱದೆ (ಅಲ್ಲಿಯೂ ಶರೀರತಾಪವನ್ನು ಆರಿಸಲಾರದೆ) ಪೂತ ಚೂತಲತೆಗಳೊಳ್ ತಳ್ಪೊಯ್ದ (ಹೂವನ್ನು ಬಿಟ್ಟಿರುವ ಮಾವಿನಮರದಲ್ಲಿನ ಬಳ್ಳಿಗಳಿಗೆ ಹತ್ತಿದ) ಪೊಸ ಮುತ್ತಿನ ಬಾಸಣಿಗೆಯೊಳ್ ಬಾಸಣಿಸಿದ ಬಿರಿ ಮುಗುಳ್ಗಳೊಳ್ (ಹೊಸ ಮುತ್ತಿನ ಹೊದಿಕೆಯಲ್ಲಿ ಮುಚ್ಚಿದ ಬಿರಿದ ಮೊಗ್ಗುಗಳಲ್ಲಿ) ತುಱುಗಿದ ಅದಿರ್ಮುತ್ತೆಯ ಸುತ್ತಿನೊಳು ಎಸೆದು (ಸೇರಿಕೊಂಡಿರುವ ಅದಿರ್ಮುತ್ತೆಯ ಹೂವಿನ ಸುತ್ತಿನಲ್ಲಿ ತೊರುವ) ಉಪಾಶ್ರಯಂಬಡೆದ ಸಾಂದ್ರ ಚಂದ್ರಕಾಂತದ ಶಿಲೆಯನು ಒಳಗುಮಾಡಿ-
ವಚನ:ಅರ್ಥ: ಹಾಗೆ ಹೂವಿನ, ಕೊನೆ ಎಳೆರೆಂಬೆಗಳ, ಚಿಗುರಿನ ನಿರಿಯಾಗಿರುವ ಚಿಗುರುಗಳ ಮೊಗ್ಗಿನ, ಭಾರದಿಂದ ಬಗ್ಗಿ ಕಿಕ್ಕಿರಿದ ವನವನ್ನು ಪ್ರವೇಶಿಸಿ ಅಲ್ಲಿಯೂ ಶರೀರತಾಪವನ್ನು ಆರಿಸಲಾರದೆ ಹೂವನ್ನು ಬಿಟ್ಟಿರುವ ಮಾವಿನಮರದಲ್ಲಿನ ಬಳ್ಳಿಗಳಿಗೆ ಹತ್ತಿದ ಹೊಸ ಮುತ್ತಿನ ಹೊದಿಕೆಯಲ್ಲಿ ಮುಚ್ಚಿದ ಬಿರಿದ ಮೊಗ್ಗುಗಳಲ್ಲಿ ಸೇರಿಕೊಂಡಿರುವ ಅದಿರ್ಮುತ್ತೆಯ ಹೂವಿನ ಸುತ್ತಿನಲ್ಲಿ ತೋರುವ, ಸ್ಥಾನಪಡೆದ ಒತ್ತಾಗಿರುವ ಚಂದ್ರಕಾಂತ ಶಿಲೆಯನ್ನು ಒಳಗೊಂಡಿರುವ- ಒಂದು ಮಾಧವೀ ಮಂಟಪವನ್ನು ಕಂಡಳು
ಮ|| ಇದಿರೊಳ್ ಕಟ್ಟಿದ ತೋರಣಂ ನಿಱಿದಳಿರ್ ಪೂಗೊಂಚಲಂದೆತ್ತಮೆ
ತ್ತಿದ ಪೂಮಾಲೆ ಪರಾಗ ರಾಗಮುದಿತಾಶಾ ಭಾ ಸಮುದ್ಯನ್ಮಧೂ|
ನ್ಮದ ಭೃಂಗಧ್ವನಿ ಮಂಗಳಧ್ವನಿಯೆನಲ್ ಸಾಲ್ವನ್ನೆಗಂ ತಾನೆ ತ
ಕ್ಕುದು ಕಾಮಂಗೆ ವಿವಾಹಮಂಟಪಮೆನಲ್ಕಾ ಮಾದವೀಮಂಟಪಂ|| ೬||
ಪದ್ಯ-೬:ಪದವಿಭಾಗ-ಅರ್ಥ:(ಮಾದವೀ ಮಂಟಪದ) ಇದಿರೊಳ್ ಕಟ್ಟಿದ ತೋರಣಂ ನಿಱಿದಳಿರ್ (ನಿರಿಗೆಯ ಚಿಗುರು) ಪೂಗೊಂಚಲ್ ಅಂದು ಎತ್ತಂ ಎತ್ತಿದ (ಎಲ್ಲೆಲ್ಲಿಯೂ ಎತ್ತಿ ಕಟ್ಟಿದ) ಪೂಮಾಲೆ ಪರಾಗ ರಾಗಂ (ಕೆಂಪುಬಣ್ಣದಿಂದ) ಮುದಿತ ಆಶಾ ಭಾಸಂ ಉದ್ಯತ್ ಮಧೂನ್ಮದ ಭೃಂಗಧ್ವನಿ ಮಂಗಳಧ್ವನಿಯೆನಲ್(ಆನಂದತುಂಬಿದ ದಿಕ್ಕುಗಳ ಪ್ರಕಾಶ, ಮಧುಮತ್ತವಾದ ದುಂಬಿಗಳ ಧ್ವನಿಯೇ ಮಂಗಳವಾದ್ಯ ಎನ್ನುವಂತೆ) ಸಾಲ್ವನ್ನೆಗಂ ತಾನೆ ತಕ್ಕುದು(ತಾನು ಯೋಗ್ಯವಾದುದು ಎನ್ನುವಂತೆ) ಕಾಮಂಗೆ ವಿವಾಹಮಂಟಪಮೆನಲ್ಕಾ ಮಾದವೀಮಂಟಪಂ(ಆ ಮಾಧವೀ ಮಂಟಪವು ಇದೇ ಮದನನ ವಿವಾಹ ಮಂಟಪವಾಗುವುದಕ್ಕೆ ಯೋಗ್ಯವಾದುದು ಎನ್ನುವಂತೆ ತಕ್ಕದಾಗಿದ್ದಿತು)
ಪದ್ಯ-೬:ಅರ್ಥ: ಮಾದವೀ ಮಂಟಪದ : ಇದಿರಿನಲ್ಲಿ ಕಟ್ಟಿದ ತೋರಣದ ಚಿಗುರು ಕಾಣುತ್ತಿರಲು ಹೂಗೊಂಚಲು, ಎಲ್ಲೆಲ್ಲಿಯೂ ಎತ್ತಿ ಕಟ್ಟಿದ ಹೂವಿನ ಮಾಲೆಯಂತಿರಲು ಹೂವಿನ ಪರಾಗದ ಕೆಂಪುಬಣ್ಣದಿಂದ ಆನಂದತುಂಬಿದ ದಿಕ್ಕುಗಳ ಪ್ರಕಾಶ, ಹಾಗಿರಲು ಮಧುಮತ್ತವಾದ ದುಂಬಿಗಳ ಧ್ವನಿಯೇ ಮಂಗಳವಾದ್ಯ ಎನ್ನುವಂತೆ ಆ ಮಾಧವೀ ಮಂಟಪವು ಇದೇ ಮದನನ ವಿವಾಹ ಮಂಟಪವಾಗುವುದಕ್ಕೆ ಯೋಗ್ಯವಾದುದು ಎನ್ನುವಂತೆ ತಕ್ಕದಾಗಿದ್ದಿತು
ವ|| ಆ ಮಾಧವೀ ಲತಾಮಂಟಪಮಂ ಕಾಮನ ಡಾಮರಕ್ಕಳ್ಕಿ ವನದುರ್ಗಂಬುಗುವಂತೆ ಪೊಕ್ಕದರೊಳಗೆ ಕಪ್ಪುರವಳುಕಿನ ಜಗಲಿಯನಗಲಿತಾಗಿ ಸಮೆದು ಚಂದನದೆಳದಳಿರ್ಗಳಂ ಪಾಸಿ ಮಲ್ಲಿಗೆಯಲರ್ಗಳಂ ಪೂವಾಸಿ ಮೃಣಾಳನಾಳದೊಳ್ ಸಮೆದ ಸರಿಗೆಗಂಕಣಂಗಳುಮಂ ಯವ ಕಳಿಕೆಗಳೊಳ್ ಸಮೆದ ಕಟಿಸೂತ್ರಮುಮಂ ಸಾರ ಕರ್ಪೂರದೊಳ್ ವಿರಚಿಸಿದ ಹಾರಮುಮಂ ಕರಿಯ ನೆಯ್ದಿಲ ಕಾವಿನೊಳ್ ಭಾವಿಸಿದ ನೂಪುರಮುಮನದಱ ಬಿರಿಮುಗುಳ್ಗಳೊಳ್ ಚಿತ್ರಿಸಿದ ಕರ್ಣಪೂರಮುಮಂ ಬಿಳಿಯ ತಾವರೆಯೆಳಗಾವಿನಸಿಯ ನೂಲೊಳ್ ಕೋದ ತೋರ ಮಲ್ಲಿಗೆಯ ಬಿರಿಮುಗುಳ ಸರಿಗೆಯುಮಂ ಕಪ್ಪುರವಳುಕಿನ ಲಂಗಣಮುಮಂ ತೊಟ್ಟು ಕುಳಿರ್ಕೋೞ್ಪ ಚಂದನರಸಮನೆರ್ದೆಯೊಳಂ ಮೆಯ್ಯೊಳಂ ತಳ್ಕಿಱಿದು ಕರಿಯ ಕರ್ಬಿನ ಕಾವಿನೆಳ ಮೈಂದವಾೞೆಯೆಲೆಯೆ ಬಿಜ್ಜಣಿಗೆಗಳಿಂ ಬೀಸಲ್ವೇೞ್ದು ತಣ್ಬುಗೆಯ್ಯೆ ಮನದ ಮೆಯ್ಯ ಸಂತಾಪದೊಳ್ ಬಿಸುಸುಯ್ದು ಬಿಸುಪಿನೊಳನಿತುಮಂ ಗೆಲ್ದು-
ವಚನ:ಪದವಿಭಾಗ-ಅರ್ಥ:ಆ ಮಾಧವೀ ಲತಾಮಂಟಪಮಂ ಕಾಮನ ಡಾಮರಕ್ಕೆ ಅಳ್ಕಿ ವನದುರ್ಗಂ ಬುಗುವಂತೆ ಪೊಕ್ಕದರೊಳಗೆ (ಕಾಮನ ಕೋಟಲೆಗೆ ಹೆದರಿ ಕಾಡಿನ ಕೋಟೆಯನ್ನು ಹೊಗುವ ಹಾಗೆ ಆ ಮಾಧವೀ ಲತಾ ಮಂಟಪವನ್ನು ಪ್ರವೇಶಿಸಿ) ಕಪ್ಪುರವ ಅಳುಕಿನ ಜಗಲಿಯನ ಅಗಲಿತಾಗಿ ಸಮೆದು ಚಂದನದೆ ಎಳದಳಿರ್ಗಳಂ (ಎಳೆ ತಳಿರ್ಗಳಂ) ಪಾಸಿ ಮಲ್ಲಿಗೆಯಲರ್ಗಳಂ ಪೂವಾಸಿ (ಅದರಲ್ಲಿ ಕರ್ಪೂರದ ಹಳುಕಿನ ಜಗುಲಿಯನ್ನು ವಿಸ್ತಾರವಾಗಿ ನಿರ್ಮಿಸಿ, ಶ್ರೀಗಂಧದ ಎಳೆಯ ಚಿಗುರುಗಳನ್ನು ಹಾಸಿ. ಮಲ್ಲಿಗೆಯ ಹೂವುಗಳನ್ನು ಹರಡಿ) ಮೃಣಾಳನಾಳದೊಳ್ ಸಮೆದ ಸರಿಗೆಗಂಕಣಂಗಳುಮಂ (ತಾವರೆಯ ದಂಟಿನಿಂದ ಮಾಡಿದ ತಂತಿಬಳೆಗಳನ್ನೂ) ಯವ (ಗೋದಿಯ-ಮೊಳಕೆ->)ಕಳಿಕೆಗಳೊಳ್ ಸಮೆದ ಕಟಿಸೂತ್ರಮುಮಂ (ಗೋದುವೆಯ ಮೊಳಕೆಗಳಿಂದ ಮಾಡಿದ ಉಡುದಾರವನ್ನೂ) ಸಾರ ಕರ್ಪೂರದೊಳ್ ವಿರಚಿಸಿದ ಹಾರಮುಮಂ (ಕರ್ಪೂರದ ತಿರುಳಿನಿಂದ ರಚಿಸಿದ ಹಾರವನ್ನೂ) ಕರಿಯ ನೆಯ್ದಿಲ ಕಾವಿನೊಳ್ ಭಾವಿಸಿದ ನೂಪುರಮುಮನು (ಕನ್ನೆ ದಿಲೆಯ ಕಾವಿನಲ್ಲಿ ಮೇಳಿಸಿದ ಕಾಲಂದಿಗೆಯನ್ನೂ -) ಅದಱ ಬಿರಿಮುಗುಳ್ಗಳೊಳ್ ಚಿತ್ರಿಸಿದ ಕರ್ಣಪೂರಮುಮಂ (ಅದರ ಬಿರಿದ (ಅರಳಿದ) ಮೊಗ್ಗುಗಳಲ್ಲಿ ಚಿತ್ರಿಸಿದ ಕಿವಿಯ ಅಲಂಕಾರವನ್ನೂ) ಬಿಳಿಯ ತಾವರೆಯ ಎಳಗಾವಿನಸಿಯ (ಎಳೆಯದಂಟಿನ) ನೂಲೊಳ್ ಕೋದ ತೋರ ಮಲ್ಲಿಗೆಯ ಬಿರಿಮುಗುಳ ಸರಿಗೆಯುಮಂ(ಬಿರಿ ಮುಗುಳಿನ ಸರಿಗೆಯನ್ನೂ ) ಕಪ್ಪುರವಳುಕಿನ ಲಂಗಣಮುಮಂ ತೊಟ್ಟು (ಕರ್ಪೂರದ ಹಳುಕಿನ ಹಾರವನ್ನೂ ತೊಟ್ಟು), ಕುಳಿರ್ಕೋೞ್ಪ (ತಣ್ಣಗಿರುವ) ಚಂದನರಸಮನು ಎರ್ದೆಯೊಳಂ ಮೆಯ್ಯೊಳಂ ತಳ್ಕಿಱಿದು (ಮೈಯಲ್ಲೆಲ್ಲ ಲೇಪಿಸಿಕೊಂಡು) ಕರಿಯ ಕರ್ಬಿನ ಕಾವಿನ ಎಳ ಮೈಂದವಾೞೆಯೆಲೆಯೆ (ಎಳೆಯ ಮಹೇಂದ್ರ ಬಾಳೆಯ ಎಲೆಯ) ಬಿಜ್ಜಣಿಗೆಗಳಿಂ ಬೀಸಲ್ವೇೞ್ದು ( ಬೀಸಹೇಳಿ) ತಣ್ಬುಗೆಯ್ಯೆ (ತಂಪನ್ನುಂಟುಮಾಡಲು) ಮನದ ಮೆಯ್ಯ ಸಂತಾಪದೊಳ್ ಬಿಸುಸುಯ್ದು, ಬಿಸುಪಿನೊಳನಿತುಮಂ ಗೆಲ್ದು (ಆ ಶಾಖದಲ್ಲಿ ಅಷ್ಟು ಶೈತ್ಯೋಪಕರಣಗಳನ್ನು ಮೀರಿಸಿ)-
ವಚನ:ಅರ್ಥ:ಸುಭದ್ರೆಯು ಕಾಮನ ಕೋಟಲೆಗೆ ಹೆದರಿ ಕಾಡಿನ ಕೋಟೆಯನ್ನು ಹೊಗುವ ಹಾಗೆ ಆ ಮಾಧವೀ ಲತಾ ಮಂಟಪವನ್ನು ಪ್ರವೇಶಿಸಿ ಅದರಲ್ಲಿ ಕರ್ಪೂರದ ಹಳುಕಿನ ಜಗುಲಿಯನ್ನು ವಿಸ್ತಾರವಾಗಿ ನಿರ್ಮಿಸಿ, ಶ್ರೀಗಂಧದ ಎಳೆಯ ಚಿಗುರುಗಳನ್ನು ಹಾಸಿ, ಮಲ್ಲಿಗೆಯ ಹೂವುಗಳನ್ನು ಹರಡಿದಳು. ತಾವರೆಯ ದಂಟಿನಿಂದ ಮಾಡಿದ ತಂತಿಬಳೆಗಳನ್ನೂ ಗೋದುವೆಯ ಮೊಳಕೆಗಳಿಂದ ಮಾಡಿದ ಉಡುದಾರವನ್ನೂ ಕರ್ಪೂರದ ತಿರುಳಿನಿಂದ ರಚಿಸಿದ ಹಾರವನ್ನೂ ಕನ್ನೆ ದಿಲೆಯ ಕಾವಿನಲ್ಲಿ ಮೇಳಿಸಿದ ಕಾಲಂದಿಗೆಯನ್ನೂ (ಧರಿಸಿದಳು.) ಅದರ ಬಿರಿದ (ಅರಳಿದ) ಮೊಗ್ಗುಗಳಲ್ಲಿ ಚಿತ್ರಿಸಿದ ಕಿವಿಯ ಅಲಂಕಾರವನ್ನೂ, ಬಿಳಿಯ ತಾವರೆಯ ಎಳೆಯ ದಂಟಿನ ನೂಲಿನಲ್ಲಿ ಪೋಣಿಸಿದ ದಪ್ಪ ಮಲ್ಲಿಗೆಯ ಬಿರಿ ಮುಗುಳಿನ ಸರಿಗೆಯನ್ನೂ ಕರ್ಪೂರದ ಹಳುಕಿನ ಹಾರವನ್ನೂ ತೊಟ್ಟಳು. ವಿಶೇಷ ತಂಪಾಗಿರುವ ಶ್ರೀಗಂಧದ ರಸವನ್ನು ಎದೆಯಲ್ಲಿ ಮೈಯಲ್ಲೆಲ್ಲ ಲೇಪಿಸಿಕೊಂಡು, ಕರಿಯ ಕಬ್ಬಿನ ಕಾವಿನ ಎಳೆಯ ಮಹೇಂದ್ರ ಬಾಳೆಯ ಎಲೆಯ ಬೀಸಣಿಗೆಗಳಿಂದ ಬೀಸಹೇಳಿ ತಂಪನ್ನುಂಟುಮಾಡಲು, ಮನಸ್ಸಿನ ಮತ್ತು ದೇಹದ ಸಂತಾಪದಿಂದ ನಿಟ್ಟುಸಿರನ್ನು ಬಿಟ್ಟು ಆ ಶಾಖದಲ್ಲಿ ಅಷ್ಟು ಶೈತ್ಯೋಪಕರಣಗಳನ್ನು ಮೀರಿಸಿ-
ಉ|| ಕೆಂದಳಿರ್ವಾಸು ಸೇಕದ ತೊವಲ್ಗೆಣೆಯಾಯ್ತು ಮೃಣಾಳ ನಾಳವೊಂ
ದೊಂದಡೆವೊತ್ತಿ ಪತ್ತಿದುವು ಸೂಸುವ ಶೀತಳವಾರಿ ಮೈಯ್ಯನೆ|
ಯ್ತಂದಿರದೆತ್ತ ಬತ್ತಿದುವು ತಚ್ಛಶಿಕಾಂತಶಿಳಾತಳಂ ಸಿಡಿ
ಲ್ದಂದೊಡೆದತ್ತಿದೇಂ ಬಿಸಿದೊ ಬೇಟದ ಬೆಂಕೆ ಮೃಗಾಂಕವಕ್ತ್ರೆಯಾ|| ೭ ||
ಪದ್ಯ-೭:ಪದವಿಭಾಗ-ಅರ್ಥ:ಕೆಂದಳಿರ್ವಾಸು (ಕೆಂಪು ಚಿಗುರಿನಿಂದ ಮಾಡಿದ ಹಾಸಿಗೆ) ಸೇಕದ ತೊವಲ್ಗೆಣೆಯಾಯ್ತು (ನೀರು ಚಿಮುಕಿಸಿದ ಚಿಗುರಿಗೆ ಸಮಾನವಾಯಿತು.) ಮೃಣಾಳ ನಾಳ ವೊಂದೊಂದು ಅಡೆವೊತ್ತಿ ಪತ್ತಿದುವು (ತಳಹತ್ತಿಕೊಂಡು ಮೈಗೆ ಅಂಟಿಕೊಂಡವು) ಸೂಸುವ ಶೀತಳವಾರಿ (ತಂಪುನೀರು) ಮೈಯ್ಯನು ಎಯ್ತಂದು ಇರದೆತ್ತ ಬತ್ತಿದುವು (ಹರಿದು ಎಲ್ಲಿಯೋ ಬತ್ತಿಹೋಯಿತು),ತತ್ ಶಶಿಕಾಂತ ಶಿಳಾತಳಂ (ಚಂದ್ರಕಾಂತಶಿಲೆಯಕಲ್ಲು) ಸಿಡಿಲ್ದು ಒಡೆದತ್ತಿದೇಂ(ಸಿಡಿದು ಇರದೆ ಒಡೆದುಹೋಯಿತು. ) ಬಿಸಿದೊ ಬೇಟದ ಬೆಂಕೆ (ಕಾಮದ ಬೆಂಕಿ) ಮೃಗಾಂಕವಕ್ತ್ರೆಯಾ (ಮೃಗಾಂಕ- ಚಂದ್ರನಂತೆ, ವಕ್ತ್ರೆಯಾ- ಮುಖದವಳು)
ಪದ್ಯ-೭:ಅರ್ಥ: ಆ ಕೆಂಪು ಚಿಗುರಿನಿಂದ ಮಾಡಿದ ಹಾಸಿಗೆಯು ಬಿಸಿ ನೀರು ಚಿಮುಕಿಸಿದ ಚಿಗುರಿಗೆ ಸಮಾನವಾಯಿತು. ತಾವರೆಯ ದಂಟೊಂದೊಂದು ತಳಹತ್ತಿಕೊಂಡು ಮೈಗೆ ಅಂಟಿಕೊಂಡವು. ಮೇಲೆ ಚೆಲ್ಲಿದ ತಣ್ಣಗಿರುವ ನೀರು ಹರಿದು ಎಲ್ಲಿಯೋ ಬತ್ತಿಹೋಯಿತು. ಆ ಚಂದ್ರಕಾಂತ ಶಿಲಾತಳವು ಸಿಡಿದು ಇರದೆ ಒಡೆದುಹೋಯಿತು. ಆ ಚಂದ್ರವದನೆ ಸುಭದ್ರೆಯ ವಿರಹಾಗ್ನಿಯಿದು ಎಷ್ಟು ಬಿಸಿಯಾದುದೋ?
ಚಂ|| ಅರಿಗನ ಬೇಟದೊಂದೆ ಪೊಸಬೇಟದ ಕೇಸುರಿಯಿಂದಮೆಯ್ದೆ ದ
ಳ್ಳುರಿ ನೆಗೆದಂದು ಕೆಂದಳಿರ ಪಾಸುಗಳಿಂ ಕುಳಿರ್ವಾಲಿನೀರ್ಗಳಿಂ|
ತುರಿಪದೆ ಸೂಸುತುಂ ಕೆಳದಿಯರ್ ನದಿಪುತ್ತಿರೆ ನೋಡೆ ದಾಹಮೋ
ತ್ತರಿಸಿದುದೊಂದು ಪೊನ್ನ ಸಲಗಿರ್ಪವೊಲಿರ್ದುದು ಮೆಯ್ ಸುಭದ್ರೆಯಾ|| ೮ ||
ಪದ್ಯ-೮:ಪದವಿಭಾಗ-ಅರ್ಥ:ಅರಿಗನ ಬೇಟದ ಒಂದೆ ಪೊಸಬೇಟದ(ಪ್ರೇಮದ ಒಂದು ಹೊಸ ಅನುಭವದ) ಕೇಸುರಿಯಿಂದಮೆಯ್ದೆ (ಕೇಸು ಉರಿ)ದಳ್ಳುರಿ ನೆಗೆದಂದು (ಚಿಮ್ಮಿದಾಗ) ಕೆಂದಳಿರ ಪಾಸುಗಳಿಂ (ಕೆಂಪು ಚಿಗುರಿನ ಹಾಸುಗಳಿಂದಲೂ) ಕುಳಿರ್ವ (ತಂಪು) ಆಲಿನೀರ್ಗಳಿಂ (ಹಿಮದ ನೀರಿನಿಂದ)ತುರಿಪದೆ ಸೂಸುತುಂ (ತ್ವರಿಪ- ಬೇಗನೆ ಚಿಮುಕಿಸುತ್ತಾ) ಕೆಳದಿಯರ್ ನದಿಪುತ್ತಿರೆ (ನಂದಿಸುತ್ತಿರಲು) ನೋಡೆ ದಾಹಂ ಒತ್ತರಿಸಿದುದು (ಉರಿ ಹೆಚ್ಚಿತು) ಒಂದು ಪೊನ್ನ (ಚಿನ್ನದ) ಸಲಗಿರ್ಪವೊಲ್ ಇರ್ದುದು (ಸಲಾಕೆಯ ಹಾಗಿದ್ದಿತು.) ಮೆಯ್ (ದೇಹ) ಸುಭದ್ರೆಯಾ.
ಪದ್ಯ-೯:ಅರ್ಥ: ಅರ್ಜುನನ ಮೇಲಿನ ಪ್ರೇಮದ ಒಂದು ಹೊಸ ಅನುಭವದ ಒಂದು ಕೆಂಪುಜ್ವಾಲೆಯು ಚಿಮ್ಮಿದಾಗ ಅವಳ ಸಖಿಯರು ಕೆಂಪು ಚಿಗುರಿನ ಹಾಸುಗಳಿಂದಲೂ ತಂಪಾಗಿರುವ ಹಿಮದ ನೀರಿನಿಂದಲೂ ಬೇಗನೆ ಚಿಮುಕಿಸುತ್ತಾ ನಂದಿಸುತ್ತಿರಲು, ಎಷ್ಟು ಪ್ರಯತ್ನಿಸಿದರೂ ಎಲ್ಲರೂ ನೋಡುತ್ತಿರುವ ಹಾಗೆಯೇ ಆ ಉರಿಯು ಹೆಚ್ಚಿತು. ಸುಭದ್ರೆಯ ಶರೀರವು ಕಾಸಿದ ಚಿನ್ನದ (ಅಪರಂಜಿಯ) ಸಲಾಕೆಯ ಹಾಗಿದ್ದಿತು.
ಚಂ||ಮದನ ದವಾನಲಾರ್ಚಿ ತನುವಂ ಸುಡೆ ತಳ್ತೆಮೆಯೊಳ್ ಪಳಂಚಿ ಬೀ
ಗಿದ ಬೆಳರ್ವಾಯೊಳುಚ್ಚಳಿಸಿ ತುಂಗ ಕುಚಂಗಳ ಪೊಯ್ಲೆಳೆತ್ತಲುಂ|
ಕೆದಱ ವಳಿತ್ರಯಂಗಳ ತೊಡರ್ಪುಗಳೊಳ್ ತೊಡರ್ದೊಯ್ಯನೊಯ್ಯನೆ
ಯ್ದಿದುವು ವಿಲೋಲನೇತ್ರ ಜಲಬಿಂದುಗಳಾಕೆಯ ನಿಮ್ನನಾಭಿಯಂ|| ೯ ||
ಪದ್ಯ-೯:ಪದವಿಭಾಗ-ಅರ್ಥ:ಮದನ ದವಾನಲಾರ್ಚಿ (ಕಾಮವೆಂಬ ದಾವ+ಅನಲ - ಕಾಡುಗಿಚ್ಚಿನ ಜ್ವಾಲೆಯು) ತನುವಂ ಸುಡೆ (ದೇಹವನ್ನು ಸುಡಲು) ತಳ್ತೆಮೆಯೊಳ್ (ತಳ್ತ ಎವೆ-ಮುಚ್ಚಿರುವ ರೆಪ್ಪೆಗಳಲ್ಲಿ) ಪಳಂಚಿ (ತಾಗಿ) ಬೀಗಿದ ಬೆಳರ್ವಾಯೊಳು ಉಚ್ಚಳಿಸಿ (ಬಿಳಿಚಿಕೊಂಡಿರುವ ತುಟಿಯಲ್ಲಿ ಚಿಮ್ಮಿ) ತುಂಗ ಕುಚಂಗಳ ಪೊಯ್ಲೆಳು ಎತ್ತಲುಂ (ಎತ್ತರದ ಸ್ತನಗಳ ಬಡಿತದಿಂದ ಎಲ್ಲ ಕಡೆಯೂ) ಕೆದಱ (ಚೆದುರಿ) ವಳಿತ್ರಯಂಗಳ ತೊಡರ್ಪುಗಳೊಳ್ (ತ್ರಿವಳಿಗಳ ತೊಡಕುಗಳಲ್ಲಿ) ತೊಡರ್ದು ಒಯ್ಯನೊಯ್ಯನೆ ಎಯ್ದಿದುವು (ಸೇರಿಕೊಂಡು ನಿಧಾನವಾಗಿ ಸೇರಿದುವು->) ವಿಲೋಲನೇತ್ರ ಜಲಬಿಂದುಗಳು(ಅತಿ ಆಸಕ್ತ ಕಣ್ಣೀರಿನ ಹನಗಳು) ಆಕೆಯ ನಿಮ್ನನಾಭಿಯಂ (ಕೆಳಗಿನ ಹೊಕ್ಕಳನ್ನು ಸೇರಿದವು)
ಪದ್ಯ-೯:ಅರ್ಥ: ಕಾಮವೆಂಬ ಕಾಡುಗಿಚ್ಚಿನ ಜ್ವಾಲೆಯು ದೇಹವನ್ನು ಸುಡಲು ಸುಭದ್ರೆಯ ಮುಚ್ಚಿರುವ ರೆಪ್ಪೆಗಳಲ್ಲಿ ತಗುಲಿ ಬಿಳಿಚಿಕೊಂಡಿರುವ ತುಟಿಯಲ್ಲಿ ಚಿಮ್ಮಿ ನೆಗೆದು ಎತ್ತರದ ಸ್ತನಗಳ ಬಡಿತದಿಂದ ಎಲ್ಲ ಕಡೆಯೂ ಚೆದುರಿ ತ್ರಿವಳಿಗಳ ತೊಡಕುಗಳಲ್ಲಿ ಸೇರಿಕೊಂಡು ನಿಧಾನವಾಗಿ ಆಕೆಯ ಕೆಳಗಿನ ಆಳ ಹೊಕ್ಕಳನ್ನು ಸೇರಿದವು.
ಚಂ||ನಗೆಮೊಗಮಂ ಪೊದಳ್ದಲರ್ದ ತಾವರೆಯೆಂಬ ವಿಮೋಹದಿಂ ಮೊಗಂ
ಬುಗಲೊಡಮಾ ತಳೋದರಿಯ ಸುಯ್ಗಳ ಬೆಂಕೆಯೊಳಿಚ್ಚೆಗೆಟ್ಟು ತೊ|
ಟ್ಟಗೆ ಕೊಳೆ ಮುಂದೆ ಬಿೞ್ದು ಮಗುೞು ಸತಿಯಿಕ್ಕಿದ ಕಣ್ಣ ನೀರ ಧಾ
ರೆಗಳೊಳೆ ನಾಂದೆಲರ್ಚಿ ಪೊದಳ್ದೊರ್ಮೆಯೆ ಪಾಱಿದುವುನ್ಮದಾಳಿಗಳ್|| ೧೦ ||
ಪದ್ಯ-೧೦:ಪದವಿಭಾಗ-ಅರ್ಥ:ನಗೆಮೊಗಮಂ ಪೊದಳ್ದು ಅಲರ್ದ ತಾವರೆಯೆಂಬ ವಿಮೋಹದಿಂ (ನಗೆ ಮುಖವನ್ನು ಚೆನ್ನಾಗಿ ಅರಳಿದ ತಾವರೆಯೆಂಬ ಭ್ರಾಂತಿಯಿಂದ) ಮೊಗಂ ಬುಗಲು ಒಡಮ್ ಆ ತಳೋದರಿಯ ಸುಯ್ಗಳ ಬೆಂಕೆಯೊಳ್ ಇಚ್ಚೆಗೆಟ್ಟು (ಆಶಾಭಂಗವಾಗಿ) ತೊಟ್ಟಗೆ ಕೊಳೆ (ಕಾವು ಹತ್ತಲು?) ಮುಂದೆ ಬಿೞ್ದು (ಮುಂದೆ ಬಿದ್ದು) ಮಗುೞು ಸತಿಯಿಕ್ಕಿದ ಕಣ್ಣ ನೀರ ಧಾರೆಗಳೊಳೆ ನಾಂದು (ಪುನ ಆ ಸತಿಯು ಸುರಿದ ಕಣ್ಣೀರಿನ ಧಾರೆಗಳಲ್ಲಿ ನೆನೆದು) ಆಲರ್ಚಿ (ಚೇತರಿಸಿಕೊಂಡು) ಪೊದಳ್ದು ಒರ್ಮೆಯೆ ಪಾಱಿದುವ್ ಉನ್ಮದಾಳಿಗಳ್ (<-ಸೊಕ್ಕಿದ ದುಂಬಿಗಳು).
ಪದ್ಯ-೧೦:ಅರ್ಥ:ಸೊಕ್ಕಿದ ದುಂಬಿಗಳು ಸುಭದ್ರೆಯ ನಗೆ ಮುಖವನ್ನು ಚೆನ್ನಾಗಿ ಅರಳಿದ ತಾವರೆಯೆಂಬ ಭ್ರಾಂತಿಯಿಂದ ಪ್ರವೇಶಿಸಲು ಆ ತಳೋದರಿಯಾದ ಸುಭದ್ರೆಯ ಉಸಿರಿನ ಬೆಂಕಿಯಲ್ಲಿ ಆಶಾಭಂಗವಾಗಿ ಕಾವು ಹತ್ತಲು ಮುಂದೆ ಬಿದ್ದು ಪುನ ಆ ಸತಿಯು ಸುರಿದ ಕಣ್ಣೀರಿನ ಧಾರೆಗಳಲ್ಲಿ ನೆನೆದು ಚೇತರಿಸಿಕೊಂಡು ಚದುರಿ ಒಟ್ಟಿಗೇ ಹಾರಿದುವು
ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುರ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ ಮಧುಮಥನನ ಕಣ್ಣಂ ಬಂಚಿಸಿ ವಿಜೃಂಭಮಾಣ ನವ ನಳಿನ ಪರಿಕರ ಕೃಷ್ಣ ಮಧುಕರ ರಮಣೀಯಪುಳಿನ ಪರಿಸರ ಪ್ರದೇಶ ನಿವೇಶಿತ ವಿರಹಿತ ಜನನಿಚಯ ನಿಚಿತ ಮಾನಸೋನ್ಮತ್ತ ಕಾಮಿನೀ ಗಂಡೂಪ ಸಿಂಧು ಸೇಕ ಪುಳಕಿತ ವಕುಳ ಮುಕುಳ ವಿದಳಿತ ಮನೋಹರಾಶೋಕಲತಾ ರಮಣೀ ರಮಣೀಯ ನೂಪುರರವ ರಮ್ಯಮನವಿರಳ ಕುಸುಮಧೂಳೀ ಧೂಸರ ಪುಳಿನ ಧವಳಿತ ಧರಾತಳಮನುತ್ಫುಲ್ಲ ಪಲ್ಲವ ಲೀಲಾಯಮಾನ ಮತ್ತಕೋಕಿಲೋಲ್ಲಾಸಿತ ಶೀಕರೋದ್ದಾಮ ದುರ್ದಿನ ವನಮನೆಯ್ದೆವಂದು-
ವಚನ:ಪದವಿಭಾಗ-ಅರ್ಥ:ಅಂತು ಆ ಬಾಲೆ ಕಾಯ್ದ ಪುಡಿಯೊಳಗೆ (ಧೂಳಿನಲ್ಲಿ) ಬಿಸುಟ್ಟ ಎಳೆವಾೞೆಯಂತೆ (ಎಳೆಯ ಬಾಳೆಯ ಹಾಗೆ) ಸುರತಮಕರಧ್ವಜನೊಳು ಆದ (ಅರ್ಜುನನಲ್ಲಿ ಉಂಟಾದ ) ಬೇಟದೊಳ್ (ಪ್ರೀತಿಯಲ್ಲಿ) ಮಮ್ಮಲ ಮಱುಗುರ್ತಿರ್ದಳ್ (ಸಂಕಟಪಡುತ್ತಿದ್ದಳು), ಅತ್ತ ಮನುಜ ಮನೋಜನುಂ (ಅರ್ಜುನನೂ) ಮದನಪರಿತಾಪಕ್ಕೆ ಆಱದೆ ಉಮ್ಮಳಿಸಿ (ಮದನತಾಪವನ್ನು ಸಹಿಸಲಾರದೆ ದುಖಿಸಿ) ಮಧುಮಥನನ ಕಣ್ಣಂ ಬಂಚಿಸಿ (ತಪ್ಪಿಸಿಕೊಂಡು) ವಿಜೃಂಭಮಾಣ (ಬಹಳ ಸುಂದರ) ನವ ನಳಿನ ಪರಿಕರ (ಹೊಸತಾವರೆಯ ಸಮೂಹದಿಂದ) ಕೃಷ್ಣ ಮಧುಕರ ರಮಣೀಯಪುಳಿನ (ಆಕರ್ಷಿಸಲ್ಪಟ್ಟ ದುಂಬಿಗಳಿಂದ ರಮ್ಯವಾದ ಪುಳಿನ- ಮರಳಿನ ಸಮೀಪ ಸ್ಥಳದಲ್ಲಿ ) ಪರಿಸರ ಪ್ರದೇಶ ನಿವೇಶಿತ ವಿರಹಿತ ಜನನಿಚಯ ನಿಚಿತ(ವಿರಹಿಜನಗಳ ಸಮೂಹದಲ್ಲಿ ಸೇರಿಕೊಂಡಿರುವ) ಮಾನಸ ಉನ್ಮತ್ತ ಕಾಮಿನೀ ಗಂಡೂಪ ಸಿಂಧು ಸೇಕ (ಮುಕ್ಕುಳಿಸಿದ ಮದ್ಯದಿಂದ ರೋಮಾಂಚಗೊಂಡ) ಪುಳಕಿತ ವಕುಳ ಮುಕುಳ ವಿದಳಿತ (ಅರಳಿದ ಹೂವುಗಳಿಂದ ಕೂಡಿದ) ಮನೋಹರ ಅಶೋಕಲತಾ ರಮಣೀ ರಮಣೀಯ ನೂಪುರರವ (ಕಾಲಂದಿಗೆಯ ಶಬ್ದದಿಂದ) ರಮ್ಯಮನ ವಿರಳ ಕುಸುಮಧೂಳೀ ಧೂಸರ ಪುಳಿನ ಧವಳಿತ (ಹೂವಿನ ಪರಾಗಗಳಿಂದ ಮಾಸಲಾದ ಮರಳಿನಿಂದ ಬಿಳುಪಾಗಿ ಮಾಡಲ್ಪಟ್ಟ) ಧರಾತಳಮನು ಉತ್ಫುಲ್ಲ ಪಲ್ಲವ (ಅರಳಿರುವ ಚಿಗುರುಗಳ) ಲೀಲಾಯಮಾನ ಮತ್ತ ಕೋಕಿಲ ಉಲ್ಲಾಸಿತ ಶೀಕರೋದ್ದಾಮ (ಉಲ್ಲಾಸಕರ ತುಂತುರುಮಳೆಯಿಂದ) ದುರ್ದಿನ ವನಮನು ಎಯ್ದೆವಂದು (ಸಮೀಪಿಸಿ)-
ವಚನ:ಅರ್ಥ:|| ಹಾಗೆ ಬಾಲೆಯು ಕಾದ ಧೂಳಿನಲ್ಲಿ ಬಿಸುಟ ಎಳೆಯ ಬಾಳೆಯ ಹಾಗೆ ಸುರತಮಕರಧ್ವಜನಾದ ಅರ್ಜುನನಲ್ಲಿ ಉಂಟಾದ ಪ್ರೀತಿಯ ವಿರಹದಿಂದ ಸಂಕಟಪಡುತ್ತಿದ್ದಳು. ಆ ಕಡೆ ಮನುಜ ಮನೋಜನಾದ ಅರ್ಜುನನೂ ಕೂಡ ಮದನತಾಪವನ್ನು ಸಹಿಸಲಾರದೆ ದುಖಿಸಿ ಕೃಷ್ಣನ ಕಣ್ಣನ್ನು ತಪ್ಪಿಸಿಕೊಂಡು ವಿಜೃಂಭಿಸುತ್ತಿರುವ ಹೊಸತಾವರೆಯ ಸಮೂಹದಿಂದ ಆಕರ್ಷಿಸಲ್ಪಟ್ಟ ದುಂಬಿಗಳಿಂದ ರಮ್ಯವಾದುದೂ ಮರಳಿನ ಸಮೀಪ ಸ್ಥಳದಲ್ಲಿ ಇಡಲ್ಪಟ್ಟು ವಿರಹಿಜನಗಳ ಸಮೂಹದಲ್ಲಿ ಸೇರಿಕೊಂಡಿರುವ ಮನಸ್ಸುಳ್ಳ ಸ್ತ್ರೀಯರು ಮುಕ್ಕುಳಿಸಿದ ಮದ್ಯದಿಂದ ರೋಮಾಂಚಗೊಂಡ ಬಕುಳದ ಮೊಗ್ಗನ್ನುಳ್ಳುದೂ ಅರಳಿದ ಹೂವುಗಳಿಂದ ಕೂಡಿದ ಅಶೋಕವೃಕ್ಷಗಳನ್ನುಳ್ಳದೂ ರಮಣಿಯರ ರಮಣೀಯವಾದ ಕಾಲಂದಿಗೆಯ ಶಬ್ದದಿಂದ ರಮ್ಯವೂ ದಟ್ಟವೂ ಹೂವಿನ ಪರಾಗಗಳಿಂದ ಮಾಸಲಾದ ಮರಳಿನಿಂದ ಬಿಳುಪಾಗಿ ಮಾಡಲ್ಪಟ್ಟ ಭೂಭಾಗವನ್ನುಳ್ಳುದೂ ಅರಳಿರುವ ಚಿಗುರುಗಳ ಲೀಲೆಗೊಳಗಾದ ಮದಿಸಿರುವ ಕೋಗಿಲೆಗಳಿಗೆ ಉಲ್ಲಾಸಕರ ತುಂತುರುಮಳೆಯಿಂದ ದೀರ್ಘವಾದ ಮೋಡ ಕವಿದ ದಿನದಂತಿರುವುದೂ ಆದ ವನವನ್ನು ಅರ್ಜುನನು ಸಮೀಪಿಸಿ- (ಸಮೀಪಿಸಿದನು).
ಚಂ|| ಬಿರಿದಲರೊಳ್ ತೆಱಂಬೊಳೆವ ತುಂಬಿ ತಳಿರ್ತೆಳಮಾವು ಮಾವಿನಂ
ಕುರಮನೆ ಕರ್ಚಿ ಬಿಚ್ಚೞಿಪ ಕೋಗಿಲೆ ಕಂಪನವುಂಕಿ ಪೊತ್ತು ನಿ|
ತ್ತರಿಪೆಲರೆಂಬಿವೇವುವೊ ಮದೀಯ ಮನೋಗತ ಕಾಮ ರಾಗ ಸಾ
ಗರದೊದವಿಂಗೆ ನಲ್ಲಳ ವಿಲೋಕನಚಂದ್ರಿಕೆಯೊಂದೆ ಸಾಲದೇ|| ೧೧||
ಪದ್ಯ-೧೧:ಪದವಿಭಾಗ-ಅರ್ಥ: ಬಿರಿದ ಅಲರೊಳ್ (ಹೂವಿನಲ್ಲಿ) ತೆಱಂಬೊಳೆವ (ತರಂ ಹೊಳೆವ) ತುಂಬಿ ತಳಿರ್ತೆಳ (ಚಿಗುರಿದ) ಮಾವು ಮಾವಿನ ಅಂಕುರಮನೆ ಕರ್ಚಿ (ಮಾವಿನ ಚಿಗುರನ್ನೇ ಕಚ್ಚಿ) ಬಿಚ್ಚೞಿಪ (ಉಬ್ಬುವ) ಕೋಗಿಲೆ ಕಂಪನು ಅವುಂಕಿ ಪೊತ್ತು (ಅಡಗಿಸಿಕೊಂಡು ಹೊತ್ತು) ನಿತ್ತರಿಪ (ದಾಟಿ ಬರುವ ) ಎಲರ್ ಎಂಬಿವು ಏವುವೊ (ಗಾಳಿ ಎಂಬಿವು ಏನುಮಾಡುವುವೋ!) ಮದೀಯ ಮನೋಗತ (ನನ್ನ ಮನಸ್ಸಿನಲ್ಲಿ ತುಂಬಿರುವ) ಕಾಮ ರಾಗ ಸಾಗರದ ಒದವಿಂಗೆ (ಮನ್ಮಥಪ್ರೇಮಸಾಗರದ ಹೆಚ್ಚುವಿಕೆಗೆ) ನಲ್ಲಳ ವಿಲೋಕನಚಂದ್ರಿಕೆಯೊಂದೆ ಸಾಲದೇ (ನಲ್ಲಳ - ಸುಭದ್ರೆಯ, ವಿಲೋಕನ- ನೋಟವೆಂಬ, ಚಂದ್ರಿಕೆಯೊಂದೆ- ಬೆಳುದಿಂಗಳಿನ ಸಹಾಯವೊಂದೆ ಸಾಲದೇ)
ಪದ್ಯ-೧೧:ಅರ್ಥ: ಅರಳಿದ ಹೂವಿನಲ್ಲಿ ವಿಧವಿಧವಾಗಿ ಹೊಳೆಯುವ ದುಂಬಿಯೂ ಚಿಗುರಿದ ಎಳೆಮಾವೂ ಮಾವಿನ ಚಿಗುರನ್ನೇ ಕಚ್ಚಿ ಉತ್ಸಾಹಗೊಳ್ಳುವ ಕೋಗಿಲೆಯೂ ವಾಸನೆಯನ್ನು ತನ್ನಲ್ಲಿ ಅಡಗಿಸಿಕೊಂಡು ಹೊತ್ತು ದಾಟಿ ಬರುವ ಗಾಳಿಯೂ (ವಿರಹ ಪರಿಹಾರಕ್ಕೆ) ಏನುಮಾಡುವುವೋ. ನನ್ನ ಮನಸ್ಸಿನಲ್ಲಿ ತುಂಬಿರುವ ಮನ್ಮಥಪ್ರೇಮಸಾಗರದ ಹೆಚ್ಚುವಿಕೆಗೆ ಸುಭದ್ರೆಯ ನೋಟವೆಂಬ ಬೆಳುದಿಂಗಳಿನ ಸಹಾಯವೊಂದೆ ಸಾಲದೆ
ವ|| ಎನುತ್ತುಂ ಬಂದು ಬಿರಿದ ಬಿರಿಮುಗುಳ್ಗಳೊಳೆಱಗಿ ತುಱುಗಿದಶೋಕಲತೆಯನ್ನೞ್ಕರ್ತು ನೋಡಿ-
ವಚನ:ಪದವಿಭಾಗ-ಅರ್ಥ: ಎನುತ್ತುಂ (ಎನ್ನುತ್ತಾ) ಬಂದು ಬಿರಿದ ಬಿರಿಮುಗುಳ್ಗಳೊಳು ಎಱಗಿ(ಅರಳಿದ ಬಿರಿಮುಗುಳಕಡೆ ಎರಗಿ-ಬಾಗಿ ) ತುಱುಗಿದ ಅಶೋಕಲತೆಯನ್ನ ಅೞ್ಕರ್ತು (ಕಿಕ್ಕಿರಿದಿದ್ದ ಅಶೋಕದ ಬಳ್ಳಿಯನ್ನು ಪ್ರೀತಿಸಿ) ನೋಡಿ-
ವಚನ:ಅರ್ಥ:ಎನ್ನುತ್ತಾ ಬಂದು ಅರಳಿದ ಬಿರಿಮುಗುಳಕಡೆ ಬಾಗಿ ಕಿಕ್ಕಿರಿದಿದ್ದ ಅಶೋಕದ ಬಳ್ಳಿಯನ್ನು ಪ್ರೀತಿಸಿ ನೋಡಿ
ಚಂ|| ಅಲರಲರ್ಗಣ್ ಮುಗುಳ್‌ನಗೆ ಮಡಲ್ ತೊಡೆ ತುಂಬಿ ಕುರುಳ್ ತಳಿರ್ ತಳಂ
ಗೊಲೆ ಮೊಲೆ ಕೆಂಪು ಕೆಂಪು ಕೊನೆ ಸೆಳ್ಳುಗುರ್ಗಳ್ ಕುಡಿ ತೋಳ್ ನಯಂ ನಯಂ|
ನೆಲೆ ನೆಲೆ ಭಂಗಿ ಭಂಗಿ ಪದವಣ್ ಬೆಳರ್ವಾಯ್ ಪೆಱತಲ್ಲಿದೆಂತೊ ಕೋ
ಮಲಲತೆ ಪೇೞಿಮೆನ್ನಿನಿಯಳಂ ಮರೆಗೊಂಡುದೊ ಸೂರೆಗೊಂಡುದೋ|| ೧೨||
ಪದ್ಯ-೧೨:ಪದವಿಭಾಗ-ಅರ್ಥ: ಅಲರ್ ಅಲರ್ಗಣ್ (ಹೂವು- ಅವಳ ಹೂವಿನಂತಿರುವ ಕಣ್ಣು) ಮುಗುಳ್‌ನಗೆ, ಮಡಲ್ (ಬಳ್ಳಿಯಂತಿರುವ) ತೊಡೆ ತುಂಬಿ ಕುರುಳ್ (ಇಲ್ಲಿಯ ದುಂಬಿ ಅವಳ ಮುಂಗುರುಳುಗಳು), ತಳಿರ್ ತಳಂ (ಚಿಗುರು ಅವಳ ಅಂಗೈ), ಗೊಲೆ ಮೊಲೆ (ಗೊಂಚಲು ಸ್ತನಗಳು) ಕೆಂಪು ಕೆಂಪು(ಕೆಂಪು ಬಣ್ಣ ಅವಳ ಕೆಂಪು ಬಣ್ಣ) ಕೊನೆ ಸೆಳ್ಳು ಉಗುರ್ಗಳ್(ಅವಳ ತೆಳುವಾದ ಉಗುರುಗಳು ಇದರ ಎಳೆಯದಾದ ಕೊನೆಗಳು) ಕುಡಿ ತೋಳ್ (ಕುಡಿಗಳು ಅವಳ ತೋಳುಗಳು), ನಯಂ ನಯಂನೆಲೆ (ಬಳ್ಳಿಯ ನಯ ಸುಭದ್ರೆಯ ಮೃದುತ್ವ,), ನೆಲೆ ಭಂಗಿ ಭಂಗಿ (ಇದರ ರೀತಿ- ಅವಳ ರೀತಿ,) ಪದವಣ್ ಬೆಳರ್ವಾಯ್ (ಇಲ್ಲಿಯ ಹದವಾದ ಹಣ್ಣುಗಳು ಹೊಳೆಯುವ ತುಟಿಗಳು) ಪೆಱತಲ್ಲ ಇದೆಂತೊ ( ಬೇರೆಯಿಲ್ಲ, ಇದು ಹೇಗೊ?) ಕೋಮಲ ಲತೆ (ಬಳ್ಳಿ) ಪೇೞಿಮೆನ್ನಿನಿಯಳಂ ( ಪೇೞಿಮ್-ಹೇಳಿರಿ, ಎನ್ನ ಇನಿಯಳಂ- ನನ್ನ ಪ್ರಿಯೆಯನ್ನು) ಮರೆಗೊಂಡುದೊ ಸೂರೆಗೊಂಡುದೋ (ಮರೆಯಾಗಿಟ್ಟುಕೊಂಡಿದೆಯೋ ಇಲ್ಲವೇ ಅವಳ ಸರ್ವಸ್ವವನ್ನೂ ಸೂರೆಗೊಂಡಿದೆಯೋ?)
ಪದ್ಯ-೧೨:ಅರ್ಥ: ಈ ಬಳ್ಳಿಯ ಹೂವು- ಅವಳ ಹೂವಿನಂತಿರುವ ಕಣ್ಣು, ಇದರ ಮೊಗ್ಗು ಅವಳ ನಗೆ, ಇದರ ಬಳ್ಳಿ ಅವಳ ತೊಡೆಗಳು, ಇಲ್ಲಿಯ ದುಂಬಿ ಅವಳ ಮುಂಗುರುಳುಗಳು, ಇಲ್ಲಿಯ ಚಿಗುರು ಅವಳ ಅಂಗೈ, ಗೊಂಚಲು ಸ್ತನಗಳು, ಈ ಬಳ್ಳಿಯ ಕೆಂಪು ಬಣ್ಣ ಅವಳ ಕೆಂಪು ಬಣ್ಣ, ಅವಳ ತೆಳುವಾದ ಉಗುರುಗಳು, ಇದರ ಎಳೆಯದಾದ ಕೊನೆಗಳು ಕುಡಿಗಳು ಅವಳ ತೋಳುಗಳು; ಬಳ್ಳಿಯ ನಯ ಸುಭದ್ರೆಯ ಮೃದುತ್ವ, ಇದರ ರೀತಿ- ಅವಳ ರೀತಿ, ಇಲ್ಲಿಯ ಹದವಾದ ಹಣ್ಣುಗಳು ಹೊಳೆಯುವ ತುಟಿಗಳು ಬೇರೆಯಿಲ್ಲ, ಈ ಬಳ್ಳಿಯು ನನ್ನ ಪ್ರಿಯೆ ಸುಭದ್ರೆಯನ್ನು ಮರೆಯಾಗಿಟ್ಟುಕೊಂಡಿದೆಯೋ ಇಲ್ಲವೇ ಅವಳ ಸರ್ವಸ್ವವನ್ನೂ ಸೂರೆಗೊಂಡಿದೆಯೋ? (ಬಳ್ಳಿಗೆ ಸ್ವತ ಇಷ್ಟೆಲ್ಲ ಸೌಂದರ್ಯವೆಲ್ಲಿ ಬರಬೇಕು?)
ವ|| ಎಂದು ಕಿಱಿದಾನುಂ ಬೇಗಮಱಿಮರುಳಾದಂತಾ ಲತೆಯೊಳ್ ಪೞಿಗಾಳೆಗಂಗಾದಿ ಬರೆವರೆ ಕಾಮದೇವನಿಮ್ಮಾವಿನ ನನೆಯನಂಬುಗಳುಮನವಱ ಬಲ್ಮಿಡಿಯನೆ ಮಿಟ್ಟೆಯುಮಂ ಮಾಡಿ ತನ್ನನೇಸಾಡಿ ಕಾಡೆ-
ವಚನ:ಪದವಿಭಾಗ-ಅರ್ಥ:ಎಂದು ಕಿಱಿದಾನುಂ ಬೇಗಂ (ಸ್ವಲ್ಪ ಸಮಯ) ಅಱಿಮರುಳಾದಂತೆ (ಅರುಳುಮರುಳನಂತೆ) ಆ ಲತೆಯೊಳ್ ಪೞೆಗಾಳೆಗಂಗಾದಿ ಬರೆವರೆ (ಹರೆಗಾಳೆಗಂ ಕಾದಿ; ಜಗಳದಮಾತನಾಡಿ) ಕಾಮದೇವನ ಇಮ್ಮಾವಿನ ನನೆಯನು ಅಂಬುಗಳುಮನು ಅವಱ ಬಲ್ಮಿಡಿಯನೆ ಮಿಟ್ಟೆಯುಮಂ(ಅದರ ಬಲಿತ ಹೀಚುಗಳನ್ನು ಮಣ್ಣಿನುಂಡೆಯನ್ನಾಗಿ) ಮಾಡಿ ತನ್ನನು ಏಸಾಡಿ ಕಾಡೆ-
ವಚನ:ಅರ್ಥ:ಎಂದು ಸ್ವಲ್ಪಸಮಯ ಅರುಳುಮರುಳನಂತೆ ಆ ಬಳ್ಳಿಯೊಡನೆ ಜಗಳದಮಾತನಾಡಿ ಬರುತ್ತಿರಲು ಕಾಮದೇವನ ಸಿಹಿಮಾವಿನ ಹೂವುಗಳನ್ನು ಬಾಣಗಳನ್ನಾಗಿಯೂ ಅದರ ಬಲಿತ ಹೀಚುಗಳನ್ನು ಮಣ್ಣಿನುಂಡೆಯನ್ನಾಗಿ ಮಾಡಿ ತನ್ನನ್ನೇ ಹೊಡೆದು ಕಾಡಿದನು.
ಚಂ|| ಅಸಿಯಳನೊಲ್ಗು ಮೊಲ್ಲನಣಮೆನ್ನದೆ ರೂಪನೆ ನೋಡಿ ಕೂಡಲಾ
ಟಿಸಿ ಪರಿದೆಯ್ದಿ ಪತ್ತಿದಲರ್ಗಣ್ಗಳನೇನುಮನೆನ್ನದಂತುಪೇ|
ಕ್ಷಿಸಿ ಮನಮೆಲ್ಲಮಂ ಕವರ್ದಪಂ ತನುವಂ ಬಡಮಾಡಿ ಕಾಡಿ ದಂ
ಡಿಸಿದಪನಂಗಜನ್ಮನ ಕವರ್ತೆಯ ದಂಡದ ಪಾಂಗಿದೆಂತುಟೋ|| ೧೩||
ಪದ್ಯ-೧೩:ಪದವಿಭಾಗ-ಅರ್ಥ:ಅಸಿಯಳನು (ಕೃಶಾಂಗಿಯಾದ ಸುಭದ್ರೆಯನ್ನು) ಒಲ್ಗುಂ ಒಲ್ಲಂ ಅಣಂ ಎನ್ನದೆ ರೂಪನೆ ನೋಡಿ (ಇವನು ಪ್ರೀತಿಸುತ್ತಾನೆಯೇ ಒಲ್ಲಂ-ಇಲ್ಲವೇ ಎಂಬುದೇನನ್ನೂ ಯೋಚಿಸದೇ ರೂಪವನ್ನೇ ನೋಡಿ) ಕೂಡಲಾಟಿಸಿ (ಬೆರೆಯಲು ಆಶೆಪಟ್ಟು) ಪರಿದೆಯ್ದಿ (ಓಡಿಬಂದು) ಪತ್ತಿದ ಅಲರ್ ಕಣ್ಗಳನು (ಅಂಟಿದ ಹೂವಿಹಾಗಿರುವ ಕಣ್ಣುಗಳನ್ನು) ಏನುಂ ಎನ್ನದೆ ಅಂತು ಉಪೇಕ್ಷಿಸಿ ಮನಮೆಲ್ಲಮಂ ಕವರ್ದಪಂ (ಸೂರೆಮಾಡುತ್ತಾನೆ.) ತನುವಂ ಬಡಮಾಡಿ ಕಾಡಿ ದಂಡಿಸಿದಪನು ಅಂಗಜನ್ಮನ ಕವರ್ತೆಯ(ಮನ್ಮಥನ ಈ ಸೂರೆಯ) ದಂಡದ ಪಾಂಗು ಇದೆಂತುಟೋ (ಶಿಕ್ಷೆಯ ರೀತಿ ಅದೆಂತಹುದೊ!)
ಪದ್ಯ-೧೩:ಅರ್ಥ: ಕೃಶಾಂಗಿಯಾದ ಸುಭದ್ರೆಯನ್ನು ಇವನು ಪ್ರೀತಿಸುತ್ತಾನೆಯೇ ಇಲ್ಲವೇ ಎಂಬುದೇನನ್ನೂ ಯೋಚಿಸದೇ ರೂಪವನ್ನೇ ನೋಡಿ ಬೆರೆಯಲು ಆಶೆಪಟ್ಟು ಓಡಿಬಂದು ಅಂಟಿದ ಹೂವಿಹಾಗಿರುವ ಕಣ್ಣುಗಳನ್ನು ಏನೂ ಹೇಳದೆ ಉಪೇಕ್ಷಿಸಿ ಮನ್ಮಥನು ಮನಸ್ಸೆಲ್ಲವನ್ನೂ ಸೂರೆಮಾಡುತ್ತಾನೆ. ಶರೀರವನ್ನು ಕೃಶವನ್ನಾಗಿ ಮಾಡಿ ಕಾಡಿ ಶಿಕ್ಷಿಸುತ್ತಾನೆ. ಮನ್ಮಥನ ಈ ಸೂರೆಯ ಈ ಶಿಕ್ಷೆಯ ರೀತಿ ಅದೆಂತಹುದೊ!
ವ|| ಎಂದು ನಂದನವನೋಪಕಂಠಂಗಳೊಳನಂಗಶರವಶನಾಗಿ ತೊೞಲ್ದು ನೋಡುತ್ತುಂ ತನ್ನ ಮನದೊಳಿಂತೆಂದು ಬಗೆಗುಂ-
ವಚನ:ಪದವಿಭಾಗ-ಅರ್ಥ:ಎಂದು ನಂದನವನು ಉಪಕಂಠಂಗಳೊಳು (ಸಮೀಪ ಪ್ರದೇಶಗಳಲ್ಲಿ) ಅನಂಗಶರ ವಶನಾಗಿ (ಮನ್ಮಥನ ಬಾಣದ ವಶನಾಗಿ )ತೊೞಲ್ದು (ತೊಳಲಿ) ನೋಡುತ್ತುಂ ತನ್ನ ಮನದೊಳು ಇಂತೆಂದು ಬಗೆಗುಂ-
ವಚನ:ಅರ್ಥ:.ಎಂದು ನಂದನವನದ ಸಮೀಪ ಪ್ರದೇಶಗಳಲ್ಲಿ ಮನ್ಮಥನ ಬಾಣದ ವಶನಾಗಿ, ಸುತ್ತಿ ತೊಳಲಿ ನೋಡುತ್ತ ತನ್ನ ಮನಸ್ಸಿನಲ್ಲಿ ಹೀಗೆಂದು ಯೋಚಿಸಿದನು
ಚಂ|| ಉರಿವೆರ್ದೆಯಾರೆ ಚಿಂತಿಪ ಮನಂ ಗುಡಿಗಟ್ಟೆ ಮರಲ್ದು ನೋಡುವ
ಚ್ಚರಿಯೊಳೆ ಬೆಚ್ಚ ಕಣ್ಮಲರ್ಗೆ ಸಂತಸದಾಗರಮಾಗೆ ಬೇಟದೊಳ್|
ಬಿರಿವೊಡಲೊಯ್ಯನಂಕುರಿಸೆ ಸೈಪಿನೊಳಿಂತೆನಗೀಗಳೀ ವನಾಂ
ತರದೊಳೆ ಕಾಣಲಕ್ಕುಮೊ ಮದೀಯ ಮನೋರಥ ಜನ್ಮಭೂಮಿಯಂ|| ೧೪||
ಪದ್ಯ-೧೪:ಪದವಿಭಾಗ-ಅರ್ಥ:ಉರಿವ ಎರ್ದೆಯು ಆರೆ (ಎದೆಯು ಶಾಂತವಾಗುವ ಹಾಗೆ) ಚಿಂತಿಪ ಮನಂ ಗುಡಿಗಟ್ಟೆ ಮರಲ್ದು (ಬಾವುಟ ಹಾರುವಂತೆ-ಉತ್ಸಾಹಗೊಳ್ಳುವ ಹಾಗೆ ಪುನಃ)ನೋಡುವ ಅಚ್ಚರಿಯೊಳೆ ಬೆಚ್ಚ ಕಣ್ ಅಲರ್ಗೆ(ನೋಡಬೇಕೆಂಬ ಆಶ್ಚರ್ಯದಿಂದಲೇ ಮುಚ್ಚಿಕೊಂಡಿರುವ ನನ್ನ ಹೂಕಣ್ಣಿಗೆ) ಸಂತಸದ ಆಗರಮಾಗೆ ಬೇಟದೊಳ್(ಸಂತೋಷ ತುಂಬುವ ಹಾಗೆ ಪ್ರೇಮದ ಬಯಕೆಯಲ್ಲಿ) ಬಿರಿವೊಡಲು ಒಯ್ಯನೆ ಅಂಕುರಿಸೆ ಸೈಪಿನೊಳು (ಬಿರಿಯುತ್ತಿರುವ ಶರೀರವು ಇದ್ದಕ್ಕಿದ್ದ ಹಾಗೆ, ರೋಮಾಂಚಗೊಳ್ಳುವ ಹಾಗೆ) ಇಂತು ಎನಗೆ ಈಗಳ್ ಈ ವನಾಂತರದೊಳೆ (ನನ್ನ ಅದೃಷ್ಟದಿಂದ ಹೀಗೆ ಇಲ್ಲಿ ವನದಲ್ಲಿಯೇ ನನ್ನ ಮನೋರಥಕ್ಕೆ) ಕಾಣಲಕ್ಕುಮೊ ಮದೀಯ ಮನೋರಥ ಜನ್ಮಭೂಮಿಯಂ(ನನ್ನ ಆಸೆಯ ಜನ್ಮಭೂಮಿಯಾದ ಸುಭದ್ರೆಯನ್ನು ಕಾಣಲು ಸಾಧ್ಯವಾಗುತ್ತದೆಯೋ!)
ಪದ್ಯ-೧೪:ಅರ್ಥ: ಉರಿಯುತ್ತಿರುವ ನನ್ನ ಎದೆಯು ಶಾಂತವಾಗುವ ಹಾಗೆ, ಚಿಂತಿಸುತ್ತಿರುವ ನನ್ನ ಮನಸ್ಸು ಉತ್ಸಾಹಗೊಳ್ಳುವ ಹಾಗೆ ಪುನಃ ನೋಡಬೇಕೆಂಬ ಆಶ್ಚರ್ಯದಿಂದಲೇ ಮುಚ್ಚಿಕೊಂಡಿರುವ ನನ್ನ ಕಣ್ಣಿಗೆ ಸಂತೋಷ ತುಂಬುವ ಹಾಗೆ ಪ್ರೇಮದ ಬಯಕೆಯಲ್ಲಿ ವಿರಹದಿಂದ ಬಿರಿಯುತ್ತಿರುವ ಶರೀರವು ಇದ್ದಕ್ಕಿದ್ದ ಹಾಗೆ, ರೋಮಾಂಚಗೊಳ್ಳುವ ಹಾಗೆ ನನ್ನ ಅದೃಷ್ಟದಿಂದ ಹೀಗೆ ಇಲ್ಲಿ ವನದಲ್ಲಿಯೇ ನನ್ನ ಆಸೆಯ ಜನ್ಮಭೂಮಿಯಾದ ಸುಭದ್ರೆಯನ್ನು ಕಾಣಲು ಸಾಧ್ಯವಾಗುತ್ತದೆಯೋ!
ವ|| ಎಂದು ಬಗೆಯುತ್ತುಮಾಕೆಯಿರ್ದ ಮಾಧವೀಮಂಟಪಕ್ಕೆ ಮೊಗಸಿ ಪಲರ ಪಲವುಂ ತೆಱದ ಬೇಟದ ಪಡೆಮಾತುಗಳಂ ಕೇಳ್ದಲ್ಲಿಯಾರಾನುಮೆಮ್ಮಂದಿಗರಿರ್ದರಕ್ಕುಮೆನುತ್ತುಂ ಬರ್ಪ ಗಂಧೇಭ ವಿದ್ಯಾಧರನಂ ಸುಭದ್ರೆ ಭೋಂಕನೆ ಕಂಡು-
ವಚನ:ಪದವಿಭಾಗ-ಅರ್ಥ:ಎಂದು ಬಗೆಯುತ್ತುಂ (ಯೋಚಿಸುತ್ತ ) ಆಕೆಯಿರ್ದ ಮಾಧವೀಮಂಟಪಕ್ಕೆ (ಆಕೆ ಇದ್ದ ಮಾಧವೀಮಂಟಪದ ಹತ್ತಿರಕ್ಕೆ) ಮೊಗಸಿ ಪಲರ ಪಲವುಂ ತೆಱದ ಬೇಟದ ಪಡೆಮಾತುಗಳಂ ಕೇಳ್ದು (ಮುತ್ತಿಕೊಂಡ ಅದೇ ತೆರನಾದ ವಿರಹದ ಮಾತನ್ನನ್ನು ಕೇಳಿ) ಅಲ್ಲಿ ಯಾರಾನುಂ ಎಮ್ಮಂದಿಗರು ಇರ್ದರಕ್ಕುಂ ಎನುತ್ತುಂ (ನಮ್ಮಂತಹವರೂ ಇಲ್ಲಿ ಯಾರಾದರೂ ನನ್ನನಂತಿರುವ ವಿರಹಿಗಳು ಇದ್ದಿರಬಹುದು ಎನ್ನುತ್ತ) ಬರ್ಪ ಗಂಧೇಭ ವಿದ್ಯಾಧರನಂ ಸುಭದ್ರೆ ಭೋಂಕನೆ ಕಂಡು (ಬರುತ್ತಿರುವ ಅರ್ಜುನನನ್ನು ಸುಭದ್ರೆಯು ಇದ್ದಕ್ಕಿದ್ದ ಹಾಗೆ ನೋಡಿ)-
ವಚನ:ಅರ್ಥ:ಎಂಬುದಾಗಿ ಯೋಚಿಸುತ್ತ ಆಕೆ ಇದ್ದ ಮಾಧವೀಮಂಟಪದ ಹತ್ತಿರಕ್ಕೆ ಬಂದು ಅಲ್ಲಿ ಮುತ್ತಿಕೊಂಡ ಅದೇ ತೆರನಾದ ವಿರಹದ ಮಾತನ್ನನ್ನು ಕೇಳಿ, ನಮ್ಮಂತಹವರೂ ಇಲ್ಲಿ ಯಾರಾದರೂ ನನ್ನನಂತಿರುವ ವಿರಹಿಗಳು ಇದ್ದಿರಬಹುದು ಎನ್ನುತ್ತ ಬರುತ್ತಿರುವ ಅರ್ಜುನನನ್ನು ಸುಭದ್ರೆಯು ಪಕ್ಕನೆ ನೋಡಿ- (ನೊಡಿದಳು)
ಚಂ|| ಪಡಿದೆರೆವಂದದಿಂದಮೆರ್ದೆಯುಂ ತೆರೆದತ್ತು ಪೊದಳ್ದ ಸಂಕೆಯಿಂ
ನಡುಕಮುಮಾಗಳುಬ್ದದಿಗಮಾದುದು ಸಾಧ್ವಸದಿಂ ಬೆಮರ್ ಬೆಮ|
ರ್ವೆಡೆಗಳಿನುಣ್ಮಿ ಪೊಣ್ಮಿದುದು ಕಣ್ ನಡೆ ನೋಡದೆ ತಪ್ಪು ನೋಡಿ ನಾ
ಣೆಡೆಯೊಳಮಾದುದಾ ಸತಿಗೆ ನೋಡಲೊಡಂ ಪಡೆಮೆಚ್ಚೆಗಂಡನಂ|| ೧೫ ||
ಪದ್ಯ-೧೫:ಪದವಿಭಾಗ-ಅರ್ಥ:ಪಡಿದ ಎರೆವಂದದಿಂದಂ (ಬಾಗಿಲು ತರೆದ ರೀತಿಯಲ್ಲಿ) ಎರ್ದೆಯುಂ ತೆರೆದತ್ತು (ಎದೆಯು ತೆರೆಯಿತು,) ಪೊದಳ್ದ ಸಂಕೆಯಿಂ ನಡುಕಮುಂ ಆಗಳು ಉಬ್ದದಿಗಮಾದುದು (ಉಂಟಾದ ಸಂದೇಹ/ ಭಯದಿಂದ ನಡುಕವು ಉದ್ಭವಿಸಿತು/ ತಲೆದೋರಿತು) ಸಾಧ್ವಸದಿಂ (ಸಡಗರದಿಂದ) ಬೆಮರ್ (ಬೆವರು,) ಬೆಮರ್ವ ಎಡೆಗಳಿಂ ಉಣ್ಮಿ (ಬೆವರುವ ಕಡೆಗಳಿಂದ ಹೆಚ್ಚಿ ಹೊರಸೂಸಿ) ಪೊಣ್ಮಿದುದು ಕಣ್ ನಡೆ ನೋಡದೆ ತಪ್ಪು ನೋಡಿ (ಕಣ್ಣುಗಳ ಲಜ್ಜೆಯಿಂದ ನೇರವಾಗಿ ನೋಡದೆ ತಪ್ಪು/ಓರೆ ದೃಷ್ಟಿಯಿಂದ ನೋಡಿದುವು) ನಾಣೆಡೆಯೊಳಂ ಆದುದು ಆ ಸತಿಗೆ ನೋಡಲೊಡಂ ಪಡೆಮೆಚ್ಚೆಗಂಡನಂ(ಅರ್ಜುನನ್ನು)
ಪದ್ಯ-೧೫:ಅರ್ಥ: ಪಡೆಮೆಚ್ಚೆಗಂಡನಾದ ಅರ್ಜುನನ್ನು ನೋಡಿದ ತಕ್ಷಣವೇ ಆ ಸತಿಗೆ ಬಾಗಿಲು ತೆರೆಯುವಂತೆ ಎದೆಯು ತೆರೆಯಿತು, ಉಂಟಾದ ಸಂದೇಹ/ ಭಯದಿಂದ ನಡುಕವು ಉದ್ಭವಿಸಿತು/ ತಲೆದೋರಿತು; ಸಡಗರದಿಂದ ಬೆವರು, ಬೆವರುವ ಕಡೆಗಳಿಂದ ಹೆಚ್ಚಿ ಹೊರಸೂಸಿ; ಕಣ್ಣುಗಳ ಲಜ್ಜೆಯಿಂದ ನೇರವಾಗಿ ನೋಡದೆ ತಪ್ಪು (ಓರೆ) ದೃಷ್ಟಿಯಿಂದ ನೋಡಿದುವು
ವ|| ಆಗಳ್ ಸುರತಮಕರಧ್ವಜನುಮನಂಗಾಮೃತ ಪಯೋಧಿಯೊಳ್ ಮೂಡಿ ಮುೞುಗಾಡಿದರಂತೆ ಕಿಱಿದು ಬೇಗಮನಿರ್ತು ತನ್ನಿಂತ ತಾನೆ ಚೇತರಿಸಿ ಸುಭದ್ರೆಯ ರೂಪನಾಪಾದಮಸ್ತಕಂಬರಮೆಯ್ದೆ ನೋಡಿ ತನ್ನೊಳಾದ ಬೇಟದೊಳ್ ಬಡವಟ್ಟುಮೇೞ್ಗೆವಾಡಿವದ ಸಸಿಯಂತೆ ಸೊಗೆಯಿಸುವಸಿಯಳಂ ಕಂಡು-
ವಚನ:ಪದವಿಭಾಗ-ಅರ್ಥ:ಆಗಳ್ ಸುರತಮಕರಧ್ವಜನುಂ ಅನಂಗಾಮೃತ ಪಯೋಧಿಯೊಳ್ (ಮನ್ಮಥನ ಅಮೃತಸಮುದ್ರದಲ್ಲಿ) ಮೂಡಿ ಮುೞುಗಾಡಿದರಂತೆ (ಮುಳುಗಾಡಿದವರ ಹಾಗೆ) ಕಿಱದು ಬೇಗಂ ಅನಿರ್ತು(ಸ್ವಲ್ಪ ಕಾಲವಿದ್ದು) ತನ್ನಿಂತ ತಾನೆ ಚೇತರಿಸಿ ಸುಭದ್ರೆಯ ರೂಪನು ಅಪಾದಮಸ್ತಕಂ ಬರಮೆಯ್ದೆ ನೋಡಿ (ಸುಭದ್ರೆಯ ರೂಪವನ್ನು ಕಾಲಿನಿಂದ ತಲೆಯವರೆಗೆ ತೃಪ್ತಿಯಾಗುವಂತೆ ನೋಡಿ) ತನ್ನೊಳಾದ ಬೇಟದೊಳ್ ಬಡವಟ್ಟುಂ ಏೞ್ಗೆವಾಡಿವದ (ಶುಕ್ಲಪಕ್ಷ ಪಾಡ್ಯದ) ಸಸಿಯಂತೆ (ಶಶಿ- ಚಂದ್ರನಂತೆ) ಸೊಗೆಯಿಸುವ ಅಸಿಯಳಂ (ಕೃಶಾಂಗಿಯನ್ನು) ಕಂಡು-
ವಚನ:ಅರ್ಥ:ಆಗ ಸುರತಮಕರಧ್ವಜನಾದ ಅರ್ಜುನನೂ ಕೂಡ ಮನ್ಮಥನ ಅಮೃತಸಮುದ್ರದಲ್ಲಿ ಮೂಡಿ ಮುಳುಗಾಡಿದವರ ಹಾಗೆ ಸ್ವಲ್ಪ ಕಾಲವಿದ್ದು ತನ್ನಷ್ಟಕ್ಕೆ ತಾನೇ ಚೇತರಿಸಿಕೊಂಡು ಸುಭದ್ರೆಯ ರೂಪವನ್ನು ಕಾಲಿನಿಂದ ತಲೆಯವರೆಗೆ ತೃಪ್ತಿಯಾಗುವಂತೆ ನೋಡಿ ತನ್ನಲ್ಲುಂಟಾದ ಪ್ರೇಮವಿರಹದಿಂದ ಕೃಶನಾಗಿ ಶುಕ್ಲಪಕ್ಷ ಪಾಡ್ಯದ ಸೊಗಯಿಸುವ ಕೃಶಾಂಗಿಯನ್ನು ಕಂಡು-
ಚಂ|| ಸರಸ ಮೃಣಾಳನಾಳವಳಯಂಗಳೊಳುಜ್ಜ್ವಳ ವೃತ್ತ ಮೌಕ್ತಿಕಾ
ಭರಣ ಗಣಂಗಳೊಳ್ ಶಶಿಕರಂಗಳೊಳಾಱದೆ ಬೇಟದೊಳ್ ಕನ|
ಲ್ದುರಿವೆರ್ದೆ ನೋಡ ನೋಡಲೊಡನಾಱಿದುದೇನಮರ್ದಿಂದೆ ತೊಯ್ದು ಕ
ಪ್ಪುರವಳುಕಿಂದಜಂ ಕಡೆದು ಕಂಡರಿಪಂ ವಲಮೆನ್ನ ನಲ್ಲಳಂ|| ೧೬||
ಪದ್ಯ-೧೬:ಪದವಿಭಾಗ-ಅರ್ಥ:ಸರಸ ಮೃಣಾಳನಾಳವಳಯಂಗಳೊಳ್ (ರಸಯುಕ್ತವಾದ ತಾವರೆಯ ದಂಟಿನ ಕಂಕಣಗಳಿಂದ), ಉಜ್ಜ್ವಳ ವೃತ್ತ ಮೌಕ್ತಿಕಾಭರಣ ಗಣಂಗಳೊಳ್ (ಹೊಳೆಯುವ ದುಂಡು ಮುತ್ತಿನ ಒಡವೆಗಳಿಂದಲೂ), ಶಶಿಕರಂಗಳೊಳ್ ಆಱದೆ ಬೇಟದೊಳ್ ಕನಲ್ದು ಉರಿವ (ಚಂದ್ರಕಿರಣಗಳಿಂದ ಕಡಮೆಯಾಗದೆ ಪ್ರೇಮವಿರಹದಿಂದ ಕೆರಳಿ ಎರ್ದೆ ಉರಿಯುತ್ತಿದ್ದ ನನ್ನ ಎದೆಯು) ನೋಡ ನೋಡಲೊಡನೆ ಆಱಿದುದು (ನೋಡೊ! ಸುಭದ್ರೆಯನ್ನು ನೋಡಿದೊಡನೆಯೇ ಆರಿ ಹೋಯಿತು) ಏನು ಅಮರ್ದಿಂದೆ ತೊಯ್ದು (ಏನು, ಅಮೃತದಲ್ಲಿ ನೆನೆಸಿ ) ಕಪ್ಪುರವ ಅಳುಕಿಂದ ಅಜಂ ಕಡೆದು ಕಂಡರಿಪಂ (ಅಜಂ- ಬ್ರಹ್ಮನು ಕರ್ಪೂರದ ಹಳುಕಿನಿಂದ ಕಡೆದು ಕೊರೆದಿದ್ದಿರಬೇಕು) ವಲಂ! ಎನ್ನ ನಲ್ಲಳಂ ( ನನ್ನ ಪ್ರಿಯಳನ್ನು)
ಪದ್ಯ-೧೬:ಅರ್ಥ: ಚಂದ್ರಕಿರಣಗಳಿಂದ ಕಡಮೆಯಾಗದೆ ಪ್ರೇಮವಿರಹದಿಂದ ಕೆರಳಿ ಉರಿಯುತ್ತಿದ್ದ ನನ್ನ ಎದೆಯು ರಸಯುಕ್ತವಾದ ತಾವರೆಯ ದಂಟಿನ ಕಂಕಣಗಳಿಂದಲೂ, ಹೊಳೆಯುವ ದುಂಡು ಮುತ್ತಿನ ಒಡವೆಗಳಿಂದಲೂ, ಕೂಡಿದ ಸುಭದ್ರೆಯನ್ನು ನೋಡಿದೊಡನೆಯೇ ಆರಿಹೋಯಿತು; ನಿಜವಾಗಿಯೂ ಬ್ರಹ್ಮನು ಈ ನನ್ನ ಪ್ರಿಯಳನ್ನು ಅಮೃತದಲ್ಲಿ ನೆನೆಸಿ ಕರ್ಪೂರದ ಹಳುಕಿನಿಂದ ಕಡೆದು ಕೊರೆದಿದ್ದಿರಬೇಕು, ವಲಂ!(ಆಹಾ!)
ಉ|| ವೃತ್ತಕುಚಂಗಳಿಂದುದಿರ್ದ ಚಂದನದೊಳ್ ತಳಿರ್ವಾಸು ಬೆಳ್ಪನಾ
ಳ್ದತ್ತು ದುಕೂಲದೊಂದು ಮಡಿವಾಸಿದ ಮಾೞ್ಕೆವೊಲಾಯ್ತು ಮೆಯ್ಯನಿ|
ಕ್ಕುತ್ತಿರೆ ಪತ್ತಿ ಕೆಂದಳಿರ್ಗಳಚ್ಚುಗಳಚ್ಚಿಱದಂತೆ ಕಾಮನ
ಚ್ಚೊತ್ತಿದ ಬೇಟದಚ್ಚುಗಳ ಮಾೞ್ಕೆಯೊಳಿರ್ದುದು ಮೆಯ್ ಸುಭದ್ರೆಯಾ|| ೧೭||
ಪದ್ಯ-೧೭:ಪದವಿಭಾಗ-ಅರ್ಥ:ವೃತ್ತಕುಚಂಗಳಿಂದ ಉದಿರ್ದ (ದುಂಡಾದ ಮೊಲೆಗಳಿಂದ ಉದುರಿದ) ಚಂದನದೊಳ್ ತಳಿರ್ವಾಸು ಬೆಳ್ಪನು ಆಳ್ದತ್ತು (ಶ್ರೀಗಂಧದ ಚಿಗುರಿನ ಹಾಸಿಗೆಯು ಬಿಳಿಯ ಬಣ್ಣವನ್ನು ತಾಳಿದೆ.) ದುಕೂಲದೊಂದು ಮಡಿ ವಾಸಿದ ಮಾೞ್ಕೆವೊಲಾಯ್ತು (ರೇಷ್ಮೆಯ ಮಡಿವಸ್ತ್ರವು ಮಾಸಿದ ರೀತಿಯಾಗಿದೆ- ವಸ್ತ್ರದಂತಾಗಿದೆ.) ಮೆಯ್ಯನಿಕ್ಕುತ್ತಿರೆ (ಹಾಸಿಗೆಯ ಮೇಲೆ ಮೈಯನ್ನು ಚಾಚಲು) ಪತ್ತಿ ಕೆಂದಳಿರ್ಗಳು ಅಚ್ಚುಗಳ್ ಅಚ್ಚಿಱದಂತೆ (ಆ ಸುಭದ್ರೆಯ ದೇಹ, ಅವಳ ಮೈಯಿಗೆ ಒತ್ತಿದ ಕೆಂಪು ಚಿಗುರುಗಳ ಮುದ್ರೆಗಳಿಂದ ಅಚ್ಚೊತ್ತಿದ ಹಾಗೆ ಅಂಟಿಕೊಂಡು) ಕಾಮನ ಅಚ್ಚೊತ್ತಿದ ಬೇಟದ ಅಚ್ಚುಗಳ ಮಾೞ್ಕೆಯೊಳು ಇರ್ದುದು (ಮನ್ಮಥನು ಮುದ್ರಿಸಿದ ಪ್ರೇಮಮುದ್ರೆಗಳ ಚಿತ್ರದಂತಿವೆ) ಮೆಯ್ (ದೇಹ) ಸುಭದ್ರೆಯಾ
ಪದ್ಯ-೧೭:ಅರ್ಥ: ದುಂಡಾದ ಮೊಲೆಗಳಿಂದ ಉದುರಿದ ಶ್ರೀಗಂಧದ ಚಿಗುರಿನ ಹಾಸಿಗೆಯು ಬಿಳಿಯ ಬಣ್ಣವನ್ನು ತಾಳಿದೆ. ರೇಷ್ಮೆಯ ಮಡಿವಸ್ತ್ರವು ಮಾಸಿದ ವಸ್ತ್ರದಂತಾಗಿದೆ. ಹಾಸಿಗೆಯ ಮೇಲೆ ಮೈಯನ್ನು ಚಾಚಲು ಆ ಸುಭದ್ರೆಯ ಮೈಯಿಗೆ ಒತ್ತಿದ ಕೆಂಪು ಚಿಗುರುಗಳ ಮುದ್ರೆಗಳಿಂದ ಅಚ್ಚೊತ್ತಿದ ಹಾಗೆ ಅಂಟಿಕೊಂಡು ಮನ್ಮಥನು ಮುದ್ರಿಸಿದ ಪ್ರೇಮಮುದ್ರೆಗಳ ಚಿತ್ರದಂತಿವೆ
ವ|| ಅದಱಿನೀಕೆಯುಮೆನಗೆರಡಱಿಯದ ನಲ್ಲ ಮನಂದೋಱುವುದು ಸಲ್ಗೆದೋಱುವುದು ಮಾವುದು ದೋಸಮೆಂದಾಕೆ ಕುಳ್ಳಿರ್ದ ತಳಿರ ಸಜ್ಜೆಯೊಡನೆ ಕುಳ್ಳಿರ್ಪುದುಂ ನಾಣ್ಚಿ ಪೋಗಲೆಂದೆೞ್ದ ಕನ್ನೆಯಂ ಚೂತಲತಿಕೆಯಂಬ ಕೆಳದಿ ಜಡಿದು ಕುಳ್ಳಿರಿಸಿ ಗಂಧೇಭ ವಿದ್ಯಾಧರನನಿಂತೆಂದಳ್-
ವಚನ:ಪದವಿಭಾಗ-ಅರ್ಥ:ಅದಱಿಂ (ಆದುದರಿಂದ) ಈಕೆಯುಂ ಎನಗೆ ಎರಡಱಿಯದ (ಕಪಟವಿಲ್ಲದ) ನಲ್ಲ ಮನಂದೋಱುವುದು (ಒಳ್ಳೆಯ ಮನಸ್ಸನ್ನು ತೋರಿಸುವುದರಲ್ಲಿಯೂ) ಸಲ್ಗೆದೋಱುವುದುಂ ಆವುದು ದೋಸಮೆಂದು (ಸಲಿಗೆಯನ್ನು ತೋರಿಸುವುದರಲ್ಲಿ ಯಾವುದು ದೋಷವು ಎಂದು) ಆಕೆ ಕುಳ್ಳಿರ್ದ ತಳಿರ ಸಜ್ಜೆಯೊಡನೆ ಕುಳ್ಳಿರ್ಪುದುಂ(ಆಕೆ ಕುಳಿತಿದ್ದ ಚಿಗುರುಹಾಸಿಗೆಯಲ್ಲಿಯೇ ಅರ್ಜುನನು ಕುಳಿತುಕೊಳ್ಳಲು) ನಾಣ್ಚಿ ಪೋಗಲೆಂದೆೞ್ದ ಕನ್ನೆಯಂ(ಲಜ್ಜೆಪಟ್ಟು ಹೋಗಲೆಂದು ಎದ್ದ ಕನ್ಯೆಯನ್ನು ) ಚೂತಲತಿಕೆಯಂಬ ಕೆಳದಿ ಜಡಿದು ಕುಳ್ಳಿರಿಸಿ (ಲಜ್ಜೆಪಟ್ಟು ಹೋಗಲೆಂದು ಎದ್ದ ಕನ್ಯೆಯನ್ನು ಚೂತಲತಿಕೆಯೆಂಬ ಸಖಿಯು ಗದರಿಸಿ ಕುಳ್ಳಿರಿಸಿ) ಗಂಧೇಭ ವಿದ್ಯಾಧರನನಿಂತೆಂದಳ್-(ಅರ್ಜುನನನ್ನು ಕುರಿತು ಹೀಗೆಂದಳು- )
ವಚನ:ಅರ್ಥ:ಆದುದರಿಂದ ಈಕೆಯು ನನಗೆ ಕಪಟವಿಲ್ಲದ ಮನಸ್ಸನ್ನು ತೋರಿಸುವುದರಲ್ಲಿಯೂ ಸಲಿಗೆಯನ್ನು ತೋರಿಸುವುದರಲ್ಲಿಯೂ ಯಾವುದು ದೋಷವೆಂದು ಎಂದು ಆಕೆ ಕುಳಿತಿದ್ದ ಚಿಗುರುಹಾಸಿಗೆಯಲ್ಲಿಯೇ ಕುಳಿತನು. ಲಜ್ಜೆಪಟ್ಟು ಹೋಗಲೆಂದು ಎದ್ದ ಕನ್ಯೆಯನ್ನು ಚೂತಲತಿಕೆಯೆಂಬ ಸಖಿಯು ಗದರಿಸಿ ಕುಳ್ಳಿರಿಸಿ ಗಂಧೇಭವಿದ್ಯಾಧರನಾದ ಅರ್ಜುನನನ್ನು ಕುರಿತು ಹೀಗೆಂದಳು-
ಚಂ|| ಮದನನ ಕಾಯ್ಪು ಮಾಣ್ಗೆ ಸರಸೀರುಹಜನ್ಮನ ಮೆಚ್ಚು ತೀರ್ಗೆ ಕೊ
ಳ್ಗುದಿ ಮನದಿಂದಮಿಂದು ಪೊಱಮಾಱುಗೆ ಚಂದ್ರಕರಂಗಳಿಂದು ತ|
ಣ್ಣಿದುವೆರ್ದೆಗಕ್ಕೆ ಕೆಂದಳಿರ ಸೆಜ್ಜೆಯ ಜಿಂಜಿಣಿ ಪೋಕೆ ನಿನ್ನ ಕೂ
ಟದೊಳಿನಿದಕ್ಕೆ ಮತ್ಸಖಿಗೆ ಬೇರೆ ಪಳಾಳದೊಳೇಂ ಗುಣಾರ್ಣವಾ|| ೧೮ ||
ಪದ್ಯ-೧೮:ಪದವಿಭಾಗ-ಅರ್ಥ:ಮದನನ ಕಾಯ್ಪು ಮಾಣ್ಗೆ (ಮದನನ ಕೋಪ ನಿಲ್ಲಲಿ) ಸರಸೀರುಹಜನ್ಮನ ಮೆಚ್ಚು ತೀರ್ಗೆ (ಸರಸೀರುಹ-ಕಮಲದಲ್ಲಿ ಜನ್ಮನ ಹುಟ್ಟಿದವ-, ಬ್ರಹ್ಮನ ಅಪೇಕ್ಷೆ ತೀರಲಿ) ಕೊಳ್ ಕುದಿ(ಮಿತಿಮೀರಿದ ದುಃಖದ ಕುದಿತ) ಮನದಿಂದಂ ಇಂದು ಪೊಱಮಾಱುಗೆ (ವಿರಹತಾಪದ ಕುದಿತ ಮನಸ್ಸಿನಿಂದ ಹೊರಹೋಗಲಿ,) ಚಂದ್ರಕರಂಗಳು ಇಂದು ತಣ್ಣಿದುವ್ ಎರ್ದೆಗೆ ಅಕ್ಕೆ (ಚಂದ್ರಕಿರಣಗಳು ಇಂದು ಹೃದಯಕ್ಕೆ ತಂಪನ್ನುಂಟುಮಾಡುವುದಾಗಲಿ) ಕೆಂದಳಿರ ಸೆಜ್ಜೆಯ ಜಿಂಜಿಣಿ ಪೋಕೆ (ಕೆಂಪುಚಿಗುರು ಹಾಸಿಗೆಯ ತಾಪವು ಹೋಗಲಿ) ನಿನ್ನ ಕೂಟದೊಳು ಇನಿದಕ್ಕೆ ಮತ್ ಸಖಿಗೆ (ನಿನ್ನನ್ನು ಸೇರುವುದರಿಂದ ನನ್ನ ಸಖಿಗೆ ಸವಿಯುಂಟಾಗಲಿ) ಬೇರೆಪಳಾಳದೊಳು ಏಂ (ವ್ಯರ್ಥಾಲಾಪದಿಂದ) ಗುಣಾರ್ಣವಾ.
ಪದ್ಯ-೧೮:ಅರ್ಥ: ಮದನನ ಕೋಪ ನಿಲ್ಲಲಿ; ಬ್ರಹ್ಮನ ಆಶೆ ತೀರಲಿ, ವಿರಹತಾಪದ ಕುದಿತ ಮನಸ್ಸಿನಿಂದ ಹೊರಹೋಗಲಿ, ಚಂದ್ರಕಿರಣಗಳು ಇಂದು ಹೃದಯಕ್ಕೆ ತಂಪನ್ನುಂಟುಮಾಡುವುದಾಗಲಿ. ಕೆಂಪುಚಿಗುರು ಹಾಸಿಗೆಯ ತಾಪವು ಹೋಗಲಿ. ನಿನ್ನನ್ನು ಸೇರುವುದರಿಂದ ನನ್ನ ಸಖಿಗೆ ಸವಿಯುಂಟಾಗಲಿ, ಗುಣಾರ್ಣವ/ ಅರ್ಜುನನೇ ಇತರ ವ್ಯರ್ಥಾಲಾಪದಿಂದ ಏನು ಪ್ರಯೋಜನ? ಎಂದಳು ಸುಭದ್ರೆಯ ಸಖಿ.
ಚಂ||ಬೆಳಗುವ ಸಾಂದ್ರಚಂದ್ರಕಿರಣಾಳಿಗಳೋಳಿಗಳಿಂದಮೆತ್ತಮು
ಜ್ಜ್ವಳಿಸುವಿರುಳ್ಗಳಂ ಕಳೆದುಮೆಯ್ದೆ ತಳಿರ್ತೆಳಮಾವುಮಂ ಮನಂ|
ಗೊಳೆ ನಡೆ ನೋಡಿಯುಂ ಕಿವಿಯನಿಂದೊಳದಿಂಚರಕಾಂತುಮಿಂತು ಕೋ
ಮಳೆಯಸು ಮತ್ತಮೀಯೊಡಲೊಳಿರ್ದುದಿದೆಮ್ಮಯ ಸೈಪು ಭೂಪತೀ|| ೧೯ ||
ಪದ್ಯ-೧೯:ಪದವಿಭಾಗ-ಅರ್ಥ:ಬೆಳಗುವ ಸಾಂದ್ರಚಂದ್ರಕಿರಣಾಳಿಗಳ ಓಳಿಗಳಿಂದಂ(ಪ್ರಕಾಶಮಾನವೂ ದಟ್ಟವೂ ಆದ ಚಂದ್ರಕಿರಣಗಳ ಸಾಲುಗಳಿಂದ) ಎತ್ತಂ ಉಜ್ಜ್ವಳಿಸುವ ಇರುಳ್ಗಳಂ ಕಳೆದುಂ ಎಯ್ದೆ( ಎಲ್ಲೆಡೆಯೂ ತೊಳಗುವ ರಾತ್ರಿಗಳನ್ನು ಕಳೆದು ಬಂದ) ತಳಿರ್ತೆಳಮಾವುಮಂ (ಚಿಗುರಿದ ಎಳೆಯ ಮಾವಿನ ಮರಗಳನ್ನು ) ಮನಂಗೊಳೆ ನಡೆ ನೋಡಿಯುಂ (ತೃಪ್ತಿಯಾಗುವ ಹಾಗೆ ಚೆನ್ನಾಗಿ ನೋಡಿಯೂ) ಕಿವಿಯನು ಇಂದೊಳದ ಇಂಚರಕೆ ಆಂತುಮಿಂತು (ಹಿಂದೋಳರಾಗದ ಇಂಪಾದ ಧ್ವನಿಗೆ ಕಿವಿಗೊಟ್ಟೂ) ಕೋಮಳೆಯ ಅಸು (ಕೋಮಲ ಸುಭದ್ರೆಯ ಪ್ರಾಣವು) ಮತ್ತಂ ಈ ಯೊಡಲೊಳು ಇರ್ದುದು ಇದು ಎಮ್ಮಯ ಸೈಪು (ಪುಣ್ಯ) ಭೂಪತೀ (ರಾಜ ಅರಕೇಸರೀ/ಅರ್ಜುನನೇ ಈ ಕೋಮಲೆ ಸುಭದ್ರೆಯ ಪ್ರಾಣವು ಈ ಶರೀರದಲ್ಲಿಯೇ ಇದ್ದುದು ನಮ್ಮ ಪುಣ್ಯವೆಂದೇ ಹೇಳಬೇಕು)
ಪದ್ಯ-೧೯:ಅರ್ಥ: ಅರ್ಜುನ! ಪ್ರಕಾಶಮಾನವೂ ದಟ್ಟವೂ ಆದ ಚಂದ್ರಕಿರಣಗಳ ಸಾಲುಗಳಿಂದ ಎಲ್ಲೆಡೆಯೂ ತೊಳಗುವ ರಾತ್ರಿಗಳನ್ನು ಕಳೆದು ಬಂದ ಚಿಗುರಿದ ಎಳೆಯ ಮಾವಿನ ಮರಗಳನ್ನು ತೃಪ್ತಿಯಾಗುವ ಹಾಗೆ ಚೆನ್ನಾಗಿ ನೋಡಿಯೂ ಹಿಂದೋಳರಾಗದ ಇಂಪಾದ ಧ್ವನಿಗೆ ಕಿವಿಗೊಟ್ಟೂ ,ರಾಜ ಅರಕೇಸರೀ/ ಅರ್ಜುನನೇ ಈ ಕೋಮಲೆ ಸುಭದ್ರೆಯ ಪ್ರಾಣವು ಈ ಶರೀರದಲ್ಲಿಯೇ ಇದ್ದುದು ನಮ್ಮ ಪುಣ್ಯವೆಂದೇ ಹೇಳಬೇಕು.
ವ|| ಎಂಬನ್ನೆಗಂ ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳಾದ ಪಡೆಮಾತಂ ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದಾ ವನಾಂತರಾಳಕ್ಕೊರ್ವನೆ ಬಂದು ಮಾಧವೀಮಂಟಪಮಂ ಪೊಕ್ಕು ಅವರಿರ್ವರ ನಾಣುಮಂ ನಡುಕಮುಮಂ ಪತ್ತುವಿಟ್ಟು ನುಡಿದು-
ವಚನ:ಪದವಿಭಾಗ-ಅರ್ಥ:ಎಂಬ ಅನ್ನೆಗಂ (ಎನ್ನುವಷ್ಟರಲ್ಲಿ) ಸುರತಮಕರಧ್ವಜನ ಸುಭದ್ರೆಯ ವಿರಹ ಪರಿತಾಪದೊಳು ಆದ ಪಡೆಮಾತಂ (ಅರ್ಜುನ ಸುಭದ್ರೆಯರ ವಿರಹತಾಪಕ್ಕೆ ಸಂಬಂಧಪಟ್ಟ ಸುದ್ದಿಯನ್ನು) ಕರ್ಣಪರಂಪರೆಯಿಂ ಕೇಳ್ದು ಸಂತಸಂಬಟ್ಟು (ಕಿವಿಯಿಂದ ಕಿವಿಗೆ ಹರಡಿಬಂದ ಸುದ್ದಿಕೇಳಿ ಸಂತೋಷಪಟ್ಟು) ಚಕ್ರಿ ಚಕ್ರಿಕಾವರ್ತಿಯಪ್ಪುದಱಿಂದ ಆ ವನಾಂತರಾಳಕ್ಕೆ ಒರ್ವನೆ ಬಂದು (ಶ್ರೀಕೃಷ್ಣನು ಕಪಟೋಪಾಯವುಳ್ಳವನಾದುದರಿಂದ ಆ ವನದ ಒಳಗೆ ಒಬ್ಬನೇ ಬಂದು) ಮಾಧವೀಮಂಟಪಮಂ ಪೊಕ್ಕು (ಹೊಕ್ಕು) ಅವರು ಇರ್ವರ ನಾಣುಮಂ ನಡುಕಮುಮಂ ಪತ್ತುವಿಟ್ಟು ನುಡಿದು (ಅವರಿಬ್ಬರ ಲಜ್ಜೆಯನ್ನೂ ನಡುಕವನ್ನೂ ಹೋಗಲಾಡಿಸಿ ಹೇಳಿದನು) -
ವಚನ:ಅರ್ಥ:ಎನ್ನುವಷ್ಟರಲ್ಲಿ ಅರ್ಜುನ ಸುಭದ್ರೆಯರ ವಿರಹತಾಪಕ್ಕೆ ಸಂಬಂಧಪಟ್ಟ ಸುದ್ದಿಯನ್ನು ಕಿವಿಯಿಂದ ಕಿವಿಗೆ ಹರಡಿಬಂದ ಸುದ್ದಿಕೇಳಿ ಸಂತೋಷಪಟ್ಟು ಶ್ರೀಕೃಷ್ಣನು ಕಪಟೋಪಾಯವುಳ್ಳವನಾದುದರಿಂದ ಆ ವನದ ಒಳಗೆ ಒಬ್ಬನೇ ಬಂದು ಮಾಧವೀಮಂಟಪವನ್ನು ಪ್ರವೇಶಿಸಿ ಅವರಿಬ್ಬರ ಲಜ್ಜೆಯನ್ನೂ ನಡುಕವನ್ನೂ ಹೋಗಲಾಡಿಸಿ ಹೇಳಿದನು.

ಸುಭದ್ರೆಯ ಅಪಹರಣಕ್ಕೆ ಕೃಷ್ಣನ ಸಹಾಯ[ಸಂಪಾದಿಸಿ]

ಮ|| ಕುಡಲಿರ್ಪಂ ಬಲದೇವನೆನ್ನನುಜೆಯಂ ದುರ್ಯೋಧನಂಗಾನೊಡಂ
ಬಡೆನೀವೞ್ತಿಯದಾಗಳುಂ ನಿನಗೆ ದಲ್ ಪದ್ಮಾಸನಂ ತಾನೆ ನೇ|
ರ್ಪಡಿಸಲ್ ಕೂಡಿದನಿರ್ಪುದಲ್ತು ನಯಮಿನ್ನೀ ಪೊೞ್ತೆ ಪೊೞ್ತಾಗೆ ನೀ
ನೊಡಗೊಂಡುಯ್ವುದು ಕನ್ನೆಯಂ ತಡೆಯದಿರ್ ವಿದ್ವಿಷ್ಟವಿದ್ರಾವಣಾ|| ೨೦||
ಪದ್ಯ-೨೦:ಪದವಿಭಾಗ-ಅರ್ಥ:ಕುಡಲಿರ್ಪಂ ಬಲದೇವನು ಎನ್ನ (ಕೃಷ್ಣನ) ಅನುಜೆಯಂ (ತಂಗಿಯನ್ನು) ದುರ್ಯೋಧನಂಗೆ ಆನು ಒಡಂಬಡೆನು(ನಾನು ಒಪ್ಪುವುದಿಲ್ಲ) ಈವ ಅೞ್ತಿಯದು (ನಿನಗೆ -ಕನ್ಯೆಯನ್ನು ಕೊಡುವ ಪ್ರೀತಿ-ಅಪೇಕ್ಷೆ ಇದೆ)ಆಗಳುಂ ನಿನಗೆ ದಲ್ ಪದ್ಮಾಸನಂ ತಾನೆ ನೇರ್ಪಡಿಸಲ್ ಕೂಡಿದನ್ (ಬ್ರಹ್ಮನು ತಾನೇ ನಿನಗೆ-ಅರ್ಜುನನಿಗೆ ಸುಭದ್ರೆ ಸೇರಲು ಕೂಡಿಸಿದ್ದಾನೆ) ಇರ್ಪುದಲ್ತು ನಯಮಿನ್ನು (ಇನ್ನು ನೀವು ಇಲ್ಲಿ ಇರುವುದು ನೀತಿಯಲ್ಲ.) ಈ ಪೊೞ್ತೆ ಪೊೞ್ತಾಗೆ ನೀನು ಒಡಗೊಂಡು ಉಯ್ವುದು ಕನ್ನೆಯಂ ( ಈ ಹೊತ್ತೆ ಹೊತ್ತಾಗಿ ಅಂದರೆ ಈಗಲೇ ಕನ್ಯೆಯನ್ನು ಜೊತೆಯಲ್ಲಿ ಕರೆದುಕೊಂಡು ಹೊರಟುಹೋಗು,) ತಡೆಯದಿರ್ ವಿದ್ವಿಷ್ಟವಿದ್ರಾವಣಾ (ಅರ್ಜುನನೇ ತಡಮಾಡಬೇಡ.)
ಪದ್ಯ-೨೦:ಅರ್ಥ:ಬಲರಾಮನು ನನ್ನ ತಂಗಿಯನ್ನು ದುರ್ಯೋಧನನಿಗೆ ಕೊಡಬೇಕೆಂದಿದ್ದಾನೆ. ನಾನು ಅದಕ್ಕೆ ಒಪ್ಪುವುದಿಲ್ಲ. ನಿನಗೇ ಪ್ರೀತಿಯಿಂದ ಕೊಡಬೇಕೆಂಬುದು ನನ್ನ ಅಪೇಕ್ಷೆ. ಬ್ರಹ್ಮನು ತಾನೇ ನಿನಗೆ-ಸುಭದ್ರೆಯು ಸೇರಲು, ಇಬ್ಬರನ್ನೂ ಕೂಡಿಸಿದ್ದಾನೆ). ಇನ್ನು ಮೇಲೆ ಇಲ್ಲಿರುವುದು ನೀತಿಯಲ್ಲ. ಈ ಹೊತ್ತೆ ಹೊತ್ತಾಗಿ ಅಂದರೆ ಈಗಲೇ ಕನ್ಯೆಯನ್ನು ಜೊತೆಯಲ್ಲಿ ಕರೆದುಕೊಂಡು ಹೊರಟುಹೋಗು, ವಿದ್ವಿಷ್ಟವಿದ್ರಾವಣನಾದ ಅರ್ಜುನನೇ ತಡಮಾಡಬೇಡ.
ವ|| ಅಂತು ಪೋಗೆವೋಗೆ ಬಲದೇವನನುಮತದೊಳ್ ಪೆಱಗಂ ತಗುಳ್ವ ಯಾದವ ಬಲಮುಂಟಪ್ಪೊಡದನಂಬುಗಾಣಿಸಲ್ ನೀನೆ ಸಾಲ್ವೆಯುೞಿದುದಂ ಮಾಣಿಸಲಾನೆ ಸಾಲ್ವೆನಿದುವೆ ಮುಹೂರ್ತಮಾಗೆ ನಡೆವುದೆಂದು ಶೈಬ್ಯ ಬಳಾಹಕ ಮೇಘವರ್ಣ ಸುಗ್ರೀವಂಗಳೆಂಬ ನಾಲ್ಕು ಕುದುರೆಗಳೊಳ್ ಪೂಡಿದ ದಿವ್ಯರಥಮನೆಸಗಲ್ ದಾರುಕನೆಂಬ ಸಾರಥಿಯನೀವುದುಮಾ ರಥಮಂ ಮನೋರಥನಂ ಬೆರಸೇಱಿ ಚೂತಲತಿಕೆವೆರಸು ಸುಭದ್ರೆಯನೇಱಲ್ವೇೞ್ದುದಾತ್ತನಾರಾಯಣಂ ನಾರಾಯಣನ ಪರಸಿದ ಪರಕೆಗಳುಮಂ ಕೆಯ್ಕೊಂಡು ಬೀೞ್ಕೊಂಡಿಂದ್ರಪ್ರಸ್ಥದ ಬಟ್ಟೆಯೊಳ್ ಸುಖಪ್ರಯಾಣಂಗೆಯ್ದನನ್ನೆಗಮಿತ್ತ ಬಲದೇವಂ ಸುಭದ್ರೆಯಂ ಸಾಮಂತಚೂಡಾಮಣಿಯುಯ್ದನೆಂಬುದಂ ಕೇಳ್ದು-
ವಚನ:ಪದವಿಭಾಗ-ಅರ್ಥ:ಅಂತು ಪೋಗೆವೋಗೆ (ಹಾಗೆ ಹೋಗುವಾಗ) ಬಲದೇವನ ಅನುಮತದೊಳ್ ಪೆಱಗಂತಗುಳ್ವ (ಬಲರಾಮನ ಸಮ್ಮತಿಯಂತೆ ಬೆನ್ನಟ್ಟಿಬರುವ) ಯಾದವ ಬಲಮುಂಟು ಅಪ್ಪೊಡೆ (ಬೆನ್ನಟ್ಟಿಬರುವ ಯಾದವ ಬಲವುಂಟಾದರೆ ) ಅದನು ಅಂಬುಗಾಣಿಸಲ್ ನೀನೆ ಸಾಲ್ವೆಯು (ಅದಕ್ಕೆ ಬಾಣಪ್ರಯೋಗ ಮಾಡಲು ನೀನು ಶಕ್ತನಾಗಿದ್ದೀಯೆ.) ಉೞಿದುದಂ ಮಾಣಿಸಲಾನೆ ಸಾಲ್ವೆನು (ಉಳಿದುದನ್ನು ತಪ್ಪಿಸಲು ನಾನು ಶಕ್ತನು- ಬಲ್ಲೆ,) ಇದುವೆ ಮುಹೂರ್ತಮಾಗೆ ನಡೆವುದೆಂದು ಶೈಬ್ಯ ಬಳಾಹಕ ಮೇಘವರ್ಣ ಸುಗ್ರೀವಂಗಳೆಂಬ ನಾಲ್ಕು ಕುದುರೆಗಳೊಳ್ ಪೂಡಿದ (ಹೂಡಿದ) ದಿವ್ಯರಥಮನು ಎಸಗಲ್ ದಾರುಕನೆಂಬ ಸಾರಥಿಯನು ಈವುದುಂ (ಅದನ್ನು ನಡೆಯಲು ದಾರುಕನೆಂಬ ಸಾರಥಿಯನ್ನೂ ಕೊಟ್ಟನು). ಆ ರಥಮಂ ಮನೋರಥನಂ ಬೆರಸಿ ಏಱಿ ಚೂತಲತಿಕೆವೆರಸು ಸುಭದ್ರೆಯನೇಱಲ್ವೇೞ್ದು (ಆ ರಥವನ್ನು ಅರ್ಜುನನು ಸಂತೋಷದಿಂದ ಚೂತಲತಿಕೆಯೊಡಗೂಡಿ ಸುಭದ್ರೆಯನ್ನು ಹತ್ತಲು ಹೇಳಿ), ಉದಾತ್ತನಾರಾಯಣಂ (ಅರ್ಜುನನು) ನಾರಾಯಣನ ಪರಸಿದ ಪರಕೆಗಳುಮಂ ಕೆಯ್ಕೊಂಡು (ನಾರಾಯಣನು/ಕೃಷ್ಣನು ಹರಸಿದ ಹರಕೆಗಳನ್ನು ಅಂಗೀಕರಿಸಿ ) ಬೀೞ್ಕೊಂಡು ಇದ್ರಪ್ರಸ್ಥದ ಬಟ್ಟೆಯೊಳ್ ಸುಖಪ್ರಯಾಣಂಗೆಯ್ದನು(ಅವನಿಂದ ಅಪ್ಪಣೆಪಡೆದು ಇಂದ್ರಪ್ರಸ್ಥದ ದಾರಿಯಲ್ಲಿ ಸುಖಪ್ರಯಾಣಮಾಡಿದನು). ಅನ್ನೆಗಂ ಇತ್ತ ಬಲದೇವಂ (ಅಷ್ಟರಲ್ಲಿ ಈಕಡೆ ಬಲರಾಮನು) ಸುಭದ್ರೆಯಂ ಸಾಮಂತಚೂಡಾಮಣಿಯು ಉಯ್ದನೆಂಬುದಂ ಕೇಳ್ದು(ಸುಭದ್ರೆಯನ್ನು ಅರ್ಜುನನು ಕರೆದುಕೊಂಡು ಹೋದನೆಂಬುದನ್ನು ಕೇಳಿ)-
ವಚನ:ಅರ್ಥ:ಹಾಗೆ ಹೋಗುವಾಗ ಬಲರಾಮನ ಸಮ್ಮತಿಯಂತೆ ಬೆನ್ನಟ್ಟಿಬರುವ ಯಾದವ ಬಲವುಂಟಾದರೆ ಅದಕ್ಕೆ ಬಾಣಪ್ರಯೋಗ ಮಾಡಲು ನೀನು ಶಕ್ತನಾಗಿದ್ದೀಯೆ. ಉಳಿದುದನ್ನು ತಪ್ಪಿಸಲು ನಾನು ಶಕ್ತನು/ ಬಲ್ಲೆ, ಇದನ್ನೇ ಸುಮುಹೂರ್ತವನ್ನಾಗಿ ಎಣಿಸಿ ಹೊರಡು ಎಂದು ಶೈಬ್ಯ, ಬಳಾಹಕ, ಮೇಘವರ್ಣ, ಸುಗ್ರೀವಗಳೆಂಬ ನಾಲ್ಕು ಕುದುರೆಗಳನ್ನು ಹೂಡಿದ್ದ ದಿವ್ಯರಥವನ್ನೂ ಅದನ್ನು ನಡೆಯಲು ದಾರುಕನೆಂಬ ಸಾರಥಿಯನ್ನೂ ಕೊಟ್ಟನು. ಆ ರಥವನ್ನು ಅರ್ಜುನನು ಸಂತೋಷದಿಂದ ಚೂತಲತಿಕೆಯೊಡಗೂಡಿ ಸುಭದ್ರೆಯನ್ನು ಹತ್ತಲು ಹೇಳಿ ನಾರಾಯಣನು/ಕೃಷ್ಣನು ಹರಸಿದ ಹರಕೆಗಳನ್ನು ಅಂಗೀಕರಿಸಿ ಅವನಿಂದ ಅಪ್ಪಣೆಪಡೆದು ಇಂದ್ರಪ್ರಸ್ಥದ ದಾರಿಯಲ್ಲಿ ಸುಖಪ್ರಯಾಣಮಾಡಿದನು. ಅಷ್ಟರಲ್ಲಿ ಈಕಡೆ ಬಲರಾಮನು ಸುಭದ್ರೆಯನ್ನು ಸಾಮಂತಚೂಡಾಮಣಿಯಾದ ಅರ್ಜುನನು ಕರೆದುಕೊಂಡು ಹೋದನೆಂಬುದನ್ನು ಕೇಳಿ-
ಮ|| ಉಱದೆನ್ನಂ ಕುಡಲಿರ್ದ ಕೂಸನೊಡಗೊಂಡುಯ್ವಾತನಂ ತಾಗಿ ತ
ಳ್ತಿಱಿಯಲ್ ಕೋಡಗಗಟ್ಟುಗಟ್ಟಿ ತರಲಿನ್ನಾರಾರ್ಪರಂತಪ್ಪ ಪೊ|
ಚ್ಚಱಸಾಮಂತರೆ ಪೋಗಿಮೆಂದು ಪಲರಂ ಪೇೞ್ದಾಗಳೆಯ್ತಂದರಂ
ತೊರೆಕೊಳ್ವಂತಿರೆ ಕೊಂಡುವಂದರಿಗನೆಚ್ಚುಗ್ರೇಷು ಧಾರಾಜಳಂ|| ೨೧ ||
ಪದ್ಯ-೨೧:ಪದವಿಭಾಗ-ಅರ್ಥ:ಉಱದೆ ಎನ್ನಂ (ನನ್ನನ್ನು ಲಕ್ಷಿಸದೆ) ಕುಡಲಿರ್ದ ಕೂಸನು ಒಡಗೊಂಡುಯ್ವ ಆತನಂ ತಾಗಿ (ದಾನಮಾಡಬೇಕಿದ್ದ ಕನ್ಯೆಯನ್ನು ಜೊತೆಯಲ್ಲಿ ಕೊಂಡು ಹೋದವನನ್ನು ಎದುರಿಸಿ) ತಳ್ತಿಱಿಯಲ್ (ತಳ್ತು ಅರಿಯಲ್ ಸೇರಿ ಹೋರಾಡಿ) ಕೋಡಗಗಟ್ಟುಗಟ್ಟಿ ತರಲು ಇನ್ನಾರು ಆರ್ಪರ್ (ಕಪಿಯನ್ನು ಕಟ್ಟುವ ಹಾಗೆ ಕಟ್ಟಿ ತರಲೂ ಯಾರು ಸಮರ್ಥರಾಗಿರುತ್ತಾರೆ) ಅಂತಪ್ಪ ಪೊಚ್ಚಱಸಾಮಂತರೆ ಪೋಗಿಂ ಎಂದು (ಅಂತಹ ಪರಾಕ್ರಮವುಳ್ಳ ಶೂರಸಾಮಂತರೇ ಹೋಗಿ” ಎಂದು) ಪಲರಂ ಪೇೞ್ದಾಗಳ್ ಎಯ್ತಂದರಂ (ಹಲವರನ್ನು ನೇಮಿಸಲು -ಹಾಗೆ ಬಂದು- ಎದುರಿಸಿದವರನ್ನು) ತೊರೆಕೊಳ್ವಂತಿರೆ (ನದಿಯ ಪ್ರವಾಹದ ಹಾಗೆ) ಕೊಂಡುವು (ಆಕ್ರಮಿಸಿ ಕೊಂದಿತು) ಅಂದು ಅರಿಗನು ಎಚ್ಚ ಉಗ್ರೇಷು ಧಾರಾಜಳಂ (ಅರಿಗನು /ಅರ್ಜುನನು ಹೊಡೆದ ಭಯಂಕರವಾದ ಬಾಣಗಳ ಧಾರಾಪ್ರವಾಹವು ನದಿಯು ನುಗ್ಗುವ ಹಾಗೆ ಆಕ್ರಮಿಸಿ ಕೊಂದಿತು. )
ಪದ್ಯ-೨೧:ಅರ್ಥ: “ನನ್ನನ್ನು ಲಕ್ಷಿಸದೆ ದಾನಮಾಡಬೇಕಿದ್ದ ಕನ್ಯೆಯನ್ನು ಜೊತೆಯಲ್ಲಿ ಕೊಂಡು ಹೋದವನನ್ನು ಎದುರಿಸಿ ಹೋರಾಡಿ ಕಪಿಯನ್ನು ಕಟ್ಟುವ ಹಾಗೆ ಕಟ್ಟಿ ತರಲೂ ಯಾರು ಸಮರ್ಥರಾಗಿರುತ್ತಾರೆ, ಅಂತಹ ಪರಾಕ್ರಮವುಳ್ಳ ಶೂರಸಾಮಂತರೇ ಹೋಗಿ” ಎಂದು ಹಲವರನ್ನು ನೇಮಿಸಲು (ಹಾಗೆ ಬಂದು) ಎದುರಿಸಿದವರನ್ನು ಅರ್ಜುನನು ಹೊಡೆದ ಭಯಂಕರವಾದ ಬಾಣಗಳ ಧಾರಾಪ್ರವಾಹವು ನದಿಯು ಪ್ರವಾಹ ನುಗ್ಗುವ ಹಾಗೆ ಆಕ್ರಮಿಸಿ ಕೊಂದಿತು.
ವ|| ಆಗಳ್ ತನ್ನ ಪೇೞ್ದ ನಾಯಕರ ಸಾವಂ ಕೇಳ್ದು ಯಾದವಬಲ ಜಳನಿವೆರಸು ವಿಳಯಕಾಲ ಜಳನಿಯಂತೆ ತೆರಳಲ್ ಬಗೆದ ಬಲದೇವನಂ ವಾಸುದೇವನಿಂತೆಂದಂ-
ವಚನ:ಪದವಿಭಾಗ-ಅರ್ಥ:ಆಗಳ್ ತನ್ನ ಪೇೞ್ದ ನಾಯಕರ ಸಾವಂ ಕೇಳ್ದು (ಹೇಳಿ ನಿಯಮಿಸಿದ ನಾಯಕರ ಸಾವನ್ನು ಕೇಳಿ ) ಯಾದವಬಲ ಜಳನಿವೆರಸು (ಯಾದವ ಬಲಸಮುದ್ರದೊಡಗೂಡಿ) ವಿಳಯಕಾಲ ಜಳನಿಯಂತೆ (ಪ್ರಳಯಕಾಲದ ಸಮುದ್ರದಂತೆ ) ತೆರಳಲ್ ಬಗೆದ ಬಲದೇವನಂ ವಾಸುದೇವನು ಇಂತೆಂದಂ (ಬಲರಾಮನನ್ನು ಕುರಿತು ಕೃಷ್ಣನು ಹೀಗೆಂದನು)-
ವಚನ:ಅರ್ಥ:“ಆಗ ತಾನು ಹೇಳಿ ನಿಯಮಿಸಿದ ನಾಯಕರ ಸಾವನ್ನು ಕೇಳಿ ಯಾದವ ಬಲಸಮುದ್ರದೊಡಗೂಡಿ ಪ್ರಳಯಕಾಲದ ಸಮುದ್ರದಂತೆ ಹೊರಡಲು ಯೋಚಿಸಿದ ಬಲರಾಮನನ್ನು ಕುರಿತು ಕೃಷ್ಣನು ಹೀಗೆಂದನು –
ಮ|| ಕುಲಮಂ ಪೇೞ್ವೊಡೆ ಸೋಮವಂಶತಿಲಕಂ ಬಿಲ್ಲಾಳ್ತನಂಬೇೞ್ವೊಡು
ಜ್ವಲ ತೀವ್ರಾಸ್ತ್ರನಿಘಾತಪಾತಿತ ರಿಪುವ್ಯೂಹಂ ಬಲಂಬೇೞೆ ದೋ|
ರ್ವಲದೊಳ್ ಕೇಳ್ ನಿನಗಂ ಬಲಸ್ಥನೊಡೆಯಂ ಕೂಸಿಂಗೆ ಕೊಂಡುಯ್ವುದೇ
ಚಲಮೇ ದೋಷಮದರ್ಕೆ ನೀನ್ ಮುಳಿವುದೇ ನೀನ್ ಪೇೞ್ವೊಡಾನ್ ಸಾಲೆನೇ|| ೨೨||
ಪದ್ಯ-೨೨:ಪದವಿಭಾಗ-ಅರ್ಥ:ಕುಲಮಂ ಪೇೞ್ವೊಡೆ ಸೋಮವಂಶತಿಲಕಂ (ಸುಭದ್ರೆಯನ್ನು ಕರೆದೊಯ್ದ ಅರ್ಜುನನ - ಕುಲವನ್ನು ಹೇಳುವುದಾದರೆ ಚಂದ್ರವಂಶದಲ್ಲಿ ಶ್ರೇಷ್ಠನಾದವನಾಗಿದ್ದಾನೆ) ಬಿಲ್ಲಾಳ್ತನಂ ಬೇೞ್ವೊಡೆ ಉಜ್ವಲ ತೀವ್ರಾಸ್ತ್ರ ನಿಘಾತ ಪಾತಿತ(ಕೆಡವಿದ) ರಿಪುವ್ಯೂಹಂ (ಧನುರ್ವಿದ್ಯೆಯ ಪರಾಕ್ರಮವನ್ನು ಹೇಳುವುದಾದರೆ ತನ್ನ ತೀಕ್ಷ್ಣಬಾಣಗಳ ಹೊಡೆತದಿಂದ ಶತ್ರುವ್ಯೂಹವನ್ನು ಕೆಡವಿದ ಸಾಮರ್ಥ್ಯವುಳ್ಳವನು) ಬಲಂಬೇೞೆ ದೋರ್ವಲದೊಳ್ / ತೋಳ್ ಬಲದೊಳ್(ಬಲವನ್ನು ಹೇಳುವುದಾದರೆ ಬಾಹುಬಲದಲ್ಲಿ) ಕೇಳ್ ನಿನಗಂ ಬಲಸ್ಥನೊಡೆಯಂ (ನಿನಗಿಂತಲೂ ಬಲಿಷ್ಠನಾದವನು) ಕೂಸಿಂಗೆ ಕೊಂಡುಯ್ವುದು (ನಮ್ಮ ಕನ್ಯೆಯನ್ನು ಕೊಂಡುಹೋಗಲಿ,) ಏಚಲಮೇ (ಸಿಟ್ಟು - ಹಟವೇತಕ್ಕೆ?) ದೋಷಂ (ದೋಷವೇನು?) ಅದರ್ಕೆ ನೀನ್ ಮುಳಿವುದೇ (ಅದಕ್ಕೆ ನೀನು ಕೋಪಿಸುವುದೇ?) ನೀನ್ ಪೇೞ್ವೊಡೆ ಆನ್ ಸಾಲೆನೇ (ನೀನು ಹೇಳಿದರೆ, ನಾನು ಸಾಲದೆ?)
ಪದ್ಯ-೨೨:ಅರ್ಥ:ಕುಲವನ್ನು ಹೇಳುವುದಾದರೆ ಚಂದ್ರವಂಶದಲ್ಲಿ ಶ್ರೇಷ್ಠನಾದವನಾಗಿದ್ದಾನೆ. ಧನುರ್ವಿದ್ಯೆಯ ಪರಾಕ್ರಮವನ್ನು ಹೇಳುವುದಾದರೆ ತನ್ನ ತೀಕ್ಷ್ಣಬಾಣಗಳ ಹೊಡೆತದಿಂದ ಶತ್ರುವ್ಯೂಹವನ್ನು ಕೆಡವಿದ ಸಾಮರ್ಥ್ಯವುಳ್ಳವನು. ಬಲವನ್ನು ಹೇಳುವುದಾದರೆ ಬಾಹುಬಲದಲ್ಲಿ ನಿನಗಿಂತಲೂ ಬಲಿಷ್ಠನಾದವನು; ನಮ್ಮ ಕನ್ಯೆಯನ್ನು ಕೊಂಡುಹೋಗಲಿ, ಸಿಟ್ಟು - ಹಟವೇತಕ್ಕೆ? ದೋಷವೇನು? ಅದಕ್ಕೆ ನೀನು ಕೋಪಿಸುವುದೇ? ನೀನು ಹೋರಾಡು ಎಂದು ಆಜ್ಞೆ ಮಾಡುವುದಾದರೆ ಅವನೊಡನೆ ಯುದ್ಧಮಾಡಲು ನಾನೇ ಸಮರ್ಥನಲ್ಲವೇ?
ವ|| ಎಂದು ಬಲದೇವನ ಮನದೊಳಾದ ಮುಳಿಸೆಂಬ ಕಿಚ್ಚಂ ತನ್ನ ಮೃದು ಮಧುರ ವಚನರಚನಾಜಲಂಗಳಂ ತಳಿದು ನದಿಪಿದನಿತ್ತ ವಿಕ್ರಮಾರ್ಜುನನುಂ ಕತಿಪಯ ದಿನಂಗಳಿಂದನೇಕ ಸಹಕಾರಶೋಕಾನೋಕಹನಂದನವನಪ್ರಸ್ಧಮನಿಂದ್ರ ಪ್ರಸ್ಥಮನೆಯ್ದೆವಂದು ಮುನ್ನಮೆ ತನ್ನ ಬರವನಱಿದು ಪೊೞಲೊಳಷ್ಟಶೋಭೆಯಂ ಮಾಡಿ ತನಗಿದಿರ್ವಂದ ಕೊಂತಿಯ ಧರ್ಮಪುತ್ರ ಭೀಮಸೇನಾದಿಗಳ ಪಾದ ಪದ್ಮಂಗಳಂ ತನ್ನ ಕರಕಮಲಂಗಳಿಂದರ್ಚಿಸಿ ತದೀಯಾಶೀರ್ವಚನಂಗಳನಾಂತು ತನಗೆ ಪೊಡಮಟ್ಟ ನಕುಲ ಸಹದೇವಂ ಪರಸಿ ಪುನಪುನರಾಲಿಂಗನಂಗೆಯ್ದು ಮುಹುರ್ಮುಹುರಾಳೋಕನಂಗೆಯ್ಯುತ್ತುಂ ಬಂದು ದಿವಿಜೇಂದ್ರ ವಿಳಾಸದಿಂ ಪೊೞಲಂ ಪುಗೆ-
ವಚನ:ಪದವಿಭಾಗ-ಅರ್ಥ:ಎಂದು ಬಲದೇವನ ಮನದೊಳಾದ ಮುಳಿಸೆಂಬ ಕಿಚ್ಚಂ (ಬಲರಾಮನ ಮನಸ್ಸಿನ ಕೋಪವೆಂಬ ಬೆಂಕಿಯನ್ನು) ತನ್ನ ಮೃದು ಮಧುರ ವಚನರಚನಾ ಜಲಂಗಳಂ ತಳಿದು ನದಿಪಿದನು (ತನ್ನ ಸವಿ ಮಾತಿನ ಜಾಣ ಜೋಡಣೆಯ ನೀರಿನಿಂದ ಸಿಂಪಿಸಿ ನಂದಿಸಿದನು.) ಇತ್ತ ವಿಕ್ರಮಾರ್ಜುನನುಂ ಕತಿಪಯ ದಿನಂಗಳಿಂದ (ಅರ್ಜುನನು ಕೆಲವು ದಿವಸಗಳಲ್ಲಿ) ಅನೇಕ ಸಹಕಾರ ಅಶೋಕ ಅನೋಕ ಅಹ (ಇರುವ) ನಂದನವನ ಪ್ರಸ್ಧಮನು ಇಂದ್ರಪ್ರಸ್ಥಮನು ಎಯ್ದೆವಂದು (ನಂದನವನದಂತಿರುವ ವನಗಳಿಂದ ಕೂಡಿದ ಇಂದ್ರಪ್ರಸ್ಥ ಪುರವನ್ನು ಸೇರಿ ಬಂದು, -ಸೇರಿದನು.) ಮುನ್ನಮೆ ತನ್ನ ಬರವನಱಿದು ಪೊೞಲೊಳು ಅಷ್ಟಶೋಭೆಯಂ ಮಾಡಿ (ಎಂಟು ವಿಧವಾದ ಅಲಂಕಾರಗಳಿಂದ ಅಲಂಕರಿಸಿ) ತನಗಿದಿರ್ವಂದ (ತನ್ನ ಸ್ವಾಗತ್ಕ್ಕೆ ಬಂದ) ಕೊಂತಿಯ ಧರ್ಮಪುತ್ರ ಭೀಮಸೇನಾದಿಗಳ ಪಾದ ಪದ್ಮಂಗಳಂ ತನ್ನ ಕರಕಮಲಂಗಳಿಂದ ಅರ್ಚಿಸಿ (ಪೂಜಿಸಿ) ತದೀಯ (ಅವರಿಂದ) ಆಶೀರ್ವಚನಂಗಳನು ಆಂತು (ಪಡೆದು) ತನಗೆ ಪೊಡಮಟ್ಟ ನಕುಲ ಸಹದೇವಂ ಪರಸಿ (ಹರಸಿ) ಪುನಪುನಂ ಆಲಿಂಗನಂಗೆಯ್ದು ಮುಹುರ್ಮುಹುರ್ ಆಳೋಕನಂ ಗೆಯ್ಯುತ್ತುಂ (ನೋಡುತ್ತ) ಬಂದು ದಿವಿಜೇಂದ್ರ ವಿಳಾಸದಿಂ ಪೊೞಲಂ ಪುಗೆ (ದೇವೇಂದ್ರ ವೈಭವದಿಂದ ಪಟ್ಟಣವನ್ನು ಹೊಗಲು- (ಪ್ರವೇಶಿಸಿದನು)-
ವಚನ:ಅರ್ಥ:ಎಂದು ಬಲರಾಮನ ಮನಸ್ಸಿನ ಕೋಪವೆಂಬ ಬೆಂಕಿಯನ್ನು ತನ್ನ ಸವಿ ಮಾತಿನ ಜಾಣ ಜೋಡಣೆಯ ನೀರಿನಿಂದ ಸಿಂಪಿಸಿ ನಂದಿಸಿದನು. ಈ ಕಡೆ ವಿಕ್ರಮಾರ್ಜುನನು ಕೆಲವು ದಿವಸಗಳಲ್ಲಿ ಅನೇಕ ಮಾವಿನ ಮತ್ತು ಅಶೋಕಮರಗಳುಳ್ಳ ನಂದನವನದಂತಿರುವ ವನಗಳಿಂದ ಕೂಡಿದ ಇಂದ್ರಪ್ರಸ್ಥ ಪುರವನ್ನು ಸೇರಿದನು. ಮೊದಲೇ ತಾನು ಬರುವುದನ್ನು ತಿಳಿದು ಪಟ್ಟಣವನ್ನು ಎಂಟು ವಿಧವಾದ ಅಲಂಕಾರಗಳಿಂದ ಅಲಂಕರಿಸಿತ್ತು. ತನಗೆ ತನ್ನ ಸ್ವಾಗತ್ಕ್ಕೆ ಬಂದ ಕುಂತೀದೇವಿ, ಧರ್ಮರಾಜ, ಭೀಮಸೇನನೇ ಮೊದಲಾದವರ ಪಾದಕಮಲಗಳನ್ನು ತನ್ನ ಕಮಲಹಸ್ತಗಳಿಂದ ಪೂಜೆಮಾಡಿ ಅವರಿಂದ ಆಶೀರ್ವಾದಗಳನ್ನು ಪಡೆದನು. ತನಗೆ ನಮಸ್ಕಾರ ಮಾಡಿದ ನಕುಲ ಸಹದೇವರನ್ನು ಹರಸಿ ಪುನ ಪುನ ಆಲಿಂಗನಮಾಡಿಕೊಂಡು ಪುನ ಪುನ ನೋಡುತ್ತ ದೇವೇಂದ್ರ ವೈಭವದಿಂದ ಪಟ್ಟಣವನ್ನು ಪ್ರವೇಶಿಸಿದನು.-
ಕಂ|| ಪರಸುವ ಪುರಜನದೊದವಿದ
ಪರಕೆಗಳಂಬುಧಿನಿನಾದಮಂ ಮಿಗೆ ತಮ್ಮ|
ಯ್ವರುಮೊಡನೆ ಮೆರೆದು ಪರಮಾ
ನುರಾಗದಿಂ ಬಂದು ಪೊಕ್ಕರಂದರಮನೆಯಂ|| ೨೩ ||
ಪದ್ಯ-೦೦:ಪದವಿಭಾಗ-ಅರ್ಥ:ಪರಸುವ ಪುರಜನದ ಒದವಿದ ಪರಕೆಗಳ ಅಂಬುಧಿನಿನಾದಮಂ ಮಿಗೆ (ಹರಕೆಗಳು ಸಮುದ್ರಘೋಷವನ್ನು ಮೀರಿರಲು) ತಮ್ಮ ಅಯ್ವರುಮೊಡನೆ ಮೆರೆದು (ಐದು ಜನರೂ ಅತ್ಯಂತ ಸಂತೋಷದಿಂದ) ಪರಮಾನುರಾಗದಿಂ ಬಂದು ಪೊಕ್ಕರು (ಹೊಕ್ಕರು) ಅಂದು ಅರಮನೆಯಂ
ಪದ್ಯ-೦೦:ಅರ್ಥ: ಆಗ ಪಟ್ಟಣದ ಜನರು ಹರಸಿದ ಹರಕೆಗಳು ಸಮುದ್ರಘೋಷವನ್ನು ಮೀರಿರಲು ತಾವ ಐದು ಜನರೂ ಅತ್ಯಂತ ಸಂತೋಷದಿಂದ ಅರಮನೆಯನ್ನು ಪ್ರವೇಶಿಸಿದರು.
ವ|| ಅಂತು ರಾಜಮಂದಿರಮಂ ಪೊಕ್ಕು ಧರ್ಮಪುತ್ರನನಗಲ್ದ ಪನ್ನೆರಡು ಮಾಸದೊಳಾದ ದಿಗ್ವಿಜಯ ಪ್ರಪಂಚಮುಮಂ ಸುಭದ್ರಾಹರಣಮುಮಂ ಪುರುಷೋತ್ತಮನ ಪರಮ ಮಿತ್ರತ್ವಮುಮನಱಿದು ಸಂತಸಂಬಟ್ಟು ತಮ್ಮನಿಬರುಮೇಕಸ್ಥರಾಗಿ-
ವಚನ:ಪದವಿಭಾಗ-ಅರ್ಥ:ಅಂತು ರಾಜಮಂದಿರಮಂ ಪೊಕ್ಕು (ಅರಮನೆಯನ್ನು ಪ್ರವೇಶಿಸಿ) ಧರ್ಮಪುತ್ರನನಗಲ್ದ ಪನ್ನೆರಡು ಮಾಸದೊಳು ಆದ ದಿಗ್ವಿಜಯ ಪ್ರಪಂಚಮುಮಂ (ಸಮಾಚಾರವನ್ನು) ಸುಭದ್ರಾಹರಣಮುಮಂ ಪುರುಷೋತ್ತಮನ ಪರಮ ಮಿತ್ರತ್ವಮುಮನು ಅಱಿದು ಸಂತಸಂಬಟ್ಟು ತಮ್ಮ ಅನಿಬರುಂ ಏಕಸ್ಥರಾಗಿ-
ವಚನ:ಅರ್ಥ:|| ಹಾಗೆ ಅರಮನೆಯನ್ನು ಪ್ರವೇಶಿಸಿ ಧರ್ಮರಾಜನನ್ನು ಅಗಲಿಹೋದ ಹನ್ನೆರಡು ತಿಂಗಳುಗಳಲ್ಲಿ ನಡೆದ ದಿಗ್ವಿಜಯದ ವಿಷಯವನ್ನೂ ಸುಭದ್ರಾಪಹರಣವನ್ನೂ ಎಲ್ಲರೂ ಕೇಳಿದರು. ಪುರುಷೋತ್ತಮನಾದ ಶ್ರೀಕೃಷ್ಣನ ಉತ್ತಮ ಸ್ನೇಹಸ್ವಭಾವವನ್ನು ತಿಳಿದು ಸಂತೋಷಪಟ್ಟರು. ತಾವೈದು ಜನವೂ ಒಮ್ಮನಸ್ಸಿನಿಂದ.
ಮ|| ಎರೆದಿಂತಟ್ಟಲೇವೇೞ್ಪ ಕನ್ನೆ ಬೞಿಯಂ ಬಂದಳ್ ಮರುಳ್ದಂಬುಜೋ
ದರನಿಂತಟ್ಟಿದನಿಂತು ನೋಂತರೊಳರೇ ಸೈಪಿಂಗೆ ನಾಮಿನ್ನಿಳಾ|
ಧರನುಂ ಯಾದವ ವಂಶಜರ್ವೆರಸು ಬರ್ಪಂತಟ್ಟಿ ಮಾೞ್ಪಂ ಮನೋ
ಹರಮಪ್ಪಂತು ವಿವಾಹಮಂಗಳಮನೆಂದಂದಟ್ಟಿದರ್ ದೂತರಂ|| ೨೪ ||
ಪದ್ಯ-೦೦:ಪದವಿಭಾಗ-ಅರ್ಥ:ಎರೆದು (ನಮಗೆ ದಾನವಾಗಿ ಕೊಡಿ ಎಂದು ಬೇಡಿಕೊಂಡು) ಇಂತು ಅಟ್ಟಲೇವೇೞ್ಪ (ಎಂದು ದೂತರನ್ನು ಕಳಿಸಬೇಕು) ಕನ್ನೆ ಬೞಿಯಂ ಬಂದಳ್ ಮರುಳ್ದು (ಕನ್ಯೆಯು ತಾನಾಗಿಯೇ ಜೊತೆಯಲ್ಲಿಯೇ ಬಂದಿದ್ದಾಳೆ ಮರುಳ್ದು- ಮೋಹಿಸಿ) ಅಂಬುಜೋದರನು ಇಂತು ಅಟ್ಟಿದನು (ಕೃಷ್ಣನೇ ಹೀಗೆ ಕಳುಹಿಸಿಕೊಟ್ಟಿದ್ದಾನೆ) ಇಂತು ನೋಂತರೊಳರೇ ಸೈಪಿಂಗೆ-ಪುಣ್ಯಕ್ಕೆ (ಪುಣ್ಯಕ್ಕೆ ಇಂತಹ ಅದೃಷ್ಟಶಾಲಿಗಳಾದವರು (ವ್ರತ ಮಾಡಿರುವವರು) ಬೇರೆ ಯಾರಿದ್ದಾರೆ), ನಾಮಿನ್ನು ಇಳಾಧರನುಂ ಯಾದವ ವಂಶಜರ್ವೆರಸು ಬರ್ಪಂತೆ ಅಟ್ಟಿ (ನಾವು ಇನ್ನು ಯಾದವರೊಡಗೂಡಿ ಕೃಷ್ಣನು ಬರುವ ಹಾಗೆ ದೂತರನ್ನು ಕಳುಹಿಸಿ) ಮಾೞ್ಪಂ ಮನೋಹರಂ ಅಪ್ಪಂತು ವಿವಾಹಮಂಗಳಮನು ಎಂದು (ಮನೋಹರವಾಗಿರುವ ರೀತಿಯಲ್ಲಿ ಮದುವೆಯ ಮಂಗಳವನ್ನು ಮಾಡೋಣ ಎಂದು) ಅಟ್ಟಿದರ್ ದೂತರಂ
ಪದ್ಯ-೦೦:ಅರ್ಥ: ನಮಗೆ ದಾನವಾಗಿ ಕೊಡಿ ಎಂದು ದೂತರನ್ನು ಕಳಿಸಬೇಕು; ಈ ಮೂಲಕ ಬೇಡಿ ಪಡೆಯಬೇಕಾದ ಕನ್ಯೆಯು ತಾನಾಗಿಯೇ ಜೊತೆಯಲ್ಲಿಯೇ ಬಂದಿದ್ದಾಳೆ. ಕೃಷ್ಣನೇ ಹೀಗೆ ಕಳುಹಿಸಿಕೊಟ್ಟಿದ್ದಾನೆ. ಇಂತಹ ಅದೃಷ್ಟಶಾಲಿಗಳಾದವರು (ವ್ರತ ಮಾಡಿರುವವರು) ಬೇರೆ ಯಾರಿದ್ದಾರೆ. ನಾವು ಇನ್ನು ಯಾದವರೊಡಗೂಡಿ ಕೃಷ್ಣನು ಬರುವ ಹಾಗೆ ದೂತರನ್ನು ಕಳುಹಿಸಿ ಮನೋಹರವಾಗಿರುವ ರೀತಿಯಲ್ಲಿ ಮದುವೆಯ ಮಂಗಳವನ್ನು ಮಾಡೋಣ ಎಂದು ದೂತರನ್ನು ಅಟ್ಟಿದರು.
ವ|| ಅಟ್ಟಿದೊಡವರ್ ಪೋಗಿ ಬಲದೇವನುಮಂ ವಾಸುದೇವನುಮಂ ಕಂಡು ತಮ್ಮ ಬಂದ ಕಜ್ಜಮನೊಡಂಬಡಿಸಿ ಯಾದವರ್ವೆರಸು ಮುಂದಿಟ್ಟೊಡಗೊಂಡು ಬರೆ ಬರವನಱಿದು ಪಾಂಡವರಯ್ವರುಮಿದಿರ್ವೋಗಿ ಯಥೋಚಿತ ಪ್ರತಿಪತ್ತಿಗಳಿಂ ಕಂಡು ಪೊೞಲ್ಗೊಡಗೊಂಡು ಬಂದು ಶುಭದಿನ ನಕ್ಷತ್ರ ಯೋಗಕರಣಂಗಳಂ ನಿಟ್ಟಿಸಿ-
ವಚನ:ಪದವಿಭಾಗ-ಅರ್ಥ:ಅಟ್ಟಿದೊಡೆ ಅವರ್ ಪೋಗಿ ಬಲದೇವನುಮಂ ವಾಸುದೇವನುಮಂ ಕಂಡು ತಮ್ಮ ಬಂದ ಕಜ್ಜಮನು ಒಡಂಬಡಿಸಿ (ತಾವು ಬಂದ ಕಾರ್ಯಕ್ಕೆ ಅವರು ಒಪ್ಪುವ ಹಾಗೆ ಮಾಡಿ) ಯಾದವರ್ ವೆರಸು (ಸೇರಿ ಅವರನ್ನು ) ಮುಂದಿಟ್ಟೊಡಗೊಂಡು ಬರೆ (ಬರಲು) ಬರವನಱಿದು ಪಾಂಡವರಯ್ವರುಂ ಇದಿರ್ವೋಗಿ (ಅವರಿಗಿದಿರಾಗಿ ಹೋಗಿ ಸ್ವಾಗತಿಸಿ) ಯಥೋಚಿತ (ಯಥ ಉಚಿತ- ಯೋಗ್ಯವಾದ) ಪ್ರತಿಪತ್ತಿಗಳಿಂ (ಸತ್ಕಾರಗಳಿಂದ) ಕಂಡು ಪೊೞಲ್ಗೆ ಒಡಗೊಂಡು (ಪಟ್ಟಣಕ್ಕೆ ಜೊತೆಯಲ್ಲಿ ಕರೆದುಕೊಂಡು) ಬಂದು ಶುಭದಿನ ನಕ್ಷತ್ರ ಯೋಗಕರಣಂಗಳಂ ನಿಟ್ಟಿಸಿ-
ವಚನ:ಅರ್ಥ:ಅವರು ಹೋಗಿ ಬಲರಾಮನನ್ನೂ ವಾಸುದೇವನನ್ನೂ ಕಂಡು ತಾವು ಬಂದ ಕಾರ್ಯಕ್ಕೆ ಅವರು ಒಪ್ಪುವ ಹಾಗೆ ಮಾಡಿ ಯಾದವರೊಡಗೂಡಿ ಅವರನ್ನೇ ಮುಂದುಮಾಡಿಕೊಂಡು ಬಂದರು. ಅವರು ಬರುವುದನ್ನು ತಿಳಿದು ಪಾಂಡವರೈದು ಮಂದಿಯೂ ಅವರಿಗಿದಿರಾಗಿ ಹೋಗಿ ಸ್ವಾಗತಿಸಿ ಸೂಕ್ತವಾದ ಸತ್ಕಾರಗಳಿಂದ ಕಂಡು ಪಟ್ಟಣಕ್ಕೆ ಜೊತೆಯಲ್ಲಿ ಕರೆದುಕೊಂಡು ಬಂದರು. ಶುಭಕರವಾದ ದಿನ, ನಕ್ಷತ್ರಯೋಗ ಕರಣಗಳನ್ನು ನೋಡಿ-

ಅರ್ಜುನ ಸುಭದ್ರೆಯರ ವಿವಾಹ[ಸಂಪಾದಿಸಿ]

ಮ|| ಪಸುರ್ವಂದರ್ ಪಸೆ (ಪರೆ?) ವೇದಪಾರಗರವಂ ಕಣ್ಬೇಟದುದ್ದಾನಿಯಂ
ಪಸರಂ ಗೆಯ್ದವೊಲಪ್ಪ ಪೊಚ್ಚಱ ಮಹಾ ಸಾಮಂತ ಸೀಮಂತಿನೀ|
ಪ್ರಸರಂ ಮಂಗಳ ತೂರ್ಯನಾದಮೆಸೆಯುತ್ತಿರ್ಪನ್ನೆಗಂ ಚಕ್ರಿ ರಾ
ಗಿಸಿ ಕೆಯ್ನೀರೆರೆದಂ ಗುಣಾರ್ಣವ ಮಹೀಪಾಲಂಗಮಾ ಕನ್ನೆಯಂ|| ೨೫||
ಪದ್ಯ-೨೫:ಪದವಿಭಾಗ-ಅರ್ಥ: ಪಸುರ್ವಂದರ್ (ಹಸಿರುವಾಣಿಯ ಚಪ್ಪರ) ಪಸೆ(ಹಸೆಮಣೆ) ವೇದಪಾರಗರವಂ (ಪಂಡಿತರ ವೇದಘೋಷ) ಕಣ್ಬೇಟದ ಉದ್ದಾನಿಯಂ ಪಸರಂ ಗೆಯ್ದವೊಲಪ್ಪ ಪೊಚ್ಚಱ ಮಹಾ ಸಾಮಂತ ಸೀಮಂತಿನೀ ಪ್ರಸರಂ(ಕಣ್ಣಿಗೆ ಪ್ರೀತಿಯನ್ನುಂಟುಮಾಡುವ ಸಾಮಂತರ, ಸುಮಂಗಲೀಸ್ತ್ರೀಯರ ಸಮೂಹವು) ಮಂಗಳ ತೂರ್ಯನಾದಂ ಎಸೆಯುತ್ತಿರ್ಪನ್ನೆಗಂ (ಮಂಗಳವಾದ್ಯ ಧ್ವನಿ ಘೋಷಿಸುತ್ತಿರಲು) ಚಕ್ರಿ ರಾಗಿಸಿ (ಶ್ರೀಕೃಷ್ಣನು ಪ್ರೀತಿಯಿಂದ) ಕೆಯ್ನೀರೆರೆದಂ ಗುಣಾರ್ಣವ ಮಹೀಪಾಲಂಗಂ ಆ ಕನ್ನೆಯಂ(ಅರ್ಜುನನಿಗೆ) ಕನ್ಯೆಯಾದ ಸುಭದ್ರೆಯನ್ನು ಧಾರಾಪೂರ್ವಕ ದಾನಮಾಡಿಕೊಟ್ಟನು)- ವೀರಕೇರಿಗೆ ಅನ್ವಯಿಸಿ ಗುಣಾರ್ಣವ ಮಹೀಪಾಲಂಗೆ ಎಂದು ಹೇಳಿದೆ
ಪದ್ಯ-೨೫:ಅರ್ಥ:ಹಸಿರುವಾಣಿಯ ಚಪ್ಪರ, ಹಸೆಮಣೆ, ಪಂಡಿತರ ವೇದಘೋಷ ಇವು ಕಣ್ಣಿಗೆ ಪ್ರೀತಿಯನ್ನುಂಟುಮಾಡುವ ಅಂಗಡಿಯ ಸಾಲಿನ ಹಾಗೆ ಶೂರರ, ಮಹಾ ಸಾಮಂತರ, ಸುಮಂಗಲೀಸ್ತ್ರೀಯರ ಸಮೂಹವು ಒಳಗೊಂಡಿರಲು ಮಂಗಳವಾದ್ಯ ಧ್ವನಿ ಘೋಷಿಸುತ್ತಿರಲು ಶ್ರೀಕೃಷ್ಣನು ಪ್ರೀತಿಯಿಂದ ತನ್ನಕೈಯಲ್ಲಿ ನೀರುಬಿಟ್ಟು ಧಾರಾಪೂರ್ವಕ ಅರ್ಜುನನಿಗೆ ಕನ್ಯೆಯಾದ ಸುಭದ್ರೆಯನ್ನು ದಾನಮಾಡಿಕೊಟ್ಟನು.
ವ|| ಅಂತವರಿರ್ವರ ಬೇಟಮೆಂಬ ಲತೆಯ ಬೆಳಸಿಂಗೆ ಪೊಯ್ನಾರೆರೆವಂತೆ ಕೆರೆದು ಬಿಯಮಂ ಮೆರೆದು-
ವಚನ:ಪದವಿಭಾಗ-ಅರ್ಥ:ಅಂತು ಅವರ್ ಇರ್ವರ ಬೇಟಮೆಂಬ (ಪ್ರೇಮದ) ಲತೆಯ ಬೆಳಸಿಂಗೆ ಪೊಯ್ನಾರೆರೆವಂತೆ (ಹೊಯ್ ನೀರೆರೆಯುವಂತೆ) ಕೆರೆದು ಬಿಯಮಂ ಮೆರೆದು (ಯಥೇಚ್ಛವಾಗಿ ದ್ರವ್ಯವನ್ನು ದಾನಮಾಡಿದನು)-
ವಚನ:ಅರ್ಥ:ಹಾಗೆ ಅವರಿಬ್ಬರ ಪ್ರೇಮವೆಂಬ ಬಳ್ಳಿಗೆ ಹೊಯ್ ನೀರೆರೆಯುವಂತೆ ಧಾರಾಜಲವನ್ನು ಕೊಟ್ಟು ಯಥೇಚ್ಛವಾಗಿ ದ್ರವ್ಯವನ್ನು ದಾನಮಾಡಿದನು
ಪಿರಿಯಕ್ಕರಂ|| ತೊಟ್ಟ ತುಡುಗೆಗಳ್ ಕೌಸ್ತುಭರತ್ನಮನೋರೆಂದೆ ಮಸುಳಿಸೆ ಪಾಲ್ಗಡಲೊಳ್
ಪುಟ್ಟಿದಾನೆಯನಾನೆಗಳ್ ಗೆಲೆವರೆ ಕುದುರೆಗಳ್ ಕುದುರೆಯಂ ಕೀೞ್ಮಾಡೆ|
ತೊಟ್ಟ ಮದನನ ಪೂಗಣೆಗೆಣೆಯಾಗೆ ಗಣಿಕೆಯರ್ ಗಣಿದಮಂ ಬಗೆಯದಿಂತು
ಕೊಟ್ಟಂ ತಂಗೆಗೆ ಬೞಿವೞಿಯೆಂದಿಂತು ಸರ್ವಸ್ವಮೆಲ್ಲಮಂ ಪುರುಷೋತ್ತಮಂ|| ೨೬
ಪದ್ಯ-೨೬:ಪದವಿಭಾಗ-ಅರ್ಥ:ಕೃಷ್ಣನು ಕೊಟ್ಟ ಉಡುಗೊರೆಗಳು :ತೊಟ್ಟ ತುಡುಗೆಗಳ್ ಕೌಸ್ತುಭರತ್ನಮನು ಓರೆಂದೆ ಮಸುಳಿಸೆ (ಕೌಸ್ತುಭರತ್ನವನ್ನು ಕಾಂತಿಹೀನವನ್ನಾಗಿ ಮಾಡುವ ಅನೇಕ ಆಭರಣಗಳು,) ಪಾಲ್ಗಡಲೊಳ್ಪುಟ್ಟಿದ ಆನೆಯನು ಅನೆಗಳ್ ಗೆಲೆವರೆ (ಐರಾವತವನ್ನೂ ಮೀರಿಸುವ ಆನೆಗಳನ್ನೂ) ಕುದುರೆಗಳ್ ಕುದುರೆಯಂ (ಉಚ್ಚೆಶ್ರವಸ್ಸನ್ನು ಮೀರಿಸುವ ಕುದುರೆಗಳನ್ನೂ) ಕೀೞ್ಮಾಡೆತೊಟ್ಟ ಮದನನ ಪೂಗಣೆಗೆಣೆಯಾಗೆ ಗಣಿಕೆಯರ್ (ವೇಶ್ಯೆಯರು) ಗಣಿದಮಂ (ಗಣನೆಗೆ ಮೀರಿದ) ಬಗೆಯದೆ ಇಂತು ಕೊಟ್ಟಂ ತಂಗೆಗೆ ಬೞಿವೞಿಯ (ಬಳುವಳಿಯನ್ನು)ಎಂದಿಂತು ಸರ್ವಸ್ವಂ ಎಲ್ಲಮಂ ಪುರುಷೋತ್ತಮಂ(ಕೃಷ್ಣನು)|
ಪದ್ಯ-೨೬:ಅರ್ಥ:ವಿಷ್ಣುವಿನ ಹೃದಯದಲ್ಲಿರುವ ಕೌಸ್ತುಭರತ್ನವನ್ನೂ ಕಾಂತಿಹೀನವನ್ನಾಗಿ ಮಾಡುವ ಅನೇಕ ಆಭರಣಗಳನ್ನೂ ಐರಾವತವನ್ನೂ ಕೀಳ್ಮಾಡುವ ಆನೆಗಳನ್ನೂ ಉಚ್ಚೆಶ್ರವಸ್ಸನ್ನು ತಿರಸ್ಕರಿಸುವ ಕುದುರೆಗಳನ್ನೂ ಮನ್ಮಥನ ಪುಷ್ಪಬಾಣಗಳಂತಿರುವ ವೇಶ್ಯಾಸ್ತ್ರೀಯರನ್ನೂ ಅಸಂಖ್ಯಾತವಾಗಿ ಕೃಷ್ಣನು ತಂಗಿಗೆ ಬಳುವಳಿಯಾಗಿ ಕೊಟ್ಟನು.
ವ|| ಅಂತು ಬೞಿವೞಿಗೊಟ್ಟಿಂಬೞಯಂ ಧರ್ಮಪುತ್ರಂ ಬಲದೇವನನೆನಿತಾನುಮುಚಿತ ಪ್ರತಿಪತ್ತಿಗಳಿಂ ಸಂತಸಂಬಡಿಸಿ ದ್ವಾರಾವತಿಗೆ ಕೞಿಪಿದನಾ ವಿವಾಹೋತ್ಸವಾನಂತರದೊಳ್-
ವಚನ:ಪದವಿಭಾಗ-ಅರ್ಥ:ಅಂತು ಬೞಿವೞಿಗೊಟ್ಟ ಇಂಬೞಿಯಂ (ಬಳುವಳಿ ಕೊಟ್ಟ ಬಳಿಕ) ಧರ್ಮಪುತ್ರಂ ಬಲದೇವನನು ಎನಿತಾನುಮುಚಿತ ಪ್ರತಿಪತ್ತಿಗಳಿಂ (ಸತ್ಕಾರಗಳಿಂದ) ಸಂತಸಂಬಡಿಸಿ ದ್ವಾರಾವತಿಗೆ ಕೞಿಪಿದನು ಆ ವಿವಾಹೋತ್ಸವ ಆನಂತರದೊಳ್-
ವಚನ:ಅರ್ಥ:ಹಾಗೆ ಬಳುವಳಿ ಕೊಟ್ಟ ಬಳಿಕ ಧರ್ಮರಾಜನು ಬಲರಾಮನನ್ನು ಅನೇಕ ಉಚಿತ ಸತ್ಕಾರಗಳಿಂದ ಸಂತೋಷಪಡಿಸಿ ದ್ವಾರಕಾಪಟ್ಟಣಕ್ಕೆ ಕಳುಹಿಸಿಕೊಟ್ಟನು. ಆ ಮದುವೆಯ ಮಹೋತ್ಸವವಾದ ಮೇಲೆ
ಚಂ|| ತಳಿರ್ಗಳ ಪಾಸಿನೊಳ್ ಪೊರಳುತಿರ್ದೞಲಂ ಕಿಡೆ ಸೋಂಕೆ ಸೋಂಕುಗಳ್
ಕಳೆದುವು ಮೆಯ್ಯ ಸುಯ್ಯ ಪದವೆಂಕೆಗಳಂ ಬಿಗಿಯಪ್ಪಿದಪ್ಪುಗಳ್|
ಕಳೆದುವು ನಾಣುಮಂ ಕಿಱಿದು ಜಾಣುಮನೞ್ಕಱನೀವ ಚುಂಬನಂ
ಕಳೆದುವು ಗರ್ವಮಂ ಕಳೆದುವಂತವರಿರ್ವರ ಮನ್ಮಥದ್ರವಂ|| ೨೭ ||
ಪದ್ಯ-೨೭:ಪದವಿಭಾಗ-ಅರ್ಥ:ತಳಿರ್ಗಳ ಪಾಸಿನೊಳ್ ಪೊರಳುತಿರ್ದ ಅೞಲಂ (ಚಿಗುರಿನ ಹಾಸಿಗೆಯಲ್ಲಿ ಹೊರಳುತ್ತಿದ್ದ ದುಃಖವನ್ನು) ಕಿಡೆ ಸೋಂಕೆ ಸೋಂಕುಗಳ್ ಕಳೆದುವು (ಅವರ ಪರಸ್ಪರ ಸ್ಪರ್ಶಗಳು ಕಳೆದುವು), ಮೆಯ್ಯ ಸುಯ್ಯ ಪದವೆಂಕೆಗಳಂ (ಹದವಾದ ಉರಿಗಳು) ಬಿಗಿಯಪ್ಪಿದಪ್ಪುಗಳ್ ಕಳೆದುವು (ದೇಹದ ಉಸುರಿನ ಬೆಂಕಿಯನ್ನು ಅವರ ಬಿಗಿಯಾಗಿ ಅಪ್ಪಿದ ಆಲಿಂಗನಗಳು ಕಳೆದುವು) ನಾಣುಮಂ, ಕಿಱಿದು ಜಾಣುಮನು ಅೞ್ಕಱನು (ಪ್ರೀತಿಯಿಂದ) ಈವ ಚುಂಬನಂ ಕಳೆದುವು (ಲಜ್ಜೆಯನ್ನೂ ಜಾಣ್ಮೆಯನ್ನೂ ಅವರ ಪರಸ್ಪರ ಪ್ರೀತಿಯಿಂದ ಕೊಡುತ್ತಿರುವ ಮುತ್ತುಗಳು ಹೋಗಲಾಡಿಸಿದುವು) ಗರ್ವಮಂ ಕಳೆದುವಂತು ಅವರಿರ್ವರ ಮನ್ಮಥದ್ರವಂ (ಅವರಿಬ್ಬರ ಮದನೋದಕವು ಅವರ ಹೆಮ್ಮೆಯನ್ನು ಕಳೆದವು)
ಪದ್ಯ-೨೭:ಅರ್ಥ:ಅರ್ಜುನ ಸುಭದ್ರೆಯರು, ಚಿಗುರಿನ ಹಾಸಿಗೆಯಲ್ಲಿ ಹೊರಳುತ್ತಿದ್ದ ದುಃಖವನ್ನು ಅವರ ಪರಸ್ಪರ ಸ್ಪರ್ಶಗಳು ಕಳೆದುವು; ದೇಹದ ಉಸುರಿನ ಬೆಂಕಿಯನ್ನು ಅವರ ಬಿಗಿಯಾಗಿ ಅಪ್ಪಿದ ಆಲಿಂಗನಗಳು ಕಳೆದುವು. ಲಜ್ಜೆಯನ್ನೂ ಜಾಣ್ಮೆಯನ್ನೂ ಅವರ ಪರಸ್ಪರ ಪ್ರೀತಿಯಿಂದ ಕೊಡುತ್ತಿರುವ ಮುತ್ತುಗಳು ಹೋಗಲಾಡಿಸಿದುವು. ಅವರಿಬ್ಬರ ಮದನೋದಕವು ಅವರ ಹೆಮ್ಮೆಯನ್ನು ಕಳೆದವು.
ಮಾಲಿನಿ|| ಅಭಿನವ ಮದಲೇಖಾ ಲಾಲಿತಂ ವಿಭ್ರಮ ಭ್ರೂ
ರಭಸ ಗತಿವಿಳಾಸಂ ದೀಪ್ತ ಕಂದರ್ಪ ದರ್ಪ||
ಕ್ಷುಭಿತ ಗಳನಿನಾದಂ ಪ್ರಸುರದ್ಘರ್ಮವಾರಿ
ಪ್ರಭವಮೆಸೆದುದಂತಾ ಕಾಂತೆಗಾ ಕಾಂತಸಂಗಂ|| ೨೮||
ಪದ್ಯ-೨೮:ಪದವಿಭಾಗ-ಅರ್ಥ:ಅಭಿನವ ಮದಲೇಖಾ ಲಾಲಿತಂ (ಹೊಸ ಕಸ್ತೂರಿಯಿಂದ ಬರೆದ ಮದಲೇಖೆಯಿಂದ ಪೋಶಿಸಲ್ಪಟ್ಟ) ವಿಭ್ರಮ ಭ್ರೂರಭಸ ಗತಿವಿಳಾಸಂ (ಸುಂದರವಾದ ಹುಬ್ಬಿನ ವೇಗವಾದ ವಿಲಾಸವನ್ನುಳ್ಳ) ದೀಪ್ತ ಕಂದರ್ಪ ದರ್ಪಕ್ಷುಭಿತ ಗಳನಿನಾದಂ (ಹೆಚ್ಚಾದ ಕಾಮಗರ್ವದಿಂದ ಕೆರಳಿದ ಕೊರಳಿನ ಶಬ್ದವನ್ನುಳ್ಳ) ಪ್ರಸುರತ್ ಘರ್ಮವಾರಿ ಪ್ರಭವಂ(ಪ್ರಕಾಶಿತ ಬೆವರುಗಳನ್ನು ಹುಟ್ಟಿಸುವ) ಸೆದುದಂತು ಆ ಕಾಂತೆಗ ಆ ಕಾಂತಸಂಗಂ (ಆ ಪ್ರಿಯನ ಸಮಾಗಮವು ಆ ಸುಭದ್ರೆಗೆ ಸಂತೋಷವನ್ನುಟುಮಾಡಿತು)|
ಪದ್ಯ-೨೮:ಅರ್ಥ:ಹೊಸ ಮದಲೇಖೆಯಿಂದ ಪೋಶಿಸಲ್ಪಟ್ಟ, ಸುಂದರವಾದ ಹುಬ್ಬಿನ ವೇಗವಾದ ವಿಲಾಸವನ್ನುಳ್ಳ ಹೆಚ್ಚಾದ ಕಾಮಗರ್ವದಿಂದ ಕೆರಳಿದ ಕೊರಳಿನ ಶಬ್ದವನ್ನುಳ್ಳ ಪ್ರಕಾಶಿತ ಬೆವರುಗಳನ್ನು ಹುಟ್ಟಿಸುವ ಆ ಪ್ರಿಯನ ಸಮಾಗಮವು ಆ ಸುಭದ್ರೆಗೆ ಸಂತೋಷವನ್ನುಟುಮಾಡಿತು
ವ|| ಅಂತು ಕಾಮದೇವನುಂ ರತಿಯುಂ ವಸಿಷ್ಠನುಮರುಂಧತಿಯುಮೀಶ್ವರನುಂ ಪಾರ್ವತಿಯುಮೆನಿಸಿ ಸಮರೂಪ ಸಮಸತ್ವ ಸಮರತಂಗಳೊಳೆ ಸಮಾನುರಾಗಮಂ ಪಡೆಯೆ ಸುಖಮಿರ್ಪನ್ನೆಗಂ ಸುಭದ್ರೆಗೆ ಗರ್ಭಚಿಹ್ನಂಗಳ್ ತೋರೆ-
ವಚನ:ಪದವಿಭಾಗ-ಅರ್ಥ:ಅಂತು ಕಾಮದೇವನುಂ ರತಿಯುಂ ವಸಿಷ್ಠನುಂ ಅರುಂಧತಿಯುಂ ಈಶ್ವರನುಂ ಪಾರ್ವತಿಯುಂ ಎನಿಸಿ ಸಮರೂಪ ಸಮಸತ್ವ ಸಮರತಂಗಳೊಳೆ (ಸಮಾನ ರೂಪ, ಸಮಾನ ಶಕ್ತಿ, ಸಮಾನ ಸುರತಕ್ರೀಡೆಗಳಲ್ಲಿ) ಸಮ ಅನುರಾಗಮಂ ಪಡೆಯೆ (ಸಮಾನ ಪ್ರೀತಿಯನ್ನು ಪಡೆಯಲು) ಸುಖಮಿರ್ಪನ್ನೆಗಂ ಸುಭದ್ರೆಗೆ ಗರ್ಭಚಿಹ್ನಂಗಳ್ ತೋರೆ(ಸುಭದ್ರೆಗೆ ಗರ್ಭ ಚಿಹ್ನೆಗಳು ತೋರಿತು.)-
ವಚನ:ಅರ್ಥ:ಮನ್ಮಥನೂ ರತಿಯೂ, ವಸಿಷ್ಠನೂ ಅರುಂಧತಿಯೂ ಈಶ್ವರನೂ ಪಾರ್ವತಿಯೂ ಎನ್ನಿಸಿ ಸಮಾನ ರೂಪ, ಸಮಾನ ಶಕ್ತಿ, ಸಮಾನ ಸುರತಕ್ರೀಡೆಗಳಲ್ಲಿ ಸಮಾನ ಪ್ರೀತಿಯನ್ನು ಪಡೆಯಲು, ಹೀಗೆ ಸುಖವಾಗಿರಲು ಸುಭದ್ರೆಗೆ ಗರ್ಭ ಚಿಹ್ನೆಗಳು ತೋರಿತು.
ಕಂ|| ಒಟ್ಟಜೆಯಿಂ ಭಾರತದೊಳ್
ಕಟ್ಟಾಳ್ಗಳನಿಱಿದು ತವಿಸಲಾ ಜೆಟ್ಟಿಗರಂ|
ಪುಟ್ಟಿದನೆಂಬವೊಲದಟಂ
ಪುಟ್ಟಿದನಭಿಮನ್ಯು ಕಲಿತನಂ ಪುಟ್ಟುವವೋಲ್|| ೨೯ ||
ಪದ್ಯ-೨೯:ಪದವಿಭಾಗ-ಅರ್ಥ:ಒಟ್ಟಜೆಯಿಂ (ಪರಾಕ್ರಮದಿಂದ) ಭಾರತದೊಳ್ ಕಟ್ಟಾಳ್ಗಳನು ಇಱಿದು ತವಿಸಲು ಆ ಜೆಟ್ಟಿಗರಂ (ಭಾರತ ಯುದ್ಧದಲ್ಲಿ ಅತ್ಯಂತ ಶೂರರಾದ ವೀರನನ್ನು ಹೊಡೆದು ನಾಶಪಡಿಸಲು) ಪುಟ್ಟಿದನೆಂಬವೊಲ್(ಹುಟ್ಟಿದನೆಂಬ ಹಾಗೆ) ಅದಟಂ ಪುಟ್ಟಿದನ್ ಅಭಿಮನ್ಯು ಕಲಿತನಂ ಪುಟ್ಟುವವೋಲ್(ಪರಾಕ್ರಮಿಯಾದ ಅಭಿಮನ್ಯುವು ಪರಾಕ್ರಮವೇ ಮೂರ್ತಿವತ್ತಾಗಿ ಹುಟ್ಟುವ ಹಾಗೆ ಹುಟ್ಟಿದನು)
ಪದ್ಯ-೨೯:ಅರ್ಥ: ಪರಾಕ್ರಮದಿಂದ ಭಾರತ ಯುದ್ಧದಲ್ಲಿ ಅತ್ಯಂತ ಶೂರರಾದ ವೀರನನ್ನು ಹೊಡೆದು ನಾಶಪಡಿಸಲು ಹುಟ್ಟಿದನೆಂಬ ಹಾಗೆ ಪರಾಕ್ರಮಿಯಾದ ಅಭಿಮನ್ಯುವು ಪರಾಕ್ರಮವೇ ಮೂರ್ತಿವತ್ತಾಗಿ ಹುಟ್ಟುವ ಹಾಗೆ ಸುಭದ್ರೆಯಲ್ಲಿ ಹುಟ್ಟಿದನು.
ವ|| ಅಂತಾತಂ ಪುಟ್ಟುವುದುಂ ತಮಗೆ ಸಂತಸಂ ಪುಟ್ಟಿ ಸುಖಮಿರ್ಪನ್ನೆಗಂ-
ವಚನ:ಪದವಿಭಾಗ-ಅರ್ಥ:ಅಂತು ಆತಂ ಪುಟ್ಟುವುದುಂ(ಹುಟ್ಟಲಾಗಿ) ತಮಗೆ ಸಂತಸಂ ಪುಟ್ಟಿ ಸುಖಂ ಇರ್ಪನ್ನೆಗಂ-
ವಚನ:ಅರ್ಥ:ಆತನು ಹುಟ್ಟಲಾಗಿ ತಮಗೆ ಸಂತೋಷವೂ ಹುಟ್ಟಿ ಸುಖವಾಗಿರುವಷ್ಟರಲ್ಲಿ (ವಸಂತಋತು ಪ್ರಾಪ್ತವಾಯಿತು.)

ವಸಂತಋತು ವರ್ಣನೆ[ಸಂಪಾದಿಸಿ]

ಚಂ|| ಅಗರುವ ಮೆಚ್ಚುವಚ್ಚ ಸಿರಿಕಂಡದೊಳಗ್ಗಲಿಸಿತ್ತು ಸೂಡು ಶ
ಯ್ಯೆಗಳ ಬಿಯಕ್ಕೆ ಜೊಂಪದಲರ್ವಾಸುಗಳೊಳ್ ನೆಲಸಿತ್ತು ಪೂತ ಗೊ|
ಜ್ಜಗೆಗಳ ಸಿಂದುರಂಗಳೊಳಗೋಗರಗಂಪನೆ ಬೀಱುತಿರ್ಪ ಮ
ಲ್ಲಿಗೆಯೊಳರಲ್ದ ಸಂಪಗೆಯೊಳಗ್ಗಲಿಸಿತ್ತು ಬಸಂತಮಾಸದೊಳ್|| ೩೦||
ಪದ್ಯ-೩೦:ಪದವಿಭಾಗ-ಅರ್ಥ:ಅಗರುವ (ಚಳಿಗಾಲದಲ್ಲಿ ಶಾಖಕ್ಕಾಗಿ ಉಪಯೋಗಿಸುತ್ತಿದ್ದ ಅಗರುವಿನಲ್ಲಿದ್ದ) ಮೆಚ್ಚುವ ಅಚ್ಚ ಸಿರಿಕಂಡದೊಳ್ ಅಗ್ಗಲಿಸಿತ್ತು (ಮೆಚ್ಚುವ ಸ್ವಚ್ಛವಾದ ಶ್ರೀಗಂಧದ ಲೇಪನದಲ್ಲಿ ಅತಿಶಯವಾಯಿತು.) ಸೂಡು ಶಯ್ಯೆಗಳ ಬಿಯಕ್ಕೆ (ಬೆಚ್ಚನೆಯ ಹಾಸಿಗೆಯಲ್ಲಿದ್ದ ಬಯಕೆಯು) ಜೊಂಪದ ಅಲರ್ ವಾ/ಹಾಸುಗಳೊಳ್ ನೆಲಸಿತ್ತು (ಗೊಂಚಲಾಗಿರುವ ಹೂವಿನ ಹಾಸಿಗೆಯಲ್ಲಿ ನೆಲೆಸಿತ್ತು) ಪೂತ ಗೊಜ್ಜಗೆಗಳ ಸಿಂದುರಂಗಳೊಳಗೆ (ಹೂಬಿಟ್ಟಿದ್ದ ಸೇವಂತಿಗೆ ಮತ್ತು ಸಿಂಧುವಾರ ಹೂವುಗಳಲ್ಲಿದ್ದ) ಓಗರಗಂಪನೆ ಬೀಱುತಿರ್ಪ (ಮಿಶ್ರಗಂಧವನ್ನು ಬೀರುತ್ತಿರುವ) ಮಲ್ಲಿಗೆಯೊಳು ಅರಲ್ದ ಸಂಪಗೆಯೊಳು ಅಗ್ಗಲಿಸಿತ್ತು ಬಸಂತಮಾಸದೊಳ್ (ಮಲ್ಲಿಗೆಯಲ್ಲಿಯೂ ಅರಳಿದ ಸಂಪಗೆಯಲ್ಲಿಯೂ ವಸಂತಮಾಸದಲ್ಲಿ ಅತಿಶಯವಾಯಿತು)
ಪದ್ಯ-೩೦:ಅರ್ಥ: (ವಸಂತಋತು ಪ್ರಾಪ್ತವಾಯಿತು) ಚಳಿಗಾಲದಲ್ಲಿ ಶಾಖಕ್ಕಾಗಿ ಉಪಯೋಗಿಸುತ್ತಿದ್ದ ಅಗರುವಿನಲ್ಲಿದ್ದ ಮೆಚ್ಚುವ ಸ್ವಚ್ಛವಾದ ಶ್ರೀಗಂಧದ ಲೇಪನದಲ್ಲಿ ಅತಿಶಯವಾಯಿತು. ಬೆಚ್ಚನೆಯ ಹಾಸಿಗೆಯಲ್ಲಿದ್ದ ಬಯಕೆಯು ಗೊಂಚಲಾಗಿರುವ ಹೂವಿನ ಹಾಸಿಗೆಯಲ್ಲಿ ನೆಲೆಸಿತ್ತು. ಹೂಬಿಟ್ಟಿದ್ದ ಸೇವಂತಿಗೆ ಮತ್ತು ಸಿಂಧುವಾರ ಹೂವುಗಳಲ್ಲಿದ್ದ ಮಿಶ್ರಗಂಧವನ್ನು ಬೀರುತ್ತಿರುವ ಮಲ್ಲಿಗೆಯಲ್ಲಿಯೂ ಅರಳಿದ ಸಂಪಗೆಯಲ್ಲಿಯೂ ವಸಂತಮಾಸದಲ್ಲಿ ಅತಿಶಯವಾಯಿತು.
ಉ|| ಮುಂ ಮಹಿಯೆಲ್ಲಮಂ ಶಿಶಿರರಾಜನೆ ಬಿಚ್ಚತಮಾಳ್ದನೀಗಳಾ
ತಂ ಮಿಡುಕಲ್ಕೆ ಸಲ್ಲಿರದೆ ಪೋಪುದದೇಕೆನೆ ಕಾಮದೇವನಿ|
ತ್ತಂ ಮಧು ಪೆತ್ತನೀ ನೆಲನನಿಂತಿದು ಪತ್ತಳೆಯೆಂದು ಸಾಱುವ
ದಂ ಮಿಗೆ ಕರ್ಚಿ ಪಾಱಿದುವು ಕೆಂದಳಿರಂ ಗಿಳಿವಿಂಡಿನೋಳಿಗಳ್|| ೩೧ ||
ಪದ್ಯ-೩೧:ಪದವಿಭಾಗ-ಅರ್ಥ:ಮುಂ (ಮೊದಲು) ಮಹಿಯೆಲ್ಲಮಂ ಶಿಶಿರರಾಜನೆ ಬಿಚ್ಚತಂ ಆಳ್ದನು (ಭೂಮಿಯನ್ನೆಲ್ಲ ಮಾಗಿಯ ಕಾಲವೆಂಬ ರಾಜನು ಬಿಚ್ಚತ-ವಿಸ್ತೃತವಾಗಿ/ ಬಹುಕಾಲ ಆಳಿದನು) ಈಗಳಾತಂ ಮಿಡುಕಲ್ಕೆ ಸಲ್ಲಿರದೆ ಪೋಪುದು ಅದೇಕೆನೆ (ಈಗ ಆತನು ಚಲಿಸಲು ಸಾಧ್ಯವಿಲ್ಲ ಇರದೆಹೋಗಬೇಕು. ಅದೇಕೆಂದರೆ) ಕಾಮದೇವನು ಇತ್ತಂ - ಮಧು ಪೆತ್ತನು ಈ ನೆಲನನು (ಈ ಭೂಮಿಯನ್ನು ಮನ್ಮಥನು ಕೊಟ್ಟನು, ವಸಂತರಾಜನು ಪಡೆದನು) ಇಂತಿದು ಪತ್ತಳೆಯೆಂದು ಸಾಱುವದಂ (ಇದು ಹೀಗೆ ರಾಜಶಾಸನ (ಓಲೆಯಪತ್ರ) ಎಂದು ಡಂಗುರ ಹೊಡೆಯುವ ರೀತಿಯಲ್ಲಿ ) ಮಿಗೆ ಕರ್ಚಿ ಪಾಱಿದುವು ಕೆಂದಳಿರಂ ಗಿಳಿವಿಂಡಿನ ಓಳಿಗಳ್ (ಗಿಳಿಯ ಹಿಂಡಿನ ಸಾಲುಗಳು ಕೆಂಪಾದ ಚಿಗುರುಗಳನ್ನು ಕಚ್ಚಿಕೊಂಡು ಹಾರಿದುವು)
ಪದ್ಯ-೩೧:ಅರ್ಥ: . ಮೊದಲು ಭೂಮಿಯನ್ನೆಲ್ಲ ಮಾಗಿಯ ಕಾಲವೆಂಬ ರಾಜನು ವಿಶಾಲವಾಗಿ/ ಬಹುಕಾಲ ಆಳಿದನು. ಈಗ ಆತನು ಚಲಿಸಲು ಸಾಧ್ಯವಿಲ್ಲ ಇರದೆಹೋಗಬೇಕು. ಅದೇಕೆಂದರೆ ಈ ಭೂಮಿಯನ್ನು ಮನ್ಮಥನು ಕೊಟ್ಟನು, ವಸಂತರಾಜನು ಪಡೆದನು. ಇದು ಹೀಗೆ ರಾಜಶಾಸನ (ಓಲೆಯಪತ್ರ) ಎಂದು ಡಂಗುರ ಹೊಡೆಯುವ ರೀತಿಯಲ್ಲಿ ಗಿಳಿಯ ಹಿಂಡಿನ ಸಾಲುಗಳು ಕೆಂಪಾದ ಚಿಗುರುಗಳನ್ನು ಕಚ್ಚಿಕೊಂಡು ಹಾರಿದುವು
ಚಂ|| ಕೆೞಗಣ ಕೆಂದಳಿರ್ ಪುದಿದ ಮೇಗಣ ಪಂದಳಿರೊಂದಿದೊಂದು ಕೆ
ಯ್ಗೞಿದ ಪಸುರ್ಪುಮಂ ಪೊಳೆವ ಕೆಂಪುಮನಾಳ್ದಿರೆ ಬೇಟದೊಳ್ ಕನ|
ಲ್ದುೞಿದ ವಿಯೋಗಿಯಳ್ಳೆರ್ದೆಯನಾಯ್ದದನಾಟಿಸಲೆಂದೆ ಮನ್ಮಥಂ
ಘೞಿಯಿಸಿ ಕೆಂಪುವಾಸಿದವೊಲಿರ್ದುವು ಮಾಮರಗಳ್ ಬಸಂತದೊಳ್|| ೩೨||
ಪದ್ಯ-೩೨:ಪದವಿಭಾಗ-ಅರ್ಥ:ಕೆೞಗಣ ಕೆಂದಳಿರ್ ಪುದಿದ (ಕೆಳಭಾಗದ ಕೆಂಪು ಚಿಗುರಿನಿಂದ ತುಂಬಿದ) ಮೇಗಣ ಪಂದಳಿರ್ ಒಂದಿದ (ಮೇಲುಭಾಗದ ಹಸಿರು ಚಿಗುರು ಒಂದಕ್ಕೊಂದು ಕೂಡಿಸಿಕೊಂಡ) ಒಂದು ಕೆಯ್ಗೞಿದ ಪಸುರ್ಪುಮಂ (ಅತಿಶಯವಾದ ಹಸಿರು ಬಣ್ಣವನ್ನೂ) ಪೊಳೆವ ಕೆಂಪುಮಂ ಆಳ್ದಿರೆ (ಹೊಳೆಯುವ ಕೆಂಪು ಬಣ್ಣವನ್ನೂ ಹೊಂದಿರಲು) ಬೇಟದೊಳ್ ಕನಲ್ದು ಉೞಿದ ವಿಯೋಗಿಯ ಅಳ್ಳೆರ್ದೆಯನು (ಪ್ರೇಮದಲ್ಲಿ ಕೆರಳಿ ವಿರಹದಿಂದ ಕೆರಳಿ ಉಳಿದುಕೊಂಡ ವಿರಹಿಯ ನಡುಗುವ ಎದೆಯನ್ನು) ಆಯ್ದು ಅದನು ಆಟಿಸಲೆಂದೆ (ಅದನ್ನು ಬಯಸಲಿ ಎಂದೇ) ಮನ್ಮಥಂ ಘೞಿಯಿಸಿ ಕೆಂಪುವಾಸಿದವೊಲಿರ್ದುವು ಮಾಮರಗಳ್ ಬಸಂತದೊಳ್(ಮನ್ಮಥನು ಅದನ್ನು ಸೇರಿಸಿ ಕೆಂಪು ಬಣ್ಣವನ್ನು ಹಾಸಿದ ಹಾಗೆ ಮಾವಿನ ಮರಗಳು ವಸಂತ ಕಾಲದಲ್ಲಿ ರಮ್ಯವಾಗಿದ್ದುವು. )
ಪದ್ಯ-೩೨:ಅರ್ಥ: ಕೆಳಭಾಗದ ಕೆಂಪು ಚಿಗುರಿನಿಂದ ತುಂಬಿದ, ಮೇಲುಭಾಗದ ಹಸಿರು ಚಿಗುರು ಒಂದಕ್ಕೊಂದು ಕೂಡಿಸಿಕೊಂಡು ಅತಿಶಯವಾದ ಹಸಿರು ಬಣ್ಣವನ್ನೂ ಹೊಳೆಯುವ ಕೆಂಪು ಬಣ್ಣವನ್ನೂ ಹೊಂದಿರಲು, ಪ್ರೇಮದಲ್ಲಿ ಕೆರಳಿ ವಿರಹದಿಂದ ಕೆರಳಿ ಉಳಿದುಕೊಂಡ ವಿರಹಿಯ ನಡುಗುವ ಎದೆಯನ್ನು ಆಯ್ದುಕೊಂಡು ಅದನ್ನು ಬಯಸಲಿ ಎಂದೇ ಮನ್ಮಥನು ಅದನ್ನು ಸೇರಿಸಿ ಕೆಂಪು ಬಣ್ಣವನ್ನು ಹಾಸಿದ ಹಾಗೆ ಮಾವಿನ ಮರಗಳು ವಸಂತ ಕಾಲದಲ್ಲಿ ರಮ್ಯವಾಗಿದ್ದುವು.
ಚಂ|| ಪರೆಯೆ ಪಸುರ್ಪು ಬೆಳ್ಪಡರೆ ಬಲ್ಮುಗುಳೊಳ್ ಪೊರೆದೋರೆ ತೆಂಬೆರಲ್
ಪೊರೆವೊರೆಯಂ ಸಡಿಲ್ಚೆ ನಡು ಪೊಂಗಿರೆ ಮಲ್ಲಿಗೆಗಳ್ ಬಸಂತದೊಳ್|
ಬಿರಿದೊಡೆ ನಲ್ಲರಂ ನೆನೆದ ನಲ್ಲರ ಮೆಲ್ಲೆರ್ದೆಗಳ್ ಬಸಂತದೊಳ್
ಬಿರಿದುವಂದೆಂತೊ ಮಲ್ಲಿಗೆಗೆ ನಲ್ಲರ ಮೆಲ್ಲೆರ್ದೆ ವೇಳೆಗೊಂಡುದೋ|| ೩೩ ||
ಪದ್ಯ-೩೩:ಪದವಿಭಾಗ-ಅರ್ಥ:ಪರೆಯೆ ಪಸುರ್ಪು (ಹಸಿರು ಬಣ್ಣ ಹೋಗಿ) ಬೆಳ್ಪಡರೆ ಬಲ್ಮುಗುಳೊಳ್ (ಬಲಿತ ಮೊಗ್ಗುಗಳಲ್ಲಿ ಬಿಳಿಯ ಬಣ್ಣವು ತುಂಬಲು) ಪೊರೆದೋರೆ (ದಳದ ಪದರಗಳು ತೋರುತ್ತಿರಲು) ತೆಂಬೆರಲ್ ಪೊರೆವೊರೆಯಂ ಸಡಿಲ್ಚೆ (ತಂಗಾಳಿಯು ಆ ದಳದ ಪದರಗಳನ್ನು ಸಡಲಿಸಲು), ನಡು ಪೊಂಗಿರೆ ಮಲ್ಲಿಗೆಗಳ್ (ಮೊಗ್ಗಿನ ಮಧ್ಯಭಾಗವು ಉಬ್ಬಿ ಮಲ್ಲಿಗೆಯು ಅರಳಿರಲು) ಬಸಂತದೊಳ್ ಬಿರಿದೊಡೆ ನಲ್ಲರಂ ನೆನೆದ ನಲ್ಲರ ಮೆಲ್ಲೆರ್ದೆಗಳ್ ಬಸಂತದೊಳ್ ಬಿರಿದುವು (ವಸಂತಕಾಲದಲ್ಲಿ ಪ್ರಿಯರನ್ನು ನೆನಸಿಕೊಂಡ ವಿರಹಿಗಳ ಹೃದಯಗಳು ಒಡೆದುವು.) ಅದೆಂತೊ ಮಲ್ಲಿಗೆಗೆ ನಲ್ಲರ ಮೆಲ್ಲೆರ್ದೆ ವೇಳೆಗೊಂಡುದೋ (ಮಲ್ಲಿಗೆಯ ಅರಳುವಿಕೆಗೆ ಪ್ರಿಯರ ಮೃದುಹೃದಯವು ಅದು ಹೇಗೆ ಸಮಯಪಾಲನೆ ಮಾಡಿತೊ!)
ಪದ್ಯ-೩೩:ಅರ್ಥ: ವಸಂತಕಾಲದಲ್ಲಿ ಮಲ್ಲಿಗೆಯ ಹಸಿರು ಬಣ್ಣ ಹೋಗಿ ಬಲಿತ ಮೊಗ್ಗುಗಳಲ್ಲಿ ಬಿಳಿಯ ಬಣ್ಣವು ತುಂಬಲು, ದಳದ ಪದರಗಳು ತೋರುತ್ತಿರಲು, ತಂಗಾಳಿಯು ಆ ದಳದ ಪದರಗಳನ್ನು ಸಡಲಿಸಿದವು. ಮೊಗ್ಗಿನ ಮಧ್ಯಭಾಗವು ಉಬ್ಬಿ ಮಲ್ಲಿಗೆಯು ಅರಳಿರಲು ವಸಂತಕಾಲದಲ್ಲಿ ಪ್ರಿಯರನ್ನು ನೆನಸಿಕೊಂಡ ವಿರಹಿಗಳ ಹೃದಯಗಳು ಒಡೆದುವು. ಮಲ್ಲಿಗೆಯ ಅರಳುವಿಕೆಗೆ ಪ್ರಿಯರ ಮೃದುಹೃದಯವು ಅದು ಹೇಗೆ ಸಮಯಪಾಲನೆ ಮಾಡಿತೊ!
ಚಂ||ನನೆಯೆಳಗಂಪನೆತ್ತಿಯುಮಣಂ ನನೆ ನಾಱದರಲ್ದನೇಕ ಕೋ
ಕನದ ವನಂಗಳೊಳ್ ಸುೞಿದು ತಣ್ಣಸಮಾಗದೆ ಕೂಡೆ ಬಂದ ಮಾ|
ವಿನ ಪೊಸ ಪೂವಿನೊಳ್ ಪೊರೆದು ಪೊಣ್ಮಿದ ಕಂಪು ಮೊಗಂಗಳಂ ಚಳಿ
ಲ್ಲೆನೆ ಕೊಳೆ ಪೊಯ್ಯೆ ತೀಡಿದುದು ತೆಂಕಣ ಗಾಳಿ ವಸಂತಮಾಸದೊಳ್|| ೩೪||
ಪದ್ಯ-೩೪:ಪದವಿಭಾಗ-ಅರ್ಥ:ನನೆಯ (ಹೂವಿನ) ಎಳಗಂಪನು ಎತ್ತಿಯುಂ (ಹೂವಿನ ಎಳೆಯ ವಾಸನೆಯನ್ನು ಹೊಂದಿಯೂ), ಅಣಂ ನನೆ ನಾಱದೆ ಅರಲ್ದ ಅನೇಕ ಕೋಕನದ ವನಂಗಳೊಳ್ ಸುೞಿದು (ಹೂವಿನ ಪರಿಮಳದಿಂದ ಗಂಧಯುಕ್ತವಾಗದೆ ಅರಳಿದ ತಾವರೆಯ ವನಗಳಲ್ಲಿ ಸುತ್ತಾಡಿಯೂ) ತಣ್ಣಸಮಾಗದೆ (ತಂಪಾಗದೆ) ಕೂಡೆ ಬಂದ ಮಾವಿನ ಪೊಸ ಪೂವಿನೊಳ್ ಪೊರೆದು ಪೊಣ್ಮಿದ (ಹೊಮ್ಮಿದ) ಕಂಪು ಮೊಗಂಗಳಂ (ಆಗಲೆ ಬಂದ ಹಣ್ಣಾದ ಮಾವಿನ ಮರದ ಹೊಸ ಹೂಗಳಲ್ಲಿ ಸೇರಿಕೊಂಡು ಅದರಿಂದ ಹೊರಹೊಮ್ಮಿದ ಸುವಾಸನೆಯು ಮುಖಗಳನ್ನು) ಚಳಿಲ್ಲೆನೆ ಕೊಳೆ ಪೊಯ್ಯೆ (ಚಳಿಲೆಂದು ಆಕ್ರಮಿಸಿ ಅಪ್ಪಳಿಸುವಂತೆ) ತೀಡಿದುದು (ಬೀಸಿತು) ತೆಂಕಣ ಗಾಳಿ ವಸಂತಮಾಸದೊಳ್(ವಸಂತಮಾಸದಲ್ಲಿ ತೆಂಕಣಗಾಳಿ ಬೀಸಿತು)
ಪದ್ಯ-೩೪:ಅರ್ಥ: ಹೂವಿನ ಎಳೆಯ ವಾಸನೆಯನ್ನು ಹೊಂದಿಯೂ ಹೂವಿನ ಪರಿಮಳದಿಂದ ಗಂಧಯುಕ್ತವಾಗದೆ ಅರಳಿದ ತಾವರೆಯ ವನಗಳಲ್ಲಿ ಸುತ್ತಾಡಿಯೂ ತಂಪಾಗದೆ ಆ ಆಗಲೆ ಬಂದ ಹಣ್ಣಾದ ಮಾವಿನ ಮರದ ಹೊಸ ಹೂಗಳಲ್ಲಿ ಸೇರಿಕೊಂಡು ಅದರಿಂದ ಹೊರಹೊಮ್ಮಿದ ಸುವಾಸನೆಯು ಮುಖಗಳನ್ನು ಚಳಿಲೆಂದು ಆಕ್ರಮಿಸಿ ಅಪ್ಪಳಿಸುವಂತೆ ವಸಂತಮಾಸದಲ್ಲಿ ತೆಂಕಣಗಾಳಿ ಬೀಸಿತು
ಚಂ||ಮುಗುಳ್ವದನಾದ ಸಂಪಗೆ ಮಡಲ್ತದಿರ್ಮುತ್ತೆ ಮರಲ್ದರಲ್ದ ಮ
ಲ್ಲಿಗೆ ನನೆಗರ್ಚಿ ಕಾಕಳಿಯೊಳಾಣತಿಗೆಯ್ವ ಮದಾಳಿ ಪೋ ಪುಗಲ್|
ಪುಗಲೆನುತಿರ್ಪ ಪಕ್ಕಿ ಮನುಮಂ ಕವರುತ್ತಿರೆ ಯೋಗಿಗಂ ವಿಯೋ
ಗಿಗಮರಿದಾಯ್ತು ಪೊಕ್ಕ ಪುಗಿಲಿಂತು ವಸಂತಕ ಚಕ್ರವರ್ತಿಯಾ|| ೩೫ ||
ಪದ್ಯ-೩೫:ಪದವಿಭಾಗ-ಅರ್ಥ:ಮುಗುಳ್ವದನಾದ (ಮುಗುಳ್ (ವ)ಹದನಾದ ಮೊಗ್ಗಿನ ಹದಕ್ಕೆ ಬಂದ) ಸಂಪಗೆ ಮಡಲ್ತದಿರ್ಮುತ್ತೆ (ಮಡಲ್ತ- ಹಬ್ಬಿದ, ಅದಿರ್ಮುತ್ತೆ ಹೂವು) ಮರಲ್ದ ಅರಲ್ದ ಮಲ್ಲಿಗೆ (ಮರಳಿದ- ಬಹಳ ಅರಳಿದ ಮಲ್ಲಿಗೆ) ನನೆಗರ್ಚಿ ಕಾಕಳಿಯೊಳು ಆಣತಿಗೆಯ್ವ (ಹೂವನ್ನು ಕಚ್ಚಿಕೊಂಡು ಇಂಪಾದ ಧ್ವನಿಯಲ್ಲಿ ಆಲಾಪನೆ ಮಾಡುತ್ತಿರುವ ) ಮದಾಳಿ ಪೋ ಪುಗಲ್ ಪುಗಲೆನುತಿರ್ಪ (ಮದ ಅಳಿ- ಸೊಕ್ಕಿದ ದುಂಬಿಗಳಿಗೆ, ಹೋಗಿ ಪ್ರವೇಶಿಸಿರಿ, ಪ್ರವೇಶಿಸಿರಿ ಎನ್ನುತ್ತಿರುವ) ಪಕ್ಕಿ ಮನುಮಂ ಕವರುತ್ತಿರೆ (ಕೋಗಿಲೆಪಕ್ಷಿಯ ಗಾನ ಮನಸ್ಸನ್ನು ಸೂರೆಗೊಳ್ಳುತ್ತಿರಲು) ಯೋಗಿಗಂ ವಿಯೋಗಿಗಮ್ ಅರಿದಾಯ್ತು ಪೊಕ್ಕ ಪುಗಿಲಿಂತು ವಸಂತಕ ಚಕ್ರವರ್ತಿಯಾ(ಯೋಗಿಗೂ ವಿಯೋಗಿಗೂ ವಸಂತ ಚಕ್ರವರ್ತಿಯ ಪ್ರವೇಶವು ಅರಿದಾಯ್ತು- ಸಹಿಸಲಸಾಧ್ಯವಾಯಿತು - ಶತ್ರುವಾಯ್ತು?)
ಪದ್ಯ-೩೫:ಅರ್ಥ: ಮೊಗ್ಗಿನ ಹದಕ್ಕೆ ಬಂದ ಸಂಪಗೆಯೂ ಹಬ್ಬಿದ ಅದಿರ್ಮುತ್ತೆಯೂ ಚೆನ್ನಾಗಿ ಅರಳಿದ ಮಲ್ಲಿಗೆಯೂ ಹೂವನ್ನು ಕಚ್ಚಿಕೊಂಡು ಇಂಪಾದ ಧ್ವನಿಯಲ್ಲಿ ಆಲಾಪನೆ ಮಾಡುತ್ತಿರುವ ಸೊಕ್ಕಿದ ದುಂಬಿಗಳಿಗೆ ಹೋಗಿ ಪ್ರವೇಶಿಸಿರಿ, ಪ್ರವೇಶಿಸಿರಿ ಎನ್ನುತ್ತಿರುವ ಕೋಗಿಲೆಪಕ್ಷಿಯ ಗಾನ ಮನಸ್ಸನ್ನು ಸೂರೆಗೊಳ್ಳುತ್ತಿರಲು ಯೋಗಿಗೂ ವಿಯೋಗಿಗೂ ವಸಂತ ಚಕ್ರವರ್ತಿಯ ಪ್ರವೇಶವು ಸಹಿಸಲಸಾಧ್ಯವಾಯಿತು
ವ||ಅಂತು ಭುವನಕ್ಕೆಲ್ಲಮೊಸಗೆವರ್ಪಂತೆ ಬಂದ ವಸಂತದೊಳೊಂದು ದಿವಸಮನ್ನವಾಸದೋಲಗದೊಳುದಾತ್ತನಾರಾಯಣನುಂ ನಾರಾಯಣನುಮಿರ್ದಲ್ಲಿಗೊರ್ವಂ-
ವಚನ:ಪದವಿಭಾಗ-ಅರ್ಥ:ಅಂತು ಭುವನಕ್ಕೆಲ್ಲಂ ಒಸಗೆವರ್ಪಂತೆ (ಹಬ್ಬದಕರೆ ಬರುವ ಹಾಗೆ)ಬಂದ ವಸಂತದೊಳು ಒಂದು ದಿವಸಮ್ ಅನ್ನವಾಸದೋಲಗದೊಳು ಉದಾತ್ತನಾರಾಯಣನುಂ ನಾರಾಯಣನುಂ (ಅರ್ಜುನ ಕೃಷ್ಣ) ಇರ್ದಲ್ಲಿಗೆ ಒರ್ವಂ-
ವಚನ:ಅರ್ಥ:ಹಾಗೆ ಲೋಕಕ್ಕೆಲ್ಲ ಹಬ್ಬದಕರೆ ಬರುವ ಹಾಗೆ ಬಂದ ವಸಂತ ಕಾಲದಲ್ಲಿ ಒಂದು ದಿವಸ ಭೋಜನಶಾಲೆಯ ಸಭೆಯಲ್ಲಿ ಅರ್ಜುನನೂ ಕೃಷ್ಣನೂ ಇದ್ದ ಸ್ಥಳಕ್ಕೆ ಒಬ್ಬನು (ಬಂದನು-)
ಕಂ|| ತೊಟ್ಟೆಕ್ಕವಡಂ ಮರವಿಲ್
ಕಟ್ಟಿದ ಪಣೆಕಟ್ಟು ಬೇಂಟೆವರೆ ದೊರೆಯೊಳೊಡಂ|
ಬಟ್ಟಸಿಯ ಸುರಗಿ ದಳಿವದ
ತೊಟ್ಟಂಗಿಗೆ ತನ್ನೊಳಮರೆ ಬೇಂಟೆಯನೊರ್ವಂ|| ೩೬ ||
ಪದ್ಯ-೦೦:ಪದವಿಭಾಗ-ಅರ್ಥ:ತೊಟ್ಟ ಎಕ್ಕವಡಂ (ಎಕ್ಕಡ) ಮರವಿಲ್ ಕಟ್ಟಿದ ಪಣೆಕಟ್ಟು (ಹಣೆಯ ಕಟ್ಟು) ಬೇಂಟೆವರೆ (ಬೇಟೆಯಡೋಲು) ದೊರೆಯೊಳೊಡಂ ಬಟ್ಟ ಅಸಿಯ ಸುರಗಿ (ತೆಳುವಾದ ಕತ್ತಿ) ದಳಿವದ (ಮೇಲು ಹೊದಿಕೆಯ) ತೊಟ್ಟಂಗಿಗೆ (ತೊಟ್ಟ ಅಂಗಿ) ತನ್ನೊಳಮರೆ (ತನ್ನುಳು ಅಮರೆ ಸೇರಿರಲು) ಬೇಂಟೆಯನೊರ್ವಂ (ಬಂದನು)
ಪದ್ಯ-೦೦:ಅರ್ಥ: ತೊಟ್ಟ ಎಕ್ಕಡ, ಕಟ್ಟಿದ ಮರದ ಬಿಲ್ಲು, ಕಟ್ಟಿದ ಹಣೆಯ ಕಟ್ಟು, ಬೇಟೆಯ ಪರೆ (ತಮಟೆ) ಸರಿಯಾಗಿ ಹೊಂದಿಕೊಂಡಿರುವ ಸಣ್ಣ ಕತ್ತಿ, ಉತ್ತರೀಯದಿಂದ ಕೂಡಿದ ಅಂಗಿ ಇವುಗಳಿಂದ ಕೂಡಿದ ಬೇಟೆಗಾರನೊಬ್ಬನು- (ಬಂದನು)
ಕಂ||ಬಂದು ಪೊಡವಟ್ಟು ಕಂಡಿಂ
ತೆಂದಂ ಪೊಲನುಡುಗಿ ಬಂದುದುಡಿದುದು ಪುಲ್ ಕಾ|
ಡುಂ ದಲೆಲೆಯಿಕ್ಕಿ ಘಳಿಲೆನೆ
ನಿಂದುವು ತಣಿದುವು ಮೃಗಂಗಳೆತ್ತಲುಮೀಗಳ್|| ೩೭||
ಪದ್ಯ-೩೭:ಪದವಿಭಾಗ-ಅರ್ಥ:ಬೇಟೆಗಾರನೊಬ್ಬನುಬಂದು ಪೊಡವಟ್ಟು (ನಮಸ್ಕಾರ ಮಾಡಿ) ಕಂಡು ಇಂತೆಂದಂ (ಹೀಗೆಂದನು) ಪೊಲನುಡುಗಿ ಬಂದುದು ಉಡಿದುದು (ಹೊಲಗಳಲ್ಲಿ ಕಾಳು ಕಡ್ಡಿಗಳನ್ನು ಬಿಡಿಸಿಯಾಯಿತು. ) (ಪುಲ್ (ಕೂಡಾ) ಕಾಡುಂ ದಲೆಲೆಯಿಕ್ಕಿ ಘಳಿಲೆನೆ ನಿಂದುವು (ಕಾಡು ನಿಜವಾಗಿಯೂ ಎಲೆ ಬಿಟ್ಟು ಚಿಗುರಿ ನಿಂತಿವೆ.) ತಣಿದುವು ಮೃಗಂಗಳ್ ಎತ್ತಲುಂ ಈಗಳ್( ಎಲ್ಲ ಕಡೆಯಲ್ಲಿಯೂ ಈಗ ಮೃಗಗಳು ತೃಪ್ತಿಪಟ್ಟಿವೆ.)
ಪದ್ಯ-೩೭:ಅರ್ಥ: ಬಂದು ನಮಸ್ಕಾರ ಮಾಡಿ ಹೀಗೆಂದನು: ಹೊಲಗಳಲ್ಲಿ ಕಾಳು ಕಡ್ಡಿಗಳನ್ನು ಬಿಡಿಸಿಯಾಯಿತು. ಹುಲ್ಲೊಕ್ಕಣೆಯೂ ಆಯಿತು. ಕಾಡು ನಿಜವಾಗಿಯೂ ಎಲೆ ಬಿಟ್ಟು ಚಿಗುರಿ ನಿಂತಿವೆ. ಎಲ್ಲ ಕಡೆಯಲ್ಲಿಯೂ ಈಗ ಮೃಗಗಳು ತೃಪ್ತಿಪಟ್ಟಿವೆ.
ಕಂ||ಸುೞಿಯದು ಗಾಳಿ ಮೃಗಂ ಕೆ
ಯ್ವಱಗಳ ಮೇತದೊಳೆ ತಣಿದಪುವು ಪಂದಿಗಳುಂ|
ಪೞ ನವಿರಿಕ್ಕಿದುವಾಳಂ
ಪೞು ಪರಿದಾಡಲ್ ಕರಂ ಬೆಡಂಗವನಿಪತೀ|| ೩೮ ||
ಪದ್ಯ-೩೮:ಪದವಿಭಾಗ-ಅರ್ಥ:ಸುೞಿಯದು ಗಾಳಿ ಮೃಗಂ ಕೆಯ್ವಱಗಳ ಮೇತದೊಳೆ ತಣಿದಪುವು (ಮೃಗಗಳು ಹೊಲದ ದಾರಿಯಲ್ಲಿರುವ ಮೇವುಗಳಿಂದಲೇ ತೃಪ್ತಿಪಡುತ್ತಿವೆ) ಪಂದಿಗಳುಂ ಪೞ ನವಿರಿಕ್ಕಿದುವು (ಹಂದಿಗಳೂ ತಮ್ಮ ಹಳೆಯ ಕೂದಲುಗಳನ್ನು ಬೀಳಿಸಿಕೊಂಡಿವೆ.) ಆಳಂಪೞು (ಪಳು- ಕಾಡು) ಪರಿದಾಡಲ್ (ಓಡಾಡಲು) ಕರಂ ಬೆಡಂಗುಂ (ಅತ್ಯಂತ ಸೊಗಸು) ಅನಿಪತೀ
ಪದ್ಯ-೩೮:ಅರ್ಥ: ರಾಜನೇ ಈಗ ಗಾಳಿ ಬೀಸುವುದಿಲ್ಲ, ಮೃಗಗಳು ಹೊಲದ ದಾರಿಯಲ್ಲಿರುವ ಮೇವುಗಳಿಂದಲೇ ತೃಪ್ತಿಪಡುತ್ತಿವೆ. ಹಂದಿಗಳೂ ತಮ್ಮ ಹಳೆಯ ಕೂದಲುಗಳನ್ನು ಬೀಳಿಸಿಕೊಂಡಿವೆ. ಕಾಡು ಈಗ ಓಡಾಡಲು ಅತ್ಯಂತ ಸೊಗಸಾಗಿದೆ.
ಕಂ||ಬರವಂ ಕಾಡಂ ಬೇಗೆಗೆ
ಕರಮಱಿದೆರಡುಂ ಮೃಗಗಳುಂ ತಣ್ಬುೞಿಲೊಳ್|
ನೆರೆದೊಡವಂದುವು ತಪ್ಪದಿ
ದರಿಕೇಸರಿ ಕಂಡು ಮೆಚ್ಚುವೈ ಕೋಳ್ಪಾಂಗಂ|| ೩೯||
ಪದ್ಯ-೩೯:ಪದವಿಭಾಗ-ಅರ್ಥ:ಬರವಂ ಕಾಡಂ ಬೇಗೆಗೆ ಕರಂ ಅಱಿದು (ಚೆನ್ನಾಗಿ ತಿಳಿದು) ಎರಡುಂ ಮೃಗಗಳುಂ ತಣ್ಬುೞಿಲೊಳ್ (ಎರಡು ಜಿಂಕೆಗಳೂ ತಂಪಾದ ಮರಗಳ ನೆರಳಿನಲ್ಲಿ) ನೆರೆದು ಒಡವಂದುವು (ಸೇರಿ ಜೊತೆಗೂಡಿ ಬಂದಿವೆ) ತಪ್ಪದು ಇದು ಅರಿಕೇಸರಿ ಕಂಡು ಮೆಚ್ಚುವೈ ಕೋಳ್ಪಾಂಗಂ(ಇದು ಸುಳ್ಳಲ್ಲ ಅರ್ಜುನನೇ ಮೃಗವು ಸಿಕ್ಕಿಬೀಳುವ ರೀತಿಯನ್ನು ನೀನು ಮೆಚ್ಚುತ್ತೀಯೆ)
ಪದ್ಯ-೩೯:ಅರ್ಥ: ಮೃಗಗಳ ಬರುವಿಕೆಯನ್ನೂ ಕಾಡಿನ ಸ್ವರೂಪವನ್ನೂ ಚೆನ್ನಾಗಿ ತಿಳಿದು ಎರಡು ಜಿಂಕೆಗಳೂ ತಂಪಾದ ಮರಗಳ ನೆರಳಿನಲ್ಲಿ ಸೇರಿ ಜೊತೆಗೂಡಿ ಬಂದಿವೆ. ಇದು ಸುಳ್ಳಲ್ಲ ಅರ್ಜುನನೇ ಮೃಗವು ಸಿಕ್ಕಿಬೀಳುವ ರೀತಿಯನ್ನು ನೀನು ಮೆಚ್ಚುತ್ತೀಯೆ.

ಬೇಟೆಗಾರನಿಮದ ಬೇಟೆಯ ಕ್ರಮ ವಿವರ[ಸಂಪಾದಿಸಿ]

ಕಾಡೊಡಮ ವೇಳೆ ಸಲೆ ಕೆ
ಯ್ಗೂಡಿದುದೆನೆ ನೆಲದೊಳಿರ್ದ ನೆಲ್ಲಿಯ ಕಾಯುಂ|
ನೋಡ ನೆಲಮುಟ್ಟಲೞ್ತಿಯೊ
ಳಾಡುವೊಡೀ ದೆವಸಮಲ್ತೆ ಬೇಂಟೆಯ ದೆವಸಂ|| ೪೦||
ಪದ್ಯ-೪೦:ಪದವಿಭಾಗ-ಅರ್ಥ: ಕಾಡೊಡಮ (ಕಾಡ ಒಡಮ-ಕಾಡಿನ ವಸ್ತು) ವೇಳೆ ಸಲೆ ಕೆಯ್ಗೂಡಿದುದು ಎನೆ (ಅದನ್ನು ಸಂಗ್ರಹಿಸಬೇಕಾದ ಕಾಲ ಇವೆರಡೂ ಕೈಗೂಡಿದೆ ಎನ್ನಲು) ನೆಲದೊಳಿರ್ದ ನೆಲ್ಲಿಯ ಕಾಯುಂ ನೋಡ, (ನೆಲದಲ್ಲಿ ಉದುರಿರುವ ನೆಲ್ಲಿಯ ಕಾಯೇ ಸಾಕ್ಷಿ, ನೋಡಿ!) ನೆಲಮುಟ್ಟಲು ಅೞ್ತಿಯೊಳು ಆಡುವೊಡೆ (ನೆಲವನ್ನು ಮುಟ್ಟಿ ಸಂತಸದಿಂದ ಆಟ ಬೇಟೆ ಆಡುವ ಪಕ್ಷದಲ್ಲಿ) ಈ ದೆವಸಮಲ್ತೆ ಬೇಂಟೆಯ ದೆವಸಂ ()|
ಪದ್ಯ-೪೦:ಅರ್ಥ: ಕಾಡಿನಲ್ಲಿ ಸಂಗ್ರಹಿಸಬೇಕಾದ ವಸ್ತು, ಅದನ್ನು ಸಂಗ್ರಹಿಸಬೇಕಾದ ಕಾಲ ಇವೆರಡೂ ಕೈಗೂಡಿದೆ ಎನ್ನಲು, ನೆಲದಲ್ಲಿ ಉದುರಿರುವ ನೆಲ್ಲಿಯ ಕಾಯೇ ಸಾಕ್ಷಿ. ನೆಲವನ್ನು ಮುಟ್ಟಿ ಸಂತಸದಿಂದ ಬೇಟೆ ಆಡುವ ಪಕ್ಷದಲ್ಲಿ, ಬೇಟೆಗೆ ಈ ದಿನವೇ ಯೋಗ್ಯವಾದ ದಿನವಲ್ಲವೇ? ಇದೇ ತಕ್ಕ ಸಮಯ!
ವ|| ಮತ್ತಂ ಬೇಂಟೆ ಜಾಱಲ್ಲದೆ ಬೇಂಟೆಯ ಮಾತಂ ಬಿನ್ನಪಂಗೆಯ್ವೆಂ-
ವಚನ:ಪದವಿಭಾಗ-ಅರ್ಥ:ಮತ್ತಂ ಬೇಂಟೆ ಜಾಱಲ್ಲದೆ (ಜಾಳು- ಅಲ್ಲದ- ಸುಳ್ಳು ಅಲ್ಲದ) ಬೇಂಟೆಯ ಮಾತಂ ಬಿನ್ನಪಂ ಗೆಯ್ವೆಂ-(ಅರಿಕೆಮಾಡಿಕೊಳ್ಳುತ್ತೇನೆ)
ವಚನ:ಅರ್ಥ:ಬೇಟೆಯ ವಿಷಯವಾದ ಸುಳ್ಳು ಸಂದೇಶಗಳಿಲ್ಲದ ಬೇಟೆಯ (ಫಲಾಫಲಗಳನ್ನು) ಅರಿಕೆಮಾಡಿಕೊಳ್ಳುತ್ತೇನೆ
ಪಿರಿಯಕ್ಕರ|| ಆಡಲಾಡಿಸಲ್ ಪಾೞಿಯಂ ನಿಱಿಸಲುಂ ಪರಿಗೊಳಲ್ ತೊವಲಿಕ್ಕ ಲೊಳಗಂಬರಲ್
ಕಾಡ ಬೇಲಿಯಂ ಮಾರ್ಕಾಂಡನಱಿಯಲುಂ ಮೂಡಿಗೆ ಕಕ್ಕುಂಬಂ ಸುೞಿಸಿ ಜೊಂಪಂ|
ಬೀಡು ಬಿಡುವಿಂಬು ಕದಳಿ ತೆಂಗಿನ ತಾಣಂ ಜಾಣಿಂ ನೀರ್ದಾಣಮೆಂದೆಡೆಯಱಿದುಂ
ಮಾಡಲ್ ಮಾಡಿಸಲ್ ಪಡೆ ಮೆಚ್ಚೆ ನೀಂ ಬಲ್ಲೆ ನೀಂ ಮೆಚ್ಚೆ ಹರಿಗ ಕೇಳಾನೆ ಬಲ್ಲೆಂ|| ೪೧||
ಪದ್ಯ-೪೧:ಪದವಿಭಾಗ-ಅರ್ಥ: ಆಡಲು ಆಡಿಸಲ್ ಪಾೞಿಯಂ ನಿಱಿಸಲುಂ ಪರಿಗೊಳಲ್ ತೊವಲಿಕ್ಕಲು(ಬೇಟೆಯಾಡುವುದಕ್ಕೂ ಆಡಿಸುವುದಕ್ಕೂ ಕ್ರಮವನ್ನು ಸ್ಥಾಪಿಸುವುದಕ್ಕೂ ಓಡುವುದಕ್ಕೂ ಚಿಗುರನ್ನು ಹಾಕುವುದಕ್ಕೂ) ಒಳಗಂಬರಲ್ ಕಾಡ ಬೇಲಿಯಂ ಮಾರ್ಕಾಂಡಂ ಅಱಿಯಲುಂ (ಒಳಗೆ ಪ್ರವೇಶಿಸುವುದಕ್ಕೂ ಕಾಡಿನ ಎಲ್ಲೆಯನ್ನೂ ಎದುರು ಕಾಡನ್ನೂ ತಿಳಿಯುವುದಕ್ಕೂ) ಮೂಡಿಗೆ ಕಕ್ಕುಂಬಂ ಸುೞಿಸಿ (ಬತ್ತಳಿಕೆಗೆ ಕಕ್ಕುಂಬ (?)ಗಳನ್ನು ಸುಳಿಸಿ) ಜೊಂಪಂ ಬೀಡು ಬಿಡುವಿಂಬು (ಇದು ಬೀಡುಬಿಡಲು ಸ್ಥಳ), ಕದಳಿ (ಬಾಳೆ) ತೆಂಗಿನ ತಾಣಂ, ಜಾಣಿಂ ನೀರ್ ತಾಣಮೆಂದು (ಮೃಗಗಳು ಜಾಣತನದಿಂದ ನೀರು ಕುಡಿಯಲು ಬರುವ ಸ್ಥಳ) ಎಡೆಯ ಅಱಿದುಂ (ತಾಣವನ್ನು ತಿಳಿದು)ಮಾಡಲ್ ಮಾಡಿಸಲ್ ಪಡೆ ಮೆಚ್ಚೆ ನೀಂ ಬಲ್ಲೆ ನೀಂ (ಸೈನ್ಯ ಮೆಚ್ಚುವ ಹಾಗೆ ಮಾಡುವುದಕ್ಕೆ ನೀನು ಬಲ್ಲೆ, ಕೂಡಿಸುವುದಕ್ಕೂ ಸಮರ್ಥ) ಮೆಚ್ಚೆ ಹರಿಗ (ಅರ್ಜುನ) ಕೇಳು ಆನೆ ಬಲ್ಲೆಂ|
ಪದ್ಯ-೪೧:ಅರ್ಥ: ಬೇಟೆಯಾಡುವುದಕ್ಕೂ ಆಡಿಸುವುದಕ್ಕೂ ಕ್ರಮವನ್ನು ಸ್ಥಾಪಿಸುವುದಕ್ಕೂ ಓಡುವುದಕ್ಕೂ ಚಿಗುರನ್ನು ಹಾಕುವುದಕ್ಕೂ ಒಳಗೆ ಪ್ರವೇಶಿಸುವುದಕ್ಕೂ ಕಾಡಿನ ಎಲ್ಲೆಯನ್ನೂ ಎದುರು ಕಾಡನ್ನೂ ತಿಳಿಯುವುದಕ್ಕೂ ಬತ್ತಳಿಕೆಗೆ ಕಕ್ಕುಂಬ (?)ಗಳನ್ನು ಸುಳಿಸಿ, ಇದು ಜೊಂಪ (?) ಇದು ಬೀಡುಬಿಡಲು ಸ್ಥಳ, ಇದು ಬಾಳೆ, ತೆಂಗು ಇರುವ ಸ್ಥಳ ಇದು, ಮೃಗಗಳು ಜಾಣತನದಿಂದ ನೀರು ಕುಡಿಯಲು ಬರುವ ಸ್ಥಳ ಎಂದು ಜಾಣ್ಮೆಯಿಂದ ತಿಳಿದು ಸೈನ್ಯ ಮೆಚ್ಚುವ ಹಾಗೆ ಮಾಡುವುದಕ್ಕೆ ನೀನು ಬಲ್ಲೆ, ಕೂಡಿಸುವುದಕ್ಕೂ ಸಮರ್ಥ. ಎಲೈ ಅರಿಗನೇ ನೀನು ಮೆಚ್ಚುವ ಹಾಗೆ ಮಾಡಲು ನಾನೂ ಬಲ್ಲೆ ಅರ್ಜುನ!
ಕಂ|| ಮೃಗದೊಲವರಮುಮನರಸನ
ಬಗೆಯುಮನಱದಲಸದೆಳಸಲೋಲಗಿಸಲ್ ನೆ|
ಟ್ಟಗೆ ಬಲ್ಲನುಳ್ಳೊಡವನ
ಲ್ತೆ ಗುಣಾರ್ಣವ ಬೇಂಟೆಕಾಱನೊಲಗಕಾಱಂ|| ೪೨||
ಪದ್ಯ-೪೨:ಪದವಿಭಾಗ-ಅರ್ಥ:ಮೃಗದ ಒಲವರಮುಮಂ(ಒಲವನ್ನು) ಅರಸನ ಬಗೆಯುಮಂ ಅಱಿದು ಅಲಸದೆ(ಅರಸನ ಅಭಿಪ್ರಾಯವನ್ನೂ ತಿಳಿದು ಉದಾಸೀನ ಮಾಡದೆ) ಎಳಸಲು ಓಲಗಿಸಲ್ (ಸೇವೆಮಾಡಲು ಪ್ರಯತ್ನಿಸಲು) ನೆಟ್ಟಗೆ ಬಲ್ಲನುಳ್ಳೊಡೆ (ಸರಿಯಾಗಿ ತಿಳಿದವನಾದರೆ) ಅವನಲ್ತೆ ಗುಣಾರ್ಣವ ಬೇಂಟೆಕಾಱನು ಓಲಗಕಾಱಂ(ಸೇವೆ ಮಾಡಲು ತಿಳಿದಿರುವವನೇ ಅಲ್ಲವೇ ನಿಜವಾದ ಬೇಟೆಗಾರನೂ ಸೇವಾಳುವೂ ಆಗಿರುವವನು!)|
ಪದ್ಯ-೪೨:ಅರ್ಥ: ಪ್ರಾಣಿಗಳ ಬಯಕೆನ್ನೂ, ಅರಸನ ಅಭಿಪ್ರಾಯವನ್ನೂ ತಿಳಿದು ಉದಾಸೀನ ಮಾಡದೆ ಸೇವೆ ಮಾಡಲು ತಿಳಿದಿರುವವನೇ ಅಲ್ಲವೇ ನಿಜವಾದ ಬೇಟೆಗಾರನೂ ಸೇವಾಳುವೂ ಆಗಿರುವವನು!
ಪಿರಿಯಕ್ಕರ|| ಮೃಗಮಂ ಗಾಳಿಯನಿರ್ಕೆಯಂ ಪಕ್ಕೆಯಂ ಗಣಿದಮಂ ಕಂಡಿಯಂ ಮಾರ್ಕಂಡಿಯಂ
ಪುಗಿಲಂ ಪೋಗಂ ಬಾರಿಯಂ ಸನ್ನೆಯಂ ನೂಱುವಮರ್ಚುವ ನಿಲ್ವೆಡೆಯಂ|
ಬಗೆಯಂ ತೆಗೆಯನಲ್ಲಾಟಮಂ ಕಾಟಮಂ ನೋವುದಂ ಸಾವುದನೆಲ್ಲಂದದಿಂ
ಬಗೆದಾಗಳರಸರೊಳೆಲ್ಲ ಕೇಳ್ ನೀಂ ಬಲ್ಲೆ ಬೇಂಟೆಕಾಱರೊಳೆಲ್ಲವಾನೆ ಬಲ್ಲೆಂ|| ೪೩||
ಪದ್ಯ-೪೩:ಪದವಿಭಾಗ-ಅರ್ಥ:ಮೃಗಮಂ ಗಾಳಿಯನಿರ್ಕೆಯಂ (ಗಾಳಿ ಬೀಸುವ ದಿಕ್ಕನ್ನೂ) ಪಕ್ಕೆಯಂ (ಅವು ಮಲಗುವ ಎಡೆಯನ್ನೂ) ಗಣಿದಮಂ (ಸಂಖ್ಯೆಯನ್ನೂ) ಕಂಡಿಯಂ (ಅದರ ದಾರಿ) ಮಾರ್ಕಂಡಿಯಂ ಪುಗಿಲಂ ಪೋಗಂ (ಬರುವ ಮತ್ತು ಹೊಗುವದಾರಿ,) ಬಾರಿಯಂ ಸನ್ನೆಯಂ (ಸರದಿ, ಸನ್ನೆ) ನೂಱುವ ಅಮರ್ಚುವ (ನುಸುಳುವ? ಸೇರುವ) ನಿಲ್ವೆಡೆಯಂ (ನಿಲ್ಲುವ ಸ್ಥಳವನ್ನೂ) ಬಗೆಯಂ ತೆಗೆಯನು ಅಲ್ಲಾಟಮಂ ಕಾಟಮಂ (ಆಸಕ್ತಿ ವಿರಕ್ತಿಗಳನ್ನೂ ಅವುಗಳ, ಚಲನೆ,) ನೋವುದಂ (ಹಿಂಸೆ, ಯಾತನೆ ) ಸಾವುದನು ಎಲ್ಲಂದದಿಂ ಬಗೆದಾಗಳ್ (ಎಲ್ಲ ರೀತಿಯಿಂದಲೂ ಯೋಚಿಸಿದಾಗ) ಅರಸರೊಳೆಲ್ಲ ಕೇಳ್ ನೀಂ ಬಲ್ಲೆ ಬೇಂಟೆಕಾಱರೊಳ್ ಎಲ್ಲವ ಆನೆ ಬಲ್ಲೆಂ (ಬೇಟೆಗಾರರಲ್ಲೆಲ್ಲ ನೀನೂ ನಾನೂ ಬಲ್ಲೆವು)
ಪದ್ಯ-೪೩:ಅರ್ಥ: . ಪ್ರಾಣಿಗಳ ಸ್ವಭಾವವನ್ನೂ ಗಾಳಿ ಬೀಸುವ ದಿಕ್ಕನ್ನೂ- ಅದರಿಂದ ಪ್ರಾಣಿಗಳಿರುವ ಸ್ಥಳವನ್ನೂ ಅವು ಮಲಗುವ ಎಡೆಯನ್ನೂ ಅವುಗಳ ಸಂಖ್ಯೆಯನ್ನೂ ಅವು ನುಸುಳುವ ಕಂಡಿ ಪ್ರತಿಕಂಡಿಗಳನ್ನೂ ಅವುಗಳು ಬರುವ ಮತ್ತು ಹೊಗುವದಾರಿ, ಅವುಗಳಿಗೆ ಉಪಯೋಗಿಸಬೇಕಾದ ಸಂಜ್ಞೆಗಳನ್ನೂ ಅವುಗಳು ಸೇರುವ ನಿಲ್ಲುವ ಸ್ಥಳವನ್ನೂ ಅವುಗಳ ಆಸಕ್ತಿ ವಿರಕ್ತಿಗಳನ್ನೂ ಅವುಗಳ, ಚಲನೆ, ಹಿಂಸೆ, ಯಾತನೆ ಸಾವುಗಳನ್ನೂ ಎಲ್ಲ ರೀತಿಯಿಂದಲೂ ಯೋಚಿಸಿದಾಗ ರಾಜರುಗಳಲ್ಲೆಲ್ಲ ಬೇಟೆಗಾರರಲ್ಲೆಲ್ಲ ನೀನೂ ನಾನೂ ಬಲ್ಲೆವು.
ವ|| ಮತ್ತಂ ನೆಲನುಂ ಗಾಳಿಯುಂ ಕೆಯ್ಯುಂ ಮೃಗಮುಮನಱಿದು ಕಾಲಾಳೊಳಂ ಕುದುರೆಯೊಳಮೊಳಗಂ ಬರಲಾನೆ ಬಲ್ಲೆನಿದು ಪೆರ್ವೇಂಟೆಯಂದಂ ದೀವದ ಬೇಂಟೆಯಂ ಬಿನ್ನಪಂಗೆಯ್ವೊಡೆ ಗಾಳಿಯುಂ ಕೞಿವುಮುೞಿವುಂ ಕಾಂಪು ಮೇಪುಂ ತೋಡುಂ ಬೀಡುಂ ದೆಸೆಯುಂ ಮೆಚ್ಚುಂ ಬೆಚ್ಚುಂ ಪೋಗುಂ ಮೇಗುಂ ಬೆದಱುಂ ಕೆದಱುಂ ಪೆರ್ಚುಂ ಕುಂದುಮನಱಿದು ಕಾಣಲುಂ ಕಾಣಿಸಲುಂ ಕಡಂಗಲುಂ ಕಡಂಗಿಸಲುಮಡಂಗಲುಮಡಂಗಿಸಲುಮೊಡ್ಡಲು ಮೊಡ್ಡಿಸಲುಂ ಪುಗಿಸಲುಂ ಮಿಗಿಸಲುಂ ಕಾಣದುದಂ ಕಾಣಿಸಲುಂ ಮಾಣದುದಂ ಮಾಣಿಸಲುಮೇಱದುದನೇಱಿಸಲುಂ ಜಾಣನಾಗಿ ಮೂಱು ಕೊಂಬುಮನಾಱು ನಾಣ್ಪೋಗುಮನೆರೞ್ಪಜ್ಜೆಯುಮಂ ಮೂಱು ಪೊೞ್ತುಮಂ ಮೃಗದ ಮೂಱಿರವುಮ ನಾಱೂರಯ್ಕೆಯುಮಂ ಗಾಳಿಯುಮನೆಱಂಕೆಯುಮಂ ಬಲ್ಲನಾಗಿ ನಂಬಿದ ಬರವುಮಂ ನಂಬದ ಬರವುಮನಱಿದು ಮಲೆದುದಂ ಮಲೆಯಿಸಲುಂ ಮಲೆದುದಂ ತೊಲಗಿಸಲುಂ ನಂಬದುದಂ ನಂಬಿಸಲುಂ ನಂಬಿದುದಂ ಬಿಡಿಸಲುಮೊಳಪುಗುವುದರ್ಕೆಡೆ ಮಾಡಲುಮೆಡೆಯಾಗದ ಮೃಗಮನವುಂಕಿಸಲುಮೊಲ್ದುಮೊಲ್ಲದ ನಲ್ಲರಂತೆ ಮಿಡುಕಿಸಲುಂ ಪಣಮುಡಿದರಂತಡ್ಡಂ ಮಾಡಲುಮೆಸೆದ ದೆಸೆಗಳ್ಗೋಡಿಸಲುಂ ಕುಮಾರಸ್ವಾಮಿಯ ನಿಮ್ಮಡಿಯ ಕೆಲದೊಳಾನೆ ಬಲ್ಲೆಂ-
ವಚನ:ಪದವಿಭಾಗ-ಅರ್ಥ:ಮತ್ತಂ ನೆಲನುಂ ಗಾಳಿಯುಂ ಕೆಯ್ಯುಂ ಮೃಗಮುಮನು ಅಱಿದು ಕಾಲಾಳೊಳಂ ಕುದುರೆಯೊಳಮೊಳಗಂ (ಪದಾತಿಸೈನ್ಯ ಮತ್ತು ಕುದುರೆಯ ಸೈನ್ಯಗಳ) ಬರಲು ಆನೆ ಬಲ್ಲೆನು ಇದು ಪೆರ್ವೇಂಟೆಯಂದಂ (ಇದು ಹೆಬ್ಬೇಟೆಯ ರೀತಿ ) ದೀವದ ಬೇಂಟೆಯಂ ಬಿನ್ನಪಂಗೆಯ್ವೊಡೆ ಗಾಳಿಯುಂ ಕೞಿವುಂ ಉೞಿವುಂ (ದೂರಹೋಗುವುದು, ಉಳಿಯುವುದು) ಕಾಂಪು (ರಕ್ಷಣೆ) ಮೇಪುಂ (ಮೇವು) ತೋಡುಂ ಬೀಡುಂ ದೆಸೆಯುಂ ಮೆಚ್ಚುಂ ಬೆಚ್ಚುಂ (ಬೆದರುವುದು) ಪೋಗುಂ ಮೇಗುಂ ಬೆದಱುಂ ಕೆದಱುಂ (ರಕ್ಷಣೆ ಮತ್ತು ಮೇವುಗಳನ್ನೂ ತೋಡುವುದನ್ನೂ ಬೀಡುಬಿಡುವುದನ್ನೂ ದಿಕ್ಕುಗಳನ್ನೂ ಸಂಕೇತಸ್ಥಳಗಳನ್ನೂ) ಪೆರ್ಚುಂ ಕುಂದುಮನಱಿದು ಕಾಣಲುಂ ಕಾಣಿಸಲುಂ ಕಡಂಗಲುಂ ಕಡಂಗಿಸಲುಂ (ಅವುಗಳ ಉದ್ರೇಕಿಸಲೂ, ಅವುಗಳನ್ನು ರೇಗಿಸಲೂ) ಅಡಂಗಲುಂ ಡಂಗಿಸಲುಂ ಒಡ್ಡಲು ಮೊಡ್ಡಿಸಲುಂ (ಅವಿತುಕೊಳ್ಳಿಸಲೂ ಒಡ್ಡಲು ಒಡ್ಡಿಸಲೂ ) ಪುಗಿಸಲುಂ ಮಿಗಿಸಲುಂ ಕಾಣದುದಂ ಕಾಣಿಸಲುಂ ಮಾಣದುದಂ ಮಾಣಿಸಲುಂ ಏಱದುದನು ಏಱಿಸಲುಂ ಜಾಣನಾಗಿ ಮೂಱು ಕೊಂಬುಮನಾಱು (ಅವುಗಳ ಮೂರು ಸಂಕೇತ ಸ್ಥಳಗಳನ್ನೂ ) ನಾಣ್ಪೋಗುಮನು ಎರೞ್ಪಜ್ಜೆಯುಮಂ ( ಆರು ಬಗೆಯ ರತಿಕ್ರೀಡೆಯನ್ನೂ ಎರಡು ಹೆಜ್ಜೆಯನ್ನೂ) ಮೂಱು ಪೊೞ್ತುಮಂ ಮೃಗದ ಮೂಱಿರವುಮ ನಾಱೂರಯ್ಕೆಯುಮಂ (ಮೂರು ಹೊತ್ತನ್ನೂ ಮೃಗದ ಮೂರು ಸ್ಥಿತಿಗಳನ್ನೂ ಆರು ಪೋಷಣಾಕ್ರಮವನ್ನೂ) ಗಾಳಿಯುಮಂ ಎಱಂಕೆಯುಮಂ ಬಲ್ಲನಾಗಿ ನಂಬಿದ ಬರವುಮಂ ನಂಬದ ಬರವುಮನಱಿದು (ಗಾಳಿಯನ್ನೂ ರಕ್ಕೆಯನ್ನೂ ತಿಳಿದವನಾದ ಕಾರಣ) ಮಲೆದುದಂ ಮಲೆಯಿಸಲುಂ ಮಲೆದುದಂ ತೊಲಗಿಸಲುಂ (ಕೆರಳದೇ ಇರುವುದನ್ನು ಕೆರಳಿಸಲೂ ಕೆರಳಿರುವುದನ್ನು ತೊಲಗಿಸಲೂ ) ನಂಬದುದಂ ನಂಬಿಸಲುಂ ನಂಬಿದುದಂ ಬಿಡಿಸಲುಂ ಒಳಪುಗುವುದರ್ಕೆ ಎಡೆ (ಜಾಗ) ಮಾಡಲುಂ ಎಡೆಯಾಗದ ಮೃಗಮನು ಅವುಂಕಿಸಲುಂ ಒಲ್ದುಮೊಲ್ಲದ ನಲ್ಲರಂತೆ () ಮಿಡುಕಿಸಲುಂ (ಪ್ರೀತಿಸಿಯೂ ಪ್ರೀತಿಸದ ಪ್ರೇಮಿಗಳ ಹಾಗೆ ವ್ಯಥೆಪಡಿಸಲೂ) ಪಣಮುಡಿದರಂತೆ ಅಡ್ಡಂ ಮಾಡಲುಂ (ಜೂಜಿನಲ್ಲಿ ಒತ್ತೆಯನ್ನು ಸೋತವರಂತೆ ಅಡ್ಡಗಟ್ಟಲೂ) ಎಸೆದ ದೆಸೆಗಳ್ಗೆ ಓಡಿಸಲುಂ ಕುಮಾರಸ್ವಾಮಿಯ ನಿಮ್ಮಡಿಯ ಕೆಲದೊಳು ಆನೆ ಬಲ್ಲೆಂ (ಷಣ್ಮುಖನ ಮತ್ತು ನಿಮ್ಮ ಸಾಕ್ಷಿಯಾಗಿ ನಾನೇ ಸಮರ್ಥನಾಗಿದ್ದೇನೆ)-
ವಚನ:ಅರ್ಥ:ಮತ್ತೆ ನೆಲದ ಲಕ್ಷಣಗಳನ್ನೂ ಗಾಳಿಯು ಬರುವ ದಿಕ್ಕನ್ನೂ ಹೆಜ್ಜೆಯ ಗುರುತುಗಳನ್ನೂ ಮೃಗಗಳನ್ನೂ ತಿಳಿದು ಪದಾತಿಸೈನ್ಯ ಮತ್ತು (ಈ ಪದ್ಯವೂ ಸರಿಯಾಗಿ ಅರ್ಥವಾಗುತ್ತಿಲ್ಲ) ಕುದುರೆಯ ಸೈನ್ಯಗಳ ಮಧ್ಯೆ ನಾನು ಬರಲು ಸಮರ್ಥ. ಇದು ಹೆಬ್ಬೇಟೆಯ ರೀತಿ; ಮೃಗಗಳನ್ನು ಒಡ್ಡಿ ಆಕರ್ಷಿಸುವ ದೀವಕ ಬೇಟೆಯನ್ನು ಹೇಳುವುದಾದರೆ ಗಾಳಿಯ ದಿಕ್ಕನ್ನೂ ಪ್ರಾಣಿಗಳ ಹೋಗುವಿಕೆ ಮತ್ತು ಉಳಿಯುವಿಕೆಗಳನ್ನೂ ರಕ್ಷಣೆ ಮತ್ತು ಮೇವುಗಳನ್ನೂ ತೋಡುವುದನ್ನೂ ಬೀಡುಬಿಡುವುದನ್ನೂ ದಿಕ್ಕುಗಳನ್ನೂ ಸಂಕೇತಸ್ಥಳಗಳನ್ನೂ ಆಸಕ್ತಿ ಭಯಗಳನ್ನೂ ಪೋಗುಮೇಗುಗಳನ್ನೂ (?) ಹೆದರಿಕೆ ಬೆದರಿಕೆಗಳನ್ನೂ ಹೆಚ್ಚು ಕುಂದುಗಳನ್ನೂ ತಿಳಿದು ಅವುಗಳನ್ನು ಕಾಣಲು ಕಾಣಿಸಲು ಅವುಗಳ ಮೇಲೆ ರೇಗಲೂ ಅವುಗಳನ್ನು ರೇಗಿಸಲೂ ಅವಿತುಕೊಳ್ಳಲೂ ಅವಿತುಕೊಳ್ಳಿಸಲೂ ಒಡ್ಡಲು ಒಡ್ಡಿಸಲೂ ಪ್ರವೇಶ ಮಾಡಿಸಲೂ ಬೇರೆಡೆಯಲ್ಲಿ ಉಳಿಯುವ ಹಾಗೆ ಮಾಡಲೂ ಕಾಣದಿರುವುದನ್ನು ಕಾಣಿಸಲೂ ತಡೆಯುವುದಕ್ಕಾಗದುದನ್ನು ತಡೆಯಲೂ ಹತ್ತದೆ ಇರುವುದನ್ನು ಹತ್ತಿಸಲೂ ಚಾತುರ್ಯದಿಂದ ಅವುಗಳ ಮೂರು ಸಂಕೇತ ಸ್ಥಳಗಳನ್ನೂ ಆರು ಬಗೆಯ ರತಿಕ್ರೀಡೆಯನ್ನೂ ಎರಡು ಹೆಜ್ಜೆಯನ್ನೂ ಮೂರು ಹೊತ್ತನ್ನೂ ಮೃಗದ ಮೂರು ಸ್ಥಿತಿಗಳನ್ನೂ ಆರು ಪೋಷಣಾಕ್ರಮವನ್ನೂ ಗಾಳಿಯನ್ನೂ ರಕ್ಕೆಯನ್ನೂ ತಿಳಿದವನಾದ ಕಾರಣ ಅಪಾಯವಿಲ್ಲವೆಂದು ನಂಬಿ ಬರುವ ಪ್ರಾಣಿಯನ್ನೂ ಸಂದೇಹದಿಂದ ಬರುವ ಪ್ರಾಣಿಯನ್ನೂ ತಿಳಿದು ಕೆರಳದೇ ಇರುವುದನ್ನು ಕೆರಳಿಸಲೂ ಕೆರಳಿರುವುದನ್ನು ತೊಲಗಿಸಲೂ ನಂಬದೇ ಇರುವುದನ್ನು ನಂಬಿಸಲೂ ನಂಬಿದುದನ್ನು ಬಿಡಿಸಲೂ ಒಳಗೆ ಪ್ರವೇಶ ಮಾಡುವುದಕ್ಕೆ ಅವಕಾಶಮಾಡಲೂ ಅನವಾಗದ ಮೃಗವನ್ನು ಅನ ಮಾಡಿಕೊಳ್ಳಲೂ ಪ್ರೀತಿಸಿಯೂ ಪ್ರೀತಿಸದ ಪ್ರೇಮಿಗಳ ಹಾಗೆ ವ್ಯಥೆಪಡಿಸಲೂ ಜೂಜಿನಲ್ಲಿ ಒತ್ತೆಯನ್ನು ಸೋತವರಂತೆ ಅಡ್ಡಗಟ್ಟಲೂ ಎಸೆದ ದಿಕ್ಕಿಗೆ ಓಡಿಸಲೂ ಕುಮಾರಸ್ವಾಮಿಯ (ಷಣ್ಮುಖನ) ಮತ್ತು ನಿಮ್ಮ ಸಾಕ್ಷಿಯಾಗಿ ನಾನೇ ಸಮರ್ಥನಾಗಿದ್ದೇನೆ.
ಕಂ|| ಬರೆದಂತೆ ಬೆನ್ನ ಕರ್ಪೆಸೆ
ದಿರೆ ಸೂಚಮನುರ್ಚಿ ಪುಲ್ಲೆಗಾಟಿಸಿ ಮಲೆತ|
ರ್ಪೆರಲೆಯ ಸೋಲಮನೞ್ತಿಯೊ
ಳರಿಕೇಸರಿ ನಿಂದು ನೋೞ್ಪುದುದರಸಲ್ತೇ|| ೪೪||
ಪದ್ಯ-೪೪:ಪದವಿಭಾಗ-ಅರ್ಥ:ಬರೆದಂತೆ ಬೆನ್ನ ಕರ್ಪು ಎಸೆದಿರೆ ಸೂಚಮನು ಉರ್ಚಿ ಪುಲ್ಲೆಗಾಟಿಸಿ (ಹುಲ್ಲಿನ ಸುಳಿಗಳನ್ನು ಮುರಿದು ಹೆಣ್ಣಿನ ಜಿಂಕೆಗಾಗಿ ) ಮಲೆತರ್ಪ ಎರಲೆಯ ಸೋಲಮನು ಅೞ್ತಿಯೊಳ್ (ಗಂಡುಜಿಂಕೆಯ ಮೋಹವನ್ನು ಪ್ರೀತಿಯಿಂದ ನೋಡುವುದು) ಅರಿಕೇಸರಿ ನಿಂದು ನೋೞ್ಪುದೊಂದು ಅರಸಲ್ತೇ (ನೋಡುವುದು ರಾಜರಿಗೆ ಯೋಗ್ಯವಾದ ವಿನೋದವಲ್ಲವೇ?)|
ಪದ್ಯ-೪೪:ಅರ್ಥ: . ಅರ್ಜುನನೇ, ಚಿತ್ರಿಸಿದ ಹಾಗೆ ಬೆನ್ನಿನ ಕಪ್ಪು ಮಚ್ಚೆಯು ಕಾಣುತ್ತಿರಲು, ಹುಲ್ಲಿನ ಸುಳಿಗಳನ್ನು ಮುರಿದು ಹೆಣ್ಣಿನ ಜಿಂಕೆಗಾಗಿ ಬಯಸಿ ಸೊಕ್ಕಿನಿಂದ ಬರುತ್ತಿರುವ ಗಂಡುಜಿಂಕೆಯ ಮೋಹವನ್ನು ಪ್ರೀತಿಯಿಂದ ನೋಡುವುದು ರಾಜರಿಗೆ ಯೋಗ್ಯವಾದ ವಿನೋದವಲ್ಲವೇ?
ಕಂ||ಪದಮುಮನಿಂಬುಮನಣಮಱಿ
ಯದದೇವುದು ಬದ್ದೆ ಬೆಳ್ಮಿಗಂ ಪಜ್ಜೆದಲೆಂ|
ಬುದನೆರಡುಮನಱಿವಾತನೆ
ಚದುರಂ ಚದುರಂಗೆ ಬದ್ದೆ ವಜ್ಜೆಗಳೊಳವೇ|| ೪೫||
ಪದ್ಯ-೪೫:ಪದವಿಭಾಗ-ಅರ್ಥ:ಪದಮುಮಂ ಇಂಬುಮಂ ಅಣಂ ಅಱಿಯದದು ಏವುದು ಬದ್ದೆ ಬೆಳ್ಮಿಗಂ(ಪಾದ ಮತ್ತು ಅದರ ಹರವುನ್ನೂ ತಿಳಿಯದ ಆ ಪ್ರೌಢಿಮೆಯೆಂತಹುದು), ಪಜ್ಜೆದಲ್ ಎಂಬುದಂ ಎರಡುಮಂ ಅಱಿವಾತನೆ ಚದುರಂ (ನಿಜವಾದ ಹೆಜ್ಜೆ, ಅದರ ಲಕ್ಷಣ ಎರಡನ್ನೂ ತಿಳಿದವನೇ ಚತುರ), ಚದುರಂಗೆ ಬದ್ದೆ ವಜ್ಜೆಗಳು ಒಳವೇ (ಜಾಣನಿಗೂ ತಿಳಿಯದ ಪ್ರೌಢವಾದ ಹೆಜ್ಜೆಯ ಗುರುಗಳುಂಟೆ? )
ಪದ್ಯ-೪೫:ಅರ್ಥ: ಪಾದ ಮತ್ತು ಅದರ ಹರವುನ್ನೂ ಸ್ವಲ್ಪವೂ ತಿಳಿಯದ ಆ ಪ್ರೌಢಿಮೆಯೆಂತಹುದು? ಅಂಜುವ ಮೃಗ ಅದರ ನಿಜವಾದ ಹೆಜ್ಜೆ ಎರಡನ್ನೂ ತಿಳಿದವನೇ ಚತುರ. ಜಾಣನಿಗೂ ತಿಳಿಯದ ಪ್ರೌಢವಾದ ಹೆಜ್ಜೆಯ ಗುರುಗಳುಂಟೆ?
ವ|| ಮತ್ತಂ ಪಂದಿವೇಂಟೆಯ ಮಾತಂ ಬಿನ್ನಪಂಗೆಯ್ವೆಂ-
ವಚನ:ಪದವಿಭಾಗ-ಅರ್ಥ:ಮತ್ತಂ ಪಂದಿವೇಂಟೆಯ ಮಾತಂ ಬಿನ್ನಪಂ ಗೆಯ್ವೆಂ-
ವಚನ:ಅರ್ಥ:ಇನ್ನು ಹಂದಿಯ ಬೇಟೆಯ ಮಾತನ್ನು ಅರಿಕೆಕೊಳ್ಳುತ್ತೇನೆ-
ಪಿರಿಯಕ್ಕರ|| ನೆಲನಂ ನಿಱುಗೆಯಂ ನಡೆವೊಂದು ಪದಮುಮಂ ಸೋವಳಿ ಮೇವಳಿ ಬಿಸುವಳಿಯಂ
ಬಲಮಂ ಶಕುನಮನೊಳ್ಳಿತ್ತುಪಾಯಮಂ ಪಿಡಿವಂದೀತನೆ ವಂದಿ ಕುರುಡು ಕುಂಟೆಂ|
ದಲಸದಱಿದಿಂತು ಬಲ್ಮೆಗೆ ಬೆರಲೆತ್ತಿ ಪಜ್ಜೆಯಂ ನೆಲೆಗಳಂ ಕಿಡಲೀಯದೆ
ಸಿಲೆಯ ಮೇಲಾದೊಡಂ ಶಕುನಮಂ ನಿಱಪಂತೆ ನಿಱಿಸುವೆಂ ಪಂದಿಯಂ ನೀಂ ಮೆಚ್ಚಲು|| ೪೬||
ಪದ್ಯ-೪೬:ಪದವಿಭಾಗ-ಅರ್ಥ:ನೆಲನಂ ನಿಱುಗೆಯಂ ನಡೆವೊಂದು ಪದಮುಮಂ(ನೆಲವನ್ನೂ ನಿಂತ ಸ್ಥಳವನ್ನೂ ನಡೆಯುವ ಹೆಜ್ಜೆಯ ರೀತಿಯನ್ನೂ) ಸೋವಳಿ ಮೇವಳಿ ಬಿಸುವಳಿಯಂ ಬಲಮಂ ಶಕುನಮಂ ಒಳ್ಳಿತ್ತುಪಾಯಮಂ (ಹಿಡಿಯುವವುದು, ಮೇಯುವಿಕೆ, ಒಟ್ಟುಗೂಡಿಸುವಿಕೆ, ಶಕ್ತಿಯನ್ನೂ ಶಕುನ ಸಂಕೇತಗಳನ್ನೂ ಒಳ್ಳೆಯ ಉಪಾಯಗಳನ್ನೂ,) ಪಿಡಿವಂದು ಈತನೆ, ವಂದಿ ಕುರುಡು ಕುಂಟೆಂದು ಅಲಸದೆ ಅಱಿದು (ಹಂದಿಯು ಕುರುಡು ಅಥವಾ ಕುಂಟು ಎಂದು ಉದಾಸೀನಮಾಡದೆ) ಇಂತು ಬಲ್ಮೆಗೆ ಬೆರಲು ಎತ್ತಿ ಪಜ್ಜೆಯಂ ನೆಲೆಗಳಂ ಕಿಡಲೀಯದೆ (ನನ್ನ ಶಕ್ತಿಯನ್ನು ಪ್ರದರ್ಶಿಸಿ ಹೆಜ್ಜೆಯ ಗುರುಗಳನ್ನು ಅವುಗಳ ವಸತಿಗಳನ್ನು ಕೆಡಿಸದೆ) ಸಿಲೆಯ ಮೇಲಾದೊಡಂ ಶಕುನಮಂ ನಿಱಿಪಂತೆ ನಿಱಿಸುವೆಂ ಪಂದಿಯಂ (ಕಲ್ಲಿನ ಮೇಲಾದರೂ ಸಂಕೇತವನ್ನು ಸ್ಥಾಪಿಸುವ ಹಾಗೆ ನೀನು ಮೆಚ್ಚುವಂತೆ ಹಂದಿಯನ್ನು ನಿಲ್ಲಿಸುತ್ತೇನೆ) ನೀಂ ಮೆಚ್ಚಲು
ಪದ್ಯ-೪೬:ಅರ್ಥ: ಹಂದಿಯನ್ನು ಹಿಡಿಯುವಾಗ ನೆಲವನ್ನೂ ನಿಂತ ಸ್ಥಳವನ್ನೂ ನಡೆಯುವ ಹೆಜ್ಜೆಯ ರೀತಿಯನ್ನೂ, ಹಿಡಿಯುವವುದು, ಮೇಯುವಿಕೆ, ಒಟ್ಟುಗೂಡಿಸುವಿಕೆ, ಶಕ್ತಿಯನ್ನೂ ಶಕುನ ಸಂಕೇತಗಳನ್ನೂ ಒಳ್ಳೆಯ ಉಪಾಯಗಳನ್ನೂ, (ಉಳ್ಳವನು) ಇವನೇ (ಎಂಬ ಪ್ರೌಢಿಮೆಯನ್ನು ಪಡೆದಿದ್ದೇನೆ). ಹಂದಿಯು ಕುರುಡು ಅಥವಾ ಕುಂಟು ಎಂದು ಉದಾಸೀನಮಾಡದೆ ನನ್ನ ಶಕ್ತಿಯನ್ನು ಪ್ರದರ್ಶಿಸಿ ಹೆಜ್ಜೆಯ ಗುರುಗಳನ್ನು ಅವುಗಳ ವಸತಿಗಳನ್ನು ಕೆಡಿಸದೆ ಕಲ್ಲಿನ ಮೇಲಾದರೂ ಸಂಕೇತವನ್ನು ಸ್ಥಾಪಿಸುವ ಹಾಗೆ ನೀನು ಮೆಚ್ಚುವಂತೆ ಹಂದಿಯನ್ನು ನಿಲ್ಲಿಸುತ್ತೇನೆ.
ವ|| ಮತ್ತಂ ಪಂದಿವೇಂಟೆಯ ನಾಯೆಂತಪ್ಪುವೆಂದೊಡಸಿಯ ನಡುವುಮಗಲುರಮುಂ ತಳ್ತು ಕಟ್ಟಿದ ಕಿವಿಯುಂ ಪುರ್ವುಂ ತೋರಮಾಗಿ ನಿರ್ಮಾಂಸಮಪ್ಪ ಕಾಲ್ಗಳುಂ ನೆಲನಂ ಮುಟ್ಟದುಗುರ್ಗಳುಮನುಳ್ಳುದಾಗಿ ಜಾತ್ಯಶ್ವದಂತೆ ಬೇಗಮಾಗಿ ಕೋಳಿ ಕಾಳಿಕಾಱನಂತೆ ಬಱಿಯಱಿವಿಡಿದು ತುಂಬಿನ ನೀರನುರ್ಚಿದಾಗಳಡೆ ಪರಿದು ಮನ್ನೆಯರಂತೆ ಕಾದಿಯಲಸದೆ ಸೂಳೆಯಂತೆ ಕೋಳಂ ಪಟ್ಟಟ್ಟಿಸದೆ ತಕ್ಕನಂತೆ ನಂಬಿಸಿಯ ಮೊತ್ತರದಂತೊತ್ತಿಯು ಮುರಿಯಳುರ್ವಂತಳುರ್ದುಕೊಳ್ವುದಿದು ಪಂದಿವೇಂಟೆಯ ನಾಯ್ ಮತ್ತಂ ಕಿಱುವೇಂಟೆಯ ನಾಯಂ ಕೊಂಡುಂ ಜಾಱಿಯುಂ ನೆಲನುಂ ಪೊೞ್ತುಂ ಪೊಲನುಮನಱಿದು ಬೞಯೊಳ್ ಪೊಸತುಂ ಪೞದುಮನಱಿದು ಪರಿಯಿಸಲ್ ನೀನೆ ಬಲ್ಲೆಯದನು ಆನೆ ಬಲ್ಲೆನೆಂದು ಬಿನ್ನಪಂಗೆಯ್ವೆನಂತುಮಲ್ಲದೆ ಬಲ್ಮೆಗಂ ಬಸನಕ್ಕಂ ಸವಿಯಪ್ಪ ಕಿಱುವೇಂಟೆಯುಂ ಪೆರ್ವೇಂಟೆಯುಮಲ್ಲದುೞಿದ ಬೇಂಟೆಯಂ ಬೇಂಟೆಯೆನ್ನೆಂ-
ವಚನ:ಪದವಿಭಾಗ-ಅರ್ಥ:ಮತ್ತಂ ಪಂದಿವೇಂಟೆಯ (ಹಂದಿಯ ಬೇಟೆಯ ನಾಯಿಯು) ನಾಯಿ ಎಂತಪ್ಪುವು ಎಂದೊಡೆ ಅಸಿಯ ನಡುವುಂ ಅಗಲು ಉರಮುಂ ತಳ್ತು ಕಟ್ಟಿದ ಕಿವಿಯುಂ ಪುರ್ವುಂ (ತೆಳುವಾದ ಸೊಂಟ, ಅಗಲವಾದ ಎದೆ, ನೆಟ್ಟಗೆ ನಿಂತಿರುವ ಕಿವಿಗಳು ಬಾಗಿದ ಹುಬ್ಬು,) ತೋರಮಾಗಿ ನಿರ್ಮಾಂಸಮಪ್ಪ ಕಾಲ್ಗಳುಂ ನೆಲನಂ ಮುಟ್ಟದ ಉಗುರ್ಗಳುನು ಉಳ್ಳುದಾಗಿ ಜಾತ್ಯಶ್ವದಂತೆ ಬೇಗಮಾಗಿ (ದಪ್ಪವಾಗಿ ಮಾಂಸವಿಲ್ಲದ ಕಾಲುಗಳು, ನೆಲವನ್ನು ಮುಟ್ಟದ ಉಗುರು ಇವುಗಳಿಂದ ಕೂಡಿ ಜಾತಿಯ ಕುದುರೆಯಂತೆ ವೇಗವಾಗಿ ನಡೆದು) ಕೋಳಿ ಕಾಳಿಕಾಱನಂತೆ ಬಱಿಯ ಅಱಿವಿಡಿದು (ಮಾರ್ಗವನ್ನು ಹಿಡಿದು) ತುಂಬಿನ ನೀರನು ಉರ್ಚಿದಾಗಳಡೆ ಪರಿದು (ತೂಬಿನ ನೀರು ಹರಿದ ಹಾಗೆ) ಮನ್ನೆಯರಂತೆ ಕಾದಿಯ ಅಲಸದೆ (ಕಾದಲು ಆಲಸ್ಯ ಪಡದೆ) ಸೂಳೆಯಂತೆ ಕೋಳಂ ಪಟ್ಟಟ್ಟಿಸದೆ (ಸೂಳೆಯಂತೆ ಸುಲಿಗೆಮಾಡಿ ಓಡಿಸದೆ) ತಕ್ಕನಂತೆ ನಂಬಿಸಿಯ ಮೊತ್ತರದಂತೆ ಒತ್ತಿಯುಂ ಉರಿಯ ಅಳುರ್ವಂತೆ ಅಳುರ್ದುಕೊಳ್ವುದು (ಒತ್ತಿ ಉರಿಯು ಹರಡುವಂತೆ ಹರಡಿಕೊಳ್ಳುವುದು. ) ಇದು ಪಂದಿವೇಂಟೆಯ ನಾಯ್ (ಇದು ಹಂದಿಬೇಟೆಯಲ್ಲಿ ಉಪಯೋಗಿಸುವ ನಾಯಿಯ ಲಕ್ಷಣ.) ಮತ್ತಂ ಕಿಱುವೇಂಟೆಯ ನಾಯಂ ಕೊಂಡುಂ ಜಾಱಿಯುಂ ನೆಲನುಂ ಪೊೞ್ತುಂ ಪೊಲನುಮನಱಿದು ಬೞಯೊಳ್ ಪೊಸತುಂ ಪೞದುಮನಱಿದು ಪರಿಯಿಸಲ್ ನೀನೆ ಬಲ್ಲೆಯ್ ಎದನು ನಾನೆ ಬಲ್ಲೆನೆಂದು(ದಾರಿಯಲ್ಲಿಯೇ ಹೊಸದು ಹಳೆಯದೆಂಬುದನ್ನು ತಿಳಿದು ಹರಿಯಿಸಲು ನೀನೇ ಶಕ್ತನೆಂಬುದನ್ನು ನಾನು ಬಲ್ಲೆ, ಎಂದು) ಬಿನ್ನಪಂಗೆಯ್ವೆನು ಅಂತುಮಲ್ಲದೆ ಬಲ್ಮೆಗಂ ಬಸನಕ್ಕಂ ಸವಿಯಪ್ಪ ಕಿಱುವೇಂಟೆಯುಂ (ಶಕ್ತಿಪ್ರದರ್ಶನಕ್ಕೂ ಸವಿಯಾಗಿರುವ ಕಿರುಬೇಟೆಯ್ನೂ) ಪೆರ್ವೇಂಟೆಯುಂ ಅಲ್ಲದೆ ಉೞಿದ ಬೇಂಟೆಯಂ ಬೇಂಟೆಯೆನ್ನೆಂ - ಬೇಂಟೆ ಎನ್ನೆಂ (ಹೆಬ್ಬೇಟೆಯನ್ನೂ ಬಿಟ್ಟು ಉಳಿದ ಬೇಟೆಯನ್ನು ಬೇಟೆಯೆಂದೇ ನಾನು ಕರೆಯುವುದಿಲ್ಲ)-
ವಚನ:ಅರ್ಥ:ಮತ್ತು ಹಂದಿಯ ಬೇಟೆಯ ನಾಯಿಯು ಎಂತಹುದು ಎಂದರೆ ತೆಳುವಾದ ಸೊಂಟ, ಅಗಲವಾದ ಎದೆ, ನೆಟ್ಟಗೆ ನಿಂತಿರುವ ಕಿವಿಗಳು ಬಾಗಿದ ಹುಬ್ಬು, ದಪ್ಪವಾಗಿ ಮಾಂಸವಿಲ್ಲದ ಕಾಲುಗಳು, ನೆಲವನ್ನು ಮುಟ್ಟದ ಉಗುರು ಇವುಗಳಿಂದ ಕೂಡಿ ಜಾತಿಯ ಕುದುರೆಯಂತೆ ವೇಗವಾಗಿ ನಡೆದು ಶಾಕ್ತೇಯಮತದ ವಂಚಕನಂತೆ ತನ್ನ ಮಾರ್ಗವನ್ನು ಹಿಡಿದು, ತೂಬಿನ ನೀರಿನ ಹಾಗೆ ಸಡಿಲ ಮಾಡಿದ ತಕ್ಷಣವೇ ಅಡ್ಡವಾಗಿ ಹರಿದು, ಮಾನ್ಯರ ಸೇವಕನಂತೆ ಕಾದಲು ಆಲಸ್ಯ ಪಡದೆ ಸೂಳೆಯಂತೆ ಸುಲಿಗೆಮಾಡಿ ಓಡಿಸದೆ, ಯೋಗ್ಯನಂತೆ ನಂಬಿಸಿ ಒತ್ತರದಂತೆ (?) ಒತ್ತಿ ಉರಿಯು ಹರಡುವಂತೆ ಹರಡಿಕೊಳ್ಳುವುದು. ಇದು ಹಂದಿಬೇಟೆಯಲ್ಲಿ ಉಪಯೋಗಿಸುವ ನಾಯಿಯ ಲಕ್ಷಣ. ಇನ್ನು ಕಿರುಬೇಟೆಯ ನಾಯನ್ನು ತೆಗೆದುಕೊಂಡು ಸಡಿಲ ಮಾಡಿದ ನೆಲದ ಸ್ವರೂಪವನ್ನು ಹೊತ್ತನ್ನೂ ಹೊಲವನ್ನೂ ತಿಳಿದು ದಾರಿಯಲ್ಲಿಯೇ ಹೊಸದು ಹಳೆಯದೆಂಬುದನ್ನು ತಿಳಿದು ಹರಿಯಿಸಲು ನೀನೇ ಶಕ್ತನೆಂಬುದನ್ನು ನಾನು ಬಲ್ಲೆ. ಅಲ್ಲದೆ ಶಕ್ತಿಪ್ರದರ್ಶನಕ್ಕೂ ಸವಿಯಾಗಿರುವ ಕಿರುಬೇಟೆಯ್ನೂ ಹೆಬ್ಬೇಟೆಯನ್ನೂ ಬಿಟ್ಟು ಉಳಿದ ಬೇಟೆಯನ್ನು ಬೇಟೆಯೆಂದೇ ನಾನು ಕರೆಯುವುದಿಲ್ಲ.
ಪಿರಿಯಕ್ಕರ|| ಪಸಿವು ದೊರೆಕೊಳ್ಗುಮುಣಿಸುಗಳಿನಿಕೆಯ್ಗುಮಾವಂದದೊಳ್ ಕನಲ್ದಾದ ಮೆಯ್ಯ
ನಸಿಯನಾಗಿಪುದುಳಿದುವಪ್ಪುವು ಬಗೆಗೊಳಲಪ್ಪುದು ಮೃಗದ ಮೆಯ್ಯೊಳ್|
ನಿಸದಮೆಸೆವುದಂ ಬಲ್ಲಾಳ ಬಿಲ್ಬಲ್ಮೆ ತನ್ನೊಳಮಿಸುತೆ ಲೇಸಪ್ಪುದು
ಬಸನಮೆಂದಱಿಯದೇಳಿಸುವರ್ ಬೇಂಟೆಯಂ ಬೇಂಟೆಯೆ ಬಿನದಂಗಳರಸಲ್ತೇ|| ೪೭||
ಪದ್ಯ-೪೭:ಪದವಿಭಾಗ-ಅರ್ಥ:ಪಸಿವು ದೊರೆಕೊಳ್ಗುಂ ಉಣಿಸುಗಳ್ ನಿಕೆಯ್ಗುಂ (ಬೇಟೆಯು ಹಸಿವುಂಟು ಮಾಡುತ್ತದೆ. ಆಹಾರ ರುಚಿಯಾಗುತ್ತದೆ) ಆವಂದದೊಳ್ ಕನಲ್ದಾದ ಮೆಯ್ಯನು ಅಸಿಯನಾಗಿಪುದು (ಕೊಬ್ಬಿದ ಬೊಜ್ಜು ಕರಗಿ ಮೈ ತೆಳ್ಲಗಾಗುತ್ತದೆ ) ಉಳಿದುವಪ್ಪುವು ಬಗೆಗೊಳು ಅಪ್ಪುದು ಮೃಗದ ಮೆಯ್ಯೊಳ್ ನಿಸದಂ ಎಸೆವುದಂ (ಮೃಗಗಳ ಶರೀರ ಮತ್ತು ಮನಸ್ಸಿನ ಅರಿವುಂಟಾಗುತ್ತದೆ.) ಬಲ್ಲಾಳ ಬಿಲ್ಬಲ್ಮೆ ತನ್ನೊಳು ಅಮಿಸುತೆ ಲೇಸಪ್ಪುದು (ಬಿಲ್ಲಿನ ಪ್ರೌಢಿಮೆ ತನ್ನಲ್ಲಿ ಪ್ರಕಾಶಿಸಿ ಒಳಿತಾಗುತ್ತದೆ) ಬಸನಮೆಂದು ಅಱಿಯದೆ ಏಳಿಸುವರ್ ಬೇಂಟೆಯಂ (ಳಿಯದವರು ಬೇಟೆಯನ್ನು ವ್ಯಸನವೆಂದು ಕರೆಯುತ್ತಾರೆ.) ಬೇಂಟೆಯೆ ಬಿನದಂಗಳ ಅರಸಲ್ತೇ!
ಪದ್ಯ-೪೭:ಅರ್ಥ: ಬೇಟೆಯು ಹಸಿವುಂಟು ಮಾಡುತ್ತದೆ. ಆಹಾರ ರುಚಿಯಾಗುತ್ತದೆ. ಯಾವ ರೀತಿಯಲ್ಲಾದರೂ ಕೆರಳಿ ಬೊಜ್ಜು ಕರಗಿ ಮೈ ತೆಳ್ಲಗಾಗುತ್ತದೆ. ಉಳಿದುವೂ ಆಗುತ್ತದೆ. ಮೃಗಗಳ ಶರೀರ ಮತ್ತು ಮನಸ್ಸಿನ ಅರಿವುಂಟಾಗುತ್ತದೆ. ಪರಾಕ್ರಮಶಾಲಿಯ ಬಿಲ್ಲಿನ ಪ್ರೌಢಿಮೆ ತನ್ನಲ್ಲಿ ಪ್ರಕಾಶಿಸಿ ಒಳಿತಾಗುತ್ತದೆ. ಬಾಣಪ್ರಯೋಗ ಮಾಡುವುದರಿಂದ ತನಗೂ ಒಳ್ಳೆಯದಾಗುತ್ತದೆ. ತಿಳಿಯದವರು ಬೇಟೆಯನ್ನು ವ್ಯಸನವೆಂದು ಕರೆಯುತ್ತಾರೆ. ಬೇಟೆಯು ವಿನೋದಗಳ ರಾಜನಲ್ಲವೆ!

ಬೇಟೆಗೆ ಪ್ರವೇಶ - ಬೇಟೆ[ಸಂಪಾದಿಸಿ]

ವ|| ಎಂದು ಬಿನ್ನಪಂಗೆಯ್ದ ಬೇಂಟೆಯಾತಂಗೆ ಮೃಗ ವ್ಯಾಯಾಮ ಕಾರ್ತಿಕೇಯಂ ಮೆಚ್ಚಿ ಮೆಚ್ಚುಗೊಟ್ಟು ತೊವಲನಿಕ್ಕೆಂದು ಮುಂದೆ ಪೇೞ್ದಟ್ಟಿ ನಾರಾಯಣನುಂ ತಾನುಮಂತಪುರ ಪರಿವಾರಂಬೆರಸು ಬೇಂಟೆಗೆ ಪೊಱಮಟ್ಟು ಪರಿಯ ತಾಣಕ್ಕೆ ವಂದು ಬೇಲಿಯ ಕೆಲದೊಳಲ್ಲದೆ ಪೆಱಗಣುಲಿಪಿಂಗಮುಳ್ಳೊಳಕ್ಕಂ ಗೆಂಟಾಗಿ ಬೀಡಂ ಬಿಡಿಸಿ ಬೇಂಟೆಕಾಱನ ಸಮೆದ ಮಕರತೋರಣಮುಮಂ ಗುಣಣೆಯ ಬಾಣಸಿನ ಮಜ್ಜನದ ರಾಣಿವಾಸದ ಮನೆಗಳುಮಂ ನನೆಯ ಪಂದರುಮಂ ತಳಿರ ಕಾವಣಂಗಳುಮಂ ಮಾಡದ ನೆಲೆಯ ಚೌಪಳಿಗೆಗಳುಮನವಱ ಮೇಲಿರ್ದೆಲೆಯಡಕೆಯುಮಂ ತೆಂಗಿನೆಳನೀರುಮಂ ಕೊಳಲಿಂಬಪ್ಪಂತಿರೆ ಮಾಡಿ ನಟ್ಟ ಕೌಂಗಿನ ತೆಂಗಿನ ಮರಂಗಳುಮಂ ಪಣ್ವೆರಸು ನಟ್ಟ ಮೈಂದವಾೞೆಗಳುಮಂ ತೊವಲ್ವೆರಸು ನಟ್ಟಾಲಂಗಳುಮನಮರೆ ಮಾಡಿದ ಬಟ್ಟುಳಿಯ ಕಕ್ಕುಂಬ ತೊಡಂಬೆಯ ಮೂಡಿಗೆಯ ಕದಳಿಕೆಯ ಕಂಡಪಟಂಗಳುಮಂ ಪಲವುಂ ತೆಱದ ಪಲವುಂ ಪೊರೆಯಾಗಿ ಕಟ್ಟಿದ ಬಲೆಗಳುಮಂ ಪಡಿಗಳನಮರ್ಚಿ ಬಿಲ್ಲುಂ ಕುದುರೆಯುಂ ಕಾಲಾಳುಂ ನಾಯ್ಗಳುಮಂ ತಿಣ್ಣಿಮಿರಿಸಿ ಕೆಯ್ಯಂ ನೇಣುಮನಳವಿಯೊಳ್ ಕೂಡಿ ನಡೆಯಗ್ವೇೞ್ದು ಬೇಂಟೆವಸದನಂಗೊಂಡು ಕಂಡಿಯ ಬಾಗಿಲೊಳುದಾತ್ತನಾರಾಯಣನುಂ ನಾರಾಯಣನುಮಿರ್ದು ಪುಗಿಲ ಪುಲ್ಲೆಯ ಮೊದಲುರಮುಮಂ ಪೆಱಗಣ ಪುಲ್ಲೆಯ ನಡುವುಮನಯ್ದರೊಳ್ ಮೂಱುವಂ ಮೂರೊಳೆರಡು ಮನೆರಡರೊಳೊಂದುಮನೆಚ್ಚು ಬಿಲ್ಲ ಬಲ್ಮೆಯಂ ಮೆದು-
ವಚನ:ಪದವಿಭಾಗ-ಅರ್ಥ:ಎಂದು ಬಿನ್ನಪಂಗೆಯ್ದ ಬೇಂಟೆಯಾತಂಗೆ ಮೃಗ ವ್ಯಾಯಾಮ ಕಾರ್ತಿಕೇಯಂ (ಅರ್ಜುನನು) ಮೆಚ್ಚಿ ಮೆಚ್ಚುಗೊಟ್ಟು ತೊವಲನಿಕ್ಕೆಂದು ಮುಂದೆ ಪೇೞ್ದ ಇಟ್ಟಿ (ಬಹುಮಾನವನ್ನಿತ್ತು ಚಿಗುರನ್ನು ಹಾಕು ಎಂದು ಹೇಳಿ) ನಾರಾಯಣನುಂ ತಾನುಮಂ ಅಂತಪುರ ಪರಿವಾರಂಬೆರಸು ಬೇಂಟೆಗೆ ಪೊಱಮಟ್ಟು (ಹೊರಟು) ಪರಿಯ ತಾಣಕ್ಕೆ ವಂದು (ಬೇಟೆಗೆ ಹೊರಟು ಪ್ರವೇಶಸ್ಥಳಕ್ಕೆ ಬಂದು) ಬೇಲಿಯ ಕೆಲದೊಳಲ್ಲದೆ ಪೆಱಗಣು (ಹಿಂದಿನ) ಲಿಪಿಂಗಮಂ ಉಳ್ಳೊಳಕ್ಕಂ ಗೆಂಟಾಗಿ (ಸದ್ದಿಗೂ ಗಗದ್ದಲಕ್ಕೂ ದೂರವಾಗಿ) ಬೀಡಂ ಬಿಡಿಸಿ ಬೇಂಟೆಕಾಱನ ಸಮೆದ (ಮಾಡಿದ್ದ) ಮಕರತೋರಣಮುಮಂ ಗುಣಣೆಯ ಬಾಣಸಿನ ಮಜ್ಜನದ ರಾಣಿವಾಸದ ಮನೆಗಳುಮಂ ನನೆಯ ಪಂದರುಮಂ ತಳಿರ ಕಾವಣಂಗಳುಮಂ ಮಾಡದ ನೆಲೆಯ ಚೌಪಳಿಗೆಗಳುಂ ಅನವಱ ಮೇಲಿರ್ದ ಎಲೆಯಡಕೆಯುಮಂ (ನೃತ್ಯಶಾಲೆ, ಪಾಕಶಾಲೆ, ಸ್ನಾನಗೃಹ, ಅಂತಪುರ, ಹೂವಿನ ಚಪ್ಪರ, ಚಿಗುರಿನ ಹಂದರ, ಉಪ್ಪರಿಗೆಯ ಮನೆಯ ತೊಟ್ಟಿಗಳು, ಅವುಗಳ ಮೇಲಿದ್ದ, ಎಲೆಯಡಿಕೆ) ತೆಂಗಿನ ಎಳನೀರುಮಂ ಕೊಳಲು ಇಂಬಪ್ಪಂತಿರೆ (ತೆಗೆದುಕೊಳ್ಳಲು ಅನುಕೂಲವಾಗುವ ಹಾಗೆ)ಮಾಡಿ ನಟ್ಟ ಕೌಂಗಿನ ತೆಂಗಿನ ಮರಂಗಳುಮಂ ಪಣ್ವೆರಸು (ಹಣ್ಣಿನಿಂದ ಕೂಡಿ) ನಟ್ಟ ಮೈಂದವಾೞೆಗಳುಮಂ ತೊವಲ್ವೆರಸು (ಚಿಗುರಿನಿಂದ ಕೂಡಿದ) ನಟ್ಟ ಆಲಂಗಳುಮನಮರೆ ಮಾಡಿದ ಬಟ್ಟುಳಿಯ ಕಕ್ಕುಂಬ ತೊಡಂಬೆಯ ಮೂಡಿಗೆಯ ಕದಳಿಕೆಯ ಕಂಡಪಟಂಗಳುಮಂ (ಗೊಂಚಲುಗಳಿಂದ ಮಾಡಿದ ಮೂಡಿಗೆ-ಬತ್ತಳಿಕೆ ಬಾವುಟ ತೆರೆಗಳು) ಪಲವುಂ ತೆಱದ ಪಲವುಂ ಪೊರೆಯಾಗಿ ಕಟ್ಟಿದ ಬಲೆಗಳುಮಂ ಪಡಿಗಳನಮರ್ಚಿ ಬಿಲ್ಲುಂ ಕುದುರೆಯುಂ ಕಾಲಾಳುಂ ನಾಯ್ಗಳುಮಂ ತಿಣ್ಣಿಮಿರಿಸಿ ಕೆಯ್ಯಂ ನೇಣುಮನಳವಿಯೊಳ್ ಕೂಡಿ ನಡೆಯಲ್ವೇೞ್ದು ಬೇಂಟೆವಸದನಂಗೊಂಡು ಕಂಡಿಯ ಬಾಗಿಲೊಳು ಉದಾತ್ತನಾರಾಯಣನುಂ ನಾರಾಯಣನುಂ (ಅರ್ಜುನ ಕೃಷ್ಣರು) ಇರ್ದು ಪುಗಿಲ ಪುಲ್ಲೆಯ ಮೊದಲುರಮುಮಂ (ಮೊದಲ ಉರಮುಮಂ- ಜಿಂಕೆಯ ಎದೆಯ ಮೊದಲ ಭಾಗವನ್ನು) ಪೆಱಗಣ ಪುಲ್ಲೆಯ ನಡುವುಮನಯ್ದರೊಳ್ (ಹೊರಗಣ ಹುಲ್ಲೆ ಮಧ್ಯಭಾಗವನ್ನೂ) ಮೂಱುವಂ ಮೂರೊಳೆರಡುಮನು ಎರಡರೊಳು ಒಂದುಮನು ಎಚ್ಚು (ಹೊಡೆದು) ಬಿಲ್ಲ ಬಲ್ಮೆಯಂ ಮೆರೆದು-
ವಚನ:ಅರ್ಥ:ಎಂದು ಅರಿಕೆಮಾಡಿದ ಬೇಟೆಯವನಿಗೆ ಪ್ರಾಣಿಗಳಿಗೆ ವ್ಯಾಯಾಮ ಮಾಡಿಸುವುದರಲ್ಲಿ ಷಣ್ಮುಖನಂತಿರುವ ಅರ್ಜುನನು (ಅರಿಕೇಸರಿಯು) ಬಹುಮಾನವನ್ನಿತ್ತು ಚಿಗುರನ್ನು ಹಾಕು ಎಂದು ಮೊದಲು ಹೇಳಿಕಳುಹಿಸಿದನು. ಕೃಷ್ಣನೂ ತಾನೂ ರಾಣಿವಾಸದ ಪರಿವಾರದೊಡನೆ ಬೇಟೆಗೆ ಹೊರಟು ಪ್ರವೇಶಸ್ಥಳಕ್ಕೆ ಬಂದರು. ಬೇಲಿಯ ಪಕ್ಕದಲ್ಲಿಯೇ ಅಲ್ಲದೆ ಹಿಂದುಗಡೆಯ ಸದ್ದಿಗೂ ಗಗದ್ದಲಕ್ಕೂ ದೂರವಾಗಿ ಪಾಳೆಯವನ್ನು ಬಿಡಿಸಿದರು. ಬೇಟೆಗಾರನು ಮಾಡಿದ್ದ ಮಕರತೋರಣ, ನೃತ್ಯಶಾಲೆ, ಪಾಕಶಾಲೆ, ಸ್ನಾನಗೃಹ, ಅಂತಪುರ, ಹೂವಿನ ಚಪ್ಪರ, ಚಿಗುರಿನ ಹಂದರ, ಉಪ್ಪರಿಗೆಯ ಮನೆಯ ತೊಟ್ಟಿಗಳು, ಅವುಗಳ ಮೇಲಿದ್ದ, ಎಲೆಯಡಿಕೆ, ತೆಂಗಿನ ಎಳನೀರುಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವ ಹಾಗೆ ಮಾಡಿ ನೆಟ್ಟಿರುವ, ಅಡಕೆ ಮತ್ತು ತೆಂಗಿನ ಮರಗಳು ಹಣ್ಣಿನಿಂದ ಕೂಡಿ ನೆಟ್ಟಿರುವ ಮಹೇಂದ್ರ ಬಾಳೆ, ಚಿಗುರಿನಿಂದ ಕೂಡಿ ನೆಟ್ಟಿರುವ ಆಲದ ಮರ, ಗಾಢವಾಗಿ ಸೇರಿಕೊಂಡಿರುವ ಬಟ್ಟುಳಿಯ (?) ಕಕ್ಕುಂಬದ (?) ಗೊಂಚಲುಗಳಿಂದ ಮಾಡಿದ ಬತ್ತಳಿಕೆ ಬಾವುಟ ತೆರೆಗಳು ಹಲವು ರೀತಿಯ ಹಲವು ಹೊರೆಗಳಾಗಿ ಕಟ್ಟಿದ ಬಲೆಗಳು ಬಾಗಿಲುಗಳನ್ನು (ಭದ್ರಪಡಿಸಿ) ಸೇರಿಸಿ, ಬಿಲ್ಲ, ಕುದುರೆ ಕಾಲಾಳು ನಾಯಿ ಹೆಚ್ಚು ಸಂಖ್ಯೆಯ ಕೋಲು ಹಗ್ಗ ಮೊದಲಾದುವನ್ನೆಲ್ಲ ಸರಿಯಾದ ಪ್ರಮಾಣದಲ್ಲಿ ಸೇರಿಸಿ ನಡೆಯಹೇಳಿ ಬೇಟೆಯ ಉಡುಪನ್ನು (ಅಲಂಕಾರವನ್ನು) ತೊಟ್ಟು ಮೃಗವು ಹೊರಗೆ ಬರುವ ಸ್ಥಳದಲ್ಲಿ ಬಾಗಿಲಲ್ಲಿ ಅರ್ಜುನ ಕೃಷ್ಣರು ನಿಂತು ಬೇಟೆಗೆ ಪ್ರಾರಂಭಮಾಡಿದರು. ಪ್ರವೇಶ ಮಾಡುವ ಜಿಂಕೆಯ ಎದೆಯ ಮೊದಲ ಭಾಗವನ್ನು ಹೊರಗಣ ಹುಲ್ಲೆ ಮಧ್ಯಭಾಗವನ್ನೂ ಅಯ್ದರಲ್ಲಿ ಮೂರನ್ನೂ ಮೂರಲ್ಲಿ ಎರಡನ್ನೂ ಎರಡಲ್ಲಿ ಒಂದನ್ನೂ ಹೊಡೆದು ತಮ್ಮ ಬಿಲ್ವಿದ್ಯೆಯ ಪ್ರೌಢಿಮೆಯನ್ನು ಪ್ರಕಾಶಪಡಿಸಿದರು.
ಕಂ|| ಮುಂದಣ ಮಿಗಮಂ ಕೞಿಪದೆ
ಸಂದಿಸಿ ಬೞಿಗೊಳ್ವ ಮಿಗಮುಮಂ ಕೞಿಪದೆ ತಾ|
ನೊಂದಳವಿದಪ್ಪದೆಚ್ಚು ಬ
ಲಿಂದಮನಿಂ ಬಿಲ್ಲ ಬಲ್ಮೆಯಂ ಪೊಗೞಿಸಿದಂ|| ೪೮||
ಪದ್ಯ-೦೦:ಪದವಿಭಾಗ-ಅರ್ಥ:ಮುಂದಣ ಮಿಗಮಂ ಕೞಿಪದೆ ಸಂದಿಸಿ (ಜಿಂಕೆಯನ್ನು ಸಾಯಿಸದೆ ಅದನ್ನು ಅನುಸರಿಸಿ) ಬೞಿಗೊಳ್ವ ಮಿಗಮುಮಂ ಕೞಿಪದೆ (ಹಿಂದೆ ಬಂದ ಮೃಗವನ್ನೂ ಕೊಲ್ಲದೆ ) ತಾನು ಒಂದಳವಿ ತಪ್ಪದೆ ಎಚ್ಚು (ಒಂದು ಅಳತೆಯನ್ನೂ ತಪ್ಪದೆ ಅರ್ಜುನನು ಬಾಣಪ್ರಯೋಗಮಾಡಿ) ಬಲಿಂದಮನಿಂ ( ಬಲಿಯನ್ನು ದಮನ ಮಾಡಿದವ- ಕೃಷ್ಣನಿಂದ) ಬಿಲ್ಲ ಬಲ್ಮೆಯಂ ಪೊಗೞಿಸಿದಂ (ತನ್ನ ಬಿಲ್ವಿದ್ಯೆಯನ್ನು ಹೊಗಳುವ ಹಾಗೆ ಮಾಡಿದನು.)
ಪದ್ಯ-೦೦:ಅರ್ಥ: . ಮುಂದೆ ಬಂದ ಜಿಂಕೆಯನ್ನು ಸಾಯಿಸದೆ ಅದನ್ನು ಅನುಸರಿಸಿ ಹಿಂದೆ ಬಂದ ಮೃಗವನ್ನೂ ಕೊಲ್ಲದೆ ತಾನು ಒಂದು ಅಳತೆಯನ್ನೂ ತಪ್ಪದೆ ಅರ್ಜುನನು ಬಾಣಪ್ರಯೋಗಮಾಡಿ ಕೃಷ್ಣನು ತನ್ನ ಬಿಲ್ವಿದ್ಯೆಯನ್ನು ಹೊಗಳುವ ಹಾಗೆ ಮಾಡಿದನು.
ವ|| ಮತ್ತಂ ಬೆರ್ಚಿ ಪೊಳೆದು ಪರಿವ ಪೊಳೆವುಲ್ಲೆಗಳುಮಂ ತಲೆಯಂ ಕುತ್ತಿ ವಿಶಾಲಂಬರಿವ ಕರಡಿಗಳುಮನಡಂಗಿ ಪರಿವ ಪುಲಿಗಳುಮಂ ಸೋಂಕಿ ಪರಿವೆಯ್ಗಳುಮಂ ತಡಂಮೆಟ್ಟಿ ಪರಿವ ಕಡವಿನ ಕಾಡೆಮ್ಮೆಯ ಮರೆಯ ಪಿಂಡುಗಳು ಮನಳವಿದಪ್ಪದೊಂದೊಂದ ನಿಸುವಂತೆ ಪಲವನೆಚ್ಚು ನೆಲಂ ಬಿರಿಯೆ ಗಜಱಿ ಗರ್ಜಿಸಿ ಪಾಯ್ವ ಸಿಂಗಂಗಳುಮಂ ಕಂಡು-
ವಚನ:ಪದವಿಭಾಗ-ಅರ್ಥ:ಮತ್ತಂ ಬೆರ್ಚಿ ಪೊಳೆದು ಪರಿವ ಪೊಳೆವ ಉಲ್ಲೆಗಳುಮಂ (ಹೆದರಿ ಹೊಳೆಯುವ ಹರಿದ- ಓಡುವ ಜಿಂಕೆಗಳನ್ನೂ) ತಲೆಯಂ ಕುತ್ತಿ ವಿಶಾಲಂಬರಿವ ಕರಡಿಗಳುಮಂ ಅಡಂಗಿ ಪರಿವ ಪುಲಿಗಳುಮಂ ಸೋಂಕಿ ಪರಿವೆ ಎಯ್ಗಳುಮಂ (ಹುಲಿಗಳನ್ನೂ ತಾಗಿ ಓಡಿಹೋಗುವ ಮುಳ್ಳು ಹಂದಿಗಳನ್ನೂ) ತಡಂಮೆಟ್ಟಿ ಪರಿವ (ಓಡುವ) ಕಡವಿನ ಕಾಡೆಮ್ಮೆಯ ಮರೆಯ ಪಿಂಡುಗಳುಮನು (ಓಡುವ ಕಡವೆ ಮತ್ತು ಕಾಡೆಮ್ಮೆಯ ಮರಿಗಳ ಹಿಂಡುಗಳನ್ನು) ಅಳವಿದಪ್ಪದೆ ಒಂದೊಂದನು ಇಸುವಂತೆ (ಹೊಡೆಯುವ ಹಾಗೆ) ಪಲವನು ಎಚ್ಚು (ಹಲವನ್ನು ಹೊಡೆದು ಕೆಡವಿ,) ನೆಲಂ ಬಿರಿಯೆ ಗಜಱಿ ಗರ್ಜಿಸಿ ಪಾಯ್ವ ಸಿಂಗಂಗಳುಮಂ ಕಂಡು-
ವಚನ:ಅರ್ಥ:ಪುನ ಹೆದರಿ ಹೊಳೆಯುವ ಹರಿದ- ಓಡುವ ಜಿಂಕೆಗಳನ್ನೂ, ತಲೆತಗ್ಗಿಸಿಕೊಂಡು ದೂರವಾಗಿ ಹರಿಯುವ ಕರಡಿಗಳನ್ನೂ ಅಡಗಿಸಿ ಹರಿಯುವ ಹುಲಿಗಳನ್ನೂ ತಾಗಿ ಓಡಿಹೋಗುವ ಮುಳ್ಳು ಹಂದಿಗಳನ್ನೂ ಅಡ್ಡಗಟ್ಟಿ ಉದ್ದವಾಗಿ ಕಾಲಿಟ್ಟು ಓಡುವ ಕಡವೆ ಮತ್ತು ಕಾಡೆಮ್ಮೆಯ ಮರಿಗಳ ಹಿಂಡುಗಳನ್ನು ಅಳತೆದಪ್ಪದೆ ಒಂದೊಂದನ್ನೂ ಹೊಡೆಯುವ ಹಾಗೆ ಹಲವನ್ನು ಹೊಡೆದು ಕೆಡವಿದನು. ಭೂಮಿಯು ಬಿರಿದುಹೋಗುವ ಹಾಗೆ ಆರ್ಭಟದಿಂದ ಘರ್ಜನೆಮಾಡಿಕೊಂಡು ಮುನ್ನುಗ್ಗುತ್ತಿರುವ ಸಿಂಹಗಳನ್ನು ಕಂಡು
ಕಂ|| ಆಸುಕರಂ ಗಡ ತಮಗತಿ
ಭಾಸುರ ಮೃಗರಾಜ ನಾಮಮುಂ ಗಡಮೆಂದಾ|
ದೋಸಕ್ಕೆ ಮುಳಿದು ನೆಗೞ್ದರಿ
ಕೇಸರಿ ಕೇಸರಿಗಳನಿತುಮಂ ತಳ್ತಿಱಿದಂ|| ೪೯ ||
ಪದ್ಯ-೦೦:ಪದವಿಭಾಗ-ಅರ್ಥ:ಆಸುಕರಂ ಗಡ (ಅತಿವೇಗವಾದುವು) ತಮಗೆ ಅತಿಭಾಸುರ ಮೃಗರಾಜ ನಾಮಮುಂ ಗಡಂ (ಬಹು ಶೋಭಿತವಾದ ಮೃಗರಾಜನೆಂಬ ಹೆಸರು ಇವಕ್ಕೆ ಇದೆಯಲ್ಲವೆ) ಎಂದು ಆದೋಸಕ್ಕೆ (ಆ ದೋಷಕ್ಕೆ) ಮುಳಿದು ನೆಗೞ್ದ ಅರಿಕೇಸರಿ (ಅರ್ಜುನ) ಕೇಸರಿಗಳನು ಅತುಮಂ ತಳ್ತು ಇಱಿದಂ ((ಸಿಂಹ)ಗಳಷ್ಟನ್ನೂ ಎದುರಿಸಿ ಇರಿದನು- ಕೊಂದನು)
ಪದ್ಯ-೦೦:ಅರ್ಥ: ಇವು ಅತಿವೇಗವಾದುವು ಆದರೂ ಬಹು ಶೋಭಿತವಾದ ಮೃಗರಾಜನೆಂಬ ಹೆಸರು ಇವಕ್ಕೆ ಇದೆಯಲ್ಲವೆ? ಎಂದು ಆ ದೋಷಕ್ಕೆ ಕೋಪಿಸಿಕೊಂಡು ಪ್ರಸಿದ್ಧನಾದ ಅರಿಕೇಸರಿಯು ಕೇಸರಿ (ಸಿಂಹ)ಗಳಷ್ಟನ್ನೂ ಎದುರಿಸಿ ಕೊಂದನು.
ಕಂ||ಇಱಿದವಱ ನೆತ್ತರೊಳ್ ತ
ಳ್ಕಿಱಿದಂ ತನ್ನುರಮನುರು ಗಜಂಗಳನಾಟಂ|
ದಱಸಿ ಕೊಲುತಿರ್ಪವೆಂಬೀ
ಕಱುಪಿನೊಳರಿಗಂಬರಂ ಗಜಪ್ರಿಯರೊಳರೇ|| ೫೦
ಪದ್ಯ-೦೦:ಪದವಿಭಾಗ-ಅರ್ಥ:ಇಱಿದು ಅವಱ ನೆತ್ತರೊಳ್ ತಳ್ಕಿಱಿದಂ ತನ್ನಉರಮನು (ರಕ್ತದಿಂದ ತನ್ನ ಎದೆಯನ್ನು ಲೇಪನ ಮಾಡಿಕೊಂಡನು) ಉರು ಗಜಂಗಳನು ಆಟಂದು ಅಱಸಿ ಕೊಲುತಿರ್ಪವು (ಶ್ರೇಷ್ಠವಾದ ಆನೆಗಳನ್ನೂ ಮೇಲೆಬಿದ್ದು ಹಿಂಸಿಸಿ ಕೊಲ್ಲುತ್ತಿವೆ) ಎಂಬ ಈ ಕಱುಪಿನೊಳು (ಈ ಕೋಪದಲ್ಲಿ) ಅರಿಗಂಬರಂ ಗಜಪ್ರಿಯರು ಒಳರೇ (ಈ ಕೋಪದಲ್ಲಿ ಅರಿಕೇಸರಿಯ/ ಅರ್ಜುನನ ಮಟ್ಟಕ್ಕೆ ಬರುವ ಗಜಪ್ರಿಯರು ಇದ್ದಾರೆಯೇ?)
ಪದ್ಯ-೦೦:ಅರ್ಥ: ಅವುಗಳ ರಕ್ತದಿಂದ ತನ್ನ ಎದೆಯನ್ನು ಲೇಪನ ಮಾಡಿಕೊಂಡನು. ಈ ಸಿಂಹಗಳು ಶ್ರೇಷ್ಠವಾದ ಆನೆಗಳನ್ನೂ ಮೇಲೆಬಿದ್ದು ಹಿಂಸಿಸಿ ಕೊಲ್ಲುತ್ತಿವೆ ಎಂಬ ಈ ಕೋಪದಲ್ಲಿ ಅರಿಕೇಸರಿಯ/ ಅರ್ಜುನನ ಮಟ್ಟಕ್ಕೆ ಬರುವ ಗಜಪ್ರಿಯರು (ಆನೆಯನ್ನು ಪ್ರೀತಿಸುವವರು) ಇದ್ದಾರೆಯೇ?
ವ|| ಅಂತು ನರ ನಾರಾಯಣರಿರ್ವರುಮನವರತ ಶರಾಸಾರ ಶೂನ್ಯೀಕೃತ ಕಾನನಮಾಗೆಚ್ಚು ಮೃಗವ್ಯ ವ್ಯಾಪಾರದಿಂ ಬೞಲ್ದು ಮನದಂತೆ ಪರಿವ ಜಾತ್ಯಶ್ವಂಗಳನೇಱಿ ಬರೆವರೆ-
ವಚನ:ಪದವಿಭಾಗ-ಅರ್ಥ:ಅಂತು ನರ ನಾರಾಯಣರ್ ಇರ್ವರುಂ ಅನವರತ ಶರಾಸಾರ ಶೂನ್ಯೀಕೃತ ಕಾನನಮಾಗೆ ಎಚ್ಚು (ಎಡಬಿಡದ ಬಾಣಗಳ ಮಳೆಯಿಂದ ಕಾಡುಗಳನ್ನೆಲ್ಲ ಬರಿದು ಮಾಡಿ ಹೊಡೆದು) ಮೃಗವ್ಯ ವ್ಯಾಪಾರದಿಂ ಬೞಲ್ದು (ಬೇಟೆಯ ಕಾರ್ಯದಿಂದ ಬಳಲಿ) ಮನದಂತೆ ಪರಿವ ಜಾತ್ಯಶ್ವಂಗಳನೇಱಿ ಬರೆವರೆ (ಮನಸ್ಸಿನ ವೇಗದಿಂದ ಹರಿಯುವ ಜಾತಿ ಕುದುರೆಗಳನ್ನು ಹತ್ತಿಬಂದರು)-
ವಚನ:ಅರ್ಥ:ಹಾಗೆ ನರನಾರಾಯಣರಿಬ್ಬರೂ ಎಡಬಿಡದ ಬಾಣಗಳ ಮಳೆಯಿಂದ ಕಾಡುಗಳನ್ನೆಲ್ಲ ಬರಿದು ಮಾಡಿ ಹೊಡೆದು ಬೇಟೆಯ ಕಾರ್ಯದಿಂದ ಬಳಲಿ ತಮ್ಮ ಮನಸ್ಸಿನ ವೇಗದಿಂದ ಹರಿಯುವ ಜಾತಿ ಕುದುರೆಗಳನ್ನು ಹತ್ತಿಬಂದರು-
ಚಂ|| ಜವಮುೞಿದೊಂದು ಸೋಗೆನವಿಲೊಯ್ಯನೆ ಕರ್ಕಡೆಗಾಸಿಯಾಗಿ ಪಾ
ಱುವುದುಮಿದೆನ್ನ ನಲ್ಲಳ ರತಿಶ್ರಮವಿಶ್ಲಥ ಕೇಶಪಾಶದೊಳ್|
ಸವಸವನಾಗಿ ತೋಱಿದಪುದೆಂಬುದೆ ಕಾರಣದಿಂದದಂ ಗುಣಾ
ರ್ಣವನಿಡಲೊಲ್ದನಿಲ್ಲ ಹಯವಲ್ಗನಸಂಚಳ ರತ್ನಕುಂಡಳಂ|| ೫೧||
ಪದ್ಯ-೦೦:ಪದವಿಭಾಗ-ಅರ್ಥ:ಜವಮುೞಿದ ಒಂದು ಸೋಗೆನವಿಲು ಒಯ್ಯನೆ ಕರ್ಕಡೆ ಗಾಸಿಯಾಗಿ ( ಶಕ್ತಿಗುಂದಿ ಓಡಲಾಗದದ ಒಂದು ಗಂಡುನವಿಲು, ಕಕ್ಕಡೆಯೆಂಬ ಆಯುಧದಿಂದ ಪೆಟ್ಟುತಿಂದು) ಪಾಱುವುದುಂ ಇದು ಎನ್ನ ನಲ್ಲಳ ರತಿಶ್ರಮವಿಶ್ಲಥ ಕೇಶಪಾಶದೊಳ್ ಸವಸವನಾಗಿ ತೋಱಿದಪುದು (ರತಿಕ್ರೀಡೆಯ ಸಮಯದಲ್ಲಿ ಸುಭದ್ರೆಯ ಬಿಚ್ಚಿಹೋದ ತುರುಬಿನ ಗಂಟಿಗೆ ಸಮಾವಾಗಿ ತೋರುತ್ತಿದೆ) ಎಂಬುದೆ ಕಾರಣದಿಂದ ಅದಂ ಗುಣಾರ್ಣವನು ಇಡಲ್ ಒಲ್ದನಿಲ್ಲ (ಅದನ್ನು ಹೊಡೆಯಲು ಒಪ್ಪಲಿಲ್ಲ) ಹಯವಲ್ಗನಸಂಚಳ ರತ್ನಕುಂಡಳಂ (ಕುದುರೆಯ ಅಲುಗಾಟದಿಂದ ಅಲುಗಾಡುವ ರತ್ನದ ಕುಂಡಲವನ್ನುಳ್ಳ ಅರ್ಜುನನು)
ಪದ್ಯ-೦೦:ಅರ್ಥ: ಅಲ್ಲಿ ಕಕ್ಕಡೆ (ಮುಳ್ಳುಗೋಲು)ಯೆಂಬ ಆಯುಧದಿಂದ ಪೆಟ್ಟುತಿಂದು ನಿಧಾನವಾಗಿ ಹಾರುತ್ತಿತ್ತು. ಅದನ್ನು ನೋಡಿ ಅರ್ಜುನನು ಇದು ನನ್ನ ಪ್ರಿಯಳಾದ ಪ್ರಿಯಳಾದ ಸುಭದ್ರೆಯೊಡನೆ ರತಿಕ್ರೀಡೆಯ ಸಮಯದಲ್ಲಿ ಬಿಚ್ಚಿಹೋದ ತುರುಬಿನ ಗಂಟಿಗೆ ಸಮಾವಾಗಿ ತೋರುತ್ತಿದೆ ಎಂಬ ಕಾರಣದಿಂದ ಕುದುರೆಯ ಅಲುಗಾಟದಿಂದ ಅಲುಗಾಡುವ ರತ್ನದ ಕುಂಡಲವನ್ನುಳ್ಳ ಅರ್ಜುನನು ಅದನ್ನು ಹೊಡೆಯಲು ಒಪ್ಪಲಿಲ್ಲ
ವ|| ಅಂತು ಬೇಂಟೆಯಾಡಿ ಬೞಲ್ದು ಬೇಸಗೆಯ ನಡುವಗಲೊಳ್ ವನಕ್ರೀಡೆಗಂ ಜಲಕ್ರೀಡೆಗಮಾಸಕ್ತರಾಗಿ ಯಮುನಾನದೀತಟ ನಿಕಟವರ್ತಿಗಳಾದರಲ್ಲಿ
ವಚನ:ಪದವಿಭಾಗ-ಅರ್ಥ:ಅಂತು ಬೇಂಟೆಯಾಡಿ ಬೞಲ್ದು (ಬಳಲಿ) ಬೇಸಗೆಯ ನಡುವಗಲೊಳ್ (ನಡುಹಗಲಿನಲ್ಲಿ) ವನಕ್ರೀಡೆಗಂ ಜಲಕ್ರೀಡೆಗಂ ಆಸಕ್ತರಾಗಿ ಯಮುನಾನದೀತಟ ನಿಕಟವರ್ತಿಗಳಾದರು ಅಲ್ಲಿ (ಯಮುನಾನದೀ ದಡಕ್ಕೆ ಬಂದರು. ಅಲ್ಲಿ)
ವಚನ:ಅರ್ಥ:ಹಾಗೆ ಬೇಟೆಯಾಡಿ ಬಳಲಿ ಆ ಬೇಸಗೆಯ ನಡುಹಗಲಿನಲ್ಲಿ ವನಕ್ರೀಡೆಗೂ ಜಲಕ್ರೀಡೆಗೂ ಆಸೆಪಟ್ಟವರಾಗಿ ಯಮುನಾನದೀದಡಕ್ಕೆ ಬಂದರು. ಅಲ್ಲಿ

ಯಮುನಾನದಿಯ ವರ್ಣನೆ[ಸಂಪಾದಿಸಿ]

ಚಂ|| ಸರಳ ತಮಾಳ ತಾಳ ಹರಿಚಂದನ ನಂದನ ಭೂಜರಾಜಿಯಿಂ
ಸುರಿವಲರೋಳಿ ತದ್ವನಲತಾಂಗಿಯ ಸೂಸುವ ಸೇಸೆಯಾಯ್ತು ಭೃಂ|
ಗರವಮದೊಂದು ಮಂಗಳರವಕ್ಕೆಣೆಯಾಯ್ತು ಮನೋನುರಾಗದಿಂ
ಕರೆವವೊಲಾಯ್ತು ಮತ್ತ ಕಳಹಂಸರವಂ ಪಡೆಮೆಚ್ಚೆಗಂಡನಂ|| ೫೨||
ಪದ್ಯ-೫೨:ಪದವಿಭಾಗ-ಅರ್ಥ:ಸರಳ (ತೇಗ) ತಮಾಳ (ಹೊಂಗೆ) ತಾಳ ಹರಿಚಂದನ ನಂದನ ಭೂಜರಾಜಿಯಿಂ ಸುರಿವ ಅಲರ ಓಳಿ (ಸುರಿಯುವ ಪುಷ್ಪರಾಶಿಯು) ತದ್ ವನಲತಾಂಗಿಯ (ಆ ವನಲಕ್ಷ್ಮಿಯು) ಸೂಸುವ ಸೇಸೆಯಾಯ್ತು (ಅಕ್ಷತೆ) ಭೃಂಗರವಂ ಅದೊಂದು ಮಂಗಳ ರವಕ್ಕೆ ಎಣೆಯಾಯ್ತು (ಮಂಗಳವಾದ್ಯಕ್ಕೆ) ಮನ ಅನುರಾಗದಿಂ ಕರೆವವೊಲಾಯ್ತು ಮತ್ತ ಕಳಹಂಸರವಂ (ಕಳಹಂಸಧ್ವನಿಯು) ಪಡೆಮೆಚ್ಚೆಗಂಡನಂ (ಅರ್ಜುನನನ್ನು).
ಪದ್ಯ-೫೨:ಅರ್ಥ: ನದಿಯು ಅರ್ಜುನನ್ನು ಸ್ವಾಗತಿಸಿದ ಬಗೆ: ತೇಗ, ಹೊಂಗೆ, ತಾಳೆ, ಶ್ರೀಗಂಧ ಮತ್ತು ನಂದನವೃಕ್ಷಗಳ ಸಮೂಹಗಳಿಂದ, ಸುರಿಯುವ ಪುಷ್ಪರಾಶಿಯು ಆ ವನಲಕ್ಷ್ಮಿಯು ಚೆಲ್ಲುತ್ತಿರುವ ಅಕ್ಷತೆಯಾಯಿತು. ದುಂಬಿಗಳ ಧ್ವನಿಯು ಮಂಗಳವಾದ್ಯಕ್ಕೆ ಸಮಾನವಾಯಿತು. ಮದಿಸಿದ ಕಳಹಂಸಧ್ವನಿಯು ಪಡೆಮೆಚ್ಚೆ ಗಂಡನಾದ ಅರ್ಜುನನನ್ನು ಪ್ರೀತಿಯಿಂದ ಕರೆಯುವ ಹಾಗಾಯಿತು.
ಕಂ|| ಯಮುನಾನದೀ ತರಂಗಮ
ನಮುಂಕಿ ವನಲತೆಯ ಮನೆಗಳಂ ಸೋಂಕಿ ವನ|
ಭ್ರಮಣ ಪರಿಶ್ರಮಮಂ ಮು
ನ್ನಮೆ ಕಳೆದುದು ಬಂದದೊಂದು ಮಂದಶ್ವಸನಂ|| ೫೩ ||
ಪದ್ಯ-೫೩:ಪದವಿಭಾಗ-ಅರ್ಥ:ಯಮುನಾನದೀ ತರಂಗಮಂ ಅಮುಂಕಿ (ಅದುಮಿ) ವನಲತೆಯ ಮನೆಗಳಂ ಸೋಂಕಿ (ಮುಟ್ಟಿ), ವನಭ್ರಮಣ ಪರಿಶ್ರಮಮಂ (ಕಾಡಿನಲ್ಲಿ ಅಲೆದ ಆಯಾಸವನ್ನು) ಮುನ್ನಮೆ ಕಳೆದುದು ಬಂದ ಅದೊಂದು ಮಂದಶ್ವಸನಂ (ಮಂದಮಾರುತವು)|
ಪದ್ಯ-೫೩:ಅರ್ಥ: ಯಮುನಾ ನದಿಯ ಅಲೆಗಳನ್ನು ಅದುಮಿ, ಕಾಡಿನ ಬಳ್ಳಿ ಮನೆಗಳನ್ನು ಮುಟ್ಟಿ, ಬಂದ ಒಂದು ಮಂದಮಾರುತವು (ಅವರು) ಕಾಡಿನಲ್ಲಿ ಅಲೆದ ಆಯಾಸವನ್ನು ಆರಂಭದಲ್ಲೇ ಪರಿಹರಿಸಿತು.
ವ|| ಅಂತು ಕಾಳಿಂದೀಜಲ ಶಿಶಿರಶೀಕರವಾರಿ ಚಾರಿಯುಂ ಮೃಗಯಾ ಪರಿಭ್ರಮ ಶ್ರಮೋತ್ಥಿತ ಸ್ವೇದಜಲ ಲವಹಾರಿಯುಮಾಗಿ ಬಂದ ಮಂದಾನಿಲಕ್ಕೆ ಮೆಯ್ಯನಾಱಿಸುತ್ತುಮಾ ಪುಣ್ಯನದಿಯನೆಯ್ದೆವಂದು ತನ್ನ ಬಾಳ ನೀರಂತೆ ಕಱಂಗಿ ಕರ್ಗಿದ ನೀರಂ ನೋಡಿ ವಿಕ್ರಮಾರ್ಜುನಂ ಕಾಳಾಹಿಮಥನನ ಮೊಗಮಂ ನೋಡಿ-
ವಚನ:ಪದವಿಭಾಗ-ಅರ್ಥ:ಅಂತು ಕಾಳಿಂದೀಜಲ ಶಿಶಿರಶೀಕರವಾರಿ ಚಾರಿಯುಂ (ತಂಪಾದ ನೀರಿನ ತುಂತುರುಗಳ ಮೇಲೆ ಸಂಚಾರ ಮಾಡಿದುದೂ) ಮೃಗಯಾ ಪರಿಭ್ರಮ ಶ್ರಮೋತ್ಥಿತ- ಶ್ರಮ ಉತ್ಥಿತ(ಹುಟ್ಟಿದ , ಉಂಟಾದ) (ಬೇಟೆಯ ಅಲೆದಾಟದ ಆಯಾಸದಿಂದುಂಟಾದ) ಸ್ವೇದಜಲ ಲವಹಾರಿಯುಮಾಗಿ (ಬೆವರಿನ ಕಣಗಳನ್ನು ಹೋಗಲಾಡಿಸಿದುದೂ ಆಗಿ) ಬಂದ ಮಂದಾನಿಲಕ್ಕೆ ಮೆಯ್ಯನು ಆಱಿಸುತ್ತುಮ್ ಆ ಪುಣ್ಯನದಿಯನು ಎಯ್ದೆವಂದು (ಸಮೀಪಕ್ಕೆ ಬಂದು) ತನ್ನ ಬಾಳ (ಕತ್ತಿಯ) ನೀರಂತೆ ಕಱಂಗಿ ಕರ್ಗಿದ ನೀರಂ ನೋಡಿ ವಿಕ್ರಮಾರ್ಜುನಂ ಕಾಳಾಹಿಮಥನನ (ಕೃಷ್ಣನ) ಮೊಗಮಂ ನೋಡಿ-
ವಚನ:ಅರ್ಥ:ಹಾಗೆ ಯಮುನಾನದಿಯ ತಂಪಾದ ನೀರಿನ ತುಂತುರುಗಳ ಮೇಲೆ ಸಂಚಾರ ಮಾಡಿದುದೂ ಬೇಟೆಯ ಅಲೆದಾಟದ ಆಯಾಸದಿಂದುಂಟಾದ ಬೆವರಿನ ಕಣಗಳನ್ನು ಹೋಗಲಾಡಿಸಿದುದೂ ಆಗಿ ಬಂದ ಮಂದಮಾರುತಕ್ಕೆ ಶರೀರವನ್ನು ಒಡ್ಡುತ್ತಾ ಆ ಪುಣ್ಯನದಿಯ ಸಮೀಪಕ್ಕೆ ಬಂದು ತನ್ನ ಕತ್ತಿಯ ಕಾಂತಿಯಂತೆ ಕಪ್ಪಾಗಿ ಕರ್ರಗಿದ್ದ ನೀರನ್ನು ನೋಡಿ ವಿಕ್ರಮಾರ್ಜುನನು ಕಾಳಿಂಗಮರ್ದನನಾದ ಕೃಷ್ಣನ ಮುಖವನ್ನು ನೋಡಿ-
ಕಂ|| ತನ್ನೊಳಗಣ ಪನ್ನಗನಂ
ಮುನ್ನೀನ್ ಪಿಡಿದೊಗೆಯೆ ಕಾಯಲಾಱದೆ ಪಿರಿದುಂ|
ಬನ್ನದ ಕರ್ಪೆಸೆದುದು ತೊರೆ
ಗಿನ್ನುಂ ಹರಗಳ ತಮಾಳ ನೀಳಚ್ಛವಿಯಿಂ|| ೫೪||
ಪದ್ಯ-೫೪:ಪದವಿಭಾಗ-ಅರ್ಥ:ತನ್ನೊಳಗಣ ಪನ್ನಗನಂ (ಕಾಳಿಂಗಸರ್ಪವನ್ನು)ಮುನ್ನ ನೀನ್ ಪಿಡಿದೊಗೆಯೆ (ಹಿಡಿದೆತ್ತಿ ಎಸೆಯಲು) ಕಾಯಲಾಱದೆ ಪಿರಿದುಂ ಬನ್ನದ ಕರ್ಪೆಸು ಎದುದು (ವಿಶೇಷವಾಗಿ ಅಂದುಂಟಾದ ಸೋಲಿನ ಕರಿಯಬಣ್ಣವು ಪ್ರಕಾಶಿಸುತ್ತಿದೆ) ತೊರೆಗೆ ಇನ್ನುಂ (ಈ ನದಿಯಲ್ಲಿ) ಹರಗಳ (ಶಿವನ ಕಂಠದಂತೆ) ತಮಾಳ ನೀಳಚ್ಛವಿಯಿಂ(ಹೊಂಗೆಯ ಮರದಂತೆಯೂ)
ಪದ್ಯ-೫೪:ಅರ್ಥ: ತನ್ನಲ್ಲಿದ್ದ ಕಾಳಿಂಗಸರ್ಪವನ್ನು ಮೊದಲು ನೀನು ಹಿಡಿದೆತ್ತಿ ಎಸೆಯಲು ಅದನ್ನು ರಕ್ಷಿಸಲಾರದೆ ಆ ನದಿಗೆ ವಿಶೇಷವಾಗಿ ಅಂದುಂಟಾದ ಸೋಲಿನ ಕರಿಯಬಣ್ಣವು ಇಂದೂ ಇನ್ನೂ ಶಿವನ ಕಂಠದಂತೆಯೂ ಹೊಂಗೆಯ ಮರದಂತೆಯೂ ಈ ನದಿಯಲ್ಲಿ ಕಪ್ಪು ಕಾಂತಿಯಿಂದ ಪ್ರಕಾಶಿಸುತ್ತಿದೆ.
ಕಂ||ತಡಿವಿಡಿದು ಪೂತ ಲತೆಗಳ
ನೊಡನೊಡನೆಲರಲೆಯೆ ಬಿಡದೆ ಸುರಿವಲರ್ಗಳನಂ|
ದೆಡೆಗುಡದೆ ನೂಂಕಿ ಮೆಲ್ಲನೆ
ತಡಿಯಂ ಸಾರ್ಚಿದಪುದಿದಱ ಬಂಬಲ್ದೆರೆಗಳ್|| ೫೫||
ಪದ್ಯ-೫೫:ಪದವಿಭಾಗ-ಅರ್ಥ:ತಡಿವಿಡಿದು (ದಡವನ್ನು ಅನುಸರಿಸಿ) ಪೂತ ಲತೆಗಳನು ಒಡನೊಡನೆ ಎಲರ್ ಅಲೆಯೆ (ಗಾಳಿಯ ಅಲೆಯು ಅಲುಗಿಸಲು) ಬಿಡದೆ ಸುರಿವ ಅಲರ್ಗಳನಂದು (ಹೂವುಗಳನ್ನು) ಎಡೆಗುಡದೆ ನೂಂಕಿ (ಒಂದೇ ಸಮನಾಗಿ ತಳ್ಳಿ) ಮೆಲ್ಲನೆ ತಡಿಯಂ ಸಾರ್ಚಿದಪುದು(ಸೇರಿಸುತ್ತವೆ) ಇದಱ ಬಂಬಲ್ದೆರೆಗಳ್ (ಇದರ ಸಾಲಾದ ಅಲೆಗಳು ಮೆಲ್ಲನೆ ದಡವನ್ನು ಸೇರಿಸುತ್ತವೆ.)
ಪದ್ಯ-೫೫:ಅರ್ಥ: . ದಡವನ್ನು ಅನುಸರಿಸಿ ಹೂಬಿಟ್ಟಿರುವ ಲತೆಗಳನ್ನು ಆಗಾಗ ಗಾಳಿಯ ಅಲೆಯು ಅಲುಗಿಸಲು ಅದರಿಂದ ಸುರಿಯುವ ಹೂವುಗಳನ್ನು ಒಂದೇ ಸಮನಾಗಿ ತಳ್ಳಿ ಇದರ ಸಾಲಾದ ಅಲೆಗಳು ಮೆಲ್ಲನೆ ದಡವನ್ನು ಸೇರಿಸುತ್ತವೆ.

ಯಮುನೆಯ ದಡದಲ್ಲಿ ವಿಹಾರ - ಜಲಕ್ರೀಡೆ[ಸಂಪಾದಿಸಿ]

ಕಂ||ವಿದಳಿತ ನುತ ಶತಪತ್ರದ
ಪುದುವಿನೊಳಿರದಗಲೆವೋದ ಹಂಸನನಱಸಲ್|
ಪದೆದೆಳಸುವ ಪೆಣ್ಣಂಚೆಯ
ಪದ ಕೊರಲಿಂಚರದ ಸರಮೆ ಸವಿ ಕಿವಿಗಿದರೊಳ್|| ೫೬||
ಪದ್ಯ-೫೬:ಪದವಿಭಾಗ-ಅರ್ಥ:ವಿದಳಿತ ನುತ ಶತಪತ್ರದ (ಅರಳಿದ ಪ್ರಸಿದ್ಧವಾದ ತಾವರೆಯ) ಪುದುವಿನೊಳು ಇರದೆ ಅಗಲೆವೋದ ಹಂಸನನು ಅಱಸಲ್ (ಹುಡುಕಲು) ಪದೆದು ಎಳಸುವ ಪೆಣ್ಣಂಚೆಯ(ಪ್ರೀತಿಸಿ ಆಶೆಪಟ್ಟು ಕೂಗುವ ಹೆಣ್ಣುಹಂಸದ) ಪದ ಕೊರಲ ಇಂಚರದ ಸರಮೆ (ಹದವಾದ ಕೊರಲಿನ ಇಂಪಾದ ಧ್ವನಿಯೇ) ಸವಿ ಕಿವಿಗಿದರೊಳ್ (ಕಿವಿಗಿಂಪಾದ ಸ್ವರವಾಗಿದೆ)
ಪದ್ಯ-೫೬:ಅರ್ಥ: . ಅರಳಿದ ಪ್ರಸಿದ್ಧವಾದ ತಾವರೆಯ ಹುದುವಿನ ಆಶ್ರಯದಲ್ಲಿ ಇರದೆ ಅಗಲಿಹೋದ ಗಂಡು ಹಂಸಪಕ್ಷಿಯನ್ನು ಹುಡುಕಲು ಪ್ರೀತಿಸಿ ಆಶೆಪಟ್ಟು ಕೂಗುವ ಹೆಣ್ಣುಹಂಸದ ಹದವಾದ ಕೊರಲಿನ ಇಂಪಾದ ಧ್ವನಿಯೇ ಇಲ್ಲಿ ಕಿವಿಗಿಂಪಾದ ಸ್ವರವಾಗಿದೆ
ಕಂ|| ನೆರೆಯಲರ್ದಂಭೋರುಹದಲ
ರ್ದುಱುಗಲನೆಲೆದೊಗೆದುವೆಸೆಯೆ ಜಲದೇವತೆಗಳ್||
ನಿಱವಿಡಿದುಡಲ್ ನಿಮಿರ್ಚಿದ
ಕುಱುವಡಿಯ ತರಂಗದಂತೆ ಬಂಬಲ್ದೆರೆಗಳ್|| ೫೭||
ಪದ್ಯ-೫೭:ಪದವಿಭಾಗ-ಅರ್ಥ:ನೆರೆಯಲರ್ದ ಅಂಭೋರುಹದ ಅಲರ್ದುಱುಗಲಂ (ಪೂರ್ಣವಾಗಿ ಅರಳಿದ ತಾವರಯ ಸಮೂಹವನ್ನು) ಅಲೆದು ಒಗೆದುವು(ಪೀಡಿಸಿ ನೆಗೆದವು) ಎಸೆಯೆ (ಶೋಭಿಸಲು) ಜಲದೇವತೆಗಳ್ ನಿಱವಿಡಿದು ಉಡಲ್ (ಜಲದೇವತೆಗಳು ಉಡಲು ಎತ್ತಿದ ಸೀರೆಯ ನಿರಿಗೆಗಳು) ನಿಮಿರ್ಚಿದ (ಬಿಚ್ಚಿದ) ಕುಱುವಡಿಯ (ಚಿಕ್ಕ ಮಡಿಬಟ್ಟೆಯ) ತರಂಗದಂತೆ ಬಂಬಲ್ದೆರೆಗಳ್ (ಅಲೆಗಳಂತೆ, ಸಾಲಾದ ಅಲೆಗಳು)
ಪದ್ಯ-೫೭:ಅರ್ಥ: (ತಾತ್ಪರ್ಯ) ಜಲದೇವತೆಗಳು ಉಡಲು ಎತ್ತಿದ ಸೀರೆಯ ನಿರಿಗೆಗಳು ಚಿಮ್ಮುವಂತೆ ಅಲೆಗಳ ಸಾಲುಸಾಲುಗಳು ತಾವರೆಗಳನ್ನು ಬಡಿದು ಮೇಲಿಂದ ಹಾರಿ ಶೋಭಿಸಿದವು.
ಚಂ|| ತುರಗಚಯಂಗಳಂತಿರೆ ತರಂಗಚಯಂ ಚಮರೀರುಹಂಗಳಂ|
ತಿರೆ ಕಳಹಂಸೆ ಬೆಳ್ಗೊಡೆಗಳಂತಿರೆ ಬೆಳ್ನೊರೆ ಗೊಟ್ಟಿ ಗಾಣರಂ|
ತಿರೆ ಮಱಿದುಂಬಿ ಮೇಳದವರಂತಿರೆ ಸಾರಿಕೆ ರಾಜಗೇಹದಂ
ತಿರೆ ಕೊಳನಲ್ಲಿ ತಾಮರಸರಂತಿರೆ ತಾಮರಸಂಗಳೊಪ್ಪುಗುಂ|| ೫೮ ||
ಪದ್ಯ-೫೮:ಪದವಿಭಾಗ-ಅರ್ಥ:ತುರಗಚಯಂಗಳಂತಿರೆ ತರಂಗಚಯಂ (ತರಂಗ--ಅಲೆಗಳ ಸಮೂಹವು ಕುದುರೆಗಳ ಸಮೂಹದಂತಿರಲು) ಚಮರೀರುಹಂಗಳಂತಿರೆ ಕಳಹಂಸೆ (ಕೋಮಲಹಂಸಪಕ್ಷಿಯು ಚಾಮರಗಳಂತಿರಲು) ಬೆಳ್ಗೊಡೆಗಳಂತಿರೆ ಬೆಳ್ನೊರೆ (ಬಿಳಿಯ ನೊರೆ ಶ್ವೇತಚ್ಛತ್ರಿಯಂತಿರಲು) ಗೊಟ್ಟಿ ಗಾಣರಂತಿರೆ ಮಱಿದುಂಬಿ (ದುಂಬಿಯ ಮರಿಗಳು ಗಾಯಕಗೋಷ್ಠಿಯಂತಿರಲು), ಮೇಳದವರಂತಿರೆ ಸಾರಿಕೆ (ಹೆಣ್ಣು ಗಿಳಿಯು ಸಖಿಯಂತಿರಲು) ರಾಜಗೇಹದಂತಿರೆ ಕೊಳನು ಅಲ್ಲಿ (ಅಲ್ಲಿಯ ಕೊಳವು ಅರಮನೆಯಂತಿರಲು) ತಾಮರಸರಂತಿರೆ- ತಾಂ ಅರಸಂತಿರೆ ತಾಮರಸಂಗಳು-ತಾವರೆಗಳು, ಒಪ್ಪುಗುಂ(ತಾವರೆಗಳು ತಾವೇ ಅರಸರಾಗಿರುವ ಹಾಗೆ ಶೋಭಿಸುತ್ತಿವೆ)
ಪದ್ಯ-೫೮:ಅರ್ಥ: ಅಲೆಗಳ ಸಮೂಹವು ಕುದುರೆಗಳ ಸಮೂಹದಂತಿರಲು, ಕೋಮಲಹಂಸಪಕ್ಷಿಯು ಚಾಮರಗಳಂತಿರಲು, ಬಿಳಿಯ ನೊರೆ ಶ್ವೇತಚ್ಛತ್ರಿಯಂತಿರಲು, ದುಂಬಿಯ ಮರಿಗಳು ಗಾಯಕಗೋಷ್ಠಿಯಂತಿರಲು, ಹೆಣ್ಣು ಗಿಳಿಯು ಸಖಿಯಂತಿರಲು, ಅಲ್ಲಿಯ ಕೊಳವು ಅರಮನೆಯಂತಿರಲು ತಾವರೆಗಳು ತಾವೇ ಅರಸರಾಗಿರುವ ಹಾಗೆ ಶೋಭಿಸುತ್ತಿವೆ.
ವ|| ಎಂದು ಭಾಸ್ಕರತನೂಜೆಯನುಭಯತಟ ನಿಕಟ ಕುಸುಮನಿವಹ ತತ್ಪರಾಗ ಪಟಳ ಪಿಶಂಗ ತರತ್ತರಂಗ ಸರೋಜೆಯಂ ಮೆಚ್ಚಿ ಪೊಗೞ್ದು ಜಲಕ್ರೀಡೆಯಾಡಲ್ ಬಗೆದು ತಾನುಮನಂತನುಮಂತಪುರಪರಿವಾರಂ ಬೆರಸು-
ವಚನ:ಪದವಿಭಾಗ-ಅರ್ಥ:ಎಂದು ಭಾಸ್ಕರತನೂಜೆಯನು (ಯುಮುನಾನದಿಯನ್ನು) ಉಭಯತಟ ನಿಕಟ ಕುಸುಮನಿವಹ ತತ್ಪರಾಗ ಪಟಳ(ಎರಡು ಸಮೀಪದ ಮರಗಳಿಂದ ಉದುರಿದ ಹೂವಿನ ಪರಾಗರಾಶಿಯಿಂದ) ಪಿಶಂಗ ತರತ್ತರಂಗ ಸರೋಜೆಯಂ ಮೆಚ್ಚಿ ಪೊಗೞ್ದು (ಅಲೆಗಳಿಂದ ಕೂಡಿದ ಕಮಲವನ್ನು ಸೂರ್ಯಪುತ್ರಿಯಾದ ಯುಮುನಾನದಿಯನ್ನು ಮೆಚ್ಚಿ ಹೊಗಳಿ ) ಜಲಕ್ರೀಡೆಯಾಡಲ್ ಬಗೆದು (ನೀರಲ್ಲಿ ಆಟವಾಡಲು ಬಯಸಿ) ತಾನುಂ ಅನಂತನುಂ (ಕೃಷ್ಣನು) ಅಂತಪುರಪರಿವಾರಂ ಬೆರಸು-
ವಚನ:ಅರ್ಥ:ಎಂದು ಎರಡು ಸಮೀಪದ ಮರಗಳಿಂದ ಉದುರಿದ ಹೂವಿನ ಪರಾಗರಾಶಿಯಿಂದ ಪಿಶಂಗ (ಕಪ್ಪುಮಿಶ್ರವಾದ ಕೆಂಪುಬಣ್ಣ)ವಾಗಿ ಮಾಡಲ್ಪಟ್ಟ ಚಂಚಲವಾದ ಅಲೆಗಳಿಂದ ಕೂಡಿದ ಕಮಲವನ್ನು ಸೂರ್ಯಪುತ್ರಿಯಾದ ಯುಮುನಾನದಿಯನ್ನು ಮೆಚ್ಚಿ ಹೊಗಳಿ ತಾನೂ ಕೃಷ್ಣನೂ ಅಂತಪುರಪರಿವಾರದೊಡನೆ ಕೂಡಿ ನೀರಿನಲ್ಲಿ ಆಟವಾಡಲು ಬಯಸಿದರು.
ಕಂ|| ಒತ್ತಿದ ತಳ್ಕೆತ್ತಿದ ತೞೆ
ಮುತ್ತಿನ ಪೊಸದುಡಿಗೆ ತಳಿರ ಸೋರ್ಮುಡಿ ಮನಮಂ|
ಪತ್ತಿಸಿ ಜೊತ್ತಿಸೆ ಮದನೋ
ನ್ಮತ್ತೆಯರವಯವದೆ ಬಂದರರಸಿಯರರೆಬರ್|| ೫೯||
ಪದ್ಯ-೫೯:ಪದವಿಭಾಗ-ಅರ್ಥ:ಒತ್ತಿದ (ಹಚ್ಚಿಕೊಂಡ) ತಳ್ಕು-ಗಂಧ, ಎತ್ತಿದ ತೞೆ (ಛತ್ರಿ) ಮುತ್ತಿನ ಪೊಸದುಡಿಗೆ (ಹೊಸ ತುಡಿಗೆ/ ಹೊಸತು ಉಡಿಗೆ?- ಮುತ್ತಿನ ಹೊಸಒಡವೆಗಳು) ತಳಿರ ಸೋರ್ಮುಡಿ (ಚಿಗುರಿನಿಂದ ಅಲಂಕರಿಸಿದ ಜೋಲುತುರುಬು) ಮನಮಂ ಪತ್ತಿಸಿ ಜೊತ್ತಿಸೆ (ಮನಸ್ಸನ್ನು ಪ್ರವೇಶಿಸಿ ಆಕರ್ಷಿಸುತ್ತಿರಲು) ಮದನೋನ್ಮತ್ತೆಯರು(ಕಾಮದಿಂದ ಹುಚ್ಚೆದ್ದರು) ಅವಯವದೆ (ವೈಯಾರದಿಂದ) ಬಂದರು ಅರಸಿಯರು ಅರೆಬರ್(ಕೆಲವರು)
ಪದ್ಯ-೫೯:ಅರ್ಥ:. ಲೇಪನಮಾಡಿಕೊಂಡಿರುವ ಶ್ರೀಗಂಧಾದಿಲೇಪನವೂ ಎತ್ತಿ ಹಿಡಿದಿರುವ ಛತ್ರಿಗಳೂ ಮುತ್ತಿನ ಹೊಸಒಡವೆಗಳು ಚಿಗುರಿನಿಂದ ಅಲಂಕರಿಸಿದ ಜೋಲುತುರುಬು ಮನಸ್ಸನ್ನು ಪ್ರವೇಶಿಸಿ ಆಕರ್ಷಿಸುತ್ತಿರಲು ಕಾಮದಿಂದ ಹುಚ್ಚೆದ್ದ ಕೆಲವರು ರಾಣಿಯರು ಲೀಲೆಯಿಂದ ಅಲ್ಲಿಗೆ ಬಂದರು.
ಕಂ||ಇದು ಮೃದು ಕಳಹಂಸದ ರವ
ಮಿದು ನೂಪುರ ನಿನದಮಿದು ರಥಾಂಗಯುಗಂ ಮ|
ತ್ತಿದು ಕುಚಯುಗಮಿದು ಸರಸಿಜ
ಮಿದು ಮೊಗಮೆನಿಸಿದುದು ನೆರೆದ ಪೆಂಡಿರ ತಂಡಂ|| ೬೦||
ಪದ್ಯ-೬೦:ಪದವಿಭಾಗ-ಅರ್ಥ:ಇದು ಮೃದು ಕಳಹಂಸದ ರವಮಿದು ನೂಪುರ ನಿನದಮಿದು ರಥಾಂಗಯುಗಂ ಮತ್ತಿದು ಕುಚಯುಗಮಿದು ಸರಸಿಜಮಿದು ಮೊಗಂ ಎನಿಸಿದುದು ನೆರೆದ ಪೆಂಡಿರ ತಂಡಂ (ಅಲ್ಲಿ ಸೇರಿದ ಹೆಂಗಸರ ಗುಂಪು)
ಪದ್ಯ-೬೦:ಅರ್ಥ: (ಅಲ್ಲಿ ನೆರೆದ ಹೆಂಗಸರ ಸಮೂಹದಲ್ಲಿ ಮಾತು, ಗೆಜ್ಜೆಸದ್ದು,ಇತ್ಯಾದಿ ಸನ್ನಿವೇಶಕ್ಕೆ ಹೋಲಿಕೆಯ ರೂಪಕ) ಅಲ್ಲಿ ಸೇರಿದ ಹೆಂಗಸರ ಗುಂಪು- ಇದು ಮೃದುವಾದ ಕಳಹಂಸಧ್ವನಿ- ಇದು ಕಾಲ್ಗಡಗದ ಶಬ್ದ; ಇದು ಚಕ್ರವಾಕಪಕ್ಷಿಗಳ ಜೋಡಿ- ಇದು ಮೊಲೆಗಳ ಜೋಡಿ, ಇದು ಕಮಲ- ಇದು ಮುಖ ಎನ್ನಿಸಿತು.
ವ|| ಅಂತು ಮದನನ ಮನೋರಾಜ್ಯಮೆ ಬರ್ಪಂತೆ ಬಂದು ತಂಡತಂಡದೆ ರಮಣೀಯ ರಮಣೀಜನಂ ಬೆರಸು ಪಂಚರತ್ನಂಗಳಂ ಕೆದಱಿಸಿ ಸಾಂದಿನ ಸೌಸವದ ಕುಂಕುಮದ ಕತ್ತುರಿಯ ಕದಡಂ ಕದಡಿ-
ವಚನ:ಪದವಿಭಾಗ-ಅರ್ಥ:ಅಂತು ಮದನನ ಮನೋರಾಜ್ಯಮೆ ಬರ್ಪಂತೆ ಬಂದು, ತಂಡತಂಡದೆ ರಮಣೀಯ ರಮಣೀಜನಂ ಬೆರಸು (ಸೇರಿ) ಪಂಚರತ್ನಂಗಳಂ ಕೆದಱಿಸಿ (ಕೆದರಿಸಿ-ಹರಡಿಸಿ )ಸಾಂದಿನ ಸೌಸವದ ಕುಂಕುಮದ ಕತ್ತುರಿಯ ಕದಡಂ (ಶ್ರೀಗಂಧದ ವಾಸನೆಯನ್ನು ಕುಂಕುಮಕೇಸರಿ ಮತ್ತು ಕಸ್ತೂರಿಯ ಬಗ್ಗಡಗಳನ್ನು ಕದಡಿ)ಕದಡಿ-
ವಚನ:ಅರ್ಥ:ಹಾಗೆ ಮನ್ಮಥನ ಮನೋರಾಜ್ಯವೇ ಬರುವಂತೆ ಬಂದು, ಗುಂಪು ಗುಂಪಾದ ರಮಣೀಯರಾದ ಆ ಸ್ತ್ರೀಜನರೊಡನೆ ಸೇರಿ ನೀರಿಗೆ ಪಂಚರತ್ನಗಳನ್ನು ಹರಡಿಸಿ ಶ್ರೀಗಂಧದ ವಾಸನೆಯನ್ನು ಕುಂಕುಮಕೇಸರಿ ಮತ್ತು ಕಸ್ತೂರಿಯ ಬಗ್ಗಡಗಳನ್ನು ಕದಡಿ ನದಿಯನ್ನು ಪ್ರವೇಶಿಸಿದರು.
ಕಂ|| ನೀಲದ ಬೆಳ್ಳಿಯ ಗಾಡಿಯು
ಮೀ ಲಲಿತಾಂಗಿಯರ ಕಣ್ಗೆ ಪೋಲ್ತುಂ ನಾಂ ಕ|
ಣ್ಗೇಳಿದಮಾಗಿರೆವೆಂದೆಳ
ವಾಳೆಗಳೋಡಿದುವು ಬಾಲೆಯರ್ ಪುಗುವಾಗಳ್|| ೬೧||
ಪದ್ಯ-೬೧:ಪದವಿಭಾಗ-ಅರ್ಥ:ನೀಲದ ಬೆಳ್ಳಿಯ ಗಾಡಿಯುಂ (ಸೌಂದರ್ಯ) ಈ ಲಲಿತಾಂಗಿಯರ ಕಣ್ಗೆ ಪೋಲ್ತುಂ (ಹೋಲುವ ಕಣ್ಣುಗಳನ್ನುಳ್ಳ ಈ ಕೋಮಲೆಯರ ಮುಂದೆ) ನಾಂ ಕಣ್ಗೇಳಿದಮಾಗಿರೆವೆಂದು (ಕಣ್ಗೆ ಕೀಳಿದಂ ಅಗಿರೆವು ಎಂದು- ನಾವು ಹೀನವಾಗಿ ಕಾಣಿಸಿಕೊಳ್ಳಲಾರೆವು ಎಂದು) ಎಳವಾಳೆಗಳು (ಎಳೆಯ ಮೀನುಗಳು) ಓಡಿದುವು ಬಾಲೆಯರ್ ಪುಗುವಾಗಳ್ (ನೀರನ್ನು ಪ್ರವೇಶಿಸಿದಾಗ)
ಪದ್ಯ-೬೧:ಅರ್ಥ:ನೀಲರತ್ನದ, ಬೆಳ್ಳಿಯ, ಸೌಂದರ್ಯವನ್ನು ಹೋಲುವ ಕಣ್ಣುಗಳನ್ನುಳ್ಳ ಈ ಕೋಮಲೆಯರ ಮುಂದೆ ನಾವು ಹೀನವಾಗಿ ಕಾಣಿಸಿಕೊಳ್ಳಲಾರೆವು ಎಂದು ಅಲ್ಲಿದ್ದ ಎಳೆಯ ಮೀನುಗಳು ಆ ಬಾಲೆಯರು ನೀರನ್ನು ಪ್ರವೇಶಿಸಿದಾಗ ಓಡಿಹೋದುವು

ವ|| ಅಂತು ಪೊಕ್ಕಾಗಳ್-

ವಚನ:ಅರ್ಥ:ಹಾಗೆ ಪ್ರವೇಶಿಸಿದಾಗ
ಕಂ|| ಆದಲೆ ನೀರ್ ಗುಂಡಿತ್ತೆಂ
ದೀದಲೆಯೊಳೆ ನಿಂದು ಸತಿಗೆ ಹರಿಗಂ ತೋಱು|
ತ್ತಾದರದೆ ಜಾನುದಘ್ನಮು
ರೋದಘ್ನಂ ಕಂಠದಘ್ನಮೆಂಬಳವಿಗಳಂ|| ೬೨||
ಪದ್ಯ-೬೨:ಪದವಿಭಾಗ-ಅರ್ಥ:ಆದಲೆ ನೀರ್ ಗುಂಡಿತ್ತೆಂದು ಈದಲೆಯೊಳೆ ನಿಂದು (ಅಲ್ಲಿ ನೀರು ಆಳವಾಗಿದೆ ಎಂದು ಅರ್ಜುನನು ಈ ಕಡೆಯಲ್ಲಿಯೇ ನಿಂತು) ಸತಿಗೆ ಹರಿಗಂ (ಅರ್ಜುನನು) ತೋಱುತ್ತಾ ಆದರದೆ ಜಾನುದಘ್ನಂ ಉರೋದಘ್ನಂ ಕಂಠದಘ್ನಮ್ ಎಂಬ ಅಳವಿಗಳಂ (ಜಾನು-ಮೊಲಕಾಲು, ಉರ- ಎದೆ; ಕಂಠ- ಕುತ್ತಿಗೆ, ಆಳದ ಪ್ರಮಾಣಗಳನ್ನು ಆದರದಿಂದ ತೋರಿಸಿದನು.)
ಪದ್ಯ-೬೨:ಅರ್ಥ: ಆ ಕಡೆಯಲ್ಲಿ ನೀರು ಆಳವಾಗಿದೆ ಎಂದು ಅರ್ಜುನನು ಈ ಕಡೆಯಲ್ಲಿಯೇ ನಿಂತು ಸುಭದ್ರೆಗೆ ಮೊಳಕಾಲವರೆಗೆ ಮುಳುಗುವ ಎದೆಯವರೆಗೆ ಮುಳುಗುವ ಕತ್ತಿನವರೆಗೆ ಮುಳುಗುವ ಪ್ರಮಾಣಗಳನ್ನು ಆದರದಿಂದ ತೋರಿಸಿದನು.
ವ|| ಅಂತು ಜಗುನೆಯ ಮಡುವಂ ತಮ್ಮರಸಿಯರ ವಿಕಟ ನಿತಂಬಬಿಂಬಂಗಳ ಘಟ್ಟಣೆಯೊಳಮರೆ ಬಗಿದೊಗೆದ ಮೊಲೆಗಳಳ್ಳೇಱಿನೊಳಳ್ಳಾಡಿ ತಳ್ಳಂಕಗುಟ್ಟಿ ನೀರಾಟಮಾಡುವಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಜಗುನೆಯ ಮಡುವಂ (ಯುಮುನಾನದಿಯ ಮಡುವನ್ನು) ತಮ್ಮರಸಿಯರ ವಿಕಟ ನಿತಂಬಬಿಂಬಂಗಳ ಘಟ್ಟಣೆಯೊಳು ಅಮರೆ ಬಗಿದೊಗೆದ ಮೊಲೆಗಳ ಅಳ್ಳೇಱಿನೊಳ್ ಅಳ್ಳಾಡಿ (ಸ್ವಲ್ಪ ನೀರಿನಲ್ಲಿ) ತಳ್ಳಂಕಗುಟ್ಟಿ (ತುಳುಕಾಡಿ) ನೀರಾಟಮಾಡುವಾಗಳ್-
ವಚನ:ಅರ್ಥ:ಯುಮುನಾನದಿಯ ಮಡುವನ್ನು ಆ ರಾಣಿಯರು ತಮ್ಮ ದಪ್ಪವಾದ ಪಿರ್ರೆಗಳ ತಾಗುವಿಕೆಯಿಂದ ಭಾಗಮಾಡಿ ಮೊಲೆಗಳ ಘಟ್ಟಣೆಯಿಂದ ತುಳುಕಾಡಿ ಜಲಕ್ರೀಡೆಯಾಡಿದರು
ಚಂ|| ಪೊಸತಲರ್ದೊಂದು ತಾವರೆಯೆಗೆತ್ತು ಮುಖಾಬ್ಜಮನೊಂದು ತುಂಬಿ ಚುಂ
ಬಿಸೆ ಸತಿ ಬೆರ್ಚಿ ಪೆಳ್ಪಳಿಸಿ ನೋೞ್ಪದುಮಾಕೆಯ ಕಣ್ಣ ಬೆಳ್ಪುಗಳ್|
ಪಸರಿಸೆ ತುಂಬಿಗಳ್ ಕುವಲಯಂಗಳರಳ್ದುವೆ ಗೆತ್ತು ಮತ್ತೆಯುಂ
ಮುಸುಱುವುದುಂ ಗುಣಾರ್ಣವನನಾಗಳವಳ್ ಭಯದಿಂದಮಪ್ಪಿದಳ್|| ೬೩||
ಪದ್ಯ-೬೩:ಪದವಿಭಾಗ-ಅರ್ಥ:ಪೊಸತು ಅಲರ್ದ ಒಂದು ತಾವರೆಯೆಗೆತ್ತು (ಒಂದು ಹೊಸದಾಗಿ ಅರಳಿದ ಕಮಲವೆಂದೇ ಭ್ರಮಿಸಿ) ಮುಖಾಬ್ಜಮನು ಒಂದು ತುಂಬಿ ಚುಂಬಿಸೆ (ಒಂದು ದುಂಬಿಯು ಮುತ್ತಿಡಲು) ಸತಿ ಬೆರ್ಚಿ ಪೆಳ್ಪಳಿಸಿ ನೋೞ್ಪದುಂ (ಸತಿಯು ಹೆದರಿ ಭಯದಿಂದ ನೋಡುತ್ತಿರಲು ) ನೋೞ್ಪದುಂ ಆಕೆಯ ಕಣ್ಣ ಬೆಳ್ಪುಗಳ್ ಪಸರಿಸೆ ( ಅವಳ ಕಣ್ಣಿನ ಬಿಳಿಯ ಬಣ್ಣವು ಪ್ರಸರಿಸಲು) ತುಂಬಿಗಳ್ ಕುವಲಯಂಗಳ ಅರಳ್ದುವೆ ಗೆತ್ತು ಮತ್ತೆಯುಂ ಮುಸುಱುವುದುಂ (ಅದನ್ನು ದುಂಬಿಗಳ ಅರಳಿದ ಕನ್ನೆದಿಲೆಗಳೆಂದೇ ಭ್ರಾಂತಿಗೊಂಡು ಪುನ ಮುತ್ತಲು) ಗುಣಾರ್ಣವನನು ಆಗಳವಳ್ ಭಯದಿಂದಂ ಅಪ್ಪಿದಳ್
ಪದ್ಯ-೬೩:ಅರ್ಥ:ಮುಖಕಮಲಗಳನ್ನು ಒಂದು ದುಂಬಿಯು ಒಂದು ಹೊಸದಾಗಿ ಅರಳಿದ ಕಮಲವೆಂದೇ ಭ್ರಮಿಸಿ ಮುತ್ತಿಡಲು ಆ ಸತಿಯು ಹೆದರಿ ಭಯದಿಂದ ನೋಡುತ್ತಿರಲು ಅವಳ ಕಣ್ಣಿನ ಬಿಳಿಯ ಬಣ್ಣವು ಪ್ರಸರಿಸಲು ಅದನ್ನು ದುಂಬಿಗಳ ಅರಳಿದ ಕನ್ನೆದಿಲೆಗಳೆಂದೇ ಭ್ರಾಂತಿಗೊಂಡು ಪುನ ಮುತ್ತಲು ಅವಳು ಭಯದಿಂದ ಗುಣಾರ್ಣವನನ್ನು ಅಪ್ಪಿಕೊಂಡಳು.
ಚಂ||ಅಸಿಯಳವುಂಕಿ ಕೆಂದಳದೊಳೊತ್ತುವ ನೀರ್ ಮೊಗಮಂ ಪಳಂಚೆ ಬಂ
ಚಿಸಲಿನಿಸಾನುಮಂ ಮುೞುಗಿದಾಗಡೆ ಭೋಂಕನೆ ಬಂದು ಬಾಳೆಮೀನ್|
ಮುಸುಱಿ ನಿರಂತರಂ ಕರ್ದುಕೆ ಸತ್ಕವಿಯೊಳ್ ಸಮನಾಗಿ ಮಾರ್ಗಮಂ
ಪೊಸಯಿಸಿ ದೇಸಿಯಂ ಪೊಸತುಮಾಡಿದಳೊರ್ವಳಪೂರ್ವರೂಪದಿಂ|| ೬೪||
ಪದ್ಯ-೬೪:ಪದವಿಭಾಗ-ಅರ್ಥ:ಅಸಿಯಳು ಅವುಂಕಿ ಕೆಂದಳದೊಳು (ಕೆಂಪಾದ ತನ್ನ ಅಂಗೈಯಿಂದ) ಒತ್ತುವ ನೀರ್ ಮೊಗಮಂ ಪಳಂಚೆ (ತಗುಲಲು) ಬಂಚಿಸಲು ಇನಿಸಾನುಮಂ ಮುೞುಗಿದಾಗಡೆ (ಮತ್ತೊಬ್ಬಳು ಅದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಒಂದಿಷ್ಟು ಮುಳುಗಿದಾಗಲೆ) ಭೋಂಕನೆ ಬಂದು ಬಾಳೆಮೀನ್ ಮುಸುಱಿ (ಮುತ್ತಿಕೊಂಡು ) ನಿರಂತರಂ ಕರ್ದುಕೆ (ಕಚ್ಚಲು ) ಸತ್ಕವಿಯೊಳ್ ಸಮನಾಗಿ ಮಾರ್ಗಮಂಪೊಸಯಿಸಿ ದೇಸಿಯಂ ಪೊಸತುಮಾಡಿದಳೊರ್ವಳಪೂರ್ವರೂಪದಿಂ
ಪದ್ಯ-೬೪:ಅರ್ಥ: . ಕೃಶಾಂಗಿಯಾದ ಒಬ್ಬಳು ಕೆಂಪಾದ ತನ್ನ ಅಂಗೈಯಿಂದ ಅಮುಕಿ ಚೆಲ್ಲಿದ ನೀರು ತನ್ನ ಮುಖವನ್ನು ತಗುಲಲು ಮತ್ತೊಬ್ಬಳು ಅದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಒಂದಿಷ್ಟು ಮುಳುಗಿದಾಗಲೆ ಒಂದು ಬಾಳೆಯ ಮೀನು ಇದ್ದಕ್ಕಿದ್ದ ಹಾಗೆ ಬಂದು ಮುತ್ತಿಕೊಂಡು ಒಂದೇ ಸಮನಾಗಿ ಕಚ್ಚಲು, ಅವಳು ಸತ್ಕವಿಗೆ ಸಮನಾಗಿ ಮಾರ್ಗೀಶೈಲಿಯನ್ನು ಹೊಸದಾಗಿಸಿ ದೇಸೀಶೈಲಿಯ ಸೌಂದರ್ಯವನ್ನು ಅಪೂರ್ವರೀತಿಯಿಂದ ಹೊಸತು ಮಾಡಿದಳು. (???)
ಕಂ|| ಆ ಸಕಳ ಸ್ತ್ರೀ ನಿವಹದ
ಪೂಸಿದ ಮೃಗಮದದ ಮುಡಿಯ ಪೂವಿಯ ರಜದಿಂ|
ವಾಸಿಸಿದ ನೀರ ಕದಡಿಂ
ದಾಸವದೊಳ್ ಸೊರ್ಕಿ ಬೆಂಡುಮಗುೞ್ದುವು ಮೀಂಗಳ್|| ೬೫||
ಪದ್ಯ-೬೫:ಪದವಿಭಾಗ-ಅರ್ಥ:ಆ ಸಕಳ ಸ್ತ್ರೀ ನಿವಹದ (ಸಮೂಹದ) ಪೂಸಿದ ಮೃಗಮದದ (ಕಸ್ತೂರಿಯಿಂದಲೂ) ಮುಡಿಯ ಪೂವಿಯ ರಜದಿಂ (ಹೂಗಳ ಪರಾಗಗಳಿಂದ) ವಾಸಿಸಿದ ನೀರ ಕದಡಿಂದ ಆಸವದೊಳ್ (ಮದ್ಯಸೇವನೆಯಿಂದ) ಸೊರ್ಕಿ ಬೆಂಡುಂ ಉಗುೞ್ದುವು ಮೀಂಗಳ್ (ಬೆಂಡಿನಂತೆ ಹೊಟ್ಟೆ ಮೇಲಾಗಿ ತೇಲಿದವು)
ಪದ್ಯ-೬೫:ಅರ್ಥ: ಆ ಸಕಲ ಸ್ತ್ರೀ ಸಮೂಹವು ಲೇಪನ ಮಾಡಿಕೊಂಡಿದ್ದ ಕಸ್ತೂರಿಯಿಂದಲೂ ತುರುಬಿನ ಹೂಗಳ ಪರಾಗಗಳಿಂದಲೂ ವಾಸನೆ ಮಾಡಲ್ಪಟ್ಟ ನೀರಿನ ಕದಡವೆಂಬ ಮದ್ಯಸೇವನೆಯಿಂದ ಮೀನುಗಳು ಸೊಕ್ಕಿ ಬೆಂಡಿನಂತೆ ತೇಲಿ ಅಸ್ತವ್ಯಸ್ತವಾದುವು.
ಕಂ||ಮುಡಿ ಬಿಡೆ ಪರೆದೆಸೞ್ಗಳ ಪೊಸ
ದುಡುಗೆಯ ಮುತ್ತುಗಳ ಕುಚದ ಸಿರಿಕಂಡದ ಬೆ|
ಳ್ಪೊಡನೊಡನೆಸೆದಿರೆ ಜಗುನೆಯ
ಮಡು ಗಂಗೆಯ ಮಡುವನಿನಿಸನನುಕರಿಸಿರ್ಕುಂ|| ೬೬||
ಪದ್ಯ-೬೬:ಪದವಿಭಾಗ-ಅರ್ಥ:ಮುಡಿ ಬಿಡೆ ಪರೆದ ಎಸೞ್ಗಳ (ಬಿಚ್ಚಿದ ತುರುಬಿನಿಂದ ಚೆದುರಿದ ಹೂವಿನ ದಳಗಳಿಂದ) ಪೊಸದುಡುಗೆಯ ಮುತ್ತುಗಳ ಕುಚದ ಸಿರಿಕಂಡದ ಬೆಳ್ಪು ಒಡನೊಡನೆ ಎಸೆದಿರೆ (ಮೊಲೆಗೆ ಲೇಪನ ಮಾಡಿಕೊಂಡಿದ್ದ ಶ್ರೀಗಂಧದಿಂದ ಬಿಳಿಯ ಬಣ್ಣವನ್ನು ಹೊಂದಿ ) ಜಗುನೆಯ ಮಡು (ಯಮುನೆಯ ಮಡು) ಗಂಗೆಯ ಮಡುವನು ಇನಿಸನು ಅನುಕರಿಸಿರ್ಕುಂ (ಗಂಗೆಯ ಮಡುವನ್ನು ಸ್ವಲ್ಪ ಹೋಲುತ್ತಿತ್ತು)
ಪದ್ಯ-೬೬:ಅರ್ಥ: . ಆ ಸ್ತ್ರೀಯರ ಬಿಚ್ಚಿದ ತುರುಬಿನಿಂದ ಚೆದುರಿದ ಹೂವಿನ ದಳಗಳಿಂದಲೂ, ಹೊಸ ಒಡವೆಗಳ ಮುತ್ತುಗಳಿಂದಲೂ ಮೊಲೆಗೆ ಲೇಪನ ಮಾಡಿಕೊಂಡಿದ್ದ ಶ್ರೀಗಂಧದಿಂದ ಬಿಳಿಯ ಬಣ್ಣವನ್ನು ಹೊಂದಿ ಯಮುನೆಯ ಮಡು (ಬಿಳುಪಾಗಿರುವ) ಗಂಗೆಯ ಮಡುವನ್ನು ಸ್ವಲ್ಪ ಹೋಲುತ್ತಿತ್ತು
ವ|| ಅಂತು ನಾಡೆಯುಂ ಪೊೞ್ತು ಜಲಕೇಳೀ ಲೀಲೆಯೊಳ್ ಮೆರೆದು ನಿಮಿರ್ದ ಕುರುಳ್ಗಳುಂ ಕೆಂಪೇಱಿದ ಕಣ್ಗಳುಂ ಬೇಳ್ಪೇಱಿದ ಬಾಯ್ದೆಗಳುಂ ಪಳಂಚಿದ ಬಣ್ಣಂಗಳುಮೆಸೆಯೆ ಸೊಗಯಿಸುವ ನಿಜ ವಧೂಜನಂ ಬೆರಸು ಪೊಱಮಟ್ಟಾಗಳ್-
ವಚನ:ಪದವಿಭಾಗ-ಅರ್ಥ:ಅಂತು ನಾಡೆಯುಂ ಪೊೞ್ತು (ಬಹಳ ಹೊತ್ತು) ಜಲಕೇಳೀ ಲೀಲೆಯೊಳ್ ಮೆರೆದು, ನಿಮಿರ್ದ ಕುರುಳ್ಗಳುಂ (ಕೆದರಿನಿಂತ ಕೂದಲುಗಳೂ) ಕೆಂಪೇಱಿದ ಕಣ್ಗಳುಂ ಬೇಳ್ಪೇಱಿದ ಬಾಯ್ದೆಗಳುಂ (ಬಿಳಿಚಿಕೊಂಡ ತುಟಿಗಳೂ) ಪಳಂಚಿದ ಬಣ್ಣಂಗಳುಂ ಎಸೆಯೆ(ದೇಹಕ್ಕೆ ಅಂಟಿಕೊಂಡಿರುವ ಬಣ್ಣದ ಸೀರೆಗಳೂ ಶೋಭಿಸಲು) ಸೊಗಯಿಸುವ ನಿಜ ವಧೂಜನಂ ಬೆರಸು (ಸ್ತ್ರೀಜನಗಳೊಜನೆ) ಪೊಱಮಟ್ಟಾಗಳ್ (ಹೊರಟುಬಂದಾಗ)-
ವಚನ:ಅರ್ಥ:ಹಾಗೆ ಬಹಳ ಹೊತ್ತು ಜಲಕ್ರೀಡೆಯ ಆಟದಲ್ಲಿ ಮೆರೆದು,ಕೆದರಿನಿಂತ ಕೂದಲುಗಳೂ, ಕೆಂಪಾದ ಕಣ್ಣುಗಳೂ, ಬಿಳಿಚಿಕೊಂಡ ತುಟಿಗಳೂ, ದೇಹಕ್ಕೆ ಅಂಟಿಕೊಂಡಿರುವ ಬಣ್ಣದ ಸೀರೆಗಳೂ ಶೋಭಿಸಲು, ಸೊಗಸಾಗಿ ಕಾಣುತ್ತಿರುವ ತಮ್ಮ ಸ್ತ್ರೀಜನಗಳೊಜನೆ ಕೃಷ್ಣಾರ್ಜುನರು ನೀರಿನಿಂದ ಹೊರಟುಬಂದರು.
ಕಂ|| ತೆಱಪುವಡೆದಂಗಜಂ ಕೆ
ಯ್ಸೆರೆಗೊಳೆ ನೋಟಕರ ಮನಮನಾಗಳ್ ಕೊಳದಿಂ|
ಪೊಱಮಡೆ ಜಿಗಿಲ್ತು ಪತ್ತಿದ
ಕುಱುವಡಿಗಳೆ ಮೆರೆದುವವರ ನಾಣ್ಗಳ ತೆಱಪಂ|| ೬೭ ||
ಪದ್ಯ-೬೭:ಪದವಿಭಾಗ-ಅರ್ಥ:ತೆಱಪುವಡೆದು ಅಂಗಜಂ (ಮನ್ಮಥನು ಬಿಡುವುಮಾಡಿಕೊಂಡು) ಕೆಯ್ಸೆರೆಗೊಳೆ ನೋಟಕರ ಮನಮನು ಆಗಳ್ (ನೋಡುವವರ ಮನಸ್ಸನ್ನು ಆಗ ಸೆರೆಹಿಡಿಯಲು) ಕೊಳದಿಂ ಪೊಱಮಡೆ ಜಿಗಿಲ್ತು ಪತ್ತಿದ ಕುಱುವಡಿಗಳೆ (ಚಿಕ್ಕ ಮಡಿಬಟ್ಟೆಗಳೇ - ಲಂಗೊಟಿಗಳೇ) ಮೆರೆದುವ ಅವರ ನಾಣ್ಗಳ ತೆಱಪಂ (ಅವರ ನಾಚಿಕೆಸ್ಥಾನಗಳ ಎಡೆಗಳನ್ನು ಪ್ರಕಟಿಸಿದುವು)
ಪದ್ಯ-೬೭:ಅರ್ಥ: ಮನ್ಮಥನು ಬಿಡುವುಮಾಡಿಕೊಂಡು ನೋಡುವವರ ಮನಸ್ಸನ್ನು ಸೆರೆಹಿಡಿಯಲು (ಎಂಬಂತೆ) ಕೊಳದಿಂದ ಸ್ತ್ರೀಯರು ಹೊರಗೆ ಬಂದರು. ಅವರ ಶರೀರಕ್ಕೆ ಅಂಟಿಕೊಂಡಿದ್ದ ಚಿಕ್ಕ ಲಂಗೊಟಿಗಳೇ ಅವರ ನಾಚಿಕೆಸ್ಥಾನಗಳ ಎಡೆಗಳನ್ನು ಪ್ರಕಟಿಸಿದುವು.
ವ|| ಆಗಳ್ ಮಡಿಯ ಭಂಡಾರದ ಮಾಣಿಕ್ಯ ಭಂಡಾರದ ನಿಯೋಗಿಗಳ್ ತಂದು ಮುಂದಿಟ್ಟ ಪೊನ್ನ ಪಡಲಿಗೆಗಳೊಳೊಟ್ಟಿದ ದೇವಾಂಗವಸ್ತ್ರಂಗಳುಮನನೇಕವಿಧದ ತುಡುಗೆಗಳು ಮನೆನಿತಾನುಂ ತೆಱದ ಸುಗಂಧದ್ರವ್ಯಂಗಳುಮನರಸಿಯರ್ಗಮರಸುಮಕ್ಕಳ್ಗುಮಿತ್ತು ತಾಮಿರ್ವರುಂ ಉಟ್ಟುಂ ತೊಟ್ಟುಂ ಪೂಸಿಯುಂ ನೆರೆಯೆ ಕೆಯ್ಗೆಯ್ದು ದಿವ್ಯಾಹಾರಂಗಳನಾರೋಗಿಸಿ ಕೆಯ್ಗಟ್ಟಿಕೊಂಡು ತಂಬುಲಂಗೊಂಡಿಂ ಬೞಿಯಮಚ್ಯುತಂ ವಿಕ್ರಮಾರ್ಜುನನ ಕೆಯ್ಯಂ ಪಿಡಿದುಕೊಂಡು ತನ್ನ ಬಾಲಕ್ರೀಡೆಯ ಸಾಹಸಂಗಳಂ ತೋಱಲೆಂದು-
ವಚನ:ಪದವಿಭಾಗ-ಅರ್ಥ:ಆಗಳ್ ಮಡಿಯ ಭಂಡಾರದ ಮಾಣಿಕ್ಯ ಭಂಡಾರದ ನಿಯೋಗಿಗಳ್ (ವಸ್ತ್ರಭಂಡಾರ ಮಾಣಿಕ್ಯ ಭಂಡಾರಗಳ ಅಕಾರಿಗಳು)ತಂದು ಮುಂದಿಟ್ಟ ಪೊನ್ನ ಪಡಲಿಗೆಗಳೊಳೊಟ್ಟಿದ ದೇವಾಂಗವಸ್ತ್ರಂಗಳುಮನನೇಕವಿಧದ ತುಡುಗೆಗಳು ಮನೆನಿತಾನುಂ ತೆಱದ (ತೆರದ-ವಿವಿಧ) ಸುಗಂಧದ್ರವ್ಯಂಗಳುಮನು ಅರಸಿಯರ್ಗಂ ಅರಸುಮಕ್ಕಳ್ಗುಂ ಇತ್ತು (ಕೊಟ್ಟು) ತಾಮ್ ಇರ್ವರುಂ (ತಾವಿಬ್ಬರೂ) ಉಟ್ಟುಂ ತೊಟ್ಟುಂ ಪೂಸಿಯುಂ ನೆರೆಯೆ ಕೆಯ್ಗೆಯ್ದು (ಚೆನ್ನಾಗಿ ಅಲಂಕರಿಸಿಕೊಂಡು) ದಿವ್ಯ ಆಹಾರಂಗಳನು ಆರೋಗಿಸಿ (ಊಟಮಾಡಿ) ಕೆಯ್ಗಟ್ಟಿಕೊಂಡು ತಂಬುಲಂಗೊಂಡು ಇಂಬೞಿಯಂ (ಹತ್ತಿದಲ್ಲಿದ್ದ) ಅಚ್ಯುತಂ ವಿಕ್ರಮಾರ್ಜುನನ (ಅರ್ಜುನನ) ಕೆಯ್ಯಂ ಪಿಡಿದುಕೊಂಡು ತನ್ನ ಬಾಲಕ್ರೀಡೆಯ ಸಾಹಸಂಗಳಂ ತೋಱಲೆಂದು-
ವಚನ:ಅರ್ಥ:ಆಗ ವಸ್ತ್ರಭಂಡಾರ ಮಾಣಿಕ್ಯ ಭಂಡಾರಗಳ ಅಕಾರಿಗಳು ತಂದು ಮುಂದೆ ಚಿನ್ನದ ತಟ್ಟೆಗಳಲ್ಲಿ ರಾಶಿ ಹಾಕಿದ ರೇಷ್ಮೆ ವಸ್ತುಗಳನ್ನೂ ಅನೇಕ ವಿಧವಾದ ಆಭರಣಗಳನ್ನೂ ಎಷ್ಟೋ ರೀತಿಯ ಸುಗಂಧದ್ರವ್ಯಗಳನ್ನೂ ರಾಣಿಯರಿಗೂ ರಾಜಕುಮಾರರಿಗೂ ಕೊಟ್ಟು ತಾವಿಬ್ಬರೂ ವಸ್ತ್ರಗಳನ್ನು ತೊಟ್ಟು ಚೆನ್ನಾಗಿ ಅಲಂಕರಿಸಿಕೊಂಡು ವಾಸನಾದ್ರವ್ಯವನ್ನು ಲೇಪಿಸಿಕೊಂಡು ಸಂಪೂರ್ಣವಾಗಿ ಅಲಂಕಾರ ಮಾಡಿಕೊಂಡರು. ಆಹಾರಗಳನ್ನು ಊಟಮಾಡಿ ಕೈಗಂಧವನ್ನೂ ಲೇಪಿಸಿ ತಾಂಬೂಲ ಸ್ವೀಕರಿಸಿದ ಮೇಲೆ ಕೃಷ್ಣನು ಹತ್ತಿದಲ್ಲಿದ್ದ ಅರ್ಜುನನ ಕಯ್ಯನ್ನು ಹಿಡಿದುಕೊಂಡು ತನ್ನ ಬಾಲಕ್ರೀಡೆಯ ಸಾಹಸಗಳನ್ನು ತೋರಲೆಂದು ಹೊರಟನು.
ಉ|| ಕೊಂದೆನವುಂಕಿ ಸಂದ ಖರಧೇನುಕರಂ ಮುಳಿಸಿಂದಮಿಲ್ಲಿ ಕಾ
ಳಿಂದಿಯ ಪಾವನಪ್ಪಳಿಸಿದೆಂ ಪಿಡಿದೀ ಸಿಲೆಯಲ್ಲಿ ಮತ್ತಮಾ|
ಟಂದರನುಗ್ರದೈತ್ಯರನಳುರ್ಕೆಯಿನಿಕ್ಕಿದೆನಿಲ್ಲಿ ಮುನ್ನಮೆಂ
ದಂದು ಗುಣಾರ್ಣವಂಗೆ ಮಧು ಕೈಟಭಹಾರಿ ತೊೞಲ್ದು ತೋಱಿದಂ|| ೬೮||
ಪದ್ಯ-೬೮:ಪದವಿಭಾಗ-ಅರ್ಥ:ಕೊಂದೆನು ಅವುಂಕಿ (ಒತ್ತಿ) ಸಂದ ಖರಧೇನುಕರಂ (ರಾಕ್ಷಸರು) ಮುಳಿಸಿಂದಂ, ಅಲ್ಲಿ ಕಾಳಿಂದಿಯ ಪಾವನು ಅಪ್ಪಳಿಸಿದೆಂ, ಪಿಡಿದು ಈ ಸಿಲೆಯಲ್ಲಿ ಮತ್ತಂ ಆಟಂದರನು (ಅಟಕಾಯಿಸಿದ, ಮೇಲೆಬಿದ್ದ ) ಅಗ್ರದೈತ್ಯರನು ಅಳುರ್ಕೆಯಿಂ ಇಕ್ಕಿದೆಂ (ಪರಾಕ್ರಮದಿಂದ ಇಲ್ಲಿ ಕೊಂದೆನು) ಇಲ್ಲಿ ಮುನ್ನಂ ಎಂದು ಅಂದು ಗುಣಾರ್ಣವಂಗೆ (ಅರ್ಜುನನಿಗೆ) ಮಧು ಕೈಟಭಹಾರಿ ತೊೞಲ್ದು ತೋಱಿದಂ (ಮಧುಕೈಟಭರಿಗೆ ಶತ್ರುವಾದ ಕೃಷ್ಣನು ಸುತ್ತಾಡಿ ಅರ್ಜುನನಿಗೆ ತೋರಿಸಿದನು. )
ಪದ್ಯ-೬೮:ಅರ್ಥ: ಹಿಂದೆ ಇದ್ದ ಖರಧೇನುಕರೆಂಬ ರಾಕ್ಷಸರನ್ನು ಇಲ್ಲಿ ಒತ್ತಿ ಕೋಪದಿಂದ ಕೊಂದೆನು. ಯಮುನಾನದಿಯಲ್ಲಿದ್ದ ಕಾಳಿಂಗನೆಂಬ ಹಾವನ್ನು ಹಿಡಿದು ಈ ಕಲ್ಲಿನ ಮೇಲೆ ಅಪ್ಪಳಿಸಿದೆನು. ಮತ್ತು ಹಿಂದಿನ ಕಾಲದಲ್ಲಿ ಮೇಲೆಬಿದ್ದ ಭಯಂಕರರಾದ ರಾಕ್ಷಸರನ್ನು ಪರಾಕ್ರಮದಿಂದ ಇಲ್ಲಿ ಕೊಂದೆನು ಎಂದು ಆ ದಿನ ಗುಣಾರ್ಣವನಾದ ಅರ್ಜುನನಿಗೆ, ಮಧುಕೈಟಭರಿಗೆ ಶತ್ರುವಾದ ಕೃಷ್ಣನು ಸುತ್ತಾಡಿ ಅರ್ಜುನನಿಗೆ ತೋರಿಸಿದನು.
ವ|| ಅಂತಾ ವನಾಂತರಾಳಮಂ ತೊೞಲ್ದು ತೋಱುತ್ತಿರ್ಪನ್ನೆಗಮನೂನದಾನಿಯದಾನದುದ್ದಾನಿಯ ದಾನಮನಾನಲಾನಲ್ಲದೆ ಪೆಱರ್ ನೆರೆಯರೆಂಬಂತೆ ತೊಟ್ಟನೆ ಕಟ್ಟಿದಿರೊಳ್-
ವಚನ:ಪದವಿಭಾಗ-ಅರ್ಥ:ಅಂತು ಆ ವನಾಂತರ ಆಳಮಂ ತೊೞಲ್ದು ತೋಱುತ್ತಿರ್ಪ ಅನ್ನೆಗಂ (ಸುತ್ತಾಡಿ ತೋರುತ್ತಿರುವಷ್ಟರಲ್ಲಿ) ಅನೂನ ದಾನಿಯ ದಾನದ ಉದ್ದಾನಿಯ (ಕುಂದಿಲ್ಲದೆ ದಾನಮಾಡುವವನ) ದಾನಮನು ಆನಲು (ಸ್ವೀಕರಿಸುವುದಕ್ಕೆ) ಆನಲ್ಲದೆ ಪೆಱರ್ ನೆರೆಯರೆಂಬಂತೆ (ನಾನಲ್ಲದೆ ಬೇರೆಯವರು ಸಮರ್ಥರಾಗಲಾರರು) ತೊಟ್ಟನೆ ಕಟ್ಟಿದಿರೊಳ್- (ಎನ್ನುವಾಗ ಹಾಗೆ ಕಟ್ಟಿದಿರಿನಲ್ಲಿ)
ವಚನ:ಅರ್ಥ:ಹಾಗೆ ವನದ ಒಳಭಾಗವನ್ನು ಸುತ್ತಾಡಿ ತೋರುತ್ತಿರುವಷ್ಟರಲ್ಲಿ ಕುಂದಿಲ್ಲದೆ ದಾನಮಾಡುವವನ ದಾನವನ್ನು ಸ್ವೀಕರಿಸುವುದಕ್ಕೆ ನಾನಲ್ಲದೆ ಬೇರೆಯವರು ಸಮರ್ಥರಾಗಲಾರರು ಎನ್ನುವಾಗ ಹಾಗೆ ಕಟ್ಟಿದಿರಿನಲ್ಲಿ-

ಖಾಂಡವವನ ದಹನ[ಸಂಪಾದಿಸಿ]

ಕಂ|| ಉರಿವುರಿಯನೆ ತಲೆನವಿರನು
ಕರಿಸಿರೆ ಸಂತಪ್ತ ಕನಕವರ್ಣಮುಮುರಿಯೊಂ|
ದುರುಳಿವೊಲಿರೆ ಜಠರಾನಳ
ನುರಿವಿನಮಂತೊರ್ವನುರಿಯ ಬಣ್ಣದ ಪಾರ್ವಂ|| ೬೯ ||
ಪದ್ಯ-೬೯:ಪದವಿಭಾಗ-ಅರ್ಥ:ಉರಿವುರಿಯನೆ ತಲೆನವಿರ್ ಅನುಕರಿಸಿರೆ (ಉರಿಯುತ್ತಿರುವ ಜ್ವಾಲೆಯನ್ನೇ ತಲೆಯ ಕೂದಲು ಅನುಕರಿಸುತ್ತಿರಲು) ಸಂತಪ್ತ ಕನಕವರ್ಣಮುಂ (ಪುಟವಿಟ್ಟ ಚಿನ್ನದ ಹೊಂಬಣ್ಣವು) ಉರಿಯ ಒಂದು ಉರುಳಿವೊಲ್ ಇರೆ (ಬೆಂಕಿಯ ಒಂದು ಉಂಡೆಯಂತಿರಲು) ಜಠರಾನಳನು ಉರಿವಿನಂ ಅಂತೆ (ಜಠರಾಗ್ನಿಯ ಉರಿಯಿಂದ ಕೂಡಿದಂತೆ)ಒರ್ವನ್ ಉರಿಯ ಬಣ್ಣದ ಪಾರ್ವಂ (ಬೆಂಕಿಯ ಬಣ್ಣದ ಬ್ರಾಹ್ಮಣನೊಬ್ಬನು)-
ಪದ್ಯ-೬೯:ಅರ್ಥ: ಉರಿಯುತ್ತಿರುವ ಜ್ವಾಲೆಯನ್ನೇ ತಲೆಯ ಕೂದಲು ಅನುಕರಿಸುತ್ತಿರಲು ಅವನ ಪುಟವಿಟ್ಟ ಚಿನ್ನದ ಹೊಂಬಣ್ಣವು ಬೆಂಕಿಯ ಒಂದು ಉಂಡೆಯಂತಿರಲು ಜಠರಾಗ್ನಿಯ ಉರಿಯಿಂದ ಕೂಡಿದಂತೆ (ಹಸಿವಿನಿಂದ ಕೂಡಿದ) ಬೆಂಕಿಯ ಬಣ್ಣದ ಬ್ರಾಹ್ಮಣನೊಬ್ಬನು-
ವ|| ಅಂತು ವರ್ಪನಂ ಕಂಡು ಸಾಮಂತಚೂಡಾಮಣಿ ತನ್ನೊಳಿಂತೆಂದು ಬಗೆದಂ-
ವಚನ:ಪದವಿಭಾಗ-ಅರ್ಥ:ಅಂತು ವರ್ಪನಂ (ಬರುತ್ತಿರುವವನ್ನು)ಕಂಡು ಸಾಮಂತಚೂಡಾಮಣಿ (ಅರ್ಜುನನು) ತನ್ನೊಳು ಇಂತೆಂದು ಬಗೆದಂ(ಯೋಚಿಸಿದನು) -
ವಚನ:ಅರ್ಥ:ಹಾಗೆ ಬರುತ್ತಿರುವವನ್ನು ಕಂಡು ಸಾಮಂತಚೂಡಾಮಣಿ ತನ್ನಲ್ಲಿ ಹೀಗೆಂದು ಯೋಚಿಸಿದನು.
ಕಂ|| ತಪ ನಿಯಮ ನಿಯತನೀ ಬ
ರ್ಪ ಪಾರ್ವನೇನೞ್ತಿ ತನಗದಂ ಬೇಡಿದೊಡಿ|
ನ್ನಪಗತದುರಿತರ್ ಸಂಪೂ
ರ್ಣಪುಣ್ಯರಾನಲ್ಲದಿಲ್ಲ ಪೇೞು ಪೆಱರೊಳರೇ|| ೭೦
ಪದ್ಯ-೭೦:ಪದವಿಭಾಗ-ಅರ್ಥ:ತಪ ನಿಯಮ ನಿಯತನು ಈ ಬರ್ಪ ಪಾರ್ವನು ಏನೞ್ತಿ ತನಗೆ (ಈ ಬ್ರಾಹ್ಮಣನು ತನ್ನ ಅಪೇಕ್ಷೆ ಏನೆಂಬುದನ್ನು) ಅದಂ ಬೇಡಿದೊಡೆ ಇನ್ನು ಅಪಗತದುರಿತರ್ (ಇನ್ನು ಪಾಪರಹಿತರಾದವರು) ಸಂಪೂರ್ಣಪುಣ್ಯರ್ ಆನಲ್ಲದೆ (ನಾನಲ್ಲದೆ) ಇಲ್ಲ ಪೇೞು ಪೆಱರೊಳರೇ(ಇನ್ನರೂ ಇಲ್ಲ, ಹೇಳು ಬೇರೆ ಇದ್ದಾರೆಯೋ!)
ಪದ್ಯ-೭೦:ಅರ್ಥ: ತಪಸ್ಸಿನ ನಿಯಮದಲ್ಲಿ ಆಸಕ್ತನಾದ, ಎದುರಿಗೆ ಬರುತ್ತಿರುವ ಈ ಬ್ರಾಹ್ಮಣನು ತನ್ನ ಅಪೇಕ್ಷೆ ಏನೆಂಬುದನ್ನು ನನ್ನಲ್ಲಿ ಬೇಡುವುದಾದರೆ, (ಕೊಟ್ಟವರು) ಇನ್ನು ಪಾಪರಹಿತರಾದವರು ನನಗಿಂತ ಪುಣ್ಯಶಾಲಿಗಳು ಇನ್ನರೂ ಇಲ್ಲ, ಹೇಳು ಬೇರೆ ಇದ್ದಾರೆಯೋ!.
ವ|| ಎಂಬನ್ನೆಗಂ ಸಾಮಂತ ಚೂಡಾಮಣಿಯನೆಯ್ದೆವಂದು ನಾಲ್ಕುಂ ವೇದಂಗಳೊಳ್ ನಾಲ್ಕುಂ ಋಚಂಗಳಂ ಪೇೞ್ದು ಸಿತ ದೂರ್ವಾಂಕುರ ವಿಮಿಶ್ರಂಗಳಪ್ಪ ಶೇಷಾಕ್ಷತೆಗಳಂ ಕೊಟ್ಟು ಮುಂದೆ ನಿಂದನಂ ನಿಮಗೆ ಬಾೞ್ತೆಯಪ್ಪುದಂ ಬೇಡಿಕೊಳ್ಳಿಂ ಎನೆ-
ವಚನ:ಪದವಿಭಾಗ-ಅರ್ಥ:ಎಂಬನ್ನೆಗಂ ಸಾಮಂತ ಚೂಡಾಮಣಿಯನು ಎಯ್ದೆವಂದು (ಸಮೀಪಕ್ಕೆ ಬಂದು) ನಾಲ್ಕುಂ ವೇದಂಗಳೊಳ್ ನಾಲ್ಕುಂ ಋಚಂಗಳಂ ಪೇೞ್ದು (ಹೇಳಿ) ಸಿತ ದೂರ್ವಾಂಕುರ ವಿಮಿಶ್ರಂಗಳಪ್ಪ (ಗರಿಕೆಯ ಕುಡಿಯಿಂದ ಕೂಡಿದ) ಶೇಷಾಕ್ಷತೆಗಳಂ ಕೊಟ್ಟು ಮುಂದೆ ನಿಂದನಂ (ಮುಂದೆ ನಿಂತವನನನ್ನು) ನಿಮಗೆ ಬಾೞ್ತೆಯಪ್ಪುದಂ (ಉಪಯುಕ್ತವಾದುದನ್ನು) ಬೇಡಿಕೊಳ್ಳಿಂ ಎನೆ-
ವಚನ:ಅರ್ಥ:ಎನ್ನುವಷ್ಟರಲ್ಲಿ ಅವನು ಸಾಮಂತಚೂಡಾಮಣಿಯಾದ ಅರ್ಜುನನ ಸಮೀಪಕ್ಕೆ ಬಂದು, ನಾಲ್ಕು ವೇದಗಳಿಂದಲೂ ನಾಲ್ಕು ಋಕ್ಕುಗಳನ್ನು ಹೇಳಿ ಬಿಳಿ ಗರಿಕೆಯ ಕುಡಿಯಿಂದ ಕೂಡಿದ ಆಶೀರ್ವಾದರೂಪವಾದ ಶೇಷಾಕ್ಷತೆಯನ್ನು ಕೊಟ್ಟು ಮುಂದೆ ನಿಂತವನನನ್ನು. ಅರ್ಜುನನು ಉಪಯುಕ್ತವಾದದನ್ನು (ಅಪೇಕ್ಷೆಯನ್ನು) ಕೇಳಿಕೊಳ್ಳಿ ಎನ್ನಲು- (ಎಂದನು).
ಚಂ|| ಮಣಿ ಕನಕಾದಿ ವಸ್ತುಗಳನೊಂದುಮನೊಲ್ಲೆನವೇವುವಾದವಿ
ನ್ನುಣಿಸೆನಗೞ್ತಿ ಮೆಯ್ ಪಸಿದು ಜೊಮ್ಮನೆ ಪೋದಪುದೆನ್ನ ವೇೞ್ಪುದಂ|
ತಣಿಯುಣಲೀವೊಡೀವುದೆನೆ ಪಾರ್ಥನದೇವಿರಿದಿತ್ತೆನಾವುದು
ಣ್ಬುಣಿಸೆನೆ ಪೇೞ್ವೆನೆಂಬ ಪದದೊಳ್ ನರಕಾಂತಕನಗ್ನಿದೇವನಂ|| ೭೧||
ಪದ್ಯ-೭೧:ಪದವಿಭಾಗ-ಅರ್ಥ:ಮಣಿ ಕನಕಾದಿ ವಸ್ತುಗಳನೊಂದುಮಂ ಒಲ್ಲೆನ್ ಅವು ಏವುವು (ಅವು ಏನು ಮಹಾ?) ಅದಂ ಇನ್ನುಣಿಸು ಎನಗೆ ಅೞ್ತಿ (ನನಗೆ ರುಚಿಕರವಾದ ಊಟ ಮಾಡಿಸು, ಅದು ಪ್ರೀತಿ) ಮೆಯ್ ಪಸಿದು ಜೊಮ್ಮನೆ ಪೋದಪುದು (ಶರೀರವು ಹಸಿವಿನಿಂದ ಜೊಮ್ಮುಹಿಡಿದು ಹೋಗಿದೆ;) ಎನ್ನ ವೇೞ್ಪುದಂ (ನಾನು ಹೇಳಿದ್ದನ್ನು,ಬಯಸಿದ್ದನ್ನು) ತಣಿಯುಣಲ್ (ತೃಪ್ತಿಯಾಗುವಹಾಗೆ) ಈವೊಡೆ ಈವುದು ಎನೆ (ಊಟವನ್ನು ಕೊಡುವುದಾದರೆ ಕೊಡಿ - ಎನ್ನಲು) ಪಾರ್ಥನು ಅದೇವಿರಿದು ಇತ್ತೆನು (ಪಾರ್ಥನು ಇದೇನು ದೊಡ್ಡದು, ಕೊಟ್ಟಿದ್ದೇನೆ) ಆವುದು ಉಣ್ಬುಣಿಸು ಎನೆ (ಯಾವುದು ನೀವು ಊಟ ಮಾಡುವ ಆಹಾರ ಎಂದು ಕೇಳಲು,) ಪೇೞ್ವೆನೆಂಬ ಪದದೊಳ್ (‘ಹೇಳುತ್ತೇನೆ’ ಎನ್ನುವಷ್ಟರಲ್ಲಿ) ನರಕಾಂತಕನು ಅಗ್ನಿದೇವನಂ (ಶ್ರೀಕೃಷ್ಣನು ಅಗ್ನಿದೇವನನ್ನು)-
ಪದ್ಯ-೭೧:ಅರ್ಥ:ಮಣಿಕನಕಾದಿ ವಸ್ತುಗಳಾವುದನ್ನೂ ಅಪೇಕ್ಷಿಸುವುದಿಲ್ಲ ; ಅವು ಏನು ಮಹಾದೊಡ್ಡವು; ನನಗೆ ರುಚಿಕರವಾದ ಊಟ ಮಾಡಿಸು, ಅದು ಪ್ರೀತಿ, ಶರೀರವು ಹಸಿವಿನಿಂದ ಜೊಮ್ಮುಹಿಡಿದು ಹೋಗಿದೆ; ನನಗೆ ತೃಪ್ತಿಯಾಗುವಹಾಗೆ ಊಟವನ್ನು ಕೊಡುವುದಾದರೆ ಕೊಡಿ, ಎನ್ನಲು ಪಾರ್ಥನು ಇದೇನು ದೊಡ್ಡದು, ಕೊಟ್ಟಿದ್ದೇನೆ. ಯಾವುದು ನೀವು ಊಟ ಮಾಡುವ ಆಹಾರ ಎಂದು ಕೇಳಿದನು. ‘ಹೇಳುತ್ತೇನೆ’ ಎನ್ನುವಷ್ಟರಲ್ಲಿ ನರಕಾಂತಕನಾದ ಶ್ರೀಕೃಷ್ಣನು ಅಗ್ನಿದೇವನನ್ನು-
ವ|| ಕಾಣಲೊಡಮಱಿದು ಶರಣಾಗತಜಳನಿಯನೆಯ್ದೆ ವಂದನೀ ಬಕವೇಷಿ ನಿನ್ನನೇನಂ ಬೇಡಿದಂ ನೀನೀತಂಗೇನನಿತ್ತಿಯೆನೆ-
ವಚನ:ಪದವಿಭಾಗ-ಅರ್ಥ:ಕಾಣಲೊಡಂ ಅಱಿದು (ತಕ್ಷಣವೇ ಅರಿತು,ಗುರುತಿಸಿ) ಶರಣಾಗತಜಳನಿಯನ ಎಯ್ದೆ (ಶರಣಾಗತ ಸಮುದ್ರನಾದ ಅರ್ಜುನನ ಬಳಿ ಬಂದು) ವಂದನು ಈ ಬಕವೇಷಿ ನಿನ್ನನು ಏನಂ ಬೇಡಿದಂ (ಈ ಬಕವೇಷಿಯು ಬಂದನೇ, ನಿನ್ನನ್ನು ಏನು ಬೇಡಿದನು,) ನೀನು ಈತಂಗೆ ಏನಿತ್ತೆ ಎನೆ (ನೀನು ಇವನಿಗೆ ಏನನ್ನು ಕೊಟ್ಟೆ’ ಎಂದು ಕೇಳಿದನು)-
ವಚನ:ಅರ್ಥ:ಕಂಡು, ತಕ್ಷಣವೇ ಗುರುತಿಸಿ ಶರಣಾಗತ ಸಮುದ್ರನಾದ ಅರ್ಜುನನ ಸಮೀಪಕ್ಕೆ ‘ಈ ಬಕವೇಷಿಯು ಬಂದನೇ, ನಿನ್ನನ್ನು ಏನು ಬೇಡಿದನು, ನೀನು ಇವನಿಗೆ ಏನನ್ನು ಕೊಟ್ಟೆ’ ಎಂದು ಕೇಳಿದನು.
ಚಂ|| ಪಸಿದುಣವೇಡಿದಂ ಬಡವನಾನುಣಲಿತ್ತೆನದಲ್ಲದಿಲ್ಲಿ ದಲ್
ಕುಸುರಿಯ ಮಾತುಗಾಣೆನೆನೆ ಕೇಳ್ದು ಮುರಾಂತಕನೇಂ ತಗುಳ್ದೆ ಯಿ|
ನ್ನುಸಿರದಿರೀವ ಮಾತನಿವನುಣ್ಬುದು ಖಾಂಡವವೀತನಗ್ನಿ ಮುಂ
ಪುಸಿದಿವನಿಂತೆ ಪಾಯಿಸಿದನಿಂದ್ರನೊಳಾದಿ ನರೇಂದ್ರರೆಲ್ಲರಂ|| ೭೨
ಪದ್ಯ-೭೨:ಪದವಿಭಾಗ-ಅರ್ಥ:ಪಸಿದು ಉಣವೇಡಿದಂ ಬಡವನು ಆನು ಉಣಲು ಇತ್ತೆನು (ಹಸಿದು ಊಟವನ್ನು ಬೇಡಿದನು; ಬಡವನು ನಾನು ಕೊಡುತ್ತೇನೆಂದೆ) ಅದಲ್ಲದೆ ಇಲ್ಲಿ ದಲ್ ಕುಸುರಿಯ ಮಾತುಗಾಣೆನು ಎನೆ (ದಲ್ಲದೆ ಇನ್ನು ಮತ್ತಾವ ಚಮತ್ಕಾರದ ಮಾತನ್ನೂ ಕಾಣೆ ಎನ್ನಲು,) ಕೇಳ್ದು ಮುರಾಂತಕನು ಏಂ ತಗುಳ್ದೆ ಯಿನ್ನು ಉಸಿರದಿರು ಈವ ಮಾತನು, ಇವನುಣ್ಬುದು ಖಾಂಡವಂ (ಕೊಡುವ ಮಾತನ್ನೇ ಆಡಬೇಡ. ಇವನು ಊಟ ಮಾಡುವುದು ಖಾಂಡವ ವನವನ್ನು) ಈತನು ಅಗ್ನಿ, ಮುಂ ಪುಸಿದಿವನು ಇಂತೆ (ಹಿಂದೆ ಇವನು ಹೀಗೆಯೇ ಸುಳ್ಳು ಹೇಳಿ) ಪಾಯಿಸಿದನು (ಹಾಯಿ-ಸು -ನುಗ್ಗು ಹೋರಾಡು) ಇಂದ್ರನೊಳು ಆದಿ ನರೇಂದ್ರರೆಲ್ಲರಂ(ಆದಿಕಾಲದ ರಾಜರನ್ನೆಲ್ಲ ದೇವೇಂದ್ರನಲ್ಲಿ ಹೋರಾಡುವಂತೆ ಮಾಡಿದನು)
ಪದ್ಯ-೭೨:ಅರ್ಥ:‘ ಹಸಿದು ಊಟವನ್ನು ಬೇಡಿದನು; ಬಡವನು ನಾನು ಕೊಡುತ್ತೇನೆಂದೆ, ಅದಲ್ಲದೆ ಇನ್ನು ಮತ್ತಾವ ಚಮತ್ಕಾರದ ಮಾತನ್ನೂ ಕಾಣೆ ಎನ್ನಲು, ಕೃಷ್ಣನು “ನೀನು ಏನು ಮಾಡಿದೆ? ಇನ್ನು ಮೇಲೆ ಕೊಡುವ ಮಾತನ್ನೇ ಆಡಬೇಡ. ಇವನು ಊಟ ಮಾಡುವುದು ಖಾಂಡವವನವನ್ನು, ಈತನು ಅಗ್ನಿದೇವ; ಹಿಂದೆ ಇವನು ಹೀಗೆಯೇ ಸುಳ್ಳು ಹೇಳಿ ಆದಿಕಾಲದ ರಾಜರನ್ನೆಲ್ಲ ದೇವೇಂದ್ರನಲ್ಲಿ ಹೋರಾಡುವಂತೆ ಮಾಡಿದನು
ವ|| ಈತನಜಮುಖವ್ಯಾಘ್ರಂ ಶ್ವೇತ ಕೃಷ್ಣಕಾರಕನೀತನ ಮಾತು ಮಾತಲ್ಲವೆಂದೊಡಾ ಮಾತು ತನ್ನಂ ಮೂದಲಿಸಿದಂತಾಗೆ ವಿದ್ವಿಷ್ಟವಿದ್ರಾವಣನಿಂತೆಂದಂ-
ವಚನ:ಪದವಿಭಾಗ-ಅರ್ಥ:ಈತನು ಅಜಮುಖ ವ್ಯಾಘ್ರಂ (ಕಪಟಿ), ಶ್ವೇತ ಕೃಷ್ಣಕಾರಕನ್, ಈತನ ಮಾತು ಮಾತಲ್ಲವು, ಎಂದೊಡೆ ಆ ಮಾತು ತನ್ನಂ ಮೂದಲಿಸಿದಂತೆ ಆಗೆ ವಿದ್ವಿಷ್ಟವಿದ್ರಾವಣನು (ಅರ್ಜುನನು) ಇಂತೆಂದಂ-
ವಚನ:ಅರ್ಥ:'ಈತನು ಹೋತನ ಮುಖದ ಹುಲಿ. ಬಿಳಿಯದನ್ನು ಕರಿಯದನ್ನಾಗಿ ಮಾಡುವವನು (ಮೋಸಗಾರ) ಈತನ ಮಾತು ಮಾತಲ್ಲ' ಎಂದನು. ಆ ಮಾತು ತನ್ನನ್ನು ಮೂದಲಿಸಿದ ಹಾಗಾಗಲು ವಿದ್ವಿಷ್ಟವಿದ್ರಾವಣನಾದ ಅರ್ಜುನನು ಹೀಗೆಂದನು
ಚಂ|| ಎರೆದನ ಪೆಂಪುವೇೞ್ವೊಡನಲಂ ಪೊಣರ್ವಾತನ ಪೆಂಪುವೇೞ್ವೊಡಾ
ಸುರಪತಿ ಕೊಟ್ಟ ತಾಣದೆಡೆವೇೞ್ವೊಡಮಾ ಯಮುನಾನದೀ ತಟಾಂ|
ತರಮೊಸೆದಿತ್ತನಾನೆರೆಯೆ ಕೇಳ್ವನಿಳಾಧರನೀನದರ್ಕೆ ಮಾ
ತೆರಡಣಮಾಡಲಾಗದಿರು ಸೈಪಿನೊಳಲ್ಲದೆ ಕೂಡಿ ಬರ್ಕುಮೇ|| ೭೩ ||
ಪದ್ಯ-೭೩:ಪದವಿಭಾಗ-ಅರ್ಥ:ಎರೆದನ ಪೆಂಪು ವೇೞ್ವೊಡೆ ಅನಲಂ (ಬೇಡಿದವನ ಶ್ರೇಷ್ಠತೆಯನ್ನು ಹೇಳುವುದಾದರೆ ಅಗ್ನಿದೇವ)ಪೊಣರ್ವಾತನ ಪೆಂಪು ವೇೞ್ವೊಡೆ ಆ ಸುರಪತಿ (ಸಾಕ್ಷಾತ್ ದೇವೇಂದ್ರ) ಕೊಟ್ಟ ತಾಣದ ಎಡೆ ವೇೞ್ವೊಡಂ ಆ ಯಮುನಾನದೀ ತಟಾಂತರಂ (ಮಾತು ಕೊಟ್ಟ ಸ್ಥಳವನ್ನು ಹೇಳುವುದಾದರೆ ಪವಿತ್ರವಾದ ಯಮುನಾನದೀದಡಪ್ರದೇಶ;) ಒಸೆದು ಇತ್ತನಾನ್ (ಸಂತೋಷರಿಂದ ಕೊಟ್ಟವನು ನಾನು), ಎರೆಯೆ ಕೇಳ್ವನು ಇಳಾಧರ ನೀನು (ಕೊಟ್ಟಾಗ ಕೇಳಿಸಾಕ್ಷಿಯಾಗಿದ್ದವನು ಭೂಧರನಾದ ನೀನು; ) ಅದರ್ಕೆ ಮಾತೆರಡಣಂ (ಅದಕ್ಕೆ ಮಾತು ಎರಡು ಅಣಂ-ಸ್ವಲ್ಪವೂ) ಅಡಲಾಗದು, ಇರು ಸೈಪಿನೊಳಲ್ಲದೆ ಕೂಡಿ ಬರ್ಕುಮೇ (ಇಂತಹ ಸಂದರ್ಭವು ಅದೃಷ್ಟದಿಂದಲ್ಲದೆ ಕೂಡಿಬರುತ್ತದೆಯೇ?)
ಪದ್ಯ-೭೩:ಅರ್ಥ: ಬೇಡಿದವನ ಶ್ರೇಷ್ಠತೆಯನ್ನು ಹೇಳುವುದಾದರೆ ಅಗ್ನಿದೇವ, ಯುದ್ಧಮಾಡುವವನ ಹಿರಿಮೆಯನ್ನು ಹೇಳುವುದಾದರೆ ಸಾಕ್ಷಾತ್ ದೇವೇಂದ್ರ, ಮಾತು ಕೊಟ್ಟ ಸ್ಥಳವನ್ನು ಹೇಳುವುದಾದರೆ ಪವಿತ್ರವಾದ ಯಮುನಾನದೀದಡಪ್ರದೇಶ; ಪ್ರೀತಿಯಿಂದ ಕೊಟ್ಟವನು ನಾನು; ಕೊಟ್ಟಾಗ ಕೇಳಿ ಸಾಕ್ಷಿಯಾಗಿದ್ದವನು ಭೂಧರನಾದ ನೀನು; ಅದಕ್ಕೆ ಸ್ವಲ್ಪವೂ ಎರಡು ಮಾತನಾಡಕೂಡದು; ಇಂತಹ ಸಂದರ್ಭವು ಅದೃಷ್ಟದಿಂದಲ್ಲದೆ ಕೂಡಿಬರುತ್ತದೆಯೇ?
ಮ|| ದನುಜಾರೀ ದಿವಿಜೇಂದ್ರ ಶಾಶ್ವತಗುಣಾ ನಿನ್ನಳ್ಕದೇಂ ಬೇಡಿದಾ
ನನಲಂ ತೀರ್ಥ ಸಮೀಪಮಂಬುನಿವಹ ವ್ಯಾಳೋಳ ಕಾಳಿಂದಿಯಾ|
ವನಮುಂ ಕೇಳ್ದುವು ಭೂತಮಯ್ದುಮಱಿಗುಂ ಕೊಟ್ಟಿರ್ದುದಾದಂತಱಿಂ
ದೆನಗಿಂ ಮಾಣ್ಬುದು ಸೂೞೆ ಖಾಂಡವಮನಾಂ ತಳ್ವಿಲ್ಲದಿಂದೂಡುವೆಂ|| ೭೪||
ಪದ್ಯ-೭೪:ಪದವಿಭಾಗ-ಅರ್ಥ:ದನುಜಾರೀ (ಶ್ರೀಕೃಷ್ಣನೇ) ದಿವಿಜೇಂದ್ರ ಶಾಶ್ವತಗುಣಾ (ದೇವೇಂದ್ರನಂತೆ ಶಾಶ್ವತವಾದ ಗುಣಗಳುಳ್ಳವನೇ,) ನಿನ್ನ ಅಳ್ಕದೇಂ (ನಿನ್ನ ಅಂಜಿಕೆಯೇನು?) ಬೇಡಿದಾನ್ ಅನಲಂ ತೀರ್ಥ ಸಮೀಪಂ (ಪುಣ್ಯತೀರ್ಥಕ್ಕೆ ಸಮೀಪದಲ್ಲಿ, ) ಅಂಬುನಿವಹ ವ್ಯಾಳೋಳ ಕಾಳಿಂದಿಯು (ಜಲರಾಶಿಯಿಂದ ಸಂಚರಿಸುತ್ತಿರುವ ಯಮುನಾನದಿಯ) ಆ ವನಮುಂ ಕೇಳ್ದುವು (ಈ ಕಾಡುಗಳೂ ನಾನಾಡಿದ ಮಾತುಗಳನ್ನು ಕೇಳಿವೆ) ಭೂತಂ ಅಯ್ದುಂ ಅಱಿಗುಂ (ಪಂಚಭೂತಗಳೂ ತಿಳಿದಿವೆ) ಕೊಟ್ಟಿರ್ದುದು ಆದ ಅಂತಱಿಂದ (ಮಾತನ್ನ ಕೊಟ್ಟಾಗಿರುವುರಿಂದ) ಎನಗಿಂ ಮಾಣ್ಬುದು ಸೂೞೆ (ಎನಗೆ ಮಾಣ್- ಇಲ್ಲ ಎನ್ನುವುದು ಸರಿಯೇ- ಸರಿಯಲ್ಲ - ಕೆಟ್ಟದು) ಖಾಂಡವಮನು ಆಂ ತಳ್ವಿಲ್ಲದಿಂದ ಊಡುವೆಂ (ಖಾಂಡವವನವನ್ನು ನಾನು ತಡೆಯಿಲ್ಲದೆ/ ತಡವಿಲ್ಲದೆ ಉಣಿಸುತ್ತೇನೆ)
ಪದ್ಯ-೭೪:ಅರ್ಥ: ದನುಜರ ವೈರಿಯಾದ ಶ್ರೀಕೃಷ್ಣನೇ, ದೇವೇಂದ್ರನಂತೆ ಶಾಶ್ವತವಾದ ಗುಣಗಳುಳ್ಳವನೇ, ನಿನ್ನ ಅಂಜಿಕೆಯೇನು? ಬೇಡಿದವನು ಅಗ್ನಿ, ಪುಣ್ಯತೀರ್ಥಕ್ಕೆ ಸಮೀಪದಲ್ಲಿ, ಜಲರಾಶಿಯಿಂದ ಸಂಚರಿಸುತ್ತಿರುವ ಯಮುನಾನದಿಯ ಸಮೀಪವಿರುವ ಈ ಕಾಡುಗಳೂ ನಾನಾಡಿದ ಮಾತುಗಳನ್ನು ಕೇಳಿವೆ. ನಾನು ಮಾತು ಕೊಟ್ಟಿರುವುದನ್ನು ಪಂಚಭೂತಗಳೂ ತಿಳಿದಿವೆ. ಮಾತನ್ನ ಕೊಟ್ಟಾಗಿರುವುರಿಂದ ಅದನ್ನು ಇಲ್ಲ ಎನ್ನುವುದು ನನಗೆ ಕ್ರಮವೇ? ಖಾಂಡವವನವನ್ನು ನಾನು ತಡವಿಲ್ಲದೆ ಉಣಿಸುತ್ತೇನೆ
ಉ|| ಒತ್ತಿ ತಱುಂಬಿ ನಿಂದ ರಿಪು ಭೂಜ ಸಮಾಜದ ಬೇರ್ಗಳಂ ನಭ
ಕ್ಕೆತ್ತದೆ ಬಂದು ತನ್ನ ಮರೆವೊಕ್ಕೊಡೆ ಕಾಯದೆ ಚಾಗದೊಳ್ಪಿನ|
ಚ್ಚೊತ್ತದೆ ಮಾಣ್ದು ಬಾೞ್ವ ಪುೞುವಾನಸನೆಂಬನಜಾಂಡಮೆಂಬುದೊಂ
ದತ್ತಿಯ ಪೆಣ್ಣೊಳಿರ್ಪ ಪುೞುವಲ್ಲದೆ ಮಾನಸನೇ ಮುರಾಂತಕಾ|| ೭೫||
ಪದ್ಯ-೭೫:ಪದವಿಭಾಗ-ಅರ್ಥ: ಒತ್ತಿ ತಱುಂಬಿ ನಿಂದ ರಿಪು ಭೂಜ ಸಮಾಜದ ಬೇರ್ಗಳಂ(ಮುನ್ನುಗ್ಗಿ ಅಡ್ಡಗಟ್ಟಿ ನಿಂತ ಶತ್ರುಗಳೆಂಬ ಮರಗಳ ಸಮೂಹದ ಬೇರುಗಳನ್ನು) ನಭಕ್ಕೆ ಎತ್ತದೆ ಬಂದು ತನ್ನ ಮರೆವೊಕ್ಕೊಡೆ ಕಾಯದೆ(ಮೂಲೋತ್ಪಾಟನೆ ಮಾಡದೆ, ಬಂದು ತನಗೆ ಶರಣಾಗತರಾದವರನ್ನು ರಕ್ಷಿಸದೆ) ಚಾಗದ ಒಳ್ಪಿನ ಅಚ್ಚೊತ್ತದೆ (ತ್ಯಾಗದ ಒಳ್ಳೆಯ ಗುಣವನ್ನು ಗಟ್ಟಿಗೊಳಿಸದೆ,) ಮಾಣ್ದು ಬಾೞ್ವ ಪುೞುವಾನಸನು ಎಂಬನು (ತಪ್ಪಿ ಬಾಳುವ ಹುಳುಸಮಾನ ಮಾನವನೆಂಬುವವನು) ಅಜಾಂಡಮೆಂಬುದು ಒಂದು ಅತ್ತಿಯ ಪೆಣ್ಣೊಳು ಇರ್ಪ (ಬ್ರಹ್ಮಾಂಡವೆಂಬ ಅತ್ತಿಯ ಹಣ್ಣಿನಲ್ಲಿರುವ) ಪುೞುವಲ್ಲದೆ ಮಾನಸನೇ ಮುರಾಂತಕಾ (ಹುಳುವಲ್ಲದೇ ಮನುಷ್ಯನೇ ಕೃಷ್ಣಾ!)
ಪದ್ಯ-೭೫:ಅರ್ಥ: ಮುನ್ನುಗ್ಗಿ ಅಡ್ಡಗಟ್ಟಿ ನಿಂತ ಶತ್ರುಗಳೆಂಬ ಮರಗಳ ಸಮೂಹದ ಬೇರುಗಳನ್ನು ಮೂಲೋತ್ಪಾಟನೆ ಮಾಡದೆ, ಬಂದು ತನಗೆ ಶರಣಾಗತರಾದವರನ್ನು ರಕ್ಷಿಸದೆ, ತ್ಯಾಗದ ಒಳ್ಳೆಯ ಗುಣವನ್ನು ಗಟ್ಟಿಗೊಳಿಸದೆ, ತಪ್ಪಿ ಬಾಳುವ ಹುಳುಸಮಾನ ಮಾನವನೆಂಬುವವನು ಬ್ರಹ್ಮಾಂಡವೆಂಬ ಅತ್ತಿಯ ಹಣ್ಣಿನಲ್ಲಿರುವ ಹುಳುವಲ್ಲದೇ ಮನುಷ್ಯನೇ ಕೃಷ್ಣಾ! (ಈ ವಿಶ್ವ ಒಂದು ಅತ್ತಿಯ ಮರ ಇದ್ದಹಾಗೆ, ಆ ಅತ್ತಿಯ ಮರದಲ್ಲಿ ಇರುವ ಸಾವಿರಾರು ಹಣ್ಣುಗಳೇ ಬ್ರಹ್ಮಾಂಡಗಳು; ಅದರಲ್ಲಿ ಇವನಿರುವುದು ಒಂದು ಅತ್ತಿಯ ಹಣ್ನಿನಂತಿರುವ ಬ್ರಹ್ಮಾಂಡದ ಒಳಗೆ, ಅತ್ತಿಯ ಹಣ್ಣಿನ ಒಳಗೆ ಅದೇ ಜಗತ್ತೆಂದು ತೀದಿರುವ ಸಾವಿರಾರು ಹುಳುಗಳಿವೆ; ಅದರಂತೆ ಮನುಷ್ಯ ಆ ಹುಳುವಿನಂತೆ ಅರ್ಥವಿಲ್ಲದೆ ಬದುಕಿದಂತಾಗುತ್ತದೆ - ಕೊಟ್ಟ ಮಾತಿಗೆ ತಪ್ಪಿ ಬದುಕಿದವನ ಬಾಳು ಎಂದು ಅರ್ಜುನ ಕೃಷ್ಣನಿಗೆ ಹೇಳಿದ)
ವ|| ಎಂದು ಮಱುಮಾತಿಂಗೆಡೆಯಿಲ್ಲದಂತಿರೆ ನುಡಿದ ಪಡೆಮೆಚ್ಚೆ ಗಂಡನ ಗಂಡವಾತುಮಂ ನನ್ನಿವಾತುಮಂ ಮುರಾಂತಕಂ ಮೆಚ್ಚಿ-
ವಚನ:ಪದವಿಭಾಗ-ಅರ್ಥ:ಎಂದು ಮಱುಮಾತಿಂಗೆ ಎಡೆಯಿಲ್ಲದಂತಿರೆ (ಅವಕಾಶವಿಲ್ಲದಂತೆ ) ನುಡಿದ ಪಡೆಮೆಚ್ಚೆ ಗಂಡನ ಗಂಡವಾತುಮಂ (ಅರ್ಜುನನ ರಾಕ್ರಮದ ಮಾತನ್ನೂ) ನನ್ನಿವಾತುಮಂ (ಸತ್ಯವಾಕ್ಕನ್ನೂ) ಮುರಾಂತಕಂ ಮೆಚ್ಚಿ-
ವಚನ:ಅರ್ಥ:ಎಂದು ಮರುಮಾತಿಗೆ ಅವಕಾಶವಿಲ್ಲದಂತೆ ಮಾತನಾಡಿದ ಪಡೆಮೆಚ್ಚೆಗಂಡನಾದ ಅರ್ಜುನನ ಪರಾಕ್ರಮದ ಮಾತನ್ನೂ ಸತ್ಯವಾಕ್ಕನ್ನೂ ಕೃಷ್ಣನು ಮೆಚ್ಚಿ- (ಮೆಚ್ಚಿದನು).
ಮ|| ಸಮಕಟ್ಟಿಂಗೊರೆಗಾರುಮಿಲ್ಲರಿಗ ಕೇಳ್ ನಿನ್ನೊಳ್ ಸಮಂ ಧಾತ್ರಿಯೊಳ್
ಹಿಮಕೃದ್ಭೂಧರದಂತೆ ನಿನ್ನ ಗುಣಸಂದೋಹಂಗಳಂ ಕಾಣಲ|
ಕ್ಕುಮೆ ಮತ್ತೊರ್ವನೊಳಾಗದೆಂತೆನೆ ಸಮಸ್ತೋರ್ವೀಧರಾಶೇಷ ಶೇ
ಷ ಮಹಾ ನಾಗ ಫಣಾಮಣಿ ದ್ಯುತಿಯನೇಂ ಖದ್ಯೋತದೊಳ್ ಕಾಣ್ಬರೇ|| ೭೬ ||
ಪದ್ಯ-೭೬:ಪದವಿಭಾಗ-ಅರ್ಥ:ಸಮಕಟ್ಟಿಂಗ ಒರೆಗಾರುಂ ಇಲ್ಲ ಅರಿಗ ಕೇಳ್ (ಅರ್ಜುನನೇ ಕೇಳು, ನಿನ್ನ ಹೋಲಿಕೆಗೂ ಸಮಾನತೆಗೂ ಬರುವವರು ಯಾರೂ ಇಲ್ಲ) ನಿನ್ನೊಳ್ ಸಮಂ ಧಾತ್ರಿಯೊಳ್ ಹಿಮಮಕೃದ್ಭೂಧರದಂತೆ (ಹಿಮವತ್ಪರ್ವತದಂತಿರುವ ನಿನ್ನ ಸಮ ಈ ಭೂಮಿಯಲ್ಲಿ) ನಿನ್ನ ಗುಣಸಂದೋಹಂಗಳಂ ಕಾಣಲಕ್ಕುಮೆ ಮತ್ತೊರ್ವನೊಳು ಆಗ ಅದೆಂತೆನೆ(ಗುಣರಾಶಿಯನ್ನು ಮತ್ತೊಬ್ಬನಲ್ಲಿ ಕಾಣಲಾಗುವುದೇ- ಇಲ್ಲ.ಅದು ಹೇಗೆಂದರೆ ) ಸಮಸ್ತೋರ್ವೀಧರಾಶೇಷ ಶೇಷ ಮಹಾನಾಗ ಫಣಾಮಣಿ ದ್ಯುತಿಯನು (ಸಮಸ್ತ ಭೂಮಂಡಲವನ್ನು ಧರಿಸಿರುವ ಆದಿಶೇಷನೆಂಬ ಮಹಾಸರ್ಪದ ಹೆಡೆಯಲ್ಲಿರುವ ರತ್ನಕಾಂತಿಯನ್ನು) ಏಂ ಖದ್ಯೋತದೊಳ್ ಕಾಣ್ಬರೇ (ಮಿಂಚುಹುಳುವಿನಲ್ಲಿ ಕಾಣಬಹುದೇ?)
ಪದ್ಯ-೭೬:ಅರ್ಥ: ಎಲೈ ಅರಿಗ/ ಅರ್ಜುನನೇ ಕೇಳು, ಈ ಭೂಮಿಯಲ್ಲಿ ನಿನ್ನ ಹೋಲಿಕೆಗೂ ಸಮಾನತೆಗೂ ಬರುವವರು ಯಾರೂ ಇಲ್ಲ ; ಹಿಮವತ್ಪರ್ವತದಂತಿರುವ ನಿನ್ನ ಗುಣರಾಶಿಯನ್ನು ಮತ್ತೊಬ್ಬನಲ್ಲಿ ಕಾಣಲಾಗುವುದಿಲ್ಲ ಅದು ಹೇಗೆಂದರೆ ಸಮಸ್ತ ಭೂಮಂಡಲವನ್ನು ಧರಿಸಿರುವ ಆದಿಶೇಷನೆಂಬ ಮಹಾಸರ್ಪದ ಹೆಡೆಯಲ್ಲಿರುವ ರತ್ನಕಾಂತಿಯನ್ನು ಮಿಂಚುಹುಳುವಿನಲ್ಲಿ ಕಾಣಬಹುದೇ?
ಚಂ|| ಮುನಿಯಿಸಿದಂ ಕರಂ ರಿಡಿಯನಪ್ಪುದು (ಪಿರಿಯನಪ್ಪುದು) ಬೇೞ್ಪನ ಬೇೞ್ಪ ವಸ್ತು ಕಾಂ
ಚನಗಿರಿಯಿಂದಮಗ್ಗಳಮೆನಿಪ್ಪುದದಾದೊಡಮೇನೊ ಜೀವಮು|
ಳ್ಳಿನಮಿಱಿದರ್ಥಮುಳ್ಳಿನೆಗಮಿತ್ತು ನೆಗೞ್ತೆಯನಾಂಪುದೆಂಬ ಪೆಂ
ಪಿನ ಸಮಕಟ್ಟು ಕಣ್ಗೆ ದೊರೆಯಾರರಿಕೇಸರಿ ನಿನ್ನವೋಲ್ ಪೆಱಂ|| ೭೭ ||
ಪದ್ಯ-೭೭:ಪದವಿಭಾಗ-ಅರ್ಥ:ಮುನಿಯಿಸಿದಂ ಕರಂ ಪಿರಿಯನಪ್ಪುದು (ಕೆರಳಿಸಿದವನು ವಿಶೇಷ ದೊಡ್ಡವನಹುದು) ಬೇೞ್ಪನ ಬೇೞ್ಪ ವಸ್ತು (ಬೇಡುವವನು ಬೇಡಿದ ವಸ್ತು) ಕಾಂಚನಗಿರಿಯಿಂದಂ ಅಗ್ಗಳಮೆನಿಪ್ಪುದು ಅದಾದೊಡಂ ಏನೊ (ಮೇರುಪರ್ವತಕ್ಕಿಂತಲೂ ಅತಿಶಯವಾದುದು. ಆದರೇನು?) ಜೀವಮುಳ್ಳಿನಂ ಇಱಿದು ಅರ್ಥಮುಳ್ಳಿನೆಗಂ ಇತ್ತು (ಜೀವವಿರುವವರೆಗೂ ಶೌರ್ಯಪ್ರದರ್ಶನ ಮಾಡಿ ಧನವಿರುವವರೆಗೂ ದಾನಮಾಡಿ) ನೆಗೞ್ತೆಯನಾಂಪುದೆಂಬ ಪೆಂಪಿನ ಸಮಕಟ್ಟು ಕಣ್ಗೆ ದೊರೆ (ಸಮಾನ) ಯಾರ್ ಅರಿಕೇಸರಿ ನಿನ್ನವೋಲ್ ಪೆಱಂ (ಕೀರ್ತಿಯನ್ನು ಪಡೆಯಬೇಕೆಂಬ ಹಿರಿಯ ಗುರಿ ನಿನ್ನ ದೃಷ್ಟಿಗಿದೆ. ನಿನಗೆ ಸಮಾನರಾದವರು ಪೆರಂ- ಬೇರೆ ಯಾರಿದ್ದಾರೆ? )
ಪದ್ಯ-೭೭:ಅರ್ಥ: ನಿನ್ನನ್ನು ಕೆರಳಿಸಿದವನು ವಿಶೇಷ ದೊಡ್ಡವನಹುದು. ಬೇಡುವವನು ಬೇಡಿದ ವಸ್ತು ಮೇರುಪರ್ವತಕ್ಕಿಂತಲೂ ಅತಿಶಯವಾದುದು. ಆದರೇನು? ಜೀವವಿರುವವರೆಗೂ ಶೌರ್ಯಪ್ರದರ್ಶನ ಮಾಡಿ ಧನವಿರುವವರೆಗೂ ದಾನಮಾಡಿ, ಕೀರ್ತಿಯನ್ನು ಪಡೆಯಬೇಕೆಂಬ ಹಿರಿಯ ಗುರಿ ನಿನ್ನ ದೃಷ್ಟಿಗಿದೆ. ನಿನಗೆ ಸಮಾನರಾದವರು ಬೇರೆ ಯಾರಿದ್ದಾರೆ? ಯಾರೂ ಇಲ್ಲ!
ವ|| ಎಂದು ತನಗೆ ಕೊಟ್ಟ ಕೋಡಿಂಗೊಡಂಬಟ್ಟ ದಿತಿಜಕುಲದಾವಾನಲನುಮನರಾತಿ ಕಾಲಾನಲನುಮನನಲನಿಷ್ಟಾರ್ಥಸಿದ್ಧಿಯಕ್ಕು ಮೆಂದು ಪರಸಿ ಮನಃಪವನವೇಗದಿಂ ಪಾಲ್ಗಡಲನೆಯ್ದಿ ತನ್ನ ಬಯ್ತಿಟ್ಟ ದಿವ್ಯ ಸಂಭವಂಗಳಪ್ಪ ಶ್ವೇತಾಶ್ವಂಗಳೊಳ್ ಪೂಡಿದ ದಿವ್ಯ ರಥಮುಮಂ ದಧೀಚಿ ಗಂಡಸ್ಥಮಪ್ಪ ಗಾಂಡೀವಮೆಂಬ ಬಿಲ್ಲುಮಂ ದಿವ್ಯಶರಂಗಳೊಳ್ ತೆಕ್ಕನೆ ತೀವಿದ ತವದೊಣೆಗಳುಮಂ ತಂದೆನ್ನ ಪ್ರತಿಜ್ಞೆಯಂ ತೀರ್ಚುವೊಡಮಿಂದ್ರನಂ ಗೆಲ್ವೊಡಮಿವನಮೋಘಂ ಕೆಯ್ಕೊಳಲ್ವೇೞ್ಕುಮೆಂದೊಡತಿರಥಮಥನನಗ್ನಿದೇವಂಗೆ ಪೊಡವಟ್ಟು ಕೆಯ್ಕೊಂಡು ಬೃಹಂದಳನೆಂಬ ಸಾರಥಿವೆರಸು ರಥಮನೇಱಲೊಡಂ-
ವಚನ:ಪದವಿಭಾಗ-ಅರ್ಥ:ಎಂದು ತನಗೆ ಕೊಟ್ಟ ಕೋಡಿಂಗೆ (ಕೊಡುಗೆಗೆ) ಒಡಂಬಟ್ಟ (ಒಪ್ಪಿ) ದಿತಿಜಕುಲದಾವಾನಲನುಮಂ (ದಿತಿಯಕುಲದವರಿಗೆ -ಅಗ್ನಿ), ಆರಾತಿ (ಶತ್ರುಗಳಿಗೆ ಪ್ರಳಯಾಗ್ನಿ) ಕಾಲಾನಲನುಮಂ (ಕೃಷ್ಣ ಮತ್ತು ಅರ್ಜುನ) ಅನಲನ್ (ಅಗ್ನಿಯು) ಇಷ್ಟಾರ್ಥಸಿದ್ಧಿಯಕ್ಕು ಮೆಂದು ಪರಸಿ (ಹರಸಿ) ಮನಃಪವನವೇಗದಿಂ (ಮನ- ವಾಯು ವೇಗದಿಂದ) ಪಾಲ್ಗಡಲನು ಎಯ್ದಿ (ಕ್ಷೀರಸಮುದ್ರವನ್ನು ಸೇರಿ) ತನ್ನ ಬಯ್ತಿಟ್ಟ ದಿವ್ಯ ಸಂಭವಂಗಳಪ್ಪ (ದೈವಾಂಶ ಸಂಭೂತಗಳಾದ) ಶ್ವೇತಾಶ್ವಂಗಳೊಳ್ ಪೂಡಿದ ದಿವ್ಯ ರಥಮುಮಂ (ಬಿಳಿಯ ಕುದುರೆಗಳನ್ನು ಹೂಡಿದ ದಿವ್ಯರಥವನ್ನೂ) ದಧೀಚಿ ಗಂಡಸ್ಥಮಪ್ಪ ಗಾಂಡೀವಮೆಂಬ ಬಿಲ್ಲುಮಂ, ದಿವ್ಯಶರಂಗಳೊಳ್ ತೆಕ್ಕನೆ ತೀವಿದ ತವದೊಣೆಗಳುಮಂ (ಬಾಣಗಳಿಂದ ಪೂರ್ಣವಾಗಿ ತುಂಬಿದ ಅಕ್ಷಯತೂಣೀರಗಳನ್ನೂ / ಬತ್ತಳಿಕೆಗಳನ್ನೂ) ತಂದು ಎನ್ನ ಪ್ರತಿಜ್ಞೆಯಂ ತೀರ್ಚುವೊಡಂ ಇಂದ್ರನಂ ಗೆಲ್ವೊಡಂ (ತನ್ನ ಪ್ರತಿಜ್ಞೆಯನ್ನು ತೀರಿಸುವುದಕ್ಕೆ ಹಾಗೂ ಇಂದ್ರನನ್ನು ಗೆಲ್ಲುವುದಕ್ಕೆ) ಇವನು ಅಮೋಘಂ ಕೆಯ್ಕೊಳಲ್ವೇೞ್ಕುಂ (ಸ್ವೀಕರಿಸಬೇಕು) ಎಂದೊಡೆ ಅತಿರಥಮಥನನು ಅಗ್ನಿದೇವಂಗೆ ಪೊಡವಟ್ಟು ಕೆಯ್ಕೊಂಡು (ನಮಸ್ಕಾರ ಮಾಡಿ ಅವನ್ನು ಸ್ವೀಕರಿಸಿ) ಬೃಹಂದಳನೆಂಬ ಸಾರಥಿವೆರಸು (ಸಾರಥಿಯೊಡನೆ ) ರಥಮನೇಱಲು ಒಡಂ-
ವಚನ:ಅರ್ಥ:ಎಂದು ತನಗೆ ಕೊಟ್ಟ ಕೊಡುಗೆಗೆ ಒಪ್ಪಿ, ದೈತ್ಯರ ಕುಲಕ್ಕೆ ಕಾಡುಗಿಚ್ಚಿನಂತಿರುವ ಕೃಷ್ಣನನ್ನೂ, ಶತ್ರುಗಳಿಗೆ ಪ್ರಳಯಾಗ್ನಿಯಂತಿರುವ ಅರ್ಜುನನನ್ನೂ, ಅಗ್ನಿಯು ‘ನಿಮ್ಮ ಇಷ್ಟಾರ್ಥ ಸಿದ್ಧಿಯಾಗಲಿ’ ಎಂದು ಹರಸಿ ಮನೋವಾಯುವೇಗದಿಂದ ಕ್ಷೀರಸಮುದ್ರವನ್ನು ಸೇರಿ ಅಲ್ಲಿ ತಾನು ಬಚ್ಚಿಟ್ಟಿದ್ದ ದೈವಾಂಶ ಸಂಭೂತಗಳಾದ ಬಿಳಿಯ ಕುದುರೆಗಳನ್ನು ಹೂಡಿದ ದಿವ್ಯರಥವನ್ನೂ ದಧೀಚಿಯ ಕಪೋಲಪ್ರದೇಶದಿಂದ ರಚಿತವಾದ ಗಾಂಡೀವವೆಂಬ ಬಿಲ್ಲನ್ನೂ ದಿವ್ಯವಾದ ಬಾಣಗಳಿಂದ ಪೂರ್ಣವಾಗಿ ತುಂಬಿದ ಅಕ್ಷಯತೂಣೀರಗಳನ್ನೂ (ಬತ್ತಳಿಕೆಗಳನ್ನೂ) ತಂದು ತನ್ನ ಪ್ರತಿಜ್ಞೆಯನ್ನು ತೀರಿಸುವುದಕ್ಕೆ ಹಾಗೂ ಇಂದ್ರನನ್ನು ಗೆಲ್ಲುವುದಕ್ಕೆ ಅಮೋಘವಾದ ಇವುಗಳನ್ನು ಸ್ವೀಕರಿಸಬೇಕು ಎಂದು ಹೇಳಲು, ಅತಿರಥಮಥನನಾದ ಅರ್ಜುನನು ಅಗ್ನಿದೇವನಿಗೆ ನಮಸ್ಕಾರ ಮಾಡಿ ಅವನ್ನು ಸ್ವೀಕರಿಸಿ ಬೃಹಂದಳನೆಂಬ ಸಾರಥಿಯೊಡನೆ ರಥವನ್ನು ಏರಲು ಒಡನೆ-
ಉ|| ಪಾವಕನೞ್ವಿ ಖಾಂಡವಮನುಂಡಪನರ್ಜುನನೂಡಿದಪ್ಪನೈ
ರಾವತವಾಹನಂ ನೆರೆದು ಸಾಧನ ಸಂಯುತನಾಂಪನಲ್ಲಿ ನಾ|
ನಾ ವಿಧ ಯುದ್ಧಮುಂಟೆನುತೆ ಶೈಬ್ಯ ಬಳಾಹಕ ಮೇಘವರ್ಣ ಸು
ಗ್ರೀವ ಹಯಂಗಳಿಂದೆಸೆವುದಂ ರಥಮಂ ಹರಿ ತಾನುಮೇಱಿದಂ|| ೭೮ ||
ಪದ್ಯ-೭೮:ಪದವಿಭಾಗ-ಅರ್ಥ:ಪಾವಕನು ಅೞ್ವಿ (ಅಗ್ನಿಯು ಸುಟ್ಟು) ಖಾಂಡವಮಂ ಉಂಡಪಂ (ಉಣ್ಣುತ್ತಾನೆ) ಅರ್ಜುನನು ಊಡಿದಪ್ಪನು(ಉಣಿಸುತ್ತಾನೆ) ಐರಾವತವಾಹನಂ (ಇಂದ್ರನು) ನೆರೆದು ಸಾಧನ ಸಂಯುತನಾಂಪನಲ್ಲಿ ( ಸಮರ್ಥನಾಗಿ ಸೈನ್ಯಸಮೇತನಾಗಿ ಅಲ್ಲಿ ಸೇರುವನು) ನಾನಾ ವಿಧ ಯುದ್ಧಂ ಉಂಟು ಎನುತೆ (ಎನ್ನುತ್ತ) ಶೈಬ್ಯ ಬಳಾಹಕ ಮೇಘವರ್ಣ ಸುಗ್ರೀವ ಹಯಂಗಳಿಂದ ಎಸೆವುದಂ ರಥಮಂ ಹರಿ ತಾನುಂ ಏಱಿದಂ (ರಥವನ್ನು ಕೃಷ್ಣನು ತಾನೂ ಹತ್ತಿದನು)
ಪದ್ಯ-೭೮:ಅರ್ಥ: ಅಗ್ನಿಯು ಖಾಂಡವವನ್ನು ಸುಟ್ಟು ಉಣ್ಣುತ್ತಾನೆ, ಅರ್ಜುನನು ಉಣಿಸುತ್ತಾನೆ. ಐರಾವತವಾಹನನಾದ ಇಂದ್ರನು ಸೈನ್ಯಸಮೇತನಾಗಿ ಸೇರಿ ಪ್ರತಿಭಟಿಸುತ್ತಾನೆ. ಇಲ್ಲಿ ನಾನಾವಿಧವಾದ ಯುದ್ಧವುಂಟು ಎನ್ನುತ್ತ ಶೈಬ್ಯ, ಬಳಾಹಕ, ಮೇಘವರ್ಣ, ಸುಗ್ರೀವವೆಂಬ ಕುದುರೆಗಳಿಂದ ಪ್ರಕಾಶಮಾನವಾದ ರಥವನ್ನು ಕೃಷ್ಣನು ತಾನೂ ಹತ್ತಿದನು.
ವ|| ಅಂತು ದಾರುಕಂ ರಥಮಂ ಚೋದಿಸಲೊಡಂ-
ವಚನ:ಪದವಿಭಾಗ-ಅರ್ಥ:ಅಂತು ದಾರುಕಂ ರಥಮಂ ಚೋದಿಸಲು (ನಡೆಸಲು) ಒಡಂ ಕೂಡಲೆ-
ವಚನ:ಅರ್ಥ:ದಾರುಕನು ರಥವನ್ನು ನಡೆಸಲು ಕೂಡಲೆ-
ಕಂ|| ಚೋದಿಸುವುದುಮಿರ್ವರ ರಥ
ಚೋದಕರವರೆರಡು ರಥದ ಗಾಲಿಯ ಕೋಳಿಂ|
ದಾದ ರಜಪಟಲಂ ಕವಿ
ದಾದಮೆ ತೀವಿದುದು ದಿವಿಜವಧುವಿರ ಕಣ್ಣೊಳ್|| ೭೯||
ಪದ್ಯ-೭೯:ಪದವಿಭಾಗ-ಅರ್ಥ:ಚೋದಿಸುವುದುಂ ಇರ್ವರ ರಥಚೋದಕರ್ ಅವರ ಎರಡು ರಥದ ಗಾಲಿಯ ಕೋಳಿಂದಾದ ರಜಪಟಲಂ (ಗಾಲಿಗಳ ಆಕ್ರಮಣದಿಂದಾದ ಧೂಳಿನ ಸಮೂಹವು) ಕವಿದು ಅದಮೆ (ಬಹಳ) ತೀವಿದುದು (ತುಂಬಿತು) ದಿವಿಜ ವಧುವಿರ ಕಣ್ಣೊಳ್ (ದೇವಸ್ತ್ರೀಯರ ಕಣ್ಣಲ್ಲಿ ಬಹಳವಾಗಿ ತುಂಬಿತು)
ಪದ್ಯ-೭೯:ಅರ್ಥ: ಸಾರಥಿಗಳು ನೆಡೆಸಲು ಎರಡು ರಥದ ಗಾಲಿಗಳ ಆಕ್ರಮಣದಿಂದಾದ ಧೂಳಿನ ಸಮೂಹವು ಮುತ್ತಿ ಮುಸುಕಿ ದೇವಸ್ತ್ರೀಯರ ಕಣ್ಣಲ್ಲಿ ಬಹಳವಾಗಿ ತುಂಬಿತು
ವ|| ಅಂತೆಯ್ದಿ ಯಮುನಾನದಿಯ ತೆಂಕಣ ದೆಸೆಯೊಳ್ ನೂಱು ಯೋಜನದಗಲದೊಳಮನಿತೆ ನೀಳದೊಳಂ ನೆರೆದು-
ವಚನ:ಪದವಿಭಾಗ-ಅರ್ಥ:ಅಂತು ಎಯ್ದಿ ಯಮುನಾನದಿಯ ತೆಂಕಣ ದೆಸೆಯೊಳ್ (ದಕ್ಷಿಣದಿಕ್ಕಿನಲ್ಲಿ) ನೂಱು ಯೋಜನದ ಅಗಲದೊಳಂ ಅನಿತೆ ನೀಳದೊಳಂ ನೆರೆದು(ಅಷ್ಟೇ ಉದ್ದವೂ ಆವರಿಸಿತ್ತು-ತುಂಬಿತ್ತು -
ವಚನ:ಅರ್ಥ:ಹಾಗೆ ಬಂದು, ಯಮುನಾನದಿಯ ದಕ್ಷಿಣದಿಕ್ಕಿನಲ್ಲಿ ನೂರು ಯೋಜನದಗಲವೂ ಅಷ್ಟೇ ಉದ್ದವೂ ಆಗಿತ್ತು ಆ ಖಾಂಡವವನ.
ಮ|| ಕಕುಭಾಶೋಕ ಕದಂಬ ಲುಂಗ ಲವಲೀ ಭೂಜಾರ್ಜುನಾನೋಕಹ
ಪ್ರಕರಂ ಪುಷ್ಟಿತ ಹೇಮಪಂಕಜ ರಜಸ್ಸಂಸಕ್ತ ಭೃಂಗಾಂಗನಾ|
ನಿಕರಂ ಸಾರಸ ಹಂಸ ಕೋಕಿಳ ಕುಳಧ್ವಾನೋತ್ಕರಂ ಚೆಲ್ವನಾ
ಯ್ತು ಕರಂ ಸಕ್ತನಿಳಿಂಪ ದಂಪತಿಗಳಿಂದಾ ನಂದನಂ ನಂದನಂ|| ೮೦||
ಪದ್ಯ-೮೦:ಪದವಿಭಾಗ-ಅರ್ಥ:ಅಲ್ಲಿಯ ಮರಗಳು-: ಕಕುಭ ಅಶೋಕ ಕದಂಬ ಲುಂಗ ಲವಲೀ ಭೂಜ (ಅರನೆಲ್ಲಿ) ಅರ್ಜುನಾನೋಕಹ (ಬಿಳಿಯಅತ್ತಿ) ಪ್ರಕರಂ ಪುಷ್ಟಿತ ಹೇಮಪಂಕಜ (ಹೊಂದಾವರೆಯ) ರಜಸ್ಸಂಸಕ್ತ (ಪರಾಗಧೂಳಿನಲ್ಲಿ) ಭೃಂಗ ಅಂಗನಾ ನಿಕರಂ (ಹೊರಳಾಡಿರುವ ಹೆಣ್ಣುದುಂಬಿಗಳ ಗುಂಪುಗಳಿಂದಲೂ) ಸಾರಸ ಹಂಸ ಕೋಕಿಳ ಕುಳಧ್ವಾನೋತ್ಕರಂ (ಪಕ್ಷಿಸಮೂಹದ ಶಬ್ದರಾಶಿಯಿಂದಲೂ) ಚೆಲ್ವನಾಯ್ತು ಕರಂ (ಬಹಳ) ಸಕ್ತನಿಳಿಂಪ ದಂಪತಿಗಳಿಂದ (ಪರಸ್ಪರ ಆಸಕ್ತರಾದ ದೇವದಂಪತಿಗಳಿಂದಲೂ) ಆ ನಂದನಂ ನಂದನಂ(ಸುಂದರವಾಗಿ ಕಂಡಿತು)
ಪದ್ಯ-೮೦:ಅರ್ಥ:ಅಲ್ಲಿಯ ಮರಗಳು-: ಕೆಂಪುಮತ್ತಿ, ಅಶೋಕ, ಕದಂಬ, ಮಾತುಲುಂಗ, ಅರನೆಲ್ಲಿ, ಬಿಳಿಯಅತ್ತಿ ಮೊದಲಾದ ಮರಗಳ ಸಮೂಹಗಳಿಂದಲೂ ಪುಷ್ಪಭರಿತವಾದ ಹೊಂದಾವರೆಯ ಪರಾಗಧೂಳಿನಲ್ಲಿ ಹೊರಳಾಡಿರುವ ಹೆಣ್ಣುದುಂಬಿಗಳ ಗುಂಪುಗಳಿಂದಲೂ ಬಕ, ಹಂಸ, ಕೋಗಿಲೆ ಮೊದಲಾದ ಪಕ್ಷಿಸಮೂಹದ ಶಬ್ದರಾಶಿಯಿಂದಲೂ ಆನಂದವನ್ನುಂಟುಮಾಡುವ ಆ ಖಾಂಡವವನವು ಪರಸ್ಪರ ಆಸಕ್ತರಾದ ದೇವದಂಪತಿಗಳಿಂದಲೂ ಸುಂದರವಾಗಿ ಕಂಡಿತು.
ವ|| ಎನೆ ಸೊಗಯಿಸುವ ಖಾಂಡವವನಮಂ ವನರುಹನಾಭಂ ವಿಕ್ರಮಾರ್ಜುನಂಗೆ ತೊೞಲ್ದು ತೋಱಿ-
ವಚನ:ಪದವಿಭಾಗ-ಅರ್ಥ:ಎನೆ ಸೊಗಯಿಸುವ ಖಾಂಡವವನಮಂ ವನರುಹನಾಭಂ (ಕೃಷ್ಣನು) ವಿಕ್ರಮಾರ್ಜುನಂಗೆ (ಅರ್ಜುನನಿಗೆ) ತೊೞಲ್ದು ತೋಱಿ (ಸುತ್ತಾಡಿ ತೋರಿಸಲು)-
ವಚನ:ಅರ್ಥ:ಹಾಗೆ ಸೊಬಗಿನ ಖಾಂಡವವನವನ್ನು ಕೃಷ್ಣನು ಅರ್ಜುನನಿಗೆ ಸುತ್ತಾಡಿ ತೋರಿಸಲು- (ತೋರಿಸಿದನು)

ಮ|| ಅಲರಂ ನೋಯಿಸದೊಯ್ಯನೊಯ್ಯನಳಿಗಳ್ ಬಂಡುಣ್ಬುವಾಟಂದು ಬಂ ದಲೆಯಲ್ಕಣ್ಮದು ಗಾಳಿ ಸೂರ್ಯಕಿರಣಾನೀಕಕ್ಕಮೆಂದಪ್ಪೊಡಂ| ಸಲವಿಲ್ಲುದ್ಧತ ಸಿದ್ಧ ಖೇಚರರೆ ತಾಮಾಳ್ವೇರಿಯಾಗಿಂತು ನಿ ಚ್ಚಲುಮೋರಂತಿರೆ ಕಾವರೀ ದೊರೆತು ಕಾಪೀ ನಂದನಕ್ಕಿಂದ್ರನಾ|| ೮೧ ||

ಪದ್ಯ-೮೧:ಪದವಿಭಾಗ-ಅರ್ಥ:ಅಲರಂ (ಹೂವನ್ನು) ನೋಯಿಸದೆ ಒಯ್ಯನೊಯ್ಯನೆ ಅಳಿಗಳ್ ಬಂಡುಣ್ಬುವು (ಮೆಲ್ಲಮಲ್ಲನೆ ಜೇನುಪಾನಮಾಡುತ್ತವೆ), ಆಟಂದು (ಬಿರುಸಾಗಿ) ಬಂದು ಅಲೆಯಲ್ಕೆ ಅಣ್ಮದು ಗಾಳಿ (ಗಾಳಿಯು ನುಗ್ಗಿ ವೇಗವಾಗಿ ಬೀಸುವುದಿಲ್ಲ) ಸೂರ್ಯಕಿರಣ ಆನೀಕಕ್ಕಂ (ಸಮೂಹಗಳು) ಎಂದಪ್ಪೊಡಂ ಸಲವಿಲ್ಲ (ಎಂದೂ ಇಲ್ಲಿ ಪ್ರವೇಶಿಸುವುದಿಲ್ಲ) ಉದ್ಧತ ಸಿದ್ಧ ಖೇಚರರೆ (ಗರ್ವಿಷ್ಠರಾದ ಸಿದ್ಧಖೇಚರರೇ) ತಾಂ ಆಳ್ವೇರಿಯಾಗಿ ಇಂತು ನಿಚ್ಚಲುಂ ಓರಂತಿರೆ (ರಕ್ಷಕರಾಗಿ ಇದನ್ನು ನಿತ್ಯವೂ ಒಂದೇ ಕ್ರಮದಿಂದ) ಕಾವರು; ಈ ದೊರೆತು (ಈ ರೀತಿ ಇದೆ) ಕಾಪು ಈ ನಂದನಕ್ಕೆ ಇಂದ್ರನಾ (ಈ ಇಂದ್ರನ ವನಕ್ಕೆ ಕಾವಲು- ಈ ರೀತಿ ಇದೆ)
ಪದ್ಯ-೮೨:ಅರ್ಥ: ಇಲ್ಲಿ ದುಂಬಿಗಳು ಹೂವನ್ನು ನೋಯಿಸದೆ ಮೆಲ್ಲಮಲ್ಲನೆ ಜೇನುಪಾನಮಾಡುತ್ತವೆ. ಗಾಳಿಯು ನುಗ್ಗಿ ವೇಗವಾಗಿ ಬೀಸುವುದಿಲ್ಲ, ಸೂರ್ಯನ ಕಿರಣಸಮೂಹಗಳೂ ಎಂದೂ ಇಲ್ಲಿ ಪ್ರವೇಶಿಸುವುದಿಲ್ಲ. ಗರ್ವಿಷ್ಠರಾದ ಸಿದ್ಧಖೇಚರರೇ ರಕ್ಷಕರಾಗಿ ಇದನ್ನು ನಿತ್ಯವೂ ಒಂದೇ ಕ್ರಮದಿಂದ ಕಾಯುತ್ತಿದ್ದಾರೆ. ಇಂದ್ರನ ಖಾಂಡವವನಕ್ಕೆ ಕಾವಲು ಈ ರೀತಿಯಾಗಿದೆ
ಉ|| ಒಮ್ಮೆ ತೊೞಲ್ದು ನೋಡಿ ಬನಮಂ ಮಘವಂ ಶಚಿ ಪೂತ ಚೂತಮಂ
ನೆರ್ಮಿದಶೋಕವಲ್ಲರಿಯ ಪಲ್ಲವಮೊಂದನೆ ಕೊಯ್ದು ರಾಗದಿಂ|
ಸೋರ್ಮುಡಿಯೊಳ್ ತಗುಳ್ಚಿದೊಡೆ ಸೂೞನೆ ಬಾರಿಸಿದಂ ದಲೆಂದೊಡಿಂ
ಕೂರ್ಮೆಯ ಮಾತು ಮೆಚ್ಚುವನಿತರ್ಕೆ ಬಳಾರಿ ಮುರಾಸುರಾರಿಯೇಂ|| ೮೨ ||
ಪದ್ಯ-೮೨:ಪದವಿಭಾಗ-ಅರ್ಥ: ಒಮ್ಮೆ ತೊೞಲ್ದು (ಸುತ್ತಾಡಿ) ನೋಡಿ ಬನಮಂ ಮಘವಂ (ವನವನ್ನು ಅದರ ಸೊಬಗನ್ನೂ ನೋಡಿ ಬರುತ್ತಿದ್ದಾಗ) ಶಚಿ ಪೂತ ಚೂತಮಂ (ಹೂವಿನಿಂದ ಕೂಡಿದ ಮಾವಿನ ಮರಕ್ಕೆ) ನೆರ್ಮಿದ ಶೋಕವಲ್ಲರಿಯ (ಅಶೋಕ ಬಳ್ಳಿಯನ್ನು ನೋಡಿ) ಪಲ್ಲವಂ ಒಂದನೆ ಕೊಯ್ದು (ಅದರ ಒಂದು ಚಿಗುರನ್ನು ಕೊಯ್ದು) ರಾಗದಿಂ ಸೋರ್ಮುಡಿಯೊಳ್ ತಗುಳ್ಚಿದೊಡೆ (ಪ್ರೀತಿಯಿಂದ ತನ್ನ ಉದ್ದ ಜಡೆಯಲ್ಲಿ ಮುಡಿದುಕೊಳ್ಳಲು) ಸೂೞನೆ ಬಾರಿಸಿದಂ (ಸೂಳ್ (ಎಚ್ಚರಕೆ ) ಎಂದು ತಡೆದನು) ದಲ್-ನಿಜ! ಎಂದೊಡಿಂ ಕೂರ್ಮೆಯ ಮಾತು (ಎಂದಾಗ ವನದ ಬಗೆಗೆ ಅವನ ಪ್ರೀತಿಯ ಭಾವ ಎಷ್ಟಿರಬೇಕು?) ಮೆಚ್ಚುವನ್ ಇತರ್ಕೆ ಬಳಾರಿ (ಇದಕ್ಕೆ -ಈವನಕ್ಕೆ ಬಹಳ ಮೆಚ್ಚುವನು- ಪ್ರಿತಿಸುವನು ಇಂದ್ರನು, ಬಲಿಯ ವಿರೋಧಿ) ಮುರ ಅಸುರಾರಿಯೇಂ (ಅವನು -ಇಂದ್ರನು ಉದಾರತೆ ತೋರಲು ಮುರನನ್ನು ಕೊಂದ ಶ್ರೀಕೃಷ್ನನೇ?)ಇಂದ್ರನು ಪತ್ನಿ ಶಚಿಗೂ ಉದಾರತೆ ತೋರಿಲ್ಲ)
ಪದ್ಯ-೮೨:ಅರ್ಥ: ಒಂದು ಸಲ ಇಂದ್ರನು ಶಚೀದೇವಿಯೊಡಗೂಡಿ ಸುತ್ತಾಡುತ್ತಾ ವನವನ್ನು ಅದರ ಸೊಬಗನ್ನೂ ನೋಡಿ ಬರುತ್ತಿದ್ದಾಗ ಹೂವಿನಿಂದ ಕೂಡಿದ ಮಾವಿನ ಮರಕ್ಕೆ ಹಬ್ಬಿದ್ದ ಅಶೋಕ ಬಳ್ಳಿಯನ್ನು ನೋಡಿ ಅದರ ಒಂದು ಚಿಗುರನ್ನು (ಶಚಿಯು) ಕೊಯ್ದು ಪ್ರೀತಿಯಿಂದ ತನ್ನ ಉದ್ದ ಜಡೆಯಲ್ಲಿ ಮುಡಿದುಕೊಳ್ಳಲು ಇಂದ್ರನು ಸೂಳ್ (ಅಪಾಯ- ಎಚ್ಚರಕೆ )ಎಂದು ತಡೆದನು ಎಂಬುದು ನಿಜ! ಎಂದಾಗ ಆ ವನದ ವಿಷಯದಲ್ಲಿ ಅವನ ಪ್ರೀತಿಯ ಭಾವ ಎಷ್ಟಿರಬೇಕು? ಈ ವನವನ್ನು ಇಂದ್ರನು ಬಹಳ ಮೆಚ್ಚುವನು. ಇಂದ್ರನು ಉದಾರತೆ ತೋರಲು ಕೃಷ್ಣನೆಂದು ತಿಳಿದೆಯಾ?
ಕಂ|| ಇಂತಪ್ಪ ಬನಮನಿದನಿ
ನ್ನೆಂತನಲನನೂಡಲೆಂದು ಪೂಣ್ದಯ್ ಮುಂ ಪೂ|
ಣ್ದಂತೂಡು ಪೂಡು ಶಿತಶರ
ಸಂತತಿಯಂ ಬಿಲ್ಲೊಳೇಕೆ ನೀಂ ತಡೆದಿರ್ಪಯ್|| ೮೩ ||
ಪದ್ಯ-೮೩:ಪದವಿಭಾಗ-ಅರ್ಥ:ಇಂತಪ್ಪ ಬನಮನು ಇದನು ಇನ್ನೆಂತು ಅನಲನನ್ ಊಡಲೆಂದು ಪೂಣ್ದಯ್ (ಹೀಗಿರುವ ಈ ವನವನ್ನು ಅಗ್ನಿ ಉಣಲೆಂದು ಹೇಗೆ ಪ್ರತಿಜ್ಞೆ ಮಾಡಿದೆ?) ಮುಂ (ಮೊದಲು) ಪೂಣ್ದಂತೂಡು (ಮೊದಲು ಪ್ರತಿಜ್ಞೆ ಮಾಡಿದ ಹಾಗೆ ಉಣಿಸು) ಪೂಡು (ಬಾಣವನ್ನು ಹೂಡು) ಶಿತಶರಸಂತತಿಯಂ ಬಿಲ್ಲೊಳು (ಹರಿತವಾದ ಬಾಣ ಸಮೂಹವನ್ನು ಬಿಲ್ಲಿನಲ್ಲಿ) ಏಕೆ ನೀಂ ತಡೆದಿರ್ಪಯ್?
ಪದ್ಯ-೮೩:ಅರ್ಥ: ಹೀಗಿರುವ ಈ ವನವನ್ನು ಅಗ್ನಿ ಉಣಲೆಂದು ಹೇಗೆ ಪ್ರತಿಜ್ಞೆ ಮಾಡಿದೆ? ಮೊದಲು ಪ್ರತಿಜ್ಞೆ ಮಾಡಿದ ಹಾಗೆ ಉಣಿಸು, ಬಿಲ್ಲಿನಲ್ಲಿ ಹರಿತವಾದ ಬಾಣಸಮೂಹವನ್ನು ಸಂಧಾನಮಾಡು. ಏಕೆ ತಡೆದಿರುವೆ?
ಕಂ||ಪರಮಾಣುವನಿತು ಬನದೊಳ್
ಚರಾಚರಂ ಪೋಗೆ ತಣಿಯನನಲನದರ್ಕಾಂ|
ನೆರಮಪ್ಪೆನುಗ್ರ ಕಿನ್ನರ
ಸುರ ದನುಜೋರಗರ ಕದನಮೇಂ ನಿನಗರಿದೇ|| ೮೪ ||
ಪದ್ಯ-೮೪:ಪದವಿಭಾಗ-ಅರ್ಥ:ಪರಮಾಣುಂ ಅನಿತು ಬನದೊಳ್ ಚರಾಚರಂ ಪೋಗೆ (ವನದಲ್ಲಿ ಪರಮಾಣುವಷ್ಟು ಚರಾಚರ ಪ್ರಾಣಿಗಳು ಹೊರಗೆ ಹೋದರೂ) ತಣಿಯನು ಅನಲನು (ಅಗ್ನಿಯು ತೃಪ್ತಿಪಡಲಾರ) ಅದರ್ಕೆ ಆಂ ನೆರಮಪ್ಪೆನು (ಅದಕ್ಕೆ ನಾನು ನೆರವಾಗುವೆನು) ಉಗ್ರ ಕಿನ್ನರ ಅಸುರ ದನುಜ ಉರಗರ ಕದನಮೇಂ ನಿನಗೆ ಅರಿದೇ(ನಿನಗೆ ಹರಿಯದೇ? ಅಸಾಧ್ಯವೇ?)
ಪದ್ಯ-೮೪:ಅರ್ಥ: ಈ ವನದಲ್ಲಿರವ ಪರಮಾಣುವಿನಷ್ಟು ಚರಾಚರ ಪ್ರಾಣಿಗಳು ಹೊರಗೆ ಹೋದರೂ ಅಗ್ನಿಯು ತೃಪ್ತಿಪಡಲಾರ. ಅದಕ್ಕೆ ನಾನು ನೆರವಾಗುವೆನು. ಭಯಂಕರರಾದ ಕಿನ್ನರರು, ರಾಕ್ಷಸರು, ದನಜರು, ನಾಗರು ಇವರೊಡನೆ ಯುದ್ಧ ಮಾಡುವುದು ನಿನಗೆ ಅಸಾಧ್ಯವೇ?
ವ|| ಎಂಬುದುಮಂತೆ ಗೆಯ್ವೆನೆನ್ನ ಸಾಹಸಮಂ ನೋಡಿಮೆಂದು ವಿಕ್ರಾಂತ ತುಂಗನುತ್ತುಂಗ ಭುಜಪರಿಘದೆರಡು ದೆಸೆಯೊಳಂ ತವದೊಣೆಗಳಂ ಬಿಗಿದು ಗಾಂಡೀವಮನೇಱಿಸಿ ನೀವಿ ಜೇವೊಡೆದು ದಿವ್ಯಾಸ್ತ್ರಂಗಳಂ ಪಿಡಿದು ಕೆಯ್ತೀವಿಕೊಂಡಗ್ನಿದೇವನಂ ನೋಡಿ-
ವಚನ:ಪದವಿಭಾಗ-ಅರ್ಥ:ಎಂಬುದುಂ ಅಂತೆ ಗೆಯ್ವೆನು ಎನ್ನ ಸಾಹಸಮಂ ನೋಡಿಮೆಂದು (ಹಾಗೆಯೇ ಮಾಡುವೆನು. ನನ್ನ ಪರಾಕ್ರಮವನ್ನು ನೋಡಿ ಎಂದು) ವಿಕ್ರಾಂತ ತುಂಗನು ಉತ್ತುಂಗ ಭುಜಪರಿಘದ ಎರಡು ದೆಸೆಯೊಳಂ (ಅರ್ಜುನನು, ಎತ್ತರದ ಗದೆಯಂತಿರುವ ಎರಡು ಭುಜಗಳಲ್ಲಿಯೂ) ತವದೊಣೆಗಳಂ ಬಿಗಿದು (ಅಕ್ಷಯತೂಣೀರಗಳನ್ನು ಬಿಗಿದುಕೊಂಡು) ಗಾಂಡೀವಮನು ಏಱಿಸಿ (ಗಾಂಡೀವವೆಂಬ ಬಿಲ್ಲಿಗೆ ಹೆದೆಯೇರಿಸಿ) ನೀವಿ ಜೇವೊಡೆದು (ಸವರಿ, ನಾಣನ್ನು ಶಬ್ದಮಾಡಿ ನೋಡಿ) ದಿವ್ಯಾಸ್ತ್ರಂಗಳಂ ಪಿಡಿದು (ದಿವ್ಯಾಸ್ತ್ರಗಳನ್ನು ಕಯ್ಯಲ್ಲಿ ಹಿಡಿದು) ಕೆಯ್ತೀವಿಕೊಂಡು (ಕಯ್ಯಲ್ಲಿ ತುಂಬಿಕೊಂಡು ) ಅಗ್ನಿದೇವನಂ ನೋಡಿ-
ವಚನ:ಅರ್ಥ:ಅರ್ಜುನನು ಹಾಗೆಯೇ ಮಾಡುವೆನು, ನನ್ನ ಪರಾಕ್ರಮವನ್ನು ನೋಡಿ ಎಂದು, ಉತ್ತಮಪರಾಕ್ರಮಿಯಾದ ಅರ್ಜುನನು ತನ್ನ ಎತ್ತರದ ಗದೆಯಂತಿರುವ ಎರಡು ಭುಜಗಳಲ್ಲಿಯೂ ಅಕ್ಷಯತೂಣೀರಗಳನ್ನು ಬಿಗಿದುಕೊಂಡು ಗಾಂಡೀವವೆಂಬ ಬಿಲ್ಲಿಗೆ ಹೆದೆಯೇರಿಸಿ ಹೆದೆಯನ್ನು ಸವರಿ, ನಾಣನ್ನು ಶಬ್ದಮಾಡಿನೋಡಿ ದಿವ್ಯಾಸ್ತ್ರಗಳನ್ನು ಕಯ್ಯಲ್ಲಿ ತುಂಬಿಕೊಂಡು ಅಗ್ನಿದೇವನನ್ನು ನೋಡಿ-
ಉ|| ಓಡುಗೆ ನಿಮ್ಮ ಮೆಯ್ಯ ಪಸಿವಾಂತ ವಿರೋಧಿಗಳೆನ್ನ ಕೆಯ್ಯೊಳ
ೞ್ಕಾಡುಗೆ ಕೊಳ್ಳಿಮಣ್ಣಿಮೆನೆ ಕೇಳ್ದನಲಂ ಪರಸುತ್ತಮಾ ಲಯ|
ಕ್ರೀಡೆಯೊಳೀ ಚರಾಚರಮುಮಂ ಸುಡುವಂದಿನ ಮೆಯ್ಗಮಗ್ಗಳಂ
ಮಾಡಿ ತಗುಳ್ದು ನೀಳ್ದು ಬಳೆದರ್ವಿಸೆ ಪರ್ವಿದನಾ ವನಾಂತಮಂ|| ೮೫ ||
ಪದ್ಯ-೮೫:ಪದವಿಭಾಗ-ಅರ್ಥ:ಓಡುಗೆ ನಿಮ್ಮ ಮೆಯ್ಯ ಪಸಿವು (ನಿಮ್ಮ ದೇಹದ ಹಸಿವು ಓಡಲಿ) ಆಂತ ವಿರೋಗಳು ಎನ್ನ ಕೆಯ್ಯೊಳ್ ಅೞ್ಕಾಡುಗೆ (ಎದುರಿಸಿದ ಶತ್ರುಗಳು ನಮ್ಮ ಕಯ್ಯಲ್ಲಿ ನಾಶವಾಗಲಿ) ಕೊಳ್ಳಿಂ ಉಣ್ಣಿಂ ಎನೆ (ತೆಗೆದುಕೊಳ್ಳಿ, ಉಣ್ಣಿ ಎನ್ನಲು) ಕೇಳ್ದು ಅನಲಂ ಪರಸುತ್ತಂ ಆ ಲಯಕ್ರೀಡೆಯೊಳು ಈ ಚರಾಚರಮುಮಂ ಸುಡುವ ಅಂದಿನ (ಅವರನ್ನು ಹರಸುತ್ತ ಪ್ರಳಯಕಾಲದಲ್ಲಿ ಈ ಚರಾಚರವನ್ನೆಲ್ಲ ಸುಡುವ ಅಂದಿನ) ಮೆಯ್ಗಂ ಅಗ್ಗಳಂಮಾಡಿ (ಶರೀರವನ್ನೂ ಮೀರಿದ ರೂಪವನ್ನು ಧರಿಸಿ) ತಗುಳ್ದು ನೀಳ್ದು ಬಳೆದು ಉರ್ವಿಸೆ (ನೀಳವಾಗಿ ಬೆಳೆದು ಉರಿಸಲು- ಸುಡಲು ) ಪರ್ವಿದಂ ಆ ವನಾಂತಮಂ (ಆ ಕಾಡಿನ ಒಳಬಾಗದಲ್ಲೆಲ್ಲಾ ಪರ್ವಿದಂ - ಹರಡಿದನು/ ಹಬ್ಬಿದನು)
ಪದ್ಯ-೮೫:ಅರ್ಥ: ನಿಮ್ಮ ದೇಹದ ಹಸಿವು ಓಡಲಿ; ಎದುರಿಸಿದ ಶತ್ರುಗಳು ನಮ್ಮ ಕಯ್ಯಲ್ಲಿ ನಾಶವಾಗಲಿ; ತೆಗೆದುಕೊಳ್ಳಿ, ಉಣ್ಣಿ ಎನ್ನಲು ಅವರನ್ನು ಹರಸುತ್ತ ಪ್ರಳಯಕಾಲದಲ್ಲಿ ಈ ಚರಾಚರವನ್ನೆಲ್ಲ ಸುಡುವ ಅಂದಿನ ಶರೀರವನ್ನೂ ಮೀರಿದ ರೂಪವನ್ನು ಧರಿಸಿ ನೀಳವಾಗಿ ಬೆಳೆದು ಸುಡಲು ಆ ವನದ ಒಳಭಾಗವಲ್ಲೆಲ್ಲಾ ಹಬ್ಬಿದನು.
ಮ|| ಫಳ ಕರ್ಪೂರ ಲವಂಗ ಲುಂಗ ಲವಳೀ ಹಿಂತಾಳ ತಾಳೀ ತಮಾ
ಳ ಳತಾ ಸುಂದರ ನಂದನಕ್ಕಳುರೆ ಮುಂ ತನ್ನರ್ಚಿಗಳ್ ಬಂದು ಮೊ|
ಕ್ಕಳಮೆತ್ತಂ ಸುರಿಯುತ್ತುಮಿರ್ಪ ರಸಮಂ ಮುಂ ಪೀರ್ದುಕೊಂಡಂ ಮನಂ
ಗೊಳೆ ಸಪ್ತಾರ್ಚಿ ಪೊದಳ್ದು ನೀಳ್ದೊಸಗೆಯಿಂದಾಪೋಶನಂಗೊಳ್ವವೋಳ್|| ೮೬||
ಪದ್ಯ-೮೬:ಪದವಿಭಾಗ-ಅರ್ಥ:ಫಳ ಕರ್ಪೂರ ಲವಂಗ ಲುಂಗ(ಮಾದಲ) ಲವಳೀ (ಅರನೆಲ್ಲಿ) ಹಿಂತಾಳ ತಾಳೀ ತಮಾಳ ಳತಾ (ಹೊಂಗೆಯಬಳ್ಳಿ?) ಸುಂದರ ನಂದನಕ್ಕೆ ಅಳುರೆ-> ಮುಂ (ಮೊದಲು) ತನ್ನ ಅರ್ಚಿಗಳ್ (ಜ್ವಾಲೆಗಳು ಅಳುರೆ- ವ್ಯಾಪಿಸಲು) ಬಂದು ಮೊಕ್ಕಳಮೆತ್ತಂ (ಮೊಕ್ಕಳಂ -ಬಹಳ,ಎತ್ತಂ- ಎಲ್ಲಡೆಯೂ) ಸುರಿಯುತ್ತುಮಿರ್ಪ ರಸಮಂ (ಸುರಿಯುತ್ತಿರುವ ಮರದ ರಸವನ್ನು ) ಮುಂ ಪೀರ್ದುಕೊಂಡಂ (ಮೊದಲೇ ಹೀರಿಕೊಂಡನು->) ಮನಂಗೊಳೆ ಸಪ್ತಾರ್ಚಿ ಪೊದಳ್ದು (ಇಷ್ಟವಾಗಲು ಅಗ್ನಿಯು ಹರಡಿ) ನೀಳ್ದ ಒಸಗೆಯಿಂದ ಆಪೋಶನಂಗೊಳ್ವವೋಳ್ (ದೀರ್ಘವಾಗಿ ಸಂತಸದಿಂದ --ಆಪೋಶನವನ್ನು ತೆಗೆದುಕೊಳ್ಳುವ ಹಾಗೆ- ಮೊದಲೇ ಹೀರಿಕೊಂಡನು)
ಪದ್ಯ-೮೬:ಅರ್ಥ: ಫಲಿಸಿದ ಕರ್ಪೂರ, ಲವಂಗ, ಮಾದಲ, ಅರನೆಲ್ಲಿ, ಹಿಂತಾಳ, ತಾಳೆ, ಹೊಂಗೆಯಬಳ್ಳಿ (?) ಇವುಗಳಿಂದ ಸುಂದರವಾಗಿದ್ದ ವನವನ್ನು ಮೊದಲೇ ತನ್ನ ಉರಿಯ ಜ್ವಾಲೆಗಳು ಹರಡಿರಲು ಮುಂದುವರಿದು ದೀರ್ಘವಾಗಿ ಬೆಳೆದು ಸಂತೋಷದಿಂದ ಆಪೋಶನವನ್ನು ತೆಗೆದುಕೊಳ್ಳುವ ಹಾಗೆ ವಿಶೇಷವಾಗಿ ಸುರಿಯುತ್ತಿರುವ ಮರದ ರಸವನ್ನು ಅಗ್ನಿಯು ಹೀರಿಕೊಂಡನು.
ಕಂ|| ನನೆಕೊನೆಯ ತಳಿರ ಪೂವಿನ
ಬನಮನಿತುಂ ಶಿಖಿಗಳಳುರೆ ಬೆಂಕೆಯ ಪೊಯ್ದು|
ರ್ವಿನೊಳೆ ಕೊರಗಿರ್ದ ಲತೆಗಳ
ಕೊನೆಗೊನೆಯನೆ ದಹನನಳುರ್ದು ಕೊನೆಗೊನೆಗೊಂಡಂ|| ೮೭||
ಪದ್ಯ-೮೭:ಪದವಿಭಾಗ-ಅರ್ಥ:ನನೆಕೊನೆಯ ತಳಿರ (ಮೊಗ್ಗಿನಕೊನೆಯ, ಟಿಸಿಲಿನ) ಪೂವಿನ ಬನಂ ಆನಿತುಂ (ಹೂವಿನ ಆ ವನವನ್ನೆಲ್ಲಾ) ಶಿಖಿಗಳಳು ಉರೆ (ಬೆಂಕಿಯ ಜ್ವಾಲೆಗಳು ವ್ಯಾಪಿಸಲು) ಬೆಂಕೆಯ ಪೊಯ್ದ ಉರ್ವಿನೊಳೆ ಕೊರಗಿರ್ದ (ಬೆಂಕಿಯು ಹೊಡೆದ ರಭಸದಲ್ಲಿಯೇ ಬಾಡಿದ) ಲತೆಗಳ ಕೊನೆಗೊನೆಯನೆ (ಬಳ್ಳಿಗಳ ಕವಲು ಕವಲುಗಳನ್ನೇ) ದಹನಂ ಅಳುರ್ದು (ಅಗ್ನಿಯು ಸುಟ್ಟು) ಕೊನೆಗೊನೆಗೊಂಡಂ (ತುತ್ತತುದಿಯನ್ನೂ ಆಕ್ರಮಿಸಿದನು)
ಪದ್ಯ-೮೭:ಅರ್ಥ: ಮೊಗ್ಗಿನಕೊನೆಯ/ಟಿಸಿಲಿನ, ಚಿಗುರಿನ, ಹೂವಿನ ಆ ವನವನ್ನೆಲ್ಲಾ ಬೆಂಕಿಯ ಜ್ವಾಲೆಗಳು ವ್ಯಾಪಿಸಲು ಬೆಂಕಿಯು ಹೊಡೆದ ರಭಸದಲ್ಲಿಯೇ ಬಾಡಿದ ಬಳ್ಳಿಗಳ ಕವಲು ಕವಲುಗಳನ್ನೇ ಅಗ್ನಿಯು ಸುಟ್ಟು ತುತ್ತತುದಿಯನ್ನೂ ಆಕ್ರಮಿಸಿದನು.
ವ|| ಆಗಳಾ ಬನಮನಿಂದ್ರನ ಬೆಸದೊಳ್ ಕಾವ ಕಿನ್ನರ ಕಿಂಪುರುಷ ಗರುಡ ಗಂಧರ್ವ ಸಿದ್ಧ ವಿದ್ಯಾಧರ ಬಲಮನಿತುಮೊಂದಾಗಿ ವಿಕ್ರಮಾರ್ಜುನನೊಳ್ ತಾಗೆ-
ವಚನ:ಪದವಿಭಾಗ-ಅರ್ಥ:ಆಗಳು ಆ ಬನಮನು ಇಂದ್ರನ ಬೆಸದೊಳ್ ಕಾವ (ಕಾಯುವ) ಕಿನ್ನರ ಕಿಂಪುರುಷ ಗರುಡ ಗಂಧರ್ವ ಸಿದ್ಧ ವಿದ್ಯಾಧರ ಬಲಂ (ಸೈನ್ಯವು) ಅನಿತುಂ (ಅಷ್ಟೂ) ಒಂದಾಗಿ ವಿಕ್ರಮಾರ್ಜುನನೊಳ್ ತಾಗೆ (ಅರ್ಜುನನನ್ನು ಬಂದು ಎದುರಿಸಿದುವು)-
ವಚನ:ಅರ್ಥ:ಆಗ ಅವನನ್ನು ಇಂದ್ರನ ಆಜ್ಞೆಯಂತೆ ಕಾಯುತ್ತಿದ್ದ ಕಿನ್ನರ ಕಿಂಪುರುಷ ಗರುಡ ಗಂಧರ್ವ ಸಿದ್ಧ ವಿದ್ಯಾಧರ ಸೈನ್ಯವಷ್ಟೂ ಒಂದಾಗಿ ಅರ್ಜುನನನ್ನು ಬಂದು ಎದುರಿಸಿದುವು
ಕಂ|| ಕೊಂಡಪುದುರಿ ಬನಮನದಂ
ಕಂಡೆಂತಿರಲಕ್ಕುಮೆಂದು ತಾಗಿದ ನೆಗೞ್ದೊ|
ಳ್ಗಂಡರ ಗಂಡೋಡುವಿನಂ
ಕೊಂಡುವು ಗಾಂಡೀವಮುಕ್ತ ಬಾಣಗಣಂಗಳ್|| ೮೮||
ಪದ್ಯ-೮೮:ಪದವಿಭಾಗ-ಅರ್ಥ:ಕೊಂಡಪುದು ಉರಿ ಬನಮನು (ಬೆಂಕಿಯು ವನವನ್ನು ಸುಡುತ್ತಿದೆ.) ಅದಂ ಕಂಡು ಎಂತಿರಲಕ್ಕುಮೆಂದು (ಅದನ್ನು ನೋಡಿಯೂ ಹೇಗೆ ಸುಮ್ಮನಿರುವುದು ಎಂದು) ತಾಗಿದ ನೆಗೞ್ದ ಒಳ್ಗಂಡರ ಗಂಡೋಡುವಿನಂ ಕೊಂಡುವು(ಎದುರಿಸಿದ ಪ್ರಸಿದ್ಧವಾದ ಶೂರರ ಪೌರುಷವು ಪಲಾಯನ ಮಾಡುವ ಹಾಗೆ ಅವರನ್ನು ಆಹುತಿಗೊಂಡವು) ಗಾಂಡೀವಮುಕ್ತ ಬಾಣಗಣಂಗಳ್ (ಗಾಂಡೀವದಿಂದ ಬಿಟ್ಟ ಬಾಣಗಳು)
ಪದ್ಯ-೮೮:ಅರ್ಥ: . ಬೆಂಕಿಯು ವನವನ್ನು ಸುಡುತ್ತಿದೆ. ಅದನ್ನು ನೋಡಿಯೂ ಹೇಗೆ ಸುಮ್ಮನಿರುವುದು ಎಂದು ಎದುರಿಸಿದ ಪ್ರಸಿದ್ಧವಾದ ಶೂರರ ಪೌರುಷವು ಪಲಾಯನ ಮಾಡುವ ಹಾಗೆ ಗಾಂಡೀವದಿಂದ ಬಿಟ್ಟ ಬಾಣಗಳು ಅವರನ್ನು ಆಹುತಿಗೊಂಡವು.
ವ|| ಅಂತು ಕಾದೆ ವಿದ್ವಿಷ್ಟವಿದ್ರಾವಣನ ಮೊನೆಯಂಬಿನಂಬೇಱಿಂಗಳ್ಕಿ ಹತವಿಹೆತ ಕೋಳಾಹಳರಾಗಿ ಸಿದ್ಧರಸಿದ್ಧರಾಗೆಯುಂ ಕಿನ್ನರರಿನ್ನಾರ ಮರೆಯಂ ಪುಗುವಮೆನೆಯುಂ ಕಿ ಪುರುಷರ್ ಕಾಪುರುಷರಂತೆ ಬಾಯಂ ಬಿಡೆಯುಂ ಗಂಧರ್ವರ್ ಗರ್ವಮನುೞಿ ದೊಂದೊರ್ವರುಂ ಮಿಗೆಯೋಡೆಯುಂ ವಿದ್ಯಾಧರರಧರರಾಗೆಯುಂ ಪನ್ನಗರ್ ಪನ್ನತಿಕೆಯಿಂ ಬಂದಾಂತೊಡೆ-
ವಚನ:ಪದವಿಭಾಗ-ಅರ್ಥ:ಅಂತು ಕಾದೆ (ಕಾದಲು- ಯುದ್ಧಮಾಡಲು) ವಿದ್ವಿಷ್ಟವಿದ್ರಾವಣನ (ಅರ್ಜುನನ) ಮೊನೆಯಂಬಿನ ಅಂಬೇಱಿಂಗೆ ಅಳ್ಕಿ(ಬಿಲ್ಲು ಯುದ್ಧಕ್ಕೆ ಅಳುಕಿ/ ಹೆದರಿ) ಹತವಿಹೆತ ಕೋಳಾಹಳರಾಗಿ (ನಾನಾ ವಿಧವಾದ ಹೊಡೆತ ಮರುಹೊಡೆತಗಳ ಕೋಲಾಹಲದಲ್ಲಿ) ಸಿದ್ಧರು ಅಸಿದ್ಧರಾಗೆಯುಂ ಕಿನ್ನರರು ಇನ್ನಾರ ಮರೆಯಂ ಪುಗುವಂ ಎನೆಯುಂ (ಸಿದ್ಧರು ಸಿದ್ಧತೆಯಿಲ್ಲದವರಾದರು, ಕಿನ್ನರರು ಇನ್ನು ಯಾರ ಮರೆಯನ್ನು ಹೋಗೋಣವೆಂದು ಯೋಚಿಸಿದರು) ಕಿ(ಕಿಂ) ಪುರುಷರ್ ಕಾ ಪುರುಷರಂತೆ ಬಾಯಂ ಬಿಡೆಯುಂ (ಕಿಂಪುರುಷರು ಅಲ್ಪಮನುಷ್ಯರಂತೆ ಹಾಹಾಕಾರಪಟ್ಟರು) ಗಂಧರ್ವರ್ ಗರ್ವಮನು ಉೞಿದು ಒಂದೊರ್ವರುಂ ಮಿಗೆಯೋಡೆಯುಂ (ಗಂಧರ್ವರು ತಮ್ಮ ಆತ್ಮಗರ್ವವನ್ನು ಬಿಟ್ಟು ಒಬ್ಬೊಬ್ಬರನ್ನೂ ಮೀರಿಸಿ ಓಡಿದರು) ವಿದ್ಯಾಧರರು ಅಧರರಾಗೆಯುಂ (ತಿರಸ್ಕೃತರಾದರು) ಪನ್ನಗರ್ ಪನ್ನತಿಕೆಯಿಂ ಬಂದು ಅಂತೊಡೆ (ಪನ್ನಗರು ಪರಾಕ್ರಮದಿಂದ ಬಂದು ಎದುರಿಸಿದರು)-
ವಚನ:ಅರ್ಥ:ಹಾಗೆ ಕಾದಲು ವಿದ್ರಾವಣನ ಮೊನಚಾದ ಬಾಣದ ಬಿಲ್ಲಿನ ಯುದ್ಧದ ನಾನಾ ವಿಧವಾದ ಹೊಡೆತ ಮರುಹೊಡೆತಗಳ ಕೋಲಾಹಲದಲ್ಲಿ ಸಿದ್ಧರು ಸಿದ್ಧತೆಯಿಲ್ಲದವರಾದರು, ಕಿನ್ನರರು ಇನ್ನು ಯಾರ ಮರೆಯನ್ನು ಹೋಗೋಣವೆಂದು ಯೋಚಿಸಿದರು, ಕಿಂಪುರುಷರು ಅಲ್ಪಮನುಷ್ಯರಂತೆ ಹಾಹಾಕಾರಪಟ್ಟರು. ಗಂಧರ್ವರು ತಮ್ಮ ಆತ್ಮಗರ್ವವನ್ನು ಬಿಟ್ಟು ಒಬ್ಬೊಬ್ಬರನ್ನೂ ಮೀರಿಸಿ ಓಡಿದರು. ವಿದ್ಯಾಧರರು ತಿರಸ್ಕೃತರಾದರು. ಪನ್ನಗರು ಪರಾಕ್ರಮದಿಂದ ಬಂದು ಎದುರಿಸಿದರು.
ಕಂ|| ನಾಗರ ಖಂಡಂಗಳನಾ
ನಾಗರ ಖಂಡದೊಳೆ ತೊಡರೆ ನರನಿಸುವುದುಮಾ|
ನಾಗರ ಖಂಡಂಗಳುಮಂ
ನಾಗರ ಖಂಡಮುಮನಳುರ್ದು ಕೊಂಡಂ ದಹನಂ|| ೮೯||
ಪದ್ಯ-೮೯:ಪದವಿಭಾಗ-ಅರ್ಥ:ನಾಗರ ಖಂಡಂಗಳಂ ಆನಾಗರ ಖಂಡದೊಳೆ ತೊಡರೆ (ಹಸಿಯ ಶುಂಠಿಯ ಚೂರುಗಳೂ ಆ ಸರ್ಪಗಳ ಚೂರುಗಳಲ್ಲಿಯೇ ಸಿಕ್ಕಿಕೊಳ್ಳುವಂತೆ) ನರನು ಇಸುವುದುಂ (ಅರ್ಜುನನು ಬಾಣಪ್ರಯೋಗ ಮಾಡಲು) ಆ ನಾಗರ ಖಂಡಂಗಳುಮಂ ನಾಗರ ಖಂಡಮುಮನು ಅಳುರ್ದು ಕೊಂಡಂ(ವ್ಯಾಪಿಸಿ ಸುಟ್ಟನು) ದಹನಂ-ಅಗ್ನಿಯು(ಆ ಹಸಿರು ಶುಂಠಿಯ ಚೂರುಗಳನ್ನೂ ಸರ್ಪಗಳ ಚೂರುಗಳನ್ನೂ ಅಗ್ನಿಯು ವ್ಯಾಪಿಸಿ ಸುಟ್ಟನು. )
ಪದ್ಯ-೮೯:ಅರ್ಥ: . ಅಲ್ಲಿ ಬೆಳೆದ ಹಸಿಯ ಶುಂಠಿಯ ಚೂರುಗಳೂ ಆ ಸರ್ಪಗಳ ಚೂರುಗಳಲ್ಲಿಯೇ ಸಿಕ್ಕಿಕೊಳ್ಳುವಂತೆ ಅರ್ಜುನನು ಬಾಣಪ್ರಯೋಗ ಮಾಡಲು ಆ ಹಸಿರು ಶುಂಠಿಯ ಚೂರುಗಳನ್ನೂ ಸರ್ಪಗಳ ಚೂರುಗಳನ್ನೂ ಅಗ್ನಿಯು ವ್ಯಾಪಿಸಿ ಸುಟ್ಟನು.
ಕಂ||ವಿರಹಿಗಳ ಸುಯ್ಯ ಬೆಂಕೆಯೊ
ಳಿರದೊಣಗಿದುವಕ್ಕುಮೀಗಳೆನಲುರಿವುರಿಯಿಂ|
ಕರಿಮುರಿಕನಾದುವುನ್ಮದ
ಪರಭೃತ ಷಟ್ಚರಣ ರಾಜಕೀರಕುಲಂಗಳ್|| ೯೦ ||
ಪದ್ಯ-೯೦:ಪದವಿಭಾಗ-ಅರ್ಥ:ವಿರಹಿಗಳ ಸುಯ್ಯ ಬೆಂಕೆಯೊಳು ಇರದೆ ಒಣಗಿದುವಕ್ಕುಂ (ಪ್ರೇಮಿಗಳ ಬಿಸಿಯುಸಿರಿನ ಬೆಂಕಿಯಲ್ಲಿ ಒಣಗಿದುವೋ) ಈಗಳೆ ಎನಲು (ಈಗ ಎನ್ನುವ ಹಾಗೆ ) ಉರಿವುರಿಯಿಂ (ಉರಿಯುವ ಬೆಂಕಿಯ ಜ್ವಾಲೆಯಿಂದ) ಕರಿಮುರಿಕನು ಆದುವು(ಸುಟ್ಟು ಕರಿಮುರುಕಾದುವು) ಉನ್ಮದಪರಭೃತ ಷಟ್ಚರಣ ರಾಜಕೀರಕುಲಂಗಳ್(ಸೊಕ್ಕಿದ ಕೋಗಿಲೆ ದುಂಬಿ ಮತ್ತು ಅರಗಿಳಿಗಳ ಸಮೂಹಗಳು)
ಪದ್ಯ-೯೦:ಅರ್ಥ: ಸೊಕ್ಕಿದ ಕೋಗಿಲೆ ದುಂಬಿ ಮತ್ತು ಅರಗಿಳಿಗಳ ಸಮೂಹಗಳು ತಮ್ಮನ್ನು ಅಗಲಿದ ಪ್ರೇಮಿಗಳ ಬಿಸಿಯುಸಿರಿನ ಬೆಂಕಿಯಲ್ಲಿ ಒಣಗಿದುವೋ ಎನ್ನುವ ಹಾಗೆ ಉರಿಯುವ ಬೆಂಕಿಯ ಜ್ವಾಲೆಯಿಂದ ಸುಟ್ಟು ಕರಿಮುರುಕಾದುವು.
ಕಂ||ಉರಿ ಕೊಳೆ ದೆಸೆಗಾಣದೆ ದೆಸೆ
ವರಿವರಿದು ಕುಜಂಗಳಂ ಪಡಲ್ವಡಿಸಿ ಭಯಂ|
ಬೆರಸೊಳರೆ ನೆಗೆದುದಾ ವನ
ಕರಿ ಶರಭ ಕಿಶೋರ ಕಂಠಗರ್ಜನೆ ಬನದೊಳ್|| ೯೧||
ಪದ್ಯ-೯೧:ಪದವಿಭಾಗ-ಅರ್ಥ:ಉರಿ ಕೊಳೆ ದೆಸೆಗಾಣದೆ ದೆಸೆವರಿವರಿದು ಕುಜಂಗಳಂ ಪಡಲ್ವಡಿಸಿ(ಬೆಂಕಿಯು ಆಕ್ರಮಿಸಲು ದಿಕ್ಕು ತೋಚದೆ ದಿಕ್ಕುದಿಕ್ಕಿಗೆ ಓಡಿ ಮರಗಳನ್ನು ಕೆಳಗುರುಳಿಸಿ) ಭಯಂ ಬೆರಸು ಒಳರೆ (ಹೆದರಿ ಕೂಗಿಕೊಳ್ಳಲು) ನೆಗೆದುದು (ಚಿಮ್ಮಿ ಹಾರಿದುವು->) ಆ ವನಕರಿ (ಕಾಡಾನೆ) ಶರಭ ಕಿಶೋರ ಕಂಠಗರ್ಜನೆ ಬನದೊಳ್ (ಕೊರಳ ಗರ್ಜನೆ ಆ ಕಾಡಿನಲ್ಲಿ)
ಪದ್ಯ-೯೧:ಅರ್ಥ: ಬೆಂಕಿಯು ಆಕ್ರಮಿಸಲು ದಿಕ್ಕು ತೋಚದೆ ದಿಕ್ಕುದಿಕ್ಕಿಗೆ ಓಡಿ ಮರಗಳನ್ನು ಕೆಳಗುರುಳಿಸಿ ಹೆದರಿ ಕೂಗಿಕೊಳ್ಳಲು ಕಾಡಾನೆಯ ಶರಭಗಳ ಮರಿಗಳ ಕೊರಳ ಗರ್ಜನೆ ಆ ಕಾಡಿನಲ್ಲಿ ಚಿಮ್ಮಿ ಹಾರಿದುವು
ಕಂ||ಸಂಗತ ಧೂಮಾವಳಿಯನಿ
ಭಂಗಳೆ ಗೆತ್ತೊಳಱೆ ಪಾಯ್ದು ಪೊಗೆ ಪುಗೆ ಕಣ್ಣಂ|
ಸಿಂಗಂಗಳಳುರೆ ಗರ್ಜಿಸಿ
ಲಂಗಿಸಿ ಪುಡಪುಡನೆ ಪುೞ್ಗಿ ಸತ್ತುವು ಪಲವುಂ|| ೯೨||
ಪದ್ಯ-೯೨:ಪದವಿಭಾಗ-ಅರ್ಥ:ಸಂಗತ (ಒಟ್ಟಾಗಿತುಂಬಿದ) ಧೂಮಾವಳಿಯನು ಇಭಂಗಳೆ ಗೆತ್ತು (ಆನೆಗಳೆಂದು ಭಾವಿಸಿ) ಒಳಱೆ (ಕೂಗಿಕೊಳ್ಳಲು) ಪಾಯ್ದು ಪೊಗೆ ಪುಗೆ ಕಣ್ಣಂ ಸಿಂಗಂಗಳು ಅಳುರೆ (ಹೊಗೆಯು ಸಿಂಹಗಳ ಕಣ್ಣಿಗೆ ಸೇರಲು) ಗರ್ಜಿಸಿ ಲಂಗಿಸಿ(ನೆಗೆದು) ಪುಡಪುಡನೆ ಪುೞ್ಗೆ ಸತ್ತುವು ಪಲವುಂ(ಬೆಂದು ಸತ್ತವು ಹಲವು)
ಪದ್ಯ-೯೨:ಅರ್ಥ: ಒಟ್ಟಾಗಿತುಂಬಿದ ಹೊಗೆಯ ಸಮೂಹವನ್ನು ಆನೆಗಳೆಂದು ಭಾವಿಸಿ ಸಿಂಹಗಳು ಕೂಗಿಕೊಂಡವು. ಮೇಲೆ ಹಾಯ್ದು ಹೊಗೆಯು ಕಣ್ಣಿಗೆ ಸೇರಲು ಗರ್ಜನೆಮಾಡಿ ನೆಗೆದು ಪುಡಪುಡನೆ ಸುಟ್ಟು ಸತ್ತುಹೋದವು.
ವ|| ಮತ್ತಮಲ್ಲಿ ಕೆಲವು ಲತಾಗೃಹಂಗಳೊಳಂ ಧಾರಾಗೃಹಂಗಳೊಳಂ-
ವಚನ:ಪದವಿಭಾಗ-ಅರ್ಥ:ಮತ್ತಂ ಅಲ್ಲಿ ಕೆಲವು ಲತಾಗೃಹಂಗಳೊಳಂ ಧಾರಾಗೃಹಂಗಳೊಳಂ (ನೀರುಸುರಿಯುವ ಮಂಟಪ)-
ವಚನ:ಅರ್ಥ:ವ|| ಅಲ್ಲಿಯ ಕೆಲವು ಬಳ್ಳಿ ಮನೆಯಲ್ಲಿಯೂ ನೀರುಸುರಿಯುವ ಮಂಟಪಗಳಲ್ಲಿಯೂ
ಕಂ|| ಒಡನಳುರೆ ಕಿರ್ಚು ತೋಳಂ
ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂ|
ದೊಡಗಳೆದರೋಪರೋಪರೊ
ಳೊಡಸಾಯಲ್ ಪಡೆದರಿನ್ನವುಂ ಸಯ್ಪೊಳವೇ|| ೯೩ ||
ಪದ್ಯ-೯೩:ಪದವಿಭಾಗ-ಅರ್ಥ:ಒಡನೆ ಅಳುರೆ ಕಿರ್ಚು (ಬೆಂಕಿಯು ಒಟ್ಟಿಗೆ ಅಳುರೆ-ಸುಡಲು) ತೋಳಂ ಸಡಿಲಿಸದೆ ಆ ಪ್ರಾಣವಲ್ಲಭರ್ (ಪ್ರಿಯಪ್ರೇಯಸಿಯರು) ಪ್ರಾಣಮನು ಅಂದು ಒಡಗಳೆದರ್ (ಪ್ರಾಣವನ್ನು ಬಿಟ್ಟರು) ಓಪರ್ ಓಪರೊಳ್ ಒಡಸಾಯಲ್ ಪಡೆದರ್(ಪ್ರಿಯರು ಪ್ರಿಯರೊಡನೆ ಸಾಯುವ ಅದೃಷ್ಟವನ್ನು ಪಡೆದರು) ಇನ್ನವುಂ ಸಯ್ಪು ಒಳವೇ (ದಕ್ಕಿಂತ ಬೇರೆ ಪುಣ್ಯವು ಉಂಟೇ)
ಪದ್ಯ-೯೩:ಅರ್ಥ: . ಬೆಂಕಿಯು ತಮ್ಮನ್ನು ಒಟ್ಟಿಗೆ ಸುಡಲು ತಮ್ಮ ತೋಳುಗಳನ್ನು ಸಡಿಲಿಸಿದೆ ಆ ಪ್ರಿಯಪ್ರೇಯಸಿಯರು ಜೊತೆಯಲ್ಲಿಯೇ ಪ್ರಾಣವನ್ನು ಬಿಟ್ಟರು. ಪ್ರಿಯರು ಪ್ರಿಯರೊಡನೆ ಸಾಯುವ ಅದೃಷ್ಟವನ್ನು ಪಡೆದರು. ಇದಕ್ಕಿಂತ ಬೇರೆ ಪುಣ್ಯವು ಉಂಟೇ?
ವ|| ಅಂತು ಖಾಂಡವವನಮೆಲ್ಲಮನನಲಂ ಪ್ರಳಯಕಾಳಾನಳನಂತಳುರ್ದು ಕೊಳೆ ಬಳಸಿ ಬಂದು ಕಾವ ನಾರಾಯಣನ ಸುದರ್ಶನಮೆಂಬ ಚಕ್ರದ ಕೋಳುಮಂ ವಿಕ್ರಮಾರ್ಜುನನ ದಿವ್ಯಾಸ್ತ್ರಂಗಳ ಕೋಳುಮನಗ್ನಿದೇವನ ಶಿಖಾಕಳಾಪದ ಕೋಳುಮನೆಂತಾನುಂ ಬಂಚಿಸಿ ಬಲೆ ಪಱಿದ ಕೋಕನಂತೊರ್ವ ವನಪಾಲಕಂ ಪೋಗಿ ದೇವೇಂದ್ರನಂ ಕಂಡು-
ವಚನ:ಪದವಿಭಾಗ-ಅರ್ಥ: ಅಂತು ಖಾಂಡವವನಮೆಲ್ಲಮನು ಅನಲಂ ಪ್ರಳಯಕಾಳಾನಳನಂತೆ (ಪ್ರಳಯಕಾಲದ ಬೆಂಕಿಯಂತೆ) ಅಳುರ್ದು ಕೊಳೆ (ಸುಟ್ಟು ತಿನ್ನಲು) ಬಳಸಿ ಬಂದು (ಸುತ್ತಲೂ ಬಳಸಿ ಬಂದು) ಕಾವ ನಾರಾಯಣನ ಸುದರ್ಶನಮೆಂಬ ಚಕ್ರದ ಕೋಳುಮಂ (ಬಂಧನವನ್ನು,ಆಕ್ರಮಣವನ್ನೂ) ವಿಕ್ರಮಾರ್ಜುನನ ದಿವ್ಯಾಸ್ತ್ರಂಗಳ ಕೋಳುಮನು ಅಗ್ನಿದೇವನ ಶಿಖಾಕಳಾಪದ ಕೋಳುಮನು ಎಂತಾನುಂ ಬಂಚಿಸಿ (ಹೇಗೋ ವಂಚಿಸಿ) ಬಲೆ ಪಱಿದ ಕೋಕನಂತ (ಬಲೆಯಿಂದ ತಪ್ಪಿಸಿಕೊಂಡ ಕೋಕಪಕ್ಷಿಯಂತೆ) ಓರ್ವ ವನಪಾಲಕಂ ಪೋಗಿ (ಹೋಗಿ) ದೇವೇಂದ್ರನಂ ಕಂಡು-
ವಚನ:ಅರ್ಥ:|| ಹೀಗೆ ಖಾಂಡವವನವೆಲ್ಲವನ್ನೂ ಅಗ್ನಿಯು ಪ್ರಳಯಕಾಲದ ಬೆಂಕಿಯಂತೆ ಸುಟ್ಟು ತಾನು ಭುಂಜಿಸುತ್ತಿರಲು ಸುತ್ತಲೂ ಬಳಸಿ ಬಂದು ರಕ್ಷಣೆ ಮಾಡುತ್ತಿರುವ ಕೃಷ್ಣನ ಸುದರ್ಶನವೆಂಬ ಚಕ್ರದ ಆಕ್ರಮಣವನ್ನೂ ವಿಕ್ರಮಾರ್ಜುನನ ದಿವ್ಯಾಸ್ತ್ರಗಳ ಆಕ್ರಮಣವನ್ನೂ ಅಗ್ನಿದೇವನ ಜ್ವಾಲೆಗಳ ಸಮೂಹದ ಆಕ್ರಮಣವನ್ನೂ ಹೇಗೋ ವಂಚಿಸಿ ಬಲೆಯಿಂದ ತಪ್ಪಿಸಿಕೊಂಡ ಕೋಕಪಕ್ಷಿಯಂತೆ ಆ ತೋಟದ ಕಾವಲುಗಾರನೊಬ್ಬನು ಹೋಗಿ ದೇವೇಂದ್ರನನ್ನು ಕಂಡು-
ಮಲ್ಲಿಕಾಮಾಲೆ|| ದೇವ ಬಿನ್ನಪಮಿಂದು ಖಾಂಡವಮಂ ಕೃಶಾನು ತಗುಳ್ದು ನಾ
ನಾ ವಿಧಂ ಸುಡೆ ನೋಡಲಾರದೆ ತಳ್ತ ದೇವರ ಕಾಪಿನಾಳ್|
ದೇವ ಕಿನ್ನರ ಪನ್ನಗಾವಳಿ ಮೊಟ್ಟನಪ್ಪಿನಮೆಚ್ಚು ಕೊಂ
ದೇವರೆಂದಱಿದಿರ್ದನೊರ್ವನಗುರ್ವು ಪರ್ವಿರೆ ದೇವರಂ|| ೯೪ ||
ಪದ್ಯ-೯೪:ಪದವಿಭಾಗ-ಅರ್ಥ:ದೇವ ಬಿನ್ನಪಮ್ ಇಂದು ಖಾಂಡವಮಂ ಕೃಶಾನು ತಗುಳ್ದು (ಅಗ್ನಿಯು ವ್ಯಾಪಿಸಿ) ನಾನಾ ವಿಧಂ ಸುಡೆ ನೋಡಲಾರದೆ ತಳ್ತ (ಎದುರಿಸಿದ) ದೇವರ ಕಾಪಿನಾಳ್ ದೇವ ಕಿನ್ನರ ಪನ್ನಗ ಆವಳಿ (ಸಮೂಹ) ಮೊಟ್ಟನಪ್ಪಿನಂ (ಮಟ್ಟಸವಾಗುವಂತೆ- ನಾಶವಾಗುವ ಹಾಗೆ) ಎಚ್ಚು (ಹೊಡೆದು) ಕೊಂದು, ಏವರೆಂದು ಅಱಿದಿರ್ದಂ (ತಿಳಿದಿದ್ದಾನೆ) ಒರ್ವನು (‘ಏನು ಮಾಡಬಲ್ಲರವರು’ ಎಂದು ತಿಳಿದ ಒಬ್ಬನು) ಅಗುರ್ವು (ಭಯವು) ಪರ್ವಿರೆ (ಹರಡಿರಲು) ದೇವರಂ (ದೇವಪ್ರಭುವಾದ ನಿಮ್ಮನ್ನು)
ಪದ್ಯ-೯೪:ಅರ್ಥ: ಸ್ವಾಮಿ ವಿಜ್ಞಾಪನೆ, ಈ ದಿನ ಖಾಂಡವವನವನ್ನು ಅಗ್ನಿಯು ವ್ಯಾಪಿಸಿ ನಾನಾ ರೀತಿಯಾಗಿ ಸುಡಲು ನೋಡಲಾರದೆ ಎದುರಿಸಿದ ಸ್ವಾಮಿಯ ಕಾವಲುಗಾರರಾದ ದೇವ ಕಿನ್ನರ ಪನ್ನಗಾವಳಿಯನ್ನು ನಾಶವಾಗುವ ಹಾಗೆ ಹೊಡೆದು ಕೊಂದು ಭಯವು ಹರಡಿರಲು, ದೇವಪ್ರಭುವಾದ ನಿಮ್ಮನ್ನು ‘ಏನು ಮಾಡಬಲ್ಲರವರು’ ಎಂದು ಅಹಂಕಾರಮಗ್ನನಾದ ಒಬ್ಬನು ತಿಳಿದಿದ್ದಾನೆ.
ಕಂ|| ಎರಡು ರಥಮೊಳವು ನೋಟ
ಕ್ಕೆರಡಳವನೊಂದು ರಥಮೆ ತೋಟಿಗೆ ಪಲವಾ|
ಗಿರೆ ಪರಿದು ಕಣ್ಣೊಳಿನ್ನುಂ
ತಿರಿದಪುದುರಿದಪುದು ನಮ್ಮ ಬನಮೆನಿತನಿತುಂ|| ೯೫ ||
ಪದ್ಯ-೯೫:ಪದವಿಭಾಗ-ಅರ್ಥ:ಎರಡು ರಥಂ ಒಳವು ನೋಟಕ್ಕೆ (ನೋಡಲು ಎರಡು ರಥಗಳಿವೆ) ಎರಡಳು ಅವನ ಒಂದು ರಥಮೆ ತೋಟಿಗೆ (ಕಾಳೆಗಕ್ಕೆ) ಪಲವಾಗಿರೆ ಪರಿದು (ಅನೇಕ ರಥವಾಗಿರುವಂತೆ ಹರಿದು) ಕಣ್ಣೊಳ್ ಇನ್ನುಂ ತಿರಿದಪುದು (ಇನ್ನೂ ಕಣ್ಣಿನಲ್ಲಿ ತಿರುಗುತ್ತದೆ), ಉರಿದಪುದು ನಮ್ಮ ಬನಮ್ ಎನಿತನಿತುಂ (ವನವು ಎಷ್ಟಿತ್ತೋ ಅಷ್ಟೂ ಉರಿಯುತ್ತಿದೆ)
ಪದ್ಯ-೯೫:ಅರ್ಥ: ನೋಡಲು ಎರಡು ರಥಗಳಿವೆ. ಅದರಲ್ಲಿ ಒಂದು ರಥವೇ ಕಾಳೆಗದಲ್ಲಿ ಅನೇಕ ರಥವಾಗಿರುವಂತೆ ಹರಿದು ಇನ್ನೂ ಕಣ್ಣಿನಲ್ಲಿ ತಿರುಗುತ್ತದೆ. ನಮ್ಮ ವನವು ಎಷ್ಟಿತ್ತೋ ಅಷ್ಟೂ ಉರಿಯುತ್ತಿದೆ, ಎಂದು ಕಾವಲುಗಾರನು ಹೇಳಿದನು.
ವ|| ಎಂಬುದುಂ ಪೌಳೋವಿ ಪತಿ ತನ್ನ ದಿವ್ಯಜ್ಞಾನದೊಳ್ ನೋಡಿ ಚಕ್ರಿಯುಂ ವಿಕ್ರಮಾರ್ಜುನನುಮಪ್ಪುದನಱದು ಗಜಱ ಗರ್ಜಿಸಿ ವಿಳಯ ಕಾಳಾಂಬುದದಂತೆ ಮೊೞಗುಮಂ ಸಿಡಿಲ ಬಳಗಮನೊಳಕೊಂಡ ದ್ರೋಣ ಮಹಾದ್ರೋಣ ಪುಷ್ಕಳಾವರ್ತ ಸುವರ್ತಕಂಗಳೆಂಬ ಮುಗಿಲ್ಗಳಂ ಬೆಸಸಿದಾಗಳವು ವಿಂಧ್ಯಾಚಳಕೂಟ ಕೋಟಿಗಳೆ ಕಿೞ್ತೆೞ್ದುಬರ್ಪಂತೆ ಬಂದು ದೆಸೆಗಳೆಲ್ಲಮಂ ಮುಸುರಿ ಕೞ್ತಲಿಸಿ ಕವಿದು-
ವಚನ:ಪದವಿಭಾಗ-ಅರ್ಥ:ಎಂಬುದುಂ ಪೌಳೋವಿ ಪತಿ (ಇಂದ್ರನು) ತನ್ನ ದಿವ್ಯಜ್ಞಾನದೊಳ್ ನೋಡಿ ಚಕ್ರಿಯುಂ ವಿಕ್ರಮಾರ್ಜುನನುಂ ಅಪ್ಪುದನು ಅಱಿದು ಗಜಱಿ ಗರ್ಜಿಸಿ (ಅವರಿಬ್ಬರೂ ಶ್ರೀಕೃಷ್ಣಾರ್ಜುನರಾಗಿದ್ದುದನ್ನು ತಿಳಿದು ರೇಗಿ ಗರ್ಜಿಸಿ) ವಿಳಯ ಕಾಳಾಂಬುದದಂತೆ (ಪ್ರಳಯಕಾಲದ ಮೋಡದಂತೆ) ಮೊೞಗುಮಂ (ಗುಡುಗು) ಸಿಡಿಲ ಬಳಗಮನು ಒಳಕೊಂಡ (ತನ್ನ ಬಳಗವನ್ನು ಒಳಗೊಂಡ) ದ್ರೋಣ ಮಹಾದ್ರೋಣ ಪುಷ್ಕಳಾವರ್ತ ಸುವರ್ತಕಂಗಳೆಂಬ ಮುಗಿಲ್ಗಳಂ ಬೆಸಸಿದಾಗಳು ಅವು (ಮೋಡಗಲಿಗೆ ಆಜ್ಞೆಮಾಡಿದಾಗ ಅವು) ವಿಂಧ್ಯಾಚಳಕೂಟ ಕೋಟಿಗಳೆ ಕಿೞ್ತೆೞ್ದುಬರ್ಪಂತೆ ಬಂದು (ಅವು ವಿಂಧ್ಯಪರ್ವತದ ಕೋಟ್ಯಂತರ ಶಿಖರಗಳೇ ಕಿತ್ತೆದ್ದು ಬರುವ ಹಾಗೆ ಬಂದು) ದೆಸೆಗಳೆಲ್ಲಮಂ ಮುಸುರಿ ಕೞ್ತಲಿಸಿ ಕವಿದು (ದಿಕ್ಕುಗಳೆಲ್ಲವನ್ನೂ ಮುಸುಕಿ ಕತ್ತಲಾಗುವಂತೆ ಕವಿದು)-
ವಚನ:ಅರ್ಥ:ಎಂದು ಹೇಳಲು ಶಚೀಪತಿಯಾದ ಇಂದ್ರನು ತನ್ನ ದಿವ್ಯಜ್ಞಾನದಿಂದ ನೋಡಿ ಅವರಿಬ್ಬರೂ ಶ್ರೀಕೃಷ್ಣಾರ್ಜುನರಾಗಿದ್ದುದನ್ನು ತಿಳಿದು ರೇಗಿ ಗರ್ಜಿಸಿ ಪ್ರಳಯಕಾಲದ ಮೋಡದಂತೆ ಗುಡುಗು ಸಿಡಿಲುಗಳ ತನ್ನ ಬಳಗವನ್ನು ಒಳಗೊಂಡ ದ್ರೋಣ, ಮಹಾದ್ರೋಣ, ಪುಷ್ಕಳಾವರ್ತ, ಸಂವರ್ತಕಗಳೆಂಬ ಮೋಡಗಳಿಗೆ ಅಗ್ನಿಯನ್ನು ನಾಶಪಡಿಸಲು ಆಜ್ಞೆಮಾಡಿದನು. ಅವು ವಿಂಧ್ಯಪರ್ವತದ ಕೋಟ್ಯಂತರ ಶಿಖರಗಳೇ ಕಿತ್ತೆದ್ದು ಬರುವ ಹಾಗೆ ಬಂದು ದಿಕ್ಕುಗಳೆಲ್ಲವನ್ನೂ ಮುಸುಕಿ ಕತ್ತಲಾಗುವಂತೆ ಕವಿದು-
ಚಂ|| ಕವಿದುವು ಸಪ್ತಸಾಗರ ಜಲಂಗಳೆ ಲೋಕಮನೀಗಳೆಂಬಿನಂ
ಕವಿದು ಮುಗಿಲ್ಗಳಲ್ಲಿ ಕರೆಯುತ್ತಿರೆ ಪಾವಕನುರ್ಕುಗೆಟ್ಟಿದೆಂ|
ತುವೊ ತೊದಳಾಯ್ತು ದಾನಮೆನೆ ಮಾರುತಬಾಣದೆ ಮೇಘಮಾಲಿಕಾ
ನಿವಹಮನೆಚ್ಚು ಕೂಡೆ ಶರಪಂಜರಮಂ ಪಡೆದಂ ಗುಣಾರ್ಣವಂ|| ೯೬||
ಪದ್ಯ-೦೦:ಪದವಿಭಾಗ-ಅರ್ಥ:ಕವಿದುವು ಸಪ್ತಸಾಗರ ಜಲಂಗಳೆ ಲೋಕಮನು ಈಗಳೆಂಬಿನಂ (ಲೋಕವನ್ನೆಲ್ಲ ಏಳುಸಾಗರಗಳ ನೀರು ಈಗಲೇ ಮುಚ್ಚಿಕೊಂಡವೊ ಎನ್ನುವ ಹಾಗೆ ಕವಿದು) ಕವಿದು ಮುಗಿಲ್ಗಳು ಅಲ್ಲಿ ಕರೆಯುತ್ತಿರೆ (ಮಳೆಯನ್ನು ಸುರಿಸುತ್ತಿರಲು,) ಪಾವಕನು ಉರ್ಕುಗೆಟ್ಟು ಅದೆಂತುವೊ ತೊದಳಾಯ್ತು ದಾನಂ ಎನೆ (ಅಗ್ನಿಯು ಶಕ್ತಿಗುಂದಿ ಅದು ಹೇಗೋ ದಾನವು ಸುಳ್ಳಾಯಿತು ಎನ್ನಲು) ಮಾರುತಬಾಣದೆ (ವಾಯುವ್ಯಾಸ್ತ್ರದಿಂದ) ಮೇಘಮಾಲಿಕಾ ನಿವಹಮನು ಎಚ್ಚು (ಮೇಘಮಾಲೆಗಳ ಸಮೂಹವನ್ನು ಹೊಡೆದೋಡಿಸಿ) ಕೂಡೆ ಶರಪಂಜರಮಂ ಪಡೆದಂ (ಪಡೆದನು, ಒಂಟುಮಾಡಿದನು) ಗುಣಾರ್ಣವಂ (ತಕ್ಷಣವೇ ಒಂದು ಬಾಣದ ಪಂಜರವನ್ನು ನಿರ್ಮಿಸಿದನು)
ಪದ್ಯ-೦೦:ಅರ್ಥ: ಏಳುಸಾಗರಗಳ ನೀರು ಈಗಲೇ ಎನ್ನುವ ಹಾಗೆ ಲೋಕವನ್ನೆಲ್ಲ ಮೋಡಗಳು ಕವಿದು ಮಳೆಯನ್ನು ಸುರಿಸುತ್ತಿರಲು, ಅಗ್ನಿಯು ಶಕ್ತಿಗುಂದಿ ಹೇಗೋ ದಾನವು ಸುಳ್ಳಾಯಿತು ಎನ್ನಲು ಅರ್ಜುನನು ವಾಯವ್ಯಾಸ್ತ್ರದಿಂದ ಮೇಘಮಾಲೆಗಳ ಸಮೂಹವನ್ನು ಹೊಡೆದೋಡಿಸಿ ತಕ್ಷಣವೇ ಒಂದು ಬಾಣದ ಪಂಜರವನ್ನು ನಿರ್ಮಿಸಿದನು
ವ|| ಅಂತು ಪುಂಖಾನುಪುಂಖಮಾಗೆ ಪಾಯ್ವ ಶರಸಂಧಾನದೊಳೆಡೆವಱಿಯದಂತೆರಡುಂ ಕೆಯ್ಯೊಳ್ ತೋಡುಂ ಬೀಡುಂ ಕಾಣಲಾಗದಂತಿಸೆ ತುಱುಗಿ ಕವಿವಂಬಿನ ಮೞೆಯೆ ಮೞೆಯಂ ಮಾಣಿಸೆ ದಿವ್ಯಾಸ್ತ್ರಂಗಳಿಂ ನೂಱು ಯೋಜನದಳವಿಯ ಖಾಂಡವವನವೆಲ್ಲಮಂ ತಟ್ಟಿ ಮೆಡಱ ಮಶಕ ಮಾತ್ರಮಪ್ಪೊಡಂ ಮಿಸುಕಲ್ ಛಿದ್ರಮಿಲ್ಲದಂತಾಗೆ ಶರಪಂಜರದೊಳ್ ಮುಚ್ಚಿ ಮುಸುಕಿದಾಗಳಭಿನವ ಜೀಮೂತವಾಹನನ ದಿವ್ಯಾಸ್ತ್ರದ ಕೋಳ್ಗಿರಲಾಱದೆ ಜೀಮೂತಂಗಳೆಲ್ಲಂ ತೆರಳ್ಪೋಡಿದೊಡಗ್ನಿದೇವನಾವಗೆಯ ಕಿರ್ಚಿನಂತೊಳಗೊಳಗಳುರ್ದು
ವಚನ:ಪದವಿಭಾಗ-ಅರ್ಥ:ಅಂತು ಪುಂಖಾನುಪುಂಖಮಾಗೆ (ಹಾಗೆ ಒಂದರನಂತರ ಒಂದರಮತೆ) ಪಾಯ್ವ ಶರಸಂಧಾನದೊಳು ಎಡೆವಱಿಯದಂತೆ ಎರಡುಂ ಕೆಯ್ಯೊಳ್ ತೋಡುಂ ಬೀಡುಂ ಕಾಣಲಾಗದಂತಿಸೆ ತುಱುಗಿ ಕವಿವಂಬಿನ ಮೞೆಯೆ (ಎರಡು ಕೈಗಳಿಂದಲೂ ತೊಡುವುದು ಬಿಡುವುದು ಕಾನದಂತೆ ಏಕಪ್ರಕಾರವಾಗಿ ಪ್ರಯೋಗಮಾಡಿ ಬಾಣಗಳ ಮಳೆಯಿಂದ) ತುಱುಗಿ ಕವಿವಂಬಿನ ಮೞೆಯೆ ಮೞೆಯಂ ಮಾಣಿಸೆ (ಬಾಣಗಳ ಮಳೆಯಿಂದ ಮಳೆಯನ್ನು ಅರ್ಜುನನ್ನು ಮಳೆಯನ್ನು ನಿಲ್ಲಿಸಲು) ದಿವ್ಯಾಸ್ತ್ರಂಗಳಿಂ ನೂಱು ಯೋಜನದಳವಿಯ ಖಾಂಡವವನವೆಲ್ಲಮಂ ತಟ್ಟಿಂ- ಎಡರ (ದಿವ್ಯಾಸ್ತ್ರದಿಂದ ನೂರುಯೋಜನವಿಸ್ತಾರವುಳ್ಳ ಖಾಂಡವವನವೆಲ್ಲವನ್ನೂ ತಟ್ಟಿಯ ಹಾಗೆ ಹೆಣೆದು) ಮಶಕ ಮಾತ್ರಮಪ್ಪೊಡಂ ಮಿಸುಕಲ್ ಛಿದ್ರಮಿಲ್ಲದಂತಾಗೆ (ಸೊಳ್ಳೆಯಂತಹ ಪ್ರಾಣಿಯೂ ಚಲಿಸಲು ರಂಧ್ರವಿಲ್ಲದ ಹಾಗೆ) ಶರಪಂಜರದೊಳ್ ಮುಚ್ಚಿ ಮುಸುಕಿದ ಆಗಳು ಅಭಿನವ ಜೀಮೂತವಾಹನನ (ಅರ್ಜುನನ) ದಿವ್ಯಾಸ್ತ್ರದ ಕೋಳ್ಗೆ ಇರಲಾಱದೆ ಜೀಮೂತಂಗಳೆಲ್ಲಂ (ಮೋಡಗಳೆಲ್ಲವೂ) ತೆರಳ್ಪೋಡಿದೊಡೆ (ಚಲಿಸಿ ಹೋದಾಗ) ಅಗ್ನಿದೇವನು ಆವಗೆಯ ಕಿರ್ಚಿನಂತೆ ಒಳಗೊಳಗಳು ಉರ್ದು- (ಅಗ್ನಿದೇವನು ಕುಂಬಾರರ ಆವಿಗೆಯ ಬೆಂಕಿಯಂತೆ ಒಳಗೊಳಗೇ ವ್ಯಾಪಿಸಿ ಸುಟ್ಟನು- )
ವಚನ:ಅರ್ಥ:ಹಾಗೆ ಒಂದರನಂತರ ಒಂದರಮತೆ- ಪುಂಖಾನುಪುಂಖವಾಗಿ ತೋಡುಬೀಡುಗಳು ಕಾಣದಷ್ಟು ವೇಗದಿಂದ ಎರಡು ಕೈಗಳಿಂದಲೂ ತೊಡುವುದು ಬಿಡುವುದು ಕಾನದಂತೆ ಏಕಪ್ರಕಾರವಾಗಿ ಪ್ರಯೋಗಮಾಡಿ ಬಾಣಗಳ ಮಳೆಯಿಂದ ಮಳೆಯನ್ನು ಅರ್ಜುನನ್ನು ಮಳೆಯನ್ನು ನಿಲ್ಲಿಸಿದನು. ದಿವ್ಯಾಸ್ತ್ರದಿಂದ ನೂರುಯೋಜನವಿಸ್ತಾರವುಳ್ಳ ಖಾಂಡವವನವೆಲ್ಲವನ್ನೂ ತಟ್ಟಿಯ ಹಾಗೆ ಹೆಣೆದು ಸೊಳ್ಳೆಯಂತಹ ಪ್ರಾಣಿಯೂ ಚಲಿಸಲು ರಂಧ್ರವಿಲ್ಲದ ಹಾಗೆ ಬಾಣದ ಪಂಜರದಲ್ಲಿ ಮುಚ್ಚಿ ಮುಸುಕಿದನು. ಅಭಿನವ ಜೀಮೂತವಾಹನನಾದ ಅರ್ಜುನನ ದಿವ್ಯಾಸ್ತ್ರದ ಆಕ್ರಮಣವನ್ನು ಸಹಿಸಲಾರದೆ ಮೋಡಗಳೆಲ್ಲವೂ ಚಲಿಸಿ ಹೋದಾಗ ಅಗ್ನಿದೇವನು ಕುಂಬಾರನ ಆವಿಗೆಯ ಬೆಂಕಿಯಂತೆ ಒಳಗೊಳಗೇ ವ್ಯಾಪಿಸಿ ಸುಟ್ಟನು-
ಕಂ|| ವನ ಖಗ ಮೃಗ ವನ ತರು
ವನಚರ ವನ ವನಜ ನಿವಹಮುಳ್ಳನಿತುಂ ಸೀ|
ರನಿತುಮಣಮುೞಿದುದಿಲ್ಲೆಂ
ಬಿನಮುಂಡಂ ದಹನನಳುರ್ದು ಖಾಂಡವವನಮಂ|| ೯೭ ||
ಪದ್ಯ-೦೦:ಪದವಿಭಾಗ-ಅರ್ಥ:ವನ ಖಗ ಮೃಗ ವನತರು ವನಚರ ವನ ವನಜ ನಿವಹಮುಳ್ಳ ಅನಿತುಂ (ತಾವರೆಗಳ ಸಮೂಹದಲ್ಲಿ ಅಷ್ಟನ್ನೂ) ಸೀರನಿತುಂ ಅಣಂ ಉೞಿದುದಿಲ್ಲೆಂಬಿನಂ ಉಂಡಂ (ಒಂದು ಸಣ್ಣ ಸೀರು (ಹೇನಿನ ಮೊಟ್ಟೆ) ಉಳಿಯಲಿಲ್ಲವೆನ್ನುವ ಹಾಗೆ ಅಗ್ನಿಯು ಉಂಡನು- ಸುಟ್ಟನು) ದಹನನು ಅಳುರ್ದು ಖಾಂಡವವನಮಂ (ದಹನನು-ಅಗ್ನಿಯು ಖಾಂಡವನವನ್ನೆಲ್ಲ ವ್ಯಾಪಿಸಿ)
ಪದ್ಯ-೦೦:ಅರ್ಥ: ಕಾಡಿನಪಕ್ಷಿ, ಮೃಗ, ಕಾಡಿನಮರ, ಪ್ರಾಣಿ, ತಾವರೆಗಳ ಸಮೂಹದಲ್ಲಿ ಒಂದು ಸಣ್ಣ ಸೀರು (ಹೇನಿನ ಮೊಟ್ಟೆ) ಉಳಿಯಲಿಲ್ಲವೆನ್ನುವ ಹಾಗೆ ಅಗ್ನಿಯು ವ್ಯಾಪಿಸಿ ಖಾಂಡವನವನ್ನೆಲ್ಲ ತಿಂದು ಬಿಟ್ಟನು.

ಮಯನ ರಕ್ಷಣೆ[ಸಂಪಾದಿಸಿ]

ವ|| ಅಂತಾ ವನಗಹನಮೆಲ್ಲಂ ದಹನಮಯವಾದ ಪ್ರಸ್ತಾವದೊಳ್ ವಿಸ್ಮಯಮಾಗೆಮಯನೆಂಬ ದಾನವವಿಶ್ವಕರ್ಮಂ ನೆಗೆದುರಿವುರಿಮಾಲೆಗಳಂ ಗದೆಯೊಳ್ ಬೀಸುತ್ತುಂ ಪೊಱಮಡೆ ಪೊಱಮಡಲೀಯದೆ-
ವಚನ:ಪದವಿಭಾಗ-ಅರ್ಥ:ಅಂತು ಆ ವನಗಹನಮೆಲ್ಲಂ ದಹನಮಯವಾದ ಪ್ರಸ್ತಾವದೊಳ್ (ಹಾಗೆ ಆ ವನಪ್ರದೇಶವೆಲ್ಲ ಉರಿಗೆ ಸುಡುವ ಸಂದರ್ಭದಲ್ಲಿ) ವಿಸ್ಮಯಮಂ ಆಗೆ ಮಯನೆಂಬ ದಾನವ ವಿಶ್ವಕರ್ಮಂ ನೆಗೆದು (ಆಶ್ಚರ್ಯವಾಗುವ ಹಾಗೆ ಮಯನೆಂಬ ರಾಕ್ಷಸ ಶಿಲ್ಪಿಯು ಮೇಲೆದ್ದು ಹಾರಿ) ಉರಿವುರಿಮಾಲೆಗಳಂ ಗದೆಯೊಳ್ ಬೀಸುತ್ತುಂ ಪೊಱಮಡೆ (ಚಿಮ್ಮುತ್ತಿದ್ದ ಜ್ವಾಲೆಗಳ ಸಮೂಹಗಳನ್ನು ತನ್ನ ಗದೆಯಿಂದ ಬೀಸುತ್ತ ಹೊರಗೆ ಬಂದನು) ಪೊಱಮಡಲು ಈಯದೆ-
ವಚನ:ಅರ್ಥ:ಹಾಗೆ ಆ ವನಪ್ರದೇಶವೆಲ್ಲ ಉರಿಗೆ ಸುಡುವ ಸಂದರ್ಭದಲ್ಲಿ ಆಶ್ಚರ್ಯವಾಗುವ ಹಾಗೆ ಮಯನೆಂಬ ರಾಕ್ಷಸ ಶಿಲ್ಪಿಯು ಮೇಲೆದ್ದು ಹಾರಿ ಚಿಮ್ಮುತ್ತಿದ್ದ ಜ್ವಾಲೆಗಳ ಸಮೂಹಗಳನ್ನು ತನ್ನ ಗದೆಯಿಂದ ಬೀಸುತ್ತ ಹೊರಗೆ ಬಂದನು. ಅದಕ್ಕೆ ಅವಕಾಶಕೊಡದೆ-
ಕಂ|| ಒಂದು ದೆಸೆಯೊಳ್ ತಗುಳ್ವ ಮು
ಕುಂದನ ಕರಚಕ್ರಮೊಂದು ದೆಸೆಯೊಳ್ ನರನೆ|
ಚ್ಚೊಂದು ಶರಮೊಂದು ದೆಸೆಯೊಳ್
ಕುಂದದೆ ದಹನಾರ್ಚಿ ಸುತ್ತಿ ಮುತ್ತುವ ಪದದೊಳ್|| ೯೮ ||
ಪದ್ಯ-೯೮:ಪದವಿಭಾಗ-ಅರ್ಥ:ಒಂದು ದೆಸೆಯೊಳ್ ತಗುಳ್ವ ಮುಕುಂದನ ಕರಚಕ್ರಂ ಒಂದು (ಕೃಷ್ಣನ ಕಯ್ಯಿನ ಸುದರ್ಶನಚಕ್ರವೂ) ಒಂದು ದೆಸೆಯೊಳ್ ನರನು ಎಚ್ಚ ಒಂದು ಶರಂ (ಮತ್ತೊಂದು ಕಡೆ ಅರ್ಜುನನು ಹೂಡಿದ ಬಾಣವೂ) ಒಂದು ದೆಸೆಯೊಳ್ ಕುಂದದೆ ದಹನಾರ್ಚಿ(ಕಡಿಮೆಯಾಗದ ಉರಿಯ ಜ್ವಾಲೆ) ಸುತ್ತಿ ಮುತ್ತುವ ಪದದೊಳ್(ಸುತ್ತಿ ಮುತ್ತುವ ಸಮಯದಲ್ಲಿ. )
ಪದ್ಯ-೯೮:ಅರ್ಥ: ಒಂದು ಕಡೆ ಅಟ್ಟಿಬರುವ ಕೃಷ್ಣನ ಕಯ್ಯಿನ ಸುದರ್ಶನಚಕ್ರ, ಮತ್ತೊಂದು ಕಡೆ ಅರ್ಜುನನು ಹೂಡಿದ ಬಾಣ ಮತ್ತೊಂದೆಡೆಯಲ್ಲಿ ಸ್ವಲ್ಪವೂ ಕಡಿಮೆಯಾಗದ ಉರಿಯ ಜ್ವಾಲೆ, ಸುತ್ತಿ ಮುತ್ತುವ ಸಮಯದಲ್ಲಿ.
ಕಂ||ಶರಣಕ್ಕೆನಗರಿಕೇಸರಿ
ಯೆರಡು ಪದಾಂಬುಜಮುಮೀಗಳೆಂಬುದಮಾಗಳ್|
ಹರಿ ಚಕ್ರಂ ಕೊಳ್ಳದೆ ನರ
ಶರಮುರ್ಚದೆ ದಹನಶಿಖೆಗಳಳುರದೆ ಅವನಂ|| ೯೯||
ಪದ್ಯ-೯೯:ಪದವಿಭಾಗ-ಅರ್ಥ: ಶರಣಕ್ಕೆ ಎನಗೆ ಅರಿಕೇಸರಿಯ ಎರಡು ಪದಾಂಬುಜಮುಂ (ಪಾದಕಮಲಗಳನ್ನು) ಈಗಳ್ ಎಂಬುದಂ (ಈಗ ಶರಣು ಬಂದಿದ್ದೇನೆ ನನಗೆ ರಕ್ಷೆ, ಎಂದಾಗ) ಆಗಳ್ ಹರಿ ಚಕ್ರಂ ಕೊಳ್ಳದೆ ನರಶರಂ ಉರ್ಚದೆ ದಹನಶಿಖೆಗಳಳು ಉರದೆ ಅವನಂ (ಅರ್ಜುನನ ಬಾಣಗಳು ಬೇಸಲಿಲ್ಲ. ಅಗ್ನಿಜ್ವಾಲೆಗಳು ಅವನನ್ನು ಸುಡಲಿಲ್ಲ.)
ಪದ್ಯ-೯೯:ಅರ್ಥ:ತಕ್ಷಣವೇ ಮಯನು ‘ಅರ್ಜುನನ ಎರಡು ಪಾದಕಮಲಗಳನ್ನು ಈಗ ಶರಣು ಬಂದಿದ್ದೇನೆ ನನಗೆ ರಕ್ಷೆ, ಎಂದಾಗ ಒಡನೆಯೇ ಕೃಷ್ಣನ ಸುದರ್ಶನವು ಪ್ರಯೋಗವಾಗದೆ ನಿಂತಿತು. ಅರ್ಜುನನ ಬಾಣಗಳು ಬೇಸಲಿಲ್ಲ. ಅಗ್ನಿಜ್ವಾಲೆಗಳು ಅವನನ್ನು ಸುಡಲಿಲ್ಲ.
ವ|| ಆಗಳ್ ಮಯಂ ವಿಸ್ಮಯಂಬಟ್ಟು ಪೊಡವಟ್ಟು ಪೋದನಾಗಳಾ ವನಾಂತರಾಳದೊಳಿರ್ಪ ತಕ್ಷಕನ ಮಗನಪ್ಪಶ್ವಸೇನನೆಂಬ ಪನ್ನಗಂ ತನ್ನ ತಾಯಂ ತನ್ನ ಬಾಲಮಂ ಕರ್ಚಲ್ವೇೞ್ದು ದಹನಾರ್ಚಿಗಳಿಂ ಬರ್ದುಂಕಿ ನೆಗೆದು ಪಾಱುವಾಗಳದನೆರೞ್ಖಂಡಮಪ್ಪಿನಮಾಖಂಡಳ ತನಯನಿಸುವುದುಂ ತನ್ನ ಬಾಲಂಬೆರಸುರಿಯೊಳ್ ಬಿೞ್ದು ಮಿಡುಮಿಡುಮಿಡುಕುತಿರ್ದ ಜನನಿಯಂ ಕಂಡು ಪಾವುಗಳುಳ್ಳ ಪಗೆಯಂ ಮರೆಯವೆಂಬುದಂ ನನ್ನಿಮಾಡಿ-
ವಚನ:ಪದವಿಭಾಗ-ಅರ್ಥ:ಆಗಳ್ ಮಯಂ ವಿಸ್ಮಯಂಬಟ್ಟು ಪೊಡವಟ್ಟು (ಆಶ್ಚರ್ಯಪಟ್ಟು ನಮಸ್ಕಾರ ಮಾಡಿ) ಪೋದನಾಗಳು ಆ ವನಾಂತರಾಳದೊಳು ಇರ್ಪ ತಕ್ಷಕನ ಮಗನಪ್ಪ ಅಶ್ವಸೇನನೆಂಬ ಪನ್ನಗಂ(ಆ ಕಾಡಿನ ಮಧ್ಯದಲ್ಲಿದ್ದ ತಕ್ಷಕನ ಮಗನಾದ ಅಶ್ವಸೇನನೆಂಬ ಹಾವು) ತನ್ನ ತಾಯಂ ತನ್ನ ಬಾಲಮಂ ಕರ್ಚಲ್ವೇೞ್ದು (ಕಚ್ಚಿಕೊಳ್ಳುವಂತೆ ಹೇಳಿ) ದಹನಾರ್ಚಿಗಳಿಂ ಬರ್ದುಂಕಿ ನೆಗೆದು (ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಂಡು ಬದುಕಿ ನೆಗೆದು) ಪಾಱುವಾಗಳ್ ಅದನು ಎರೞ್ಖಂಡಮಪ್ಪಿನಂ (ಅರ್ಜುನನು ಎರಡುತುಂಡಾಗುತ್ತಿರಲು- ಹಾಗೆ ಹೊಡೆದನು.) ಆಖಂಡಳ ತನಯನು ಇಸುವುದುಂ ತನ್ನ ಬಾಲಂಬೆರಸು ಉರಿಯೊಳ್ ಬಿೞ್ದು (ತನ್ನ ಬಾಲದೊಡನೆ ಬೆಂಕಿಯಲ್ಲಿ ಬಿದ್ದು ) ಮಿಡುಮಿಡುಮಿಡುಕುತಿರ್ದ ಜನನಿಯಂ ಕಂಡು, ಪಾವುಗಳು ಉಳ್ಳ ಪಗೆಯಂ ಮರೆಯವೆಂಬುದಂ ನನ್ನಿಮಾಡಿ (ಹಾವುಗಳು ತಮ್ಮಲ್ಲಿರುವ ದ್ವೇಷವನ್ನು ಮರೆಯುವುದಿಲ್ಲ ಎಂಬುದನ್ನು ಸತ್ಯವನ್ನಾಗಿ ಮಾಡುವಂತೆ)-
ವಚನ:ಅರ್ಥ:ಮಯನು ಆಶ್ಚರ್ಯಪಟ್ಟು ನಮಸ್ಕಾರ ಮಾಡಿ ಹೊರಟು ಹೋದನು. ಆಗ ಆ ಕಾಡಿನ ಮಧ್ಯದಲ್ಲಿದ್ದ ತಕ್ಷಕನ ಮಗನಾದ ಅಶ್ವಸೇನನೆಂಬ ಹಾವು ತನ್ನ ತಾಯಿಯನ್ನು ತನ್ನ ಬಾಲವನ್ನು ಕಚ್ಚಿಕೊಳ್ಳುವಂತೆ ಹೇಳಿ ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಂಡು ಬದುಕಿ ನೆಗೆದು ಹಾರುವಾಗ ಅದನ್ನು ಇಂದ್ರನಂದನನಾದ ಅರ್ಜುನನು ಎರಡುತುಂಡಾಗುವ ಹಾಗೆ ಹೊಡೆದನು. ಬಾಲದೊಡನೆ ಬೆಂಕಿಯಲ್ಲಿ ಬಿದ್ದು ಮಿಡುಮಿಡುಕುತ್ತಿದ್ದ ತನ್ನ ತಾಯಿಯನ್ನು ಕಂಡು ಕೆರಳಿತು. ಹಾವುಗಳು ತಮ್ಮಲ್ಲಿರುವ ದ್ವೇಷವನ್ನು ಮರೆಯುವುದಿಲ್ಲ ಎಂಬುದನ್ನು ಸತ್ಯವನ್ನಾಗಿ ಮಾಡುವಂತೆ-
ಕಂ|| ಪಗೆ ಸಾಱುವುದುಂ ಕೊಲ್ಲೆಂ
ಪಗೆ ಸಾಱಿದ ನಿನ್ನನಾರ ಮರೆಯಂ ಪೊಕ್ಕುಂ|
ಪಗೆಯಂ ನೆಱಪೆನೆ ನೆಱಪುವ
ಬಗೆಯೊಳೆ ಪೊಕ್ಕಂ ಕಡಂಗಿ ಕರ್ಣನ ದೊಣೆಯಂ|| ೧೦೦ ||
ಪದ್ಯ-೧೦೦:ಪದವಿಭಾಗ-ಅರ್ಥ:ಪಗೆ ಸಾಱುವುದುಂ (ಶತ್ರುತ್ವವನ್ನು ಸಾರಿ ಹೇಳಲು) ಕೊಲ್ಲೆಂ ಪಗೆ ಸಾಱಿದ ನಿನ್ನನು (ದ್ವೇಷವನ್ನು ಸಾರಿದ ನಿನ್ನನ್ನು ಕೊಲ್ಲುವುದಿಲ್ಲ) ಆರ ಮರೆಯಂ ಪೊಕ್ಕುಂ ಪಗೆಯಂ ನೆಱಪು ಎನೆ (ಯಾರ ಆಶ್ರಯವನ್ನಾದರೂ ಪಡೆದು ದ್ವೇಷವನ್ನು ತೀರಿಸು’) ನೆಱಪುವ ಬಗೆಯೊಳೆ ಪೊಕ್ಕಂ ಕಡಂಗಿ ಕರ್ಣನ ದೊಣೆಯಂ (ಅದನ್ನು ನೆರವೇರಿಸುವ ಮನಸ್ಸಿನಿಂದ ಕೋಪಿಸಿಕೊಂಡು ಕರ್ಣನ ಬತ್ತಳಿಕೆಯನ್ನು ಪ್ರವೇಶಿಸಿದನು- ಸರ್ಪ)
ಪದ್ಯ-೧೦೦:ಅರ್ಥ: ತನ್ನ ಶತ್ರುತ್ವವನ್ನು ಸಾರಿ ಹೇಳಲು ಅರ್ಜುನನು ಅದನ್ನು ಕುರಿತು ‘ದ್ವೇಷವನ್ನು ಸಾರಿದ ನಿನ್ನನ್ನು ಕೊಲ್ಲುವುದಿಲ್ಲ. ಯಾರ ಆಶ್ರಯವನ್ನಾದರೂ ಪಡೆದು ದ್ವೇಷವನ್ನು ತೀರಿಸು’ ಎಂದನು. ಅದನ್ನು ಪೂರೈಸುವ ಮನಸ್ಸಿನಿಂದ ಕೋಪಿಸಿಕೊಂಡು ಕರ್ಣನ ಬತ್ತಳಿಕೆಯನ್ನು ಸೇರಿದನು

ವ|| ಅಂತಶ್ವಸೇನನರ್ಧಾವಲಿಕಮೆಂಬಮೋಘಾಸ್ತ್ರಮಾಗಿ ಕರ್ಣನ ದೊಣೆಯೊಳಿರ್ದನಿತ್ತ ಖಾಂಡವವನದೊಳಗೆ ಮಂದಪಾಲನೆಂಬ ಮುನಿಗಮೊಂದು ಲಾವಗೆಗಂ ಪುಟ್ಟಿದ ನಾಲ್ಕುಂ ಲಾವಗೆಗಳಗ್ನಿಸೂಕ್ತಂಗಳನೋದುತ್ತುಮದಿರದಿದಿರಂ ಬರೆ ಮೆಚ್ಚಿ ಬರವನಗ್ನಿದೇವಂ ಬೇಡಿಕೊಳ್ಳಿಮೆಂದೊಡೆಮ್ಮನ್ವಯಕ್ಕೆ ನೀನ್ ತಣ್ಣಿದೆಯಾಗೆಂದು ಬೇಡುವುದುಂ ತದಸ್ತುವೆಂದನಿತ್ತಲಿಂದ್ರಂ ತನ್ನ ಬಲಮೆಲ್ಲಮಳ್ಕಿಮೆಳ್ಕಿ ದಂತಾದುದೆಂಬುದಂ ಕೇಳ್ದು-

ವಚನ:ಪದವಿಭಾಗ-ಅರ್ಥ:ಅಂತು ಅಶ್ವಸೇನನು ಅರ್ಧಾವಲಿಕಮೆಂಬ ಅಮೋಘಾಸ್ತ್ರಮಾಗಿ ಕರ್ಣನ ದೊಣೆಯೊಳ್ ಇರ್ದನು (ಕರ್ಣನ ಬತ್ತಳಿಕೆಯಲ್ಲಿದ್ದನು) ಇತ್ತ ಖಾಂಡವವನದೊಳಗೆ ಮಂದಪಾಲನೆಂಬ ಮುನಿಗಂ ಒಂದು ಲಾವಗೆಗಂ ಪುಟ್ಟಿದ ನಾಲ್ಕುಂ ಲಾವಗೆಗಳು (ಒಂದು ಲಾವುಕಪಕ್ಷಿಗೂ ಹುಟ್ಟಿದ ನಾಲ್ಕು ಲಾವುಕಹಕ್ಕಿಗಳು) ಅಗ್ನಿಸೂಕ್ತಂಗಳನು ಓದುತ್ತುಂ ಅದು ಇರದೆ ಇದಿರಂ ಬರೆ ಮೆಚ್ಚಿ ಬರವನಗ್ನಿದೇವಂ (ಎದುರಾಗಿ ಬರಲು ಅವುಗಳ ಬರುವಿಕೆಗೆ ಸಂತೋಷಪಟ್ಟು ಅಗ್ನಿದೇವನು) ಬೇಡಿಕೊಳ್ಳಿಂ ಎಂದೊಡೆ ಎಮ್ಮನ್ವಯಕ್ಕೆ ನೀನ್ ತಣ್ಣಿದೆಯಾಗೆಂದು ಬೇಡುವುದುಂ (‘ನಮ್ಮ ವಂಶಕ್ಕೆ ನೀನು ಹಿತವಂತನಾಗು’ ಎಂದು ಬೇಡಿಕೊಂಡವು) ತದಸ್ತುವೆಂದುಂ (ಹಾಗೆಯೇ ಆಗಲಿ ಎಂದು ವರವನ್ನು ಕೊಟ್ಟನು) ಇತ್ತಲಿಂದ್ರಂ ತನ್ನ ಬಲಮೆಲ್ಲಂ ಅಳ್ಕಿಮೆಳ್ಕಿ ದಂತಾದುದೆಂಬುದಂ ಕೇಳ್ದು (ಇಂದ್ರನು ತನ್ನ ಬಲವೆಲ್ಲ ನಾಶವಾಗಿ ಸಾರಿಸಿದಂತಾಯಿತೆಂಬುದನ್ನು ಕೇಳಿ)-
ವಚನ:ಅರ್ಥ:ಹಾಗೆ ಅಶ್ವಸೇನನು ಅರ್ಧಾವಲೀಕವೆಂಬ ಅಮೋಘವಾದ ಬಾಣವಾಗಿ ಕರ್ಣನ ಬತ್ತಳಿಕೆಯಲ್ಲಿದ್ದನು. ಈ ಕಡೆ ಖಾಂಡವವನದಲ್ಲಿ ಮದನಪಾಲನೆಂಬ ಋಷಿಗೂ ಒಂದು ಲಾವುಕಪಕ್ಷಿಗೂ ಹುಟ್ಟಿದ ನಾಲ್ಕು ಲಾವುಕಹಕ್ಕಿಗಳು ಅಗ್ನಿಸೂತ್ರಮಂತ್ರಗಳನ್ನು ಜಪಿಸುತ್ತ ಬೆಂಕಿಗೆ ಹೆದರದೆ ಎದುರಾಗಿ ಬರಲು ಅವುಗಳ ಬರುವಿಕೆಗೆ ಸಂತೋಷಪಟ್ಟು ಅಗ್ನಿದೇವನು (ನಿಮಗೆ ಬೇಕಾದ) ವರವನ್ನು ಕೇಳಿಕೊಳ್ಳಿ ಎನ್ನಲು ‘ನಮ್ಮ ವಂಶಕ್ಕೆ ನೀನು ಹಿತವಂತನಾಗು’ ಎಂದು ಬೇಡಿಕೊಂಡವು. ಅಗ್ನಿಯು ಹಾಗೆಯೇ ಆಗಲಿ ಎಂದು ವರವನ್ನು ಕೊಟ್ಟನು. ಈ ಕಡೆ ಇಂದ್ರನು ತನ್ನ ಬಲವೆಲ್ಲ ನಾಶವಾಗಿ ಸಾರಿಸಿದಂತಾಯಿತೆಂಬುದನ್ನು ಕೇಳಿ- (ಕೇಳಿದನು. ಆಗ)
ಚಂ|| ಮಗನೆನಗೆಂದು ಪೇೞು ಪಿಡಿದು ಕಟ್ಟದೆ ಮಾಣ್ಬೆನೆ ಪಾರ್ಥನಂ ಧರಿ
ತ್ತಿಗೆ ಗುರುವೆಂದು ವಜ್ರದೊಳುರುಳ್ಚದೆ ಮಾಣ್ಬೆನೆ ಚಕ್ರಿಯಂ ಕರಂ|
ಬಗೆಯದೆ ಗೊಡ್ಡಮಾಡಿದರ್ಗೆ ತಕ್ಕುದನೀಗಳೆ ಮಾೞ್ಪೆನೆಂದು ತೊ
ಟ್ಟಗೆ ಪೊಱಮಟ್ಟನೇಱಿ ನಿಜವಾಹನಮಂ ದಿವದಿಂ ಸುರಾಪಂ|| ೧೦೧||
ಪದ್ಯ-೧೦೧:ಪದವಿಭಾಗ-ಅರ್ಥ:ಮಗನು ಎನಗೆಂದು ಪೇೞು ಪಿಡಿದು ಕಟ್ಟದೆ ಮಾಣ್ಬೆನೆ ಪಾರ್ಥನಂ (ನನ್ನ ಮಗನೆಂದು ಅರ್ಜುನನನ್ನು ಹಿಡಿದು ಕಟ್ಟದೆ ಬಿಡುತ್ತೇನೆಯೇ?) ಧರಿತ್ತಿಗೆ ಗುರುವೆಂದು ವಜ್ರದೊಳು ಉರುಳ್ಚದೆ ಮಾಣ್ಬೆನೆ ಚಕ್ರಿಯಂ (ಲೋಕಗುರುವೆಂದು ಕೃಷ್ಣನನ್ನು ವಜ್ರಾಯುಧದಿಂದ ಉರುಳಿಸದೆ ಬಿಡುತ್ತೇನೆಯೇ?) ಕರಂ ಬಗೆಯದೆ ಗೊಡ್ಡಮಾಡಿದರ್ಗೆ (ನನ್ನನ್ನು ಸ್ವಲ್ಪವೂ ಲಕ್ಷಿಸದೆ ಚೇಷ್ಟೆಮಾಡಿದವರಿಗೆ/ ಕೈಲಾಗದ ನಪುಂಸಕನನ್ನು ಮಾಡಿದವರಿಗೆ) ತಕ್ಕುದನು ಈಗಳೆ ಮಾೞ್ಪೆನೆಂದು (ತಕ್ಕದ್ದನ್ನು ಈಗಲೇ ಮಾಡುತ್ತೇನೆ’ ಎಂದು) ತೊಟ್ಟಗೆ ಪೊಱಮಟ್ಟನೇಱಿ ನಿಜವಾಹನಮಂ ದಿವದಿಂ ಸುರಾಪಂ(ತಟ್ಟನೆ ದೇವೇಂದ್ರನು ತನ್ನ ವಾಹನವಾದ ಐರಾವತವನ್ನು ಹತ್ತಿ ಸ್ವರ್ಗದಿಂದ ಹೊರಟನು)
ಪದ್ಯ-೧೦೧:ಅರ್ಥ: ‘ನನ್ನ ಮಗನೆಂದು ಅರ್ಜುನನನ್ನು ಹಿಡಿದು ಕಟ್ಟದೆ ಬಿಡುತ್ತೇನೆಯೇ? ಲೋಕಗುರುವೆಂದು ಕೃಷ್ಣನನ್ನು ವಜ್ರಾಯುಧದಿಂದ ಉರುಳಿಸದೆ ಬಿಡುತ್ತೇನೆಯೇ? ನನ್ನನ್ನು ಸ್ವಲ್ಪವೂ ಲಕ್ಷಿಸದೆ ಚೇಷ್ಟೆಮಾಡಿದವರಿಗೆ ತಕ್ಕದ್ದನ್ನು ಈಗಲೇ ಮಾಡುತ್ತೇನೆ’ ಎಂದು ಇದ್ದಕ್ಕಿದ್ದ ಹಾಗೆ ದೇವೇಂದ್ರನು ತನ್ನ ವಾಹನವಾದ ಐರಾವತವನ್ನು ಹತ್ತಿ ಸ್ವರ್ಗದಿಂದ ಹೊರಟನು.
ವ|| ಅಂತು ದೇವನಿಕಾಯಂ ಬೆರಸು ಯುದ್ಧಸನ್ನದ್ಧನಾಗಿ ಪರಸೈನ್ಯ ಭೈರವನೊಳಿಱಿವೆನೆಂಬ ಪೞುವಗೆಯೊಳ್ ಭೈರವಂಬಾಯ್ವಂತೆ ಬಂದು ನಿಂದ ಪುರಂದರನಲ್ಲಿಗೆ ಸರಸಿಜಸಂಭವಂ ಬಂದು ಮಾರ್ಕೊಂಡು-
ವಚನ:ಪದವಿಭಾಗ-ಅರ್ಥ:ಅಂತು ದೇವನಿಕಾಯಂ ಬೆರಸು(ದೇವತೆಗಳ ಸಮೂಹವನ್ನು ಕೂಡಿಕೊಂಡು) ಯುದ್ಧಸನ್ನದ್ಧನಾಗಿ ಪರಸೈನ್ಯ ಭೈರವನೊಳು ಅಱಿವೆನೆಂಬ ಪೞುವಗೆಯೊಳ್ (ಅರ್ಜುನನೊಡನೆ ಯುದ್ಧ ಮಾಡುತ್ತೇನೆಂಬ ಕೆಟ್ಟಮನಸ್ಸಿನಿಂದ- ಪೞುವಗೆಯೊಳ್ :ಪಳು-ಕೆಟ್ಟ ಹಗೆಯೊಳು) ಭೈರವಂಬಾಯ್ವಂತೆ (ಭೈರವನು ನುಗ್ಗುವಹಾಗೆ) ಬಂದು ನಿಂದ ಪುರಂದರನಲ್ಲಿಗೆ ಸರಸಿಜಸಂಭವಂ (ಇಂದ್ರನ ಹತ್ತಿರಕ್ಕೆ ಬ್ರಹ್ಮನು) ಬಂದು ಮಾರ್ಕೊಂಡು (ಎದುರು ನಿಂತು)-
ವಚನ:ಅರ್ಥ:ದೇವತೆಗಳ ಸಮೂಹವನ್ನು ಕೂಡಿಕೊಂಡು ಯುದ್ಧಕ್ಕೆ ಸಿದ್ಧನಾಗಿ ಅರ್ಜುನನೊಡನೆ ಯುದ್ಧ ಮಾಡುತ್ತೇನೆಂಬ ಕೆಟ್ಟಮನಸ್ಸಿನಿಂದ ಭೈರವನು ನುಗ್ಗುವ ಹಾಗೆ ಬಂದು ನಿಂತ ಇಂದ್ರನ ಹತ್ತಿರಕ್ಕೆ ಬ್ರಹ್ಮನು ಬಂದು ಅವನನ್ನು ತಡೆದು ಎದುರು ನಿಂತು-
ಚಂ|| ಬನಮನೆ ಕಾಯಲೆಂದಿಱಿವೆಯಪ್ಪೊಡೆ ಮುನ್ನಮೆ ಪೋದುದಂದು ಪಾ
ರ್ಥನೊಳೆನಗೇವಮೆಂಬ ಬಗೆಯುಳ್ಳೊಡೆ ನಿನ್ನಯ ಪುತ್ರನಚ್ಯುತಂ|
ಗಿನಿಸೆರ್ದೆ ನೋವೆಯಪ್ಪೊಡದು ಕೂಡದು ಮೂವರೊಳೊರ್ವನೆಮ್ಮ ಮಾ
ತಿನಿತೆ ಗುಣಾರ್ಣವಂಗೆ ಕುಡು ಗೆಲ್ಲಮನಿಂತಿದೆ ಕಜ್ಜದುಜ್ಜುಗಂ|| ೧೦೨ ||
ಪದ್ಯ-೧೦೨:ಪದವಿಭಾಗ-ಅರ್ಥ:ಬನಮನೆ (ವನವನೆ- ವನವನ್ನು) ಕಾಯಲೆಂದು ಇಱಿವೆಯಪ್ಪೊಡೆ (ಇರಿಯುವುದಾದರೆ- ಯುದ್ಧಮಾಡುವುದಾದರೆ) ಮುನ್ನಮೆ ಪೋದುದಂದು (ಅದು ಮೊದಲೇ ನಾಶವಾಗಿದೆ) ಪಾರ್ಥನೊಳು ಎನಗೇವಮೆಂಬ ಬಗೆಯುಳ್ಳೊಡೆ (ಪಾರ್ಥನಲ್ಲಿ ನಿನಗೆ ದ್ವೇಷವಿದೆಯೆನ್ನುವುದಾದರೆ) ನಿನ್ನಯ ಪುತ್ರನು ಅಚ್ಯುತಂಗೆ ಇನಿಸು ಎರ್ದೆನೋವೆಯಪ್ಪೊಡದು ಕೂಡದು (ಎದೆನೋವು-ಕೋಪ ಇರುವುದಾದರೆ ಅದು ಕೂಡದು) ಮೂವರೊಳು ಒರ್ವನು ಎಮ್ಮ (ಅವನು ನಮ್ಮ ತ್ರಿಮೂರ್ತಿಗಳಲ್ಲೊಬ್ಬ) ಮಾತು ಇನಿತೆ (ನಮ್ಮ ಮಾತಿಷ್ಟೆ ) ಗುಣಾರ್ಣವಂಗೆ ಕುಡು ಗೆಲ್ಲಮನು ಇಂತಿದೆ ಕಜ್ಜದ ಉಜ್ಜುಗಂ (ಈಗ ಮಾಡಬೇಕಾದ ಕಾರ್ಯವಿಷ್ಟೆ)|
ಪದ್ಯ-೧೦೨:ಅರ್ಥ: “ನೀನು ವನವನ್ನು ರಕ್ಷಿಸುವುದಕ್ಕಾಗಿ ಯುದ್ಧಮಾಡುವುದಾದರೆ ಅದು ಮೊದಲೇ ನಾಶವಾಗಿದೆ. ಪಾರ್ಥನಲ್ಲಿ ನಿನಗೆ ದ್ವೇಷವಿದೆಯೆನ್ನುವುದಾದರೆ ಅವನು ನಿನ್ನ ಮಗ; ಕೃಷ್ಣನ ವಿಷಯದಲ್ಲಿ ಹೃದಯವೇದನೆ (ಕೋಪ)ಯಿರುವುದಾದರೆ ಅದು ಕೂಡದು. ಅವನು ತ್ರಿಮೂರ್ತಿಗಳಲ್ಲೊಬ್ಬ, ನಮ್ಮ ಮಾತಿಷ್ಟೆ ; ಗುಣಾರ್ಣವನಾದ ಅರ್ಜುನನಿಗೆ ಜಯವನ್ನು ಕೊಡು. ಈಗ ಮಾಡಬೇಕಾದ ಕಾರ್ಯವಿಷ್ಟೆ.”
ವ|| ಎಂದು ಕಮಲಾಸನನಾಸೆದೋಱಿ ನುಡಿದುಳ್ಳುದನೆ ನುಡಿದೊಡಂತೆಗೆಯ್ವೆನೆಂದು-
ವಚನ:ಪದವಿಭಾಗ-ಅರ್ಥ:ಎಂದು ಕಮಲಾಸನನು ಆಸೆದೋಱೆ ನುಡಿದು (ಆಸೆ- ಕರ್ತವ್ಯವನ್ನು ತೋರಲು) ಉಳ್ಳುದನೆ ನುಡಿದೊಡೆ (ಇರುವುದನ್ನು ಇದ್ದಹಾಗೆ ಹೇಳಲು) ಅಂತೆಗೆಯ್ವೆನೆಂದು (ಹಾಗೆ ಮಾದುವೆನೆಂದು)-
ವಚನ:ಅರ್ಥ: ಎಂದು ಬ್ರಹ್ಮನು ಮಾಡಬೇಕಾದ ಕರ್ತವ್ಯವನ್ನು ತೋರಿಸಲು, ಇರುವುದನ್ನು ಇದ್ದಹಾಗೆ ಹೇಳಲು, ಇಂದ್ರನು ಹಾಗೆ ಮಾದುವೆನೆಂದು-
ಚಂ|| ಸುರಿವರಲೊಂದು ಬೆಳ್ಸರಿಯದಾತ್ಮತನೂಭವನುತ್ತಮಾಂಗದೊಳ್
ದೊರೆಕೊಳೆ ನಿಲ್ಲದಲ್ಲಿ ಕುಸುಮಂ ಕೆಲವಲ್ಲುಗೆ ತನ್ನ ರತ್ನವಿ|
ಸುರಿತ ಕಿರೀಟಮಂ ಕವಿದು ತಾನೆ ನರಂಗೆ ಕಿರೀಟಿ ನಾಮಮಂ
ಸರಸದಿನಾಗಳುಚ್ಚರಿಸಿ ಸಾಹಸಮಂ ಪೊಗೞ್ದಂ ಸುರಾಧಿಪಂ|| ೧೦೩ ||
ಪದ್ಯ-೧೦೩:ಪದವಿಭಾಗ-ಅರ್ಥ:ಸುರಿವ ಅರಲ್ ಒಂದು ಬೆಳ್ಸರಿಯದ ಆತ್ಮತನೂಭವನ ಉತ್ತಮಾಂಗದೊಳ್ ದೊರೆಕೊಳೆ (ಸುರಿಯುತ್ತಿರುವ ಹೂಗಳು -ಧಾರಾಕಾರವಾಗಿ ಬಿಳಿಯದಾರೆಯಾಗಿ,-ತನ್ನ ಮಗನಾದ ಅರ್ಜುನನ ತಲೆಯ ಮೇಲೆ-: ತನ್ನ ಮಗನಾದ ಅರ್ಜುನನ ತಲೆಯ ಮೇಲೆ ಧಾರಾಕಾರವಾಗಿ ಸುರಿಯುತ್ತಿರುವ ಹೂಗಳು) ನಿಲ್ಲದಲ್ಲಿ ಕುಸುಮಂ ಕೆಲವು ಅಲ್ಲುಗೆ (ನಿಲ್ಲದೆ ಅಲ್ಲಿ ಬೀಳುತ್ತಿರಲು) ತನ್ನ ರತ್ನವಿಸುರಿತ ಕಿರೀಟಮಂ ಕವಿದು ತಾನೆ (ಇಂದ್ರನು ತಾನೇ ರತ್ನಕಾಂತಿಯಿಂದ ಕೂಡಿದ ತನ್ನ ಕಿರೀಟವನ್ನು ಅರ್ಜುನನ ತಲೆಯ ಮೇಲಿಟ್ಟು) ನರಂಗೆ ಕಿರೀಟಿ ನಾಮಮಂ ಸರಸದಿಂ ಆಗಳು ಉಚ್ಚರಿಸಿ (ಅರ್ಜುನನಿಗೆ ‘ಕಿರೀಟಿ’ ಎಂಬ ಹೆಸರನ್ನು ಸರಸವಾಗಿ ಇಟ್ಟು) ಸಾಹಸಮಂ ಪೊಗೞ್ದಂ ಸುರಾಧಿಪಂ (ಇಂದ್ರನು ಅವನ ಸಾಹಸವನ್ನು ಹೊಗಳಿದನು)
ಪದ್ಯ-೧೦೩:ಅರ್ಥ: ತನ್ನ ಮಗನಾದ ಅರ್ಜುನನ ತಲೆಯ ಮೇಲೆ ಧಾರಾಕಾರವಾಗಿ ಸುರಿಯುತ್ತಿರುವ ಹೂಗಳು ಆ ಸ್ಥಳದಲ್ಲಿಯೇ ನಿಲ್ಲದೆ ಅಲ್ಲಿ ಬೀಳುತ್ತಿರಲು ಇಂದ್ರನು ತಾನೇ ರತ್ನಕಾಂತಿಯಿಂದ ಕೂಡಿದ ತನ್ನ ಕಿರೀಟವನ್ನು ಅರ್ಜುನನ ತಲೆಯ ಮೇಲಿಟ್ಟು ಅರ್ಜುನನಿಗೆ ‘ಕಿರೀಟಿ’ ಎಂಬ ಹೆಸರನ್ನು ಸರಸವಾಗಿ ಇಟ್ಟು ಅವನ ಸಾಹಸವನ್ನು ಹೊಗಳಿದನು
ವ|| ಅಂತು ಪೊಗೞ್ದು ಖಾಂಡವವನದಹನದೊಳಾದ ಪೊಗೆಯೊಳಮಲ್ಲಿಯ ಮಹಾನಾಗಂಗಳ ವಿಷಂಬೆರಸು ಸುಯ್ವ ಸುಯ್ಯ ಪೊಗೆಯೊಳಂ ಕಱಂಗಿ ಕೞ್ಗಿದ ಮೆಯ್ಯುಮಂ ಪ್ರಚಂಡ ಗಾಂಡೀವ ವ್ಯಾಘಾತದೊಳಿಂದ್ರನೀಲಂಗಳನಡಸಿದಂತಪ್ಪ ಮುಂಗೆಯ್ಯಮುಂ ಕಂಡು ಕೃಷ್ಣನೆಂಬ ಪೆಸರನಿಟ್ಟನಾಗಳ್ ಬ್ರಹ್ಮಂ ಬ್ರಹ್ಮಾಯುವಕ್ಕೆಂದು ಪರಸಿದನೀಶ್ವರಂ ನೀನುದಾರಮಹೇಶ್ವರ ನಪ್ಪುದಱಿಂ ನಿನಗಮೆನಗ ಮೇತಳಂ ವಿಕಲ್ಪಮುಂ ವಿಚ್ಛಿನ್ನಮುಮಿಲ್ಲೆಂದನಂತು ಮೂದೇವರುಂ ಪರಸಿ ನಿಜನಿವಾಸಂಗಳ್ಗೆ ಪೋದರಾಗಳ್-
ವಚನ:ಪದವಿಭಾಗ-ಅರ್ಥ:ಅಂತು ಪೊಗೞ್ದು (ಹಾಗೆ ಹೊಗಳಿ) ಖಾಂಡವವನದಹನದೊಳು ಆದ ಪೊಗೆಯೊಳಂ ಅಲ್ಲಿಯ ಮಹಾನಾಗಂಗಳ ವಿಷಂಬೆರಸು ಸುಯ್ವ ಸುಯ್ಯ ಪೊಗೆಯೊಳಂ(ಹೊಗೆಯಿಂದಲೂ ಅಲ್ಲಿಯ ಮಹಾಸರ್ಪಗಳ ವಿಷಮಿಶ್ರವಾಗಿ ಉಸಿರಾಡುವ ಗಾಳಿಯಿಂದಲೂ) ಕಱಂಗಿ ಕೞ್ಗಿದ ಮೆಯ್ಯುಮಂ (ಕಪ್ಪು ಕಪ್ಪಾದಶ ರೀರವನ್ನು) ಪ್ರಚಂಡ ಗಾಂಡೀವ ವ್ಯಾಘಾತದೊಳು ಇಂದ್ರನೀಲಂಗಳನು ಅಡಸಿದಂತಪ್ಪ ಮುಂಗೆಯ್ಯಮುಂ (ಕಪ್ಪುಕಪ್ಪಾದ ಶರೀರವನ್ನೂ ಮಹಾಶಕ್ತಿಯುಕ್ತವಾದ ಗಾಂಡೀವದ ಪೆಟ್ಟಿನಿಂದ ಇಂದ್ರನೀಲರತ್ನಗಳು ಸೇರಿಕೊಂಡ ಹಾಗಿರುವ ಮುಂಗಯ್ಯನ್ನು) ಕಂಡು ಕೃಷ್ಣನೆಂಬ ಪೆಸರನಿಟ್ಟನಾಗಳ್ (ಇಂದ್ರನು ಅರ್ಜುನನಿಗೆ ಕೃಷ್ಣನೆಂಬ ಹೆಸರಿಟ್ಟನು) ಬ್ರಹ್ಮಂ ಬ್ರಹ್ಮಾಯುವಕ್ಕೆಂದು (ದೀರ್ಘಾಯುವಾಗಲಿ) ಪರಸಿದನು, ಈಶ್ವರಂ ನೀನು ಉದಾರಮಹೇಶ್ವರ ನಪ್ಪುದಱಿಂ ನಿನಗಂ ಎನಗಂ ಏತಳಂ ವಿಕಲ್ಪಮುಂ ವಿಚ್ಛಿನ್ನಮುಂ ಇಲ್ಲೆಂದನು (ನಿನಗೂ ನನಗೂ ಯಾವುದರಲ್ಲಿಯೂ ವ್ಯತ್ಯಾಸವೂ ಭೇದವೂ ಇಲ್ಲ ಎಂದನು) ಅಂತು ಮೂದೇವರುಂ ಪರಸಿ ನಿಜನಿವಾಸಂಗಳ್ಗೆ ಪೋದರಾಗಳ್ (ಹಾಗೆ ತ್ರಿಮೂರ್ತಿಗಳೂ ಅರ್ಜುನನನ್ನು ಹರಸಿ ತಮ್ಮ ವಾಸಸ್ಥಳಗಳಿಗೆ ಹೋದರು)-
ವಚನ:ಅರ್ಥ:ಖಾಂಡವವನದಹನದಿಂದುಂಟಾದ ಹೊಗೆಯಿಂದಲೂ ಅಲ್ಲಿಯ ಮಹಾಸರ್ಪಗಳ ವಿಷಮಿಶ್ರವಾಗಿ ಉಸಿರಾಡುವ ಗಾಳಿಯಿಂದಲೂ ಕಪ್ಪುಕಪ್ಪಾದ ಶರೀರವನ್ನೂ ಮಹಾಶಕ್ತಿಯುಕ್ತವಾದ ಗಾಂಡೀವದ ಪೆಟ್ಟಿನಿಂದ ಇಂದ್ರನೀಲರತ್ನಗಳು ಸೇರಿಕೊಂಡ ಹಾಗಿರುವ ಮುಂಗಯ್ಯನ್ನೂ ಕಂಡು ಇಂದ್ರನು ಅರ್ಜುನನಿಗೆ ಕೃಷ್ಣನೆಂಬ ಹೆಸರಿಟ್ಟನು. ಬ್ರಹ್ಮನು ನಿನಗೆ ದೀರ್ಘಾಯುವಾಗಲಿ ಎಂದು ಹರಸಿದನು. ಈಶ್ವರನು ನೀನು ಉದಾರಮಹೇಶ್ವರನಾಗಿರುವುದರಿಂದ ನಿನಗೂ ನನಗೂ ಯಾವುದರಲ್ಲಿಯೂ ವ್ಯತ್ಯಾಸವೂ ಭೇದವೂ ಇಲ್ಲ ಎಂದನು. ಹಾಗೆ ತ್ರಿಮೂರ್ತಿಗಳೂ ಅರ್ಜುನನನ್ನು ಹರಸಿ ತಮ್ಮ ವಾಸಸ್ಥಳಗಳಿಗೆ ಹೋದರು
ಚಂ|| ಅನಿತಿನಿತೆನ್ನದಾಂತ ಸುರ ಪನ್ನಗ ಕಿನ್ನರ ಸೈನ್ಯಮೆಲ್ಲಮಂ
ಬಿನ ಮೊನೆಯೊಳ್ ಪಡಲ್ವಡೆ ಲತಾಭವನಂ ಕೃತಕಾಚಳಂಗಳೆಂ
ಬಿನಿತುಮವೞ್ಗಿ ತೞ್ಗೆ ನುಡಿಯಂ ನುಡಿದಂತೆ ನೆಗೞ್ಚಲಗ್ನಿದೇ
ವನನಮರೇಂದ್ರನಂದನಮನೂಡಿದನಂದಮರೇಂದ್ರನಂದನಂ|| ೧೦೪||
ಪದ್ಯ-೧೦೪:ಪದವಿಭಾಗ-ಅರ್ಥ:ಅನಿತಿನಿತೆನ್ನದೆ ಆಂತ ಸುರ ಪನ್ನಗ ಕಿನ್ನರ ಸೈನ್ಯಮೆಲ್ಲಂ (ಅಷ್ಟಿಷ್ಟೆನ್ನದೆ ಪ್ರತಿಭಟಿಸಿದ ದೇವತೆಗಳ ನಾಗರರ ಕಿನ್ನರರ ಸೈನ್ಯವೆಲ್ಲವನ್ನೂ) ಅಂಬಿನ ಮೊನೆಯೊಳ್ ಪಡಲ್ವಡೆ (ನ್ನ ಬಾಣದ ಹೊಡೆತಕ್ಕೆ ಸಿಕ್ಕಿಸಿ ಚೆಲ್ಲಾಪಿಲ್ಲಿಯಾಗಿ ಕೆಳಗುರುಳಲು) ಲತಾಭವನಂ ಕೃತಕಾಚಳಂಗಳ್ ಎಂಬಿನಿತುಂ ಅೞ್ಗಿ ತೞ್ಗೆ (ಕೃತಕಪರ್ವತ ಎಂಬಿವೆಲ್ಲ ನಾಶವಾಗಿ ತಗ್ಗಿದರೂ) ನುಡಿಯಂ ನುಡಿದಂತೆ ನೆಗೞ್ಚಲು (ಮಾಡಲು) ಅಗ್ನಿದೇವನಂ ಅನಮರೇಂದ್ರ ನಂದನಮಂ ಊಡಿದನು ಅಂದು ಅಮರೇಂದ್ರನಂದನಂ(ಅಗ್ನಿದೇವನಿಗೆ ಇಂದ್ರನ ಉದ್ಯಾನವಾದ ಖಾಂಡವವನವನ್ನು ಅರ್ಜುನನು ಉಣಿಸಿದನು)
ಪದ್ಯ-೧೦೪:ಅರ್ಥ: ಅಷ್ಟಿಷ್ಟೆನ್ನದೆ ಪ್ರತಿಭಟಿಸಿದ ದೇವತೆಗಳ ನಾಗರರ ಕಿನ್ನರರ ಸೈನ್ಯವೆಲ್ಲವೂ ತನ್ನ ಬಾಣದ ಹೊಡೆತಕ್ಕೆ ಸಿಕ್ಕಿಸಿ ಚೆಲ್ಲಾಪಿಲ್ಲಿಯಾಗಿ ಕೆಳಗುರುಳಲು ಬಳ್ಳಿವನೆ ಕೃತಕಪರ್ವತ ಎಂಬಿವೆಲ್ಲ ನಾಶವಾಗಿ ತಗ್ಗಿದರೂ ತಾನಾಡಿದ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ಅಗ್ನಿದೇವನಿಗೆ ಇಂದ್ರನ ಉದ್ಯಾನವಾದ ಖಾಂಡವವನವನ್ನು ಅರ್ಜುನನು ಉಣಿಸಿದನು.
ವ|| ಆಗಳ್ ಸ್ವಾಹಾಂಗನಾನಾಥಂ ಸಂಪೂರ್ಣ ಮನೋರಥನಾಗಿ ಖಟ್ವಾಂಗನೆಂಬರಸನ ಯಜ್ಞದೊಳಾತನ ತಂದ ಘೃತಸಮುದ್ರಮಂ ಕುಡಿದೊಡಾದ ರೋಗಮಿಂದು ಪೋದುದೆಂದು ನೀರೋಗನಾಗಿ ಮಹಾನುರಾಗಂಬೆರಸು ಪರಸಿ ಪೋದನಾಗಳಿರ್ವರುಮಿಂದ್ರಪ್ರಸ್ಥಕ್ಕೆಯ್ದೆವಂದು-
ವಚನ:ಪದವಿಭಾಗ-ಅರ್ಥ:ಆಗಳ್ ಸ್ವಾಹಾಂಗನಾ ನಾಥಂ (ಅಗ್ನಿ) ಸಂಪೂರ್ಣ ಮನೋರಥನಾಗಿ, ಖಟ್ವಾಂಗನೆಂಬ ಅರಸನ ಯಜ್ಞದೊಳು ಆತನ ತಂದ ಘೃತ ಸಮುದ್ರಮಂ ಕುಡಿದೊಡಾದ (ಖಟ್ವಾಂಗನೆಂಬ ರಾಜನ ಯಜ್ಞದಲ್ಲಿ ಅವನು ತಂದಿದ್ದ ತುಪ್ಪದ ಸಮುದ್ರವನ್ನು ಕುಡಿದುದರಿಂದ ಉಂಟಾದ) ರೋಗಮಿಂದು ಪೋದುದೆಂದು ನೀರೋಗನಾಗಿ (ರೋಗರಹಿತನಾಗಿ) ಮಹಾನುರಾಗಂ ಬೆರಸು ಪರಸಿ ಪೋದನು (ಸಂತೋಷದಿಂದು ಕೂಡಿ ಆಶೀರ್ವದಿಸಿ ಹೋದನು) ಆಗಳಿರ್ವರುಂ ಇಂದ್ರಪ್ರಸ್ಥಕ್ಕೆ ಎಯ್ದೆವಂದು (ಇಂದ್ರಪ್ರಸ್ಥಪಟ್ಟಣಕ್ಕೆ ಬಂದು ಸೇರಿದರು)-
ವಚನ:ಅರ್ಥ:ಆಗ ಸ್ವಾಹಾದೇವಿಯ ಪತಿಯಾದ ಅಗ್ನಿಯು ಇಷ್ಟಾರ್ಥವನ್ನು ಪೂರ್ಣವಾಗಿ ಪಡೆದವನಾಗಿ ಖಟ್ವಾಂಗನೆಂಬ ರಾಜನ ಯಜ್ಞದಲ್ಲಿ ಅವನು ತಂದಿದ್ದ ತುಪ್ಪದ ಸಮುದ್ರವನ್ನು ಕುಡಿದುದರಿಂದ ಉಂಟಾದ ರೋಗವು ಇಂದು ಪರಿಹಾರವಾಯಿತು ಎಂದು ರೋಗರಹಿತನಾಗಿ ವಿಶೇಷ ಸಂತೋಷದಿಂದು ಕೂಡಿ ಆಶೀರ್ವದಿಸಿ ಹೋದನು. ಆಗ ಕೃಷ್ಣಾರ್ಜುನರಿಬ್ಬರೂ ಇಂದ್ರಪ್ರಸ್ಥಪಟ್ಟಣಕ್ಕೆ ಬಂದು ಸೇರಿದರು.
ಚಂ|| ಇದಿರ್ವರೆ ಧರ್ಮಜಂ ಬೆರಸು ತನ್ನೊಡವುಟ್ಟಿದರೆಯ್ದೆ ತಳ್ತು ಕ
ಟ್ಟಿದ ಗುಡಿ ರಂಗವಲ್ಲಿಗಳೆ ದಾಂಗುಡಿಯಂತಿರೆ ಸೂಸೆ ಸೇಸೆಯಂ|
ಸುದತಿಯರಿಕ್ಕೆ ಚಾಮರಮನಂಗನೆಯರ್ ನಿಜಕೀರ್ತಿ ಲೋಕಮಂ
ಪುದಿದಿರೆ ಪೊಕ್ಕನಂದು ನಿಜಮಂದಿರಮಂ ಪರಸೈನ್ಯಭೈರವಂ|| ೧೦೫
ಪದ್ಯ-೧೦೫:ಪದವಿಭಾಗ-ಅರ್ಥ:ಇದಿರ್ವರೆ ಧರ್ಮಜಂ ಬೆರಸು ತನ್ನೊಡವುಟ್ಟಿದರು ಎಯ್ದೆ (ಸ್ವಾಗತಕ್ಕೆ ಇದಿರಾಗಿ ಬರಲು) ತಳ್ತು ಕಟ್ಟಿದ ಗುಡಿ ರಂಗವಲ್ಲಿಗಳೆ ದಾಂಗುಡಿಯಂತಿರೆ (ದೊಡ್ಡಬಾವುಟದಂತಿರಲು) ಸೂಸೆ ಸೇಸೆಯಂ ಸುದತಿಯರು ಇಕ್ಕೆ (ಸ್ತ್ರೀಯರು ಅಕ್ಷತೆಗಳನ್ನು ಚೆಲ್ಲುತ್ತಿರಲು) ಚಾಮರಮನು ಅಂಗನೆಯರ್ ನಿಜಕೀರ್ತಿ ಲೋಕಮಂ ಪುದಿದಿರೆ (ತನ್ನ ಕೀರ್ತಿಯು ಲೋಕವನ್ನೆಲ್ಲ ವ್ಯಾಪಿಸುತ್ತಿರಲು) ಪೊಕ್ಕನಂದು ನಿಜಮಂದಿರಮಂ ಪರಸೈನ್ಯಭೈರವಂ (ಪರಸೈನ್ಯಭೈರವನಾದ ಅರ್ಜುನನು ತನ್ನ ಅರಮನೆಯನ್ನು ಪ್ರವೇಶಿಸಿದನು)
ಪದ್ಯ-೧೦೫:ಅರ್ಥ: ಆಗ ತನ್ನ ಒಡಹುಟ್ಟಿದವರು ಧರ್ಮರಾಯನೊಡಗೂಡಿ ಸ್ವಾಗತಕ್ಕೆ ಇದಿರಾಗಿ ಬರಲು ಕಟ್ಟಿದ ತೋರಣವೂ ಇಟ್ಟ ರಂಗವಲ್ಲಿಯೂ ತನ್ನ ಕೀರ್ತಿಯ ದಾಂಗುಡಿ/ ದೊಡ್ಡಬಾವುಟದಂತಿರಲು ಸ್ತ್ರೀಯರು ಅಕ್ಷತೆಗಳನ್ನು ಚೆಲ್ಲುತ್ತಿರಲು ಅಂಗನೆಯರು ಚಾಮರವನ್ನು ಬೀಸುತ್ತಿರಲು ತನ್ನ ಕೀರ್ತಿಯು ಲೋಕವನ್ನೆಲ್ಲ ವ್ಯಾಪಿಸುತ್ತಿರಲು ಅಂದು ಪರಸೈನ್ಯಭೈರವನಾದ ಅರ್ಜುನನು ತನ್ನ ಅರಮನೆಯನ್ನು ಪ್ರವೇಶಿಸಿದನು.
||ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ಪಂಚಮಾಶ್ವಾಸಂ ||
||ವ|| ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯಾದುದೂ ಗಂಭೀರವಾದುದೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವನ್ನುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನವಿಜಯದಲ್ಲಿ ಅಯ್ದನೆಯ ಆಶ್ವಾಸ.||
♦♣♣♣♣♣♣♣♣♣♣♣♣♣♣♣♣♣♣♣♦

ಪಂಪಭಾರತ[ಸಂಪಾದಿಸಿ]

ಪಂಪಭಾರತ: ಅಧ್ಯಾಯ ಅಥವ ಆಶ್ವಾಸಗಳು-> ಪಂಪ:ಕವಿ-ಕೃತಿ ಪರಿಚಯ 1 2 3 4 5 6 7 8 9 10 11 12 13 14 ಅನುಬಂಧ 16 ಪಂಪ - ಒಂದು ಚಿಂತನೆ ವ್ಯಾಸ ಭಾರತ ಮತ್ತು ಪಂಪಭಾರತ: ಪರಾಮರ್ಶೆ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ