ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೮)

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

<ಕುಮಾರವ್ಯಾಸಭಾರತ-ಸಟೀಕಾ

ಕುಮಾರವ್ಯಾಸ ಭಾರತ/ಸಟೀಕಾ (೪-ವಿರಾಟಪರ್ವ::ಸಂಧಿ-೮)[ಸಂಪಾದಿಸಿ]

ಸೂಚನೆ:[ಸಂಪಾದಿಸಿ]

ರಾಯ ರಿಪುಬಲಜಲಧಿ ವಡಬನ
ಜೇಯನರ್ಜುನನಖಿಳ ಕೌರವ
ರಾಯ ದಳವನು ಜಯಿಸಿದನು ಸಮ್ಮೋಹನಾಸ್ತ್ರದಲಿ ||ಸೂಚನೆ||
ಪದವಿಭಾಗ-ಅರ್ಥ:ರಾಯ ರಿಪುಬಲಜಲಧಿ ವಡಬನು+ ಅಜೇಯನು+ ಅರ್ಜುನನು+ ಅಖಿಳ ಕೌರವ ರಾಯ ದಳವನು ಜಯಿಸಿದನು ಸಮ್ಮೋಹನ+ ಅಸ್ತ್ರದಲಿ.
  • ಕೌರವರಾಯನ ಶತ್ರುಸೈನ್ಯವೆಂಬ ಜಲಧಿಯ- ಸಮುದ್ರದ ಮಹಾಬೆಂಕಿಯನ್ನು+ ಅಜೇಯನಾದ - ಜಯಿಸಲಸಾಧ್ಯನಾದ + ಅರ್ಜುನನು+ ಅಖಿಳ- ಎಲ್ಲಾ ಕೌರವರಾಯ ದಳವನು- ಕೌರವರಾಯನ ಸೈನ್ಯವನ್ನು ಜಯಿಸಿದನು, ಸಮ್ಮೋಹನ+ ಅಸ್ತ್ರದಲಿ.
ಅರ್ಥ:ಕೌರವರಾಯನ ಶತ್ರುಸೈನ್ಯವಾದ ಸಮುದ್ರದ ಬಡಬಾನಲವೆಂಬ ಮಹಾಬೆಂಕಿಯಂತಿರವ ಎಲ್ಲಾ ಸೈನ್ಯವನ್ನು ಅಜೇಯನಾದ ಅರ್ಜುನನು ಸಮ್ಮೋಹನ ಅಸ್ತ್ರದಲಿ ಜಯಿಸಿದನು.[೧][೨]
~~ಓಂ~~

ಕುರುಸೇನೆಯೊಡನೆ ಅರ್ಜುನನ ಯುದ್ಧ[ಸಂಪಾದಿಸಿ]

ಮರಳಿದವು ತುರು ಮಾರಿಗೌತಣ
ಮರಳಿ ಹೇಳಿತು ಹಸಿದ ಹೆಬ್ಬುಲಿ
ಮೊರೆಯ ದನಿದೋರಿದವು ಹುಲುಮೃಗವೇನನುಸುರುವೆನು |
ಧರಣಿಪನ ಹಿಂದಿಕ್ಕಿ ಸೌಬಲ
ದುರುಳ ದುಶ್ಶಾಸನ ಜಯದ್ರಥ
ರುರುಬಿದರು ತರುಬಿದರು ಪರಬಲ ಕಾಲಭೈರವನ || ೧ ||
ಪದವಿಭಾಗ-ಅರ್ಥ: ಮರಳಿದವು ತುರು (ಗೋವು), ಮಾರಿಗೆ+ ಔತಣ ಮರಳಿ ಹೇಳಿತು ಹಸಿದ ಹೆಬ್ಬುಲಿ ಮೊರೆಯ ದನಿದೋರಿದವು ಹುಲು ಮೃಗವು (ಜಿಂಕೆ)+ ಏನನು+ ಉಸುರುವೆನು ಧರಣಿಪನ ಹಿಂದಿಕ್ಕಿ ಸೌಬಲ ದುರುಳ ದುಶ್ಶಾಸನ ಜಯದ್ರಥರು+ ಉರುಬಿದರು ತರುಬಿದರು (ಆಕ್ರಮಿಸಿದರು) ಪರಬಲ ಕಾಲಭೈರವನ.
ಅರ್ಥ: ಗೋವುಗಳು ವಿರಾಟನ ನಗರಕ್ಕೆ ಮರಳಿದವು. ಪುನಃ ಮಾರಿಗೆ ಔತಣಕ್ಕೆ ಕರೆದು ಹೇಳಿದಂತಾಯಿತು. ಹಸಿದ ಹೆಬ್ಬುಲಿ ಆರ್ಭಟಿಸಲು, ಹುಲು ಪ್ರಾಣಿಯಾದ ಜಿಂಕೆಯಗಳು (-> ಕೌರವನ ಸೇನೆ) ಗೋಳಿಟ್ಟವು. ಏನನ್ನು ಹೇಳಲಿ? ಕೌರವನನ್ನು ಹಿಂದಕ್ಕೆ ತಳ್ಳಿ, ಸೌಬಲನಾದ ಶಕುನಿ, ದುರುಳ ದುಶ್ಶಾಸನ, ಜಯದ್ರಥರು ಆರ್ಭಟಿಸಿದರು, ಪರಬಲ (ಶತ್ರುಸೈನ್ಯಕ್ಕೆ) ಕಾಲಭೈರವನಂತಿರುವ (ಮೃತ್ಯು ರೂಪನಾದ) ಅರ್ಜುನನ್ನು ತರುಬಿದರು.
ಹತ್ತುಸಾವಿರ ರಥ ಸಹಿತ ಭಟ
ರೊತ್ತಿ ಕವಿದರು ಲಗ್ಗೆವರೆಯಲಿ
ಬಿತ್ತರಿಸಿ ಬೈಬೈದು ಸಾರುವ ಗೌರುಗಹಳೆಗಳ |
ಸತ್ತಿಗೆಯ ಸಾಲುಗಳೊಳಂಬರ
ಕೆತ್ತುದೆನೆ ಕುಲಶೈಲ ನಿಚಯದ
ನೆತ್ತಿ ಬಿರಿಯಲು ಮೊಳಗಿದವು ನಿಸ್ಸಾಳಕೋಟಿಗಳು || ೨ ||
ಪದವಿಭಾಗ-ಅರ್ಥ: ಹತ್ತುಸಾವಿರ ರಥ ಸಹಿತ ಭಟರ+ ಒತ್ತಿ ಕವಿದರು ಲಗ್ಗೆವರೆಯಲಿ ಬಿತ್ತರಿಸಿ ಬೈಬೈದು ಸಾರುವ ಗೌರುಗಹಳೆಗಳ ಸತ್ತಿಗೆಯ ಸಾಲುಗಳು+ ಆಂಬರ ಕೆತ್ತುದೆನೆ ಕುಲಶೈಲ ನಿಚಯದ ನೆತ್ತಿ ಬಿರಿಯಲು ಮೊಳಗಿದವು ನಿಸ್ಸಾಳಕೋಟಿಗಳು.
  • ಹತ್ತುಸಾವಿರ ರಥ ಸಹಿತ ಭಟರು+ ಒತ್ತಿ= ಮುಂದೆನುಗ್ಗಿ, ಕವಿದರು= ಮುತ್ತಿದರು, ಲಗ್ಗೆವರೆಯಲಿ (ಧಾಳಿ ಮಾಡುವ ವರಸೆಯಲ್ಲಿ) ಬಿತ್ತರಿಸಿ- ಬಹಳ ವಿಸ್ತಾರವಾಗಿ, ಬೈಬೈದು ಸಾರುವ ಗೌರುಗಹಳೆಗಳ (ಗಟ್ಟಿಯಾಗಿ ಧ್ವನಿ ಮಾಡುವ ಒಂದು ಬಗೆಯ ಕಹಳೆ.) ಸತ್ತಿಗೆಯ (ಕೊಡೆ- ರಾಜರ ಶ್ವೇತ ಛತ್ರಿ) ಸಾಲುಗಳೊಳು+ ಅಂಬರ- ಆಕಾಶ, ಕೆತ್ತುದು (ತುಂಬಿತು)+ ಎನೆ ಕುಲಶೈಲ ನಿಚಯದ (ಸಮೂಹದ) ನೆತ್ತಿ ಬಿರಿಯಲು ಮೊಳಗಿದವು ನಿಸ್ಸಾಳಕೋಟಿಗಳು (ನಿಸ್ಸಾಳ= ಒಂದು ಬಗೆಯ ಚರ್ಮವಾದ್ಯ - ಭೇರಿ)
ಅರ್ಥ: ಅರ್ಜುನನ್ನು ರಥ ಸಹಿತ ಹತ್ತುಸಾವಿರ ಭಟರು ಮುಂದೆನುಗ್ಗಿ ಮುತ್ತಿದರು. ಧಾಳಿ ಮಾಡುವ ವರಸೆಯಲ್ಲಿ ಬಹಳ ವಿಸ್ತಾರವಾಗಿ, ಬೈಬೈದು ಸಾರುವ ಗಟ್ಟಿಯಾಗಿ ಧ್ವನಿ ಮಾಡುವ ಕಹಳೆಯನ್ನು ಊದಿದರು; ಸತ್ತಿಗೆಯೆಂಬ ರಾಜರ ಶ್ವೇತ ಛತ್ರಿಯ ಸಾಲುಗಳಲ್ಲಿ ಆಕಾಶ ತುಂಬಿತು ಎನ್ನುವಂತಿರಲು, ಕುಲಶೈಲಗಳಾದ ದೊಡ್ಡಬೆಟ್ಟಗಳ ಸಮೂಹದ ನೆತ್ತಿ ಬಿರಿಯುವಂತೆ ಕಹಳೆ ಭೇರಿಮೊದಲಾದ ಕೋಟಿ ನಿಸ್ಸಾಳಗಳು ಮೊಳಗಿದವು.
ಚಂಬಕನ ಹರೆ ಡಕ್ಕೆ ಡಮರುಗ
ಬೊಂಬುಳಿಯ ಗೋಮುಖದ ಡೌಡೆಯ
ಕೊಂಬು ಕಹಳೆಯ ರಾಯ ಗಿಡಿಮಿಡಿ ಪಟಹ ಡಿಂಡಿಮದ |
ತಂಬಟದ ನಿಸ್ಸಾಳವಂಬರ
ತುಂಬಿದುದು ನೆಲ ಕುಸಿಯೆ ಬಲವಾ
ಡಂಬರದಲರ್ಜುನನ ಮುಸುಕಿತು ದೊರೆಯ ಸನ್ನೆಯಲಿ || ೩ ||
ಪದವಿಭಾಗ-ಅರ್ಥ:ಚಂಬಕನನ್ನು ಹರೆ, ಡಕ್ಕೆ, ಡಮರುಗ, ಬೊಂಬುಳಿಯ, ಗೋಮುಖದ ಡೌಡೆಯಕೊಂಬು, ಕಹಳೆಯನ್ನು ರಾಯ ಗಿಡಿಮಿಡಿ ಪಟಹ, ಡಿಂಡಿಮದ, ತಂಬಟದ, ನಿಸ್ಸಾಳವು- ಸದ್ದು+ ಅಂಬರ- ಆಕಾಶವನ್ನು ತುಂಬಿದುದು; ನೆಲ ಕುಸಿಯೆ ಬಲವು+ ಆಡಂಬರದಲಿ+ ಅರ್ಜುನನ ಮುಸುಕಿತು ದೊರೆಯ ಸನ್ನೆಯಲಿ
ಅರ್ಥ: ಅರ್ಜುನನ ಮೇಲೆ ಯುದ್ಧ ಸಾರಲು, ಚಂಬಕ, ಹರೆ, ಡಕ್ಕೆ, ಡಮರುಗ, ಬೊಂಬುಳಿಯ, ಗೋಮುಖದ ಡೌಡೆಯಕೊಂಬು, ಕಹಳೆಯನ್ನೂ ರಾಯ ಗಿಡಿಮಿಡಿಗಳೆಂಬ ವಾದ್ಯಗಳನ್ನೂ, ಪಟಹ, ಡಿಂಡಿಮದ, ತಂಬಟ ಇವುಗಳ ಸದ್ದು ಆಕಾಶವನ್ನು ತುಂಬಿತು; ಆಗ ಕೌರವದೊರೆಯು ಸನ್ನೆಮಾಡಲು ನೆಲ ಕುಸಿಯುವಂತೆ ಸೈನ್ಯವು ಆಡಂಬರದಿಂದ ಅರ್ಜುನನ್ನು ಮುತ್ತಿತು.
ಮರಳಿದವು ತುರುವೆಂಬ ಗರ್ವದ
ಗಿರಿಗೆ ಕೋ ಕುಲಿಶವನು ಸೇನೆಯ
ನೊರೆಸಿದುತ್ಸವ ಜಲಧಿಗಿದೆ ಕೋ ವಾಡಬಾನಲನ |
ಅರಸನಲುಕಿದನೆಂಬ ಜಯದು
ಬ್ಬರದ ಬೆಳೆಸಿರಿಗಿದೆ ನಿದಾಘದ
ಬಿರುಬಿಸಿಲು ಕೊಳ್ಳೆಂದು ಕೈಗೊಂಡೆಚ್ಚರತಿರಥರು || ೪ ||
ಪದವಿಭಾಗ-ಅರ್ಥ: ಮರಳಿದವು ತುರುವೆಂಬ ಗರ್ವದಗಿರಿಗೆ ಕೋ ಕುಲಿಶವನು, ಸೇನೆಯನು+ ಒರೆಸಿದ+ ಉತ್ಸವ ಜಲಧಿಗೆ+ ಇದೆ ಕೋ ವಾಡಬಾನಲನ, ಅರಸನು+ ಅಲುಕಿದನೆಂಬ ಜಯದ+ ಉಬ್ಬರದ ಬೆಳೆಸಿರಿಗೆ+ ಇದೆ ನಿದಾಘದ (. ಬಿಸುಪು, ಬೆವರು) ಬಿರುಬಿಸಿಲು ಕೊಳ್ಳೆಂದು ಕೈಗೊಂಡು ಎಚ್ಚರು+ ಅತಿರಥರು
ಅರ್ಥ:ಕೌರವನ ಸೇನೆಯ ಅತಿರಥರು, 'ಗೋವುಗಳು ನಗರಕ್ಕೆ ಮರಳಿದವು ಎಂಬ ಗಿರಿಯಂಥ ಗರ್ವದ ನಿನ್ನ ಅಹಂಕಾರಕ್ಕೆ ತೆಗೆದುಕೋ ಈ ವಜ್ರಾಯುಧದಂತಿರುವ ಈ ಕುಲಿಶವನ್ನು ಎಂದು ಅರ್ಜುನನ ಮೇಲೆ ಅಸ್ತ್ರವನ್ನು ಪ್ರಯೋಗಿಸಿದರು. ಮತ್ತೆ ಕೆಲವರು ಕೌರವನ ಸೇನೆಯನ್ನು ಒರೆಸಿಹಾಕಿದ ನಿನ್ನ ಆನಂದದ ಉತ್ಸವದ ಸಮುದ್ರಕ್ಕೆ ಇದೆ ತೆಗೆದುಕೋ ಪ್ರಳಯಕಾಲದ ಸಮುದ್ರದ ಬೆಂಕಿಯಂತಿರುವ ಬಡಬಾನಲವಾದ ಆಗ್ನೇಯ ಅಸ್ತ್ರವನ್ನು ಎಂದು ಹೊಡೆದರು. ಅರ್ಜುನನ್ನು ಕುರಿತು, ತಮ್ಮ ಅರಸನನ್ನು ಸೋಲಿಸಿ ಅವನು ಅಳುಕಿದನು ಎಂಬ ಜಯದ ಅಹಂಕಾರದ ಉಬ್ಬರದ ಬೆಳೆಸಿರಿಗೆ- ಫಸಲಿಗೆ ಇದೆ ತೆಗೆದುಕೋ ಬೆವರು ಹರಿಸುವ ಬಿಸಿಯಾದ ನಿದಾಘದ ಬಿರುಬಿಸಿಲು ಅಸ್ತ್ರವನ್ನು ಎಂದು ಪ್ರತಿಭಟನೆಯನ್ನು ಕೈಗೊಂಡು ಅರ್ಜುನನ್ನು ಅತಿರಥರು ಹೊಡೆದರು.
ಮೊಗಕೆ ಹರಿಗೆಯನೊಡ್ಡಿ ಕಾಲಾ
ಳಗಿದು ಕವಿದುದು ಸರಳ ಪರಿಯಲಿ
ಬಿಗಿದು ಬಿಲ್ಲಾಳೌಕಿತುರವಣಿಸಿದರು ಸಬಳಿಗರು |
ಉಗಿದಡಾಯುಧದಲಿರಿದರು ಭಾ
ಷೆಗಳ ರಾವ್ತರು ಕೆಂಗರಿಯ ಕೋ
ಲುಗಳ ಹೆಮ್ಮಳೆಗರೆದು ಕವಿದರು ಜೋದರುರವಣಿಸಿ || ೫ ||
ಪದವಿಭಾಗ-ಅರ್ಥ: ಮೊಗಕೆ ಹರಿಗೆಯನು+ ಒಡ್ಡಿ ಕಾಲಾಳು+ ಅಗಿದು ಕವಿದುದು ಸರಳ ಪರಿಯಲಿ, ಬಿಗಿದು ಬಿಲ್ಲಾಳು+ ಔಕಿತು+ ಉರವಣಿಸಿದರು ಸಬಳಿಗರು ಉಗಿದಡೆ+ ಆಯುಧದಲಿ+ ಇರಿದರು ಭಾಷೆಗಳ ರಾವ್ತರು ಕೆಂಗರಿಯ ಕೋಲುಗಳ ಹೆಮ್ಮಳೆಗರೆದು- ಹೆಮ್ಮಳೆ+ ಕರೆದು ಕವಿದರು ಜೋದರು+ ಉರವಣಿಸಿ.
  • ಹರಿಗೆ= ಗುರಾಣಿ
  • ಮೊಗಕೆ ಹರಿಗೆಯನು+ ಒಡ್ಡಿ ಕಾಲಾಳು+ ಅಗಿದು ಕವಿದುದು ಸರಳ ಪರಿಯಲಿ= ಮುಖಕ್ಕೆ ಗುರಾಣಿಯನ್ನು ಒಡ್ಡಿಕೊಂಡು ಕಾಲಾಳು ಸೈನ್ಯವು ಸರಳನ್ನು ಜೋಡಿಸಿದಂತೆ ಒಟ್ಟಾಗಿ ಅರ್ಜುನನ್ನು ಮುತ್ತಿದರು. ಬಿಗಿದು ಬಿಲ್ಲಾಳುಗಳು ಔಕಿತು+ ಉರವಣಿಸಿದರು= ಬಿಲ್ಲಿನಿಂದ ಯುದ್ಧಮಾಡುವವರು ಬಲವಾಗಿ ಪರಾಕ್ರಮ ತೋರಿದರು. ಸಬಳಿಗರು ಉಗಿದಡೆ+ ಆಯುಧದಲಿ+ ಇರಿದರು= ಸಬಳಿಗರಾದ ಸೈನಿಕರು ಈಟಿಯನ್ನು ಉಗಿದು ತೆಗೆದು ಆ ಆಯುಧದಿಂದ ಇರಿಯಲು ಬಂದರು. ರಾವ್ತರು ಕೆಂಗರಿಯ ಕೋಲುಗಳ ಹೆಮ್ಮಳೆಗರೆದು- ಹಿರಿದು+ ಮಳೆ- ಹೆಮ್ಮಳೆ+ ಕರೆದು ಕವಿದರು-ಮುತ್ತಿದರು, ಜೋದರು- ಯೋಧರು+ ಉರವಣಿಸಿ- ಪರಾಕ್ರಮದಿಂದ= ಮಾಡು ಇಲ್ಲವೇ ಮಡಿ ಎಂಬ ಭಾಷೆಗಳನ್ನು ಹೊತ್ತ ಕುದುರೆ ರಾವುತರು ಕೆಂಪುಗರಿಗಳನ್ನು ಕಟ್ಟಿದ ಬಾಣಗಳ ದೊಡ್ಡ ಮಳೆಯನ್ನು ಅರ್ಜುನನ ಮೇಲೆ ಸುರಿಸಿದರು. ಹೀಗೆ ಅರ್ಜುನನ್ನು ಯೋಧರು ಪರಾಕ್ರಮದಿಂದ ಮುತ್ತಿದರು.
ಅರ್ಥ:ಮುಖಕ್ಕೆ ಗುರಾಣಿಯನ್ನು ಒಡ್ಡಿಕೊಂಡು ಕಾಲಾಳು ಸೈನ್ಯವು ಸರಳನ್ನು ಜೋಡಿಸಿದಂತೆ ಒಟ್ಟಾಗಿ ಅರ್ಜುನನ್ನು ಮುತ್ತಿದರು. ಬಿಲ್ಲಿನಿಂದ ಯುದ್ಧಮಾಡುವವರು ಬಲವಾಗಿ ಪರಾಕ್ರಮ ತೋರಿದರು. ಸಬಳಿಗರಾದ ಸೈನಿಕರು ಈಟಿಯನ್ನು ಉಗಿದು ತೆಗೆದು ಆ ಆಯುಧದಿಂದ ಇರಿಯಲು ಬಂದರು. ಮಾಡು ಇಲ್ಲವೇ ಮಡಿ ಎಂಬ ಭಾಷೆಗಳನ್ನು ಹೊತ್ತ ಕುದುರೆ ರಾವುತರು ಕೆಂಪುಗರಿಗಳನ್ನು ಕಟ್ಟಿದ ಬಾಣಗಳ ದೊಡ್ಡ ಮಳೆಯನ್ನು ಅರ್ಜುನನ ಮೇಲೆ ಸುರಿಸಿದರು. ಹೀಗೆ ಅರ್ಜುನನ್ನು ಯೋಧರು ಪರಾಕ್ರಮದಿಂದ ಮುತ್ತಿದರು.
ಅರರೆ ರಾವುತು ರಾವುತೆಂಬ
ಬ್ಬರಣೆ ಮಸಗಿದುದೊಂದು ದೆಸೆಯಲಿ
ಸರಿಸ ಸಬಳಿಗ ಪೂತು ಪಾಯಕುಯೆಂಬ ಕಳಕಳಿಕೆ
ಧಿರುರೆ ಸಾರಥಿ ಹಳು ಹಳೆಂಬ
ಬ್ಬರಣೆ ಮಸಗಿದುದೊಂದು ಕಡೆಯಲಿ
ಕರಿಘಟೆಯ ಕಡುಹೊಂದು ಕಡೆಯಲಿ ಮುಸುಕಿತರ್ಜುನನ ೬
ಪದವಿಭಾಗ-ಅರ್ಥ: ಅರರೆ ರಾವುತು ರಾವುತ+ ಎಂಬ+ ಉಬ್ಬರಣೆ ಮಸಗಿದುದೊಂದು ದೆಸೆಯಲಿ ಸರಿಸ ಸಬಳಿಗ ಪೂತು ಪಾಯಕುಯೆಂಬ ಕಳಕಳಿ ಕೆಧಿರೆ+ ಉರೆ ಸಾರಥಿ ಹಳು ಹಳೆಂಬ+ ಅಬ್ಬರಣೆ ಮಸಗಿದುದು+ ಒಂದು ಕಡೆಯಲಿ ಕರಿಘಟೆಯ ಕಡುಹು+ ಒಂದು ಕಡೆಯಲಿ ಮುಸುಕಿತು+ ಅರ್ಜುನನ.
  • ಅರರೆ ರಾವುತು ರಾವುತ+ ಎಂಬ+ ಅಬ್ಬರಣೆ ಮಸಗಿದುದೊಂದು ದೆಸೆಯಲಿ= ಅರರೆ ರಾವುತರು ರಾವುತತು ಬಂದರು ಎಂಬ ಕೂಗಾಟ ಒಂದು ದಿಕ್ಕಿನಲ್ಲಿ ತುಂಬಿತು. ಸರಿಸ ಸಬಳಿಗ ಪೂತು+ ಉಪಾಯಕುಯೆಂಬ ಕಳಕಳಿ ಕೆಧಿರೆ+= ಈಟಿಯನ್ನು ಹಿಡಿದವನಿಗೆ ಸರಿಸ ಸಬಳಿಗ ಭೇಷ್ ಎಂಬ ಕೂಗು ಕಕೇಳಿಸಿತು. ಉಪಾಯಕುಯೆಂಬ ಕಳಕಳಿ ಕೆಧಿರು; ಉರೆ- ಮತ್ತೂ ಸಾರಥಿ ಹಳು ಹಳೆಂಬ+ ಅಬ್ಬರಣೆ ಮಸಗಿದುದು+ ಒಂದು ಕಡೆಯಲಿ ಕರಿಘಟೆಯ ಕಡುಹು- ಶೌರ್ಯ+ ಒಂದು ಕಡೆಯಲಿ ಮುಸುಕಿತು+ ಅರ್ಜುನನ.
ಅರ್ಥ: ಅರರೆ ರಾವುತರು ರಾವುತತು ಬಂದರು ಎಂಬ ಕೂಗಾಟ ಒಂದು ದಿಕ್ಕಿನಲ್ಲಿ ತುಂಬಿತು. ಈಟಿಯನ್ನು ಹಿಡಿದವನಿಗೆ ಸರಿ ಸಬಳಿಗ ಭೇಷ್! ಎಂಬ ಕೂಗುಕೇಳಿಸಿತು. 'ಉಪಾಯ'ಎಂಬ ಕಳಕಳಿಯ ಕೂಗು, ಕುದುರೆ ನೆಲವನ್ನು ಕೆದಿರುವಿಕೆ(?), ಮತ್ತು ಸಾರಥಿಯು ಕುದುರೆಯನ್ನು ಓಡಿಸಲು ಅದರ ಬೆನ್ನು ತಟ್ಟಿ 'ಹಳು ಹಳು'- ಹಲ್ -ಹೈ ಹಲ್ ಹೈ, ಎಂಬ ಗದ್ದಲ ಅಲ್ಲಿ ಒಂದು ಕಡೆ ತುಂಬಿತು. ಮತ್ತೆ ಒಂದು ಕಡೆಯಲ್ಲಿ ಆನೆಗಳ ಉಗ್ರ ಧಾಳಿ ಅರ್ಜುನನ್ನು ಮುತ್ತಿತು.
ಸುರಪನಡವಿಯ ಚುಚ್ಚಿದೊಡೆ ಸುರ
ರರಮನೆಯ ಗಾಯಕರ ಗೆಲಿದೊಡೆ
ಜರಡು ತಂತ್ರದ ಮೀನನೆಚ್ಚೊಡೆ ರಾಯ ಕಟಕದಲಿ |
ಗೊರವನೊಳು ಕಾದಿದೊಡೆ ಹೆಂಗುಸ
ನಿರುಳು ಕದ್ದೋಡಿದೊಡೆ ದಿಟ
ನೀ ಧುರಕೆ ಧೀರನೆ ಪಾರ್ಥ ಫಡಯೆನುತೆಚ್ಚರತಿರಥರು || ೭ ||
ಪದವಿಭಾಗ-ಅರ್ಥ: ಸುರಪನ+ ಅಡವಿಯ ಚುಚ್ಚಿದೊಡೆ, ಸುರರ+ ಅರಮನೆಯ ಗಾಯಕರ ಗೆಲಿದೊಡೆ, ಜರಡು ತಂತ್ರದ ಮೀನನು ಎಚ್ಚೊಡೆ, ರಾಯ ಕಟಕದಲಿ ಗೊರವನೊಳು ಕಾದಿದೊಡೆ, ಹೆಂಗುಸನು+ ಇರುಳು ಕದ್ದು+ ಓಡಿದೊಡೆ ದಿಟ ನೀ ಧುರಕೆ ಧೀರನೆ? ಪಾರ್ಥ ಫಡ! ಯೆನುತ+ ಎಚ್ಚರು+ ಅತಿರಥರು.
  • ಸುರಪನ+ ಅಡವಿಯ ಚುಚ್ಚಿದೊಡೆ= ಇಂದ್ರನ ಖಾಂಡವ ವನವನ್ನು ಬಾಣದಿಂದ ಚುಚ್ಚಿ ಸುಟ್ಟರೆ, ಸುರರ+ ಅರಮನೆಯ ಗಾಯಕರ ಗೆಲಿದೊಡೆ= ದೇವಲೋಕದ ಗಾಯಕರಾದ ಗಂಧರ್ವರನ್ನು ಗೆದ್ದ ಮಾತ್ರಕ್ಕೆ ವೀರನೋ!, ಜರಡು ತಂತ್ರದ ಮೀನನು ಎಚ್ಚೊಡೆ= ದ್ರೌಪದಿ ಸ್ವಯಂವರದಲ್ಲಿ ದೊಡ್ಡ ಜರಡಿಯಮೇಲೆ ತಿರುಗುವ ಮೀನನ್ನು ಹೊಡೆದು ಕೆಡವಿದರೆ, ರಾಯ ಕಟಕದಲಿ ಗೊರವನೊಳು (= ಸಂನ್ಯಾಸಿಯೊಳು) ಕಾದಿದೊಡೆ= ಯುದ್ಧದಲ್ಲಿ ಶಿವನೆಂಬ ಹೆಸರಿನ ಬೇಡ- ಗೊರವನ ಜೊತೆ ಯುದ್ಧಮಾಡಿದ ಮಾತ್ರಕ್ಕೆ ನೀನು ಶೂರನೊ?, ಹೆಂಗುಸನು+ ಇರುಳು ಕದ್ದು+ ಓಡಿದೊಡೆ= ಸುಭದ್ರೆಯನ್ನು ಕದ್ದು ಓದಿಸಿಕೊಂಡು ಹೋದರೆ - ಶೂರನೋ? ದಿಟ- ನಿಜ, ನೀ ಧುರಕೆ ಧೀರನೆ -ಸರಿ! ಪಾರ್ಥ ಫಡ! ಯೆನುತ+ ಎಚ್ಚರು+ ಅತಿರಥರು= ಎಂದು ಹಂಗಿಸುತ್ತಾ ಅತಿರಥರು ಹೊಡೆದರು.
ಅರ್ಥ: ಇಂದ್ರನ ಖಾಂಡವ ವನವನ್ನು ಬಾಣದಿಂದ ಚುಚ್ಚಿ ಸುಟ್ಟರೆ, ದೇವಲೋಕದ ಗಾಯಕರಾದ ಗಂಧರ್ವರನ್ನು ಗೆದ್ದ ಮಾತ್ರಕ್ಕೆ ವೀರನೋ!, ದ್ರೌಪದಿ ಸ್ವಯಂವರದಲ್ಲಿ ದೊಡ್ಡ ಜರಡಿಯಮೇಲುಗಡೆ ತಿರುಗುವ ಮೀನನ್ನು ಹೊಡೆದು ಕೆಡವಿದರೆ, ಆರಂಭದಲ್ಲಿ ಭ್ರಹ್ಮ ಚಾರಿಯಾಗಿ ಸಂನ್ಯಾಸಿಯಂತೆಯೆ ಜೀವನ ನೆಡೆಸಿದ ಗೊರವನಾದ ವೃದ್ಧ ಭೀಷ್ಮನನ್ನು ಸೋಲಿಸಿದ ಮಾತ್ರಕ್ಕೆ ವೀರನೋ?,(ಅಥವಾ- ಯುದ್ಧದಲ್ಲಿ ಶಿವನೆಂಬ ಹೆಸರಿನ ಬೇಡ- ಗೊರವನ ಜೊತೆ ಯುದ್ಧಮಾಡಿದ ಮಾತ್ರಕ್ಕೆ ನೀನು ಶೂರನೊ?), ಸುಭದ್ರೆಯನ್ನು ರಾತ್ರಿ ಕದ್ದು ಓದಿಸಿಕೊಂಡು ಹೋದರೆ - ಶೂರನೋ? ನಿಜ ನಿಜ, ನೀನು ಯುದ್ಧಕ್ಕೆ ಧೀರನೆ -ಸರಿ! ಈಗ ನೋಡು, ಪಾರ್ಥ ಫಡ! ಎಂದು ಹಂಗಿಸುತ್ತಾ ಅತಿರಥರು ಹೊಡೆದರು.
ಭಂಡರುಲಿದೊಡೆ ಗರುವರದ ಮಾ
ರ್ಕೊಂಡು ನುಡಿವರೆ ಸಾಕಿದೇತಕೆ
ದಿಂಡುದರಿವೆನು ನಿಮಿಷ ಸೈರಿಸಿ ನಿಂದು ಕಾದುವೊಡೆ |
ಕೊಂಡ ಹೆಜ್ಜೆಗೆ ಹಂಗಿಗರು ಮಿಗೆ
ಗಂಡುಗೆಡದಿರಿ ನಿಮ್ಮ ಬಗೆಗಳ
ಕಂಡು ಬಲ್ಲೆನೆನುತ್ತ ಫಲುಗುಣನೆಚ್ಚನತಿರಥರ || ೮ ||
ಪದವಿಭಾಗ-ಅರ್ಥ: ಭಂಡರು+ ಉಲಿದೊಡೆ ಗರುವರದ ಮಾರ್ಕೊಂಡು ನುಡಿವರೆ ಸಾಕು+ ಇದು+ ಏತಕೆ ದಿಂಡುದರಿವೆನು ನಿಮಿಷ ಸೈರಿಸಿ ನಿಂದು ಕಾದುವೊಡೆ ಕೊಂಡ ಹೆಜ್ಜೆಗೆ ಹಂಗಿಗರು ಮಿಗೆ ಗಂಡುಗೆಡದಿರಿ ನಿಮ್ಮ ಬಗೆಗಳ ಕಂಡು ಬಲ್ಲೆನು+ ಎನುತ್ತ ಫಲುಗುಣನು+ ಎಚ್ಚನು+ ಅತಿರಥರ
ಅರ್ಥ: ಮಾನವಿಲ್ಲದ ಭಂಡರಾದ ನೀವು ಹೇಳಿದರೆ ಗರ್ವವನ್ನು ಹೊದಿ ನುಡಿವರೆ ಏನು ಫಲ! ಸಾಕು ಇದು ನಿಮ್ಮ ಮಾತು ಏತಕ್ಕೆ ಬೇಕು? ನಿಮ್ಮ ಅಹಂಕಾರವನ್ನು ಅರಿದು ಹಾಕುವೆನು - ಕತ್ತರಿಸುವೆನು; ಒಂದು ನಿಮಿಷ ಸೈರಿಸಿಕೊಳ್ಲಿ. ನೀವು ಧೈರ್ಯದಿಂದ ನಿಂತು ಯುದ್ಧ ಮಾಡುವುದಾದರೆ, ನೀವು ಮುಂದೆ ಇಟ್ಟ ಹೆಜ್ಜೆಗೆ ಹಂಗಿಗರಾಗಿದ್ದೀರಿ - ಹಿಂದಕ್ಕೆ ಸರಿಯುವಂತಿಲ್ಲ. ನಂತರ ಧೈರ್ಯಗೆಡಬೇಡಿ, ನಿಮ್ಮ ಬಗೆಯ ವೀರರ ಮನಸ್ಸನ್ನು ನೋಡಿದ್ದೇನೆ, ಎನ್ನುತ್ತಾ ಪಾರ್ಥನು ಅತಿರಥರನ್ನು ಬಾಣದಿಂದ ಹೊಡೆದನು.
ಗುರುಸುತನ ಬಳಿ ರಥವನೈಸಾ
ವಿರವ ಕೊಂದನು ಕರ್ಣನೊಡೆನೆಯ
ವರ ಮಹಾರಥರೆಂಟು ಸಾವಿರವನು ರಣಾಗ್ರದಲಿ |
ಗುರು ನದೀಜರ ಬಳಿ ರಥವ ಸಾ
ವಿರವ ಕೃಪ ಸೈಂಧವ ಸುಯೋಧನ
ರರಸು ಥಟ್ಟಿನ ರಥವ ಮುರಿದನು ಹತ್ತು ಸಾವಿರವ ||೯ ||
ಪದವಿಭಾಗ-ಅರ್ಥ: ಗುರುಸುತನ ಬಳಿ ರಥವನು+ ಐಸಾವಿರವ ಕೊಂದನು, ಕರ್ಣನೊಡೆನೆಯವರ ಮಹಾರಥರು+ ಎಂಟು ಸಾವಿರವನು, ರಣಾಗ್ರದಲಿ ಗುರು ನದೀಜರ ಬಳಿ ರಥವ ಸಾವಿರವ, ಕೃಪ ಸೈಂಧವ ಸುಯೋಧನರ+ ಅರಸು ಥಟ್ಟಿನ ರಥವ ಮುರಿದನು ಹತ್ತು ಸಾವಿರವ.
ಅರ್ಥ: ಅರ್ಜುನನು ಗುರುಸುತ ಅಶ್ವತ್ಥಾನ ಬಳಿಯ ರಥವನ್ನೂ, ಐದು ಸಾವಿರ ಯೋಧರನ್ನೂ ಕೊಂದನು, ಕರ್ಣನೊಡೆನೆ ಇದ್ದವರಾದ ಎಂಟು ಸಾವಿರ ಮಹಾರಥರನ್ನೂ, ರಣರಂದ ಎದುರಲ್ಲಿದ್ದ ಗುರು ದ್ರೋನ, ನದೀಜ ಭೀಷ್ಮರು, ಇವರ ಬಳಿ ಇದ್ದ ಸಾವಿರ ರಥವನ್ನೂ, ಕೃಪ ಸೈಂಧವ ಸುಯೋಧನರ ಮತ್ತು ಅರಸನ ಬೆಂಗಾವಲಿನ (ಅರಸು ಥಟ್ಟಿನ) ಸೈನ್ಯದ ಹತ್ತು ಸಾವಿರ ರಥವನ್ನು ಮುರಿದನು.
ತುರಗ ದಳವೆಂಬತ್ತು ಸಾವಿರ
ಕರಿಘಟೆಯನೈವತ್ತು ಸಾವಿರ
ವರರಥವ ಹುಡಿ ಮಾಡಿದನು ಹನ್ನೆರಡು ಸಾವಿರವ ||
ಧುರಕೆ ವೆಗ್ಗಳವಾದ ರಥಿಕರ
ಶಿರವ ತರಿದನು ಮೂರು ಕೋಟಿಯ
ನರಸು ಕಾಲಾಳುಗಳ ಗಣನೆಯನರಿಯೆ ನಾನೆಂದ || ೧೦ ||
ಪದವಿಭಾಗ-ಅರ್ಥ: ತುರಗ ದಳವು+ ಎಂಬತ್ತು ಸಾವಿರ ಕರಿಘಟೆಯನು+ ಐವತ್ತು ಸಾವಿರ ವರರಥವ ಹುಡಿ ಮಾಡಿದನು, ಹನ್ನೆರಡು ಸಾವಿರವ ಧುರಕೆ ವೆಗ್ಗಳವಾದ ರಥಿಕರ ಶಿರವ ತರಿದನು, ಮೂರು ಕೋಟಿಯನು+ ಅರಸು ಕಾಲಾಳುಗಳ ಗಣನೆಯು+ ಅರಿಯೆ ನಾನೆಂದ.
ಅರ್ಥ: ಅರ್ಜುನನ ಕೌರವ ಸೈನ್ಯದಲ್ಲಿ, ಎಂಬತ್ತು ಸಾವಿರ ಕುದುರೆ ದಳದವರನ್ನೂ, ಐವತ್ತು ಸಾವಿರ ಕರಿಘಟೆ- ಆನೆ ದಳದವರನ್ನೂ, ಉತ್ತಮ ಹನ್ನೆರಡು ಸಾವಿರ ರಥಗಳನ್ನು ಹುಡಿ ಮಾಡಿದನು, ಯುದ್ಧಕ್ಕೆ ಶ್ರೇಷ್ಠರಾದ ಮೂರು ಕೋಟಿ ಅರಸುರಥಿಕರ ಶಿರವ ತರಿದನು; ಕಾಲಾಳುಗಳ ಲೆಕ್ಕವನ್ನು ತಾನು ಅರಿಯೆನೆ ಎಂದು ವೈಶಂಪಾಯನು ಜನಮೇಜಯನಿಗೆ ಹೇಳಿದನು.
ಸವಗ ಸೀಳಿತು ಕೃಪನ ಭೀಷ್ಮನ
ಕವಚ ಹರಿದುದು ದ್ರೋಣ ನೊಂದನು
ರವಿಯ ಮಗ ಮಸೆಗಂಡನಶ್ವತ್ಥಾಮ ಮೈಮರೆದ |
ಅವನಿಪತಿಗೇರಾಯ್ತು ಸಲೆ ಸೈಂ
ಧವ ಶಕುನಿ ದುಶ್ಶಾಸನಾದಿಗ
ಳವಯವದಲಂಬುಗಳಯ್ದರು ತೋದ ರಕುತದಲಿ || ೧೧ ||
ಪದವಿಭಾಗ-ಅರ್ಥ: ಸವಗ ( ಗೌರವಾರ್ಥಕವಾಗಿ ಹಾಸುವ ಮಡಿಯಾದ ಬಟ್ಟೆ, ಹಡದಿ, ಕುಂಭ, ಸವಡಿ- ಬಟ್ಟೆ; ಹೊದಿಕೆ? ) ಸೀಳಿತು ಕೃಪನ, ಭೀಷ್ಮನ ಕವಚ ಹರಿದುದು, ದ್ರೋಣ ನೊಂದನು, ರವಿಯ ಮಗ ಮಸೆಗಂಡನು+ ಅಶ್ವತ್ಥಾಮ ಮೈಮರೆದ, ಅವನಿಪತಿಗೆ+ ಏರಾಯ್ತು, ಸಲೆ ಸೈಂಧವ ಶಕುನಿ ದುಶ್ಶಾಸನಾದಿಗಳ+ ಅವಯವದಲಿ+ ಅಂಬುಗಳ+ ಅಯ್ದರು ತೋದ ರಕುತದಲಿ.
ಅರ್ಥ:ಕೃಪನ ಸವಗ- ನೀರಿನ ಕುಂಭವು ಸೀಳಿತು; ಭೀಷ್ಮನ ಕವಚ ಹರಿಯಿತು; ದ್ರೋಣನಿಗೆ ಪೆಟ್ಟಾಗಿ ನೊಂದನು; ರವಿಯ ಮಗ ಕರ್ಣನು ಗಾಯಗೊಂಡನು; ಅಶ್ವತ್ಥಾಮನು (ಮೈಮರೆದ) ಎಚ್ಚರತಪ್ಪಿದನು., ಅವನಿಪತಿ ಕೌರವನಿಗೆ ಎದುರಿಸುವುದು ಕಷ್ಟವಾಗಿ ಏರುಪೇರಾಯ್ತು, ಮತ್ತು ಸೈಂಧವ ಶಕುನಿ ದುಶ್ಶಾಸನಾದಿಗಳ ದೇಹಗಳಲ್ಲಿ ಅಂಬುಗಳು ಹೊಕ್ಕು ರಕ್ತದಲ್ಲಿ ತೋಯಿದರು.
ಕದಿವಡೆದುದಾ ಚೂಣಿಬಲ ಬೆಂ
ಗೊಡದ ನಾಯಕರಾಂತು ತಮಗಿ
ನ್ನೊಡಲುಗಳ ಮೇಲಾಶೆಯೇಕಿನ್ನೆನುತ ಮಿಗೆ ಮಸಗಿ |
ಸೆಡೆದು ಸೊಪ್ಪಾದಖಿಳ ಸುಭಟರ
ಗಡಣವನು ಮೇಳೈಸಿ ಮಗುಳವ
ಗಡಿಸಿ ನೂಕಿತು ಸೇನೆ ಭೀಷ್ಮ ದ್ರೋಣರಾಜ್ಞೆಯಲಿ || ೧೨ ||
ಪದವಿಭಾಗ-ಅರ್ಥ: ಕದಿವಡೆದುದು+ ಆ ಚೂಣಿಬಲ ಬೆಂಗೊಡದ ನಾಯಕರು+ ಆಂತು ತಮಗಿನ್ನು+ ಒಡಲುಗಳ ಮೇಲೆ+ ಆಶೆಯೇಕೆ+ ಇನ್ನು+ ಎನುತ ಮಿಗೆ ಮಸಗಿ ಸೆಡೆದು ಸೊಪ್ಪಾದ+ ಅಖಿಳ ಸುಭಟರ ಗಡಣವನು ಮೇಳೈಸಿ ಮಗುಳು (ಪುನಃ)+ ಅವಗಡಿಸಿ ನೂಕಿತು ಸೇನೆ ಭೀಷ್ಮ ದ್ರೋಣರ+ ಆಜ್ಞೆಯಲಿ
ಅರ್ಥ: ಕೌರವನ ಆ ಚೂಣಿಬಲ - ಮುನ್ನಡೆಯಸೈನ್ಯ ಚೂರಾಯಿತು. ಬೆನ್ನುತೋರಿ ಓಡಿ ಹೋಗದ ನಾಯಕರು, ಆಂತು ತಮಗಿ ಇನ್ನು ದೇಹದಮೇಲೆ ಆಸೆಯನ್ನು ಬಿಡುವುದೇ ಸರಿ ಎನ್ನುತ್ತಾ ಹಚ್ಚು ಶೌರ್ಯದಿಂದ ಆಕ್ರಮಿಸಿ ಬಳಲಿ ಸೊಪ್ಪಾದರು. ಆಗ ಎಲ್ಲಾ ಸುಭಟರ ದಳವನ್ನು ಒಗ್ಗೂಡಿಸಿ, ಮೇಳೈಸಿ ಪುನಃ ಆಕ್ರಮಿಸಲು ಭೀಷ್ಮ ದ್ರೋಣರ ಆಜ್ಞೆಯಲಿ ಮುಂದೆ ಸರಿಯಿತು ಸೇನೆ.
ಖತಿಯಲಶ್ವತ್ಥಾಮನೀ ರವಿ
ಸುತನ ಜರೆದನು ಗಾಯವಡೆದೈ
ಪ್ರತಿಭಟನ ಭಾರವಣೆ ಲೇಸೇ ಕರ್ಣ ನೀನರಿವೈ |
ಅತಿಬಲನು ನೀನಹಿತ ಬಲ ವನ
ಹುತವಹನು ನೀನಿರಲು ಕುರು ಭೂ
ಪತಿಯ ಬಲ ನುಗ್ಗಾಯ್ತಲಾ ನಿಷ್ಕರುಣಿ ನೀನೆಂದ || ೧೩ ||
ಪದವಿಭಾಗ-ಅರ್ಥ: ಖತಿಯಲಿ+ ಅಶ್ವತ್ಥಾಮನು+ ಈ ರವಿಸುತನ ಜರೆದನು; ಗಾಯವಡೆದೈ ಪ್ರತಿಭಟನ ಭಾರವಣೆ (ಹೊಣೆ) ಲೇಸು+ ಏ ಕರ್ಣ? ನೀನು+ ಅರಿವೈ? ಅತಿಬಲನು ನೀನು ಅಹಿತ ಬಲ(ಸೈನ್ಯ) ವನಹುತವಹನು (ಕಾಳ್ಗಿಚ್ಚು) ನೀನು+ ಇರಲು ಕುರು ಭೂಪತಿಯ ಬಲ ನುಗ್ಗಾಯ್ತಲಾ ನಿಷ್ಕರುಣಿ ನೀನು+ ಎಂದ.
ಅರ್ಥ: ಕೃಪನನ್ನು ಅವಮಾನಿಸಿದ ಹಿಂದಿನ ಕರ್ಣನ ಮಾತನ್ನು ನೆನೆದು, ಅಶ್ವತ್ಥಾಮನು ಸಿಟ್ಟಿನಿಂದ ಈ ರವಿಸುತ ಕರ್ಣನ್ನು ಜರೆದನು- ನಿಂದಿಸಿ ಹೀಗಳೆದನು. 'ಕರ್ಣನೇ ಗಾಯಗೊಂಡೆಯಲ್ಲಾ! ಶತ್ರುವನ್ನು ಪ್ರತಿಭಟಿಸುವ ಹೊಣೆ ಚೆನ್ನಾಗಿ ಮಾಡಿದೆಯಲ್ಲವೇ? ಲೇಸು ಏ ಕರ್ಣ? ಈಗಲಾದರೂ ನೀನು ನಿನ್ನ ಸಾಮರ್ಥ್ಯವನ್ನು ಅರಿತೆಯಾ?? ಅತಿಬಲನು- ಬಹಳ ಬಲಶಾಲಿ ನೀನು, ಶತ್ರುವಿನ ಬಲಕ್ಕೆ ಕಾಳ್ಗಿಚ್ಚು ಅಲ್ಲವೇ? ನೀನು ಇರುವಾಗ ಕುರು ಭೂಪತಿ ಕೌರವನ ಸೈನ್ಯ ಸೋತು ನುಗ್ಗಾಯ್ತಲ್ಲವೇ! ಕೌರವನನ್ನು ಸೊಲಲು ಬಿಟ್ಟೆ ನಿಷ್ಕರುಣಿ ನೀನು,' ಎಂದ.
ಭಟನು ನಾನಿರಲುಭಯ ರಾಯರ
ಕಟಕದೊಳಗಿನ್ನಾವನೆಂದು
ಬ್ಬಟೆಯ ನುಡಿಗಳ ನುಡಿದು ಬಾಚಿದೆ ಕೌರವನ ಧನವ |
ಭಟನು ಫಲುಗುಣನಹನು ತೋರಾ
ಪಟುತನವನೆಲೆಯಪಜಯ ಸ್ತ್ರೀ
ವಿಟನೆ ವಿಹ್ವಲನಾದೆಯೆಂದನು ದ್ರೋಣಸುತ ನಗುತ || ೧೪ ||
ಪದವಿಭಾಗ-ಅರ್ಥ: ಭಟನು ನಾನಿರಲು+ ಉಭಯ (ಇಬ್ಬರು ) ರಾಯರ ಕಟಕದೊಳಗೆ+ ಇನ್ನಾವನೆಂದು+ ಉಬ್ಬಟೆಯ ನುಡಿಗಳ ನುಡಿದು ಬಾಚಿದೆ (ಅಪಹರಿಸಿದೆ); ಕೌರವನ ಧನವ; ಭಟನು ಫಲುಗುಣನು+ ಅಹನು ತೋರು ಆ ಪಟುತನವನು+ ಎಲೆ+ ಯ+ ಅಪಜಯ ಸ್ತ್ರೀವಿಟನೆ, ವಿಹ್ವಲನಾದೆ (ಸಂಕಟಕ್ಕೆ ಒಳಗಾದೆ)+ ಯೆ+ ಎಂದನು ದ್ರೋಣಸುತ ನಗುತ.
ಅರ್ಥ: ತನ್ನ ಸೋದರಮಾವ ಕೃಪನನ್ನು ಹೀಯಾಳಿಸಿದ ಸಿಟ್ಟಿನಲ್ಲಿ, ದ್ರೋಣಸುತ ಅಶ್ವತ್ಥಾಮನು ನಗುತ್ತಾ ಕರ್ಣನನ್ನು ಕುರಿತು,'ಪಾಂಡವ ಕೌರವರ ಉಭಯ ರಾಯರ ಸೈನ್ಯದಲ್ಲಿ ವೀರನು ನಾನಿರುವಾಗ ನನ್ನನ್ನು ಮೀರಿಸಿದ ಇನ್ನಾವನು ಇದ್ದಾನೆ ಎಂದು, ಅಹಂಕಾರದಿಂದ ಉಬ್ಬಟೆಯ ಮಾತುಗಳನ್ನು ನುಡಿದು ಕೌರವನ ಧನವನ್ನು ಬಾಚಿದೆ. ನಿಜವಾದ ವೀರಭಟನು ಫಲ್ಗುಣನೇ ಆಗಿರುವನು; ಈಗ ತೋರಿಸು ಆ ನಿನ್ನ ಪಟುತನವನ್ನು; ಎಲೆ ಅಪಜಯ ವೀರನೆ, ಸ್ತ್ರೀವಿಟನೆ, ಗಾಯಗೊಂಡು ಸಂಕಟಕ್ಕೆ ಒಳಗಾದೆಯಲ್ಲಾ!' ಎಂದನು.
ಆಗಲೇರಿಸಿ ನುಡಿದ ನುಡಿ ತಾ
ನೀಗಳೇನಾಯಿತ್ತು ನುಡಿಗಳ
ತಾಗನರಿಯದೆ ತರಿಚುಗೆಡೆವರೆ ಗರುವರಾದವರು |
ಈಗಳಾವ್ ಹಾರುವರು ಕ್ಷತ್ರಿಯ
ನಾಗಿ ನೀನರ್ಜುನನ ತುರುಗಳ
ಬೇಗ ಮರಳಿಚಿ ತಂದು ತೋರದೆ ಮಾಣೆ ದಿಟವೆಂದ || ೧೫ ||
ಪದವಿಭಾಗ-ಅರ್ಥ: ಆಗಲು+ ಏರಿಸಿ ನುಡಿದ ನುಡಿ ತಾನು+ ಈಗಳೇನಾಯಿತ್ತು ನುಡಿಗಳ ತಾಗನು+ ಅರಿಯದೆ (ತಾಗುವುದನ್ನು ಅರಿಯದೆ- ಆಡಿದ ನುಡಿಗಳು ಹೇಗೆ ಮನಸ್ಸಿಗೆ ತಾಗಿ ನೋಯಿಸುವುದೆಂಬುದನ್ನು ಅರಿಯದೆ) ತರಿಚುಗೆಡೆವರೆ ಗರುವರಾದವರು ಈಗಳಾವ್ ಹಾರುವರು, ಕ್ಷತ್ರಿಯನಾಗಿ ನೀಉ+ ಅರ್ಜುನನ ತುರುಗಳ ಬೇಗ ಮರಳಿಚಿ ತಂದು ತೋರದೆ ಮಾಣೆ ದಿಟವೆಂದ - (ಸತ್ಯವೇ ಸರಿ ಎಂದ)
ಅರ್ಥ:ಕರ್ಣನೇ, ಆಗ ಸೊಕ್ಕಿನಿಂದ ಏರಿಸಿ ಅತಿಯಾಗಿ ಆಡಿದ ಮಾತಿಗೆ ತಾನು ಹೀಗೆ ಹೇಳಬೇಕಾಯಿತು. ಈಗ ಅದರಿಂದ ಏನುಪ್ರಯೋಜನ? ಆಡಿದ ನುಡಿಗಳು ಹೇಗೆ ಮನಸ್ಸಿಗೆ ತಾಗಿ ನೋಯಿಸುವುದೆಂಬುದನ್ನು ಅರಿಯದೆ ಚುಚ್ಚಿ ಮಾತನಾಡುವರೇ ಗೌರವಸ್ಥರು? ಈಗ ನಾವು ಬ್ರಾಹ್ಮಣರು- ಹಾರುವರು - ಊಟಕ್ಕೆ ಮಾತ್ರಾ ಎಂದು ಹೇಳಿದ್ದೀಯ. ಕ್ಷತ್ರಿಯನಾಗಿ ನೀನು ಅರ್ಜುನನು ಹಿಂದಕ್ಕೆ ಕಳಿಸಿದ ಗೋವುಗಳನ್ನು ಬೇಗ ಮರಳಿಸಿ ತಂದು ತೋರದೆ ಇದ್ದರೆ, ನಾನು ನಿನಗೆ ಹೇಳಿದ ಮಾತು ದಿಟವೇ ಸರಿ ಎಂದ.
ಎಲವೊ ಗರುಡಿಯ ಕಟ್ಟಿ ಸಾಮವ
ಕಲಿಸಿ ಬಳಿಕಾ ಕೋಲ ಮಕ್ಕಳ
ಬಲದಿ ಬದುಕುವ ಕೃಪಣ ವೃತ್ತಿಯ ನಿಮ್ಮ ಕೂಡೆಮಗೆ |
ಕಲಹವೇತಕೆ ಕಾಣ ಬಹುದೆಂ
ದಲಘು ಭುಜಬಲ ಭಾನುಸುತ ಕಡು
ಮುಳಿದು ಫಡ ಫಡ ಪಾರ್ಥ ಮೈದೋರೆನುತ ಮಾರಾಂತ || ೧೬ ||
ಪದವಿಭಾಗ-ಅರ್ಥ: ಎಲವೊ ಗರುಡಿಯ ಕಟ್ಟಿ ಸಾಮವ ಕಲಿಸಿ ಬಳಿಕ+ ಆ ಕೋಲ ಮಕ್ಕಳ ಬಲದಿ ಬದುಕುವ ಕೃಪಣ ವೃತ್ತಿಯ ನಿಮ್ಮ ಕೂಡೆ+ ಎಮಗೆ ಕಲಹವು+ ಏತಕೆ? ಕಾಣ ಬಹುದು+ ಎಂದು+ ಅಲಘು ಭುಜಬಲ ಭಾನುಸುತ ಕಡುಮುಳಿದು ಫಡ ಫಡ ಪಾರ್ಥ ಮೈದೋರು+ ಎನುತ ಮಾರಾಂತ.
ಅರ್ಥ:ಎಲವೊ ಅಶ್ವತ್ಥಾಮ, ಯದ್ಧದ ಅಭ್ಯಾಸಕ್ಕೆ ಗರುಡಿಯನ್ಹು (ಅಭ್ಯಾಸದ ರಣರಂಗ) ಕಟ್ಟಿ ಸಾಮುಗಳನ್ನು - ನಾನಾ ಯದ್ಧವಿದ್ಯೆಯನ್ನ ಕಲಿಸಿ, ಬಳಿಕ ಆ ಬಿಲ್ಲುಗಾರರ ಮಕ್ಕಳ ಬಲದಿಂದ ಬದುಕುವ ಕೃಪಣ ವೃತ್ತಿಯ- ಬಡತನದ ಉದ್ಯೋಗ ಮಾಡುವ ನಿಮ್ಮ ಸಂಗಡ ನಮಗೆ ಕಲಹವು ಏಕೆ ಬೇಕು? ಈಗ ನೀನು ನನ್ನ ಶೌರ್ಯವನ್ನು ಕಾಣಬಹುದು, ಎಂದು ಅಸಮಾನ್ಯ ಭುಜಬಲನಾದ ಭಾನುಸುತ ಕರ್ಣನು ಬಹಳ ಸಿಟ್ಟಿನಿಂದ, ಫಡ ಫಡ! ಪಾರ್ಥ ಎದುರಿಗೆ ಬಾ ಎನ್ನುತ್ತಾ ಅರ್ಜುನನ್ನು ಎದುರಿಸಲು ನಿಂತನು.

ಯುದ್ಧಕ್ಕೆ ಕರ್ಣನ ಪ್ರವೇಶ[ಸಂಪಾದಿಸಿ]

ಇತ್ತಲಿತ್ತಲು ಪಾರ್ಥ ನಿಲು ನಿಲು
ಮುತ್ತಯನ ಹಾರುವರನಂಜಿಸಿ
ಹೊತ್ತುಗಳೆದೊಡೆ ಹೋಹುದೇ ಕೈದೋರು ಮೈದೋರು |
ತೆತ್ತಿಗರ ಕರೆ ನಿನ್ನ ಬೇರನು
ಕಿತ್ತು ಕಡಲೊಳು ತೊಳೆವ ರಿಪುಭಟ
ಮೃತ್ಯುವರಿಯಾ ಕರ್ಣನೆನುತಿದಿರಾಗಿ ನಡೆತಂದ || ೧೭ ||
ಪದವಿಭಾಗ-ಅರ್ಥ: ಇತ್ತಲು+ ಇತ್ತಲು ಪಾರ್ಥ ನಿಲು ನಿಲು, ಮುತ್ತಯನ ಹಾರುವರನು+ ಅಂಜಿಸಿ ಹೊತ್ತುಗಳೆದೊಡೆ ಹೋಹುದೇ? ಕೈದೋರು ಮೈದೋರು(ಎದುರಿಗೆ ಬಾ) ತೆತ್ತಿಗರ ಕರೆ ನಿನ್ನ ಬೇರನು ಕಿತ್ತು ಕಡಲೊಳು ತೊಳೆವ ರಿಪುಭಟ ಮೃತ್ಯುವ+ ಅರಿಯಾ ಕರ್ಣನು+ ಎನುತ+ ಇದಿರಾಗಿ ನಡೆತಂದ
ಅರ್ಥ: ಕರ್ಣನು ಅರ್ಜುನನ್ನು ಬೆಂಬತ್ತಿ ಹೋಗಿ ಅವನಿಗೆ ಕೂಗಿ ಹೇಳಿದ, 'ಇತ್ತ, ಈ ಕಡೆ, ಪಾರ್ಥ ನಿಲ್ಲು, ನಿಲ್ಲು; ಮುದುಕನಾದ ಮುತ್ತಯ್ಯ ಭೀಷ್ಮನನ್ನು, ಹಾರುವ- ಬ್ರಾಹ್ಮಣ ದ್ರೋಣ ಕೃಪರನ್ನು ಅಂಜುವಂತೆ ಮಾಡಿ, ಯುದ್ಧದಲ್ಲಿ ಕಾಲಕಳೆದರೆ ಮುಗಿಯಿತೇ? ನನ್ನೊಡನೆ ನಿನ್ನ ಕೈಚಳಕ ತೋರಿಸು, ಎದುರಿಗೆ ಬಾ,ಮೈದೋರು ಸಹಾಯಕರಿದ್ದರೆ ಕರೆ, ನಿನ್ನ ಬೇರನ್ನು ಕಿತ್ತು ಸಮುದ್ರದಲ್ಲಿ ತೊಳೆಯುವ ಈ ರಿಪುಭಟನೂ ನಿನ್ನ ಮೃತ್ಯುವೂ ಆದವನು ಈ ಕರ್ಣನು ಅರಿತುಕೋ!,' ಎನ್ನುತ್ತಾ ಅರ್ಜನನಿಗೆ ಎದುರಾಗಿ ಕರ್ಣ ಬಂದ.
ಉಂಟು ನೀನಾಹವದೊಳಗೆ ಗೆಲ
ಲೆಂಟೆದೆಯಲಾ ನಿನ್ನ ಹೋಲುವ
ರುಂಟೆ ವೀರರು ಕೌರವೇಂದ್ರನ ಬಹಳ ಕಟಕದಲಿ |
ಟೆಂಟಣಿಸದಿದಿರಾಗು ನಿನ್ನಯ
ಸುಂಟಿಗೆಯನಿತ್ತಖಿಳ ಭೂತದ
ನಂಟನರ್ಜುನನೆನಿಸಿಕೊಂಬೆನು ಕರ್ಣ ಕೇಳೆಂದ || ೧೮ ||
ಪದವಿಭಾಗ-ಅರ್ಥ: ಉಂಟು ನೀನು+ ಆಹವದೊಳಗೆ (ಯುದ್ಧದಲ್ಲಿ) ಗೆಲಲು+ ಎಂಟೆದೆಯಲಾ (ಧೈರ್ಯಶಾಲಿ) ನಿನ್ನ ಹೋಲುವರುಂಟೆ ವೀರರು ಕೌರವೇಂದ್ರನ ಬಹಳ ಕಟಕದಲಿ ಟೆಂಟಣಿಸದೆ (ಅಂಜುದೆ)+ ಇದಿರಾಗು ನಿನ್ನಯ ಸುಂಟಿಗೆಯನು (ಅಹುತಿಗೆ- ಸುಡಲು ಮಾಂಸದ ತುಂಡು)+ ಇತ್ತು- ಕೊಟ್ಟು+ ಅಖಿಳ ಭೂತದ ನಂಟನು+ ಅರ್ಜುನನು+ ಎನಿಸಿಕೊಂಬೆನು ಕರ್ಣ ಕೇಳೆಂದ
ಅರ್ಥ: ಅರ್ಜುನನು ಕರ್ಣನಿಗೆ, 'ನೀನು ಧೈರ್ಯಶಾಲಿ, ಯುದ್ಧದಲ್ಲಿ ಗೆಲ್ಲಲು ನಿನಗೆ ಎಂಟೆದೆ ಉಂಟು. ವೀರರು ಕೌರವೇಂದ್ರನ ದೊಡ್ಡ ಸೈನ್ಯದಲ್ಲಿ ನಿನ್ನ ಹೋಲುವರುಂಟೆ? ಯಾರೂ ಇಲ್ಲ. ಕರ್ಣ ಕೇಳು, 'ಈಗ ಅಂಜುದೆ ನನಗೆ ಎದುರಾಗಿ ನಿಂತು ಯುದ್ಧಮಾಡು; ಅಹುತಿಗೆ ಹಾಕಿ ಸುಡಲು ನಿನ್ನ ದೇಹದ ಮಾಂಸದ ತುಂಡನ್ನು ಕೊಟ್ಟು, ಅರ್ಜುನನು ಎಲ್ಲಾ ಭೂತಗಳ ನೆಂಟನು ಎನಿಸಿಕೊಳ್ಳತ್ತೇನೆ,' ಎಂದ.
ಚಕಿತಚಾಪರು ಗಾಢ ಬದ್ಧ
ಭ್ರುಕುಟಿ ಭೀಷಣಮುಖರು ರೋಷ
ಪ್ರಕಟ ಪಾವಕ ವಿಸ್ಫುಲಿಂಗರು ಹೊಕ್ಕು ಸಮತಳಿಸಿ |
ವಿಕಟ ಶೌರ್ಯೋತ್ಕಟ ಮಹಾ ನಾ
ಯಕರು ನಿಷ್ಠುರ ಸಿಂಹ ಗರ್ಜನೆ
ವಿಕಳಿತಾಚಲ ಸನ್ನಿವೇಶರು ಹೊಕ್ಕು ತರುಬಿದರು || ೧೯ ||
ಪದವಿಭಾಗ-ಅರ್ಥ: ಚಕಿತಚಾಪರು ಗಾಢ ಬದ್ಧಭ್ರುಕುಟಿ ಭೀಷಣಮುಖರು ರೋಷ ಪ್ರಕಟ ಪಾವಕ ವಿಸ್ಫುಲಿಂಗರು ಹೊಕ್ಕು ಸಮತಳಿಸಿ ವಿಕಟ ಶೌರ್ಯೋತ್ಕಟ ಮಹಾ ನಾಯಕರು ನಿಷ್ಠುರ ಸಿಂಹ ಗರ್ಜನೆ ವಿಕಳಿತ+ ಆಚಲ ಸನ್ನಿವೇಶರು ಹೊಕ್ಕು ತರುಬಿದರು.
  • ಚಕಿತಚಾಪರು= ಚಕಿತ- ಅಚ್ಚರಿಗೊಳಿಸುವಂತೆ ಬಿಲ್ಲು ವಿದ್ಯೆಯಲ್ಲಿ ಪರಿಣತರು; ಗಾಢ ಬದ್ಧಭ್ರುಕುಟಿ ಭೀಷಣಮುಖರು= ತೀವ್ರವಾಗಿ ಹುಬ್ಬಗಂಟಿಕ್ಕಿದ ಉಗ್ರ ಮುಖವುಳ್ಳವರು; ರೋಷ ಪ್ರಕಟ ಪಾವಕ ವಿಸ್ಫುಲಿಂಗರು (ವಿಸ್ಫುಲಿಂಗ= ಬೆಂಕಿಯ ಕಿಡಿ.)= ಬೆಂಕಿಯ ಕಿಡಿಯಂತೆ ರೋಷವನ್ನು ತೋರುವವರು; ಹೊಕ್ಕು ಸಮತಳಿಸಿ ವಿಕಟ ಶೌರ್ಯೋತ್ಕಟ ಮಹಾ ನಾಯಕರು= ನುಗ್ಗಿ ಎದುರು- ಎದುರು ನಿಂತು ಉತ್ಕಟ ಶೌರ್ಯದಿಂದ ಹೋರಾಡುವವರು; , ನಿಷ್ಠುರ ಸಿಂಹ ಗರ್ಜನೆ ವಿಕಳಿತ+ ಆಚಲ ಸನ್ನಿವೇಶರು ಹೊಕ್ಕು ತರುಬಿದರು= ನಿಷ್ಠುರವಾಗಿ ಅಳುಕದೆ, ಸಿಂಹನಾದ ಮಾಡುತ್ತಾ, ಉನ್ಮಾದದಿಂದ ಸ್ಥರವಾಗಿ ನಿಂತು ಯುದ್ಧಮಾಡುವ ಸಮರ್ಥರು ನುಗ್ಗಿ ಒಬ್ಬರನ್ನೊಬ್ಬರು ಅಡ್ಡಗಟ್ಟಿ ಯುದ್ಧಮಾಡಿದರು.
ಅರ್ಥ:ಅಚ್ಚರಿಗೊಳಿಸುವಂತೆ ಬಿಲ್ಲು ವಿದ್ಯೆಯಲ್ಲಿ ಪರಿಣತರು; ತೀವ್ರವಾಗಿ ಹುಬ್ಬಗಂಟಿಕ್ಕಿದ ಉಗ್ರ ಮುಖವುಳ್ಳವರು; ಬೆಂಕಿಯ ಕಿಡಿಯಂತೆ ರೋಷವನ್ನು ತೋರುವವರು; ನುಗ್ಗಿ ಎದುರು- ಎದುರು ನಿಂತು ಉತ್ಕಟ ಶೌರ್ಯದಿಂದ ಹೋರಾಡುವವರು; ನಿಷ್ಠುರವಾಗಿ ಅಳುಕದೆ, ಸಿಂಹನಾದ ಮಾಡುತ್ತಾ, ಉನ್ಮಾದದಿಂದ ಸ್ಥರವಾಗಿ ನಿಂತು ಯುದ್ಧಮಾಡಲು ಸಮರ್ಥರಾದ ಅವರು, ನುಗ್ಗಿ ಒಬ್ಬರನ್ನೊಬ್ಬರು ಅಡ್ಡಗಟ್ಟಿ ಯುದ್ಧಮಾಡಿದರು.
ಪೂತುರೇ ಬಿಲುಗಾರ ಮಝರೇ
ಸೂತನಂದನ ಬಾಣ ರಚನಾ
ನೂತನದ ಬಿಲುವಿದ್ಯೆ ಭಾರ್ಗವ ಸಂಪ್ರದಾಯವಲ |
ಆತುಕೊಳ್ಳೈ ನಮ್ಮ ಬಲುಮೆಗ
ಳೇತರತಿಶಯವೆನುತ ಸರಳಿನ
ಸೇತುವನು ಕಟ್ಟಿದನು ಗಗನಾಂಗಣಕೆ ಕಲಿಪಾರ್ಥ || ೨೦ ||
ಪದವಿಭಾಗ-ಅರ್ಥ: ಪೂತುರೇ ಬಿಲುಗಾರ ಮಝರೇ ಸೂತನಂದನ ಬಾಣ ರಚನಾನೂತನದ ಬಿಲುವಿದ್ಯೆ ಭಾರ್ಗವ ಸಂಪ್ರದಾಯವಲ,ಆತುಕೊಳ್ಳೈ ನಮ್ಮ ಬಲುಮೆಗಳ (ಶಕ್ತಿಗಳ)+ ಏತರ+ ಅತಿಶಯವೆನುತ ಸರಳಿನ ಸೇತುವನು ಕಟ್ಟಿದನು ಗಗನಾಂಗಣಕೆ ಕಲಿಪಾರ್ಥ.
ಅರ್ಥ: ಪೂತುರೇ - ಭಲೇ! ಬಿಲ್ಲುಗಾರನೇ ಸರಿ ಮಝರೇ! ಸೂತಪುತ್ರ ಕರ್ಣಾ, ಹೊಸಬಗೆಯ ಬಾಣ ರಚನೆಯ ಬಿಲ್ಲುವಿದ್ಯೆಯು, ಭಾರ್ಗವ ಪರುಷುರಾಮನ ಸಂಪ್ರದಾಯವಲ್ಲವೇ?, ಈಗ ನನ್ನ ಬಾಣಗಳ ಸಾಮರ್ಥ್ಯವನ್ನು ಎದುರಿಸಯ್ಯಾ! ನಿನ್ನದು ಯಾವ ಬಗೆಯ ಅತಿಶಯವು/' ಎನ್ನುತ್ತಾ ಕಲಿಪಾರ್ಥನು ಆಕಾಶದ ಅಂಗಳಕ್ಕೆ ಬಾಣಗಳ ಸೇತುವೆಯನ್ನೇ ಕಟ್ಟಿದನು.
ಮೇಲುಗೈಯಹೆ ಬಿರುದರೊಳು ಬಿ
ಲ್ಲಾಳು ನೀನಹೆ ಚಾಪವಿದ್ಯಾ
ಭಾಳನೇತ್ರನ ಗರುಡಿಯಲ್ಲಾ ಕಲಿತ ಮನೆ ನಿನಗೆ |
ಕೋಲು ನಮ್ಮವು ಕೆಲವು ಸಮಗೈ
ಯಾಳೆ ನಿಮಗಾವೆನುತ ನೋಟಕ
ರಾಲಿ ಝೋಂಮಿಡೆ ಕರ್ಣ ತುಳುಕಿದನಂಬಿನಂಬುಧಿಯ || ೨೧ ||
ಪದವಿಭಾಗ-ಅರ್ಥ: ಮೇಲುಗೈ+ ಯ+ ಅಹೆ (ಆಗಿರುವೆ) ಬಿರುದರೊಳು ಬಿಲ್ಲಾಳು ನೀನು+ ಅಹೆ; ಚಾಪವಿದ್ಯಾಭಾಳನೇತ್ರನ(ಚಾಪವಿದ್ಯಾ= ಬಿಲ್ಲುವಿದ್ಯೆ ಭಾಳನೇತ್ರ- ಶಿವ) ಗರುಡಿಯಲ್ಲಾ ಕಲಿತ ಮನೆ ನಿನಗೆ ಕೋಲು ನಮ್ಮವು ಕೆಲವು ಸಮಗೈಯಾಳೆ ನಿಮಗೆ+ ಆವು (ನಾವು)+ ಎನುತ ನೋಟಕರ+ ಆಲಿ(ಕಣ್ಣು) ಝೋಂಮಿಡೆ ಕರ್ಣ ತುಳುಕಿದನು+ ಅಂಬಿನ+ ಅಂಬುಧಿಯ
ಅರ್ಥ: ಯುದ್ಧದಲ್ಲಿ ನೀನು ಈವರೆಗೆ ಮೇಲುಗೈ ಆಗಿರುವೆ. ಬಿರುದು ಪಡೆದವರಲ್ಲಿ ನೀನು ಉತ್ತಮ ಬಿಲ್ಲಾಳು ಆಗಿರುವುದು ನಿಜ; ಬೆಲ್ಲುವಿದ್ಯೆಯನ್ನು ಕಲಿತ ಮನೆ ನಿನಗೆ ಶಿವನ ಗರುಡಿಯಲ್ಲಿ ಅಲ್ಲವೇ? ಈಗ ಬಾಣದ ವರಸೆ ನಮ್ಮವು, ಆ ಕೆಲವು ವರಸೆಯಲ್ಲಿ ನಿಮಗೆ ನಾವು ಸಮಗೈಯಾಳೇ ಸರಿ, ಎನ್ನುತ್ತಾ, ನೋಡುವವರ ಕಣ್ಣುಗುಡ್ಡೆ ಝೋಂ- ಇಡುವಂತೆ ಕರ್ಣನು ಅಂಬಿನ ಸಮುದ್ರವನ್ನೇ ತುಂಬಿದನು.
ಅಹಹ ಫಲುಗುಣ ನೋಡಲಮ್ಮೆನು
ಬಹಳ ಬಾಣಾದ್ವೈತವಾದುದು
ಮಹಿ ಮಹಾದೇವೆನುತ ಸಾರಥಿ ಮುಚ್ಚಿದನು ಮುಖವ |
ರಹವ ಮಾಡದಿರೆಲವೊ ತನಗಿದು
ಗಹನವೇ ನೋಡೆನುತ ನರನತಿ
ಸಹಸದಲಿ ಕೆದರಿದನು ಕರ್ಣನ ಬಾಣಪಂಜರವ || ೨೨ ||
ಪದವಿಭಾಗ-ಅರ್ಥ: ಅಹಹ ಫಲುಗುಣ ನೋಡಲು+ ಅಮ್ಮೆನು(ನೋಡಲಾರೆನು) ಬಹಳ ಬಾಣ+ ಅದ್ವೈತವಾದುದು ಮಹಿ(ಭೂಮಿ) ಮಹಾದೇವ;+ ಎನುತ ಸಾರಥಿ ಮುಚ್ಚಿದನು ಮುಖವರಹವ(ವರ -ವರಹ- ಶ್ರೇಷ್ಠ) ಮಾಡದಿರು+ ಎಲವೊ; ತನಗೆ+ ಇದು ಗಹನವೇ ನೋಡು+ ಎನುತ ನರನು+ ಅತಿ ಸಹಸದಲಿ ಕೆದರಿದನು ಕರ್ಣನ ಬಾಣಪಂಜರವ.
ಅರ್ಥ: ಉತ್ತರನು,'ಅಹಹ ಫಲ್ಗುಣ ನಾನು ನೋಡಲಾರೆನು, ಬಹಳ ಬಾಣಗಳು ಅದ್ವೈತವಾಗಿ ಸಂದಿಲ್ಲದೆ ಭೂಮಿ ಕಾಣದಂತೆ ಸೇರಿಹೋಗಿವೆ, ಮಹಾದೇವ!' ಎನ್ನುತ್ತಾ ಸಾರಥಿ ಉತ್ತರನು 'ಮುಖಭಾಗವು ಬಾಣಗಳಿಂದ ಮುಚ್ಚಿಹೋಹಿತು, ಹೀಗೆ ಮಾಡಲು ಬಿಡಬೇಡ ಎಲವೊ ಪಾರ್ಥ' ಎಂದನು. ಆಗ ಪಾರ್ಥನು, ತನಗೆ ಇದನ್ನು ತೆಗೆಯಲು ಕಷ್ಟವೇ? ನೋಡು ಎನ್ನುತ್ತಾ, ಪಾರ್ಥನು ಸಾಹಸದಿಂದ ಕರ್ಣನ ಬಾಣಪಂಜರವನ್ನು ಕತ್ತರಿಸಿ ಕೆದರಿ ಪರಿಹರಿಸಿದನು.
ವೀರನಲ್ಲಾ ಬನದ ರಾಜ ಕು
ಮಾರನಲ್ಲಾ ಕೌರವನ ಬಡಿ
ಹೋರಿಯಲ್ಲಾ ತಿರಿದಿರೈ ದಿಟವೇಕಚಕ್ರದಲಿ |
ನಾರಿಯರ ನಾಟಕದ ಚೋಹವ
ನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೆಂತೆನುತ ತೆಗೆದೆಚ್ಚನಾ ಕರ್ಣ || ೨೩ ||
ಪದವಿಭಾಗ-ಅರ್ಥ: ವೀರನಲ್ಲಾ! ಬನದ ರಾಜ ಕುಮಾರನಲ್ಲಾ! ಕೌರವನ ಬಡಿಹೋರಿಯಲ್ಲಾ! ತಿರಿದಿರೈ ದಿಟವೇ+ ಏಕಚಕ್ರದಲಿ? ನಾರಿಯರ ನಾಟಕದ ಚೋಹವನು+ ಆರು ತೆಗೆದರು ಪಾರ್ಥ? ನಿನಗೀ ಶೌರಿಯದ ಸಿರಿಯೆಂತು+ ಎನುತ ತೆಗೆದು+ ಎಚ್ಚನು (ಹೊಡೆದನು)+ ಆ ಕರ್ಣ
ಅರ್ಥ:ಕರ್ಣನು ಪಾರ್ಥನನ್ನು ಹಂಗಿಸಿ,' ನೀನು ವೀರನು ಅಲ್ಲವೇ! ಕಾಡಿನ ವಾಸದ ರಾಜ ಕುಮಾರನು ಅಲ್ಲವೇ! ಕೌರವನ ಬಡಿಯುವ ಹೋರಿಯು ಅಲ್ಲವೇ! ಏಕಚಕ್ರನಗರದಲ್ಲಿ ಭಿಕ್ಷೆಬೇಡಿದರಿದಿಟವೇ ನಿಜವೇ? ನೀನು ಈ ರಣರಂಗಕ್ಕೆ ಬರುವಾಗ ಇದ್ದ ಹೆಂಗಸರ ನಾಟಕದ ವೇಷವನ್ನು ಯಾರು ತೆಗೆದರು ಪಾರ್ಥ? ನಿನಗೆ ಈ ಶೌರ್ಯದ ಸಂಪತ್ತು ಹೇಗಪ್ಪಾ ಬಂದಿತು? ಎನ್ನತ್ತಾ ಬಾಣವನ್ನು ತೆಗೆದು ಪಾರ್ಥನನ್ನು ಹೊಡೆದನು ಆ ಕರ್ಣ.
ಬಲುಗಡಿಯನಹೆ ಬೇಟೆಗಾರರ
ಬಳಗವುಳ್ಳವನಹೆ ವಿರೋಧಿಯ
ದಳಕೆ ನೀನೊಡ್ಡುಳ್ಳ ಭಟನಹೆ ಸ್ವಾಮಿ ಕಾರ್ಯದಲಿ |
ತಲೆಯ ತೆರುವವನಹೆ ಕುಭಾಷೆಗೆ
ಮುಳಿವವರು ನಾವಲ್ಲ ಸೈರಿಸು
ಬಳಿಕೆನುತ ಕಲಿಪಾರ್ಥ ಸುರಿದನು ಸರಳ ಸರಿವಳೆಯ || ೨೪ ||
ಪದವಿಭಾಗ-ಅರ್ಥ: ಬಲುಗಡಿಯನು(ಮುಂಚೂಣಿಯ ಭಟ, ಕಂಟಕನು,ಅಪಾಯಕಾರಿ )+ ಅಹೆ(ಆಗಿರುವೆ), ಬೇಟೆಗಾರರ ಬಳಗವುಳ್ಳವನು+ ಅಹೆ, ವಿರೋಧಿಯ ದಳಕೆ ನೀನು+ ಒಡ್ಡು+ ಉಳ್ಳ ಭಟನು+ ಅಹೆ, ಸ್ವಾಮಿ ಕಾರ್ಯದಲಿ ತಲೆಯ ತೆರುವವನು+ ಅಹೆ, ಕುಭಾಷೆಗೆ ಮುಳಿವವರು ನಾವಲ್ಲ, ಸೈರಿಸು ಬಳಿಕೆನುತ ಕಲಿಪಾರ್ಥ (ಕಲಿ- ಶೂರ) ಸುರಿದನು ಸರಳ ಸರಿವಳೆಯ
ಅರ್ಥ: ಅರ್ಜುನನು ಕರ್ಣನಿಗೆ, ನೀನು ಮುಂಚೂಣಿಯ ಭಟ, ಕಂಟಕ, ಅಪಾಯಕಾರಿಯೂ ಆಗಿರುವೆ; ಬೇಟೆಗಾರರ ಬಳಗವುಳ್ಳವನೂ ಆಗಿರುವೆ; ವಿರೋಧಿಯ ಸೈನ್ಯಕ್ಕೆ ನೀನು ಅಡ್ಡಗಟ್ಟಿ ನಿಲ್ಲುವ ಭಟನೂ ಆಗಿರುವೆ; ಸ್ವಾಮಿ ಕಾರ್ಯದಲ್ಲಿ ತಲೆಯ ಕೊಡುವವನೂ ಆಗಿರುವೆ; ಆದರೆ ನಿನ್ನದುಕೀಲು ಭಾಷೆ! ನಿನ್ನ ವ್ಯಂಗದ ಕುಭಾಷೆಗೆ ಸಿಟ್ಟುಗೊಂಡು ಬುದ್ದಿಕಡಿಸಿಕೊಳ್ಲುವವರು ನಾವಲ್ಲ, ನಂತರ, ಈಗ ಸಹಿಸಿಕೋ ಎನ್ನುತ್ತಾ, ಕಲಿಪಾರ್ಥನು ಬಾಣಗಳ ಸುರಿಮಳೆಯನ್ನು ಸುರಿದನು.
ಅದ್ದನೋ ಬಾಣಾಂಬುಧಿಯಲೊಡೆ
ಬಿದ್ದನೋ ವಿತಳದಲಿ ಮೇಣ್ವಿಧಿ
ಕದ್ದನೋ ಕೈವಾರವೇತಕೆ ಕಾಣೆನಿನಸುತನ |
ತಿದ್ದಿತಾತನ ದೆಸೆ ನದೀಸುತ
ನಿದ್ದನಾದೊಡೆ ಕೌರವೇಂದ್ರನ
ಹೊದ್ದ ಹೇಳೆಂದೊದರುತಿರ್ದುದು ಕೂಡೆ ಕುರುಸೇನೆ || ೨೫ |\
ಪದವಿಭಾಗ-ಅರ್ಥ: ಅದ್ದನೋ ಬಾಣ+ ಅಂಬುಧಿಯಲಿ (ಸಮುದ್ರ)+ ಒಡೆ ಬಿದ್ದನೋ ವಿತಳದಲಿ, ಮೇಣ್+ ವ+ ಅಧಿಕ+ ಅದ್ದನೋ ಕೈವಾರವು (ಹೊಗಳಿಕೆ)+ ಏತಕೆ ಕಾಣೆನು+ ಇನಸುತನ ತಿದ್ದಿತು+ ಆತನ ದೆಸೆ, ನದೀಸುತನು+ ಇದ್ದನಾದೊಡೆ ಕೌರವೇಂದ್ರನ ಹೊದ್ದ ಹೇಳೆಂದು+ ಒದರುತಿರ್ದುದು ಕೂಡೆ ಕುರುಸೇನೆ
ಅರ್ಥ: ಕರ್ಣನು ಅರ್ಉನನ ಬಾಣದ ಸಮುದ್ರದಲ್ಲಿ ಅದ್ದಲ್ಪಟ್ಟನೋ- ಮುಳುಗಿದನೋ! ಅಥವಾ ಒಡೆನೆಯೇ ಕೇಳಗಿನ ಲೋಕವಾದ ವಿತಳದಲ್ಲಿ ಬಿದ್ದನೋ, ಮತ್ತೆ ಅಧಿಕವಾಗಿ ಬಾಣ ಸಮುದ್ರದಲ್ಲಿ ಅದ್ದಿ ಮುಳುಗಿದನೋ! ಕರ್ಣನನ್ನು ಹೊಗಳುವುದು ಏತಕ್ಕೆ ಎಂದು ಕಾಣೆನು! ಇನಸುತನಾದ ಕರ್ಣನನ್ನು ಆತನ ವಿಧಿ (ಅಂತ್ಯಕ್ಕಾಗಿ) ಅವನ ಹಣೆಬರಹವನ್ನು ತಿದ್ದಿತು. ನದೀಸುತ ಭೀಷ್ಮನು ಸಮೀಪ ಇದ್ದಿದ್ದರೆ ಕರ್ಣನ ಸ್ಥಿತಿ ಹೀಗಾಗುತ್ತಿರಲಿಲ್ಲ. ಕೌರವೇಂದ್ರನ ಮುಂದಿನ ಗತಿ ಏನು ಹೇಳೆಂದು,' ಕುರುಸೇನೆ ಒಟ್ಟುಗೂಡಿಕೊಂಡು ಒದರುತಿತ್ತು- ಗೋಳಿಡುತ್ತಿತ್ತು.
ಇಡಿದ ಮೋಡದ ಮುತ್ತಿಗೆಯ ಮೇ
ಲೊಡೆದು ಮೂಡುವ ರವಿಯವೋಲ್ ನೆರೆ
ಕಡಿದು ಶರಪಂಜರವ ಮುಸುಕಿದನರ್ಜುನನ ರಥವ |
ನಡುಗಿದನು ವೈರಾಟ ಹಯವಡಿ
ಗಡಿಗೆ ನೊಂದವು ಹನುಮನಂಬರ
ವೊಡೆಯೆ ಬೊಬ್ಬಿರಿದನು ಮಹಾದ್ಭುತವಾಯ್ತು ನಿಮಿಷದಲಿ || ೨೬ ||
ಪದವಿಭಾಗ-ಅರ್ಥ: ಇಡಿದ ಮೋಡದ ಮುತ್ತಿಗೆಯ ಮೇಲೆ+ ಒಡೆದು ಮೂಡುವ ರವಿಯವೋಲ್, ನೆರೆ ಕಡಿದು ಶರಪಂಜರವ ಮುಸುಕಿದನು+ ಅರ್ಜುನನ ರಥವ ನಡುಗಿದನು ವೈರಾಟ ಹಯವು+ ಅಡಿಗಡಿಗೆ ನೊಂದವು ಹನುಮನು+ ಅಂಬರವು+ ಒಡೆಯೆ ಬೊಬ್ಬಿರಿದನು ಮಹಾದ್ಭುತವಾಯ್ತು ನಿಮಿಷದಲಿ
ಅರ್ಥ:ಕರ್ಣನು ಅರ್ಜುನನು ಸುರಿಸಿದ ಬಾಣಗಳ ಮಳೆಯಿಂದ ಮೇಲೆದ್ದನು - ಹೇಗೆಂದರೆ, ಒತ್ತೊತ್ತಾಗಿ ಮುತ್ತಿದ ಮೋಡದ ಮೇಲೆ, ಒಡೆದು ಮೂಡುವ ಸೂರ್ಯನಂತೆ, ಪೂರಾ ಬಾಣಗಳನ್ನು ಕಡಿದು ಮೇಲೆದ್ದ ಕರ್ಣನು ಬಾಣಗಳನ್ನು ಹೊಡೆದು ಅರ್ಜುನನ್ನು ಶರಪಂಜರವಲ್ಲಿ ಕೂಡಿ ಮುಸುಕುಹಾಕಿದಂತೆ ಮಾಡಿದನು. ಅರ್ಜುನನ ರಥವನ್ನು ನಡುಗಿಸಿದನು; (ಅರ್ಜುನನ ರಥಕ್ಕೆ ಕಟ್ಟಿದ?)ವಿರಾಟರಾಜನ ಕುದುರೆಗಳು ಅಡಿಗಡಿಗೆ- ಮತ್ತೆ ಮತ್ತೆ ನೊಂದವು. ಹನುಮನು ಆಕಾಶವು ಒಡೆಯುವಂತೆ ಬೊಬ್ಬಿರಿದು ಆರ್ಭಟಿಸಿದನು. ಹೀಗೆ ಒಂದು ನಿಮಿಷಲ್ಲಿ ಮಹಾ ಅದ್ಭುತವಾಯಿತು ರಣರಂಗ.
ಸೋಲವಾಯಿತು ಕರ್ಣಗೆಂಬರ
ನಾಲಗೆಯ ಕೊಯ್ಯೆಲವೊ ಬಿಡು ಬಿ
ಲ್ಲಾಳು ರಾಯನ ಪಟ್ಟದಾನೆ ವಿರೋಧಿ ಭೂಪತಿಯ |
ಭಾಳದಕ್ಕರ ತೊಡೆಯಿತೋ ತೆಗೆ
ಕಾಳಗವನೆಂದಖಿಳ ಕುರುಬಲ
ಜಾಲ ಬೊಬ್ಬಿಡೆ ಕರ್ಣ ಮೆರೆದನು ಬಿಲ್ಲ ಬಲುಮೆಯಲಿ || ೨೭ ||
ಪದವಿಭಾಗ-ಅರ್ಥ: ಸೋಲವಾಯಿತು ಕರ್ಣಗೆ+ ಎಂಬರ ನಾಲಗೆಯ ಕೊಯ್ಯಿ+ ಎಲವೊ ಬಿಡು ಬಿಲ್ಲಾಳು ರಾಯನ ಪಟ್ಟದಾನೆ ವಿರೋಧಿ ಭೂಪತಿಯ ಭಾಳದ+ ಅಕ್ಕರ (ಹಣೆಬರಹ) ತೊಡೆಯಿತೋ ತೆಗೆ ಕಾಳಗವನು+ ಎಂದು+ ಅಖಿಳ ಕುರುಬಲಜಾಲ ಬೊಬ್ಬಿಡೆ ಕರ್ಣ ಮೆರೆದನು ಬಿಲ್ಲ ಬಲುಮೆಯಲಿ
ಅರ್ಥ:ಆಗ,'ಸೋಲಾಯಿತು ಕರ್ಣನಿಗೆ ಎಂಬುವವರ ನಾಲಗೆಯನ್ನು ಕೊಯ್ಯಿರಿ! ಎಲವೊ ಬಿಡು! ಧನುರ್ವಿದ್ಯೆಯಲ್ಲಿ ಪರಿಣತನಾದ ಕರ್ಣನು ಉತ್ತಮ ಬಿಲ್ಲಾಳು! ಕೌರವರಾಯನ ಪಟ್ಟದಾನೆ! ವಿರೋಧಿ ರಾಜರ ಹಣೆಬರಹವನ್ನು ತೊಡೆಯಿತೋ ಕರ್ಣನ ಶೌರ್ಯ! ಇನ್ನೇಕೆ ಯುದ್ಧ 'ತೆಗೆ ಕಾಳಗವನು' ಎಂದು ಎಲ್ಲಾ ಕುರುಸೈನ್ಯದ ಜಾಲ ಬೊಬ್ಬಿಟ್ಟು ಕೂಗಿದರು. ಕರ್ಣ ಮೆರೆದನು ಬಿಲ್ಲ ಬಲುಮೆಯಲಿ
ಅರಿಭಟನ ಶಿರಜಾಲವನು ಸಂ
ಹರಿಸಿದನು ನಿಮಿಷದಲಿ ಫಲುಗುಣ
ನೆರಡು ಶರದಲಿ ಸಾರಥಿಯನೈದಂಬಿನಲಿ ಹಯವ |
ಶರಚತುಷ್ಟಯದಿಂದ ಕರ್ಣನ
ಕರದ ಬಿಲ್ಲನು ಕಡಿಯೆ ಭಗ್ನೋ
ತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ || ೨೮ ||
ಪದವಿಭಾಗ-ಅರ್ಥ: ಅರಿಭಟನ(ಶೂರಶತ್ರುವಿನ) ಶಿರಜಾಲವನು ಸಂಹರಿಸಿದನು ನಿಮಿಷದಲಿ ಫಲುಗುಣನು+ ಎರಡು ಶರದಲಿ ಸಾರಥಿಯನು+ ಐದು+ ಅಂಬಿನಲಿ, ಹಯವ ಶರಚತುಷ್ಟಯದಿಂದ ಕರ್ಣನ ಕರದ ಬಿಲ್ಲನು ಕಡಿಯೆ ಭಗ್ನ+ ಉತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ.
ಅರ್ಥ:ಶೂರಶತ್ರು ಕರ್ಣನ ಬಾಣದಜಾಲವನ್ನು ಪಾರ್ಥನು ಒಂದು ನಿಮಿಷದಲ್ಲಿ ಸಂಹರಿಸಿದನು. ನಂತರ ಫಲ್ಗುಣನು ಎರಡು ಶರದಲ್ಲಿ ಅವನ ಸಾರಥಿಯನ್ನು ಐದು ಬಾಣಗಳಿಂದ ಹೊಡೆದು, ಕುದುರೆಯನ್ನು ನಾಲ್ಕು ಬಾಣಗಳಿಂದ ಹೊಡದು, ಕರ್ಣನ ಕೈಯಲ್ಲದ್ದ ಬಿಲ್ಲನ್ನು ಕಡಿದುಹಾಕಲು, ಜಯದ ಉತ್ಕರ್ಷದಲ್ಲಿದ್ದ - ಅತಿ ಆನಂದದಲ್ಲಿದ್ದ ಕರ್ಣನು ಭಂಗಪಟ್ಟು - ಅರ್ಜುನನ ಹೊಡೆತದಿಂದ ಸೋತು ಅವಮಾನಪಟ್ಟು, ಮೌನದಿಂದ ಕುಗ್ಗಿ ಕರ್ಣನು ಯುದ್ಧದಿಂದ ಹಿಂತಿರುಗಿಹೋದನು.

ದ್ರೋಣನೊಡನೆ ಯುದ್ಧ[ಸಂಪಾದಿಸಿ]

ಓಟವೇ ಅಪಜಯದ ಬೊಡ್ಡಿಯ
ಬೇಟವೇ ಬೆಸಗೊಳ್ಳಿರೈ ಒಳ
ತೋಟಿಗೊತ್ತಾಳಹುದು ನಾಲಗೆಯೀಗಳೇನಾಯ್ತು |
ಆಟವಿಕ ಭೂಪತಿಯ ಕೀರ್ತಿಯ
ಕೂಟಣಿಗರೊಗ್ಗಾಯ್ತು ತೆಗೆ ಮರು
ಳಾಟವಿನ್ನೇಕೆನುತ ಪಾರ್ಥನ ತಾಗಿದನು ದ್ರೋಣ || ೨೯ ||
ಪದವಿಭಾಗ-ಅರ್ಥ: ಓಟವೇ ಅಪಜಯದ ಬೊಡ್ಡಿಯ ಬೇಟವೇ ಬೆಸಗೊಳ್ಳಿರೈ ಒಳತೋಟಿಗೆ+ ಒತ್ತಾಳು+ ಅಹುದು ನಾಲಗೆಯೀಗಳು+ ಏನಾಯ್ತು, ಆಟವಿಕ ಭೂಪತಿಯ ಕೀರ್ತಿಯ ಕೂಟಣಿಗರ+ ಒಗ್ಗಾಯ್ತು ತೆಗೆ ಮರುಳಾಟವು+ ಇನ್ನೇಕೆ+ ಎನುತ ಪಾರ್ಥನ ತಾಗಿದನು ದ್ರೋಣ
  • ಓಟವೇ ಅಪಜಯದ ಬೊಡ್ಡಿಯ ಬೇಟವೇ ಬೆಸಗೊಳ್ಳಿರೈ(ಹೇಳಿರಿ)= ಪಾರ್ಥನೇ, ನನ್ನನ್ನು ಎದುರಿಸದೆ ಓಡುವುದೇ? ಅಥವಾ ಈ ಯುದ್ಧ ಜೂಜಿನಲ್ಲಿ ಸೋತ ಪ್ರತೀಕಾರವಾಗಿ ಬಡ್ಡಿಯ ಬೇಟೆಯೇ? ಹೇಳಪ್ಪಾ!ಒಳತೋಟಿಗೆ+ ಒತ್ತಾಳು+ ಅಹುದು ನಾಲಗೆಯೀಗಳು+ ಏನಾಯ್ತು= ನನ್ನೊಡನೆ ಯುದ್ಧಮಾಡುವುದೋ ಬೇಡವೋ ಎಂಬ ಒಳತೋಟಿ ಸಿಕ್ಕಿದ್ದರೆ ಅದು ಸರಿ, ಆದರೆ ನನ್ನನ್ನು ಬೇಡಿಕೊಳ್ಳಲು ಏನಾಯಿತು? ನಾಲಿಗೆ ಬರುವುದಿಲ್ಲವೇ? ಆಟವಿಕ ಭೂಪತಿಯ ಕೀರ್ತಿಯ ಕೂಟಣಿಗರ+ ಒಗ್ಗಾಯ್ತು ತೆಗೆ= ಕಾಡುಸೇರಿದ ಭೂಪತಿ ಧರ್ಮಜನ ಕೀರ್ತಿಯ ಜೊತೆಗೂಡಿರುವವರ ಅವನತಿಯಾಯಿತು, ಬಿಡು. ನನ್ನಡನೆ ಮರುಳಾಟವು ಏಕೆ? ಇನ್ನು ಬೇಡ. ಎನ್ನುತ್ತಾ ಪಾರ್ಥನನ್ನು ಎದುರಿಸಿದನು ದ್ರೋಣ.
ಅರ್ಥ: ಪಾರ್ಥನೇ, ನನ್ನನ್ನು ಎದುರಿಸದೆ ಓಡುವುದೇ? ಅಥವಾ ಈ ಯುದ್ಧವು ಜೂಜಿನಲ್ಲಿ ಸೋತ ಪ್ರತೀಕಾರವಾಗಿ ಬಡ್ಡಿಯ ಬೇಟೆಯೇ? ಹೇಳಪ್ಪಾ! ನನ್ನೊಡನೆ ಯುದ್ಧಮಾಡುವುದೋ ಬೇಡವೋ ಎಂಬ ಒಳತೋಟಿಯಲ್ಲಿ ಸಿಕ್ಕಿದ್ದರೆ, ಅದು ಸರಿ, ಆದರೆ ನನ್ನನ್ನು ಬೇಡಿಕೊಳ್ಳಲು ಏನಾಯಿತು? ನಾಲಿಗೆ ಬರುವುದಿಲ್ಲವೇ? ಕಾಡುಸೇರಿದ ಭೂಪತಿ ಧರ್ಮಜನ ಕೀರ್ತಿಯ ಜೊತೆಗೂಡಿರುವವರ ಅವನತಿಯಾಯಿತು, ಬಿಡು. ನನ್ನೊಡನೆ ಮರುಳಾಟವು ಏಕೆ? ಇನ್ನು ಅದು ಬೇಡ. ಎನ್ನುತ್ತಾ ಪಾರ್ಥನನ್ನು ಎದುರಿಸಿದನು ದ್ರೋಣ.
ಇದಿರುಗೊಳ್ಳೈ ಪಾರ್ಥ ವಿಪ್ರರಿ
ಗದಟುತನವೆಲ್ಲಿಯದು ಕರ್ಣನ
ಸದೆಬಡಿದ ಸಾಹಸಕೆ ಹಿಗ್ಗದಿರೆಮ್ಮ ಕೈಗುಣವ
ಕದನದಲಿ ನೀ ನೋಡು ಕೈ ಸಾ
ರಿದವು ಗಡ ಕಾಮಾರಿ ಹಿಡಿವ
ಗ್ಗದ ಶರಾವಳಿಯದರ ಪರಿಯೆಂತೆಮಗೆ ತೋರೆಂದ ೩೦
ಪದವಿಭಾಗ-ಅರ್ಥ: ಇದಿರುಗೊಳ್ಳೈ ಪಾರ್ಥ, ವಿಪ್ರರಿಗೆ+ ಅದಟುತನವು (ಪರಾಕ್ರಮ)+ ಎಲ್ಲಿಯದು ಕರ್ಣನ ಸದೆಬಡಿದ ಸಾಹಸಕೆ ಹಿಗ್ಗದಿರು+ ಎಮ್ಮ ಕೈಗುಣವ ಕದನದಲಿ ನೀ ನೋಡು, ಕೈ ಸಾರಿದವು(ಪಡೆದವು) ಗಡ ಕಾಮಾರಿ (ಕಾಮನ ಶತ್ರು, ಸುಟ್ಟವ- ಶಿವ) ಹಿಡಿವ+ ಅಗ್ಗದ (ಶ್ರೇಷ್ಠವಾದ) ಶರಾವಳಿಯ+ ಅದರ ಪರಿಯೆಂತು+ ಎಮಗೆ ತೋರೆಂದ
ಅರ್ಥ: ಎಲೈ ಪಾರ್ಥನೇ!, ನನ್ನನ್ನು ಎದುರಿಸಯ್ಯಾ! ಬ್ರಾಹ್ಮಣರಿಗೆ ಪರಾಕ್ರಮವು ಎಲ್ಲಿಯದು ಎಂದು ಭಾವಿಸಬೇಡ. ಕರ್ಣನನ್ನು ಸದೆಬಡಿದ ಸಾಹಸಕ್ಕೆ ಹಿಗ್ಗಬೇಡ. ನಮ್ಮ ಕೈಗುಣವನ್ನೂ ಯುದ್ಧದಲ್ಲಿ ನೀನು ನೋಡು. ಶಿವನಿಂದ ಅಸ್ತ್ರಗಳು ನಿನಗೆ ಕೈಸಾರಿದವು ಅಲ್ಲವೇ ಗಡ! ಶಿವನು ಹಿಡಿವ ಶ್ರೇಷ್ಠವಾದ ಅಸ್ತ್ರಗಳ ಮತ್ತು ಅದರ ರೀತಿ ಹೇಗೆ ಎಂಬುದನ್ನು ನಮಗೆ ಪ್ರಯೋಗಿಸಿ ತೋರಿಸಪ್ಪಾ, ಎಂದ ದ್ರೋಣ.
ಇದಿರುಗೊಂಡೆನು ವಂದಿಸಿದೆನೆ
ಮ್ಮುದಯ ನಿಮ್ಮದು ನಿಮ್ಮ ಕೃಪೆಯಲಿ
ವಿದಿತವೆನಗೀ ವಿದ್ಯೆ ನೀವ್ ಕಾಮಾರಿ ಮುರವೈರಿ |
ಹೃದಯ ನಿಮ್ಮದು ಕಾಳಗಕೆ ನಿ
ಮ್ಮಿದಿರೊಳಾಳೇ ತಾನು ಕರುಣಾ
ಸ್ಪದರು ನೀವೆಂದೆಚ್ಚನರ್ಜುನನವರ ಸಿರಿಪದಕೆ || ೩೧ ||
ಪದವಿಭಾಗ-ಅರ್ಥ: ಇದಿರುಗೊಂಡೆನು ವಂದಿಸಿದೆನು+ ಎಮ್ಮ+ ಉದಯ ನಿಮ್ಮದು; ನಿಮ್ಮ ಕೃಪೆಯಲಿ ವಿದಿತವು+ ಎನಗೆ+ ಈ ವಿದ್ಯೆ, ನೀವ್ ಕಾಮಾರಿ ಮುರವೈರಿ, ಹೃದಯ ನಿಮ್ಮದು ಕಾಳಗಕೆ ನಿಮ್ಮ+ ಇದಿರೊಳು+ ಆಳೇ ತಾನು ಕರುಣಾಸ್ಪದರು ನೀವೆಂದು+ ಎಚ್ಚನು+ ಅರ್ಜುನನು+ ಅವರ ಸಿರಿಪದಕೆ.
ಅರ್ಥ: ಅರ್ಜುನನು,'ಗುರುಗಳೇ, ಇಗೋ, ಗೌರವದಿಂದ ಎದುರುಗೊಂಡೆನು, ವಂದಿಸಿದೆನು; ನಮ್ಮ ಉದಯ- ಏಳಿಗೆ ನಿಮ್ಮದು- ನಿಮ್ಮ ಕೃಪೆ; ನಿಮ್ಮ ಕೃಪೆಯಿಂದ ನನಗೆ ಈ ವಿದ್ಯೆ ಉಪದೇಶವಾಗಿದೆ., ನೀವೇ ಕಾಮಾರಿ- ಶಿವನು, ನೀವೇ ಮುರವೈರಿ ಕೃಷ್ಣ; ನಿಮ್ಮದು ದಯಾಳು ಹೃದಯ; ಕಾಳಗಕ್ಕೆ- ಯುದ್ಧಕ್ಕೆ ನಿಮ್ಮ ಎದುರಲ್ಲಿ ತಾನು ಸರಿಸಮಾನ ಆಳೇ- ಭಟನೇ? ಕರುಣಾಸ್ಪದರು ನೀವು,' ಎಂದು ಹೊಗಳಿ, ವಿನಯದಿಂದ ಅರ್ಜುನನು ಅವರ ಸಿರಿಪಾದದ ಬುಡಕ್ಕೆ ವಂದನಾ ಪೂರ್ವಕ ಬಾಣವನ್ನು ಹೊಡೆದನು.
ವಿನಯವುಚಿತವೆ ತತ್ತ ಸಮರದ
ಮೊನೆಯೊಳಾರಿದಿರಾದಡಿರಿವುದು
ಜನಪರಿಗೆ ಕರ್ತವ್ಯವದು ಸಾಕುಳಿದ ಮಾತೇನು |
ತನುಜ ಸೈರಿಸು ಸೈರಿಸೆಂದೆ
ಚ್ಚನು ನಿರಂತರ ಬಾಣ ವರುಷವ
ನನಿಮಿಷಾವಳಿ ಪೂತುರೆನೆ ಕೈದೋರಿದನು ದ್ರೋಣ || ೩೨ ||
ಪದವಿಭಾಗ-ಅರ್ಥ: ವಿನಯವು+ ಉಚಿತವೆ ತತ್ತ ಸಮರದ ಮೊನೆಯೊಳು, ಆರು+ ಇದಿರಾದಡೆ+ ಇರಿವುದು ಜನಪರಿಗೆ ಕರ್ತವ್ಯವು+ ಅದು ಸಾಕು+ ಉಳಿದ ಮಾತೇನು, ತನುಜ ಸೈರಿಸು ಸೈರಿಸೆಂದು+ ಎಚ್ಚನು, ನಿರಂತರ ಬಾಣ ವರುಷವನು+ ಅನಿಮಿಷಾವಳಿ ಪೂತುರೆ+ ಎನೆ ಕೈದೋರಿದನು ದ್ರೋಣ.
  • ವಿನಯವು+ ಉಚಿತವೆ ತತ್ತ ಸಮರದ ಮೊನೆಯೊಳು (ಎದುರಿನಲ್ಲಿ, ಅಂಚಿನಲ್ಲಿ) , ಆರು(ಯಾರು)+ ಇದಿರಾದಡೆ+ ಇರಿವುದು ಜನಪರಿಗೆ ಕರ್ತವ್ಯವು+ ಅದು ಸಾಕು+ ಉಳಿದ ಮಾತೇನು, ತನುಜ(ತನ್ನ ಶಿಷ್ಯನಿಗೆ ಪ್ರೀತಿಯಿಂದ- ಮಗನೇ ಎಂದು ಕರೆದನು) ಸೈರಿಸು ಸೈರಿಸೆಂದು+ ಎಚ್ಚನು, ನಿರಂತರ ಬಾಣ ವರುಷವನು+ ಅನಿಮಿಷಾವಳಿ(ಅನಿಮಿಷ+ ಆವಳಿ = ದೇವತೆಗಳ ಸಮೂಹ) ಪೂತುರೆ+ ಎನೆ ಕೈದೋರಿದನು ದ್ರೋಣ.
ಅರ್ಥ:ದ್ರೋಣ ಹೇಳಿದ,'ಅರ್ಜುನಾ ಈ ಯುದ್ಧದ ಮೊನೆಯಲ್ಲಿ- ಅಂಚಿನಲ್ಲಿ ನಿಂತಾಗ, ವಿನಯವು ಉಚಿತವೆ? ಯಾರು ಎದುರು ನಿಂತರೂ ಇರಿಯುವುದು, ಹೊಡೆಯು ರಾಜರಿಗೆ ಕರ್ತವ್ಯವು. ಅದು ಸಾಕು ಉಳಿದ ಮಾತೇನು? ಬೇಡ, ಈಗ, ಮಗನೇ, ಸಹಿಸಿಕೊ, ಎಂದು ನಿರಂತರವಾಗಿ ಬಾಣಗಳ ಮಳೆಯನ್ನು ಅವನ ಮೇಲೆ ಸುರಿಸಿ ಹೊಡೆದನು. ಆಕಾಶದಲ್ಲಿದ್ದ ದೇವತೆಗಳು ಪೂತುರೆ- ಭೇಷ್! ಎನ್ನುವಂತೆ ದ್ರೋಣನು ತನ್ನ ಕೈಚಳಕವನ್ನು ತೋರಿದನು.
ಭಾವಿಸಲು ಪ್ರತಿಬಿಂಬದಲಿ ಬೇ
ರಾವುದತಿಶಯವುಂಟು ನೀವೆನ
ಗಾವ ಪರಿಯನು ಕಲಿಸಿದಿರಿ ನಿಮಗೊಪ್ಪಿಸುವೆನದನು |
ನೀವು ನೋಡುವದೆನುತ ನರನೆಸ
ಲಾವುದಂಬರವಾವುದವನಿಯ
ದಾವುದರಿ ಬಲವೆನಲು ಹಬ್ಬಿತು ಪಾರ್ಥ ಶರಜಾಲ || ೩೩ ||
ಪದವಿಭಾಗ-ಅರ್ಥ: ಭಾವಿಸಲು ಪ್ರತಿಬಿಂಬದಲಿ ಬೇರಾವುದು+ ಅತಿಶಯವುಂಟು ನೀವು+ ಎನಗೆ+ ಆವ ಪರಿಯನು ಕಲಿಸಿದಿರಿ ನಿಮಗೊಪ್ಪಿಸುವೆನು+ ಅದನು ನೀವು ನೋಡುವದು+ ಎನುತ ನರನು+ ಎಸಲು (ಬಾಣಗಳನ್ನು ಹೊಡೆಯಲು)+ ಆವುದು+ ಅಂಬರವು+ ಆವುದು+ ಅವನಿಯು+ ಅದು+ ಆವುದು+ ಅರಿಬಲವು+ ಎನಲು ಹಬ್ಬಿತು ಪಾರ್ಥ ಶರಜಾಲ
ಅರ್ಥ:ಭಾವಿಸಿ ನೋಡಿದರೆ ಪ್ರತಿಬಿಂಬದಲಲ್ಲಿ ಬೇರೆ ಯಾವುದು ಅತಿಶಯವು ಇರಲು ಸಾದ್ಯ; ನಾನು ಬಿಲ್ಲು ವಿದ್ಯೆಯಲ್ಲಿ ನಿಮ್ಮ ಪ್ರತಿಬಿಂಬದಂತೆ ಇದ್ದೇನೆ. ನೀವು ನನಗೆ ಯಾವ ರೀತಿಯಲ್ಲಿ ಕಲಿಸಿದಿರೋ ಅದನ್ನೇ ನಿಮಗ ಒಪ್ಪಿಸುವೆನು. ಅದನ್ನು ಈಗ ನೀವು ನೋಡುವದು, ಎನ್ನುತ್ತಾ ಪಾರ್ಥನು ಬಾಣಗಳನ್ನು ಹೊಡೆಯಲು, ಯಾವುದು ಆಕಾಶವು, ಯಾವುದು ಭೂಮಿಯು, ಅದು ಯಾವುದು ಶತ್ರುಸೈನ್ಯ ಎನ್ನುವುದು ಕಾಣವಂತೆ ಪಾರ್ಥನ ಶರಜಾಲ ಹಬ್ಬಿತು.
ವಿಷಯ ಲಂಪಟತನದಲಾವ್ ನಿ
ರ್ಮಿಸಿದೆವಶ್ವತ್ಥಾಮನನು ನ
ಮ್ಮೆಸೆವ ಮೋಹದ ಕಂದನೈಯೆಲೆಪಾರ್ಥ ನೀನೆಮಗೆ |
ಎಸುಗೆಗಾರರದಾರಿಗೀ ಶರ
ವಿಸರ ಸಂಭವಿಸುವುದಿದಾರಿಗೆ
ವಿಷಮ ವೀರನ ಕೈಯ ಚಳಕವಿದೆಂದನಾ ದ್ರೋಣ || ೩೪ ||
ಪದವಿಭಾಗ-ಅರ್ಥ: ವಿಷಯ ಲಂಪಟತನದಲಿ+ ಆವ್ (ನಾವು) ನಿರ್ಮಿಸಿದೆವು+ ಅಶ್ವತ್ಥಾಮನನು, ನಮ್ಮ+ ಎಸೆವ (ಬಿಲ್ಲುವಿದ್ಯೆಯ) ಮೋಹದ ಕಂದನೈ+ ಯ+ ಎಲೆ ಪಾರ್ಥ ನೀನು+ ಎಮಗೆ ಎಸುಗೆಗಾರರು+ ಅದು+ ಆರಿಗೆ ಈ ಶರವಿಸರ ಸಂಭವಿಸುವುದು+ ಅದಾರಿಗೆ ವಿಷಮ (ಅಸಾಧಾರಣ) ವೀರನ ಕೈಯ ಚಳಕವಿದು+ ಎಂದನಾ ದ್ರೋಣ.
ಅರ್ಥ:ಪತ್ನಿಯಮೇಲಿನ ಮೋಹದಿಂದ ವಿಷಯ ಲಂಪಟತನದಲ್ಲಿ ಅವಳೊದನೆ ಕೂಡಿ ನಾವು ಅಶ್ವತ್ಥಾಮನನ್ನು ಸೃಷ್ಠಿಸಿದೆವು. ಅವನು ನಮ್ಮ ಬಿಲ್ಲುವಿದ್ಯೆಯ ಮೋಹದ ಕಂದನಯ್ಯಾ; ಆದರೆ ಎಲೆ ಪಾರ್ಥ! ನೀನು ನಮಗೆ ನನ್ನ ಬಿಲ್ಲುವಿದ್ಯೆಯ ಮಗ. ಅದಲ್ಲದಿದ್ದರೆ ಅದುಯಾರಿಗೆ ತಾನೆ ಈ ಶರವಿಸರ - ಬಿಲ್ಲುವಿದ್ಯೆಯ ಪರಿಣತಿ ಸಂಭವಿಸುವುದು. ಅದು ಯಾರಿಗೆ ತಾನೆ ಈ ಅಸಾಧಾರಣ ವೀರನ ಕೈಯ ಚಳಕವು ಬರುವುದು' ಎಂದನು ಆ ದ್ರೋಣ.
ಎನುತ ಸುರಿದನು ಸರಳ ಸಾರವ
ನನಲ ಗರ್ಭದ ಬಾಯ ಧಾರೆಗ
ಳನಿಲ ಗರ್ಭದ ಗರಿಗಳಶನಿಯ ಗರ್ಭ ಮಿಂಟೆಗಳ |
ಮೊನೆಯ ಬಂಬಲುಗಿಡಿಯ ಹೊರಗಿನ
ತನಿಹೊಗೆಯ ಹೊದರುಗಳ ಪುಂಖ
ಧ್ವನಿಯ ದಟ್ಟಣೆ ಮಿಗಲು ಕವಿದವು ದ್ರೋಣನಂಬುಗಳು || ೩೫ ||
ಪದವಿಭಾಗ-ಅರ್ಥ: ಎನುತ ಸುರಿದನು ಸರಳ ಸಾರವನು+ ಅನಲ(ಅಗ್ನಿಯ) ಗರ್ಭದ ಬಾಯ ಧಾರೆಗಳ+ ಅನಿಲ ಗರ್ಭದ ಗರಿಗಳ+ ಅಶನಿಯ (ಸಿಡಿಲಿನ) ಗರ್ಭ ಮಿಂಟೆ (ಗುಂಡು-ಬಾಣದ)ಗಳ ಮೊನೆಯ ಬಂಬಲುಗಿಡಿಯ - ಬಂಬಲು+ ಕಿಡಿ ಹೊರಗಿನ ತನಿಹೊಗೆಯ ಹೊದರುಗಳ ಪುಂಖಧ್ವನಿಯ (ಬಾಣಗಳ ಗರಿಗಳಸದ್ದಿನ) ದಟ್ಟಣೆ ಮಿಗಲು ಕವಿದವು ದ್ರೋಣನ+ ಅಂಬುಗಳು
ಅರ್ಥ: ದ್ರೋಣನು ಹಾಗೆ ಹೇಳುತ್ತಾ, ಬಾಣಗಳ ಮಳೆಯನ್ನು ಸುರಿಸಿದನು. ಅವು ಬಾಣಗಳ ಸಾರದಂತೆ, ಅಗ್ನಿಯ ಗರ್ಭದ ಬಾಯ ಧಾರೆಗಳಂತೆ, ಅನಿಲ- ವಾಯುವಿನ ಗರ್ಭದ ಗರಿಗಳ ಸಿಡಿಲಿನಂತೆ, ಗರ್ಭದ ಕಿಡಿಗಳುಳ್ಳ ಗುಂಡು-ಬಾಣದ ಮೊನೆಯಂತೆ, ಬಂಬಲು-ಗೊಂಚಲು ಕಿಡಿಯ ಹೊರಗಿನ ತನಿ- ದಟ್ಟ ಹೊಗೆಯ ಹೊದರುಗಳುಳ್ಳ ಬಾಣಗಳ ಗರಿಗಳ ಸದ್ದಿನ ಒಂದರಮೇಲೆ ಒಂದರಂತೆ ದಟ್ಟಣೆಯಾಗಿ ಬಹಳವಾಗಿ ದ್ರೋಣನ ಅಂಬುಗಳು ಅರ್ಜುನನ್ನು ಕವಿದು ಮುಚ್ಚಿದವು.
ದೇವ ಭಾರದ್ವಾಜ ಬಲು ವಿ
ದ್ಯಾ ವಿಷಯ ನವರುದ್ರ ಘನ ಶ
ಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ |
ಕೋವಿದನು ಶರತಿಮಿರವನು ಗಾಂ
ಡೀವಿಯಗಣಿತ ಬಾಣ ಭಾನು ಕ
ರಾವಳಿಯಲಪಹರಿಸಿದನು ಸುರರಾಜಸುತ ನಗುತ || ೩೬ ||
ಪದವಿಭಾಗ-ಅರ್ಥ: ದೇವ ಭಾರದ್ವಾಜ (ಭರದ್ವಾಜ ಮಹರ್ಷಿಯ ಮಗ- ದ್ರೋಣ) ಬಲು ವಿದ್ಯಾ ವಿಷಯ ನವರುದ್ರ ಘನ ಶಸ್ತ್ರಾವಳೀ ನಿರ್ಮಾಣ ನೂತನ ಕಮಲಭವ (ಬ್ರಹ್ಮ)-ಯೆನುತ ಕೋವಿದನು (ಪಂಡಿತನು) ಶರ ತಿಮಿರವನು ಗಾಂಡೀವಿಯು+ ಅಗಣಿತ ಬಾಣ ಭಾನು ಕರಾವಳಿಯಲಿ+ ಅಪಹರಿಸಿದನು ಸುರರಾಜಸುತ(ಇಂದ್ರನ ಮಗ) ನಗುತ
ಅರ್ಥ: ದೇವ ಭಾರದ್ವಾಜ- ದ್ರೋಣ ದೇವನೇ, ಬಲು ವಿದ್ಯಾ ವಿಷಯಗಳನ್ನು ಅರಿತವನು ನೀನು, ಒಂಭತ್ತು ರುದ್ರರ ಘನ ಶಸ್ತ್ರಗಳ ಸಮೂಹವನ್ನು ನಿರ್ಮಾಣಮಾಡುವ ನೂತನ- ಹೊಸ ಬ್ರಹ್ಮನೇಸರಿ ನೀನು, ಎನ್ನುತ್ತಾ ಶಸ್ತ್ರ ಪಂಡಿತನಾದ ಇಂದ್ರನ ಮಗ ಗಾಂಡೀವಿ ಅರ್ಜುನನು ನಗುತ್ತಾ, ಬಾಣಗಳ ಕತ್ತಲೆಯನ್ನು, ಅನೇಕ ಸೂರ್ಯನಂತಿರುವ ಬಾಣಗಳ ಸಮೂಹದಿಂದ ತೆಗೆದು ಪರಿಹರಿಸಿದನು.
ಹಿಳುಕನೀದುದೊ ಗಗನವಂಬಿನ
ಜಲಧಿ ಜರಿದುದೊ ಪಾರ್ಥನೆಂಬ
ಗ್ಗಳ ವಿರಿಂಚನ ಬಾಣ ಸೃಷ್ಟಿಯೊ ಬಲ್ಲನಾವವನು |
ಇಳೆಯ ಮರ್ತ್ಯರು ಶಿವ ಶಿವಾ ತೆಗೆ
ಫಲುಗುಣಗೆ ಸರಿಯೆಂಬವರ ಬಾಯ್
ಹುಳಿವುದೋ ಗುಣಕೇಕೆ ಮತ್ಸರವೆಂದುದಮರಗಣ || ೩೭ ||
ಪದವಿಭಾಗ-ಅರ್ಥ: ಹಿಳುಕನು+ ಈದುದೊ ಗಗನವು+ ಅಂಬಿನ ಜಲಧಿ ಜರಿದುದೊ, ಪಾರ್ಥನೆಂಬ+ ಅಗ್ಗಳ ವಿರಿಂಚನ ಬಾಣ ಸೃಷ್ಟಿಯೊ ಬಲ್ಲನು+ ಆವವನು ಇಳೆಯ ಮರ್ತ್ಯರು ಶಿವ ಶಿವಾ ತೆಗೆ ಫಲುಗುಣಗೆ ಸರಿಯೆಂಬವರ ಬಾಯ್+ ಹುಳಿವುದೋ ಗುಣಕೆ+ ಏಕೆ ಮತ್ಸರವೆಂದುದು+ ಅಮರಗಣ.
  • ಹಿಳುಕು= ಬಾಣದ ತುದಿ;; ದಾಸ ಸಾಹಿತ್ಯ ನಿಘಂಟು:ವಿರಂಚ, ವಿರಂಚಿ, ವಿರಿಂಚ = ಬ್ರಹ್ಮ;; ಅಗ್ಗಳ = ಶ್ರೇಷ್ಠ,; ಈದು= ಜನಿಸು
ಅರ್ಥ: ಪಾರ್ಥನು ದ್ರೋನನ ಬಾಣಗಳಿಗೆ ಪ್ರತಿ ಅಸ್ತ್ರ ಬಿಟ್ಟ ರೀತಿ ಹೇಗಿತ್ತೆಂದರೆ,- ಆಕಾಶವು ಬಾಣದ ಹಿಳುಕುಗಳಿಗೆ ಜನನವೀಯಿತೋ! ಅಂಬುಗಳ ಸಮುದ್ರವು ಮೇಲಿನಿಂದ ಜರಿದು ಬಿತ್ತೋ! ಎನ್ನವ ಹಾಗೆ ಇತ್ತು. ಪಾರ್ಥನೆಂಬ ಶ್ರೇಷ್ಠ ಬಿಲ್ಲುಗಾರ ಬ್ರಹ್ಮನ ಬಾಣ ಸೃಷ್ಟಿಯೊ! ಯಾವನು ಬಲ್ಲನು! ಇಳೆಯ ಮರ್ತ್ಯರು- ಸಾಮಾನ್ಯ ಮನುಷ್ಯರು, 'ಶಿವ ಶಿವಾ ತೆಗೆ ಫಲ್ಗುಣನಿಗೆ ಸರಿಸಮಾನರು ಇದ್ದಾರೆ ಎಂಬುವವರ ಬಾಯಿಯಲ್ಲಿ ಹುಳವಾಗುವುದೋ! ಗುಣಕ್ಕೆ ಏಕೆ ಮತ್ಸರವು, ಎಂದಿತು ಆಕಾಶದಲ್ಲಿದ್ದ ದೇವತೆಗಳ ಸಮೂಹ.
ಬಳಿಕ ಪಾರ್ಥನ ಬಾಣದಲಿ ಬಸ
ವಳಿಯೆ ಸಾರಥಿ ಮೆಲ್ಲ ಮೆಲ್ಲನೆ
ತೊಲಗಿಸಿದನಾ ರಥವನಿತ್ತಲು ಕರ್ಣನೀಕ್ಷಿಸಿದ |
ಎಲೆಲೆ ಕಟಕಾಚಾರ್ಯ ಗೆಲಿದನು
ಫಲುಗುಣನನಿನ್ನೇನು ಕೌರವ
ಬಲದ ಹಗೆ ಹರಿವಾಯ್ತು ರಾಜಾಭ್ಯುದಯವಿನ್ನೆಂದ || ೩೮ ||
ಪದವಿಭಾಗ-ಅರ್ಥ: ಬಳಿಕ ಪಾರ್ಥನ ಬಾಣದಲಿ ಬಸವಳಿಯೆ (ಆಯಾಸವಾಗಲು) ಸಾರಥಿ ಮೆಲ್ಲ ಮೆಲ್ಲನೆ ತೊಲಗಿಸಿದನಾ ರಥವನು+ ಇತ್ತಲು ಕರ್ಣನು+ ಈಕ್ಷಿಸಿದ(ನೋಡಿ) ಎಲೆಲೆ ಕಟಕಾಚಾರ್ಯ ಗೆಲಿದನು ಫಲುಗುಣನನು+ ಇನ್ನೇನು ಕೌರವ ಬಲದ ಹಗೆ ಹರಿವಾಯ್ತು ರಾಜಾಭ್ಯುದಯವು+ ಇನ್ನೆಂದ
ಅರ್ಥ: ದ್ರೋಣನ ಬಾಣವನ್ನು ಪರಿಹರಿಸಿ, ಅರ್ಜುನನು ಬಾನಪ್ರಯೋಗ ಮಾಡಿದ ಬಳಿಕ ಪಾರ್ಥನ ಬಾಣಗಳಿಂದ ದ್ರೋಣನು ಆಯಾಸಗೊಳ್ಳಲು, ಅವನ ಸಾರಥಿಯು ಮೆಲ್ಲ ಮೆಲ್ಲನೆ ರಥವನ್ನು ದೂರ ತೆಗೆದುಕೊಂಡು ಹೋದನು. ಅದನ್ನು ನೋಡಿ ಕರ್ಣನು ಇತ್ತ ಅಪಹಾಸ್ಯ ಮಾಡುತ್ತಾ, 'ಎಲೆಲೆ! ಕಟಕಾಚಾರ್ಯ- ಯುದ್ಧವಿದ್ಯೆಯ ಗುರು ಅರ್ಜುನನ್ನು ಗೆದ್ದನು, ಇನ್ನೇನು ಕೌರವ ಸೈನ್ಯದ ಶತ್ರು ಇಲ್ಲವಾಯಿತು. ಇನ್ನು ಕೌರವನ ರಾಜಾಭ್ಯುದಯವು ಆಗುವುದು, ಎಂದನು.
ಫಡ ಫಡೆಲವೊ ಕರ್ಣ ಸಾರಥಿ
ಮಡಿದರೇನದು ಸೋಲವೇ ಕಾ
ಳ್ಗೆಡೆಯದಿರು ನೋಡಾದಡಯ್ಯನ ಹರಿಬದಾಹವವ |
ನುಡಿಗೆ ತೆರನಾಯ್ತೆಂಬ ಖುಲ್ಲರ
ಬೆಡಗ ನೋಡೆನುತುಗ್ರ ಚಾಪವ
ಮಿಡಿದು ಮಂಡಿಸಿ ಹರನ ಹೋಲುವ ಸುಭಟ ಮಾರಾಂತ || ೩೯ ||
ಪದವಿಭಾಗ-ಅರ್ಥ: ಫಡ ಫಡೆಲವೊ ಕರ್ಣ! ಸಾರಥಿ ಮಡಿದರೆ+ ಏನು+ ಅದು ಸೋಲವೇ? ಕಾಳ್+ಗ+ ಕೆಡೆಯದಿರು (ಕೆಟ್ಟದಾಗಿ ವರ್ತಿಸಬೇಡ) ನೋಡು+ ಆದಡೆ+ ಅಯ್ಯನ ಹರಿಬದ+ ಅಹವವ, ನುಡಿಗೆ ತೆರನಾಯ್ತು+ ಎಂಬ ಖುಲ್ಲರ ಬೆಡಗ ನೋಡು+ ಎನುತ+ ಉಗ್ರ ಚಾಪವ ಮಿಡಿದು ಮಂಡಿಸಿ ಹರನ ಹೋಲುವ ಸುಭಟ ಮಾರಾಂತ
ಅರ್ಥ: ದ್ರೋಣನ ಮಗ ಅಶ್ವತ್ಥಾಮನು ಸಿಟ್ಟಿನಿಂದ,ಫಡ ಫಡ! ಎಲವೊ ಕರ್ಣ! ನಿನ್ನ ಸಾರಥಿ ಯುದ್ಧದಲ್ಲಿ ಮಡಿದರೆ ಅದು ಏನು ನಿನ್ನ ಸೋಲಲ್ಲವೇ? ನೀನು ಸೋತು, ದ್ರೋಣರಿಗೆ ಕೆಟ್ಟದಾಗಿ ನುಡಿಯಬೇಡ) ನೋಡು ನಿನಗೆ ಸಾಧ್ಯವಾದರೆ ನನ್ನ ತಂದೆಯ ಕಷ್ಠದಲ್ಲಿ ಸಿಲುಕಿದರೂ ಕಠಿಣವಾದ ಯುದ್ಧವನ್ನು ನೋಡು; 'ಕೀಳು ನುಡಿಗೆ ಅವಕಾಶಸಿಕ್ಕಿತು, ಎಂಬ ನಿನ್ನಂತಹ ದುಷ್ಟರ ಬೆಡಗನ್ನು ನೋಡು. ಎನ್ನುತ್ತಾ ಉಗ್ರವಾದ ತನ್ನ ಬಿಲ್ಲನ್ನು ಮಿಡಿದು- ಠೇಂಕಾರ ಮಾಡಿ ರಥದಲ್ಲಿ ಕುಳಿತು ಹರನನ್ನು ಹೋಲುವ ಸುಭಟ ಅಶ್ವತ್ಥಾಮನು ಅರ್ಜುನನ್ನು ಎದುರಿಸಿದನು.
ಆವುದೈ ನೀನರಿದ ಬಿಲು ವಿ
ದ್ಯಾ ವಿಷಯ ಘನ ಚಾಪ ವೇದಾ
ರ್ಥಾವಳಿಯು ಶರಮೌಕ್ತಿಕೋಪನ್ಯಾಸವೆಂತೆಂತು |
ಕೋವಿದರ ಭೂಸುರರ ಯುಕ್ತಿಯ
ನೀವು ಕೊಂಡಿರೆ ಶಸ್ತ್ರವಿದ್ಯಾ
ಭಾವ ಗೋಷ್ಠಿಯ ಬಲ್ಲಡರಿಯೆಂದೆಚ್ಚನರ್ಜುನನ || ೪೦ ||
ಪದವಿಭಾಗ-ಅರ್ಥ: ಆವುದೈ ನೀನು+ ಅರಿದ ಬಿಲು ವಿದ್ಯಾ ವಿಷಯ, ಘನ ಚಾಪ (ಬಿಲ್ಲು) ವೇದಾರ್ಥ+ ಆವಳಿಯು(ಅರ್ಥ - ಸಂಪತ್ತು, ಆವಳಿ- ಸಮೂಹ ರಾಶಿ) ಶರಮೌಕ್ತಿಕ (ಮುತ್ತಿನಂತೆ ಶ್ರೇಷ್ಠವಾದುದು)+ ಉಪನ್ಯಾಸವು+ ಎಂತೆಂತು ಕೋವಿದರ (ತಿಳಿದವರ- ವಿದ್ವಾಂಸರ) ಭೂಸುರರ ಯುಕ್ತಿಯ ನೀವು ಕೊಂಡಿರೆ, ಶಸ್ತ್ರವಿದ್ಯಾಭಾವ ಗೋಷ್ಠಿಯ ಬಲ್ಲಡೆ+ ಅರಿಯೆಂದು+ ಎಚ್ಚನು+ ಅರ್ಜುನನ
ಅರ್ಥ: ದ್ರೋಣನು ನಿರ್ಗಮಿಸಿದ ನಂತರ ಅವನ ಮಗ ಅಶ್ವತ್ಥಾಮನು ಅರ್ಜುನನ್ನು ಎದುರಿಸಿ, ಯಾವುದಯ್ಯಾ ನೀನು ತಿಳಿದ ಬಿಲ್ಲು ವಿದ್ಯಾ ವಿಷಯ? ನಮಗೆ ತಿಳಿಯದ ಘನ ಧನುರ್ವೇದದ ಸಮೂಹ ಸಂಪತ್ತು? ಶರಮೌಕ್ತಿಕ- ಶ್ರೇಷ್ಠ ಬಾಣವಿದ್ಯೆಯ ಉಪನ್ಯಾಸವು ಎಂತು, ಹೇಗೆ, ಎಂದು ತಿಳಿದ ಬ್ರಾಹ್ಮಣರ ಯುಕ್ತಿಯನ್ನು ನೀನು ಪಡೆದು ಕೊಂಡಿದ್ದೀಯಾ? ಶಸ್ತ್ರವಿದ್ಯಾ ಭಾವ ಗೋಷ್ಠಿಯನ್ನು ಅದರ ಚರ್ಚೆ- ವಿಮರ್ಶೆಯನ್ನು ಬಲ್ಲವನಾದರೆ ನಾನು ಬಿಡುವ ಬಾಣದಿಂದ ಅರಿತುಕೋ, ಎಂದು ಅರ್ಜುನನನ್ನು ಹೊಡೆದನು.
ಅಕ್ರಮವ ತಿರಿಭುವನ ವಿದ್ಯಾ
ಚಕ್ರವರ್ತಿಗಳೆಂದು ನೀವೀ
ವಿಕ್ರಮದ ಮಾತಿನಲಿ ಮೇಗರೆ ಮೆರೆವ ಭಟರುಗಳೆ |
ಶಕ್ರನಳುಕುವ ಬಾಹುಬಲ ರಿಪು
ಚಕ್ರದೊಳಗಿನ್ನಾರಿಗುಂಟದು
ವಕ್ರ ಭಣಿತೆಗೆ ಸಲುವುದಶ್ವತ್ಥಾಮನೆನುತೆಚ್ಚ || ೪೧ ||
ಪದವಿಭಾಗ-ಅರ್ಥ: ಅಕ್ರಮವ ತಿರಿ-ಭುವನ ವಿದ್ಯಾಚಕ್ರವರ್ತಿಗಳೆಂದು ನೀವು ಈ ವಿಕ್ರಮದ ಮಾತಿನಲಿ ಮೇಗರೆ( ಮೇಲೆ- ಎಂಬ ಅಹಂಕಾರದಿಂದ) ಮೆರೆವ ಭಟರುಗಳೆ ಶಕ್ರನಳುಕುವ- ಶಕ್ರನು+ ಉಳುಕುವ ಬಾಹುಬಲ ರಿಪು ಚಕ್ರದೊಳಗೆ+ ಇನ್ನಾರಿಗುಂಟು+ ಅದುವಕ್ರ ಭಣಿತೆಗೆ (ಚಟುವಟಿಕೆ, ರೀತಿ, ಸ್ಪಷ್ಟತೆ) ಸಲುವುದು+ ಅಶ್ವತ್ಥಾಮನ+ ಎನುತೆ+ ಎಚ್ಚ
  • ತಿರಿ- ಎಸಕಪದ= (ದೇ) ೧ ಸುತ್ತಾಡು, ತಿರುಗಾಡು, ಅಲೆ ೨ ಭಿಕ್ಷೆ ಬೇಡು ಯಾಚಿಸು ೩ (ಹೂವು, ಹಣ್ಣು ಮೊ.ವನ್ನು) ಕೀಳು, ಕೊಯ್ಯು ೪ ಎಸೆ, ಬಿಸಾಡು
ಅರ್ಥ:ಅಕ್ರಮವಾಗಿ ಭೂಮಿಯಲ್ಲಿ ಅಲೆದು (ತಿರಿದುಂಡು), ವಿದ್ಯಾಚಕ್ರವರ್ತಿಗಳೆಂದು ನೀವು ಈ ದ್ರೋಣನ ಮೇಲಿನ ವಿಜಯದಿಂದ ಮಾತಿನಲ್ಲಿ ಅಹಂಕಾರದಿಂದ ಮೆರೆವ ಶೂರರೆ, ಖಾಂಡವ ದಹನದಲ್ಲಿ ಇಂದ್ರನು ಸೋಲುವಂತೆ ಮಾಡುವ ಬಾಹುಬಲ ಈ ಶತ್ರು ಕೋಟೆಯಲ್ಲಿ ಇನ್ನಾರಿಗುಂಟು? ಅದು - ಇಂದ್ರನ ವನವನ್ನು ಸುಟ್ಟಿರುವುದು ವಕ್ರ ನೆಡತೆಗೆ ಸಲ್ಲುವುದು, ಎನ್ನುತ್ತಾ ಅಶ್ವತ್ಥಾಮನು ಅರ್ಜುನನ್ನು ಬಾಣದಿಂದ ಹೊಡೆದನು.
ಅರ್ಜುನನ ಶರವಿದ್ಯೆ ವಿವರಿಸೆ
ದುರ್ಜಯವಲಾ ಗರುವತನದಲಿ
ಗರ್ಜಿಸಿದೊಡೇನಹುದೆನುತ ಗುರುಸೂನು ಹರುಷದಲಿ
ನಿರ್ಜರರು ಮಝ ಭಾಪುರೆನಲಾ
ವರ್ಜಿಸಿದ ತಿರುವಿನಲಿ ಸಂಗರ
ನಿರ್ಜಿತೇಂದ್ರಿಯನೆಸಲು ಕಣೆಗಳು ಕವಿದವಂಬರಕೆ ೪೨
ಪದವಿಭಾಗ-ಅರ್ಥ: ಅರ್ಜುನನ ಶರವಿದ್ಯೆ ವಿವರಿಸೆ ದುರ್ಜಯವಲಾ! ಗರುವತನದಲಿ ಗರ್ಜಿಸಿದೊಡೆ+ ಏನಹುದು+ ಎನುತ ಗುರುಸೂನು (ಗುರುವಿನ ಮಗ) ಹರುಷದಲಿ ನಿರ್ಜರರು ಮಝ ಭಾಪುರೆ+ ಎನಲು+ ಆವರ್ಜಿಸಿದ ((ಸಂ) ೧ ಬಾಗುವುದು, ಚೆನ್ನಾಗಿ ಎಳೆದ) ತಿರುವಿನಲಿ ಸಂಗರ ನಿರ್ಜಿತೇಂದ್ರಿಯನು+ ಎಸಲು ಕಣೆಗಳು ಕವಿದವು+ ಅಂಬರಕೆ
ಅರ್ಥ: 'ಅರ್ಜುನನ ಧನುರ್ವಿದ್ಯೆಯನ್ನು ವಿವರಿಸಲು (ದುರ್ಜಯವಲಾ- ಕಷ್ಟ) ಅಸಾದ್ಯವಲಾ! ಗರ್ವದಿಂದ ಗರ್ಜಿಸಿದರೆ ಏನು ಪ್ರಯೋಜನ?,' ಎನ್ನುತ್ತಾ ಅಶ್ವತ್ಥಾಮನು ಹರ್ಷದಿಂದ ದೇವತೆಗಳು ಮಝ! ಭಾಪುರೆ! ಎನ್ನುತ್ತಿರಲು ಬಿಲ್ಲನ್ನು ಚೆನ್ನಾಗಿ ಬಗ್ಗುವಂತೆ ಎಳೆದು ಹಗ್ಗದ-ತಿರುವುನಲ್ಲಿ ಯುದ್ಧದಲ್ಲಿ ಗೆಲ್ಲಲು ಅಸಾದ್ಯನಾದ ಅವನು ಹೊಡೆಯಲು, ಬಾಣಗಳು ಆಕಾಶವನ್ನು ಕವಿದು ಮುಚ್ಚಿದವು.
ಗುರುತನೂಜನಲಾ ವಿಭಾಡಿಸಿ
ಹುರುಳುಗೆಡಿಸಲು ಬಹುದೆ ನೋಡು
ತ್ತರ ಸುಯೋಧನ ಸೈನ್ಯಶರಧಿಯ ಗುಂಪಿನತಿಬಲರ |
ಹರನ ಸರಿದೊರೆಯಸ್ತ್ರ ವಿದ್ಯಾ
ಧರರು ಮರ್ತ್ಯರೊಳಾರು ಲೇಸೆಂ
ದುರುಳೆಗಡಿದನು ಪಾರ್ಥನಶ್ವತ್ಥಾಮನಂಬುಗಳ || ೪೩ ||
ಪದವಿಭಾಗ-ಅರ್ಥ: ಗುರುತನೂಜನಲಾ! ವಿಭಾಡಿಸಿ ಹುರುಳುಗೆಡಿಸಲು ಬಹುದೆ ನೋಡು+ ಉತ್ತರ ಸುಯೋಧನ ಸೈನ್ಯ ಶರಧಿಯ ಗುಂಪಿನ+ ಅತಿಬಲರು+ ಅಹರನ ಸರಿದೊರೆಯ+ ಅಸ್ತ್ರ ವಿದ್ಯಾಧರರು ಮರ್ತ್ಯರೊಳು+ ಆರು ಲೇಸೆಂದು+ ಉರುಳೆಗಡಿದನು ಪಾರ್ಥನು+ ಅಶ್ವತ್ಥಾಮನ+ ಅಂಬುಗಳ.
ಅರ್ಥ:ಗುರುವಿನ -ಮಗನಲಾ! ಮಗನಲ್ಲವೇ! ಸದೆಬಡಿದು ಶಕ್ತಿಹೀನನ್ನಾಗಿ ಮಾಡಬಹುದೆ? ಅವಮಾನಿಸಲಾರೆ! ಉತ್ತರ, ಸುಯೋಧನನ ಸೈನ್ಯವೆಂಬ ಸಮುದ್ರಲ್ಲಿರುವ ಭಟರ ಗುಂಪಿನ ಅತಿಬಲಾಢ್ಯರು ಇರುವುದನ್ನು ನೋಡು; ನನಗೆ ಸರಿಸಮಾನರಾದ ಇವರು ಮಾನವರಲ್ಲಿ ಅಸ್ತ್ರ ವಿದ್ಯಾಧರರು. ಅವರಲ್ಲಿ ಯಾರು ಉತ್ತಮರು? ಎಂದು ಹೇಳುತ್ತಾ ಪಾರ್ಥನು ಅಶ್ವತ್ಥಾಮನ ಅಂಬುಗಳನ್ನು ಕಡಿದ ಕೆಡಗಿದನು.
ಗುರುಸುತನ ಶರಜಾಲವನು ಸಂ
ಹರಿಸಿ ಮಗುಳಸ್ತ್ರೌಘವನು ವಿ
ಸ್ತರಿಸಿದನು ಕಲಿಪಾರ್ಥನೀತನ ಸರಳುಗಳ ಸವರಿ |
ತರಣಿ ಬಿಂಬವ ನಭವ ಹೂಳ್ದುದು
ಗುರುಸುತನ ಸಾಮರ್ಥ್ಯವಿಂತಿ
ಬ್ಬರಿಗೆ ಸಮಬಲವಾಗಿ ಸಮತಳಿಸಿತ್ತು ರಣಕೇಳಿ || ೪೪ ||
ಪದವಿಭಾಗ-ಅರ್ಥ: ಗುರುಸುತನ ಶರಜಾಲವನು ಸಂಹರಿಸಿ ಮಗುಳು+ ಅಸ್ತ್ರ ಔಘವನು (ಪ್ರವಾಹ, ಗುಂಪು) ವಿಸ್ತರಿಸಿದನು ಕಲಿಪಾರ್ಥನು+ ಈತನ ಸರಳುಗಳ ಸವರಿ ತರಣಿ ಬಿಂಬವ ನಭವ ಹೂಳ್ದುದು ಗುರುಸುತನ ಸಾಮರ್ಥ್ಯವಿಂತು+ ಇಬ್ಬರಿಗೆ ಸಮಬಲವಾಗಿ ಸಮತಳಿಸಿತ್ತು ರಣಕೇಳಿ(ಯುದ್ಧದ ಆಟ, ಹೊಡೆದಾಟ)
ಅರ್ಥ:ಗುರುಸುತ ಅಶ್ವತ್ಥಾಮನ ಶರಜಾಲವನ್ನು ಅರ್ಜುನನು ಸಂಹರಿಸಿ ತಿರುಗಿ+ ಅಸ್ತ್ರಗಳ ಪ್ರವಾಹವನ್ನೇ ಹರಿಸಿದನು. ಕಲಿಪಾರ್ಥನು ಅಶ್ವತ್ಥಾಮನ ಬಾಣಗಳನ್ನು ಸವರಿಹಾಕಿ ಸೂರ್ಯನ ಬಿಂಬವನ್ನೂ ಆಕಾಶವನ್ನೂ ಹೂಕ್ಕಿತು. ಹೀಗೆ ಗುರುಸುತನ ಸಾಮರ್ಥ್ಯವು ನೋಡಲು ಇಬ್ಬರಿಗೆ ಸಮಬಲವಾಗಿ ರಣಕೇಳಿ ನೆಡೆದಿತ್ತು.
ತೀರವರ್ಜುನನಂಬು ರಣದಲಿ
ತೀರಿದವು ಗುರುಸುತನ ಶರ ಕೈ
ವಾರವೇ ಕೈಗುಂದಿ ನಿಂದನು ದ್ರೋಣನಂದನನು |
ಮೇರು ಮೊಗದಿರುಹಿತ್ತಲಾ ರಣ
ಧೀರನಶ್ವತ್ಥಾಮ ಸೋತನು
ಸಾರೆನುತ ಕೃಪನುರುಬಿದನು ತರುಬಿದನು ಫಲುಗುಣನ || ೪೫ ||
ಪದವಿಭಾಗ-ಅರ್ಥ: ತೀರವು+ ಅರ್ಜುನನ+ ಅಂಬು ರಣದಲಿ, ತೀರಿದವು ಗುರುಸುತನ ಶರ, ಕೈವಾರವೇ( ಯುದ್ಧ ಸಹಾಯ ಸಲಕರಣೆ) ಕೈಗುಂದಿ ನಿಂದನು ದ್ರೋಣನಂದನನು ಮೇರು ಮೊಗದಿರುಹಿ+ ಇತ್ತಲು+ ಆ ರಣಧೀರನು+ ಅಶ್ವತ್ಥಾಮ ಸೋತನು ಸಾರೆನುತ ಕೃಪನು+ ಉರುಬಿದನು ತರುಬಿದನು (ಅಡ್ಡಹಾಕಿದನು). ಫಲುಗುಣನ.
ಅರ್ಥ: ಅಕ್ಷಯ ಬತ್ತಳಿಕೆಯಾದ್ದರಿಂದ ಅರ್ಜುನನ ಬತ್ತಳಿಕೆಯ ಅಂಬುಗಳು ಯುದ್ಧದಲ್ಲಿ ತೀರುವುದಿಲ್ಲ(ಮುಗಿದು ಹೋಗುವುದಿಲ್ಲ). ಆದರೆ ಗುರುಸುತ ಅಶ್ವತ್ಥಾಮನ ಬಳಿ ಇದ್ದ ಬಾಣಗಳು ತೀರಿದವು (ಮಗಿದವು.). ಯುದ್ಧ ಸಹಾಯ ಸಲಕರಣೆ ಇಲ್ಲವಾಗಿ ದ್ರೋಣನಂದನ ಅಶ್ವತ್ಥಾಮನು ಸುಮ್ಮನೆ ಮೇಲೆ ಮುಖಮಾಡಿ ಸುಮ್ಮನೆ ನಿಂತನು. ಇತ್ತ ಆ ರಣಧೀರ ಅಶ್ವತ್ಥಾಮನು ಸೋತನು ಸರಿದು ಹೋಗು ಎನ್ನುತ್ತಾ ಕೃಪನು ಪೌರುಷದಿಂದ ಫಲ್ಗುಣನನ್ನು ಅಡ್ಡಹಾಕಿದನು.
ತಂದೆ ಮಕ್ಕಳು ಸೋತರಿನ್ನೇ
ನೆಂದು ಮುಯ್ಯಾನದಿರು ನಿಲು ನಿ
ಲ್ಲೆಂದು ಕೃಪನಡ ಹಾಯ್ದು ಪಾರ್ಥನ ರಥವ ತರುಬಿದನು
ಬಂದ ಪರಿ ಲೇಸೆನುತ ಫಲುಗುಣ
ನೊಂದು ಕನಲಂಬಿನಲಿ ಗುರುಗಳಿ
ಗಿಂದು ವಂದಿಸಬೇಕೆನುತ ಕೀಲಿಸಿದನಾ ರಥವ ೪೬
ಪದವಿಭಾಗ-ಅರ್ಥ: ತಂದೆ ಮಕ್ಕಳು(ದ್ರೋಣ ಅಶ್ವತ್ಥಾಮ) ಸೋತರು+ ಇನ್ನೇನು+ ಎಂದು ಮುಯ್ಯಾನದಿರು (ವಿಶ್ರಮಿಸಬೇಡ) ನಿಲು ನಿಲ್ಲೆಂದು ಕೃಪನು+ ಅಡ ಹಾಯ್ದು ಪಾರ್ಥನ ರಥವ ತರುಬಿದನು; ಬಂದ ಪರಿ ಲೇಸು+ ಎನುತ ಫಲುಗುಣನು+ ಒಂದು ಕನಲ(ಕೆಡುಕು ಮಾಡದಿರುವಂತಹುದು)+ ಅಂಬಿನಲಿ ಗುರುಗಳಿಗೆ+ ಇಂದು ವಂದಿಸಬೇಕು+ ಎನುತ ಕೀಲಿಸಿದನು (ಕೀಲಿಸು= ನಾಟು, ಬಿಗಿದು ಕಟ್ಟು) ಆ ರಥವ
ಅರ್ಥ:ಕೃಪನು ಅರ್ಜುನನ್ನು ಕುರಿತು. 'ತಂದೆ ಮಕ್ಕಳಾದ ದ್ರೋಣ ಅಶ್ವತ್ಥಾಮರು ಸೋತರು ಇನ್ನೇನು ಎಂದು ವಿಶ್ರಮಿಸಬೇಡ. ನಿಲ್ಲು ನಿಲ್ಲು ಎಂದು ಕೃಪನು ಅಡ್ಡ ಹಾಯಿದು ಹೋಗಿ ಪಾರ್ಥನ ರಥವನ್ನು ಅಡ್ಡಗಟ್ಟಿದನು; ಕೃಪನು ಬಂದ ರೀತಿ ಒಳ್ಳೆಯದೇ ಎನ್ನುತ್ತಾ ಫಲ್ಗುಣನು ಅಪಾಯವಾಗದಂತೆ ಒಂದು ಬಾಣದಿಂದ ಗುರುಗಳಿಗೆ ಇಂದು ವಂದಿಸಬೇಕು ಎನ್ನತ್ತಾ ಅವರ ರಥವನ್ನು ಬಾಣದಿಂದ ಚಲಿಸದಂತೆ ಗಾಲಿಗೆ ಹೊಡೆದು ನೆಲಕ್ಕೆ ಕೀಲಿಸಿದನು.
ತರಹರಿಸಿ ಶರವೈದರಲಿ ಸಂ
ಹರಿಸಿ ಕೊಳ್ಳೆಂದೆಚ್ಚೊಡೀತನ
ತುರಗವನು ತಾಗಿದವು ನೊಂದವು ರಥದ ವಾಜಿಗಳು |
ಕೆರಳಿ ಫಲುಗುಣನರ್ಧ ಚಂದ್ರದ
ಸರಳಿನಲಿ ಸಾರಥಿಯ ತುರಗವ
ಕರದ ಬಿಲ್ಲನು ಕಡಿಯೆ ತೊಲಗಿದನಾ ಕೃಪಾಚಾರ್ಯ || ೪೭ ||
ಪದವಿಭಾಗ-ಅರ್ಥ: ತರಹರಿಸಿ (ಚೇತರಿಸಿಕೊಂಡು) ಶರವು+ ಐದರಲಿ ಸಂಹರಿಸಿ ಕೊಳ್ಳೆಂದು+ ಎಚ್ಚೊಡೆ (ಹೊಡೆದಾಗ)+ ಈತನ ತುರಗವನು ತಾಗಿದವು, ನೊಂದವು ರಥದ ವಾಜಿಗಳು, ಕೆರಳಿ (ಸಿಟ್ಟಾಗಿ), ಫಲುಗುಣನು+ ಅರ್ಧ ಚಂದ್ರದ ಸರಳಿನಲಿ ಸಾರಥಿಯ, ತುರಗವ, ಕರದ ಬಿಲ್ಲನು ಕಡಿಯೆ, ತೊಲಗಿದನು+ ಆ ಕೃಪಾಚಾರ್ಯ.
ಅರ್ಥ: ಕೃಪನು ರಥವನ್ನು ಸರಿಪಡಿಸಿ, ಚೇತರಿಸಿಕೊಂಡು, ಇವನ್ನು ಸಂಹರಿಸಿಕೋ ಎಂದು ಐದು ಬಾಣಗಳಿಂದ ಹೊಡೆದಾಗ ವು ಪಾರ್ಥನ ಕುದುರೆಗಳಿಗೆ ತಾಗಿದವು. ಅದರಿಂದ ಅವನ ರಥದ ಕುದುರೆಗಳು ನೊಂದವು. ಆಗ ಫಲ್ಗುಣನು ಕೆರಳಿ ಅರ್ಧ ಚಂದ್ರದ ತುದಿಯುಳ್ಳ ಬಾಣಗಳಿಂದ ಸಾರಥಿಯನ್ನ ಹೊಡೆದು, ಅವನ ರಥದ ಕುದುರೆಗಳನ್ನೂ ಹೊಡೆದು, ಕೃಪನ ಕೈಯಲ್ಲಿದ್ದ ಬಿಲ್ಲನ್ನೂ ಕಡಿದನು. ಆಗ ಆ ಕೃಪಾಚಾರ್ಯನು ಅಲ್ಲಿಂದ ಹೊಟುಹೋದನು.
ಎಲೆಲೆ ಕರ್ಣ ದ್ರೋಣ ಗುರುಸುತ
ರಲಘು ಭುಜಬಲ ಕೃಪನು ಹೊಕ್ಕಿರಿ
ದಳುಕಿದರು ಮಝ ಭಾಪುರೆಂತುಟೊ ಪಾರ್ಥನಗ್ಗಳಿಕೆ |
ಗೆಲುವನೊಬ್ಬನೆ ನಮ್ಮ ಬಲದಲಿ
ನಿಲುಕಿ ಹಿಂಗುವ ಸುಭಟರಿನಿಬರು
ಸುಲಭವೆಮಗೀ ಸೋಲವೆಂದುದು ಕೂಡೆ ಕುರುಸೇನೆ || ೪೮ ||
ಪದವಿಭಾಗ-ಅರ್ಥ: ಎಲೆಲೆ ಕರ್ಣ ದ್ರೋಣ ಗುರುಸುತರು+ ಅಲಘು ಭುಜಬಲ ಕೃಪನು ಹೊಕ್ಕಿರಿದು+ ಅಳುಕಿದರು, ಮಝ ಭಾಪುರೆ+ ಎಂತುಟೊ ಪಾರ್ಥನ+ ಅಗ್ಗಳಿಕೆ, ಗೆಲುವನು+ ಒಬ್ಬನೆ, ನಮ್ಮ ಬಲದಲಿ ನಿಲುಕಿ ಹಿಂಗುವ ಸುಭಟರು+ ಇನಿಬರು ಸುಲಭವೆ ಎಮಗೆ ಈ ಸೋಲವೆಉ+ ಎಂದುದು ಕೂಡೆ ಕುರುಸೇನೆ
ಅರ್ಥ:'ಎಲೆಲೆ ಕರ್ಣ, ದ್ರೋಣ, ಗುರುಸುತ ಅಶ್ವತ್ಥಾರು+ ಅಲಘು ಭುಜಬಲ ಕೃಪನು ಹೊಕ್ಕಿರಿದು+ ಅಳುಕಿದರು, ಮಝ ಭಾಪುರೆ+ ಎಂತುಟೊ ಪಾರ್ಥನ+ ಅಗ್ಗಳಿಕೆ, ಗೆಲುವನು+ ಒಬ್ಬನೆ, ನಮ್ಮ ಬಲದಲಿ ನಿಲುಕಿ ಹಿಂಗುವ ಸುಭಟರು+ ಇನಿಬರು ಸುಲಭವೆ ಎಮಗೆ ಈ ಸೋಲವೆಉ+ ಎಂದುದು ಕೂಡೆ ಕುರುಸೇನೆ

ಭೀಷ್ಮನೊಡನೆ ಯುದ್ಧ[ಸಂಪಾದಿಸಿ]

ಬಾಯ ಬಿಟ್ಟುದು ಸಕಲ ಕೌರವ
ರಾಯದಳ ವಡಮುಖದಲದಟರು
ಹಾಯಿದರು ತಡವೇನು ತೆರದೆರಸಾಯ್ತು ಕುರುಸೇನೆ |
ಕಾಯಬೇಕೆಂದೆನುತ ವರ ಗಾಂ
ಗೇಯ ಚಾಪವ ಮಿಡಿದು ಬೆರಳಲಿ
ಸಾಯಕವ ತೂಗುತ್ತ ತಡೆದನು ಪಾರ್ಥನುರವಣೆಯ || ೪೯ ||
ಪದವಿಭಾಗ-ಅರ್ಥ: ಬಾಯ ಬಿಟ್ಟುದು ಸಕಲ ಕೌರವರಾಯದಳ ವಡಮುಖದಲಿ(ತೋಟದಂತಿದ್ದ ಸೇನೆಯ ಎದುರಲ್ಲಿ)+ ಅದಟರು (ಶೂರರು), ಹಾಯಿದರು ತಡವೇನು ತೆರದು+ ಎರಸುಯ್ತು (ಎರಸು, ಇರುಸು - ತೊಂದರೆ, ಮುಜುಗರ) ಕುರುಸೇನೆ ಕಾಯಬೇಕೆಂದು+ ಎನುತ ವರ ಗಾಂಗೇಯ (ಶ್ರೇಷ್ಠನಾದ ಭೀಷ್ನನು), ಚಾಪವ ಮಿಡಿದು ಬೆರಳಲಿ ಸಾಯಕವ ತೂಗುತ್ತ ತಡೆದನು ಪಾರ್ಥನ+ ಉರವಣೆಯ
ಅರ್ಥ:ಕುರು ಸೈನ್ಯದ ಮಹಹಾವೀರರೆಲ್ಲರೂ ಪಾರ್ತನಿಗೆ ಸೋತುದನ್ನು ಕಂಡು ಕೌರವರಾಯನ ಸೇನೆ, ಆಚ್ಚರಿಯಿಂದ ಬಾಯ ಬಿಟ್ಟುಕೊಂಡು ನೋಡಿತು. ಸಕಲ ಸೇನೆಯ ಎದುರಲ್ಲಿ ಶೂರರು ಸೋತು ಓಡಿದರು. ತಡವೇನು ತೆರದು ಎಲ್ಲರಿಗೂ ಕಾಣುವಂತೆ ಸೇನೆಗೆ ನಾಯಕರಿಗೆ, ಕುರುಸೇನೆಗೆ ಮುಜುಗರವಾಯಿತು. ಶ್ರೇಷ್ಠನಾದ ಭೀಷ್ನನು ಸೇನೆಯ ಮಾನವನ್ನು ಕಾಯಬೇಕೆಂದು ಹೇಳುತ್ತಾ, ಬೆರಳಲ್ಲಿ ಬಿಲ್ಲನ್ನು ಮಿಡಿದು ಬಾಣವನ್ನು ತೂಗುತ್ತ ಪಾರ್ಥನ ಆರ್ಭಟವನ್ನು (ಪರಾಕ್ರಮವನ್ನು) ತಡೆದನು.
ಓಡಿದವರಲ್ಲಲ್ಲಿ ಧೈರ್ಯವ
ಮಾಡಿತಚ್ಚಾಳೊಗ್ಗಿನಲಿ ಹುರಿ
ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದಲಿ |
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ಕವಿದುದೀತನ
ಕೂಡೆ ಘನ ಗಂಭೀರ ಭೇರಿಯ ಬಹಳ ರಭಸದಲಿ || ೫೦ ||
ಪದವಿಭಾಗ-ಅರ್ಥ: ಓಡಿದವರು+ ಅಲ್ಲಲ್ಲಿ ಧೈರ್ಯವ ಮಾಡಿತು+ ಅಚ್ಚಾಳು (ವೀರಭಟರು)+ ಒಗ್ಗಿನಲಿ ಹುರಿಗೂಡಿತು (ಧೈರ್ಯಹೊಂದಿತು)+ ಅಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದಲಿ ಕೂಡೆ ಗರಿಗಟ್ಟಿತು ಚತುರ್ಬಲ ಜೋಡು ಮಾಡಿತು ಕವಿದುದು+ ಈತನ (ಭೀಷ್ಮನ ) ಕೂಡೆ ಘನ ಗಂಭೀರ ಭೇರಿಯ ಬಹಳ ರಭಸದಲಿ
ಅರ್ಥ: ಸೋತು ಹೆದರಿ ಓಡಿದವರು ಭೀಷ್ಮನು ಎದುರು ನಿಂತುದನ್ನು ನೋಡಿ ಅಲ್ಲಲ್ಲಿ ಧೈರ್ಯವನ್ನು ಮಾಡಿ, ವೀರಭಟರು ಒಗ್ಗಟ್ಟಾಗಿ ಧೈರ್ಯಹೊಂದಿದರು. ಸೇನೆಯ ಅಬ್ಬರ ನಿಮಿಷದಲ್ಲಿ ಮತ್ತೆ ಹೆಚ್ಚಾಯಿತು. ಅದರ ಕೂಡೆ ಚತುರ್ಬಲ ಗರಿಗಟ್ಟಿತು- ಹುರುಪುಗೊಂಡಿತು. ಎಲ್ಲಾ ಜೋಡಸಿಕೊಂಡು ಒಟ್ಟು ಮಾಡಿತು. ಹೀಗೆ ಸೇನೆ ಅರ್ಜುನನ್ನು ಕವಿದು ಮುತ್ತಿತು. ಭೀಷ್ಮನ ಜೊತೆ ಸೇರಿ ಘನ ಗಂಭೀರವಾದ ಭೇರಿಯ ಸದ್ದಿನೊಡನೆ ಬಹಳ ರಭಸದಿಂದ ಅರ್ಜುನನ ಮೇಲೆ ಎರಗಿತು.
ತೊಲಗು ರಾಯ ಪಿತಾಮಹನ ಖತಿ
ಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರು ಸಾರೆನುತ
ಉಲಿವ ಬಳಿಯ ಮಹಾರಥರ ಕಳ
ಕಳದ ಕಹಳೆಯ ಪಾಠಕರ ಗಾ
ವಳಿಯ ಬಿರುದಿನ ಬಹಳತೆಯಲೈತಂದನಾ ಭೀಷ್ಮ ೫೧
ಪದವಿಭಾಗ-ಅರ್ಥ: ತೊಲಗು ರಾಯ ಪಿತಾಮಹನ ಖತಿಬಲುಹು ತೆತ್ತಿಗರು (ಬಂಧುಗಳು)+ ಅಹರೆ, ರುದ್ರನ ನಳಿನನಾಭನ ಕರೆಸು, ನೀ ಶಿಶು ಸಾರು ಸಾರೆನುತ ಉಲಿವ (ಕೂಗುವ) ಬಳಿಯ ಮಹಾರಥರ ಕಳಕಳದ ಕಹಳೆಯ ಪಾಠಕರ ಗಾವಳಿಯ ಬಿರುದಿನ ಬಹಳತೆಯಲಿ+ ಐತಂದನು(ಬಂದನು)+ ಆ ಭೀಷ್ಮ.
ಅರ್ಥ: ಭೀಷ್ಮನು ಯುದ್ಧಕ್ಕೆ ಬರಲು, ಕೌರವನ ಸೇನೆಯ ಮಹಾರಥರು ಅರ್ಜುನನಿಗೆ ಕೂಗಿ ಹೇಳಿದರು,'ಪಾರ್ಥನೇ ಹೊರಟು ಹೋಗು, ಕೌರವ ರಾಯನ ಸೈನ್ಯದ ನಾಯಕ ಪಿತಾಮಹ ಭೀಷ್ಮನ ಕ್ರೋಧ ಮತ್ತು ಶಕ್ತಿ ದೊಡ್ಡದು. ನಿನಗೆ ಸಹಾಯಕ್ಕೆ ಬಂಧುಗಳು ಇದ್ದಾರೆಯೇ? ರುದ್ರನನ್ನೂ, ನಳಿನನಾಭ ಕೃಷ್ಣನನ್ನೂ ಕರೆಸಿಕೋ!, ಭೀಷ್ಮನ ಎದುರು ನೀನು ಶಿಶು. ಸುಮ್ಮನೆ ದೂರ ಸಾರು- ಸಾರು ಹೋಗು ಎನ್ನುತ್ತಾ ಕೂಗುವ, ಭೀಷ್ಮನ ಬಳಿಯ ಮಹಾರಥರ ಕಳಕಳ ಸದ್ದಿನ, ಕಹಳೆಯ, ಹೊಗಳುಭಟರ- ಪಾಠಕರ ಗುಂಪಿನ ಕೂಗಿನ, ಬಹಳ ಬಿರುದಿನ ಘೋಷಣೆಯೊಡನೆ ಬಂದನು ಆ ಭೀಷ್ಮ.
ಪೂತುರೇ ಕಲಿ ಪಾರ್ಥ ಭುವನ
ಖ್ಯಾತನಾದೈ ಕಂದ ದ್ರೋಣನ
ಸೂತಸುತ ಕೃಪ ಗುರುತನೂಜರ ಗೆಲಿದೆ ಬಳಿಕೇನು |
ಬೀತುದೇ ನಿಮ್ಮವಧಿ ಕುರುಕುಲ
ಜಾತವನು ಹರೆಗಡಿದು ನಿಮ್ಮಯ
ಭೂತಳವನಾಳುವಿರೆ ನೀವೆಂದೆಚ್ಚನಾ ಭೀಷ್ಮ || ೫೨ ||
ಪದವಿಭಾಗ-ಅರ್ಥ: ಪೂತುರೇ ಕಲಿ (ವೀರ) ಪಾರ್ಥ ಭುವನ ಖ್ಯಾತನಾದೈ ಕಂದ (ಮಗನೇ- ಅರ್ಜುನ ಮೊಮ್ಮಗನಾಗಬೇಕು), ದ್ರೋಣನ, ಸೂತಸುತ, ಕೃಪ, ಗುರುತನೂಜರ ಗೆಲಿದೆ ಬಳಿಕ+ ಏನು ಬೀತುದೇ (ಅವಧಿ ತೀರಿತೇ, ಅವಧಿ ಮಗಿಯಿತೇ) ನಿಮ್ಮ+ ಅವಧಿ ಕುರುಕುಲಜಾತವನು ಹರೆಗಡಿದು(ಹೆರೆ ಕಡಿದು) ನಿಮ್ಮಯ ಭೂತಳವನು+ ಆಳುವಿರೆ ನೀವು+ ಎಂದು+ ಎಚ್ಚನ+ ಆ ಭೀಷ್ಮ
ಅರ್ಥ: ಭಲೇ! ಕಲಿ ಪಾರ್ಥ! ಈ ಭೂಮಂಡಲದಲ್ಲಿ ಪ್ರಸಿದ್ಧನಾದೆಯಯ್ಯಾ! ಕಂದ!, ದ್ರೋಣನನ್ನೂ, ಸೂತಸುತ ಕರ್ಣನನ್ನೂ, ಕೃಪನನ್ನೂ, ಗುರುಸುತ ಅಶ್ವತ್ಥಾಮನನ್ನೂ ಗೆದ್ದೆ! ಬಳಿಕ ಇನ್ನೇನು? ನಿಮ್ಮ ಹದಿಮೂರು ವರ್ಷದ ಅವಧಿ ಮುಗಿಯಿತೇ? ಕುರುಕುಲಜಾತ ವಂಶವನ್ನು ಪ್ರತ್ಯೇಕ ವಿಭಾಗ ಮಾಡಿಕೊಂಡು ನಿಮ್ಮ ಪಾಲಿನ ಭೂಮಿಯನ್ನು (ರಾಜ್ಯವನ್ನು) ನೀವು ಆಳುವಿರೇ? ಎಂದು ಹೇಳಿ ಆ ಭೀಷ್ಮನು ಅರ್ಜುನನ ಮೇಲೆ ಬಾಣಪ್ರಯೊಗ ಮಾಡಿದನು.
ತೊಲಗು ರಾಯ ಪಿತಾಮಹನ ಖತಿ
ಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರು ಸಾರೆನುತ
ಉಲಿವ ಬಳಿಯ ಮಹಾರಥರ ಕಳ
ಕಳದ ಕಹಳೆಯ ಪಾಠಕರ ಗಾ
ವಳಿಯ ಬಿರುದಿನ ಬಹಳತೆಯಲೈತಂದನಾ ಭೀಷ್ಮ ೫೧
ಪದವಿಭಾಗ-ಅರ್ಥ: ತೊಲಗು ರಾಯ ಪಿತಾಮಹನ ಖತಿಬಲುಹು ತೆತ್ತಿಗರು (ಬಂಧುಗಳು)+ ಅಹರೆ, ರುದ್ರನ ನಳಿನನಾಭನ ಕರೆಸು, ನೀ ಶಿಶು ಸಾರು ಸಾರೆನುತ ಉಲಿವ (ಕೂಗುವ) ಬಳಿಯ ಮಹಾರಥರ ಕಳಕಳದ ಕಹಳೆಯ ಪಾಠಕರ ಗಾವಳಿಯ ಬಿರುದಿನ ಬಹಳತೆಯಲಿ+ ಐತಂದನು(ಬಂದನು)+ ಆ ಭೀಷ್ಮ.
ಅರ್ಥ: ಭೀಷ್ಮನು ಯುದ್ಧಕ್ಕೆ ಬರಲು, ಕೌರವನ ಸೇನೆಯ ಮಹಾರಥರು ಅರ್ಜುನನಿಗೆ ಕೂಗಿ ಹೇಳಿದರು,'ಪಾರ್ಥನೇ ಹೊರಟು ಹೋಗು, ಕೌರವ ರಾಯನ ಸೈನ್ಯದ ನಾಯಕ ಪಿತಾಮಹ ಭೀಷ್ಮನ ಕ್ರೋಧ ಮತ್ತು ಶಕ್ತಿ ದೊಡ್ಡದು. ನಿನಗೆ ಸಹಾಯಕ್ಕೆ ಬಂಧುಗಳು ಇದ್ದಾರೆಯೇ? ರುದ್ರನನ್ನೂ, ನಳಿನನಾಭ ಕೃಷ್ಣನನ್ನೂ ಕರೆಸಿಕೋ!, ಭೀಷ್ಮನ ಎದುರು ನೀನು ಶಿಶು. ಸುಮ್ಮನೆ ದೂರ ಸಾರು- ಸಾರು ಹೋಗು ಎನ್ನುತ್ತಾ ಕೂಗುವ, ಭೀಷ್ಮನ ಬಳಿಯ ಮಹಾರಥರ ಕಳಕಳ ಸದ್ದಿನ, ಕಹಳೆಯ, ಹೊಗಳುಭಟರ- ಪಾಠಕರ ಗುಂಪಿನ ಕೂಗಿನ, ಬಹಳ ಬಿರುದಿನ ಘೋಷಣೆಯೊಡನೆ ಬಂದನು ಆ ಭೀಷ್ಮ.
ಪೂತುರೇ ಕಲಿ ಪಾರ್ಥ ಭುವನ
ಖ್ಯಾತನಾದೈ ಕಂದ ದ್ರೋಣನ
ಸೂತಸುತ ಕೃಪ ಗುರುತನೂಜರ ಗೆಲಿದೆ ಬಳಿಕೇನು |
ಬೀತುದೇ ನಿಮ್ಮವಧಿ ಕುರುಕುಲ
ಜಾತವನು ಹರೆಗಡಿದು ನಿಮ್ಮಯ
ಭೂತಳವನಾಳುವಿರೆ ನೀವೆಂದೆಚ್ಚನಾ ಭೀಷ್ಮ || ೫೨ ||
ಪದವಿಭಾಗ-ಅರ್ಥ: ಪೂತುರೇ ಕಲಿ (ವೀರ) ಪಾರ್ಥ ಭುವನ ಖ್ಯಾತನಾದೈ ಕಂದ (ಮಗನೇ- ಅರ್ಜುನ ಮೊಮ್ಮಗನಾಗಬೇಕು), ದ್ರೋಣನ, ಸೂತಸುತ, ಕೃಪ, ಗುರುತನೂಜರ ಗೆಲಿದೆ ಬಳಿಕ+ ಏನು ಬೀತುದೇ (ಅವಧಿ ತೀರಿತೇ, ಅವಧಿ ಮಗಿಯಿತೇ) ನಿಮ್ಮ+ ಅವಧಿ ಕುರುಕುಲಜಾತವನು ಹರೆಗಡಿದು(ಹೆರೆ ಕಡಿದು) ನಿಮ್ಮಯ ಭೂತಳವನು+ ಆಳುವಿರೆ ನೀವು+ ಎಂದು+ ಎಚ್ಚನ+ ಆ ಭೀಷ್ಮ
ಅರ್ಥ: ಭಲೇ! ಕಲಿ ಪಾರ್ಥ! ಈ ಭೂಮಂಡಲದಲ್ಲಿ ಪ್ರಸಿದ್ಧನಾದೆಯಯ್ಯಾ! ಕಂದ!, ದ್ರೋಣನನ್ನೂ, ಸೂತಸುತ ಕರ್ಣನನ್ನೂ, ಕೃಪನನ್ನೂ, ಗುರುಸುತ ಅಶ್ವತ್ಥಾಮನನ್ನೂ ಗೆದ್ದೆ! ಬಳಿಕ ಇನ್ನೇನು? ನಿಮ್ಮ ಹದಿಮೂರು ವರ್ಷದ ಅವಧಿ ಮುಗಿಯಿತೇ? ಕುರುಕುಲಜಾತ ವಂಶವನ್ನು ಪ್ರತ್ಯೇಕ ವಿಭಾಗ ಮಾಡಿಕೊಂಡು ನಿಮ್ಮ ಪಾಲಿನ ಭೂಮಿಯನ್ನು (ರಾಜ್ಯವನ್ನು) ನೀವು ಆಳುವಿರೇ? ಎಂದು ಹೇಳಿ ಆ ಭೀಷ್ಮನು ಅರ್ಜುನನ ಮೇಲೆ ಬಾಣಪ್ರಯೊಗ ಮಾಡಿದನು.
ನಿಮ್ಮ ಕಾರುಣ್ಯಾವಲೋಕನ
ವೆಮ್ಮ ಸಿರಿ ಬೇರೆಮಗೆ ಕಾಳಗ
ದಮ್ಮುಗೆಯ ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ |
ಬಿಮ್ಮು ಬೀಸರವಹುದೆ ನಿಮ್ಮಯ
ಸೊಮ್ಮಿನವರಿಗೆ ಬೇರೆ ರಾಜ್ಯದ
ಹೆಮ್ಮೆ ತಾ ನಮಗೇಕೆನುತ ಕೈಯೊಡನೆ ನರನೆಚ್ಚ || ೫೩ ||
ಪದವಿಭಾಗ-ಅರ್ಥ: ನಿಮ್ಮ ಕಾರುಣ್ಯಾವಲೋಕನವು (ಕೃಪಾಕಟಾಕ್ಷವು)+ ಎಮ್ಮ ಸಿರಿ (ಸಂಪತ್ತು- ರಾಜ್ಯ) ಬೇರೆ+ ಎಮಗೆ ಕಾಳಗದ+ ಅಮ್ಮುಗೆಯ (ಸಾಧ್ಯತೆ ಸಾದನೆ) ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ? ಬಿಮ್ಮು(ಅಭಿಮಾನ) ಬೀಸರವು+ ಅಹುದೆ ನಿಮ್ಮಯ ಸೊಮ್ಮಿನವರಿಗೆ (ಬಂದುಗಳಿಗೆ- ಮೊಮ್ಮಕ್ಕಳಿಗೆ) ಬೇರೆ ರಾಜ್ಯದ ಹೆಮ್ಮೆ ತಾ ನಮಗೇಕೆ+ ಎನುತ ಕೈಯೊಡನೆ (ಕೈಯಲ್ಲಿದ್ದ ಬಿಲ್ಲಿನಿಂದ) ನರನು+ ಎಚ್ಚ.
  • ಹಮ್ಮು - ಬಿಮ್ಮು= ಹೆಮ್ಮೆ, ಅಭಿಮಾನ, ಅಹಂಕಾರ - ಗಾಂಭಿರ್ಯ ದೊಡ್ಡತನ (ದುರಹಂಕಾರ - ದುರಭಿಮಾನ/ ದುರಾಗ್ರಹ?(Pride and prejudice?)
ಅರ್ಥ: ನಿಮ್ಮ ಕರುಣೆಯ ನೋಟವೆ ನಮ್ಮ ಸಂಪತ್ತು, ರಾಜ್ಯ. ಅದಿಲ್ಲದೆ ಬೇರೆ ನಮಗೆ ಕಾಳಗದ ಸಾಧನೆಯಿಂದ ಜಯದ ವಿವರಣ ಯುದ್ಧವಿದ್ಯೆ ಫಲಿಸುವುದೆ? ನಿಮ್ಮ ಯುದ್ಧದ ಪರಿಣತಿಯ ಅಭಿಮಾನವು ನಿಮ್ಮ ಬಂದುಗಳಾದ ಮೊಮ್ಮಕ್ಕಳಿಗೆ ಅಪಾಯವಾಗುವುದೆ? ನಮಗೆ ಬೇರೆ ರಾಜ್ಯದ ಹೆಮ್ಮೆ ತಾನೇ ನಮಗೇಕೆ ಬೇಕು, ನಿಮ್ಮ ಪ್ರೀತಿ ಸಾಕು, ಎನ್ನುತ್ತಾ ಕೈಯಲ್ಲಿದ್ದ ಗಾಂಡೀವದಿಂದ ಅರ್ಜುನುನು ಬಾಣವನ್ನು ಹೊಡೆದ.
ಎಸಲು ಪಾರ್ಥನ ಬಾಣವನು ಖಂ
ಡಿಸುತ ಸೂತನನೆರಡರಲಿ ಕೀ
ಲಿಸಿದನೈದಂಬಿನಲಿ ಹನುಮನ ಹಣೆಯನೊಡೆಯೆಚ್ಚ |
ನಿಶಿತ ಶರವೆಂಟರಲಿ ಕವಚವ
ಕುಸುರಿದರಿದನು ನರನ ವಕ್ಷದ
ಬೆಸುಗೆ ಬಿಡೆ ಮೂರಂಬಿನಲಿ ಮುರಿಯೆಚ್ಚು ಬೊಬ್ಬಿರಿದ || ೫೪ ||
ಪದವಿಭಾಗ-ಅರ್ಥ: ಎಸಲು ಪಾರ್ಥನ ಬಾಣವನು ಖಂಡಿಸುತ ಸೂತನನು+ ಎರಡರಲಿ ಕೀಲಿಸಿದನು+ ಐದು+ ಅಂಬಿನಲಿ ಹನುಮನ ಹಣೆಯನು+ ಒಡೆಯೆ+ ಎಚ್ಚ, ನಿಶಿತ ಶರವು+ ಎಂಟರಲಿ ಕವಚವ ಕುಸುರಿದ+ ಅರಿದನು ನರನ ವಕ್ಷದ ಬೆಸುಗೆ ಬಿಡೆ, ಮೂರು+ ಅಂಬಿನಲಿ ಮುರಿಯೆಚ್ಚು ಬೊಬ್ಬಿರಿದ.
ಅರ್ಥ: ಅರ್ಜುನನು ಹೊಡೆಯಲು, ಭೀಷ್ಮನು, ಪಾರ್ಥನ ಬಾಣವನ್ನು ಖಂಡಿಸಿ- ಕಡಿದು, ಸೂತನ ಸ್ಥಾನದಲ್ಲಿದ್ದ ಉತ್ತರನನ್ನು ಎರಡು ಬಾಣಗಳಿಂದ ಚುಚ್ಉವಂತೆ ಹೊಡೆದನು. ಐದು ಅಂಬಿನಿಂದ ಧ್ವಜದಲ್ಲಿದ್ದ ವಜ್ರದೇಹಿ ಹನುಮನ ಹಣೆಯನ್ನು ಒಡೆಯುವಂತೆ ಹೊಡೆದನು. ಚೂಪಾದ ಎಂಟು ಬಾಣದಿಂದ ಅರ್ಜುನನ ಕವಚವನ್ನು ಕುಸುರಿ ಬೆಸುಗೆ- ಜೋಡಣೆ ಸಡಿಲುವಂತೆ ಕತ್ತರಿಸಿದನು, ಮೂರು ಅಂಬಿನಿಂದ, ಅರ್ಜುನನ ಬಾಣವು ಮುರಿಯುವಂತೆ ಹೊಡೆದು ಬೊಬ್ಬಿರಿದನು.
ಅರಿಯ ಶರಹತಿಗುತ್ತರನ ತನು
ಬಿರಿಯೆ ಬಸವಳಿದನು ಕಪೀಶ್ವರ
ನೊರಲಿದನು ರಾವಣನ ಗಾಯವ ನೆನೆದನಡಿಗಡಿಗೆ ||
ಮರೆದು ಮಲಗಿದ ಸೂತನನು ನಾ
ಲ್ಕೆರಡು ಗಳಿಗೆಯು ಬೀಸಿ ಮೂಗಿನೊ

ಳೆರಲ ಕಂಡನು ಪಾರ್ಥನೆತ್ತಿದನಳುಕಿದುತ್ತರನ || ೫೫ ||

ಪದವಿಭಾಗ-ಅರ್ಥ: ಅರಿಯ ಶರಹತಿಗೆ+ ಉತ್ತರನ ತನು ಬಿರಿಯೆ ಬಸವಳಿದನು ಕಪೀಶ್ವರನು+ ಒರಲಿದನು ರಾವಣನ ಗಾಯವ ನೆನೆದನು+ ಅಡಿಗಡಿಗೆ ಮರೆದು ಮಲಗಿದ ಸೂತನನು ನಾಲ್ಕೆರಡು ಗಳಿಗೆಯು ಬೀಸಿ ಮೂಗಿನೊಳು+ ಎರಲ ಕಂಡನು ಪಾರ್ಥನು+ ಎತ್ತಿದನು+ ಅಳುಕಿದ+ ಉತ್ತರನ.
  • ಅರಿಯ ಶರಹತಿಗೆ+ ಉತ್ತರನ ತನು ಬಿರಿಯೆ= ಶತ್ರುವಿನ ಬಾಣದ ಹೊಡೆತಕ್ಕೆ ಉತ್ತರನ ದೇಹದಲ್ಲಿ ಗಾಯವಾಯಿತು. ಅವನು ಬಸವಳಿದನು, ಸಂಕಟಪಟ್ಟನು; ಕಪೀಶ್ವರನು+ ಒರಲಿದನು ರಾವಣನ ಗಾಯವ ನೆನೆದನು+ ಅಡಿಗಡಿಗೆ= ಹನುಮನು ಭೀಷ್ಮನ ಹೊಡೆತಕಕ್ಕೆ ಅರಚಿದನು, ಹಿಂದೆ ಪಡೆದ ರಾವಣನ ಹೊಡೆತವನ್ನು ನೆನಪುಮಾಡಿಕೊಂಡನು; ಮರೆದು ಮಲಗಿದ ಸೂತನನು ನಾಲ್ಕೆರಡು ಗಳಿಗೆಯು ಬೀಸಿ ಮೂಗಿನೊಳು+ ಎರಲ ಕಂಡನು ಪಾರ್ಥನು+= ಎಚ್ಚರತಪ್ಪಿ ಮಲಗಿದ್ದ ಉತ್ತರನನ್ನು ಏಳೆಂಟು ಬಾರಿ ಗಾಳಿಹಾಕಿದಾಗ ಮೂಗಿನಲ್ಲಿ ಉಸಿರಾಡುವುದನ್ನು ಕಂಡನು ಪಾರ್ಥನು. ಎತ್ತಿದನು+ ಅಳುಕಿದ+ ಉತ್ತರನ= ಅವನು ನೊಂದು ಹೆದರಿದ ಉತ್ತರನನ್ನು ಎತ್ತಿ ಕೂರಿಸಿದನು.
ಅರ್ಥ: ಶತ್ರುವಿನ ಬಾಣದ ಹೊಡೆತಕ್ಕೆ ಉತ್ತರನ ಅವನು ಬಸವಳಿದನು, ಸಂಕಟಪಟ್ಟನು; ಹನುಮನು ಭೀಷ್ಮನ ಹೊಡೆತಕಕ್ಕೆ ಅರಚಿದನು, ಹಿಂದೆ ಪಡೆದ ರಾವಣನ ಹೊಡೆತವನ್ನು ನೆನಪುಮಾಡಿಕೊಂಡನು; ಎಚ್ಚರತಪ್ಪಿ ಮಲಗಿದ್ದ ಉತ್ತರನನ್ನು ಏಳೆಂಟು ಬಾರಿ ಗಾಳಿಹಾಕಿದಾಗ ಮೂಗಿನಲ್ಲಿ ಉಸಿರಾಡುವುದನ್ನು ಕಂಡನು ಪಾರ್ಥನು. ಅವನು ನೊಂದು ಹೆದರಿದ ಉತ್ತರನನ್ನು ಎತ್ತಿ ಕೂರಿಸಿದನು.
ಕವಳವಿದ ಕೋ ಬಾಣ ಶಸ್ತ್ರಾ
ನಿವಹ ಧಾರಾಸ್ತಂಭವಿನ್ನಾ
ಹವದೊಳಂಜದಿರೆನುತೆ ಕೊಡಲುತ್ತರನು ದುಗುಡದಲಿ
ಬವರದಾದಿಯನರಿಯದನ ಕೊಂ
ದವನು ನೀನೋ ಭೀಷ್ಮನೋಯೆವ
ಲವನ ನುಡಿಗರ್ಜುನನು ನಗುತಪರಾಧವುಂಟೆಂದ ೫೬
ಪದವಿಭಾಗ-ಅರ್ಥ: ಕವಳವು(ತಿನಿಸು- ಶಕ್ತಿಗೆ ಮತ್ತು ನೋವು ಶಮನಕ್ಕೆ)+ ಇದ ಕೋ, ಬಾಣ ಶಸ್ತ್ರಾನಿವಹ ಧಾರಾಸ್ತಂಭವು (ಶಸ್ತ್ರಗಳಸಮೂಹದ ಪೆಟ್ಟು ಯೋಧನ ಆಧಾರಾಸ್ತಂಭವು,)+ ಇನ್ನು+ ಆಹವದೊಳು(ಯುದ್ಧದಲ್ಲಿ)+ ಅಂಜದಿರು+ ಎನುತೆ ಕೊಡಲು+ ಉತ್ತರನು ದುಗುಡದಲಿ ಬವರದ (ಯುದ್ಧದ)+ ಆದಿಯನು(ಆದಿಯನ್ನು, ರೀತಿನಿತಿಯನ್ನು ತಲೆಬುಡವನ್ನು )+ ಅರಿಯದನ ಕೊಂದವನು ನೀನೋ ಭೀಷ್ಮನೋ ಯೆವಲು+ ಅವನ ನುಡಿಗೆ+ ಅರ್ಜುನನು ನಗುತ ಅಪರಾಧವು+ ಉಂಟೆಂದ.
ಅರ್ಥ:ಈ ತಿನಿಸನ್ನು ತೆಗದುಕೋ ತಿನ್ನು (ನೋವು ಸಂಕಟ ಕಡಿಮೆಯಾಗುವುದು). ಯುದ್ಧದಲ್ಲಿ ಬಾಣದ ಶಸ್ತ್ರಗಳಸಮೂಹದ ಪೆಟ್ಟು ಯೋಧನ ಧಾರಾಸ್ತಂಭವು, ಅದು ಯೋಧನನ್ನು ಗಟ್ಟಿಮಾಡುವ ಕಟ್ಟಡದ ಕಂಬವಿದ್ದಂತೆ. ಇನ್ನು ಯುದ್ಧದಲ್ಲಿ ಅಂಜಬೇಡ, ಎನ್ನುತ್ತಾ ಮದ್ದಿನ ತುತ್ತನ್ನು ಕೊಡಲು, ಉತ್ತರನು ತಾನು ಸತ್ತು ಬದುಕಿದೆ ಎಂದು ಭಾವಿಸಿ ದುಗುಡದಲ್ಲಿ, ಬಹಳ ದುಃಖದಿಂದ ಯುದ್ಧದ ತಲೆಬುಡವನ್ನು ಅರಿಯದಿದ್ದ ನನ್ನನ್ನು ಇಲ್ಲಿ ಸಾರಥಿಯಾಗಿ ಕೂರಿಸಿ ಕೊಂದವನು ನೀನೋ ಭೀಷ್ಮನೋ ಯಾವನು? ಎನ್ನಲು ಅವನ ಮಾತಿಗೆ ಅರ್ಜುನನು ನಗುತ್ತಾ, ನಿಜ ನನ್ನದು ಅಪರಾಧವು ಉಂಟು, (ಅನಿವಾರ್ಯವಾಗಿ ನಿನ್ನ ಸಹಾಯ ಪಡೆದೆ) ಎಂದ.
ಹದುಳಿಸಿನ್ನಂಜದಿರು ಬಾಣೌ
ಘದ ವಿದಾರಣವಿದು ವಿಚಾರಿಸ
ಲೆದೆ ಬಿರಿದು ತಾ ನೊಂದೆನಿದೆ ನೋಡೆನ್ನ ಗಾಯವನು |
ಒದೆದು ಕೊಳುತೈದಾನೆ ಸಿಂಧದ
ತುದಿಯ ಹನುಮನು ವಜ್ರಮಯ ದೇ
ಹದಲಿ ನಟ್ಟವು ಕೋಲು ಮುನಿದೊಡೆ ರುದ್ರನೀ ಭೀಷ್ಮ || ೫೭ ||
ಪದವಿಭಾಗ-ಅರ್ಥ: ಹದುಳಿಸು+ ಇನ್ನು+ ಅಂಜದಿರು, ಬಾಣ+ ಓಘದ (ರಭಸ) ವಿದಾರಣವು+ ಇದು (ಸೀಳುವಿಕೆ), ವಿಚಾರಿಸಲು+ ಎದೆ ಬಿರಿದು ತಾ ನೊಂದೆನು+ ಇದೆ ನೋಡು+ ಎನ್ನ ಗಾಯವನು, ಒದೆದುಕೊಳುತ (ಒದ್ದಾಡು)+ಐ+ ಇದಾನೆ ಸಿಂಧದ (ಬಾವುಟದ) ತುದಿಯ ಹನುಮನು ವಜ್ರಮಯ ದೇಹದಲಿ ನಟ್ಟವು ಕೋಲು, ಮುನಿದೊಡೆ ರುದ್ರನು+ ಈ ಭೀಷ್ಮ.
  • ಹದುಳಿಸು= 1. ಸಮಾಧಾನಗೊಳ್ಳು. 2. ಚೇತರಿಸಿಕೊಳ್ಳು. 3. ತೃಪ್ತಿಪಡಿಸು. 4. ನಿಯಂತ್ರಿಸು. (ಐದಾನೆ- ಇದ್ದಾನೆ, ಗ್ರಾಮ್ಯ ಪದ)
ಅರ್ಥ:ಅರ್ಜುನನು, 'ಉತ್ತರಾ ಚೇತರಿಸಿಕೋ, ಇನ್ನು ಅಂಜಬೇಡ, ನಾನು ನಿನ್ನನ್ನು ರಕ್ಷಿಸುವೆನು' ಎಂದ. 'ಈಗ ಆದುದು ಭೀಷ್ಮನ ಬಾಣದ ಅತಿರಭಸ, ವೇಗ; ಅದರಿಂದ ಕವಚದಲ್ಲಿ ಈ ಸೀಳುವಿಕೆ ಆಗಿದೆ. ಹಾಗೆ ನೋಡಿದರೆ ನಿನ್ನಂತೆ ಎದೆಯ ಕವಚ ಬಿರಿದು ನಾನೂ ನೊಂದೆನು. ಇದೆ ನೋಡು ನನ್ನ ಗಾಯವನ್ನು! ನೋವಿನಿಂದ ಒದೆದುಕೊಳ್ಳುತ್ತಾ ಇದ್ದಾನೆ ಬಾವುಟದ ತುದಿಯಲ್ಲಿ ಕುಳಿತ ಹನುಮನು. ಅವನ ವಜ್ರಮಯ ದೇಹದಲ್ಲಿ ಬಾಣಗಳು ನೆಟ್ಟವು! ಈ ಭೀಷ್ಮನು ಮುನಿದರೆ ರುದ್ರನಂತೆ ಭೀಕರನು ಎಂದು ಹೇಳಿದ,
ಎಂದು ಮೂರಂಬಿನಲಿ ಗಂಗಾ
ನಂದನನ ಮುಸುಕಿದನು ಸಾರಥಿ
ನೊಂದನಾ ಧ್ವಜ ದಂಡವುಡಿದುದು ರಥ ವಿಸಂಚಿಸಿತು |
ಮುಂದುಗೆಟ್ಟನು ಭೀಷ್ಮನಹುದೋ
ತಂದೆಯೆನುತಾರಂಬಿನಲಿ ಖತಿ
ಯಿಂದ ಪಾರ್ಥನನೆಸಲು ಥಟ್ಟುಗಿದಂಬು ಹಾರಿದವು || ೫೮ ||
ಪದವಿಭಾಗ-ಅರ್ಥ: ಎಂದು ಮೂರು+ ಅಂಬಿನಲಿ ಗಂಗಾನಂದನನ ಮುಸುಕಿದನು ಸಾರಥಿ ನೊಂದನು+ ಆ ಧ್ವಜ ದಂಡವುಡಿದುದು ರಥ ವಿಸಂಚಿಸಿತು ಮುಂದುಗೆಟ್ಟನು ಭೀಷ್ಮನು+ ಅಹುದೋ ತಂದೆಯೆನುತ+ ಆರು+ ಆಂಬಿನಲಿ ಖತಿಯಿಂದ ಪಾರ್ಥನನು+ ಎಸಲು ಥಟ್ಟು+ ಉಗಿದು ಅಂಬು ಹಾರಿದವು.
  • ಥಟ್ಟುಗಿ= ಗುಂಪಾಗಿ ಬೀಳುವಂತೆ ಮಾಡು; ವಿಸಂಚಿಸು= 1. ಚೂರುಚೂರಾಗು. 2.ತಪ್ಪಿಹೋಗು. 3.ಸಾಮರ್ಥ್ಯವನ್ನು ಕಳೆದುಕೊಳ್ಳು. ಥಟ್ಟು= ಗುಂಪು; ಉಗಿದು= ಚಿಮ್ಮಿ.
ಅರ್ಥ:ಅರ್ಜುನನು ಉತ್ತರನಿಗೆ ಹೆದರಬೇಡ ಎಂದು ಹೇಳಿ, ಮೂರು ಅಂಬುಗಳಿಂದ ಗಂಗಾನಂದನ ಭೀಷ್ಮನನ್ನು ಆಕ್ರಮಿಸಿದನು. ಅವನ ಸಾರಥಿ ಪೆಟ್ಟಾಗಿ ನೊಂದನು; ಅವನ ರಥದ ಆ ಧ್ವಜದ ದಂಡಮುರಿಯಿತು. ಭೀಷ್ಮನ ರಥ ಪುಡಿಯಾಯಿತು. ಆಗ ಭೀಷ್ಮನು ಮುಂದೆ ಏನುಮಾಡಲೂ ತೋಚದೆ ಕೆಟ್ಟನು. ಆಗ ಭೀಷ್ಮನು ಪ್ರೀತಿಯಿಂದ ಅಹುದೋ ತಂದೆ/ಮಗನೇ! ಎನ್ನುತ್ತಾ ಸರಿಯಾಯಿತು ಎಂದು, ಆರು ಆಂಬಗಳಿಂದ ಕೋಪಗೊಂಡು ಪಾರ್ಥನನ್ನು ಹೊಡೆಯಲು, ಒಟ್ಟೊಟ್ಟಿಗೆ ಬಿಲ್ಲಿನಿಂದ ಚಿಮ್ಮಿ ಅಂಬುಗಳು ಹಾರಿದವು.
ಒರತುದರ್ಜುನನೊಡಲಿನಲಿ ದುರು
ದುರಿಸಿ ಸುರಿದುದು ಅರುಣಮಯ ಜಲ
ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾ ಶರವ |
ತರಿದನೆಡೆಯಲಿ ಭೀಷ್ಮನುರೆ ಬೊ
ಬ್ಬಿರಿದು ಬಳಿಕಾಗ್ನೇಯ ಬಾಣದ
ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ || ೫೯ ||
ಪದವಿಭಾಗ-ಅರ್ಥ: ಒರತುದು+ ಅರ್ಜುನನ+ ಒಡಲಿನಲಿ ದುರುದುರಿಸಿ ಸುರಿದುದು ಅರುಣಮಯ ಜಲ (ಕೆಂಪು ನೀರು)+ ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾ ಶರವ ತರಿದನು+ ಎಡೆಯಲಿ ಭೀಷ್ಮನು+ ಉರೆ ಬೊಬ್ಬಿರಿದು ಬಳಿಕ+ ಆಗ್ನೇಯ ಬಾಣದಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ
ಅರ್ಥ:ಭೀಷ್ಮನು ಹೊಡೆದ ಬಾಣ ಅರ್ಜುನನ ದೇಹಕ್ಕೆ ತಾಗಿ ಅವನ ಒಡಲಿನಿಂದ ಕೆಂಪು ರಕ್ತ ಒಸರಿತು. ಅದು ದುರುದುರಿಸಿ ಸುರಿಯಿತು. ಆಗ ಅರ್ಜುನನು ಸುಧಾರಿಸಿಕೊಂಡು ಸಿದ್ಧನಾಗಿ ಗಟ್ಟಿ ನಿಂತು ಮಹಾ ಅಸ್ತ್ರವನ್ನು ಬಿಟ್ಟನು. ಅದನ್ನು ಭೀಷ್ಮನು ಮಧ್ಯದಲ್ಲಿ ತರಿದು ಹಾಕಿದನು. ಬಳಿಕ ಅರ್ಜುನನು ದೊಡ್ಡದಾಗಿ ಆರ್ಭಟಿಸಿ ಆಗ್ನೇಯ ಬಾಣದಗರಿಯನ್ನು ಕುರುಸೇನೆ ಕಳವಳಿಸುವಂತೆ ಮಂತ್ರಿಸಿ ಹೂಡಿ ಬಿಟ್ಟನು.
ವರುಣ ಬಾಣದಲಸ್ತ್ರವನು ಸಂ
ಹರಿಸಿದನು ಕಲಿ ಭೀಷ್ಮನೊಬ್ಬೊ
ಬ್ಬರು ಪರಾಜಯ ರೋಷಪಾವಕ ವಿಸ್ಫುಲಿಂಗಿತರು |
ಹರಿಸಿದರು ಕೌಬೇರ ಮಾರುತ
ನಿರುತಿ ಯಮ ಪುರುಹೂತ ಶಂಕರ
ಪರಿ ಪರಿಯ ಪ್ರತ್ಯಸ್ತ್ರವನು ಗಾಂಗೇಯ ಫಲುಗುಣರು || ೬೦ ||
ಪದವಿಭಾಗ-ಅರ್ಥ: ವರುಣ ಬಾಣದಲಿ+ ಅಸ್ತ್ರವನು ಸಂಹರಿಸಿದನು ಕಲಿ ಭೀಷ್ಮನು,+ ಒಬ್ಬೊಬ್ಬರು ಪರಾಜಯ ರೋಷಪಾವಕ (ಬೆಂಕಿಯಂತೆ ಸಿಟ್ಟಿನ) ವಿಸ್ಫುಲಿಂಗಿತರು (ಕೆಂಡದಂತೆ ಕಣ್ಣುಅರಳಿಸಿ) ಹರಿಸಿದರು (ಪ್ರಯೋಗಿಸಿದರು) ಕೌಬೇರ ಮಾರುತ ನಿರುತಿ ಯಮ ಪುರುಹೂತ ಶಂಕರಪರಿ ಪರಿಯ ಪ್ರತ್ಯಸ್ತ್ರವನು ಗಾಂಗೇಯ ಫಲುಗುಣರು.
ಅರ್ಥ:ವೀರ ಭೀಷ್ಮನು ವರುಣ ಬಾಣದಿಂದ ಅಗ್ನಿಯ ಅಸ್ತ್ರವನ್ನು ಸಂಹರಿಸಿದನು. ಅವರಲ್ಲಿ ಒಬ್ಬೊಬ್ಬರೂ ಪರಾಜಯದ ವಿರುದ್ಧ ಬೆಂಕಿಯಂತೆ ಸಿಟ್ಟಿನಭರದಲ್ಲಿ ಕೆಂಡದಂತೆ ಕಣ್ಣುಅರಳಿಸಿ, ಮಹಾಸ್ತ್ರಗಳನ್ನು ಪ್ರಯೋಗಿಸಿದರು. ಮಹಾಸ್ತ್ರಗಳಾದ ಕೌಬೇರ, ಮಾರುತ(ವಾಯು), ನಿರುತಿ, ಯಮ, ಪುರುಹೂತ, ಶಂಕರ, ಈ ಬಗೆಯ ಪರಿಪರಿಯ ಅಸ್ತ್ರ- ಪ್ರತ್ಯಸ್ತ್ರಗಳನ್ನು ಭೀಷ್ಮ ಮತ್ತು ಫಲ್ಗುಣರು ಪ್ರಯೋಗಿಸಿದರು.
ಮಲೆತು ನಿಲುವೊಡೆ ಭೀಷ್ಮನಲ್ಲದೆ
ಕೆಲರು ಪಾರ್ಥನ ದಿವ್ಯ ಬಾಣಾ
ವಳಿಯ ಗಾರಾಗಾರಿಗಿದಿರೇ ಭೀಷ್ಮನುರವಣೆಗೆ |
ಕಲಿ ಧನಂಜಯನಲ್ಲದಿದಿರಲಿ
ನಿಲುವರುಂಟೇ ಭುಜಗ ಸುರ ನರ
ರೊಳಗೆ ಕೆಲರೆಂದಿಂದ್ರ ನುಡಿದನು ಬೆರಳನೊಲೆದೊಲೆದು || ೬೧ ||
ಪದವಿಭಾಗ-ಅರ್ಥ:ಮಲೆತು ನಿಲುವೊಡೆ ಭೀಷ್ಮನಲ್ಲದೆ ಕೆಲರು ಪಾರ್ಥನ ದಿವ್ಯ ಬಾಣಾವಳಿಯ ಗಾರಾಗಾರಿಗಿದಿರೇ ಭೀಷ್ಮನ+ ಉರವಣೆಗೆ ಕಲಿ ಧನಂಜಯನಲ್ಲದೆ+ ಇದಿರಲಿ ನಿಲುವರುಂಟೇ ಭುಜಗ ಸುರ ನರರೊಳಗೆ ಕೆಲರೆಂದು+ ಇಂದ್ರ ನುಡಿದನು ಬೆರಳನು+ ಒಲೆದೊಲೆದು
ಅರ್ಥ: ಅರ್ಜುನನಿಗೆ ವಿರೋಧದಿಂದ ಎದುರಿಸಿ ನಿಲ್ಲುವುದಾದರೆ, ಭೀಷ್ಮನಲ್ಲದೆ ಬೇರೆಯವರು ಪಾರ್ಥನ ದಿವ್ಯ ಬಾಣಗಳ ಸಮೂಹದ ಗಾರಾಗಾರಿಗೆ- ಆರ್ಭಟಕ್ಕೆ ಎದುರು ನಿಲ್ಲವುದುಂಟೇ? ಭೀಷ್ಮನ ಪರಾಕ್ರಮಕ್ಕೆ ಶೂರನಾದ ಧನಂಜಯನಲ್ಲದೆ ಎದುರಿನಲ್ಲಿ ಬೇರೆಯವರು ನಿಲ್ಲುವವರು ಉಂಟೇ? ಇಲ್ಲವೇ ಇಲ್ಲ; ಭುಜಗರು- ನಾಗರು, ಸುರರು- ದೇವತೆಗಳು, ಮಾನವರು- ನರರೊಳಗೆ ಕೆಲವರೂ ಕೂಡಾ ಇಲ್ಲವೇ ಇಲ್ಲ,' ಎಂದು ತನ್ನ ತೋರು ಬೆರಳನ್ನು ಅಡ್ಡ ಅಡ್ಡ ಒಲೆದು ಒಲೆದು, ಆಕಾಶದಲ್ಲಿ ದೇವತೆಗಳೊಡನೆ ಯುದ್ಧವನ್ನು ನೋಡುತ್ತಿದ್ದ ಇಂದ್ರನು ಹೇಳಿದನು.
ಪೂತು ಪಾಯಕು ಪಾರ್ಥ ಬಿಲು ವಿ
ದ್ಯಾತಿಶಯದಲಿ ಭೀಷ್ಮನೀ ಪುರು
ಹೂತನಮರಾರಿಗಳ ಮಿಕ್ಕರಲಾ ಮಹಾದೇವ |
ಈತಗಳು ಜನಿಸಿದೊಡೆ ಹಿಂದೆ ಮ
ಹೀತಳವ ಕದ್ದೊಯ್ವನೇ ಖಳ
ಸೀತೆ ಬನದಲಿ ನವೆವಳೇಯೆನುತಿರ್ದುದಮರಗಣ || ೬೨ ||
ಪದವಿಭಾಗ-ಅರ್ಥ: ಪೂತು! (ಭಲೇ!) ಪಾಯಕು (ರಕ್ಷಣೆಯಲ್ಲಿ) ಪಾರ್ಥ ಬಿಲು ವಿದ್ಯ+ ಅತಿಶಯದಲಿ (ಬಿಲ್ಲು ವಿದ್ಯೆಯ ಹೆಚ್ಚುಗಾರಿಕೆಯಲ್ಲಿ) ಭೀಷ್ಮನು+ ಈ ಪುರುಹೂತನ (ಇಂದ್ರನನ್ನು)+ ಅಮರಾರಿಗಳ (ಇಂದ್ರನನ್ನು) ಮಿಕ್ಕರಲಾ! ಮಹಾದೇವ ಈತಗಳು ಜನಿಸಿದೊಡೆ ಹಿಂದೆ, ಮಹೀತಳವ (ಭೂಮಿ) ಕದ್ದೊಯ್ವನೇ, ಖಳ (ಹಿರಣ್ಯಾಕ್ಷನು) ಸೀತೆ ಬನದಲಿ ನವೆವಳೇ+ ಯೆ+ ಎನುತಿರ್ದುದು+ ಅಮರಗಣ(ದೇವತೆಗಳು).
  • ಟಿಪ್ಪಣಿ: ಇಲ್ಲಿ 'ಸೀತೆ ಬನದಲಿ ನವೆವಳೇ' ಇದಕ್ಕೆ ಇಲ್ಲಿ ಅರ್ಥ ಹೊಂದಿಸುವುದು ಕಷ್ಟ.
ಅರ್ಥ: ಭಲೇ! ರಕ್ಷಣೆಯಲ್ಲಿ ಪಾರ್ಥನು, ಬಿಲ್ಲು ವಿದ್ಯೆಯ ಹೆಚ್ಚುಗಾರಿಕೆಯಲ್ಲಿ ಭೀಷ್ಮನು, ಇವರು ಈ ಇಂದ್ರನನ್ನೂ ಮೀರಿಸಿದರಲ್ಲಾ! ಮಹಾದೇವ! ಇವರು ಹಿಂದೆ ಕೃತ- ತ್ರೇತಾಯುಗಗಳಲ್ಲಿ ಜನಿಸಿದ್ದರೆ, ಭೂಮಿಯನ್ನು ಹಿರಣ್ಯಾಕ್ಷನು ಕದ್ದೊಯ್ಯುತ್ತಿದ್ದನೇ? ಇಲ್ಲ! ಸೀತೆಯು ವನದಲ್ಲಿ (ರಾವಣನಿಂದ) ಕಷ್ಟಕ್ಕೆ ಒಳಗಾಗುತ್ತಿದ್ದಳೇ? ಎಂದು ಆಕಾಶದಲ್ಲಿ ನಿಂತು ನೋಡುತ್ತಿದ್ದ ದೇವತೆಗಳು ಎನ್ನುತ್ತಿದ್ದರು. ಇವರು ಆಗ ಇದ್ದಿದ್ದರೆ ಹಿರಣ್ಯಾಕ್ಷನನ್ನೂ, ನಂತರ ರಾವಣನ್ನೂ ಕೊಲ್ಲುತ್ತಿದ್ದರು ಎಂದು ಭಾವ.
ಹಿಂದೆ ಕರ್ಣನ ಕೈಮೆಯನು ಗುರು
ನಂದನನ ಬಿಲುಗಾರತನವನು
ಮಂದರೋಪಮ ಧೈರ್ಯವಾಚಾರಿಯನ ಪರಿಣತೆಯ |
ಇಂದು ಕೃಪನಗ್ಗಳಿಕೆಯನು ನಲ
ವಿಂದ ಕಂಡೆನಿದಾರ ಪರಿಯ
ಲ್ಲೆಂದನುತ್ತರನರ್ಜುನಗೆ ಗಾಂಗೇಯನುರವಣೆಯ || ೬೩ ||
ಪದವಿಭಾಗ-ಅರ್ಥ: ಹಿಂದೆ ಕರ್ಣನ ಕೈಮೆಯನು(ಕೈ ಕೌಶಲ-ಶೌರ್ಯ), ಗುರು ನಂದನನ (ಅಸ್ವತ್ಥಾಮನ) ಬಿಲುಗಾರತನವನು, ಮಂದರ+ ಉಪಮ (ಪರ್ವತಕ್ಕೆ ಸಮಾನ) ಧೈರ್ಯವು+ ಆಚಾರಿಯನ (ದ್ರೋಣನ) ಪರಿಣತೆಯ ಇಂದು ಕೃಪನ+ ಅಗ್ಗಳಿಕೆಯನು(ಶ್ರೇಷ್ಠತೆಯನ್ನು) ನಲವಿಂದ ಕಂಡೆನು+ ಇದಾರ ಪರಿಯಲ್ಲೆಂದನು+ ಉತ್ತರನು+ ಅರ್ಜುನಗೆ ಗಾಂಗೇಯನ+ ಉರವಣೆಯ (ಪರಾಕ್ರಮವನ್ನು).
ಅರ್ಥ: ಉತ್ತರನು ಭೀಷ್ಮನ ಪರಾಕ್ರಮವನ್ನು ನೋಡಿ, ತಾನು ಇಂದು ಮೊದಲು ಕರ್ಣನ ಕೈ ಕೌಶಲ ಮತ್ತು ಶೌರ್ಯವನ್ನೂ, ಗುರು ನಂದನನಾದ ಅಸ್ವತ್ಥಾಮನ ಬಿಲ್ಲುಗಾರತನವನ್ನೂ, ಮಂದರ ಪರ್ವತಕ್ಕೆ ಸಮಾನ ಧೈರ್ಯವುಳ್ಳ ದ್ರೋಣಾಚಾರ್ಯನ ಪರಿಣತೆಯನ್ನೂ, ಕೃಪನ ಶ್ರೇಷ್ಠತೆಯನ್ನೂ ಸಂತಸದಿಂದ ಕಂಡೆನು. ಆದರೆ ಅದು ಯಾವುದೂ ಈ ಭೀಷ್ಮನ ಪರಾಕ್ರಮದ ಪರಿಯಲ್ಲ, ಇದು ಅವೆಲ್ಲವನ್ನೂ ಮೀರಿಸಿದೆ' ಎಂದು ಉತ್ತರನು ಅರ್ಜುನನಿಗೆ ಹೇಳಿದನು.
ಎನೆ ಕುಮಾರಕ ಕಾರ್ತವೀರ್ಯಾ
ರ್ಜುನನಾತನ ತೋರ ತೋಳಿನ
ಬನವ ಕಡಿದನು ವೀರಭಾರ್ಗವ ರಾಮನತಿ ಬಲನು |
ಮುನಿದು ಮಲೆತೊಡೆ ಭೀಷ್ಮನಾತನ
ಮನಕೆ ಭೀತಿಯನಿತ್ತನೀತನೊ
ಳೆನಗೆ ಸರಿನೂಕುವದೆ ಕಾಳಗವೆಂದನಾ ಪಾರ್ಥ || ೬೪ ||
ಪದವಿಭಾಗ-ಅರ್ಥ: ಎನೆ (ಉತ್ತರನು ಹಾಗೆ ಹೇಳಲು) ಕುಮಾರಕ ಕಾರ್ತವೀರ್ಯಾರ್ಜುನನು+ ಆತನ ತೋರ (ಬಲವಾದ) ತೋಳಿನ ಬನವ ಕಡಿದನು ವೀರಭಾರ್ಗವ ರಾಮನು+ ಅತಿ ಬಲನು, ಮುನಿದು ಮಲೆತೊಡೆ ಭೀಷ್ಮನು ಆತನ ಮನಕೆ ಭೀತಿಯನು ಇತ್ತನು+ ಈತನೊಳು+ ಎನಗೆ ಸರಿನೂಕುವದೆ ಕಾಳಗವು+ ಎಂದನು+ ಆ ಪಾರ್ಥ.
ಅರ್ಥ: ಉತ್ತರನು ಹಾಗೆ ಹೇಳಲು, ಕುಮಾರಕನೇ, ಕಾರ್ತವೀರ್ಯಾರ್ಜುನನು ಮಹಾವೀರ, ಸಾವಿರ ತೋಳುಗಳನ್ನು ಹೊಂದಿದ್ದ. ಆತನ ಬಲವಾದ ತೋಳಿನ ಕಾಡನ್ನೇ ವೀರಭಾರ್ಗವ ರಾಮನು ಕಡಿದನು. ಭಾರ್ಗವನು ಅತಿ ಬಲಶಾಲಿ. ಆ ಭಾರ್ಗವನು ಸಿಟ್ಟಿನಿಂದ ಯುದ್ಧಕ್ಕೆ ಬಂದರೆ ಭೀಷ್ಮನು ಆತನ ಮನಸ್ಸಿಗೇ ಭೀತಿಯನ್ನು ಉಂಟು ಮಾಡಿದನು. ಈತನಲ್ಲಿ ನನಗೆ ಸರಿಸಾಮಾನ ಯುದ್ಧಮಾಡಲು ಸಾಗುವುದೇ? ಎಂದನು ಆ ಪಾರ್ಥ.
ಮತ್ತೆ ಗಂಗಾಸೂನು ಪಾರ್ಥನ
ತೆತ್ತಿಸಿದನೈದಂಬಿನಲಿ ರಥ
ಕಿತ್ತು ಮಗುಚಲು ಮೂರು ವಜ್ರಾಸ್ತ್ರದಲಿ ಕೀಲಿಸಿದ |
ಹುತ್ತ ಕುರಗನು ಬಗಿದು ಹೊಗುವವೊ
ಲುತ್ತರಿಸಿದವು ಸರಳು ಮಿಗೆ ಧೃತಿ
ವೆತ್ತು ಫಲುಗುಣನವರನೆಚ್ಚನು ಹತ್ತು ಬಾಣದಲಿ || ೬೫ ||
ಪದವಿಭಾಗ-ಅರ್ಥ: ಮತ್ತೆ ಗಂಗಾಸೂನು ಪಾರ್ಥನ ತೆತ್ತಿಸಿದನು+ ಐದಂಬಿನಲಿ, ರಥಕಿತ್ತು ಮಗುಚಲು ಮೂರು ವಜ್ರಾಸ್ತ್ರದಲಿ ಕೀಲಿಸಿದ ಹುತ್ತ (ತ್ರಿಶೂಲ) ಕುರಗನು ಬಗಿದು ಹೊಗುವವೊಲು+ ಉತ್ತರಿಸಿದವು ಸರಳು, ಮಿಗೆ ಧೃತಿವೆತ್ತು ಫಲುಗುಣನು+ ಅವರನು+ ಎಚ್ಚನು ಹತ್ತು ಬಾಣದಲಿ.
  • ಕುರಗ= ಅಕ್ಕಸಾಲಿಗರು ಮತ್ತು ಕಮ್ಮಾರರು ಉಪಯೋಗಿಸುವ ಅಡಿಗಲ್ಲು.
ಅರ್ಥ: ಪುನಃ ಭೀಷ್ಮನು ಪಾರ್ಥನನ್ನು ಐದು ಅಂಬುಗಳಿಂದ ಹೊಡೆದನು. ಆಗ ರಥಕಿತ್ತು ಮಗುಚಲು, ಪಾರ್ಥನು ಮೂರು ವಜ್ರಾಸ್ತ್ರದಲಿ ತ್ರಿಶೂಲವು ಕುರಗವನ್ನು ಬಗಿದು ಹೊಗುವಂತೆ ಪಾರ್ಥನ ಬಾಣಗಳು ಉತ್ತರಿಸಿ ರಥವನ್ನು ಪುನಃ ಕೀಲಿಸಿ ಸರಳು ಮಿಗುವಂತೆ ನಿಲ್ಲಿಸಿದವು. ಧೃತಿವೆತ್ತು- ಗಟ್ಟಿ ಮನಸ್ಸಿನಿಂದ ಫಲ್ಗುಣನು ಅವರನ್ನು ಹತ್ತು ಬಾಣಗಳಿಂದ ಹೊಡೆದನು.
ನರನ ಶರದಲಿ ಭೀಷ್ಮನೆದೆ ತನು
ಬಿರಿಯೆ ಮೈ ಝೋಂಪಿಸಿತು ಸಲೆ ತರ
ಹರಿಸಲರಿಯದೆ ಮಲಗಿ ನಿಂದನು ರಥದ ಕಂಬುಗೆಯ |
ಅರರೆ ಸೋತನು ಭೀಷ್ಮನಿನ್ನೇ
ನುರಿದುದೋ ಕುರುಸೇನೆ ಯಾವೆಡೆ
ದೊರೆಯೆನುತ ಬಾಯ್ಬಿಡಲು ಕೌರವರಾಯ ಮಾರಾಂತ || ೬೬ ||
ಪದವಿಭಾಗ-ಅರ್ಥ: ನರನ ಶರದಲಿ ಭೀಷ್ಮನ+ ಎದೆ ತನು ಬಿರಿಯೆ ಮೈ ಝೋಂಪಿಸಿತು, ಸಲೆ ತರಹರಿಸಲು+ ಅರಿಯದೆ ಮಲಗಿ ನಿಂದನು ರಥದ ಕಂಬುಗೆಯ, ಅರರೆ ಸೋತನು ಭೀಷ್ಮನು+ ಇನ್ನೇನು+ ಉರಿದುದೋ ಕುರುಸೇನೆ ಯಾವೆಡೆ ದೊರೆಯೆನುತ(ರಕ್ಷಣೆ) ಬಾಯ್ಬಿಡಲು ಕೌರವರಾಯ ಮಾರಾಂತ.
ಅರ್ಥ: ಅರ್ಜುನನ ಬಾಣಗಳಿಂದ ಭೀಷ್ಮನ ಎದೆ ದೇಹ ಬಿರಿಯುವಂತೆ ಗಾಯವಾಯಿತು. ಅವನ ಮೈ ಝೋಂಪಿಸಿ ತೂಗಾಡಿತು. ಸಲೆಮತ್ತೆ ಅದನ್ನು ತರಹರಿಸಲು- ಸುಧಾರಿಸಿಕೊಳ್ಳಲಾರದೆ ರಥದ ಕಂಬಕ್ಕೆ ಕಣ್ಣುಮುಚ್ಚಿ(ಮಲಗಿ) ಒರಗಿ ನಿಂತನು. ಅರರೆ! ಭೀಷ್ಮನು ಸೋತನು; ಇನ್ನೇನು ಗತಿ, ಉರಿದುದೋ ಕುರುಸೇನೆಯು ಭಸ್ಮವಾಗುದೋ ಎಂದು, ಯಾವ ಕಡೆ ರಕ್ಷಣೆ ಇದೆ ಎನ್ನುತ್ತಾ ಸೇನೆ ಭಯದಿಂದ ಬಾಯ್ಬಿಡುತ್ತಿರಲು ಕೌರವರಾಯನು ಬಂದು ಪಾರ್ಥನನ್ನು ಎದುರಿಸಿದನು.

ಯುದ್ಧಕ್ಕೆ ದುರ್ಯೋಧನನ ಪ್ರವೇಶ[ಸಂಪಾದಿಸಿ]

ಸೀಳು ನಾಯ್ಗಳ ಬಾಯ ಕೆಲಬಲ
ದಾಳ ಹಂಗಿನ ದೊರೆಯೆ ಸುಭಟರ
ಸೋಲವದು ರಾಯರಿಗೆ ಸೋಲವೆ ನೂಕು ನೂಕೆನುತ |
ಕೋಲ ಹೊದೆಗಳ ಕೆದರಿ ಸಿಂಧದ
ಮೇಲೆ ಹಾವನು ಹಾಯ್ಕಿ ಸಾರಥಿ
ಮೇಳವಿಸಲವನಿಪನ ರಥವನು ನೆರೆದುರತಿರಥರು || ೬೭ ||
ಪದವಿಭಾಗ-ಅರ್ಥ: ಸೀಳು ನಾಯ್ಗಳ ಬಾಯ ಕೆಲಬಲದ+ ಆಳ ಹಂಗಿನ ದೊರೆಯೆ ಸುಭಟರ ಸೋಲವದು ರಾಯರಿಗೆ ಸೋಲವೆ ನೂಕು ನೂಕು+ ಎನುತ ಕೋಲ ಹೊದೆಗಳ (ಬಾಣಗಳ ರಾಶಿಯನ್ನು)ಕೆದರಿ ಸಿಂಧದ (ಬಾವುಟದ) ಮೇಲೆ ಹಾವನು ಹಾಯ್ಕಿ ಸಾರಥಿ ಮೇಳವಿಸಲು (ಸೇರಿಕೊಳ್ಳಲು)+ ಅವನಿಪನ (ಕೌರವನ) ರಥವನು ನೆರೆದುರು+ ಅತಿರಥರು.
ಅರ್ಥ: ಸೀಳು ನಾಯಿಯಂತೆ ಬಾಯಿಯುಳ್ಳ (ವೀರರಾದ) ಕೆಲಬಲದಲ್ಲಿರುವ ಯೋಧರ ಹಂಗಿನಲ್ಲಿ ದೊರೆಯು ಇರುವನೇ? ಸುಭಟರಾದವರ ಕೆಲವರ ಸೋಲು ಅದು ರಾಜನಿಗೆ ಸೋಲು ಆದ ಹಾಗೆಯೇ? ಅಲ್ಲ. ನೂಕು ನೂಕು- ನುಗ್ಗು ನುಗ್ಗು ಎನ್ನುತ್ತಾ ಬಾಣಗಳ ರಾಶಿಯ ಕಟ್ಟನ್ನು ಬಿಚ್ಚಿ ಹೊಂದಿಸಿಕೊಂಡು ಬಾವುಟದ ಮೇಲೆ ಹಾವಿನ ಚಿನ್ಹೆಹನ್ನು ಹಾಕಿ ಸಾರಥಿ ಸೇರಿಕೊಳ್ಳಲು ಕೌರವನ ರಥವನ್ನು ಬೆಂಬಲಕ್ಕೆ ಸುತ್ತುವರಿದು ಅತಿರಥರು ಬಂದು ಸೇರಿಕೊಂಡರು.
ಕಲಕಿ ಕೆದರಿದ ಬಲಜಲಧಿಯೊ
ಬ್ಬುಳಿಗೆ ಬಂದುದು ತಳಿತ ಸತ್ತಿಗೆ
ಗಳ ವಿಡಾಯಿಯಲಳ್ಳಿರಿವ ನಿಸ್ಸಾಳ ಕೋಟಿಗಳ |
ಉಲಿವ ಕಹಳೆಯ ಬೈಗುಳೆಡಗೈ
ತಳದ ಬಾಯ್ಬಲಗೈಯನೊಲವುತ
ಬಳಿಕ ಭಟ್ಟರು ಹೊಗಳಿದರು ಕೌರವನ ಬಿರುದುಗಳ || ೬೮ ||
ಪದವಿಭಾಗ-ಅರ್ಥ: ಕಲಕಿ ಕೆದರಿದ ಬಲಜಲಧಿಯ (ಸೈನ್ಯದ ಸಮುದ್ರ)+ ಉಬ್ಬುಳಿಗೆ ಬಂದುದು ತಳಿತ ಸತ್ತಿಗೆಗಳ (ಗೊಂಡೆ ಬಾವುಟ)ವಿಡಾಯಿಯಲಿ+ ಅಳ್ಳಿರಿವ ನಿಸ್ಸಾಳ ಕೋಟಿಗಳ ಉಲಿವ ಕಹಳೆಯ ಬೈಗುಳ+ ಎಡಗೈತಳದ ಬಾಯ್ ಬಲಗೈಯನು+ ಒಲವುತ ಬಳಿಕ ಭಟ್ಟರು ಹೊಗಳಿದರು ಕೌರವನ ಬಿರುದುಗಳ.
  • ವಿಡಾಯಿ=1. ಮೆರೆತ. 2. ಸಂಭ್ರಮ. 3. ಠೀವಿ. 4. ಸೊಗಸು. 5. ದಟ್ಟಣೆ. 6. ಆಧಿಕ್ಯ.
ಅರ್ಥ: ಹರಡಿಹೋದ ದಿಕ್ಕುದಿಕ್ಕಿಗಿದ್ದ ಕೌರವನ ಸೇನಾ ಸಮುದ್ರ ಉಬ್ಬುರ ಬಂದಂತೆ ಉತ್ಸಾಹ ಹೊಂದಿತು. ಶೋಭಿಸುವ ಗೊಂಡೆಗಳು ಬಾವುಟಗಳ ಸಂಭ್ರಮದಲ್ಲಿ ಕಿವಿಬಿರಿಯುವ ಸದ್ದಿನ ಕೋಟಿ ನಿಸ್ಸಾಳ ಭೇರಿ ನಗಾರಿಗಳ ರಣವಾದ್ಯಗಳ, ಕೂಗುವಂತೆ ಊದುವ ಕಹಳೆಯ, ಶತ್ರುವಿಗೆ ಬೈಗುಳದ ಸುರಿಮಳೆಯಲ್ಲಿ ಎಡಗೈತಳದ ಬಾಯನ್ನು ಬಲಗೈಯ ಅಂಗೈಗೆ ತಟ್ಟಿ ಕೈ ಚಪ್ಪಾಳೆ ತಾಳದ ಸದ್ದುಮಾಡುತ್ತಾ ಸದ್ದಿಗೆ ಸರಿಯಾಗಿ ಓಲಾಡುತ್ತಾ ಬಂದರು; ಬಳಿಕ ಹೊಗಳುಭಟ್ಟರು ಕೌರವನ ಬಿರುದುಗಳನ್ನು ಹೊಗಳಿದರು.
ಒಗ್ಗು ಮುರಿಯದೆ ಸೇನೆ ಮೊಳಗುವ
ಲಗ್ಗೆವರೆಯಲಿ ಹೆಣನ ತುಳಿದೊಡೆ
ಮುಗ್ಗಿ ಕವಿದುದು ಕೌರವೇಂದ್ರನ ಮೊಗದ ಸನ್ನೆಯಲಿ |
ಹುಗ್ಗಿಗರ ಬಲುಹುರಿಯ ನಿಗುಚುವೆ
ನಿಗ್ಗುವೆನು ನಿಲ್ಲೆನುತ ಸೇನೆಯ
ನಗ್ಗಡಲೊಳಿಕ್ಕಿದನು ಫಲುಗುಣನಗಣಿತಾಸ್ತ್ರದಲಿ || ೬೯ ||
ಪದವಿಭಾಗ-ಅರ್ಥ:ಒಗ್ಗು ಮುರಿಯದೆ ಸೇನೆ ಮೊಳಗುವ ಲಗ್ಗೆವರೆಯಲಿ ಹೆಣನ ತುಳಿದೊಡೆ ಮುಗ್ಗಿ ಕವಿದುದು ಕೌರವೇಂದ್ರನ ಮೊಗದ ಸನ್ನೆಯಲಿ ಹುಗ್ಗಿಗರ ಬಲುಹುರಿಯ ನಿಗುಚುವೆ (ಬಡಿದು ನೆಟ್ಟಗೆ ಮಾಡು) ನಿಗ್ಗುವೆನು (ನೆಗ್ಗು - ಬಡಿದು ತಗ್ಗುಮಾಡುವುದು. ನಿಗ್ಗು- ದಟ್ಟಣೆ?) ನಿಲ್ಲೆನುತ ಸೇನೆಯ ನಗು+ ಕಡಲೊಳು (ನಗುವಿನ ಕಡಲೊಳು; ಕಡಲು- ಸಮುದ್ರ) ಇಕ್ಕಿದನು (ಹೊಡೆದನು) ಫಲುಗುಣನು+ ಅಗಣಿತ+ ಅಸ್ತ್ರದಲಿ (ಅಗಣಿತ- ಅನೇಕ).
ಅರ್ಥ:ಕೌರವನ ಸೇನೆಯು ಒಗ್ಗಟ್ಟು ಮುರಿಯದೆ, ಮೊಳಗುವ ರಣವಾದ್ಯದಲ್ಲಿ ಹೆಣವನ್ನು ತುಳಿದರೂ ಮುನ್ನುಗ್ಗಿ ಕೌರವೇಂದ್ರನ ಮೊಗದ ಸನ್ನೆಯನ್ನು ನೋಡಿ ಅರ್ಜುನನ್ನು ಮುತ್ತಿತು. ಹಿಂದೆಬಿದ್ದು ಅಡಗಿದ ಹುಗ್ಗಿಗರನ್ನು ಬೆನ್ನುಹುರಿಯನ್ನು ಬಡಿದು ನೆಟ್ಟಗೆ ಮಾಡುವೆನು ಎಂದನು ಕೌರವ. ಎಲ್ಲರನ್ನೂ ಬಡಿಯುವೆನು ನಿಲ್ಲು ಎನ್ನುತ್ತಾ ಸೇನೆಯನ್ನು ಫಲ್ಗುಣನು ಅನೇಕ ಅಸ್ತ್ರದಿಂದ ದೊಡ್ಡದಾಗಿ ನಗುತ್ತಾ ಹೊಡೆದನು.
ವೀರರಿದಿರಹ ಹೊತ್ತು ರಣ ಮೈ
ಲಾರರಾದರು ಮರಳಿ ತೆಗೆವುತ
ಭೈರವನ ಸಾರೂಪ್ಯವಾದರು ಪೂತು ಮಝರೆನುತ |
ಕೌರವನು ಕರ್ಣಾದಿಗಳ ನುಡಿ
ಯೋರೆ ಹದರಿನೊಳವಗಡಿಸಿ ಹೊಂ
ದೇರ ದುವ್ವಾಳಿಸುತ ಮೂದಲಿಸಿದನು ಫಲುಗುಣನ || ೭೦ ||
ಪದವಿಭಾಗ-ಅರ್ಥ:ವೀರರು+ ಇದಿರಹ ಹೊತ್ತು ರಣ ಮೈಲಾರರು+ ಆದರು ಮರಳಿ ತೆಗೆವುತ ಭೈರವನ ಸಾರೂಪ್ಯವಾದರು ಪೂತು ಮಝರೆ+ ಎನುತ ಕೌರವನು ಕರ್ಣಾದಿಗಳ ನುಡಿಯ+ ಉರೆ ಹದರಿನೊಳು+ ಅವಗಡಿಸಿ ಹೊಂದೇರ ದುವ್ವಾಳಿಸುತ ಮೂದಲಿಸಿದನು ಫಲುಗುಣನ.
  • ವೀರರು+ ಇದಿರಹ- ಇದಿರಾಗುವ, ಹೊತ್ತು-ಸಮಯದಲ್ಲಿ, ರಣ ಮೈಲಾರರು+ ಆದರು= ಉಗ್ರ ಮೈಲಾರನಂತೆ ಆದರು; ಮರಳಿ ತೆಗೆವುತ ಭೈರವನ ಸಾರೂಪ್ಯವಾದರು= ಪುನಃ ಆಕ್ರಮಿಸಿದಾಗ ಭೈರವನಂತೆ ಘೊರವಾಗಿ ಕಂಡರು. ಪೂತು ಮಝರೆ! ಎನ್ನುತ್ತಾ ಕೌರವನು ಕರ್ಣ ಮೊದಾಲದವರ ಮಾತಿನ ಉರೆ(ಹಳ)(ಹದರು- ಚಮತ್ಕಾರ )ಹದರಿನೊಳು+ ಅವಗಡಿಸಿ= ಬಹಳ ಚಮತ್ಕಾರದ, ಪ್ರೋತ್ಸಾಹದ ಮಾತನ್ನು ಪಡೆದು ಆಕ್ರಮಿಸಿ ಹೊಂದೇರ ದುವ್ವಾಳಿಸುತ= ಚನ್ನದ ರಥವನ್ನು ಓಡಿಸುತ್ತಾ ಮೂದಲಿಸಿದನು ಫಲುಗುಣನ.
ಅರ್ಥ:ಕೌರವನ ಭಟರು ಅರ್ಜುನನ್ನು ಎದುರಿಸುವಾಗ ಉಗ್ರ ಮೈಲಾರನಂತೆ ಆದರು; ಪುನಃ ಆಕ್ರಮಿಸಿದಾಗ ಭೈರವನಂತೆ ಘೊರವಾಗಿ ಕಂಡರು. ಪೂತು ಮಝರೆ! ಎನ್ನುತ್ತಾ ಕೌರವನು ಕರ್ಣ ಮೊದಾಲದವರಿಂದ ಪ್ರೋತ್ಸಾಹದ ಮಾತನ್ನು ಪಡೆದು, ಚಿನ್ನದ ರಥವನ್ನು ಓಡಿಸುತ್ತಾ ಫಲುಗುಣನನ್ನು ಆಕ್ರಮಿಸಿ ಮೂದಲಿಸಿದನು.
ಬಾಲ ವೃದ್ಧರ ವಿಪ್ರರನು ನೀ
ಕಾಳಗದೊಳೋಡಿಸಿದೆನೆಂದೇ
ಮೇಲು ಪೋಗಿನಲಿರಲು ಬೇಡೆಲೆ ಪಾರ್ಥ ಮರುಳಾದೈ |
ಆಳಿದಡವಿಯ ರಾಜ್ಯವಲ್ಲದೆ
ಮೇಲೆ ಧರಣಿಯ ಬಯಸಿದೊಡೆ ನಿಮ
ಗಾಳಲೀವೆನೆ ಹೋಗು ಹೋಗಾರಣ್ಯಕೆನುತೆಚ್ಚ || ೭೧ ||
ಪದವಿಭಾಗ-ಅರ್ಥ: ಬಾಲ ವೃದ್ಧರ ವಿಪ್ರರನು ನೀ ಕಾಳಗದೊಳ+ ಓಡಿಸಿದೆನೆಂದು+ ಏ ಮೇಲು (ಏಮೇಲು ಪೋಗು - ಪೊಗರು-ಬಹಳ ಅಹಂಕಾರ) ಪೋಗಿನಲಿ+ ಇರಲು ಬೇಡೆಲೆ ಪಾರ್ಥ, ಮರುಳಾದೈ ಆಳಿದ+ ಅಡವಿಯ ರಾಜ್ಯವಲ್ಲದೆ ಮೇಲೆ ಧರಣಿಯ ಬಯಸಿದೊಡೆ ನಿಮಗೆ+ ಆಳಲು+ ಈವೆನೆ ಹೋಗು ಹೋಗು+ ಆರಣ್ಯಕೆ+ ಎನುತ+ ಎಚ್ಚ.
ಅರ್ಥ:ಕೌರವನು, ಪಾರ್ಥನೇ, ನೀನು ಬಾಲರನ್ನೂ ವೃದ್ಧರನ್ನೂ, ಬ್ರಾಹ್ಮಣರನ್ನೂ ಯುದ್ಧದಲ್ಲಿ ಓಡಿಸಿದೆನೆಂದು ಬಹಳ ಅಹಂಕಾರ ಪಡಬೇಡ. ನೀನು ಮರುಳಾದೆಯೋ! ನಿನಗೆ ಈ ಹಿಂದೆ ಹನ್ನರಡು ವರ್ಷ ಆಳಿದ ಅಡವಿಯ ರಾಜ್ಯವಲ್ಲದೆ ಮೇಲೆ ಬೇರೆ ರಾಜ್ಯವನ್ನು ಬಯಸಿದರೆ, ನಿಮಗೆ ಆಳಲು ನಾನು ಕೊಡುವೆನೆ? ಎಂದಿಗೂ ಕೊಡಲಾರೆ. ಹೋಗು ಹೋಗು ಪುನಃ ಆರಣ್ಯಕ್ಕೆ,' ಎನ್ನತ್ತಾ ಅವನನ್ನು ಬಾಣದಿಂದ ಹೊಡೆದನು.
ಗಾರುಗೆಡೆಯದಿರೆಲವೊ ಸತ್ಯವ
ಮೀರಲಮ್ಮದೆ ಲೋಕ ನಿನ್ನನು
ದೂರ ಬೇಕೆಂದಡವಿಯೊಕ್ಕೆವು ಹೊಲ್ಲೆಯೇನಿದಕೆ |
ಜಾರಿ ಹೋಯಿತ್ತವಧಿಯಿನ್ನೀ
ಮೀರಿ ಗಳಹುವ ನಿನ್ನ ಗಂಟಲ
ನೂರಿ ರಾಜ್ಯವ ತೆಗೆವೆ ಸೈರಿಸೆನ್ನುತ್ತ ನರನೆಚ್ಚ || ೭೨ ||
ಪದವಿಭಾಗ-ಅರ್ಥ: ಗಾರುಗೆಡುಯದಿರು (ಗಾಬರಿಯಾಗದಿರು)+ ಎಲವೊ ಸತ್ಯವ ಮೀರಲು+ ಅಮ್ಮದೆ (ಸಾಧ್ಯವಾಗದೆ) ಲೋಕ ನಿನ್ನನು ದೂರ ಬೇಕೆಂದು+ ಅಡವಿಯೊಕ್ಕೆವು ಹೊಲ್ಲೆಯು (ತಪ್ಪು)+ ಏನು+ ಇದಕೆ ಜಾರಿ ಹೋಯಿತ್ತು+ ಅವಧಿಯು+ ಇನ್ನು+ ಈ ಮೀರಿ ಗಳಹುವ (ಹೇಳುವ) ನಿನ್ನ ಗಂಟಲನು+ ಊರಿ ರಾಜ್ಯವ ತೆಗೆವೆ ಸೈರಿಸು ಎನ್ನುತ್ತ ನರನು+ ಎಚ್ಚ.
  • ಈ ಮೀರಿ ಗಳಹುವ (ತೂಕವಿಲ್ಲದ ಮಾತನಾಡುವ, ಹೇಳುವ) ನಿನ್ನ ಗಂಟಲನು+ ಊರಿ ರಾಜ್ಯವ ತೆಗೆವೆ= ಕಾಲಲ್ಲೆ ಗಂಟಲನ್ನು ಮೆಟ್ಟಿ ತಿಂದಿದ್ದನ್ನು ಹೊರತೆಗೆಯುವುದು.
ಅರ್ಥ:ಅರ್ಜುನನು ಹೇಳಿದ, 'ದುರ್ಯೋಧನಾ, ನಾನು ಹೇಳುವುದನ್ನು ಕೇಳಿ ಗಾಬರಿಯಾಗಬೇಡ. ಎಲವೊ ಸತ್ಯವ ಮೀರಲಾರದೆ ಮತ್ತು ಲೋಕವು ನಿನ್ನನು ಮೋಸಗಾರನೆಂದು ದೂರ ಬೇಕೆಂದು ಅಡವಿಯನ್ನು ಹೊಕ್ಕೆವು. ಇದರಲ್ಲಿ ತಪ್ಪೇನು? ಈಗ ವಚನ ಕೊಟ್ಟ ಅವಧಿಯು ಜಾರಿ ಹೋಯಿತು (ಮುಗಿಯಿತು). ಇನ್ನು ಈ ಮಿತಿಮೀರಿ ಒದರುವ ನಿನ್ನ ಗಂಟಲನ್ನು ಕಾಲಲ್ಲಿ ಮೆಟ್ಟಿ ನಿನ್ನಿಂದ ರಾಜ್ಯವನ್ನು ತೆಗೆವೆವು. ಈಗ ಸಹಿಸಿಕೋ ಎಂದು ಹೇಳಿ ಪಾರ್ಥನು ಬಾಣದಿಂದ ಹೊಡೆದನು.
ಅರಿಯೆ ನೀನೆಲೆ ಮರುಳೆ ಗರುಡನ
ತರವಳಿಕೆಯಲಿ ಹಾವು ಕನ್ನವ
ಕೊರೆದು ಬದುಕುವದೇ ವೃಥಾ ಕಕ್ಕುಲಿತೆ ನಿನಗೇಕೆ |
ತರಿದು ತಿರಿಕಲ್ಲಾಡುವೆನು ನಿ
ಮ್ಮುರುವರೈವರ ಶಿರವನರ್ಜುನ
ಬರಿದೆ ಗಳಹುದಿರೆನುತ ಕೌರವರಾಯ ತೆಗೆದೆಚ್ಚ || ೭೩ ||
ಪದವಿಭಾಗ-ಅರ್ಥ: ಅರಿಯೆ ನೀನು+ ಎಲೆ ಮರುಳೆ, ಗರುಡನ ತರವಳಿಕೆಯಲಿ ಹಾವು ಕನ್ನವ (ರಂದ್ರ) ಕೊರೆದು ಬದುಕುವದೇ, ವೃಥಾ ()ಸುಮ್ಮನೆ, ವ್ಯರ್ಥವಾಗಿ) ಕಕ್ಕುಲಿತೆ(ಕಕ್ಕುಲತೆ, ಪ್ರೀತಿ, ಆಸೆ) ನಿನಗೇಕೆ ತರಿದು ತಿರಿಕಲ್ಲಾಡುವೆನು (ಹಗ್ಗದ ಕವಣೆಯಲ್ಲಿ ಕಲ್ಲಿಟ್ಟು ಹಗ್ಗವನ್ನು ತಿರುಗಿಸಿ ಕಲ್ಲನ್ನು ಬೀಸಿ ಎಸೆಯುವುದು.) ನಿಮ್ಮ+ ಉರುವರು (ಉರುವಲು, ಸೌದೆ)+ ಐವರ ಶಿರವನು+ ಅರ್ಜುನ ಬರಿದೆ ಗಳಹುದಿರು+ ಎನುತ ಕೌರವರಾಯ ತೆಗೆದು+ ಎಚ್ಚ.
ಅರ್ಥ: ಕೌರವನು ಅರ್ಜುನನಿಗೆ, 'ನೀನು ತಿಳಿದಿಲ್ಲ ಎಲೆ ಮರುಳೆ, ಗರುಡನ ಅಟ್ಟಿಸುವಿಕೆಯ ಸಮಯದಲ್ಲಿ ಹಾವು ಭೂಮಿಯಲ್ಲಿ ಕನ್ನವನ್ನು ಕೊರೆದು ಬದುಕುವದು ಸಾಧ್ಯವೇ? ನೀನು ವ್ಯರ್ಥವಾಗಿ ಬಯಸುವೆ; ಭೂಮಿಯ ಮೇಲಿನ ಆಸೆ ನಿನಗೇಕೆ? ನನಗೆ ನೀವು ಉರುವಲು ಸೌದೆಯಂತೆ; ನಿಮ್ಮ ಐದೂ ಜನರನ್ನು ಚೂರು ಚುರು ಮಾಡಿ ಐದು ಜನರ ತಲೆಬುರುಡೆಯನ್ನು ಕವಣೆಯಲ್ಲಿಟ್ಟು ತಿರಿಕಲ್ಲಾಡುವೆನು. ಅರ್ಜುನ ಬರಿದೆ ಹರಟಬೇಡ, ಎನ್ನುತ್ತಾ ಕೌರವರಾಯನು ಬಾಣವನ್ನು ತೆಗೆದು ಹೊಡೆದ.
ಗರುಡ ನೀನಹೆ ನಿನ್ನ ಪಕ್ಕವ
ಮುರಿದು ಹೆಡತಲೆಗಡರಿ ಬೆನ್ನೆಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ ನೀನರಿಯೆ
ತರಹರಿಸಿ ಕಲಿಯಾಗುಯೆಂದ
ಬ್ಬರಿಸಿ ಕೌರವನೆದೆಯನುಗುಳಿದ
ನೆರಡು ಬಾಣದೊಳರುಣ ಜಲದೊರೆತೆಗಳ ಕಾಣಿಸಿದ ೭೪
ಪದವಿಭಾಗ-ಅರ್ಥ: ಗರುಡ ನೀನು+ ಅಹೆ(ಆಗಿರುವೆ), ನಿನ್ನ ಪಕ್ಕವ ಮುರಿದು ಹೆಡತಲೆಗೆ+ ಅಡರಿ (ಏರಿ) ಬೆನ್ನೆಲು ಮುರಿಯೆ ದುವ್ವಾಳಿಸುವ (ಆಕ್ರಮಿಸುವ) ಮುರರಿಪುವು(ಮುರ ರಾಕ್ಷಸನನ್ನು ಕೊಂದ ಕೃಷ್ಣ - ನಾನು, ಅಂಥವನು) ಎನ್ನ ನೀನು+ ಅರಿಯೆ ತರಹರಿಸಿ (ಸುಧಾರಿಸಿಕೊಂಡು) ಕಲಿಯಾಗುಯೆಂದು+ ಅಬ್ಬರಿಸಿ ಕೌರವನ+ ಎದೆಯ ನುಗುಳಿದನು+ ಎರಡು ಬಾಣದೊಳು+ ಅರುಣ ಜಲದ (ಕೆಂಪು ನೀರು - ಕೆನ್ನೀರು)+ ಒರೆತೆಗಳ ಕಾಣಿಸಿದ.
ಅರ್ಥ: ನೀನು ಗರುಡ ಆಗಿರುವೆಯೋ! ನಿನ್ನ ಪಕ್ಕವ ಮುರಿದು ಹೆಡತಲೆಗೆ ಏರಿ, ಬೆನ್ನೆಲುಬು ಮುರಿಯುವಂತೆ ಆಕ್ರಮಿಸುವ ಮುರರಿಪುವು ನಾನು; ನನ್ನನ್ನು ನೀನು ಇನ್ನೂ ಅರಿತಿಲ್ಲ. ಸುಧಾರಿಸಿಕೊಂಡು ಶೂರತನ ತೋರು, ಎಂದು ಅಬ್ಬರಿಸಿ ಕೌರವನ ಎದೆಯನ್ನು ಎರಡು ಬಾಣದಿಂದ ಹೊಡೆದು ಕವಚವನ್ನು ಹೊಗುವಂತೆ ಮಾಡಿದನು, ಹಾಗೆ ಅವನ ಎದೆಯಲ್ಲಿ ಗಾಯಮಾಡಿ ಕೆನ್ನೀರಿನ ಒರೆತೆಗಳನ್ನು ಕಾಣಿಸಿದ- ರಕ್ತ ಒಸರುವಂತೆ ಮಾಡಿದ.
ನವ ನಿಕಾರಿಯ ವಲ್ಲಿ ಸೀರೆಗ
ಳವಯವದ ರಕುತದಲಿ ತೋದವು
ಜವವಳಿದು ಸಾರಥಿಗೆ ಸೂಚಿಸೆ ರಥವ ಮರಳಿಚಿದ |
ಕವಿದನರ್ಜುನನೋಡದಿರು ಕೌ
ರವ ಪಲಾಯನವಕಟಕಟ ಪಾ
ರ್ಥಿವರ ಪಂಥವೆ ಮರಳಿ ನಿಂದಿರು ಕೊಲುವದಿಲ್ಲೆಂದ || ೭೫ ||
ಪದವಿಭಾಗ-ಅರ್ಥ:ನವನಿಕಾರಿಯವು+ ಅಲ್ಲಿ ಸೀರೆಗಳು+ ಅವಯವದ ರಕುತದಲಿ ತೋದವು ಜವವು+ ಅಳಿದು ಸಾರಥಿಗೆ ಸೂಚಿಸೆ ರಥವ ಮರಳಿಚಿದ ಕವಿದನು (ತಡೆದನು)+ ಅರ್ಜುನ ನೋಡದಿರು ಕೌರವ ಪಲಾಯನವ+ ಅಕಟಕಟ ಪಾರ್ಥಿವರ ಪಂಥವೆ ಮರಳಿ ನಿಂದಿರು ಕೊಲುವದಿಲ್ಲ+ ಎಂದ.
  • ನವನಿಕಾರಿ= ಅನಿಷ್ಟ; ಹಾನಿಕಾರಿ;
ಅರ್ಥ: ಕೌರವನಿಗೆ ಆಗ ಹಾನಿಕಾರಕವಾಗಿ ಅವನ ಅವನು ಉಟ್ಟ ಧೋತರ ಇತರೆ ಬಟ್ಟೆಗಳು ರಕ್ತದಲ್ಲಿ ತೋದವು. ಅವನ ಲವಲವಿಕೆ ಹೋಗಿ ಚಲಿಸಲಾರದೆ ಸಾರಥಿಗೆ ಸೂಚಿಸಲು ಅವನು ರಥವನ್ನು ಹಿಂದಕ್ಕೆ ಮರಳಿಸಿದನು. ಆದರೆ ಅರ್ಜುನನು ಅವನನ್ನು ತಡೆದು, ಹಂಗಿಸಿದನು 'ಕೌರವನ ಪಲಾಯನವನ್ನು ಅಕಟಕಟ ನೋಡಲು ಸಾಧ್ಯವಿಲ್ಲ! ಶೂರ ಕ್ಷತ್ರಿಯರು ಓಡುವುದು ಪಂಥವೆ? ಹೆದರಿ ಓಡಬೇಡ ತಿರುಗಿ ಬಂದು ನಿಲ್ಲು. ನಿನ್ನನ್ನು ನಾನು ಕೊಲ್ಲವುದಿಲ್ಲ,' ಎಂದ.(ನಿರಾಯುಧರನ್ನು, ಓಡುವವರನ್ನು ಹೊಡೆಯುವುದಿಲ್ಲ, ಭೀಮನ ಶಪಥವಿದೆ. ಆದ್ದರಿಂದ ಅರ್ಜುನ ಕೊಲ್ಲಲಾರ)
ಮಾತು ಹಳಸದ ಮುನ್ನ ಕೈಗಳು
ಸೋತು ತೆಗೆದವೆ ಹೊಳ್ಳುವಾತಿದು
ನೀತಿಯೇ ನರಪತಿಗಳಿಗೆ ಬಹು ಭಂಗವನ್ವಯಕೆ |
ಭೀತನಲ್ಲದೆ ಕಾದಿ ಮಡಿದನ
ಮಾತುಗಳಲಾ ಪುಣ್ಯಕಥನವು
ಭೂತಳಾಧಿಪ ಮರಳಿ ನೋಡೆನ್ನಾಣೆ ನೀನೆಂದ || ೭೬ ||
ಪದವಿಭಾಗ-ಅರ್ಥ: ಮಾತು ಹಳಸದ ಮುನ್ನ ಕೈಗಳು ಸೋತು ತೆಗೆದವೆ? ಹೊಳ್ಳುವಾತು+ ಇದು ನೀತಿಯೇ ನರಪತಿಗಳಿಗೆ ಬಹು ಭಂಗವು+ ಅನ್ವಯಕೆ? ಭೀತನಲ್ಲದೆ ಕಾದಿ ಮಡಿದನ ಮಾತುಗಳಲಾ (ಹೊಗಳಿ ಮಾತನಾಡುವುದು) ಪುಣ್ಯಕಥನವು. ಭೂತಳ+ ಅಧಿಪ(ಭೂಮಿಯನ್ನು ಆಳುವ ರಾಜ) ಮರಳಿ ನೋಡು+ ಎನ್ನಾಣೆ ನೀನು+ ಎಂದ.
ಅರ್ಥ: ಅರ್ಜುನಹು, 'ಕೌರವಾ ಪೌರಷದ ಮಾತು ಆಡಿ ನಿಮಿಷ ಕಳೆದಿಲ್ಲ, ಅದು ಹಳಸುವುದಕ್ಕೂ ಮೊದಲು, ನಿನ್ನ ಕೈಗಳು ಸೋತು ಯುದ್ಧವನ್ನು ಕೈಬಿಟ್ಟವೇ? ರಾಜ್ಯವಾಳುವ ನರಪತಿಗಳಿಗೆ ಜೊಳ್ಳುಮಾತು ಆಡುವುದು ನೀತಿಯೇ: ನೀನು ಓಡುವುದು ನಿನ್ನಕುಲದ ಅನ್ವಯ- ವಂಶ ಪರಂಪರೆಗೇ ಬಹಳ ಭಂಗವು- ದೊಡ್ಡ ಅವಮಾನ. ಭೀತಿಪಡದೆ ಯುದ್ಧಮಾಡಿ ಸಾವುಪಡೆದವನನ್ನು ಹೊಗಳಿ ಮಾತನಾಡುವುದು ಪುಣ್ಯಕಥನವಲ್ಲವೇ! ನೀನು ಆ ಪುಣ್ಯವನ್ನು ಪಡೆ! ಭೂತಳದ ರಾಜಾ! ನೀನು ಹಿಂತಿರುಗಿ ನೋಡು, ಬಾ ಯುದ್ಧಕ್ಕೆ ನನ್ನಾಣೆ,' ಎಂದ.
ಹುರುಳುಗೆಟ್ಟುದು ಗರುವತನವೆಂ
ದರಸ ನಾಚಿದನಧಿಕ ಶೌರ್ಯೋ
ತ್ಕರುಷೆಯಲಿ (ಪಾ- ತ್ಕರ್ಷೆಯಲಿ) ಕಲಿಯಾಗಿ ನಿಂದನು ಮತ್ತೆ ಕಾಳಗಕೆ |
ದೊರೆಯ ದುಗುಡವ ಕಂಡು ತಮ ತಮ
ಗುರವಣಿಸಿದರು ಸಕಲ ಸುಭಟರು
ಹೊರಳಿಗಟ್ಟಿತು ಸೇನೆ ನಿಚ್ಚಟರಳಿವ ನಿಶ್ಚಯಿಸಿ || ೭೭ ||
ಪದವಿಭಾಗ-ಅರ್ಥ: ಹುರುಳುಗೆಟ್ಟುದು ಗರುವತನವೆಂದು+ ಅರಸ ನಾಚಿದನು+ ಅಧಿಕ ಶೌರ್ಯೋತ್ಕರುಷೆಯಲಿ (ಪಾ: ತ್ಕರ್ಷೆಯಲಿ) ಕಲಿಯಾಗಿ ನಿಂದನು ಮತ್ತೆ ಕಾಳಗಕೆ ದೊರೆಯ ದುಗುಡವ ಕಂಡು ತಮ ತಮಗೆ+ ಉರವಣಿಸಿದರು(ಪರಾಕ್ರಮವನ್ನು ತೋರಿಸಿದರು)- ಸಕಲ ಸುಭಟರು, ಹೊರಳಿಗಟ್ಟಿತು ಸೇನೆ ನಿಚ್ಚಟರು (ಧೃಡ ಸಂಕಲ್ಪರು)+ ಅಳಿವ (ಸಾವನ್ನು) ನಿಶ್ಚಯಿಸಿ.
ಅರ್ಥ:ಕೌರವನ ಗರ್ದದ ಠೀವಿಯ ಪೌರಷತನ ಹುರುಳುಗೆಟ್ಟುಹೋಯಿತು, ಅವಹೇಳನಕರವಾಯಿತು ಎಂದು ಅರಸ ಕೌರವನು ಬಹಳ ನಾಚಿಕೊಂಡನು. ಅದರಿಂದ ಅವನು ಪುನಃ ತನ್ನ ಹಿರಿಮೆಯನ್ನು ತೋರಿಸಲು, ಶೌರ್ಯದ ಉತ್ಕರ್ಷೆಯಲ್ಲಿ- ಉಬ್ಬರದಲ್ಲಿ ಶೂರನಾಗಿ ತಿರುಗಿ ನಿಂತನು. ಮತ್ತೆ ಯುದ್ಧಕ್ಕೆ ನಿಂತ ದೊರೆಯ ಚಿಂತೆಯನ್ನು ಕಂಡು, ಕೌರವನ ಕಡೆಯ ಎಲ್ಲಾ ವೀರರು ತಮ ತಮಗೇ ಉತ್ತೇಜನ ಪಡೆದು ಪರಾಕ್ರಮವನ್ನು ತೋರಿಸಿದರು. ಸಕಲ ಸುಭಟರ ಸೇನೆಯು ಪುನ: ಯುದ್ಧಕ್ಕೆ ಹುರುಪುಹೊಂದಿತು. ಅವರು ಧೃಡ ಸಂಕಲ್ಪರಾಗಿ ಸಾವನ್ನು ನಿಶ್ಚಯಿಸಿ ಯುದ್ಧಕ್ಕೆ ನಿಂತರು.
ನೊಂದನವನಿಪ ನಿಂದು ಪಾರ್ಥನ
ಕೊಂದು ತೋರುವೆನೆಂದು ರವಿಸುತ
ನೊಂದು ಕಡೆಯಲಿ ಮೊಳಗಿದನು ಬಲು ಬಿಲ್ಲ ಜೇವಡೆದು |
ಒಂದು ಕಡೆಯಲಿ ಮಸಗಿದರು ಗುರು
ನಂದನನು ವೃಷಸೇನ ಸೈಂಧವ
ರೊಂದು ಕಡೆಯಲಿ ಭೀಷ್ಮ ಕೃಪ ದುಶ್ಶಾಸನಾದಿಗಳು || ೭೮ ||
ಪದವಿಭಾಗ-ಅರ್ಥ: ನೊಂದನು+ ಅವನಿಪನಿ+ ಇಂದು ಪಾರ್ಥನಕೊಂದು ತೋರುವೆನು+ ಎಂದು ರವಿಸುತನು+ ಒಂದು ಕಡೆಯಲಿ ಮೊಳಗಿದನು ಬಲು ಬಿಲ್ಲ ಜೇವಡೆದು, ಒಂದು ಕಡೆಯಲಿ ಮಸಗಿದರು= ಮುತ್ತಿದರು->. ಗುರುನಂದನನು ವೃಷಸೇನ ಸೈಂಧವರು+ ಒಂದು ಕಡೆಯಲಿ ಭೀಷ್ಮ ಕೃಪ ದುಶ್ಶಾಸನಾದಿಗಳು
ಅರ್ಥ: ರಾಜ ಕೌರವನು ಬಾಣದ ಪಟ್ಟಿನಿಂದ ನೊಂದನು. ರವಿಸುತ ಕರ್ಣನು ತನ್ನ ದೊಡ್ಡ ಬಿಲ್ಲನ್ನು ಜೇಂಕಾರ ಮಾಡಿ ಇಂದು ಪಾರ್ಥನನ್ನು ಕೊಂದು ತೋರಿಸುತ್ತೇನೆ ಎಂದು ಒಂದು ದಿಕ್ಕಿನಲ್ಲಿ ಆರ್ಭಟಿಸಿದನು. ಮತ್ತೊಂದು ಕಡೆಯಲ್ಲಿ ಮಸಗಿದರು ಗುರುನಂದನ ಅಶ್ವತ್ಥಾಮ, ವೃಷಸೇನ, ಸೈಂಧವರು, ಮತ್ತೆ ಇನ್ನೊಂದು ಕಡೆಯಲ್ಲಿ ಭೀಷ್ಮ, ಕೃಪ, ದುಶ್ಶಾಸನ ಮೊದಲಾದವರು ಅರ್ಜುನನ್ನು ಮುತ್ತಿದರು.
ಗುರು ಚಡಾಳಿಸಿ ಹೊಕ್ಕನೊಮ್ಮಿಂ
ಗುರವಣಿಸಿದನು ಬಾಹ್ಲಿಕನು ಭಾ
ಸುರ ಕಳಿಂಗ ಸುಕೇತು ಭೂರಿಶ್ರವನು ದುಸ್ಸಹನು |
ನರನ ಮುತ್ತಿದರೊಂದು ಕಡೆಯಲಿ
ತೆರಳಿಕೆಯ ತೇರಿನಲಿ ಬಲ ಮೋ
ಹರಿಸಿ ಕವಿದುದು ಸುತ್ತ ಮುತ್ತಿತು ಕಲಿ ಧನಂಜಯನ || ೭೯ ||
ಪದವಿಭಾಗ-ಅರ್ಥ: ಗುರು ಚಡಾಳಿಸಿ(ಉಗ್ರವಾಗಿ, ಸಿಟ್ಟಿನಿಂದ) ಹೊಕ್ಕನು+ ಒಮ್ಮಿಂಗೆ- ಆಕೂಡಲೆ+ ಉರವಣಿಸಿದನು ಬಾಹ್ಲಿಕನು ಭಾಸುರ ಕಳಿಂಗ ಸುಕೇತು ಭೂರಿಶ್ರವನು ದುಸ್ಸಹನು ನರನ ಮುತ್ತಿದರೊಂದು ಕಡೆಯಲಿ ತೆರಳಿಕೆಯ(ಹೊರಡುತ್ತಿರುವ) ತೇರಿನಲಿ ಬಲ(ಸೈನ್ಉ) ಮೋಹರಿಸಿ (ಆವರಿಸಿ) ಕವಿದುದು (ಮುತ್ತಿತು) ಸುತ್ತ ಮುತ್ತಿತು ಕಲಿ(ಶೂರ) ಧನಂಜಯನ
ಅರ್ಥ: ಗುರು ದ್ರೋಣನು ಸಿಟ್ಟಿನಿಂದ) ಹೊಕ್ಕನು ಆ ಕೂಡಲೆ ವೀರಾವೇಶಹೊಂದಿದನು. ಬಾಹ್ಲಿಕನು, ಶೋಭಿಸುತ್ತಿದ್ದ ಕಳಿಂಗನು, ಸುಕೇತು, ಭೂರಿಶ್ರವನು, ದುಸ್ಸಹನು, ಇವರೆಲ್ಲಾ ಪಾರ್ಥನನ್ನು ಒಂದು ಕಡೆಯಿಂದ ಮುತ್ತಿದರು. ವೇಗವಾಗಿ ಚಲಿಸುವತ್ತಿರುವ ರಥದಲ್ಲಿ ರಥಕರು ಮತ್ತು ಸೈನ್ಯ ಸುತ್ತ ಆವರಿಸಿಕೊಂಡು ಶೂರ ಧನಂಜಯನನ್ನು ಮುತ್ತಿತು.
ಅಂಗವಿಸಿತರಿ ಸೇನೆ ಲೋಕವ
ನುಂಗಿ ಕುಣಿಯಲು ಬಗೆವ ಭರ್ಗನ
ರಂಗಭೂಮಿಯ ತೊಳೆವ ಜಲಧಿಯ ಜೋಕೆಯಂದದಲಿ |
ಭಂಗಿತರ ಮರುವಲಗೆಯಲಿ ಸ
ರ್ವಾಂಗಬಲ ಜೋಡಿಸಿತು ನಮ್ಮುಳಿ
ವಿಂಗೆ ಹದನೇನೆನುತ ಮತ್ಸ್ಯನ ಸೂನು ಚಿಂತಿಸಿದ || ೮೦ ||
ಪದವಿಭಾಗ-ಅರ್ಥ: ಅಂಗವಿಸಿತು (ಅಂಗವಿಸು-ಮೇಲೆ ಬೀಳು.)+ ಅರಿ ಸೇನೆ, ಲೋಕವ ನುಂಗಿ ಕುಣಿಯಲು ಬಗೆವ ಭರ್ಗನ (ಶಿವನ) ರಂಗಭೂಮಿಯ ತೊಳೆವ ಜಲಧಿಯ ಜೋಕೆಯಂದದಲಿ, ಭಂಗಿತರ (ಸೋತವರ) ಮರುವಲಗೆಯಲಿ ಸರ್ವಾಂಗಬಲ ಜೋಡಿಸಿತು ನಮ್ಮ+ ಉಳಿವಿಂಗೆ ಹದನೇನು+ ಎನುತ ಮತ್ಸ್ಯನ ಸೂನು (ಮತ್ಸ್ಯನ ಮಗ - ವಿರಾಟನ ಮಗ) ಚಿಂತಿಸಿದ.
ಅರ್ಥ:ಅರ್ಜುನನ್ನು ಶತ್ರುಸೇನೆಯು ಆಕ್ರಮಿಸಿ ಮೇಲೆ ಬಿದ್ದತು. ಅದು ಲೋಕವನ್ನೇ ನುಂಗಿ ಕುಣಿಯಲು ಅಪೇಕ್ಷಿಸಿದ ತಾಂಡವ- ಶಿವನ ರಂಗಭೂಮಿಯನ್ನು ತೊಳೆಯುವ ಸಮುದ್ರದ ವೈಖರಿಯಲ್ಲಿತ್ತು. ಸೋತವರ ಮರು ಆಕ್ರಮಣದಲ್ಲಿ ದುರ್ಯೋಧನನ ಸರ್ವಾಂಗಬಲ- ಸೈನ್ಯ ಜೋಡಿಸಿಕೊಂಡು ನಿಂತಿತು. ಇದನ್ನು ನೋಡಿ ವಿರಾಟನ ಮಗ 'ಈಗ ನಮ್ಮ ಜೀವ ಉಳಿಯಲು ಉಪಾಯವೇನು,' ಎಂದು ಚಿಂತೆಗೆ ಒಳಗಾದ. ಅವನು ಇನ್ನು ನಾವು ಬದುಕಿ ಉಳಿಯುವಂತಿಲ್ಲ ಎಂದು ಭಾವಿಸಿದ.

ಪಾರ್ಥನಿಂದ ಸಂನ್ಮೋಹನಾಸ್ತ್ರ ಪ್ರಯೋಗ[ಸಂಪಾದಿಸಿ]

ನೆರೆದ ತಿಮಿರದ ಥಟ್ಟು ಸೂರ್ಯನ
ತೆರಳಿಚುವವೊಲ್ ಮೇಘ ಘಟೆಗಳು
ಮುರಿದು ಮೋಹರವೌಕಿ ಪವನನ ಸೆರಗ ಹಿಡಿವಂತೆ
ತೆರಳೊದತ್ತಂಬರಿಸಿ ಕುರುಬಲ
ವೊರಲಿ ಹೆಣನನು ತುಳಿದು ಮೇಲ
ಬ್ಬರಿಸಿ ಬರೆ ಸನ್ಮೋಹನಾಸ್ತ್ರವ ಹೂಡಿದನು ಪಾರ್ಥ ೮೧
ಪದವಿಭಾಗ-ಅರ್ಥ: ನೆರೆದ ತಿಮಿರದ ಥಟ್ಟು ಸೂರ್ಯನ ತೆರಳಿಚುವವೊಲ್ ಮೇಘ ಘಟೆಗಳು ಮುರಿದು ಮೋಹರವ+ ಔಕಿ ಪವನನ ಸೆರಗ ಹಿಡಿವಂತೆ ತೆರಳಿ+ ಒದತ್ತಂಬರಿಸಿ ಕುರುಬಲ ವೊರಲಿ ಹೆಣನನು ತುಳಿದು ಮೇಲೆ+ ಉಬ್ಬರಿಸಿ ಬರೆ, ಸನ್ಮೋಹನಾಸ್ತ್ರವ ಹೂಡಿದನು ಪಾರ್ಥ.
  • ನೆರೆದ ತಿಮಿರದ (ಕತ್ತಲೆ) ಥಟ್ಟು (ಗಾಢತೆ) ಸೂರ್ಯನ ತೆರಳಿಚುವವೊಲ್ ಮೇಘ ಘಟೆಗಳು ಮುರಿದು ಮೋಹರವ (ಸೇನೆಯನ್ನು)+ ಔಕಿ ಪವನನ (ವಾಯು)ಸೆರಗ ಹಿಡಿವಂತೆ ತೆರಳಿ+ ಒದತ್ತಂಬರಿಸಿ ಕುರುಬಲ (ಸೇನೆ) ವೊರಲಿ (ಆರ್ಬಟಿಸಿ) ಹೆಣನನು ತುಳಿದು ಮೇಲೆ+ ಉಬ್ಬರಿಸಿ ಬರೆ, ಸನ್ಮೋಹನಾಸ್ತ್ರವ ಹೂಡಿದನು ಪಾರ್ಥ.
ಅರ್ಥ:ಅತಿಯಾಗಿ ತುಂಬಿದ ದಟ್ಟೈಸಿದ ಕತ್ತಲೆಯ ಥಟ್ಟು ಸೂರ್ಯನನ್ನೇ ಓಡಿಸುವಂತೆ, ಆನೆಗಳಂತಿರುವ ಮೇಘದ ಸೇನೆಯು ವಾಯುವನ್ನು ಮುರಿದು ಔಕಿ ಒತ್ತಿ ಅವನ ಸೆರಗನ್ನು ಹಿಡಿವಂತೆ, ನುಗ್ಗಿ ಒತ್ತಾಗಿ ಆವರಿಸಿ ಕೌರವನ ಸೇನೆ ಆರ್ಭಟಿಸಿ ಹೆಣಗಳನ್ನು ತುಳಿದು ದಾಟಿ ಅರ್ಜುನನ ಮೇಲೆ ನುಗ್ಗಿ ಬರಲು ಪಾರ್ಥನು ಸನ್ಮೋಹನಾಸ್ತ್ರವನ್ನು ಹೂಡಿದನು .
ಎಸಲು ಸನ್ಮೋಹನದ ಶರ ಪಸ
ರಿಸಿತು ಬಲದಲಿ ಬಹಳ ನಿದ್ರಾ
ವ್ಯಸನ ವಿಹ್ವಲಿತಾಂತರಂಗರು ಮೈಯ್ಯನೊಲೆದೊಲೆದು |
ಉಸುರ ಸಂಚದ ನಾಡಿಯವಗಾ
ಹಿಸಲು ಕೊರೆದರು ಗುರುಕಿಡುತ ತಲೆ
ಮುಸುಕಿನಲಿ ನೆರೆ ತೆಕ್ಕೆಗೆಡೆದುದು ನಿಖಿಳ ಕುರುಸೇನೆ || ೮೨ ||
ಪದವಿಭಾಗ-ಅರ್ಥ: ಎಸಲು= ಹೊಡೆಯಲು, ಸನ್ಮೋಹನದ ಶರ ಪಸರಿಸಿತು ಬಲದಲಿ (ಸೇನೆಯಲ್ಲಿ) ಬಹಳ ನಿದ್ರಾವ್ಯಸನ ವಿಹ್ವಲಿತ+ ಅಂತರಂಗರು (ಕಂಗೆಟ್ಟ ಮನಸ್ಸಿನವರಾಗಿ) ಮೈಯ್ಯನು+ ಒಲೆದು+ ಒಲೆದು ಉಸುರ ಸಂಚದ ನಾಡಿಯವ ಗಾಹಿಸಲು(ಮುಳುಗುವ) ಕೊರೆದರು ಗುರುಕಿಡುತ (ಗೊರಕೆ) ತಲೆಮುಸುಕಿನಲಿ (ತಲೆಯನ್ನು ಮುಂದಕ್ಕೆ ಬಗ್ಗಿಸಿ ಮುಸುಕು ಹಾಕಿದಂತೆ ಕಂಡರು) ನೆರೆ- (ಹೆಚ್ಚು) ತೆಕ್ಕೆಗೆಡೆದುದು (ತೆಕ್ಕೆಗೆಟ್ಟು= ಸುರುಳಿಯಾಗು. 2. ರಾಶಿಯಾಗು. 3. ಒಂದರೊಡನೊಂದು ಬೆರೆ.) ನಿಖಿಳ= ಎಲ್ಲಾ ಕುರುಸೇನೆ.
  • (ಕವಿಗೆ, ಗ್ರಾಮ್ಯ ದೇಶಿ ಮಾರ್ಗ ಎಲ್ಲಾಬಗೆಯ ಪದಗಳ ಆಳ ಜ್ಞಾನ ಇರುವುದನ್ನು ಕಾಣಬಹುದು. ಅವನಿಗೆ ಭಾವ ಅಭಿವ್ಯಕ್ತಿಗೆ ಕನ್ನಡ ಪದಗಳ ಬರ ಇಲ್ಲ.)
ಅರ್ಥ:ಅರ್ಜುನನು ಸನ್ಮೋಹನದ ಅಸ್ತ್ರವನ್ನು ಪ್ರಯೋಗಿಸಲು, ಅದು ಎಲ್ಲಾ ಸೇನೆಯಲ್ಲಿಯೂ ಆವರಿಸಿತು. ಆಗ ಸೇನೆಯ ಎಲ್ಲಾ ಭಟರೂ ಅತಿನಿದ್ರೆಯ ಜಡತೆಯ ತೊಂದರೆಯಿಂದ ಕಂಗೆಟ್ಟ ಮನಸ್ಸಿನವರಾಗಿ ಮೈಯ್ಯನ್ನು ಒಲೆದು- ಒಲೆದು, ಉಸುರನ್ನು ಮೆಲ್ಲನೆ ಬಿಡುತ್ತಾ, ನಾಡಿಯು ಮೆಲ್ಲನೆ ಬಡಿಯಲು, ಎಲ್ಲಾ ಕುರುಸೇನೆ ಗೊರಕೆಯನ್ನು ಗುರುಕಿಡುತ ಕೊರೆದರು; ಅವರು ತಲೆಮುಸುಕು ಹಾಕಿದಂತೆ ತಲೆಯನ್ನು ಬಗ್ಗಿಸಿದರು ಮತ್ತು ನಿದ್ದೆಯಲ್ಲಿ ಸುರುಳಿಯಾಗಿ ರಾಶಿಯಾಗಿ ಬಿದ್ದರು. (ಗೊರಕೆ ಹೊಡೆದರು- ಗೊರಕೆ ಕೊರೆದರು. ಗೊರಕೆ ಕೊರೆಯುವುದು ಪದವೂ ರೂಢಿಯಲ್ಲಿದೆ.)
ತನುವನೊಲೆದವು ದಡದಡಿಸಿ ಕಿವಿ
ಗೊನೆಯ ಜೋಲಿಸಲಲ್ಲಿ ಮಡಿಗಾ
ಲಿನಲಿ ಕುಸಿದವು ಕೊರಳ ಮರಳಿಚಿ ಕೈಯ್ಯನೊಳಗಿಟ್ಟು |
ತೊನೆದು ಕೆಡೆದವು ಜೋಧರಾಗಳು
ಕನಲಿ ಕೆಡೆದರು ಗುರು ನದೀಜರ
ಘನ ಬಲಂಗಳೊಳಯುತ ಕೋಟಿ ಗಜಂಗಳುರುಳಿದವು || ೮೩ ||
ಪದವಿಭಾಗ-ಅರ್ಥ:(ಕದುರೆಗಳು) ತನುವನು+ ಒಲೆದವು ದಡದಡಿಸಿ ಕಿವಿಗೊನೆಯ ಜೋಲಿಸು+ ಅಲ್ಲಿ ಮಡಿಗಾಲಿನಲಿ ಕುಸಿದವು ಕೊರಳ ಮರಳಿಚಿ (ಕೊರಳ ಮಡಿಚಿ); ಕೈಯ್ಯನು+ ಒಳಗಿಟ್ಟು ತೊನೆದು ಕೆಡೆದವು (ಬಿದ್ದವು) ಜೋಧರು (ಯೋಧರು)+ ಆಗಳು; ಕನಲಿ (ಸಿಟ್ಟಿನಿಂದ) ಕೆಡೆದರು (ಬಿದ್ದರು) ಗುರು ನದೀಜರು+ ಘನ ಬಲಂಗಳೊಳು+ ಅಯುತ ಕೋಟಿ ಗಜಂಗಳು+ ಉರುಳಿದವು.
ಅರ್ಥ: ಕದುರೆಗಳು ದೇಹವನ್ನು ದಡದಡಿಸಿ ನಿದ್ದೆಯ ಜೋಂಪಜನಲ್ಲಿ ಒಲೆದವು. ಅವು ಜೋಂಪಿನಲ್ಲಿ ತಮ್ಮ ಕಿವಿಗೊನೆಯ ಜೋಲಿಸಿಸಿದವು, ಮತ್ತೆ ಅಲ್ಲಿ ಕಾಲನ್ನು ಮಡಿಸಿ, ಮಡಿಗಾಲಿನಲಿ ಕೊರಳ ಮಡಿಚಿ ನೆಲಕ್ಕೆ ಕುಸಿದವು; ಆಗ ಯೋಧರು ಕೈಯ್ಯನ್ನು ಒಳಗಿಟ್ಟು ತೊನೆದು ಕೆಳಗೆ ಬಿದ್ದರು. ಗುರು ದ್ರೋಣರು ಮತ್ತು ನದೀಜರಾದ ಭೀಷ್ಮರು ಸಂಮೊಹನ ಅಸ್ತ್ರ ಉಪಯೋಗಿಸಿದ್ದಕ್ಕಾಗಿ ಸಿಟ್ಟು ಮಾಡಿದರು ಆದರೆ ನಿದ್ದೆಯ ಜೋಂಪಿನ್ನಿ ಅಲ್ಲಿಯೇ ಕೆಡೆದು ಮಲಗಿದರು. ಆ ದೊಡ್ಡ ಸೈನ್ಯದಲ್ಲಿ ಸಾವರಾರುಕೋಟಿ ಆನೆಗಳು ನಿದ್ದೆಯಲ್ಲಿ ಉರುಳಿ ನೆಲಕ್ಕೆ ಬಿದ್ದವು.
ದೃಗುಯುಗಳವರೆದೆರೆಯೆ ರೋಮಾ
ಳಿಗಳು ತೆಕ್ಕೆಯ ಸಾರೆ ಕೊರಳರೆ
ಮುಗುಳೆ ಹಿಂಗಾಲ್ಗೊಂಡು ಖುರವನು ತೂಗಿಯೊಲೆದೊಲೆದು |
ಬಿಗುವು ಸಹಿತವೆ ಹೊನ್ನ ಮರಗೋ
ಡುಗಳ ಮೇಲಡಗೆಡೆದು ನಿದ್ರಾ
ಮುಗುದರಾದರು ರಾವುತರು ತೂಕಡಿಸಿದವು ತುರಗ || ೮೪ ||
ಪದವಿಭಾಗ-ಅರ್ಥ: ದೃಗುಯುಗಳವು+ ಅರೆ+ ದೆ+ ತೆರೆಯೆ ರೋಮ+ ಆಳಿಗಳು (ರೋಮರಾಶಿಗಳು) ತೆಕ್ಕೆಯ ಸಾರೆ(ಮಡಚಿದವು) ಕೊರಳು+ ಅರೆಮುಗುಳೆ ಹಿಂಗಾಲ್ಗೊಂಡು ಖುರವನು ತೂಗಿ+ ಯ+ ಒಲೆದೊಲೆದು ಬಿಗುವು ಸಹಿತವೆ ಹೊನ್ನ ಮರಗೋಡುಗಳ ಮೇಲೆ+ ಅಡಗೆಡೆದು ನಿದ್ರಾಮುಗುದರಾದರು ರಾವುತರು ತೂಕಡಿಸಿದವು ತುರಗ.
ಅರ್ಥ:ಅರ್ಜುನನ ಸಂಮೊಹನಾಸ್ತ್ರದಿಂದ ನಿದ್ದೆಯ ಪರಿಣಾಮವುಂಟಾಯಿತು. ಕುದುರೆ ಮತ್ತು ರಾವುತರ ಕಣ್ಣುಗಳು ಅರೆ ತೆರೆಯಲು, ರೋಮಗಳು ಮಡಚಿದವು, ಕೊರಳು ಅರೆಬಾಗಿದವು ಹಿಂಗಾಲನ್ನು ಎತ್ತಿ ಖುರವನು- ಗೊರಸನ್ನು ತೂಗಿ ಒಲೆದೊಲೆದು ಬಿಗಿದ ಹಗ್ಗದ ಸಹಿತವೆ ಹೊನ್ನ ಮರಗೋಡುಗಳ ಮೇಲೆ ಅಡ್ಡಬಿದ್ದರು. ರಾವುತರು ನಿದ್ರೆಯಿಂದ ಸಾಹಸ ಸಿಟ್ಟು ಬಿಟ್ಟು ಮುಗ್ದರಾದರು. ಹುದುರೆಗಳು ತೂಕಡಿಸಿದವು.
ಬಿಲು ಸೆಳೆಯೆ ಕೈದುಗಳು ಕೈಯಿಂ
ಚಲಿಸಲೊಬ್ಬರನೊಬ್ಬರತ್ತಲು
ಮಲಗಿ ಬೆಂಬತ್ತಳಿಕೆ ಬದಿಯೊಳಗಡಸಿ ತೋಳುಗಳ |
ತಲೆಯೊಳಾನಿಸಿ ಗುರುಗುರಿಸಿ ರಥ
ದೊಳಗೆ ಸಾರಥಿವೆರಸಿ ನಿದ್ರಾ
ಕುಳರು ಜೊಮ್ಮಿನ ಮೇಲೆ ಮೈಮರೆದಿರ್ದರತಿರಥರು || ೮೫ ||
ಪದವಿಭಾಗ-ಅರ್ಥ: ಬಿಲು ಸೆಳೆಯೆ ಕೈದುಗಳು ಕೈಯಿಂ ಚಲಿಸಲೊಬ್ಬರನು+ ಒಬ್ಬರ+ ಅತ್ತಲು ಮಲಗಿ ಬೆಂಬತ್ತಳಿಕೆ ಬದಿಯೊಳಗೆ+ ಅಡಸಿ ತೋಳುಗಳ ತಲೆಯೊಳು+ ಆನಿಸಿ ಗುರುಗುರಿಸಿ ರಥದೊಳಗೆ ಸಾರಥಿವೆರಸಿ ನಿದ್ರ+ ಆಕುಳರು ಜೊಮ್ಮಿನ ಮೇಲೆ ಮೈ+ಮರೆದಿರ್ದರು+ ಅತಿರಥರು
ಅರ್ಥ:ಅತಿರಥರು ಬಿಲ್ಲು ಅದರ ದಾರ ತಪ್ಪಿ ಸೆಳೆದು- ಸೆಟೆದು ನೆಟ್ಟಗಾಯಿತು, ಆಯುಧಗಳು ಕೈಯಿಂದ ಜಾರಿದವು; ಆಗ ಒಬ್ಬರನು ಮತ್ತೊಬ್ಬರ ಬದಿಗೆ - ಮೇಲೆ ಮಲಗಿದರು; ಅವರ ಬೆನ್ನ ಬತ್ತಳಿಕೆ ಬದಿಯೊಳಗೆ ಅಡಗಿತು. ಅವರ ತೋಳುಗಳ ತಲೆಯನ್ನು ಆನಿಸಿದವು; ಆಗ ಅವರು ಗುರುಗುರಿಸಿ ಗೊರಕೆಯೊಡನೆ ರಥದೊಳಗೆ ಇರುವಂತೆಯೇ ಸಾರಥಿಯ ಜೊತೆಗೇ ನಿದ್ರೆಯು ಆವರಿಸಿದ ಜೊಂಪಿನಲ್ಲಿ ಜೊಂಪಿನಮೇಲೆ ಮೈಮರೆತು ಒರಗಿದರು.
ಸರಳ ಸೊಕ್ಕವಗಡಿಸಿ ಸಲೆ ಮೈ
ಮರೆದನಿತ್ತಲು ದ್ರೋಣ ರಥದಲಿ
ಪರಮ ನಿದ್ರಾಗುಪ್ತನಾದನು ತನ್ನ ಮಗ ಸಹಿತ |
ಕರದ ಬಿಲು ಶರ ಸರಿಯೆ ಕಂಗಳು
ಮುರಿಯೆ ಕರ್ಣನು ಕೆನ್ನೆಗೆದೆಯೊಳು
ದುರುಳ ದುರ್ಯೋಧನ ಸಹಿತ ಮೈಮರೆದುದರಿಸೇನೆ || ೮೬ ||
ಪದವಿಭಾಗ-ಅರ್ಥ: ಸರಳ ಸೊಕ್ಕು+ ಅವಗಡಿಸಿ ಸಲೆ ಮೈಮರೆದನು+ ಇತ್ತಲು ದ್ರೋಣ ರಥದಲಿ, ಪರಮ ನಿದ್ರಾಗುಪ್ತನಾದನು ತನ್ನ ಮಗ ಸಹಿತ, ಕರದ ಬಿಲು ಶರ ಸರಿಯೆ ಕಂಗಳು ಮುರಿಯೆ ಕರ್ಣನು ಕೆನ್ನೆಗೆ+ ಎದೆಯೊಳು ದುರುಳ ದುರ್ಯೋಧನ ಸಹಿತ ಮೈಮರೆದುದು+ ಅರಿಸೇನೆ
ಅರ್ಥ:ಇತ್ತ ಒಂದುಕಡೆ ದ್ರೋಣನು ತನ್ನ ಭಾಣಗಳ ಸೊಕ್ಕಿನ ಶಕ್ತಿಯನ್ನು ತಗ್ಗಿಸಿ ಪೂರಾ ಮೈಮರೆತು ರಥದಲ್ಲಿ ಮಲಗಿದನು. ಅವನು ತನ್ನ ಮಗ ಅಶ್ವತ್ಥಾಮನ ಸಹಿತ ಪೂರಾ ನಿದ್ರೆಯಲ್ಲಿ ಮುಳುಗಿದನು. ಅವನ ಕೈಯಲ್ಲಿದ್ದ ಬಿಲ್ಲು ಶರ- ಬಾಣಗಳು, ಕಣ್ಣುಗಳು ಮುಚ್ಚಲು ಪಕ್ಕಕ್ಕೆ ಸರಿಯಿತು; ಕರ್ಣನು ತಲೆಜೋತು ಕೆನ್ನೆಗೆ ಎದೆಯನ್ನು ಕೊಟ್ಟನು; ದುರುಳ ದುರ್ಯೋಧನನ ಸಹಿತ ಶತ್ರು ಸೇನೆಯು ನಿದ್ದೆಯಲ್ಲಿ ಮೈಮರೆತಿತು.
ಸೇನೆ ಮೈಮರೆದೊರಗಿದದಟ ನಿ
ಧಾನವೊಗೆದರುಹಿತ್ತು ನಿದ್ರಾ
ಮಾನ ವಿಭ್ರಮಿಸಿತ್ತು ಬಲು ಸಂಸಾರದಂದದಲಿ |
ಏನ ಹೇಳುವೆನದನು ಕದನದ
ಕಾನನದೊಳತಿರಥರು ವಿಜಯ ವಿ
ಹೀನಬಲ ಸನ್ಮೋಹನಾಸ್ತ್ರದ ಬಾಧೆಗೊಳಗಾಯ್ತು || ೮೭ ||
ಪದವಿಭಾಗ-ಅರ್ಥ: ಸೇನೆ ಮೈಮರೆದು+ ಒರಗಿದ+ ಅದಟ ನಿಧಾನವೊಗೆದು+ ಅರುಹು+ ಇತ್ತು (ಅರುಹು- ಹೇಳು; ತಿಳಿವಳಿಕೆ.) ನಿದ್ರಾಮಾನ ವಿಭ್ರಮಿಸಿತ್ತು (ವಿಭ್ರಮ= ನೆನಪಿನ ಶಕ್ತಿ ಇಲ್ಲವಾಗುವುದು, ವಿಜೃಂಭಣೆ.)ಬಲು ಸಂಸಾರದಂದದಲಿ (ಲೋಕವನ್ನು ಮುಸುಕಿದ ಬಲಿಷ್ಠ ಮಾಯೆಯಂತೆ)+ ಏನ ಹೇಳುವೆನು+ ಅದನು ಕದನದ ಕಾನನದೊಳು (ಯುದ್ಧವೆಂಬ ಅರಣ್ಯದಲ್ಲಿ ಅತಿರಥರು ಮತ್ತು ವಿಜಯ ಸಾದಿಸಲಾರದೆ ಸೈನ್ಯ)+ ಅತಿರಥರು ವಿಜಯ ವಿಹೀನಬಲ (ವಿಜಯ ಸಾದಿಸಲಾರದೆ ಸೈನ್ಯ) ಸನ್ಮೋಹನಾಸ್ತ್ರದ ಬಾಧೆಗೊಳಗಾಯ್ತು.
ಅರ್ಥ: ಹೀಗೆ ಸಂಮೋಹನ ಅಸ್ತ್ರದಿಂದ ಸೇನೆಯು ಮೈಮರೆತು ನಿದ್ದೆಯಲ್ಲಿ ತನಗೆ ಒರಗಿದ ಶೌರ್ಯದ ಜಾಗ್ರತೆ ಮತ್ತು ತಿಳಿವಳಿಕೆ ಬಿಟ್ಟುಕೊಟ್ಟು, ನಿದ್ರಾಮಾನ- ಮನಸ್ಸಿನ ನಿದ್ದೆ ಲೋಕವನ್ನು ಮುಸುಕಿದ ಬಲಿಷ್ಠ ಮಾಯೆಯಂತೆ ವಿಭ್ರಮಿಸುತ್ತು- ವಿಜಯ ಸಾಧಿಸಿತ್ತು, ಅದನ್ನು ಏನೆಂದು ಹೇಳಲಿ! ಯುದ್ಧವೆಂಬ ಅರಣ್ಯದಲ್ಲಿ ಅತಿರಥರು ಮತ್ತು ವಿಜಯ ಸಾದಿಸಲಾರದೆ ಸೈನ್ಯ ಸನ್ಮೋಹನಾಸ್ತ್ರದ ಬಾಧೆಗೆ ಒಳಗಾಯಿತು.
ಕನಸು ಮೇಣೆಚ್ಚರು ಸುಷುಪ್ತಿಗ
ಳೆನಿಪವಸ್ಥಾ ತ್ರಿತಯದಲಿ ಜೀ
ವನು ವಿಸಂಚಿಸಿ ಬೀಳ್ವನಲ್ಲದೆ ಶರಕೆ ಸಿಲುಕುವನೆ |
ಇನಿತು ಬಲ ತೂಕಡಿಸಿ ಝೋಂಪಿಸಿ
ತನಿಗೆಡೆಯೆ ಭಾಗೀರಥೀ ನಂ
ದನನು ನಿರ್ಮಲನಾಗಿ ತೊಳ ತೊಳಗಿದನು ರಥದೊಳಗೆ || ೮೮ ||
ಪದವಿಭಾಗ-ಅರ್ಥ: ಕನಸು ಮೇಣ್+ ಎಚ್ಚರು ಸುಷುಪ್ತಿಗಳೆನಿಪ ಅವಸ್ಥಾ ತ್ರಿತಯದಲಿ ಜೀವನು ವಿಸಂಚಿಸಿ ಬೀಳ್ವನು+ ಅಲ್ಲದೆ ಶರಕೆ ಸಿಲುಕುವನೆ ಇನಿತು ಬಲ (ಸೈನ್ಯ) ತೂಕಡಿಸಿ ಝೋಂಪಿಸಿ ತನಿ+ಗೆ + ಕೆಡೆಯೆ (ದೇಹದ ಶಕ್ತಿಗುಂದಿ ಬಿದ್ದಿರಲು) ಭಾಗೀರಥೀ ನಂದನನು ನಿರ್ಮಲನಾಗಿ ತೊಳ ತೊಳಗಿದನು ರಥದೊಳಗೆ.
ಅರ್ಥ: ಅವಸ್ಥಾತ್ರಯದಲ್ಲಿ ಕನಸು,ಎಚ್ಚರ ಮತ್ತು ಸುಷುಪ್ತಿಗಳು ಎಂಬ ಮೂರು ಅವಸ್ಥಗಳು. ಇದರಲ್ಲಿ ಜೀವನು ಮೋಹಗಂಡು ಬೀಳುವನು. ಅದಲ್ಲದೆ ಜೀವನು ಶರಕ್ಕೆ ಸಿಲುಕುವನೆ? ಜೀವನು ಸಿಕ್ಕುವುದಿಲ್ಲ ಆದರೆ ದೇಹ ಮಾತ್ರಾ ಬಾಣಕ್ಕೆ ಸಿಗುವುದು. ಇಷ್ಟು ದೊಡ್ಡ ಸೈನ್ಯ ತೂಕಡಿಸಿ, ಝೋಂಪಿಸಿ, ಶಕ್ತಿಗುಂದಿ ಮಲಗಿರಲು, ಭಾಗೀರಥೀ ನಂದನ ಭೀಷ್ಮನು ಸಂಮೋಹನಕ್ಕೆ ಸಿಲುಕದೆ, ನಿರ್ಮಲನಾಗಿ- ಪರಿಶುದ್ಧನಾಗಿ ರಥದೊಳಗೆ ತೊಳ ತೊಳಗಿ ಶೋಭಿಸುತ್ತಿದ್ದನು.
ಎಣಿಸುವರೆ ಏಕಾದಶಾಕ್ಷೋ
ಹಿಣಿಯ ಬಲವನು ಪಾರ್ಥನೊಬ್ಬನೆ
ರಣದೊಳಗೆಡಹಿದನು ಮೋಹನ ಮಂತ್ರ ಬಾಣದಲಿ |
ಕುಣಿದು ಕುಸುಮದ ಸರಿವುಗಳ ಸಂ
ದಣಿಯನಮರರು ಸೂಸಿದರು ಫಲು
ಗುಣನು ರಥವನು ನೂಕಿದನು ನಿಜ ಮಹಿಪರಿದ್ದೆಡೆಗೆ || ೮೯ ||
ಪದವಿಭಾಗ-ಅರ್ಥ: ಎಣಿಸುವರೆ ಏಕಾದಶ+ ಅಕ್ಷೋಹಿಣಿಯ ಬಲವನು ಪಾರ್ಥನ+ ಒಬ್ಬನೆ ರಣದೊಳಗೆ ಕೆ(ಎ)ಡಹಿದನು ಮೋಹನಮಂತ್ರ ಬಾಣದಲಿ; ಕುಣಿದು ಕುಸುಮದ ಸರಿವುಗಳ ಸಂದಣಿಯನು+ ಅಮರರು ಸೂಸಿದರು; ಫಲುಗುಣನು ರಥವನು ನೂಕಿದನು ನಿಜ ಮಹಿಪರು+ ಇದ್ದೆಡೆಗೆ.
ಅರ್ಥ:ಈ ಘಟನೆಯನ್ನು ಗಮನಿಸಿವರೆ, ಹನ್ನೊಂದು ಅಕ್ಷೋಹಿಣಿಯ ಸಯನ್ನವನ್ನೂ ಪಾರ್ಥನು ಒಬ್ಬನೆ ಮೋಹನಮಂತ್ರ ಬಾಣದಿಂದ ಯುದ್ಧದಲ್ಲಿ ಕೆಡವಿದನು; ದೇವತೆಗಳು ಕುಣಿದು ಹೂವಿನ ಮಳೆಗಳ ರಾಶಿಯನ್ನು ಸೂಸಿದರು- ಚೆಲ್ಲಿದರು- ಸುರಿಸಿದರು; ಫಲ್ಗುಣನು ರಥವನ್ನು ತನ್ನ ಎದುರಿನ ರಾಜರು ಇದ್ದ ಕಡೆಗೆ ನೂಕಿದನು- ಚಲಿಸಿದನು.
ಇಳಿದು ದ್ರೋಣನ ಚರಣ ಕಮಲಂ
ಗಳಿಗೆ ತನ್ನಯ ನೊಸಲ ಚಾಚಿದ
ನಳವಿಯಲಿ ಭೀಷ್ಮಂಗೆ ಮೈಯಿಕ್ಕಿದನು ರಥದೊಳಗೆ |
ಸುಲಿದು ಕರ್ಣನ ಮುಕುಟ ಪಟ್ಟೆಯ
ಸೆಳೆದು ದುರ್ಯೋಧನನ ವಸ್ತ್ರವ
ಸುಲಲಿತಾಭರಣವನು ನೀ ತೆಗೆಯೆಂದನುತ್ತರಗೆ || ೯೦ ||
ಪದವಿಭಾಗ-ಅರ್ಥ: ಇಳಿದು ದ್ರೋಣನ ಚರಣ ಕಮಲಂಗಳಿಗೆ (ಪೂಜ್ಯರಾದವರ ಪಾದಗಳಿಗೆ ಪಾದಕಮಲ ಎನ್ನುವರು.ಕಮಲದಂತೆ ಕೋಮಲವಾದ ಪಾದ ಎಂದು)ತನ್ನಯ ನೊಸಲ (ಹಣೆಯ) ಚಾಚಿದನು+ ಅಳವಿಯಲಿ (ಅಳವು- ಶಕ್ತಿ, ವಿವೇಕದಿಂದ) ಭೀಷ್ಮಂಗೆ ಮೈಯಿಕ್ಕಿದನು, ರಥದೊಳಗೆ ಸುಲಿದು ಕರ್ಣನ ಮುಕುಟ ಪಟ್ಟೆಯ ಸೆಳೆದು ದುರ್ಯೋಧನನ ವಸ್ತ್ರವ ಸುಲಲಿತ ಆಭರಣವನು ನೀ ತೆಗೆಯೆಂದನು+ ಉತ್ತರಗೆ.
ಅರ್ಥ: ಅರ್ಜುನನು ರಥದಿಂದ ಇಳಿದು ದ್ರೋಣನ ಪಾದಕಮಲಗಳಿಗೆ ತನ್ನ ಹಣೆಯ ಚಾಚಿ ನಮಿಸಿದನು. ಮನಪೂರ್ವಕ ಭೀಷ್ಮನಿಗೆ ನೆಲದಮೇಲೆ ಮಲಗಿ ನಮಿಸಿದನು. ರಥದೊಳಗೆ ಮಲಗಿದ್ದ ಕರ್ಣನ ಸುಲಿದು (ಎಲ್ಲವನ್ನೂ ತೆಗೆದುಕೊಂಡು)ಮತ್ತು ಕಿರೀಟದ ಪಟ್ಟೆಯ ಸೆಳೆದು ತೆಗೆದುಕೊಂಡು, ದುರ್ಯೋಧನನ ವಸ್ತ್ರವನ್ನೂ ಸುಲಲಿತ ಆಭರಣವನ್ನೂ ನೀನು ತೆಗೆ ಎಂದು ಉತ್ತರನಿಗೆ ಹೇಳಿದನು.
ಧರಣಿಪಾಲರ ಮುಕುಟವನು ಕ
ತ್ತರಿಸಿ ದುಶ್ಶಾಸನನ ಘನ ಶಿರ
ವರದ ರತ್ನವನುಡಿದು ಭೂರಿಶ್ರವ ಜಯದ್ರಥರ ||
ಹೊರಳಿಚಿದನು ವಿಶೋಕ ಕುವರರ
ಹುರುಳುಗೆಡಿಸಿದನಖಿಳ ರಾಯರ
ಶಿರಕೆ ಭಂಗವ ಹೊರಿಸಿ ಫಲುಗುಣನಡರಿದನು ರಥವ || ೯೧ ||
ಪದವಿಭಾಗ-ಅರ್ಥ: ಧರಣಿಪಾಲರ ಮುಕುಟವನು ಕತ್ತರಿಸಿ, ದುಶ್ಶಾಸನನ ಘನ ಶಿರವರದ ರತ್ನವನು+ ಉಡಿದು ಭೂರಿಶ್ರವ ಜಯದ್ರಥರ ಹೊರಳಿಚಿದನು ವಿಶೋಕ ಕುವರರಹುರುಳುಗೆಡಿಸಿದನು+ ಅಖಿಳ ರಾಯರ ಶಿರಕೆ ಭಂಗವ ಹೊರಿಸಿ ಫಲುಗುಣನು+ ಅಡರಿದನು ರಥವ.
ಅರ್ಥ: ರಾಜರ ಮುಕುಟವನ್ನು ಕತ್ತರಿಸಿಕೊಂಡನು, ದುಶ್ಶಾಸನನ ಘನವಾದ ಶಿರದಲ್ಲಿದ್ದ ವರದ- ಶ್ರೇಷ್ಠ ರತ್ನವನು ಕಿತ್ತು, ಭೂರಿಶ್ರವ ಜಯದ್ರಥರನ್ನು ಹೊರಳಿಸಿದನು, ವಿಶೋಕ ರಾಜಕುಮಾರರ ಶಕ್ತಿಯನ್ನು ಗೆಡಿಸಿದನು; ಎಲ್ಲಾ ರಾಜರ ಶಿರಕ್ಕೆ ಸೋಲಿನ ಅವಮಾನವನ್ನು ಹೊರಿಸಿ, ಫಲ್ಗುಣನು ರಥವನ್ನು ಹತ್ತಿದನು.
ಫಲುಗುಣನ ನೇಮದಲಿ ರಥದಿಂ
ದಿಳಿದನುತ್ತರನವನಿಪನ ಕೋ
ಮಲ ಸುವಸ್ತ್ರಾಭರಣ ಕರ್ಣನ ಕೃಪನ ಗುರುಸುತನ |
ಸುಲಲಿತಾಂಬರ ರತ್ನಭೂಷಣ
ಗಳನು ಕೊಂಡಡರಿದನು ರಥವನು
ಬಿಲುದುಡುಕಿ ಗಾಂಗೇಯನಡಹಾಯ್ದನು ಧನಂಜಯನ || ೯೨ ||
ಪದವಿಭಾಗ-ಅರ್ಥ: ಫಲುಗುಣನ ನೇಮದಲಿ ರಥದಿಂದಿಳಿದನು+ ಉತ್ತರನು+ ಅವನಿಪನ ಕೋಮಲ ಸುವಸ್ತ್ರಾಭರಣ ಕರ್ಣನ ಕೃಪನ ಗುರುಸುತನ ಸುಲಲಿತಾಂಬರ ರತ್ನಭೂಷಣಗಳನು ಕೊಂಡಡೆ+ ಅರಿದನು(ಭೀಷ್ಮನು ತಿಳಿದನು.) ರಥವನು ಬಿಲು ದುಡುಕಿ ಗಾಂಗೇಯನು+ ಅಡಹಾಯ್ದನು ಧನಂಜಯನ/ ಅರ್ಜುನ
ಅರ್ಥ: ಫಲ್ಗುಣನ ಅಪ್ಪಣೆಯಂತೆ ಉತ್ತರನು ರಥದಿಂದ ಇಳಿದನು; ನಂತರ ರಾಜ ಕೌರವನ ಕೋಮಲವಾದ ಸುತ್ತಮ ವಸ್ತ್ರಾಭರಣಗಳನ್ನೂ, ಕರ್ಣನ, ಕೃಪನ, ಗುರುಸುತ ಅಶ್ವತ್ಥಾಮನ ಸುಲಲಿತವಾದ ಬಟ್ಟೆಗಳನ್ನೂ, ರತ್ನಭೂಷಣಗಳನ್ನೂ, ಎತ್ತಿಕೊಂಡಾಗ, ಗಾಂಗೇಯ ಭೀಷ್ಮನು ತಿಳಿದನು; ಅವನು ಇವರ ರಥವನ್ನು ಬಿಲ್ಲುಹಿಡಿದು ಧನಂಜಯನನ್ನ್ನು ಅಡ್ಡಹಾಕಿ ತಡೆದನು.
ಎರಡು ಶರದಲಿ ಚಾಪವನು ಕ
ತ್ತರಿಸಿ ಭೀಷ್ಮನ ನಿಲಿಸಿ ಕೌರವ
ಧರಣಿಪಾಲನ ಮುಕುಟವನು ಮೂರಂಬಿನಲಿ ಕಡಿದು |
ತಿರುಗಿದನು ಕಲಿಪಾರ್ಥ ನಗುತು
ತ್ತರ ಸಹಿತ ಬನ್ನಿಯಲಿ ಕೈದುವ
ನಿರಿಸಿ ಮುನ್ನಿನ ಹುಲು ರಥದಿ ನಿಜನಗರಿಗೈತಂದ || ೯೩ ||[೧][೨][೩][೪]
ಪದವಿಭಾಗ-ಅರ್ಥ: ಎರಡು ಶರದಲಿ ಚಾಪವನು (ಬಿಲ್ಲನ್ನು) ಕತ್ತರಿಸಿ ಭೀಷ್ಮನ ನಿಲಿಸಿ ಕೌರವ ಧರಣಿಪಾಲನ ಮುಕುಟವನು ಮೂರಂಬಿನಲಿ ಕಡಿದು ತಿರುಗಿದನು ಕಲಿಪಾರ್ಥ ನಗುತ+ ಉತ್ತರ ಸಹಿತ ಬನ್ನಿಯಲಿ ಕೈದುವನು+ ಇರಿಸಿ ಮುನ್ನಿನ ಹುಲು ರಥದಿ ನಿಜನಗರಿಗೆ+ ಐತಂದ
ಅರ್ಥ: ಆಗ ಅರ್ಜುನನು ಎರಡು ಬಾಣಗಳಿಂದ ಭೀಷ್ಮನ ಬಿಲ್ಲನ್ನು ಕತ್ತರಿಸಿ, ಭೀಷ್ಮನನ್ನು ಅಲ್ಲಿಯೇ ನಿಲ್ಲುವಂತೆ ಮಾಡಿ, ಕೌರವ ರಾಯನ ಕಿರೀಟವನ್ನು ಮೂರು ಬಾಣಗಳಿಂದ ಹೊಡೆದು ಕಡಿದು, ಶೂರ ಪಾರ್ಥನು ನಗುತ್ತಾ ಉತ್ತರನ ಸಹಿತ ಅಲ್ಲಿಂದ ಹಿಂತಿರುಗಿದನು. ಅವನು ಬನ್ನಿಯಮರದ ಬಳಿಬಂದು ಆಯಧಗಳನ್ನು ಮೊದಲಿನಂತೆಯೇ ಮರದ ಮೇಲೆ ಇರಿಸಿ, ವಿರಾಟನಗರದಿಂದ ಮೊದಲು ಬಂದಿದ್ದ ಸಾಮಾನ್ಯ ಹುಲು ರಥದಲ್ಲಿ ಉತ್ತರನೊಡನೆ ವಿರಾಟ ನಗರಕ್ಕೆ ಬಂದನು.
♠♠♠
♦♣♣♣♣♣♣♣♣♣♣♣♣♣♣♣♣♣♣♣♦

ನೋಡಿ[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಖರತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.
  3. ಸಾಹಿತ್ಯ ಪರಿಷತ್ ಕನ್ನಡ ನಿಘಂಟು
  4. ಸಿರಿಗನ್ನಡ ಅರ್ಥಕೋಶ -ಶಿವರಾಮ ಕಾರಂತ; ಹರ್ಷ ಮುದ್ರಣ ಪ್ರಕಟನಾಲಯ ಪುತ್ತೂರು.