ಅರ್ಥ: ಧೃತರಾಷ್ಟ್ರ ರಾಜನೇ ಕೇಳು, ಅಶ್ವತ್ಥಾಮನು ಕೃತವರ್ಮ, ಕೃಪರನ್ನು ಕಾರ್ಯ ಸಾಧಿಸಿದ ಸಂತಸದಿಂದ ಬಂದು ಬಂದು ಕಂಡನು. ನಂತರ ಅವರು ರಥವೇರಿ ಕುರುಭೂಪಾಲನು ಇರುವ ಸ್ಥಳಕ್ಕೆ ಬಂದರು. ಅಲ್ಲಿ ಆನಂದದ ಉಬ್ಬಿ ಅತಿಯಾದ ಮದದಿಂದ ಕೂಡಿದ ಜಯಪ್ರಚಂಡರಾದ ಅಶ್ವತ್ಥಾಮ, ಕೃತವರ್ಮ, ಕೃಪರು ಕೌರವನನ್ನು ಕಂಡರು.
ಅರ್ಥ:ಕೃಪಾದಿಗಳು ತಮ್ಮ ರಾಜನನ್ನು ಹೊಗಳಿ ಕರೆದಾಗ, ಕೌರವನ ಕುಡಿನೋಟ ಅಲುಗಾಡಿತು. ಮನಸ್ಸಿನ ಕಲ್ಲೋಲ ಹರಿಯಿತು/ ಹೋಯಿತು, ಪಂಚ ಇಂದ್ರಿಯಗಳ ಸಮೂಹ ಮೊನಚಾಯಿತು, ನಾಭಿಯವರಗೂ ಉಸಿರು ಬಂದಿತು. ಮುಖವನ್ನು ಸ್ವಲ್ಪ ಎತ್ತಿ, ರಾಜನು ನುಡಿದನು, 'ಇದು ಯಾರು? ನನ್ನ ಎದುರುಭಾಗದಲ್ಲಿ ವಿನಯದ ಸೇವೆಯ ಮಧುರ ವಚನ- ಮಾತು ಆಡುವವರು!' ಎಂದ.
ನಾವು ನಿಮ್ಮವರೆಮ್ಮ ಬೊಪ್ಪನ
ಭಾವ ಕೃಪ ಕೃತವರ್ಮನೀತನು
ದೇವರವಧರಿಸುವುದು ರಜನಿಯ ರಾಜಕಾರಿಯವ |
ನೀವು ಬಿನ್ನಹಮಾಡಬೇಹುದು
ಮಾವ ರಣಸಂಗತಿಯನಾತ್ಮ
ಸ್ತಾವಕರು ನಾವಲ್ಲವೆಂದನು ಕೃಪಗೆ ಗುರುಸೂನು || ೫ ||
ಪದವಿಭಾಗ-ಅರ್ಥ: ನಾವು ನಿಮ್ಮವರು+ ಎಮ್ಮ ಬೊಪ್ಪನ(ತಂದೆಯ) ಭಾವ ಕೃಪ, ಕೃತವರ್ಮನು+ ಈತನು; ದೇವರು (ರಾಜನು)+ ಅವಧರಿಸುವುದು (ಕೇಳಿಸಿಕೊಳ್ಳುವುದು)- ರಜನಿಯ(ಕತ್ತಲೆಯರಾತ್ರಿಯ) ರಾಜಕಾರಿಯವ ನೀವು (ಕೃಪನು) ಬಿನ್ನಹ (ಹೇಳಬೇಕು) ಮಾಡಬೇಹುದು ಮಾವ- ರಣಸಂಗತಿಯನು,+ ಆತ್ಮಸ್ತಾವಕರು (ಆತ್ಮಸ್ತುತಿ ಮಾಡಿಕೊಳ್ಳುವುದು) ನಾವಲ್ಲವು+ ಎಂದನು ಕೃಪಗೆ ಗುರುಸೂನು(ಅಶ್ವತ್ಥಾಮ).
ಅರ್ಥ:ಕೌರವನ ಪ್ರಶ್ನೆಗೆ ಅಶ್ವತ್ಥಾಮನು,'ನಾವು ನಿಮ್ಮವರು, ನನ್ನ ತಂದೆಯ ಭಾವ ಕೃಪನು ಇವನು; ಇವನು ಕೃತವರ್ಮನು. ದೇವರು (ರಾಜನು) ಕೇಳಿಸಿಕೊಳ್ಳುವುದು,' ಎಂದು ಹೇಳಿ, ಅಶ್ವತ್ಥಾಮನು ಕೃಪನಿಗೆ,'ಈ ದಿನದ ಕತ್ತಲೆ-ರಾತ್ರಿಯ ರಾಜಕಾರ್ಯದ ರಣಸಂಗತಿಯನ್ನು ಮಾವ- ನೀವು (ಕೃಪನು)ರಾಜನಿಗೆ ಹೇಳಬೇಕು. ನಾವು (ಅಶ್ವತ್ಥಾಮನು) ಆತ್ಮಸ್ತುತಿ ಮಾಡಿಕೊಳ್ಳುವವರು ಅಲ್ಲವು,' ಎಂದನು. (ನನ್ನ ಪೌರುಷವನ್ನು ನಾನೇ ಕೊಚ್ಚಿಕೊಳ್ಳುವುದಿಲ್ಲ)
ಅರ್ಥ:ಆಗ ಕೃಪನು ಕೌರವನಿಗೆ, ಏನನ್ನು ಹೇಳಲಿ ಒಡೆಯನೇ?, ಅಶ್ವತ್ಥಾಮನು ದ್ರೌಪದಿಯ ಐದು ಮಕ್ಕಳನ್ನೂ ನಾಶಮಾಡಿದನು. ಜೊತೆಗೆ ಸೃಂಜಯ ಶಿಖಂಡಿ ಪ್ರಮುಖರರ ನಾಶವನ್ನು ಮಾಡಿದನು. ಗರುಡನ ಸಂಚಾರದಲ್ಲಿ ಸರ್ಪಗಳ ಕುಲವು ಉಳಿಯುವುದೆ? ಪಾಂಚಾಲರ ಬಾಳೆಯತೋಟವನ್ನು ನಿನ್ನ ಆನೆ ಸವರಿತು ಏನು ಹೇಳಲಿ,' ಎಂದನು.
ಅರ್ಥ:ಕೌರವನು,'ಎಲೆ ಕೃಪಾಚಾರ್ಯರೇ, ಐವರು ವಿರೋಧಿಗಳು ಉಳಿದರು ಎನ್ನುವುದನ್ನು ಬಲ್ಲೆನು- ತಿಳಿದಿದ್ದೇನೆ. ಅದನು- ಕೃಷ್ನನು ಅತಿಶಯವಾದ ಕೃಪೆಯನ್ನು ಅವರಿಗೆ ಬಸಿದು-ಸುರಿಸಿ ಬೀಳುವನು/ತ್ಯಾಗಮಾಡುವನು. ಪಾಂಡವರದಳ ದ್ರೌಪದಿಯ ಕುಮಾರರ ಸಹಿತ ನಿಶ್ಶೇಷವಾಗಿ ನಾಶವಾಯಿತೇ? ಇನ್ನು ನನಗೆ ಅಶ್ವತ್ಥಾಮನು ಶ್ರೇಷ್ಠನಾಗಿರುವನು,' ಎಂದನು.
ಏನನೊದಗಿದ ನಮಗೆ ಗಂಗಾ
ಸೂನು ಭಾರದ್ವಾಜ ನಮಗೊಲಿ
ದೇನ ಮಾಡಿದ ನಮ್ಮ ಥಟ್ಟಿನ ಭದ್ರಗಜವೆಂಬ |
ಮಾನನಿಧಿ ರಾಧಾತನುಜನಿಂ
ದೇನು ಹರಿದುದು ಹರಿಬವನು ಗುರು
ಸೂನುವೇ ಮರಳಿಚಿದನೆಂದನು ಕೌರವರರಾಯ || ೯ ||
ಪದವಿಭಾಗ-ಅರ್ಥ:ಏನನು+ ಒದಗಿದ ನಮಗೆ ಗಂಗಾಸೂನು(ಭೀಷ್ಮ), ಭಾರದ್ವಾಜ(ದ್ರೋಣ) ನಮಗೆ+ ಒಲಿದು+ ಏನ ಮಾಡಿದ? ನಮ್ಮ ಥಟ್ಟಿನ(ಸೇನೆಯ) ಭದ್ರಗಜವೆಂಬ (ಬಲಿಷ್ಠ ಆನೆ) ಮಾನನಿಧಿ ರಾಧಾತನುಜನಿಂದ+ ಏನು ಹರಿದುದು(ಸಾಧನೆ ಆಯಿತು)? ಹರಿಬವನು(ಕರ್ತವ್ಯ, ಹೊಣೆಗಾರಿಕೆ, ಸಲ್ಲಬೇಕಾದ ಋಣ) ಗುರುಸೂನುವೇ ಮರಳಿಚಿದನೆಂದನು ಕೌರವರರಾಯ
ಅರ್ಥ:ಸಾಯುವ ಅಂಚಿನಲ್ಲಿದ್ದ ಕೌರವರರಾಯ,'ಮಹಾವೀರ ಗಂಗಾಸೂನು ಭೀಷ್ಮನು ನಮಗೆ ಏನನ್ನು ಒದಗಿಸಿದ, ಹತ್ತು ದಿನ ಯುದ್ಧಮಾಡಿದ ಅಷ್ಟೇ; ಭಾರದ್ವಾಜನಾದ ದ್ರೋಣನು ನಮಗೆ ಒಲಿದು ಏನನ್ನು ಮಾಡಿದ? ಐದು ದಿನ ಯುದ್ಧಮಾಡಿದ ಅಷ್ಟೇ! ನಮ್ಮ ಸೇನಯ ಭದ್ರಗಜವೆಂಬ ಮಾನನಿಧಿ ರಾಧಾತನಯ ಕರ್ಣನಿಂದ ಏನು ಸಾದನೆಯಾಯಿತು? (ಧನಕನಕ ಕೊಟ್ಟು ಸಾಕಿದ್ದಕ್ಕೆ- ಮಿತ್ರನಾಗಿದ್ದಕ್ಕೆ, ರಾಜನಿಗೆ ಅವನ ಯೋಧನಾಗಿ) ನಮಗೆ ಸಲ್ಲಬೇಕಾದ ಋಣವನ್ನು ಗುರುಸೂನು ಅಶ್ವತ್ಥಾಮನೇ ಮರಳಿಸಿದನು,' ಎಂದನು.
ಅರ್ಥ: ಕೌರವನಿಗೆ ಅಶ್ವತ್ಥಾಮನು ಕೈಮುಗಿದು , 'ನಮ್ಮ ಋಣ ಸಂದಾಯವಾಯಿತೇ? ಪಾಂಡುಸುತರು ಉಳಿದಿರಲಿ ಸಾಕು ಅವರ ವಿಷಯ. ನೀವು(ನಿಮ್ಮ ಪಾದವು) ಹಸ್ತಿನಾಪುರಕ್ಕೆ ಹಸ್ತಿನಾಪರಕ್ಕೆ ಬನ್ನಿರೇ- ಬನ್ನಿರಿ. ನಿಮ್ಮ ಚೈತನ್ಯಗತಿ ಹೇಗಿದೆಯೊ- ನಿಮ್ಮ ಜೀವ ಉಳಿದರೆ ಪಾಂಡುವರ ಶಿರಗಳನ್ನು ತಂದು ನಿಮ್ಮ ಸಿಂಹಾಸನದಲ್ಲಿ ಅಲಂಕಾರವಾಗಿ ಜೋಡಿಸುವೆನು.' ಎಂದು ಹೇಳಿದನು.
ಅರ್ಥ:ಅದಕ್ಕೆ ಕೌರವನು, 'ಸಾಕು ಅದು ಹಾಗಿರಲಿ. ಇನ್ನು ವೈರಿಗಳನ್ನು ಕುರಿತು ಕಾವ್ಯದ ಅಲಂಕಾರದ- ವ್ಯಾಕರಣ ಪಾಂಡಿತ್ಯದಲ್ಲಿ ನಾವು ವಿವೇಕ ವಿಲ್ಲದವರು ಆಗಿದ್ದೇವೆ; ಮೊದಲು ಆಗಬೇಕಾದ ಕಾರ್ಯ, ಆದಿ- ಔರ್ಧ್ವ-ದೈಹಿಕವು- ಸತ್ತ ಬಂಧುಗಳ (ತನ್ನ ತಮ್ಮಂದಿರು ಮತ್ತು ಇತರರು) ಅಂತ್ಯಕ್ರಿಯೆ; ಅದಕ್ಕೆ ಯೋಗ್ಯ ಭಟರಿಗೆ ಹೇಳಿ ಮೃತರ ದೇಹಗಳನ್ನು ತರಿಸಿ ಅಂತ್ಯಕ್ರಿಯೆಮಾಡಿಸಿ, ಮೃತರಾದ ಅವರನ್ನು ನೀವು ಶಾಶ್ವತ ಪುಣ್ಯರನ್ನಾಗಿಮಾಡಿ; ಅದನ್ನು ಅಂಧನೃಪ ಧೃತರಾಷ್ಟ್ರನಿಗೂ ಗಾಂಧಾರಿದೇವಿಯರಿಗೂ ತಿಳುಹಿಸಿ ಅವರ ಶೋಕವನ್ನು ಶಮನಗೊಳಿಸುವುದು,'ಎಂದನು
ಎನುತ ಕಣ್ ಮುಚ್ಚಿದನು ಜೀವಾ
ತ್ಮನು ಜವಾಯಿಲತನದಲೊಡೆಹಾ
ಯ್ದನು ಸುನಾಸಾಲಂಬಿತಶ್ವಾಸದ ಸಮಾಪ್ತಿಯಲಿ |
ಜನಪ ಮರೆದೊರಗಿದನಲಾ ಹಾ
ಯೆನುತ ವದನಾಂಜುಳಿಪುಟದ ತಾ
ಡನದಲಿವರಳಲಿದರು ಕುರುರಾಜಾವಸಾನದಲಿ || ೧೨ ||
ಪದವಿಭಾಗ-ಅರ್ಥ: ಎನುತ ಕಣ್ ಮುಚ್ಚಿದನು ಜೀವಾತ್ಮನು ಜವಾಯಿಲತನದಲಿ (ವೇಗವಾಗಿ)+ ಒಡೆಹಾಯ್ದನು(ಹೊರಟುಹೋದನು) ಸು+ನಾಸ+ ಆಲಂಬಿತ+ ಶ್ವಾಸದ ಸಮಾಪ್ತಿಯಲಿ(ಮೂಗಿನಿಂದ ಉದ್ದವಾದ ಕೊನೆಯ ಉಸಿರುಬಿಟ್ಟು); ಜನಪ ಮರೆದು (ಎಚ್ಚರವಿಲ್ಲದೆ)+ ಒರಗಿದನಲಾ ಹಾ! +ಯೆನುತ ವದನಾಂಜುಳಿ+ ಪುಟದ ತಾಡನದಲಿ (ಹಣೆಯನ್ನು ಬಡಿದುಕೊಂಡು.)+ ಇವರು+ ಅಳಲಿದರು(ದುಃಖಿಸಿದರು) ಕುರುರಾಜ+ ಅವಸಾನದಲಿ.
ಅರ್ಥ: ಕೌರವನು ಕೃಪಾದಿಗಳಿಗೆ ಮುಂದಿನ ಕರ್ತವ್ಯವನ್ನು ಹೇಳುತ್ತಿದ್ದಂತೆ ಕೌರವನು ಕಣ್ಣು ಮುಚ್ಚಿದನು. ಅವನ ಜೀವಾತ್ಮನು ದೇಹದಿಂದ ವೇಗವಾಗಿ ಹೊರಟುಹೋದನು. ಅವನು ಮೂಗಿನಿಂದ ಉದ್ದವಾದ ಕೊನೆಯ ಉಸಿರುಬಿಟ್ಟನು. ಜನಪ ಕೌರವನು ಎಚ್ಚರವಿಲ್ಲದೆ/ಜೀವತ್ಯಜಿಸಿ ಮಲಗಿದನಲಾ ಹಾ! ಎನ್ನುತ್ತಾ ಹಣೆಯನ್ನು ಬಡಿದುಕೊಂಡು, ಇವರು ಕುರುರಾಜನ ಅವಸಾನದ ಸಮಯದಲ್ಲಿ ದುಃಖಿಸಿದರು.
ಅರ್ಥ:ಕೃಪಾದಿ ಮೂವರು ಮಹಾರಥರು ಆಯುಧಗಳನ್ನು ಬಿಸುಟು ಹಿಂತಿರುಗಿದರು. ರಾತ್ರಿಯ ಕತ್ತಲೆಗೆ ಸೂರ್ಯನ ಕಿರಣದ ಧಾಳಿಯಿಂದ ಕತ್ತಲೆ ಕೂಡಲೆ ದಿಕ್ಕುದಿಕ್ಕಿಗೆ ಹರಿದು ಹೋಯಿತು. ಕೌರವನ ಬಿಡಾರದಲ್ಲಿದ್ದ ಅರಸ ಧರ್ಮಜನು ಎದ್ದು ಕೃಷ್ನನ ಸಿರಿಮುಖವನ್ನು ನೋಡಿದನು. ಅವನು ತಮ್ಮಂದಿರು ಸಹಿತ ಕುರುಪತಿಯ ಪಾಳೆಯದಿಂದ ಹೊರಹೊರಟನು.
ಅರ್ಥ:ಭೀಮನು ಬಂದು, 'ಇದೇನು ಅದ್ಭುತ ಹಾನಿ?' ಎನ್ನುತ್ತಾ ಚಿಂತೆಯಿಂದ ಬೇಗನೆ ಬಂದು ಮಾನಿನಿದ್ರೌಪದಿಯ ಕೈಗಳನ್ನು ಹಿಡಿದುಕೊಂಡನು, ಅವಳ ಕಣ್ಣೀರನ್ನು ಸೆರಗಿನಿಂದ ಒರೆಸಿ, ಏನು ಅನಾಹುತ -ಹಾನಿ ಆಗಿದೆ ಎನ್ನಲು; ಅವಳು ನನ್ನು ಮಕ್ಕಳು ಸಾವಿಗೀಡಾದರು ಮತ್ತು ತನ್ನ ಸೋದರರೂ ಮಡಿದರು,' ಎನ್ನಲು, ಆಗ ಪವಮಾನಸುತನಾದ ಭೀಮನು ಗುರುಸುತ ಅಶ್ವತ್ಥಾಮನು ಮಾಡಿದ ಕೋಲಾಹಲವನ್ನು- ಅನಾಹುತವನ್ನು ದ್ರೌಪದಿಯಿಂದ ಕೇಳಿ ತಿಳಿದನು.
ಅರ್ಥ:ಭೀಮನು ಸುತರಾದ ಉಪಪಾಂಡವರ ಐದು ತಲೆಗೆ ಶತ್ರು ಗುರುಸುತ ಅಶ್ವತ್ಥಾಮನ ತಲೆಯೇ ಹೊಣೆ- ಅದನ್ನು ತೆಗೆಯಬೇಕು ಕಣಾ! ಎಮದು ನಿರ್ಧರಿಸಿ ಬೀಮನು ದ್ರೌಪದಿಗೆ ಸತಿಯೆ ಶೋಕವನ್ನು ಬಿಡು, ಇದರ ಸೇಡು ತೀರಿಸುವೆನು ಎನ್ನತ್ತಾ ವೇಗವಾಗಿ ತನ್ನ ರಥವನ್ನು ಬಿಟ್ಟನು. ಆಗ ನೃಪ ಧರ್ಮಜ, ಕೃಷ್ಣ ಧನಂಜಯರು ಅಶ್ವತ್ಥಾಮನನ್ನು ಭೀಮನೊಬ್ಬನೇ ಎದುರಿಸುವುದು ಆಪತ್ತು ತರಬಹುದು. ಇದು ಹೋರಾಟದ ಅವಗಡ- ಆಪತ್ತು ಭೀಮನಬ್ಬನಿಗೆ ಎದುರಿಸಿ ಯುದ್ಧ ನಡೆಸಲು ಆಗದು ಎಂದು ಅತಿರಥ ಅಶ್ವತ್ನಥಾಮನ ಬಳಿ ಯುದ್ಧಕ್ಕೆ ಅವರೂ ಹೋದರು.
ನಿಲ್ಲು ಗುರುಸುತ ಶೌರ್ಯಪಣ ನ
ಮ್ಮಲ್ಲಿಯೇ ಹುಲುಜೀವರಿಗೆ ಜವ
ನಲ್ಲಿ ಮೇಳವೆ ಉಗುಳು ಪಂಚದ್ರೌಪದೀಸುತರ |
ಬಿಲ್ಲ ಗುರು ನೀನಾದಡೆಮಗೇ
ನಿಲ್ಲಿ ದ್ರೌಪದಿಯಕ್ಷಿಜಲಕೃಪೆ
ಯಲ್ಲಿ ಲಂಬಿಸಬೇಕೆನುತ ಮೂದಲಿಸಿದನು ಭೀಮ || ೧೭ ||
ಪದವಿಭಾಗ-ಅರ್ಥ: ನಿಲ್ಲು ಗುರುಸುತ ಶೌರ್ಯ ಪಣ ನಮ್ಮಲ್ಲಿಯೇ ಹುಲುಜೀವರಿಗೆ ಜವನಲ್ಲಿ ಮೇಳವೆ, ಉಗುಳು ಪಂಚದ್ರೌಪದೀಸುತರ ಬಿಲ್ಲಗುರು ನೀನಾದಡೆ+ ಎಮಗೇನು+ ಇಲ್ಲಿ ದ್ರೌಪದಿಯ+ ಅಕ್ಷಿಜಲ (ಕಣ್ಣೀರು) ಕೃಪೆಯಲ್ಲಿ ಲಂಬಿಸಬೇಕು(ಉದ್ದವಾಗು- ಮುಂದೆ ಜೀವಂತ ಸಾಗಬೇಕು)+ ಎನುತ ಮೂದಲಿಸಿದನು ಭೀಮ.
ಅರ್ಥ:ಭೀಮನು ಅಸ್ವತ್ಥಾಮನನ್ನು ಕುರುಕ್ಷೇತ್ರ ರಣರಂಗದಲ್ಲಿ ಹುಡುಕಿ ಅವನಿಗೆ,'ನಿಲ್ಲು ಗುರುಸುತನೇ! ಶೌರ್ಯವನ್ನೂ ಪಣವನ್ನೂ ನಮ್ಮಲ್ಲಿಯೇ ತೋರಿಸಬೇಕು. ದ್ರೌಪದೀ ಮಕ್ಕಳಾಧ ಬಾಲಕಜೀವರು ಯಮನಜೊತೆ ಸೇರಲು ಯೋಗ್ಯರೇ? ನಿನ್ನ ಹೊಟ್ಟೆಯಿಂದ ಪಂಚದ್ರೌಪದೀಸುತರನ್ನು ಉಗುಳು. ಬಿಲ್ಲಗುರುವು ನೀನಾಗಿರಬಹುದು, ಆದರೆ ಅರಿಂದ ನಮಗೇನು? ಇಲ್ಲಿ ದ್ರೌಪದಿಯ ಕಣ್ಣೀರಿನ ಕೃಪೆಯಲ್ಲಿ ನೀನು ಜೀವಿಸಬೇಕು,' ಎನ್ನುತ್ತಾ ಅಸ್ವತ್ಥಾಮನನ್ನು ಭೀಮನು ಮೂದಲಿಸಿದನು.
ಎಲವೊ ಶರಸಂನ್ಯಾಸವನು ಕುರು
ತಿಲಕನವಸಾನದಲಿ ಮಾಡಿದೆ
ನಳಲಿದಡೆ ಫಲವೇನು ನಿಮ್ಮೀ ಸ್ವಾಮಿ ಕಾರ್ಯದಲಿ |
ತಲೆಯ ಹೊಯ್ದೆನು ನಿನ್ನವರ ನೀ
ವಳುಕಿ ರಣದೊಳಗಡಗಿ ಜೀವವ
ನುಳುಹಿಕೊಂಡಿರಿ ಕೊಲುವೆನಲ್ಲದೊಡೆಂದನಾ ದ್ರೌಣಿ || ೧೮ ||
ಪದವಿಭಾಗ-ಅರ್ಥ: ಎಲವೊ ಶರಸಂನ್ಯಾಸವನು ಕುರುತಿಲಕನ+ ಅವಸಾನದಲಿ(ಸಾವಿನಲ್ಲಿ) ಮಾಡಿದೆನು+ ಅಳಲಿದಡೆ ಫಲವೇನು, ನಿಮ್ಮ ಈ ಸ್ವಾಮಿ ಕಾರ್ಯದಲಿ (ಕೌರವನ ಸೇವೆಯ ಕಾರ್ಯದಲ್ಲಿ) ತಲೆಯ ಹೊಯ್ದೆನು ನಿನ್ನವರ, ನೀವು+ ಅಳುಕಿ ರಣದೊಳಗೆ+ ಅಡಗಿ ಜೀವವನು+ ಉಳುಹಿಕೊಂಡಿರಿ ಕೊಲುವೆನು+ ಅಲ್ಲದೊಡೆ+ ಎಂದನಾ ದ್ರೌಣಿ.
ಅರ್ಥ: ಅದಕ್ಕೆ ದ್ರೌಣಿ- ಅಶ್ವತ್ಥಾಮನು,'ಎಲವೊ ಭೀಮ, ತಾನು ಕುರುತಿಲಕ ದುರ್ಯೋಧನನ ಸಾವಿನ ಸಮಯದಲ್ಲಿ ಶರ ಸಂನ್ಯಾಸವನ್ನು ಮಾಡಿದ್ದೇನೆ, ನಿನ್ನಡನೆ ಯುದ್ಧ ಮಾಡಲಾರೆ. ಈಗ ನೀನು ಅತ್ತರೆ ಫಲವೇನು? 'ಎಂದನು. ನಮ್ಮ ಈ ಸ್ವಾಮಿಕಾರ್ಯದಲ್ಲಿ ನಿನ್ನವರ ತಲೆಯನ್ನು ಕಡಿದೆನು. ನೀವು ಹೆದರಿ ರಣರಂಗದಲ್ಲಿ ಅಡಗಿಕೊಂಉ ಜೀವವನ್ನು ಉಳುಹಿಕೊಂಡಿರಿ. ಇಲ್ಲದಿದ್ದರೆ ನಿಮ್ಮನ್ನೂ ಕೊಲ್ಲುತ್ತಿದ್ದೆ,'ಎಂದನು.
ಅರ್ಥ:ಅಶ್ವತ್ಥಾಮನು,'ಕೃಷ್ಣನೇ, ನೀನು ಪಾಂಡವರನ್ನು ಕಾಯಬಲ್ಲೆಯಯ್ಯಾ! ನಾವು ನಿರಾಯುಧರು ಎಂದು ನೀನು ನಿನ್ನವರು ತೊಂದರೆ ಇಲ್ಲದೆ ಹಸ್ತಿನಾಪುರವನ್ನು ಹೊಗುವರೆ? ಈಗ ನಾನು ಬಿಡುವ ಅಸ್ತ್ರವನ್ನು ಪರಿಹರಿಸು ನೋಡೋಣ. ನೀನು ಪಾಂಡವರಾಯರ ಜೀವಿ ಗಡ! ಎನ್ನತ್ತಾ ಮಹಿಮನಾದ ಚಕ್ರಾಯುಧ ಕೃಷ್ಣನನ್ನು ವ್ಯಂಗವಾಗಿ ಹೊಗಳಿ, ಕೈಯಲ್ಲಿದ್ದ ದರ್ಭೆಯಿಂದ ಮಹಾಸ್ತ್ರವನ್ನು ಆವಾಹನೆ ಮಾಡಿ ಪಾಂಡವಕುಲವನ್ನೇ ಗುರಿಯಾಗಿ ಇಟ್ಟನು ಆ ದ್ರೌಣಿ-ಅಶ್ವತ್ಥಾಮನು.
ಅರ್ಥ:ಆಗ ಅದನ್ನು ತಿಳಿದ ಕೃಷ್ಣನು ತನ್ನ ಆಯುಧ ಸುದರ್ಶನ ಚಕ್ರವನ್ನು ಪಾಂಡವರ ರಕ್ಷಣೆಗೆ ನಿಯೋಜಿಸಿದನು; ಜಗವನ್ನು ವ್ಯವಸ್ಥೆಗೊಳಿಸುವ ಮತ್ತೆ ಚತುರ್ದಶ ಜಗದ ಜೀವರನ್ನು ಆಹಾರ ನೀಡಿ ಉಣಿಸುವ, ಜಗವನ್ನು ಅಂತರ್ಭಾವದಲ್ಲಿ ಬಲಗೊಳಿಸುವ ಗುಣತ್ರಯದ ಅಂಶವನ್ನು ತನ್ನ ಸಹಸ್ರಧಾರೆಯ ಕಿರಣದಲ್ಲಿ ಹೊಂದಿದ ಶಕ್ತಿ ಎನ್ನುವ ಮಹಾಸುದರ್ಶನ ಚಕ್ರವು, ಅದು ಅಶ್ವತ್ಥಾಮನ ಆ ಮಹಾ ಅಸ್ತ್ರವನ್ನು ಹಿಂಬಾಲಿಸಿ ಮುಂದೆ ಹೋಗಿ ಉತ್ತರೆಯ ಗರ್ಭದಲ್ಲಿ ಸುತ್ತ ರಕ್ಷಣೆಯನ್ನು ಬಂಧನವನ್ನು ಬಿಗಿದು ರಕ್ಷಣೆಯ ಗೋಡೆಯಾಗಿ ನಿಂತಿತು.
ಅರ್ಥ: ಕುಶಧರ್ಭೆಯ ಅಸ್ತ್ರದ ಹೊಡೆತದ ಅಪಾಯ ತೀರಿತು- ಪರಿಹಾರವಾಯಿತು. ಕೃಷ್ಣ ಮತ್ತು ಅಶ್ವತ್ಥಾಮರು, ಒಬ್ಬರು ಮತ್ತೊಬ್ಬರ ವೀರ ಪಣದ ಸಾಧನೆಯಲ್ಲಿ ಪರಸ್ಪರ ಅಧಿಕ ರೋಷದಿಂದ ನಿಂದಿಸಿದರು. ಮಕ್ಕಳನ್ನು ಕಳೆದುಕೊಂಡ ದ್ರೌಪದಿಯ ಹೊಟ್ಟೆಯಳಗಿನ ಸಂಕಟದ ಬೆಂಕಿಯನ್ನು ನಂದಿಸಲು ಈ ಅಶ್ವತ್ಥಾಮನ ಪ್ರಾಣವೇ ಜಲ ಎಂದು, ಪ್ರಾಣವನ್ನು ತೆಗೆಯಲು ಗುರುದ್ರೋಣನ ಮಗ ಅಶ್ವತ್ಥಾಮನನ್ನು ಭೀಮ ಮತ್ತು ಫಲುಗುಣರು ಹಿಡಿದರು.
ಪದವಿಭಾಗ-ಅರ್ಥ: ಬಂದಳಾ ದ್ರೌಪದಿಯು+ ಅಹಹ ಗುರುನಂದನನ ಕೊಲಬಾರದು+ ಅಕಟ+ ಈ ನಂದನರ ಮರಣದ ಮಹಾವ್ಯಥೆಯ+ ಈತನ+ ಅಳಿವಿನಲಿ(ಸಾವಿನಲ್ಲಿ) ಕೊಂದುಕೂಗದೆ ಕೃಪೆಯನು+ ಅಬಲಾವೃಂದ (ನಾರೀ ಸಮೂಹ) ಸಮ+ ಸುಖದುಃಖಿಗಳು ಸಾರು+ ಎಂದು(ಹೋಗಿ, ಸರಿಯಿರಿ ದೂರ ಸಾರಿರಿ) ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ.
ಅರ್ಥ:ಪಾಂಡವರೈವರ ಮತ್ತು ದ್ರೌಪದಿಯ ಮಕ್ಕಳ್ಳನ್ನು ಕೊಂದ ಪರಿಹಾರಕ್ಕೆ ಅಶ್ವತ್ಥಾಮನ ತಲೆಯನ್ನು ತೆಗೆಯಬೇಕೆಂದು ಭೀಮಾರ್ಜುನರು ತೊಡಗಿದಾಗ, ಅಹಹ! ಅವಸರದಿಂದ ಆ ದ್ರೌಪದಿಯು ಬಂದಳು. ಗುರುನಂದನ ಅಶ್ವತ್ಥಾಮನನ್ನು ಕೊಲ್ಲಬಾರದು, ಕೊಲ್ಲುವುದು ಬೇಡ ಎಂದಳು. ಅಕಟ! ಈ ನನ್ನ ನಂದನರ/ಮಕ್ಕಳ ಮರಣದ ಮಹಾವ್ಯಥೆಯನ್ನು ಈತನ ಸಾವಿನಲ್ಲಿ ಮರೆಯಲೇ? ಅಶ್ವತ್ಥಾಮನ ತಾಯಿ ಕೃಪೆಯನ್ನು ಇವನ ಸಾವು ಕೊಂದುಕೂಗದೆ, ಅವಳಿಗೆ ಪುತ್ರವಿಯೋಗ ದುಃಖ ಕೊಡದೆ? ಸಂಕಟಪಡಿಸದೇ ಇರುವುದೇ? ನಮ್ಮ ಪಾಳಯದಲ್ಲಿ ಇರುವ ನಾರೀ ಸಮೂಹವು ತಮ್ಮ ಮಕ್ಕಳನ್ನೂ ಕಳೆದುಕೊಂಡಿರುವರು. ನಾವು ಸಮ ಸುಖದುಃಖಿಗಳು. ಭೀಮಾರ್ಜುನರೇ ಗುರುಪತ್ರನನ್ನು ಬಿಟ್ಟು ದೂರ ಸರಿಯಿರಿ,'ಎಂದು ಬಳಿಕ ಪಾಂಚಾಲಿ ಅವರನ್ನು ಗುರುಪುತ್ರನ ವಧೆಯಿಂದ ತೆಗೆದಳು/ ಬಿಡಿಸಿದಳು.
ತಲೆಯ ಕೊಂಬವಗಡದ ಭಾಷೆಯ
ಸಲಿಸಲೆಂದಾ ದ್ರೋಣತನುಜನ
ಹೊಳೆವ ಮಕುಟದ ಮಾಣಿಕವ ಕೊಂಡುತ್ತರಾಯದಲಿ |
ಗೆಲಿದು ತಿರುಗಿದರಿವರು ಸಾಹಸ
ವಳುಕಿಸದೆ ಮೂಜಗವ ಯದುಕುಲ
ತಿಲಕ ಗದುಗಿನ ವೀರನಾರಾಯಣನ ಕರುಣದಲಿ || ೨೭ ||
ಪದವಿಭಾಗ-ಅರ್ಥ: ತಲೆಯ ಕೊಂಬ(ತಲೆಯನ್ನು ತೆಗೆದುಕೊಳ್ಳುವ)+ ಅವಗಡದ ಭಾಷೆಯ ಸಲಿಸಲೆಂದು+ ಆ ದ್ರೋಣತನುಜನ ಹೊಳೆವ ಮಕುಟದ ಮಾಣಿಕವ(ತಲೆಯಲ್ಲಿದ್ದ ರತ್ನ) ಕೊಂಡು+ ಉತ್ತರಾಯದಲಿ ಗೆಲಿದು ತಿರುಗಿದರು+ ಇವರು ಸಾಹಸವ+ ಅಳುಕಿಸದೆ ಮೂಜಗವ ಯದುಕುಲ ತಿಲಕ ಗದುಗಿನ ವೀರನಾರಾಯಣನ ಕರುಣದಲಿ
ಅರ್ಥ:ಅಥ್ವತ್ಥಾನನ್ನು ಕೊಲ್ಲುವೆನೆಂಉ ನುಡಿದ ಪ್ರತಿಜ್ಞೆಗೆ ಧಕ್ಕೆ ಬಾರದಂತೆ ಅವನ ತಲೆಯನ್ನು ತೆಗೆಯುವ ಅಪಾಯದ ಭಾಷೆಯನ್ನು ಸಲ್ಲಿಸಲು ಆ ದ್ರೋಣನ ಮಗ ಅಶ್ವತ್ಥಾಮನ ತಲೆಯಲ್ಲಿ ಹುಟ್ಟುವಾಗಲೇ ಇದ್ದ ಹೊಳೆಯುವ ರತ್ನವನ್ನು ಕತ್ತರಿಸಿ ಕಿತ್ತುಕೊಂಡು ಉತ್ತರ ಯುದ್ಧದಲ್ಲಿ ಗೆದ್ದು ಇವರು- ಈ ಪಾಂಡವರು ಪಾಳಯಕ್ಕೆ ತಿರುಗಿ ಹೊರಟರು. ಇವರು ತಮ್ಮ ಸಾಹಸದಿಂದ ಮೂರು ಜಗತ್ತನ್ನೂ ಅಳುಕಿಸದೆ/ ನೋಯಿಸದೆ ಯದುಕುಲತಿಲಕ ಗದುಗಿನ ವೀರನಾರಾಯಣನ ಕರುಣದಿಂದ ಮಹಾಯುದ್ಧದಲ್ಲಿ ಗೆದ್ದು ಪಾಳಯವನ್ನು ಸೇರಿದರು.
↑ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
↑ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.