ಅರ್ಥ:ಪಟುಭಟರಾದ ಭೀಮ ದುರ್ಯೋಧನರು, ಮೆರುಗಿನಿಂದ, ಸುಂಟರಗಾಳಿಯಂತೆ ಸುಳಿದು ಗರುಡನ ಹೊದೆತದಂತೆ ಬಳಸಿ ಬಿಗಿದು ಒಬ್ಬರ ಮೇಲೆ ಒಬ್ಬರು ಎರಗಿದರು/ಆಕ್ರಮಿಸಿದರು. ಬಿಡುವುದು ಮುಂದೆನಡೆಸುವುದು ಮತ್ತಗಜದಂತೆ ಶಕ್ತಿ ತೋರಿದರು. ಅಗ್ನಿಯಂತೆ ಪೀಡಿಸಿದರು. ಸರ್ಪದಂತೆ ನಿರೀಕ್ಷಿಸಿದರು. ಪಾದರಸದಂತೆ ರಭಸದಲ್ಲಿ ನುಗ್ಗಿ ಹೆಜ್ಜೆಯಿಟ್ಟು ಎಚ್ಚರಿಕೆಯಿಂದ ಒಲೆದರು.
ಅರ್ಥ: ಭೀಮ ದುರ್ಯೋಧನರು, ಒಬ್ಬರ ಮೇಲೆ ಒಬ್ಬರು ಸಿಡಿಲಂತೆ ಎರಗಿದರು- ಮೇಲೆ ಬಿದ್ದರು. ಮಿಂಚಿನ ಮಿರುಗಿನಹಾಗೆ ಪ್ರಕಾಶದಿಂದ ಇರಲು ಹೊಳೆದು, ಹಜ್ಜೆಯನ್ನು ಹಿಂದಕ್ಕಿಟ್ಟು ಮತ್ತೆ ಟಗರಿನಂತೆ ನುಗ್ಗಿ ಹಾಯ್ದರು. ಅವರು ತವಕದಿಂದ ಒಬ್ಬರನ್ನೊಬ್ಬರು ಅಮುಕಿದರು. ಗ್ರಹದಂತೆ ಪ್ರಬಲರಾಗಿ ಮೇಲೆ ಬಿದ್ದರು. ಸಿಡಿಲುಗುಡುಗಿನ ಆರ್ಭಟದ ಮುಗಿಲಂತೆ ಇಬ್ಬರ ಮನಸ್ಸೂ ರೋಷಕ್ಕೆ ಮಿತಿಯಿಲ್ಲ ಎನ್ನುವಂತೆ ಇಬ್ಬರೂ ಭಟರು ಹೊದೆದಾಡಿದರು.
ಅರ್ಥ:ಭೀಮ ದುರ್ಯೋಧನರ ಗದೆಗದೆಯ ಹೊಡೆತಗಳ ಖಣಿಖಟಿಲು ಸದ್ದು ಅಲ್ಲಿ ಉಂಟಾಯಿತು. ಮತ್ತು ಇಬ್ಬರ ಬೊಬ್ಬೆ ಭುವನವನು/ ಭೂಮಿಯನ್ನು ಬೆದರಿಸಿತು. ಅವರ ಪಾದಗಳ ನೆಲ್ಲಕೆ ಬಡಿದ ಘಟ್ಟಣೆಯ/ಹೊಡೆತದ ಪಟ್ಟಿನಿಂದ ಭೂಮಿ ನುಗಿತು. ನೋಡುತ್ತಿದ್ದ ಆ ಪರಿವಾರದವರು "ಮಝ ಭಾಪು ಭಟರೇ!" ಎಂದು ಕೂಗಿತು. ಅವರ ಅಬ್ಬರ ಮೂವತ್ತು ಸಾಧುಗಳ ಮಂತ್ರಘೋಷಕ್ಕೂ ಮಿಗಿಲಾಗಿ ಎಲ್ಲರನ್ನೂ, ಮೂರು ಜಗತ್ತನ್ನೂ ಅಂಜಿಸಿತು.
ಅರ್ಥ: ಅವನಿಪ ಕೌರವನು ಅನಿಲತನುಜನಾದ ಭೀಮನನ್ನು ತಿವಿದನು. ಅವನ ಕವಚ ಬಿರಿಯಿತು. ಆಗ ಅವನು ಕಯ್ಯೊಡನೆ ಯುದ್ಧದಲ್ಲಿ ಅವಕಿ/ ಒತ್ತಿ ಪರಾಕ್ರಮವನ್ನು ತೋರಿದನು, ಆಗ ಕೌರವನೃಪನ ವಕ್ಷ/ ಎದೆಯ ಕವಚ ಸೀಳಿತು. ಆಗ ಕೌರವನು ಪುನಃ ತಿರುಗಿ ಭೀಮನಿಗೆ ಹೊಡೆದನು. ಆಗ ಪವನಜನ ಸೀಸಕದ ವರಮಣಿಗಳ ರಾಶಿ ಸಿಡಿಲು ಬಡಿದ ಮೇರುಗಿರಿಯ ಹಾಗೆ ಸಿಡಿದವು.
ಅರ್ಥ: ಭೀಮ ದುರ್ಯೋಧನರು ಪದೇ ಪದೇ ಬಾಯಿಗೆ ಕರ್ಪುರದ ಕವಳವನ್ನು ಮೆದ್ದರು. ಬಳಿಕ ಅಡಿಗಡಿಗೆ ಯುದ್ಧದ ಶ್ರಮ ನಿವಾರಣೆಗಾಗಿ ರಣದಿಂದ ಹೊರಕ್ಕೆ ಹೋದರು. ಮತ್ತೆ ಮತ್ತೆ ಗುಳಿಗೆಗಳನ್ನು ಪಡೆದರು, ಪೂತು ಫಲಗಳನ್ನು ತಿಂದರು. ಅಡಿಗಡಿಗೆ ಮತ್ಸರದ ಕೋಪೋದ್ರೇಕ,ರೋಷದಲ್ಲಿ ರಣರಂಗದಲ್ಲಿ ಕುರುಪತಿಯ ಮತ್ತು ಪವನಜನ ಮನಸ್ಸಿನ ಹತೋಟಿ ಹೋಯಿತು.
ಅರ್ಥ:ಭೀಮ ಮತ್ತು ದುರ್ಯೋದನರ ಶ್ವಾಸದಲ್ಲಿ ಸಿಟ್ಟಿನ ಆವೇಶದಿಂದ ಕಿಡಿಸಹಿತ ಕಪ್ಪು ಹೊಗೆ ಹೊರಹೊಮ್ಮಿದವು. ಕಣ್ಣಾಲಿಗಳು ಕಟ್ಟ ರಾಕ್ಷಸರಂತೆ ಕೆಂಪೇರಿದವು. ಹುಬ್ಬುಗಳು ಬಿಗಿದು ಮೇಲೇರಿ ರೋಷ ಹೆಚ್ಚಲು, ಅವರು ತಮ್ಮ ಔಡನ್ನು ಒತ್ತಿ ಬಹಳ ಶಸ್ತ್ರ ಅಭ್ಯಾಸಿಗಳು ಆರ್ಭಟಿಸುದರು, ಇವರದು ಕಪಟವೋ, ಧರ್ಮಜನ ಸೇನೆ ಇವರ ಚಿತ್ರ- ವಿಚಿತ್ರ ಪಾದಗಳ ಗತಿಯನ್ನು ಕಾಣದಂತಾಯಿತು.
ಅರ್ಥ: ಕೌರವನು ಭೀಮನಿಗೆ ಹೊಡೆಯಲು,ಅವನ ಬಾಯಿಯಿಮದ ರಕ್ತ ಉಕ್ಕಿತು. ಕಣ್ಣುಗಳ ದಾಯ/ಸುಸ್ಥಿತಿ ತಪ್ಪಿತು. ಡೆಂಢಣಿಸಿ/ ಒಲೆದಾಡಿ ಶೂರನಾದ ಭೀಮನು ನೆಲಕ್ಕೆ ಅಪ್ಪಳಿಸಿ ಬಿದ್ದನು. ಕಯ್ಯಲ್ಲಿದ್ದ ಗದೆ ಕಳಚಿ ಹಾ! ಯೆನುತ ತನ್ನವರು ಭಯದಿಂದ ಬಾಯಿ ಬಿಡುತ್ತಿರಲು ಅವನು ನಿಮಿಷಾರ್ಧದಲ್ಲಿ ಅಪಾಯ ದಾಟಿದ ನಿಪಾಯ ಭೀಮನು ಎದ್ದನು; ಅವನು ಚೇತರಿಸಿಕೊಂಡು ಅಕ್ಕಪಕ್ಕ ನೋಡಿದನು.
ಹೆದರು ಹಿಂಗಿತು ನೆಲಕೆ ಮಾರು
ದ್ದಿದನು ಕರವನು ಸೂಸಿ ಹಾರಿದ
ಗದೆಯ ಕೊಂಡನು ಸೆರಗಿನಲಿ ಸಂತೈಸಿ ಶೋಣಿತವ |
ಅದಿರೆ ನೆಲನವ್ವಳಿಸಿ ಮೇಲ್ವಾ
ಯಿದನು ಹೊಳಹಿನ ಹೊಯ್ಲ ಹೊದ (೧೧
ರೆದ್ದುದು ವಿಭಾಡಿಸಿ ಭೀಮ ಹೊಯ್ದನು ನೃಪನ ಮಸ್ತಕವ || ೧೧ ||
ಪದವಿಭಾಗ-ಅರ್ಥ:ಹೆದರು ಹಿಂಗಿತು ನೆಲಕೆ ಮಾರು+ ಉದ್ದಿದನು ಕರವನು ಸೂಸಿ ಹಾರಿದ ಗದೆಯ ಕೊಂಡನು ಸೆರಗಿನಲಿ ಸಂತೈಸಿ ಶೋಣಿತವ ಅದಿರೆ ನೆಲನವ್ವಳಿಸಿ ಮೇಲ್ವಾಯಿದನು ಹೊಳಹಿನ ಹೊಯ್ಲ ಹೊದರು+ ಎದ್ದುದು(ಅವಕಾಶ ನೋಡಿ ಹೊಡೆಯುವ ಅಗತ್ಯ ಬಂದಿತು.) ವಿಭಾಡಿಸಿ (ಆಕ್ರಮಿಸಿ) ಭೀಮ ಹೊಯ್ದನು ನೃಪನ ಮಸ್ತಕವ
ಅರ್ಥ:ಪಾಂಡವರ ಕಡೆಯವಿಗೆ ಭಯ ಇಂಗಿತು. ಭೀಮನು ನೆಲಕ್ಕೆ ಕೈಯನ್ನು ಮಾರುದ್ದ ಉದ್ದಿದನು. ಕೈಯನ್ನು ಬಾಯಿಯಿಂದ ಊದಿ ಧೂಳು ಹಾರಿಸಿ, ಹಾರಿ ಕೆಳಗೆ ಬಿದ್ದದ ಗದೆಯನ್ನು ತೆಗೆದುಕೊಂಡನು. ತನ್ನ ಸೆರಗಿನಲಿ ಶೋಣಿತವ/ ರಕ್ತವನ್ನು ಒರೆಸಿ ಸಂತೈಸಿಕೊಂಡನು/ಸಮಾಧಾನ ಮಾಡಿಕೊಂಡನು. ನೆಲವು ನಡುಗುವಂತೆ ನೆಲವನ್ನು ಕಾಲಿನಿಂದ ಅಪ್ಪಳಿಸಿ ಕೌರವನ ಮೇಲೆ ಆಕ್ರಮಣ ಮಾಡಿದನು. ಭೀಮನಿಗೆ ಅವಕಾಶ ನೋಡಿ ಹೊಡೆಯುವ ಅಗತ್ಯ ಬಂದಿತು. ಆಗ ಮೇಲೆಬಿದ್ದು ಭೀಮನು ಕೌರವ ನೃಪನ ತಲೆಗೆ ಹೊಡೆದನು.
ಅರ್ಥ:ಭೀಮನು ಎದ್ದು ಹಾರಿ ಹೊಡೆಯಲು, ಕೌರವನ ಸೀಸಕದ ಕವಚ ಚೂರುಗಳು ಸಿಡಿದು ಬಿದ್ದವು. ಅವು ಶತಕೋಟಿ ಘಾಯದ ಘಟನೆಯಲ್ಲಿ, ಶತಕೋಟಿ ಘಾಯಕೆ ಸಿಡಿದ ಹಿಮಾಲದ ತುದಿಯಂತೆ ಸಿಡಿದು ಬಿದ್ದವು. ಪಟ್ಟುತಿಂದವನು ಕಂಠದಲ್ಲಿ ಉಸುರಾಡಲು ಕಷ್ಟವಾಗಿ ಕ್ರಮ ತಪ್ಪಿತು. ಅವನು ಮೃತ್ಯುವಿನ ಕೊಡುಗೆಯ ಚೀಟಿಯನ್ನು ಹಿಡಿದನೊ ಎಂಬಂತೆ ಮೈಮರೆತು ಮಲಗಿದನು.
ಅರ್ಥ: ಇಬ್ಬರ ಯುದ್ಧದಲ್ಲಿ ಕೌರವನ ಗದೆ ಮುರಿದು ಒಂದು ದಿಕ್ಕಿಗೆ ಹಾರಿತು. ಪಟ್ಟಿನಿಂದ ಮುಖವಲ್ಲಿ ಒಂದು ವಿಘಳಿಗೆ ಮಾತ್ರ ಕಣ್ಣಾಲಿಗಳು ಮೇಲಕ್ಕೆ ಏರಿದವು. ನೆತ್ತಿಯ ಜೋರು(ಆಘಾತ) ಆವರಿಸಿತು. ಮನಸ್ಸಿನ ಅಂತಸ್ತಿಮಿತ ಜಾರಿತು. ಒಳಗೇ ಭಯ ಹುರಿಯೇರಿತು. ಜೊತೆಗೇ ಅಧಿಕವಾಗಿದ್ದ ಕ್ರೋಧ ಮತ್ತೂ ಹೆಚ್ಚಿತು. ಮನಸ್ಸಿನ ವಿವೇಚನೆ ಅಡಗಿತು. ಅವನ ದೇಹದಲ್ಲಿ ಪ್ರಾಣಶಕ್ತಿ ಕುಂದಿತು.
ಅರ್ಥ:ಕೌರವನು ಒಂದು ನಿಮಿಷದಲ್ಲಿ ಕಣ್ಣು ತೆರೆದನು. ಮನಸ್ಸಿನ ಅಂತಃ ಶ್ರಮದ ಝಳವು - ಕಾವು ಅಡಗಿತು. ಶತ್ರುವನ್ನು ಸುತ್ತುಗಟ್ಟುವ ಹುಮ್ಮಸ್ಸು ಮನಸ್ಸಿನಲ್ಲಿ ಮನೆಮಾಡಲು ಗೆಲುವಿನ ಮುಖದಿಂದ, ಹೆಚ್ಚು ಚುರುಕುಗೊಂಡು ಸಿಟ್ಟಿನಲ್ಲಿ, ಭುಜವಿಕ್ರಮನಾದ ಭೂಪೋತ್ತಮ ಕೌರವನು ಹೊಡೆಯಲು ಎದ್ದು ಗದೆಯನ್ನು ತೆಗೆದುಕೊಂಡು ಭೀಮನಿಗೆ ಅನುವಾಗು ಎಂದನು.
ಅರ್ಥ:ಕೌರವನು ಯುದ್ಧಕ್ಕೆ ಸಿದ್ಧನಾಗು ಎನ್ನಲು, ಭೀಮನು, ತಾನು ಈಗ ಅನುವಾದೆನೆ? ಈಗ ಸಿದ್ಧವಾಗಬೇಕೇ? , ರಾಜ್ಯದ ಭಾಗವನ್ನು ನಾವು ಕೇಳಿದರೆ, ನೀನು ಸಂಧಿಯನ್ನು ಮುರಿದುಬಿಟ್ಟೆ, ಆಗಲೇ ನಾನು ಯುದ್ಧಕ್ಕೆ ಅನುವಾದುದು ಕಣಾ! ನನ್ನ ಗದೆ ನಿನ್ನ ಕಿರುದೊಡೆಗೆ ತಾಗಿದಾಗ ನೋಡು ಇನ್ನೊಮ್ಮೆ, ಎನ್ನುತ್ತಾ ಮೈ- ಲಾಗಹಾಕಿ ಹೊಳೆ ಹೊಳೆಯುತ್ತಿರುವ ಗದೆಯನ್ನು ತೂಗಿ ಕೌರವ ಅರಸನನ್ನು ಕಲಿ ಭೀಮನುಬೊಬ್ಬಿರಿದು ಆಕ್ರಮಿಸಿದನು.
ಅರ್ಥ:ರಾಜನೇ ಕೇಳು, ಭೀಮಸೇನನ ಯುದ್ಧದ ಮೇಲೆ ಯುದ್ಧದ ಹೊಡೆತಗಳಿಂದ ಗದೆಯು ಹೊರಳಿ ಕಿಡಿಗಳು ಹೊರಟವು. ಮತ್ತೂ ಹೆಚ್ಚಾಗಿ ಆಕಾಶ ಮಂಡಲವನ್ನು ಆವರಿಸಿದವು. ಅರಸ ಕೌರವನು ಮೇಲೆಬಿದ್ದಾಗ ಅನಿಲಸುತ ಭೀಮನು ಪಕ್ಕಕೆಸರಿದು ತಪ್ಪಿಸಿಕೊಂಡನು. ಆ ಸಮಯದಲ್ಲಿ ಭೀಮನು ಅಬ್ಬರಿಸಿ ಕೌರವ ನೃಪನ ಕಂಧರವನ್ನು - ಕುತ್ತಿಗೆಯನ್ನು ಗುರಿಮಾಡಿ ಹೊಡೆದನು.
ಅರ್ಥ: ಭೀಮನನ್ನು ನೋಡಿದ ಕೌರವನು ಕೈದಂಡೆಯನ್ನು ಊರಿ ಲಾಗಹಾಕಿ ಭೀಮನನ್ನು ಹೊಡೆಯಲು ಉಪಾಯ ಹೂಡಿದನು. ಹೆಜ್ಜೆಯನ್ನು ಗತ್ತಿನಲ್ಲಿಡುವಾಗ ಪಡಿತಳಕೆ/ನೆಲಕ್ಕೆ ಜಾರಿ ಕೆಳಗೆ ಬಿದ್ದನು ಕುರುರಾಯನು ನಲಕ್ಕೆ ಮಲಗಿದನು. ಮೈಮೇಲಿನ ಘಾಯಕೆ ಕೂಡೆ ತಗ್ಗಿ ಮತ್ತಗಾದನು. ವೀರ ಭಟರಾದ ಭೀಮ ಮತ್ತು ಕೌರವರು ಇಷ್ಠಾನಿಷ್ಟಗಳನ್ನು ನೋಡದೆ ಸಿಟ್ಟಿನಿಂದ ಹೊಯ್ದಾಡಿದರು/ ಹೊಡೆದಾಡಿದರು.
ತೊಲಗಿ ನಿಂದರು ಮತ್ತೆ ಭಾರಿಯ
ಬಳಲಿಕೆಯ ಬೇಳುವೆಯ ಚಿತ್ತ
ಸ್ಖಲಿತರಂಗೀಕರಿಸಿದರು ಕರ್ಪುರದ ವೀಳೆಯವ
ಘಳಿಲನೆದ್ದರು ನಿಮಿಷಮಾತ್ರಕೆ
ಮಲೆತು ನಿಂದರು ಘಾಯಘಾತಿಯ
ಸುಳಿವನವಧಾನಿಸುತ ತೂಗಿದರಾಯುಧದ್ವಯವ ೧೯
ಪದವಿಭಾಗ-ಅರ್ಥ: ತೊಲಗಿ (ದೂರ ಸರಿದು) ನಿಂದರು ಮತ್ತೆ ಭಾರಿಯ ಬಳಲಿಕೆಯ ಬೇಳುವೆಯ(ಕಷ್ಟ - ನೋವು) ಚಿತ್ತಸ್ಖಲಿತರು (ಮನಸ್ಸಿನ ಚಂಚಲದವರು)+ ಅಂಗೀಕರಿಸಿದರು ಕರ್ಪುರದ ವೀಳೆಯವ, ಘಳಿಲನೆದ್ದರು (ಸರಕ್ಕನೆ ಎದ್ದರು) ನಿಮಿಷಮಾತ್ರಕೆ ಮಲೆತು (ವಿರೋಧಿಸಿ, ಹೋರಾಡಲು) ನಿಂದರು ಘಾಯಘಾತಿಯ ಸುಳಿವನು+ ಅವಧಾನಿಸುತ(ಘಾಯಗಳನ್ನೂ ಪೆಟ್ಟುಗಳನ್ನೂ ಹೊಡೆಯಲು (ಸುಳಿವನು) ಗಮನಿಸುತ್ತಾ ) ತೂಗಿದರು+ ಆಯುಧ ದ್ವಯವ (ತಮ್ಮ ತಮ್ಮ ಎರಡು ಗದೆಗಳನ್ನು)
ಅರ್ಥ:ಭೀಮ ಕೌರವರು ಹೋರಾಡಿ, ಭಾರಿ ಬಳಲಿಕೆಯ ಕಷ್ಟವನ್ನು ಪರಿಹರಿಸಿಕೊಳ್ಳಲು ದೂರಹೋಗಿ ನಿಂತರು. ಮತ್ತೆ ಮನಸ್ಸಿನ ಬೇಸರ ಹೊಂದಿದವರು ಕರ್ಪುರದ ವೀಳೆಯಗಳನ್ನು ತಿಂದರು. ಅವರು ಸರಕ್ಕನೆ ಎದ್ದರು; ನಿಮಿಷ ಮಾತ್ರದಲ್ಲಿ ವಿರೋಧಿಸಿ ಹೋರಾಟಕ್ಕೆ ನಿಂತರು ಘಾಯಗಳನ್ನೂ ಪೆಟ್ಟುಗಳನ್ನೂ ಗಮನಿಸುತ್ತಾ ಮುಂದಿನ ಹೊಡೆತದ ಸುಳಿವನ್ನು ಯೋಚಿಸುತ್ತಾ ತಮ್ಮ ತಮ್ಮ ಎರಡು ಗದೆಗಳನ್ನು ತೂಗಿದರು.
ಅರ್ಥ:ಕೌರವನು ಲಾಗಹಾಕಿ ಹಾರಯತ್ತಾ ವೇಗದಿಂದ ಎದ್ದು ಭೀಮನನ್ನು ಹೊಡೆದನು. ಆತನ ಅದೃಷ್ಟವನ್ನು ಏನನೆಂಬೆನು; ರನದ ಹೊರಗಿನ ಜನ ಭೀಮ ಬಿದ್ದನು ಎಂಬ ಬೇಗುದಿ-ಸಂಕಟದಿಂದ ಹೊಯಿಲಿಟ್ಟರು. ನೃಪತಿ ಕೌರವನು ಉಬ್ಬೆದ್ದು- ಉತ್ಸಾಹದಿಂದ ಭೀಮನನ್ನು ಆಕ್ರಮಿಸಿದನು. ಭೀಮನು ಪಾದ ಚಲನೆಯ ಯುದ್ಧತಂತ್ರದಿಂದ ಬೇಗ ತಪ್ಪಿಸಿಕೊಮಡನು.
ಅರ್ಥ:ಕೌರವನ ಹಣೆಯ ಸೀಸಕದ ವಟ್ಟಿ ಮುರಿಯಿತು. ಗದೆಯು ಅರಸ ಕೌರವನ ಹಣೆಗೆ ತಾಗಿತು. ಅವನ ಹಣೆಯಿಂದ ರಕ್ತದ ಕಟ್ಟೆಯೊಡೆದಂತೆ ಕವಿದುದು ಕೌರವನೃಪನ ದೇಹ ನನೆಯಿತು. ಭೀಮನು ಕೊಟ್ಟ ಘಾಯಕ್ಕೆ ಕೌರವನು ಬಳಲಿ ಮನಸ್ಸನ್ನು ಮರವೆಗೆ ಬಿಟ್ಟನು- ಎಚ್ಚರತಪ್ಪಿದಂತಾಯಿತು. ಆದರೆ ನಿಮಿಷದಲ್ಲಿ ಸಾವರಿಸಿಕೊಂಡು ಜಗಜಟ್ಟಿ ಕೌರವರಾಯನು ತನ್ನ ಗದಾಯುಧವನ್ನು ಕೈಗೆ ತೆಗೆದುಕೊಂಡನು.
ಅರ್ಥ: ಕೌರವನು ಕೆನ್ನೆಗೆ ಹೊಡೆದ ಎಡದ ಕೈ ದಂಡೆಯಿಂದ ಗದೆಯನ್ನು ಒತ್ತಿ ಹೊಡೆತಗಳ ಕಡುಹ/ನೆಡೆ- ದಾರಿಯನ್ನು- ತಪ್ಪಿಸಿ ಕೌರವೇಂದ್ರನ ಹೆಗಲನ್ನು ಗುರಿಮಾಡಿ ಭೀಮನು ದೇವತೆಗಳು ಮಝ ಭಾಪು! ಎನ್ನುವಂತೆ ಹೊಡೆದನು. ಕೌರವನು ಆ ಹೊಡೆತವನ್ನು ತನ್ನ ಗದೆಯಿಂದ ತಡೆದನು. ಅವನು ಭೀಮನ ಸೊಂಟವನ್ನು ಅಪ್ಪಳಿಸಿದನು. ಆಗ ಭೀಮನ ಮಿಡುಕು/ಶೌರ್ಯ ನಿಂತಿತು ಮತ್ತು ನಗುವ ಪಾಂಡವರ ಸೇನೆಯ- ಬೆಂಬಲಗರ ತಲೆ ತಗ್ಗಿತು.
ಅರ್ಥ:ಭೀನುನು ಎದ್ದವನೇ,'ನಿನ್ನನ್ನು ನೀನು ಸಾದ್ಯವಿದ್ದರೆ ಕಾದುಕೋ ಕೌರವಾ! ಗದಾಸಂಭೇದದ ಅಭ್ಯಾಸಿಗಳಿಗೆ ತಪ್ಪಿಸಿಕೊಳ್ಳಲು ಇದು ಈ ಹೊಡೆತ ಅಸಾಧ್ಯವಾಗಿದೆ ನೋಡಾ! ಮಹೇಶ್ವರನನ್ನು ಮರೆಹೊಗು, ಹೋದೆ ಹೋಗಿನ್ನು ಎನ್ನುತ್ತಾ, ವಿಷಾದವು ಮನಸ್ಸಿನಲ್ಲಿ ತುಂಬಿರಲು ರಭಸದಿಂದ ಮುಂದುಗಾಣದೆ ಕೈದಣಿಯುವಷ್ಟು ಬಲವಾಗಿ ಕಲಿಭೀಮನು ಕುರುಪತಿಯನ್ನು ಅಪ್ಪಳಿಸಿದನು.
ಅರ್ಥ:ಭೀಮನ ಹೊಡೆತಕ್ಕೆ ಕೌರವನ ಗದೆ ಯಾವುದೋ ದಿಕ್ಕಿಗೆ ಹಾರಿತು. ಬಹಳ ಘಾಯವನು ಹೊಂದಿ ಮೈಭಾರವಾಯಿತು, ಅವನು ಮೊಳಕಾಲೂರಿ ಬಿದ್ದನು. ಮುಖದಲ್ಲಿ ರಣರಂಗದ ಧೂಳು ಮೆತ್ತಿಕೊಂಡಿತು. ಕೌರವನು ರಕ್ತವನು ಕಾರಿದನು. ಇದು ಬಲವಾದ ಹೊಡೆತ ಕೌರವ "ಮೇಲೆ ಸ್ವರ್ಗಕ್ಕೆ ಹೋದನು" ಎನ್ನತ್ತಾ ಆ ಪರಿವಾರ ಸಂತೋಷದ ಉನ್ಮಾದದಲ್ಲಿ ದೊಡ್ಡದಾಗಿ ಚೀರಿತು.
ಅರ್ಥ:ಭೀಮನ ಏಟಿನಿಂದ ಮೈಮರೆತ ಕೌರವನಿಗೆ ದೇಹದಲ್ಲಿ ಹರಿಯುತ್ತಿರವ ಝೊಂ- ಎಂಬ ವೇದನೆಯ ಅಲ್ಪ ಸ್ವಲ್ಪವಿದ್ದ ಝೊಂಪಿನ ಆವೇಗ ಹರಿಯಿತು. ಮೇಲುಮೇಲಕ್ಕೆ ಉಂಟಾದ ಎಚ್ಚರದಿಂದ ಮರವೆಯ ಮುಸುಕು ಹಾರಿ ಹೋಯಿತು. ಚೆನ್ನಾಗಿ ಎಚ್ಚರಾಗಿ ಅತಿಯಾದ ಭೀತಿಯ ಸಂಕಟ ಮನಸ್ಸಿನ ಹೊಯಿದಾಟ ನಿಂತಿತು. ಮನಸ್ಸು ದೇಹವನ್ನು ಆವರಿಸಿ ಬಿಗಿದ ಬಳಲಿಕೆಯ ಸೋಲಿನ ಕೀಳರಿಮೆಯ ತೀವ್ರತೆ ಹೋಗಲು, ಕೌರವನು ಸುಧಾರಿಸಿ ಸಮಾಧಾನಮಾಡಿಕೊಂಡನು.
ಅರ್ಥ: ಕೌರವನು ಭಿಮನ ಹೊಡೆತದಿಂದ ಆದ ಗಾಯದಿಂದ ಒಸರುವ ರಕ್ತವನ್ನು ಧೂಳಿನಿಂದಲೆ ಗಾಯದ ಹೊರಗೆ ತೊಡೆದು ತೊಡೆದು ಒತ್ತಿದನು. ಅವನಿಗೆ ಕೋಪದ ಕಾಯಕವು ಕಣ್ಣುಗಳಲ್ಲಿ ಝಳಪಿಸಿತು. ಹುಬ್ಬಿನಲ್ಲಿ ಬಿಸಿ ಉಸಿರಲ್ಲಿ ಓರೆನೋಟದಿಂದ ನೋಡುವ ಶತ್ರುಭಟ ಭೀಮನನ್ನು ಓರೆಯಾಗಿ ಆಕ್ರಮಣದ ಭಂಗಿಯಲ್ಲಿ ನೋಡುತ್ತಾ, ಸಾರಸತ್ವದ ವಿಜಯದ ಸಾಧನೆಯನ್ನು ಕೈಗೂಡಿಸಿಕೊಳ್ಳಲು ಕೈನೀಡಿ ಬಿದ್ದ ಗದೆಯನ್ನು ಹಿಡಿದು ಎದ್ದನು.
ಹಾನಿಯೆಮಗಾಯ್ತೆಂದು ಕಡುಸು
ಮ್ಮಾನವುಕ್ಕಿತೆ ನಿಮಿಷದಲಿ ದು
ಮ್ಮಾನ ಶರಧಿಯೊಳದ್ದುವೆನು ತಿದ್ದುವೆನು ನಿನ್ನವರ |
ಈ ನಗೆಯನೀ ಬಗೆಯನೀ ವಿಜ
ಯಾನುರಾಗವ ನಿಲಿಸುವೆನು ಯಮ
ಸೂನು ಸೈರಿಸೆನುತ್ತ ಜರೆದನು ವಾಮಹಸ್ತದಲಿ || ೩೨ ||
ಪದವಿಭಾಗ-ಅರ್ಥ:'ಹಾನಿ+ ಯೆ+ ಎಮಗೆ+ ಆಯ್ತೆಂದು ಕಡುಸುಮ್ಮಾನ+ ವು+ ಉಕ್ಕಿತೆ? ನಿಮಿಷದಲಿ ದುಮ್ಮಾನ (ದುಃಖ,ದುಗುಡ,ಅಳಲು) ಶರಧಿಯೊಳು+ ಅದ್ದುವೆನು ತಿದ್ದುವೆನು ನಿನ್ನವರ ಈ ನಗೆಯನು+ ಈ ಬಗೆಯನು ಈ ವಿಜಯ+ ಅನುರಾಗವ ನಿಲಿಸುವೆನು ಯಮಸೂನು(ಧರ್ಮಜ) ಸೈರಿಸೆನುತ್ತ ಜರೆದನು ವಾಮಹಸ್ತದಲಿ(ಎಡದ ಕೈಯನ್ನು ಚಾಚಿ).
ಅರ್ಥ:ಭೀಮನ ಪೆಟ್ಟಿನಿಂದ ಸಾವರಿಸಿಕೊಂಡ ಕೌರವನು,'ನನಗೆ ಹಾನಿಯಾಯಿತು ಎಂದು ನಿಮಗೆ ಬಹಳ ಸಂತಸ ನಿಮಿಷದಲ್ಲಿ ಉಕ್ಕಿತೆ? ಮತ್ತೊಂದು ನಿಮಿಷದಲ್ಲಿ ನಿಮ್ಮನ್ನು ದುಃಖಸಾಗರದಲ್ಲಿ ಅದ್ದುವೆನು. ನಿನ್ನವರ ಈ ನಗೆಯನ್ನು ತಿದ್ದುವೆನು-ಬದಲಾಯಿಸುವೆನು. ಈ ನಿಮ್ಮ ನೆಡತೆಯನ್ನು, ಈ ವಿಜಯದ ಅನುರಾಗವನ್ನು ನಿಲ್ಲಿಸುವೆನು. ಧರ್ಮಜನೇ ಸೈರಿಸು, ಸ್ವಲ್ಪ ತಡೆದುಕೊ, ಎನುತ್ತಾ ಎಡದ ಕೈಯನ್ನು ಚಾಚಿ ನಿಂದಿಸಿದನು.
ಅರ್ಥ:ಕೌರವನ ಮಾತಿಗೆ ಭೀಮನು,'ಕೌರವಾ ನೀನು ಬಂಜೆಯಂಥ ಪ್ರಯೋಜನವಿಲ್ಲದ ಮಾತನಾಡಿ ಬೈದರೆ ಸಮರ್ಥನೇ? ಹೊಡೆದು ತೋರಿಸಯ್ಯಾ ನಿನ್ನ ಸಾಮರ್ಥ್ಯವನ್ನು' ಎಂದನು. ಮತ್ತೆ, 'ನೀನು ಬಾಹುವಿನಿಂದ ಹೊರಾಟದಲ್ಲಿ ಹೊಡೆಯುವವನೋ ಅಥವಾ ಬಾಯಿಯಿಂದಲೋ? ಜಾತಿ ಧರ್ಮದಲ್ಲಿ ನೀನು ಯಾರು? ನಿನ್ನ ಹತ್ತಿರ ಆಯುಧವಿದೆ, ಲಕ್ಷ್ಯಪಣವಿದೆ. ನಮಗೆ ನಿನ್ನ ಗುಪ್ತಪ್ರತಾಪವನನ್ನು ತೋರಿಸುವುದಾದರೆ, ಬಂದು ಪ್ರಕಟಿಸು,' ಎನುತ್ತ ಭೀಮನು ಕುರುಪತಿಯನ್ನು ತಿವಿದನು.
ಅರ್ಥ: ಕೌರವನು ಮತ್ತೆ ಭೀಮಸೇನನ ನೆತ್ತಿಯನ್ನು ಗುರಿಮಾಡಿ ನಿಷ್ಠುರತೆಯಿಂದ ಹೊಡೆದನು. ಭೀಮನಿಗೆ ಕಳೆ- ತಾಪಹೆಚ್ಚಿ ಸಮತೋಲ ಹೋಗಿ - ಝೋಂಪಿಸಿ ಭೀಮನು ಗಟ್ಟಿ ಆವರಿಸಿದ ಮೂರ್ಛೆಯಿಂದ ತಲೆ ತಿರುಗಿ ಬಿದ್ದನು. ಚಲನೆ ಇಲ್ಲದೆ ಕೆತ್ತಿದಂತೆ ಬಿಟ್ಟ ಕಣ್ಣುಗಳು, ನಿಂತ ಉಸಿರಿನ ಲಕ್ಷಣ,ಅವನ ಸುತ್ತಲೂ ಉಕ್ಕುವ ರಕ್ತ, ಪಕ್ಕಕ್ಕೆ ಸಿಡಿದು ಬಿದ್ದ ಗದೆ, ಹೀಗಿಉವ ವೀರನು- ಭೀಮನು ಮರವೆಯಲಿ ಒರಗಿದನು. ಮೂರ್ಛೆಹೋಗಿ ಬಿದ್ದನು.
ಅರ್ಥ: ಚಿಂತೆಯಿಂದ ಕೃಷ್ಣನು ಬಲರಾಮನ ಮುಖವನ್ನು ನೋಡಿದನು. ಆಗ ಆತನು,'ಇದು ಕಾಳಗವಲ್ಲವೇ? ದಃಖ ಏಕೆ? ಈ ಸಮಯದಲ್ಲಿ ಮಾಡಬೇಕಾದುದನ್ನು ಮಾಡಿದಿರಿ. ಹಿಂದಿನ ಕಾಲದಲ್ಲಿದ್ದ ಶತ್ರುತ್ವವನ್ನು ಬಿಡಿ. ಕುರುಪತಿ ಕೌರವನೊಡನೆ ಸಂಧಿಗೆ ಸಂತೋಷದಿಂದ ಪಾಂಡವರು ನಿಲ್ಲಲಿ. ಯುಧಿಷ್ಠಿರನು ಮೊದಲು ಆಡಿದ ಮಾತುಗಳನ್ನು ಕೆಡಿಸದಿರು. ಅದಕ್ಕೆ ತಪ್ಪಬೇಡಿ. ಎಂದನು ಆ ಕೃಷ್ಣನಿಗೆ ಬಲರಾಮ.
ಅರ್ಥ: ಅರಸನೇ ಕೇಳು,'ಬಿದ್ದ ಭೀಮನ ಬಳಿಗೆ ಬಂದ ಅರ್ಜುನನು ಅವನ ಮುಖಕ್ಕೆ ಬೆರಳನ್ನು ಒಡ್ಡಿ ಭೀಮನ ಉಸುರನ್ನು ಗಮನಿಸಿ ಮರಳಿದನು; ಅವನು ಮುರಹರ ಕೃಷ್ಣನನ್ನು ಪ್ರತ್ಯೇಕ ರಹಸ್ಯವಾಗಿ ಕರೆದು ಸಪ್ರಾಣನು- ಭೀಮನು ಗದೆಯ ಅತಿಶಯವಾದ ಪೆಟ್ಟಿನ ಪರಿಶ್ರಮದಿಂದ ಬಳಲಿದನು,' ಎಂದನು+ ಆ ಪಾರ್ಥ.
ಪದವಿಭಾಗ-ಅರ್ಥ: ದೇವ ಬೆಸಸಿ (ಹೇಳಿ)+ ಇನ್ನು+ ಅನಿಲಸೂನು(ಭೀಮ) ಸಜೀವನ ಸಹಿತ ನಿಬರ್ಹಣ(ಬರ್ಹಿ - ಬರ್ಹಣ, ವಿಬರ್ಹಣ? -ಬರ್ಹಿ= ನಾಮಪದ (ಸಂ) ೧ ಬೆಂಕಿ, ಅಗ್ನಿ) ಪ್ರಸ್ತಾವವನು ಕರುಣಿಸುವುದು+ ಆತನ ಧರ್ಮವಿಕೃತಿಗಳ ನೀವು ಕಂಡಿರೆ, ನಾಭಿ ಜಂಘೆಗೆ ಡಾವರಿಸಿದನು (ಡಾವರಿಸು= ಚುಚ್ಚು,ತಿವಿ ) ಹಲವು ಬಾರಿ, ಜಯ+ ಅವಲಂಬನವು+ ಎಂತು(ಹೇಗೆ) ಕೃಪೆಮಾಡು- ಹೇಳು+ ಎಂದನು+ ಆ ಪಾರ್ಥ
ಅರ್ಥ: ದೇವ- ಕೃಷ್ಣಾ, ಹೇಳಿ ಇನ್ನು ಭೀಮನು ಸಜೀವ ಸಹಿತ ಯುದ್ಧವನ್ನು ನಿಭಾಹಿಸುವ ಪ್ರಸ್ತಾವವನ್ನು ಕರುಣಿಸಿ ಹೇಳುವುದು. ಆತನ ದೇಹಧರ್ಮದ ವಿಕೃತಿಗಳನ್ನು- ಕೆಡುಕನ್ನು ನೀವು ಗಮನಿಸಿದಿರಾ?, ಕೌರವನು ನಾಭಿ ಮತ್ತು ಜಂಘೆಗೆ ಹಲವು ಬಾರಿ ತಿವಿದನು. ಯುದ್ಧದಲ್ಲಿ ಈಗ ಜಯದ ಪಡೆಯುವ ಬಗೆ ಹೇಗೆ? ಕೃಪೆಮಾಡು ಎಂದನು ಆ ಪಾರ್ಥ.
ನೀವು ಮೊದಲಲಿ ಬೆಸಸಿದಿರಿ ಮಾ
ಯಾವಿಗಳ ಮಾಯೆಯಲಿ ಗೆಲುವುದು
ದೈವಿಕೃತಿಯಿದು ರಾಜಮಂತ್ರದ ಸಾರತರವೆಂದು |
ಈ ವಿರೋಧಿಯ ಧರ್ಮಗತಿ ಸಂ
ಭಾವವನು ಕರ್ತವ್ಯಭಾವವ
ನೀವು ಬಲ್ಲಿರಿಯೆಂದನರ್ಜುನದೇವ ವಿನಯದಲಿ || ೪೪ ||
ಪದವಿಭಾಗ-ಅರ್ಥ:ನೀವು ಮೊದಲಲಿ ಬೆಸಸಿದಿರಿ ಮಾಯಾವಿಗಳ ಮಾಯೆಯಲಿ ಗೆಲುವುದು ದೈವಿಕೃತಿ+ ಯಿ+ ಇದು ರಾಜಮಂತ್ರದ ಸಾರತರವೆಂದು; ಈ ವಿರೋಧಿಯ ಧರ್ಮಗತಿ ಸಂಭಾವವನು(ಮುಂದೆ ಆಗಬೇಕಾದ ನೆಡೆ) ಕರ್ತವ್ಯಭಾವವ ನೀವು ಬಲ್ಲಿರಿ+ ಯೆಂ+ ಏಂದನು+ ಅರ್ಜುನದೇವ ವಿನಯದಲಿ.
ಅರ್ಥ:ಅರ್ಜುನ ಹೇಳಿದ,'ಕೃಷ್ಣಾ, ನೀವು ಈ ಯುದ್ಧಕ್ಕೆ ಮೊದಲು ಹೇಳಿದಿರಿ- 'ಮಾಯಾವಿಗಳನ್ನು ಮಾಯೆಯಿಂದಲೇ ಗೆಲ್ಲಬೇಕು ಎಂದು, ಇದು ದೈವೀ ಕೃತಿ- ನಿಯಮ, ರಾಜನೀತಿಯ ಸಾರತರವು, ಎಂದು; ಈ ವಿರೋಧಿಯಾದ ಕೌರವನ ಧರ್ಮಗತಿಯಂತೆ ಮುಂದೆ ಆಗಬೇಕಾದ ಕರ್ತವ್ಯದ ವಿಚಾರವನ್ನು ನೀವು ಬಲ್ಲಿರಿ, ಏಂದು ವಿನಯದಿಂದ ಹೇಳಿದನು.
ಧಾತುಗೆಟ್ಟನು ಭೀಮ ಮುಸುಕಿತು
ಭೀತಿ ನಮ್ಮೆಲ್ಲರನು ದೈವ
ವ್ರಾತವಾತನ ಕೊಂಡು ಕೊನರಿತು ಹೊಯ್ದು ಹೂಮಳೆಯ |
ಪಾತಕಕೆ ಪಡವಾಗದಮಳ
ಖ್ಯಾತಿ ನೋಯದೆ ವಿಜಯಸಿರಿ ರಾ
ಗಾತಿಶಯದಲಿ ನಮ್ಮ ರಮಿಸುವ ದೆಸೆಯ ಬೆಸಸೆಂದ || ೪೫ ||
ಪದವಿಭಾಗ-ಅರ್ಥ: ಧಾತುಗೆಟ್ಟನು(ಧಾತು= ಎಚ್ಚರ,ಪ್ರಜ್ಞೆ) ಭೀಮ ಮುಸುಕಿತು ಭೀತಿ ನಮ್ಮೆಲ್ಲರನು ದೈವವ್ರಾತವು+ ಆತನ ಕೊಂಡು ಕೊನರಿತು ಹೊಯ್ದು ಹೂಮಳೆಯ ಪಾತಕಕೆ ಪಡವಾಗದೆ (ಪಡವು= ಆಶ್ರಯ,ನೆಲೆ)+ ಅಮಳ ಖ್ಯಾತಿ ನೋಯದೆ ವಿಜಯಸಿರಿ ರಾಗಾತಿಶಯದಲಿ (ರಾಗ= ಅನುರಾಗ, ಪ್ರೀತಿ) ನಮ್ಮ ರಮಿಸುವ ದೆಸೆಯ ಬೆಸಸೆಂದ.
ಅರ್ಥ:ಅರ್ಜುನನು,'ಭೀಮನು ಪ್ರಜ್ಞೆತಪ್ಪಿದ್ದಾನೆ. ನಮ್ಮೆಲ್ಲರಿಗೂ ಮರಣಿಸಿದನೋ ಎಂಬ ಭೀತಿ ಆವರಿಸಿದೆ. ದೇವತೆಗಳ ಸಮೂಹವು ಆತನನ್ನು ಕೊಂಡಾಡಿ ಅವನ ಮೇಲೆ ಹೂಮಳೆಯನ್ನು ಹೊಯಿದು ಕೂಗಿತು. ಅವನ ಪಾತಕಕ್ಕೆ- ಪಾಪಕೆಲಸಕ್ಕೆ ನೆಲೆಯಾಗದೆ ಅಮಲ ಖ್ಯಾತಿ, ಪಾಪಿಯು ಗೆದ್ದಾಗ ವಿಜಯಲಕ್ಷ್ಮಿ ನೋಯಳೇ? ನಮ್ಮ ಮೇಲಿನ ವಿಶೇಷ ಪ್ರೀತಿಯಿರುವ ನೀವು ನಮಗೆ ಸಂತೋಷವಾಗುವ ಮಾರ್ಗವನ್ನು ಹೇಳಿ,' ಎಂದ.
ಅರ್ಥ:ಅರ್ಜುನನು ಕೃಷ್ಣನನ್ನು ಪ್ರಾರ್ಥಿಸಿದ,'ಅನಿಲಸುತನಾದ ಭೀಮನು ಪ್ರಾಣವುಳ್ಳವನಾಗಲಿ, ಶತ್ರುವಾದ ಕೌರವನ ಊರುಭಂಗವೇ ಮೊದಲು ಸಭಾಮಧ್ಯದಲ್ಲಿ ಕೌರವನನ್ನು ಕುರಿತು ಭೀಮನುಮಾಡಿದ ಪ್ರತಿಜ್ಞೆಯಲ್ಲವೇ? ಅದನ್ನು ನೆನಸಿಕೊಡಿ ಸಾಕು ಇನ್ನು ಬೇರೆ ಇನ್ನೊಂದು ಅನುನಯದ ಕೊಡಿಗೆ ತಾನೇ ಏಕೆ ಬೇಕು. ನಿಮ್ಮ ಆಶಿರ್ವಾದದಿಂದ ವಿಜಯಲಕ್ಷ್ಮಿಗೆ ದ್ರುಪದಕುಮಾರಿ ದ್ರೌಪದಿಯು ತಪ್ಪದೆ ಸವತಿಯಾಗುವಳು', ಎಂದ.(ಭೀಮನು ಗಲ್ಲಬೇಕು. ಆಗ ಯುದ್ಧದಲ್ಲಿ ವಿಜಯ ಲಕ್ಷ್ಮಿಯು ಭೀಮನನ್ನು ವರಿಸಿದರೆ ಭೀಮನ ಮೊದಲ ಪತ್ನಿ ದ್ರೌಪದಿಯು ವಿಜಯಲಕ್ಷ್ಮಿಗೆ ಸವತಿಯಾಗುತ್ತಾಳೆ)
ಅರ್ಥ:ಅರಸನೇ ಕೇಳು,'ಆಕ್ಷಣದಲ್ಲಿ ಕೃಷ್ಣನು ವಾಯುದೇವನ ಸ್ಮರಣೆಯನ್ನು ಮಾಡಿದನು; ವಾಯುವು ಮಗನ ಅಂಗೋಪಾಂಗಗಳಲ್ಲಿ ಸಂಚರಿಸಿದನು. ಭೀಮನ ದೇಹದ ನಾಳಗಲಲ್ಲಿ ತರತರದ ನಾಡಿಗಳೊಳಗೆ ವಿಸ್ತರಿಸಿ, ಮತ್ತೆ ಮೂಲಾಧಾರ ಚಕ್ರದಲ್ಲಿ ಚೇತರಿಸಿ ಸರ್ವಾಂಗದಲ್ಲಿಯೂ ಪ್ರಾಣವಾಯುವು ಪಸರಿಸಿದನು.
ತ್ರಾಣವಿಮ್ಮಡಿಯಾಯ್ತು ತಿರುಗಿದ
ಗೋಣು ಮರಳಿತು ರೋಷವಹ್ನಿಗೆ
ಸಾಣೆವಿಡಿದವೊಲಾಯ್ತು ಕಣ್ಣುಗುಳಿದುವು ಕೇಸುರಿಯ |
ಠಾಣವೆಡಹಿದ ಗದೆಯ ರಣಬಿ
ನ್ನಾಣ ಮಸುಳಿದ ಮಾನಮರ್ದನ
ದೂಣೆಯದ ಸವ್ಯಥೆಯ ಭಟ ಸಂತೈಸಿದನು ತನುವ || ೪೮ ||
ಪದವಿಭಾಗ-ಅರ್ಥ: ತ್ರಾಣವು+ ಇಮ್ಮಡಿಯಾಯ್ತು ತಿರುಗಿದ ಗೋಣು(ಕೊರಳು) ಮರಳಿತು ರೋಷವಹ್ನಿಗೆ (ವಹ್ನಿ= ಬೆಂಕಿ)ಸಾಣೆವಿಡಿದವೊಲಾಯ್ತು ಕಣ್ಣು+ ಉಗುಳಿದುವು ಕೇಸುರಿಯ(ಕೆಂಪು), ಠಾಣವ+ ಎಡಹಿದ (ಠಾಣ= ಸ್ಥಾನ; ಸ್ಥಾನವನ್ನು ಬಿಟ್ಟು ದೂರ ಬಿದ್ದ ) ಗದೆಯ ರಣಬಿನ್ನಾಣ ಮಸುಳುದ(ಕಾಂತಿಹೀನವಾಗು,ಮಂಕಾಗು,ಮಸುಳು) ಮಾನಮರ್ದನ ದೂಣೆಯದ (ದೂಣೆಯದ = ದೂಷಣೆಯ+ ಅದ ಪ್ರಾಸಕ್ಕಾಗಿ ಷ ಅಕ್ಷರ ಬಿಟ್ಟಿದೆ; ಅಥವಾ ವಿದೀರ್ಣ- ದೀರ್ಣ= ದೊಣೆ?: ಮಾನವನ್ನು ಕೆಡಿಸಿದ, ಘಾಸಿಗೊಂಡುದು) ಸವ್ಯಥೆಯ ಭಟ ಸಂತೈಸಿದನು ತನುವ ದೂರ್ಣ
ಅರ್ಥ:ಕೃಷ್ನನು ವಾಯುವನ್ನು ಸ್ಮರಿಸಿದಕೂಡಲೆ ಭೀಮನಲ್ಲಿ ತ್ರಾಣವು/ಶಕ್ತಿ ಇಮ್ಮಡಿಯಾಯ್ತು. ತಿರುಗಿ ಬಿದ್ದ ಕೊರಳು ಮರಳಿ ಗಟ್ಟಿಯಾಯಿತು. ರೋಷದ ಬೆಂಕಿಗೆ ಸಾಣೆವಹಿಡಿದಹಾಗಾಯಿತು. ಭೀಮನ ಕಣ್ಣುಗಳು ಕೆಂಪು ಕೆಂಡವನ್ನು ಉಗುಳಿದುವು. ಸ್ವಸ್ಥಾನವನ್ನು ಬಿಟ್ಟು ದೂರ ಬಿದ್ದ ಗದೆಯನ್ನೂ ರಣರಂಗದ ಬೆಡಗನ್ನು ಕಳೆದ, ಕಾಂತಿಹೀನಕರವಾದ ಮಾನವ ಕೆಡಿಸಿದ ದೂಷಣೆಯಿಂದ ಘಾಸಿಗೊಂಡು ಸ-ವ್ಯಥೆಯನ್ನೂ ಬಳಲಿದ ದೇಹವನ್ನೂ ವೀರ ಭೀಮನು ಸಂತೈಸಿಕೊಂಡನು.
ಅರ್ಥ:ಕೌರವನು ಭೀಮನಿಗೆ ಹೊಡೆದು, ತಿರುಗಿ ಕರಣಗತಿಯಲಿ ಮುಂದೆಬಂದು ಆಕಾಶಕ್ಕೆ ಹಾರಿ ಮರಳಿ/ಪುನಃ ಹೊಡೆದು ಹಿಂದಕ್ಕೆ ಹೋಗುವ ನೃಪ ಕೌರವನ ತೊಡೆಗಳನ್ನು ಆ ಭೀಮನು ಗುರಿಇಟ್ಟನು. ನುಗ್ಗಿ ಮೇಲೆಬಿದ್ದ ಅವನ ಗದೆಯು ಕೌರವನ ಹೆದ್ದೊಡೆಗಳನ್ನು ಮುರಿದುಹಾಕಿತು. ಅದು ಭೂಮಿಯನ್ನು ರಕ್ತದಿಂದ ನೆನೆಸಿತು. ಕೌರವರರಾಯನು ನೆಲದ ಮೇಲೆ ಧೊಪ್ಪನೆ ಬಿದ್ದನು.
ಅರ್ಥ:ಸಮಜಯನು ಭೂಪನೇ ಕೇಳು,'ನಿನ್ನಾತನು- ನಿನ್ನ ಮಗನು ಬಿದ್ದನೈಯ್ಯಾ! ಇನ್ನೇನು ನಿನ್ನ ದಾಯಾದಿಗರಾದ ಪಾಂಡವರು ಎದ್ದರಯ್ಯಾ. ಹಿಂದೆ ಪಾಂಡವರೊಡನೆ ಜೂಜನ್ನು ಆಡಿ ಗೆದ್ದುದಕ್ಕೆ ಫಲ ಬಂದಿತು. ಸಂಧಾನದಲ್ಲಿ ಛಲವನ್ನು ಆಶ್ರಯಿಸಿದ್ದಕ್ಕೆ ಒಳ್ಳೆಯದಾಯಿತೆ? ಬಲವಾದ ಹಗೆ-ಶತ್ರು ಸೋತುಬಿದ್ದನೆಂದು ಭೀಮನು ಮರುಕಪಟ್ಟನೆ? ಪವನಜನಾದ ಭೀಮನ ಉದ್ದಟ ಮತ್ತು ಒರಟುತನಕ್ಕೆ ಏನನ್ನು ಹೇಳಲಿ?' ಎಂದ.
ಏಕೆ ಸಂಜಯ ಕೌರವೇಂದ್ರನ
ಸಾಕಿತಕೆ ಫಲವಾಯ್ತು ನೀ ಬರಿ
ದೇಕೆ ಚುಚ್ಚುವೆ ಕಾಸಿ ಬಾದಣಗೊರೆದ ಘಾಯದಲಿ ||
ನೂಕಿದರೆ ಬಲಭದ್ರನನು ಮೇ
ಲೇಕೆ ಪವನಜ ಮುನಿದನವರ
ವ್ಯಾಕುಳರಲೇ ವೀರನಾರಾಯಣನ ಕರುಣದಲಿ || ೫೪ ||
ಪದವಿಭಾಗ-ಅರ್ಥ: ಏಕೆ ಸಂಜಯ ಕೌರವೇಂದ್ರನ ಸಾಕಿತಕೆ ಫಲವಾಯ್ತು; ನೀ ಬರಿದೇಕೆ ಚುಚ್ಚುವೆ; ಕಾಸಿ ಬಾದಣಗೊರೆದ(ಬಾದಣಗೊರೆ= ತೂತಾಗುವಂತೆ ಕೊರೆ. ರಂಧ್ರವಾಗು.) ಘಾಯದಲಿ; ನೂಕಿದರೆ ಬಲಭದ್ರನನು; ಮೇಲ+ ಏಕೆ ಪವನಜ(ಭೀಮನು) ಮುನಿದನು+; ಅವರ ವ್ಯಾಕುಳರಲೇ ವೀರನಾರಾಯಣನ ಕರುಣದಲಿ.
ಅರ್ಥ:ರಾಜ ಧೃತರಾಷ್ಟ್ರನು ಕೇಳಿದ, ಸಂಜಯ ಏಕೆ ನನ್ನನ್ನು ದೂರುವೆ? ಕೌರವೇಂದ್ರನನ್ನು ಸಾಕಿದ್ದಕ್ಕೆ ಈ ಫಲವಾಯಿತು; ನೀನು ಬರಿದೆ ಏಕೆ ನನ್ನನ್ನು ಚುಚ್ಚುವೆ; ಸರಳನ್ನು ಕಾಸಿ ತೂತಾಗುವಂತೆ ಘಾಯದಲ್ಲಿ ಕೊರೆದಹಾಗಿದೆ ನಿನ್ನಮಾತು.ಬಲರಾಮನನ್ನು ನಿರ್ಲಕ್ಷಮಾಡಿದರೆ? ಅವನ ಮೇಲೆ ಏಕೆ ಭೀಮನು ಮುನಿದನು? ವೀರನಾರಾಯಣನಾದ ಕೃಷ್ಣನ ಕರುಣದಲ್ಲಿ ಇರುವ ಅವರು ಎಂದಾದರೂ ವ್ಯಾಕುಲರಲೇ- ದುಃಖಿತರಾದುವರೇ? ಇಲ್ಲ.
↑ ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
↑ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.