ಕುಮಾರವ್ಯಾಸ ಭಾರತ/ಸಟೀಕಾ (೧೦.ಗದಾಪರ್ವ::ಸಂಧಿ-೨)

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

<ಕುಮಾರವ್ಯಾಸಭಾರತ-ಸಟೀಕಾ

ಗದಾಪರ್ವ: ೨ ನೆಯ ಸಂಧಿ[ಸಂಪಾದಿಸಿ]

ಸೂಚನೆ[ಸಂಪಾದಿಸಿ]

ಸೂಚನೆ~ಸೂ.
ಸಕಲಬಲ ನುಗ್ಗಾಯ್ತು ಸಮಸ
ಪ್ತಕರು ಮಡಿದರು ಪಾರ್ಥಶರದಲಿ
ಶಕುನಿಯನು ಸಂಗ್ರಾಮದಲಿ ಸೀಳಿದನು ಸಹದೇವ [ಸೂ.]

ಪದವಿಭಾಗ-ಅರ್ಥ: ಸಕಲಬಲ ನುಗ್ಗಾಯ್ತು ಸಮಸಪ್ತಕರು ಮಡಿದರು ಪಾರ್ಥಶರದಲಿ ಶಕುನಿಯನು ಸಂಗ್ರಾಮದಲಿ ಸೀಳಿದನು ಸಹದೇವ
ಅರ್ಥ:ಕೌರವನ ಸಕಲ ಸೈನ್ಯವೂ ನಾಶವಾಯಿತು. ಪಾರ್ಥನ ಬಾಣಗಳಿಂದ ಸಂಸಪ್ತಕರು ಮಡಿದರು. ಶಕುನಿಯನ್ನು ಯುದ್ಧದಲ್ಲಿ ಸಹದೇವನು ಕೊಂದನು. [೧][೨]

ಸಂಜಯ ಕೌರವನನ್ನು ಹುಡುಕಿದುದು[ಸಂಪಾದಿಸಿ]

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬಂದು ಕುರುಭೂ
ಪಾಲಕನನರಸಿದನು ಸಂಗರ ರಂಗಭೂಮಿಯಲಿ |
ಮೇಲುಸುಯಿಧಾನದ ತುರಂಗಮ
ಜಾಲ ಸಹಿತಗಲದಲಿ ಕುರುಭೂ
ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ || ೧ ||
ಪದವಿಭಾಗ-ಅರ್ಥ: ಕೇಳು ಜನಮೇಜಯ ಧರಿತ್ರೀಪಾಲ ಸಂಜಯ ಬಂದು ಕುರುಭೂಪಾಲಕನನು ಅರಸಿದನು ಸಂಗರ(ಯುದ್ಧ) ರಂಗಭೂಮಿಯಲಿ ಮೇಲು ಸುಯಿಧಾನದ (1. ಕಾವಲು. 2. ಎಚ್ಚರಿಕೆ.) ತುರಂಗಮ ಜಾಲಸಹಿತ+ ಅಗಲದಲಿ ಕುರುಭೂಪಾಲನು ಆವೆಡಯೆನುತ ಬೆಸಗೊಳುತ+ ಅರಸನು ನೃಪನ.
ಅರ್ಥ:ವೈಶಂಪಾಯನ ಮುನಿ ಹೇಳಿದ, ಜನಮೇಜಯ ಭೂಪಾಲನೇ ಕೇಳು, ಸಂಜಯನು ಬಂದು ಕುರುಭೂಪಾಲ ಕೌರವನನ್ನು ಯುದ್ಧಭೂಮಿಯಲ್ಲಿ ಹುಡುಕಿದನು. ಮೇಲು ರಾಜ ಕಾವಲಿನ ಕುದುರೆಗಳ ಜಾಲಸಹಿತ ರಣರಂಗದ ಅಗಲದಲ್ಲಿ ಕುರುಭೂಪಾಲಕೌರವನು ಎಲ್ಲಿರುವನು ಎನ್ನತ್ತಾ, ಅಲ್ಲಿ ಇಲ್ಲಿ ಕೇಳುತ್ತಾ ನೃಪ ಕೌರವನನ್ನು ಹುಡುಕಿದನು.
ವಂದಿಗಳ ನಿಸ್ಸಾಳಬಡಿಕರ
ಮಂದಿ ಹಡಪಿಗ ಚಾಹಿ ಸೂತರ
ಸಂದಣಿಗಳೌಷಧಿಕ ಹಯಗಜಸಂವಿಧಾಯಕರು |
ನಿಂದುದದು ಸಂಖ್ಯಾತವಿನಿಬರ
ನಂದು ಸಂಜಯ ಕರೆದು ಕೇಳಿದ
ನಿಂದುಕುಲಸಂಭವನ ಕಂಡಿರೆ ಕೌರವೇಶ್ವರನ || ೨ ||
ಪದವಿಭಾಗ-ಅರ್ಥ: ವಂದಿಗಳ ನಿಸ್ಸಾಳಬಡಿಕರ ಮಂದಿ ಹಡಪಿಗ (ಹಡಪ= ಚೀಲ) ಚಾಹಿ ಸೂತರ (ಮೌನದ ರಥನೆಡೆಸುವ) ಸಂದಣಿಗಳ+ ಔಷಧಿಕ ಹಯಗಜಸಂವಿಧಾಯಕರು ನಿಂದುದು+ ಅದು ಸಂಖ್ಯಾತವು (ಅನೇಕ)+ ಅನಿಬರ ನಂದು ಸಂಜಯ ಕರೆದು ಕೇಳಿದನು+ ಇಂದುಕುಲಸಂಭವನ ಕಂಡಿರೆ ಕೌರವೇಶ್ವರನ
ಅರ್ಥ:ವಂದಿಗಳಮಾಗಧರನ್ನೂ, ವಾದ್ಯಬಾರಿಸುವವರನ್ನೂ, ಕಂಡ ಮಂದಿ/ಜನರನ್ನೂ, ಚೀಲದಲ್ಲಿ ಅಗತ್ಯವಸ್ತುಗಳನ್ನು ಹೊರುವವರನ್ನೂ, ಮೌನದ ರಥನೆಡೆಸುವ ಸೂತರನ್ನೂ, ಗುಂಪುಗೂಡಿದವರನ್ನೂ,ಔಷಧಿಕರನ್ನೂ, ಹಯಗಜಗಳ ತರಬೇತುದಾರರನ್ನೂ, ನಿಂತಿರುವವರನ್ನೂ, ಅನೇಕರನ್ನೂ, ಎಲ್ಲರನ್ನೂ,ಅಂದು ಸಂಜಯನು ಕರೆದು ಚಂದ್ರಕುಲಸಂಭವನಾದ ಕೌರವೇಶ್ವರನನ್ನು ಕಂಡಿರೆ?- ಎಂದು ಕೇಳಿದನು.
ಕೂಡೆ ಸಂಜಯನರಸಿದನು ನಡೆ
ಜೋಡಿನವು ನಾನೂರು ಕುದುರೆಯ
ಕೂಡಿ ಕೌರವನೃಪನ ಕಾಣದೆ ಕಳನ ಚೌಕದಲಿ |
ನೋಡುತಿರೆ ಸಾತ್ಯಕಿ ಚತುರ್ಬಲ
ಗೂಡಿ ಕವಿದನು ಹಯಬಲವ ಹುಡಿ
ಮಾಡಿದನು ನಾನೂರ ಕೊಂದನು ಸರಳ ಸಾರದಲಿ || ೩ ||
ಪದವಿಭಾಗ-ಅರ್ಥ: ಕೂಡೆ ಸಂಜಯನು+ ಅರಸಿದನು ನಡೆ (ದನ, ಎತ್ತು, ಕುದುರೆ, ಪ್ರಾಣಿಗಳ ಎಣಿಕೆಯ ನುಡಿ) ಜೋಡಿನವು (ಎರಡು,ಜೊತೆ) ನಾನೂರು ಕುದುರೆಯ ಕೂಡಿ ಕೌರವನೃಪನ ಕಾಣದೆ ಕಳನ ಚೌಕದಲಿ ನೋಡುತಿರೆ (ಹುಡುಕುತ್ತಿರಲು) ಸಾತ್ಯಕಿ ಚತುರ್ಬಲಗೂಡಿ ಕವಿದನು ಹಯಬಲವ ಹುಡಿಮಾಡಿದನು ನಾನೂರ ಕೊಂದನು ಸರಳ ಸಾರದಲಿ(ಎಲ್ಲಾಒಟ್ಟಿಗೆ - ಸಾರಾ ಸಗಟಾಗಿ)
ಅರ್ಥ:ಧೃತರಾಷ್ಟನಿಂದ ಅಪ್ಪಣೆ ಪಡೆದ ಕೂಡಲೆ, ಸಂಜಯನು ನಾನೂರು ನಡೆ ಜೋಡಿನ ಕುದುರೆಯನ್ನು ಕೂಡಿಕೊಂಡು ಕೌರವನನ್ನು ಹುಡುಕಿದನು. ಕೌರವನೃಪನನ್ನು ರಣರಂಗದ ಚೌಕದಲಿ ಕಾಣದೆ ನೋಡುತಿರಲು, ಸಾತ್ಯಕಿಉ ಚತುರ್ಬಲಗೂಡಿಕೊಂಡು ಸಂಜಯನನ್ನ ಮುತ್ತಿದನು. ಸಂಜಯನ ಬಳಿಯಲ್ಲಿದ್ದಕುದುರೆ ಸೇನೆಯನ್ನು ಹುಡಿಮಾಡಿದನು. ಬಾಣಗಳಿಂದ ಹೊಡೆದು ನಾನೂರು ಕೊದುರೆಗಳನ್ನು ಪೂರಾ ಕೊಂದನು.
ಹಿಡಿದು ಸಂಜಯನನು ವಿಭಾಡಿಸಿ
ಕೆಡಹಿದನು ಬಲುರಾವುತರನವ
ಗಡವ ಕೇಳಿದು ದ್ರೋಣಸುತ ಕೃತವರ್ಮ ಗೌತಮರು |
ಫಡಫಡೆಲವೊ ಸಂಜಯನ ಬಿಡು
ಬಿಡು ಮದೀಯ ಮಹಾಶರಕೆ ತಲೆ
ಗೊಡುವಡಿದಿರಾಗೆನುತ ತರುಬಿದರಿವರು ಸಾತ್ಯಕಿಯ || ೪ ||
ಪದವಿಭಾಗ-ಅರ್ಥ: ಹಿಡಿದು ಸಂಜಯನನು ವಿಭಾಡಿಸಿ ಕೆಡಹಿದನು ಬಲುರಾವುತರನು+ ಅವಗಡವ ಕೇಳಿದು ದ್ರೋಣಸುತ ಕೃತವರ್ಮ ಗೌತಮರು ಫಡಫಡೆಲವೊ ಸಂಜಯನ ಬಿಡುಬಿಡು ಮದೀಯ(ನನ್ನ) ಮಹಾಶರಕೆ ತಲೆಗೊಡುವಡೆ+ ಇದಿರಾಗು+ ಎನುತ ತರುಬಿದರು+ ಇವರು ಸಾತ್ಯಕಿಯ
ಅರ್ಥ:ಸಾತ್ಯಕಿಯು ಬಹಳ ರಾವುತರನ್ನೂ ಆಕ್ರಮಿಸಿ ಸಂಜಯನನ್ನು ಹಿಡಿದು ಕೆಡವಿದನು. ಈ ಅವಗಡವನ್ನು/ ಆಪತ್ತನ್ನು ಕೇಳಿದ್ದೇ ದ್ರೋಣಸುತ ಅಶ್ವತ್ಥಾಮ, ಕೃತವರ್ಮ, ಗೌತಮ(ಕೃಪ)ರು ಸಾತ್ಯಕಿಯನ್ನು ತಡೆದು ಫಡಫಡ! ಎಲವೊ ಸಂಜಯನನ್ನು ಬಿಡುಬಿಡು. ನನ್ನ ಮಹಾಶರಕ್ಎ ತಲೆಗೊಡುವುದಾದರೆ ನನಗೆ ಇದಿರಾಗು, ಎನ್ನುತ್ತಾ ಇವರು ಸಾತ್ಯಕಿಯನ್ನು ತರುಬಿದರು/ ಅಡ್ಡಹಾಕಿ ಮುತ್ತಿದರು.

ಸಾತ್ಯಕಿಯ ಯುದ್ಧ - ಕೌರವನ ಕಣ್ಮರೆ[ಸಂಪಾದಿಸಿ]

ದ್ರೋಣಸುತ ಕುರುಪತಿಯ ಸಮರಕೆ
ಹೂಣಿಗನಲೇ ಬಲ್ಲೆವಿದರಲಿ
ಬಾಣವಿದ್ಯೆಯ ಬೀರಿ ಬಿಡಿಸುವರಿವರು ಸಂಜಯನ |
ಕಾಣಲಹುದಂತಿರಲಿ ನಿಮಗೀ
ಕೇಣದಲಿ ಫಲವಿಲ್ಲ ಕೃಪ ತ
ನ್ನಾಣೆ ನೀ ಮರುಳೆಂದು ಸಾತ್ಯಕಿ ಸುರಿದನಂಬುಗಳ || ೫ ||
ಪದವಿಭಾಗ-ಅರ್ಥ: ದ್ರೋಣಸುತ ಕುರುಪತಿಯ ಸಮರಕೆ ಹೂಣಿಗನಲೇ(ಹೂಣಿಗ= 1. ಬಾಣವನ್ನು ಹೂಡುವವನು. 2. ಸಾಹಸಿ.) ಬಲ್ಲೆವು+ ಇದರಲಿ ಬಾಣವಿದ್ಯೆಯ ಬೀರಿ ಬಿಡಿಸುವರು+ ಇವರು ಸಂಜಯನ ಕಾಣಲಹುದು+ ಅಂತಿರಲಿ ನಿಮಗೀ ಕೇಣದಲಿ ಫಲವಿಲ್ಲ ಕೃಪ ತನ್ನಾಣೆ ನೀ ಮರುಳೆಂದು ಸಾತ್ಯಕಿ ಸುರಿದನು+ ಅಂಬುಗಳ
ಅರ್ಥ:ದ್ರೋಣಸುತನಾದ ಅಶ್ವತ್ಥಾಮನು ಕುರುಪತಿ ಕೌರವನ ಯುದ್ಧಕ್ಕೆ ಬಾಣಗಾರ- ಪರಿಣತ. ಇದನ್ನು ನಾವು ಬಲ್ಲೆವು. ಇದರಲ್ಲಿ ಬಾಣವಿದ್ಯೆಯನ್ನು ಬೀರಿ/ ಕಲಿಸಿ ಬಿಡುವವರು. ಇವರು ಸಂಜಯನನ್ನು ಕಾಣಲುಬಹುದು. ಅದು ಅಂತಿರಲಿ ನಿಮಗೆ ಈ ಯುದ್ಧದಲ್ಲಿ ಫಲವಿಲ್ಲ. ಕೃಪರೇ ತನ್ನಾಣೆ ನೀವು ಮರುಳರು ಎಂದು, ಸಾತ್ಯಕಿಯು ಬಾನಗಳ ಮಳೆಯನ್ನು ಸುರಿದನು.
ಕೋಡಕಯ್ಯಲಿ ತಿರುಗಿ ಕೃಪ ಕೈ
ಮಾಡಿದನು ಕೃತವರ್ಮನೆಸುಗೆಯ
ತೋಡುಬೀಡಿನ ಭರವ ಬಲ್ಲವನಾರು ಸಮರದಲಿ
ನೋಡಲೀತನ ಗರುಡಿಯಲಿ ಶ್ರವ
ಮಾಡಿದವರೇ ಮೂರು ಜಗವ ವಿ
ಭಾಡಿಸುವರೆನೆ ಹೊಗಳ್ವನಾವನು ದ್ರೋಣನಂದನನ ೬
ಪದವಿಭಾಗ-ಅರ್ಥ: ಕೋಡ (ಬಾಣದ ಹಿಳುಕು. ) ಕಯ್ಯಲಿ ತಿರುಗಿ ಕೃಪ ಕೈಮಾಡಿದನು ಕೃತವರ್ಮನ+ ಎಸುಗೆಯ(ಬಾಣ ಪ್ರಯೋಗದ) ತೋಡುಬೀಡಿನ ಭರವ ಬಲ್ಲವನಾರು ಸಮರದಲಿ, ನೋಡಲು+ ಈತನ ಗರುಡಿಯಲಿ ಶ್ರವಮಾಡಿದವರೇ ಮೂರು ಜಗವ ವಿಭಾಡಿಸುವರು+ ಎನೆ ಹೊಗಳ್ವನಾವನು ದ್ರೋಣನಂದನನ
ಅರ್ಥ:ಸಾತ್ಯಕಿಗೆ, ಬಾಣದ ತುದಿಯನ್ನು ಕಯ್ಯಲಿ ತಿರುಗಿಸಿ ಕೃಪನು ಕೈಮಾಡಿದನು/ ಹೊಡೆದನು. ಅವನ ಜೊತೆ ಕೃತವರ್ಮನ ಬಾಣ ಪ್ರಯೋಗದ ತೋಡುಬೀಡಿನ/ ಏರು- ಇಳಿತದ ವೇಗವನ್ನು ಸಮರದಲ್ಲಿ ಯಾರು ಬಲ್ಲರು? ಬಲ್ಲವರು ಇಲ್ಲ. ನೋಡಲು ಈತನ/ ಕೃಪನ ಗರುಡಿಯಲ್ಲಿ ಅಭ್ಯಾಸಮಾಡಿದವರೇ ಮೂರು ಜಗವನ್ನೂ ಆಕ್ರಮಿಸುವರು ಎನ್ನಲು, ದ್ರೋಣನಂದನ ಅಶ್ವತ್ಥಾಮನನ್ನು ಹೊಗಳುವವನು ಯಾವನು, ಎಂದನು ಸಾತ್ಯಕಿ. (ಅಶ್ವತ್ಥಾಮನು ಕೃಪನ ತಂಗಿಯ ಮಗ- ಅವನಿಗೆ ಗುರುವೂ ಅಹುದು.)
ಎಚ್ಚನಶ್ವತ್ಥಾಮನಾ ಕೃಪ
ನೆಚ್ಚನಾ ಕೃತವರ್ಮಕನು ಕವಿ
ದೆಚ್ಚನೀ ಶರಜಾಲ ಜಡಿದವು ಕಿಡಿಯ ಗಡಣದಲಿ |
ಬೆಚ್ಚಿದನೆ ಬೆದರಿದನೆ ಕೈಕೊಂ
ಡೆಚ್ಚು ಸಾತ್ಯಕಿ ರಿಪುಶರಾಳಿಯ
ಕೊಚ್ಚಿದನು ಕೊಡಹಿದನು ಮಿಗೆ ಭಂಗಿಸಿ ವಿಭಾಡಿಸಿದ || ೭ ||
ಪದವಿಭಾಗ-ಅರ್ಥ: ಎಚ್ಚನು+ ಅಶ್ವತ್ಥಾಮನು+ ಆ ಕೃಪನು+ ಎಚ್ಚನು+ ಆ ಕೃತವರ್ಮಕನು ಕವಿದು+ ಎಚ್ಚನು+ ಈ ಶರಜಾಲ ಜಡಿದವು ಕಿಡಿಯ ಗಡಣದಲಿ. ಬೆಚ್ಚಿದನೆ ಬೆದರಿದನೆ ಕೈಕೊಂಡು (ಎದುರಿಸಿ)+ ಎಚ್ಚು ಸಾತ್ಯಕಿ ರಿಪು ಶರಾಳಿಯ ಕೊಚ್ಚಿದನು ಕೊಡಹಿದನು ಮಿಗೆ(ಮತ್ತೆ, ಹೆಚ್ಚಾಗಿ) ಭಂಗಿಸಿ ವಿಭಾಡಿಸಿದ.
  • ವಿಭಾಡಿಸು= 1. ಬಡಿದು ಹಾಕು. 2. ಸೋಲಿಸು. 3. ತೆಗಳು. 4. ಕತ್ತರಿಸು. ಎಚ್ಚು = ಹೊಡಿ;; ಗಡಣ= ಸಮೂಹ, ರಾಶಿ.
ಅರ್ಥ:ಸಾತ್ಯಕಿಗೆ ಅಶ್ವತ್ಥಾಮನು ಬಾಣಗಳಿಂದ ಹೊಡೆದನು; ಆ ಕೃಪನೂ ಹೊಡೆದನು; ಆ ಕೃತವರ್ಮಕನೂ ಆಕ್ರಮಿಸಿ ಹೊಡೆದನು. ಈ ಶರಜಾಲ/ ಬಾಣಗಳಜಾಲ ಸಾತ್ಯಕಿಯ ಬಾಣಗಳಿಗೆ ಜಡಿದವು, ಆಗ ಘಟ್ಟಣೆಯಿಂದ ಕಿಡಿಗಳ ರಾಶಿಯಲ್ಲಿ ರಣರಂಗ ತುಂಬಿತು. ಸಾತ್ಯಕಿಯು ಈ ಮೂವರು ವೀರರು ಆಕ್ರಮಿಸಿ ಹೊಡೆಯಲು, ಬೆಚ್ಚಿದನೆ? ಬೆದರಿದನೆ? ಇಲ್ಲ! ಅದನ್ನು ಸಾತ್ಯಕಿಯು ಎದುರಿಸಿ ಹೊಡದು, ಶತ್ರುಗಳ ಶರಗಳ ಸಮೂಹವನ್ನು ಕೊಚ್ಚಿದನು, ಪುಡಿಮಾಡಿ ಕೆಡಗಿದನು, ಅದನ್ನು ಮೀರಿಸಿ ಅವರ ಬಾಣಗಳನ್ನು ಭಂಗಿಸಿ ಕತ್ತರಿಸಿದನು.
ಎಲೆಲೆ ಸಾತ್ಯಕಿಗಾಹವದ ಧುರ
ಬಲುಹೆನಲು ಸೃಂಜಯರು ಸೋಮಕ
ಬಲ ಶಿಖಂಡಿ ದ್ರುಪದನಂದನ ಪಾಂಡವಾತ್ಮಜರು |
ಚಳಪತಾಕೆಯ ವಿವಿಧವಾದ್ಯದ
ಕಳಕಳದ ಕೈದುಗಳ ಹೊಳಹಿನ
ತಳಪ ಝಳಪಿಸೆ ಜೋಡಿಸಿತು ಸಾತ್ಯಕಿಯ ಬಳಸಿನಲಿ || ೮ ||
ಪದವಿಭಾಗ-ಅರ್ಥ: ಎಲೆಲೆ ಸಾತ್ಯಕಿಗೆ+ ಆಹವದ ಧುರ+ಬಲುಹು ಎನಲು ಸೃಂಜಯರು ಸೋಮಕಬಲ ಶಿಖಂಡಿ ದ್ರುಪದನಂದನ ಪಾಂಡವಾತ್ಮಜರು ಚಳಪತಾಕೆಯ ವಿವಿಧವಾದ್ಯದ ಕಳಕಳದ ಕೈದುಗಳ ಹೊಳಹಿನ ತಳಪ ಝಳಪಿಸೆ ಜೋಡಿಸಿತು ಸಾತ್ಯಕಿಯ ಬಳಸಿನಲಿ.
  • ತಳಪು= 1. ಹೊಳಪು. 2. ಒಂದಕ್ಕೊಂದು ಹೆಣೆದುಕೊಂಡಿರುವಿಕೆ.
ಅರ್ಥ:ಎಲೆಲೆ ಸಾತ್ಯಕಿಗೆ ಯುದ್ಧದಲ್ಲಿ ಯುದ್ಧದ-ಕಠಿನತೆ ಎದುರಾಯಿತು ಎನ್ನಲು, ಅವನ ಕಡೆಯ ಸೃಂಜಯರು ಸೋಮಕ, ಅವನ ಸೇನೆ, ಶಿಖಂಡಿ ದ್ರುಪದನಂದನಾದ ದೃಷ್ಟದ್ಯಮ್ನ, ಐದು ಜನ ಪಾಂಡವರ ಮಕ್ಕಳು ಬಂದು ಸೇರಿದರು. ಅವರು ಹಾರುತ್ತಿರುವ ಪತಾಕೆಯ, ವಿವಿಧವಾದ್ಯದ ಕಳಕಳದ ಸದ್ದಿನೊಂದಿಗೆ, ಆಯುಧಗಳನ್ನು ಹೊಳೆಯುವಂತೆ ಝಳಪಿಸುತ್ತಾ ಅವನ್ನು ಒಟ್ಟುಮಾಡಿಕೊಂಡು ಸಾತ್ಯಕಿಯ ಸುತ್ತ ಜೋಡಿಸಿಕೊಂಡು ನಿಂತರು.
ಹರಿಯದಿಲ್ಲಿಯ ಬವರ ರಾಯನ
ನರಸಬೇಹುದು ಕುರುಪತಿಯ ಮುಂ
ದಿರಿದು ಮೆರೆವುದು ಕೀರ್ತಿ ನಿಷ್ಫಲವಿಲ್ಲ ಶರರಚನೆ |
ಅರಿವೆವೀ ಸಾತ್ಯಕಿಯ ಸಮರದ
ಮುರುಕವನು ಬಳಿಕೆನುತ ಕೌರವ
ನರಿಕೆಯಲಿ ತಿರುಗಿದರು ಕೃಪ ಕೃತವರ್ಮ ಗುರುಸುತರು || ೯ ||
ಪದವಿಭಾಗ-ಅರ್ಥ: ಹರಿಯದು ಇಲ್ಲಿಯ ಬವರ ರಾಯನನು+ ಅರಸಬೇಹುದು, ಕುರುಪತಿಯ ಮುಂದೆ+ ಇರಿದು ಮೆರೆವುದು ಕೀರ್ತಿ, ನಿಷ್ಫಲವಿಲ್ಲ ಶರರಚನೆ, ಅರಿವೆವು+ ಈ ಸಾತ್ಯಕಿಯ ಸಮರದ ಮುರುಕವನು ಬಳಿಕ+ ಎನುತ ಕೌರವನ+ ಅರಿಕೆಯಲಿ (ಅರಸುವ ಕಲಸದಲ್ಲಿ) ತಿರುಗಿದರು ಕೃಪ ಕೃತವರ್ಮ ಗುರುಸುತರು.
ಅರ್ಥ:ಇಲ್ಲಿಯ ಯುದ್ಧವು ಬಗೆಹರಿಯದು. ಏನಅದನೋ ಅ ಕೌರವರಾಯನನ್ನು ಹುಡುಕಬೇಕು. ಕೌರವನ ಎದುರು ಇರಿದು / ಯುದ್ಧಮಾಡಿ ಮೆರೆಯುವುದು ಕೀರ್ತಿ ತರುವುದು. ಅದು ನಿಷ್ಫಲವಿಲ್ಲ. ಈ ಸಾತ್ಯಕಿಯ ಶರರಚನೆ/ ಬಿಲ್ಲವಿದ್ಯೆಯನ್ನೂ ಸಮರದ ಕುಶಲೆಯನ್ನೂ ನಂತರ ತಿಳಿದರಾಯಿತು, ಎನ್ನುತ್ತಾ ಕೌರವನನ್ನು ಅರಸುವ ಕಲಸದಲ್ಲಿ ಕೃಪ, ಕೃತವರ್ಮ, ಗುರುಸುತ ಅಶ್ವತ್ಥಾಮರು ಹಿಂತಿರುಗಿ ಹೊರಟುಹೋದರು.

ಕೌರವನಿಗಾಗಿ ಮುಂದುವರಿದ ಹುಡುಕುವಿಕೆ[ಸಂಪಾದಿಸಿ]

ತೆರಳಿದರು ಗುರುನಂದನಾದಿಗ
ಳರಿನೃಪಾಲನ ಕಾಣೆವಾತನ
ನರಸಬೇಹುದು ಶಕುನಿ ದುರ್ಯೋಧನ ಸುಶರ್ಮಕರು |
ದೊರೆಗಳಿದು ಪರಿಶಿಷ್ಟರುಪಸಂ
ಹರಣವೇ ಕರ್ತವ್ಯವಿದು ದು
ಸ್ತರಣಶ್ರಮಫಲವೆಂದು ನುಡಿದನು ಧರ್ಮಸುತ ನಗುತ || ೧೦ ||
ಪದವಿಭಾಗ-ಅರ್ಥ: ತೆರಳಿದರು ಗುರುನಂದನ+ ಆದಿಗಳು+ ಅರಿನೃಪಾಲನ ಕಾಣೆವು+ ಆತನನು+ ಅರಸಬೇಹುದು, ಶಕುನಿ ದುರ್ಯೋಧನ ಸುಶರ್ಮಕರು ದೊರೆಗಳಿದು ಪರಿಶಿಷ್ಟರು+ ಉಪಸಂಹರಣವೇ ಕರ್ತವ್ಯವು+ ಇದು ದುಸ್ತರಣ ಶ್ರಮಫಲವೆಂದು ನುಡಿದನು ಧರ್ಮಸುತ ನಗುತ.
ಅರ್ಥ:ಧರ್ಮರಾಯನು ನಗುತ್ತಾ 'ಗುರುನಂದನ ಮತ್ತು ಜೊತೆಯವರು ತೆರಳಿದರು. ನಾವು ಅರಿನೃಪಾಲ ದುರ್ಯೋದನನ್ನು ಕಾಣೆವು. ಆತನನ್ನು ಹುಡುಕಲೇಬೇಕು. ಶಕುನಿ ದುರ್ಯೋಧನ ಸುಶರ್ಮಕರು ಈ ಮೂವರು ಕೌರವ ದೊರೆಗೆ ಅಳಿದು-ಉಳಿದ ಪರಿಶಿಷ್ಟರು. ಈಗ ಅವರ ಸಂಹಾರವೇ ನಮ್ಮ ಕರ್ತವ್ಯವು. ಇದು ಕಷ್ಟದಿಂದ ಸಾದ್ಐವಅಗುವ ಶ್ರಮಫಲವು', ಎಂದು ಹೇಳಿದನು.
ಮಸಗಿದುದು ಪರಿವಾರ ಕೌರವ
ವಸುಮತೀಶ್ವರನರಕೆಯಲಿ ದಳ
ಪಸಿರಿತು ಬಿಡದರಸಿ ಕಂಡರು ಕಳನ ಮೂಲೆಯಲಿ |
ಮಿಸುಪ ಸಿಂಧದ ಸೀಗುರಿಯ ಝಳ
ಪಿಸುವಡಾಯ್ದ ಸಿತಾತಪತ್ರ
ಪ್ರಸರದಲಿ ಹೊಳೆಹೊಳೆವ ಶಕುನಿಯ ಬಹಳ ಮೋಹರವ || ೧೧ ||
ಪದವಿಭಾಗ-ಅರ್ಥ: ಮಸಗಿದುದು ಪರಿವಾರ ಕೌರವವ ಸುಮತೀಶ್ವರನ+ ಅರಕೆಯಲಿ ದಳಪಸಿರಿತು ಬಿಡದೆ+ ಅರಸಿ ಕಂಡರು ಕಳನ (ರಣರಂಗದ) ಮೂಲೆಯಲಿ ಮಿಸುಪ (ಶೋಭಿಸುವ) ಸಿಂಧದ ಸೀಗುರಿಯ ಝಳಪಿಸುವಡೆ+ ಆಯ್ದ (ಪ್ರಸಿದ್ಧ) ಸಿತಾತಪತ್ರ (ಶ್ವೇತಛತ್ರ) ಪ್ರಸರದಲಿ ಹೊಳೆಹೊಳೆವ ಶಕುನಿಯ ಬಹಳ ಮೋಹರವ (ಸೇನೆ).
  • ಮಸಗು= ಹರಡು. ಆತುರಪಡು.ಉತ್ಸಾಹಗೊಳ್ಳು. ಕ್ಷೋಭೆಗೊಳ್ಳು.
ಅರ್ಥ: ಕೌರವನ ಪರಿವಾರ ಅವನ ಅರಸುವ ಕಾರ್ಯದಲ್ಲಿ ಆತುರದಿಂದ ಎಲ್ಲೆಡೆ ಹುಡುಕಿತು. ಅವನ ಸೇನೆಯು ಕುರುಕ್ಷೇತ್ರದ ಎಲ್ಲಾಕಡೆ ಹರಡಿಕೊಂಡು ಬಿಡದೆ ಹುಡುಕಿ ರಣರಂಗದ ಮೂಲೆಯಲ್ಲಿ ಶೋಭಿಸುವ ಸಿಂಧದ ಬಾವುಟವನ್ನು ಕಂಡರು. ಅಲ್ಲಿ ಪ್ರಸಿದ್ಧ ಝಳಪಿಸುವ ಪ್ರಸರಿಸಿ ಹಾರುತ್ತಿರುವ ಶ್ವೇತಛತ್ರವನ್ನು ಮತ್ತು ಹೊಳೆಹೊಳೆಯುತ್ತಿರುವ ಶಕುನಿಯ ದೊಡ್ಡ ಸೇನೆಯನ್ನೂ ಕಂಡರು.
ಅದೆ ಸುಯೋಧನನೊಡ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡುಮುರಿಯಾಯ್ತು ಸಿಲುಕಿತು ಮೌನ ಮೋನದಲಿ ೧೨
ಪದವಿಭಾಗ-ಅರ್ಥ: ಅದೆ ಸುಯೋಧನನ+ ಒಡ್ಡು (ಸೇನೆ) ನಸುದೂರದಲಿ ಕವಿಕವಿಯೆನುತ ಧಾಳಿಟ್ಟುದು(ಧಾಳಿಯಿಟ್ಟುದು) ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ(ಎದುರಿನಲ್ಲಿದ್ದು) ಹೊದರು ಹಳಚಿತು ಭಟರು ಭುಜಗರ್ವದಲಿ ಗರುವರ ಗಾಢ ಶೌರ್ಯದ ಮದಕೆ ಮಡುಮುರಿಯಾಯ್ತು(ಮದುಮುರಿ - ವಿಚ್ಛೇದನ, ಕಡಿತ ) ಸಿಲುಕಿತು ಮೌನ ಮೋನದಲಿ(ಮಾತನಾಡದಿರುವಿಕೆ.)
  • ಹಳಚು:ಹಳಚಿತು.= 1. ತಾಗು. 2. ಆಕ್ರಮಿಸು. 3. ವ್ಯಾಪಿಸು;; ಹೊದರು= ಮುಳ್ಳುಗಳಿರುವ ಪೊದೆ; ಗರುವರ= ಗರ್ವಿತರ, ಗೌರವವುಳ್ಳವರ,
  • ಹೊದರು ಹಳಚಿತು: ಅಥವಾ- ಪೊದೆಯ ಮರೆ ಕಳಚಿ ಕೌರವ ಸಿಕ್ಕಿದನು.??
ಅರ್ಥ:ಪಾಂಡವ ಸೇನೆಯ ನಾಯಕರು, 'ಅದೆ ನೋಡು ಅಲ್ಲಿ ಸುಯೋಧನನ ಸೇನೆ ತುಸು ದೂರದಲ್ಲಿದೆ. ಆಕ್ರಮಿಸು - ಕವಿ'ಯೆನ್ನತ್ತಾ, ಭೀಮಪಾರ್ಥರ ರಥಗಳು ಎದುರಿನಲ್ಲಿದ್ದ ಪಾಂಡವ ಚತುರ್ಬಲ ಸೇನೆ ಧಾಳಿಯಿಟ್ಟಿತು. ಪಾಂಡವರ ಸೇನೆ ಮುಳ್ಳಿನ ಪೊದೆಯಂತೆ ಆಕ್ರಮಿಸಿತು. ಭಟರು ಭುಜಗರ್ವದಲಿ/ ತೋಳಿನ ಶೌರ್ಯದ ವಿಶ್ವಾಸದಲ್ಲಿ ಗರ್ವಿತರ ಗಾಢವಾದ ಶೌರ್ಯದ ಮದಕ್ಕೆ ಕಡಿತವಾಗಿ ಮೌನದಲ್ಲಿದ್ದು ಮಾತನಾಡದ ಪರಿಸ್ಥಿತಿಗೆ ಸಿಲುಕಿತು.

ಕೌರವ ಸೇನೆ - ಪಾಂಡವ ಸೇನೆಗಳ ಯುದ್ಧ[ಸಂಪಾದಿಸಿ]

ಹೆಗಲ ಹಿರಿಯುಬ್ಬಣದ ಕೈತಳ
ಮಗುಚಲಮ್ಮದ ವಾಘೆಯಲಿ ಕೈ
ಬಿಗಿದುದುದಂಕಣೆದೊಡಕಿನಲಿ ಮರನಾದವಂಘ್ರಿಗಳು |
ಬಗೆಯ ಮಡಿ ಮಸಳಿಸಿತು ವೀರಕೆ
ಬೆಗಡು ಹುದುವನೆಯಾಯ್ತು ಕೈನಂ
ಬುಗೆಗೆ ಮರಳಿದರೊಬ್ಬರೊಬ್ಬರು ರಾಯರಾವುತರು || ೧೩ ||
ಪದವಿಭಾಗ-ಅರ್ಥ: ಹೆಗಲ ಹಿರಿಯ+ ಉಬ್ಬಣದ ಕೈತಳ ಮಗುಚಲು(ದುರ್ಬಲವಾಗಲು)+ ಅಮ್ಮದ ವಾಘೆಯಲಿ ಕೈಬಿಗಿದುದು+ ಅಂಕಣೆದ+ ಒಡಕಿನಲಿ ಮರನಾದವು+ ಅಂಘ್ರಿಗಳು (ಪಾದಗಳು) ಬಗೆಯ (ಮನಸ್ಸಿನ) ಮಡಿ ಮಸಳಿಸಿತು ವೀರಕೆ ಬೆಗಡು ಹುದುವನೆಯಾಯ್ತು ಕೈನಂಬುಗೆಗೆ ಮರಳಿದರು+ ಒಬ್ಬರೊಬ್ಬರು ರಾಯರಾವುತರು'
  • ಉಬ್ಬಣ = 1. ಬಾಗಿಲನ್ನು ಭದ್ರಪಡಿಸಲು ಹಾಕುವ ಮರದ ತುಂಡು. 2. ಒಂದು ಬಗೆಯ ಆಯುಧ. 3. ಅತಿಶಯ.; ಅಮ್ಮದ = ಸಾಧ್ಯವಾಗದ, ಬೇಡವಾದ
  • ಮಸಳು= ೧ ಮಂಕಾಗು, ನಿಸ್ತೇಜಗೊಳ್ಳು ೨ ಮಂಕಾಗುವಂತೆ ಮಾಡು;; ಬೆಗಡು= 1. ಆಶ್ಚರ್ಯಪಡು. 2. ಭಯಪಡು (ಬೆಡಗು?)
ಅರ್ಥ:ಹೆಗಲಮೇಲಿದ್ದ ದೊಡ್ಡ ಉಬ್ಬಣವೆಂಬ ಆಯುಧ ಹಿಡಿದ ಕೈತಳ ದುರ್ಬಲವಾಗಲು ಹಿಡಯಲಾಗದ ಕುದುರೆಯ ವಾಘೆಯಲ್ಲಿ ಕೈಬಿಗಿದು ಹಗ್ಗವನ್ನು ಎಳೆಯದಂತಾಯಿತು. ರಥದ ಕಾಲಿಡುವ ಅಂಕಣೆದ ಒಡಕಿನಲ್ಲಿ ಪಾದಗಳು ಚಲಿಸಲಾರದೆ ಮರಗಟ್ಟಿದವು. ಮನಸ್ಸಿನ ಮಡಿ/ ರೀತಿ ಮಂಕಾಯಿತು. ವೀರಸ್ವಭಾವಕ್ಕೆ ಭಯ ವಾಸದಮನೆಯಾಯ್ತು. ಕೌರವ ರಾಯನ ರಾವುತರು ಒಬ್ಬರಿಗೆ ಒಬ್ಬರು ಕೈ ಕೈಹಿಡಿದು ಧಯರ್ಯತಂದುಕೊಂಡು ಕವರವನ ನಂಬುಗೆಗೆ ಮರಳಿ ಯುದ್ಧಕ್ಕೆ ಅನುವಾದರು. (ಈ ಪದ್ಯದ ಅರ್ಥ ಸಂದಿಗ್ಧವಾಗಿದೆ)
ಬಂದುದಾ ಮೋಹರ ಸಘಾಡದಿ
ನಿಂದುದೀ ಬಲ ಸೂಠಿಯಲಿ ಹಯ
ವೃಂದ ಬಿಟ್ಟವು ತೂಳಿದವು ಹೇರಾನೆ ಸರಿಸದಲಿ |
ನೊಂದುದಾಚೆಯ ಭಟರು ಘಾಯದೊ
ಳೊಂದಿತೀಚೆಯ ವೀರರುಭಯದ
ಮಂದಿ ಬಿದ್ದುದು ಚೂಣಿಯದ್ದುದು ರುಧಿರಜಲಧಿಯಲಿ || ೧೪ ||
ಪದವಿಭಾಗ-ಅರ್ಥ: ಬಂದುದ ಆ ಮೋಹರ (ಸೇನೆ) ಸಘಾಡದಿ (ರಭಸ.ಸಶಕ್ತವಾಗಿ) ನಿಂದುದು+ ಈ ಬಲ ಸೂಠಿಯಲಿ(ಸೂಠಿ= ವೇಗ) ಹಯವೃಂದ ಬಿಟ್ಟವು, ತೂಳಿದವು(ನುಗ್ಗಿದವು) ಹೇರಾನೆ ಸರಿಸದಲಿ ನೊಂದುದು+ ಆಚೆಯ ಭಟರು ಘಾಯದೊಳೊಂದಿತು+ ಈಚೆಯ ವೀರರು ಭಯದ ಮಂದಿ ಬಿದ್ದುದು ಚೂಣಿಯು (ಮುಂದಿನ)+ ಅದ್ದುದು ರುಧಿರಜಲಧಿಯಲಿ
ಅರ್ಥ:ಕೌರವನ ಆ ಸೇನೆ ಸಶಕ್ತವಾಗಿ ವೀರಾವೇಶದಿಂದ ನಿಂತಿತು. ಈ ಪಾಂಡವರ ಸೇನೆಯ ರಾವುತರು ವೇಗವಾಗಿ ಕುದುರೆಗಳನ್ನು ಅವರ ಮೇಲೆ ಬಿಟ್ಟರು. ಒಬ್ಬರ ಮೇಲೆ ಒಬ್ಬರು ನುಗ್ಗಿದವು. ರಾವುತರ ಆನೆಗಳು ಸೆಣಸಾಟದಲ್ಲಿ ನೊಂದುವು. ಆಚೆಯ ಕೌರವನ ಭಟರು ಘಾಯದೊಳು ನೊಂದಿತು. ಈಚೆಯ ವೀರರು ಭಯದಿಂದ ಬಹಳ ಮಂದಿ ಬಿದ್ದುದು. ಎದರು ಇದ್ದ ಚೂಣಿಯ ಸೇನೆ ರಕ್ತದ ಸಮುದ್ರದಲ್ಲಿ ಅದ್ದಿತು - ಮಳುಗಿತು.
ಜಾರಿದನೆ ಕುರುಪತಿಯಕಟ ಮೈ
ದೋರನೇ ನಮಗೂರುಗಳ ಕೊಡ
ಲಾರದೇ ಕಾಳೆಗವ ಕೊಟ್ಟನು ಮತ್ತೆ ಕೊಂಡನಲಾ |
ತೋರಿಸನೆ ಖಂಡೆಯದ ಸಿರಿ ಮೈ
ದೋರಹೇಳೋ ಕರೆಯೆನುತ ತಲೆ
ದೋರಿದರು ಭೀಮಾರ್ಜುನರು ಸೌಬಲನ ಥಟ್ಟಿನಲಿ || ೧೫ ||
ಪದವಿಭಾಗ-ಅರ್ಥ: ಜಾರಿದನೆ ಕುರುಪತಿಯು+ ಅಕಟ ಮೈದೋರನೇ (ಪ್ರತ್ಯಕ್ಷನಾಗು) ನಮಗೆ+ ಊರುಗಳ(ತೊಡೆಗಳ) ಕೊಡಲಾರದೇ ಕಾಳೆಗವ ಕೊಟ್ಟನು ಮತ್ತೆ ಕೊಂಡನಲಾ ತೋರಿಸನೆ ಖಂಡೆಯದ (ಖಡ್ಗದ)) ಸಿರಿ ಮೈದೋರ ಹೇಳೋ ಕರೆಯೆನುತ ತಲೆದೋರಿದರು ಭೀಮಾರ್ಜುನರು ಸೌಬಲನ ಥಟ್ಟಿನಲಿ (ಶಕುನಿಯ ಸೇನೆಯಲ್ಲಿ)
ಅರ್ಥ:ಕೌರವನು ಮತ್ತೆ ಜಾರಿ ಹೋದನೆ, ಅಕಟ! ನಮಗೆ ಅವನು ಮೈದೋರನೇ? ಅವನು ತನ್ನ ತೊಡೆಗಳನ್ನು ಪುಡಿಗೈಯಲು ಕೊಡಲಾರದೇ, ಒಮ್ಮೆ ಕಾಳೆಗವನ್ನು ಕೊಟ್ಟವನು ಮತ್ತೆ ಅಡಗಿಕೊಂಡನಲ್ಲಾ; ಅವನು ತನ್ನ ಖಡ್ಗದ ಶೌರ್ಯವನ್ನು ತೋರಿಸನೆ? ಕೌರವನಿಗೆ ಅವನ ಸಿರಿ-ಮೈಯನ್ನು ತೋರಿಸಲು ಹೇಳೋ! ಕರೆಯೆನ್ನುತ್ತಾ ಭೀಮಾರ್ಜುನರು ಶಕುನಿಯ ಸೇನೆಯ ಎದುರು ಬಂದರು.
ಫಡಫಡೆಲವೋ ಪಾರ್ಥ ಕುರುಪತಿ
ಯಡಗುವನೆ ನಿನ್ನಡಗ ತರಿದುಣ
ಬಡಿಸನೇ ವೇತಾಳರಿಗೆ ವೈತಾಳಿಕನೆ ನೀನು |
ಗಡಬಡಿಸಿ ಪರರುನ್ನತಿಯ ಕೆಡೆ
ನುಡಿದು ಫಲವೇನೆನುತ ಪಾರ್ಥನ
ತಡೆದನಂದು ಸುಶರ್ಮ ಸಮಸಪ್ತಕರ ದಳ ಸಹಿತ || ೧೬ ||
ಪದವಿಭಾಗ-ಅರ್ಥ: ಫಡಫಡೆಲವೋ ಪಾರ್ಥ ಕುರುಪತಿಯು+ ಅಡಗುವನೆ ನಿನ್ನ+ ಅಡಗ(ಶಕ್ತಿ, ಶೌರ್ಯ) ತರಿದು+ ಉಣಬಡಿಸನೇ ವೇತಾಳರಿಗೆ ವೈತಾಳಿಕನೆ ನೀನು ಗಡಬಡಿಸಿ ಪರರ+ ಉನ್ನತಿಯ ಕೆಡೆನುಡಿದು ಫಲವೇನು+ ಎನುತ ಪಾರ್ಥನ ತಡೆದನು+ ಅಂದು ಸುಶರ್ಮ ಸಮಸಪ್ತಕರ ದಳ ಸಹಿತ.
  • ವೈತಾಳಿಕ: ಪ್ರಾತಃಕಾಲದಲ್ಲಿ ರಾಜನನ್ನು ನಿದ್ರೆಯಿಂದ ಎಚ್ಚರಿಸುವವನು.; ಕೆಡೆನುಡಿದು= ಕೆಡುಕು ಮಾತನಾಡಿ
ಅರ್ಥ:ಫಡಫಡ! ಎಲವೋ! ಪಾರ್ಥ ಕೌರವ ಕುರುಪತಿಯು ಅಡಗುವನೆ? ನಿನ್ನ ಶಕ್ತಿ- ಶೌರ್ಯಗಳನ್ನು ಮೀರಿಸಿ, ನಿನ್ನನ್ನು ತರಿದು/ಕತ್ತರಿಸಿ ಬೇತಾಳಗಳಿಗೆ ಉಣಬಡಿಸುವನು. ಗಡಬಡಿಸಿ ಗದ್ದಲ ಮಾಡಲು ನೀನು ವೈತಾಳಿಕನೇ? ಪರರ ಉನ್ನತಿಗೆ ಕೆಡುಕು ನುಡಿದು ಫಲವೇನು? ಎನ್ನತ್ತಾ ಅಂದು ಸುಶರ್ಮ ಸಮಸಪ್ತಕರ ದಳ/ಸೇನೆ ಸಹಿತ ಪಾರ್ಥನನ್ನು ತಡೆದನು.
ಮುತ್ತಿದವು ರಥವೇಳುನೂರರು
ವತ್ತು ಹಯವೈನೂರು ಸಾವಿರ
ಮತ್ತಗಜವಿಪ್ಪತ್ತು ಸಾವಿರ ಪಾಯದಳ ಸಹಿತ
ತೆತ್ತಿಸದವಂಬುರವಣಿಸಿ ದೂ
ಹತ್ತಿ ಹೊಳೆದವು ಸಮರದಲಿ ಮುಖ
ಕೆತ್ತುದನೆ ಕೈದುಗಳ ರುಚಿ ವೇಢೈಸಿತರ್ಜುನನ ೧೭
ಪದವಿಭಾಗ-ಅರ್ಥ:ಮುತ್ತಿದವು ರಥವು+ ಏಳುನೂರರುವತ್ತು ಹಯವು+ ಐನೂರು ಸಾವಿರ ಮತ್ತಗಜವು+ ಇಪ್ಪತ್ತು ಸಾವಿರ ಪಾಯದಳ ಸಹಿತ ತೆತ್ತಿಸದವು+ ಅಂಬು+ ಉರವಣಿಸಿ ದೂಹತ್ತಿ ಹೊಳೆದವು ಸಮರದಲಿ ಮುಖ ಕೆತ್ತುದನೆ ಕೈದುಗಳ ರುಚಿ ವೇಢೈಸಿತು+ ಅರ್ಜುನನ.
  • ದೂಹತ್ತಿ= ಒಂದು ಬಗೆಯ ಉದ್ದವಾದ ಕತ್ತಿ,- ಖಡ್ಗ.ವೇಢೆ: ವೇಷ್ಟನ, ಸುತ್ತುವರಿ, (ಸುತ್ತಿರುವ ಪೇಟ); ತೆತ್ತಿಸು: ಹೊಂದಿಸು.
ಅರ್ಥ:ಮುತ್ತಿದವು ಏಳುನೂರರುವತ್ತು ರಥಗಳು, ಐನೂರು ಸಾವಿರ ಕುದುರೆ, ಇಪ್ಪತ್ತು ಸಾವಿರ ಮತ್ತಗಜಗಳು, ಪಾಯದಳ ಸಹಿತ ಹೊಂದಿಕೊಂಡವು; ಪರಾಕ್ರಮದಿಂದ ಬಾಣಗಳು ಬಿಡಲ್ಪಟ್ಟವು;ಆ ಸಮರದಲ್ಲಿ ದೂಹತ್ತಿಯೆಮಬ ಕತ್ತಿಗಳು ಝಳಪಿಸಲು ಹೊಳೆದವು, ಮುಖವನ್ನು ಮುಚ್ಚುವಂತೆ ಆಯುಧಗಳ ರುಚಿತೊರಿಸಲು ಅರ್ಜುನನನ್ನು ಮುತ್ತಿದವು.
ಶಕುನಿ ಸಹದೇವನನುಳೂಕನು
ನಕುಲನನು ಕುರುರಾಯನನುಜರು
ಚಕಿತ ಚಾಪನ ಕೆಣಕಿದರು ಪವಮಾನನಂದನನ |
ಅಕಟ ಫಲುಗುಣ ಎನುತ ಸಮಸ
ಪ್ತಕರು ಕವಿದರು ನೂರು ಗಜದಲಿ
ಸಕಲದಳಕೊತ್ತಾಗಿ ನಿಂದನು ಕೌರವರಾಯ |\ ೧೮ ||
ಪದವಿಭಾಗ-ಅರ್ಥ: ಶಕುನಿ ಸಹದೇವನನು+ ಉಳೂಕನು ನಕುಲನನು ಕುರುರಾಯನ+ ಅನುಜರು ಚಕಿತ ಚಾಪನ ಕೆಣಕಿದರು ಪವಮಾನನಂದನನ ಅಕಟ ಫಲುಗುಣ ಎನುತ ಸಮಸಪ್ತಕರು ಕವಿದರು ನೂರು ಗಜದಲಿ ಸಕಲದಳಕೆ+ ಒತ್ತಾಗಿ ನಿಂದನು ಕೌರವರಾಯ
ಅರ್ಥ:ಶಕುನಿ ಸಹದೇವನನ್ನೂ, ಉಲೂಕನು ನಕುಲನನ್ನೂ, ಕುರುರಾಯನ ತಮ್ಮಂದಿರು, ಅಕಟ! ಪವಮಾನನಂದನ ಭೀಮನನ್ನು ಕೆಣಕಿದರು. ಫಲ್ಗುಣ ಎನ್ನತ್ತಾ ಸಮಸಪ್ತಕರು ಚಕಿತ ಚಾಪನಾದ ಅರ್ಜುನನ್ನು ಮುತ್ತಿದರು; ನೂರು ಗಜ ದೂರದಲ್ಲಿ ಸಕಲದಳಕ್ಕೂ ಬೆಂಬಲವಾಗಿ ಕೌರವರಾಯ ನಿಂತನು.
ಏರಿದರು ಸಮಸಪ್ತಕರು ಕೈ
ದೋರಿದರು ಫಲುಗುಣನ ಜೋಡಿನೊ
ಳೇರು ತಳಿತುದು ನೊಂದವಡಿಗಡಿಗಾತನಶ್ವಚಯ |
ನೂರು ಶರದಲಿ ಬಳಿ ವಿಶಿಖ ನಾ
ನೂರರಲಿ ಬಳಿಶರಕೆ ಬಳಿಶರ
ವಾರು ಸಾವಿರದಿಂದ ತರಿದನು ಪಾರ್ಥನರಿಬಲವ || ೧೯ ||
ಪದವಿಭಾಗ-ಅರ್ಥ: ಏರಿದರು ಸಮಸಪ್ತಕರು ಕೈದೋರಿದರು ಫಲುಗುಣನ ಜೋಡಿನೊಳ+ ಏರು ತಳಿತುದು ನೊಂದವು+ ಅಡಿಗಡಿಗೆ+ ಆತನ+ ಅಶ್ವಚಯ ನೂರು ಶರದಲಿ ಬಳಿ ವಿಶಿಖ(ಬಾಣ) ನಾನೂರರಲಿ ಬಳಿಶರಕೆ ಬಳಿಶರವ+ ಆರು ಸಾವಿರದಿಂದ ತರಿದನು ಪಾರ್ಥನು+ ಅರಿಬಲವ
ಅರ್ಥ:ಕೌರವನ ಕಡೆಯ ಸಮಸಪ್ತಕರು ಪರಾಕ್ರಮ ತೋರಿದರು; ತಮ್ಮ ಕೈಚಳಕವನ್ನು ತೋರಿದರು; ಫಲ್ಗುಣನ ಎದುರು ಯುದ್ಧದ ಜೋಡಿನಲ್ಲಿ ತೀವ್ರವಾದ ಯುದ್ಧ ನೆಡೆಯಿತು. ಅರ್ಜುನನ ಅಶ್ವಗಳು ಅಡಿಗಡಿಗೆ/ ಮತ್ತೆಮತ್ತೆ ನೊಂದವು. ಪಾರ್ಥನು ನೂರು ಬಾಣಗಳಿಂದ ಬಳಿಕ ನಾನೂರು ಬಾಣಗಳಿಂದ, ಬಳಿಕ ಅವರ ಶರಕ್ಕೆ ಬಳಿಕ ಆರು ಸಾವಿರ ಬಾಣಗಳಿಂದ ಶತ್ರು ಸೇನೆಯನ್ನು ತರಿದನು/ ಕತ್ತರಿಸಿದನು.
ಕಡಿವಡೆದವೇಳ್ನೂರು ರಥ ಮುರಿ
ವಡೆದವೈನೂರಶ್ವಚಯ ಮುಂ
ಗೆಡೆದವಂದೈನೂರು ಗಜವಿಪ್ಪತ್ತು (ಪಾ- ಗಜವಿಪ್ಪತು) ಸಾವಿರದ |
ಕಡುಗಲಿಗಳುದುರಿತು ತ್ರಿಗರ್ತರ
ಪಡೆ ಕುರುಕ್ಷೇತ್ರದಲಿ ಪಾರ್ಥನ
ಬಿಡದೆ ಬಳಲಿಸಿಯನಿಬರಳಿದುದು ಭೂಪ ಕೇಳೆಂದ || ೨೦ ||
ಪದವಿಭಾಗ-ಅರ್ಥ: ಕಡಿವಡೆದವು+ ಏಳ್ನೂರು ರಥ, ಮುರಿವಡೆದವು+ ಐನೂರು+ ಅಶ್ವಚಯ ಮುಂಗೆಡೆದವು+ ಅಂದು+ ಐನೂರು ಗಜವು+ ಇಪ್ಪತ್ತು (ಪಾ: ಗಜವಿಪ್ಪತು) ಸಾವಿರದ ಕಡುಗಲಿಗಳು+ ಉದುರಿತು ತ್ರಿಗರ್ತರ ಪಡೆ ಕುರುಕ್ಷೇತ್ರದಲಿ ಪಾರ್ಥನ ಬಿಡದೆ ಬಳಲಿಸಿಯು+ ಅನಿಬರ+ ಅಳಿದುದು ಭೂಪ ಕೇಳೆಂದ
ಅರ್ಥ:ಕುರುಕ್ಷೇತ್ರದಲ್ಲಿ ಏಳ್ನೂರು ರಥಗಳು ಕಡಿದು ಒಡೆದವು, ಮುರಿದು ಒಡೆದವು ಐನೂರು ಅಶ್ವಗಳ ಗುಂಪು/ ಅಶ್ವಪಡೆ; ಅಂದು ಮುಂದೆ ಕೆಡೆದು ಬಿದ್ದವು ಐನೂರು ಗಜಗಳು/ ಆನೆಗಳು; ತ್ರಿಗರ್ತರ ಪಡೆಯಲ್ಲಿ ಇಪ್ಪತ್ತು ಸಾವಿರದ ಕಡುಗಲಿಗಳು ಉದುರಿತು- ಸತ್ತುಬಿದ್ದರು. ಕುರುಕ್ಷೇತ್ರದಲ್ಲಿ ಪಾರ್ಥನನ್ನು ಬಿಡದೆ ಬಳಲುವಂತೆ ಮಾಡಿಯೂ, ಅವರಲ್ಲಿ ಅಷ್ಟು ಜನ ಕುದುರೆ ಆನೆ ಅಳಿದುದು/ ನಾಶವಾದವು, ಭೂಪನೇ ಕೇಳು ಎಂದ ವೈಶಂಪಾಯನ ಮುನಿ.
ದೊರೆಗಳವರಲಿ ಸತ್ಯಕರ್ಮನು
ವರ ಸುಶರ್ಮನು ದ್ರೋಣಸಮರದೊ
ಳೆರಡನೆಯ ದಿವಸದಲಿ ರಚಿಸಿದರಗ್ನಿ ಸಾಕ್ಷಿಕವ
ಧುರದ ಶಪಥದೊಳರ್ಜುನನ ಸಂ
ಗರಕೆ ಬೇಸರಿಸಿದ ಪರಾಕ್ರಮ
ಪರಿಗತರು ಪವಡಿಸಿದರಂದು ಧನಂಜಯಾಸ್ತ್ರದಲಿ ೨೧
ಪದವಿಭಾಗ-ಅರ್ಥ: ದೊರೆಗಳು+ ಅವರಲಿ ಸತ್ಯಕರ್ಮನು, ವರ ಸುಶರ್ಮನು, ದ್ರೋಣಸಮರದೊಳು+ ಎರಡನೆಯ ದಿವಸದಲಿ ರಚಿಸಿದರು+ ಅಗ್ನಿ ಸಾಕ್ಷಿಕವ ಧುರದ ಶಪಥದೊಳು+ ಅರ್ಜುನನ ಸಂಗರಕೆ ಬೇಸರಿಸಿದ ಪರಾಕ್ರಮ ಪರಿಗತರು ಪವಡಿಸಿದರು+ ಅಂದು ಧನಂಜಯ+ ಅಸ್ತ್ರದಲಿ
ಅರ್ಥ:ಅವರು ಸಂಸಪ್ತಕ ದೊರೆಗಳು. ಅವರಲ್ಲಿ ಸತ್ಯಕರ್ಮನು, ಶ್ರೇಷ್ಠಸುಶರ್ಮನು, ದ್ರೋಣನ ಯುದ್ಧದಲ್ಲಿ ಎರಡನೆಯ ದಿವಸದಲ್ಲಿ ರಚಿಸಿದರು ಅಗ್ನಿ ಸಾಕ್ಷಿಕವಾಗಿ ಯುದ್ಧದ ಜಯ ಇಲ್ಲವೇ ಮರಣ ಎಂಬ ಶಪಥದಲ್ಲಿ, ಅರ್ಜುನನೊಡನೆ ಯುದ್ಧಕ್ಕೆ ಬೇಸರಿಸಿದೆ ಪರಾಕ್ರಮ ತೋರಿ ಅಂದು ಧನಂಜಯನ ಅಸ್ತ್ರದಲ್ಲಿ ಮಡಿಸದರು.
ತರಿದನಗ್ಗದ ಸತ್ಯಕರ್ಮನ
ಧುರವ ಸಂತೈಸುವ ತ್ರಿಗರ್ತರ
ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ
ಒರಸಿದನು ಕುರುರಾಯನಾವೆಡೆ
ಬರಲಿ ತನ್ನಾಪ್ತರಿಗೆ ಕೊಟ್ಟೆನು
ಹರುವನಿನ್ನಾಹವ ವಿಲಂಬವ ಮಾಡಬೇಡೆಂದ ೨೨
ಪದವಿಭಾಗ-ಅರ್ಥ: ತರಿದನು+ ಅಗ್ಗದ ಸತ್ಯಕರ್ಮನ, ಧುರವ ಸಂತೈಸುವ ತ್ರಿಗರ್ತರ ದೊರೆ ಸುಶರ್ಮನನು, ಅವನ ಸಹಭವ ಗೋತ್ರ ಬಾಂಧವರ ಒರಸಿದನು, ಕುರುರಾಯನು+ ಆವೆಡೆ ಬರಲಿ ತನ್ನ+ ಆಪ್ತರಿಗೆ ಕೊಟ್ಟೆನು ಹರುವನು (ಬಿಡುಗಡೆ)+ ಇನ್ನು+ ಆಹವ (ಯುದ್ಧ) ವಿಲಂಬವ ಮಾಡಬೇಡೆಂದ
ಅರ್ಥ:ಬಲಾಢ್ಯನಾದ ಸತ್ಯಕರ್ಮನನ್ನು ಕತ್ತರಿಸಿದನು., ಯುದ್ಧದಲ್ಲಿ ಸಂತೈಸುವ ತ್ರಿಗರ್ತರ ದೊರೆ ಸುಶರ್ಮನನ್ನೂ, ಅವನ ಸಹೋದರ ಗೋತ್ರ ಬಾಂಧವರನ್ನೂ ಸಂಹರಿಸಿದನು. ಕುರುರಾಯನು ಯಾವಕಡೆ ಇದ್ದಾನೆ? ಇಲ್ಲಿ ಬರಲಿ, ಅವನ ಆಪ್ತರಿಗೆ ಮುಕ್ತಿಯನ್ನು ಕೊಟ್ಟೆನು, ಇನ್ನು ಯುದ್ಧವನ್ನು ವಿಲಂಬಿಸುವ ಕಾರ್ಯ ಮಾಡಬೇಡ, ಎಂದು ಕೌರವನಿಗೆ ಅರ್ಜುನನಿಗೆ ಹೇಳಿದ.
ಇತ್ತ ಭೀಮನ ಕೂಡೆ ನೂರರು
ವತ್ತು ಗಜ ಸಹಿತರಿಭಟರೊಳು
ದ್ವೃತ್ತನಿದಿರಾದನು ಸುದರ್ಶನನಂಧನೃಪಸೂನು |
ಹೆತ್ತಳವ್ವೆ ವಿರೋಧಿಸೇನೆಯ
ಮತ್ತ ಗಜಘಟೆಗೋಸುಗರವಿವು
ಮತ್ತೆ ದೊರಕವು ಕೊಂದಡೆಂದುಮ್ಮಳಿಸಿದನು ಭೀಮ || ೨೩ ||
ಪದವಿಭಾಗ-ಅರ್ಥ: ಇತ್ತ ಭೀಮನ ಕೂಡೆ ನೂರ+ ಅರುವತ್ತು ಗಜ ಸಹಿತ+ ಅರಿಭಟರೊಳು+ ಉದ್ವೃತ್ತನು+ ಇದಿರಾದನು ಸುದರ್ಶನನು+ ಅಂಧನೃಪಸೂನು ಹೆತ್ತಳವ್ವೆ ವಿರೋಧಿಸೇನೆಯ ಮತ್ತ ಗಜಘಟೆಗೋಸುಗ+ ಅರವು+ ಇವು ಮತ್ತೆ ದೊರಕವು ಕೊಂದಡೆಂದು+ ಉಮ್ಮಳಿಸಿದನು ಭೀಮ
ಅರ್ಥ:ಇತ್ತ ಭೀಮನ ಕೂಡೆ ನೂರ ಅರುವತ್ತು ಆನೆಗಳ ಸಹಿತ ಶತ್ರುಭಟರಲ್ಲಿ ಉದ್ವೃತ್ತನು ಭೀಮನನ್ನು ಎದುರಿಸಿದನು. ಸುದರ್ಶನನು ಅಂಧನೃಪ ಧೃತರಾಷ್ಟ್ರನ ಮಗ. ಹೆತ್ತಳು ಅವ್ವೆ ಗಾಂಧಾರಿ. ವಿರೋಧಿಸೇನೆಯ ಮತ್ತ/ ಮದಗಜಗಳು ಇವು ಕಾಪಾಡಲ್ಪಟ್ಟವು- ಕೊಂದರೆ ಮತ್ತೆ ದೊರಕವು ಎಂದು ಕೊಲ್ಲುವಾಗ ಸುದರ್ಶನ ಮತ್ತು ಆನೆಗಳಿಗಾಗಿ ಭೀಮನು ದುಃಖಿಸಿದನು.
ಸೊಕ್ಕಿದಾನೆಯ ಕೈಯ ಕದಳಿಯ
ನಿಕ್ಕಿ ಬಿಡಿಸುವನಾರು ಪವನಜ
ನೆಕ್ಕತುಳದಲಿ ದಂತಿಘಟೆಗಳ ಮುರಿದನುರವಣಿಸಿ |
ಇಕ್ಕಡಿಯ ಬಸುರುಚ್ಚುಗಳ ನರ
ಸುಕ್ಕುಗಳ ನಾಟಕದವೊಲು ಕೈ
ಯಿಕ್ಕಿದಾನೆಯ ಹಿಂಡು ಮುರಿದುದು ನಿಮಿಷಮಾತ್ರದಲಿ || ೨೪ ||
ಪದವಿಭಾಗ-ಅರ್ಥ: ಸೊಕ್ಕಿದಾನೆಯ ಕೈಯ ಕದಳಿಯನು+ ಇಕ್ಕಿ ಬಿಡಿಸುವನಾರು, ಪವನಜನು+ ಎಕ್ಕತುಳದಲಿ(ಪರಾಕ್ರಮದಿಂದ ಅಮೋಘವಾಗಿ) ದಂತಿಘಟೆಗಳ ಮುರಿದನು+ ಉರವಣಿಸಿ ಇಕ್ಕಡಿಯ ಬಸುರ+ ಅಚ್ಚುಗಳ ನರಸುಕ್ಕುಗಳ ನಾಟಕದವೊಲು ಕೈಯಿಕ್ಕಿದ+ ಆನೆಯ ಹಿಂಡು ಮುರಿದುದು ನಿಮಿಷಮಾತ್ರದಲಿ
ಅರ್ಥ:ಸೊಕ್ಕಿದ ಆನೆಯ ಕೈಯಲ್ಲಿ ಸಿಕ್ಕಿದ ಬಾಳೆಯನ್ನು ಆನೆಗೆ ಇಕ್ಕಿ/ ಹೊಡೆದು ಬಿಡಿಸುವನಾರು? ಆದರೆ ಪವನಜ ಭೀಮನು ಪರಾಕ್ರಮದಿಂದ ಅಮೋಘವಾಗಿ ದಂತಿಘಟೆಗಳನ್ನು ಮುರಿದು ಕೊಂದನು. ಪರಾಕ್ರಮಿಸಿ ಎರಡುಕಡೆಯ ಹೊಟ್ಟೆಯ ಅಚ್ಚುಗಳನ್ನು ಅವುಗಳ ನರಸುಕ್ಕುಗಳನ್ನು ನಾಟಕದಲ್ಲಿ ಮಾಡುವಂತೆ ವಾಸ್ತವವಾಗಿ ಭೀಮನು ಕೈಯಿಕ್ಕಿದ/ ಹೊಡೆದ ಆನೆಯ ಹಿಂಡು ನಿಮಿಷಮಾತ್ರದಲ್ಲಿ ನಾಶವಾಯಿತು.

ಸಹದೇವನಿಂದ ಶಕುನಿಯ ವಧೆ[ಸಂಪಾದಿಸಿ]

ಕೆಡಹಿ ದುರ್ಯೋಧನನ ತಮ್ಮನ
ನಡಗುದರಿ ಮಾಡಿದನುಳೂಕನ
ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ |
ತುಡುಕಿದನು ಸಹದೇವನಂಬಿನ
ಗಡಣದಲಿ ಸೌಬಲನ ಸೇನೆಯ
ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ || ೨೫ ||
ಪದವಿಭಾಗ-ಅರ್ಥ: ಕೆಡಹಿ ದುರ್ಯೋಧನನ ತಮ್ಮನ ನಡಗುದರು(ನಡು ಕುದರಿ) ಮಾಡಿದನು+ ಉಳೂಕನ ಕಡಿದು ಬಿಸುಟನು ನಕುಲನು+ ಇಪ್ಪತ್ತೈದು ಬಾಣದಲಿ ತುಡುಕಿದನು ಸಹದೇವನ+ ಅಂಬಿನ ಗಡಣದಲಿ ಸೌಬಲನ ಸೇನೆಯ ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ.
ಅರ್ಥ:ಭೀಮನು ದುರ್ಯೋಧನನ ತಮ್ಮನನ್ನು ಕೆಡಹಿ ನಡುವನ್ನು ಮುರಿದು ಪುಡಿ ಮಾಡಿದನು. ನಕುಲನು ಉಳೂಕನನ್ನು ಕತ್ತಿಯುದ್ಧದಲ್ಲಿ ಕಡಿದು ಬಿಸುಟನು. ಸಹದೇವನು ಇಪ್ಪತ್ತೈದು ಬಾಣದಲಿ ಜಾಲದಲ್ಲಿ ಸೌಬಲ- ಶಕುನಿಯ ಸೇನೆಯನ್ನು ಹೊಡೆದನು. ಅವನು ಶರಜಾಲ ಝಂಕೃತಿಯ ಕಡಲನ್ನು ಮೊಗೆದಂತೆ ಬಾಣಗಳಬಲೆಯನ್ನು ಮಾಡಿ ಸೇನೆಯನ್ನು ಹೊಡೆದುಹಾಕಿದನು.
ಎಲವೊ ಕಪಟದ್ಯೂತ ಬಂಧದೊ
ಳಳಲಿಸಿದಲಾ ಪಾಪಿ ಕೌರವ
ಕುಲದ ತಲೆ ಸೆಂಡಾಡಿದವ ನೀನೋ ಮದಗ್ರಜನೊ |
ಸಿಲುಕಿದೆಯಲಾ ನಮ್ಮ ಬಾಣದ
ಬಲೆಗೆ ನಿನ್ನನು ಕಾವನಾವವ
ನೆಲೆ ಕುಠಾರ ಎನುತ್ತ ನುಡಿದನು ನಗುತ್ತ ಸಹದೇವ || ೨೬ ||
ಪದವಿಭಾಗ-ಅರ್ಥ: ಎಲವೊ ಕಪಟದ್ಯೂತ ಬಂಧದಳು+ ಅಳಲಿಸಿದಲಾ (ಸಂಕಟಪಡಿಸಿದೆಯಲ್ಲಾ), ಪಾಪಿ, ಕೌರವಕುಲದ ತಲೆ ಸೆಂಡಾಡಿದವ ನೀನೋ ಮದಗ್ರಜನೊ (ಮತ್ ಅಗ್ರಜ - ನನ್ನ ಅಣ್ನ) ಸಿಲುಕಿದೆಯಲಾ ನಮ್ಮ ಬಾಣದ ಬಲೆಗೆ ನಿನ್ನನು ಕಾವನಾವವನು+ ಎಲೆ ಕುಠಾರ ಎನುತ್ತ ನುಡಿದನು ನಗುತ್ತ ಸಹದೇವ.
ಅರ್ಥ:ಎಲವೊ ಶಕುನಿ, ನೀನು ಕಪಟದ್ಯೂತದ ಬಲೆಯಲ್ಲಿ ನಮ್ಮನ್ನು ಸಿಕ್ಕಿಸಿ ಅಳಲಿಸಿದೆಯಲ್ಲವೇ? ಪಾಪಿ! ಕೌರವಕುಲದ ತಲೆಗಳನ್ನು ಕಡಿದು ಚೆಂಡಾಡಿದವನು ನೀನೋ ಅಥವಾ ನನ್ನ ಅಣ್ಣ ಭೀಮನೋ? ಈಗ ನನ್ನ ಕೈಗೆ ಸಿಕ್ಕಿದೆಯಲಾ! ನಮ್ಮ ಬಾಣದ ಬಲೆಗೆ ನಿನ್ನನ್ನು ಹಾಕುವೆನು. ನಿನ್ನನ್ನು ಈಗ ಕಾಯುವವನು ಅದು ಯಾವನು ಇದ್ದಾನೆ? ಎಲೆ ಕುಠಾರ/ ಪಾಪಿ! ಎನ್ನುತ್ತಾ ಸಹದೇವನು ನಗುತ್ತ ನುಡಿದನು.
ವ್ಯರ್ಥವಲೆ ಸಹದೇವ ನಿನ್ನ ಕ
ದರ್ಥನಕೆ ಫಲವಿಲ್ಲ ನೀ ಕದ
ನಾರ್ಥಿಯೇ ದಿಟ ತೋರಿಸಾದರೆ ಬಾಹುವಿಕ್ರಮವ |
ಪಾರ್ಥ ಭೀಮರ ಮರೆಯೊಳಿರ್ದು ನಿ
ರರ್ಥಕರನಿರಿದಿರಿದು ಜಯವ ಸ
ಮರ್ಥಿಸುವೆ ಫಡ ಹೋಗೆನುತ ತೆಗೆದೆಚ್ಚನಾ ಶಕುನಿ || ೨೭ ||
ಪದವಿಭಾಗ-ಅರ್ಥ: ವ್ಯರ್ಥವಲೆ ಸಹದೇವ ನಿನ್ನ ಕದ್+ ಅರ್ಥನಕೆ (ಅರ್ಥನ= ಧೋರಣೆ, ರಾಜನೀತಿ, ಅರ್ಥನೀತಿ, ಸಾರಾಸಾರಾ ವಿಚಾರ, ವಿವೇಚನೆ, ಕಾರ್ಯನೀತಿ) ಫಲವಿಲ್ಲ, ನೀ ಕದ(ಕಥಿತ, ಹೇಳಿದ) ನಾರ್ಥಿಯೇ ದಿಟ ತೋರಿಸು+ ಆದರೆ ಬಾಹುವಿಕ್ರಮವ, ಪಾರ್ಥ ಭೀಮರ ಮರೆಯೊಳು+ ಇರ್ದು ನಿರರ್ಥಕರನು+ ಇರಿದು+ ಇರಿದು ಜಯವ ಸಮರ್ಥಿಸುವೆ ಫಡ ಹೋಗೆನುತ ತೆಗೆದೆಚ್ಚನು+ ಆ ಶಕುನಿ
ಅರ್ಥ:ಸಹದೇವ ನಿನ್ನ ಕಥಿಥ/ ಧೋರಣೆಗೆ - ನೀತಿಗೆ ಫಲವಿಲ್ಲ. ನನ್ನನ್ನು ಕೊಲ್ಲಲಾರೆ; ವ್ಯರ್ಥವು ಎಲೆ ಸಹದೇವ, ನೀನು ಹೇಳಿದಹಾಗೆ ಮಾಡುವವನೆ ದಿಟವಾದರೆ, ನಿನ್ನ ಬಾಹುವಿಕ್ರಮವನ್ನು/ ತೋಳಿನ ಪರಾಕ್ರಮವನ್ನು ತೋರಿಸು. ಪಾರ್ಥ ಮತ್ತು ಭೀಮರ ಮರೆಯಲ್ಲಿ ಇದ್ದುಕೊಂಡು ಯುದ್ಧಮಾಡುವ ನೀನು ನಿರರ್ಥಕರನ್ನು ಇರಿದು, ಇರಿದು ಜಯವನ್ನು ಪಡೆದೆನೆಂದು ಸಮರ್ಥಿಸುವೆ. ಫಡ! ಹೋಗೋ, ಎನ್ನತ್ತಾ ಆ ಶಕುನಿ ತೆಗೆದು ಹೊಡೆದನು.
ಮರುಗದಿರು ನಿನ್ನುಭಯ ಪಕ್ಷವ
ತರಿದು ತುಂಡವ ಸೀಳುವೆನು ತಾ
ಮರೆವನೇ ಭವದೀಯ ರಚಿತ ವಿಕಾರ ವಿಭ್ರಮವ |
ನೆರೆ ಪತತ್ರಿಗಳಿವೆ ಪತತ್ರಿಯ
ಮರುವೆಸರು ನಿನಗಿವರ ಕೇಣಿಗೆ
ತೆರಹುಗೊಡು ನೀನೆಂದು ಮಾದ್ರೀತನುಜ ಮಗುಳೆಚ್ಚ || ೨೮ ||
ಪದವಿಭಾಗ-ಅರ್ಥ: ಮರುಗದಿರು ನಿನ್ನ+ ಉಭಯ ಪಕ್ಷವ ತರಿದು ತುಂಡವ ಸೀಳುವೆನು, ತಾ ಮರೆವನೇ ಭವದೀಯ (ನಿನ್ನ) ರಚಿತ ವಿಕಾರ ವಿಭ್ರಮವ(ವಿಜೃಂಭಣೆ) ನೆರೆ (ಬಹಳ)ಪತತ್ರಿಗಳಿವೆ (ಬಾಣ) ಪತತ್ರಿಯ ಮರುವೆಸರು ನಿನಗೆ+ ಇವರ ಕೇಣಿಗೆ (ಗೆಳೆತನ.. ಗುತ್ತಿಗೆ. ) ತೆರಹುಗೊಡು ನೀನು+ ಎಂದು ಮಾದ್ರೀತನುಜ ಮಗುಳು+ ಎಚ್ಚ
ಅರ್ಥ:ಶಕುನಿಯೇ ಚಿಂತೆ ಮಾಡಬೇಡ. ನಿನ್ನ ಎರಡು ಬದಿಯನ್ನೂ ಕತ್ತರಿಸಿ ತುಂಡುಮಾಡಿ ಸೀಳುವೆನು. ತಾನು ಮರೆವನೇ ನಿನ್ನ ರಚಿಸಿದ ಕೆಟ್ಟ ವಿಜೃಂಭಣೆಯನ್ನು. ಬಹಳಷ್ಟು ಬಾಣಗಳಿವೆ; ಬಾಣಗಳಿಗೆ ನಿನಗಾಗಿ ಹೆಸರಿಟ್ಟು ಕಾದಿದೆ ನಿನಗೆ, ಇವರ ಕೇಣಿಗೆ/ಗೆಳೆತನಕ್ಕೆ ನೀನು ತೆರಹುಗೊಡು/ ಅವಕಾಶಕೊಡು (ಈ ಬಾಣಗಳು ನಿನ್ನ ಪ್ರಾಣದ ಕೇಣಿ/ಗುತ್ತಿಗೆ ಹಿಡಿದಿವೆ) ಎಂದು ಮಾದ್ರಿಯ ಮಗ ಸಹದೇವ ತಿರುಗಿ ಹೊಡೆದ.
ಎಸಲು ಸಹದೇವಾಸ್ತ್ರವನು ಖಂ
ಡಿಸಿ ಶರೌಘದಿನಹಿತವೀರನ
ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ
ಕುಸುರಿದರಿದತಿರಥನ ಬಾಣ
ಪ್ರಸರವನು ರಥ ತುರುಗವನು ಭಯ
ರಸದೊಳದ್ದಿದನುದ್ದಿದನು ಸಹದೇವ ಸೌಬಲನ || ೨೯ ||
ಪದವಿಭಾಗ-ಅರ್ಥ: ಎಸಲು ಸಹದೇವ+ ಅಸ್ತ್ರವನು ಖಂಡಿಸಿ ಶರೌಘದಿಂ (ಶರ+ಓಘ= ಭಾಣ ಪ್ರವಾಹ, ಸಮೂಹ)+ ಅಹಿತವೀರನ (ಶತ್ರು ವೀರ) ಮುಸುಕಿದನು ಮೊನೆಗಣೆಗಳು+ ಈಡಿ+ ಇರಿದವು ರಥಾಗ್ರದಲಿ ಕುಸುರಿದು (ಕುಸುರಿ- ಚಾತುರ್ಯ)+ ಅರಿದು+ ಅತಿರಥನ ಬಾಣ ಪ್ರಸರವನು ರಥ ತುರುಗವನು ಭಯರಸದೊಳು+ ಅದ್ದಿದನು+ ಉದ್ದಿದನು ಸಹದೇವ ಸೌಬಲನ(ಶಕುನಿಯ)
ಅರ್ಥ:ಶಕುನಿಯು ಎಸೆದ ಅಸ್ತ್ರವನ್ನು ಸಹದೇವನು ಖಂಡಿಸಿ ಶತ್ರುವನ್ನು ಬಾಣಗಳಿಂದ ಮುಚ್ಚಿದನು. ಮೊನೆಗಣೆಗಳು/ ಚೂಪಾದ ಬಾಣಗಳು ಈಡಿರಿದವು ರಥದಮೇಲೆ ಚುಚ್ಚಿ ಇರಿದವು. ಅತಿರಥ ಶಕುನಿಯ ಬಾಣ ಪ್ರಸರ/ ಸಮೂಹವನ್ನು (ಕತ್ತರಿಸಿ),ಶಕುನಿಯ ರಥ ತುರುಗವನನ್ನುಸಹದೇವನು ಭಯರಸದಲ್ಲಿ ಅದ್ದಿದನು ಉದ್ದಿದನು/ನೋಯಿಸಿದನು.
ತೇರು ಹುಡಿಹುಡಿಯಾಗೆ ಹೊಯ್ದನು
ವಾರುವನ ಮೇಲುಗಿದಡಾಯುಧ
ದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ |
ವೀರನಹೆಯೋ ಶಕುನಿ ಜೂಜಿನ
ಚೋರವಿದ್ಯೆಯ ಬಿಟ್ಟೆಲಾ ಜು
ಜ್ಝಾರನಹೆ ಮಝ ಪೂತೆನುತ ಖಂಡಿಸಿದನಾ ಹಯವ || ೩೦ ||
ಪದವಿಭಾಗ-ಅರ್ಥ: ತೇರು ಹುಡಿಹುಡಿಯಾಗೆ ಹೊಯ್ದನು ವಾರುವನ(ಕುದುರೆ) ಮೇಲೆ+ ಉಗಿದಡೆ+ ಆಯುಧದ+ ಆರುಭಟೆಯಲಿ ಬಿಟ್ಟನು+ ಆ ಸಹದೇವನ+ ಅಭಿಮುಖಕೆ ವೀರನು+ ಅಹೆಯೋ ಶಕುನಿ ಜೂಜಿನ ಚೋರವಿದ್ಯೆಯ ಬಿಟ್ಟೆಲಾ ಜುಜ್ಝಾರನು+ ಅಹೆ (ಧೀರನು ಆಗಿರುವೆ;) ಮಝ ಪೂತು+ ಎನುತ ಖಂಡಿಸಿದನು+ ಆ ಹಯವ.
ಅರ್ಥ:ಶಕುನಿಯ ರಥ ಹುಡಿಹುಡಿಯಾಗುವಂತೆ ಸಹದೇವನು ಬಾನವನ್ನು ಹೊಡೆದನು; ಆಗ ಶಕುನಿಯು ಕುದುರೆಯ ಮೇಲೆ ಹಾರಿದನು; ಹತ್ತಿರವಿದ್ದ ಉಗಿದ ಆಯುಧವನ್ನು ಆರ್ಭಟೆಯಿಂದ ಆ ಸಹದೇವನ ಅಭಿಮುಖಕ್ಕೆ ಬಿಟ್ಟನು. ಆಗ ಸಹದೇವನು ಅದನ್ನು ಖಂಡಿಸಿ, ಶಕುನಿಗೆ, ನೀನು'ವೀರನೂ ಆಗಿರುವಯೋ! ಶಕುನೀ ನೀನು ಜೂಜಿನ ಚೋರವಿದ್ಯೆಯನ್ನು ಬಿಟ್ಟೆಯಾ? ಧೀರನೂ ಆಗಿರುವೆ, ಮಝ ಪೂತು ಎನ್ನುತ್ತಾ ಆ ಶಕುನಿಯ ಕುದುರೆಯನ್ನು ಸಹದೇವನು ಖಂಡಿಸಿದನು.
ಬಳಿಕ ಕಾಲಾಳಾಗಿ ಖಡುಗವ
ಝಳಪಿಸುತ ಬರೆ ಶಕ್ತಿಯಲಿ ಕೈ
ಚಳಕ ಮಿಗೆ ಸಹದೇವನಿಟ್ಟನು ಸುಬಲನಂದನನ
ಖಳನೆದೆಯನನೊದೆದಪರಭಾಗಕೆ
ನಿಲುಕಿತದು ಗಾಂಧಾರಬಲ ಕಳ
ವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ ೩೧
ಪದವಿಭಾಗ-ಅರ್ಥ: ಬಳಿಕ ಕಾಲಾಳಾಗಿ ಖಡುಗವ ಝಳಪಿಸುತ ಬರೆ ಶಕ್ತಿಯಲಿ ಕೈಚಳಕ ಮಿಗೆ ಸಹದೇವನು+ ಇಟ್ಟನು ಸುಬಲನಂದನನ

ಖಳನ+ ಎದೆಯನೊದೆದು ಅಪರಭಾಗಕೆ(ಹಿಂಭಾಗ, ಬೆನ್ನು) ನಿಲುಕಿತು+ ಅದು ಗಾಂಧಾರ ಬಲ ಕಳವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ

ಅರ್ಥ:ಬಳಿಕ ಶಕುನಿಯು ಕಾಲಾಳಾಗಿ ಖಡ್ಗವನ್ನು ಹಿಡಿದು ಝಳಪಿಸುತ್ತಾ ಬರಲು, ಸಹದೇವನು ಹತ್ತಿರ ನುಗ್ಗಿ ಬಂದ ಸುಬಲನ ಮಗನಾದ ಖಳ ಶಕುನಿಯ ಎದೆಯನ್ನು ಒದೆದು ಬಹಳ ಕೈಚಳಕದಿಂದ ಶಕ್ತಿ-ಆಯುಧವನ್ನು ಅವನ ಎದೆಗೆ ಇಟ್ಟನು/ ಚುಚ್ಚಲು ಅದು ಶಕುನಿಯ ಬೆನ್ನಲ್ಲಿ ಹೊರಟಿತು. ಅದನ್ನು ಕಂಡು ಗಾಂಧಾರ ಸೇನೆ ನಾಯಕನನ್ನು ಕಳೆದುಕೊಂಡು ಕಳವಳಗೊಂಡಿತು. ಹೀಗೆ ಶಕುನಿಯು ಸುರತರುಣಿಯರ/ ಸ್ವರ್ಗಕ್ಕೆ ಸೇರಿ ದೇವಲೋಕದ ತರುಣಿಯರ ತೋಳಿನಲ್ಲಿ ಸಿಕ್ಕಿಕೊಂಡನು.
ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ |
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ || ೩೨ ||
ಪದವಿಭಾಗ-ಅರ್ಥ: ಕವಿದುದು ಆ ಪರಿವಾರ (ಸೇನೆ- ಸೈನಿಕರು ) ವಡಬನ (ವಡಬ- ಸಮುದ್ರದಲ್ಲಿರುವ ಬೆಂಕಿ. ಬೆಂಕಿ) ತಿವಿವ ತುಂಬಿಗಳಂತೆ ಶಕುನಿಯ ಬವರಿಗರು(ಬವರ- ಯುದ್ಧ, ಸೇನೆ) ಮಂಡಳಿಸೆ ಸಹದೇವನ ರಥಾಗ್ರದಲಿ ತೆವರಿಸಿದನು ಅನಿಬರ (ಅವರೆಲ್ಲರನ್ನೂ) ಚತುರ್ಬಲ ನಿವಹವನು (ಗುಂಪು) ನಿಮಿಷಾರ್ಧದಲಿ ಸಂತವಿಸಿದನು ಸಹದೇವ ಕೊಂದನು ಸೌಬಲನ ಬಲವ (ಸೇನೆಯ).
ಅರ್ಥ:ಆಗ ಶಕುನಿಯ ಸೇನೆ ಕವಿದುದು ಬೆಂಕಿತಾಗಿದ ತುಂಬಿಗಳಂತೆ/ ಜೇನುಹುಳುಗಳಂತೆ ಶಕುನಿಯ ಸೈನಿಕರು ಸಹದೇವನನ್ನು ಸುತ್ತುವರಿಯಲು ಅವನು ರಥದಲ್ಲಿ ಮುಂದೆ ನಿಂತು ಗುಂಪಾಗಿ ಬಂದ ಅವರೆಲ್ಲರನ್ನೂ, ಚತುರಂಗ ಸೈನ್ಯವನ್ನೂ ನಿಮಿಷಾರ್ಧದಲ್ಲಿ ನಾಶಪಡಿಸಿದನು. ಹೀಗೆ ಸಹದೇವನು ಸೌಬಲನ ಸೇನೆಯನ್ನು ಕೊಂದನು. ಪಾಂಡವಸೇನೆಯನ್ನು ಸಂತವಿಸಿದನು/ ಸಂತೈಸಿದನು.
ಹರಿಬದಲಿ ಹೊಕ್ಕೆರಡು ಸಾವಿರ
ತುರುಗ ಬಿದ್ದವು ನೂರು ಮದಸಿಂ
ಧುರಕೆ ಗಂಧನವಾಯ್ತು ಪಯದಳವೆಂಟು ಸಾವಿರದ |
ಬರಹ ತೊಡೆದುದು ನೂರು ರಥ ರಿಪು
ಶರದೊಳಕ್ಕಾಡಿತು ವಿಡಂಬದ
ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳೆಂದ || ೩೩ ||
ಪದವಿಭಾಗ-ಅರ್ಥ: ಹರಿಬದಲಿ(ಕಾಳಗ,ಯುದ್ಧ) ಹೊಕ್ಕು (ಪದಾತಿ ಸೈನ್ಯ. ಸೈನ್ಯದ ವ್ಯೂಹ)+ ಎರಡು ಸಾವಿರ ತುರುಗ ಬಿದ್ದವು, ನೂರು ಮದಸಿಂಧುರಕೆ ಗಂಧನವಾಯ್ತು, ಪಯದಳವೆಂಟು ಸಾವಿರದ ಬರಹ ತೊಡೆದುದು, ನೂರು ರಥ ರಿಪುಶರದೊಳಕ್ಕಾಡಿತು, ವಿಡಂಬದ ಕುರುಬಲಾಂಬುಧಿ (ಕುರುಸೇನೆಯ ಸಮುದ್ರ) ಕೂಡೆ ಬರತುದು ನೃಪತಿ ಕೇಳೆಂದ.
ಅರ್ಥ:ಈ ಸಹದೇವ ಶಕುನಿಯ ಯುದ್ಧದಲ್ಲಿ ಕೌರವ ಚತುರಂಗ ಸೈನ್ಯದಲ್ಲಿ, ಎರಡು ಸಾವಿರ, ಕುದುರೆಗಳ ಸತ್ತು ಬಿದ್ದವು, ನೂರು ಆನೆಗಳು ನಾಶವಾಯ್ತು, ಪಾಯದಳವು ಎಂಟು ಸಾವಿರದ ಲೆಕ್ಕದಲ್ಲಿ ತೊಡೆದುದು/ ಇಲ್ಲವಾಯಿತು. ನೂರು ರಥಗಳು ಶತ್ರುವಿನ ಬಾಣಕ್ಕೆ ನಾಶವಾಯಿತು, ಆಡಂಬರದ ಕುರುಸೇನೆಯ ಸಮುದ್ರ ಪೂರಾ ಬತ್ತಿತು, ರಾಜನೇ ಕೇಳು ಎಂದ.

ನಕಲ, ಧರ್ಮಜ, ಭೀಮರನ್ನು ಎದುರಿಸದೆ ಕೌರವ ಜಾರಿಹೊದನು[ಸಂಪಾದಿಸಿ]

ಓಡಿದವರಲ್ಲಲ್ಲಿ ಧೈರ್ಯವ
ಮಾಡಿ ಹರಿಹಂಚಾದ ಸುಭಟರು
ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ |
ಓಡಲೇಕಿನ್ನೊಂದು ಹಲಗೆಯ
ನಾಡಿ ನೋಡುವೆನೆಂಬವೊಲು ಕೈ
ಮಾಡಿದನು ಕುರುರಾಯನಾ ಸಹದೇವನಿದಿರಿನಲಿ || ೩೪ ||
ಪದವಿಭಾಗ-ಅರ್ಥ: ಓಡಿದವರು+ ಅಲ್ಲಲ್ಲಿ ಧೈರ್ಯವ ಮಾಡಿ ಹರಿಹಂಚಾದ ಸುಭಟರು ಕೂಡಿಕೊಂಡುದು, ನೂರು ಮದದಾನೆಯಲಿ ಕುರುಪತಿಯ ಓಡಲೇಕೆ+ ಇನ್ನೊಂದು ಹಲಗೆಯನು (ಪಗಡೆಯಾಟದ ಮನೆಯ ಹಲಗೆ)+ ಆಡಿ ನೋಡುವೆನೆಂಬವೊಲು ಕೈಮಾಡಿದನು ಕುರುರಾಯನು+ ಆ ಸಹದೇವನ+ ಇದಿರಿನಲಿ.
ಅರ್ಥ:ಕೌರವನ ಸೇನೆಯಲ್ಲಿ ಓಡಿದವರು ಅಲ್ಲಲ್ಲಿ ಸೇರಿ, ಧೈರ್ಯವ ಮಾಡಿ ಹರಿಹಂಚಾದ ಸುಭಟರು ಮತ್ತೆ ಕೂಡಿಕೊಂಡರು. ಕುರುಪತಿಯ ನೂರು ಮದದಾನೆಯ ಜೊತೆ ಓಡುವುದು ಏಕೆ? ಇನ್ನೊಂದು ಹಲಗೆಯ ಪಗಡೆಯ ಆಟವನ್ನು ಆಡಿ ನೋಡುವೆನು ಎಂಬಂತೆ ಆ ಸಹದೇವನ ಇದಿರಿನಲ್ಲಿ ಕೈಕೊಡವಿ- ಕುರುರಾಯನು ಕೈಮಾಡಿದನು.
ಧರಣಿಪನ ಥಟ್ಟಣೆಗೆ ನಿಲ್ಲದೆ
ತೆರಳಿದನು ಸಹದೇವನಾತನ
ಹಿರಿಯನಡ್ದೈಸಿದಡೆ ಕೊಟ್ಟನು ಬೋಳೆಯಂಬಿನಲಿ |
ಶರಹತಿಗೆ ಸೆಡೆದಾ ನಕುಲ ಪೈ
ಸರಿಸಿದನು ನೂರಾನೆಯಲಿ ಡಾ
ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ || ೩೫ ||
ಪದವಿಭಾಗ-ಅರ್ಥ: ಧರಣಿಪನ ಥಟ್ಟಣೆಗೆ(ಥಟ್ಟನೆ - ಕೂಡಲೆ ಮಾಡು; ಸನ್ನೆ?) ನಿಲ್ಲದೆ ತೆರಳಿದನು ಸಹದೇವನು ಆತನ ಹಿರಿಯನ+ ಅಡ್ದೈಸಿದಡೆ (ಅಡ್ಡಹಾಕು)ಕೊಟ್ಟನು ಬೋಳೆಯಂಬಿನಲಿ ಶರಹತಿಗೆ (ಬಾಣಗಳ ಹೊಡೆತಕ್ಕೆ) ಸೆಡೆದು+ ಆ ನಕುಲ ಪೈಸರಿಸಿದನು (ಹಿಮ್ಮೆಟ್ಟಿಸಿದನು, ಹಿಂಜರಿ) ನೂರಾನೆಯಲಿ ಡಾವರಿಸಿದನು (ಆರ್ಭಟಿಸು) ಧರ್ಮಜನ ದಳದಲಿ ಧೀರ ಕುರುರಾಯ.
ಅರ್ಥ:ರಾಜ ಕೌರವನ ಕೈಮಾಡಿ ಯುದ್ಧದ ಕೈಸನ್ನೆಗೆ ನಿಲ್ಲದೆ ಸಹದೇವನು ಅಲ್ಲಿಂದ ತೆರಳಿದನು. ಆತನ ಹಿರಿಯನಾದ ಧರ್ಮಜನು ಅಡ್ಡಗಟ್ಟಿದಾಗ ಕೌರವನು ಹರಿತಬಾಣಗಳಿಂದ ಉತ್ತರ ಕೊಟ್ಟನು. ಆ ಬಾಣಗಳ ಹೊಡೆತಕ್ಕೆ ಆ ನಕುಲನು ಸೆಟೆದು ನಿಂತು ಹಿಮ್ಮೆಟ್ಟಿಸಿದನು. ಆಗ ಧೀರ ಕುರುರಾಯನು ನೂರು ಆನೆಗಳೊಡನೆ ಧರ್ಮಜನ ದಳದಲ್ಲಿ ಆರ್ಭಟಿಸಿದನು.
ಎಲೆ ನಪುಂಸಕ ಧರ್ಮಸುತ ಫಡ
ತೊಲಗು ಕರೆಯಾ ನಿನಗೆ ಭೀಮನ
ಬಲುಹೆ ಬಲುಹರ್ಜುನನ ವಿಕ್ರಮ ವಿಕ್ರಮವು ನಿನಗೆ |
ಮಲೆತು ಮೆರೆಯಾ ಕ್ಷತ್ರಧರ್ಮವ
ನಳುಕದಿರು ನೀ ನಿಲ್ಲೆನುತಲಿ
ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ || ೩೬ ||
ಪದವಿಭಾಗ-ಅರ್ಥ: ಎಲೆ ನಪುಂಸಕ ಧರ್ಮಸುತ ಫಡ ತೊಲಗು ಕರೆಯಾ ನಿನಗೆ ಭೀಮನ ಬಲುಹೆ ಬಲುಹು+ ಅರ್ಜುನನ ವಿಕ್ರಮ ವಿಕ್ರಮವು ನಿನಗೆ ಮಲೆತು ಮೆರೆಯಾ ಕ್ಷತ್ರಧರ್ಮವನು+ ಅಳುಕದಿರು ನೀ ನಿಲ್ಲೆನುತಲಿ+ ಇಟ್ಟಳಿಸಿ (ಗಡಣ -ಗಡಣಿಸು, ಒಗ್ಗೂಡಿಕೊಂಡು) ಬರಲು+ ಊಳಿಗದ(ಯೋಧರ ಗುಂಪು, ಕೆಲಸ, ಕಾರ್ಯ, ಸೇವೆ, ಜೀತ) ಬೊಬ್ಬೆಯ ಕೇಳಿದನು ಭೀಮ
ಅರ್ಥ:ಕೌರವನು ಧರ್ಮಜನನ್ನು ಕುರಿತು, 'ಎಲೆ ನಪುಂಸಕ ಧರ್ಮಸುತ ಫಡ! ತೊಲಗು- ಹೋಗು, ಕರೆಯೋ ನಿನ್ನವರ, ನಿನಗೆ ಭೀಮನ ಶಕ್ತಿಯೇ ಶಕ್ತಿ,ಅರ್ಜುನನ ವಿಕ್ರಮ/ ಪರಾಕ್ರಮವೇ ನಿನಗೆ ಪರಾಕ್ರಮವು. ನನ್ನೊಡನೆ ಹೋರಾಡಿ ಮೆರೆಯೋ, ಕ್ಷಾತ್ರಧರ್ಮವನ್ನು. ನೀನು ಹೆದರಬೇಡ ನಿಲ್ಲು ಎನ್ನುತ್ತಾ ಒಗ್ಗೂಡಿಕೊಂಡು ಯೋಧರ ಗುಂಪು ಬರಲು, ಭೀಮನು ಬೊಬ್ಬೆಯನ್ನು/ ಕೂಗನ್ನು ಕೇಳಿದನು.
ತೂಳಿ ತುಳಿದವು ನೂರು ಗಜ ಭೂ
ಪಾಲಕನ ನೆರೆಗಡಿತದಡವಿಗೆ
ಬಾಳೆ ಹೆಮ್ಮರವಾಯ್ತು ಗಡ ಫಡ ನೂಕು ನೂಕೆನುತ |
ಆಲಿ ಕಿಡಿಯಿಡೆ ಕುಣಿವ ಮೀಸೆ ಕ
ರಾಳ ವದನದ ಬಿಗಿದ ಹುಬ್ಬಿನ
ಮೇಲುಗೋಪದ ಭೀಮ ಬಂದನು ಬಿಟ್ಟ ಸೂಠಿಯಲಿ || ೩೭ ||
ಪದವಿಭಾಗ-ಅರ್ಥ:ತೂಳಿ (ಬೆನ್ನಟ್ಟಿ) ತುಳಿದವು ನೂರು ಗಜ ಭೂಪಾಲಕನ ನೆರೆ+ ಗ+ ಕಡಿತದ+ ಅಡವಿಗೆ ಬಾಳೆ ಹೆಮ್ಮರವಾಯ್ತು ಗಡ ಫಡ ನೂಕು ನೂಕೆನುತ, ಆಲಿ ಕಿಡಿಯಿಡೆ ಕುಣಿವ ಮೀಸೆ ಕರಾಳ ವದನದ (ಉಗ್ರ ಮುಖದ) ಬಿಗಿದ ಹುಬ್ಬಿನ ಮೇಲುಗೋಪದ (ಅತಿ ಕೋಪದ) ಭೀಮ ಬಂದನು ಬಿಟ್ಟ ಸೂಠಿಯಲಿ.
ಅರ್ಥ:ನೂರು ಆನೆಗಳು ಬೆನ್ನಟ್ಟಿ) ತುಳಿದವು.ಧರ್ಮಜನ ಹೆಚ್ಚು ಕಡಿದ ಅಡವಿಗೆ ಬಾಳೆಯಮರವೇ ಹೆಮ್ಮರವಾಯ್ತು ಗಡ (ಕವರವನ ಸಣ್ಣ ಸೇನೆಯೇ ಧರ್ಮಜನಿಗೆ ದೊಡ್ಡ ಕಂಟಕವಾಯಿತು.) ಫಡ! ನುಗ್ಗು, ನುಗ್ಗು ಎನ್ನುತ್ತಾ, ಕಣ್ನೀನ ಆಲಿಗಳು ಕೆಂಡದಂತೆ ಕಿಡಿಗಳನ್ನು ಉದುರಿಸುತ್ತಿರಲು, ಸಿಟ್ಟಿನಿಂದ ಕುಣಿಯುವ ಮೀಸೆಯ, ಉಗ್ರ ಮುಖದ ಗಂಟಿಕ್ಕಿದ ಹುಬ್ಬಿನ ಅತಿಯಾದ ಕೋಪದ ಭೀಮನು ಬಾಣಬಿಟ್ಟ ವೇಗದಿಂದ ಅಲ್ಲಗೆ ಬಂದನು.
ನೆತ್ತಿಯಗತೆಯೊಳೂರಿದಂಕುಶ
ವೆತ್ತಿದಡೆ ತಲೆಗೊಡಹಿದವು ಬೆರ
ಳೊತ್ತುಗಿವಿಗಳ ಡಾವರಿಪ ಡಾವರದ ಡಬ್ಬುಕದ |
ಕುತ್ತುವಾರೆಯ ಬಗೆಯದಾನೆಗ
ಳಿತ್ತ ಮುರಿದವು ಸಿಂಹನಾದಕೆ
ಮತ್ತಗಜ ಮೊಗದಿರುಹಿದವು ದಳವುಳಿಸಿದನು ಭೀಮ || ೩೮ ||
ಪದವಿಭಾಗ-ಅರ್ಥ: ನೆತ್ತಿಯ+ ಅಗತೆಯೊಳು+ ಊರಿದ+ ಅಂಕುಶವ+ ಎತ್ತಿದಡೆ ತಲೆಗೊಡಹಿದವು, ಬೆರಳಿನಿಂದ ಒತ್ತಿದ ಗಿವಿಗಳನ್ನು ಗದ್ದಲದ ಸದ್ದು ಡಾವರದ (ಗದ್ದಲ) ಡಬ್ಬುಕದ ಕುತ್ತುವಾರೆಯ (ಕುತ್ತು= ಅಪಾಯ)ಬಗೆಯದೆ (ಲೆಕ್ಕಿಸದೆ)+ ಆನೆಗಳು+ ಇತ್ತ ಮುರಿದವು, ಸಿಂಹನಾದಕೆ ಮತ್ತಗಜ ಮೊಗದಿರುಹಿದವು (ಮುಖ ತಿರುಗಿಸಿ ಓಡಿದವು) ದಳವ+ ಉಳಿಸಿದನು ಭೀಮ.
ಅರ್ಥ:ಆನೆಗಳು ನೆತ್ತಿಯನ್ನು ಅಗೆದ- ಚುಚ್ಚಿದ ಗಾಯದಲ್ಲಿ ಊರಿದ ಅಂಕುಶವನ್ನು ಎತ್ತಿದಾಗ ತಲೆಯನ್ನು ಕೊಡಹಿದವು,. ಬೆರಳ ಒತ್ತುಗಿವಿಗಳನ್ನು ನೊಯಿಸುವ ಭೇರಿ ವಾದ್ಯಗಳನ್ನು ಲಕ್ಷಿಸದೆ ತಲೆಯ ಡಬ್ಬುಕದ ಘಾಯದ ಅಪಾವನ್ನೂ ಲೆಕ್ಕಿಸದೆ ಭೀಮನ ಸಿಂಹನಾದಕ್ಕೆ ಮತ್ತಗಜಗಳು, ಆನೆಗಳು ಯುದ್ಧರಂಗದಿಂದ ಇತ್ತ ಮುಖ ತಿರುಗಿಸಿ ಓಡಿದವು. ಹೀಗೆ ಭೀಮನು ಧರ್ಮಜನ ಪಾಯದಳವನ್ನು ಉಳಿಸಿದನು.
ಮೆಟ್ಟಿದನು ಬಲವಂಕವನು ಹೊರ
ಗಟ್ಟಿದನು ವಾಮದ ಗಜಂಗಳ
ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ |
ಘಟ್ಟಸಿದನೊಗ್ಗಿನ ಗಜಂಗಳ
ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ || ೩೯ ||
ಪದವಿಭಾಗ-ಅರ್ಥ: ಮೆಟ್ಟಿದನು ಬಲವಂಕವನು (ಬಲಭಾಗದ ಅಂಕ- ರಣರಂಗ) ಹೊರಗಟ್ಟಿದನು ವಾಮದ ಗಜಂಗಳ (ಆನೆಗಳನ್ನು) ನಿಟ್ಟನೆ+ ಒಂದರೊಳೊಂದನು+ ಅಪ್ಪಳಿಸಿದನು, ಪರಿಘದಲಿ ಘಟ್ಟಸಿದನು+ ಒಗ್ಗಿನ ಗಜಂಗಳ ಥಟ್ಟುಗೆಡಹಿದನು+ ಅಮಮ ಹೆಣಸಾಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ.
ಅರ್ಥ:ಬಲಭಾಗದ ರಣರಂಗವನ್ನು ಮೆಟ್ಟಿ ನಿಂತನು, ಎಡಭಾಗದಲ್ಲಿದ್ದ ಗಜಗಳನ್ನು ಹೊರಗೆ ಓಡಿಸಿದನು. ನೇರವಾಗಿ ಒಂದರಲ್ಲಿ ಮತ್ತೊಂದು ಆನೆಯನ್ನು ಅಪ್ಪಳಿಸಿದನು, ಪರಿಘದಿಂದ ಘಟ್ಟಸಿದನು, ಗುಂಪಿನ ಗಜಗಳನ್ನು ಎಚ್ಚರತಪ್ಪುವಂತೆ ಹೊಡೆದನು. ಅಮಮ! ಆನೆಗಳ ಹೆಣಗಳು ಸಾಲಿಟ್ಟವಯ್ಯಾ. ಕುರುನೃಪನ ನೂರಾನೆಗಳು ನಿಮಿಷದಲಿ ಸತ್ತುಬಿದ್ದವು.
ಉಳಿದುದಿದಿರಲಿ ಛತ್ರ ಚಮರಾ
ವಳಿಯವರು ಹಡಪಿಗರು ಬಿರುದಾ
ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು |
ಸಲಿಲ ಭಕ್ಷ್ಯವಿದಾನಗಜಹಯ
ಕುಲದ ರಕ್ಷವ್ರಣಚಿಕಿತ್ಸಕ
ದಳಿತ ರಥಚಾರಕರು ಕಾರ್ಮುಕಬಾಣದಾಯಕರು || ೪೦ ||
ಪದವಿಭಾಗ-ಅರ್ಥ: ಉಳಿದುದು+ ಇದಿರಲಿ ಛತ್ರ ಚಮರ+ ಆವಳಿಯವರು, ಹಡಪಿಗರು, ಬಿರುದಾವಳಿಯವರು, ಪಾಠಕರು, ವಾದ್ಯದ ಮಲ್ಲಗಾಯಕರು; ಸಲಿಲ ಭಕ್ಷ್ಯವಿದಾನ ಗಜಹಯ ಕುಲದ ರಕ್ಷವ್ರಣಚಿಕಿತ್ಸಕ ದಳಿತ (ಗಾಯಗೊಂಡ) ರಥಚಾರಕರು ಕಾರ್ಮುಕ ಬಾಣದಾಯಕರು.
ಅರ್ಥ:ಭೀಮನು ಕೌರವನ ಗಜ ಸೇನೆಯನ್ನು ನಾಶ ಮಾಡಿದ ನಂತರ ಎದುರಿನಲ್ಲಿ ಉಳಿದದ್ದು ಯಾವುವೆಂದರೆ, ಛತ್ರ ಚಾಮರ ಬೀಸುವ ಸಮೂಹ; ಅಗತ್ಯ ವಸ್ತು ತರುವ ಚೀಲಹೊತ್ತ ಹಡಪಿಗರು; ಬಿರುದುಗಳನ್ನು ಕೂಗುವವರು; ಸ್ವಸ್ತಿ ಪಾಠಕರು; ವಾದ್ಯದ ಮಲ್ಲಗಾಯಕರು; ಆನೆ ಕುದುರೆ ಕುಲದವಕ್ಕೆ ನೀರು, ತಿಂಡಿ ಮೇವು ಕೊಡುವವರು; ಅವುಗಳ ರಕ್ಷಣೆಗೆ ಹುಣ್ಣು- ಗಾಯಗಳ ವ್ರಣಚಿಕಿತ್ಸಕರು; ಗಾಯಗೊಂಡ ರಥಚಾರಕರು; ಕಾರ್ಮುಕ ಬಾಣದಾಯಕರು/ ಯುದ್ಧದಲ್ಲಿ ಅಗತ್ಯವಾದಾಗ ಬಾಣಗಳನ್ನು ಒದಗಿಸುವವರು.
ಕುದುರೆ ರಾವ್ತರು ಜೋದಸಂತತಿ
ಮದಗಜವ್ರಜವತಿರಥಾವಳಿ
ಪದಚರರು ಚತುರಂಗಬಲವೊಂದುಳಿಯದಿದರೊಳಗೆ |
ಪದದಲೇ ಕೌರವನೃಪತಿ ಜಾ
ರಿದನು ಕುಂತೀಸುತರು ಬಹಳಾ
ಭ್ಯುದಯರಾದರು ವೀರನಾರಾಯಣನ ಕರುಣದಲಿ || ೪೧ ||
ಪದವಿಭಾಗ-ಅರ್ಥ: ಕುದುರೆರಾವ್ತರು ಜೋದಸಂತತಿ ಮದಗಜವ್ರಜವು+ ಅತಿರಥ+ ಆವಳಿ ಪದಚರರು ಚತುರಂಗಬಲವೊಂದು+ ಉಳಿಯದೆ+ ಇದರೊಳಗೆ ಪದದಲೇ(ಕಾಲಿನ ನೆಡಿಗೆಯಲ್ಲೇ) ಕೌರವನೃಪತಿ ಜಾರಿದನು ಕುಂತೀಸುತರು ಬಹಳ+ ಅಭ್ಯುದಯರಾದರು ವೀರನಾರಾಯಣನ ಕರುಣದಲಿ.
ಅರ್ಥ:ಕೌರವನ ಸೇನೆಯಲ್ಲಿ ಕುದುರೆಯ ರಾವುತರು, ಯೋಧಸಂತತಿ, ಮದಗಜಗಳ ಸಮೂಹ, ಅತಿರಥರ ಸಮೂಹ, ಪಾದಚಾರಿಗಳು ಚತುರಂಗಬಲ, ಇದರೊಳಗೆ ಒಂದೂ ಉಳಿಯದೆ, ಎಲ್ಲಾ ನಾಶವಾಗಲು ಕೌರವನೃಪತಿಯು ಕಾಲುಗಳ ಸಹಾಯದಿಂದಲೇ ರಣರಂಗದಿಂದ ಓಡಿ ತಪ್ಪಸಿಕೊಂಡನು. ಕುಂತೀಸುತರು ವೀರನಾರಾಯಣನ ಕರುಣೆಯಿಂದ ಬಹಳ ಅಭ್ಯುದಯರಾದರು.
♠♠♠

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]

  1. ಭಾರತ ಕಥಾಮಂಜರಿ- ಕುವೆಂಪು ಮತ್ತು ಮಾಸ್ತಿವೆಂಕಟೇಶ ಐಯಂಗಾರ್ ಸಂಪಾದಿತ. ಇಂದ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆ.
  2. ಪೀಠಿಕೆ - ತೋರಣನಾಂದಿ: ಕುವೆಂಪು ; ;ಕರ್ನಾಟ ಭಾರತ ಕಥಾ ಮಂಜರಿ; ಸಂಪಾದಕರು ಮಾಸ್ತಿ ವೆಂಕಟೇಸ ಅಯ್ಯಂಗಾರ್; ಪ್ರಕಾಶನ:ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ; ಕಾಪಿರೈಟ್ ಮುಕ್ತ.