ಜೈಮಿನಿ ಭಾರತ/ಐದನೆಯ ಸಂಧಿ

ವಿಕಿಸೋರ್ಸ್ದಿಂದ

ಐದನೆಯ ಸಂಧಿ[ಸಂಪಾದಿಸಿ]

ಪದ್ಯ - ಸೂಚನೆ[ಸಂಪಾದಿಸಿ]

ಧರ್ಮಜಂ ಯೌವನಾಶ್ವನಿದಿರ್ಗೊಂಡು ನೃಪ |
ಧರ್ಮದಿಂ ಕೃಷ್ಣನಂ ದ್ವಾರಕೆಗೆ ಕಳುಹಿ ವರ |
ಧರ್ಮಂಗಳಂ ಕೇಳ್ದನೊಲವಿಂದೆ ಸಲೆ ಬಾದರಾಯಣ ಮುನೀಶ್ವರನೊಳು ||

ಪದವಿಭಾಗ-ಅರ್ಥ:
ಧರ್ಮಜಂ= ಧರ್ಮಜನು, ಯೌವನಾಶ್ವನ ಇದಿರ್ಗೊಂಡು= ಬಂದ ಯೌವನಾಶ್ವನನ್ನು ಗೌರವದಿಂದ ಬರಮಾಡಿಕೊಂಡು, ನೃಪ ಧರ್ಮದಿಂ= ರಾಜ ಧರ್ಮದಂತೆ; ಕೃಷ್ಣನಂ ದ್ವಾರಕೆಗೆ ಕಳುಹಿ= ಕೃಷ್ಣನನ್ನು ದ್ವಾರಕೆಗೆ ಕಳುಹಿಸಿ, ಸಲೆ ಬಾದರಾಯಣ ಮುನೀಶ್ವರನೊಳು= ಬಾದರಾಯಣ ಮುನೀಶ್ವರನಿಂದ, ಒಲವಿಂದೆ= ಪ್ರೀತಿಯಿಂದ, ವರ ಧರ್ಮಂಗಳಂ ಕೇಳ್ದನು= ಉತ್ತಮ ಧರ್ಮನೀತಿಗಳನ್ನು ಕೇಳಿದನು.,
  • ತಾತ್ಪರ್ಯ :ಧರ್ಮರಾಜನು, ಬಂದ ಯೌವನಾಶ್ವನನ್ನು ರಾಜ ಧರ್ಮದಂತೆ ಗೌರವದಿಂದ ಬರಮಾಡಿಕೊಂಡನು; ನಂತರ ಕೃಷ್ಣನನ್ನು ದ್ವಾರಕೆಗೆ ಕಳುಹಿಸಿಕೊಟ್ಟನು. ಆನಂತರ ಬಾದರಾಯಣ ಮುನೀಶ್ವರನು ಹೇಳಿದ ಉತ್ತಮ ಧರ್ಮನೀತಿಗಳನ್ನು ಪ್ರೀತಿಯಿಂದ ಕೇಳಿದನು.
  • (ಪದ್ಯ - ಸೂಚನೆ)

ಪದ್ಯ - ೧[ಸಂಪಾದಿಸಿ]

ಸತ್ಸಂಗತಿಯನಾಲಿಸಿನ್ನೆಲೆ ಮಹೀಶ್ವರ ಮ |
ರುತ್ಸುತನ ಮನೆಗೆ ಬೀಳ್ಕೊಟ್ಟನೊಲವಿಂ ಭಕ್ತ |
ವತ್ಸಲಂ ಬಳಿಕಿತ್ತಲರಸಾಳ್ಗಳಾ ಯುಧಿಷ್ಠಿರಭೂಮಿಪತಿಗೆ ಬಂದು ||
ತ್ವತ್ಸಮೀಪದ ಸೇವೆಗೋಸುಗಂ ತನ್ನ ಸಂ |
ಪತ್ಸಹಿತಮಾ ಯೌವನಾಶ್ವ ಧರಣೀಂದ್ರನ |
ತ್ಯುತ್ಸವದೊಳೈತಂದನಿದೆ ನಿನ್ನ ಪಟ್ಟಣದ ಬಾಹ್ಯದೇಶದೊಳೆಂದರು ||1||

ಪದವಿಭಾಗ-ಅರ್ಥ:
ಸತ್ಸಂಗತಿಯನು ಆಲಿಸು ಇನ್ನು ಎಲೆ ಮಹೀಶ್ವರ= ಎಲೆ ರಾಜ ಜನಮೇಜಯನೇ, ಇನ್ನು ಒಳ್ಳೆಯ ಸಂಗತಿಗಳನ್ನು ಆಲಿಸು; ಮರುತ್ಸುತನ ಮನೆಗೆ ಬೀಳ್ಕೊಟ್ಟನು ಒಲವಿಂ= ಭೀಮನನ್ನು ಅವನ ಮನೆಗೆ ಬೀಳ್ಕೊಟ್ಟನು ಭಕ್ತವತ್ಸಲಂ=ಕೃಷ್ಣನು. ಬಳಿಕ ಇತ್ತಲು ಅರಸಾಳ್ಗಳು= ರಾಜಭಟರು ಆ ಯುಧಿಷ್ಠಿರಭೂಮಿಪತಿಗೆ= ಧರ್ಮರಾಯನ ಮನೆಗೆ ಬಂದು, ತ್ವತ್= ನಿನ್ನ ಸಮೀಪದ= ಹತ್ತಿರ ಸೇವೆಗೋಸುಗಂ= ಸೇವಮಾಡಲು, ತನ್ನ ಸಂಪತ್ಸಹಿತಂ= ಸಂಪತ್ತಿನ ಸಹಿತ ಆ ಯೌವನಾಶ್ವ ಧರಣೀಂದ್ರನ=ರಾಜನು, ಅತ್ಯುತ್ಸವದೊಳ್ ಐತಂದನು= ಸಂತೋಷದಿಂದ ಬಂದಿದ್ದಾನೆ, ಇದೆ = ಈಗ ನಿನ್ನ ಪಟ್ಟಣದ ಬಾಹ್ಯದೇಶದೊಳು= ನಗರದ ಹೊರವಲಯದಲ್ಲಿ ಎಂದರು
  • ತಾತ್ಪರ್ಯ :ಎಲೆ ರಾಜ ಜನಮೇಜಯನೇ, ಇನ್ನು ಒಳ್ಳೆಯ ಸಂಗತಿಗಳನ್ನು ಆಲಿಸು; ಕೃಷ್ಣನು ಯುದ್ಧಮಾಡಿ ವಿಜಯಿಯಾಗಿ ಬಂದ ಭೀಮನನ್ನು ಅವನ ಮನೆಗೆ ಬೀಳ್ಕೊಟ್ಟನು. ಬಳಿಕ ಇತ್ತ ರಾಜಭಟರು ಆ ಧರ್ಮರಾಯನ ಮನೆಗೆ ಬಂದು, ನಿನ್ನ ಹತ್ತಿರ ಸಂತೋಷದಿಂದ ಸೇವಮಾಡಲು ಸಂಪತ್ತಿನ ಸಹಿತ ಆ ಯೌವನಾಶ್ವ ರಾಜನು,ಈಗ ನಿನ್ನ ನಗರದ ಹೊರವಲಯದಲ್ಲಿ ಬಂದಿದ್ದಾನೆ ಎಂದರು
  • (ಪದ್ಯ - ೧)

ಪದ್ಯ - ೨[ಸಂಪಾದಿಸಿ]

ಪದ್ಯ - ೨[ಸಂಪಾದಿಸಿ]
ಉಚಿತಮಂ ತೆಗೆದವರ್ಗಿತ್ತು ಬಳಿಕನುಜ ಮಂ |
ತ್ರಿಚಮೂಪ ಸಾಮಂತ ಗುರು ಪುರೋಹಿತ ಸುಭಟ |
ನಿಚಯಮಂ ಕರೆಸಿಕೊಂಡಸುರಾರಿಸಹಿತಖಿಳ ಚತುರಂಗಸೈನ್ಯದೊಡನೆ ||
ಅಚಲನಿಭದಿಭದ ಮೇಲಡರಿ ಸಿಂಗರದ ಗುರು |
ಕುಚೆಯರರಸಿಯ ಕೂಡೆ ಬರಲಿ ಗುಡಿತೋರಣದ |
ರಚನೆ ಮೆರೆಯಲಿ ಪುರದೊಳೆನುತೆ ಪೊರೆಮಟ್ಟನವನಿಪನೊಸಗೆವರೆ ಮಸಗಲು ||2||

ಪದವಿಭಾಗ-ಅರ್ಥ:
ಉಚಿತಮಂ= ಉಚಿತ ಕಾಣಿಕೆಯನ್ನು ದೂತರಿಗೆ, ತೆಗೆದವರ್ಗಿತ್ತು= ಕೊಟ್ಟು, ಬಳಿಕ ಅನುಜ=ತಮ್ಮಂದಿರು, ಮಂತ್ರಿ= ಮೋತ್ರಿಗಳು, ಚಮೂಪ= ಸೇನಾಧಿಪತಿಗಳು, ಸಾಮಂತ= ಸಾಮಂತರಾಜರು, ಗುರು ಪುರೋಹಿತ ಸುಭಟರ ನಿಚಯಮಂ= ಸಮೂಹವನ್ನು ಕರೆಸಿಕೊಂಡು ಅಸುರಾರಿ=ಕೃಷ್ಣನ ಸಹಿತ ಅಖಿಳ ಚತುರಂಗಸೈನ್ಯದೊಡನೆ ಅಚಲನಿಭದಿಭದ-:ಅಚಲ=ಬೆಟ್ಟದ ನಿಭದ=ಸಮದ ಇಭದ=ಆನೆಯ ಮೇಲೆ ಅಡರಿ= ಹತ್ತಿ ಸಿಂಗರದ=ಸಿಂಗರಿಸಿಕೊಂಡ, ಗುರುಕುಚೆಯ= ದೊಡ್ಡ ಸ್ತನವುಳ್ಳ ಅರರಸಿಯ= ಪತ್ನಿ ದ್ರೌಪದಿಯ ಕೂಡೆ ಬರಲಿ ಗುಡಿತೋರಣದ ರಚನೆ ಮೆರೆಯಲಿ=ಚಂದವಾಗಿ ಮಾಡಿರಿ ಪುರದೊಳು ಎನುತೆ= ಎಂದು ಹೇಳುತ್ತಾ, ಪೊರೆಮಟ್ಟನು=ಹೊರ ಹೊರಟನು ಅವನಿಪನು=ರಾಜನು ಒಸಗೆ= ಸುದ್ದಿಯು- ವರೆಮಸಗಲು=ಬಹಳ ವಿಜ್ರಂಭಿಸಲು.
  • ತಾತ್ಪರ್ಯ :ಒಳ್ಳೆಯ ಸುದ್ದಿಯನ್ನು ತಂದ ದೂತರಿಗೆ ಉಚಿತ ಕಾಣಿಕೆಯನ್ನು ಕೊಟ್ಟು, ಯಜ್ಞದ ಕುದುರೆಯು ಬಂದ ಸುದ್ದಿಯು ಬಹಳ ವಿಜ್ರಂಭಿಸಲು ಆ ಬಳಿಕ ತಮ್ಮಂದಿರು, ಮಂತ್ರಿಗಳು,ಸೇನಾಧಿಪತಿಗಳು,ಸಾಮಂತರಾಜರು, ಗುರು ಪುರೋಹಿತ ಸುಭಟರ ಸಮೂಹವನ್ನು ಕರೆಸಿಕೊಂಡು ಅಸುರಾರಿ ಕೃಷ್ಣನ ಸಹಿತ ಅಖಿಳ ಚತುರಂಗಸೈನ್ಯದೊಡನೆ ಆನೆಯ ಮೇಲೆ ಹತ್ತಿ ಸಿಂಗರಿಸಿಕೊಂಡ, ದೊಡ್ಡ ಸ್ತನವುಳ್ಳ ಪತ್ನಿ ದ್ರೌಪದಿಯ ಕೂಡೆ, ಪುರದೊಳು ಗುಡಿತೋರಣದ ರಚನೆ ಬರಲಿ, ಚಂದವಾಗಿ ಮಾಡಿರಿ ಎಂದು ಹೇಳುತ್ತಾ,ರಾಜನು ಹೊರ ಹೊರಟನು.
  • (ಪದ್ಯ - ೨)

ಪದ್ಯ - ೩[ಸಂಪಾದಿಸಿ]

ಸಿಂಗರಮೊಳಾ ಹಸ್ತಿನಾವತಿಯೊಳಿರ್ದ ಜನ |
ಜಂಗುಳಿ ಮಹೀಪಾಲನೊಡನೆ ಪೊರಮಟ್ಟ ಬಳಿ |
ಕಂಗನೆಯರಾ ದ್ರುಪದಸುತೆಯ ಪೊನ್ನಂದಳದ ಕೂಡೆ ಸಂದಣಿಸಿ ಬರಲು ||
ಮಂಗಳಧ್ವಾನದಿಂದುಲಿವ ಭೇರಿಗಳ ನಾ |
ದಂಗಳೈದಿದುವಷ್ಟದಿಕ್ಪಾಲಕರ ಪಟ್ಟ ||
ಣಂಗಳ್ಗೆ ಪಾಂಡವರ ಪುರದ ಸಂಭ್ರಮವನೆಚ್ಚರಿಸಿ ನಾಚಿಸುವಂತಿರೆ ||3||

ಪದವಿಭಾಗ-ಅರ್ಥ:
ಸಿಂಗರಮೊಳು= ಅಲಂಕಾರಗೊಂಡ ಆ ಹಸ್ತಿನಾವತಿಯೊಳಿರ್ದ= ಹಸ್ತಿನಾವತಿಯಲ್ಲಿದ್ದ ಜನಜಂಗುಳಿ=ಜನಸಮೂಹ ಮಹೀಪಾಲನೊಡನೆ= ಧರ್ಮರಾಯನೊಡನೆ ಪೊರಮಟ್ಟ ಬಳಿಕ ಅಂಗನೆಯರು = ಹೆಂಗಸರು ದ್ರುಪದಸುತೆಯ= ದ್ರೌಪದಿಯ ಪೊನ್ನಂದಳದ= ಹೊನ್ನಿನಪಲ್ಲಕಿಯ ಕೂಡೆ ಸಂದಣಿಸಿ= ಗುಂಪಾಗಿ ಬರಲು

ಮಂಗಳಧ್ವಾನದಿಂದ=ಮಂಗಳವಾದ್ಯದ ಉಲಿವ= ನಡಿಸುವ, ಭೇರಿಗಳ ನಾದಂಗಳು, ಅಷ್ಟದಿಕ್ಪಾಲಕರ ಪಟ್ಟಣಂಗಳಿಗೆ ಪಾಂಡವರ ಪುರದ ಸಂಭ್ರಮವನು ಎಚ್ಚರಿಸಿ= ತೋರಿಸಿ, ನಾಚಿಸುವಂತಿರೆ ಐದಿದುವ= ಇದಿರುಗೊಳ್ಳಲು ಬಂದವು

  • ತಾತ್ಪರ್ಯ :ಅಲಂಕಾರಗೊಂಡ ಆ ಹಸ್ತಿನಾವತಿಯಲ್ಲಿದ್ದ ಜನಸಮೂಹ ಮಹೀಪಾಲ ಧರ್ಮರಾಯನೊಡನೆ ಹೊರಹೊಂಟ ಬಳಿಕ ಹೆಂಗಸರು ದ್ರೌಪದಿಯ ಹೊನ್ನಿನಪಲ್ಲಕಿಯ ಕೂಡೆ ಗುಂಪಾಗಿ ಬರಲು ಮಂಗಳವಾದ್ಯ ನುಡಿಸುವ, ಭೇರಿಗಳ ನಾದಗಳು, ಅಷ್ಟದಿಕ್ಪಾಲಕರ ಪಟ್ಟಣಂಗಳಿಗೆ ಪಾಂಡವರ ಪುರದ ಸಂಭ್ರಮವನು ತೋರಿಸಿ, ನಾಚಿಸುವಂತಿರಲು, ಯೌವನಾಶ್ವ ಮತ್ತು ಯಜ್ಞಾಶ್ವವನ್ನು ಇದಿರುಗೊಳ್ಳಲು ಬಂದವು.
  • (ಪದ್ಯ - ೩)

ಪದ್ಯ - ೪[ಸಂಪಾದಿಸಿ]

ಭದ್ರಗಜಕಂಧರಧೊಳರಸನೆಸೆದಿರ್ದಂ |
ಸದ್ರತ್ನಭೂಷಣಂಗಳಕಾಂತಿಯಂ ಮೂಡ |
ಣದ್ರಿಯೊಳ್ ತೊಳಗುವೆಳನೇಸರೆನೆ ಬಳಿಕಿದಿರ್ಗೊಂಬ ಹರ್ಷವನೆ ಕಂಡು ||
ಭದ್ರಾವತೀಶ್ವರನೆನಿಪ ಯೌವನಾಶ್ವಂ ಜ |
ಗದ್ರಾಜನಾದ ಪಾಂಡವನೆಡೆಗೆ ಬಂದಂ ಸು |
ಹೃದ್ರಾಗದಿಂ ತನಗೆ ಭೀಮನಭಿಮುಖನಾಗಿ ಬರಲಾತನೊಡನೆ ನಗುತೆ||4||

ಪದವಿಭಾಗ-ಅರ್ಥ:
ಭದ್ರಗಜಕಂಧರಧೊಳ್(ಕಂಧರ= ಕುತ್ತಿಗೆ) ಅರಸನೆ ಎಸೆದಿರ್ದಂ ಸದ್ರತ್ನಭೂಷಣಂಗಳ ಕಾಂತಿಯಂ ಮೂಡಣ (ಪೂರ್ವ) ಅದ್ರಿಯೊಳ್ ತೊಳಗುವ ಎಳನೇಸರು ಎನೆ= ದೊಡ್ಡ ಆನೆಯ ಮೇಲೆ ಅರಸ ಧರ್ಮಜನು ಒಳ್ಳೆಯ ರತ್ನಭೂಷಣಗಳನ್ನುಧರಿಸಿ ಎಸೆದಿರ್ದನು/ ಪ್ರಕಾಶಿಸುತ್ತಿದ್ದನು; ಹೇಗೆಂದರೆ, ಪೂರ್ವಬೆಟ್ಟದ ಮೇಲೆ ಹುಟ್ಟಿ ಪ್ರಕಾಶಿಸುವ ಎಳೆನೇಸರ ಸೂರ್ಯನೋ ಎನ್ನುವಂತೆ. ಬಳಿಕ ಇದಿರ್ಗೊಂಬ ಹರ್ಷವನೆ ಕಂಡು= ನಂತರ ತನ್ನನ್ನು ಎದಿರುಗಳ್ಳವ ಸಂಭ್ರಮದ ಹರ್ಷವನ್ನು ನೋಡಿ, ಭದ್ರಾವತೀಶ್ವರನು ಎನಿಪ ಯೌವನಾಶ್ವಂ= ಭದ್ರಾವತೀಶ್ವರನಾದ ಯೌವನಾಶ್ವನು, ಜಗದ್ರಾಜನಾದ= ಚಕ್ರವರ್ತಿಯಾದ ಪಾಂಡವನ ಎಡೆಗೆ= ಧರ್ಮರಾಯನ ಬಳಿಗೆ, ಬಂದಂ= ಬಂದನು; ಹೇಗೆಂದರೆ ಸುಹೃದ್ರಾಗದಿಂ= ಸಂತೋಷದಿಂದ ತನಗೆ ಭೀಮನು ಅಭಿಮುಖನಾಗಿ ಬರಲು ಆತನೊಡನೆ ನಗುತೆ =ನಗುತ್ತಾ ಧರ್ಮರಾಯನ ಬಳಿಗೆ ಬಂದನು.
  • ತಾತ್ಪರ್ಯ : ದೊಡ್ಡ ಆನೆಯ ಮೇಲೆ ಅರಸ ಧರ್ಮಜನು ಒಳ್ಳೆಯ ರತ್ನಭೂಷಣಗಳನ್ನುಧರಿಸಿ ಪೂರ್ವಬೆಟ್ಟದ ಮೇಲೆ ಹುಟ್ಟಿ ಪ್ರಕಾಶಿಸುವ ಎಳೆನೇಸರ ಸೂರ್ಯನೋ ಎನ್ನುವಂತೆ ಪ್ರಕಾಶಿಸುತ್ತಿದ್ದನು; ನಂತರ ತನ್ನನ್ನು ಎದಿರುಗೊಳ್ಳವ ಸಂಭ್ರಮದ ಹರ್ಷವನ್ನು ನೋಡಿ, ಭದ್ರಾವತೀಶ್ವರನಾದ ಯೌವನಾಶ್ವನು, ತನಗೆ (ಯೌವನಾಶ್ವನಿಗೆ) ಎದುರಾಗಿ ಬಂದ ಭೀಮನೊಡನೆ ಸಂತೋಷದಿಂದ ನಗುತ್ತಾ ಧರ್ಮರಾಯನ ಬಳಿಗೆ ಚಕ್ರವರ್ತಿಯಾದ ಪಾಂಡವ ಧರ್ಮರಾಯನ ಬಳಿಗೆ,ಬಂದನು.
  • (ಪದ್ಯ - ೪)

ಪದ್ಯ - ೪[ಸಂಪಾದಿಸಿ]

ವಾಯುಸುತನೊಡನೆ ತಾನಿರ್ದ ಪೊರೆಗಾಗಿ ಬ |
ರ್ಪಾಯೌವನಾಶ್ವನಂ ಕಂಡಿಭವನಿಳಿದು ನಿಂ |
ದಾ ಯುಧಿಷ್ಠಿರನರೇಶ್ವರನಡಿಗೆ ಕಾಣಿಕೆಯನಿತ್ತೆರಗಿ ಕೈಮುಗಿಯಲು ||
ಪ್ರೀಯದಿಂದಾತನಂ ತೆಗೆದು ತಕ್ಕೈಸಿ ಮಾ |
ದ್ರೇಯ ಭೀಮಾರ್ಜುನರ ಸಮವೆನಗೆ ನೀನದರಿ |
ನೀ ಯಾದವೇಂದ್ರನಂ ಭಾವಿಸೆಂದರಸಂ ಮುಕುಂದನಂ ತೋರಿಸಿದನು ||5||

ಪದವಿಭಾಗ-ಅರ್ಥ:
ವಾಯುಸುತನೊಡನೆ= ಭೀಮನೊಡನೆ, ತಾನಿರ್ದ ಪೊರೆಗಾಗಿ= ತಾನು ಇದ್ದ ಸಮೀಪ, ಬರ್ಪ ಆ ಯೌವನಾಶ್ವನಂ ಕಂಡು= ಬರುತ್ತಿರುವ ಆ ಯೌವನಾಶ್ವನನ್ನು ಕಂಡು, ಇಭವನು= ಆನೆಯನ್ನು ಇಳಿದು ನಿಂದ= ನಿಂತುಕೊಂಡ ಆ ಯುಧಿಷ್ಠಿರನರೇಶ್ವರನ ಅಡಿಗೆ ಕಾಣಿಕೆಯನು ಇತ್ತು ಎರಗಿ ಕೈಮುಗಿಯಲು= ಯುಧಿಷ್ಠಿರರಾಜನಿಗೆ ಕಾಣಿಕೆಯನ್ನು ಕೊಟ್ಟು ಪಾದಕ್ಕೆ ನಮಿಸಿ,ಕೈಮುಗಿಯಲು, ಪ್ರೀಯದಿಂದ ಆತನಂ ತೆಗೆದು ತಕ್ಕೈಸಿ= ಪ್ರೀತಿಯಿಂದ ಆದರಿಸಿ ಅಪ್ಪಿಕೊಂಡು, ಮಾದ್ರೇಯ ಭೀಮಾರ್ಜುನರ ಸಮವು ಎನಗೆ ನೀನು= ನೀನು ಎನಗೆ ಮಾದ್ರೇಯರಾದ ನಕುಲಸಹದೇವ ಭೀಮಾರ್ಜುನರ ಸಮಾನವು ನೀ, ಅದರಿಂ ನೀ ಈ ಯಾದವೇಂದ್ರನಂ ಭಾವಿಸೆಂದು ಅರಸಂ ಮುಕುಂದನಂ ತೋರಿಸಿದನು= ಅದರಿಂದ ನೀನು ಈ ಯಾದವೇಂದ್ರನನ್ನು ಧ್ಯಾನಿಸು/ಗೌರವಿಸೆಂದು ಅರಸನು ಕೃಷ್ಣನನ್ನು ತೋರಿಸಿದನು.
  • ತಾತ್ಪರ್ಯ : ಭೀಮನೊಡನೆ,ತಾನು ಇದ್ದ ಕಡೆಗೆ,ಬರುತ್ತಿರುವ ಆ ಯೌವನಾಶ್ವನನ್ನು ಕಂಡು, ಆನೆಯನ್ನು ಇಳಿದು ನಿಂತುಕೊಂಡ ಆ ಯುಧಿಷ್ಠಿರರಾಜನಿಗೆ ಕಾಣಿಕೆಯನ್ನು ಕೊಟ್ಟು ಪಾದಕ್ಕೆ ನಮಿಸಿ,ಕೈಮುಗಿಯಲು, ಪ್ರೀತಿಯಿಂದ ಆದರಿಸಿ ಅಪ್ಪಿಕೊಂಡು, ನೀನು ಎನಗೆ ಮಾದ್ರೇಯರಾದ ನಕುಲಸಹದೇವ ಭೀಮಾರ್ಜುನರ ಸಮಾನವು ಅದ್ದರಿಂದ ನೀನು ಈ ಯಾದವೇಂದ್ರನನ್ನು ಧ್ಯಾನಿಸು/ಗೌರವಿಸೆಂದು ಅರಸನು ಕೃಷ್ಣನನ್ನು ತೋರಿಸಿದನು.
  • (ಪದ್ಯ - ೪)

ಪದ್ಯ - 6[ಸಂಪಾದಿಸಿ]

ಬಳಿಕವಂ ಕಂಡನುತ್ಪಲದಳಶ್ಯಾಮ ಕೋ |
ಮಲತರಶರೀರನಂ ನವರತ್ನ ಮಕುಟ ಕುಂ |
ಡಲ ಕನಕ ಕೇಯೂರಹಾರನಂ ಪ್ರಕಟ ಕಟಿಸೂತ್ರ ಮಣಿಮಂಜೀರನಂ ||
ವಿಲಸಿತ ಶ್ರೀವತ್ಸ ಕೌಸ್ತುಭ ಶಭೋದರನಂ |
ಲಲಿತ ಪೀತಾಂಬರೋಜ್‍ಜ್ವಲದಲಂಕಾರನಂ |
ಜಲಜಸಮ ಚರಣಯುಗ ಮೋಹನಾಕಾರನಂ ಲಕ್ಷ್ಮೀಮನೋಹಾರನಂ ||6||

ಪದವಿಭಾಗ-ಅರ್ಥ:
ಬಳಿಕವಂ ಕಂಡನು ಉತ್ಪಲದಳಶ್ಯಾಮ ಕೋಮಲತರಶರೀರನಂ ನವರತ್ನ ಮಕುಟ ಕುಂಡಲ ಕನಕ ಕೇಯೂರಹಾರನಂ ಪ್ರಕಟ ಕಟಿಸೂತ್ರ ಮಣಿಮಂಜೀರನಂ ವಿಲಸಿತ ಶ್ರೀವತ್ಸ ಕೌಸ್ತುಭ ಶಭೋದರನಂ ಲಲಿತ ಪೀತಾಂಬರೋಜ್‍ಜ್ವಲದಲಂಕಾರನಂ ಜಲಜಸಮ ಚರಣಯುಗ ಮೋಹನಾಕಾರನಂ ಲಕ್ಷ್ಮೀಮನೋಹಾರನಂ = ಉತ್ಪಲದಳಶ್ಯಾಮ- ಕನ್ನಯದಿಲೆ ಯಂತೆನೀಲಿಬಣ್ಣದ, ಕೋಮಲತರಶರೀರವುಳ್ಳ, ನವರತ್ನ ಮಕುಟ ಕುಂಡಲ ಕನಕ ಕೇಯೂರಹಾರ ಹಾಕಿಕೊಂಡ, ಎದ್ದು ಕಾಣುವ ಮಣಿಮಂಜೀರ ಕಟಿಸೂತ್ರ (ಸೊಂಟಪಟ್ಟಿ) ಧರಿಸಿದವನನ್ನು, ಹೊಳೆಯುವ ಶ್ರೀವತ್ಸ ಕೌಸ್ತುಭವನ್ನು ಧರಿದವನನ್ನು, ಚೆಂದದ ಉಜ್ವಲವಾದ ಪೀತಾಂಬರ ಧರಿಸಿ ಅಲಂಕಾರ ಮಾಡಿಕೊಂಡವನನ್ನು, ಪದ್ಮದಂತ ಪಾದಗಳುಳ್ಳವನನ್ನು, ಮೋಹನಾಕಾರನಾಗಿರುವವನನ್ನು, ಲಕ್ಷ್ಮೀಯ ಮನಸ್ಸಿನ ಪ್ರೀತಿ ಗಳಿಸಿದವನನ್ನು ಯೌವನಾಶ್ವನು ಕಂಡನು.
  • ತಾತ್ಪರ್ಯ : ಕನ್ನಯದಿಲೆಯಂತೆ ನೀಲಿಬಣ್ಣದ, ಕೋಮಲತರಶರೀರವುಳ್ಳ, ನವರತ್ನ ಮಕುಟ ಕುಂಡಲ ಕನಕ ಕೇಯೂರಹಾರ ಹಾಕಿಕೊಂಡ, ಎದ್ದು ಕಾಣುವ ಮಣಿಮಂಜೀರ ಕಟಿಸೂತ್ರ (ಸೊಂಟಪಟ್ಟಿ) ಧರಿಸಿದವನನ್ನು, ಹೊಳೆಯುವ ಶ್ರೀವತ್ಸ ಕೌಸ್ತುಭವನ್ನು ಧರಿದವನನ್ನು, ಚೆಂದದ ಉಜ್ವಲವಾದ ಪೀತಾಂಬರ ಧರಿಸಿ ಅಲಂಕಾರ ಮಾಡಿಕೊಂಡವನನ್ನು, ಪದ್ಮದಂತ ಪಾದಗಳುಳ್ಳವನನ್ನು, ಮೋಹನಾಕಾರನಾಗಿರುವವನನ್ನು, ಲಕ್ಷ್ಮೀಯ ಮನಸ್ಸಿನ ಪ್ರೀತಿ ಗಳಿಸಿದವನನ್ನು ಯೌವನಾಶ್ವನು ಕಂಡನು.
  • (ಪದ್ಯ - 6)

ಪದ್ಯ - ೭[ಸಂಪಾದಿಸಿ]

ಅಚ್ಚ್ಯುತನ ಮಂಗಳ ಶ್ರೀಮೂರ್ತಿ ಕಣ್ಮನವ |
ನೊಚ್ಚತಂಗೊಳಲೇಳ್ವ ರೋಮಪುಳಕದೊಳೆ ಮೈ |
ವೆಚ್ಚಿದತಿಹರ್ಷದಿಂದಜ ಭವ ಸುರೇಂದ್ರ ಮುನಿಮುಖ್ಯರ್ಗೆ ಗೋಚರಿಸದ ||
ಸಚ್ಚಿದಾನಂದಮಯನಂ ಕಂಡುದಿದು ಜಗದೊ |
ಳಚ್ಚರಿಯಲಾ ನರರ್ಗೆ ನುತಾನೃಪಾಲಕಂ |
ಬೆಚ್ಚನಸುರಾಂತಕನ ಪದಕೆ ಪೊಸಮಿಸುನಿವೆಳಗೆಸೆವ ಮಕುಟದ ನೊಸಲನು ||7||

ಪದವಿಭಾಗ-ಅರ್ಥ:
ಅಚ್ಚ್ಯುತನ ಮಂಗಳ ಶ್ರೀಮೂರ್ತಿ ಕಣ್ಮನವನು=ಕಣ್ಣು ಮತ್ತುಮನಸ್ಸನ್ನು ಒಚ್ಚತಂಗೊಳಲು=ಹಿತಗೊಳಿಸಲು ಏಳ್ವ=ಎದ್ದುನಿಂತ ರೋಮ ಪುಳಕದೊಳೆ= ರೋಮಾಂಚನದಲ್ಲಿ, ಮೈವೆಚ್ಚಿದ= ಮೈಮರೆತ, ಅತಿಹರ್ಷದಿಂದ ಅಜಭವ=ಬ್ರಹ್ಮನನ್ನು ಹೊಕ್ಕಳಲ್ಲಿ ಹಡೆದ, ಸುರೇಂದ್ರ ಮುನಿಮುಖ್ಯರ್ಗೆ= ಮುನಿಮುಖ್ಯರಿಗೆ ಗೋಚರಿಸದ, ಸಚ್ಚಿದಾನಂದಮಯನಂ= ಸಚ್ಚಿದಾನಂದಮಯನನ್ನು ಕಂಡುದು=ನೋಡಿದ್ದು ಇದು=ಇದೊಂದು, ಜಗದೊಳಚ್ಚರಿಯಲಾ=ಜಗದಲ್ಲಿ ಅಚ್ಚರಿಯೇ ಸೈ ನರರ್ಗೆ ಎನುತ= ಮನುಷ್ಯರಿಗ ಎನ್ನುತ್ತಾ, ಆನೃಪಾಲಕಂ= ಆ ರಾಜನು, ಬೆಚ್ಚಂ=ಇಟ್ಟನು ಅಸುರಾಂತಕನ ಪದಕೆ=ಕೃಷ್ಣನ ಪಾದಕ್ಕೆ, ತನ್ನ ಪೊಸಮಿಸುನಿವೆಳಗೆಸೆವ ಮಕುಟದ ನೊಸಲನು =ಮಿಂಚಿನಂತೆ ಹೊಳೆಯುತ್ತರುವ ಕಿರೀಟವಿದ್ದ ಹಣೆಯನ್ನು.
  • ತಾತ್ಪರ್ಯ : ಅಚ್ಚ್ಯುತನ ಮಂಗಳ ಶ್ರೀಮೂರ್ತಿ ಕಣ್ಣು ಮತ್ತು ಮನಸ್ಸನ್ನು ಹಿತಗೊಳಿಸಲು, ಎದ್ದು ನಿಂತ ರೋಮಗಳ, ರೋಮಾಂಚನದಲ್ಲಿ ಮೈಮರೆತ, ಅತಿಹರ್ಷದಿಂದ ಬ್ರಹ್ಮನನ್ನು ಹೊಕ್ಕಳಲ್ಲಿ ಹಡೆದ, ಸುರೇಂದ್ರ ಮುನಿಮುಖ್ಯರಿಗೆ ಗೋಚರಿಸದ, ಸಚ್ಚಿದಾನಂದಮಯನನ್ನು ನೋಡಿದ್ದು ಇದೊಂದು, ಜಗದಲ್ಲಿ ಮನುಷ್ಯರಿಗ ಅಚ್ಚರಿಯೇ ಸೈ! ಎನ್ನುತ್ತಾ, ಆ ರಾಜನು ಕೃಷ್ಣನ ಪಾದಕ್ಕೆ ತನ್ನ ಮಿಂಚಿನಂತೆ ಹೊಳೆಯುತ್ತರುವ ಕಿರೀಟವಿದ್ದ ಹಣೆಯನ್ನು ಇಟ್ಟನು.
  • (ಪದ್ಯ - ೭)

ಪದ್ಯ - ೮[ಸಂಪಾದಿಸಿ]

ಕಮಲದಳಯನ ಕಾಳಿಯಮಥನ ಕಿಸಲಯೋ |
ಪಮಚರಣಕೀಶಪತಿಸೇವ್ಯ ಕುಜಹರ ಕೂರ್ಮ |
ಸಮಸತ್ಕಪೋಲ ಕೇಯೂರಧರ ಕೈರವಶ್ಯಾಮ ಕೋಕನದ ಗೃಹೆಯ ||
ರಮಣ ಕೌಸ್ತುಭಶೋಭ ಕಂಬುಚಕ್ರಗದಾಬ್ಜ |
ವಿಮಲಕರ ಕಸ್ತೂರಿಕಾತಿಲಕ ಕಾವುದೆಂ |
ದಮಿತಪ್ರಭಾಮೂರ್ತಿಯಂ ನುತಿಸಲಾತನಂ ಹರಿ ನೆಗಪಿದಂ ಕೃಪೆಯೊಳು ||8|||

ಪದವಿಭಾಗ-ಅರ್ಥ:
ಯೌವನಾಶ್ವನು ಕೃಷ್ಣನನ್ನು ಕುರಿತು, "ಕಮಲದಳಯನ ಕಾಳಿಯಮಥನ ಕಿಸಲ(ಕೋಮಲ)ಯೋಪಮಚರಣ ಕೀಶ(ಕಪಿ)ಪತಿಸೇವ್ಯ ಕುಜ(ಗೋವರ್ಧನಪರ್ವತ) ಹರಕೂರ್ಮ ಸಮಸತ್ಕಪೋಲ(ಚಂದವಾ ಕೆನ್ನೆಗಳು) ಕೇಯೂರಧರ ಕೈರವ(ನೈದಿಲೆ)ಶ್ಯಾಮ ಕೋಕನ(ಕಮಲ)ದಗೃಹೆಯ(ಲಕ್ಷ್ಮಿ) ರಮಣ ಕೌಸ್ತುಭಶೋಭ ಕಂಬು(ಶಂಕ)ಚಕ್ರಗದಾಬ್ಜ ವಿಮಲಕರ ಕಸ್ತೂರಿಕಾತಿಲಕ ಕಾವುದು ಎಂದು ಅಮಿತಪ್ರಭಾಮೂರ್ತಿಯಂ ನುತಿಸಲು=ಸ್ತೋತ್ರಮಾಡಲು ಆತನಂ= ಆತನನ್ನು ಹರಿ=ಕೃಷ್ಣನು, ನೆಗಪಿದಂ ಕೃಪೆಯೊಳು=ಕೃಪೆಯಿಂದ ಎತ್ತಿದನು.
  • ತಾತ್ಪರ್ಯ :ಯೌವನಾಶ್ವನು ಕೃಷ್ಣನನ್ನು ಕುರಿತು, "ಕಮಲದಳಯನ, ಕಾಳಿಯಮಥನ, ಕಿಸಲಯೋಪಮಚರಣ, ಕೀಶಪತಿಸೇವ್ಯ, ಕುಜ ಹರಕೂರ್ಮ, ಸಮಸತ್ಕಪೋಲ, ಕೇಯೂರಧರ ಕೈರವಶ್ಯಾಮ, ಕೋಕನದಗೃಹೆಯರಮಣ, ಕೌಸ್ತುಭಶೋಭ, ಕಂಬುಚಕ್ರಗದಾಬ್ಜ, ವಿಮಲಕರ, ಕಸ್ತೂರಿಕಾತಿಲಕ ಕಾಯಬೇಕು", ಎಂದು ಅಮಿತಪ್ರಭಾಮೂರ್ತಿಯನ್ನು ಸ್ತೋತ್ರಮಾಡಲು, ಆತನನ್ನು ಕೃಷ್ಣನು, ಕೃಪೆಯಿಂದ ಎತ್ತಿದನು.
  • (ಪದ್ಯ - ೮)

ಪದ್ಯ - ೯[ಸಂಪಾದಿಸಿ]

ಎದ್ದಾ ನೃಪಂ ಕೃತಾಂಜಲಿಪುಟಾವನತನಾ |
ಗಿದ್ದಾಗ ಭೀಮನಂ ನೋಡಿ ವಿಷಯಂಗಳಂ |
ಗೆದ್ದ ನಿರ್ಮಲತಪಸ್ವಿಗಳ ನಿಶ್ಚಲಹೃದಯಮಧ್ಯ ಪಂಕೇಜಾತದಾ ||
ಗದ್ದುಗೆಯೊಳೆಸೆವ ಚಿದ್ತೂಪನಂ ಜಗವರಿಯೆ |
ದೊದ್ದೆಯೊಳ್ ಕೂಡಿ ತೇರ್ಗುದುರೆಯಂ ಪೊಡೆವುದಂ |
ಪೊದ್ದಿಸಿದ ಪಾರ್ಥನಾರಿದರೊಳೆನಲರ್ಜುನಂ ಬಂದಾತನಂ ಕಂಡನು ||9||

ಪದವಿಭಾಗ-ಅರ್ಥ:
ಎದ್ದು ಆ ನೃಪಂ =ಎದ್ದು ಆ ರಾಜನು, ಕೃತ ಅಂಜಲಿಪುಟ ಅವನತನು ಆಗಿದ್ದಾಗ= ಕೈಯನ್ನು ಅಂಜಲೀಬದ್ಧನಾಗಿ ಮಾಡಿಕೊಂಡು ವಿಧೇಯನಾಗಿ ನಿಂತಾಗ, ಭೀಮನ= ಭೀಮನನ್ನು ನೋಡಿ, ವಿಷಯಂಗಳಂ= ಪ್ರಾಪಂಚಿಕ ಆಸೆಗಳನ್ನು ಗೆದ್ದ ನಿರ್ಮಲ ತಪಸ್ವಿಗಳ ನಿಶ್ಚಲ ಹೃದಯ ಮಧ್ಯ ಪಂಕೇಜಾತದ=ಕಮಲದ ಆ ಗದ್ದುಗೆಯೊಳು=ಪೀಠದಲ್ಲಿ ಎಸೆವ= ಕಾಣುವ ಚಿದ್ತೂಪನಂ= ಜ್ಞಾನಸರೂಪನನ್ನು ಜಗವರಿಯೆ=ಎಲ್ಲರಿಗೂ ತಿಳಿಯುವಂತೆ

ದೊದ್ದೆಯೊಳ್= (ದೊಡ್ಡಿ)ಕೊಟ್ಟಿಗೆಯಲ್ಲಿ ಕೂಡಿ ಕುದುರೆ ಕಟ್ಟುವ ಕೆಲಸ ತೇರ್ ಕುದುರೆಯಂ ಪೊಡೆವುದಂ= ರಥದ ಕುದುರೆಯನ್ನು ಓಡಿಸುವ ಪೊದ್ದಿಸಿದ= ಹೊಂದಿಸಿದ,ಕೆಲಸ ಮಾಡಿಸಿದ, ಪಾರ್ಥನು ಆರು ಇದರೊಳು ಎನಲು ಅರ್ಜುನಂ ಬಂದು ಆತನಂ ಕಂಡನು= ಪಾರ್ಥನು ಯಾರು ಇಲ್ಲಿರುವವರಲ್ಲಿ ಎನ್ನಲು, ಅರ್ಜುನನು ಬೋದು ಅವನನ್ನು ಕಂಡನು.

  • ತಾತ್ಪರ್ಯ : ಆ ರಾಜನು ಎದ್ದು ಕೃತ ಕೈಯನ್ನು ಅಂಜಲೀಬದ್ಧನಾಗಿ ಮಾಡಿಕೊಂಡು ವಿಧೇಯನಾಗಿ ನಿಂತು, ಭೀಮನನ್ನು ನೋಡಿ, ಪ್ರಾಪಂಚಿಕ ಆಸೆಗಳನ್ನು ಗೆದ್ದ ನಿರ್ಮಲ ತಪಸ್ವಿಗಳ ನಿಶ್ಚಲ ಹೃದಯಮಧ್ಯದ ಕಮಲದ ಆ ಪೀಠದಲ್ಲಿ ಕಾಣುವ ಈ ಜ್ಞಾನಸರೂಪನನ್ನು ಎಲ್ಲರಿಗೂ ತಿಳಿಯುವಂತೆ (ದೊಡ್ಡಿ)ಕೊಟ್ಟಿಗೆಯಲ್ಲಿ ಕೂಡಿ ಕುದುರೆಯ ಕೆಲಸ ಮತ್ತು ರಥದ ಕುದುರೆಯನ್ನು ಓಡಿಸುವ ಕೆಲಸ ಹೊರಿಸಿದ ಪಾರ್ಥನು, ಇಲ್ಲಿರುವವರಲ್ಲಿ ಯಾರು ಎನ್ನಲು, ಅರ್ಜುನನು ಬಂದು ಅವನನ್ನು ಕಂಡನು.
  • (ಪದ್ಯ - ೯)

ಪದ್ಯ - ೧೦[ಸಂಪಾದಿಸಿ]

ಗುಣದೊಳಾ ಯೌವನಾಶ್ವಕ್ಷಿತಿಪನೆರಗಿ ಫಲು |
ಗುಣನ ಮೊಗಮಂ ನೋಡಿ ನೀನಲಾ ತಿಳಿಯಲ್ ತ್ರಿ |
ಗುಣದೊಳೊಂದದ ಘನಶ್ರುತಿಶಿರೋಮಣಿಯನಿಳೆಯರಿಯೆ ನಿಜಭಕ್ತಿಯೆಂಬ ||
ಗುಣದಿಂದೆ ಬಂದಿಸಿದ ಕೋವಿದನದೇಂ ಬಯಲ |
ಗುಣವಿರ್ದರಕಟ ಯೋಗಿಗಳೆಂದು ನರನ ಸ |
ದ್ಗುಣವನುರೆ ಕೊಂಡಾಡಿ ಬಳಿಕ ಸಹದೇವ ನಕುಲಾದ್ಯರಂ ಮನ್ವಿಸಿದನು ||10||

ಪದವಿಭಾಗ-ಅರ್ಥ:
ಗುಣದೊಳ ಆ ಯೌವನಾಶ್ವಕ್ಷಿತಿಪನು ಎರಗಿ ಫಲುಗುಣನ ಮೊಗಮಂ ನೋಡಿ= ವಿನಯದಿಂದ ಆ ಯೌವನಾಶ್ವ ರಾಜನು ನಮಸ್ಕರಿಸಿ ಫಲ್ಗುಣನ ಮುಖವನ್ನು ನೋಡಿ, ನೀನಲಾ ತಿಳಿಯಲ್ ತ್ರಿಗುಣದೊಳು ಒಂದದ(ಸೇರದ) ಘನಶ್ರುತಿ ಶಿರೋಮಣಿಯನು ಇಳೆಯರಿಯೆ ನಿಜಭಕ್ತಿಯೆಂಬ ಗುಣದಿಂದೆ ಬಂದಿಸಿದ ಕೋವಿದನು= ನೀನೇನಯ್ಯಾ ಸ್ವತ್ವ ರಜ ತಮ ಗುಣಗಳಲ್ಲಿ ಸೇರದ ವೇದವೇದ್ಯನಾದ ಶ್ರೇಷ್ಠನನ್ನು ಜಗತ್ತೇ ಅರಿಯುವಂತೆ ಭಕ್ತಿಯಿಯಿಂದ ಸದ್ಗಣದಿಂದ ಕಟ್ಟಿ ಹಾಕಿದ ಜಾಣನು? ಅದು ಏಂ ಬಯಲ ಗುಣವಿರ್ದರು= ಅದು ಎಷ್ಟು ಶಮಾದಿಗುಣಗಳಿದ್ದವರು, ಅಕಟ ಯೋಗಿಗಳು ಎಂದು ಎಂದು ನರನ ಸದ್ಗುಣವನು ಉರೆ ಕೊಂಡಾಡಿ= ಯೋಗಿಗಳು ಅಕಟ ಎಂದು ಅರ್ಜುನನ ಸದ್ಗುಣವನ್ನು ಬಹಳ ಕೊಂಡಾಡಿ, ಬಳಿಕ ಸಹದೇವ ನಕುಲ ಆದ್ಯರಂ ಮನ್ವಿಸಿದನು= ಮೊದಲಾದವರನ್ನು ಗೌರವಿಸಿದನು.
  • ತಾತ್ಪರ್ಯ : ವಿನಯದಿಂದ ಆ ಯೌವನಾಶ್ವ ರಾಜನು ನಮಸ್ಕರಿಸಿ ಫಲ್ಗುಣನ ಮುಖವನ್ನು ನೋಡಿ, ನೀನೇನಯ್ಯಾ ಸ್ವತ್ವ ರಜ ತಮ ಗುಣಗಳಲ್ಲಿ ಸೇರದ ವೇದವೇದ್ಯನಾದ ಶ್ರೇಷ್ಠನನ್ನು ಜಗತ್ತೇ ಅರಿಯುವಂತೆ ಭಕ್ತಿಯಿಯಿಂದ ಸದ್ಗಣದಿಂದ ಕಟ್ಟಿ ಹಾಕಿದ ಜಾಣನು? ಅದು ಎಷ್ಟು ಶಮಾದಿಗುಣಗಳಿದ್ದವರು ನೀವು ಯೋಗಿಗಳು ಅಕಟ ಎಂದು ಅರ್ಜುನನ ಸದ್ಗುಣವನ್ನು ಬಹಳ ಕೊಂಡಾಡಿ, ಬಳಿಕ ಸಹದೇವ ನಕುಲ ಮೊದಲಾದವರನ್ನು ಗೌರವಿಸಿದನು.
  • (ಪದ್ಯ - ೧೦)

ಪದ್ಯ - ೧೧[ಸಂಪಾದಿಸಿ]

ಬಳಿಕ ಹೊಳೆಹೊಳೆವ ಮಿಂಚಿನ ಗೊಂಚಲೆತ್ತಲುಂ |
ಬಳಸಿ ಕಂಗೊಳಿಸುತಿರಲಡಿಗಡಿಗೆ ಘುಡುಘುಡಿಸಿ |
ಮೊಳಗುವ ಸಿತಾಭ್ರಮಂ ಕುಲಗಿರಿತಟಪ್ರದೇಶಕೆ ಸಾರ್ಡುವನಿಲನಂತೆ ||
ಲಲಿತ ಕನಕಾಭರಣಗಳ ಕಾಂತಿಯಿಂ ಸುಗತಿ |
ಗುಲಿವ ಹೊಂಗೆಜ್ಜೆಗಳ ರಭಸದಿಂದೆಸೆವ ನಿ |
ರ್ಮಲ ವಾಜಿಯಂ ಸುವೇಗಂ ತಂದು ನಿಲಿಸಿದಂ ಧರ್ಮಜನ ಸಮ್ಮುಖದೊಳು ||11||

ಪದವಿಭಾಗ-ಅರ್ಥ:
ಬಳಿಕ ಹೊಳೆಹೊಳೆವ ಮಿಂಚಿನ ಗೊಂಚಲೆತ್ತಲುಂ ಬಳಸಿ ಕಂಗೊಳಿಸುತಿರಲು= ನಂತರ ಹೊಳೆವ ಮಿಂಚಿನ ಗೊಂಚಲಿನಂತೆ, ಅಡಿಗಡಿಗೆ ಘುಡುಘುಡಿಸಿ ಮೊಳಗುವ ಸಿತಾಭ್ರಮಂ= ಪದೇಪದೇ ಶಬ್ದಮಾಡುವ ಬಿಳಿಮೋಡವನ್ನು, ಕುಲಗಿರಿತಟಪ್ರದೇಶಕೆ= ಬೆಟ್ಟದ ಬುಡಕ್ಕೆ ಸಾರ್ಚುವ ಅನಿಲನಂತೆ= ತಳ್ಳುವ ಗಾಳಿಯಂತೆ, ಲಲಿತ ಕನಕಾಭರಣಗಳ ಕಾಂತಿಯಿಂ ಸುಗತಿಗೆ ಉಲಿವ ಹೊಂಗೆಜ್ಜೆಗಳ ರಭಸದಿಂದೆ ಎಸೆವ= ಚಂದದ ಆಭರಣಗಳ ಪ್ರಕಾಶವನ್ನು ಬೀರುತ್ತಾ, ಹೊನ್ನಿನ ಗೆಜ್ಜೆಗಳನಡಿಗೆಯಿಂದ ಶೋಭಿಸುವ, ನಿರ್ಮಲ ವಾಜಿಯಂ= ಬಿಳಿಯ ಕುದುರೆಯನ್ನು, ಸುವೇಗಂ ತಂದು ನಿಲಿಸಿದಂ=ಸುವೇಗನು ತಂದು ನಿಲ್ಲಿದನು, ಧರ್ಮಜನ ಸಮ್ಮುಖದೊಳು= ಧರ್ಮಜನ ಎದುರಿನಲ್ಲಿ.
  • ತಾತ್ಪರ್ಯ : ನಂತರ ಹೊಳೆವ ಮಿಂಚಿನ ಗೊಂಚಲಿನಂತೆ, ಪದೇಪದೇ ಶಬ್ದಮಾಡುವ ಬಿಳಿಮೋಡವನ್ನು ಬೆಟ್ಟದ ಬುಡಕ್ಕೆ ತಳ್ಳುವ ಗಾಳಿಯಂತೆ, ಚಂದದ ಆಭರಣಗಳ ಪ್ರಕಾಶವನ್ನು ಬೀರುತ್ತಾ, ಹೊನ್ನಿನ ಗೆಜ್ಜೆಗಳನಡಿಗೆಯಿಂದ ಶೋಭಿಸುವ,ಬಿಳಿಯ ಕುದುರೆಯನ್ನು ಸುವೇಗನು ಧರ್ಮಜನ ಎದುರಿನಲ್ಲಿ ತಂದು ನಿಲ್ಲಿದನು, .
  • (ಪದ್ಯ - ೧೧)

ಪದ್ಯ - ೧೨[ಸಂಪಾದಿಸಿ]

ತುರಗಮೇಧಂಗೆಯ್ಯದೊಂದಿನಿಸು ಕುಂದೆನ್ನ |
ಸಿರದ ಮೇಲಿದೆ ತಾನಿದಂ ತಾಳಲಾರೆ ನೀಂ |
ಪರಿಹರಿಪುದೆಂದು ನಿಜಕೀರ್ತಿ ಹಯರೂಪದಿಂ ಭೂಪನಂ ಬೇಡಿಕೊಳಲು ||
ಪೊರೆಗೆ ಬಂದವೊಲೇಕಕರ್ಣದಸಿತತ್ವದಿಂ |
ಪರಿಶೋಭಿಸುವ ಶುಭ್ರವಾಜಿಯಂ ಕಾಣುತ |
ಚ್ಚರಿವಟ್ಟು ಸಕಲಜನಮೈತಂದು ನೋಡುತಿರ್ದುದು ಬಳಸಿ ದೆಸೆದೆಸೆಯೊಳು ||12||

ಪದವಿಭಾಗ-ಅರ್ಥ:
ತುರಗಮೇಧಂ=ಆಶ್ವಮೇಧ ಯಾಗವನ್ನು, ಗೆಯ್ಯದ= ಮಾಡದ, ಒಂದಿನಿಸು= ಒಂದುಸ್ವಲ್ಪ, ಕುಂದು ಎನ್ನಸಿರದ ಮೇಲಿದೆ= ನನ್ನ ಶಿರದಮೇಲೆ ಇದೆ. ತಾನಿದಂ ತಾಳಲಾರೆ= ತಾನು/ನಾನು ಇದನ್ನು ಸಹಿಸಲಾರೆನು. ನೀಂ ಪರಿಹರಿಪುದು= ನೀನು ಪರಿಹರಿಸಬೇಕು ಎಂದು ನಿಜಕೀರ್ತಿ ಹಯರೂಪದಿಂ= ತನ್ನ ಕೀರ್ತಿಯು ಅಶ್ವರೂಪದಲ್ಲಿ ಇದೆ, ಎಂದು ಯವೌನಾಶ್ವನನ್ನು ಭೂಪನಂ=ರಾಜನನ್ನು ಬೇಡಿಕೊಳಲು= ಕೇಳಿಕೊಳ್ಳಲು-ಅವನು ತಂದ ಕುದುರೆಯು ಪೊರೆಗೆ= ಅವನ ಬೇಡಿಕೆಯನ್ನು ಪೂರೈಸಿ ಧರ್ಮಜನನ್ನು ಕಾಪಾಡಲು ಬಂದವೊಲ್= ಬಂದಿತೋ ಎನ್ನುವಂತೆ ಏಕಕರ್ಣದ= ಒಂದೇ ಕಿವಿಯ, ಅಸಿತತ್ವದಿಂ= ಖಡ್ಗದತತ್ವದ/ ಶೌರ್ಯದ ತತ್ವದ ಪರಿಶೋಭಿಸುವ= ಶೋಭಾಯಮಾನವಾದ, ಶುಭ್ರವಾಜಿಯಂ= ಪರಿಶುದ್ಧ ಬಿಳಿಯ ಅಶ್ವವನ್ನು, ಕಾಣುತ ಅಚ್ಚರಿವಟ್ಟು= ಕಂಡು ಆಸ್ಚರ್ಯಚಕಿತನಾದನು, ಸಕಲಜನಂ ಐಮೈತಂದು= ಎಲ್ಲಾ ಜನರೂ ಬಂದು ನೋಡುತಿರ್ದುದು= ನೋಡಿತ್ತಿದ್ದರು, ಬಳಸಿ ದೆಸೆದೆಸೆಯೊಳು= ಎಲ್ಲಾದಿಕ್ಕಿನಿಂದಲೂ ಸುತ್ತವರಿದುನಿಂತು.
  • ತಾತ್ಪರ್ಯ : ಆಶ್ವಮೇಧ ಯಾಗವನ್ನು ಮಾಡದ ಒಂದು ಅಲ್ಪಕುಂದು ನನ್ನ ತಲೆಯಮೇಲಿದೆ. ನಾನು ಇದನ್ನು ಸಹಿಸಲಾರೆನು. ನೀನು ಪರಿಹರಿಸಬೇಕು ತನ್ನ ಕೀರ್ತಿಯು ಅಶ್ವರೂಪದಲ್ಲಿ ಇದೆ, ಎಂದು ಯವೌನಾಶ್ವನನ್ನು ರಾಜನನ್ನು ಕೇಳಿಕೊಳ್ಳಲು, ಆ ಯಜ್ಞಾಶ್ವನ್ನು ಎದುರಿಗೆ ತಂದನು, ಅವನು ತಂದ ಕುದುರೆಯು ಅವನ ಬೇಡಿಕೆಯನ್ನು ಪೂರೈಸಿ ಧರ್ಮಜನನ್ನು ಕಾಪಾಡಲು ಬಂದಿತೋ ಎನ್ನುವಂತಿರುವ, ಒಂದೇ ಕಿವಿಯ, ಶೌರ್ಯತತ್ವದ ಶೋಭಾಯಮಾನವಾದ, ಪರಿಶುದ್ಧ ಬಿಳಿಯ ಅಶ್ವವನ್ನು ಕಂಡು ಧ್ರ್ಮರಾಯನು ಆಸ್ಚರ್ಯಚಕಿತನಾದನು,ಎಲ್ಲಾ ಜನರೂ ಬಂದು ಎಲ್ಲಾದಿಕ್ಕಿನಿಂದಲೂ ಸುತ್ತವರಿದು ನಿಂತು ಅದನ್ನು ನೋಡಿತ್ತಿದ್ದರು,
  • (ಪದ್ಯ - ೧೨)

ಪದ್ಯ - ೧೩[ಸಂಪಾದಿಸಿ]

ಕೊಂಡುಬಂದಾ ಹಯವನೊಪ್ಪಿಸಿ ಯುಧಿಷ್ಠಿರನ |
ಕಂಡಂ ಸುವೇಗನತಿಭಕ್ತಿಯಿಂದೆರಗಿದಂ |
ಪುಂಡರೀಕಾಕ್ಷಂಗೆ ಬಳಿಕರ್ಜುನಾದಿಗಳ್ಗುಚಿತದಿಂ ವಂದಿಸಿದನು |
ಬಂಡಿಪೇರೆತ್ತೊಂಟೆಗಳ ಮೇಲೆ ತಂದಖಿಳ |
ಭಂಡಾರಮಂ ಕರಿರಥಾಶ್ವಮಂ ನಾರಿಯರ |
ತಂಡಮಂ ಗೋಮಹಿಷ ಮೊದಲಾದ ವಸ್ತುಗಳನಾ ಕ್ಷಣದೊಳೊಪ್ಪಿಸಿದನು ||13||

ಪದವಿಭಾಗ-ಅರ್ಥ:
ಕೊಂಡುಬಂದಾ ಹಯವನು ಒಪ್ಪಿಸಿ ಯುಧಿಷ್ಠಿರನ ಕಂಡಂ ಸುವೇಗನತಿಭಕ್ತಿಯಿಂದ ಎರಗಿದಂ ಪುಂಡರೀಕಾಕ್ಷಂಗೆ= ಸುವೇಗನು, ಭದ್ರಾವತಿಯಿಂದ ತಂದ ಯಜ್ಞದ ಕುದುರೆಯನ್ನು ಯಧಿಷ್ಠಿರನ ಕಡೆಯವರಿಗೆ ಕೊಟ್ಟು, ಯುಧಿಷ್ಠಿರನನ್ನು ಕಂಡು, ಕೃಷ್ಣನಿಗೆ ಬಹಳ ಭಕ್ತಿಯಿಂದ ನಮಸ್ಕರಿಸಿದನು. ಬಳಿಕ ಅರ್ಜುನಾದಿಗಳಿಗೆ ಉಚಿತದಿಂ ವಂದಿಸಿದನು= ನಂತರ ಅರ್ಜುನಾದಿಗಳಿಘೂ ನಮಸ್ಕರಿಸಿದನು.ನಂತರ ಬಂಡಿ ಪೇರೆತ್ತು ಒಂಟೆಗಳ ಮೇಲೆ ತಂದ ಅಖಿಳ ಭಂಡಾರಮಂ ಕರಿರಥಾಶ್ವಮಂ ನಾರಿಯರ ತಂಡಮಂ ಗೋಮಹಿಷ ಮೊದಲಾದ ವಸ್ತುಗಳನ ಆ ಕ್ಷಣದೊಳ ಒಪ್ಪಿಸಿದನು= ಗಾಡಿ, ಹೊರುವಎತ್ತುಗಳು, ಒಂಟೆಗಳ ಮೇಲೆ ತಂದಿದ್ದು ಎಲ್ಲಾ ಭಡಾರವನ್ನೂ, ಆನೆ ರಥ ಕುದುರೆಗಳನ್ನೂ,ನಾರಿಯರ ತಂಡವನ್ನೂ,ದನ ಎಮ್ಮೆಗಳನ್ನೂ,ಮತ್ತು ಇತರೆ ತಂದ ಎಲ್ಲಾ ವಸ್ತುಗಳನ್ನು ಕೂಡಲೆ ಒಪ್ಪಸಿಕೊಟ್ಟನು.
  • ತಾತ್ಪರ್ಯ : ಸುವೇಗನು, ಭದ್ರಾವತಿಯಿಂದ ತಂದ ಯಜ್ಞದ ಕುದುರೆಯನ್ನು ಯಧಿಷ್ಠಿರನ ಕಡೆಯವರಿಗೆ ಕೊಟ್ಟು, ಯುಧಿಷ್ಠಿರನನ್ನು ಕಂಡು, ಕೃಷ್ಣನಿಗೆ ಬಹಳ ಭಕ್ತಿಯಿಂದ ನಮಸ್ಕರಿಸಿದನು. ನಂತರ ಅರ್ಜುನಾದಿಗಳಿಘೂ ನಮಸ್ಕರಿಸಿದನು. ನಂತರ ಗಾಡಿ, ಹೊರುವಎತ್ತುಗಳು, ಒಂಟೆಗಳ ಮೇಲೆ ತಂದಿದ್ದ ಎಲ್ಲಾ ಭಂಡಾರವನ್ನೂ, ಆನೆ ರಥ ಕುದುರೆಗಳನ್ನೂ,ನಾರಿಯರ ತಂಡವನ್ನೂ,ದನ ಎಮ್ಮೆಗಳನ್ನೂ,ಮತ್ತು ಇತರೆ ತಂದ ಎಲ್ಲಾ ವಸ್ತುಗಳನ್ನು ಕೂಡಲೆ ಪಾಂಡವರಿಗೆ ಒಪ್ಪಸಿಕೊಟ್ಟನು.
  • (ಪದ್ಯ - ೧೩)

ಪದ್ಯ - ೧೪[ಸಂಪಾದಿಸಿ]

ಮೇಲೆ ಪರಿತೋಷದಿಂದಾ ಯೌವನಾಶ್ವಭೂ |
ಪಾಲಕಂ ತನ್ನ ಸರ್ವಸ್ವಮಂ ತಂದು ಲ |
ಕ್ಷ್ಮೀಲೋಲನಂಘ್ರಿಗೊಪ್ಪಿಸಿದ ಬಳಿಕವನೊಡನೆ ಬಂದಿಹ ಸಮಸ್ತಜನರು |
ನೀಲಮೇಘಶ್ಯಾಮಲನ ಕೋಮಲಾಂಗದ ವಿ |
ಶಾಲತರ ಲಾವಣ್ಯಲಹರಿಯ ಸುಧಾಂಬುದಿಯೊ |
ಳೋಲಾಡುತಿರ್ದರಡಿಗಡಿಗೆ ವಂದಿಸಿ ನುತಿಸಿ ಜಯಜಯನಿನಾದದಿಂದೆ ||14||

ಪದವಿಭಾಗ-ಅರ್ಥ:
ಮೇಲೆ ಪರಿತೋಷದಿಂದಾ= ನಂತರ, ಯೌವನಾಶ್ವಭೂಪಾಲಕಂ ತನ್ನ ಸರ್ವಸ್ವಮಂ= ಯೌವನಾಶ್ವ ಭೂಪಾಲನು ತನ್ನ ಸರ್ವಸ್ವವನ್ನೂ ತಂದು, ಲಕ್ಷ್ಮೀಲೋಲನಂಘ್ರಿಗೆ= ಕೃಷ್ಣನಿಗೆ ಒಪ್ಪಿಸಿದ ಬಳಿಕ ಅವನೊಡನೆ ಬಂದಿಹ= ಬಂದಿರುವ ಸಮಸ್ತಜನರು ನೀಲಮೇಘಶ್ಯಾಮಲನ= ಮೇಘದ ಕಪ್ಪುಮೈಬಣ್ಣದ ಕೃಷ್ಣನ, ಕೋಮಲಾಂಗದ= ಕೋಮಲ ದೇಹದ, ವಿಶಾಲತರ ಲಾವಣ್ಯಲಹರಿಯ= ಬಹಳ ಲಾವಣ್ಯ ಲಕ್ಷಣದ, ಸುಧಾಂಬುದಿಯೊಳು= ಕ್ಷೀರಸಮುದ್ರದಲ್ಲಿ ಓಲಾಡುತಿರ್ದರುಸಮತೋಷದಲ್ಲಿ ಮುಳುಗಿದ್ದರು. ಅಡಿಗಡಿಗೆ ವಂದಿಸಿ ನುತಿಸಿ= ಅವನಿಗೆ ಪದೇಪದೇ ನಮಸ್ಕರಿಸುತ್ತಾ , ಜಯಜಯನಿನಾದದಿಂದೆ = ಜಯಜಯ ಕೃಷ್ಣ ಎನ್ನುತ್ತಿದ್ದರು.
  • ತಾತ್ಪರ್ಯ : ನಂತರ,ಸಂತೋಷದಿಂದ ಯೌವನಾಶ್ವ ಭೂಪಾಲನು ತನ್ನ ಸರ್ವಸ್ವವನ್ನೂ ತಂದು ಕೃಷ್ಣನಿಗೆ ಒಪ್ಪಿಸಿದನು. ಬಳಿಕ ಅವನೊಡನೆ ಬಂದಿರುವ ಸಮಸ್ತಜನರು ಮೇಘದಂತೆ ಕಪ್ಪುಮೈಬಣ್ಣದ ಕೃಷ್ಣನ ಕೋಮಲ ಶರೀರದ ಲಾವಣ್ಯ ಲಕ್ಷಣದ ಸೌಂದರ್ಯದ ಕ್ಷೀರಸಮುದ್ರದಲ್ಲಿ ಮುಳುಗಿದ್ದರು. ಅವನಿಗೆ ಪದೇಪದೇ ನಮಸ್ಕರಿಸುತ್ತಾ, ಜಯಜಯ ಕೃಷ್ಣ ಎನ್ನುತ್ತಿದ್ದರು.
  • (ಪದ್ಯ - ೧೪)

ಪದ್ಯ - ೧೫[ಸಂಪಾದಿಸಿ]

ಇತ್ತಲಾ ಯೌವನಾಶ್ವವ ರಾಣಿ ಕಾಣಿಕೆಯ |
ನಿತ್ತು ಕುಂತಿಗೆ ನಮಿಸಿ, ಬಳಿಕ ಪಾಂಚಾಲಭೂ |
ಭೃತ್ತನೂಜೆಯ ಚರಣ ಸೀಮೆಗಾನತೆಯಾಗಲವಳ ಕಚಭರಮೆಸೆದುದು ||
ಒತ್ತಿಡಿದ ಸಂಜೆಗೆಂಪಿನ ಮೇಲೆ ಕವಿದ ಬ |
ಲ್ಗತ್ತಲೆಯೊ ಶೋಣಗಿರಿತಟಕಿಳಿವ ಕಾರ್ಮುಗಿಲ |
ಮೊತ್ತಮೊ ಕಮಲಕೆರಗುವಳಿಕುಲಮೊ ತಳಿರ್ಗೊಂಬಡರ್ದ ಬರ್ಹಿಯೊ ಪೇಳೆನೆ ||15|||

ಪದವಿಭಾಗ-ಅರ್ಥ:
ಇತ್ತಲಾ= ಇತ್ತಲಾಗಿ ರಾಣೀವಾಸದಲ್ಲಿ, ಯೌವನಾಶ್ವವ ರಾಣಿ ಕಾಣಿಕೆಯನಿತ್ತು= ಕಾಣಿಕೆಯನ್ನು ಕೊಟ್ಟು ಕುಂತಿಗೆ ನಮಿಸಿ=ನಮಸ್ಕರಿಸಿದಳು, ಬಳಿಕ ಪಾಂಚಾಲಭೂಭೃತ್ತನೂಜೆಯ= ಪಾಂಚಾಲ ರಾಜನ ಮಗಳು ದ್ರೌಪದಿಯ, ಚರಣ ಸೀಮೆಗೆ ನತೆಯಾಗಲು ಅವಳ ಕಚಭರಂ ಎಸೆದುದು= (ಕಚ= ತಲೆಕೂದಲು) ಪಾದಗಳಿಗೆ ಬಗ್ಗಿ ನಮಸ್ಕರಿಸಲು ಅವಳ ದಟ್ಟ ಕಪ್ಪಕೂದಲು ಅದ್ಭುತವಾಗಿ ತೋರಿತು; ಅದು - ಒತ್ತಿಡಿದ ಸಂಜೆಗೆಂಪಿನ ಮೇಲೆ ಕವಿದ ಬಲ್ಗತ್ತಲೆಯೊ= ಒಟ್ಟಿಗೆ ಒತ್ತಿಟ್ಟಿಇರುವ ಕೆಂಪುಬಣ್ಣದ ಸಂಜೆಯ ಮೇಲೆ ಕವಿದ ಕತ್ತಲೆಯೋ ಎಂಬಂತೆ ಅವಳ ತಲೆಯ ಉದ್ದ ಕಪ್ಪು ಕೂದಲರಾಶಿ ದ್ರೌಪದಿಯ ಕಾಲುಗಳನ್ನು ಮುಚ್ಚಿತು; ಶೋಣಗಿರಿತಟಕಿಳಿವ= ಕೆಂಪು ಬೆಟ್ಟದ ತಲಕ್ಕೆ ಇಳಿದು ಬಂದ, ಕಾರ್ಮುಗಿಲ ಮೊತ್ತಮೊ= ಕಪ್ಪಮುಗಿಲ ರಾಶಿಯೋ ಎಂಬಂತಿತ್ತು, ಕಮಲಕೆ ಎರಗುವ ಅಳಿಕುಲಮೊ= ಕಮಲದ ಹೂವಿಗೆ ಬಂದು ಮತ್ತಿದ ಜೇನುಹುಳುಗಳೋ ಎಂಬತೆ ಕಾಣುತ್ತಿತ್ತು. ತಳಿರ್ಗೊಂಬಡರ್ದ-:ತಳಿರ್ ಕೊಂಬ ಅಡರ್ದ ಬರ್ಹಿಯೊ= ಕೆಂಪುಎಲೆಯ ಚಿಗುರಿನ ರೆಂಬೆಯನ್ನು ಹತ್ತಿದ ಸೋಗೆಬಾಲದ ನವಿಲೋ ಪೇಳೆನೆ- ಪೇಳು ಎನೆ= ಹೇಳು ಎನ್ನುವಂತಿತ್ತು,
  • ತಾತ್ಪರ್ಯ : ಇತ್ತಲಾಗಿ ರಾಣೀವಾಸದಲ್ಲಿ, ಯೌವನಾಶ್ವವ ರಾಣಿ, ಕಾಣಿಕೆಯನ್ನು ಕೊಟ್ಟು ಕುಂತಿಗೆ ನಮಸ್ಕರಿಸಿದಳು, ನಂತರ ಅವಳು ಪಾಂಚಾಲ ರಾಜನ ಮಗಳು ದ್ರೌಪದಿಯ ಪಾದಗಳಿಗೆ ಬಗ್ಗಿ ನಮಸ್ಕರಿಸಲು ಅವಳ ದಟ್ಟ ಕಪ್ಪುಕೂದಲು ಅದ್ಭುತವಾಗಿ ತೋರಿತು; ಅದು ಕೆಂಪುಬಣ್ಣದ ಸಂಜೆಯ ಮೇಲೆ ಒಟ್ಟಿಗೆ ಒತ್ತಿಟ್ಟಿಇರುವ ಕವಿದ ಕತ್ತಲೆಯೋ ಎಂಬಂತೆ ಅವಳ ತಲೆಯ ಉದ್ದ ಕಪ್ಪು ಕೂದಲರಾಶಿ ದ್ರೌಪದಿಯ ಕಾಲುಗಳನ್ನು ಮುಚ್ಚಿತು; ಕೆಂಪು ಬೆಟ್ಟದ ತಲಕ್ಕೆ ಇಳಿದು ಬಂದ ಕಪ್ಪುಮುಗಿಲ ರಾಶಿಯೋ ಎಂಬಂತಿತ್ತು, ಕಮಲದ ಹೂವಿಗೆ ಬಂದು ಮತ್ತಿದ ಜೇನುಹುಳುಗಳೋ ಎಂಬತೆ ಕಾಣುತ್ತಿತ್ತು. ಕೆಂಪುಎಲೆಯ ಚಿಗುರಿನ(ದ್ರೌಪದಿಯ ಪಾದಗಳಿಗೆ ಹೋಲಿಕೆ) ರೆಂಬೆಯನ್ನು ಹತ್ತಿದ ಸೋಗೆಬಾಲದ (ಉದ್ದ ತಲೆ ಕೂದಲಿಗೆ ಹೋಲಿಕೆ) ನವಿಲೋ ಎನ್ನುವಂತಿತ್ತು,
  • (ಪದ್ಯ - ೧೫)IIIXX

ಪದ್ಯ - ೧೬[ಸಂಪಾದಿಸಿ]

ದ್ವೇಷಮಂ ಬಿಟ್ಟು ಕೆಂದಾವರೆಯ ಚೆಲ್ವಿನ ವಿ |
ಶೇಷಮಂ ನೋಡಲ್ ಸಮೀಪಮಂ ಸಾರ್ದ ಪೀ |
ಯೂಷಕರಬಿಂಬಮೆನಲಾ ಪ್ರಭಾವತಿಯ ಮೊಗವಂಘ್ರಿದೇಶದೊಳೊಪ್ಪಿರೆ ||
ಭೂಷಣಂ ಚಲಿಸೆ ಮಣಿದೆತ್ತಿ ಬಿಗಿಯಪ್ಪಿ ಸಂ |
ತೋಷದಿಂದವಳನುಪಚರಿಸಿ ತಿರುಗಿದಳಖೀಳ |
ಯೋಷಿಜ್ಜನದೊಳತಿವಿಲಾಸದಿಂ ದ್ರೌಪದಿ ಸುಭದ್ರಾದಿ ಸತಿಯರೊಡನೆ ||16||

ಪದವಿಭಾಗ-ಅರ್ಥ:
ದ್ವೇಷಮಂ ಬಿಟ್ಟು= ದ್ವೇಷವನ್ನು ಬಿಟ್ಟು, ಕೆಂದಾವರೆಯ ಚೆಲ್ವಿನ ವಿಶೇಷಮಂ ನೋಡಲ್ ಸಮೀಪಮಂ ಸಾರ್ದ= ಕೆಂಪು ತಾವರೆಯ ವಿಶೇಷ ಸೊಬಗನ್ನು ನೋಡಲು ಸಮೀಪಕ್ಕೆ ಹೋದ, ಪೀಯೂಷಕರಬಿಂಬಂ(ಚಂದ್ರನ ಅಮೃತಕಿರಣ) ಎನಲು ಆ ಪ್ರಭಾವತಿಯ ಮೊಗಂ ಅಂಘ್ರಿದೇಶದೊಳ್ ಒಪ್ಪಿರೆ= ನಮಸ್ಕರಿಸಿದ ಆ ಪ್ರಭಾವತಿಯ ಚಂದ್ರನ ಅಮೃತಕಿರಣದಂತಿರುವ ಮಖವು ದ್ರೌಪದಿಯ ಪಾದಗಳಲ್ಲಿ ಇರಲು, ಭೂಷಣಂ ಚಲಿಸೆ ಮಣಿದು ಎತ್ತಿ ಬಿಗಿಯಪ್ಪಿ= ದ್ರೌಪದಿಯ ಆಭರಣಗಳು ಅಲುಗುತ್ತಿರಲು ಪ್ರಭಾವತಿಯನ್ನು ಬಗ್ಗಿ ಎತ್ತಿ ಬಿಗಿಯಾಗಿ ಪ್ರೀತಿಯಿಂದ ಅಪ್ಪಿಕೊಂಡು, ಸಂತೋಷದಿಂದ ಅವಳನು=ಅವಳನ್ನು ಉಪಚರಿಸಿ, ತಿರುಗಿದಳು ಅಖಿಳ ಯೋಷಿಜ್ಜನದೊಳು(ಹೆಂಗಸರ ಸಮೂಹದಲ್ಲಿ) ಅತಿವಿಲಾಸದಿಂ ದ್ರೌಪದಿ ಸುಭದ್ರೆ ಆದಿ ಸತಿಯರೊಡನೆ= ದ್ರೌಪದಿ ಸುಭದ್ರೆ ಮೊದಲಾದ ಸತಿಯರ ಜೊತೆಗೂಡಿಕೊಂಡು ಸೊಬಗಿನಿಂದ ಹೆಂಗಸರ ಸಭೆಯಲ್ಲಿ/ಸಭೆಯಕಡೆ ಹೋದಳು.
  • ತಾತ್ಪರ್ಯ :ದ್ವೇಷವನ್ನು ಬಿಟ್ಟು, ಕೆಂಪು ತಾವರೆಯ (ಪಾದಗಳು) ವಿಶೇಷ ಸೊಬಗನ್ನು ನೋಡಲು ಸಮೀಪಕ್ಕೆ ಹೋದ,ಚಂದ್ರನ ಅಮೃತಕಿರಣದಂತಿರುವ ನಮಸ್ಕರಿಸಿದ ಆ ಪ್ರಭಾವತಿಯ ಮಖವು, ದ್ರೌಪದಿಯ ಪಾದಗಳಲ್ಲಿ ಇರಲು, ದ್ರೌಪದಿಯು ಆಭರಣಗಳು ಅಲುಗುತ್ತಿರಲು ಪ್ರಭಾವತಿಯನ್ನು ಬಗ್ಗಿ ಎತ್ತಿ ಬಿಗಿಯಾಗಿ ಪ್ರೀತಿಯಿಂದ ಅಪ್ಪಿಕೊಂಡು, ಸಂತೋಷದಿಂದ ಅವಳನ್ನು ಉಪಚರಿಸಿ, ಅವಳು ಸುಭದ್ರೆ ಮೊದಲಾದ ಸತಿಯರ ಜೊತೆಗೂಡಿಕೊಂಡು ಸೊಬಗಿನಿಂದ ಹೆಂಗಸರ ಸಭೆಯಲ್ಲಿ/ಸಭೆಯಕಡೆ ಹೋದಳು.
  • (ಪದ್ಯ - ೧೬)

ಪದ್ಯ - ೧೭[ಸಂಪಾದಿಸಿ]

ಶೌರಿಸಹಿತರಸಂ ಬಳಿಕ ರಜತಗಿರಿಯಂತೆ |
ಗೌರಾಂಗದಿಂದೆ ಕಣ್ಗೊಳಿಸುವ ತುರಂಗಮದ |
ಸೌರಂಭಮಂ ನೋಡಿ ಬಿಗಿಯಪ್ಪಿ ಮುಂಡಾಡಿ ಹೈಡಿಂಬಿ ಕರ್ಣಜರನು |
ಗೌರವಂ ಮಿಗೆ ಯೌವನಾಶ್ವಭೂಪಾಲನಂ |
ಪೌರುಷದೊಳುಪಚರಿಸಿ ತಂದನಿಭಪುರಿಗಖಿಳ |
ಪೌರಜನ ಪರಿಜನದ ರಥನಾಗವಾಜಿಗಳ ಸಂದಣಿಯ ಸಂಭ್ರಮದೊಳು ||17||

ಪದವಿಭಾಗ-ಅರ್ಥ:
ಶೌರಿಸಹಿತ ಅರಸಂ ಬಳಿಕ ರಜತಗಿರಿಯಂತೆ ಗೌರಾಂಗದಿಂದೆ ಕಣ್ಗೊಳಿಸುವ ತುರಂಗಮದ ಸೌರಂಭಮಂ ನೋಡಿ= ಬಳಿಕ ಕೃಷ್ಣನಸಹಿತ ಅರಸನು ರಜತಗಿರಿಯಂತೆ ಬಿಳಿಯಬಣ್ನದಿಂದ ಕಂಗೊಳಿಸುವ ಕುದುರೆಯ ಅಧ್ಭುತ ಸೌಂದರ್ಯವನ್ನು ನೋಡಿ,

ಬಿಗಿಯಪ್ಪಿ ಮುಂಡಾಡಿ ಹೈಡಿಂಬಿ ಕರ್ಣಜರನು ಗೌರವಂ ಮಿಗೆ ಯೌವನಾಶ್ವಭೂಪಾಲನಂ ಪೌರುಷದೊಳು ಉಪಚರಿಸಿ ತಂದನು ಇಭಪುರಿಗೆ ಅಖಿಳ ಪೌರಜನ ಪರಿಜನದ ರಥನಾಗವಾಜಿಗಳ ಸಂದಣಿಯ ಸಂಭ್ರಮದೊಳು= ಧರ್ಮಜನು ಸಂತೋಷಾತಿರೇಕದಿಂದ ಅಶ್ವವನ್ನು ಗೆದ್ದು ತಂದ ಮೇಘನಾದ ವೃಷಕೇತು ಇಬ್ಬರನ್ನೂ ಅಪ್ಪಿಕೊಂಡು, ಮುಂಡಾಡಿ, ಆಮೇಲೆ ಯೌವನಾಶ್ವನನ್ನು ವೀರೋಚಿತವಾಗಿ ಗೌರವಿಸಿ, ಯಜ್ಞಾಶ್ವವನ್ನು ಎಲ್ಲಾ ಪೌರಜನ ಪರಿಜನರು ರಥ ಆನೆ ಕುದುರೆಗಳ ಸಂಭ್ರಮದ ಮೆರವಣಿಗೆಯ ಮೂಲಕ ನಗರದ ಹೊರವಲಯದಿಂದ ಹಸ್ತಿನಾವಿ ನಗರದದೊಳಗೆ ತಂದನು.

  • ತಾತ್ಪರ್ಯ : ಬಳಿಕ ಕೃಷ್ಣನ ಸಹಿತ ಅರಸನು ರಜತಗಿರಿಯಂತೆ ಬಿಳಿಯಬಣ್ನದಿಂದ ಕಂಗೊಳಿಸುವ ಕುದುರೆಯ ಅಧ್ಭುತ ಸೌಂದರ್ಯವನ್ನು ನೋಡಿ, ಧರ್ಮಜನು ಸಂತೋಷಾತಿರೇಕದಿಂದ ಅಶ್ವವನ್ನು ಗೆದ್ದು ತಂದ ಮೇಘನಾದ ವೃಷಕೇತು ಇಬ್ಬರನ್ನೂ ಅಪ್ಪಿಕೊಂಡು, ಮುಂಡಾಡಿ, ಆಮೇಲೆ ಯೌವನಾಶ್ವನನ್ನು ವೀರೋಚಿತವಾಗಿ ಗೌರವಿಸಿ, ಯಜ್ಞಾಶ್ವವನ್ನು ಎಲ್ಲಾ ಪೌರಜನ, ಪರಿಜನರು, ರಥ, ಆನೆ, ಕುದುರೆಗಳ ಸಂಭ್ರಮದ ಮೆರವಣಿಗೆಯ ಮೂಲಕ ನಗರದ ಹೊರವಲಯದಿಂದ ಹಸ್ತಿನಾವತಿ ನಗರದದೊಳಗೆ ತಂದನು.
  • (ಪದ್ಯ - ೧೭)

ಪದ್ಯ - ೧೮[ಸಂಪಾದಿಸಿ]

ಭೂವಲ್ಲಭಂ ಮುದದೊಳಾ ಯೌವನಾಶ್ವನಂ |
ಭಾವಿಸಿದ ಬಳಿಕ ಪಕ್ಷದ್ವಯಂ ಹರಿ ಹಸ್ತಿ |
ನಾವತಿಯೊಳಿರ್ದು ನೃಪವರನೊಳಿಂತೆಂದನೀ ಚೈತ್ರಮಾಸಂ ಪೋದುದು ||
ಈ ವೇಳೆಗಧ್ವರದ ಸಮಯವನುಪಕ್ರಮಿಸ |
ಲಾವಿರಲ್ ಪನ್ನೊಂದು ತಿಂಗಳಿರ್ಪುದು ಮುಂದೆ |
ನೀವು ಕರೆಸಿದೊಡೆ ಬಂದಪೆವಂದಿಗೊದವಿದ ಸಮಸ್ತ ವಸ್ತುಗಳ ಕೊಂಡು ||18||

ಪದವಿಭಾಗ-ಅರ್ಥ:
ಭೂವಲ್ಲಭಂ= ಧರ್ಮರಾಜನು ಮುದದೊಳು ಆ ಯೌವನಾಶ್ವನಂ ಭಾವಿಸಿದ ಬಳಿಕ= ಸಂತೋಷದಿಂದ ಆ ಯೌವನಾಶ್ವನನ್ನು ಉಪಚರಿಸಿದ ಬಳಿಕ, ಪಕ್ಷದ್ವಯಂ ಹರಿ ಹಸ್ತಿನಾವತಿಯೊಳ್ ಇರ್ದು= ಕೃಷ್ಣನು ಒಂದು ತಿಂಗಳು ಹಸ್ತಿನಾವತಿಯಲ್ಲಿ ಇದ್ದು, ನೃಪವರನೊಳು ಇಂತೆಂದನು= ಆರಾಜನನ್ನು ಕುರಿತು ಹೀಗೆ ಹೇಳಿದನು, 'ಈ ಚೈತ್ರಮಾಸಂ ಪೋದುದು ಈ ವೇಳೆಗೆ ಅಧ್ವರದ ಸಮಯವನು ಉಪಕ್ರಮಿಸಲು ಆವು ಇರಲ್ ಪನ್ನೊಂದು ತಿಂಗಳಿರ್ಪುದು= ಈ ಸಮಯಕ್ಕೆ ಯಜ್ಞದ ಕೆಲಸ ಆರಂಭಿಸಲು ಚೈತ್ರಮಾಸವು ಕಳೆಯಿತು, ನಾವು ಇರೋಣವೆಂದರೆ ಇನ್ನೂ ಹನ್ನೊಂದು ತಿಂಗಳು ಇರುವುದು, ಮುಂದೆ ನೀವು ಕರೆಸಿದೊಡೆ ಬಂದಪೆವು ಅಂದಿಗೆ ಒದವಿದ ಸಮಸ್ತ ವಸ್ತುಗಳ ಕೊಂಡು= ಯಜ್ಞ ಆರಂಬವಾಗುವಾಗ ನೀವು ನಮ್ಮನ್ನು ಕರೆಸಿದರೆ ಆ ಕಾರ್ಯಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನೂ ತೆಗೆದುಕೊಂಡು ಬರುತ್ತೇವೆ.'
  • ತಾತ್ಪರ್ಯ :ಧರ್ಮರಾಜನು ಸಂತೋಷದಿಂದ ಆ ಯೌವನಾಶ್ವನನ್ನು ಉಪಚರಿಸಿದ ಬಳಿಕ, ಕೃಷ್ಣನು ಒಂದು ತಿಂಗಳು ಹಸ್ತಿನಾವತಿಯಲ್ಲಿ ಇದ್ದು, ರಾಜನನ್ನು ಕುರಿತು ಹೀಗೆ ಹೇಳಿದನು, 'ಈಗ ಯಜ್ಞದ ಕೆಲಸ ಆರಂಭಿಸಲು ಚೈತ್ರಮಾಸವು ಕಳೆಯಿತು, ನಾವು ಇರೋಣವೆಂದರೆ ಇನ್ನೂ ಹನ್ನೊಂದು ತಿಂಗಳು ಇರುವುದು, ಯಜ್ಞ ಆರಂಬವಾಗುವಾಗ ನೀವು ನಮ್ಮನ್ನು ಕರೆಸಿದರೆ ಆ ಕಾರ್ಯಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನೂ ತೆಗೆದುಕೊಂಡು ಬರುತ್ತೇವೆ.'(ಎಂದನು)
  • (ಪದ್ಯ - ೧೮)

ಪದ್ಯ - ೧೯[ಸಂಪಾದಿಸಿ]

ರಾಯ ನೀಂ ಕರೆಸಿದೊಡೆ ನಿನ್ನಯ ಮಹಾಧ್ವರ ಸ |
ಹಾಯಕೆ ಸಮಸ್ತವಸ್ತುವನಖಿಳ ಯಾದವ ನಿ |
ಕಾಯಮಂ ಕೂಡಿಕೊಂಡೈತಪ್ಪೆವನ್ನೆಗಂ ಸುಯ್ದಾನದಿಂ ಹಯವನು ||
ಈ ಯೌವನಾಶ್ವಭೂಪತಿಸಹಿತ ಕಾವುದೆಂ |
ದಾ ಯಮಸುತಾದಿಗಳನಂದು ಬೀಳ್ಕೊಂಡು ಕಮ ||
ಲಾಯತಾಕ್ಷಂ ಬಂಧುಕೃತ್ಯದಿಂ ದ್ವಾರಕಾಪುರಕೆ ಬಿಜಯಂಗೈದನು ||19||

ಪದವಿಭಾಗ-ಅರ್ಥ:
ರಾಯ ನೀಂ ಕರೆಸಿದೊಡೆ ನಿನ್ನಯ ಮಹಾಧ್ವರ ಸಹಾಯಕೆ= ರಾಜನೇ ನೀನು ಕರೆಸಿದರೆ ನಿನ್ನ ಮಹಾಯಜ್ಞದ ಸಹಾಯಕ್ಕೆ,

ಸಮಸ್ತವಸ್ತುವನು ಅಖಿಳ ಯಾದವ ನಿಕಾಯಮಂ ಕೂಡಿಕೊಂಡು ಐತಪ್ಪೆವು= ಸಮಸ್ತವಸ್ತುಗಳನ್ನೂ ಎಲ್ಲಾ ಯಾದವ ಸಮೂಹವನ್ನೂ ಕೂಡಿಕೊಂಡು ಬರುವೆವು, ಅನ್ನೆಗಂ ಸುಯ್ದಾನದಿಂ= ಅಲ್ಲಿಯವರೆಗೆ ಎಚ್ಚಿಕೆಯಿಂದ, ಹಯವನು ಈ ಯೌವನಾಶ್ವಭೂಪತಿ ಸಹಿತ ಕಾವುದು ಎಂದು ಆ ಯಮಸುತ ಆದಿಗಳನು ಅಂದು ಬೀಳ್ಕೊಂಡು= ಅಶ್ವವನ್ನೂ ಈ ಯೌವನಾಶ್ವಭೂಪತಿಯ ಸಹಿತ ರಕ್ಷಿಸಬೇಕು, ಎಂದು ಆ ಯಮಸುತ ಆದಿಗಳನು ಅಂದು ಬೀಳ್ಕೊಂಡು ಕಮಲಾಯತಾಕ್ಷಂ ಬಂಧುಕೃತ್ಯದಿಂ ದ್ವಾರಕಾಪುರಕೆ ಬಿಜಯಂಗೈದನು= ಎಂದು ಆ ಧರ್ಮಜ ಮೊದಲಾದವರನ್ನು ಅಂದು ಬೀಳ್ಕೊಂಡು ಕೃಷ್ಣನು ಬಂಧುವಾಗಿ ತನ್ನ ಕರ್ತವ್ಯ ಮಾಡಿ ದ್ವಾರಕಾಪುರಕ್ಕೆ ಹೋದನು.

  • ತಾತ್ಪರ್ಯ : ರಾಜನೇ ನೀನು ಕರೆಸಿದರೆ ನಿನ್ನ ಮಹಾಯಜ್ಞದ ಸಹಾಯಕ್ಕೆ, ಸಮಸ್ತವಸ್ತುಗಳನ್ನೂ ಎಲ್ಲಾ ಯಾದವ ಸಮೂಹವನ್ನೂ ಕೂಡಿಕೊಂಡು ಬರುವೆವು, ಅಲ್ಲಿಯವರೆಗೆ ಎಚ್ಚಿಕೆಯಿಂದ, ಅಶ್ವವನ್ನೂ ಈ ಯೌವನಾಶ್ವಭೂಪತಿಯ ಸಹಿತ ರಕ್ಷಿಸಬೇಕು, ಎಂದು ಆ ಧರ್ಮಜ ಮೊದಲಾದವರನ್ನು ಅಂದು ಬೀಳ್ಕೊಂಡು ಕೃಷ್ಣನು ಬಂಧುವಾಗಿ ತನ್ನ ಕರ್ತವ್ಯ ಮಾಡಿ ದ್ವಾರಕಾಪುರಕ್ಕೆ ಹೋದನು.
  • (ಪದ್ಯ - ೧೯)

ಪದ್ಯ - ೨೦[ಸಂಪಾದಿಸಿ]

ಇತ್ತಲವನಿಪನಸುರಹರನ ಕಳುಹಿದ ಚಿಂತೆ |
ಗಿತ್ತು ನಿಜಬುದ್ದಿಯೆಂ ಮುಂದರಿಯದಿರೆ ಬಂದು |
ಮತ್ತೆ ವೇದವ್ಯಾಸಮುನಿ ತಿಳುಹಲಮಲಮಂಟಪವನೋಜೆಯೊಳು ರಚಿಸಿ ||
ತತ್ತುರಗಮಂ ನಿಲಿಸಿ ಬಳಿಕ ಕಾವಲ್ಗೆ ರಥ |
ಮತ್ತಗಜ ಹಯ ಪದಾತಿಗಳ ಸಂದೋಹಮಂ |
ಸುತ್ತಲುಂಪರುಠವಿಸಿ ಕೇಳ್ದನಾ ಋಷಿಯೊಳ್ ಮರುತ್ತನೃಪತಿಯ ಕಥೆಯನು ||20||

ಪದವಿಭಾಗ-ಅರ್ಥ:
ಇತ್ತಲು ಅವನಿಪನು ಅಸುರಹರನ ಕಳುಹಿದ ಚಿಂತೆಗೆ ಇತ್ತು ನಿಜಬುದ್ದಿಯೆಂ= [ಈ ಕಡೆ ರಾಜನು ಕೃಷ್ಣನನ್ನು ಕಳುಹಿಸಿದ ಚಿಂತೆಗೆ ತನ್ನ ಬುದ್ಧಿಯನ್ನು ಚಿಂತೆಗೆ ಈಡುಮಾಡಿ,] ಮುಂದೆ ಅರಿಯದಿರೆ= [ಮುಂದೆ ಎನು ಮಾಡಬೇಕೆಂದು ತೋಚದಿರಲು,] ಬಂದು ಮತ್ತೆ ವೇದವ್ಯಾಸಮುನಿ ತಿಳುಹಲು= [ಮತ್ತೆ ವೇದವ್ಯಾಸಮುನಿಯು ಬಂದು ಮುಂದಿನ ಕಾರ್ಯವನ್ನು ತಿಳಿಸಲು,] ಅಮಲಮಂಟಪವನು ಓಜೆಯೊಳು(ಶಾಸ್ತ್ರದಂತೆ) ರಚಿಸಿ ತತ್ ತುರಗಮಂ ನಿಲಿಸಿ=[ಶಾಸ್ತ್ರದಂತೆ ಯಾಗಶಾಲೆಯನ್ನು ರಚಿಸಿ,ಆ ಕುದುರೆಯನ್ನು ಅಲ್ಲಿ ನಿಲ್ಲಿಸಿ], ಬಳಿಕ ಕಾವಲ್ಗೆ ರಥ ಮತ್ತಗಜ ಹಯ ಪದಾತಿಗಳ ಸಂದೋಹಮಂ ಸುತ್ತಲುಂ ಪರುಠವಿಸಿ= [ಬಳಿಕ ಕಾವಲಿಗೆ ರಥ ಮತ್ತಗಜ ಕುದುರೆ ಪದಾತಿಗಳ ಸೈನ್ಯವನ್ನು ಸುತ್ತಲೂ ಕಾವಲಿಟ್ಟು], ಕೇಳ್ದನು ಆ ಋಷಿಯೊಳ್ ಮರುತ್ತನೃಪತಿಯ ಕಥೆಯನು= ಆ ಋಷಿಯಿಂದ ಮರುತ್ತರಾಜನ ಕಥೆಯನ್ನು ಕೇಳಿದನು.
  • ತಾತ್ಪರ್ಯ :ಈ ಕಡೆ ರಾಜನು ಕೃಷ್ಣನನ್ನು ಕಳುಹಿಸಿದ ಚಿಂತೆಗೆ ತನ್ನ ಬುದ್ಧಿಯನ್ನು ಚಿಮತೆಗೆ ಈಡುಮಾಡಿ, ಮುಂದೆ ಎನು ಮಾಡಬೇಕೆಂದು ತೋಚದಿರಲು, ಮತ್ತೆ ವೇದವ್ಯಾಸಮುನಿಯು ಬಂದು ಮುಂದಿನ ಕಾರ್ಯವನ್ನು ತಿಳಿಸಲು, ಶಾಸ್ತ್ರದಂತೆ ಯಾಗಶಾಲೆಯನ್ನು ರಚಿಸಿ,ಆ ಕುದುರೆಯನ್ನು ಅಲ್ಲಿ ನಿಲ್ಲಿಸಿ, ಬಳಿಕ ಕಾವಲಿಗೆ ರಥ ಮತ್ತಗಜ ಕುದುರೆ ಪದಾತಿಗಳ ಸೈನ್ಯವನ್ನು ಸುತ್ತಲೂ ಕಾವಲಿಟ್ಟು,ಆ ಋಷಿಯಿಂದ ಮರುತ್ತರಾಜನ ಕಥೆಯನ್ನು ಕೇಳಿದನು.
  • (ಪದ್ಯ - ೨೦)

ಪದ್ಯ - ೨೧[ಸಂಪಾದಿಸಿ]

ವಿಧುಕುಲಲಲಾಮ ಕೇಳ್ ಧರ್ಮಸುತನಾ ತಪೋ |
ನಿಧಿಗೆ ಕೈಮುಗಿದು ಬೆಸಗೊಂಡಂ ಮರುತ್ತನೃಪ |
ನಧಿಕತರ ಯಾಗಮನದಾವ ಋಷಿಮುಖದಿಂದಮಂದು ವಿರಚಿಸಿದನದರ ||
ವಿಧಿಯಂ ತನಗೆ ಪೇಳ್ವುದೆನೆ ಬಾದರಾಯಣಂ |
ಮಧುರೋಕ್ತಿಯಿಂದವನಿಪತಿಗೆ ವಿಸ್ತರಿಸಿದಂ |
ಬುಧಜನಪ್ರೀತಿಕರಮಾಗಲಾ ರಾಯನ ಮಹಾಕ್ರತುವನೀ ಕ್ರಮದೊಳು ||21||

ಪದವಿಭಾಗ-ಅರ್ಥ:
ವಿಧುಕುಲಲಲಾಮ ಕೇಳ್= ಚಂದ್ರಕುಲ ಶ್ರೇಷ್ಠನಾದ ಜನಮೇಜಯನೇ ಕೇಳು, ಧರ್ಮಸುತನು ಆ ತಪೋನಿಧಿಗೆ ಕೈಮುಗಿದು ಬೇಸಗೊಂಡಂ= [ಧರ್ಮಜನು ಆ ತಪೋನಿಧಿಗೆ ಕೈಮುಗಿದು ಕೇಳಿಕೊಂಡನು], ಮರುತ್ತನೃಪನು ಅಧಿಕತರ ಯಾಗಮನು ಅದಾವ ಋಷಿಮುಖದಿಂದಂ ಅಂದು ವಿರಚಿಸಿದನು ಅದರ ವಿಧಿಯಂ ತನಗೆ ಪೇಳ್ವುದು ಎನೆ= [ಮರುತ್ತರಾಜನು ಅಧಿಕತರ ಯಾಗವನ್ನು ಯಾವ ಋಷಿಮುಖದಿಂದ ಅಂದು ಮಾಡಿದನು ಅದರ ಕ್ರಮವನ್ನು ತನಗೆ ಹೇಳಬೇಕು ಎನ್ನಲು], ಬಾದರಾಯಣಂ ಮಧುರೋಕ್ತಿಯಿಂದ ಅವನಿಪತಿಗೆ ವಿಸ್ತರಿಸಿದಂ ಬುಧಜನ(ಪಂಡಿತರು) ಪ್ರೀತಿಕರಂ ಆಗಲು ಆ ರಾಯನ ಮಹಾಕ್ರತುವನು ಈ ಕ್ರಮದೊಳು= [ಪಂಡಿತರಿಗೆ ಇಷ್ಟವಾಗುವಂತೆ ಆ ರಾಜನ ಮಹಾಯಜ್ಞವನ್ನು ಈ ಕ್ರಮದಲ್ಲಿ ಬಾದರಾಯಣನು ಮಧುರವಾದ ಮಾತುಗಳಿಂದ ಧರ್ಮಜನಿಗೆ ವಿವರಿಸಿದನು].
  • ತಾತ್ಪರ್ಯ :ಚಂದ್ರಕುಲ ಶ್ರೇಷ್ಠನಾದ ಜನಮೇಜಯನೇ ಕೇಳು, ಧರ್ಮಜನು ಆ ತಪೋನಿಧಿಗೆ ಕೈಮುಗಿದು ಈರೀತಿ ಕೇಳಿಕೊಂಡನು. ಮರುತ್ತರಾಜನು ದೊಡ್ಡ ಯಾಗವನ್ನು ಯಾವ ಋಷಿಮುಖದಿಂದ ಅಂದು ಮಾಡಿದನು ಅದರ ಕ್ರಮವನ್ನು ತನಗೆ ಹೇಳಬೇಕು ಎನ್ನಲು, ಪಂಡಿತರಿಗೆ ಇಷ್ಟವಾಗುವಂತೆ ಆ ರಾಜನ ಮಹಾಯಜ್ಞವನ್ನು ಬಾದರಾಯಣನು ಮಧುರವಾದ ಮಾತುಗಳಿಂದ ಧರ್ಮಜನಿಗೆ ಈ ಕ್ರಮದಲ್ಲಿ ವಿವರಿಸಿದನು.
  • (ಪದ್ಯ - ೨೧)

ಪದ್ಯ - ೨೨[ಸಂಪಾದಿಸಿ]

ಆದೊಡೆ ನರೇಂದ್ರ ಕೇಳಾದಿಯುಗದಲ್ಲಿ ವಿಮ |
ಲಾದಿತ್ಯವಂಶದೊಳ್ ಮೆರೆದರಿಕ್ಷ್ವಾಕು ಮೊದ |
ಲಾದವರ್ ಧರ್ಮ ಕೀರ್ತಿ ಪ್ರತಾಪಂಗಳಿಂದವರ ಪಾರಂಪರೆಯೊಳು ||
ಮೇದಿನೀಪತಿ ಕರಂಧಮನೆಂಬವಂ ಸಕಲ |
ಭೂದೇವಕುಲದೊಳುದ್ದಾಮನೆನಿಪಂಗಿರನ |
ನಾದರಿಸಿ ವರಿಸಿ ಹಯಮೇಧಶತಮಂ ಮಾಡಿ ಸುರಪದವಿಯಂ ಪಡೆದನು ||22||

ಪದವಿಭಾಗ-ಅರ್ಥ:
ಆದೊಡೆ ನರೇಂದ್ರ ಕೇಳು ಆದಿಯುಗದಲ್ಲಿ= [ಹಾಗಿದ್ದರೆ ಕೇಳು ಕೃತಯುಗದಲ್ಲಿ], ವಿಮಲಾದಿತ್ಯವಂಶದೊಳ್ ಮೆರೆದರು ಇಕ್ಷ್ವಾಕು ಮೊದಲಾದವರ್ ಧರ್ಮ ಕೀರ್ತಿ ಪ್ರತಾಪಂಗಳಿಂದ= [ಸೂರ್ಯ ವಂಶದಲ್ಲಿ ಇಕ್ಷ್ವಾಕು ಮೊದಲಾದವರು ಧರ್ಮ ಕೀರ್ತಿ ಪ್ರತಾಪಂಗಳಿಂದ ಪ್ರಸಿದ್ಧರಾದರು], ಅವರ ಪಾರಂಪರೆಯೊಳು ಮೇದಿನೀಪತಿ ಕರಂಧಮನೆಂಬವಂ= [ಅವರ ಪರಂಪರೆಯಲ್ಲಿ ಚಕ್ರವರ್ತಿ ಕರಂಧಮನೆಂಬವನು], ಸಕಲ ಭೂದೇವಕುಲದೊಳು ಉದ್ದಾಮನು ಎನಿಪ ಅಂಗಿರನನು ಆದರಿಸಿ ವರಿಸಿ= [ಸಕಲ ಭೂಮಿ ದೇವತೆಗಳ ಕುಲದಲ್ಲಿ ಶ್ರೇಷ್ಠನು ಎಂಬ ಹೆಸರುಳ್ಳ ಅಂಗಿರನನು/ ಆಂಗೀರಸನು ಆದರದಿಂದ ಬಯಸಿ/ ಇಷ್ಟಪಟ್ಟು], ಹಯಮೇಧಶತಮಂ ಮಾಡಿ ಸುರಪದವಿಯಂ ಪಡೆದನು= ನೂರು ಅಶ್ವಮೇಧ ಯಾಗ ಮಾಡಿ ಇಂದ್ರತ್ವವನ್ನು ಪಡೆದನು.
  • ತಾತ್ಪರ್ಯ :ಹಾಗಿದ್ದರೆ ಕೇಳು ಕೃತಯುಗದಲ್ಲಿ, ಸೂರ್ಯ ವಂಶದಲ್ಲಿ ಇಕ್ಷ್ವಾಕು ಮೊದಲಾದವರು ಧರ್ಮ ಕೀರ್ತಿ ಪ್ರತಾಪಂಗಳಿಂದ ಪ್ರಸಿದ್ಧರಾದರು, ಅವರ ಪರಂಪರೆಯಲ್ಲಿ ಚಕ್ರವರ್ತಿ ಕರಂಧಮನೆಂಬವನು ಸಕಲ ಭೂಮಿ ದೇವತೆಗಳ ಕುಲದಲ್ಲಿ ಶ್ರೇಷ್ಠನು ಎಂಬ ಹೆಸರುಪಡೆದ ಆಂಗೀರಸನು ಆದರದಿಂದ ಬಯಸಿ/ ಇಷ್ಟಪಟ್ಟು, ನೂರು ಅಶ್ವಮೇಧ ಯಾಗ ಮಾಡಿ ಇಂದ್ರತ್ವವನ್ನು ಪಡೆದನು.
  • (ಪದ್ಯ - ೨೨)

ಪದ್ಯ - ೨೩[ಸಂಪಾದಿಸಿ]

ಆ ಕರಂಧಮನ ಸುತನಾವಿಕ್ಷಿಯೆಂಬ ವಸು |
ಧಾಕಾಂತನಾತನಿಂದುದಯಿಸಿ ಮರುತ್ತಂ ತ್ರಿ |
ಲೋಕವಿಖ್ಯಾತನಾದಂ ಪಗೆಗಳಂ ಗೆಲ್ವೆಡೆಯೊಳುಸುರ್ವಿಡುತಿರಲ್ಕೆ ||
ವ್ಯಾಕೀರ್ಣ ಚಾತುರ್ಬಲಂ ಪುಟ್ಟುತಿಹುದವಂ |
ಬೇಕೆಂದಕಡೆ ಸಾಧ್ಯಮಾಗಿ ಬಹುದೀಧರೆಯ |
ನೇಕಾಧೀಪತ್ಯದಿಂದಾಳ್ದನಂದಮಲಧರ್ಮದ ಮೇರೆ ತಪ್ಪದಂತೆ ||23||

ಪದವಿಭಾಗ-ಅರ್ಥ:
ಆ ಕರಂಧಮನ ಸುತನು ಅವಿಕ್ಷಿಯೆಂಬ ವಸುಧಾಕಾಂತನು= [ಆ ಕರಂಧಮನ ಮಗನು ಅವಿಕ್ಷಿಯೆಂಬ ರಾಜನು], ಆತನಿಂದುದಯಿಸಿ ಮರುತ್ತಂ ತ್ರಿಲೋಕವಿಖ್ಯಾತನಾದಂ= [ಆತನಿಂದ ಹುಟ್ಟಿದ ಮರುತ್ತನು ತ್ರಿಲೋಕವಿಖ್ಯಾತನಾದನು].ಪಗೆಗಳಂ ಗೆಲ್ವೆಡೆಯೊಳು ಅಸುರ್ವಿಡುತಿರಲ್ಕೆ(ಉಸಿರುಬಿಡುವಾಗ) ವ್ಯಾಕೀರ್ಣ ಚಾತುರ್ಬಲಂ ಪುಟ್ಟುತಿಹುದು ಅವಂ ಬೇಕೆಂದಕಡೆ ಸಾಧ್ಯಮಾಗಿ ಬಹುದು= [ಅವನು ಶತ್ರುಗಳನ್ನು ಗೆಲ್ಲುವಾಗ ಬಯಸಿದ ಸ್ಥಳದಲ್ಲಿ (ಕ್ಷಣಮಾತ್ರದಲ್ಲಿ ಎಂದು ಭಾವ)ವಿಶಾಲ ಚತುರಂಗ ಸೈನ್ಯವೇ ಉಸಿರುಬಿಡುವಷ್ಟರಲ್ಲಿ ಹುಟ್ಟಿ ಬರುತ್ತಿತ್ತು], ಈ ಧರೆಯನು ಏಕಾಧೀಪತ್ಯದಿಂದ ಆಳ್ದನು ಅಂದು ಅಮಲಧರ್ಮದ ಮೇರೆ ತಪ್ಪದಂತೆ= [ಈ ಭೂಮಿಯನ್ನು ಏಕಾಧೀಪತ್ಯದಿಂದ ಅವನು ಆಕಾಲದಲ್ಲಿ ಪರಿಶುದ್ಧ ಧರ್ಮದಲ್ಲಿ ಮಿತಿ ತಪ್ಪದಂತೆ ಆಳಿದನು.]
  • ತಾತ್ಪರ್ಯ : ಆ ಕರಂಧಮನ ಮಗನು ಅವಿಕ್ಷಿಯೆಂಬ ರಾಜನು. ಆತನಿಂದ ಹುಟ್ಟಿದ ಮರುತ್ತನು ತ್ರಿಲೋಕವಿಖ್ಯಾತನಾದನು. ಅವನು ಶತ್ರುಗಳನ್ನು ಗೆಲ್ಲುವಾಗ ಬಯಸಿದ ಸ್ಥಳದಲ್ಲಿ (ಕ್ಷಣಮಾತ್ರದಲ್ಲಿ ಎಂದು ಭಾವ)ವಿಶಾಲ ಚತುರಂಗ ಸೈನ್ಯವೇ ಉಸಿರುಬಿಡುವಷ್ಟರಲ್ಲಿ ಹುಟ್ಟಿ ಬರುತ್ತಿತ್ತು, ಈ ಭೂಮಿಯನ್ನು ಅವನು ಆಕಾಲದಲ್ಲಿ ಪರಿಶುದ್ಧ ಧರ್ಮದಲ್ಲಿ ಮಿತಿ ತಪ್ಪದಂತೆ ಏಕಾಧೀಪತ್ಯದಿಂದ ಆಳಿದನು.
  • (ಪದ್ಯ - ೨೩)

ಪದ್ಯ - ೨೪[ಸಂಪಾದಿಸಿ]

ಪ್ರಾಜ್ಯವೈಭವದಿಂದೆ ರಂಜಿಸುವ ಧರೆಯ ಸಾ |
ಮ್ರಾಜ್ಯಧಿಪತ್ಯದ ಮಹಾಧನಂ ಸುರವಿಪ್ರ |
ಭೋಜ್ಯಮಪ್ಪವೊಲಾ ನೃಪಾಲಕಂ ತುರುಗಮೇಧಾಧ್ವರದ ಮಾಳ್ಕೆಗೆಳಸಿ ||
ಯಾಜ್ಯಯಾಜನಕೆ ವರಿಸುಪೊಡಂಗಿರನ ಸುತಂ |
ಪೂಜ್ಯನೆಮ್ಮೀಕುಲದವರ್ಗೆಂಬ ನಿಶ್ಚಯದೊ |
ಳಾಜ್ಯಪರ್ಗಾಚಾರ್ಯನಾಗಿಹ ಬೃಹಸ್ಪತಿಯ ಪೊರೆಗೆ ಬಂದಿತೆಂದನು ||24||

ಪದವಿಭಾಗ-ಅರ್ಥ:
ಪ್ರಾಜ್ಯ(ಶ್ರೇಷ್ಠ)ವೈಭವದಿಂದೆ ರಂಜಿಸುವ ಧರೆಯ ಸಾಮ್ರಾಜ್ಯಧಿಪತ್ಯದ ಮಹಾಧನಂ= [ಅತ್ಯುತ್ತಮ ವೈಭವದಿಂದ ಶೋಭಿಸುವ ಭೂಮಿಯ ಸಾಮ್ರಾಜ್ಯ ಆಧಿಪತ್ಯದಲ್ಲಿರುವ ದೊಡ್ಡ ಸಂಪತ್ತು], ಸುರವಿಪ್ರ ಭೋಜ್ಯಮ್ ಅಪ್ಪವೊಲು= [ಸುರರಿಗೂ ವಿಪ್ರರಿಗೂ ಸ್ವೀಕರಿಸಲು ಆಗುವಂತೆ], ಆ ನೃಪಾಲಕಂ ತುರುಗಮೇಧ ಆಧ್ವರದ ಮಾಳ್ಕೆಗೆ ಎಳಸಿ=[ಆ ರಾಜನು ಅಶ್ವಮೇಧ ಆಧ್ವರವನ್ನು ಮಾಡಲು ಉದ್ದೇಶಪಟ್ಟು ] ಯಾಜ್ಯಯಾಜನಕೆ ವರಿಸುಪೊಡೆ ಅಂಗಿರನ ಸುತಂ ಪೂಜ್ಯನು ಎಮ್ಮ ಈ ಕುಲದವರ್ಗೆ ಎಂಬ ನಿಶ್ಚಯದೊಳು=[ಯಜ್ಞಯಾಜನ ಮಾಡಿಸಲು ಒಪ್ಪಿದರೆ ಅಂಗಿರನ ಮಗ ಬ್ರಹಸ್ಪತಿಯು ಪೂಜ್ಯನು ತಮ್ಮ ಸೂರ್ಯವಂಶದವರಿಗೆ ಎಂದು ನಿಶ್ಚಯಿಸಿ], ಆಜ್ಯಪರ್ಗೆ(ದೇವತೆಗಳಿಗೆ) ಆಚಾರ್ಯನಾಗಿ ಇಹ ಬೃಹಸ್ಪತಿಯ ಪೊರೆಗೆ ಬಂದು ಇಂತೆಂದನು= [ದೇವತೆಗಳಿಗೆ ಆಚಾರ್ಯನಾಗಿ ಇರುವ ಬೃಹಸ್ಪತಿಯ ಬಳಿಗೆ ಬಂದು ಹೀಗೆ ಹೇಳಿದನು].
  • ತಾತ್ಪರ್ಯ :ಅತ್ಯುತ್ತಮ ವೈಭವದಿಂದ ಶೋಭಿಸುವ ಭೂಮಿಯ ತನ್ನ ಸಾಮ್ರಾಜ್ಯ ಆಧಿಪತ್ಯದಲ್ಲಿರುವ ದೊಡ್ಡ ಸಂಪತ್ತು, ಯಜ್ಞದ ಮೂಲಕ ಸುರರಿಗೂ, ದಾನದ ಮೂಲಕ ವಿಪ್ರರಿಗೂ ಸ್ವೀಕರಿಸಲು ಆಗುವಂತೆ, ಆ ರಾಜನು ಅಶ್ವಮೇಧ ಆಧ್ವರವನ್ನು ಮಾಡಲು ಉದ್ದೇಶಪಟ್ಟು, ತಮ್ಮ ಸೂರ್ಯವಂಶದವರಿಗೆ ಯಜ್ಞಯಾಜನ ಮಾಡಿಸಲು ಒಪ್ಪಿದರೆ ಅಂಗಿರನ ಮಗ ಬ್ರಹಸ್ಪತಿಯು ಪೂಜ್ಯನು ಎಂದು ನಿಶ್ಚಯಿಸಿ, ದೇವತೆಗಳಿಗೆ ಆಚಾರ್ಯನಾಗಿ ಇರುವ ಬೃಹಸ್ಪತಿಯ ಬಳಿಗೆ ಬಂದು ಹೀಗೆ ಹೇಳಿದನು.
  • (ಪದ್ಯ - ೨೪)

ಪದ್ಯ - ೨೫[ಸಂಪಾದಿಸಿ]

ಎಲೆ ಬೃಹಸ್ಪತಿ ಮತ್ಪಿತಾಮಹಂ ಕ್ರತುಗಳ್ಗೆ |
ಸಲೆ ನಿನ್ನ ತಾತನಂ ವರಿಸಿರ್ವನದರಿಂದೆ |
ಕುಲಧರ್ಮಮಂ ಬಿಡದೆ ನೀನೆನಗೆ ಯಜ್ಞಮಂ ಮಾಡಿಸೆನಲವನೊಪ್ಪಲು ||
ಬಲರಿಪು ಕನಲ್ದು ಮಾನವರ ಮಖಯಾಜನಂ |
ಪೊಲೆ ಸುರರ್ಗುಚಿತಮಲ್ಲೆಂದು ಗುರುವಂ ತಡೆದು |
ನಿಲಿಸಲಾ ನೃಪತಿ ಭಂಗಿತನಾಗಿ ಬರುತೆ ನಾರದಮುನಿಪನಂ ಕಂಡನು ||25||

ಪದವಿಭಾಗ-ಅರ್ಥ:
ಎಲೆ ಬೃಹಸ್ಪತಿ ಮತ್ ಪಿತಾಮಹಂ ಕ್ರತುಗಳ್ಗೆ ಸಲೆ ನಿನ್ನ ತಾತನಂ ವರಿಸಿರ್ವನು ಅದರಿಂದೆ ಕುಲಧರ್ಮಮಂ ಬಿಡದೆ ನೀನೆನಗೆ ಯಜ್ಞಮಂ ಮಾಡಿಸು ಎನಲು= [ಮಾನ್ಯ ಬೃಹಸ್ಪತಿ ನನ್ನ ಪಿತಾಮಹ/ ಅಜ್ಜನು ಯಜ್ಞಗಳಿಗೆ ಹೆಚ್ಚಾಗಿ ನಿನ್ನ ತಾತನಾದ ಆಂಗೀರಸನನ್ನು ಅವಲಂಬಿಸಿದ್ದನು. ಆದ್ದರಿಂದ ಕುಲಧರ್ಮವನ್ನು ಬಿಡದೆ ನೀನು ನನಗೆ ಯಜ್ಞವನ್ನು ಮಾಡಿಸು ಎನ್ನಲು] ಅವಂವನೊಪ್ಪಲು ಬಲರಿಪು ಕನಲ್ದು ಮಾನವರ ಮಖಯಾಜನಂ=[ಅವನು ಒಪ್ಪಲು, ಬಲರಿಪು (ಬಲಿಯ ಶತ್ರು?)= [ಇಂದ್ರನು ಸಿಟ್ಟುಗೊಡು ಮಾನವರ ಯಜ್ಞ ಯಾಜನವು], ಪೊಲೆ ಸುರರ್ಗುಚಿತಮಲ್ಲೆಂದು ಗುರುವಂ ತಡೆದು ನಿಲಿಸಲು ಆ ನೃಪತಿ ಭಂಗಿತನಾಗಿ ಬರುತೆ ನಾರದಮುನಿಪನಂ ಕಂಡನು= [ ಸುರರಿಗೆ ಉಚಿತವಲ್ಲ, ತ್ಯಾಜ್ಯವು, ಎಂದು ಗುರುವನ್ನು ತಡೆದು ನಿಲ್ಲಸಲು ಆ ರಾಜನು ಅವಮಾನಿತನಾಗಿ ಬರುತ್ತಿರಲು ನಾರದಮುನಿಯನ್ನು ದಾರಿಯಲ್ಲಿ ಕಂಡನು].
  • ತಾತ್ಪರ್ಯ : ಮರುತ್ತನು, ಮಾನ್ಯ ಬೃಹಸ್ಪತಿಯೇ ನನ್ನ ಪಿತಾಮಹ/ ಅಜ್ಜ ಕರಂದಮನು ಯಜ್ಞಗಳಿಗೆ ಹೆಚ್ಚಾಗಿ ನಿನ್ನ ತಾತನಾದ ಆಂಗೀರಸನನ್ನು ಅವಲಂಬಿಸಿದ್ದನು. ಆದ್ದರಿಂದ ಕುಲಧರ್ಮವನ್ನು ಬಿಡದೆ ನೀನು ನನಗೆ ಯಜ್ಞವನ್ನು ಮಾಡಿಸು ಎನ್ನಲು ಅವನು ಒಪ್ಪಲು,ಇಂದ್ರನು ಸಿಟ್ಟುಗೊಡು ಮಾನವರ ಯಜ್ಞ ಯಾಜನವು ಸುರರಿಗೆ ಉಚಿತವಲ್ಲ, ತ್ಯಾಜ್ಯವು, ಎಂದು ಗುರುವನ್ನು ತಡೆದು ನಿಲ್ಲಸಲು ಆ ರಾಜನು ಅವಮಾನಿತನಾಗಿ ಬರುತ್ತಿರಲು ನಾರದಮುನಿಯನ್ನು ದಾರಿಯಲ್ಲಿ ಕಂಡನು.
  • (ಪದ್ಯ - ೨೫)IIXX

ಪದ್ಯ - ೨೬[ಸಂಪಾದಿಸಿ]

ದುಗುಡದಿಂದಾನೃಪಂ ನಾರದಂಗೆರಗೆ ನಸು |
ನುಗುತಿದೇನೆಲೆ ರಾಯ ನಿನಗೆ ದುಮ್ಮಾನಮೆನೆ |
ಮಿಗೆ ಬೃಹಸ್ಪತಿ ತನಗೆ ಮಾಡಿದವಮಾನಮಂ ಪೇಳ್ದತಿವಿರಕ್ತಿಯಿಂದೆ ||
ನಗರಮಂ ಪುಗದರಣ್ಯದೊಳುಗ್ರತಪದಿಂದೆ |
ಜಗದೊಳುತ್ಕೃಷ್ಟಪದಮಂ ಪಡೆವೆನೆನೆ ಕೇಳ್ದು |
ವಿಗಡಮುನಿವರನಾಗಳಾ ಮಹೀಪಾಲನಂ ಸಂತೈಸುತಿಂತೆಂದನು ||26||

ಪದವಿಭಾಗ-ಅರ್ಥ:
ದುಗುಡದಿಂದ ಆ ನೃಪಂ ನಾರದಂಗೆ ಎರಗೆ= [ದುಃಖದಿಂದ ಆ ರಾಜನು ನಾರದನಿಗೆ ನಮಿಸಲು], (ಅವನು) ನಸುನುಗುತ ಇದೇನು ಎಲೆ ರಾಯ ನಿನಗೆ ದುಮ್ಮಾನಂ ಎನೆ=[ಅವನು ನಸುನುಗುತ ಇದೇನು ಎಲೆ ರಾಯ ನಿನಗೆ ಏನಾಗಿದೆ, ದುಃಖಿತನಾಗಿರುವೆ ಎನಲು], ಮಿಗೆ ಬೃಹಸ್ಪತಿ ತನಗೆ ಮಾಡಿದವಮಾನಮಂ ಪೇಳ್ದು ಅತಿವಿರಕ್ತಿಯಿಂದೆ= [ಬೃಹಸ್ಪತಿ ತನಗೆ ಬಹಳ ಮಾಡಿದವಮಾನವನ್ನು ಹೇಳಿ, ಅತಿಯಾದ ನಿರಾಸೆ- ವಿರಕ್ತಿಯಿಂದ]. ನಗರಮಂ ಪುಗದೆ ಅರಣ್ಯದೊಳು ಉಗ್ರತಪದಿಂದೆ ಜಗದೊಳು ಉತ್ಕೃಷ್ಟ ಪದಮಂ ಪಡೆವೆನೆನೆ=[ತನ್ನ ನಗರಕ್ಕೆ ಹೋಗದೆ ಅರಣ್ಯದಲ್ಲಿ ಉಗ್ರತಪದಿಂದ ಜಗದಲ್ಲಿ ಉತ್ಕೃಷ್ಟ ಪದವನ್ನು ಪಡೆವೆನು ಎನ್ನಲು], ಕೇಳ್ದು ವಿಗಡಮುನಿವರನು ಆಗಳಾ ಮಹೀಪಾಲನಂ ಸಂತೈಸುತ ಇಂತೆಂದನು= [ಆಗ ಆ ಪ್ರಚಂಡ ಮುನಿಸ್ರೇಷ್ಠನು ಕೇಳಿ ಮಹೀಪಾಲನಿಗೆ ಸಂತೈಸುತ್ತಾ ಹೀಗೆ ಹೇಳಿದನು ].
  • ತಾತ್ಪರ್ಯ : ದುಃಖದಿಂದ ಆ ರಾಜನು ನಾರದನಿಗೆ ನಮಿಸಲು, ಅವನು ನಸುನುಗುತ ಇದೇನು ಎಲೆ ರಾಯ ನಿನಗೆ ಏನಾಗಿದೆ, ದುಃಖಿತನಾಗಿರುವೆ ಎನ್ನಲು, ಬೃಹಸ್ಪತಿಯು ತನಗೆ ಬಹಳ ಮಾಡಿದ ಅವಮಾನವನ್ನು ಹೇಳಿ, ಅತಿಯಾದ ನಿರಾಸೆ- ವಿರಕ್ತಿಯಿಂದ, ಇನ್ನು ತನ್ನ ನಗರಕ್ಕೆ ಹೋಗದೆ ಅರಣ್ಯದಲ್ಲಿ ಉಗ್ರತಪದಿಂದ ಜಗದಲ್ಲಿ ಉತ್ಕೃಷ್ಟ ಪದವನ್ನು ಪಡೆವೆನು ಎನ್ನಲು, ಕೇಳಿ ಆಗ ಆ ಪ್ರಚಂಡ ಮುನಿಸ್ರೇಷ್ಠನು ಮಹೀಪಾಲನಿಗೆ ಸಂತೈಸುತ್ತಾ ಹೀಗೆ ಹೇಳಿದನು.
  • (ಪದ್ಯ - ೨೬)

ಪದ್ಯ - ೨೭[ಸಂಪಾದಿಸಿ]

ಜನಪ ನಿನಗೆಚ್ಚರಿಪೆನಾದಿಯೊಳ್ ಪಂಕಜಾ |
ಸನನ ಮಾನಸಪುತ್ರನಾದನಂಗಿರನವನ |
ತನುಜರ್ ಬೃಹಸ್ಪತಿಯುಮಿನ್ನೊರ್ವ ಸಂವರ್ತನೆಂಬವಂ ಬಳಿಕವರ್ಗೆ ||
ದಿನದಿನಕೆ ದಾಯಾದಮತ್ಸರಂ ಪೆರ್ಚುತಿರೆ |
ಮನೆವಾಳ್ತೆಯೊಳ್ ಪಸುಗೆಯಂ ಕುಡದೆ ಗುರು ತಗು |
ಳ್ದನುಜನಂ ಪೊರಮಡಿಸೆ ಕಾಶೀಯೊಳ್ ಪೋಗಿರ್ಪನಾತನವಧೂತನಾಗಿ ||27||

ಪದವಿಭಾಗ-ಅರ್ಥ:
ಜನಪ ನಿನಗೆ ಎಚ್ಚರಿಪೆನು= [ರಾಜನೇ ನಿನಗೆ ಎಚ್ಚರಿಕೆಯಿಂದ ಗಮನಿಸಬೇಕಾದ ಹೊಸ ವಿಷಯವನದ್ನು ಹೇಳುವೆನು], ಆದಿಯೊಳ್ ಪಂಕಜಾಸನನ ಮಾನಸಪುತ್ರನಾದ ಅನಂಗಿರನು ಅವನ ತನುಜರ್ ಬೃಹಸ್ಪತಿಯುಂ ಇನ್ನೊರ್ವ ಸಂವರ್ತನೆಂಬವಂ= [ಹಿಂದೆ ಕೃತಯುಗದಲ್ಲಿ ಬ್ರಹ್ಮನ ಮಾನಸಪುತ್ರನಾದ ಅನಂಗಿರನು ಜನಿಸಿದನು., ಅವನ ಮಕ್ಕಳು ಬೃಹಸ್ಪತಿಯು ಮತ್ತೊಬ್ಬ ಸಂವರ್ತನೆಂಬುವವನು] ಬಳಿಕವರ್ಗೆ ದಿನದಿನಕೆ ದಾಯಾದಮತ್ಸರಂ ಪೆರ್ಚುತಿರೆ= [ಬಳಿಕ ದಿನಗಳದಂತೆ ಅವರಲ್ಲಿ ದಿನದಿನಕ್ಕೂ ದಾಯಾದಮತ್ಸರವು ಹೆಚ್ಚಾಗಲು] ಮನೆವಾಳ್ತೆಯೊಳ್ ಪಸುಗೆಯಂ ಕುಡದೆ ಗುರು ತಗುಳ್ದು(ಜಗಳವಾಗಿ-ಹೊರತಳ್ಳಿ) ಅನುಜನಂ ಪೊರಮಡಿಸೆ= [ಮನೆಯ ಆಸ್ತಿಯಲ್ಲಿ ಹಿಸೆಯನ್ನು ಕೊಡದೆ ಗುರು ಬೃಹಸ್ಪತಿಯು ಮನೆಯಿಂದ ತಮ್ಮನನ್ನು ಹೊರತಳ್ಳಲು], ಕಾಶೀಯೊಳ್ ಪೋಗಿ ಇರ್ಪನು ಅತನು ಅವಧೂತನಾಗಿ= ಅವನು ಹೋಗಿ ಕಾಶೀಯಲ್ಲಿ ಅವಧೂತನಾಗಿದ್ದಾನೆ.
  • ತಾತ್ಪರ್ಯ : ರಾಜನೇ ನಿನಗೆ ಎಚ್ಚರಿಕೆಯಿಂದ ಗಮನಿಸಬೇಕಾದ ಹೊಸ ವಿಷಯವನದ್ನು ಹೇಳುವೆನು, ಹಿಂದೆ ಕೃತಯುಗದಲ್ಲಿ ಬ್ರಹ್ಮನ ಮಾನಸಪುತ್ರನಾದ ಅನಂಗಿರನು ಜನಿಸಿದನು. ಅವನ ಮಕ್ಕಳು ಬೃಹಸ್ಪತಿಯು ಮತ್ತೊಬ್ಬ ಸಂವರ್ತನೆಂಬುವವನು. ಬಳಿಕ ದಿನಗಳದಂತೆ ಅವರಲ್ಲಿ ದಿನದಿನಕ್ಕೂ ದಾಯಾದಮತ್ಸರವು ಹೆಚ್ಚಾಗಲು, ಮನೆಯ ಆಸ್ತಿಯಲ್ಲಿ ಭಾಗವನ್ನು ಕೊಡದೆ ಗುರು ಬೃಹಸ್ಪತಿಯು ತಮ್ಮನನ್ನು ಮನೆಯಿಂದ ಹೊರತಳ್ಳಲು, ಅವನು ಹೋಗಿ ಕಾಶೀಯಲ್ಲಿ ಅವಧೂತನಾಗಿದ್ದಾನೆ.
  • (ಪದ್ಯ - ೨೭)

ಪದ್ಯ - ೨೮[ಸಂಪಾದಿಸಿ]

ಆತನಂ ವರಿಸಿದೊಡೆ ಯಜ್ಞ ಮಾದಪುದು ನಿನ |
ಗೇತಕಿನ್ನೆಣಿಕೆ ನಡೆ ಕಾಶಿಕಾ ಪಟ್ಟಣದೊ |
ಳಾ ತಪೋನಿಧಿ ನಿನ್ನ ಕಣ್ಗೆ ಗೋಚರಿಸದಿರೆ ಪೊಳಲ ಪೆರ್ಬಾಗಿಲೊಳಗೆ ||
ಘಾತಿಯಾಗಿರ್ದ ಪೆಣನಂ ಬಿಸುಡಿಸದನಖಿಳ |
ಜಾತಿಗಳ್ ತುಳಿದು ಕೊಂಡೆಡೆಯಾಡುತಿರ್ಪುವವ |
ಧೂತನಾಗಿರ್ದವಂ ಕಂಡು ತೊಲಗಿದೊಡರಿದು ಬೆಂಬಿಡದೆ ಪೋಗೆಂದನು ||28||

ಪದವಿಭಾಗ-ಅರ್ಥ:
ಆತನಂ ವರಿಸಿದೊಡೆ ಯಜ್ಞ ಮಾದಪುದು ನಿನಗೇತಕೆ ಇನ್ನು ಎಣಿಕೆ=[ಆತನನ್ನು (ಸಂವರ್ತನನ್ನು) ನೀನು ಒಪ್ಪಿಸಿ ನಿನ್ನ ಯಾಜಕನನ್ನಾಗಿ ಮಾಡಿಕೊಂಡರೆ ಯಜ್ಞವು ಆಗುವುದು; ನಿನಗೆ ಇನ್ನು ಯೋಚನೆ ಏತಕ್ಕೆ?] ನಡೆ ಕಾಶಿಕೆ(ಗೆ) ಆ ಪಟ್ಟಣದೊಳು ಆ ತಪೋನಿಧಿ ನಿನ್ನ ಕಣ್ಗೆ ಗೋಚರಿಸದಿರೆ=[ನಡೆ ಕಾಶಿಗೆ, ಆ ಪಟ್ಟಣದೊಳು ಆ ತಪೋನಿಧಿ ನಿನ್ನ ಕಣ್ಣಿಗೆ ಕಾಣದಿದ್ದರೆ] ಪೊಳಲ ಪೆರ್ಬಾಗಿಲೊಳಗೆ= [ಪಟ್ಟಣದ ದೊಡ್ಡ ಬಾಗಿಲಲ್ಲಿ], ಘಾತಿಯಾಗಿರ್ದ ಪೆಣನಂ ಬಿಸುಡಿಸಿ ಅದನು ಅಖಿಳ ಜಾತಿಗಳ್ ತುಳಿದು ಕೊಂಡು ಎಡೆಯಾಡುತಿರ್ಪುವು=(ಪೆಟ್ಟಾಗಿ ಬಿದ್ದ ಹೆಣ್ಣವನ್ನು ಹಾಕಿದ್ದರೆ ಅದನ್ನು ಎಲ್ಲಾ ಜಾತಿಜನರೂ, ದಾಟಿಕೊಂಡು ಓಡಾಡುವರು,] ಅವಧೂತನು ಆಗಿರ್ದವಂ ಕಂಡು ತೊಲಗಿದೊಡೆ=[ಅವಧೂತನು ಆಗಿದ್ದವನು ಅದನ್ನು ಕಂಡು ಹಿಂತಿರುಗಿ ಹೋದರೆ] ಅರಿದು ಬೆಂಬಿಡದೆ ಪೋಗೆಂದನು= ಅದರಿಂದ ಇವನು ಸಂವರ್ತ ಅವಧೂತನೆಂದು ಅರಿತುಕೊಂಡು ನೀನಿ ಬೆನ್ನುಹತ್ತಿ ಹೋಗಹೋಗಬೇಕು.
  • ತಾತ್ಪರ್ಯ : ಆತನನ್ನು (ಸಂವರ್ತನನ್ನು) ನೀನು ಒಪ್ಪಿಸಿ ನಿನ್ನ ಯಾಜಕನನ್ನಾಗಿ ಮಾಡಿಕೊಂಡರೆ ಯಜ್ಞವು ಆಗುವುದು; ನಿನಗೆ ಇನ್ನು ಯೋಚನೆ ಏತಕ್ಕೆ? ನಡೆ ಕಾಶಿಗೆ, ಆ ಪಟ್ಟಣದಲ್ಲಿ ಆ ತಪೋನಿಧಿ ನಿನ್ನ ಕಣ್ಣಿಗೆ ಕಾಣದಿದ್ದರೆ, ಪಟ್ಟಣದ ದೊಡ್ಡ ಬಾಗಿಲಲ್ಲಿ, ಪೆಟ್ಟಾಗಿ ಬಿದ್ದ ಹೆಣವನ್ನು ಹಾಕಿಸಿ ಕಾದರೆ, ಅದನ್ನು ಎಲ್ಲಾ ಜಾತಿಜನರೂ, ದಾಟಿಕೊಂಡು ಓಡಾಡುವರು, ಅವಧೂತನು ಆಗಿದ್ದವನು ಅದನ್ನು ಕಂಡು ಹಿಂತಿರುಗಿ ಹೋದರೆ ಅದರಿಂದ ಇವನು ಸಂವರ್ತ ಅವಧೂತನೆಂದು ಅರಿತುಕೊಂಡು ನೀನು ಅವನನ್ನು ಬೆನ್ನುಹತ್ತಿ ಹೋಗಹೋಗಬೇಕು.
  • (ಪದ್ಯ - ೨೮)

ಪದ್ಯ - ೨೯[ಸಂಪಾದಿಸಿ]

ಪೊಕ್ಕಲ್ಲಿ ಪೊಕ್ಕು ಬೆಂಬಿಡದೆ ನೀಂ ಬರೆ ಕಂಡು |
ಸಿಕ್ಕಿದೆತ್ತಣದೆಂದು ಬಯ್ದಪಂ ಪೊಯ್ದಪಂ |
ಮುಕ್ಕಳಿಸಿ ಮೇಲುಗುಳ್ದಪನೇನನಾದೊಡಂ ಮಾಡುವಂ ನೀನದಕ್ಕೆ ||
ಹೆಕ್ಕಳಿಸಿ ಹಿಮ್ಮೆಟ್ಟದಿರ್ದೊಡಾರೊರೆದರೆ |
ನ್ನಿಕ್ಕೆಯಂ ಪೇಳೆಂದವಂ ಕೇಳ್ದೊಡೆನ್ನನಿದಿ |
ರಿಕ್ಕಿ ನಾರದನರುಪಿ ತಾಂ ಕಿಚ್ಚಿನೊಳ್ ಬಿದ್ದಬೆಂದುಸಿರ್ ಪೋಗೆಂದನು ||29||

ಪದವಿಭಾಗ-ಅರ್ಥ:
ಪೊಕ್ಕಲ್ಲಿ ಪೊಕ್ಕು ಬೆಂಬಿಡದೆ ನೀಂ ಬರೆ ಕಂಡು=[ಹೊಕ್ಕಲ್ಲಿ ಹೊಕ್ಕು, ಹೋದಲ್ಲಿ ಹೋಗಿ, ಬೆನ್ನುಬಿಡದೆ ನೀನು ಬರಲು ಕಂಡು,] ಸಿಕ್ಕು (ತೊಂದರೆ) ಇದು ಎತ್ತಣದೆಂದು ಬಯ್ದಪಂ ಪೊಯ್ದಪಂ ಮುಕ್ಕಳಿಸಿ ಮೇಲೆ ಉಗುಳ್ದಪಂ=[ಈ ಕಾಟ-ತೊಂದರೆ ಇದೆಲ್ಲಿಂದ ಬಂದಿತು ಎಂದು ಬಯ್ಯುವನು, ಹೊಡೆಯುವನು, ಮುಕ್ಕಳಿಸಿ ನಿನ್ನಮೇಲೆ ಉಗುಳುವನು,] ಏನೇನು ಆದೊಡಂ ಮಾಡುವಂ ನೀನದಕ್ಕೆ ಹೆಕ್ಕಳಿಸಿ ಹಿಮ್ಮೆಟ್ಟದೆ ಇರ್ದೊಡೆ=[ಏನೇನಾದರೂ, ಏನುಮಾಡಿದರೂ, ನೀನು ಅದಕ್ಕೆ ಬೇಸರಪಟ್ಟು ಹಿಮ್ಮೆಟ್ಟದೆ ಇದ್ದರೆ,] ಆರು ಒರೆದರು ಎನ್ನ ಇಕ್ಕೆಯಂ(ಇರ್ಕೆಯಂ) ಪೇಳೆಂದು ಅವಂ ಕೇಳ್ದೊಡೆ ಎನ್ನನು ಇದಿರಿಕ್ಕಿ ನಾರದನು ಉರುಪಿ ತಾಂ ಕಿಚ್ಚಿನೊಳ್ ಬಿದ್ದನೆಂದುಸಿರ್ ಪೋಗೆಂದನು= ನನ್ನ ಇರುವಿಕಯನ್ನು ಯಾರು ಹೇಳಿದರು, ಹೇಳೆಂದು ಅವನು ಕೇಳಿದರೆ, ನನ್ನನು ಎದುರುಮಾಡಿ, ನಾರದನು ಹೇಳಿ ತಾನು ಬೆಂಕಿಯಲ್ಲಿ ಬಿದ್ದನೆಂದು ಹೇಳಿಬಿಡು, ನೀನು ಕಾಶಿಗೆ ಹೋಗು ಎಂದನು.
  • ತಾತ್ಪರ್ಯ :ಹೊಕ್ಕಲ್ಲಿ ಹೊಕ್ಕು, ಹೋದಲ್ಲಿ ಹೋಗಿ, ಬೆನ್ನುಬಿಡದೆ ನೀನು ಬರಲು ಕಂಡು, ಈ ಕಾಟ-ತೊಂದರೆ ಇದೆಲ್ಲಿಂದ ಬಂದಿತು ಎಂದು ಬಯ್ಯುವನು, ಹೊಡೆಯುವನು, ಮುಕ್ಕಳಿಸಿ ನಿನ್ನಮೇಲೆ ಉಗುಳುವನು, [ಏನೇನಾದರೂ, ಏನುಮಾಡಿದರೂ, ನೀನು ಅದಕ್ಕೆ ಬೇಸರಪಟ್ಟು ಹಿಮ್ಮೆಟ್ಟದೆ ಇದ್ದರೆ, ನನ್ನ ಇರುವಿಕಯನ್ನು ಯಾರು ಹೇಳಿದರು, ಹೇಳೆಂದು ಅವನು ಕೇಳಿದರೆ, ನನ್ನನು ಎದುರುಮಾಡಿ, ನಾರದನು ಹೇಳಿ ತಾನು ಬೆಂಕಿಯಲ್ಲಿ ಬಿದ್ದನೆಂದು ಹೇಳಿಬಿಡು, ನೀನು ಕಾಶಿಗೆ ಹೋಗು ಎಂದನು.
  • (ಪದ್ಯ - ೨೯)

ಪದ್ಯ - ೩೦[ಸಂಪಾದಿಸಿ]

ನಾರದನ ಬುದ್ಧಿಯಂ ಕೇಳ್ದು ಸಂತೋಷದಿಂ |
ಭೂರಮಣನಲ್ಲಿಂದೆ ಬೀಳ್ಕೊಂಡು ಶಶೀಮೌಳಿ |
ತಾರಕಬ್ರಹ್ಮೋಪದೇಶದಿಂದೆ ಪ್ರಾಣಿಗಳ್ಗಾತ್ಮಸಾಯುಜ್ಯಮೀವ ||
ಭೂರಿದುರಿತಂಗಳಂ ಕಂಡಮಾತ್ರದೊಳೆ ಸಂ |
ಹಾರಮಂ ಮಾಳ್ಪ ನಿಖಿಳಪ್ರಳಯಬಾಧೆಗಳ್ |
ದೂರಮೆನಿಪವಿಮುಕ್ತ ಕಾಶಿಗೈತಂದು ವಿಶ್ವೇಶಂಗೆ ಪೊಡಮಟ್ಟನು ||30||

ಪದವಿಭಾಗ-ಅರ್ಥ:
ನಾರದನ ಬುದ್ಧಿಯಂ ಕೇಳ್ದು ಸಂತೋಷದಿಂ ಭೂರಮಣನಲ್ಲಿಂದೆ ಬೀಳ್ಕೊಂಡು= [ನಾರದನ ಹಿತಚನವನ್ನು ಕೇಳಿ ಸಂತೋಷದಿಂದ ರಾಜನು ಅಲ್ಲಿಂದ ನಾರದನನ್ನು ಬೀಳ್ಕೊಂಡು,] ಶಶೀಮೌಳಿ= [ಶಿವನು ಇರುವ,] ತಾರಕಬ್ರಹ್ಮೋಪದೇಶದಿಂದೆ ಪ್ರಾಣಿಗಳ್ಗಾತ್ಮಸಾಯುಜ್ಯಮೀವ

ಭೂರಿದುರಿತಂಗಳಂ ಕಂಸಮಾತ್ರದೊಳೆ ಸಂಹಾರಮಂ ಮಾಳ್ಪ=[ ತಾರಕಬ್ರಹ್ಮೋಪದೇಶದಿಂದೆ ಪ್ರಾಣಿಗಳಿಗೆ ಆತ್ಮಸಾಯುಜ್ಯಕೊಡುವ ದೊಡ್ಡ ಪಾಪಗಳನ್ನು ಅವನನ್ನು ಕಂಡಮಾತ್ರದಲ್ಲಿ ಪರಿಹಾರ ಮಾಡುವ], ನಿಖಿಳಪ್ರಳಯಬಾಧೆಗಳ್ ದೂರಮೆನಿಪ ವಿಮುಕ್ತ ಕಾಶಿಗೈತಂದು= [ಎಲ್ಲಾ ದೊಡ್ಡ ಬಾಧೆಗಳನ್ನು ದೂರಸರಿಸುವ, ಪಾಪವಿಮುಕ್ತಿ ಮಾಡುವ,] [ಶಿವನು ಇರುವ,] ಕಾಶಿಗೈತಂದು ವಿಶ್ವೇಶಂಗೆ ಪೊಡಮಟ್ಟನು= [ಶಿವನು ಇರುವ,ಕಾಶಿಗೆ ಬಂದು ವಿಶ್ವೇಶ್ವರ ದೇವನಿಗೆ ನಮಸ್ಕರಿಸಿದನು].

  • ತಾತ್ಪರ್ಯ :ನಾರದನ ಹಿತಚನವನ್ನು ಕೇಳಿ ಸಂತೋಷದಿಂದ ಮರುತ್ತರಾಜನು ಅಲ್ಲಿಂದ ನಾರದನನ್ನು ಬೀಳ್ಕೊಂಡು, , ತಾರಕಬ್ರಹ್ಮೋಪದೇಶದಿಂದೆ ಪ್ರಾಣಿಗಳಿಗೆ ಆತ್ಮಸಾಯುಜ್ಯಕೊಡುವ, ದೊಡ್ಡ ಪಾಪಗಳನ್ನು ಅವನನ್ನು ಕಂಡಮಾತ್ರದಲ್ಲಿ ಪರಿಹಾರ ಮಾಡುವ, ಎಲ್ಲಾ ದೊಡ್ಡ ಬಾಧೆಗಳನ್ನು ದೂರಸರಿಸುವ, ಪಾಪವಿಮುಕ್ತಿ ಮಾಡುವ ಶಿವನು ಇರುವ, ಕಾಶಿಗೆ ಬಂದು ವಿಶ್ವೇಶ್ವರ ದೇವನಿಗೆ ನಮಸ್ಕರಿಸಿದನು.
  • (ಪದ್ಯ - ೩೦)

ಪದ್ಯ - ೩೧[ಸಂಪಾದಿಸಿ]

ಬಳಿಕಲ್ಲಿ ನಾರದಂ ಪೇಳ್ದಂತೆ ಭೂವರಂ |
ಪೊಳಲ ಪೆರ್ಬಾಗಿಲ್ಗೆ ಕುಣಪಮಂ ತಂದಿರಿಸ |
ಲುಳಿಯದೆಡೆಯಾಡುತಿರ್ದುದು ಜನಂ ಕಂಡು ಸಂವರ್ತನತ್ತಲೆ ತೊಲಗಲು ||
ಬಳಿವಿಡಿದು ಪೋದೊಡವನೀಶನಂ ಬೈದು ಪೊ |
ಯ್ದಳಲಿಸಿ ಕನಲ್ದುಗುಳ್ದೋಕರಿಸಿ ನೂಕಲದ |
ಕಳುಕದಿರ್ದೊಡೆ ತಾನದಾರೆಂದು ಬಂದೆ ನೀನೆಂದುನೃಪನಂ ಕೇಳ್ದನು||31||

ಪದವಿಭಾಗ-ಅರ್ಥ:
ಬಳಿಕಲ್ಲಿ ನಾರದಂ ಪೇಳ್ದಂತೆ ಭೂವರಂ ಪೊಳಲ ಪೆರ್ಬಾಗಿಲ್ಗೆ ಕುಣಪಮಂ ತಂದಿರಿಸಲು ಉಳಿಯದೆ ಎಡೆಯಾಡುತಿರ್ದುದು ಜನಂ= [ಬಳಿಕ ನಾರದನು ಹೇಳಿದಂತೆ ರಾಜನು ಕಾಶಿನಗರದ ಬಾಗಿಲಲ್ಲಿ ಹೆಣವನ್ನು ತಂದು ಇಟ್ಟಿರಲು, ಜನರು ಅಲ್ಲಿ ನಿಲ್ಲದೆ ನಡೆದಾಡುತ್ತಿದ್ದರು,] ಕಂಡು ಸಂವರ್ತನು ಅತ್ತಲೆ ತೊಲಗಲು

ಬಳಿವಿಡಿದು ಪೋದೊಡೆ ಅವನೀಶನಂ= ಆದರೆ ಶವವನ್ನು ಕಂಡು ಸಂವರ್ತನು ಹಿಂತಿರುಗಿ ಹೋಗಲು,ರಾಜನು ಹಿಂಬಾಲಿಸಿ ಹೋಗಲು,] ಬೈದು ಪೊಯ್ದು ಅಳಲಿಸಿ ಕನಲ್ದು ಉಗುಳ್ದು ಓಕರಿಸಿ ನೂಕಲು ಅದಕೆ ಅಳುಕದೆ ಇರ್ದೊಡೆ= ಅವನನ್ನು ಬೈದು, ಹೊಡೆದು,ನೋಯಿಸಿ, ಸಿಟ್ಟುಮಾಡಿ,ಕೇಕರಿಸಿ ಉಗುಳಿ,ನೂಕಲು, ಅದಕ್ಕೆ ಭಯಪಡದಿರಲು], ತಾನು ಅದು ಆರೆಂದು ಬಂದೆ ನೀನು ಎಂದು ನೃಪನಂ ಕೇಳ್ದನು= ನೀನು ತನ್ನನ್ನು ಯಾರು ಎಂದು ತಿಳಿದು ಬಂದೆ ಎಂದು ಮರುತ್ತ ರಾಜನನ್ನು ಮುನಿ ಕೇಳಿದನು.

  • ತಾತ್ಪರ್ಯ :ಬಳಿಕ ನಾರದನು ಹೇಳಿದಂತೆ ರಾಜನು ಕಾಶಿನಗರದ ಬಾಗಿಲಲ್ಲಿ ಹೆಣವನ್ನು ತಂದು ಇಟ್ಟಿರಲು, ಜನರು ಅಲ್ಲಿ ನಿಲ್ಲದೆ ನಡೆದಾಡುತ್ತಿದ್ದರು, ಆದರೆ ಶವವನ್ನು ಕಂಡು ಸಂವರ್ತನು ಹಿಂತಿರುಗಿ ಹೋಗಲು,ರಾಜನು ಹಿಂಬಾಲಿಸಿ ಹೋಗಲು, ಅವನನ್ನು ಬೈದು, ಹೊಡೆದು,ನೋಯಿಸಿ, ಸಿಟ್ಟುಮಾಡಿ,ಕೇಕರಿಸಿ ಉಗುಳಿ,ನೂಕಲು, ಅದಕ್ಕೆ ಭಯಪಡದಿರಲು, ನೀನು ತನ್ನನ್ನು ಯಾರು ಎಂದು ತಿಳಿದು ಬಂದೆ ಎಂದು ಮರುತ್ತ ರಾಜನನ್ನು ಮುನಿ ಕೇಳಿದನು.
  • (ಪದ್ಯ - ೩೧)

ಪದ್ಯ - ೩೨[ಸಂಪಾದಿಸಿ]

ಸುರಪುರೋಹಿತನನುಜನಂಗಿರನ ಸೂನು ಮುನಿ |
ವರಮೌಳಿ ಸಂವರ್ತನೆಂದರಿದು ಬಂದು ನಿ |
ನ್ನಿರವಂ ಪರೀಕ್ಷಿಸಿದೆನೆಂದು ನೃಪನುಸಿರಲವರಾರ್ ನಿನಗೆ ಪೇಳ್ದರೆನಲು ||
ಪರಮರ್ಷಿನಾರದಂ ತನಗೊರೆದು ಕೂಡೆ ತಾ |
ನುರೀಯೊಳ್ ಪ್ರವೇಶಿಸಿದನೆನೆ ತಾಪಸಂ ತಿಳಿದು |
ಕರುಣದಿಂದೇತಕ್ಕೆತಂದೆ ನೀನಾರೆನ್ನೊಳಹ ಕಜ್ಜಮೇನೆಂದನು||32||

ಪದವಿಭಾಗ-ಅರ್ಥ:
ಸುರಪುರೋಹಿತನ ಅನುಜನು ಅಂಗಿರನ ಸೂನು ಮುನಿ ವರಮೌಳಿ ಸಂವರ್ತನೆಂದು ಅರಿದು ಬಂದು ನಿನ್ನ ಇರವಂ ಪರೀಕ್ಷಿಸಿದೆನು ಎಂದು ನೃಪನು ಉಸಿರಲ್=[ದೇವತೆಗಳ ಪುರೋಹಿತನ ಸೋದರ ಅಂಗಿರನ ಮಗ ಮುನಿ ಶ್ರೇಷ್ಠನು ಸಂವರ್ತನೆಉ ಎಂದು ಭಾವಿಸಿ ಬಂದು ನಿನ್ನ ಇರುವಿಕೆಯನ್ನು ಪರೀಕ್ಷಿಸಿದೆನು ಎಂದು ರಾಜನು ಹೇಳಲು], ಅವರಾರ್ ನಿನಗೆ ಪೇಳ್ದರು ಎನಲು ಪರಮರ್ಷಿನಾರದಂ ತನಗೆ ಒರೆದು ಕೂಡೆ ತಾನು ಉರೀಯೊಳ್ ಪ್ರವೇಶಿಸಿದನು ಎನೆ= [ಯಾರವರು ನಿನಗೆ ಹೇಳಿದರು ಎನಲು, ಪರಮರ್ಷಿ ನಾರದನು ತನಗೆ ಹೇಳಿ ಕೂಡಲೆ ತಾನು ಬೆಂಕಿಯಲ್ಲಿ ಪ್ರವೇಶಿಸಿದನು ಎನ್ನಲು,] ತಾಪಸಂ ತಿಳಿದು ಕರುಣದಿಂದೇತಕ್ಕೆತಂದೆ ನೀನಾರೆನ್ನೊಳಹ ಕಜ್ಜಮೇನೆಂದನು= ತಪಸ್ವಿಯು ವಿಷಯ ತಿಳಿದು ಕರುಣದಿಂದ ಏತಕ್ಕೆ ನನ್ನ ಬಳಿ ಬಂದೆ ನೀನಾರು ನನ್ನಲ್ಲಿ ಆಗಬೇಕಾದ ಕಾರ್ಯವೇನು ಎಂದನು.
  • ತಾತ್ಪರ್ಯ : ದೇವತೆಗಳ ಪುರೋಹಿತನ ಸೋದರ ಅಂಗಿರನ ಮಗ ಮುನಿ ಶ್ರೇಷ್ಠನು ಸಂವರ್ತನೆಉ ಎಂದು ಭಾವಿಸಿ ಬಂದು ನಿನ್ನ ಇರುವಿಕೆಯನ್ನು ಪರೀಕ್ಷಿಸಿದೆನು ಎಂದು ರಾಜನು ಹೇಳಲು, ಯಾರವರು ನಿನಗೆ ಹೇಳಿದರು ಎನ್ನಲು, ಪರಮರ್ಷಿ ನಾರದನು ತನಗೆ ಹೇಳಿ ಕೂಡಲೆ ತಾನು ಬೆಂಕಿಯಲ್ಲಿ ಪ್ರವೇಶಿಸಿದನು ಎನ್ನಲು, ತಪಸ್ವಿಯು ವಿಷಯ ತಿಳಿದು ಕರುಣದಿಂದ ಏತಕ್ಕೆ ನನ್ನ ಬಳಿ ಬಂದೆ ನೀನಾರು ನನ್ನಲ್ಲಿ ಆಗಬೇಕಾದ ಕಾರ್ಯವೇನು ಎಂದನು.
  • (ಪದ್ಯ - ೩೨)

ಪದ್ಯ - ೩೩[ಸಂಪಾದಿಸಿ]

ಆದೊಡೆ ಮರುತನಾ ನಾನಾವಿಕ್ಷಿನೃಪಸುತಂ |
ಮೇದಿನಿಯೊಳೆನಗೆ ಹಯಮೇಧಮಂ ಮಾಡಿಸೆಂ |
ದಾದರಿಸಿ ನಿಮ್ಮಣ್ಣನಂ ಕೇಳ್ದೊಡಾತಂ ತಿರಸ್ಕರಿಸಿದೊಡೆ ನಿನ್ನನು ||
ಆ ದೇವಮುನಿ ಪೇಳ್ದೊಡೈತಂದೆನೆನ್ನಧ್ವ |
ರೋದಯಕೆ ನೀನಲ್ಲದನ್ಯರಂ ಕಾಣೆನೆಂ |
ದಾ ದಿನಪಕುಲದರಸನಂದು ಸಂವರ್ತನಂ ಬೇಡಿಕೊಳಲಿಂತೆಂದನು ||33||

ಪದವಿಭಾಗ-ಅರ್ಥ:
ಆದೊಡೆ ಮರುತನು ನಾನು ಆ ಅವಿಕ್ಷಿನೃಪಸುತಂ=[ಹಾಗಿದ್ದರೆ ಹೇಳುವೆನು, ನಾನು ಮರುತನು ಆ ಆವಿಕ್ಷಿನೃಪನ ಮಗನು,] ಮೇದಿನಿಯೊಳ್ ಎನಗೆ ಹಯಮೇಧಮಂ ಮಾಡಿಸೆಂದು ಆದರಿಸಿ ನಿಮ್ಮಣ್ಣನಂ ಕೇಳ್ದೊಡೆ ಆತಂ ತಿರಸ್ಕರಿಸಿದೊಡೆ=[ಭೂಮಂಡಲದಲ್ಲಿ ನನಗೆ ಅಶ್ವಮೇಧ ಯಾಗವನ್ನು ಮಾಡಿಸೆಂದು ಆದರದಿಂ ನಿಮ್ಮಣ್ಣನಾದ ಬೃಹಸ್ಪತಿಯನ್ನು ಕೇಳಿದಾಗ ಆತನು ತಿರಸ್ಕರಿಸಿದನು, ಅದರಿಂದ,] ನಿನ್ನನು ಆ ದೇವಮುನಿ ಪೇಳ್ದೊಡೆ ಐತಂದೆನು=[ನೀನು ನನಗೆ ಅಶ್ವಮೇಧ ಯಾಗವನ್ನು ಮಾಡಿಸುವನೆಂದು ಆ ದೇವಮುನಿ ಹೇಳಿದ್ದರಿಂದ ಇಲ್ಲಿಗೆ ಬಂದೆನು;] ಎನ್ನಧ್ವರೋದಯಕೆ ನೀನಲ್ಲದನ್ಯರಂ ಕಾಣೆನೆಂದಾ ದಿನಪಕುಲದರಸನಂದು ಸಂವರ್ತನಂ ಬೇಡಿಕೊಳಲಿಂತೆಂದನು= ನನ್ನು ಯಾಗಮಾಡಿಸುವುದಕ್ಕೆ ನೀನಲ್ಲದೆ ಬೇರೆಯವರನ್ನು ಕಾಣೆನು, ಎಂದು ದಿನಪಕುಲದರಸನಾದ ಮರುತ್ತನು ಸಂವರ್ತನನ್ನು ಬೇಡಿಕೊಳ್ಳಲು ಅವನು ಹೀಗೆ ಹೇಳಿದನು.
  • ತಾತ್ಪರ್ಯ : ಹಾಗಿದ್ದರೆ ಹೇಳುವೆನು, ನಾನು ಮರುತನು ಆ ಆವಿಕ್ಷಿನೃಪನ ಮಗನು, ಭೂಮಂಡಲದಲ್ಲಿ ನನಗೆ ಅಶ್ವಮೇಧ ಯಾಗವನ್ನು ಮಾಡಿಸೆಂದು ಆದರದಿಂ ನಿಮ್ಮಣ್ಣನಾದ ಬೃಹಸ್ಪತಿಯನ್ನು ಕೇಳಿದಾಗ ಆತನು ತಿರಸ್ಕರಿಸಿದನು, ಅದರಿಂದ, ನೀನು ನನಗೆ ಅಶ್ವಮೇಧ ಯಾಗವನ್ನು ಮಾಡಿಸುವನೆಂದು ಆ ದೇವಮುನಿ ಹೇಳಿದ್ದರಿಂದ ಇಲ್ಲಿಗೆ ಬಂದೆನು; ನನ್ನ ಯಾಗಮಾಡಿಸುವುದಕ್ಕೆ ನೀನಲ್ಲದೆ ಬೇರೆಯವರನ್ನು ಕಾಣೆನು, ಎಂದು ದಿನಪಕುಲದರಸನಾದ ಮರುತ್ತನು ಸಂವರ್ತನನ್ನು ಬೇಡಿಕೊಳ್ಳಲು ಅವನು ಹೀಗೆ ಹೇಳಿದನು.
  • (ಪದ್ಯ - ೩೩)

ಪದ್ಯ - ೩೩[ಸಂಪಾದಿಸಿ]

ಲೇಸಾದುದೆಲೆ ರಾಯ ನಿನ್ನ ಯಜ್ಞಕ್ಕೆ ತಾ |
ನೊಸರಿಸುವವನಲ್ಲ ಪುರುಡಿಂ ಮಮಾಗ್ರಜಂ |
ವಾಸವನ ಮುಖದಿಂದೊಡಂಬಡಿಸಿ ಮಖಕೆ ತಾನಧ್ಯಕ್ಷನಪ್ಪೆನೆಂದು ||
ಆಶೆಯಿಂ ಕೇಳ್ದೊಡೇಗೈವೆ ನೀಂ ಪೇಳೆನಲ್ |
ಭೂಸುರನ ಕೊಂದಗತಿ ತನಗಹುದು ನಿಮ್ಮಂ ಪ್ರ |
ಯಾಸದಿಂ ಬಿಟ್ಟೊಡೆಂದರಸಂ ಪ್ರತಿಜ್ಞೆಯಂ ಮಾಡಲವನಿಂತೆಂದನು ||34||

ಪದವಿಭಾಗ-ಅರ್ಥ:
ಲೇಸಾದುದು ಎಲೆ ರಾಯ ನಿನ್ನ ಯಜ್ಞಕ್ಕೆ ತಾನು ಓಸರಿಸುವವನಲ್ಲ= [ರಾಜನೇ ಒಳ್ಳಯದು ನಿನ್ನ ಯಜ್ಞಕ್ಕೆ ತಾನು ನಿರಾಕರಿಸುವವನಲ್ಲ,] ಪುರುಡಿಂ(ಪೈಪೋಟಿ, ಹೊಟ್ಟೆಕಿಚ್ಚು) ಮಮಾಗ್ರಜಂ ವಾಸವನ(ಇಂದ್ರ) ಮುಖದಿಂದೊಡಂಬಡಿಸಿ ಮಖಕೆ ತಾನಧ್ಯಕ್ಷನಪ್ಪೆನೆಂದು ಆಶೆಯಿಂ ಕೇಳ್ದೊಡೆ ಏಗೈವೆ ನೀಂ ಪೇಳೆನಲ್ = [ಪೈಪೋಟಿ ಮತ್ತು ಹೊಟ್ಟೆಕಿಚ್ಚಿನಿಂದ ನನ್ನ ಅಣ್ಣನು ಇಂದ್ರನ ಮೂಲಕ ಒಪ್ಪಿಗೆಪಡೆದು ಯಜ್ಞಕ್ಕೆ ತಾನು ಅಧ್ಯಕ್ಷನು ಆಗುವೆನೆಂದು ಆಸೆಪಟ್ಟು ಕೇಳಿದರೆ ಏನು ಮಾಡಡುವೆ? ನೀನು ಹೇಳು ಎನಲು,] ಭೂಸುರನ ಕೊಂದಗತಿ ತನಗಹುದು ನಿಮ್ಮಂ ಪ್ರ ಯಾಸದಿಂ ಬಿಟ್ಟೊಡೆಂದರಸಂ ಪ್ರತಿಜ್ಞೆಯಂ ಮಾಡಲವನಿಂತೆಂದನು= ತಾನು ಅದಕ್ಕೆ ಒಪ್ಪಿ ನಿಮ್ಮನ್ನು ಒತ್ತಾಯಕ್ಕೆ ಮಣಿದು ಆ ಕಷ್ಟದಿಂದ ಬಿಟ್ಟರೆ, ಬ್ರಾಹ್ಮಣನನ್ನು ಕೊಂದಗತಿ ತನಗೆ ಬರಲಿ, ಎಂದು ಪ್ರತಿಜ್ಞೆಯನ್ನು ಮಾಡಲು ಅವನು ಹೀಗೆ ಹೇಳಿದನು.
  • ತಾತ್ಪರ್ಯ : ರಾಜನೇ ಒಳ್ಳಯದು, ನಿನ್ನ ಯಜ್ಞಕ್ಕೆ ತಾನು ನಿರಾಕರಿಸುವವನಲ್ಲ, ಪೈಪೋಟಿ ಮತ್ತು ಹೊಟ್ಟೆಕಿಚ್ಚಿನಿಂದ ನನ್ನ ಅಣ್ಣನು ಇಂದ್ರನ ಮೂಲಕ ಒಪ್ಪಿಗೆಪಡೆದು ಯಜ್ಞಕ್ಕೆ ತಾನು ಅಧ್ಯಕ್ಷನಾಗುವೆನೆಂದು ಆಸೆಪಟ್ಟು ಕೇಳಿದರೆ ಏನು ಮಾಡುವೆ? ನೀನು ಹೇಳು ಎನಲು, ತಾನು ಅದಕ್ಕೆ ಒಪ್ಪಿ ನಿಮ್ಮನ್ನು ಅವನ ಒತ್ತಾಯಕ್ಕೆ ಮಣಿದು (ಕಷ್ಟದಿಂದ) ಬಿಟ್ಟರೆ, ತನಗೆ ಬ್ರಾಹ್ಮಣನನ್ನು ಕೊಂದಗತಿ ಬರಲಿ, ಎಂದು ಪ್ರತಿಜ್ಞೆಯನ್ನು ಮಾಡಲು ಸಂವರ್ತನು ಹೀಗೆ ಹೇಳಿದನು.
  • (ಪದ್ಯ - ೩೩)

ಪದ್ಯ - ೩೫[ಸಂಪಾದಿಸಿ]

ಯಾಜಕಂ ತಾನಪ್ಪೆನಧ್ವರಕೆ ನೀನಿನ್ನು |
ರಾಜಿಪ ಹಿಮಾಲಯದೊಳೆಸೆವ ರಜಾತಾದ್ರಿಯೊಳ್ |
ತೇಜೋಮಯಂ ಸದಾಶಿವನಿರ್ಪನಾತನ ಪದಾಬ್ಜಮಂ ಪೋಗಿ ಕಂಡು ||
ಪೂಜೆಗೈದೊಡೆ ಕನಕರಾಶಿಗಳನಿತ್ತಪಂ |
ಮೂಜಗಂ ತಣಿವಂತೆ ವರಮಖಂ ನಡೆವುದೆನ |
ಲಾ ಜನಪನಲ್ಲಿಗೈತಂದು ಗಿರಿಜೇಶನಂ ಪ್ರಾರ್ಥಿಸಿದನರ್ತಿಯಿಂದೆ ||35||

ಪದವಿಭಾಗ-ಅರ್ಥ:
ಯಾಜಕಂ ತಾನಪ್ಪೆನು ಅಧ್ವರಕೆ=[ಯಜ್ಞಕ್ಕೆ ತಾನು ಯಾಜಕನಾಗುವೆನು,] ನೀನಿನ್ನು ರಾಜಿಪ ಹಿಮಾಲಯದೊಳ್ ಎಸೆವ ರಜಾತಾದ್ರಿಯೊಳ್ ತೇಜೋಮಯಂ ಸದಾಶಿವನಿರ್ಪನು= [ನೀನು ಇನ್ನು ಹಿಮಾಲಯದಲ್ಲಿ ಪ್ರಕಾಶಮಾನವಾಗಿ ತೋರುವ ರಜಾತಾದ್ರಿಯಲ್ಲಿ ತೇಜೋಮಯನಾದ ಸದಾಶಿವನು ಇರುವನು,] ಆತನ ಪದಾಬ್ಜಮಂ ಪೋಗಿ ಕಂಡು ಪೂಜೆಗೈದೊಡೆ ಕನಕರಾಶಿಗಳನು ಇತ್ತಪಂ= [ಹೋಗಿ ಆ ಶಿವನ ಪಾದಕಮಲವನ್ನು ಕಂಡು ಪೂಜೆಮಾಡಿದರೆ, ಕನಕರಾಶಿಗಳನ್ನು ಕೊಡುವನು,] ಮೂಜಗಂ ತಣಿವಂತೆ ವರಮಖಂ ನಡೆವುದೆನಲು=[ಮೂರು ಲೋಕಗಳೂ ತೃಪ್ತಿ ಪಡುವಂತೆ ಶ್ರೇಷ್ಠಯಜ್ಞವು ನೆಡೆಯುವುದು ಎನ್ನಲು,] ಆ ಜನಪನಲ್ಲಿಗೆ ಐತಂದು ಗಿರಿಜೇಶನಂ ಪ್ರಾರ್ಥಿಸಿದನು ಅರ್ತಿಯಿಂದೆ= ಆರಾಜನು ಅಲ್ಲಿಗೆ ಬಂದು ಶಿವನನ್ನು ಪ್ರಾರ್ಥಿಸಿದನು.
  • ತಾತ್ಪರ್ಯ : ಯಜ್ಞಕ್ಕೆ ತಾನು ಯಾಜಕನಾಗಲು ಒಪ್ಪಿದ್ದೇನೆ; ನೀನು ಇನ್ನು ಹಿಮಾಲಯದಲ್ಲಿ ಪ್ರಕಾಶಮಾನವಾಗಿ ತೋರುವ ರಜಾತಾದ್ರಿಯಲ್ಲಿ ತೇಜೋಮಯನಾದ ಸದಾಶಿವನು ಇರುವನು, ಹೋಗಿ ಆ ಶಿವನ ಪಾದಕಮಲವನ್ನು ಕಂಡು ಪೂಜೆಮಾಡಿದರೆ, ಕನಕರಾಶಿಗಳನ್ನು ಕೊಡುವನು, ಮೂರು ಲೋಕಗಳೂ ತೃಪ್ತಿ ಪಡುವಂತೆ ಶ್ರೇಷ್ಠಯಜ್ಞವು ನೆಡೆಯುವುದು ಎನ್ನಲು, ಆ ರಾಜನು ಅಲ್ಲಿಗೆ ಬಂದು ಶಿವನನ್ನು ಪ್ರಾರ್ಥಿಸಿದನು.
  • (ಪದ್ಯ - ೩೫)

ಪದ್ಯ - ೩೬[ಸಂಪಾದಿಸಿ]

ತರುಣೇಂದುಮೌಳಿಯಂ ಪ್ರಾರ್ಥಿಸಿದೊಡಿತ್ತನತಿ |
ಕರುಣದಿಂದಪರಿಮಿತವಸ್ತುವಂ ಬಳಿಕ ಹಿಮ |
ಗಿರಿತಟದೊಳಾ ನೃಪಂ ಕಟ್ಟಿಸಿದನಧ್ವರದ ಶಾಲೆಯಂ ಕನಕದಿಂದೆ ||
ವರವೈದಿಕ ಪ್ರಮಾಣದೊಳಂದು ವಿಪ್ರರಂ |
ಕರೆಸಿ ಸಂವರ್ತನಂ ಕೂಡಿಕೊಂಡು ತ್ಸವದೊ |
ಳರಸಂ ಮಹಾಕ್ರತು ಪ್ರಾರಂಭದೊಳ್ ಮೆರೆದನೈಶ್ವರ್ಯವಿಭವದಿಂದೆ ||36||

ಪದವಿಭಾಗ-ಅರ್ಥ:
ತರುಣೇಂದುಮೌಳಿಯಂ(ಬಾಲಚಂದ್ರನನ್ನು ಶಿರದಲ್ಲಿಧರಿಸಿದವ- ಶಿವ) ಪ್ರಾರ್ಥಿಸಿದೊಡೆ ಇತ್ತನು ಅತಿ ಕರುಣದಿಂದ ಅಪರಿಮಿತ ವಸ್ತುವಂ ಬಳಿಕ ಹಿಮಗಿರಿತಟದೊಳ ಆ ನೃಪಂ ಕಟ್ಟಿಸಿದನು ಅಧ್ವರದ ಶಾಲೆಯಂ ಕನಕದಿಂದೆ ವರವೈದಿಕ ಪ್ರಮಾಣದೊಳಂದು= [ರಾಜನು ಶಿವನನ್ನು ಪ್ರಾರ್ಥಿಸಿದಾಗ ಅವನು ಅತಿ ಕರುಣದಿಂದ ಅಪರಿಮಿತ ವಸ್ತುಗಳನ್ನು ಕೊಟ್ಟನು. ಬಳಿಕ ಹಿಮಗಿರಿಯ ತಟದಲ್ಲಿ ಆ ರಾಜನು ವೈದಿಕ ಪ್ರಮಾಣದಲ್ಲಿ ಕನಕದಿಂದ ಯಜ್ಞಶಾಲೆಯನ್ನು ಕಟ್ಟಿಸಿದನು,] ವಿಪ್ರರಂ ಕರೆಸಿ ಸಂವರ್ತನಂ ಕೂಡಿಕೊಂಡು ತ್ಸವದೊಳರಸಂ ಮಹಾಕ್ರತು ಪ್ರಾರಂಭದೊಳ್ ಮೆರೆದನೈಶ್ವರ್ಯವಿಭವದಿಂದೆ= [ಬ್ರಾಹ್ಮಣರನ್ನು ಕರೆಸಿ ಸಂವರ್ತನನ್ನು ಕೂಡಿಕೊಂಡು ವಿಜ್ರಂಭಣೆಯಿಂದ ಅರಸನು ಮಹಾಯಜ್ಞ ಪ್ರಾರಂಭೋತ್ಸವದಲ್ಲಿ ಐಶ್ವರ್ಯರಾಶಿಯನ್ನು ಹೊಂದಿ ಮೆರೆದನು.]
  • ತಾತ್ಪರ್ಯ : ರಾಜನು ಶಿವನನ್ನು ಪ್ರಾರ್ಥಿಸಿದಾಗ ಅವನು ಅತಿ ಕರುಣದಿಂದ ಅಪರಿಮಿತ ವಸ್ತುಗಳನ್ನು ಕೊಟ್ಟನು. ಬಳಿಕ ಹಿಮಗಿರಿಯ ತಟದಲ್ಲಿ ಆ ರಾಜನು ವೈದಿಕ ಪ್ರಮಾಣದಲ್ಲಿ ಕನಕದಿಂದ ಯಜ್ಞಶಾಲೆಯನ್ನು ಕಟ್ಟಿಸಿದನು, ಬ್ರಾಹ್ಮಣರನ್ನು ಕರೆಸಿ ಸಂವರ್ತನನ್ನು ಕೂಡಿಕೊಂಡು ವಿಜ್ರಂಭಣೆಯಿಂದ ಅರಸನು ಮಹಾಯಜ್ಞ ಪ್ರಾರಂಭೋತ್ಸವದಲ್ಲಿ ಐಶ್ವರ್ಯರಾಶಿಯನ್ನು ಹೊಂದಿ ಮೆರೆದನು.
  • (ಪದ್ಯ - ೩೬)

ಪದ್ಯ - ೩೭[ಸಂಪಾದಿಸಿ]

ಕೇಳ್ದಂ ಬೃಹಸ್ಪತಿ ಮರುತ್ತನ ಮಖೋದಯವ |
ನಾರ್ಳದನತಿಚಿಂತೆಯೊಳ್ ಮುಂದೆ ಧನಯುತನಾಗಿ |
ಬಾಳ್ದಪಂ ಸಂವರ್ತನೆಂಬ ಪುರುಡಿಂದುಬ್ಬೆಗಂಬಟ್ಟು ದಿವಿಜಪತಿಗೆ ||
ಪೇಳ್ದೊಡವನಗ್ನಿಯಂ ಕಳಿಪಿದೊಡೆ ದೀಕ್ಷೆಯಂ |
ತಾಳ್ದೆಸೆವ ಭೂಪನೆಡೆಗೈತಂದು ವೃತ್ರನಂ |
ಸೀಳ್ದವಂ ತನ್ನೊಳಾಡಿದಮಾತನಿಂತೆಂದು ವಿವರಿಸಿದನಾ ಕೃಶಾನು ||37||

ಪದವಿಭಾಗ-ಅರ್ಥ:
ಕೇಳ್ದಂ ಬೃಹಸ್ಪತಿ ಮರುತ್ತನ ಮಖೋದಯವ ನಾಳ್ದನತಿಚಿಂತೆಯೊಳ್=[ ಬೃಹಸ್ಪತಿಯು ಮರತ್ತನಿಗೆ ಸಂವರ್ತ ಯಾಜಕನಾಗಿ ಯಜ್ಞ ಆರಂಬವಾಗುವುದನ್ನು ಕೇಳಿದನು; ಅದರಿಂದ ಅತಿಯಾದ ಚಿಂತೆಯನ್ನು ಹೊಂದಿದನು, ಏಕೆಂದರೆ], ಮುಂದೆ ಧನಯುತನಾಗಿ ಬಾಳ್ದಪಂ ಸಂವರ್ತನೆಂಬ ಪುರುಡಿಂದ (ಹೊಟ್ಟೆಕಿಚ್ಚಿನಿಂದ) ಉಬ್ಬೆಗಂಬಟ್ಟು(ಉದ್ವೇಗಹೊಂದಿ) =[ಮುಂದೆ ಸಂವರ್ತನು ಧನಯುತನಾಗಿ ಬಾಳುವನೆಂಬ ಹೊಟ್ಟೆಕಿಚ್ಚಿನಿಂದ ಉದ್ವೇಗಹೊಂದಿ,] ದಿವಿಜಪತಿಗೆ ಪೇಳ್ದೊಡೆ ಅವನು ಅಗ್ನಿಯಂ ಕಳಿಪಿದೊಡೆ=[ಇಂದ್ರನಿಗೆ ಹೇಳಿದಾಗ ಅವನು ಅಗ್ನಿಯನ್ನು ಮರುತ್ತನ ಬಳಿಗೆ ಕಳಿಸಿದನು; ಆಗ,] ದೀಕ್ಷೆಯಂ ತಾಳ್ದು ಎಸೆವ ಭೂಪನೆಡೆಗೆ ಐತಂದು ವೃತ್ರನಂ ಸೀಳ್ದವಂ ತನ್ನೊಳು ಆಡಿದ ಮಾತನು ಇಂತೆಂದು ವಿವರಿಸಿದನು ಆ ಕೃಶಾನು (ಅಗ್ನಿ)= [ದೀಕ್ಷೆಯನ್ನು ಹೊಂದಿ ಶೋಭಿಸುತ್ತರುವ ರಾಜನ ಹತ್ತಿರ ಬಂದು ವೃತ್ರನನ್ನು ವಜ್ರಾಯುಧದಿಂದ ಸೀಳಿದ ಇಂದ್ರನು ತನ್ನೊಡನೆ ಹೇಳಿದ ಮಾತನ್ನು ಅಗ್ನಿಯು ಈ ರೀತಿಯಲ್ಲಿ ವಿವರಿಸಿದನು]
  • ತಾತ್ಪರ್ಯ : ಬೃಹಸ್ಪತಿಯು ಮರತ್ತನಿಗೆ ಸಂವರ್ತ ಯಾಜಕನಾಗಿ ಯಜ್ಞ ಆರಂಭವಾಗುವುದನ್ನು ಕೇಳಿದನು; ಅದರಿಂದ ಅತಿಯಾದ ಚಿಂತೆಯನ್ನು ಹೊಂದಿದನು, ಏಕೆಂದರೆ ಮುಂದೆ ಸಂವರ್ತನು ಧನಯುತನಾಗಿ ಬಾಳುವನೆಂಬ ಹೊಟ್ಟೆಕಿಚ್ಚಿನಿಂದ ಉದ್ವೇಗಹೊಂದಿ, ಇಂದ್ರನಿಗೆ ಹೇಳಿದಾಗ ಅವನು ಅಗ್ನಿಯನ್ನು ಮರುತ್ತನ ಬಳಿಗೆ ಕಳಿಸಿದನು; ಆಗ, ದೀಕ್ಷೆಯನ್ನು ಹೊಂದಿ ಶೋಭಿಸುತ್ತರುವ ರಾಜನ ಹತ್ತಿರ ಬಂದು ವೃತ್ರನನ್ನು ವಜ್ರಾಯುಧದಿಂದ ಸೀಳಿದ ಇಂದ್ರನು ತನ್ನೊಡನೆ ಹೇಳಿದ ಮಾತನ್ನು ಅಗ್ನಿಯು ಈ ರೀತಿಯಲ್ಲಿ ವಿವರಿಸಿದನು.
  • (ಪದ್ಯ - ೩೭)

ಪದ್ಯ - ೩೮[ಸಂಪಾದಿಸಿ]

ರಾಯ ಕೇಳಿಂದ್ರನಾಡಿದಮಾತನೊರೆವೆನಾ |
ನೀ ಯಜ್ಞಮಂ ಬೃಹಸ್ಪತಿಯ ಕೈಯಿಂ ತೊಡಗಿ |
ಸಾಯಸಂಬಟ್ಟು ಸಂವರ್ತನಂ ವರಿಸಬೇಡೆನ್ನಾಜ್ಞೆಯಂ ಮೀರ್ದೊಡೆ ||
ವಾಯದಿಂದಧ್ವರಂ ಕೆಡುವಂತೆ ಮಾಡುವೆನ |
ಪಾಯಮಂ ನಿನಗೆಂದು ಪೇಳ್ದಂ ಸುರಪನೆಂಬ |
ವಾಯುಸಖನಂ ನೋಡಿ ನಸುನಗುತೆ ವಿನಯದಿಂ ಭೂಪಾಲನಿಂತೆಂದನು ||38||

ಪದವಿಭಾಗ-ಅರ್ಥ:
ರಾಯ ಕೇಳು ಇಂದ್ರನಾಡಿದ ಮಾತನು ಒರೆವೆ ನಾ, ನೀ ಯಜ್ಞಮಂ ಬೃಹಸ್ಪತಿಯ ಕೈಯಿಂ ತೊಡಗಿಸು= [ರಾಜನೇ ಕೇಳು ನಾನು ಇಂದ್ರನು ಆಡಿದ ಮಾತನ್ನು ಹೇಳುತ್ತೇನೆ. ನೀನು ಯಜ್ಞವನ್ನು ಬೃಹಸ್ಪತಿಯ ಕೈಯಿಂದ ಮಾಡಿಸು] ಆಯಸಂಬಟ್ಟು ಸಂವರ್ತನಂ ವರಿಸಬೇಡ ಎನ್ನ ಆಜ್ಞೆಯಂ ಮೀರ್ದೊಡೆ ವಾಯದಿಂದ ಅಧ್ವರಂ ಕೆಡುವಂತೆ ಮಾಡುವೆನು ಅಪಾಯಮಂ ನಿನಗೆ ಎಂದು ಪೇಳ್ದಂ ಸುರಪನು=[ಪ್ರಯಾಸಪಟ್ಟು ಸಂವರ್ತನನ್ನು ಸೇರಿಸಿಕೊಳ್ಳಬೇಡ ನನ್ನ ಆಜ್ಞೆಯನ್ನು ಮೀರಿದರೆ ವಿರೋಧದಿಂದ ಯಜ್ಞವು ಕೆಡುವಂತೆ ಮಾಡುವೆನು. ನಿನಗೆ ಅಪಾಯವನ್ನು ಎಂದು ಇಂದ್ರನು ಹೇಳಿದ್ದಾನೆ], ಎಂಬ ವಾಯುಸಖನಂ ನೋಡಿ ನಸುನಗುತೆ ವಿನಯದಿಂ ಭೂಪಾಲನು ಇಂತೆಂದನು= [ಎಂಬ ಅಗ್ನಿಯನ್ನು ನೋಡಿ ನಸುನಗುತ್ತಾ ವಿನಯದಿಂದ ರಾಜನು ಹೀಗೆ ಹೇಳಿದನು].
  • ತಾತ್ಪರ್ಯ :ರಾಜನೇ ಕೇಳು ನಾನು ಇಂದ್ರನು ಆಡಿದ ಮಾತನ್ನು ಹೇಳುತ್ತೇನೆ. ನೀನು ಯಜ್ಞವನ್ನು ಬೃಹಸ್ಪತಿಯ ಕೈಯಿಂದ ಮಾಡಿಸು; ಹಟಮಾಡಿ ಸಂವರ್ತನನ್ನು ಸೇರಿಸಿಕೊಳ್ಳಬೇಡ. ನನ್ನ ಆಜ್ಞೆಯನ್ನು ಮೀರಿದರೆ ವಿರೋಧದಿಂದ ಯಜ್ಞವು ಕೆಡುವಂತೆ ಮಾಡುವೆನು. ನಿನಗೆ ಅಪಾಯವನ್ನು ಮಾಡುವೆನು. ಎಂದು ಇಂದ್ರನು ಹೇಳಿದ್ದಾನೆ, ಎಂದು ಹೇಳಿದ ಅಗ್ನಿಯನ್ನು ನೋಡಿ ನಸುನಗುತ್ತಾ ವಿನಯದಿಂದ ರಾಜನು ಹೀಗೆ ಹೇಳಿದನು.
  • (ಪದ್ಯ - ೩೮)

ಪದ್ಯ - ೩೯[ಸಂಪಾದಿಸಿ]

ಗುರುವೆ ಕುಲಗುರುವೆಂದು ಮೊದಲೆ ನಾಂ ಪೋಗಿ ವಿ |
ಸ್ತರದಿಂದೆ ಮಾಡಿಸಧ್ವರವನೆಂದಾಡಿದೊಡೆ |
ನರಯಾಜನಕ್ಕೊಲ್ಲೆನೆಂದ ಬಳಿಕೈಸಲೇ ಸಂವರ್ತನಂ ಮಖಕ್ಕೆ ||
ವರಿಸಿದೆನಸತ್ಯಮಂ ನುಡಿಯಲಂಜುವೆನಿನ್ನು |
ತುರಗಮೇಧಂ ನಡೆಯದೊಡೆ ಮಾಣಲೆಂದು ಭೂ |
ವರನಗ್ನಿಯಂ ಬೇಡಿಕೊಳುತಿರಲ್‍ಕಂಡು ಮುಳಿದಾ ಮುನಿಪನಿಂತೆಂದನು ||39||

ಪದವಿಭಾಗ-ಅರ್ಥ:
ಗುರುವೆ ಕುಲಗುರುವೆಂದು ಮೊದಲೆ ನಾಂ ಪೋಗಿ ವಿಸ್ತರದಿಂದೆ ಮಾಡಿಸು ಅಧ್ವರವನೆಂದಾಡಿದೊಡೆ= [ಬೃಹಸ್ಪತಿಯೆ ಕುಲಗುರುವೆಂದು ಮೊದಲೇ ನಾನು ಹೋಗಿ ಯಜ್ಞವನ್ನು ಶಾಸ್ತ್ರೀಯವಾಗಿ ಮಾಡಿಸು ಕೇಳಿದಾಗ,] ನರಯಾಜನಕ್ಕೆ ಒಲ್ಲೆನೆಂದ ಬಳಿಕೈಸಲೇ ಸಂವರ್ತನಂ ಮಖಕ್ಕೆ ವರಿಸಿದೆನಸತ್ಯಮಂ ನುಡಿಯಲಂಜುವೆನಿನ್ನು= ಅವನು ಮಾನವರು ಮಾಡುವ ಯಜ್ಞಕ್ಕೆ ಬರಲಾರೆನೆಂದ ನಂತರವೇ ಸಂವರ್ತನನ್ನು ಯಜ್ಞಕ್ಕೆ ಆರಿಸಿಕೊಂಡೆನು; ಅಸತ್ಯನ್ನು ನುಡಿಯಲಾರೆ ಅಸತ್ಯ ಹೇಳಲು ಅಂಜುವೆನು;] ತುರಗಮೇಧಂ ನಡೆಯದೊಡೆ ಮಾಣಲೆಂದು ಭೂವರನು ಅಗ್ನಿಯಂ ಬೇಡಿಕೊಳುತಿರಲ್‍= [ಇನ್ನು ಅಶ್ವಮೇಧವು ನಡೆಯದಿದ್ದರೆ ಹೋಗಲಿ, ಎಂದು ರಾಜನು ಅಗ್ನಿಯನ್ನು ಬೇಡಿಕೊಳುತ್ತಿರಲು], ಕಂಡು ಮುಳಿದಾ ಮುನಿಪನಿಂತೆಂದನು= ಅದನ್ನು ಕಂಡು ಸಂವರ್ತ ಮುನಿಯು ಹೀಗೆ ಹೇಳಿದನು.
  • ತಾತ್ಪರ್ಯ : ಬೃಹಸ್ಪತಿಯೆ ಕುಲಗುರುವೆಂದು ಮೊದಲೇ ನಾನು ಅವನ ಬಳಿ ಹೋಗಿ ಯಜ್ಞವನ್ನು ಶಾಸ್ತ್ರೀಯವಾಗಿ ಮಾಡಿಸು ಕೇಳಿದಾಗ, ಅವನು ಮಾನವರು ಮಾಡುವ ಯಜ್ಞಕ್ಕೆ ಬರಲಾರೆನೆಂದ ನಂತರವೇ ಸಂವರ್ತನನ್ನು ಯಜ್ಞಕ್ಕೆ ಆರಿಸಿಕೊಂಡೆನು; ಅಸತ್ಯನ್ನು ನುಡಿಯಲಾರೆ ಅಸತ್ಯ ಹೇಳಲು ಅಂಜುವೆನು; ಇನ್ನು ಅಶ್ವಮೇಧವು ನಡೆಯದಿದ್ದರೆ ಹೋಗಲಿ, ಎಂದು ರಾಜನು ಅಗ್ನಿಯನ್ನು ಬೇಡಿಕೊಳುತ್ತಿರಲು ಅದನ್ನು ಕಂಡು ಸಂವರ್ತ ಮುನಿಯು ಹೀಗೆ ಹೇಳಿದನು.
  • (ಪದ್ಯ - ೩೯)

ಪದ್ಯ ೪೦[ಸಂಪಾದಿಸಿ]

ಭೂಕಾಂತ ನಿನಗಿವನೊಳುಪಚಾರಮೇಕಿನ್ನು | ಸಾಕೀತನಂ ಕಳುಹು ಯಜ್ಞಮಂ ಕಿಡಿಸಿದೊಡೆ | ನಾಕಮಂ ಕೆಡಿಸುವೆಂ ಸಕಲಮಂ ಸುಡುವನಿಲನಂ ಸುಡುವೆನೀಕ್ಷಣದೊಳು ||
ಪಾಕಶಾಸನವನೊಡಗೊಂಡು ಬರಲಗ್ನಿಯಂ | ನೂಕೆಂದು ಸಂವರ್ತನಾಡಲ್ ಬೆದರ್ದು ಸುರ | ಲೋಕಕ್ಕೆ ಪೋಗಿ ವೈಶ್ವಾನರಂ ವಜ್ರಿಗರುಹಿದೊಡಾತನಿಂತೆಂದನು ||40||

ಪದವಿಭಾಗ-ಅರ್ಥ:
ಭೂಕಾಂತ ನಿನಗೆ ಇವನೊಳು ಉಪಚಾರಂ ಏಕೆ ಇನ್ನು ಸಾಕು ಈತನಂ ಕಳುಹು =[ರಾಜನೇ ನಿನಗೆ ಇವನ ಹತ್ತಿರ ಉಪಚಾರದ ಮಾತು ಏಕೆ? ಇನ್ನು,] ಯಜ್ಞಮಂ ಕಿಡಿಸಿದೊಡೆ ನಾಕಮಂ ಕೆಡಿಸುವೆಂ ಸಕಲಮಂ ಸುಡುವ ಅನಿಲನಂ ಸುಡುವೆನು ಈಕ್ಷಣದೊಳು=[ಯಜ್ಞವನ್ನು ಕೆಡಿಸಿದರೆ ಸ್ವರ್ಗಲೋಕವನ್ನೇ ಕೆಡಿಸುವೆನು; ಸಕಲವನ್ನೂ ಸುಡುವ ಈ ಅಗ್ನಿಯನ್ನೇ ಈಕ್ಷಣದಲ್ಲಿ ಸುಡುವೆನು.] ಪಾಕಶಾಸನು ಅವನ(ಇಂದ್ರನ) ಒಡಗೊಂಡು ಬರಲು ಅಗ್ನಿಯಂ ನೂಕೆಂದು ಸಂವರ್ತನಾಡಲ್= [ಅಗ್ನಿಯು ಇಂದ್ರನ ಜೊತೆಸೇರಿಕೊಂಡು ಬರುವುದಕ್ಕಾಗಿ ಅಗ್ನಿಯನ್ನು ಕಳಿಸೆಂದು ಸಂವರ್ತನು ಹೇಳಲು], ಬೆದರ್ದು ಸುರ ಲೋಕಕ್ಕೆ ಪೋಗಿ ವೈಶ್ವಾನರಂ ವಜ್ರಿಗರುಹಿದೊಡಾತನಿಂತೆಂದನು= [ಹೆದರಿ ಸುರಲೋಕಕ್ಕೆ ಹೋಗಿ ಅಗ್ನಿಯು ಇಂದ್ರನಿಗೆ ಹೇಳಿದಾಗ ಆತನು ಹೀಗೆ ಹೇಳೀದನು.]
  • ತಾತ್ಪರ್ಯ:ರಾಜನೇ ನಿನಗೆ ಇವನ ಹತ್ತಿರ ಉಪಚಾರದ ಮಾತು ಏಕೆ? ಸಾಕು ಇನ್ನು, ಯಜ್ಞವನ್ನು ಕೆಡಿಸಿದರೆ ಸ್ವರ್ಗಲೋಕವನ್ನೇ ಕೆಡಿಸುವೆನು; ಸಕಲವನ್ನೂ ಸುಡುವ ಈ ಅಗ್ನಿಯನ್ನೇ ಈ ಕ್ಷಣದಲ್ಲಿ ಸುಡುವೆನು. ಅಗ್ನಿಯು ಇಂದ್ರನ ಜೊತೆಸೇರಿಕೊಂಡು ಬರುವುದಕ್ಕಾಗಿ ಅಗ್ನಿಯನ್ನು ಕಳಿಸೆಂದು ಸಂವರ್ತನು ಹೇಳಲು, ಹೆದರಿ ಸುರಲೋಕಕ್ಕೆ ಹೋಗಿ ಅಗ್ನಿಯು ಇಂದ್ರನಿಗೆ ಹೇಳಿದಾಗ ಆತನು ಹೀಗೆ ಹೇಳೀದನು.

(ಪದ್ಯ -೪೦)

ಪದ್ಯ ೪೧[ಸಂಪಾದಿಸಿ]

ಇನ್ನೊಂದುಬಾರಿ ನೀಂ ಪೋಗಿ ವೇಳಾ ನೃಪತಿ | ಗೆನ್ನ ವಜ್ರಕ್ಕೆ ಗುರಿಯಾಗಬೇಡೆಂದೆನಲ್ | ತನ್ನ ಕಯ್ಯೊಳ್ ಸಾಗದಂಜುವೆಂ ಸಂವರ್ತನತಿತಪೋಬಲನಿಳೆಯೊಳು ||
ಮುನ್ನ ಭೂಸುರಶಾಪದಿಂದೆ ಪಲರಳಿದುಳಿದು | ಬನ್ನ ಬಟ್ಟವರುಂಟು ಸಾಕೆಂದು ಶಿಖಿ ತೊಲಗೆ | ಮನ್ನಿಸಿ ಪುರಂದರಂ ಧೃತರಾಷ್ಟ್ರನೆಂಬ ಗಂಧರ್ವಂಗೆ ನೇಮಿಸಿದನು ||41||

ಪದವಿಭಾಗ-ಅರ್ಥ:
ಇನ್ನೊಂದುಬಾರಿ ನೀಂ ಪೋಗಿ ವೇಳಾ ನೃಪತಿಗೆನ್ನ ವಜ್ರಕ್ಕೆ ಗುರಿಯಾಗಬೇಡೆಂದೆನಲ್=[ಇನ್ನೊಂದುಬಾರಿ ನೀನು ಹೋಗಿಹೇಳು ಆ ನೃಪತಿಗೆ ನನ್ನ ವಜ್ರಾಯುಧಕ್ಕೆ ಗುರಿಯಾಗಬಾರದು ಎಂದು ಹೇಳಿದಾಗ,] ತನ್ನ ಕಯ್ಯೊಳ್ ಸಾಗದಂಜುವೆಂ ಸಂವರ್ತನತಿತಪೋಬಲನಿಳೆಯೊಳು= [ಅಗ್ನಿಯು ತನ್ನ ಕಯ್ಯಲ್ಲಿ ಆಗದು, ನಾನು ಅಂಜುವೆನು; ಭೂಮಿಯಲ್ಲಿ ಸಂವರ್ತನು ಅತಿ ತಪೋಬಲನು;] ಮುನ್ನ ಭೂಸುರಶಾಪದಿಂದೆ ಪಲರಳಿದುಳಿದು ಬನ್ನ ಬಟ್ಟವರುಂಟು ಸಾಕೆಂದು ಶಿಖಿ ತೊಲಗೆ=[ಹಿಂದೆ ಬ್ರಾಹ್ಮಣರ ಶಾಪದಿಂದ ಹಲವರು ಸತ್ತುಳಿದು ಕಷ್ಟಪಟ್ಟವರುಂಟು, ಸಾಕೆಂದು ಅಗ್ನಿಯು ಹೊಗಲು], ಅವನನ್ನು ಕ್ಷಮಿಸಿ, ಇಂದ್ರನು ಧೃತರಾಷ್ಟ್ರನೆಂಬ ಗಂಧರ್ವನಗೆ ನೇಮಿಸಿದನು.
  • ತಾತ್ಪರ್ಯ:ಇನ್ನೊಂದುಬಾರಿ ನೀನು ಹೋಗಿಹೇಳು ಆ ನೃಪತಿಗೆ ನನ್ನ ವಜ್ರಾಯುಧಕ್ಕೆ ಗುರಿಯಾಗಬಾರದು ಎಂದು ಹೇಳಿದಾಗ, ಅಗ್ನಿಯು ತನ್ನ ಕಯ್ಯಲ್ಲಿ ಆಗದು, ನಾನು ಅಂಜುವೆನು; ಭೂಮಿಯಲ್ಲಿ ಸಂವರ್ತನು ಅತಿ ತಪೋಬಲನು; ಹಿಂದೆ ಬ್ರಾಹ್ಮಣರ ಶಾಪದಿಂದ ಹಲವರು ಸತ್ತುಳಿದು ಕಷ್ಟಪಟ್ಟವರುಂಟು, ಸಾಕೆಂದು ಅಗ್ನಿಯು ಹೊಗಲು, ಅವನನ್ನು ಕ್ಷಮಿಸಿ, ಇಂದ್ರನು ಧೃತರಾಷ್ಟ್ರನೆಂಬ ಗಂಧರ್ವನಿಗೆ ನೇಮಿಸಿದನು.

(ಪದ್ಯ -೪೧)

ಪದ್ಯ ೪೨[ಸಂಪಾದಿಸಿ]

ಧೃತರಾಷ್ಟನೆಂಬ ಗಂಧರ್ವರಾಜಂ ಬಂದು | ಶತಮಖಂ ಸಂವರ್ತನಂ ಬಿಟ್ಟು ವರಬೃಹ | ಸ್ಪತಿಯನಧ್ವರಕೆ ವರಿಸದೊಡೀಗ ವಜ್ರದಿಂದರಿದಪಂ ನಿನ್ನನೆಂದು ||
ಕ್ಷಿತಿಪಂಗೆ ಪೇಳ್ದೊಡದ ಕೇಳ್ದಾ ಮುನೀಶ್ವರಂ | ಖತಿಗೊಂಡೊಡಾತಂ ಮರಳ್ದು ಶಕ್ರಂಗರುಹ | ಲತುಳಸನ್ನಾಹದಿಂ ಪೊರಮಟ್ಟನಮರೇಂದ್ರನನಿಮಿಷರ ಗಡಣದಿಂದೆ ||42||

ಪದವಿಭಾಗ-ಅರ್ಥ:
*ಧೃತರಾಷ್ಟನೆಂಬ ಗಂಧರ್ವರಾಜಂ ಬಂದು ಶತಮಖಂ ಸಂವರ್ತನಂ ಬಿಟ್ಟು ವರಬೃಹಸ್ಪತಿಯನಧ್ವರಕೆ ವರಿಸದೊಡೀಗ ವಜ್ರದಿಂದರಿದಪಂ ನಿನ್ನನೆಂದು= [ಧೃತರಾಷ್ಟನೆಂಬ ಗಂಧರ್ವರಾಜನು ಬಂದು ಇಂದ್ರನು ಹೇಳಿದಂತೆ ಸಂವರ್ತನನ್ನು ಬಿಟ್ಟು ಶ್ರೇಷ್ಠ ಬೃಹಸ್ಪತಿಯನ್ನು ಯಜ್ಞಕ್ಕೆ ನೆಮಿಸಿಕೊಳ್ಳದಿದ್ದರೆ ಈಗ ಅವನು ವಜ್ರಾಯುಧದಿಂದ ನಿನ್ನನ್ನು ಕತ್ತರಿಸುವನು ಎಂದು,] ಕ್ಷಿತಿಪಂಗೆ ಪೇಳ್ದೊಡದ ಕೇಳ್ದಾ ಮುನೀಶ್ವರಂ ಖತಿಗೊಂಡೊಡಾತಂ=[ಮರುತ್ತರಾಜನಿಗೆ ಹೇಲಿದಾಗ ಅದನ್ನು ಕೇಳಿದ ಆ ಮುನೀಶ್ವರನು ಸಿಟ್ಟಾದಾಗ, ಆತನು ] ಮರಳ್ದು ಶಕ್ರಂಗೆ ಅರುಹಲು ಅತುಳಸನ್ನಾಹದಿಂ ಪೊರಮಟ್ಟನು ಅಮರೇಂದ್ರನು ಅನಿಮಿಷರ ಗಡಣದಿಂದೆ= [ಹಿಂತಿರುಗಿಹೋಗಿ ಇಂದ್ರನಿಗೆ ಹೇಳಲು, ಬಹಳ ಸನ್ನಾಹ ಮಾಡಿಕೊಂಡು ಇಂದ್ರನು ದೇವತೆಗಳ ಸಮೂಹದೊನೆ ಹೊರಟನು.
  • ತಾತ್ಪರ್ಯ:* ಧೃತರಾಷ್ಟನೆಂಬ ಗಂಧರ್ವರಾಜನು ಬಂದು ಇಂದ್ರನು ಹೇಳಿದಂತೆ ಸಂವರ್ತನನ್ನು ಬಿಟ್ಟು ಶ್ರೇಷ್ಠ ಬೃಹಸ್ಪತಿಯನ್ನು ಯಜ್ಞಕ್ಕೆ ನೆಮಿಸಿಕೊಳ್ಳದಿದ್ದರೆ ಈಗ ಅವನು ವಜ್ರಾಯುಧದಿಂದ ನಿನ್ನನ್ನು ಕತ್ತರಿಸುವನು ಎಂದು, ಮರುತ್ತರಾಜನಿಗೆ ಹೇಳಿದಾಗ, ಅದನ್ನು ಕೇಳಿದ ಆ ಮುನೀಶ್ವರನು ಕೋಪಗೊಂಡನು, ಆಗ ಆತನು ಹಿಂತಿರುಗಿಹೋಗಿ ಇಂದ್ರನಿಗೆ ಹೇಳಲು, ಬಹಳ ಯುದ್ಧಸನ್ನಾಹ ಮಾಡಿಕೊಂಡು ಇಂದ್ರನು ದೇವತೆಗಳ ಸಮೂಹದೊನೆ ಹೊರಟನು.

(ಪದ್ಯ -೪೨)IXX

ಪದ್ಯ ೪೩[ಸಂಪಾದಿಸಿ]

ಕೋಪದಿಂದಾಗಳೆತ್ತಿದ ವಜ್ರಹಸ್ತದಿಂ | ದಾಪುರಂದರನೈದೆ ಕಂಡು ನಡುನಡುಗುತಿಹ | ಭೂಪನಂ ಸಂತೈಸಿ ಸಂವರ್ತನಿಂದ್ರಾಗ್ನಿ ಮೊದಲಾದಮರಗಣವನು ||
ರೂಪಿಸಿದ ಚಿತ್ರಪಟದಂತಾಗ ನಿಲಿಸಲ್ ಪ್ರ | ತಾಪಂಗಳುಡುಗಿ ನಿರ್ಜರ ನಿಕರಮಳವಳಿಯ | ಲಾ ಪರಮಧಾರ್ಮಿಕ ಮರುತ್ತಂ ತಪಸ್ವಿಯಂ ಬೇಡಿಕೊಂಡಂ ನಯದೊಳು ||43||

ಪದವಿಭಾಗ-ಅರ್ಥ:
*ಕೋಪದಿಂದ ಆಗಳ್ ಎತ್ತಿದ ವಜ್ರಹಸ್ತದಿಂದ ಆಪುರಂದರನು ಐದೆ ಕಂಡು ನಡುನಡುಗುತಿಹ ಭೂಪನಂ ಸಂತೈಸಿ=[ಆ ಪುರಂದರನೆಂಬ ಇಂದ್ರನು ಆಗ ಕೋಪದಿಂದ ಎತ್ತಿದ ವಜ್ರಹಸ್ತದಿಂದ ಬರಲು ಅದನ್ನು ಕಂಡು ನಡುನಡುಗುತ್ತಿರುವ ರಾಜನನ್ನು ಸಮಾಧಾನಪಡಿಸಿ,] ಸಂವರ್ತನು ಇಂದ್ರ ಅಗ್ನಿ ಮೊದಲಾದ ಅಮರಗಣವನು ರೂಪಿಸಿದ ಚಿತ್ರಪಟದಂತಾಗ ನಿಲಿಸಲ್=[ಆಗ ಸಂವರ್ತನು ಇಂದ್ರ ಅಗ್ನಿ ಮೊದಲಾದ ಅಮರಗಣವನ್ನು ಚಿತ್ರಪಟದಂತೆ ರೂಪಿಸಿ ಸ್ತಬ್ಧಗೋಲಿಸಿ ನಿಲ್ಲಿಸಲು,] ಪ್ರತಾಪಂಗಳುಡುಗಿ ನಿರ್ಜರ ನಿಕರಂ ಅಳವಳಿಯಲು ಆ ಪರಮಧಾರ್ಮಿಕ ಮರುತ್ತಂ ತಪಸ್ವಿಯಂ ಬೇಡಿಕೊಂಡಂ ನಯದೊಳು= [ಅನರ ಶೌರ್ಯ ಪ್ರತಾಪಗಳು ಉಡುಗಿ ದೇವತೆಗಳ ಸಮೂಹವು ಭಯಪಟ್ಟಿರಲು, ಆ ಪರಮಧಾರ್ಮಿಕನಾದ ಮರುತ್ತನು ಸಂವರ್ತ ತಪಸ್ವಿಯನ್ನು ವಿನಯದಿಂದ ಈ ರೀತಿ ಬೇಡಿಕೊಂಡನು ]
  • ತಾತ್ಪರ್ಯ:*ಆ ಪುರಂದರನೆಂಬ ಇಂದ್ರನು ಆಗ ಕೋಪದಿಂದ ಎತ್ತಿದ ವಜ್ರಹಸ್ತದಿಂದ ಬರಲು ಅದನ್ನು ಕಂಡು ನಡುಗುತ್ತಿರುವ ರಾಜನನ್ನು ಸಂವರ್ತನು ಸಮಾಧಾನಪಡಿಸಿ, ಇಂದ್ರ ಅಗ್ನಿ ಮೊದಲಾದ ಅಮರಗಣವನ್ನು ಬರೆದಿಟ್ಟ ಚಿತ್ರಪಟದಂತೆ ಸ್ತಬ್ಧಗೋಲಿಸಿ ನಿಲ್ಲಿಸಲು, ಅನರ ಶೌರ್ಯ ಪ್ರತಾಪಗಳು ಉಡುಗಿ ದೇವತೆಗಳ ಸಮೂಹವು ಭಯಪಟ್ಟಿರಲು, ಆ ಪರಮಧಾರ್ಮಿಕನಾದ ಮರುತ್ತನು ಸಂವರ್ತ ತಪಸ್ವಿಯನ್ನು ವಿನಯದಿಂದ ಈ ರೀತಿ ಬೇಡಿಕೊಂಡನು.

(ಪದ್ಯ -೪೩)

ಪದ್ಯ ೪೪[ಸಂಪಾದಿಸಿ]

ಎಲೆ ಮುನ್ವೀಶರ ಹವಿರ್ಭಾಗಮಂ ಕೊಂಬಮರ | ಕುಲಮಿಂತಿರಲ್ ಬಹುದೆ ಪ್ರತ್ಯಕ್ಷಮಾಗಿ ಬಂ | ದೊಲಿದೆನ್ನಯಾಗದೊಳ್ ವಿನಯದಿಂದೀಸಿಕೊಳಲಾಹುತಿಯ ಪಸುಗೆಗಳನು||
ಸಲಿಸಬೇಕೆನ್ನ ಭಿನ್ನಪವನೀ ಸುರಪನೊಳ್ | ಕಲಹಮಂ ಬಿಡಿಸೆಂದು ಭೂವಲ್ಲಭಂ ಕೃತಾಂ | ಜಲಿಯಿಂದೆ ಸಂವರ್ತನಂ ಪ್ರಾರ್ಥಿಸಿದೊಡಿತ್ತನಾ ನೃಪನ ವಾಂಛಿತವನು ||44||

ಪದವಿಭಾಗ-ಅರ್ಥ:
ಎಲೆ ಮುನ್ವೀಶರ ಹವಿರ್ಭಾಗಮಂ ಕೊಂಬ ಅಮರಕುಲ(ದೇವಗಣ) ಮಿಂತಿರಲ್ ಬಹುದೆ=[ಎಲೆ ಮುನ್ವೀಶರನೇ ನಾನು ಯಜ್ಞದಲ್ಲಿ ಕೊಡು ಹವಿರ್ಭಾಗವನ್ನು ತೆಗೆದುಕೊಳ್ಳುವ ದೇವತೆಗಳ ಸಮೂಹವು ಹೀಗೆಚಲನೆ ಇಲ್ಲದೆ ಇರಬಹುದೆ?], ಪ್ರತ್ಯಕ್ಷಮಾಗಿ ಬಂದು ಒಲಿದು ಎನ್ನ ಯಾಗದೊಳ್ ವಿನಯದಿಂದ ಈಸಿಕೊಳಲಿ ಆಹುತಿಯ ಪಸುಗೆಗಳನು=[ಪ್ರತ್ಯಕ್ಷಮಾಗಿ ಬಂದು ಪ್ರೀತಿಯಿಂದ ನನ್ನ ಯಾಗದಲ್ಲಿ ಆಹುತಿಯಾಗಿ ಹಾಕಿದ ಭಾಗಗಳನ್ನು ವಿನಯದಿಂದ ತೆಗೆದುಕೊಳ್ಳಲ,] ಸಲಿಸಬೇಕು ಎನ್ನ ಭಿನ್ನಪವನು= [ನನ್ನ ಬೇಡಿಕೆಯನ್ನು ನೀವು ನೆರವೇರಿಸಿಕೊಡಬೇಕು,] ಈ ಇಂದ್ರನೊಂದಿಗೆ ಜಗಳವನ್ನು ಬಿಡಿಸು ಎಂದು ಮರುತ್ತರಾಜನು ಅಂಜಲೀಬದ್ಧನಾಗಿ ಸಂವರ್ತನನ್ನು ಪ್ರಾರ್ಥಿಸಿದಾಗ ಆ ರಾಜನ ಕೋರಿಕೆಯನ್ನು ಕೊಟ್ಟನು.
  • ತಾತ್ಪರ್ಯ:*ಎಲೆ ಮುನ್ವೀಶರನೇ ನಾನು ಯಜ್ಞದಲ್ಲಿ ಕೊಡುವ ಹವಿರ್ಭಾಗವನ್ನು ತೆಗೆದುಕೊಳ್ಳುವ ಈ ದೇವತೆಗಳ ಸಮೂಹವು ಹೀಗೆ ಚಲನೆ ಇಲ್ಲದೆ ಇರಬಹುದೆ?, ಅವರು ಪ್ರತ್ಯಕ್ಷಮಾಗಿ ಬಂದು ಪ್ರೀತಿಯಿಂದ ನನ್ನ ಯಾಗದಲ್ಲಿ ಆಹುತಿಯಾಗಿ ಹಾಕಿದ ಭಾಗಗಳನ್ನು ವಿನಯದಿಂದ ತೆಗೆದುಕೊಳ್ಳುವಂತೆ ಆಗಲಿ; ನನ್ನ ಬೇಡಿಕೆಯನ್ನು ನೀವು ನೆರವೇರಿಸಿಕೊಡಬೇಕು, ಈ ಇಂದ್ರನೊಂದಿಗೆ ಜಗಳವನ್ನು ಬಿಡಿಸು ಎಂದು ಮರುತ್ತರಾಜನು ಅಂಜಲೀಬದ್ಧನಾಗಿ ಸಂವರ್ತನನ್ನು ಪ್ರಾರ್ಥಿಸಿದಾಗ ಆ ರಾಜನ ಕೋರಿಕೆಯನ್ನು ಈಡೇರಿಸಿಕೊಟ್ಟನು.

(ಪದ್ಯ -೪೪)

ಪದ್ಯ ೪೫[ಸಂಪಾದಿಸಿ]

ಭೂಮೀಶ ಕೇಳ್ ಬಳಿಕ ಸಂವರ್ತಮುನಿವರನ | ಸಾಮರ್ಥ್ಯಮಂ ನೋಡಿ ವೈರಮಂ ಬಿಟ್ಟು ಸು | ತ್ರಾಮಂ ಸಕಲದಿವಿಜರೊಡಗೂಡಿ ಯಜ್ಞದ ಹವಿರ್ಬಾಗಮಂ ಕೊಳಲ್ಕೆ ||
ಪ್ರೇಮದಿಂ ಪ್ರತ್ಯಕ್ಷಮಾಗಿ ಬಂದಿರುತಿರ್ದ | ನಾ ಮರುತ್ತಂಗೆ ಸಂತೋಷಂನೆಗಳ್ದುದು ಮ | ಹಾಮಖಂ ನೆರೆದುದು ಸಮಸ್ತ ವೈಭವದ ವಿಸ್ತಾರದಿಂ ಖ್ಯಾತಮಾಗಿ ||45||

ಪದವಿಭಾಗ-ಅರ್ಥ:
ಜನಮೇಜಯನೇ ಕೇಳ್ ಬಳಿಕ ಸಂವರ್ತ ಮುನಿವರನ ಸಾಮರ್ಥ್ಯಮಂ ನೋಡಿ ವೈರಮಂ ಬಿಟ್ಟು ಸುತ್ರಾಮಂ(ಇಂದ್ರ) ಸಕಲದಿವಿಜರೊಡಗೂಡಿ= [ಜನಮೇಜಯನೇ ಕೇಳು ಬಳಿಕ ಸಂವರ್ತ ಮುನಿವರನ ಸಾಮರ್ಥ್ಯವನ್ಉ ನೋಡಿ ವೈರವನ್ನು ಬಿಟ್ಟು ಇಂದ್ರನು ಎಲ್ಲಾ ದೇವತೆಗಳ ಒಡಗೂಡಿಕೊಂಡು,] ಯಜ್ಞದ ಹವಿರ್ಬಾಗಮಂ ಕೊಳಲ್ಕೆ

ಪ್ರೇಮದಿಂ ಪ್ರತ್ಯಕ್ಷಮಾಗಿ ಬಂದಿರುತಿರ್ದನಾ= [ದೇವತೆಗಳ ಯಜ್ಞದ ಹವಿರ್ಬಾಗವನ್ನು ತೆಗೆದುಕೊಳ್ಳಲು ಪ್ರೇತಿಯಿಂದ ಪ್ರತ್ಯಕ್ಷವಾಗಿ ಬಂದಿರುತ್ತಿದ್ದರು.]ಮರುತ್ತಂಗೆ ಸಂತೋಷಂನೆಗಳ್ದುದು ಮಹಾಮಖಂ ನೆರೆದುದು ಸಮಸ್ತ ವೈಭವದ ವಿಸ್ತಾರದಿಂ ಖ್ಯಾತಮಾಗಿ= [ಮರುತ್ತರಾಜನಿಗೆ ಸಂತೋಷವನ್ನು ಕೊಡುವಂತೆ, ಸಮಸ್ತ ವಿಸ್ತಾರದ ವೈಭವದಲ್ಲಿ ಮಹಾಯಜ್ಞವು ನಡೆದು ಪ್ರಸಿದ್ಧವಾಯಿತು.

  • ತಾತ್ಪರ್ಯ:*ಜನಮೇಜಯನೇ ಕೇಳು ಬಳಿಕ ಸಂವರ್ತ ಮುನಿವರನ ಸಾಮರ್ಥ್ಯವನ್ನು ನೋಡಿ ವೈರವನ್ನು ಬಿಟ್ಟು ಇಂದ್ರನು ಎಲ್ಲಾ ದೇವತೆಗಳ ಒಡಗೂಡಿಕೊಂಡು, ದೇವತೆಗಳ ಯಜ್ಞದ ಹವಿರ್ಬಾಗವನ್ನು ತೆಗೆದುಕೊಳ್ಳಲು ಪ್ರೀತಿಯಿಂದ ಪ್ರತ್ಯಕ್ಷವಾಗಿ ಬಂದಿರುತ್ತಿದ್ದರು. ಮರುತ್ತರಾಜನಿಗೆ ಸಂತೋಷವನ್ನು ಕೊಡುವಂತೆ, ಸಮಸ್ತ ವಿಸ್ತಾರದ ವೈಭವದಲ್ಲಿ ಮಹಾಯಜ್ಞವು ನಡೆದು ಪ್ರಸಿದ್ಧವಾಯಿತು.

(ಪದ್ಯ -೪೫)

ಪದ್ಯ ೪೬[ಸಂಪಾದಿಸಿ]

ವರ್ತಿಸಿತು ವೈದಿಕವಿಥಾನದಿಂದೆಸೆವ ಸಂ | ವರ್ತಮುನಿ ಮಾಡಿಸೆ ಮಹಾಧ್ವರಂ ಸಕಲದಿವಿ | ಜರ್ತಮ್ಮ ತಮ್ಮ ಭಾಗಂಗಳಂ ಪ್ರತ್ಯಕ್ಷಮಾಗಿ ಕೈಕೊಂಡರಿರ್ದು ||
ಮರ್ತ್ಯ ಲೋಕಂ ಕನಕಮಯಮಾಗೆ ಭೂಮಿಯಮ | ರರ್ತೆಗೆದು ಹೊತ್ತದಕ್ಷಿಣೆಗಳಿಂ ದಣಿದು ಬಿಸು | ಟರ್ತುಹಿನಗಿರಿಯೊಳಗಣಿತಹೇಮರಾಶಿಗಳನೇನೆಂಬೆನಚ್ಚರಿಯನು ||46||

ಪದವಿಭಾಗ-ಅರ್ಥ:
ವರ್ತಿಸಿತು(ನಡೆಯುತ್ತಿತ್ತು) ವೈದಿಕವಿಥಾನದಿಂದೆಸೆವ ಸಂವರ್ತಮುನಿ ಮಾಡಿಸೆ ಮಹಾಧ್ವರಂ=[ ಸಂವರ್ತಮುನಿ ಮಹಾಯಜ್ಞವನ್ನು ವೈದಿಕವಿಥಾನದಿಂದ ಮಾಡಿಸಲು ವೈಭವದಿಂದ ತೋರುವ ಚನ್ನಾಗಿ ನಡೆಯಿತು.] ಸಕಲದಿವಿಜರ್ ತಮ್ಮ ತಮ್ಮ ಭಾಗಂಗಳಂ ಪ್ರತ್ಯಕ್ಷಮಾಗಿ ಕೈಕೊಂಡರು ಇರ್ದು(ಇದ್ದು)= [ಸಕಲ ದೇವತೆಗಳೂ ಇದ್ದು ತಮ್ಮ ತಮ್ಮ ಭಾಗಂಗಳನ್ನು ಪ್ರತ್ಯಕ್ಷವಾಗಿ ಬಂದು ತೆಗೆದುಕೊಂಡರು.] ಮತ್ರ್ಯಲೋಕಂ ಕನಕಮಯಮಾಗೆ ಭೂಮಿಯಅಮರರ್( ಬ್ರಾಹ್ಮಣರು) ತೆಗೆದು ಹೊತ್ತ ದಕ್ಷಿಣೆಗಳಿಂ ದಣಿದು ಬಿಸುಟರ್ ತುಹಿನಗಿರಿಯೊಳ್ ಅಗಣಿತ ಹೇಮರಾಶಿಗಳನು ಏನೆಂಬೆನು ಅಚ್ಚರಿಯನು= ಭೂಲೋಕವು ಚಿನ್ನದ ಮಯವಾಗಲು ಬ್ರಾಹ್ಮಣರು ಹೊತ್ತ ದಕ್ಷಿಣೆಗಳಿಂದ ಬಳಲಿ ಹೊರಲಾರದೆ ಲೆಕ್ಕವಿಲ್ಲದಷ್ಟು ಚಿನ್ನದ ರಾಶಿಗಳನ್ನು ಹಿಮಾಲಯದಲ್ಲಿ ಎಸೆದು ಬಿಟ್ಟುಹೊದರು, ಈ ಅಶ್ಚರ್ಯವನ್ನು ಕುರಿತು ಏನ ಹೇಳಲಿ.
  • ತಾತ್ಪರ್ಯ:* ಸಂವರ್ತಮುನಿಯು ಮಹಾಯಜ್ಞವನ್ನು ವೈದಿಕವಿಥಾನದಿಂದ ಮಾಡಿಸಲು ವೈಭವದಿಂದ ತೋರುತ್ತಿದ್ದ ಅದು ಚನ್ನಾಗಿ ನಡೆಯಿತು. ಸಕಲ ದೇವತೆಗಳೂ ಇದ್ದು ತಮ್ಮ ತಮ್ಮ ಭಾಗಂಗಳನ್ನು ಪ್ರತ್ಯಕ್ಷವಾಗಿ ಬಂದು ತೆಗೆದುಕೊಂಡರು.ಭೂಲೋಕವು ಚಿನ್ನದ ಮಯವಾಯಿತು. ಬ್ರಾಹ್ಮಣರು ಹೊತ್ತ ದಕ್ಷಿಣೆಗಳಿಂದ ಬಳಲಿ ಹೊರಲಾರದೆ ಲೆಕ್ಕವಿಲ್ಲದಷ್ಟು ಚಿನ್ನದ ರಾಶಿಗಳನ್ನು ಹಿಮಾಲಯದಲ್ಲಿ ಎಸೆದು ಬಿಟ್ಟುಹೊದರು, ಈ ಅಶ್ಚರ್ಯವನ್ನು ಕುರಿತು ಏನ ಹೇಳಲಿ.

(ಪದ್ಯ -೪೬)

ಪದ್ಯ ೪೭[ಸಂಪಾದಿಸಿ]

ಪಾರ್ಥಿವಾಗ್ರಣಿ ಮರುತ್ತಂ ಬಳಿಕ ವಿನಯದಿಂ | ಪ್ರಾರ್ಥಿಸಿದನಿಂದ್ರಾದಿಗಳನವರ್ ಮುದದೊಳಿ | ಷ್ವಾರ್ಥಮಂ ಸಲಿಸಿದರ್ ತಣಿದಲಸಿದರ್ ದ್ವಿಜರ್ ಭೂರಿದಕ್ಷಿಣೆಗಳಿಂದೆ ||
ಸ್ವಾರ್ಥಮೆಲ್ಲಮನಿತ್ತು ಸಂವರ್ತಮುನಿಗೆ ಮಖ | ತೀರ್ಥದೊಳ್ ಮಿಂದು ಶುಚಿಯಾಗಿ ದೇವರ್ಕಳಿದು | ಸಾರ್ಥಮೆನೆ ಚಿರಕಾಲಮವನಿಯೊಳವಂ ಬಾಳ್ದು ಪಡೆದನುತ್ತಮಗತಿಯನು ||47||

ಪದವಿಭಾಗ-ಅರ್ಥ:
ಪಾರ್ಥಿವ ಅಗ್ರಣಿ(ದೊರೆಗಳಲ್ಲಿ ಉತ್ತಮನು)ಜನಮೇಜಯನೇ ಮರುತ್ತಂ ಬಳಿಕ ವಿನಯದಿಂ ಪ್ರಾರ್ಥಿಸಿದನಿಂದ್ರಾದಿಗಳನವರ್ ಮುದದೊಳಿ ಷ್ವಾರ್ಥಮಂ ಸಲಿಸಿದರ್=[ದೊರೆಗಳಲ್ಲಿ ಉತ್ತಮನಾದ ಜನಮೇಜಯನೇ ಮರುತ್ತನು ಬಳಿಕ ವಿನಯದಿಂದ ಪ್ರಾರ್ಥಿಸಿದನು ಇಂದ್ರಾದಿಗಳನು, ಅವರು ಸಂತಸದಿಂದ (ಮರುತ್ತ ರಾಜನ) ಇಷ್ವಾರ್ಥವನ್ನು ಸಲ್ಲಿಸಿದರು.] ತಣಿದು=ತೃಪ್ತರಾಗಿ, ಅಲಸಿದರ್=ಹೊರಲಾರದೆ ಆಯಾಸಪಟ್ಟರು; ದ್ವಿಜರ್ (ಬ್ರಾಹ್ಮಣರು) ಭೂರಿದಕ್ಷಿಣೆಗಳಿಂದೆ ಸ್ವಾರ್ಥಮೆಲ್ಲಮನು=ತನ್ನದ್ರವ್ಯವನ್ನು ಇತ್ತು ಸಂವರ್ತಮುನಿಗೆ=[ಬ್ರಾಹ್ಮಣರು ಭಾರಿ ದಕ್ಷಿಣೆಗಳನ್ನು ಪಡೆದು ತಣಿದು /ತೃಪ್ತರಾಗಿ ಅಲಸಿದರ್/ಆಯಾಸಸಪಟ್ಟರು, ಮರುತ್ತರಾಜನು ಸಂವರ್ತಮುನಿಗೆ ತನ್ನದೆಲ್ಲವನ್ನೂ ಕೊಟ್ಟು], ಮಖ ತೀರ್ಥದೊಳ್ ಮಿಂದು ಶುಚಿಯಾಗಿ ದೇವರ್ಕಳು ಇದು ಸಾರ್ಥಂ ಎನೆ ಚಿರಕಾಲಂ ಅವನಿಯೊಳ್ ಅವಂ ಬಾಳ್ದು ಪಡೆದನು ಉತ್ತಮ ಗತಿಯನು= [ಯಜ್ಞತೀರ್ಥದಲ್ಲಿ ಸ್ನಾನಮಾಡಿ ಶುಚಿಯಾಗಿ ದೇವತೆಗಳು ಇದು ಸಾರ್ಥಕ/ಸಫಲವಾಯಿತು ಎನ್ನಲು ಬಹಳಕಾಲ ಭೂಮಿಯಮೇಲೆ ಬಾಳಿ ಉತ್ತಮಗತಿಯನ್ನು ಪಡೆದನು.]
  • ತಾತ್ಪರ್ಯ:*ದೊರೆಗಳಲ್ಲಿ ಉತ್ತಮನಾದ ಜನಮೇಜಯನೇ, ಮರುತ್ತನು ಬಳಿಕ ವಿನಯದಿಂದ ಇಂದ್ರಾದಿಗಳನ್ನು ಪ್ರಾರ್ಥಿಸಿದನು, ಅವರು ಸಂತಸದಿಂದ (ಮರುತ್ತ ರಾಜನ) ಇಷ್ವಾರ್ಥವನ್ನು ಸಲ್ಲಿಸಿದರು. ಬ್ರಾಹ್ಮಣರು ಭಾರಿ ದಕ್ಷಿಣೆಗಳನ್ನು ಪಡೆದು ತೃಪ್ತರಾಗಿ ದಾನದಕ್ಷಿಣೆಗಳನ್ನು ಹೊರಲಾರದೆ ಆಯಾಸಪಟ್ಟರು. ಮರುತ್ತರಾಜನು ಸಂವರ್ತಮುನಿಗೆ ತನ್ನದೆಲ್ಲವನ್ನೂ ಕೊಟ್ಟು, ಯಜ್ಞತೀರ್ಥದಲ್ಲಿ ಸ್ನಾನಮಾಡಿ ಶುಚಿಯಾಗಲು, ದೇವತೆಗಳು ಯಜ್ಞವು ಸಫಲವಾಯಿತು ಎಂದರು. ಮರುತ್ತನು ಬಹಳಕಾಲ ಭೂಮಿಯಮೇಲೆ ಬಾಳಿ ಉತ್ತಮಗತಿಯನ್ನು ಪಡೆದನು.]

(ಪದ್ಯ -೪೭)

ಪದ್ಯ ೪೮[ಸಂಪಾದಿಸಿ]

ರಾಯ ಕೇಳಾ ಯಜ್ಞ ಸಂಗತಿಯನಾ ಬಾದ | ರಾಯಣಂ ಪೇಳೆ ಬಳಿಕವನಿಪಂ ಧರ್ಮಸಾ | ರಾಯಮಂ ಕೇಳ್ದನಾ ಮುನಿವರನೊಳವಾ ನರನಾವ ಕೃತ್ಯಂಗೆಯ್ಯಲು ||
ಬೀಯದ ಜಸಂ ಬಳೆವುದಿಲ್ಲಿ ನಾರಕದ ಬಿರು | ಬೀಯದ ಸುಖಂ ಪರದೊಳೆಂತು ದೊರಕೊಂಬುದೆಂ | ಬೀಯವಸ್ಥೆಯನೆನಗೆ ವಿಸ್ತರಿಸಿ ಪೇಳ್ಪುದೆನೆ ಶುಕತಾತನಿಂತೆಂದನು ||48||

ಪದವಿಭಾಗ-ಅರ್ಥ:
ರಾಯ ಕೇಳು ಆ ಯಜ್ಞ ಸಂಗತಿಯನು ಆ ಬಾದರಾಯಣಂ ಪೇಳೆ=[ಜನಮೇಜಯರಾಯನೇ ಕೇಳು ಆ ಯಜ್ಞ ಸಂಗತಿಯನ್ನು ಆ ಬಾದರಾಯಣಮುನಿಯು ಹೇಳಲು], ಬಳಿಕ ಅವನಿಪಂ ಧರ್ಮಸಾರಾಯಮಂ ಕೇಳ್ದನು ಆ ಮುನಿವರನೊಳು=[ನಂತರ ಧರ್ಮರಾಯನು ಆ ಮುನಿಯಿಂದ ಧರ್ಮಸಾರವನ್ನು ಕೇಳಿದನು,] ಆವ ನರನು ಆವ ಕೃತ್ಯಂಗೆಯ್ಯಲು ಬೀಯದ ಜಸಂ ಬಳೆವುದು ಇಲ್ಲಿ=[ಯಾವ ಮನುಷ್ಯನು ಯಾವ ಕೃತ್ಯವನ್ನು ಮಾಡಲು ಅಳಿಯದ ಯಶಸ್ಸು ಇಲ್ಲಿ /ಈ ಲೋಕದಲ್ಲಿ ಉಂಟಾಗುವುದು,] ನಾರಕದ ಬಿರುಬು ಈಯದ ಸುಖಂ ಪರದೊಳು ಎಂತು ದೊರಕೊಂಬುದು=[ಪರಲೋಕದಲ್ಲಿ ನರಕಸಂಬಂಧವಾದ ದುಃಖವನ್ನು ಕೊಡದ ಸುಖವು ಹೇಗೆ ದೊರಕುವುದು ]ಎಂಬ ಈ ಯವಸ್ಥೆಯನು(ವ್ವಸ್ಥೆಯನ್ನು) ಎನಗೆ ವಿಸ್ತರಿಸಿ ಪೇಳ್ಪುದೆನೆ ಶುಕತಾತನಿಂತೆಂದನು= ಎಂಬ ಈ ವ್ಯವಸ್ಥೆಯನ್ನು ಎಂದರೆ ರಹಸ್ಯವನ್ನು ನನಗೆ ವಿಸ್ತರಿಸಿ ಹೇಳಬೇಕು, ಎನ್ನಲು ಶುಕತಾತನಾದ ವ್ಯಾಸಮುನಿಯು ಹೀಗೆ ಹೇಳಿದನು.
  • ತಾತ್ಪರ್ಯ:*ಜನಮೇಜಯರಾಯನೇ ಕೇಳು ಆ ಯಜ್ಞ ಸಂಗತಿಯನ್ನು ಆ ಬಾದರಾಯಣಮುನಿಯು ಹೇಳಲು, ನಂತರ ಧರ್ಮರಾಯನು ಆ ಮುನಿಯಿಂದ ಧರ್ಮಸಾರವನ್ನು ಕೇಳಿದನು. ಯಾವ ಮನುಷ್ಯನು ಯಾವ ಕೃತ್ಯವನ್ನು ಮಾಡಲು ಅಳಿಯದ ಯಶಸ್ಸು ಈ ಲೋಕದಲ್ಲಿ ಉಂಟಾಗುವುದು; ಪರಲೋಕದಲ್ಲಿ ನರಕಸಂಬಂಧವಾದ ದುಃಖವನ್ನು ಕೊಡದ ಸುಖವು ಹೇಗೆ ದೊರಕುವುದು; ಎಂಬ ಈ ವ್ಯವಸ್ಥೆಯನ್ನು ಎಂದರೆ ರಹಸ್ಯವನ್ನು ನನಗೆ ವಿಸ್ತರಿಸಿ ಹೇಳಬೇಕು, ಎನ್ನಲು ಶುಕತಾತನಾದ ವ್ಯಾಸಮುನಿಯು ಹೀಗೆ ಹೇಳಿದನು.

(ಪದ್ಯ -೪೮)

ಪದ್ಯ ೪೯[ಸಂಪಾದಿಸಿ]

ಪದ್ಯ ೪೯[ಸಂಪಾದಿಸಿ]

ಸಾರ್ವನಿಗಮಾರ್ಥಮಂ ತಿಳಿದು ಸತ್ಕರ್ಮಮಂ | ಸಾರ್ವಕಾಲಂಗೆಯ್ದು ಪರವಧೂವಿಷಯಮಂ | ಸಾರ್ವ ಚಿಂತೆಯನುಳಿದು ಲೋಕಾಪವಾದಮಂ ಪರಿಹರಿಸಿ ಪರರೊಡವೆಗೆ ||
ಪಾರ್ವನಲ್ಲದೆ ಸದಾಚಾರದಿಂ ನಡೆದೊಡಾ | ಪಾರ್ವನಿಹದೊಳ್ ಕೀರ್ತಿಪರನಾಗಿ ಬಳಿಕವಂ | ಪಾರ್ವನುತ್ತಮಗತಿಗೆ ದೇಹಾವಸಾನದೊಳ್ ಭೂಪಾಲ ಕೇಳೆಂದನು ||49|||

ಪದವಿಭಾಗ-ಅರ್ಥ:
ಸಾರ್ವ= ಸರ್ವ, ನಿಗಮದ ಅರ್ಥಮಂ= ವೇದಗಳ ಅರ್ಥತಿಳಿದು ಸತ್ಕರ್ಮಮಂ= ಒಳ್ಳೆಯಕಾರ್ಯವನ್ನು, ಸಾರ್ವಕಾಲಂಗೆಯ್ದು= ಸರ್ವಕಾಲದಲ್ಲಿಯೂ ಮಾಡಿ, ಪರವಧೂವಿಷಯಮಂ ಸಾರ್ವ= ಪರವಧೂಗಳ ವಿಷಯವನ್ನು ಪ್ರಚುರಪಡಿಸುವ, ಚಿಂತೆಯನುಳಿದು= ಯೋಚನೆ ಮಾಡದೆ, ಲೋಕಾಪವಾದಮಂ= ಜನರರಿಂದ ಬರುವ ಅಪವಾದವನ್ನು ಪರಿಹರಿಸಿ, ಪರರ ಒಡವೆಗೆ= ಬೇರೆಯವರ ವಸ್ತುಗಳಿಗೆ, ಪಾರ್ವನಲ್ಲದೆ= ಆಸೆಪಡದೆ, ಸದಾಚಾರದಿಂ= ಉತ್ತಮ ಆಚಾರದಿಂದ, ನಡೆದೊಡೆ= ನಡೆದುಕೊಮಡರೆ, ಆಪಾರ್ವನು= ಬ್ರಾಹ್ಮಣನು, ಅವನು ಇಹದೊಳ್=ಈ ಲೋಕದಲ್ಲಿ, ಕೀರ್ತಿಪರನಾಗಿ= ಕೀರ್ತಿವಂತನಾಗಿ, ಬಳಿಕ ಅವಂ= ಸತ್ತನಂತರ ಅವನು, ದೇಹಾವಸಾನದೊಳ್ ಉತ್ತಮ ಗತಿಗೆ ಪಾರ್ವನು= ದೇಹಬಿಟ್ಟನಂತರ ಉತ್ತಮ ಗತಿಗೆ ಹೋಗುವನು, ಭೂಪಾಲನೇ ಕೇಳು, ಎಂದು ಎಂದನು.
  • ತಾತ್ಪರ್ಯ:*ಸರ್ವ ವೇದಗಳ ಅರ್ಥತಿಳಿದು ಒಳ್ಳೆಯಕಾರ್ಯವನ್ನು, ಸರ್ವಕಾಲದಲ್ಲಿಯೂ ಮಾಡಿ, ಪರಸ್ತ್ರೀಯರ ವಿಷಯವನ್ನು ಯೋಚಿಸುವ ಯೋಚನೆ ಮಾಡದೆ, ಜನರರಿಂದ ಬರುವ ಅಪವಾದವನ್ನು ಪರಿಹರಿಸಿಕೊಂಡು, ಬೇರೆಯವರ ವಸ್ತುಗಳಿಗೆ ಆಸೆಪಡದೆ, ಉತ್ತಮ ಆಚಾರದಿಂದ ನಡೆದುಕೊಮಡರೆ, ಅವನು ಬ್ರಾಹ್ಮಣನು, ಅವನು ಈ ಲೋಕದಲ್ಲಿ, ಕೀರ್ತಿವಂತನಾಗಿ, ಅವನು ಸತ್ತನಂತರ / ದೇಹಬಿಟ್ಟನಂತರ ಉತ್ತಮ ಗತಿಗೆ ಹೋಗುವನು, ಭೂಪಾಲನೇ ಕೇಳು, ಎಂದು ಹೇಳಿದನು.

(ಪದ್ಯ -೪೯)

ಪದ್ಯ ೫೦[ಸಂಪಾದಿಸಿ]

ಸರ್ವಧರ್ಮಗಳನರಿದೋವಿದೊಡೆ ರಣಕೆ ಬೇ | ಸರ್ವನಲ್ಲದೊಡಾತ್ಮವಿದನಾದೊಡಿಳೆಯೊಳ್ ಪೆ | ಸರ್ವಡೆದು ಕ್ಷತ್ರಿಯಂ ಕಾದಿ ಮಡಿದೊಡೆ ಸೂರೆಗೊಂಬನಮರಾವತಿಯನು ||
ದುರ್ವಚನಮಂ ನುಡಿಯದತಿಥಿಗಳ ಕೆಡೆನುಡಿಯ | ದುರ್ವಧನಮಂ ಕೂಡಿ ಗೋರಕ್ಷಣಂಮಾಳ್ಪು | ದುರ್ವರೆಯೊಳಿದು ಕೀರ್ತಿ ವೈಶ್ಯಂಗೆ ಪರಗತಿ ಮುಕುಂದಸೇವೆಯೊಳಪ್ಪುದು ||50||

ಪದವಿಭಾಗ-ಅರ್ಥ:
ಸರ್ವಧರ್ಮಗಳನ್ನು ಅರಿದು= ಅರತು, ಓವಿದೊಡೆ= ಅದರಂತೆ ನಡೆದು ರಕ್ಷಿಸಿದರೆ, ರಣಕೆ ಬೇಸರ್ವನಲ್ಲದೊಡೆ ಯುದ್ಧಕ್ಕೆ ಬೇಸರಿಸದಿದ್ದರೆ, ಆತ್ಮವಿದನಾದೊದೆ= ಆತ್ಜ್ಞಾನವುಳ್ಳವನಾದರೆ ಇಳೆಯೊಳ್ ಪೆಸರ್ವಡೆದು= ಭಮಿಯಲ್ಲ ಹೆಸರು ಪಡೆದು, ಕ್ಷತ್ರಿಯಂ ಕಾದಿ ಮಡಿದೊಡೆ=ಕ್ಷತ್ರಿಯನು ಯುದ್ಧಮಾಡಿ ಸತ್ತರೆ, ಸೂರೆಗೊಂಬನು ಅಮರಾವತಿಯನು= ಸ್ವರ್ಗದ ಅಮರಾವತಿಯ ಸುಖವನ್ನು ಯಥೇಶ್ಚವಾಗಿ ಪಡೆಯುವನು. ದುರ್ವಚನಮಂ ನುಡಿಯದೆ= ಕೆಟ್ಟ ಮಾತಾಡದೆ, ಅತಿಥಿಗಳ ಕೆಡೆನುಡಿಯದೆ= ಮನೆಗೆಬಂದವರಿಗೆ ಕೆಟ್ಟಮಾತಾಡದೆ, ಉರ್ವಧನಮಂಹೆಚ್ಚು ಹಣವನ್ನು ಕೂಡಿಟ್ಟುಕೊಂಡು, ಗೋರಕ್ಷಣಂಮಾಳ್ಪುದು= ಗೋವನ್ನು ಪಾಲಿಸಿದರೆ, ಉರ್ವರೆಯೊಳು ಇದು ಕೀರ್ತಿ ವೈಶ್ಯಂಗೆ ಪರಗತಿ=ಭೂಮಿಯಲ್ಲಿ ವೈಶ್ಯನಿಗೆ ಪರಲೋಕದಲ್ಲಿ ಉತ್ತಮ ಗತಿಬರುವುದು, ಮುಕುಂದನ ಸೇವೆಯೊಳ್ ಅಪ್ಪುದು ಸೇವೆಯಲ್ಲಿ= ಅಲ್ಲದೆ ವಷ್ಣುವಿನ ಸೇವೆಯಲ್ಲಿ ಉತ್ತಮ ಗತಿಬರುವುದು.
  • ತಾತ್ಪರ್ಯ:*ಸರ್ವಧರ್ಮಗಳನ್ನು ಅರಿತು, ಅದರಂತೆ ನಡೆದು ರಕ್ಷಿಸಿದರೆ, ಯುದ್ಧಕ್ಕೆ ಬೇಸರಿಸದಿದ್ದರೆ, ಆ ಆತ್ಜ್ಞಾನವುಳ್ಳವನಾದರೆ ಭೂಮಿಯಲ್ಲಿ ಹೆಸರು ಪಡೆದು, ಕ್ಷತ್ರಿಯನು ಯುದ್ಧಮಾಡಿ ಸತ್ತರೆ, ಸ್ವರ್ಗದ ಅಮರಾವತಿಯ ಸುಖವನ್ನು ಯಥೇಶ್ಚವಾಗಿ ಪಡೆಯುವನು. ಮನೆಗೆಬಂದವರಿಗೆ ಕೆಟ್ಟಮಾತಾಡದೆ, ಹೆಚ್ಚು ಹಣವನ್ನು ಕೂಡಿಟ್ಟುಕೊಂಡು, ಗೋವನ್ನು ಪಾಲಿಸಿದರೆ, ಭೂಮಿಯಲ್ಲಿ ವೈಶ್ಯನಿಗೆ ಇದು ಕೀರ್ತಿ, ಪರಲೋಕದಲ್ಲಿ ಉತ್ತಮ ಗತಿಬರುವುದು, ಅಲ್ಲದೆ ವಿಷ್ಣುವಿನ ಸೇವೆಯಲ್ಲಿ ಉತ್ತಮ ಗತಿಬರುವುದು.

(ಪದ್ಯ -೫೦)XX

ಪದ್ಯ ೫೧[ಸಂಪಾದಿಸಿ]

ದ್ವಿಜರಾಸರಂದಳೆದು ಬೆಸಗೈವ ಶೂದ್ರನುಂ | ದ್ವಿಜರಾಜವಾಹನಸ್ಮರಣೆಯಿಂದೈದುವಂ | ದ್ವಿಜರಾಜಸನ್ನಿಭದ ಸುಗತಿಯಂ ಜಗದೊಳಂತದು ಕುಲಸ್ತ್ರೀಯರೊಳಗೆ ||
ನಿಜನಾಥಭೀತೆ ಸುಚರಿತ್ರೆ ಗುಣವತಿ ಮಾನಿ | ನಿ ಜನಾಪವಾದವಿರಹಿತೆಯೆನಿಪ ನಾರಿನ(ಯ) | ನ್ನಿ ಜನಾರ್ದನಾದಿ ನಿರ್ಜರವರ್ಯವಿನುತೆಯಹಳೆನಲವಳ ಸುಕೃತಮೆಂತೋ ||51||

ಪದವಿಭಾಗ-ಅರ್ಥ:
ದ್ವಿಜರ ಆಸರಂ ತಳೆದು = ಬ್ರಾಹ್ಮಣರ ಆಶ್ರಯ ಪಡೆದು, ಬೆಸಗೈವ= ಅವರ ಉಪದೇಶದಂತೆ ನೆಡೆವ, ಶೂದ್ರನುಂ=ಶೂದ್ರನೂ ದ್ವಿಜರಾಜವಾಹನ =ವಿಷ್ಣುವಿನ ಸ್ಮರಣೆಯಿಂದ ಐದುವಂ= ಹೋಗುವನು, ದ್ವಿಜರಾಜ=ವಿಷ್ಣುವಾಹನ ಗರುಡಪಕ್ಷಿಯ(ಚಂದ್ರಪ್ರಕಾಶ) ಸನ್ನಿಭದ= ಸಮಾನವಾದ ಸುಗತಿಯಂ= ಸದ್ಗತಿಯನ್ನು; ಐದುವಂ= ಹೊಂದುವನು. ಜಗದೊಳು= ಜಗತ್ತಿನಲ್ಲಿ, ಅಂತದು ಕುಲಸ್ತ್ರೀಯರೊಳಗೆ= ಉತ್ತಮ ಸ್ತ್ರೀಯರಲ್ಲಿ ನಿಜನಾಥಭೀತೆ= ತನ್ನ ಪತಿತೆಭಯಪಡುವವಳು, ಸುಚರಿತ್ರೆ= ಉತ್ತಮ ನಡತೆಯುಳ್ಳವಳು, ಗುಣವತಿ, ಮಾನಿನಿ= ಮಾನವುಳ್ಳವಲು, ಜನಾಪವಾದವಿರಹಿತೆ ಎನಿಪ= ಜನಾಪವಾದವಿಲ್ಲದವಳು ಎನ್ನಿಸುವ, ನಾರಿ=ಹೆಂಗಸು, ನನ್ನಿಜನಾರ್ದನಾದಿ=ಸುಜನರರೇಮೊದಲಾದ ನಿರ್ಜರವರ್ಯ= ದೇವತಾ ವಿನುತೆಯು= ಸ್ತ್ರೀ ಅಹಳು=ಆಗಿರುವಳು ಎನಲು=ಎನ್ನಲು, ಅವಳ ಸುಕೃತಮೆಂತೋ= ಅವಳ ಪುಣ್ಯವು ಎಂತೋ ಹಳಲಾಗದಷ್ಟು ಹೆಚ್ಚಿನದು.
  • ತಾತ್ಪರ್ಯ:*ಬ್ರಾಹ್ಮಣರ ಆಶ್ರಯ ಪಡೆದು ಅವರ ಉಪದೇಶದಂತೆ ನೆಡೆವ ಶೂದ್ರನೂ ವಿಷ್ಣುವಿನ ಸ್ಮರಣೆಯಿಂದ ವಿಷ್ಣುವಾಹನ ಗರುಡಪಕ್ಷಿಯ(ಚಂದ್ರಪ್ರಕಾಶ) ಸಮಾನವಾದ ಸದ್ಗತಿಯನ್ನು ಹೊಂದುವನು. ಜಗತ್ತಿನಲ್ಲಿ,ಉತ್ತಮ ಸ್ತ್ರೀಯರಲ್ಲಿ ತನ್ನ ಪತಿಗೆ ಭಯಪಡುವವಳು, ಉತ್ತಮ ನಡತೆಯುಳ್ಳವಳು, ಗುಣವತಿ,ಮಾನವುಳ್ಳವಳು, ಜನಾಪವಾದವಿಲ್ಲದವಳು ಎನ್ನಿಸುವ ಹೆಂಗಸು,ಸುಜನರರೇ ಮೊದಲಾದ ಗುಣದವಳು ದೇವತಾ ಸ್ತ್ರೀ ಆಗಿರುವಳು; ಹೀಗಿರಲು,ಅವಳ ಪುಣ್ಯವು ಹೇಳಲಾಗದಷ್ಟು ಹೆಚ್ಚಿನದು.

(ಪದ್ಯ -೫೧)

ಪದ್ಯ ೫೨[ಸಂಪಾದಿಸಿ]

ಪತಿ ದೈವಮೆಂದರಿದು ನಡೆವ ಸತಿಗಹುದು ಪರ | ಗತಿಯಲ್ಲದಂಗನೆಯರತಿಸಾಹಸಿಗಳವರ | ಕೃತಕಶೀಲಂಗಳಂ ನಂಬಲಾಗದು ಮೇಣ್ ಸ್ವತಂತ್ರಮಂ ಕುಡಲಾಗದು ||
ಪಿತನಿಂದೆ ಬಾಲ್ಯದೊಳ್ ಪತಿಯಿಂದೆ ಹರೆಯದೊಳ್ | ಸುತನಿಂದೆ ವೃದ್ಧಾಪ್ಯದೊಳ್ ಕುಲಸ್ತ್ರೀ ಸುರ | ಕ್ಷಿತೆಯಾಗದಿರ್ದೊಡವಳಿಂದೆ ನಿಜವಂಶಕುಹಪತಿ ಬಾರದಿರದಿಳೆಯೊಳು ||52||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಪತಿ ದೈವಮೆಂದು ಅರಿದು ನಡೆವ ಸತಿಗೆ ಅಹುದು ಪರಗತಿಯು= [ಪತಿಯೇ ದೈವವು ಎಂದು ತಿಳಿದು ನಡೆವ ಪತ್ನಿಗೆ ಪರಲೋಕದಲ್ಲಿ ಉತ್ತಮಗತಿಯಾಗುವುದು.] ಅಲ್ಲದೆ ಆಂಗನೆಯರು ಅತಿಸಾಹಸಿಗಳು ಅವರ ಕೃತಕಶೀಲಂಗಳಂ ನಂಬಲಾಗದು= [ಹಾಗೆ ಇರದೇ ಇರುವ ಹೆಂಗಸರು ಅತಿಸಾಹಸಿಗಳಾಗಿದ್ದು ಮಾಡಬಾರದ್ದನ್ನೂ ಮಾಡುವರು, ಅವರ ನಾಟಕೀಯ ಶೀಲಸ್ವಭಾವಗಳನ್ನು ನಂಬಲು ಸಾಧ್ಯವಿಲ್ಲ.] ಮೇಣ್ ಸ್ವತಂತ್ರಮಂ ಕುಡಲಾಗದು=[ಆದ್ದರಿಂದ ಅವರಿಗೆ ಮನಬಂದಂತೆ ನೆಡೆಯುವ ಸ್ವತಂತ್ರವನ್ನು ಕೊಡಬಾರದು]. ಪಿತನಿಂದೆ ಬಾಲ್ಯದೊಳ್ ಪತಿಯಿಂದೆ ಹರೆಯದೊಳ್ ಸುತನಿಂದೆ ವೃದ್ಧಾಪ್ಯದೊಳ್ ಕುಲಸ್ತ್ರೀ ಸುರಕ್ಷಿತೆಯಾಗದಿರ್ದೊಡೆ=[ತಂದೆಯಿಂದ ಬಾಲ್ಯದಲ್ಲಿ, ಪತಿಯಿಂದೆ ಹರೆಯಲ್ಲಿ, ಮಗನಿಂದ ವೃದ್ಧಾಪ್ಯದಲ್ಲಿ ಸತ್ಕುಲದ ಹೆಣ್ಣು ಸುರಕ್ಷಿತವಾಗಿ ಇರದಿದ್ದರೆ,] ಅವಳಿಂದೆ ನಿಜವಂಶಕೆ ಉಹಪತಿ ಬಾರದಿರದು ಇಳೆಯೊಳು= [ಈ ಜಗದಲ್ಲಿ ಅವಳಿಂದ ಆ ವಂಶಕ್ಕೆ ಕೆಟ್ಟ ಹೆಸರು ಬಾರದೆ ಇರದು ]
  • ತಾತ್ಪರ್ಯ:*ಪತಿಯೇ ದೈವವು ಎಂದು ತಿಳಿದು ನಡೆವ ಪತ್ನಿಗೆ ಪರಲೋಕದಲ್ಲಿ ಉತ್ತಮ ಗತಿಯಾಗುವುದು. ಹಾಗೆ ಇರದೇ ಇರುವ ಹೆಂಗಸರು ಅತಿಸಾಹಸಿಗಳಾಗಿದ್ದು ಮಾಡಬಾರದ್ದನ್ನೂ ಮಾಡುವರು, ಅವರ ನಾಟಕೀಯ ಶೀಲಸ್ವಭಾವಗಳನ್ನು ನಂಬಲು ಸಾಧ್ಯವಿಲ್ಲ. ಆದ್ದರಿಂದ ಅವರಿಗೆ ಮನಬಂದಂತೆ ನೆಡೆಯುವ ಸ್ವತಂತ್ರವನ್ನು ಕೊಡಬಾರದು. ಈ ಜಗತ್ತಿನಲ್ಲಿ, ತಂದೆಯಿಂದ ಬಾಲ್ಯದಲ್ಲಿ, ಪತಿಯಿಂದೆ ಹರೆಯಲ್ಲಿ, ಮಗನಿಂದ ವೃದ್ಧಾಪ್ಯದಲ್ಲಿ ಸತ್ಕುಲದ ಹೆಣ್ಣು ಸುರಕ್ಷಿತವಾಗಿ ಇರದಿದ್ದರೆ, ಅವಳಿಂದ ಆ ವಂಶಕ್ಕೆ ಕೆಟ್ಟ ಹೆಸರು ಬಾರದೆ ಇರದು.

(ಪದ್ಯ -೫೨)

ಪದ್ಯ ೫೩[ಸಂಪಾದಿಸಿ]

ವರಯಜ್ಞಶಾಲೆಯುಂ ಬಾಲೆಯುಂ ದ್ವಿಜಪಙ್ತ | ಪರಿಶೋಭಿಸದೊಡೆ ಸತ್ಯವಿತೆಯುಂ ಯುವತಿಯುಂ | ಚರಣಗತಿ ಸಮತೆವೆತ್ತಿರದೊಡಬ್ಜಾರಿಯುಂ ನಾರಿಯುಂ ಚಾರುತರದ ||
ಕರಭೋರುಕಾಂತಿ ಸಂಯುಕ್ತಮಾಗಿರದಿರ್ದೊ | ಡರಸಾಳ್ವ ಧರಣಿಯುಂ ತರುಣಿಯುಂ ಶಾಲಿಸುಂ | ದರಮಾಗಿರದೊಡೆ ಸೌಮಂಗಳ್ಯಮಾಗಿಯುಂ ಮೇಲೆಯುನ್ನತಿಯಪ್ಪುದೆ ||53||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ವರ ಯಜ್ಞಶಾಲೆಯುಂ ಬಾಲೆಯುಂ ದ್ವಿಜಪಙ್ತ ಪರಿಶೋಭಿಸದೊಡೆ=[ಶ್ರೇಷ್ಠ ಯಜ್ಞಶಾಲೆಯೂ ಬ್ರಾಹ್ಮಣರ ಪಂಕ್ತಿಯಿಂದ ಶೋಬಿದಿದ್ದರೆ, ಹಾಗೆಯೇ ಬಾಲಕಿಯು ಉತ್ತಮ ಎರಡುಸಾಲುಹಲ್ಲಿನಿಂದ ಚಂದಕಾನದಿದ್ದರೆ;] ಸತ್ಕವಿತೆಯುಂ ಯುವತಿಯುಂ ಚರಣಗತಿ ಸಮತೆವೆತ್ತಿ ಇರದೊಡೆ=[ಸತ್ಕವಿತೆಯು ಸಾಲುಗಳ ಚರಣಗತಿಯು ಸರಿ ಇಲ್ಲದಿದ್ದರೆ, ಹಾಗೆಯೇ ಯುವತಿಯ ನಡಿಗೆಯಲ್ಲಿ ಹೆಜ್ಜೆ ಗತಿ ಸಮವಾಗಿ ಇರದೆ ಇದ್ದರೆ, ] ಅಬ್ಜಾರಿಯುಂ(ಅಬ್ಜ=ಕಮಲ+ಅರಿ=ಶತ್ರು ಚಂದ್ರ) ನಾರಿಯುಂ ಚಾರುತರದ(ಮನೋಹರ) ಕರಭೋರು(ಕರ=ಕಿರಣ+ಭೋರು=ಕಾಂತಿ;ಕರ=ಆನೆ+ಭೋರು=ಸೊಂಡಿಲು)ಕಾಂತಿ ಸಂಯುಕ್ತಮಾಗಿ ಇರದಿರ್ದೊಡೆ=[ಚಂದ್ರನ ಕಿರಣಗಳ ಕಾಂತಿಯಿಂದ ಶೋಭಿಸದಿದ್ದರೆ, ಹೆಂಗಸು ಆನೆಸೊಂಡಿಲಂತಿರುವ ಮನೋಹರವಾದ ತೊಡೆಗಳು ಒಟ್ಟಿಗೆ ಇರದಿದ್ದರೆ;] ಅರಸು ಆಳ್ವ ಧರಣಿಯುಂ ತರುಣಿಯುಂ ಶಾಲಿ(ಭತ್ತದಗದ್ದೆಗಳು;ಲಜ್ಜೆ ಮತ್ತು ವಿನಯಶೀಲತೆ) ಸಹಕರಿಸುವಗುಣ ) ಸುಂದರಮಾಗಿ ಇರದೊಡೆ= [ಅರಸನು ಆಳುವ ಭೂಮಿಯು ಭತ್ತದಗದ್ದೆಗಳಿಂದ ತುಂಬಿ ಸುಂದರವಾಗಿರದಿದ್ದರೆ, ತರುಣಿಯು ಲಜ್ಜೆ ಮತ್ತು ವಿನಯಶೀಲತೆಯೊಡನೆ ಸುಂದರವಾಗಿ ಇರದಿದ್ದರೆ]; ಸೌಮಂಗಳ್ಯಮ್(ಶುಭಕರವು/ ಸುಮಂಗಲತ್ವ;ಮುತ್ತೈದೆತನವು) ಆಗಿಯುಂ ಮೇಲೆಯುಂ ಉನ್ನತಿಯಪ್ಪುದೆ=[ಅವೆಲ್ಲವೂ ಶುಭಕರವು ಆಗಿ ಹೆಚ್ಚನ ಉನ್ನತಿಯಾಗುವುದೇ; ಸ್ತ್ರೀವಿಷಯದಲ್ಲಿಯೂ ಸುಮಂಗಲತ್ವ ಅಥವಾ ಮುತ್ತೈದೆತನವು ಇದ್ದ ಮೇಲೆಯೂ ಶ್ರೇಷ್ಟವೆನ್ನಿಸುವುದೇ?] (ಎರಡು ಬಗೆಯ ಕರ್ತುಪದಗಳಿಗೆ ಒಂದೇ ಪದದ ದ್ವಂದಾರ್ಥವುಳ್ಳ ವಿಶೇಷಣಗಳುಳ್ಳ ಶ್ಲೇಷಾಲಂಕಾರ).
  • ತಾತ್ಪರ್ಯ:*ಶ್ರೇಷ್ಠ ಯಜ್ಞಶಾಲೆಯೂ ಬ್ರಾಹ್ಮಣರ ಪಂಕ್ತಿಯಿಂದ ಶೋಬಿದಿದ್ದರೆ, ಹಾಗೆಯೇ ಬಾಲಕಿಯು ಉತ್ತಮ ಎರಡುಸಾಲುಹಲ್ಲಿನಿಂದ ಚಂದಕಾನದಿದ್ದರೆ; ಸತ್ಕವಿತೆಯು ಸಾಲುಗಳ ಚರಣಗತಿಯು ಸರಿ ಇಲ್ಲದಿದ್ದರೆ, ಹಾಗೆಯೇ ಯುವತಿಯ ನಡಿಗೆಯಲ್ಲಿ ಹೆಜ್ಜೆ ಗತಿ ಸಮವಾಗಿ ಇರದೆ ಇದ್ದರೆ; ಚಂದ್ರನ ಕಿರಣಗಳ ಕಾಂತಿಯಿಂದ ಶೋಭಿಸದಿದ್ದರೆ, ಹೆಂಗಸು ಆನೆಸೊಂಡಿಲಂತಿರುವ ಮನೋಹರವಾದ ತೊಡೆಗಳು ಒಟ್ಟಿಗೆ ಇರದಿದ್ದರೆ; ಅರಸನು ಆಳುವ ಭೂಮಿಯು ಭತ್ತದಗದ್ದೆಗಳಿಂದ ತುಂಬಿ ಸುಂದರವಾಗಿರದಿದ್ದರೆ, ತರುಣಿಯು ಲಜ್ಜೆ ಮತ್ತು ವಿನಯಶೀಲತೆಯೊಡನೆ ಸುಂದರವಾಗಿ ಇರದಿದ್ದರೆ; ಅವೆಲ್ಲವೂ ಶುಭಕರವು ಆಗಿ ಹೆಚ್ಚನ ಉನ್ನತಿಯಾಗುವುದೇ; ಸ್ತ್ರೀ ವಿಷಯದಲ್ಲಿಯೂ ಸುಮಂಗಲತ್ವ ಅಥವಾ ಮುತ್ತೈದೆತನವು ಇದ್ದ ಮೇಲೆಯೂ ಶ್ರೇಷ್ಟವೆನ್ನಿಸುವುದೇ? (ಎರಡು ಬಗೆಯ ಕರ್ತುಪದಗಳಿಗೆ ಒಂದೇ ಪದದ ದ್ವಂದಾರ್ಥವುಳ್ಳ ವಿಶೇಷಣಗಳುಳ್ಳ ಶ್ಲೇಷಾಲಂಕಾರ).

(ಪದ್ಯ -೫೩)

ಪದ್ಯ ೫೪[ಸಂಪಾದಿಸಿ]

ಮಾವಂಗೆ ಭಾವಂಗೆ ಮೇಣತ್ತೆಗೈದೆ ಸಂ | ಭಾವಿಸುತೆ ಸೇವಿಸುತೆ ಕಾಂತಂಗೆ ಸುರತಸಂ | ಜೀವನವನೀವ ನವಯುವತಿಯಹ ಲಕ್ಷಣಂ ಸುಕೃತಫಲಮಂತಲ್ಲದೆ ||
ಪಾವಿನಂತಾವಿನಂತಡಿಗಡಿಗೆ ಮೊರೆದೆದ್ದು | ಡಾವರಿಸಿ ಸೀವರಿಸಿ ಮನೆಗೆಲಸಮಂ ಗೆಯ್ಯ | ದಾವನಿತೆ ಸಾವನಿತೆ ಲೇಸೆನಿಸದಿಹಳೆ ತತ್ಪತಿಗೆ ತದ್ಗುರುಜನಕ್ಕೆ ||54||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಮಾವಂಗೆ ಭಾವಂಗೆ ಮೇಣ ಅತ್ತೆಗೆ ಐದೆ ಸಂಭಾವಿಸುತೆ ಸೇವಿಸುತೆ=[ಪತಿಯ ತಂದೆಯಾದ ಮಾವನಿಗೆ, ಪತಿಯ ಅಣ್ಣನಾದ ಭಾವನಿಗೆ ಮತ್ತೆ ಅತ್ತೆಗೆ ಅವರು ಬಂದಾಗ ಗೌರವಿಸುತ್ತಾ, ಸೇವೆಮಾಉತ್ತಾ.] ಕಾಂತಂಗೆ ಸುರತಸಂಜೀವನವನು ಈವ ನವಯುವತಿಯು ಅಹ ಲಕ್ಷಣಂ ಸುಕೃತಫಲಮ್ ಅಂತಲ್ಲದೆ=[ಪತಿಗೆ ಸಂಭೋಗಸುಖವನ್ನು ಕೊಟ್ಟು ಹೊಸ ಜೀವವಾದ ಮಗುವನ್ನು ಜನಿಸಿಕೊಡುವ ಹೊಸಯುವಂತಿರುವ ಲಕ್ಷಣವು ಪುಣ್ದ ಫಲವು, ಹಾಗಿಲ್ಲದೆ], ಪಾವಿನಂತೆ ಆವಿನಂತೆ(ಆವಿಗೆ:ಮಡಿಕೆ ಸುಡುವ ಒಲೆ) ಅಡಿಗಡಿಗೆ ಮೊರೆದು ಎದ್ದು ಡಾವರಿಸಿ ಸೀವರಿಸಿ ಮನೆಗೆಲಸಮಂ ಗೆಯ್ಯದ ಆವನಿತೆ ಸಾವು ಅನಿತೆ(ಅಷ್ಟೇ) ಲೇಸು ಎನಿಸದೆ ಇಹಳೆ ತತ್ ಪತಿಗೆ ತದ್ ಗುರುಜನಕ್ಕೆ=[ಹಾಗಿಲ್ಲದೆ, ಹಾವಿನಂತೆ ಕುಂಬಾರನ ಕೆಂಡದ ಒಲೆಯಂತೆ ಪದೇಪದೇ ಬುಸುಗುಡುತ್ತಾ ಸಿಡಿಗುಡುತ್ತಾ ಬಾಧಿಸಿ ಸಿಡಿಗುಡುತ್ತಾ ಮನೆಗೆಲಸವನ್ನು ಮಾಡದ ಆ ಹೆಣ್ಣು ಇದ್ದರೆ ಅವಳ ಪತಿಗೆ ಗುರುಜನರಿಗೆ ತಮಗೆ ಸಾಯುವುದೇ ಒಳ್ಳೆಯದು ಎನ್ನಿಸದೆ ಇರುವಳೇ? ]
  • ತಾತ್ಪರ್ಯ:*ಪತಿಯ ತಂದೆಯಾದ ಮಾವನಿಗೆ, ಪತಿಯ ಅಣ್ಣನಾದ ಭಾವನಿಗೆ ಮತ್ತೆ ಅತ್ತೆಗೆ ಅವರು ಬಂದಾಗ ಗೌರವಿಸುತ್ತಾ, ಸೇವೆಮಾಉತ್ತಾ. ಪತಿಗೆ ಸಂಭೋಗಸುಖವನ್ನು ಕೊಟ್ಟು ಹೊಸ ಜೀವವಾದ ಮಗುವನ್ನು ಜನಿಸಿಕೊಡುವ ಹೊಸಯುವಂತಿರುವ ಲಕ್ಷಣವು ಪುಣ್ದ ಫಲವು, ಹಾಗಿಲ್ಲದೆ, ಹಾವಿನಂತೆ ಕುಂಬಾರನ ಕೆಂಡದ ಒಲೆಯಂತೆ ಪದೇಪದೇ ಬುಸುಗುಡುತ್ತಾ ಸಿಡಿಗುಡುತ್ತಾ ಬಾಧಿಸಿ ಸಿಡಿಗುಡುತ್ತಾ ಮನೆಗೆಲಸವನ್ನು ಮಾಡದ ಆ ಹೆಣ್ಣು ಇದ್ದರೆ ಅವಳ ಪತಿಗೆ ಗುರುಜನರಿಗೆ ತಮಗೆ ಸಾಯುವುದೇ ಒಳ್ಳೆಯದು ಎನ್ನಿಸದೆ ಇರುವಳೇ? ]

(ಪದ್ಯ -೫೪)

ಪದ್ಯ ೫೫[ಸಂಪಾದಿಸಿ]

ತಾಲುನಾಲಗೆಗಳುಂ ಕಪ್ಪಾಗಿ ಮೇದಿನಿಯ | ಮೇಲೆ ಕಾಲಂಗುಳಿಗಳೋರಗೆಯೊಳೊಂದದಿರೆ | ಬಾಲೆಗೀ ಲಕ್ಷಣಂ ಮುತ್ತೈದೆತನಮಾಗಲರಿಯದು ವಿಧವೆಯಾದೊಡೆ ||
ಶೀಲಮಾಲಂಬಿಸಿ ತವರ್ಮನೆಯೊಳಿರ್ದನಿತು | ಕಾಲಮಾಲಸ್ಯಮಿಲ್ಲದೆ ಸದಾಚಾರಕನು | ಕೂಲೆಯಾಗಿರುತಿರ್ದು ದೇಹಮಂ ದಂಡಿಸಲ್ ಪತಿಲೋಕಮಂ ಪಡೆವಳು ||55||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ತಾಲುನಾಲಗೆಗಳುಂ ಕಪ್ಪಾಗಿ ಮೇದಿನಿಯ ಮೇಲೆ ಕಾಲಂಗುಳಿಗಳು ಓರಗೆಯೊಳು ಒಂದದಿರೆ=[ನಾಲಗೆಯ ತಳ ನಾಲಗೆಗಳು ಕಪ್ಪಾಗಿ, ನೆಲದ ಮೇಲೆ ಕಾಲು ಬೆರಳುಗಳುಒಂದಕ್ಕೆಂದು ಸರಿಯಾಗಿ ಹೊಂದದಿದ್ದರೆ], ಬಾಲೆಗೆ ಈ ಲಕ್ಷಣಂ ಮುತ್ತೈದೆತನಮ್ ಆಗಲರಿಯದು=[ಬಾಲಕಿಗೆ ಈ ಲಕ್ಷಣವು ಮುತ್ತೈದೆತನಕ್ಕೆ ಕುಂದುತರುವುದು]; ವಿಧವೆಯಾದೊಡೆ ಶೀಲಮ ಆಲಂಬಿಸಿ ತವರ್ಮನೆಯೊಳಿರ್ದ ಅನಿತುಕಾಲಂ ಆಲಸ್ಯಮಿಲ್ಲದೆ ಸದಾಚಾರಕೆ ಅನುಕೂಲೆಯಾಗಿ ಇರುತಿರ್ದು=[ಅವಳು ವಿಧವೆಯಾದರೆ ಶೀಲವನ್ನು ಅನುಸರಿಸಿ ತವರುಮನೆಯಲ್ಲಿದ್ದ ಅಷ್ಟೂ ಕಾಲವೂ ಆಲಸ್ಯವಿಲ್ಲದೆ ಸದಾಚಾರವುಳ್ಳವಳಾಗಿ ಅನುಕೂಲೆಯಾಗಿ ಇದ್ದು], ದೇಹಮಂ ದಂಡಿಸಲ್ ಪತಿಲೋಕಮಂ ಪಡೆವಳು= [ದೇಹವನ್ನು ದಂಡಿಸುತ್ತಾ ಮರಣಾನಂತರ ಪತಿಲೋಕವನ್ನು ಯಾಸದ್ಗತಿಯನ್ನು ಪಡೆಯುವಳು]
  • ತಾತ್ಪರ್ಯ:*ನಾಲಗೆಯ ತಳ ಮತ್ತು ನಾಲಗೆಗಳು ಕಪ್ಪಾಗಿ, ನೆಲದ ಮೇಲೆ ಕಾಲು ಬೆರಳುಗಳು ಒಂದಕ್ಕೆಂದು ಸರಿಯಾಗಿ ಹೊಂದದಿದ್ದರೆ, ಆ ಬಾಲಕಿಗೆ ಈ ಲಕ್ಷಣವು ಮುತ್ತೈಐದೆತನಕ್ಕೆ ಕುಂದುತರುವುದು; ಅವಳು ವಿಧವೆಯಾದರೆ ಶೀಲವಂತೆಯಾಗಿ ತವರುಮನೆಯಲ್ಲಿದ್ದ ಅಷ್ಟೂ ಕಾಲವೂ ಆಲಸ್ಯವಿಲ್ಲದೆ ಕೆಲಸಮಾಡುತ್ತಾ ಸದಾಚಾರವುಳ್ಳವಳಾಗಿ ಸಹಕರಿಸಿಕೊಂಡು ಇದ್ದು, ದೇಹವನ್ನು ದಂಡಿಸುತ್ತಾ ಮರಣಾನಂತರ ಪತಿಲೋಕವನ್ನು ಯಾ ಸದ್ಗತಿಯನ್ನು ಪಡೆಯುವಳು.

(ಪದ್ಯ -೫೫)

ಪದ್ಯ ೫೬[ಸಂಪಾದಿಸಿ]

ವಿಟಗೋಷ್ಠಿಯೊಳ್ ಭೋಗಮಂ ಬಯಸಿ ಕಾಮಲಂ | ಪಟೆಯಾಗಿ ಮೇಣರ್ಥಮಂ ಗಳಿಸಿ ಗರ್ವದಿಂ | ಜಟರಮಂ ಪೊರೆಯುತ್ತೆ ಗರಿಯೊಗೆದುರಗಿವೊಲಿಹ ದುಷ್ಟವಿಧವೆಯರ ರತಿಯು ||
ಘಟಿಪುದಾವಂಗವನುಮವಳುಮವಳಾಣ್ಮನುಂ | ಸಟೆಯಲ್ಲ ಮೂವರುಂ ಪತಿತರದರಿಂದೆ ಸಂ | ಕಟದೊಳಂ ನೋಡಲಾಗದು ಪರಸ್ತ್ರೀಯರಂ ನೆರೆದೊಡುತ್ಕುಲಮಪ್ಪುದೆ ||56|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ವಿಟಗೋಷ್ಠಿಯೊಳ್ ಭೋಗಮಂ ಬಯಸಿ ಕಾಮಲಂಪಟೆಯಾಗಿ=[ಜಾರರ ಸಭೆಯಲ್ಲಿ ದೇಹಸುಖವನ್ನು ಬಯಸಿ ಕಾಮಲಂಪಟೆಯಾಗಿ ವ್ಯಬಿಚಾರಿಯಾಗಿ,] ಮೇಣ್ ಅರ್ಥಮಂ ಗಳಿಸಿ ಗರ್ವದಿಂ ಜಟರಮಂ ಪೊರೆಯುತ್ತೆ ಗರಿಯೊಗೆದ ಉರಗಿ(ಸರ್ಪ)ವೊಲ್ ಇಹ= [ಹಣವನ್ನು ಗಳಿಸಿ ಗರ್ವದಿದ ಹೊಟ್ಟೆಹೊರೆದುಕೊಳ್ಳುತ್ತಾ ಪೊರೆಬಿಟ್ಟ ಸರ್ಪದಂತೆ ಇರುವ,] ದುಷ್ಟವಿಧವೆಯರ ರತಿಯು ಘಟಿಪುದು ಆವಂಗೆ ಅವನುಂ ಅವಳುಂ ಅವಳಾಣ್ಮನುಂ ಸಟೆಯಲ್ಲ ಮೂವರುಂ ಪತಿತರು ಅದರಿಂದೆ= [ದುಷ್ಟವಿಧವೆಯರದೇಹ ಸಂಬಂಧವು ಆಗುವುದೋ, ಯಾರಿಗೆ ಅವನು ಮತ್ತು ಅವಳು ಅವಳಪೋಷಕನು ನಿಜವಾಗಿಯೂ ಮೂವರೂ ಪತಿತರು; ಅದರಿಂದ,] ಸಂಕಟದೊಳಂ ನೋಡಲಾಗದು ಪರಸ್ತ್ರೀಯರಂ ನೆರೆದೊಡೆ ಉತ್ಕುಲಂ ಅಪ್ಪುದೆ(ಆಗುವುದೇ)= [ಸಂಕಟ ಒದಗಿದಾಗಲೂ ಪರಸ್ತ್ರೀಯರನ್ನು ನೋಡಲಾಗದು, ಅವರೊಡನೆ ಸೇರಿದರೆ ಕುಲದ ಉನ್ನತಿ ಆಗುವುದೇ? ಆಗಲಾರದು.]
  • ತಾತ್ಪರ್ಯ:*ಜಾರರ ಸಭೆಯಲ್ಲಿ ದೇಹಸುಖವನ್ನು ಬಯಸಿ ಕಾಮಲಂಪಟೆಯಾಗಿ ವ್ಯಬಿಚಾರಿಯಾಗಿ, ಹಣವನ್ನು ಗಳಿಸಿ ಗರ್ವದಿದ ಹೊಟ್ಟೆಹೊರೆದುಕೊಳ್ಳುತ್ತಾ ಪೊರೆಬಿಟ್ಟ ಸರ್ಪದಂತೆ ಇರುವ, ದುಷ್ಟವಿಧವೆಯರ ದೇಹ ಸಂಬಂಧವು ಆಗುವುದೋ, ಯಾರಿಗೆ ಅವನು ಮತ್ತು ಅವಳು ಅವಳಪೋಷಕನು ನಿಜವಾಗಿಯೂ ಮೂವರೂ ಪತಿತರು; ಅದರಿಂದ, ಸಂಕಟ ಒದಗಿದಾಗಲೂ ಪರಸ್ತ್ರೀಯರನ್ನು ನೋಡಲಾಗದು, ಅವರೊಡನೆ ಸೇರಿದರೆ ಕುಲದ ಉನ್ನತಿ ಆಗುವುದೇ? ಆಗಲಾರದು.]

(ಪದ್ಯ -೫೬)

ಪದ್ಯ ೫೭[ಸಂಪಾದಿಸಿ]

ಗೃಹಕೃತ್ಯಮಂ ಬಿಟ್ಟು ನೆರೆಮನೆ ತವರ್ಮನೆಯೊ | ಳಿಹಳೆಳೆಯರಂ ಚುಂಬಿಸುವಳೊಲಿದು ಪಾಡುವಳ್ | ಗಹಗಹಿಸಿ ಬರಿದೆ ನಗುವಳ್ ಬೀದಿಗರನೈದೆ ಬಾಗಿಲೊಳ್ ನೋಡುತಿಹಳು ||
ಬಹುಜನದ ಮುಂದೆ ಸುಳಿವಳ್ ನಾಡಮಾತಂ ಗ | ಳಹುವವಳ್ ತರುವಲಿಗೋಡನಾಡುವಳ್ ತನ್ನ | ಸಹಜಮಲ್ಲದೆ ಪಿರಿದಲಂಕರಿಸಿ ಕೊಂಬುವಳ್ ನಿಲ್ವಳೇ ಶಿಕ್ಷಿಸಿದೊಡೆ ||57||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಗೃಹಕೃತ್ಯಮಂ ಬಿಟ್ಟು ನೆರೆಮನೆ ತವರ್ಮನೆಯೊಳ್ ಇಹಳ್=[ಗೃಹಕೃತ್ಯದ ಕೆಲಸವನ್ನು ಬಿಟ್ಟು ನೆರೆಮನೆ ತವರುಮನೆಯಲ್ಲಿ ಇರುವಳು.] ಎಳೆಯರಂ ಚುಂಬಿಸುವಳು ಒಲಿದು ಪಾಡುವಳ್ ಗಹಗಹಿಸಿ ಬರಿದೆ ನಗುವಳ್=[ಎಳೆಯಮಕ್ಕಳನ್ನು ಎಲ್ಲರೆದುರು ಚುಂಬಿಸುವಳು ಮತ್ತೆ ಪ್ರೀತಿಯಿಂದ ಹಾಡುಡುವಳು, ಸುಮ್ಮನೆ ದೊಡ್ಡದಾಗಿ ಗಹಗಹಿಸಿ ನಗುವಳು,] ಬೀದಿಗರನೈದೆ ಬಾಗಿಲೊಳ್ ನೋಡುತಿಹಳು=[ಬೀದಿಯಲ್ಲಿ ಹೋಗುವವರು ಬರುತ್ತಿರಲು ಬಾಗಿಲಲ್ಲಿ ನಿಂತು ನೋಡುತ್ತಿರುವಳು,] ಬಹುಜನದ ಮುಂದೆ ಸುಳಿವಳ್ ನಾಡಮಾತಂ ಗಳಹುವವಳ್=[ಬಹಳ ಜನರು ಇರುವಲ್ಲಿ ಅವರ ಮುಂದೆ ಸುಳಿವಳು, ಊರಿನವರ ಗಾಳಿ ಸುದ್ದಿಗಳನ್ನು ಮನಬಂದಂತೆ ಹೇಳುವಳು], ತರುವಲಿಗೋಡನಾಡುವಳ್ ತನ್ನ ಸಹಜಮಲ್ಲದೆ ಪಿರಿದಲಂಕರಿಸಿ ಕೊಂಬುವಳ್ ನಿಲ್ವಳೇ ಶಿಕ್ಷಿಸಿದೊಡೆ= [ಚಿಕ್ಕಮಕ್ಕಳೊಡನೆ ಆಡುವಳು. ತನ್ನ ಸಹಜವಲ್ಲದ ರೀತಿಯಲ್ಲಿ ಅತಿಯಾಗಿ ಅಲಂಕರಿಸಿಕೊಳ್ಳುವಳು, ಇಂಥವಳು ಶಿಕ್ಷಿಸಿದರೂ ನಿಲ್ಲುವಳೇ? ಶಿಕ್ಷಿಸಿದರೂ ಶೀಲವತಿಯಾಗಿ ನಿಲ್ಲಲಾರಳು.]
  • ತಾತ್ಪರ್ಯ:*ಗೃಹಕೃತ್ಯದ ಕೆಲಸವನ್ನು ಬಿಟ್ಟು ನೆರೆಮನೆ ತವರುಮನೆಯಲ್ಲಿ ಇರುವಳು. ಎಳೆಯಮಕ್ಕಳನ್ನು ಎಲ್ಲರೆದುರು ಚುಂಬಿಸುವಳು ಮತ್ತೆ ಪ್ರೀತಿಯಿಂದ ಹಾಡುಡುವಳು, ಸುಮ್ಮನೆ ದೊಡ್ಡದಾಗಿ ಗಹಗಹಿಸಿ ನಗುವಳು, ಬೀದಿಯಲ್ಲಿ ಹೋಗಿ ಬರುವವರನ್ನು ಬಾಗಿಲಲ್ಲಿ ನಿಂತು ನೋಡುತ್ತಿರುವಳು, ಬಹಳ ಜನರು ಇರುವಲ್ಲಿ ಅವರ ಮುಂದೆ ಸುಮ್ಮನೆ ತಿರುಗಾಡುವಳು, ಊರಿನವರ ಗಾಳಿ ಸುದ್ದಿಗಳನ್ನು ಮನಬಂದಂತೆ ಹೇಳುವಳು, ಚಿಕ್ಕಮಕ್ಕಳೊಡನೆ ಆಡುವಳು; ಸಹಜವಲ್ಲದ ರೀತಿಯಲ್ಲಿ ಅತಿಯಾಗಿ ತನ್ನನ್ನು ಅಲಂಕರಿಸಿಕೊಳ್ಳುವಳು, ಇಂಥವಳು ಶಿಕ್ಷಿಸಿದರೂ ನಿಲ್ಲುವಳೇ? ಶಿಕ್ಷಿಸಿದರೂ ಶೀಲವತಿಯಾಗಿ ನಿಲ್ಲಲಾರಳು.

(ಪದ್ಯ -೫೭)

ಪದ್ಯ ೫೮[ಸಂಪಾದಿಸಿ]

ನರ್ತಕಿಯ ನಾಪಿತೆಯ ಪರ್ಣವಿಕ್ರಯಿಯ ಪ್ರ | ವರ್ತಕಿಯ ದಾಸಿಯ ಬುರುಂಡೆಯ ಕಪಾಲಿನಿಯ | ಭರ್ತಾರನುಳಿದವಳ ಮಾಲೆಗಾತಿಯ ಜಟಿಯ ಸೂತಕಿಯ ಸೈರಂಧ್ರಿಯ||
ಕರ್ತವ್ಯದಿಂದಿನಿಬರೊಡನಾಡಿದೊಡೆ ಬಾಲೆ | ಯರ್ತವೆ ದುರಾಚಾರಮಂ ಕಲಿವರದರಿಂ ಬು | ಧರ್ತರುಣಿಯರ ನಡೆವಳಿಗೆ ಭಂಗಮಂಕುರಿಸದಂತೆ ಪಾಲಿಸವೇಳ್ವುದು ||58||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ನರ್ತಕಿಯ ನಾಪಿತೆಯ ಪರ್ಣವಿಕ್ರಯಿಯ ಪ್ರವರ್ತಕಿಯ=[ನರ್ತನ ಮಾಡುವವಳ, ಕ್ಷೌರಮಾಡುವವಳ, ಬಾಳೆಎಲೆ - ವೀಳಯದೆಲೆಗಳನ್ನು ಮಾರುವವಳ,ಪುರುಷ ಸ್ತ್ರೀಯರಿಗೆ ಅಕ್ರಮ ಸಂಬಂಧ ಹೊಂದಿಸುವವಳ] ದಾಸಿಯ ಬುರುಂಡೆಯ ಕಪಾಲಿನಿಯ ಭರ್ತಾರ(ಪತಿ)ನುಳಿದವಳ ಮಾಲೆಗಾತಿಯ=[ದಾಸಿಯರ, ಬುಟ್ಟಿಮಾರುವವಳ, ಕಣಿಹೇಳುವ ಕೀಳುದೇವೋಪಾಸಕಿಯ, ಪತಿಯನ್ನು ಬಿಟ್ಟವಳ, ಹೂಮಾರುವ ಮಾಲೆಗಾತಿಯ,] ಜಟಿಯ ಸೂತಕಿಯ ಸೈರಂಧ್ರಿಯ ಸೂತಕಿಯ ಸೈರಂಧ್ರಿಯ, ಕರ್ತವ್ಯದಿಂದಿನಿಬರೊಡನಾಡಿದೊಡೆ=[ಜಟಿಯನ್ನಬಿಟ್ಟು ಬೈರಾಗಿಯಂತಿರುವವಳ, ಮಡಿಮೈಲಿಗೆಇಲ್ಲದವಳ, ಅಲಂಕಾಮಾಡುವ ಸೇವಕಿಯ],ಕರ್ತವ್ಯದಿಂದಿನಿಬರೊಡನಾಡಿದೊಡೆ=[ಕೆಲಸದ ನಿಮಿತ್ತದಿಂದ ಇಂಥವರೊಡನೆ ಒಡನಾಡಿದರೆ], ಬಾಲೆಯರ್ತವೆ ದುರಾಚಾರಮಂ ಕಲಿವರದರಿಂ=[ಬಾಲಕಿಯರು ಬಹಳ ದುರಾಚಾರವನ್ನು ಕಲಿಯುವರು, ಅದರಿಂದ] ಬುಧರ್(ತಿಳಿದವರು) ತರುಣಿಯರ ನಡೆವಳಿಗೆ ಭಂಗಂ(ಕುಂದು) ಅಂಕುರಿಸದಂತೆ ಪಾಲಿಸವೇಳ್ವುದು=[ತಿಳಿದವರು ತರುಣಿಯರ ನಡೆವಳಿಕಗಳಿಗೆ ಕುಂದು ಬರದಂತೆ ಪಾಲಿಸಲು ಪ್ರಜೆಗಳಿಗೆ ಹೇಳಬೇಕು,]ಎಂದು ವ್ಯಾಸಮುನಿ ಧರ್ಮಜನಿಗೆ ಹೇಳೀದನು.
  • ತಾತ್ಪರ್ಯ:*ನರ್ತನ ಮಾಡುವವಳ, ಕ್ಷೌರಮಾಡುವವಳ, ಬಾಳೆಎಲೆ - ವೀಳಯದೆಲೆಗಳನ್ನು ಮಾರುವವಳ,ಪುರುಷ ಸ್ತ್ರೀಯರಿಗೆ ಅಕ್ರಮ ಸಂಬಂಧ ಹೊಂದಿಸುವವಳ, ದಾಸಿಯರ, ಬುಟ್ಟಿಮಾರುವವಳ, ಕಣಿಹೇಳುವ ಕೀಳುದೇವೋಪಾಸಕಿಯ, ಪತಿಯನ್ನು ಬಿಟ್ಟವಳ, ಹೂಮಾರುವ ಮಾಲೆಗಾತಿಯ, ಜಟಿಯನ್ನಬಿಟ್ಟು ಬೈರಾಗಿಯಂತಿರುವವಳ, ಮಡಿಮೈಲಿಗೆಇಲ್ಲದವಳ, ಅಲಂಕಾಮಾಡುವ ಸೇವಕಿಯ,ಕೆಲಸದ ನಿಮಿತ್ತದಿಂದ ಇಂಥವರೊಡನೆ ಒಡನಾಡಿದರೆ, ಬಾಲಕಿಯರು ಬಹಳ ದುರಾಚಾರವನ್ನು ಕಲಿಯುವರು, ಅದ್ದರಿಂದ ತಿಳಿದವರು ತರುಣಿಯರ ನಡೆವಳಿಕಗಳಿಗೆ ಕುಂದು ಬರದಂತೆ ಪಾಲಿಸಲು ಪ್ರಜೆಗಳಿಗೆ ಹೇಳಬೇಕು,ಎಂದು ವ್ಯಾಸಮುನಿ ಧರ್ಮಜನಿಗೆ ಹೇಳೀದನು.

(ಪದ್ಯ -೫೮)XXI

ಪದ್ಯ ೫೯[ಸಂಪಾದಿಸಿ]

ಪುರುಷಾಂತರಕ್ಕೆಳಸಿ ಪುಷ್ಟಶರತಾಪದಿಂ | ಕರಗಿ ಕಾತರಿಸಿ ಮೆಲ್ಲನೆ ದೂತಿಯೊರ್ವಳಂ | ಕರೆದೊಡಂಬಡಿಸಿ ಬೇಡಿದನಿತ್ತು ಸತ್ಕರಿಸಿ ಪೊತ್ತುವೇಳೆಗಳನರಸಿ ||
@ನೆರೆಹೊರೆಯರಿಯದಂತೆ ಪತಿಯಂ ಮರೆಸಿ ಮನೆಯ | ವರನೆಲ್ಲರಂ ಟೊಣೆದು ಮದನಕೇಳಿಗೆ ಸಂದು | ಮರಳಿ ಮಾನಿನಯರಂತಿರಬಲ್ಲರವರೆ ಜಾರೆಯರವರನೋವಬಹುದೆ ||59||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಪುರುಷಾಂತರಕ್ಕೆ ಎಳಸಿ ಪುಷ್ಟಶರತಾಪದಿಂ(ಕಾಮಬಾಧೆಯಿಂದ) ಕರಗಿ ಕಾತರಿಸಿ ಮೆಲ್ಲನೆ ದೂತಿಯೊರ್ವಳಂ ಕರೆದು ಒಡಂಬಡಿಸಿ ಬೇಡಿದನು ಇತ್ತು=[ಅನ್ಯ ಪುರುಷರ ಸಹವಾಸ ಬಯಸಿ ಕಾಮಬಾಧೆಯಿಂದ ಬೆಂದು ಕಾತರಿಸಿ ಮೆಲ್ಲನೆ ಸೇವಕಿಯನ್ನು ಕರೆದು ಒಪ್ಪಿಸಿ ಕೇಲಿದುದನ್ನು ಕೊಟ್ಟು ಅವಳನ್ನು ಸತ್ಕರಿಸಿ,] ಪೊತ್ತು ವೇಳೆಗಳನು ಅರಸಿ ನೆರೆಹೊರೆಯರು ಅಯದಂತೆ ಪತಿಯಂ ಮರೆಸಿ ಮನೆಯವರನು ಎಲ್ಲರಂ ಟೊಣೆದು=[ಹೊತ್ತು ಸಮಯಗಳನ್ನು ಅರಸಿಕೊಂಡು ನೆರೆಹೊರೆಯವರು ತಿಳಿಯದಂತೆ ಪತಿಗೂ ಗೊತ್ತಾಗದಂತೆ ಮನೆಯ ಎಲ್ಲರನ್ನೂ ತಪ್ಪಸಿ,] ಮದನಕೇಳಿಗೆ ಸಂದು ಮರಳಿ ಮಾನಿನಯರಂತೆಇರಬಲ್ಲರು ಅವರೆ ಜಾರೆಯರು ಅವರನು ಒವಬಹುದೆ(ಓವು=ಎಚ್ಚರಿಸು)= [ಸಂಭೋಗಕೇಳಿಗೆ ಹೋಗಿ, ನಂತರ ಹಿಂತಿರುಗಿಬಂದು ಪತಿವೃತೆಯರಂತೆ ಇರಬಲ್ಲರು ಅವರೆ ಜಾರೆಯರು ಅಥವಾ ವ್ಯಭಿಚಾರಿ ಸ್ತ್ರೀಯರು; ಅವರನ್ನು ಎಚ್ಚರಿಸಿ ಸರಿದಾರಿಗೆ ತರಲು ಸಾಧ್ಯವೇ? ಸಾಧ್ಯವಿಲ್ಲ.
  • ತಾತ್ಪರ್ಯ:*[ಅನ್ಯ ಪುರುಷರ ಸಹವಾಸ ಬಯಸಿ ಕಾಮಬಾಧೆಯಿಂದ ಬೆಂದು ಕಾತರಿಸಿ ಮೆಲ್ಲನೆ ಸೇವಕಿಯನ್ನು ಕರೆದು ಒಪ್ಪಿಸಿ ಕೇಲಿದುದನ್ನು ಕೊಟ್ಟು ಅವಳನ್ನು ಸತ್ಕರಿಸಿ, ಹೊತ್ತು ಸಮಯಗಳನ್ನು ಆರಸಿಕೊಂಡು ನೆರೆಹೊರೆಯವರು ತಿಳಿಯದಂತೆ ಪತಿಗೂ ಗೊತ್ತಾಗದಂತೆ ಮನೆಯ ಎಲ್ಲರನ್ನೂ ತಪ್ಪಸಿ ಹೋಗಿ ಪರಪುರುಷಸಂಗಮಾಡಿ , ನಂತರ ಹಿಂತಿರುಗಿಬಂದು ಪತಿವೃತೆಯರಂತೆ ಇರಬಲ್ಲರು; ಅವರೆ ಜಾರೆಯರು ಅಥವಾ ವ್ಯಭಿಚಾರಿ ಸ್ತ್ರೀಯರು; ಅವರನ್ನು ಎಚ್ಚರಿಸಿ ಸರಿದಾರಿಗೆ ತರಲು ಸಾಧ್ಯವೇ? ಸಾಧ್ಯವಿಲ್ಲ.

(ಪದ್ಯ -೫೯)

ಪದ್ಯ ೬೦[ಸಂಪಾದಿಸಿ]

ಸೋಲ್ದನಂ ಕಂಡು ಕಣ್ಗೊನೆಗೊಲೆದು ನೋಟಮಂ | ಜೋಲ್ದುರುಬನೊಂದಿಸುವ ನೆವದಿಂದೆ ಕೈನೆಗಪಿ | ಸಾಳ್ದ ಮೇಲುದನೋಸರಿಸಿ ಮೊಲೆಗೆಲದ ಪೊಗರ್ದೋರಿ ಪುಸಿಲಜ್ಜೆಯಿಂದೆ ||
ತೇಲ್ದವಳ ತೆರದಿಂದೆ ನಸುನಗೆಯ ಪಸರಿಸುತೆ | ಕಾಲ್ದೆಗೆಯದೊಯ್ಯನೊಯ್ಯನೆ ನಡೆವ ಭಂಗಿಯಂ | ನಾಲ್ದೆಸೆಗೆ ಕಾಣಿಸುವ ಮೈಸಿರಯ ಕಾಮಿನಿಯರವರೆ ಜಾರೆಯರೆನಿಪರು ||60||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಸೋಲ್ದನಂ ಕಂಡು ಕಣ್ಗೊನೆಗ ಒಲೆದು ನೋಟಮಂ(ಪ್ರೇಮದ ನೋಟವನ್ನು ಬೀರಿ), ಜೋಲ್ದ ತುರುಬನು ಒಂದಿಸುವ ನೆವದಿಂದೆ ಕೈನೆಗಪಿ ಸಾಳ್ದ(ಸರಿದ) ಮೇಲುದನು ಓಸರಿಸಿ=[ತನಗೆ ಮನಸೊತವನನ್ನು ನೊಡಿ, ಕಡೆಗಣ್ಣಿನಿಂದ ಪ್ರೇಮದ ನೋಟವನ್ನು ಬೀರಿ, ಜೋತುಬಿದ್ದ ತುರುಬನ್ನು ಅಥವಾ ತಲೆಕೂದಲನ್ನು ಸರಿಪಿಸುವ ನೆವದಿಂದ ಕೈಎತ್ತಿ ಸರಿದ-ಎದೆಮುಚ್ಚಿದ ಸೆರಗನ್ನು ಸರಿಸಿ,] ಮೊಲೆಯ ಕೆಲದ ಪೊಗರ್ ತೋರಿ ಪುಸಿಲಜ್ಜೆಯಿಂದೆ ತೇಲ್ದವಳ ತೆರದಿಂದೆ=[ತನ್ನ ಮೊಲೆಯ ಬದಿಯ ಉಬ್ಬಿದ ಕೊಬ್ಬನ್ನು ತೋರಿಸಿ, ಸುಳ್ಳುನಾಚಿಕೆಯಲ್ಲಿ ತೇಲಿದವಳ ತರದಲ್ಲಿ] ನಸುನಗೆಯ ಪಸರಿಸುತೆ ಕಾಲ್ದೆಗೆಯದೆ ಒಯ್ಯನೊಯ್ಯನೆ ನಡೆವ ಭಂಗಿಯಂ ನಾಲ್ದೆಸೆಗೆ(ನಾಲ್ಕುದಿಕ್ಕಿಗೆ=[ನಸುನಗೆಯನ್ನು ಬೀರುತ್ತಾ ಕಾಲನ್ನು ಎತ್ತಿಹಾಕದೆ ಮಂದನಡಿಗೆಯಲ್ಲಿ ಒಯ್ಯನೊಯ್ಯನೆ ವೈಯಾರದಿಂದ ನಡೆಯುವ ಭಂಗಿಯಿಂದ ನಾಲ್ಕೂದಿಕ್ಕಿಗೆ ಸುತ್ತಮುತ್ತ ತನ್ನ ಮೈಸೊಬಗನ್ನು ತೋರಿಸುವ ಹೆಂಗಸರು- ಅವರನ್ನೆ ಜಾರೆಯರು/ವ್ಯಭಿಚಾರಿಗಳು ಎನ್ನುವರು.
  • ತಾತ್ಪರ್ಯ:*ತನಗೆ ಮನಸೊತವನನ್ನು ನೊಡಿ, ಕಡೆಗಣ್ಣಿನಿಂದ ಪ್ರೇಮದ ನೋಟವನ್ನು ಬೀರಿ, ಜೋತುಬಿದ್ದ ತುರುಬನ್ನು ಅಥವಾ ತಲೆಕೂದಲನ್ನು ಸರಿಪಿಸುವ ನೆವದಿಂದ ಕೈಎತ್ತಿ ಸರಿದ-ಎದೆಮುಚ್ಚಿದ ಸೆರಗನ್ನು ಸರಿಸಿ, ತನ್ನ ಬದಿಮೊಲೆಯ ಉಬ್ಬಿದ ಕೊಬ್ಬನ್ನು ತೋರಿಸಿ, ನಾಚಿಕೆಯಾದಂತೆ ನಟಿಸುತ್ತಾ, ನಸುನಗೆಯನ್ನು ಬೀರುತ್ತಾ ಕಾಲನ್ನು ಎತ್ತಿಹಾಕದೆ ಮಂದನಡಿಗೆಯಲ್ಲಿ ಒಯ್ಯನೊಯ್ಯನೆ ವೈಯಾರದಿಂದ ನಡೆಯುವ ಭಂಗಿಯಿಂದ ನಾಲ್ಕೂದಿಕ್ಕಿಗೆ ಸುತ್ತಮುತ್ತ ತನ್ನ ಮೈಸೊಬಗನ್ನು ತೋರಿಸುವ ಹೆಂಗಸರು- ಅವರನ್ನೇ ಜಾರೆಯರು/ವ್ಯಭಿಚಾರಿಗಳು ಎನ್ನುವರು.

(ಪದ್ಯ -೬೦)

ಪದ್ಯ ೬೧[ಸಂಪಾದಿಸಿ]

ಚಪಲೆ ಚಂಚಲೆ ಚಾಟುವತಿ ಚಂಡಿ ಛಲವಾದಿ | ಕುಪಿತೆ ಕುತ್ಸಿತೆ ಕುಹಕೆ ಕುಜೆ ಕುಟಿಲೆ ಕುಲಗೇಡಿ | ಕಪಟಿ ಕಂಟಕಿ ಕಟಕಿ ಕಡುದುಷ್ಟೆ ಕಲಹಾರ್ಥಿ ವಿರಸೆ ಪರವಶೆ ಪಾದರಿ ||
ವಿಫಲೆ ವಿಹ್ವಲೆ ವಿಷಮೆ ವಿರಹಿ ವಿಪರೀತೆ ಮಿಗೆ | ತಪಿತೆ ತಸ್ಕರೆ ತವಕಿ ತವೆ ತಂದ್ರಿ ತಾಮಸಿಯೆ | ನಿಪ ವನಿತೆಯರ ನಿಜಕೆ ನಿಲಿಸಿ ನಿಶ್ಚೈಸಿದೊಡೆ ಬಳಿಕ ಬಳಲಿಕೆ ಬಾರದೆ ||61||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಚಪಲೆ= ಅತಿ ಆಸೆ ಮತ್ತು ಕುತೂಹಲಿಯು, ಚಂಚಲೆ=ಮನಸ್ಸು ಗಟ್ಟಿಯಿಲ್ಲದವಳು. ಚಾಟುವತಿ= ಕೆಟ್ಟ ಮಾತಿನವಳು, ಚಂಡಿ=ಹಠಗೇಡಿ, ಛಲವಾದಿ=ಚಂಡಿ, ಕುಪಿತೆ=ಕೋಪಿಷ್ಠೆ, ಕುತ್ಸಿತೆ=ಕೆಟ್ಟ ನೆಡತೆಯವಳು, ಕುಹಕೆ= ಕೊಂಕು ಮಾತಿನವಳು, ಕುಜೆ= ಹುfಟಿನಲ್ಲಿ ದೋXಇತಳು, ಕುಟಿಲೆ= ಕುತಂತ್ರಿ ಕುಲಗೇಡಿ= ಮನತನಕ್ಕೆ ಕೆಟ್ಟ ಹೆಸರು ತರುವವಳ; ಕಪಟಿ=ಮೋಸಗಅತಿ, ಕಂಟಕಿ=ಕೆಲಸಕಡಿಸುವವಳು, ಕಟಕಿ= ಚುಚ್ಚುವ ಮಾತಿನವಳು, ಕಡುದುಷ್ಟೆ= ಬಹಳ ಕೆಡುಕಿ, ಕಲಹಾರ್ಥಿ=ಜಗಳಬಯಸುವವಳು, ವಿರಸೆ=ಸಂತೋಷ ಕೆಡಿಸುವವಳು, ಪರವಶೆ=ಪರರಿಗೆ ವಿಧೇಯಳು ಪಾದರಿ= ವ್ಭಿಚಾರಿ, ವಿಫಲೆ=ಸರಿಯಾಗಿಕೆಲಸ ಮಾಡದವಳು, ವಿಹ್ವಲೆ= ಸದಾ ಉದ್ವೇಗಿ, ವಿಷಮೆ=ಅಲ್ಲವನ್ನೂ ವರೋಧಿಸುವವಳು, ವಿರಹಿ= ಸ್ನೇಹ,ಪ್ರೀತಿ ವಂಚಿತಳು, ವಿಪರೀತೆ= ಅವಿಧೇಯತೆಯವಳು, ಮಿಗೆತಪಿತೆ=ಆಸೆ ಕಾಮದಾಹದವಳು, ತಸ್ಕರೆ= ಕಳ್ಳಿ, ತವಕಿ=ಪರ ಸಹವಾಸ ಬಹಸುವವಳು, ತವೆ ತಂದ್ರಿ=ಅತಿನಿದ್ರೆಯವಳು, ತಾಮಸಿ= ಅಜ್ಙಾನಿ ಕೀಳನ್ನು ಬಯಸುವವಳು, ಎನಿಪ=ಈ ಬಗೆಯ ವನಿತೆಯರ=ಹೆಂಗಸರನ್ನು ನಿಜಕೆ=ಸನ್ಮಾರ್ಗಕ್ಕೆ ನಿಲಿಸಿ=ತಂದು ನಿಶ್ಚೈಸಿದೊಡೆ=ಸರಿದಾರಿಯಲ್ಲಿಯೇ ಇರುವಂತೆ ಮಾಡಿದರೆ ಬಳಿಕ=ನಂತರ, ಬಳಲಿಕೆ=ರಾಜ್ಯದಲ್ಲಿ ಕಷ್ಟವು, ಬಾರದೆ=ಬರದೇ ಇರುವುದು.
  • ತಾತ್ಪರ್ಯ:*ಸಂಸಾರದ ಆಧಾರವಾದ ಹೆಂಗಸರಲ್ಲಿ ಕಂಡುಬರುವ, ಅತಿ ಆಸೆ ಮತ್ತು ಕುತೂಹಲಿಯು, ಮನಸ್ಸು ಗಟ್ಟಿಯಿಲ್ಲದವಳು. ಕೆಟ್ಟ ಮಾತಿನವಳು, ಹಠಗೇಡಿ, ಚಂಡಿ, ಕೋಪಿಷ್ಠೆ, ಕೆಟ್ಟ ನೆಡತೆಯವಳು, ಕೊಂಕು ಮಾತಿನವಳು, ಹುಟ್ಟಿನಲ್ಲಿ ದೋಷಿತಳು, ಕುತಂತ್ರಿ, ಮನತನಕ್ಕೆ ಕೆಟ್ಟ ಹೆಸರು ತರುವವಳ; ಮೋಸಗಾತಿ, ಕೆಲಸಕಡಿಸುವವಳು,ಚುಚ್ಚುವ ಮಾತಿನವಳು, ಕಡುದುಷ್ಟೆ= ಬಹಳ ಕೆಡುಕಿ, ಕಲಹಾರ್ಥಿ=ಜಗಳಬಯಸುವವಳು, ವಿರಸೆ=ಸಂತೋಷ ಕೆಡಿಸುವವಳು, ಪರವಶೆ=ಪರರಿಗೆ ವಿಧೇಯಳು ಪಾದರಿ= ವ್ಭಿಚಾರಿ, ವಿಫಲೆ=ಸರಿಯಾಗಿಕೆಲಸ ಮಾಡದವಳು,ಸದಾ ಉದ್ವೇಗಿ, ಅಲ್ಲವನ್ನೂ ವಿರೋಧಿಸುವವಳು, ಸ್ನೇಹ,ಪ್ರೀತಿ ವಂಚಿತಳು, ಅವಿಧೇಯತೆಯವಳು, ಅತಿಆಸೆ ಕಾಮದಾಹದವಳು,ಕಳ್ಳಿ, ಪರರ ಸಹವಾಸ ಬಹಸುವವಳು,ಅತಿನಿದ್ರೆಯವಳು, ಅಜ್ಙಾನಿ ಕೀಳನ್ನು ಬಯಸುವವಳು,ಈ ಬಗೆಯ ಹೆಂಗಸರನ್ನು ಸನ್ಮಾರ್ಗಕ್ಕೆ ತಂದು ಸರಿದಾರಿಯಲ್ಲಿಯೇ ಇರುವಂತೆ ಮಾಡಿದರೆ ನಂತರ,ರಾಜ್ಯದಲ್ಲಿಅಮದರೆ ಸಮಾಜದಲ್ಲಿ ಕಷ್ಟವುಬರದೇ ಇರುವುದು.

(ಪದ್ಯ -೬೧)

ಪದ್ಯ ೬೨[ಸಂಪಾದಿಸಿ]

ಹಲವು ಮಾತೇನರಸ ಚಿತ್ರದೊಳ್ ಬರೆದ ಕೋ | ಮಲೆಯರಂ ನಂಬಬಾರದು ನಿರುತಮೆನಲವರ | ಪೊಲಬುಗಂಡವರುಂಟೆ ಸಾಕದಂತಿರಲಿ ಪರಿಕಲ್ಪಿತವ್ರತ ಸಮಾಧಿ ||
ಸಲೆ ತೀರ್ಥಯಾತ್ರೆ ಜಪತಪನಿಷ್ಠೆ ಬೇಕೆಂಬ | ವಿಲಗವಿಲ್ಲಾತ್ಮಪತಿಸೇವೆಯಂ ಪ್ರತಿದಿನದೊ | ಳಲಸದೆ ನೆಗಳ್ಚಿದೊಡೆ ಸತಿಯರ್ಗೆ ಕೀರ್ತಿಸುಗತಿಗಳಪ್ಪು[ದು]ವಿ(ಇ)ಹಪರದೊಳು ||62||
|

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಹಲವು ಮಾತೇನರಸ ಚಿತ್ರದೊಳ್ ಬರೆದ ಕೋಮಲೆಯರಂ ನಂಬಬಾರದು=[ಬಹಳ ಹಿತವಚನ ಏಕೆ? ಚಿತ್ರದಲ್ಲಿ ಬರೆದ ಹೆಂಗಸರನ್ನು ನಂಬಬಾರದು; ಅವರ ನಿಜವಾಗಿ ಹಾಗೆಯೇ ಇರಲಾರರು;] ಹೆಂಗಸರು ಸದಾ ಹೀಗೇ ಇರುವರು, ಎಂದು ಹೇಳಲು ಅವರ ಮನಸ್ಸಿನ ಬಯಕೆಯನ್ನು ಕಂಡವರು ಉಂಟೆ? ಇಲ್ಲವೇ ಇಲ್ಲ! ಸದಾ (ಬುದ್ಧಿ) ಹೇಳಲು ಅವರ ಮನಸ್ಸನ್ನು ತೀಳಿದವರು ಇಲ್ಲ. ಸಾಕು ಅದು ಹಾಗಿರಲಿ ಪೂಜೆ ವ್ರತ ಸಮಾಧಿ ಮತ್ತು ತೀರ್ಥಯಾತ್ರೆ ಜಪತಪನಿಷ್ಠೆ ಬೇಕೆಂಬ], ವಿಲಗವಿಲ್ಲ(ಶಾಸ್ತ್ರೋಕ್ತ ನಿರ್ಬಂಧವಿಲ್ಲ) ಆತ್ಮಪತಿಸೇವೆಯಂ ಪ್ರತಿದಿನದೊಳ್ ಅಲಸದೆ ನೆಗಳ್ಚಿದೊಡೆ ಸತಿಯರ್ಗೆ ಕೀರ್ತಿಸುಗತಿಗಳು ಅಪ್ಪುದು ಇಹಪರದೊಳು=[ಶಾಸ್ತ್ರೋಕ್ತ ನಿರ್ಬಂಧವು ಹೆಂಗಸರಿಗೆ ಇಲ್ಲ, ಅವರು,ತಮಪತಿಸೇವೆಯನ್ನು ಪ್ರತಿದಿನವೂ ಅಲಸ್ಯಪಡದೆ ಮಾಡಿದರೆ ಮುತ್ತೈದೆಯರಿಗೆ ಕೀರ್ತಿ ಸದ್ಗತಿಗಳು ಇಹಪರದಲ್ಲಿ ಆಗುವುದು,]
  • ತಾತ್ಪರ್ಯ:*ಬಹಳ ಹಿತವಚನ ಏಕೆ? ಚಿತ್ರದಲ್ಲಿ ಬರೆದ ಹೆಂಗಸರನ್ನು ನಂಬಬಾರದು; ಅವರ ನಿಜವಾಗಿ ಹಾಗೆಯೇ ಇರಲಾರರು;] ಹೆಂಗಸರು ಸದಾ ಹೀಗೇ ಇರುವರು, ಎಂದು ಹೇಳಲು ಅವರ ಮನಸ್ಸಿನ ಬಯಕೆಯನ್ನು ಕಂಡವರು ಉಂಟೆ? ಇಲ್ಲವೇ ಇಲ್ಲ! ಸದಾ ಬುದ್ಧಿ ಹೇಳಲು ಅವರ ಅಂತರಂಗವನ್ನು ತಿಳಿದವರು ಇಲ್ಲ. ಸಾಕು ಅದು ಹಾಗಿರಲಿ ಪೂಜೆ ವ್ರತ ಸಮಾಧಿ ಮತ್ತು ತೀರ್ಥಯಾತ್ರೆ ಜಪತಪನಿಷ್ಠೆ ಬೇಕೆಂಬ ಶಾಸ್ತ್ರೋಕ್ತ ನಿರ್ಬಂಧವು ಹೆಂಗಸರಿಗೆ ಇಲ್ಲ, ಅವರು,ತಮ್ಮ ಪತಿಸೇವೆಯನ್ನು ಪ್ರತಿದಿನವೂ ಅಲಸ್ಯಪಡದೆ ಮಾಡಿದರೆ ಮುತ್ತೈದೆಯರಿಗೆ ಕೀರ್ತಿ ಸದ್ಗತಿಗಳು ಇಹಪರದಲ್ಲಿ ಆಗುವುದು,

(ಪದ್ಯ -೬೨)

ಪದ್ಯ ೬೩[ಸಂಪಾದಿಸಿ]

ಭೂಪಾಲ ಕೇಳ್ ಧರ್ಮಸಾರಮಿದು ಜಗದೊಳ್ ಮ | ಹೀಪತಿಗಳರ್ಥಲೋಲುಪ್ತಿಯಿಂ ತಮ್ಮಯ ಸ | ಮೀಪದೊಳ್ ದ್ಯೂತರತರಂ ನಾಸ್ತಿಕರನೈದೆ ಪಿಸುಣರನಸೂಯಕರನು ||
ಸೋಪಚಾರದೊಳಿರಿಸಿಕೊಂಡಿರುತಿರಲ್ ಪ್ರಜಾ | ಲೋಪಮಪ್ಪುದು ರಾಜ್ಯಮದರಿನಪಕೀರ್ತಿಯಿಂ | ಪಾಪದಿಂದರಸುಗಳ್ಗಿಹಪರಂ ಕಿಡುಗುಮಿದನರಿಯದಿರಬಹುದೆ ನೃಪರು ||63||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಭೂಪಾಲ ಕೇಳ್ ಧರ್ಮಸಾರಂ ಮಿದು ಜಗದೊಳ್ ಮಹೀಪತಿಗಳು ಅರ್ಥಲೋಲುಪ್ತಿಯಿಂ ತಮ್ಮಯ ಸಮೀಪದೊಳ್=[ರಾಜನೇ ಕೇಳು ಇದು ಧರ್ಮಸಾರವು: ಜಗದಲ್ಲಿ ರಾಜರುಗಳು ಹಣದಾಸೆಯಿಂದ ತಮ್ಮ ಸಮೀಪದಲ್ಲಿ], ದ್ಯೂತರತರಂ ನಾಸ್ತಿಕರನು ಐದೆ ಪಿಸುಣರನು ಅಸೂಯಕರನು ಸೋಪಚಾರದೊಳ್ ಇರಿಸಿಕೊಂಡಿರುತಿರಲ್ ಪ್ರಜಾಲೋಪಮಪ್ಪುದು=[ಜೂಜುಕೋರರನ್ನು, ನಾಸ್ತಿಕರನ್ನು, ಆಶ್ರಯಕ್ಕೆ ಬರುವ ಜಿಪುಣರನ್ನು, ಅಸೂಯಾಪರರನ್ನು, ಆದರದಿಂದ ಇಟ್ಟುಕೊಂಡರೆ ಪ್ರಜೆಗಳ ಹಿತಕ್ಕೆ ಕುಂದುಂಟಾಗಿ ಪ್ರಜಾಲೋಪವಾಗುವುದು.] ರಾಜ್ಯಂ ಅದರಿಂ ಅಪಕೀರ್ತಿಯಿಂ ಪಾಪದಿಂದ ಅರಸುಗಳ್ಗೆ ಇಹಪರಂ ಕಿಡುಗುಂ ಇದನು ಅರಿಯದೆ ಇರಬಹುದೆ ನೃಪರು= [ರಾಜ್ಯಪಾಲನೆಯಲ್ಲಿ ಅದರಿಂದ ಅಪಕೀರ್ತಿಯೂ, ಪಾಪದಿಂದ ಅರಸುಗಳಿಗೆ ಇಹಪರ ಶ್ರೇಯಸ್ಸು ಕೆಡುವುದು, ಇದನ್ನು ರಾಜರು ತಿಳಿಯದೆ ಇರಲು ಸಾಧ್ಯವೇ, ಎಲ್ಲಾ ರಾಜರೂ ತಿಳಿದಿರುತ್ತಾರೆ.]
  • ತಾತ್ಪರ್ಯ:*ರಾಜನೇ ಕೇಳು ಇದು ಧರ್ಮಸಾರವು: ಜಗದಲ್ಲಿ ರಾಜರುಗಳು ಹಣದಾಸೆಯಿಂದ ತಮ್ಮ ಸಮೀಪದಲ್ಲಿ ಜೂಜುಕೋರರನ್ನು, ನಾಸ್ತಿಕರನ್ನು, ಆಶ್ರಯಕ್ಕೆ ಬರುವ ಜಿಪುಣರನ್ನು, ಅಸೂಯಾಪರರನ್ನು, ಆದರದಿಂದ ಇಟ್ಟುಕೊಂಡರೆ ಪ್ರಜೆಗಳ ಹಿತಕ್ಕೆ ಕುಂದುಂಟಾಗಿ ಪ್ರಜಾಲೋಪವಾಗುವುದು. ರಾಜ್ಯಪಾಲನೆಯಲ್ಲಿ ಅದರಿಂದ ಅಪಕೀರ್ತಿಯೂ, ಆ ಪಾಪದಿಂದ ಅರಸುಗಳಿಗೆ ಇಹಪರ ಶ್ರೇಯಸ್ಸೂ ಕೆಡುವುದು, ಇದನ್ನು ರಾಜರು ತಿಳಿಯದೆ ಇರಲು ಸಾಧ್ಯವೇ, ಎಲ್ಲಾ ರಾಜರೂ ತಿಳಿದಿರುತ್ತಾರೆ.]

(ಪದ್ಯ -೬೩)

ಪದ್ಯ ೬೪[ಸಂಪಾದಿಸಿ]

ಆಚಾರಧರ್ಮದಿಂ ನಡೆಯಲರಿಯದ ವಿಪ್ರ | ನೇ ಚಕ್ರಿಯಾಜ್ಞೆಯಂ ಮೀರಿದವನವನಿಂದೆ | ನೀಚನೆ ಹರಿಪ್ರಿಯಂ ಮಾಧವನ ಪೂಜಗೆಯ್ಯದವಂಗೆ ಸುಗತಿಯುಂಟೆ ||
ಈ ಚತುರ್ದಶ ಜಗದೊಳಂತಿರಲದಿನ್ನು ಸಲೆ | ಸೂಚಿಪೆಂ ನಿನಗೆ ಬೆಸಗೊಂಬುದೆನೆ ರಮೆ ನೆಲಸಿ | ಗೋಚರಿಪಳಾವನ ಮನೆಯೊಳೆಂದು ಭೂವರಂ ಕೇಳ್ದೊಡಾಮುನಿ ನುಡಿದನು ||64||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಆಚಾರಧರ್ಮದಿಂ ನಡೆಯಲರಿಯದ ವಿಪ್ರನೇ ಚಕ್ರಿಯಾಜ್ಞೆಯಂ ಮೀರಿದವನವನಿಂದೆ=[ಆಚಾರ ಮತ್ತು ಧರ್ಮದಿದ ನಡೆಯಲು ತಿಳಿಯದ ವಿಪ್ರನೇ ವಿಷ್ಣುವಿನ ಆಜ್ಞೆಯನ್ನು ಮೀರಿದವನು,] ಅವನಿಂದೆ ನೀಚನೆ ಹರಿಪ್ರಿಯಂ= [ಅವನಿಗಿಂತ ಕಡಿಮೆ ವರ್ಣದವನು ಹರಿಪ್ರಿಯನಾಗಿದ್ದರೆ ನೀಚನೇ? ಅಲ್ಲ, ಶ್ರೇಷ್ಠನು.] ಮಾಧವನ ಪೂಜಗೆಯ್ಯದವಂಗೆ ಸುಗತಿಯುಂಟೆ ಈ ಚತುರ್ದಶ ಜಗದೊಳು =[ಮಾದವನನ್ನು ಪೂಜೆಮಾಡದವನಿಗೆ ಈ ಚತುರ್ದಶ ಜಗದಲ್ಲಿ ಒಳ್ಳೆಗತಿಯುಂಟೆ, ಇಲ್ಲ;] ಅಂತಿರಲಿ ಅದು ಇನ್ನು ಸಲೆ ಸೂಚಿಪೆಂ ನಿನಗೆ ಬೆಸಗೊಂಬುದು ಎನೆ=[ ಅದು ಹಾಗಿರಲಿ, ನಿನಗೆ ಇನ್ನು ಮತ್ತೂ ಹೇಳುವೆನು, ನೀನು ಅಪೇಕ್ಷೆ ಇದ್ದರೆ ಕೇಳು ಎನ್ನಲು] ರಮೆ(ಲಕ್ಷ್ಮಿ) ನೆಲಸಿ ಗೋಚರಿಪಳು ಆವನ(ಯಾರ) ಮನೆಯೊಳು ಎಂದು ಭೂವರಂ ಕೇಳ್ದೊಡೆ ಆಮುನಿ ನುಡಿದನು=[ರಾಜನು ಯಾರ ಮನೆಯಲ್ಲಿ ಲಕ್ಷ್ಮಿಯು ನೆಲಸಿರುವಳು? ಎಂದು ಕೇಳಿದಾಗ ಆ ಮುನಿ ಹೀಗೆ ಹೇಳಿದನು.
  • ತಾತ್ಪರ್ಯ:*ಆಚಾರ ಮತ್ತು ಧರ್ಮದಿದ ನಡೆಯಲು ತಿಳಿಯದ ವಿಪ್ರನೇ ವಿಷ್ಣುವಿನ ಆಜ್ಞೆಯನ್ನು ಮೀರಿದವನು,ಅವನಿಗಿಂತ ಕಡಿಮೆ ವರ್ಣದವನು ಹರಿಪ್ರಿಯನಾಗಿದ್ದರೆ ನೀಚನೇ? ಅಲ್ಲ, ಶ್ರೇಷ್ಠನು. ಮಾದವನನ್ನು ಪೂಜೆಮಾಡದವನಿಗೆ ಈ ಚತುರ್ದಶ ಜಗದಲ್ಲಿ ಒಳ್ಳೆಗತಿಯುಂಟೆ, ಇಲ್ಲ; ಅದು ಹಾಗಿರಲಿ, ನಿನಗೆ ಇನ್ನು ಮತ್ತೂ ಹೇಳುವೆನು, ನೀನು ಅಪೇಕ್ಷೆ ಇದ್ದರೆ ಕೇಳು ಎನ್ನಲು, ರಾಜನು ಯಾರ ಮನೆಯಲ್ಲಿ ಲಕ್ಷ್ಮಿಯು ನೆಲಸಿರುವಳು? ಎಂದು ಕೇಳಿದಾಗ ಆ ಮುನಿ ಹೀಗೆ ಹೇಳಿದನು.

(ಪದ್ಯ -೬೪)

ಪದ್ಯ ೬೫[ಸಂಪಾದಿಸಿ]

ವತ್ಸ ಕೇಳಾದೊಡೀ ಧರೆಯೊಳಖಿಳಪ್ರಾಣಿ | ವತ್ಸಲನ ಸತ್ಯಶೌಚಾನ್ವಿತನ ಮನೆಗೆ ಶ್ರೀ | ವತ್ಸಲಾಂಛನನರಸಿ ತೊಡವೆನಿಪಳಾವಗಂ ಪತಿ ಪರಾಯಣೆಯಾಗಿಹ ||
ಸತ್ಸತಿಯದೆಲ್ಲಿ ಮೇಣುನ್ಮುಖಾನಂಗುಲಿಕ | ಸತ್ಸರೋಜಾಸ್ತ್ರಕಳುಕದ ಪುರುಷನೆಲ್ಲಿ ವಿಲ | ಸತ್ಸಮುದ್ರಾತ್ಮಜೆ ಸರಾಗದಿಂದಲ್ಲಿ ಸುಸ್ಥಿರೆಯಾಗಿ ನೆಲಸಿರ್ಪಳು ||65|||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ವತ್ಸ ಕೇಳು ಆದೊಡೆ ಈ ಧರೆಯೊಳು ಅಖಿಳಪ್ರಾಣಿ ವತ್ಸಲನ(ಪ್ರೀತಿಸುವವನ) ಸತ್ಯಶೌಚಾನ್ವಿತನ ಮನೆಗೆ ಶ್ರೀವತ್ಸಲಾಂಛನನರಸಿ(ವಿಷ್ಣುವಿನ ಅರಸಿ-ಲಕ್ಷ್ಮಿ) ತೊಡವೆ(ಆಭರಣ)ನಿಪಳು=[ವತ್ಸನೇ ಕೇಳು ಆದೊಡೀ ಭೂಮಿಯ ಮೇಲೆ ಇರುವ ಎಲ್ಲಾ ಪ್ರಾಣಿಗಳಲ್ಲಿ ದಯೆಪ್ರೀತಿಯುಳ್ಳವನ ಮತ್ತು ಸತ್ಯಶೌಚಗಳನ್ನು ಅನುಸರಿಸುವವನ ಮನೆಗೆ ಲಕ್ಷ್ಮಿಯು ಅಲಂಕರಿಸುವಳು, ಅಲ್ಲಿರುವಳು.] ಆವಗಂ ಪತಿ ಪರಾಯಣೆಯಾಗಿಹ ಸತ್ಸತಿಯು ಅದು ಎಲ್ಲಿ=[ಯಾವಾಗಲೂ ಪತಿ ಪರಾಯಣೆಯಾಗಿಹ ಉತ್ತಮ ಸತಿ ಎಲ್ಲಿ ಇರುವಳೋ ಅಲ್ಲಿ ಇರುವಳು;], ಮೇಣ್ ತತ್ ಮುಖ ಅನಂಗುಲಿಕ(ಬೆರಳು) ಸತ್ಸರೋಜ(ಮುಖ ಹಸ್ತ ಸುಂದರ ಬೆರಳುಗಳ ಕಮಲದಂತಿರುವ ಮೋಹನಾಸ್ತ್ರಕ್ಕೆ, ಮೋಹಕ್ಕೆ) ಅಸ್ತ್ರಕೆ ಅಳುಕದ ಪುರುಷನು ಎಲ್ಲಿ=[ಮತ್ತೆ ಆ ಹೆಂಗಸರಮುಖ ಪ್ರೇಮದ ನೋಟಕ್ಕೆ ಅಳುಕದ ಪುರುಷನು ಎಲ್ಲಿ ಇರುವನೋ ಅಲ್ಲಿ] ವಿಲಸತ್=ಪ್ರಕಶಿಸುವ ಸಮುದ್ರಾತ್ಮಜೆ= ಲಕ್ಷ್ಮಿ ಸರಾಗದಿಂದ= ಪ್ರೀತಿಯಿಂದ, ಅಲ್ಲಿ ಸುಸ್ಥಿರೆಯಾಗಿ= ಸದಾ ಗಟ್ಟಿಯಾಗಿ ನೆಲಸಿರುವಳು
  • ತಾತ್ಪರ್ಯ:*ವತ್ಸನೇ ಕೇಳು ಆದೊಡೀ ಭೂಮಿಯ ಮೇಲೆ ಇರುವ ಎಲ್ಲಾ ಪ್ರಾಣಿಗಳಲ್ಲಿ ದಯೆಪ್ರೀತಿಯುಳ್ಳವನ ಮತ್ತು ಸತ್ಯಶೌಚಗಳನ್ನು ಅನುಸರಿಸುವವನ ಮನೆಗೆ ಲಕ್ಷ್ಮಿಯು ಅಲಂಕರಿಸುವಳು, ಅಲ್ಲಿರುವಳು. ಯಾವಾಗಲೂ ಪತಿ ಪರಾಯಣೆಯಾಗಿಹ ಉತ್ತಮ ಸತಿ ಎಲ್ಲಿ ಇರುವಳೋ ಅಲ್ಲಿ ಇರುವಳು; ಮತ್ತೆ ಆ ಹೆಂಗಸರಮುಖ ಪ್ರೇಮದ ನೋಟಕ್ಕೆ ಅಳುಕದ ಪುರುಷನು ಎಲ್ಲಿ ಇರುವನೋ ಅಲ್ಲಿ ಪ್ರಕಾಶಿಸುವ ಲಕ್ಷ್ಮಿಯು ಪ್ರೀತಿಯಿಂದ ಸದಾ ಗಟ್ಟಿಯಾಗಿ ನೆಲಸಿರುವಳು.

(ಪದ್ಯ -೬೫)

ಪದ್ಯ ೬೬[ಸಂಪಾದಿಸಿ]

ರನ್ನದಿಂ ಧಾನ್ಯಮೆ ವಿಶೇಷಮೆಂದೊದವಿಸುವ | ನನ್ನಮೇ ಕರಿಸದಿಂ ಕಡೆಯೆಂದು ವೆಚ್ಚಿಸುವ | ನುನ್ನಿಸಲ್ ಬಾಲಕನುಮತಿಥಿಯುಂ ಸರಿಯೆಂದು ಸತ್ಕರಿಪನಾವನವನ ||
ತನ್ನ ತಾಯ್ತಂದೆ ಸೋದರ ಬಂಧು ಬಳಗಮಂ | ಮನ್ನಿಸುವನಾವನಾತನ ಸದಾಚಾರಸಂ | ಪನ್ನನಾವನವನ ಮಂದಿರದೊಳೈಶ್ವರ್ಯ ಲಕ್ಷ್ಮಿನೆಲೆಯಾಗಿರ್ಪಳು ||66||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ರನ್ನದಿಂ ಧಾನ್ಯಮೆ ವಿಶೇಷಮೆಂದು ಒದವಿಸುವನು, ಅನ್ನಮೇ ಕರಿಸದಿಂ(ಕಾಸಿಗಂತಲೂ) ಕಡೆಯೆಂದು ವೆಚ್ಚಿಸುವನು (ವೆಚ್ಚಮಾಡುವ)=[ರನ್ನತ್ನಕ್ಕಿಂತಲೂ ಧಾನ್ಯವು ವಿಶೇಷವೆಂದು ಸಂಗ್ರಹಿಸುವವನು, ಅನ್ನವೇ ಕಾಸಿಗಂತಲೂ ಕಡೆಯೆಂದು ಅನ್ನಹಾಕಿ ವೆಚ್ಚಮಾಡುವವನು.] ಅನ್ನಿಸಲ್ ಬಾಲಕನುಂ ಅತಿಥಿಯುಂ ಸರಿಯೆಂದು ಸತ್ಕರಿಪನು ಅವನು೯ಯಾವನೋ) ಅವನ=[ಅನ್ನಿಸಲ್ ತನ್ನ ಮಗ ಬಾಲಕನೂ ಅತಿಥಿಯೂ ಸಮವೆಂದು ಸತ್ಕರಿಸುವವನು ಯಾವನೋ ಅವನು,] ತನ್ನ ತಾಯ್ತಂದೆ ಸೋದರ ಬಂಧು ಬಳಗಮಂ ಮನ್ನಿಸುವನು ಆವನು ಆತನ=[ತನ್ನ ತಾಯ್ತಂದೆ ಸೋದರ ಬಂಧು ಬಳಗವನ್ನು ಆದರಿಸುವನು ಯಾವನೋ ಅವನ] ಸದಾಚಾರಸಂಪನ್ನನು ಆವನವನ ಮಂದಿರದೊಳು=[ಸದಾಚಾರಸಂಪನ್ನನು ಯಾವನೊ ಅವನ ಮನೆಯಲ್ಲಿ] ಐಶ್ವರ್ಯ ಲಕ್ಷ್ಮಿನೆಲೆಯಾಗಿರ್ಪಳು.
  • ತಾತ್ಪರ್ಯ:*ರತ್ನಕ್ಕಿಂತಲೂ ಧಾನ್ಯವು ವಿಶೇಷವೆಂದು ಸಂಗ್ರಹಿಸುವವನ, ಅನ್ನವೇ ಕಾಸಿಗಂತಲೂ ಕಡೆಯೆಂದು ಅನ್ನಹಾಕಿ ವೆಚ್ಚಮಾಡುವವನ; ತನ್ನ ಮಗ ಬಾಲಕನೂ ಅತಿಥಿಯೂ ಸಮವೆಂದು ಸತ್ಕರಿಸುವವನು ಯಾವನೋ ಅವನ, ತನ್ನ ತಾಯ್ತಂದೆ ಸೋದರ ಬಂಧು ಬಳಗವನ್ನು ಆದರಿಸುವನು ಯಾವನೋ ಅವನ, ಸದಾಚಾರಸಂಪನ್ನನು ಯಾವನೊ ಅವನ ಮನೆಯಲ್ಲಿ ಐಶ್ವರ್ಯ ಲಕ್ಷ್ಮಿನೆಲೆಯಾಗಿರ್ಪಳು.

(ಪದ್ಯ -೬೬)

ಪದ್ಯ ೬೭[ಸಂಪಾದಿಸಿ]

ಮಧುರವಾಣಿಯ ಕೃತಜ್ಞನ ದಾನಪರನ ಪರ | ವಧುವಿನೊಲ್ಮೆಯ ಬೇಟಕೊಳಗಾಗದನ ಮಾನ | ನಿಧಿಯೆನಿಸುವನ ತೀರ್ಥಸಂಗತನ ಸಲೆ ಕೂಟಸಾಕ್ಷ್ಯವಂ ನುಡಿಯದವನ ||
ವಿದಿತಕರ್ಮದ ಮಾಳ್ಕೆಯಂ ಮಾಜದಾತನ ವ | ಸುಧೆಯೊಳಿಷ್ಟಾರ್ಥವಂ ತವೆ ನೆಗಳ್ಚುವನ ಬಹು | ವಿಧದ ಧರ್ಮಂಗಳಂ ರಚಿಸುವನ ಮನೆಯೊಳಿಂದಿರೆ ಬಿಡದೆ ನೆಲಸಿರ್ಪಳು ||67||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಮಧುರವಾಣಿಯ= ಒಳ್ಳೆಯರೀತಿ ಮಾತಾಡುವವನ, ಕೃತಜ್ಞನ= ಉಪಕಾರ ಸ್ಮರಿಸುವವನ, ದಾನಪರನಾಗಿರವವನ, ಪರವಧುವಿನ ಒಲ್ಮೆಯ ಬೇಟಕೆ ಒಳಗಾಗದನ= ಪರಪತ್ನಿಯ ಪ್ರೇಮದಕರೆಗೆಮರುಳಾಗದವನ, ಮಾನನಿಧಿಯೆನಿಸುವನ= ಮರ್ಯಾದೆಯುಳ್ಳವನ, ತೀರ್ಥಸಂಗತನ= ಪುಣ್ಯತೀರ್ಥದಲ್ಲಿಮಿಂದವನ, ಸಲೆ= ಮತ್ತು ಕೂಟಸಾಕ್ಷ್ಯವಂ ನುಡಿಯದವನ= ಸುಳ್ಳುಸಾಕ್ಷಿ ಹೇಳದವನ, ವಿದಿತಕರ್ಮದ ಮಾಳ್ಕೆಯಂ ಮಾಜದಾತನ= ಧರ್ಮವಿದಿತ ಕರ್ಮವನ್ನು ಬಿಡದವನ, ವಸುಧೆಯೊಳ್ ಇಷ್ಟಾರ್ಥವಂ ತವೆ ನೆಗಳ್ಚುವನ= ಭೂಮಿಯಲ್ಲಿ ಎಂದರೆ ಸಮಾಜದಲ್ಲಿ ಅಗತ್ಯವಿರುವವರಿಗೆ ಕೋರಿಕೆಯನ್ನು ಈಡೇರಿಸಿ ಕೊಡುವವನ, ಬಹುವಿಧದ ಧರ್ಮಂಗಳಂ ರಚಿಸುವನ= ಅನೇಕ ಧಾರ್ಮಿಕ ಕಾರ್ಯ ಮಾಡುವವನ, ಮನೆಯೊಳ್ ಇಂದಿರೆ= ಮನೆಯಲ್ಲಿ ಲಕ್ಷ್ಮಿ, ಬಿಡದೆ ನೆಲಸಿರ್ಪಳು= ಸದಾ ನೆಲಸಿರುವಳು.
  • ತಾತ್ಪರ್ಯ:*ಒಳ್ಳೆಯರೀತಿ ಮಾತಾಡುವವನ,ಉಪಕಾರ ಸ್ಮರಿಸುವವನ, ದಾನಪರನಾಗಿರವವನ, ಪರಪತ್ನಿಯ ಪ್ರೇಮದಕರೆಗೆಮರುಳಾಗದವನ,ಮರ್ಯಾದೆಯುಳ್ಳವನ, ಪುಣ್ಯತೀರ್ಥದಲ್ಲಿಮಿಂದವನ, ಮತ್ತು ಸುಳ್ಳುಸಾಕ್ಷಿ ಹೇಳದವನ, ಧರ್ಮವಿದಿತ ಕರ್ಮವನ್ನು ಬಿಡದವನ, ಭೂಮಿಯಲ್ಲಿ ಎಂದರೆ ಸಮಾಜದಲ್ಲಿ ಅಗತ್ಯವಿರುವವರಿಗೆ ಕೋರಿಕೆಯನ್ನು ಈಡೇರಿಸಿ ಕೊಡುವವನ, ಅನೇಕ ಧಾರ್ಮಿಕ ಕಾರ್ಯ ಮಾಡುವವನ, ಮನೆಯಲ್ಲಿ ಲಕ್ಷ್ಮಿ ಸದಾ ನೆಲಸಿರುವಳು.

(ಪದ್ಯ -೬೭)

ಪದ್ಯ ೬೮[ಸಂಪಾದಿಸಿ]

ಹೊಸ್ತಿಲೊರಳೊನಕೆಗೆಳ ಮೇಲೆ ಕುಳ್ಳಿರ್ಪವನ | ಮಸ್ತಕವನೆರಡುಕಯ್ಯಿಂ ತುರಸಿಕೊಂಬವನ | ವಿಸ್ತರದ ಜೂಜುಗಳ್ಗೆಳಸುವನ ಪಿರಿದುಂಬುವನ ನಿಂದು ನೀರ್ಗುಡಿವನ ||
ಅಸ್ತಮಯದುದಯಕಾಲದೆ ನಿದ್ರೆಗೈವನಾ | ತ್ಮಸ್ತುತಿಯ ಪರನಿಂದೆಯವನ ಸಾಧಿಸಿಪರರ | ವಸ್ತುವಂ ಕಳುವನ ನಿರುದ್ಯೋಗದವನ ಸಿರಿ ತೊಲಗಿದಲ್ಲದೆ ಮಾಣ್ಬಳೆ ||68||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಹೊಸ್ತಿಲು =ಬಾಗಿಲ ಹೊಸಿಲು, ಒರಳು ಒನಕೆಗೆಳ ಮೇಲೆ ಕುಳ್ಳಿರ್ಪವನ= ಕುಳಿತುಕೊಳ್ಳುವವನ, ಮಸ್ತಕವನು= ತಲೆಯನ್ನು ಎರಡುಕಯ್ಯಿಂ= ಎರಡೂ ಕೈಯಿಂದ ತುರಸಿಕೊಂಬವನ= ತುರಿಸಿಕೊಳ್ಳುವವನ, ವಿಸ್ತರದ ಜೂಜುಗಳ್ಗೆ ಎಳಸುವನ= ದೊಡ್ಡ ಜೂಜಾಡುವವನ, ಪಿರಿದು ಉಂಬುವನ= ಹೊಟ್ಟೆಬಾಕನ, ನಿಂದುನೀರ್ ಕುಡಿವನ= ನಿಂತುಕೊಂಡು ನೀರುಕುಡಿಯುವವನ, ಅಸ್ತಮಯದೆ ಉದಯಕಾಲದೆ ನಿದ್ರೆಗೈವನ= ಸೂರ್ಯ ಉದಯ ಮತ್ತು ಸೂರ್ಯ ಮುಳುಗುವ ಸಂಜೆಸಮಯದಲ್ಲಿ ನಿದ್ದೆಮಾಡುವವನ, ಆತ್ಮಸ್ತುತಿಯ ಪರನಿಂದೆಯವನ= ಅತ್ಮಸ್ತುತಿ ಮತ್ತು ಇತರರನ್ನು ಸದಾನಿಂದಿಸುವವನ, ಸಾಧಿಸಿಪರರ ವಸ್ತುವಂ ಕಳುವನ= ಸಮಯನೋಡಿ ಪರರ ವಸ್ತುಗಳನ್ನು ಕದಿಯುವವನ, ನಿರುದ್ಯೋಗದವನ= ಯಾವ ಉದ್ಯೋಗವನ್ನೂ ಮಾಡದೆ ಇರುವವನ ಸಿರಿ= ಲಕ್ಷ್ಮಿಯು ತೊಲಗಿದು ಅಲ್ಲದೆ= ಬಿಟ್ಟು ಹೋಗದೆ, ಮಾಣ್ಬಳೆ= ಇರುವಳೇ? ಸಿರಿ ಬಿಟ್ಟು ಹೋಗುವಳು'
  • ತಾತ್ಪರ್ಯ:*ಬಾಗಿಲ ಹೊಸಿಲು, ಒರಳು ಒನಕೆಗೆಳ ಮೇಲೆ ಕುಳಿತುಕೊಳ್ಳುವವನ, ತಲೆಯನ್ನು ಎರಡೂ ಕೈಯಿಂದ ತುರಿಸಿಕೊಳ್ಳುವವನ, ದೊಡ್ಡ ಜೂಜಾಡುವವನ, ಹೊಟ್ಟೆಬಾಕನ, ನಿಂತುಕೊಂಡು ನೀರುಕುಡಿಯುವವನ, ಸೂರ್ಯ ಉದಯ ಮತ್ತು ಸೂರ್ಯ ಮುಳುಗುವ ಸಂಜೆಸಮಯದಲ್ಲಿ ನಿದ್ದೆಮಾಡುವವನ, ಅತ್ಮಸ್ತುತಿ ಮತ್ತು ಇತರರನ್ನು ಸದಾನಿಂದಿಸುವವನ, ಸಮಯನೋಡಿ ಪರರ ವಸ್ತುಗಳನ್ನು ಕದಿಯುವವನ, ಯಾವ ಉದ್ಯೋಗವನ್ನೂ ಮಾಡದೆ ಇರುವವನ ಲಕ್ಷ್ಮಿಯು ಬಿಟ್ಟು ಹೋಗದೆ, ಇರುವಳೇ? ಸಿರಿ ಬಿಟ್ಟು ಹೋಗುವಳು.

(ಪದ್ಯ -೬೮)

ಪದ್ಯ ೬೯[ಸಂಪಾದಿಸಿ]

ಜಡನ ಮೂರ್ಖನ ಶಠನ ತಾಮಸನ ನಿಷ್ಠುರದ | ನುಡಿಯವನ ಪಿಸುಣನ ಕೃತಘ್ನನ ಕರುಬನ ಬಾ | ಯ್ಬಡಿಕನ ಕುಚೇಷ್ಟಕನ ಕಾಮುಕನ ಹಿಂಸಕನ ಡಾಂಭಿಕನ ಪಾಷಂಡಿಯ ||
ಕಡುಕೋಪದವನ ಬಹುಭಕ್ಷಕನ ಕೊಳಕನ ನ | ದೃಢನ ಕುತ್ಸಿತನ ಕುಹಕನ ದುರಾಚಾರದಿಂ | ನಡೆವವನ ವಿಶ್ವಾಸಘಾತಕನ ಪಾತಕನ ಲಕ್ಷ್ಮಿತೊಲಗದೆ ಮಾಣ್ಬಳೆ ||69||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಜಡನ= ಸೋಮಾರಿಯ, ಮೂರ್ಖನ= ತಿಳಿಹೇಳಿದರೂ ಅರ್ಥಮಾಡಿಕೊಳ್ಳದವನ, ಶಠನ= ಹಟಮಾರಿಯ, ತಾಮಸನ= ಅಲಸಿಯ, ನಿಷ್ಠುರದ ನುಡಿಯವನ= ಕಠಿಣ ಮಾತಾಡುವವನ, ಪಿಸುಣನ= ಜಿಪುಣನ, ಕೃತಘ್ನನ= ಉಪಕಾರವನ್ನು ಮರೆಯುವವನ, ಕರುಬನ= ಹೊಟ್ಟೆಕಿಚ್ಚಿನವನ, ಬಾಯ್ಬಡಿಕನ= ಅತಿ ಮಾಡವವನ, ಕುಚೇಷ್ಟಕನ= ಕೆಟ್ಟಕೆಲಸಮಾಡುವವನ, ಕಾಮುಕನ= ಪರಸ್ತ್ರೀಯರನ್ನು ಬಯಸುವವನ, ಹಿಂಸಕನ= ಹಿಂಸೆಮಾಡುವವನ, ಡಾಂಭಿಕನ= ಬೂಟಾಟಿಕೆಯವನ, ಪಾಷಂಡಿಯ=ದೈವ ನಿಂದಕನ, ಕಡುಕೋಪದವನ= ಅತಿ ಕೋಪದವನ; ಬಹುಭಕ್ಷಕನ= ಹೊಟ್ಟೆಬಾಕನ, ಕೊಳಕನ= ಶುಚಿಯಿಲ್ಲದವನ, ನದೃಢನ= ಗಟ್ಟಿ ನಿರ್ಧಾರಮಢದವನ, ಕುತ್ಸಿತನ=ನಿಂದೆಮಾಡವವನ, ಕುಹಕನ= ಅಪಹಾಸ್ಯಮಾಡುವವನ, ದುರಾಚಾರದಿಂ ನಡೆವವನ= ಕೆಟ್ಟ ನೆಡತೆಯವನ, ವಿಶ್ವಾಸಘಾತಕನ= ನಂಬಿಕೆ ದ್ರೋಹಮಾಡುವವನ, ಪಾತಕನ= ಪಾಪಕೃತ್ಯ ಮಾಡುವವನ, ಲಕ್ಷ್ಮಿ ತೊಲಗದೆ=ಬಿಟ್ಟುಹೋಗದೆ ಇರುವಳೇ? ಬಿಟ್ಟು ಹೋಗುವಳು.
  • ತಾತ್ಪರ್ಯ:*ಸೋಮಾರಿಯ, ತಿಳಿಹೇಳಿದರೂ ಅರ್ಥಮಾಡಿಕೊಳ್ಳದವನ, ಹಟಮಾರಿಯ, ಅಲಸಿಯ, ಕಠಿಣ ಮಾತಾಡುವವನ, ಜಿಪುಣನ, ಉಪಕಾರವನ್ನು ಮರೆಯುವವನ, ಹೊಟ್ಟೆಕಿಚ್ಚಿನವನ, ಅತಿ ಮಾಡವವನ, ಕೆಟ್ಟಕೆಲಸಮಾಡುವವನ, ಪರಸ್ತ್ರೀಯರನ್ನು ಬಯಸುವವನ,ಹಿಂಸೆಮಾಡುವವನ, ಬೂಟಾಟಿಕೆಯವನ, ದೈವ ನಿಂದಕನ, ಅತಿ ಕೋಪದವನ; ಹೊಟ್ಟೆಬಾಕನ, ಶುಚಿಯಿಲ್ಲದವನ, ಗಟ್ಟಿ ನಿರ್ಧಾರಮಢದವನ ನಿಂದೆಮಾಡುವವನ, ಅಪಹಾಸ್ಯಮಾಡುವವನ, ದುಕೆಟ್ಟ ನೆಡತೆಯವನ, ನಂಬಿಕೆ ದ್ರೋಹಮಾಡುವವನ, ಪಾಪಕೃತ್ಯ ಮಾಡುವವನ, ಲಕ್ಷ್ಮಿ ಬಿಟ್ಟುಹೋಗದೆ ಇರುವಳೇ? ಬಿಟ್ಟು ಹೋಗುವಳು.

(ಪದ್ಯ -೬೯)

ಪದ್ಯ ೭೦[ಸಂಪಾದಿಸಿ]

ಈ ಪರಿಯೊಳಾ ಮುನಿ ಸಮಸ್ತಧರ್ಮಂಗಳಂ | ಭೂಪತಿಗೆ ವಿಸ್ತರಿಸಿ ಬಳಿಕ ಮಖಕಾಲಂ ಸ | ಮೀಪಮಾದಪುದಿನ್ನು ಹಿಮಗಿರಿಯೊಳಿರ್ಪ ಧನಮಂ ತರಿಸವೇಳ್ಪುದೆಂದು ||
ಆ ಪರಾಶರಸುತಂ ನೇಮಿಸಿದೊಡರಸಂ ಚ | ಮೂಪರಂ ಕರೆಸಿ ಪೊರಮಟ್ಟು ನಡೆಗೊಂಡಂ ಪ್ರ | ತಾಪದಿಂ ಪಯಣಪಯಣಕೆಬಿಡುವ ಬೀಡುಬೀಡುಗಳ ಸನ್ನಾಹದಿಂದೆ ||70||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಈ ಪರಿಯೊಳ ಆ ಮುನಿ ಸಮಸ್ತ ಧರ್ಮಂಗಳಂ ಭೂಪತಿಗೆ ವಿಸ್ತರಿಸಿ= [ಈ ರೀತಿಯಲ್ಲಿ ಸಮಸ್ತ ಧರ್ಮಗಳನ್ನೂ ರಾಜ ಯುಧಿಷ್ಠಿರನಿಗೆ ವಿಸ್ತಾರವಾಗಿ ಹೇಳಿ], ಬಳಿಕ ಮಖಕಾಲಂ ಸಮೀಪಮಾದಪುದು ಇನ್ನು ಹಿಮಗಿರಿಯೊಳ್ ಇರ್ಪ ಧನಮಂ ತರಿಸವೇಳ್ಪುದು ಎಂದು ಆ ಪರಾಶರಸುತಂ ನೇಮಿಸಿದೊಡೆ ಅರಸಂ=[ಬಳಿಕ ಯಜ್ಞಸಮಯ ಸಮೀಪವಾಗುವುದು, ಇನ್ನು ಹಿಮಾಲಯದಲ್ಲಿ ಇರುವ ಧನವನ್ನು ತರಿಸಲು ಹೇಳತಕ್ಕದ್ದು ಎಂದು ಆ ಪರಾಶರಸುತನಾದ ವ್ಯಾಸಮುನಿಯು, ಅಪ್ಪಣೆ ಮಾಡಲು,ರಾಜನು,] ಚಮೂಪರಂ(ಸೇನಾನಾಯಕರನ್ನು) ಕರೆಸಿ ಪೊರಮಟ್ಟು=ಹೊರಹೊರಟು ನಡೆಗೊಂಡಂ= ಹೊರಟು ಹೋದನು ಪ್ರತಾಪದಿಂ=ಪರಾಕ್ರಮದಿಂದ ಪಯಣಪಯಣಕೆಬಿಡುವ= ಪ್ರಯಾಣದಲ್ಲಿ ಬೀಡು ಬಿಡಲು ಬೀಡುಬೀಡುಗಳ ಸನ್ನಾಹದಿಂದೆ=[ಸೇನಾನಾಯಕರನ್ನು ಕರೆಸಿ ಪರಾಕ್ರಮದಿಂದ ಪಯಣಪಯಣಕೆ ಬೀಡುಬಿಡುವ ಸಿದ್ಧತೆಮಾಡಿಕೊಂಡು ಹೊರಟು ಹೋದರು.]
  • ತಾತ್ಪರ್ಯ:*ಈ ರೀತಿಯಲ್ಲಿ ಸಮಸ್ತ ಧರ್ಮಗಳನ್ನೂ ರಾಜ ಯುಧಿಷ್ಠಿರನಿಗೆ ವಿಸ್ತಾರವಾಗಿ ಹೇಳಿ, ಬಳಿಕ ಯಜ್ಞಸಮಯ ಸಮೀಪವಾಗುವುದು, ಇನ್ನು ಹಿಮಾಲಯದಲ್ಲಿ ಇರುವ ಧನವನ್ನು ತರಿಸಲು ಹೇಳತಕ್ಕದ್ದು ಎಂದು ಆ ಪರಾಶರಸುತನಾದ ವ್ಯಾಸಮುನಿಯು, ಅಪ್ಪಣೆ ಮಾಡಲು,ರಾಜನು, ಸೇನಾನಾಯಕರನ್ನು ಕರೆಸಿ ಪರಾಕ್ರಮದಿಂದ ಪಯಣಪಯಣಕೆ ಬೀಡುಬಿಡುವ ಸಿದ್ಧತೆಮಾಡಿಕೊಂಡು ಹೊರಟು ಹೋದರು.

(ಪದ್ಯ -೭೦)

ಪದ್ಯ ೭೧[ಸಂಪಾದಿಸಿ]

ಸವ್ಯಸಾಚಿಪ್ರಮುಖರೊಡಗೂಡಿ ಹಿಮಗಿರಿಯ | ದಿವ್ಯಸ್ಥಳಂಗಳಂ ನೋಡುತೊಲವಿಂದೆ ವೇ | ದವ್ಯಾಸಮುನಿವೆರಸಿ ವಿಪ್ರರೊಡಗೂಡಿ ಮರುತಾಧ್ವರದೊಳಂದು ಬಿಸುಟ ||
ದ್ರವ್ಯದೆಡೆಗೈತಂದು ಗಂಧಾಕ್ಷತೆಗಳಿಂದೆ | ನವ್ಯಕುಸುಮೋತ್ಕರಸುಧೂಪದೀಪಂಗಳಿಂ || ಗವ್ಯಮಧುಶರ್ಕರಾದ್ಯುಪಹಾರದಿಂ ನೃಪಂ ಧನದನಂ ಪೂಜಿಸಿದನು ||71||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಸವ್ಯಸಾಚಿ ಪ್ರಮುಖರೊಡಗೂಡಿ ಹಿಮಗಿರಿಯ ದಿವ್ಯಸ್ಥಳಂಗಳಂ ನೋಡುತೊಲವಿಂದೆ=[ಅರ್ಜುನ ಮೊದಲಾದ ಪ್ರಮುಖರನ್ನು ಒಡಗೂಡಿಕೊಂಡು, ಹಿಮಾಲಯದ ದಿವ್ಯಸ್ಥಳಗಳನ್ನು ನೋಡುತ್ತಾ ಸಂತೋಷದಿಂದ ] ವೇದವ್ಯಾಸಮುನಿ ವೆರಸಿ ವಿಪ್ರರ ಒಡಗೂಡಿ ಮರುತಾಧ್ವರದೊಳಂದು ಬಿಸುಟ ದ್ರವ್ಯದೆಡೆಗೈತಂದು=[ವೇದವ್ಯಾಸಮುನಿ ಸಹಿತ ವಿಪ್ರರನ್ನು ಒಡಗೂಡಿಕೊಂಡು ಮರುತನು ಅಧ್ವರದಲ್ಲಿ ಅಂದು ಬಿಸುಟ ದ್ರವ್ಯವಿದ್ದ ಕೆಡೆಗೆ ಬಂದು] ಗಂಧಾಕ್ಷತೆಗಳಿಂದೆ ನವ್ಯಕುಸುಮೋತ್ಕರ ಸುಧೂಪದೀಪಂಗಳಿಂ ಗವ್ಯಮಧುಶರ್ಕರಾದಿ ಉಪಹಾರದಿಂ ನೃಪಂ ಧನದನಂ(ಕುಬೇರ) ಪೂಜಿಸಿದನು=[ಗಂಧಾಕ್ಷತೆಗಳಿಂದ ಹೊಸಹೂಗಳಿಂದ ಧೂಪ ದೀಪಗಳಿಂದ ಪಂಚಗವ್ಯ ಮಧುಶರ್ಕರ ಮೊದಲಾದ ಉಪಹಾರ ನೈವೇದ್ಯದಿಂದ ಧರ್ಮರಾಯನು ಕುಬೇರನನ್ನು ಪೂಜಿಸಿದನು.
  • ತಾತ್ಪರ್ಯ:*ಅರ್ಜುನ ಮೊದಲಾದ ಪ್ರಮುಖರನ್ನು ಒಡಗೂಡಿಕೊಂಡು, ಹಿಮಾಲಯದ ದಿವ್ಯಸ್ಥಳಗಳನ್ನು ನೋಡುತ್ತಾ ಸಂತೋಷದಿಂದ ವೇದವ್ಯಾಸಮುನಿ ಸಹಿತ ವಿಪ್ರರನ್ನು ಒಡಗೂಡಿಕೊಂಡು ಮರುತನು ಅಧ್ವರದಲ್ಲಿ ಅಂದು ಬಿಸುಟ ದ್ರವ್ಯವಿದ್ದ ಕೆಡೆಗೆ ಬಂದು ಅದನ್ನು ಗಂಧಾಕ್ಷತೆಗಳಿಂದ ಹೊಸಹೂಗಳಿಂದ ಧೂಪ ದೀಪಗಳಿಂದ ಪಂಚಗವ್ಯ ಮಧುಶರ್ಕರ ಮೊದಲಾದ ಉಪಹಾರ ನೈವೇದ್ಯದಿಂದ ಧರ್ಮರಾಯನು (ಸಂಪತ್ತನ್ನು)ಕುಬೇರನನ್ನು ಪೂಜಿಸಿದನು.

(ಪದ್ಯ -೭೧)

ಪದ್ಯ ೭೨[ಸಂಪಾದಿಸಿ]

ಅಷ್ಟದಿಕ್ಪಾಲರ್ಗೆ ಪೂಜೆಯಂ ಮಾಡಿ ಚೌ | ಷಷ್ಟಿಯೋಗಿನಿಯರ್ಗೆ ಬಲಿಗೊಟ್ಟು ಭೂತಸಂ | ತುಷ್ಟಿಯಪ್ಪಂತೆ ಕುರಿಕೋಣಂಗಳಂ ಪೊಯ್ಸಿ ಬಣ್ಣಗೂಳಂ ಪಸರಿಸಿ |
ದೃಷ್ಟಮಾದಖಿಳಧನಮಂ ತೆಗೆಸಿ ಭೂಪನು | ತ್ಕೃಷ್ಟಮಖಮಿನ್ನು ಸಂಪೂರ್ತಿಯಾದಪುದೆಂಬ | ಹೃಷ್ಟತೆಯೊಳರ್ಥಮಂ ಸಾಗಿಸಿದನಿಭಪುರಿಗೆ ಪೆರ್ವೊರೆಗಳಿಟ್ಟಣಿಸಲು ||72||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಅಷ್ಟದಿಕ್ಪಾಲರ್ಗೆ ಪೂಜೆಯಂ ಮಾಡಿ ಚೌಷಷ್ಟಿಯೋಗಿನಿಯರ್ಗೆ ಬಲಿಗೊಟ್ಟು ಭೂತಸಂತುಷ್ಟಿಯಪ್ಪಂತೆ ಕುರಿಕೋಣಂಗಳಂ ಪೊಯ್ಸಿ ಬಣ್ಣಗೂಳಂ ಪಸರಿಸಿ=[ಅಷ್ಟದಿಕ್ಪಾಲಕರಿಗೆ ಪೂಜೆಯನ್ನು ಮಾಡಿ ಚೌಷಷ್ಟಿಯೋಗಿನಿಯರಿಗೆ ಬಲಿಹಾಕಿ, ಭೂತಗಣಗಳಿಗೆ ಸಂತುಷ್ಟಿಯಾಗುವಂತೆ ಕುರಿಕೋಣಗಳನ್ನು ಬಲಿ ಕೊಟ್ಟು ಕೆಂಪುಬಣ್ಣದ ಬಲಿಗೂಳನ್ನು ಚೆಲ್ಲಿ], ದೃಷ್ಟಮಾದ ಅಖಿಳ ಧನಮಂ ತೆಗೆಸಿ ಭೂಪನು ತ್ಕೃಷ್ಟಮಖಮಿನ್ನು ಸಂಪೂರ್ತಿಯಾದಪುದೆಂಬ ಹೃಷ್ಟತೆಯೊಳು ಅರ್ಥಮಂ=[ಕಣ್ಣಿಗೆ ಕಾಣಬಹುದಾದ ಎಲ್ಲಾ ಧನವನ್ನೂ ತೆಗೆಸಿ ಭೂಪನು ಉತ್ಕೃಷ್ಟವಾದ ಯಜ್ಞವು ಇನ್ನು ಸಂಪೂರ್ತಿಯಾಗುವುದು ಎಂಬ ಸಂತೋಷದಲ್ಲಿ ಧನವನ್ನು], ಸಾಗಿಸಿದನು ಇಭಪುರಿಗೆ ಪೆರ್ವೊರೆಗಳು=ದೊಡ್ಡ ಹೊರೆಗಳು ಇಟ್ಟಣಿಸಲು ಅತಿಯಾಗಿ ತುಂಬಿರಲು=[ದೊಡ್ಡ ಧನದ ನಿಧಿಯ ಹೊರೆಗಳನ್ನು ಒತ್ತೊತ್ತಾಗಿ ವಾಹನ ಆನೆ ಕುದುರೆಗಳಮೇಲೆ ಹೇರಿ ಹಸ್ತಿನಾವತಿಗೆ ಸಾಗಿಸಿದನು.]
  • ತಾತ್ಪರ್ಯ:*ಅಷ್ಟದಿಕ್ಪಾಲಕರಿಗೆ ಪೂಜೆಯನ್ನು ಮಾಡಿ ಚೌಷಷ್ಟಿಯೋಗಿನಿಯರಿಗೆ ಬಲಿಹಾಕಿ, ಭೂತಗಣಗಳಿಗೆ ಸಂತುಷ್ಟಿಯಾಗುವಂತೆ ಕುರಿಕೋಣಗಳನ್ನು ಬಲಿ ಕೊಟ್ಟು ಕೆಂಪುಬಣ್ಣದಅನ್ನದ ಬಲಿಗೂಳನ್ನು ಚೆಲ್ಲಿ, ಕಣ್ಣಿಗೆ ಕಾಣಬಹುದಾದ ಎಲ್ಲಾ ಧನವನ್ನೂ ತೆಗೆಸಿ ಭೂಪನು ಉತ್ಕೃಷ್ಟವಾದ ಯಜ್ಞವು ಇನ್ನು ಸಂಪೂರ್ತಿಯಾಗುವುದು ಎಂಬ ಸಂತೋಷದಲ್ಲಿ ಧನವನ್ನು, ದೊಡ್ಡ ಹೊರೆಗಳು ಅತಿಯಾಗಿ ತುಂಬಿರಲು ಧನದ ನಿಧಿಯ ಹೊರೆಗಳನ್ನು ಒತ್ತೊತ್ತಾಗಿ ವಾಹನ ಆನೆ ಕುದುರೆಗಳಮೇಲೆ ಹೇರಿ ಹಸ್ತಿನಾವತಿಗೆ ಸಾಗಿಸಿದನು.]

(ಪದ್ಯ -೭೨)

ಪದ್ಯ ೭೩[ಸಂಪಾದಿಸಿ]

ಪೊರೆಯಾಳ್ಗಳೊಟ್ಟೆಪೇಸರಮೆತ್ತು ಬಂಡಿಗಳ್ | ನೆರೆಕನಕಭಾರದಿಂದೈದಿದುವು ಮಾರ್ಗದೊಳ್ | ತೆರೆಪಿಲ್ಲಮೆನೆ ಕೋಟಿಸಂಖ್ಯೆಯಿಂ ಕೃಷ್ಣಮುನಿಸಹಿತ ನೃಪನುತ್ಸವದೊಳು ||
ಮೆರೆವ ನಿಜನಗರಪ್ರವೇಶಮಂ ಮಾಡುತ | ಕ್ಕರೊಳಂದು ಭೀಮನಂ ಕಳುಹಿದಂ ದೇವಪುರ | ದೆರೆಯ ಲಕ್ಷ್ಮೀಶನಂ ದ್ವಾರಕಿಗೆ ಪೋಗಿ ಬಿಜಯಂಗೈಸಿ ತರ್ಪುದೆಂದು ||73||

ಪದವಿಭಾಗ-ಅರ್ಥ:
[ಆವರಣದಲ್ಲಿ ಅರ್ಥ];
  • ಪೊರೆಯಾಳ್ಗಳ್=ಹೊರೆಹೊತ್ತ ಆಳುಗಳು, ಒಟ್ಟೆ=ಒಂಟೆ,ಪೇಸರಮ್=ಹೇಸರಗತ್ತೆ, ಎತ್ತು ಬಂಡಿಗಳ್=ಎತ್ತಿನ ಬಂಡಿಗಳು, ನೆರೆ=ಹೆಚ್ಚಿನ ಕನಕಭಾರದಿಂದ=ಚನ್ನದ ಭಾರದಿಂದ ಐದಿದುವು ಮಾರ್ಗದೊಳ್=ದಾರಿಯಲ್ಲಿ ಹೋದವು. ಹೇಗೆಂದರೆ: ತೆರೆಪಿಲ್ಲಮೆನೆ= ಮಧ್ಯ ಸಂದಿಲ್ಲದಂತ ಕೋಟಿಸಂಖ್ಯೆಯಿಂ=ಕೋಟಿಸಂಖ್ಯೆಯಿಂದ, ಕೃಷ್ಣಮುನಿ ಸಹಿತ= ವೇದವ್ಯಾಸಮುನಿ ಸಹಿತ ನೃಪನು= ರಾಜನು, ಉತ್ಸವದೊಳು=ವಿಜ್ರಂಭಣೆಯಿಂದ, ಮೆರೆವ= ಶೋಭಿಸುತ್ತಿರುವ, ನಿಜ ನಗರಪ್ರವೇಶಮಂ ಮಾಡುತ= ತನ್ನ ಹಸ್ತಿನಾವತಿ ನಗರ ಪ್ರವೇಶವನ್ನು ಮಾಡುತ್ತಾ, ಅಂದು= ಅದೇ ದಿನ ಅಕ್ಕರೊಳು=ಪ್ರೀತಿಯಿಂದ ಭೀಮನಂ= ಭೀಮನನ್ನು ಕಳುಹಿದಂ=ಕಳುಹಿಸಿದನು, ದೇವಪುರ ದೆರೆಯ=ದೇವಪುರದ ಒಡೆಯ, ಲಕ್ಷ್ಮೀಶನಂ=ಕೃಷ್ಣನನ್ನು ದ್ವಾರಕಾಪುರಿಗೆ ಪೋಗಿ= ಹೋಗಿ, ಬಿಜಯಂಗೈಸಿ ತರ್ಪುದೆಂದು=ಯಜ್ಞಕ್ಕೆ ಕರೆದುಕೊಂಡು ಬರಬೇಕೆಂದು(ಭೀಮನನ್ನು ಕಳುಹಿದಂ=ಕಳುಹಿಸಿದನು.
  • ತಾತ್ಪರ್ಯ:*ಅ

(ಪದ್ಯ -೭೩)XXII

♥♥♥ ॐ ♥♥♥
ಸಂಧಿ ೫ಕ್ಕೆ ಒಟ್ಟು ಪದ್ಯ-೨೨೬.

ಹೋಗಿ[ಸಂಪಾದಿಸಿ]

ನೋಡಿ[ಸಂಪಾದಿಸಿ]

ಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22‎* 23‎* 24 * 25* 26* 27* 28* 29* 30* 31* 32* 33* 34

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ


ಉಲ್ಲೇಖ[ಸಂಪಾದಿಸಿ]


  1. ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
  2. ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.